Monday, March 28, 2011

ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ

ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಭ್ರಷ್ಟ ಆಡಳಿತ ಪಕ್ಷಕ್ಕಿಂತ  ಹೆಚ್ಚು ಹಾನಿಕಾರಿ.ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಸ್ವಘೋಷಿತ ನಾಲ್ಕನೇ ಸ್ಥಂಭವಾದ ಪತ್ರಿಕಾರಂಗದ ಜತೆ ವಿರೋಧಪಕ್ಷಕ್ಕೆ ಕೂಡಾ  ಮಹತ್ವದ ಪಾತ್ರ ಇದೆ. ಈ ದೃಷ್ಟಿಯಿಂದ ಇದನ್ನು ಸಂವಿಧಾನದ ‘ಐದನೇ ಸ್ಥಂಭ’ ಎಂದು ಕರೆಯಬಹುದು.
ಆಡಳಿತ ಪಕ್ಷವೊಂದು ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರವಾಗಿದ್ದಾಗ ಏನೂ ಕೆಲಸವಿಲ್ಲದ ಈ ‘ಐದನೆಯ ಸ್ಥಂಭ’ ದುರ್ಬಲಗೊಂಡರೆ ಅದು ಸಹಜ. ಆದರೆ ನಾವು ಕಾಣುತ್ತಿರುವುದು ತದ್ವಿರುದ್ಧವಾದ ಬೆಳವಣಿಗೆ. ಇಲ್ಲಿ ಆಡಳಿತ ಪಕ್ಷ ಹೆಚ್ಚುಹೆಚ್ಚು ಭ್ರಷ್ಟ, ಅಪ್ರಮಾಣಿಕ ಮತ್ತು ಜನವಿರೋಧಿಯಾಗುತ್ತಿದ್ದಾಗ ಶಕ್ತಿಶಾಲಿಯಾಗಿ ಹೊರಹೊಮ್ಮಬೇಕಾದ ವಿರೋಧಪಕ್ಷಗಳು ಹೆಚ್ಚುಹೆಚ್ಚು ದುರ್ಬಲಗೊಂಡಂತೆ ಕಾಣುತ್ತಿವೆ.ಇದೊಂದು ಪಕ್ಷಾತೀತ ಬೆಳವಣಿಗೆ. ವಿರೋಧ ಪಕ್ಷಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್  ಎರಡೂ ಪಕ್ಷಗಳ ವಿಷಯದಲ್ಲಿಯೂ ಇದು ಸತ್ಯ.
ವಿರೋಧ ಪಕ್ಷಗಳು ಹೆಚ್ಚು ದುರ್ಬಲಗೊಳ್ಳತೊಡಗಿದ್ದು ಇತ್ತೀಚಿನ ವರ್ಷಗಳಲ್ಲಿ. ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿರೋಧಪಕ್ಷಗಳ ನಾಯಕರು ದೆಹಲಿಯ ಜನಪಥ ರಸ್ತೆಯ ಹತ್ತನೆ ನಂಬರಿನ ಬಂಗಲೆ ಕಡೆ ಓಡತೊಡಗಿದ್ದರು.ಫಲಿತಾಂಶ ಪ್ರಕಟಣೆಯ ಮೊದಲೇ ಕಾಂಗ್ರೆಸ್ ಗೆಲುವಿನ ವಾಸನೆ ಹಿಡಿದು ಹೋದವರು ಜೆಡಿ (ಎಸ್) ನಾಯಕ ಎಚ್.ಡಿ.ಕುಮಾರಸ್ವಾಮಿ. ಹೇಗೋ ಸುದ್ದಿ ತಿಳಿದು ಕನ್ನಡದ ಟಿವಿ ಚಾನೆಲ್‌ನ ಒಬ್ಬ ವರದಿಗಾರ ಅಲ್ಲಿಗೆ ಓಡಿ ಕ್ಯಾಮೆರಾ ಹಿಡಿದರೆ ಕುಮಾರಸ್ವಾಮಿಯವರು ಕರ್ಚಿಫ್‌ನಿಂದ ಮುಖಮುಚ್ಚಿಕೊಂಡು ಅಲ್ಲಿಂದ ಪಾರಾಗುವ ಪ್ರಯತ್ನ ನಡೆಸಿ ವಿಫಲವಾಗಿದ್ದರು.
ನೋಡುನೋಡುತ್ತಿದ್ದಂತೆಯೇ ತೃತೀಯರಂಗ-ಚತುರ್ಥರಂಗದ ಸೌಧಗಳೆಲ್ಲ ಕುಸಿಯತೊಡಗಿದ್ದವು. ಲಾಲುಪ್ರಸಾದ್,ಮುಲಾಯಂಸಿಂಗ್ ಯಾದವ್, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದ ತೃತೀಯರಂಗದ ನಾಯಕರು ಪೈಪೋಟಿಯಲ್ಲಿ ಕಾಂಗ್ರೆಸ್ ಮೈಮೇಲೆ ಬಿದ್ದು ಬೆಂಬಲ ಘೋಷಿಸತೊಡಗಿದ್ದರು. ಚುನಾವಣೆಯ ಮೊದಲು ಪ್ರಧಾನಿ ಪಟ್ಟ ಏರಲು ಕನಸಿನ ಆನೆ ಏರಿ ಹೊರಟಿದ್ದ ಮಾಯಾವತಿಯವರು ಕೂಡಾ ಬೇಷರತ್ ಬೆಂಬಲ ಘೋಷಿಸಿ ಕಾಂಗ್ರೆಸ್ ಪಕ್ಷಕ್ಕೆ ಶರಣಾಗಿದ್ದರು.
ಆ ಕಾಲದ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಬಿಜೆಪಿ ನಾಯಕರೊಬ್ಬರು ದೆಹಲಿಯ ಪಕ್ಷದ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡುತಾ  ‘ನಮ್ಮ ಪಕ್ಷವೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸುತ್ತದೆಯೇನೋ ಎಂದು ಭಯವಾಗುತ್ತಿದೆ’ಎಂದು ಕುಹಕವಾಡಿದ್ದರು. ಆದರೆ ಅದು ಬರೀ ಕುಹಕವಾಗಿರಲಿಲ್ಲ, ಆಗಲೆ ಬಿಜೆಪಿ ಬಗ್ಗೆ ಒಲವುಹೊಂದಿದ್ದ ಬುದ್ದಿಜೀವಿಗಳ ಗುಂಪೊಂದು ಕಾಂಗ್ರೆಸ್ ಮತ್ತು ಬಿಜೆಪಿ ಕೂಡಿ ಯಾಕೆ ಸರ್ಕಾರ ರಚಿಸಬಾರದು ಎನ್ನುವ ಚರ್ಚೆಗೆ ಚಾಲನೆ ನೀಡಿತ್ತು. ಇಂದು ಕೇಂದ್ರ ಮತ್ತು ರಾಜ್ಯದ ವಿರೋಧಪಕ್ಷಗಳ ಸ್ಥಿತಿ ಅಂದಿಗಿಂತ ಭಿನ್ನವೇನಿಲ್ಲ.ಭ್ರಷ್ಟಾಚಾರದ ಆರೋಪಗಳು ಮತ್ತು ಭಿನ್ನಮತೀಯ ಚಟುವಟಿಕೆಗಳಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ಕುಸಿಯತೊಡಗಿದೆ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಲ್ಲಿ ಯುದ್ಧಭೂಮಿಗಿಳಿಯುವ ಯೋಧರ ವೀರಾವೇಶ ಕಾಣಬೇಕಿತ್ತು.
ಆದರೆ ದೆಹಲಿ ಕಡೆಯಿಂದ ನಾಯಕರು ಬಂದರೆ ಮೆರೆದಾಡುವ ಕಟೌಟ್‌ಗಳು ಮತ್ತು ಒಂದಷ್ಟು ಕಾರ್ಯಕರ್ತರ ಗೌಜಿಗದ್ದಲ   ಬಿಟ್ಟರೆ ಉಳಿದ ಸಮಯದಲ್ಲಿ ಕೆಪಿಸಿಸಿ ಕಚೇರಿ ಬಿಕೋ ಅನಿಸುತ್ತಿದೆ. ಕಾಂಗ್ರೆಸ್ ನಾಯಕರು ವಾರಕ್ಕೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಯಾರೋ ಮಾಡಿರುವ ಆರೋಪಗಳನ್ನು ಪುನರುಚ್ಚರಿಸಿ ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಾರೆ. ಪತ್ರಕರ್ತರು ಕಾಡಿದರೆ ನಡುನಡುವೆ ಒಂದಷ್ಟು ಪ್ರತಿಕ್ರಿಯೆ ನೀಡುತ್ತಾರೆ. ಯಾರಾದರೂ ಸ್ಥಳೀಯ ಕಾರ್ಯಕರ್ತರು ದುಡ್ಡು-ಶ್ರಮ ಹಾಕಿ ಸಮಾವೇಶಗಳನ್ನು ಮಾಡಿದರೆ ಅಲ್ಲಿಗೆ ಹೋಗಿ ಒಂದಷ್ಟು ಭಾಷಣ ಮಾಡಿ ಬರುತ್ತಾರೆ.
 ಉಳಿದಂತೆ ದೆಹಲಿ ಕಡೆ ಮುಖಮಾಡಿ ಗಡದ್ದಾಗಿ ನಿದ್ದೆ ಮಾಡುತ್ತಾರೆ. ಬಳ್ಳಾರಿ ಕಡೆ ಪಾದಯಾತ್ರೆ ಹೊರಟಾಗ ವ್ಯಕ್ತವಾದ ಸಾರ್ವಜನಿಕ ಪ್ರತಿಕ್ರಿಯೆ ಕಂಡಾಗ ಈ ಸರ್ಕಾರ ಪತನದ ದಿನಗಳ ಎಣಿಕೆ ಪ್ರಾರಂಭವಾಗಿದೆಯೇನೋ ಎಂಬ ಅಭಿಪ್ರಾಯ ಮೂಡಿತ್ತು. ಮತ್ತೆ ಎಲ್ಲ ಯಥಾಸ್ಥಿತಿ. ಜೆಡಿ (ಎಸ್)ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಆಗಾಗ ಹಗರಣಗಳನ್ನು ಬಯಲುಗೊಳಿಸುತ್ತಿರುತ್ತಾರೆ.ಅವರ ‘ಒನ್‌ಮ್ಯಾನ್ ಶೋ’ನಲ್ಲಿ ಆಗಾಗ ಇಂಟರ್‌ವಲ್‌ಗಳಿರುತ್ತವೆ. ಈ ಇಂಟರ್‌ವಲ್‌ಗಳಲ್ಲಿ ಅವರೇನು ಮಾಡುತ್ತಾರೆ ಎನ್ನುವುದೇ ಕುತೂಹಲ.
ಕೇಂದ್ರದಲ್ಲಿ ವಿರೋಧಪಕ್ಷವಾಗಿರುವ ಬಿಜೆಪಿಯದ್ದು ಕಣ್ಣೆತ್ತಿ ಕಾಂಗ್ರೆಸ್ ಕಡೆ ನೋಡಲಾರದ ಸ್ಥಿತಿ. ಕಾಮನ್‌ವೆಲ್ತ್, 2ಜಿ ತರಂಗಾಂತರ, ಆದರ್ಶ ಹೌಸಿಂಗ್ ಕಾರ್ಪೋರೇಷನ್ ಮೊದಲಾದ ಭ್ರಷ್ಟಾಚಾರದ ಹಗರಣಗಳಲ್ಲಿ ಯುಪಿಎ ಸರ್ಕಾರ ಮುಳುಗಿಹೋಗಿದೆ, ಸ್ವಚ್ಛ, ಸಮರ್ಥ ಎಂಬ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ಬಿಂಬ ಒಡೆದುಹೋಗಿದೆ. ಈ ಪ್ರತಿಕೂಲ ಬೆಳವಣಿಗೆಗಳನ್ನು ಬಳಸಿಕೊಂಡು ಆಡಳಿತ ಪಕ್ಷವನ್ನು ಮಂಡಿ ಊರುವಂತೆ ಮಾಡಬೇಕಾದ ಬಿಜೆಪಿಯ ಬಾಯಿ ಕಟ್ಟಿಹೋಗಿದೆ. ಯಾಕೆಂದರೆ ಭ್ರಷ್ಟಾಚಾರದ ವಿಷಯ ಎತ್ತಿದ ಕೂಡಲೇ ಆಡಳಿತ ಪಕ್ಷದ ಸದಸ್ಯರು ನಿಮ್ಮ ಯಡಿಯೂರಪ್ಪನವರದ್ದೇನು ಎಂದು ಕೇಳುತ್ತಾರೆ. ಉತ್ತರ ಕೊಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇಂತಹ ಮುಜುಗರಗಳೇ ಬೇಡ ಎಂದುಕೊಂಡು ಆಡಳಿತ ಮತ್ತು ವಿರೋಧಪಕ್ಷಗಳು ಜತೆಗೂಡಿ ವಿಕಿಲೀಕ್ಸ್‌ನಂತಹ ಅಪ್ರಸ್ತುತ ವಿಷಯವನ್ನೆತ್ತಿಕೊಂಡು ಕಾಲಹರಣ ಮಾಡುತ್ತಿವೆ.ಹಿಂದಿನ ವಿರೋಧಪಕ್ಷಗಳು  ಮತ್ತು ಅದರ ನಾಯಕರು ಹೀಗಿರಲಿಲ್ಲ.
ಮುಂದೊಂದು ದಿನ ತಾವೂ ಅಧಿಕಾರಕ್ಕೆ ಬರಬಹುದೆಂದು ಸ್ವಾತಂತ್ರ್ಯಾನಂತರದ  ಮೊದಲು 25 ವರ್ಷಗಳ ಕಾಲ ಯಾವ ವಿರೋಧ ಪಕ್ಷವೂ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ.ಮೊದಲ 30ವರ್ಷಗಳ ಕಾಲ ತೆಪ್ಪಗೆ ವಿರೋಧಪಕ್ಷದ ಸ್ಥಾನದಲ್ಲಿ ಕೂತು ಕಾಂಗ್ರೆಸ್‌ನಂತಹ ದೈತ್ಯಪಕ್ಷವನ್ನು ಅವುಗಳು ಎದುರಿಸಿದ್ದವು.
ಆಗಿನ ಕಾಲದ ಬುದ್ದಿಜೀವಿ ಪ್ರಧಾನಿ ಜವಾಹರಲಾಲ ನೆಹರೂ ಅವರಲ್ಲಿಯೂ ಕೀಳರಿಮೆ ಹುಟ್ಟಿಸಬಲ್ಲಂತಹ ಚಿಂತನಶೀಲ ರಾಜಕೀಯ ನಾಯಕರಾದ ಆಚಾರ್ಯ ಕೃಪಲಾನಿ, ರಾಮಮನೋಹರ ಲೋಹಿಯಾ, ಅಶೋಕ್ ಮೆಹ್ತಾ, ಎ.ಕೆ.ಗೋಪಾಲನ್,ಮಿನೂ ಮಸಾನಿ ಮೊದಲಾದ ವಿರೋಧಪಕ್ಷಗಳ ನಾಯಕರಿದ್ದರು. ಭ್ರಷ್ಟತೆ ಬಿಡಿ ಕನಿಷ್ಠ ಆತ್ಮವಂಚನೆಯನ್ನೂ ಈ ನಾಯಕರು ಮಾಡಿಕೊಂಡಿರಲಿಲ್ಲ.
 ವಿರೋಧಿ ಸ್ಥಾನದಲ್ಲಿ ಕೂರಬೇಕಾದ ಪರಿಸ್ಥಿತಿ ಎದುರಾದಾಗ ಹಿಂದಿನ ಕಾಂಗ್ರೆಸ್ ನಾಯಕರು ಕೂಡಾ ವಿಶ್ವಾಸ ಕಳೆದುಕೊಂಡಿರಲಿಲ್ಲ. ವಿರೋಧಪಕ್ಷಗಳಿಗೆ 2009ರ ಚುನಾವಣಾ ಸೋಲು ಎಷ್ಟೇ ಹೀನಾಯವಾಗಿದ್ದರೂ ಅದನ್ನು 1977ರ ಚುನಾವಣೆಯಲ್ಲಿನ ಇಂದಿರಾಗಾಂಧಿ ಸೋಲಿಗೆ ಹೋಲಿಸಲಾಗದು. ಅಧಿಕಾರದಿಂದ ಅಲ್ಲ ಸರ್ವಾಧಿಕಾರದಿಂದ ಮೆರೆದಿದ್ದ ಇಂದಿರಾಗಾಂಧಿಯವರನ್ನು ದೇಶದ ಮತದಾರ ಕಿತ್ತೊಗೆದಿದ್ದ. ಅವರ ಪಕ್ಷದ ಬಲ 352ರಿಂದ 154ಕ್ಕೆ ಇಳಿದಿತ್ತು. ಮಗ ಸಂಜಯಗಾಂಧಿ ಕೂಡಾ ಸೋತುಹೋಗಿದ್ದ.
ಆಯೋಗಗಳ ಮೇಲೆ ಆಯೋಗ, ತನಿಖೆ, ಯಾವಾಗ ಜೈಲಿಗೆ ತಳ್ಳಲಿದ್ದಾರೆ ಎಂಬ ಭೀತಿ, ಸೇಡುತೀರಿಸಿಕೊಳ್ಳುವ ರೀತಿಯಲ್ಲಿ ಮಾಧ್ಯಮಗಳ ದಾಳಿ, ಕೈಬಿಟ್ಟುಹೋದ ಮಿತ್ರರು, ಹೆಚ್ಚಿದ ಶತ್ರುಗಳು.. ಆದರೆ ಇಂದಿರಾಗಾಂಧಿ ಅಂಜಿದ್ದರೇ, ಅಳುಕಿದ್ದರೇ? ಮೂರೇ ಮೂರುವರ್ಷಗಳಲ್ಲಿ ಮರಳಿ ಅಧಿಕಾರಕ್ಕೆ ಬಂದರು. ಅದೂ 1971ರ ಚುನಾವಣೆಗಿಂತಲೂ ಒಂದು ಸ್ಥಾನವನ್ನು ಹೆಚ್ಚುಗಳಿಸಿ. ನುಚ್ಚುನೂರಾಗಿ ಹೋದ ಆಗಿನ ಆಡಳಿತಪಕ್ಷಗಳಲ್ಲಿ ಯಾವುದರ ಸಂಖ್ಯೆಯೂ 50 ದಾಟಿರಲಿಲ್ಲ.
ಕಾಂಗ್ರೆಸ್ ಕತೆ ಬಿಡಿ ಬಿಜೆಪಿಯ ಹಳೆಯ ಕತೆಗೆ ಬರೋಣ. 1984ರ ಚುನಾವಣೆಯಲ್ಲಿ ದೂಳೀಪಟವಾಗಿ ಹೋಗಿದ್ದ ವಿರೋಧ ಪಕ್ಷಗಳಲ್ಲಿ ಬಿಜೆಪಿಯೂ ಇತ್ತು. ಲೋಕಸಭೆಯಲ್ಲಿ ಎರಡೇ ಎರಡು ಸ್ಥಾನ. ವಾಜಪೇಯಿಯವರೇ ಸೋತಿದ್ದರು. ಆದರೆ ಆ ಪಕ್ಷದ ನಾಯಕರಾಗಲಿ, ಕಾರ್ಯಕರ್ತರಾಗಲಿ ಸೋಲು ಒಪ್ಪಿಕೊಂಡಿರಲಿಲ್ಲ. ಅವರು ಹಿಡಿದ ದಾರಿ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಅದರೆ ಹನ್ನೆರಡು ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸುವ ಸ್ಥಿತಿಗೆ ಬಂದು ತಲುಪಿತ್ತು. ಆ ರಾಜಕೀಯ ಹೋರಾಟ ನಡೆಸಿದ್ದ ಲಾಲ್‌ಕೃಷ್ಣ ಅಡ್ವಾಣಿ ಈಗಲೂ ಇದ್ದಾರೆ.
ಸೋನಿಯಾಗಾಂಧಿ ಎಂಬ ವಿದೇಶಿ ಮಹಿಳೆಯದ್ದು ಇನ್ನೂ ಇತ್ತೀಚಿನ ಕತೆ. ಮೊದಲು ಮೈದುನ, ನಂತರ ಅತ್ತೆ, ಕೊನೆಗೆ ಗಂಡನನ್ನು ಕಳೆದುಕೊಂಡವರು ಅವರು. ಕೆಲವರ್ಷಗಳಲ್ಲಿಯೇ ನೆಹರೂ ಕುಟುಂಬಕ್ಕೆ ಆಧಾರವಾಗಿದ್ದ ಕಾಂಗ್ರೆಸ್ ಪಕ್ಷ ಕೂಡಾ ಅಧಿಕಾರ ಕಳೆದುಕೊಂಡಿತ್ತು. ಕೊನೆಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ ಸೋನಿಯಾಗಾಂಧಿಯವರ ನೇತೃತ್ವದ ಕಾಂಗ್ರೆಸ್ 1999ರಲ್ಲಿ ಗಳಿಸಿದ್ದು 114 ಸ್ಥಾನಗಳನ್ನು ಮಾತ್ರ. ಇದು ಸೀತಾರಾಂ ಕೇಸರಿ ಎಂಬ ವಯೋವೃದ್ಧನ ನೇತೃತ್ವದಲ್ಲಿ ಎದುರಿಸಿದ 1998ರ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದಕ್ಕಿಂತ 27 ಸ್ಥಾನ ಕಡಿಮೆ. ಅನಂತರದ ಐದು  ವರ್ಷಗಳ ಕಾಲ ಸೋನಿಯಾಗಾಂಧಿಯವರು ರಾಜಕೀಯ ಮತ್ತು ವೈಯಕ್ತಿಕ ದಾಳಿಯನ್ನು ಪಕ್ಷದ ಒಳಗೆ ಮತ್ತು ಹೊರಗೆ ಎದುರಿಸಬೇಕಾಯಿತು. ಇದಕ್ಕೆಲ್ಲ  ಅರ್ಧ ಉತ್ತರವನ್ನು 2004ರ ಚುನಾವಣಾ ಫಲಿತಾಂಶದಲ್ಲಿ ಇನ್ನರ್ಧ ಉತ್ತರವನ್ನು ಪ್ರಧಾನಿ ಪಟ್ಟ ನಿರಾಕರಣೆಯ ಮೂಲಕ ಕೊಟ್ಟರು.
ಹಳೆಯ ಕಾಲದ ವಿರೋಧಪಕ್ಷದ ನಾಯಕರಲ್ಲಿ ಈಗ ಉಳಿದಿರುವವರು ಎಲ್.ಕೆ.ಅಡ್ವಾಣಿ ಮಾತ್ರ. ಹೆಚ್ಚುಕಡಿಮೆ ರಾಜಕೀಯ ಸನ್ಯಾಸ ಸ್ವೀಕರಿಸಿದಂತಿರುವ ಅಡ್ವಾಣಿಯವರು ಮತ್ತೆ ಸಕ್ರಿಯವಾದ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಕಷ್ಟ.ಹೊಸಬರಲ್ಲಿ ಯಾರೂ ಅಡ್ವಾಣಿ, ಇಂದಿರಾಗಾಂಧಿ ಬಿಡಿ, ಕನಿಷ್ಠ ಸೋನಿಯಾಗಾಂಧಿಯವರ ವ್ಯಕ್ತಿತ್ವಕ್ಕೆ ಸಮನಾದ ರಾಜಕೀಯ ನಾಯಕರು ಕಾಣುತ್ತಿಲ್ಲ. ದೀರ್ಘ ಕಾಲ ವಿರೋಧಪಕ್ಷದ ನಾಯಕರಾಗಿ ಕೆಲಸಮಾಡಿರುವ ಎಚ್.ಡಿ.ದೇವೇಗೌಡರಂತಹ ನಾಯಕರು ರಾಜ್ಯದಲ್ಲಿಯೂ ಕಾಣಿಸುತ್ತಿಲ್ಲ. ಯಾಕೆ ಹೀಗಾಗಿ ಹೋಗಿದೆ?
ಇದಕ್ಕೆ ಮುಖ್ಯ ಕಾರಣ-ಅಧಿಕಾರ. ಈಗ ವಿರೋಧಪಕ್ಷದಲ್ಲಿದ್ದವರೆಲ್ಲರೂ ಒಂದಷ್ಟು ವರ್ಷ ಅಧಿಕಾರ ಅನುಭವಿಸಿದವರು, ಮೊದಲ 30 ವರ್ಷಗಳ ಕಾಲ ಅಧಿಕಾರದ ಸಮೀಪ ಹೋಗಲಿಕ್ಕೂ ಆಗದ ವಿರೋಧ ಪಕ್ಷಗಳ ನಾಯಕರಂತಹವರಲ್ಲ. ಅಧಿಕಾರದ ಮಾಯೆಯೇ ಹಾಗೆ, ಒಮ್ಮೆ ಅನುಭವಿಸಿದ ಮೇಲೆ ಹೋರಾಟದ ರಾಜಕೀಯದ ಮೇಲಿನ ಆಸಕ್ತಿ ಕುಂದುತ್ತಾ ಹೋಗುತ್ತದೆ. ಅಧಿಕಾರದ ಸವಿಯನ್ನು ಚಪ್ಪರಿಸಿದ್ದ ನಾಲಿಗೆಯಲ್ಲಿ ನೀರೂರುತ್ತಲೇ ಇರುತ್ತದೆ. ಇನ್ನೊಂದು ಕಾರಣ ನೈತಿಕವಾಗಿ ಇವರನ್ನು ದಿವಾಳಿ ಮಾಡಿರುವ ಭ್ರಷ್ಟಾಚಾರದ ಕಳಂಕ. ಇದು ಅಧಿಕಾರದ ಜತೆಗೆ ಬಂದ ಉಚಿತ ಕೊಡುಗೆ.
ಕೇಂದ್ರದ ಬಿಜೆಪಿ ನಾಯಕರು ಎ.ರಾಜಾನ ಹೆಸರೆತ್ತಿದ ಕೂಡಲೇ ಕಾಂಗ್ರೆಸ್ ನಾಯಕರು ಪ್ರಮೋದ್ ಮಹಾಜನ್, ಅರುಣ್ ಶೌರಿ ಹೆಸರಿಡಿದು ಕೂಗುತ್ತಾರೆ, ಅಶೋಕ್ ಚವಾಣ್ ಹೆಸರೆತ್ತಿದರೆ ಅವರಿಗೆದುರಾಗಿ ಬಿ.ಎಸ್.ಯಡಿಯೂರಪ್ಪನವರನ್ನು ತಂದು ನಿಲ್ಲಿಸುತ್ತಾರೆ. ರಾಜ್ಯದ ಕಾಂಗ್ರೆಸ್ ನಾಯಕರು ಅಕ್ರಮಗಣಿಗಾರಿಕೆ, ಡಿನೋಟಿಫಿಕೇಶನ್ ಹಗರಣಗಳನ್ನೆತ್ತಿದರೆ ಬಿಜೆಪಿ ನಾಯಕರು ಧರ್ಮಸಿಂಗ್,ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಮೊದಲಾದವರ ಕಾಲದ ಕತೆಗಳನ್ನು ಕೆದಕುತ್ತಾರೆ. ‘ಹಮಾಮ್ ಮೇ ಸಬ್ ನಂಗಾ ಹೈ’ (ಸ್ನಾನದ ಮನೆಯಲ್ಲಿ ಎಲ್ಲರೂ ಬೆತ್ತಲೆ). ಎಲ್ಲರೂ ತಮ್ಮ ತಮ್ಮ ಕಪಾಟುಗಳಲ್ಲಿ ಅಸ್ಥಿಪಂಜರಗಳನ್ನು ಇಟ್ಟುಕೊಂಡವರು. ಅಧಿಕಾರದಲ್ಲಿದ್ದ ಪಕ್ಷವೇನಾದರೂ ಕಪಾಟಿನ ಬಾಗಿಲು ತೆಗೆದುಬಿಟ್ಟರೆ ಗತಿ ಏನು ಎಂಬ ಭಯ ಚುನಾವಣೆಯಲ್ಲಿ ಸೋತ ಮರುಗಳಿಗೆಯಿಂದಲೇ ಇವರನ್ನು ಕಾಡತೊಡಗುತ್ತದೆ. ಆ ಕ್ಷಣದಿಂದಲೇ ಹೊಂದಾಣಿಕೆಯ ರಾಜಕೀಯ ಪ್ರಾರಂಭವಾಗುತ್ತದೆ. ಇದರಿಂದಾಗಿ ಉಳಿದ ‘ನಾಲ್ಕು ಸ್ಥಂಭ’ಗಳ ಜತೆ ‘ಐದನೇ ಸ್ಥಂಭ’ ಕೂಡಾ ಕುಸಿದುಬೀಳತೊಡಗಿದೆ. ಪ್ರಜಾಪ್ರಭುತ್ವಕ್ಕೆ ಆಧಾರ ಎಲ್ಲಿದೆ?

Monday, March 21, 2011

ವಿಕಿಲೀಕ್ಸ್‌ನಲ್ಲಿಯೂ ಉತ್ತರ ಇಲ್ಲದ ಪ್ರಶ್ನೆಗಳು

ಎಡಪಕ್ಷಗಳಿಗೆ ಸೆಡ್ಡು ಹೊಡೆದು ಸರ್ಕಾರದ ಭವಿಷ್ಯವನ್ನೇ ಡೋಲಾಯಮಾನ ಮಾಡಿದ್ದ ಮನಮೋಹನ್ ಸಿಂಗ್ ವಿಶ್ವಾಸಮತಯಾಚನೆಗಾಗಿ ಎದೆಯುಬ್ಬಿಸಿಕೊಂಡು ಸಂಸತ್‌ಭವನ ಪ್ರವೇಶಿಸಿದ್ದು... ತನ್ನನ್ನು ಪ್ರಶ್ನಿಸಲು ಬಂದ ಪತ್ರಕರ್ತರಿಗೆ ಏನನ್ನೂ ಹೇಳದೆ ನಗುನಗುತ್ತಾ ಕೈಬೆರಳುಗಳನ್ನೆತ್ತಿ ಗೆಲುವಿನ ಸಂಜ್ಞೆ ಮಾಡಿದ್ದು... ವಿಶ್ವಾಸಮತಯಾಚನೆಯಲ್ಲಿ ಗೆದ್ದ ಮರುಕ್ಷಣದಲ್ಲಿಯೇ ಕಾಂಗ್ರೆಸ್ ಸಂಸದರು ‘ಸಿಂಗ್ ಈಸ್ ಕಿಂಗ್’ ಎಂದು ಹರ್ಷೋದ್ಗಾರ ಮಾಡಿದ್ದು... ಎಲ್ಲವೂ ಮೊನ್ನೆಮೊನ್ನೆ ನಡೆದಂತಿದೆ.
ಇಂತಹ ಒಂದು ಕ್ಷಣಕ್ಕಾಗಿಯೇ ಮನಮೋಹನ್ ಸಿಂಗ್ ಕಾಯುತ್ತಿದ್ದರೋ ಏನೋ ಎಂದು ಆಗ ಅನಿಸಿತ್ತು. ಯಾಕೆಂದರೆ ಪ್ರಧಾನಿಯಾಗಲು ಒಪ್ಪಿಕೊಂಡ ದಿನದಿಂದ ಅವಮಾನ, ಹೀಯಾಳಿಕೆಯ ನುಡಿಗಳನ್ನೇ ಅವರು ಕೇಳುತ್ತಾ ಬಂದಿದ್ದು. ಸಾಮಾನ್ಯವಾಗಿ ಬಳಸುವ ಭಾಷೆ ಬಗ್ಗೆ ಎಚ್ಚರದಿಂದ ಇರುವ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೇ ಮನಮೋಹನ್‌ಸಿಂಗ್ ಅವರನ್ನು ‘ನಿಕ್ಕಮ್ಮ (ಕೈಲಾಗದವ)’ ‘ದುರ್ಬಲ’, ‘ಅದೃಶ್ಯ’ ಪ್ರಧಾನಿ ಎಂದೆಲ್ಲಾ ಹೀಗಳೆದಿದ್ದರು.

ಅದಕ್ಕೆಲ್ಲ ಉತ್ತರ ನೀಡುವಂತಿತ್ತು ಮನಮೋಹನ್ ಸಿಂಗ್ ಅವರ ಆ ದಿನದ ಧೀರ, ಗಂಭೀರ ನಡಿಗೆ ಮತ್ತು ಹುಸಿನಗೆ.
2008ರ ಜುಲೈ 22ರ  ಆ ದಿನವನ್ನು (ವಿಶ್ವಾಸಮತಯಾಚನೆ ದಿನ) ಮನಮೋಹನ್‌ಸಿಂಗ್ ಮತ್ತು ಅವರ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಆ ದಿನವೇ ತಾನೊಬ್ಬ ದುರ್ಬಲ ಪ್ರಧಾನಿ ಅಲ್ಲ ಎಂದು ಮನಮೋಹನ್ ಸಿಂಗ್ ಸಾಬೀತುಪಡಿಸಿದ್ದು ಮತ್ತು ಅದೇ ದಿನ ಅವರ ಬಿಳಿಬಟ್ಟೆಯ ಮೇಲೆ ಮೊದಲ ಕಳಂಕದ ಕಲೆ ಅಂಟಿಕೊಂಡದ್ದು.

ತುಂಬು ವಿಶ್ವಾಸದಿಂದ ಮನಮೋಹನ್ ಸಿಂಗ್ ಲೋಕಸಭೆ ಪ್ರವೇಶಿಸಿದ್ದ ಮರುಗಳಿಗೆಯಲ್ಲಿಯೇ ಬಿಜೆಪಿಯ ಮೂವರು ಸದಸ್ಯರಾದ ಅಶೋಕ್ ಅರ್ಗಲ್, ಫಗನ್‌ಸಿಂಗ್ ಕುಲಸ್ಥೆ ಮತ್ತು ಮಹಾವೀರ ಭಗೋರಾ ಅವರು ಎರಡು ದೊಡ್ಡ ಚೀಲಗಳನ್ನು ಎತ್ತಿಕೊಂಡು ಸಭಾಧ್ಯಕ್ಷರ ಪೀಠದ ಮಂದಿನ ಅಂಗಳದ ಕಡೆ ನುಗ್ಗಿದ್ದರು.
 ಅವರ ಕೈಯೊಳಗೆ ಸಾವಿರ ರೂಪಾಯಿಗಳ ನೋಟಿನ ಕಂತೆಗಳಿದ್ದವು. ಒಂದು ಕ್ಷಣ ಇಡೀ ಸದನ ಸ್ಥಬ್ದವಾಗಿತ್ತು. ‘ಇದು ವಿಶ್ವಾಸಮತದ ಪರವಾಗಿ ಮತಚಲಾಯಿಸಲು ತಮಗೆ  ಮುಂಗಡವಾಗಿ ಕೊಟ್ಟಿದ್ದ ಒಂದು ಕೋಟಿ ರೂಪಾಯಿ. ಇದನ್ನು ಅಮರ್‌ಸಿಂಗ್ ಸೂಚನೆ ಮೇರೆಗೆ ಅವರ ಸಹಾಯಕರು ತಂದುಕೊಟ್ಟಿದ್ದರು’ ಎಂದು ಅಶೋಕ್ ಅರ್ಗಲ್ ಕೂಗಾಡುತ್ತಿದ್ದರು. ಇತ್ತ ಸೆಂಟ್ರಲ್ ಹಾಲ್‌ನ ಸೈಡ್‌ವಿಂಗ್‌ನಲ್ಲಿ ಕರ್ನಾಟಕದ ಮೂವರು ಬಿಜೆಪಿ ಲೋಕಸಭಾ ಸದಸ್ಯರಾದ ಎಚ್.ಟಿ. ಸಾಂಗ್ಲಿಯಾನಾ, ಮಂಜುನಾಥ ಕುನ್ನೂರು ಮತ್ತು ಮನೋರಮಾ ಮಧ್ವರಾಜ್ ಹಾಗೂ ಜೆಡಿ (ಎಸ್) ಸದಸ್ಯ ಶಿವಣ್ಣ ಕಾಂಗ್ರೆಸ್ ಜತೆ ಕೈಜೋಡಿಸಲು ವೇಷ ಬದಲಿಸುತ್ತಿದ್ದರು. ಎದೆಯುಬ್ಬಿಸಿಕೊಂಡು ಬಂದಿದ್ದ ಮನಮೋಹನ್ ಸಿಂಗ್ ಗದ್ದಲದ ನಡುವೆಯೇ ಸೋನಿಯಾಗಾಂಧಿ ಜತೆಗೂಡಿ ತಲೆತಗ್ಗಿಸಿಕೊಂಡು ಸದನದಿಂದ ಹೊರನಡೆದಿದ್ದರು.
 ಇವೆಲ್ಲವೂ ಹಳೆಯ ಕತೆ, ವಿಕಿಲೀಕ್ಸ್ ಕೇಬಲ್‌ಗಳು ಬಹಿರಂಗಪಡಿಸಿದ್ದರಲ್ಲಿ ಕೂಡಾ ಹೊಸದೇನಿಲ್ಲ, ಒಂದಷ್ಟು ಹೊಸ ಪುರಾವೆಗಳು ಸಿಕ್ಕಿವೆ ಅಷ್ಟೇ.ಆದರೆ  ಸರ್ಕಾರವನ್ನೇ ಪತನದ ಅಂಚಿಗೆ ತಂದು ನಿಲ್ಲಿಸುವಂತಹ ಅಪಾಯಕ್ಕೆ ಆಹ್ವಾನ ನೀಡುವಷ್ಟು ಮತ್ತು ಅಧಿಕಾರ ಉಳಿಸಲು ಸಂಸದರ ಖರೀದಿಯಂತಹ ಹೀನಕೃತ್ಯಕ್ಕೆ ಇಳಿಯುವಷ್ಟು ಅಮೆರಿಕದ ಜತೆಗಿನ ನಾಗರಿಕ ಪರಮಾಣು ಒಪ್ಪಂದ ದೇಶಕ್ಕೆ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗೆ ವಿಕಿಲೀಕ್ಸ್ ಕೇಬಲ್‌ಗಳಲ್ಲಿಯೂ ಈ ವರೆಗೆ ಉತ್ತರ ಸಿಕ್ಕಿಲ್ಲ. 2004ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಪ್ರಸ್ತಾವವೇ ಇರಲಿಲ್ಲ. ಅದರ ನಂತರ ಯುಪಿಎ ಎಂಬ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಾಗ ರಚನೆಯಾದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿಯೂ ಇದರ ಉಲ್ಲೇಖ ಇರಲಿಲ್ಲ.
 ಹೀಗಿದ್ದರೂ ಈ ಒಪ್ಪಂದವನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಡುವ ಅವಶ್ಯಕತೆ ಏನಿತ್ತು? ಇದಕ್ಕೆ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ಉತ್ತರ ಇಂಧನ ಕೊರತೆ. ಭಾರತ ಇಂಧನ ಕೊರತೆಯಿಂದ ಬಳಲುತ್ತಿರುವುದು ನಿಜ. ಆದರೆ ನಾಗರಿಕ ಪರಮಾಣು ಒಪ್ಪಂದದಿಂದ ಈ ಕೊರತೆ ನೀಗುವುದೇ?
‘ಇಡೀ ವಿಶ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ 35 ಅಣುಸ್ಥಾವರಗಳಲ್ಲಿ 24 ಏಷ್ಯಾದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಇಂಧನ ಭದ್ರತೆಯ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ವೇಗದ ಓಟ ಭಾರತಕ್ಕೆ ಅನಿವಾರ್ಯ’ ಎಂದು ಒಪ್ಪಂದವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಆದರೆ ಕಾಂಗ್ರೆಸ್ ಹೇಳಿದಂತೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತವೇನು ಹಿಂದೆ ಉಳಿದಿರಲಿಲ್ಲ.
ಅಮೆರಿಕದ ಜತೆ ಒಪ್ಪಂದ ಮಾಡಿಕೊಂಡ ಸಂದರ್ಭದಲ್ಲಿ ಭಾರತದಲ್ಲಿ ಆರು ಅಣುಸ್ಥಾವರಗಳು ನಿರ್ಮಾಣಗೊಳ್ಳುತ್ತಿತ್ತು. ಏಳು ಅಣುಸ್ಥಾವರಗಳನ್ನು ನಿರ್ಮಿಸುತ್ತಿದ್ದ ಚೀನಾ ದೇಶವೊಂದೇ ಭಾರತಕ್ಕಿಂತ ಮುಂದೆ ಇತ್ತು. ‘ಈಗ ಭಾರತ ಪರಮಾಣು ಮೂಲದಿಂದ ಶೇಕಡಾ 3ರಷ್ಟು ಇಂಧನ ಪಡೆಯುತ್ತಿದೆ.
ಆದರೆ ಅಣುಸ್ಥಾವರಗಳ ನಿರ್ಮಾಣದಲ್ಲಿ ಭಾರತ ಚೀನಾ ಮತ್ತು ರಷ್ಯಾ ದೇಶಗಳಿಗೆ ಸಮನಾಗಿ ನಿಂತಿದೆ’ ಎಂದು ಅಂತರರಾಷ್ಟ್ರೀಯ ಪರಮಾಣುಶಕ್ತಿ ಸಂಸ್ಥೆ (ಐಎಇಎ)ಯ ಮುಖವಾಣಿ ಪತ್ರಿಕೆಯಲ್ಲಿ  ಆ ದಿನಗಳಲ್ಲಿ ಪ್ರಕಟಗೊಂಡಿದ್ದ ಲೇಖನ ಹೇಳಿತ್ತು.
 2030ನೇ ವರ್ಷದಲ್ಲಿ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಮೂಲಗಳ ಇಂಧನದ ಸ್ಥಿತಿಗತಿ ಏನಿರುತ್ತದೆ ಎಂಬ ಬಗ್ಗೆ ವರದಿಯನ್ನು ಅಮೆರಿಕದ ಇಂಧನ ಇಲಾಖೆಗೆ ಸೇರಿರುವ ‘ಇಂಧನ ಮಾಹಿತಿ ಸಂಸ್ಥೆ’ (ಇಐಎ) ಪ್ರಕಟಿಸಿತ್ತು. ಅದರ ಪ್ರಕಾರ 2005ರಲ್ಲಿ 1,38,000 ಮೆಗಾವಾಟ್‌ನಷ್ಟಿದ್ದ ಭಾರತದ ಇಂಧನ ಸಾಮರ್ಥ್ಯ 2030ನೇ ವರ್ಷದಲ್ಲಿ 3,98,00 ಮೆಗಾವಾಟ್‌ನಷ್ಟು ಆಗಲಿದೆ.
 ಇದರಲ್ಲಿ ಅಣುಶಕ್ತಿಯ ಪಾಲು 20,000 ಮೆಗಾವಾಟ್ ಮಾತ್ರ. ಅಂದರೆ ಇಷ್ಟೆಲ್ಲಾ ಹೊಸ ಅಣುಸ್ಥಾವರಗಳ ನಿರ್ಮಾಣದ ನಂತರವೂ 2030ರ ವೇಳೆಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇಕಡಾ ಐದರಷ್ಟಾಗಲಿದೆ. ಇದನ್ನು ಇಂಧನ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ಎನ್ನಬಹುದೇ?
 ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಕುರಿತಂತೆಯೇ ಕೇಂದ್ರ ಯೋಜನಾ ಆಯೋಗದ ಇಂಧನ ಸಂಬಂಧಿ ಕಾರ್ಯತಂಡ ವರದಿಯೊಂದನ್ನು ನೀಡಿದೆ. ಪರಮಾಣು ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶಕ್ಕೂ ಅವಕಾಶ ನೀಡುವ ಬಗ್ಗೆಯೂ ಈ ವರದಿಯಲ್ಲಿ ದೀರ್ಘವಾಗಿ ಚರ್ಚಿಸಲಾಗಿದೆ. ಇವೆಲ್ಲದರ ಪರಿಣಾಮ ಹನ್ನೆರಡನೇ ಯೋಜನೆಯ ಅವಧಿಯಲ್ಲಿ (2012-2017) ನಿಚ್ಚಳವಾಗಿ ಕಾಣಲಿದೆ ಎಂಬ ನಿರೀಕ್ಷೆಯನ್ನು ವರದಿ ವ್ಯಕ್ತಪಡಿಸಿದೆ.
ಇದರ ಆಧಾರದಲ್ಲಿ ಮಾಡಲಾದ ಅಂದಾಜಿನಂತೆ 11 ಮತ್ತು 12ನೇ ಯೋಜನಾ ಅವಧಿಯಲ್ಲಿ 15,960 ಮೆಗಾವಾಟ್ ಅಣುಶಕ್ತಿ ಉತ್ಪಾದನೆಯಾಗಬಹುದು. ಇದರ ಪ್ರಕಾರವೂ ದೇಶದ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಅಣುಶಕ್ತಿಯ ಪಾಲು ಶೇ 6.7 ಮಾತ್ರ. ಇದನ್ನು ಕೂಡಾ ಇಂಧನ ಭದ್ರತೆಯಲ್ಲಿ ನಿರ್ಣಾಯಕ ಎಂದು ಹೇಳಲಾಗದು.
ನಾವೆಲ್ಲ ತಿಳಿದುಕೊಂಡ ಹಾಗೆ ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ಆಗಬಹುದಾದ ಏಕೈಕ ಲಾಭ ಎಂದರೆ ದೇಶದ ಇಂಧನ ಸಾಮರ್ಥ್ಯದ ಹೆಚ್ಚಳ. ಉಳಿದಂತೆ ಆಗಲಿರುವುದು ನಷ್ಟವೇ. ಉದಾಹರಣೆಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ದೇಶದ ಪರಮಾಣು ಅಸ್ತ್ರ ಕಾರ್ಯಕ್ರಮದ ಗತಿ ಏನು ಎಂಬ ಮೂರು ವರ್ಷಗಳ ಹಿಂದಿನ ಪ್ರಶ್ನೆ ಈಗಲೂ ಜ್ವಲಂತವಾಗಿದೆ. ಇದು ಒಪ್ಪಂದದ ಅತ್ಯಂತ ವಿವಾದಾತ್ಮಕ ಅಂಶ. ಪರಮಾಣು ಶಕ್ತಿಯ ನಾಗರಿಕ ಬಳಕೆಯ ಚಟುವಟಿಕೆಗಳಿಗಷ್ಟೇ ಒಪ್ಪಂದ ಅನ್ವಯವಾಗುವುದರಿಂದ ನಾಗರಿಕ ಮತ್ತು ಮಿಲಿಟರಿ ಬಳಕೆಯ ಪರಮಾಣು ಸ್ಥಾವರಗಳನ್ನು ಪ್ರತ್ಯೇಕಗೊಳಿಸಬೇಕಾಗಿದೆ.
ನಮ್ಮಲ್ಲಿರುವ 22 ಅಣು ಸ್ಥಾವರಗಳಲ್ಲಿ ಹದಿನಾಲ್ಕು ಮಾತ್ರ ನಾಗರಿಕ ಬಳಕೆಯ ಉದ್ದೇಶದ್ದು ಎಂದು ಹೇಳಿ ಅವುಗಳನ್ನು ಅಂತರರಾಷ್ಟ್ರೀಯ ಸುರಕ್ಷತಾ ಚಕ್ರದೊಳಗೆ ಸೇರಿಸಲು ಭಾರತ ಒಪ್ಪಿಕೊಂಡಿದೆ. ಯುರೇನಿಯಂ ಬಳಕೆಯನ್ನು ಕಡಿಮೆ ಮಾಡಲು ಕಂಡುಹಿಡಿಯಲಾದ ‘ಕಡಿಮೆ ತಿಂದು ಹೆಚ್ಚು ಶಕ್ತಿ ಉತ್ಪಾದಿಸುವ’ ಸ್ವದೇಶಿ ತಂತ್ರಜ್ಞಾನ ಅಳವಡಿಕೆಯ ಫಾಸ್ಟ್ ಬ್ರೀಡರ್ ಸ್ಥಾವರಗಳನ್ನು ನಾಗರಿಕ ಬಳಕೆಯ ಗುಂಪಿನಲ್ಲಿ ಸೇರಿಸಬೇಕೆಂದು ಅಮೆರಿಕ ಒತ್ತಡ ಹೇರುತ್ತಲೇ ಇದೆ.
ಈ ಒಪ್ಪಂದದ ನಂತರ ಮಿಲಿಟರಿ ಬಳಕೆಯ ಅಣುಸ್ಥಾವರಗಳು ಮುಂದೆಂದೂ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಅಮೆರಿಕದ ಪರಮಾಣು ಇಂಧನ ಕಾಯಿದೆ ಪ್ರಕಾರ ‘ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕದ ದೇಶಗಳ ಜತೆ ಆ ದೇಶ ಪರಮಾಣು ಸಹಕಾರ ಸಂಬಂಧ ಹೊಂದುವ ಹಾಗಿಲ್ಲ. ಅದರಿಂದ ಭಾರತಕ್ಕೆ ವಿನಾಯಿತಿ ನೀಡಲೆಂದೇ ಹೈಡ್ ಕಾಯಿದೆ ಎನ್ನುವ ಹೆಸರಲ್ಲಿ ಚರ್ಚೆಗೊಳಗಾಗಿದ್ದ ಹೊಸ ಕಾಯಿದೆಯನ್ನು ಅಮೆರಿಕ ರಚಿಸಿದೆ.
ಈ ಕಾಯಿದೆ ಭಾರತಕ್ಕೆ ಕೆಲವು ವಿನಾಯಿತಿ ನೀಡುವ ಜತೆಯಲ್ಲಿ ಕೆಲವು ಷರತ್ತುಗಳನ್ನು ಹೇರಿದೆ. ಅದರ ಪ್ರಕಾರ ಭಾರತ ಸ್ವತಂತ್ರವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಹಾಗಿಲ್ಲ. ಈ ಷರತ್ತು ಉಲ್ಲಂಘಿಸಿದರೆ ಒಪ್ಪಂದ ತನ್ನಿಂದತಾನೇ ರದ್ದಾಗುತ್ತದೆ. ಹೈಡ್ ಕಾಯಿದೆ ರಚನೆಯಾದ ಸಂದರ್ಭದಲ್ಲಿ ಭಾರತದಲ್ಲಿ ವ್ಯಕ್ತವಾದ ವಿರೋಧವನ್ನು ಕಂಡ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ‘ಹೈಡ್ ಕಾಯಿದೆ ಭಾರತಕ್ಕೆ ಅನ್ವಯವಾಗುವುದಿಲ್ಲ, ಅದು ಸಲಹಾ ರೂಪದ್ದು’ ಎಂದು ಮೌಖಿಕವಾಗಿ ಸಮಾಧಾನ ಹೇಳಿದ್ದರು.
ಇದನ್ನೇ ಕಾಂಗ್ರೆಸ್ ಆತ್ಮರಕ್ಷಣೆಗಾಗಿ ಬಳಸುತ್ತಿದೆ. ಆದರೆ ಅಮೆರಿಕ ಬಿಡುಗಡೆಗೊಳಿಸಿರುವ 123 ಒಪ್ಪಂದದ ಪಠ್ಯದಲ್ಲಿನ ಆರ್ಟಿಕಲ್ 2 (ಸಹಕಾರದ ಅವಕಾಶ) ‘... ಎರಡೂ ದೇಶಗಳು ತಮ್ಮಲ್ಲಿನ ಒಪ್ಪಂದ ರಾಷ್ಟ್ರೀಯ ಕಾನೂನುಗಳು ಮತ್ತು ಅವಶ್ಯಕ ಲೈಸೆನ್ಸ್‌ಗಳಿಗೆ ಅನುಗುಣವಾಗಿ ಒಪ್ಪಂದವನ್ನು ಜಾರಿಗೊಳಿಸಬೇಕು...’ ಎಂದು ಹೇಳಿದೆ. ಅಮೆರಿಕದ ರಾಷ್ಟ್ರೀಯ ಕಾನೂನುಗಳ ವ್ಯಾಪ್ತಿಯಲ್ಲಿ ಹೈಡ್ ಕಾಯಿದೆ ಸೇರಿಕೊಳ್ಳುವುದರಿಂದ ಅದು ಪರಮಾಣು ಸಹಕಾರ ಒಪ್ಪಂದಕ್ಕೆ ಅನ್ವಯವಾಗುತ್ತದೆ.
ಅಣ್ವಸ್ತ್ರ ಪರೀಕ್ಷೆಯ ಮೇಲೆ ಹೇರಲಾಗಿರುವ ಈ ನಿರ್ಬಂಧವನ್ನು ಹಲವಾರು ಹಿರಿಯ ವಿಜ್ಞಾನಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ‘ಹೊಸ ಪರಮಾಣು ಅಸ್ತ್ರಗಳ ತಯಾರಿ ಮಾತ್ರವಲ್ಲ, ಹಳೆಯ ಅಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ನವೀಕರಿಸಲು ಕೂಡಾ ಅಣ್ವಸ್ತ್ರ ಪರೀಕ್ಷೆ ಅಗತ್ಯ’ ಎಂದು  ಭಾಭಾ ಅಣು ಸಂಶೋಧನಾ ಕೇಂದ್ರ (ಬಾರ್ಕ್‌)ದ ನಿವೃತ್ತ ನಿರ್ದೇಶಕ ಎ.ಎನ್. ಪ್ರಸಾದ್ ಹೇಳುತ್ತಿದ್ದಾರೆ.
ಈ ಕಾರಣದಿಂದಾಗಿ ಪರಮಾಣು ಸಹಕಾರ ಒಪ್ಪಂದ ಇನ್ನೊಂದು ರೀತಿಯಲ್ಲಿ ತಮ್ಮ ಭದ್ರತೆಯ ವಿಚಾರದಲ್ಲಿ ಮಾಡಿಕೊಂಡಿರುವ ರಾಜಿ ಎನ್ನುವ ಆರೋಪವನ್ನು ಎದುರಿಸಬೇಕಾಗಿಬಂದಿರುವುದು.ನಾಗರಿಕ ಪರಮಾಣು ಸಹಕಾರ ಒಪ್ಪಂದದಿಂದ ನಮ್ಮ ಇಂಧನ ಸಾಮರ್ಥ್ಯ ಗಣನೀಯವಾಗಿ ಹೆಚ್ಚದೆ ಇದ್ದರೂ, ಈ ಒಪ್ಪಂದದಿಂದಾಗಿ ಸೇನಾ ಬಳಕೆಯ ಪರಮಾಣು ಕಾರ್ಯಕ್ರಮಗಳಿಗೆ ಹಿನ್ನಡೆಯಾದರೂ ಮತ್ತು ದೇಶದ ಭದ್ರತೆಯ ವಿಚಾರದಲ್ಲಿಯೇ ರಾಜಿ ಮಾಡಿಕೊಳ್ಳಬೇಕಾಗಿ ಬಂದರೂ ಮನಮೋಹನ್ ಸಿಂಗ್ ಅವರು ಯಾಕೆ ಈ ಒಪ್ಪಂದವನ್ನು ಸರ್ಕಾರದ ಜೀವನ್ಮರಣದ ಪ್ರಶ್ನೆ ಮಾಡಿದ್ದರು?
ನಾಗರಿಕ ಬಳಕೆಗಾಗಿ ಅಣುಶಕ್ತಿ ಅಭಿವೃದ್ಧಿಯ ಕಾರ್ಯಕ್ರಮದಂತೆ ಮೇಲ್ನೋಟಕ್ಕೆ ಕಾಣುವ ಪರಮಾಣು ಸಹಕಾರ ಒಪ್ಪಂದದ ಗುಪ್ತವಾಗಿ ಅಮೆರಿಕ ಮತ್ತು ಭಾರತದ ನಡುವಿನ ಸೇನಾ ಒಪ್ಪಂದವೇ? ಈ ಒಪ್ಪಂದ ಭಾರತವನ್ನು ಚೀನಾ ಎದುರು ಎತ್ತಿಕಟ್ಟುವ ಹುನ್ನಾರವೇ ? ತನ್ನಲ್ಲಿರುವ ಎರಡನೇ ದರ್ಜೆ ಅಣುತಂತ್ರಜ್ಞಾನ ಮತ್ತು ಅಣು ರಿಯಾಕ್ಟರ್‌ಗಳಿಗೆ ಭಾರತದಲ್ಲಿ ಮಾರುಕಟ್ಟೆ ಕುದುರಿಸಲಿಕ್ಕೆ ಈ ಒಪ್ಪಂದವನ್ನು ಮಾಡಿಕೊಂಡಿತೇ? ವಿಕಿಲೀಕ್ಸ್ ಕೇಬಲ್‌ಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗಿದೆ.
ಇವೆಲ್ಲಕ್ಕಿಂತಲೂ ಮುಖ್ಯವಾದ ಅಣುಸ್ಥಾವರಗಳ ಸುರಕ್ಷತೆಯ ಪ್ರಶ್ನೆ ಜಪಾನ್‌ನಲ್ಲಿ ಭೂಕಂಪ ಮತ್ತು ಸುನಾಮಿಯನ್ನು ಎದುರಿಸಲಾಗದೆ ಅಲ್ಲಿನ ಅಣುಸ್ಥಾವರಗಳು ಕುಸಿದುಬಿದ್ದನಂತರ ಹುಟ್ಟಿಕೊಂಡಿದೆ.

Monday, March 14, 2011

ಈ ಸರ್ಕಾರಗಳನ್ನು ನಂಬಿರುವ ನಾವೆಷ್ಟು ಸುರಕ್ಷಿತ?

ಮತ್ತೊಬ್ಬರ ಕಷ್ಟಕ್ಕಾಗಿ ಮರುಗಲು ಈಗ ಯಾರಿಗೂ ಪುರುಸೊತ್ತಿಲ್ಲ. ವಿಶ್ವದ ಕನ್ನಡಿಗರನ್ನು ನೆನಪಿಸಿಕೊಳ್ಳಲೆಂದೇ ಆಯೋಜಿಸಲಾಗಿದ್ದ ವಿಶ್ವಕನ್ನಡ ಸಮ್ಮೇಳನದ ಆಯೋಜಕರಿಗೂ, ಕೆಲವು ಗಂಟೆಗಳ ಮೊದಲಷ್ಟೆ ಸುನಾಮಿಯಿಂದ ತತ್ತರಿಸಿ ಹೋದ ಜಪಾನ್‌ನ ನೆನಪಾಗಲಿಲ್ಲ. ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನವನ್ನಾದರೂ ಆಚರಿಸುವ ಮಾನವೀಯತೆಯನ್ನು ಯಾರೂ ತೋರಿಸಲಿಲ್ಲ.
ಅಲ್ಲಿ ಸಾವು-ನೋವಿಗೀಡಾದವರಲ್ಲಿ ಕನ್ನಡಿಗರೂ ಇರಬಹುದು ಎಂಬ ಸಣ್ಣ ಅನುಮಾನವೂ ಯಾರಲ್ಲಿಯೂ ಮೂಡಲಿಲ್ಲ. ಬರೀ ಕನ್ನಡ ಸಾಹಿತ್ಯ ಸಮ್ಮೇಳನವಾಗಿದ್ದರೆ ಇದನ್ನು ಮರೆತುಬಿಡಬಹುದಿತ್ತು. ಅದರೆ ಇದು ವಿಶ್ವದ ವ್ಯಾಪ್ತಿಯ ಕನ್ನಡ ಸಮ್ಮೇಳನ. ಸಮ್ಮೇಳನದ ಸಂಭ್ರಮದ ಮೇಲೆ ಸೂತಕದ ಛಾಯೆ ಬೇಡ ಎಂದು ಎಲ್ಲರೂ ಮರೆತುಬಿಟ್ಟರೇನೋ?
ಉದ್ಯಮಿ ಎನ್.ಆರ್.ನಾರಾಯಣಮೂರ್ತಿಯವರು ತಮ್ಮ ಭಾಷಣದಲ್ಲಿ ಹೇಳಿದ್ದ ಬಹಳಷ್ಟು ವಿಚಾರಗಳಿಗೆ ಜಪಾನ್ ದೇಶಕ್ಕಿಂತ ದೊಡ್ಡ ಮಾದರಿ ಯಾವುದಿದೆ? ಜಪಾನಿಯರಷ್ಟು ಕೆಲಸವನ್ನು ಪ್ರೀತಿಸುವ ಇನ್ನೊಂದು ಜನಾಂಗ ವಿಶ್ವದಲ್ಲಿ ಸಿಗಲಾರದು, ಈ ಬಗ್ಗೆ ದಂತಕತೆಗಳೇ ಇವೆ. ಅಣುಬಾಂಬ್ ಸುಟ್ಟುಹಾಕಿದರೂ ಮತ್ತೆ ಬೂದಿಯಿಂದ ಮೇಲೆದ್ದು ಬಂದವರಂತೆ ಹೊಸನಾಡನ್ನು ಕಟ್ಟಿದವರು ಜಪಾನೀಯರು.
ಕಠಿಣಶ್ರಮ, ಜೀವನೋತ್ಸಾಹ ಮತ್ತು ಸ್ವಾಭಿಮಾನದಲ್ಲಿ ಅವರಿಗೆ ಅವರೇ ಸಾಟಿ ಮತ್ತು ಉಳಿದವರಿಗೆ ಸ್ಫೂರ್ತಿ.ವಿಶ್ವವನ್ನು ತನ್ನ ಅಂಗೈಯಷ್ಟೇ ಚೆನ್ನಾಗಿ ಬಲ್ಲ ವಿಶ್ವಸಂಚಾರಿ ಎನ್.ಆರ್.ನಾರಾಯಣಮೂರ್ತಿಯವರಿಗೆ ಜಪಾನ್ ಅಪರಿಚಿತ ನಾಡಲ್ಲ. ಅವರಾದರೂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೊಂದಿರುವ ಜಪಾನೀಯರ ಬಗ್ಗೆ ಒಂದೆರಡು ಅನುಕಂಪದ ನುಡಿಗಳನ್ನಾಡಬಹುದು, ಧೀರ ಜಪಾನಿಯರನ್ನು ಕೊಂಡಾಡಬಹುದು ಎಂದು ನಿರೀಕ್ಷಿಸಿದವರಿಗೂ ನಿರಾಶೆಯೇ ಕಾದಿತ್ತು.
ಉಕ್ಕಿ ಚೆಲ್ಲಾಪಿಲ್ಲಿಯಾಗಿ ಹರಿದ ಕನ್ನಡಾಭಿಮಾನದ ಹುಚ್ಚುಹೊಳೆಯಲ್ಲಿ ಮಾನವೀಯತೆ ಕೂಡಾ ಕೊಚ್ಚಿಹೋಗಿತ್ತು. ಜಪಾನೀಯರಿಗೆ ಖಂಡಿತ ನಮ್ಮ ಅನುಕಂಪದ ನಿರೀಕ್ಷೆ ಇದ್ದಿರಲಾರದು. 1995ರಲ್ಲಿ ಆರುಸಾವಿರ ಜನ ಬಲಿ ತೆಗೆದುಕೊಂಡ ಭೂಕಂಪದ ನಂತರ ಹೊರದೇಶಗಳು ನೆರವಿನ ಹಸ್ತ ಚಾಚಿದಾಗ ನಯವಾಗಿಯೇ ನಿರಾಕರಿಸಿ ಸ್ವಾಭಿಮಾನ ಮೆರೆದ ನಾಡು ಅದು.
ಪ್ರಕೃತಿ ವಿಕೋಪದ ವಿರುದ್ಧದ ಹೋರಾಟದಲ್ಲಿ ಜಪಾನೀಯರು ವಿಶ್ವಕ್ಕೆಲ್ಲ ಮಾದರಿ. ಈ ಕಾರಣಕ್ಕಾಗಿಯಾದರೂ ಕಷ್ಟದಲ್ಲಿರುವ ಜಪಾನ್ ದೇಶವನ್ನು ನಾವೆಲ್ಲ ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ. ಯಾಕೆಂದರೆ ಇದರಿಂದ ನಾವು ಕಲಿಯುವುದೂ ಇದೆ. ರಿಕ್ಟರ್ ಮಾಪನದಲ್ಲಿ 8.9ರಷ್ಟು ತೀವ್ರತೆಯ ಭೂಕಂಪ ಭಾರತದಲ್ಲಿ ಸಂಭವಿಸಿದ್ದರೆ ಏನಾಗಬಹುದಿತ್ತು ಎನ್ನುವುದನ್ನು ಊಹಿಸಲೂ ಭಯವಾಗುತ್ತದೆ.
ಐದು ವರ್ಷಗಳ ಹಿಂದೆ ತಮಿಳುನಾಡಿನ ಕರಾವಳಿಯಲ್ಲಿ ಸಂಭವಿಸಿದ ಹೆಚ್ಚುಕಡಿಮೆ ಇಷ್ಟೇ ತೀವ್ರತೆಯ ಭೂಕಂಪದಿಂದ ಎದ್ದ ಸುನಾಮಿ ದೈತ್ಯಅಲೆಗಳಿಂದಾಗಿ ಆ ರಾಜ್ಯವೊಂದರಲ್ಲೇ ಸುಮಾರು ಎಂಟುಸಾವಿರ ಮಂದಿ ಸಾವಿಗೀಡಾಗಿದ್ದರು.ಇನ್ನೂ ಕಡಿಮೆ ತೀವ್ರತೆಯ (7.6) ಭೂಕಂಪದಿಂದ ಗುಜರಾತ್‌ನಲ್ಲಿ 20,000 ಜನ ಪ್ರಾಣ ಕಳೆದುಕೊಂಡಿದ್ದರು. 1985ರಲ್ಲಿ ಬೀಸಿದ್ದ ಚಂಡಮಾರುತಕ್ಕೆ ಅಮೆರಿಕದಲ್ಲಿ ಐವರು ಬಲಿಯಾಗಿದ್ದರೆ, ಹೆಚ್ಚುಕಡಿಮೆ ಅಷ್ಟೇ ಶಕ್ತಿಶಾಲಿ ಚಂಡಮಾರುತಕ್ಕೆ ಬಾಂಗ್ಲಾದೇಶದಲ್ಲಿ ಐದು ಲಕ್ಷ ಜನ ಸಾವಿಗೀಡಾಗಿದ್ದರು.
1993ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪ ನಡೆದಷ್ಟೇ ತೀವ್ರತೆಯ ಭೂಕಂಪ ಹೆಚ್ಚುಕಡಿಮೆ ಅದೇ ಕಾಲದಲ್ಲಿ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಡೆದಿತ್ತು. ಇಲ್ಲಿ ಸತ್ತವರು 11,000, ಅಲ್ಲಿ ಸತ್ತಿದ್ದು ಒಬ್ಬನೇ ಒಬ್ಬ. ಪ್ರಕೃತಿ ವಿಕೋಪದಿಂದ ಪೆರುವಿನಲ್ಲಿ ಸಾಯುವವರ ಸರಾಸರಿ ಸಂಖ್ಯೆ 2,900, ಜಪಾನ್‌ನಲ್ಲಿ 63. ಪ್ರಕೃತಿ ವಿಕೋಪದ ವಿಚಾರದಲ್ಲಿ ಅಷ್ಟೊಂದು ಸುಧಾರಿತ ಮುಂಜಾಗ್ರತಾ ಕ್ರಮಗಳನ್ನು ಜಪಾನ್ ಕೈಗೊಂಡಿರುವ ಕಾರಣದಿಂದಾಗಿಯೇ ಅಲ್ಲಿ ಸಾವು-ನೋವು ಕಡಿಮೆ.
ತಮಿಳುನಾಡಿನ ಕರಾವಳಿಗೆ ಸುನಾಮಿ ಅಲೆಗಳು ಬಂದು ಬಡಿದಾಗ ನಮ್ಮಲ್ಲೊಂದು ಸುನಾಮಿ ಮುನ್ಸೂಚನಾ ವ್ಯವಸ್ಥೆ ಇದ್ದಿದ್ದರೆ... ಎಂದು ಅನೇಕರು ಕೈಕೈ ಹಿಸುಕಿಕೊಂಡಿದ್ದರು. ಆಗ ನಮ್ಮಲ್ಲಿ ಸುನಾಮಿ ಮುನ್ಸೂಚನಾ ವ್ಯವಸ್ಥೆಯೇ ಇರಲಿಲ್ಲ ಎನ್ನುವುದು ನಿಜ. ಆದರೆ ಇಂತಹ ಪ್ರತ್ಯೇಕ ವ್ಯವಸ್ಥೆ ಇಲ್ಲದಿದ್ದರೂ ಭೂಕಂಪ ಮಾಪನದ ಮೂಲಕ ಸುನಾಮಿಯ ಮುನ್ಸೂಚನೆಯನ್ನು ತಿಳಿದುಕೊಳ್ಳಲು ಸಾಧ್ಯ ಇದೆ.
ಸುನಾಮಿ ಎನ್ನುವುದು ಸಮುದ್ರದೊಳಗಿನ ಭೂಕಂಪದ ಬಾಹ್ಯ ಅವತಾರ ಅಷ್ಟೆ. ಸಮುದ್ರದೊಳಗೆ ಭೂಕಂಪಗಳು ನಡೆಯುತ್ತಲೇ ಇರುತ್ತವೆ. ಒಮ್ಮೊಮ್ಮೆ ಅವು ಸುನಾಮಿಯಂತಹ ರೌದ್ರ ರೂಪ ಪಡೆಯುತ್ತವೆ. ಸುಮಾತ್ರ ದ್ವೀಪದ ಪಶ್ಚಿಮ ಕಡಲಿನಲ್ಲಿ 2004ರ ಡಿಸೆಂಬರ್ 26ರ ಬೆಳಿಗ್ಗೆ 6.29ಕ್ಕೆ ಸಂಭವಿಸಿದ್ದ ಭೂಕಂಪನದ ಮಾಹಿತಿ ಮರುಗಳಿಗೆಯಲ್ಲಿ ಭಾರತೀಯ ಹವಾಮಾನ ಇಲಾಖೆಗೆ ಗೊತ್ತಾಗಿತ್ತು. ಅಷ್ಟರಲ್ಲಿ ಕೊಲ್ಕೊತ್ತಾ ಮತ್ತು ವಿಶಾಖಪಟ್ಟಣಗಳ ಹವಾಮಾನ ಇಲಾಖೆಗಳಿಗೆ ಕಂಪನ ನಂತರದ ಆಘಾತಗಳ ಸಂದೇಶವೂ ರವಾನೆಯಾಗಿದ್ದವು.
ಆದರೆ ಈ ಭೂಕಂಪನದ ಕೇಂದ್ರ ಎಲ್ಲಿ? ನಮ್ಮ ಕರಾವಳಿಯ ಮೇಲೆ ಪರಿಣಾಮ ಏನು ಎಂಬುದನ್ನು ವಿಶ್ಲೇಷಿಸಲು ಹವಾಮಾನ ಇಲಾಖೆಯ ತಜ್ಞರು ಒಂದು ಗಂಟೆ ಕಾಲ ವ್ಯಯಿಸಿದ್ದರು. ಅಷ್ಟೊತ್ತಿಗೆ ಸುನಾಮಿ ಒಂದು ಸಾವಿರ ಕಿ.ಮೀ.ಕ್ರಮಿಸಿತ್ತು. ಏಳೂವರೆ ಗಂಟೆಗೆ ಭಾರತೀಯ ವಾಯುಸೇನೆಗೆ ಸುದ್ದಿ ತಲುಪಿತ್ತು. ಆಗಲೇ ಅಂಡಮಾನ್ ನಿಕೋಬಾರ್ ನೀರಲ್ಲಿ ಮುಳುಗತೊಡಗಿತ್ತು.
ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಕರಾವಳಿಗೆ ಎಚ್ಚರಿಕೆ ನೀಡಲು ಆಗಲೂ ಒಂದೂವರೆ ಗಂಟೆಯ ಸಮಯ ಉಳಿದಿತ್ತು. ಇಂತಹ ಸಂದರ್ಭಗಳಲ್ಲಿ ಪ್ರತಿಕ್ಷಣಕ್ಕೂ ಜೀವದ ಬೆಲೆ ಇರುತ್ತದೆ. ಆದರೆ ಪ್ರಕೃತಿವಿಕೋಪ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಗೃಹಸಚಿವರ ಕಚೇರಿ ಮತ್ತು ಟೆಕ್ನಾಲಜಿ ಭವನದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಕಚೇರಿಗಳಲ್ಲಿನ ಕೆಂಪುಪಟ್ಟಿ ತಾಲ್ಲೂಕುಮಟ್ಟದ ಸರ್ಕಾರಿ ಕಚೇರಿಗಳಿಗಿಂತ ಭಿನ್ನವಲ್ಲ.
ಅಲ್ಲಿ ಕೂತಿದ್ದ ಸಚಿವರು ಮತ್ತು ಅವರ ಮಾರ್ಗದರ್ಶಕರಾಗಿರುವ ಸರ್ಕಾರಿ ಬಾಬುಗಳು ವ್ಯಯಮಾಡಿದ್ದು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಬೇಕಾದ ಸಬೂಬುಗಳನ್ನು ಹುಡುಕಲು. ಅವರಿಗೆ ಜಪಾನೀಯರು ಮಾದರಿಯಾಗಿದ್ದರೆ ಅಷ್ಟೊಂದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲವೇನೋ?
ಶಾಂತ ಸಾಗರದಲ್ಲಿ ಸಾಮಾನ್ಯವಾಗಿರುವ ಸುನಾಮಿ ಹಿಂದೂ ಮಹಾಸಾಗರದಲ್ಲಿ ಅಪರೂಪ ಎನ್ನುವ ಅಭಿಪ್ರಾಯ ನಮ್ಮ ತಜ್ಞರಲ್ಲಿ ಈಗಲೂ ಇದೆ. ಅಮೆರಿಕ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಸೇರಿದಂತೆ ಶಾಂತ ಸಾಗರದ ಕರಾವಳಿಯ 26 ದೇಶಗಳು ಕೂಡಿ 1960ರಲ್ಲಿಯೇ ಹವಾಯ್‌ನಲ್ಲಿ ಸುನಾಮಿ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಿದ್ದವು. ವಿಶ್ವಾದ್ಯಂತ ಸುನಾಮಿ ಮುನ್ಸೂಚನಾ ವ್ಯವಸ್ಥೆ ನಿರ್ಮಾಣಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಆಂಧ್ರಪ್ರದೇಶ ಮೂಲದ ವಿಜ್ಞಾನಿ ಡಾ.ಟಾಡ್ ಮೂರ್ತಿ ಸುನಾಮಿ ಮುನ್ಸೂಚನಾ ಕೇಂದ್ರ ಸ್ಥಾಪಿಸಲು 1967ರಲ್ಲಿಯೇ ಭಾರತಕ್ಕೆ ಸಲಹೆ ನೀಡಿದ್ದರಂತೆ.
ಅದಕ್ಕೆ ವಿಶಾಖಪಟ್ಟಣವೇ ಸೂಕ್ತ ಸ್ಥಳ ಎಂಬುದನ್ನೂ ಸೂಚಿಸಿದ್ದರಂತೆ. ನಮ್ಮ ಸರ್ಕಾರಗಳು ಆಸಕ್ತಿ ತೋರದಿದ್ದರೂ ಭಾರತಕ್ಕೆ ನೆರವಾಗುವಂತಹ ಮುನ್ಸೂಚನಾ ಕೇಂದ್ರಗಳಿಗೆ ಸಂಬಂಧಿಸಿದ ಕಂಪ್ಯೂಟರ್ ಪ್ರೊಗ್ರಾಮ್‌ಗಳನ್ನು ಅವರು ರಚಿಸಿದ್ದರು. ತಮಿಳುನಾಡು ದುರಂತದ ನಂತರ ಕೊನೆಗೂ ಸುನಾಮಿ ಮುನ್ಸೂಚನಾ ಕೇಂದ್ರವೊಂದು ಪ್ರಾರಂಭಗೊಂಡಿದೆ.
ಹೈದರಾಬಾದ್‌ನಲ್ಲಿರುವ ಭಾರತೀಯ ಸುನಾಮಿ ಪೂರ್ವ ಸೂಚನಾ ಕೇಂದ್ರ  ಮಾರ್ಚ್ ಹನ್ನೆರಡರ ಬೆಳಿಗ್ಗೆ 11.24 ಮತ್ತು 12.15ಕ್ಕೆ ಹೊರಡಿಸಿರುವ ಎರಡು ಬುಲೆಟಿನ್‌ಗಳಲ್ಲಿ ಜಪಾನ್‌ನ ಹೊನ್ಷು ಪೂರ್ವ ಕರಾವಳಿಯ ಸಮುದ್ರದಲ್ಲಿ ಸಂಭವಿಸಿದ್ದ ಭೂಕಂಪನವನ್ನು ದಾಖಲಿಸಿದೆ. ಎರಡೂ ಬುಲೆಟಿನ್‌ಗಳನ್ನು ಕೇಂದ್ರ ಬಿಡುಗಡೆಗೊಳಿಸಿದ್ದು ಭೂಕಂಪ ನಡೆದ ನಂತರ. ಮತ್ತೆ ಪೂರ್ವ ಸೂಚನೆ ಎಲ್ಲಿದೆ?
ಸುನಾಮಿ ಮುನ್ಸೂಚನಾ ವ್ಯವಸ್ಥೆಯದು ಈ ಸ್ಥಿತಿಯಾದರೆ  ವಿಪತ್ತು ನಿರ್ವಹಣಾ ವ್ಯವಸ್ಥೆಯದು ಇನ್ನೊಂದು ಕತೆ.ಭಾರತದ 25 ರಾಜ್ಯಗಳು ಒಂದಲ್ಲ ಒಂದು ಬಗೆಯ ಪ್ರಕೃತಿ ವಿಕೋಪದ ಭೀತಿಯನ್ನು ಎದುರಿಸುತ್ತಿವೆ. ದೇಶದ ರಾಜಧಾನಿಯೂ ಸೇರಿದಂತೆ ದೇಶದ ಅರ್ಧಭಾಗವನ್ನು ಭೂಕಂಪ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ.
ಪ್ರವಾಹ, ಬರ, ಚಂಡಮಾರುತ, ಭೂಕಂಪ ಮಾತ್ರವಲ್ಲ, ಕೈಗಾರಿಕಾ ದುರಂತ (ಭೋಪಾಲ್), ಬಾಂಬುಸ್ಫೋಟ (ಮುಂಬೈ), ಕೋಮುಗಲಭೆ  (ಗುಜರಾತ್), ಸಾಂಕ್ರಾಮಿಕ ರೋಗಗಳು (ಸೂರತ್) ಜನ ತಲ್ಲಣಿಸುವಂತೆ ಮಾಡಿವೆ.ಆದರೆ ಇತ್ತೀಚಿನವರೆಗೂ ‘ವಿಪತ್ತು ನಿರ್ವಹಣಾ ಸಂಸ್ಥೆ’ ಕೃಷಿ ಇಲಾಖೆಯ ಭಾಗವಾಗಿತ್ತು. ಪ್ರಕೃತಿ ವಿಕೋಪ ಎಂದರೆ ಬರ ಮತ್ತು ಪ್ರವಾಹ ಎಂದಷ್ಟೆ ತಿಳಿದುಕೊಂಡಿರುವುದು ಇದಕ್ಕೆ ಕಾರಣ.
ಗುಜರಾತ್‌ನಲ್ಲಿನ ಭೂಕಂಪ ಇಪ್ಪತ್ತು ಸಾವಿರ ಜನರನ್ನು ಬಲಿತೆಗೆದುಕೊಂಡ ನಂತರ ಎಚ್ಚೆತ್ತ ಕೇಂದ್ರ ಸರ್ಕಾರ ಅದನ್ನು ತರಾತುರಿಯಲ್ಲಿ ಗೃಹ ಇಲಾಖೆಗೆ ವರ್ಗಾಯಿಸಿತು. ಆ ಕಾಲದಲ್ಲಿ ಭಾರತ-ಪಾಕಿಸ್ತಾನದ ಸಂಬಂಧದಲ್ಲಿ ಕಾಣಿಸಿಕೊಂಡ ಬಿಗುವಿನಿಂದ ಹುಟ್ಟಿದ ಅಣ್ವಸ್ತ್ರ ಬಳಕೆಯ ಭೀತಿ ಕೂಡಾ ಇದಕ್ಕೆ ಕಾರಣ.
ವಿಪತ್ತು ನಿರ್ವಹಣಾ ವ್ಯವಸ್ಥೆ ಅಲ್ಲಿಂದ ಇನ್ನೊಂದು ಹೆಜ್ಜೆ ಮುಂದಿಡಲು ತಮಿಳುನಾಡು ಸುನಾಮಿಗೆ ಬಲಿಯಾಗಬೇಕಾಯಿತು. ಕೊನೆಗೂ 2005ರಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯನ್ನು ಜಾರಿಗೊಳಿಸಿತು. ಇದರಡಿ ರಚನೆಗೊಂಡ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ’ಕ್ಕೆ ಪ್ರಧಾನಮಂತ್ರಿಯೇ ಅಧ್ಯಕ್ಷರು. ಗೃಹ, ಹಣಕಾಸು ಮತ್ತು ಕೃಷಿ ಸಚಿವರು ಸದಸ್ಯರು. ಈ ಪ್ರಾಧಿಕಾರಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರು.
 ಇದರ ಜತೆಯಲ್ಲಿ ಕೇಂದ್ರ ಗೃಹಖಾತೆಯಲ್ಲಿ ಪ್ರತ್ಯೇಕವಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗ ಇದೆ. ಅದರ ಭಾಗವಾಗಿಯೇ ‘ಬಿಕ್ಕಟ್ಟು ನಿರ್ವಹಣಾ ಸಮಿತಿ’ ಇದೆ. ಇದು ಸಂಪುಟ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಡನೆ ಕಾರ್ಯನಿರ್ವಹಿಸುತ್ತಿದೆ. ಸದ್ಯಕ್ಕೆ ಇದು ಮಾಡುವ ಮುಖ್ಯ ಕೆಲಸ ನಷ್ಟದ ಅಂದಾಜು ಮತ್ತು ಪರಿಹಾರ ವಿತರಣೆ. ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಇದು ಇಷ್ಟದ ಕೆಲಸ ಕೂಡಾ ಹೌದು. ಬಿಕ್ಕಟ್ಟು ನಿರ್ವಹಣೆ?
ಅಲ್ಲಿ ಇಲ್ಲಿ ಪ್ರಕೃತಿ ವಿಕೋಪಗಳು ಎದುರಾದಾಗ ಕೇಂದ್ರ ಗೃಹಸಚಿವರು ಎಲ್ಲ ರಾಜ್ಯಗಳಿಗೆ ಪತ್ರ ಬರೆಯುತ್ತಾರೆ. ಶೋಧ ಮತ್ತು ರಕ್ಷಣಾ ವ್ಯವಸ್ಥೆಯ ತಾಲೀಮು, ಅದಕ್ಕೆ ಬೇಕಾದ ಸಲಕರಣೆಗಳ ಖರೀದಿ, ಪರಿಹಾರ ಸಾಮಗ್ರಿಗಳ ದಾಸ್ತಾನು, ಸ್ವಯಂಸೇವಾ ಕಾರ್ಯಕರ್ತರಿಗೆ ತರಬೇತಿ, ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ತಜ್ಞರೊಡನೆ ಸಮಾಲೋಚನೆ ಇತ್ಯಾದಿ ವಿಷಯಗಳ ಬಗ್ಗೆ ಪತ್ರದಲ್ಲಿ ಮಾರ್ಗದರ್ಶನ ಇರುತ್ತದೆ. ಇವುಗಳನ್ನು ರಾಜ್ಯ ಸರ್ಕಾರಗಳು ಪಾಲಿಸುತ್ತಿವೆಯೇ, ಇಲ್ಲವೇ ಎನ್ನುವುದನ್ನು ನೋಡುವ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲ.
ರಾಜ್ಯಸರ್ಕಾರಗಳಿಗೆ ಈ ಮಾರ್ಗದರ್ಶನದ ಬಗ್ಗೆ ಆಸಕ್ತಿಯೂ ಇರುವುದಿಲ್ಲ. ಅವುಗಳು ಕೇಂದ್ರ ಸರ್ಕಾರದ ಕಡೆ ನೋಡುವುದು ದುಡ್ಡಿಗಾಗಿ ಮಾತ್ರ. ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳು ನೆರೆ ನೀರಿನಲ್ಲಿ ಮುಳುಗಿದ್ದಾಗಲೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಜತೆ ಜಗಳಕ್ಕಿಳಿದದ್ದು ದುಡ್ಡಿಗಾಗಿಯೇ.
ದುಡ್ಡೇನೋ ಬಂತು, ಕೆಲಸವಾಯಿತೇ? ಹದಿನಾರು ತಿಂಗಳುಗಳಾದರೂ ನೆರೆಹಾವಳಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆಲ್ಲ 300 ಚದರ ಅಡಿ ವಿಸ್ತೀರ್ಣದ ಮನೆ ಕಟ್ಟಿ ಕೊಡಲಾಗದ ಸರ್ಕಾರ ಸುನಾಮಿ, ಚಂಡಮಾರುತ, ಭೂಕಂಪ ಬಂದರೆ ಜನರನ್ನು ರಕ್ಷಿಸಬಹುದೇ? ಅಂದ ಹಾಗೆ, ಅಲ್ಲೇ ಇದ್ದ ನೆರೆಸಂತ್ರಸ್ತರನ್ನು ಮರೆತಿರುವ ಸರ್ಕಾರ ದೂರದ ಜಪಾನ್‌ನಲ್ಲಿರುವ ನೊಂದ ಜನರನ್ನು ಮರೆತಿದ್ದರಲ್ಲಿ ಆಶ್ಚರ್ಯವೇನಿದೆ!

Monday, March 7, 2011

ಎಡರಂಗದಿಂದ ಕಲಿಯುವುದೂ ಸಾಕಷ್ಟಿದೆ

ಕಳೆದೆರಡು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೆ ಪಶ್ಚಿಮ ಬಂಗಾಳದ ಮತದಾರರು ಆಗಲೇ ನಿರ್ಧಾರ ಮಾಡಿಮುಗಿಸಿದಂತೆಯೇ ಕಾಣುತ್ತಿದೆ. ಆದ್ದರಿಂದ ಮುಂದಿನ ತಿಂಗಳು ಆ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಗೆಲ್ಲುವುದು ಎಷ್ಟು ಕಷ್ಟವೋ, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೋಲುವುದು ಅಷ್ಟೇ ಕಷ್ಟ.
ಆದರೆ ರಾಜಕೀಯ ಪಕ್ಷಗಳು ಒಮ್ಮೊಮ್ಮೆ ಸುಲಭದ ಗೆಲುವನ್ನು ಕೈಬಿಟ್ಟು ಕಷ್ಟದ ಸೋಲಿನ ಹಿಂದೆ ಓಡುವುದುಂಟು. ಭಾವಾವೇಶಕ್ಕೆ ಒಳಗಾಗಿ ಅನೇಕ ಬಾರಿ ರಾಜಕೀಯ ಎಡವಟ್ಟುಗಳನ್ನು ಮಾಡಿಕೊಂಡಿರುವ ಮಮತಾಬ್ಯಾನರ್ಜಿಯವರಿಂದ ಇಂತಹದ್ದೊಂದು ಹರಾಕಿರಿ ನಡೆಯಲು ಸಾಧ್ಯವೇ ಇಲ್ಲ ಎಂದು ಧೈರ್ಯದಿಂದ ಹೇಳುವಂತಿಲ್ಲ. ಅಲ್ಲದೆ ರಾಜಕೀಯ ಪ್ರಜ್ಞಾವಂತಿಕೆಯಲ್ಲಿ ತಮಗೆ ತಾವೇ ಸಾಟಿಯಾಗಿರುವ ಬಂಗಾಳಿಗಳು ಅಚ್ಚರಿ ನೀಡುವ ಸಣ್ಣ ಸಾಧ್ಯತೆಯೂ ಇದೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳು ನಡೆಯದೆ ಹೋದರೆ ಮೂವತ್ತನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲಾವಧಿಯಲ್ಲಿ ಎಡಪಕ್ಷಗಳು ಪಶ್ಚಿಮಬಂಗಾಳದಲ್ಲಿ ಕಟ್ಟಿ ನಿಲ್ಲಿಸಿರುವ ‘ಕೆಂಪುಕೋಟೆ’ ಇನ್ನೆರಡು ತಿಂಗಳಲ್ಲಿ ಕುಸಿದುಬೀಳಲಿದೆ.  ಕಾಳಿಘಾಟ್‌ನ ‘ಗುಡಿಸಲ ರಾಣಿ’ ಮಮತಾ ಬ್ಯಾನರ್ಜಿ ಕೊಲ್ಕೊತ್ತಾದ ರೈಟರ್ಸ್‌ ಕಟ್ಟಡ ಪ್ರವೇಶಿಸಲಿದ್ದಾರೆ.
ವ್ಯಕ್ತಿ ಇರಲಿ, ಸಂಸ್ಥೆ ಇರಲಿ, ಸೋಲು ಬಹಳ ಕ್ರೂರವಾದುದು. ಸೋತವರ ಮೇಲೆ ಯಾರೂ ಹೂವಿನ ಮಳೆ ಸುರಿಸುವುದಿಲ್ಲ, ಕಲ್ಲೆಸೆಯುವವರೇ ಹೆಚ್ಚು. ಆದರೆ ಪಾಠ ಕಲಿಯಬೇಕಾಗಿರುವುದು ಸೋಲಿನಿಂದಲೇ ಹೊರತು ಗೆಲುವಿನಿಂದ ಅಲ್ಲ. ಸುಮಾರು ಮೂರುವರೆ ದಶಕಗಳಷ್ಟು ಕಾಲ ರಾಜ್ಯಭಾರ ಮಾಡಿದ ಪಶ್ಚಿಮಬಂಗಾಳದ ಎಡಪಕ್ಷಗಳು, ರಾಜಕೀಯವನ್ನು ನೋಡುವ, ಮಾಡುವ ಮತ್ತು ಅನುಭವಿಸುವ ವಿಧಾನವನ್ನೇ ಬದಲಾಯಿಸಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯ ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ  ಹಲವಾರು ಸಾಮಾನ್ಯ ವ್ಯಾಖ್ಯಾನ ಮತ್ತು ತೀರ್ಮಾನಗಳು ಕೂಡಾ ಸುಳ್ಳೆಂದು ಅಲ್ಲಿನ ಎಡರಂಗ ಮತ್ತೆಮತ್ತೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಯಾವ ರಾಜ್ಯಗಳ ನೆಲದಲ್ಲಿ ನಿಂತು ನೋಡಿದರೂ ಪಶ್ಚಿಮ ಬಂಗಾಳ ಭಾರತದಲ್ಲಿ ಇಲ್ಲವೇ ಇಲ್ಲವೇನೋ, ಅದು ಪ್ರತ್ಯೇಕವಾದ ದೇಶವೇನೋ ಎಂದು ಅನಿಸುವಷ್ಟು ಆ ರಾಜ್ಯದ ರಾಜಕೀಯ ಭಿನ್ನವಾಗಿದೆ.
ಕಳೆದ ಅರ್ವತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಆಡಳಿತ ವಿರೋಧಿ ಅಲೆಗಳಂತಹ ಮೂರು ಸಂಗತಿಗಳು ಪ್ರಮುಖವಾಗಿ ಚರ್ಚೆಗೊಳಪಟ್ಟಿವೆ. ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿದ್ದು ಕೂಡಾ ಈ ಸಂಗತಿಗಳು. ಆದರೆ ಎಡರಂಗ ಅಧಿಕಾರಕ್ಕೆ ಬಂದ ನಂತರ ಆ ರಾಜ್ಯದಲ್ಲಿ ಇಲ್ಲಿಯ ವರೆಗೆ ನಡೆದ ಆರು ವಿಧಾನಸಭಾ ಚುನಾವಣೆಗಳಲ್ಲಿ ಎಂದೂ ಈ ಮೂರು ಸಂಗತಿಗಳು ಮುಖ್ಯಚರ್ಚೆಯ ಭಾಗ ಆಗಿರಲೇ ಇಲ್ಲ. ಈ ಬಾರಿಯೂ ಆಡಳಿತ ವಿರೋಧಿ ಅಲೆಯ ಸಾಧ್ಯತೆಯ ಹೊರತಾಗಿ ಉಳಿದೆರಡು ಸಂಗತಿಗಳು ಚರ್ಚೆಯಲ್ಲಿ ಇಲ್ಲ. ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯ ವಿಷಯದಲ್ಲಿ ಯಾರೂ ಅನುಮಾನ ಪಡದಂತಹ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಮಮತಾ ಬ್ಯಾನರ್ಜಿಯವರು ಕೂಡಾ ಎಡರಂಗ ಸರ್ಕಾರ ಭ್ರಷ್ಟಗೊಂಡಿದೆ ಇಲ್ಲವೇ ಕೋಮುವಾದದ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡುತ್ತಿಲ್ಲ ಎನ್ನುವುದು ಗಮನಾರ್ಹ.
ಭ್ರಷ್ಟರಾಗದೆ ರಾಜಕೀಯ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯ ಉತ್ತರದಿಂದ ದಕ್ಷಿಣದ ವರೆಗೆ ಎಲ್ಲ ರಾಜ್ಯಗಳಲ್ಲೂ ಹಬ್ಬಿದೆ. ಇದೇ ಅಭಿಪ್ರಾಯ ಪೂರ್ವದಿಂದ ಪಶ್ಚಿಮದ ವರೆಗಿನ ರಾಜ್ಯಗಳಲ್ಲಿಯೂ ಇದೆ ಎಂದು ಹೇಳುವ ಹಾಗೆ ಇಲ್ಲ, ಯಾಕೆಂದರೆ ಪೂರ್ವದಲ್ಲಿ ಪಶ್ಚಿಮಬಂಗಾಳ ಇದೆ. ಆ ರಾಜ್ಯದ ಎಡರಂಗದ ರಾಜಕೀಯ ದೇಶದಲ್ಲಿನ ಈ ಸಾಮಾನ್ಯ ಅಭಿಪ್ರಾಯ ತಪ್ಪೆಂದು ಕಳೆದ ಮೂವತ್ತನಾಲ್ಕು ವರ್ಷಗಳಿಂದ ಸಾಬೀತುಮಾಡಿಕೊಂಡು ಬಂದಿದೆ. ಅಧಿಕಾರಕ್ಕೆ ಬರಬೇಕಾಗಿಲ್ಲ, ಶಾಸಕರಾದ ತಿಂಗಳ ಅವಧಿಯಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಲಾರಂಭಿಸುವ ಈಗಿನ ದಿನಮಾನದಲ್ಲಿ ಇಷ್ಟೊಂದು ಕಾಲ ಅಧಿಕಾರದಲ್ಲಿದ್ದೂ ತನ್ನ ಶಾಸಕರು, ಸಂಸದರ ಮೇಲೆ ಭ್ರಷ್ಟಾಚಾರದ ಕಳಂಕ ಅಂಟದಂತೆ ನೋಡಿಕೊಂಡಿರುವುದು ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸುಲಭದ ಕೆಲಸ ಅಲ್ಲ.
ಹಾಗಿದ್ದರೆ ಪಶ್ಚಿಮಬಂಗಾಳದಲ್ಲಿ ಭ್ರಷ್ಟಾಚಾರ ಇಲ್ಲವೇ? ವಿಚಿತ್ರವೆಂದರೆ ಸಾಮಾನ್ಯವಾಗಿ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಮೊದಲು ಭ್ರಷ್ಟರಾಗುವುದು ಆ ಪಕ್ಷದ ಜನಪ್ರತಿನಿಧಿಗಳು. ತಹಶೀಲ್ದಾರ್ ಕಚೇರಿಯಿಂದ ವಿಧಾನಸೌಧದ ವರೆಗೆ ಎಲ್ಲೆಲ್ಲೂ ಅವರೇ ಅಧಿಕಾರ ಚಲಾಯಿಸುವುದರಿಂದ ಹೋದಲ್ಲೆಲ್ಲ ಭ್ರಷ್ಟತೆಯ ಅವಕಾಶದ ಕಿಂಡಿಗಳನ್ನು ಅವರು ಕೊರೆಯುತ್ತಾ ಇರುತ್ತಾರೆ. ಇದೇ ಕಳ್ಳ ಕಿಂಡಿಯಲ್ಲಿ ಕೈಹಾಕಿ ಪಕ್ಷದಲ್ಲಿ ಅವರ ಹಿಂಬಾಲಕರಾಗಿರುವವರು ಸಿಕ್ಕಿದಷ್ಟನ್ನು ಬಾಚಿಕೊಳ್ಳುತ್ತಾರೆ. ಪಶ್ಚಿಮಬಂಗಾಳದ ರಾಜಕೀಯ ಇದಕ್ಕಿಂತ ಸಂಪೂರ್ಣ ಭಿನ್ನ. ಅಲ್ಲಿ ಭ್ರಷ್ಟಾಚಾರದ ಆರೋಪಗಳು ಇರುವುದು ಶಾಸಕರು ಇಲ್ಲವೇ ಸಂಸತ್ ಸದಸ್ಯರ  ಮೇಲಲ್ಲ, ಅದು ಪಕ್ಷದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳ ಮೇಲೆ. ನೇಮಕಾತಿ, ವರ್ಗಾವಣೆ,  ಫಲಾನುಭವಿಗಳ ಆಯ್ಕೆ ಮೊದಲಾದ ಎಲ್ಲ ವಿಷಯಗಳಲ್ಲಿ ನಿರ್ಧಾರ ಈ ಪದಾಧಿಕಾರಿಗಳದ್ದೇ ಆಗಿರುವುದರಿಂದ ಒಂದಷ್ಟು ಭ್ರಷ್ಟತೆಯ ಕೆಸರು ಅವರ ಕೈಗೆ ಅಂಟಿಕೊಳ್ಳುತ್ತದೆ. ಹೀಗಿದ್ದರೂ ಅಲ್ಲಿ ದೊಡ್ಡ ಹಗರಣಗಳು ಕೇಳಿ ಬಂದೇ ಇಲ್ಲ.
ಭ್ರಷ್ಟಾಚಾರವನ್ನು ಹೊರತುಪಡಿಸಿದರೆ ಕೋಮುವಾದ ದೇಶದ ರಾಜಕೀಯದಲ್ಲಿ ಬಹುಚರ್ಚಿತ ವಿಷಯ. ತೊಂಭತ್ತರ ದಶಕದ ನಂತರದ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಬದಲಾವಣೆಗಳಲ್ಲಿ ಕೋಮುವಾದ ನಿರ್ಣಾಯಕ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಸಿಕ್ಕಿದ ಮೊದಲ ದಿನಗಳನ್ನು ಹೊರತುಪಡಿಸಿದರೆ ಪಶ್ಚಿಮಬಂಗಾಳದಲ್ಲಿ ನಡೆದೇ ಇಲ್ಲವೆನ್ನುವಷ್ಟು ಕೋಮುಗಲಭೆಗಳ ಸಂಖ್ಯೆ ಕಡಿಮೆ. ಕಾಶ್ಮೆರ (67%) ಮತ್ತು ಅಸ್ಸಾಂ (31%)  ನಂತರ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ (25.3%). ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಮುಸ್ಲಿಮರು ಆ ರಾಜ್ಯದಲ್ಲಿದ್ದಾರೆ. ಶೇ 50ಕ್ಕಿಂತ ಹೆಚ್ಚು ಮುಸ್ಲಿಮರಿರುವ ಕನಿಷ್ಠ ಮೂರು ಜಿಲ್ಲೆಗಳು ಅಲ್ಲಿವೆ. ಹೀಗಿದ್ದರೂ ಬಾಬ್ರಿಮಸೀದಿ ಧ್ವಂಸದ ನಂತರದ ದಿನಗಳಲ್ಲಿಯೂ ಪಶ್ಚಿಮಬಂಗಾಳ ಶಾಂತವಾಗಿತ್ತು.
ಇವೆಲ್ಲದರ ಹೊರತಾಗಿಯೂ ದಶಕಗಳ ಕಾಲ ಎಡಪಕ್ಷಗಳ ಕಟ್ಟಾ ಬೆಂಬಲಿಗರಾಗಿದ್ದ ಮುಸ್ಲಿಮರು ಇತ್ತೀಚೆಗೆ ಯಾಕೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ? ಇದಕ್ಕೆ ತಕ್ಷಣದ ಉತ್ತರ ನಂದಿಗ್ರಾಮದ ವಿವಾದದಲ್ಲಿದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದ್ದ ನಂದಿಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದರಿಂದ ಎಡಪಕ್ಷಗಳ ಬಗ್ಗೆ ಅವರ ಆಕ್ರೋಶ ಸಹಜವಾದುದು. ಆದರೆ ಈ ರೀತಿ ಪಕ್ಷನಿಷ್ಠೆಯನ್ನು ಬದಲಾಯಿಸಿಕೊಂಡವರು ಕೂಡಾ ಎಡಪಕ್ಷಗಳನ್ನು ಕೋಮುವಾದಿಗಳೆಂದು ಹೇಳುತ್ತಿಲ್ಲ. ‘ಭದ್ರತೆ ನೀಡಿದ್ದು ನಿಜ, ಆದರೆ ಅವಕಾಶ ನೀಡಲಿಲ್ಲ’ ಎನ್ನುವುದೇ ಎಡಪಕ್ಷಗಳ ಬಗ್ಗೆ ಅಲ್ಲಿರುವ ಮುಸ್ಲಿಮರಲ್ಲಿರುವ ಸಾಮಾನ್ಯ ಅತೃಪ್ತಿ.
ಎಡಪಕ್ಷಗಳು ಮುಸ್ಲಿಮ್ ಬೆಂಬಲ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಕಾಲುಭಾಗದಷ್ಟಿದ್ದರೂ ಸರ್ಕಾರಿ ನೌಕರಿಯಲ್ಲಿ ಅವರ ಪಾಲು ಕೇವಲ ಶೇಕಡಾ ಎರಡು ಮಾತ್ರ. ಶೈಕ್ಷಣಿಕವಾಗಿಯೂ ಅಲ್ಲಿನ ಮುಸ್ಲಿಮರು  ಹಿಂದುಳಿದಿದ್ದಾರೆ. ಎಡಪಕ್ಷಗಳು ಈಗಲೂ ನೆಲೆ ಉಳಿಸಿಕೊಂಡಿರುವುದು ಮುಸ್ಲಿಮ್ ಬಾಹುಳ್ಯ ಇರುವ ಪಶ್ಚಿಮಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳಂತೆ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಹಿಂದೆ ಇದ್ದಾರೆ. ಸಿಪಿಎಂನ ನೀತಿ ನಿರೂಪಣೆಯ ಉನ್ನತಾಧಿಕಾರದ ಸಮಿತಿಯಾದ ಪಾಲಿಟ್‌ಬ್ಯೂರೋದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲ.
ಈ ರೀತಿ ಭ್ರಮನಿರಸನಕ್ಕೊಳಗಾದ ಮುಸ್ಲಿಮರಿಗೆ ಸರಿಯಾದ ಸಮಯಕ್ಕೆ ಮಮತಾ ಬ್ಯಾನರ್ಜಿ ಎಂಬ ನಾಯಕಿ ಕಾಣಿಸಿಕೊಂಡಿದ್ದಾರೆ. ಸುಮಾರು 27 ವರ್ಷಗಳ ರಾಜಕೀಯ ಜೀವನದಲ್ಲಿ ಮಮತಾ ಬ್ಯಾನರ್ಜಿ ಎಂದೂ ಕೋಮುವಾದಿ ಎಂಬ ಆರೋಪಕ್ಕೆ ಒಳಗಾಗಿಲ್ಲ.  ಕಾಂಗ್ರೆಸ್ ಬಿಟ್ಟ ನಂತರ ಒಂದಷ್ಟು ದಿನ ಬಿಜೆಪಿ ಜತೆ ಸೇರಿಕೊಂಡರೂ ರಾಜಕೀಯ ಲಾಭಕ್ಕಾಗಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ, ಮಿತ್ರಪಕ್ಷಕ್ಕೂ ಅದಕ್ಕೆ ಅವಕಾಶ ನೀಡಿರಲಿಲ್ಲ. ತಸ್ಲಿಮಾ ನಸ್ರೀನ್‌ಗೆ ಆಶ್ರಯ ನೀಡಿದ್ದ ಕಾರಣಕ್ಕೆ ಒಂದಷ್ಟು ದಿನ ಕೋಮುಗಲಭೆ ನಡೆದರೂ ಅದನ್ನು ರಾಜಕೀಯವಾಗಿ ದುರ್ಬಳಕೆ ಮಾಡಲು ಅವರು ಹೋಗಲಿಲ್ಲ. ಇವೆಲ್ಲದರ ಜತೆಗೆ ನಂದಿಗ್ರಾಮವನ್ನು ಉಳಿಸಿಕೊಟ್ಟದ್ದೇ ಮಮತಾ  ಎಂಬ ಕೃತಜ್ಞತೆ ಕೇವಲ ಆ ಊರಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದ ಮುಸ್ಲಿಮರಲ್ಲಿದೆ.
ಹನ್ನೊಂದು ವರ್ಷಗಳ ಹಿಂದೆ ಜ್ಯೋತಿಬಸು ಅವರು ಅಧಿಕಾರ ತ್ಯಾಗಮಾಡಿದ್ದ ಕಾಲದಲ್ಲಿಯೇ ಆಡಳಿತ ವಿರೋಧಿ ಅಲೆ ಸಣ್ಣಗೆ ಎದ್ದಿತ್ತು. ಎಡರಂಗಕ್ಕೆ ಭದ್ರಬುನಾದಿ ಹಾಕಿಕೊಟ್ಟ ಜ್ಯೋತಿಬಸು ಅವರ ಕ್ರಾಂತಿಕಾರಿ ಕಾರ್ಯಕ್ರಮವಾದ ಉಳುವವನಿಗೆ ಭೂಮಿಯ ಒಡೆತನ ನೀಡುವ ‘ಬರ್ಗಾ ಕಾರ್ಯಚರಣೆ’ಯ ನೆನಪು ಆಗಲೇ ಜನಮನದಲ್ಲಿ ನಿಧಾನವಾಗಿ ಮರೆಗೆ ಸರಿದು ಅಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಂಡಿದ್ದವು. ‘ಬರ್ಗಾ ಕಾರ್ಯಾಚರಣೆ’ಯ ನಂತರ ಗಣನೀಯವಾಗಿ ಹೆಚ್ಚಿದ್ದ ಕೃಷಿ ಇಳುವರಿ ಇತ್ತಿಚಿನ ವರ್ಷಗಳಲ್ಲಿ ಇಳಿಮುಖವಾಗತೊಡಗಿತ್ತು. ಇದರಿಂದಾಗಿ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗತೊಡಗಿದ್ದವು. ಕೈಗಾರಿಕೆಗಳೆಲ್ಲ ರೋಗಗ್ರಸ್ತವಾದ ನಂತರ ಅಲ್ಲಿ ಉದ್ಯೋಗಾವಕಾಶವೇ ಇಲ್ಲದಂತಾಗಿದೆ.
ಈ ವಾಸ್ತವ ಜ್ಯೋತಿಬಸು ಅವರಿಗೆ ಅರಿವಾಗಿಯೇ ಅಧಿಕಾರದ ಕೊನೆಯ ದಿನಗಳಲ್ಲಿ ಅವರು ಸುಧಾರಣೆಯ ಹಾದಿ ಹಿಡಿದದ್ದು. ಆದರೆ ಅದನ್ನೇ ಉತ್ತರಾಧಿಕಾರಿಯಾದ ಬುದ್ದದೇವ ಭಟ್ಟಾಚಾರ್ಯ ಅವರು ಬಿರುಸಿನಿಂದ ಪ್ರಾರಂಭಿಸಿದಾಗ ಜನ ತಿರುಗಿಬೀಳತೊಡಗಿದ್ದರು. ‘ರೈತರು  ಮಿತ್ರರು, ಉದ್ಯಮಿಗಳು ಶತ್ರು’ ಎಂದು ಪಾಠ ಹೇಳುತ್ತಾ ಬಂದ ಪಕ್ಷವೇ ಶತ್ರುಗಳ ಜತೆ ಸೇರಿಕೊಂಡಿದ್ದನ್ನು ಜನ ಸಹಿಸದಾದರು.  ಕಳೆದ 3 ದಶಕಗಳಲ್ಲಿ ಪಶ್ಚಿಮ ಬಂಗಾಳದ ಎಡಪಕ್ಷಗಳಿಗೆ ನಿಷ್ಠರಾಗಿದ್ದ ಮತದಾರರ ಒಂದು ತಲೆಮಾರು ಬದಲಾಗಿರುವುದೂ ಇದಕ್ಕೆ ಕಾರಣ.
 ಈ ಬದಲಾವಣೆ ಪಕ್ಷದ ಪದಾಧಿಕಾರಿಗಳ ಮಟ್ಟದಲ್ಲಿಯೂ ಆಗಿದೆ. ಈಗಿನ ಪದಾಧಿಕಾರಿಗಳಲ್ಲಿ ಹೆಚ್ಚಿನವರು ವಿರೋಧಪಕ್ಷವಾಗಿದ್ದ ದಿನಗಳಲ್ಲಿ ಜತೆಯಲ್ಲಿದ್ದವರಲ್ಲ. ಇವರೆಲ್ಲ ಪಕ್ಷ ಅಧಿಕಾರಕ್ಕೆ ಬಂದ ನಂತರ ಸೇರಿಕೊಂಡವರು. ಹೋರಾಟದ ಅನುಭವವೇ ಇಲ್ಲದ ಇವರಿಗೆ ಅಧಿಕಾರ ಇಲ್ಲದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸ. ಆದ್ದರಿಂದಲೆ ದಶಕಗಳ ಕಾಲ ಮರುಪ್ರಶ್ನಿಸದೆ ಬೆಂಬಲಿಸುತ್ತಾ ಬಂದ ಮತದಾರನ ನಿಷ್ಠೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಈ ಹೊಸತಲೆಮಾರು ಅಭದ್ರತೆಯಿಂದ ನರಳಾಡುತ್ತದೆ.
ಕೈ ಬಿಟ್ಟು ಹೋಗುತ್ತಿರುವ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳಲು ಈ ಹತಾಶ ನಾಯಕರು ಹಿಡಿದದ್ದು ಪ್ರಜಾಸತ್ತಾತ್ಮಕ ಹಾದಿಯನ್ನಲ್ಲ, ಸರ್ವಾಧಿಕಾರಿ ಬಳಸುವ ಹಿಂಸಾತ್ಮಕ ಹಾದಿ. ಇದರಿಂದಾಗಿ ಆಕ್ರೋಶಗೊಂಡ ಜನ ತಿರುಗಿಬಿದ್ದಿದ್ದಾರೆ. ಈ ತಪ್ಪು ಕಾರ್ಯತಂತ್ರವೇ ಮಮತಾ ಬ್ಯಾನರ್ಜಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿರುವುದು. ಆದರೆ ಸಂಘಟನೆಯ ಜಾಲ, ಕಾರ್ಯಕ್ರಮ, ಎರಡನೇ ಸಾಲಿನ ನಾಯಕತ್ವ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಪಕ್ಷದ ಏಕೈಕ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಪ್ರಯಾಸಪಟ್ಟು ಪಶ್ಚಿಮ ಬಂಗಾಳವನ್ನು ಗೆದ್ದುಕೊಂಡರೂ ಎಷ್ಟು ಕಾಲ ಉಳಿಸಿಕೊಳ್ಳಬಲ್ಲರು ಎನ್ನುವುದೇ ಈಗ ಉಳಿದಿರುವ ಕುತೂಹಲ.