Showing posts with label ಯಡಿಯೂರಪ್ಪ. Show all posts
Showing posts with label ಯಡಿಯೂರಪ್ಪ. Show all posts

Tuesday, April 30, 2013

`ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ'

ಗುಲ್ಬರ್ಗ: `ನಮ್ಮಿಂದಾಗಿಯೇ ಬಿಜೆಪಿ 35 ಸೀಟುಗಳನ್ನು ಕಳೆದುಕೊಳ್ಳಲಿದೆ, ಉಳಿದ ಕಡೆ ಅದು ಸೋಲುವುದು ಇದ್ದೇ ಇದೆ. ಕಾಂಗ್ರೆಸ್ 75 ದಾಟುವುದಿಲ್ಲ, ಜೆಡಿಎಸ್ 25 ತಲುಪಿ
ದರೆ ಹೆಚ್ಚು. ಉಳಿದಂತೆ ನಮ್ಮ ಪಕ್ಷ ಗೆಲ್ಲುವ ಸ್ಥಾನಗಳ ಸಂಖ್ಯೆಯನ್ನು ನೀವೇ ಊಹಿಸಿಕೊಳ್ಳಿ' ಎಂದು ಹೇಳುತ್ತಲೇ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೈಯಲ್ಲಿದ್ದ ಚೀಟಿಯನ್ನು ಅಂಗಿಯ ಕಿಸೆಗೆ ತುರುಕಿಸಿದರು. ಪ್ರಕಟಿಸಬಾರದೆಂಬ ಷರತ್ತಿನಲ್ಲಿ ನೋಡಲು ಕೊಟ್ಟ ಆ ಚೀಟಿಯಲ್ಲಿ ಕೆಜೆಪಿ ನೂರಕ್ಕೆ ನೂರರಷ್ಟು ಗೆಲ್ಲಲಿದೆ ಎಂದು ಅವರು ಬಲವಾಗಿ ನಂಬಿರುವ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರುಗಳಿದ್ದವು.
`ಫಲಿತಾಂಶ ಪ್ರಕಟವಾಗುವ ದಿನ ನಾನು ಹೇಳಿದ ಸತ್ಯ ನಿಮಗೆ ಗೊತ್ತಾಗುತ್ತದೆ. ಆಗ ನಿಮ್ಮ ಮತ್ತು ನನ್ನ ಪಟ್ಟಿ ತಾಳೆ ನೋಡುವಾ' ಎಂದು ಸವಾಲೆಸೆದ ಅವರ ಮುಖದಲ್ಲಿ ಎಂದಿನ ಆತ್ಮವಿಶ್ವಾಸ ಇತ್ತು.
ಗುಲ್ಬರ್ಗ ನಗರದಲ್ಲಿ ರಾತ್ರಿ ಚುನಾವಣಾ ಪ್ರಚಾರ ನಡೆಸಿ ತಡರಾತ್ರಿ ಹೊಟೇಲ್‌ನಲ್ಲಿ ಬಂದು ಉಳಿದುಕೊಂಡಿದ್ದ ಯಡಿಯೂರಪ್ಪ ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಎದ್ದು ಹೆಲಿಕಾಪ್ಟರ್ ಹತ್ತಲು ರೆಡಿಯಾಗಿ ಕೂತಿದ್ದರು. ಈ ಅವಸರದಲ್ಲಿಯೇ ಬಿಡುವು ಮಾಡಿಕೊಂಡು `ಪ್ರಜಾವಾಣಿ' ಜತೆ ಮಾತನಾಡಿದರು.
 ಪ್ರ: ನೀವು ಹೇಳಿದ ಲೆಕ್ಕವನ್ನು ನಂಬಿದರೆ ನಿಮ್ಮ ಪಕ್ಷ ಸ್ವಂತಬಲದಿಂದ ಅಧಿಕಾರಕ್ಕೆ ಬರುವುದು ಸಾಧ್ಯ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾರ ಜತೆ ಸೇರಿಕೊಳ್ಳುತ್ತೀರಿ? ಬಿಜೆಪಿ? ಕಾಂಗ್ರೆಸ್? ಜೆಡಿಎಸ್?
ಬಿಜೆಪಿ ಜತೆ ಹೋಗುವ ಪ್ರಶ್ನೆಯೇ ಇಲ್ಲ. ಆ ಪಕ್ಷದ ನಾಯಕರು ನಮ್ಮ ಮತದಾರರನ್ನು ಹಾದಿ ತಪ್ಪಿಸಲು ಈ ರೀತಿಯ ವದಂತಿಗಳನ್ನು ಹರಡು ತ್ತಿದ್ದಾರೆ. ಸುಷ್ಮಾ ಸ್ವರಾಜ್ ಅವರೇ ಮೊನ್ನೆ ಈ ರೀತಿ ಹೇಳಿದ್ದರು. ಆ ಪಕ್ಷದಲ್ಲಿ ಒಂದಷ್ಟು ನನ್ನ ಹಿತೈಷಿಗಳಿರು ವುದು ನಿಜ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಭಾನು ವಾರ ರಾಜ್ಯದಲ್ಲಿ ಮಾಡಿದ್ದ ಪ್ರಚಾರ ಭಾಷಣ ದಲ್ಲಿ ಕೂಡಾ ನನ್ನ ಹೆಸರನ್ನೆತ್ತಿ ಟೀಕಿಸಿಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಬಿಜೆಪಿಯ ಕೆಲವು ನಾಯಕರು ನನ್ನನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂಪರ್ಕಿಸುತ್ತಿರುವುದು ನಿಜ. ಆದರೆ ಬಿಜೆಪಿ ನನ್ನ ಬದುಕಿನಲ್ಲಿ ಮುಗಿದ ಅಧ್ಯಾಯ. ಇನ್ನು ವಿಶ್ವಾಸದ್ರೋಹ ಮಾಡಿದ ಜೆಡಿಎಸ್ ಜತೆ ಈ ಜನ್ಮದಲ್ಲಿ ಸೇರುವುದಿಲ್ಲ. ಅನುಭವದಿಂದ ಅಷ್ಟು ಪಾಠವನ್ನು ಕಲಿಯದಿದ್ದರೆ ಹೇಗೆ?
ಪ್ರ: ಕಾಂಗ್ರೆಸ್?
ಈ ಚುನಾವಣೆ ನಡೆಯುತ್ತಿರುವುದೇ ನಮ್ಮ ಪಕ್ಷ ಮತ್ತು ಕಾಂಗ್ರೆಸ್ ನಡುವೆ. ಹೊಂದಾಣಿಕೆ ಮಾಡಿಕೊಳ್ಳುವುದು ಎಲ್ಲಿ ಬಂತು? ಆದರೆ ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ. ನನ್ನ ಮೇಲಿನ ಆರೋಪಗಳು ಬಿಜೆಪಿಯ ಕೆಲವು ನಾಯಕರು ಸೇರಿ ನನ್ನ ವಿರುದ್ಧ ಹೂಡಿದ್ದ ಸಂಚು ಎಂದು ನಿಧಾನವಾಗಿ ಅವರಿಗೆ ಅರ್ಥವಾಗುತ್ತಿದೆ. ನನ್ನನ್ನು ಎದುರುಹಾಕಿಕೊಂಡರೆ ರಾಜ್ಯದ ಒಂದು ದೊಡ್ಡ ಸಮುದಾಯದ ಅಸಮಾಧಾನಕ್ಕೆ ಈಡಾಗಬಹುದೆಂಬ ಭೀತಿಯೂ ಅವರಲ್ಲಿದೆ. ಇದಕ್ಕಾಗಿಯೇ ಅವರು ನನ್ನ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.
ಪ್ರ: ಇಷ್ಟೊಂದು ಆತ್ಮವಿಶ್ವಾಸದಿಂದ ಗೆಲ್ಲುವ ಅಭ್ಯರ್ಥಿಗಳ ಸಂಖ್ಯೆಯನ್ನು ಹೇಳುತ್ತಿದ್ದೀರಿ, ಇದಕ್ಕೆ ಆಧಾರ ಏನು?
ಜನರ ಮೇಲಿನ ನಂಬಿಕೆಯೇ ಆಧಾರ. ನಾನು ಮಾಡಿದ ಕೆಲಸಗಳೆಲ್ಲ ಜನರಿಗೆ ಗೊತ್ತು, ತಪ್ಪು-ಒಪ್ಪುಗಳ ಹಿಂದಿನ ಸತ್ಯ ಏನು ಎನ್ನುವುದನ್ನೂ ನಿಧಾನವಾಗಿ ಅವರು ತಿಳಿದುಕೊಂಡಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಇರುವ ಬೆಂಬಲವನ್ನು ನೀವೇ ಕಣ್ಣಾರೆ ನೋಡಿದ್ದೀರಿ. ಇದೇ ರೀತಿ ಮುಂಬೈ ಕರ್ನಾಟಕದಲ್ಲಿಯೂ ಇದೆ. ಹಳೆಮೈಸೂರಿನಲ್ಲಿ ಜೆಡಿಎಸ್‌ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಲಿದ್ದೇವೆ.
ಪ್ರ: ನಿಮ್ಮ ಶಕ್ತಿ ಎಂದು ಹೇಳಿಕೊಳ್ಳುತ್ತಿರುವ ನಿಮ್ಮ ನಂಬಿಕೆಯೇ ನಿಮ್ಮ ದೌರ್ಬಲ್ಯ ಎಂದು ಈಗಲೂ ಅನಿಸುವುದಿಲ್ಲವೇ? ಸ್ವಂತ ಪಕ್ಷ ರಚಿಸಿದಾಗ ನಿಮ್ಮನ್ನು ಬೆಂಬಲಿಸಬಹುದೆಂದು ನೀವು ನಂಬಿದವರಲ್ಲಿ ಹೆಚ್ಚಿನವರು ಯಾರೂ ನಿಮ್ಮ ಜತೆಯಲ್ಲಿಲ್ಲ. ಇದು ನಿಮ್ಮ ನಂಬಿಕೆಯ ದೋಷ ಅಲ್ಲವೇ?
ಕೆಲವು ನಾಯಕರು ನಾನಿಟ್ಟ ನಂಬಿಕೆಗೆ ದ್ರೋಹ ಬಗೆದದ್ದು ನಿಜ, ಆದರೆ  ಜನ ಹಾಗೆ ಮಾಡಲಾರರು.
ಪ್ರ: ಯಾವ ರೀತಿಯ ದ್ರೋಹ?
ಅವರ ಹೆಸರು ಹೇಳಲು ನನಗಿಷ್ಟ ಇಲ್ಲ, ಅದು ನಿಮಗೂ ಗೊತ್ತಿದೆ. ನನ್ನ ಜತೆಯಲ್ಲಿಯೇ ಇದ್ದವರಂತೆ ನಟಿಸುತ್ತಿದ್ದ ಅವರು ಬಿಜೆಪಿಯಲ್ಲಿದ್ದ ನನ್ನ ವಿರೋಧಿಗಳ ಜತೆ ಷಾಮೀಲಾಗಿದ್ದರು ಎನ್ನುವುದು ನನಗೆ ತಿಳಿಯಲೇ ಇಲ್ಲ. ಅವರೆಲ್ಲ ಕೊನೆ ಗಳಿಗೆಯಲ್ಲಿ ತೀರ್ಮಾನ ಕೈಗೊಂಡು ಬಿಜೆಪಿಯಲ್ಲಿಯೇ ಉಳಿದವರಲ್ಲ. ಈ ಸಂಚನ್ನು ಸಾಕಷ್ಟು ಪೂರ್ವದಲ್ಲಿಯೇ ಪರಸ್ಪರ ಕೂಡಿ ಮಾಡಿದ್ದರು. ಪಕ್ಷಕ್ಕೆ ರಾಜೀನಾಮೆ ಕೊಡುವುದನ್ನು ವಿಳಂಬ ಮಾಡಿಸಿದ್ದು ಕೂಡಾ ಇದೇ ಸಂಚಿನ ಭಾಗ. ಇದೆಲ್ಲ ನನಗೆ ಗೊತ್ತಾಗಲಿಲ್ಲ. ಅವರಿಗಿರುವ ವಕ್ರಬುದ್ಧಿ ನನಗಿಲ್ಲ, ನನ್ನದೇನಿದ್ದರೂ ನೇರಾನೇರ ರಾಜಕೀಯ.
ಪ್ರ: ಯಾವಾಗ ಪಕ್ಷ ಬಿಡುವ ಯೋಜನೆ ಇತ್ತು ನಿಮಗೆ?
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣವೇ ಆ ಪಕ್ಷ ಬಿಟ್ಟು ಹೊರಗೆ ಬರಬೇಕಾಗಿತ್ತು. ಆಗ ಹೊಸ ಪಕ್ಷ ಕಟ್ಟಲು ಸಮಯ ಸಿಗುತ್ತಿತ್ತು. ಆ ರೀತಿ ಮಾಡಿದರೆ ನಾನು ಬಲಿಷ್ಠನಾಗುತ್ತೇನೆ ಎಂದು ತಿಳಿದ ಬಿಜೆಪಿ ನಾಯಕರು ನಾನು ನಂಬಿದವರನ್ನೇ ಜತೆಯಲ್ಲಿಟ್ಟುಕೊಂಡು ಹಾದಿ ತಪ್ಪಿಸಿದರು. ದೆಹಲಿಯ ನಾಯಕರು ಸಂಧಾನ ನಡೆಸಿದರು, ಮುಂಬೈಯಲ್ಲಿ ನಡೆದ ಪಕ್ಷದ ಅಧಿವೇಶನಕ್ಕೆ ಕರೆಸಿಕೊಂಡರು. ಇವೆಲ್ಲವೂ ನಾನು ಹೊರಗೆ ಹೋಗುವುದನ್ನು ವಿಳಂಬ ಮಾಡಲು ಬಿಜೆಪಿ ಮಾಡಿದ ಸಂಚು ಎಂದು ನನಗೆ ತಿಳಿಯಲಿಲ್ಲ. ಆಗ ನನ್ನ ಜತೆಯಲ್ಲಿದ್ದವರಿಗೆ ಇದು ಗೊತ್ತಿದ್ದರೂ ಅದನ್ನು ನನಗೆ ತಿಳಿಸಲಿಲ್ಲ. ಅವರನ್ನು ನಂಬಿ ಮೋಸಹೋದೆ. ಅವರಿಗೆ ಒಳ್ಳೆಯದಾಗಲಿ.
ಪ್ರ: ನೀವು  ಅಧಿಕಾರದಲ್ಲಿದ್ದಾಗ ವೀರಶೈವ ಮಠಗಳಿಗೆ ಧಾರಾಳವಾಗಿ ದುಡ್ಡು ಕೊಟ್ಟವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಎದುರಾದಾಗ ಕೆಲವು ಸ್ವಾಮಿಗಳು ಬೀದಿಗೆ ಇಳಿದು ಪ್ರತಿಭಟನೆಯನ್ನೂ ನಡೆಸಿದ್ದರು. ಅವರಲ್ಲಿ ಯಾರೊಬ್ಬರೂ ಈಗ ನಿಮ್ಮನ್ನು ಬಹಿರಂಗವಾಗಿ ಬೆಂಬಲಿಸುತ್ತಿಲ್ಲವಲ್ಲಾ? ಅಲ್ಲಿಯೂ ನೀವಿಟ್ಟ ನಂಬಿಕೆ ಹುಸಿಯಾಗಿ ಹೋಯಿತೇ?
ಬಹಿರಂಗವಾಗಿ ಹೇಳಿಕೆ ನೀಡದಿದ್ದ ಮಾತ್ರಕ್ಕೆ ಅವರು ನನ್ನನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಲಾಗದು. ಕೆಲವು ಸ್ವಾಮೀಜಿಗಳ ಬಂಟರು ಬದಲಾಗಿರಬಹುದು ಅಷ್ಟೆ. ಸ್ವಾಮೀಜಿಗಳು ಮತ್ತು ಅವರ ಅನುಯಾಯಿಗಳು ನಮ್ಮ ಪಕ್ಷದ ಪರವಾಗಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ.
ಪ್ರ: ಈ ಚುನಾವಣೆಯ ನಂತರ ನಿಮ್ಮ ಪಕ್ಷದ ಭವಿಷ್ಯದ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?
ಅಂತಿಮವಾಗಿ ನಾವು ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ಜತೆ ಸೇರಿಕೊಳ್ಳುವವರು. ಈ ಬಗ್ಗೆ ಕೆಲವು ಪಕ್ಷಗಳ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅದರ ವಿವರವನ್ನು ಈಗ ಬಹಿರಂಗಪಡಿಸುವುದು ಸರಿಯಾಗುವುದಿಲ್ಲ. ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗಿ ಅವರ ಜತೆ ಮಾತುಕತೆ ನಡೆಸುತ್ತೇನೆ. ನಮ್ಮದು ಒಂದು ಚುನಾವಣೆಯ ಪಕ್ಷ ಅಲ್ಲ, ಇದು ಯಡಿಯೂರಪ್ಪನಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡ ಪಕ್ಷ ಅಲ್ಲ. ಅದೊಂದು ನೆಪ ಅಷ್ಟೆ. ರಾಜ್ಯಕ್ಕೆ ಆಗಿರುವ ಮತ್ತು ಆಗಲಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

Monday, November 12, 2012

ಬಂಗಾರಪ್ಪನವರ ಹಾದಿಯಲ್ಲಿ ಯಡಿಯೂರಪ್ಪ Nov 12 2012


ಸಾರೆಕೊಪ್ಪ ಬಂಗಾರಪ್ಪ ಮತ್ತು ಬೂಕನಕೆರೆ ಯಡಿಯೂರಪ್ಪನವರ ನಡುವೆ ಶಿವಮೊಗ್ಗ ಎನ್ನುವ ರಾಜಕೀಯ ಕರ್ಮಭೂಮಿಯ ಸಾಮ್ಯತೆ ಒಂದೇ ಅಲ್ಲ, ಇನ್ನೂ ಹಲವು ಇವೆ.
ರಾಜಕೀಯ ಮಹತ್ವಾಕಾಂಕ್ಷೆ, ನೇರಮಾತು, ಮುಂಗೋಪ, ಅತ್ಯುಗ್ರ ಸ್ವಾಭಿಮಾನ, ಬಂಡುಕೋರ ಮನಸ್ಸು, ನಂಬಿದವರನ್ನು ಕಷ್ಟಕಾಲದಲ್ಲಿಯೂ ಕೈಬಿಡದ ಸ್ನೇಹನಿಷ್ಠೆ  ಮತ್ತು ಭ್ರಷ್ಟಾಚಾರ ಎಂಬುದು ರಾಜಕೀಯ ಕ್ಷೇತ್ರದ ಅನಿವಾರ್ಯ ಕರ್ಮ ಎಂದು ಭಾವಿಸುವ ಅಸೂಕ್ಷ್ಮತೆಯಂತಹ ಗುಣಗಳು ಶಿವಮೊಗ್ಗ ಜಿಲ್ಲೆಯ ಇವರಿಬ್ಬರ ವ್ಯಕ್ತಿತ್ವದಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಗಳಿಸಿರುವ ಗರಿಷ್ಠ ಯಶಸ್ಸಿನ ದಾಖಲೆ (ಶೇಕಡಾ ಏಳೂವರೆಯಷ್ಟು ಮತ ಮತ್ತು ಹತ್ತು ಶಾಸಕರು) ಎಸ್.ಬಂಗಾರಪ್ಪನವರ ಹೆಸರಲ್ಲಿದೆ. ಯಡಿಯೂರಪ್ಪನವರು ಈ ದಾಖಲೆಯನ್ನು ಮುರಿಯಬಹುದೇ?
ಯಡಿಯೂರಪ್ಪನವರಿಗೆ ಇನ್ನೂ ಬಿಜೆಪಿಯನ್ನು ಬಿಟ್ಟುಹೋಗುವ ಮನಸ್ಸಿಲ್ಲ, ಪಕ್ಷಕ್ಕೂ ಪ್ರೀತಿಗಿಂತ ಹೆಚ್ಚಾಗಿ ಭಯದಿಂದ ಅವರನ್ನು ಉಳಿಸಿಕೊಳ್ಳಬೇಕೆಂಬ ಆಸೆ ಇದೆ. ಎರಡೂ ಪಾಳಯಗಳಲ್ಲಿ ಈ ತಳಮಳ ಮುಂದುವರಿದಿದೆ.

ಪಕ್ಷ ಸ್ಥಾಪಿಸಿ ಪದಾಧಿಕಾರಿಗಳ ನೇಮಕ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯಿತೆಂದು ಹೇಳಲಾಗುವುದಿಲ್ಲ. ಯಡಿಯೂರಪ್ಪನವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವರೆಗೆ ಯಾವುದೂ ಅಂತಿಮ ಅಲ್ಲ, ಅದರ ನಂತರವೂ ಅಲ್ಲ. ಭಯಗ್ರಸ್ತ ಬಿಜೆಪಿ ಯಡಿಯೂರಪ್ಪನವರ ಷರತ್ತುಗಳನ್ನು ಒಪ್ಪಿಬಿಟ್ಟರೆ ಅವರು ಹೊಸ ಪಕ್ಷವನ್ನೇ ಬಿಜೆಪಿಯಲ್ಲಿ ವಿಲೀನಗೊಳಿಸಲೂಬಹುದು.

ಈಗಾಗಲೇ ಅವರು ರಾಜ್ಯ ಸರ್ಕಾರವನ್ನು `ಮೈತ್ರಿ ಸರ್ಕಾರ~ ಎಂದಿದ್ದಾರೆ. ಆದುದರಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವರೆಗೆ ಯಡಿಯೂರಪ್ಪನವರ ಬಂಡಾಯದ ಬಗ್ಗೆ ಕೊನೆಯ ಮಾತನ್ನು ಬರೆಯಲಾಗದು.
ಉಭಯ ಬಣಗಳ ಪ್ರಯತ್ನಗಳೆಲ್ಲವೂ ವಿಫಲಗೊಂಡು ಕೊನೆಗೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮೂಲಕ ಚುನಾವಣೆಯನ್ನು ಎದುರಿಸಿದರೆ ಏನಾಗಬಹುದು? ಮೊದಲನೆಯದಾಗಿ ಬಿಜೆಪಿ ಜತೆ ಸಂಬಂಧ ಕಡಿದುಕೊಂಡಾಕ್ಷಣ ಈ ವರೆಗೆ `ಕಮ್ಯುನಲ್~ ಆಗಿದ್ದ ಯಡಿಯೂರಪ್ಪನವರು  `ಸೆಕ್ಯುಲರ್~ ಆಗಿಬಿಡುತ್ತಾರೆ. 
ತಮಾಷೆಯಂತೆ ಕಂಡರೂ ಇದು ದೇಶದ ರಾಜಕೀಯ ವಾಸ್ತವ. ಗುಜರಾತ್‌ನ ಶಂಕರ್‌ಸಿಂಗ್ ವಘೇಲಾ ಅವರಿಂದ ಹಿಡಿದು ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ವರೆಗೆ ರಾಷ್ಟ್ರರಾಜಕಾರಣದಲ್ಲಿ ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ,  ಇದರ ಲಾಭ ಖಂಡಿತ ಅವರಿಗೆ ಸಿಗಲಿದೆ.
`ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಯಡಿಯೂರಪ್ಪನವರ ಕೈಬಲಪಡಿಸಬೇಕಾಗುತ್ತದೆ~ ಎಂದು ಈಗಾಗಲೇ ನಮ್ಮ ಅನೇಕ ಜಾತ್ಯತೀತ ಚಿಂತಕರು ಖಾಸಗಿಯಾಗಿ ಹೇಳುತ್ತಿರುವ ಮಾತುಗಳು ಬಹಿರಂಗವಾಗಿ ಕೇಳಿಬರಬಹುದು. ಕಳೆದ 40 ವರ್ಷಗಳಿಂದ ಸಂಘ ಪರಿವಾರದ ಜತೆ ಸಂಬಂಧ ಹೊಂದಿದ್ದರೂ ಯಡಿಯೂರಪ್ಪನವರಿಗೆ ಕೋಮುವಾದಿ ಎಂಬ ಕಳಂಕ ಇಲ್ಲ. 
ಬಿಜೆಪಿಯನ್ನು `ರಾಮನಾಮ~ದ ಮೂಲಕ ಕಟ್ಟಲು ರಾಷ್ಟ್ರನಾಯಕರು ಪ್ರಯತ್ನಿಸುತ್ತಿದ್ದಾಗ ರಾಜ್ಯದಲ್ಲಿ ರೈತಪರ ಹೋರಾಟದ ಮೂಲಕ ಪಕ್ಷವನ್ನು ಬೆಳೆಸಿದವರು ಯಡಿಯೂರಪ್ಪ. ಆದುದರಿಂದ  ಈ `ರೂಪಾಂತರ~ ಅವರಿಗೆ ಕಷ್ಟ ಅಲ್ಲ.
ಎರಡನೆಯದಾಗಿ ಜಾತಿ ಬಲ. ಮುಖ್ಯಮಂತ್ರಿಯಾಗುವ ವರೆಗಿನ ತನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಕಟ್ಟಾಜಾತಿವಾದಿಯಂತೆ ನಡೆದುಕೊಂಡಿರಲಿಲ್ಲ. ಅಂತಹ ಆರೋಪ ಅವರ ರಾಜಕೀಯ ವಿರೋಧಿಗಳು ಕೂಡಾ ಮಾಡಿದ್ದು ಕಡಿಮೆ.
ಆದರೆ ಮುಖ್ಯಮಂತ್ರಿಯಾದ ನಂತರ ಬಹಿರಂಗವಾಗಿ ಲಿಂಗಾಯತ ಮಠಗಳ ಜತೆ ಗುರುತಿಸಿಕೊಂಡ ರೀತಿ, ಬಜೆಟ್‌ನಲ್ಲಿ ನೀಡಿದ `ಉಡುಗೊರೆ~ಗಳು ಮತ್ತು  ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾಗಲೂ ಲಿಂಗಾಯತ ಸ್ವಾಮಿಗಳು ಅವರನ್ನು ಸಮರ್ಥಿಸಿಕೊಂಡ ವರ್ತನೆ ಎಲ್ಲವೂ ಸೇರಿ ಯಡಿಯೂರಪ್ಪನವರಿಗೆ ಜಾತಿವಾದಿ ಎಂಬ ಹಣೆಪಟ್ಟಿ ತಂದುಕೊಟ್ಟಿತು.
ಜಾತಿಯನ್ನು ಅವರು ಖಂಡಿತ ರಾಜಕೀಯವಾಗಿ ಬಳಸಿಕೊಂಡಿದ್ದಾರೆ, ಜಾತಿ ಬೆಂಕಿ ಇದ್ದಹಾಗೆ, ಆರಿಸಲು ಹೋದಾಗಲೂ ಕೈಗೆ ತಗಲಿಬಿಡುತ್ತದೆ. ಅಂತಹದ್ದರಲ್ಲಿ ಅದೇ `ಜಾತಿ ಬೆಂಕಿ~ಯ ಜತೆ ಆಟವಾಡಲು ಹೋದ ಯಡಿಯೂರಪ್ಪನವರು ಜಾತಿವಾದಿ ಎಂಬ ಆರೋಪ ಹೊತ್ತಿರುವುದು ಸಹಜವೇ ಆಗಿದೆ.
ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಧನಂಜಯಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಹಿಂದುಳಿದ ಜಾತಿಗೆ ಸೇರಿರುವ ಎಂ.ಡಿ.ಲಕ್ಷ್ಮಿನಾರಾಯಣ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಹೊಸ ಪಕ್ಷಕ್ಕೆ ಜಾತ್ಯತೀತ ಸ್ವರೂಪವನ್ನು ನೀಡಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ.
ಇದರಿಂದ ಲಿಂಗಾಯತರ ಬೆಂಬಲ ಕಡಿಮೆಯಾಗಲಾರದು ಎಂದು ಅವರಿಗೆ ಗೊತ್ತು. ನಿಜವಾದ ಜಾತಿನಾಯಕನಲ್ಲಿ ಸ್ವಜಾತಿ ಮತದಾರರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿ ಇರುತ್ತದೆ. ಸದ್ಯ ದೇಶದ ರಾಜಕಾರಣದಲ್ಲಿ ಅಂತಹ ಶಕ್ತಿ ಹೊಂದಿರುವವರು ಬಿಎಸ್‌ಪಿ ನಾಯಕಿ ಮಾಯಾವತಿ ಮಾತ್ರ. 
ಬ್ರಾಹ್ಮಣ ಅಭ್ಯರ್ಥಿಗೂ ದಲಿತರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿಯೇ ಮಾಯಾವತಿಯವರ ಈ ಯಶಸ್ಸಿಗೆ ಕಾರಣ. ಯಡಿಯೂರಪ್ಪನವರ ಬಗ್ಗೆ ಲಿಂಗಾಯತರಲ್ಲಿರುವ ಕುರುಡು ಅಭಿಮಾನ ನೋಡಿದರೆ ಅವರೂ ಇಂತಹ ಶಕ್ತಿ ಹೊಂದಿರುವಂತೆ ಕಾಣುತ್ತಿದೆ.
ಮೂರನೆಯ ಅನುಕೂಲತೆ ಪ್ರಾದೇಶಿಕ ಆಶೋತ್ತರಗಳಿಗೆ ಸ್ಪಂದಿಸುವ ಸ್ವಾತಂತ್ರ್ಯ. ಹಲವು ರಾಜ್ಯಗಳಲ್ಲಿ ಪಕ್ಷದ ಸಂಘಟನೆಗಳನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯ-ರಾಜ್ಯಗಳ ನಡುವಿನ ನೆಲ-ಜಲ-ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿಟ್ಟನಿಲುವನ್ನು ಕೈಗೊಳ್ಳುವುದು ಸಾಧ್ಯ ಇಲ್ಲ.

ಮೈತ್ರಿರಾಜಕಾರಣದ ಯುಗದಲ್ಲಿ ಇದು ಇನ್ನೂ ಕಷ್ಟ. ಆದರೆ ಪ್ರಾದೇಶಿಕ ಪಕ್ಷಕ್ಕೆ ಈ ಸಮಸ್ಯೆ ಇಲ್ಲ, ಅದು ಸ್ವತಂತ್ರ ನಿಲುವನ್ನು ಕೈಗೊಳ್ಳಬಹುದು. ಇತ್ತೀಚಿನ ಕಾವೇರಿ ವಿವಾದದಲ್ಲಿ ಎಚ್.ಡಿ.ದೇವೇಗೌಡರು ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಉಪಾಯದಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಇದಕ್ಕೆ ಉದಾಹರಣೆ.
ಪ್ರಾದೇಶಿಕ ಪಕ್ಷಗಳ ರಾಜಕಾರಣ ಇರುವ ಕರ್ನಾಟಕದ ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗೆ ಹೋಲಿಸಿದರೆ ಕರ್ನಾಟಕದ ಚೌಕಾಸಿ ರಾಜಕಾರಣ ದುರ್ಬಲ ಎಂದು ಅನಿಸಿಕೊಳ್ಳಲು  ರಾಷ್ಟ್ರೀಯ ಪಕ್ಷಗಳ ಬಗ್ಗೆ ಕರ್ನಾಟಕದ ಜನರ ಒಲವೇ ಕಾರಣ ಎನ್ನುವ ಅಭಿಪ್ರಾಯ ಇದೆ. ಇಂತಹ ಹೊತ್ತಿನಲ್ಲಿಯೇ ಯಡಿಯೂರಪ್ಪನವರ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆಯಾಗಿದೆ.
ನಾಲ್ಕನೆಯದಾಗಿ, ಬಿಜೆಪಿಯಿಂದ ನಿರ್ಗಮಿಸುವ ಮೂಲಕ ಆಡಳಿತಾರೂಡ ಪಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಅದು ಎದುರಿಸಲಿರುವ ಆಡಳಿತವಿರೋಧಿ ಅಲೆಯಿಂದಲೂ ಯಡಿಯೂರಪ್ಪನವರು ಸ್ಪಲ್ಪಮಟ್ಟಿಗೆ ಮುಕ್ತರಾಗಲಿದ್ದಾರೆ.  `ನಾನು ಮಂಡಿಸಿದ ಬಜೆಟ್‌ನ ಆಶಯಗಳು ಈಡೇರಿಲ್ಲ, ನನ್ನ ಕಾರ್ಯಕ್ರಮಗಳನ್ನು ನಂತರ ಬಂದವರು ಹಾಳು ಮಾಡಿದ್ದಾರೆ~ ಎಂಬ ಆರೋಪಗಳನ್ನು ಅವರು ಈಗಾಗಲೇ ಮಾಡುತ್ತಿದ್ದಾರೆ. ಜನ ಇದನ್ನು ನೂರಕ್ಕೆ ನೂರರಷ್ಟು ನಂಬಲಾರರು. ಆದರೆ ಇಂತಹ ಆರೋಪಗಳನ್ನು ಮಾಡುವ ಸ್ವಾತಂತ್ರ್ಯ ಅವರಿಗೆ ಹೊಸ ಪಕ್ಷದಿಂದ ಸಿಗಲಿದೆ.
ಕೊನೆಯದಾಗಿ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತುಕೂಡಾ ಪ್ರಾದೇಶಿಕ ಪಕ್ಷದಲ್ಲಿ ನಿಶ್ಚಿಂತೆಯಿಂದ ನಾಯಕರಾಗಿ ಮುಂದುವರಿಯಲು ಯಡಿಯೂರಪ್ಪನವರಿಗೆ ಸಾಧ್ಯ. ಇದು ರಾಷ್ಟ್ರೀಯ ಪಕ್ಷಗಳಲ್ಲಿ ಕಷ್ಟ. ಈ ಕಾರಣದಿಂದಾಗಿಯೇ ಅಲ್ಲವೇ, ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವಂತಾಗಿದ್ದು?
ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮೊದಲಾದವರು ಅಧಿಕಾರ ಕಳೆದುಕೊಂಡದ್ದು ಕೂಡಾ ಇದೇ ಕಾರಣದಿಂದಾಗಿ. ಯಡಿಯೂರಪ್ಪನವರ ಮೇಲಿನ ಆರೋಪಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಅದು ಯಾವ ದಾರಿ ಹಿಡಿಯಲಿದೆಯೋ ಗೊತ್ತಿಲ್ಲ. ಇದರ ಹೊರತಾಗಿಯೂ ಒಂದೊಮ್ಮೆ ಅವರು ಚುನಾವಣೆಯ ನಂತರ ಅಧಿಕಾರಕ್ಕೆ ಬರುವಂತಹ ಸಂದರ್ಭ ಕೂಡಿಬಂದರೆ ಅವರ ಮೇಲಿನ ಭ್ರಷ್ಟಾಚಾರದ ಕಳಂಕ ಅದಕ್ಕೆ ಅಡ್ಡಿಯಾಗುವುದಿಲ್ಲ.
ಲಾಲುಪ್ರಸಾದ್ ತನ್ನ ಪತ್ನಿಯನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಜೈಲಿಗೆ ಹೋಗಿ ಬರಲಿಲ್ಲವೇ? ಮಾಯಾವತಿ, ಜಯಲಲಿತಾ ಮೊದಲಾದವರು ಆರೋಪಗಳ ವಿಚಾರಣೆ ನಡೆಯುತ್ತಿರುವಾಗಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿಲ್ಲವೇ?
ಇಷ್ಟೆಲ್ಲ ಅನುಕೂಲತೆಗಳಿದ್ದರೂ ಅಂತಿಮವಾಗಿ ಯಡಿಯೂರಪ್ಪನವರು ಬಯಸಿದ್ದು ಸಿಗಬಹುದೇ? ಇದು ಕಷ್ಟ.
ಮೊದಲನೆಯದಾಗಿ ಹೊಸ ಪಕ್ಷಕ್ಕೆ ಎಷ್ಟೇ ಅನುಕೂಲತೆಗಳಿದ್ದರೂ ಕೂಡಾ ಅದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತವನ್ನಾಗಲಿ, ಇಲ್ಲವೆ ಅತ್ಯಧಿಕ ಸ್ಥಾನಗಳನ್ನು ಗಳಿಸುವುದಾಗಲಿ ಸಾಧ್ಯವೇ ಇಲ್ಲ. ರಾಜಕೀಯವನ್ನೇ ಉಸಿರಾಡುತ್ತಾ ಬಂದ ಯಡಿಯೂರಪ್ಪನವರಿಗೂ ಇದು ತಿಳಿದಿರಬಹುದು.
ಈ ರೀತಿಯ ಬಂಡುಕೋರ ಪಕ್ಷಗಳು ಮಾತೃಪಕ್ಷವನ್ನು ಸುಲಭದಲ್ಲಿ ಸೋಲಿಸಬಹುದು, ಆದರೆ ತಾನು ಗೆಲ್ಲಲಾಗುವುದಿಲ್ಲ. ಮತ್ತೆ ಬಂಗಾರಪ್ಪನವರ ರಾಜಕಾರಣವನ್ನೇ ಉಲ್ಲೇಖಿಸುವುದಾದರೆ ಅವರ `ಕರ್ನಾಟಕ ಕಾಂಗ್ರೆಸ್ ಪಕ್ಷ~ದಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅವರು ಅಧಿಕಾರಕ್ಕೆ ಬರಲಾಗಲಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕಾಗಿಯೇ ಇಷ್ಟೆಲ್ಲ ಬಡಿದಾಡಿ ಕೊನೆಗೆ ಅದೇ ಸಿಗದೆ ಹೋದರೆ ಹೊಸ ಪಕ್ಷ ರಚಿಸಿ ಏನು ಫಲ ಎಂಬ ಪ್ರಶ್ನೆ ಇಂದಲ್ಲ ನಾಳೆ ಯಡಿಯೂರಪ್ಪನವರಲ್ಲಿ ಹುಟ್ಟಿಕೊಳ್ಳಬಹುದು. ಬಿಜೆಪಿಯಲ್ಲಿಯೇ ಉಳಿದುಬಿಟ್ಟರೆ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಹೆಚ್ಚಿದೆ, ಅದು ಹೊಸ ಪಕ್ಷದಲ್ಲಿ ಖಂಡಿತ ಅವರಿಗೆ ಇಲ್ಲ.
ಎರಡನೆಯದಾಗಿ ಯಡಿಯೂರಪ್ಪನವರು ಬಿಜೆಪಿಯಲ್ಲಿರುವ ವರೆಗೆ ನಿಷ್ಠೆ ತೋರಿಸುತ್ತಿರುವ ಬೆಂಬಲಿಗರಲ್ಲಿ ಹೆಚ್ಚಿನವರು ಹೊಸ ಪಕ್ಷ ಸೇರುವುದು ಕಷ್ಟ. ಇದರ ಸುಳಿವನ್ನರಿತಿರುವ ಯಡಿಯೂರಪ್ಪನವರು `ತಳಮಟ್ಟದಿಂದಲೇ ಪಕ್ಷವನ್ನು ಕಟ್ಟುತ್ತೇನೆ, ನಾಯಕರನ್ನು ತಯಾರು ಮಾಡುತ್ತೇನೆ~ ಎಂದು ಹೇಳುತ್ತಿದ್ದರೂ ಅದು ಸುಲಭದ ಮಾತಲ್ಲ.
ಅಷ್ಟೊಂದು ಕಾಲಾವಕಾಶವೂ ಅವರಿಗಿಲ್ಲ. ಒಂದಷ್ಟು ನಾಯಕರು ಯಡಿಯೂರಪ್ಪನವರ ಜತೆಯಲ್ಲಿ ಉಳಿದು ಚುನಾವಣೆಯಲ್ಲಿ ಗೆದ್ದರೂ, ಅವರೆಲ್ಲ ಪಕ್ಷದಲ್ಲಿಯೇ ಉಳಿಯುತ್ತಾರೆ ಎಂದು ಹೇಳಲು ಸಾಧ್ಯ ಇಲ್ಲ. ಬಂಗಾರಪ್ಪನವರ ಪಕ್ಷದಿಂದ ಹತ್ತುಮಂದಿ ಆಯ್ಕೆಯಾದರೂ ಕೊನೆಗೆ ಅವರೂ ಸೇರಿದಂತೆ ಉಳಿದವರು ಇಬ್ಬರು ಮಾತ್ರ. 
ಸದಸ್ಯಬಲ ಸಂಖ್ಯೆ ಕಡಿಮೆ ಇದ್ದಾಗ ಪಕ್ಷವನ್ನು ಒಡೆಯುವುದು ಸುಲಭ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಬಹುಮತ ಬರುವ ಸಾಧ್ಯತೆ ಈ ಕ್ಷಣದಲ್ಲಿ ಕಾಣುವುದಿಲ್ಲವಾದ ಕಾರಣ ಚುನಾವಣೋತ್ತರ ಧ್ರುವೀಕರಣಗಳು ಅನಿವಾರ್ಯವಾಗಿ ನಡೆದುಹೋಗಬಹುದು. ಅಂತಹ ಸಂದರ್ಭದಲ್ಲಿ ಬಂಗಾರಪ್ಪನವರಂತೆ ಯಡಿಯೂರಪ್ಪನವರೂ ಕೊನೆಗೆ ಒಂಟಿಯಾಗಿ ಉಳಿದುಬಿಡಬಹುದು.
ಮೂರನೆಯದಾಗಿ ಲೆಕ್ಕಾಚಾರ ತಪ್ಪಿದರೆ ರಾಜಕೀಯವಾಗಿ ಜಾತಿ ಎಷ್ಟು ಲಾಭ ತಂದುಕೊಡುತ್ತೋ, ಅಷ್ಟೇ ನಷ್ಟವನ್ನುಂಟು ಮಾಡುತ್ತದೆ. ಯಡಿಯೂರಪ್ಪನವರು ನಂಬಿಕೊಂಡಿರುವುದು ಲಿಂಗಾಯತ ಜಾತಿಯನ್ನು.
ಕಳೆದ ನಾಲ್ಕುವರೆ ವರ್ಷಗಳ ರಾಜ್ಯದ ರಾಜಕಾರಣದಲ್ಲಿ ಈ ಜಾತಿಯ ಪ್ರಭಾವವನ್ನು ಯಾರೂ ನಿರಾಕರಿಸಲಾರರು. ಮುಖ್ಯಮಂತ್ರಿ ಮತ್ತು ಸಚಿವರ ಆಯ್ಕೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆ ವರೆಗೆ ಜಾತಿ ಪ್ರಧಾನ ಪಾತ್ರ ವಹಿಸಿದೆ. ಇದು ಒಕ್ಕಲಿಗ, ಬ್ರಾಹಣ ಮೊದಲಾದ ಇತರ ಮೇಲ್ಜಾತಿಗಳಲ್ಲಿ ಅಸೂಯೆ ಮತ್ತು ಆಕ್ರೋಶವನ್ನು ಮತ್ತು ಕೆಳಜಾತಿಗಳಲ್ಲಿ ಅಭದ್ರತೆಯನ್ನು ಹುಟ್ಟಿಸಿದೆ. ಈ ಎರಡೂ ಗುಂಪುಗಳು ತಮ್ಮ ಒಟ್ಟು ಮತಗಳಿಂದ ಲಿಂಗಾಯತ ಅಭ್ಯರ್ಥಿಗಳು ಸೋಲುವ ಸಾಧ್ಯತೆ ಇದ್ದ ಕಡೆ ಒಟ್ಟಾಗಲೂ ಬಹುದು.
ಇದೇ ವೇಳೆ ಬಿಜೆಪಿ ಈಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ, `ಬಿಜೆಪಿ ಲಿಂಗಾಯತರಿಗೆ ಅನ್ಯಾಯಮಾಡಿದೆ~ ಎಂಬ ಯಡಿಯೂರಪ್ಪನವರ ಆರೋಪ ಮೊನಚುಕಳೆದುಕೊಳ್ಳಬಹುದು. ಈ ಭಯದಿಂದಲ್ಲವೇ, `ಶೆಟ್ಟರ್ ಸರ್ಕಾರವನ್ನು ಉರುಳಿಸುವುದಿಲ್ಲ~ ಎಂದು ಯಡಿಯೂರಪ್ಪ ಹೇಳುತ್ತಿರುವುದು?
ನಾಲ್ಕನೆಯದಾಗಿ ವೈಯಕ್ತಿಕವಾಗಿ ಅನ್ಯಾಯಕ್ಕೀಡಾಗಿದ್ದೇನೆ ಎಂದು ಹೇಳಿಕೊಂಡು ಪ್ರಾದೇಶಿಕ ಪಕ್ಷ ಕಟ್ಟಿದವರು ಯಶಸ್ಸು ಕಂಡದ್ದು ಕಡಿಮೆ.  ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗೆ ದ್ರಾವಿಡ ಚಳವಳಿ ಪ್ರೇರಣೆ, `ಕಾಂಗ್ರೆಸ್ ಪಕ್ಷ ತೆಲುಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿದೆ~ ಎಂಬ ಪ್ರಚಾರದ ಬಲದಿಂದಲೇ ಎನ್‌ಟಿಆರ್ ಮುಖ್ಯಮಂತ್ರಿಯಾಗಿದ್ದು.
ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿಯೇ ಕಾನ್ಶಿರಾಮ್ ಮತ್ತು ಮಾಯಾವತಿ ಬಿಎಸ್‌ಪಿ ಕಟ್ಟಿದ್ದು. ಇವೆಲ್ಲ ಯಶಸ್ಸಿನ ಮಾದರಿಗಳು. ಕರ್ನಾಟಕದಲ್ಲಿರುವುದು  ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಗುಂಡೂರಾವ್, ಮತ್ತು ಎಸ್.ಬಂಗಾರಪ್ಪ ಮೊದಲಾದವರ ವೈಫಲ್ಯದ ಮಾದರಿಗಳು ಮಾತ್ರ.
ಅವರಿಗೆ ಸಿಗದ ಯಶಸ್ಸು ಯಡಿಯೂರಪ್ಪನವರಿಗೆ ಸಿಗುತ್ತಾ? ಕನಿಷ್ಠ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರಿಗೆ ಸಿಕ್ಕ ಯಶಸ್ಸಾದರೂ ಸಿಗಬಹುದೇ? ಇದನ್ನು ನೋಡಲು ಯಡಿಯೂರಪ್ಪನವರು ಮೊದಲು ಬಿಜೆಪಿ ತ್ಯಜಿಸಬೇಕು, ಹೊಸಪಕ್ಷ ಸೇರಬೇಕು, ಚುನಾವಣೆ ಎದುರಿಸಬೇಕು...ದಾರಿ ದೂರ ಇದೆ, ಸ್ಪಷ್ಟವೂ ಇಲ್ಲ.

Monday, August 1, 2011

ನಾಯಕ ಬದಲಾದರು, ವ್ಯವಸ್ಥೆ ಬದಲಾಗುವುದೇ?

ಬಿ.ಎಸ್.ಯಡಿಯೂರಪ್ಪನವರು ಹೀಗೇಕಾದರು ಎಂದು ಯಾರೂ ಅಚ್ಚರಿ ಪಡಬೇಕಾಗಿಲ್ಲ, ಅವರಿದ್ದದ್ದೇ ಹೀಗೆ. ತೊಂಬತ್ತರ ದಶಕದಲ್ಲಿ ಭಾರತೀಯ ಜನತಾ ಪಕ್ಷ ಯಡಿಯೂರಪ್ಪನವರನ್ನು ತಮ್ಮ ನಾಯಕನೆಂದು ಬಿಂಬಿಸಿದ್ದಾಗಲೂ, ಆ ಆಯ್ಕೆಗೆ ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಸಕಲ ಅಂಗಸಂಸ್ಥೆಗಳು ಬೆಂಬಲದ ಜಯಘೋಷ ಮಾಡಿದ್ದಾಗಲೂ ಮತ್ತು ವೀರಶೈವ ಮಠಗಳು ತಮ್ಮ ನಾಯಕನೆಂದು ಆಶೀರ್ವಾದ ಮಾಡಿದ್ದಾಗಲೂ ಅವರು ಹೀಗೆಯೇ ಇದ್ದರು.

ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಹೀಗಾಗಿದ್ದಲ್ಲ. ಹೌದು, ಈಗ ಹೆಚ್ಚುವರಿಯಾಗಿ ಒಂದಷ್ಟು ಭ್ರಷ್ಟಾಚಾರದ ಆರೋಪಗಳನ್ನು ಅವರು ಎದುರಿಸುತ್ತಿರಬಹುದು. ಹಿಂದೆ ಯಾಕೆ ಭ್ರಷ್ಟರಾಗಿರಲಿಲ್ಲ ಎನ್ನುವ ಪ್ರಶ್ನೆಗೆ ಆಗ ಅವಕಾಶ ಇರಲಿಲ್ಲ ಎನ್ನುವುದಷ್ಟೇ ಸರಳವಾದ ಉತ್ತರ.
ಕರ್ನಾಟಕದ ರಾಜಕೀಯವನ್ನು ಅಧ್ಯಯನ ಮಾಡುವವರ‌್ಯಾರಿಗೂ ಬ್ರಿಟಿಷ್ ವಿದ್ವಾಂಸ ಜೇಮ್ಸ ಮ್ಯಾನರ್ ಅಪರಿಚಿತ ಹೆಸರೇನಲ್ಲ. ಲಂಡನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಸ್ಟಡಿಯಲ್ಲಿ ಬೋಧನೆ ಮಾಡುತ್ತಿರುವ ಜೇಮ್ಸ ಮ್ಯಾನರ್ ಕಳೆದ 40 ವರ್ಷಗಳಿಂದ ಕರ್ನಾಟಕದ ರಾಜಕೀಯವನ್ನು ವಿಶೇಷವಾಗಿ ಅಧ್ಯಯನ ಮಾಡುತ್ತಾ ಬಂದವರು.
ಈ ಬಗ್ಗೆ ಹಲವಾರು ಪುಸ್ತಕಗಳನ್ನು ಮತ್ತು ನೂರಾರು ಲೇಖನಗಳನ್ನು ಅವರು ಬರೆದಿದ್ದಾರೆ. ಹೆಚ್ಚುಕಡಿಮೆ ಪ್ರತಿವರ್ಷ ಅವರು ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಇಂತಹ ಜೇಮ್ಸ ಮ್ಯಾನರ್ 1994ರಲ್ಲಿ ಬೆಂಗಳೂರಿಗೆ ಬಂದಿದ್ದಾಗ ಬಿಜೆಪಿಯ ಇಬ್ಬರು ಯುವ ಕಾರ‌್ಯಕರ್ತರನ್ನು ಭೇಟಿಯಾಗಿದ್ದರು.
`ಎಕಾನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ~ಯ ಇತ್ತೀಚಿನ ತನ್ನ ಲೇಖನದಲ್ಲಿ ಅವರು ಹದಿನೈದು ವರ್ಷಗಳ ಹಿಂದಿನ ತಮ್ಮ ಭೇಟಿಯ ಅನುಭವ ಮೆಲುಕುಹಾಕಿದ್ದಾರೆ.
`....ಆಗಷ್ಟೇ ಕೊನೆಗೊಂಡಿದ್ದ ಚುನಾವಣೆಯಲ್ಲಿ ಬಿಜೆಪಿ ತನ್ನ ಬಲವರ್ಧನೆ ಮಾಡಿಕೊಂಡಿದ್ದ ಕಾಲ ಅದು.
ಇಂತಹ ಸ್ಥಿತಿಯಲ್ಲಿ ಈ ಇಬ್ಬರು ಯುವ ಕಾರ್ಯಕರ್ತರು ಆಶಾವಾದದಿಂದ ತುಂಬಿ ತುಳುಕುತ್ತಿರಬಹುದೆಂದು ನಿರೀಕ್ಷಿಸಿದ್ದೆ. ಆದರೆ ಅವರು ಪ್ರಾರಂಭದಿಂದಲೇ ವ್ಯಾಕುಲರಾಗಿದ್ದರು. ಅವರ ಮುಖದಲ್ಲಿ ಬಚ್ಚಿಟ್ಟುಕೊಳ್ಳಲಾಗದ ವಿಷಣ್ಣತೆ ಇತ್ತು.
ಮಾತನಾಡುತ್ತಾ ಹೋದಂತೆ ಅವರು ಇನ್ನಷ್ಟು ಚಿಂತಾಕ್ರಾಂತರಾದಂತೆ ಕಂಡರು. ಅವರು ಒಂದೇ ಸಮನೆ ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ದೂರುಗಳನ್ನು ಹೇಳುತ್ತಾ ಹೋದರು....~ ಎಂದು ಅವರು ತಮ್ಮ ಲೇಖನ ಪ್ರಾರಂಭಿಸುತ್ತಾರೆ.

ಆ ಯುವಕಾರ್ಯಕರ್ತರ ಮಾತುಗಳಲ್ಲೇ ಅವರಾಡಿದ್ದನ್ನು ಕೇಳಿ:`...ಅವರು ದುರಹಂಕಾರಿ, ಯಾರ ಮಾತನ್ನೂ ಕೇಳುವುದಿಲ್ಲ. ಪಕ್ಷದ ಬಲವರ್ಧನೆಗಾಗಿ ಬಳಸಿಕೊಳ್ಳಬಹುದಾದ ಅವಕಾಶಗಳು ಮತ್ತು ಪಕ್ಷದ ಬಲ ಕುಂದಲು ಕಾರಣವಾಗಬಹುದಾದ ತಪ್ಪುಗಳ ಬಗ್ಗೆ ನೀಡುವ ಮಾಹಿತಿಗಳನ್ನು ಅವರು ನಿರ್ಲಕ್ಷಿಸುತ್ತಾರೆ.
ಆದ್ದರಿಂದ ಹಲವಾರು ಬಾರಿ ರಾಜಕೀಯ ಅನುಕೂಲಗಳಿಂದ ಪಕ್ಷ ವಂಚಿತವಾಗಬೇಕಾಯಿತು. ಪ್ರತಿಬಾರಿ ಅವರು ತಪ್ಪು ನಿರ್ಧಾರಗಳಿಂದಾಗಿ ಮುಜುಗರಕ್ಕೊಳಗಾಗುತ್ತಾರೆ  ಮತ್ತು ಯಾರದ್ದೋ ಸಂಚಿಗೆ ಬಲಿಯಾಗುತ್ತಾರೆ.

ಅವರೊಬ್ಬ ಬುದ್ಧಿವಂತ, ಆದರೆ ಸರಿಯಾದ ರಾಜಕೀಯ ನಿರ್ಧಾರ ಕೈಗೊಳ್ಳಲಾಗದ ನಾಯಕನೆಂದು ನಾವು ತಿಳಿದುಕೊಂಡಿದ್ದೆವು. ಆದರೆ, ಮಾಡುವ ತಪ್ಪುಗಳನ್ನು ನೋಡುತ್ತಾ ಬಂದಾಗ ಅವರು ಅಷ್ಟೇನೂ ಬುದ್ಧಿವಂತರಲ್ಲ ಎಂದು ಅರಿವಾಯಿತು.
ಅಷ್ಟು ಮಾತ್ರವಲ್ಲ, ಅವರೊಬ್ಬ ಪ್ರಜಾಪ್ರಭುತ್ವ ವಿರೋಧಿ. ಪಕ್ಷದ ಸಹೋದ್ಯೋಗಿಗಳ ಮಾತುಗಳಿಗೆ ಕಿವಿಗೊಡುವುದಿಲ್ಲ. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗಿಂತ ಹೆಚ್ಚು ಪ್ರಜಾಸತ್ತಾತ್ಮಕವಾಗಿರುವ ಬಿಜೆಪಿಯಲ್ಲಿ ಈ ನಡವಳಿಕೆ ಗಂಭೀರ ಸ್ವರೂಪದ ಅಪರಾಧ.
ಪಕ್ಷದ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಅವರು ಲಕ್ಷಿಸುವುದಿಲ್ಲ. ಪಕ್ಷ ರೂಪಿಸುವ ಕಾರ್ಯತಂತ್ರಗಳನ್ನು ಅವರು ಒಪ್ಪುವುದಿಲ್ಲ. ಯಾರಾದರೂ ಅವರನ್ನು ಪ್ರಶ್ನಿಸಿದರೆ ಸಿಟ್ಟಾಗುತ್ತಾರೆ. ಎದುರಾಳಿಯ ಮಾತನ್ನು ತನ್ನ ವಾದದ ಮೂಲಕ ಎದುರಿಸುವುದಿಲ್ಲ, ಕೂಗಾಡಿ ಬಾಯಿ ಮುಚ್ಚಿಸುತ್ತಾರೆ...~
`..ಭಿನ್ನ ಪಕ್ಷ ಎಂಬ ಹೆಗ್ಗಳಿಕೆಯ ಬಿಜೆಪಿಯ ನಾಯಕನೊಬ್ಬನಿಂದ ನಾವು ನಿರೀಕ್ಷಿಸಿದ್ದ ಸಜ್ಜನಿಕೆ ಮತ್ತು ತಾಳ್ಮೆಯ ನಡವಳಿಕೆಯನ್ನು ನಮಗೆ ಕಾಣಲಾಗುತ್ತಿಲ್ಲ. ಅವರು ಸೂಕ್ಷ್ಮವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವಾಸ್ತವವನ್ನು ಎದುರಿಸುವುದಿಲ್ಲ, ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ.
ಅಸಾಧ್ಯವಾದುದನ್ನು ಸಾಧ್ಯಮಾಡಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದೆ ಇದ್ದಾಗ ಇತರರನ್ನು ಬೈದು ಯಾರಿಗೂ ತಿಳಿಸದೆ ಇನ್ನೊಂದು ಅಡ್ಡಾದಿಡ್ಡಿ ದಾರಿ ಹಿಡಿಯುತ್ತಾರೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಕೆಟ್ಟುಹೋಗುತ್ತದೆ.
ಅಧಿಕಾರ ಒಬ್ಬ `ದಡ್ಡ~ ನಾಯಕನ ಕೈಯಲ್ಲಿ ಕೇಂದ್ರೀಕೃತವಾಗಿರುವ ಅಪಾಯಕಾರಿ ಪರಿಸ್ಥಿತಿ ಇದು. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ...~ಇಷ್ಟು ಹೇಳಿದ ನಂತರ ಇಬ್ಬರಲ್ಲಿ ಒಬ್ಬ ಯುವಕ ಬಿಕ್ಕಿಬಿಕ್ಕಿ ಅಳತೊಡಗಿದನಂತೆ. `...ಕರ್ನಾಟಕದ ರಾಜಕೀಯವನ್ನು ಕಳೆದ ನಲ್ವತ್ತು ವರ್ಷಗಳಿಂದ ಅಧ್ಯಯನ ಮಾಡುತ್ತಾ ಬಂದ ನಾನು ಈ ರೀತಿ ಒಂದು ಪಕ್ಷದ ಕಾರ್ಯಕರ್ತ ತನ್ನದೇ ಪಕ್ಷದ ನಾಯಕನ ಬಗ್ಗೆ ಹತಾಶೆಗೊಂಡು ಕಣ್ಣೀರು ಹಾಕಿದ್ದನ್ನು ನೋಡಿಲ್ಲ...~ ಎನ್ನುತ್ತಾರೆ ಜೇಮ್ಸ ಮ್ಯಾನರ್ ಆ ಲೇಖನದಲ್ಲಿ.

ಇದನ್ನು ಓದಿದ ಮೇಲೆ ಯಡಿಯೂರಪ್ಪನವರು ಹೀಗ್ಯಾಕಾದರು ಎಂದು ಯಾರೂ ಕೇಳಲಾರರು. ಅವರು ಹೀಗೆಯೇ ಇದ್ದರು.ಹೀಗಿದ್ದರೂ ಅವರನ್ನು ತನ್ನ ನಾಯಕನೆಂದು ಬಿಜೆಪಿ ಯಾಕೆ ಬಿಂಬಿಸಿತು? ಸಂಘ ಪರಿವಾರ ಯಾಕೆ ಬೆಂಬಲ ಧಾರೆ ಎರೆಯಿತು? ವೀರಶೈವ ಮಠಗಳು ಅವರನ್ನು ಜಾತಿ ನಾಯಕನಾಗಿ ಯಾಕೆ ಬೆಳೆಸಿದವು? ಯಾವ ದಾರಿಯಾದರೂ ಸರಿ, ಗುರಿ ತಲುಪುವುದಷ್ಟೇ ಮುಖ್ಯ ಎಂದು ತಿಳಿದುಕೊಂಡ ಬಿಜೆಪಿಗೆ ಅಧಿಕಾರ ಬೇಕಿತ್ತು.
ತನ್ನ ಗುಪ್ತಕಾರ್ಯಸೂಚಿಯ ಅನುಷ್ಠಾನಕ್ಕಾಗಿ ಸಂಘ ಪರಿವಾರಕ್ಕೆ ತನ್ನ ಮಾತು ಕೇಳುವ ಮುಖ್ಯಮಂತ್ರಿ ಬೇಕಿತ್ತು. ಆಗಲೇ `ಧರ್ಮ~ದ ಹಾದಿಯಿಂದ `ಅರ್ಥ~ದ ಹಾದಿಗೆ ಹೊರಳುತ್ತಿದ್ದ ವೀರಶೈವ ಮಠಗಳಿಗೆ ತಮ್ಮ ಧಾರ್ಮಿಕ ಸಾಮ್ರಾಜ್ಯದ ವಿಸ್ತರಣೆಗೆ ನೆರವಾಗಬಲ್ಲ ಜಾತಿ ನಾಯಕನೊಬ್ಬ ಬೇಕಿತ್ತು.

ಆಗ ಎಲ್ಲರ ಕಣ್ಣಿಗೆ ಕಂಡದ್ದು ಯಡಿಯೂರಪ್ಪ. ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು, ಜಾತಿಯಿಂದ ಲಿಂಗಾಯತರು, ಸ್ವಭಾವದಲ್ಲಿ ಹೋರಾಟ ಮನೋಭಾವದವರು. ಬೇರೇನು ಬೇಕು?
ಈಗ ಒಮ್ಮಿಂದೊಮ್ಮೆಲೇ ಯಡಿಯೂರಪ್ಪನವರು ಎಲ್ಲರಿಗೂ ಖಳನಾಯಕರಂತೆ ಕಾಣುತ್ತಿದ್ದಾರೆ. ಯಡಿಯೂರಪ್ಪನವರ ನಿರ್ಗಮನದಿಂದ ಕರ್ನಾಟಕವನ್ನು ಆವರಿಸಿಕೊಂಡಿರುವ ಎಲ್ಲ ಅನಿಷ್ಟಗಳು ನಿವಾರಣೆಯಾಗಬಹುದೆನ್ನುವ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ.
ಆದರೆ, `ಮನುಷ್ಯ ವ್ಯವಸ್ಥೆಯ ಕೂಸು~ ಎನ್ನುವ ಸತ್ಯ ತಿಳಿದುಕೊಂಡವರ‌್ಯಾರೂ ಯಡಿಯೂರಪ್ಪನವರ ನಿರ್ಗಮನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಾರರು. ಜನಪರ ಕಾಳಜಿಯ ಹೋರಾಟಗಾರನಾಗಿ ರಾಜಕೀಯ ಪ್ರವೇಶಿಸಿದ ಯಡಿಯೂರಪ್ಪನವರು ರಾಜ್ಯ ಕಂಡ ಅತೀ ಭ್ರಷ್ಟ, ಅಸಮರ್ಥ ಮತ್ತು ಜಾತಿವಾದಿ ಮುಖ್ಯಮಂತ್ರಿ ಎಂಬ ಆರೋಪಗಳ ಹೊರೆ ಹೊತ್ತು ನಿರ್ಗಮಿಸುವಂತಾಗಲು ಕಾರಣವಾದ ವ್ಯವಸ್ಥೆ ಇನ್ನೂ ಜೀವಂತವಾಗಿದೆ.
ಹೊಸ ನಾಯಕನ ಆಯ್ಕೆಯಲ್ಲಿ ಕೂಡಾ ಅದೇ ಹಳೆಯ ವ್ಯವಸ್ಥೆಯದ್ದೇ ಮುಖ್ಯ ಪಾತ್ರ. ಹೊಸ ನಾಯಕ ಕೂಡಾ  ಹಳೆಯ ವ್ಯವಸ್ಥೆಯ ಕೂಸಾಗಿ ಬಿಟ್ಟರೆ ಬದಲಾವಣೆ ಹೇಗೆ ನಿರೀಕ್ಷಿಸಲು ಸಾಧ್ಯ?
ಈ ವ್ಯವಸ್ಥೆಯ ಮೊದಲ ಘಟಕ-ಭಾರತೀಯ ಜನತಾ ಪಕ್ಷ. ಒಂದು ಸ್ವತಂತ್ರ, ಪರಿಪೂರ್ಣ ರಾಜಕೀಯ ಪಕ್ಷವಾಗಿ ಬೆಳೆಯಲು ಸಾಧ್ಯವಾಗದೆ ಹೋಗಿದ್ದೇ ಈ ಪಕ್ಷದ ಮೂಲ ಸಮಸ್ಯೆ. ಪಕ್ಷ ಏನಿದ್ದರೂ ಮುಖವಾಡ, ಅದರ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ನಿಜವಾದ ಮುಖ.
ಇಲ್ಲಿ ಪಕ್ಷಕ್ಕಿಂತಲೂ ಮುಖ್ಯವಾದುದು ಮಾತೃಸಂಸ್ಥೆಯ ಮೇಲಿನ ನಿಷ್ಠೆ. ಪಕ್ಷವನ್ನು ಧಿಕ್ಕರಿಸಿಯೂ ಇಲ್ಲಿ ಬದುಕುಳಿಯಬಹುದು, ಆದರೆ ಸಂಘ ಪರಿವಾರವನ್ನಲ್ಲ. ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರಂತಹವರು ನಿರ್ಣಾಯಕ ಸ್ಥಾನದಲ್ಲಿರುವಷ್ಟು ದಿನ ತಮ್ಮ ವ್ಯಕ್ತಿತ್ವದ ಬಲದಿಂದ ಪಕ್ಷಕ್ಕೆ ಒಂದಿಷ್ಟು ಆತ್ಮಗೌರವ ತುಂಬಿದ್ದರು.
ಅವರ ನಿರ್ಗಮನದ ನಂತರ ಅದೊಂದು ದುರ್ಬಲ ಮತ್ತು ಪರಾವಲಂಬಿ ಪಕ್ಷ. ಅಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ರಾಜ್ಯ, ರಾಷ್ಟ್ರೀಯ ಅಧ್ಯಕ್ಷರವರೆಗೆ ಯಾರು ಏನಾಗಬೇಕೆಂಬುದನ್ನು ನಿರ್ಧರಿಸುವುದು ಪಕ್ಷ ಅಲ್ಲವೇ ಅಲ್ಲ, ಅದು ಸಂಘದ ನಾಯಕರು.
ಪಕ್ಷದ ಈ ದೌರ್ಬಲ್ಯ ಅರಿತವರು ಅದರ ಆದೇಶಕ್ಕೆ ಎಷ್ಟು ಬೆಲೆ ಕೊಡಬಹುದು? ಪಕ್ಷದ ಸಂಸದೀಯ ಮಂಡಳಿಯ ನಿರ್ಣಯವನ್ನು ಅನುಷ್ಠಾನಕ್ಕೆ ತರಲಾಗದೆ ಬಿಜೆಪಿ ವರಿಷ್ಠರು ಮೂರು ದಿನಗಳ ಕಾಲ ದೇಶದ ಮುಂದೆ ನಗೆಪಾಟಲಿಗೀಡಾಗಿದ್ದು ಇದೇ ಕಾರಣಕ್ಕೆ. ಈಗಲೂ ಸಂಘ ಪರಿವಾರದ ಆಯ್ಕೆಗೆ ಮೊಹರು ಒತ್ತುವುದಷ್ಟೇ ಪಕ್ಷದ ಕೆಲಸ.
ವ್ಯವಸ್ಥೆಯ ಎರಡನೇ ಘಟಕ-ಸಂಘ ಪರಿವಾರ. ಸಮಸ್ತ ಹಿಂದೂ ಸಮುದಾಯದ ಹಿತಚಿಂತನೆ ನಡೆಸುವವರು ನಾವೆಂದು ಹೇಳಿಕೊಳ್ಳುತ್ತಿರುವ ಈ ಪರಿವಾರದ ನಾಯಕರು ರಾಜಕೀಯದ ಪ್ರಶ್ನೆ ಬಂದಾಗ ಮಾತ್ರ ಬಿಜೆಪಿ ಜತೆ ನಿಲ್ಲುತ್ತಾರೆ.
ಬಿಕ್ಕಟ್ಟುಗಳು ಎದುರಾದಾಗ  ಪ್ರಶ್ನಿಸಿದರೆ  `ಅದು ಸಂಪೂರ್ಣವಾಗಿ ಪಕ್ಷಕ್ಕೆ ಬಿಟ್ಟ ವಿಚಾರ. ಅದರಲ್ಲಿ ನಾವು ತಲೆಹಾಕುವುದಿಲ್ಲ~ ಎನ್ನುತ್ತಾರೆ. ಹಾಗ್ದ್ದಿದರೆ ಬಿಜೆಪಿಯ ಕೋರ್ ಕಮಿಟಿಯಲ್ಲಿ ಆರ್‌ಎಸ್‌ಎಸ್ ಪ್ರತಿನಿಧಿಗಳಿಗೇನು ಕೆಲಸ? ಕಾಂಗ್ರೆಸ್, ಜೆಡಿ (ಎಸ್)ನ ಕೋರ್ ಕಮಿಟಿಯಲ್ಲಿಯೂ ಅವರಿದ್ದಾರೇನು? ವಾಸ್ತವ ಏನೆಂದರೆ ಈಗಲೂ ಆರ್‌ಎಸ್‌ಎಸ್ ರಿಮೋಟ್ ಕಂಟ್ರೋಲ್ ಮೂಲಕ ಬಿಜೆಪಿಯ ನೀತಿ  ನಿರ್ಧಾರಗಳನ್ನು ನಿಯಂತ್ರಿಸುತ್ತಿದೆ.

ಇದರ ನಾಯಕರು ಮಹಮ್ಮದ್ ಅಲಿ ಜಿನ್ನಾ ಬಗ್ಗೆ ಅಡ್ವಾಣಿಯವರು ನೀಡಿದ ಸಣ್ಣ ಹೇಳಿಕೆಗಾಗಿ ಅವರ ತಲೆದಂಡ ಪಡೆಯುತ್ತಾರೆ, ಜಸ್ವಂತ್‌ಸಿಂಗ್ ಬರೆದ ಪುಸ್ತಕದಲ್ಲಿ ಜಿನ್ನಾ ಪರವಾದ ಅಭಿಪ್ರಾಯ ಇದೆ ಎನ್ನುವ ಕಾರಣಕ್ಕಾಗಿ ಪಕ್ಷದಿಂದಲೇ ಅವರ ಉಚ್ಚಾಟನೆಯಾಗುವಂತೆ ಮಾಡುತ್ತಾರೆ.
ಆದರೆ ತಮ್ಮದೇ ಪರಿವಾರದ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ನೀಡಿರುವ ವರದಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಇದೆಂಥ ಆತ್ಮವಂಚನೆ? ಯಡಿಯೂರಪ್ಪ ರಾಜೀನಾಮೆ ಮತ್ತು ಹೊಸ ಮುಖ್ಯಮಂತ್ರಿಯ ಆಯ್ಕೆಯ ಪ್ರಕ್ರಿಯೆ ಕಗ್ಗಂಟಾಗಲು ಕೂಡಾ ಕರಾವಳಿ ಮತ್ತು ಉತ್ತರ ಕರ್ನಾಟಕದ ಆರ್‌ಎಸ್‌ಎಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಕಾರಣವೆನ್ನಲಾಗಿದೆ.

ಕೊನೆಗೂ ಈ ನಾಯಕರೇ ಹೊಸ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸಲಿದ್ದಾರೆ. ಈ ಬಾರಿ ಕರಾವಳಿ ಆರ್‌ಎಸ್‌ಎಸ್ ಕೈಮೇಲಾದರೆ ಆಶ್ಚರ್ಯ ಇಲ್ಲ.  ಶಾಸಕರ ಅಭಿಪ್ರಾಯ ಸಂಗ್ರಹ, ಶಾಸಕಾಂಗ ಪಕ್ಷದ ಸಭೆ -ಇವೆಲ್ಲ ಸಾರ್ವಜನಿಕರ ಗಮನಕ್ಕಾಗಿ ನಡೆಯುತ್ತಿರುವ ನಾಟಕ ಅಷ್ಟೇ.
ವ್ಯವಸ್ಥೆಯ ಮೂರನೇ ಘಟಕ-ವೀರಶೈವ ಮಠಗಳು. ಈ ಮಠಗಳ ಒಂದಷ್ಟು ಸ್ವಾಮಿಗಳು ಮೊದಲು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತರು. ಈಗ ಮುಂದಿನ ಮುಖ್ಯಮಂತ್ರಿ ಸ್ಥಾನ ಲಿಂಗಾಯತರಿಗೇ ನೀಡಬೇಕೆಂದು ಹೇಳುತ್ತಿರುವುದು ಮಾತ್ರವಲ್ಲ, ಅಭ್ಯರ್ಥಿ ಯಾರೆಂಬುದನ್ನೂ ಸೂಚಿಸುತ್ತಿದ್ದಾರೆ.
ಅವರು ಸೂಚಿಸುತ್ತಿರುವ ಅಭ್ಯರ್ಥಿಗಳು ಸಮರ್ಥರೇ ಇರಬಹುದು. ಆದರೆ ಅವರು ಮಠಗಳ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳಬೇಕೇ? ತಾವು ಬೆಂಬಲಿಸಿಕೊಂಡು ಬಂದ ಮುಖ್ಯಮಂತ್ರಿಯ ವಿರುದ್ಧ ಲೋಕಾಯುಕ್ತ ಮಾಡಿರುವ ಗಂಭೀರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಹೋಗದೆ ನುಣುಚಿಕೊಳ್ಳುತ್ತಿರುವ ಈ ಸ್ವಾಮಿಗಳಿಗೆ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಸೂಚಿಸುವ ನೈತಿಕತೆಯಾದರೂ ಎಲ್ಲಿದೆ?
ಭಾರತೀಯ ಜನತಾ ಪಕ್ಷ ಇಷ್ಟೊಂದು ದುರ್ಬಲಗೊಳ್ಳದೆ ಸ್ವಂತ ನಿರ್ಧಾರ ಕೈಗೊಳ್ಳುವಷ್ಟು ಶಕ್ತಿ ಹೊಂದಿದ್ದರೆ,  ಆ ಪಕ್ಷದ ಜುಟ್ಟು ಕೈಯಲ್ಲಿಟ್ಟುಕೊಳ್ಳದೆ ಅದನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಂಘ ಪರಿವಾರ ಅವಕಾಶ ನೀಡಿದ್ದರೆ ಮತ್ತು ಎಲ್ಲವನ್ನೂ ಜಾತಿಯ ಕನ್ನಡಕದಲ್ಲಿ ನೋಡಲು ಹೋಗದೆ ತಪ್ಪು-ಸರಿಗಳ ನಿರ್ಣಯವನ್ನು ಜಾತ್ಯತೀತವಾಗಿ ಕೈಗೊಳ್ಳುವ ದಿಟ್ಟತನವನ್ನು ವೀರಶೈವ ಮಠಗಳು ತೋರಿದ್ದರೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ. ತಪ್ಪುಗಳನ್ನು ತಿದ್ದಿಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು.