Showing posts with label ದಲಿತ. Show all posts
Showing posts with label ದಲಿತ. Show all posts

Tuesday, May 1, 2012

ದಲಿತ ಐಡೆಂಟಿಟಿಯ ಕೊನೆ ಇಲ್ಲದ ಬಿಕ್ಕಟ್ಟುಗಳು April 23, 2012

ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯಂದು `ಪ್ರಜಾವಾಣಿ` ಹೊರತಂದ ವಿಶೇಷ ಸಂಚಿಕೆ  ಉಂಟು ಮಾಡಿರುವ ಸಂಚಲನಕ್ಕೆ ಓದುಗರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳೇ ಸಾಕ್ಷಿ. 

ವಿಶೇಷ ಎಂದರೆ ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸಾಹಿತಿಗಳು, ಸಮಾಜ ಸೇವಕರು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳವರೆಗೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 90ರಷ್ಟು ಓದುಗರು ದಲಿತೇತರರು. ಅವರ ಮನಸ್ಸಲ್ಲಿ ಮೂಡಿದ ಅಪರಾಧಿ ಪ್ರಜ್ಞೆ, ಆತ್ಮಾವಲೋಕನದ ಹಂಬಲ, ಬದಲಾವಣೆಯ ತುಡಿತಗಳನ್ನು ಅವರು ಬರೆದ ಪತ್ರಗಳಲ್ಲಿ ಕಾಣಬಹುದು. 

ಜಾತಿ-ಧರ್ಮಗಳಿಂದ  ಸೀಳಿ ಹೋಗಿರುವ ಸಮಾಜದಲ್ಲಿ ಈ ರೀತಿಯಲ್ಲಿ ಆಲೋಚನೆಯನ್ನಾದರೂ ಮಾಡಬಲ್ಲ ಜಾಗೃತ ಸಮುದಾಯ ಇದೆ ಎನ್ನುವುದೇ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುವಂತಹ ಬೆಳವಣಿಗೆ. 

ಆಶಯದ ಮಟ್ಟದಲ್ಲಿ ಇವೆಲ್ಲ ಸರಿ, ಆದರೆ ಆಚರಣೆಯಲ್ಲಿ ಈಗಲೂ ಅಸ್ಪೃಶ್ಯತೆಯಂತಹ ಅಮಾನವೀಯ ನಡವಳಿಕೆಯನ್ನು ಮೈಗೂಡಿಸಿಕೊಂಡಿರುವ ಮತ್ತು ಅದನ್ನು ಬೆಂಬಲಿಸುವ ಜನವರ್ಗ ದೊಡ್ಡಸಂಖ್ಯೆಯಲ್ಲಿ ನಮ್ಮ ನಡುವೆ ಇದೆ ಎನ್ನುವುದು ಆಶಯ ಮತ್ತು ಆಚರಣೆಯ ನಡುವಿನ ಕಂದಕವನ್ನು ತೋರಿಸುತ್ತದೆ.

ವಿಶೇಷ ಸಂಚಿಕೆಯನ್ನು ರೂಪಿಸುವಾಗ ನಮ್ಮ ಸಂಪಾದಕರು ನೀಡಿದ್ದ ಕೆಲವು ಸಲಹೆಗಳಲ್ಲಿ ಎರಡು ಪ್ರಮುಖವಾದುವುಗಳು. ನಮ್ಮಲ್ಲಿಯೇ ಯಾರಾದರೊಬ್ಬ ದಲಿತೇತರ ಸಹೋದ್ಯೋಗಿ ದಲಿತರ ಕೇರಿಗೆ ಹೋಗಿ ಒಂದು ದಿನ ಜತೆಯಲ್ಲಿಯೇ ಇದ್ದು ಅವರ ನಿತ್ಯ ಜೀವನದ ಯಥಾವತ್ ವರದಿಯನ್ನು ಮಾಡಬೇಕೆಂಬುದು ಅವುಗಳಲ್ಲೊಂದು. 

ಅದರಂತೆ ನಮ್ಮ ಮೈಸೂರಿನ ಹಿರಿಯ ವರದಿಗಾರ ಸುದೇಶ್ ದೊಡ್ಡಪಾಳ್ಯ ಅವರು ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಎಂಬ ಊರಿಗೆ ಹೋಗಿ ಒಂದು ದಿನ ಅಲ್ಲಿದ್ದು ತಮ್ಮ ಅನುಭವವನ್ನು ದಾಖಲಿಸಿದ್ದರು. ಸಂಚಿಕೆಯ ಅತಿಥಿ ಸಂಪಾದಕರಾದ ದೇವನೂರ ಮಹಾದೇವ ಅವರಿಂದಲೂ ವಿಶೇಷ ಪ್ರಶಂಸೆಗೆ ಪಾತ್ರವಾದ ಈ ವರದಿ ಪ್ರಜ್ಞಾವಂತರೆಲ್ಲ ಆತ್ಮಸಾಕ್ಷಿಯನ್ನು ಕೆಣಕುವಂತಿತ್ತು. 

ಅದೇ ಅದರ ಉದ್ದೇಶ ಆಗಿತ್ತೇ ಹೊರತಾಗಿ ಯಾವುದೋ ಒಂದು ಊರಿನ ಮರ್ಯಾದೆ ತೆಗೆಯುವುದು ಇಲ್ಲವೇ ಜಗಳ ಹಚ್ಚುವುದು ಆಗಿರಲಿಲ್ಲ. ಕಪ್ಪಸೋಗೆ ಎಂಬ ಊರನ್ನು ಪ್ರಾತಿನಿಧಿಕವಾಗಿ ಆಯ್ಕೆಮಾಡಲಾಗಿತ್ತು. ಇದರ ಅರ್ಥ ಆ ಊರೊಂದನ್ನು ಬಿಟ್ಟು ಬೇರೆಲ್ಲೂ ಅಸ್ಪೃಶ್ಯತೆಯ ನಡವಳಿಕೆ ಇಲ್ಲ ಎಂದಲ್ಲ. ಅಲ್ಲಿಗಿಂತಲೂ ಭೀಕರವಾದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವ ಊರುಗಳು ಇವೆ.

 ಆದರೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಊರಿನ ಮರ್ಯಾದೆ ಹಾಳಾಯಿತೆಂದು ಅಲ್ಲಿನ ಒಂದು ವರ್ಗದ ಜನರು ಪ್ರತಿಭಟಿಸಿದ್ದಾರೆ. ಇದರಿಂದಾಗಿ ಅಲ್ಲಿ ನಿರ್ಮಾಣವಾಗಿದ್ದ ಬಿಗುವಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹೋಗಿ ನಾಲ್ಕುದಿನ ಕಾವಲು ನಿಲ್ಲಬೇಕಾಯಿತು. 

ನಮ್ಮ ವರದಿಗಾರರನ್ನು ಊರಿಗೆ ಕರೆದುಕೊಂಡು ಬಂದವನು ಎಂಬ ಶಂಕೆಯಿಂದ ಅದೇ ಊರಿನ ದಲಿತ ವಿದ್ಯಾರ್ಥಿಯೊಬ್ಬನನ್ನು ಬೆದರಿಸುವ ಪ್ರಯತ್ನಗಳೂ ನಡೆದಿವೆ. ಊರಲ್ಲಿ ಅಸ್ಪೃಶ್ಯತೆ ಆಚರಣೆ ನಡೆಯುತ್ತಿಲ್ಲ ಎಂದು ಯಾರೂ ಧೈರ್ಯದಿಂದ ಮುಂದೆ ಬಂದು ಹೇಳುತ್ತಿಲ್ಲ. ಅಂತಹ ನಡವಳಿಕೆಯಿಂದ ಊರಿನ ಮರ್ಯಾದೆ ಹಾಳಾಗುತ್ತಿದೆ ಎನ್ನುವ ಅವಮಾನವೂ ಅವರನ್ನು ಕಾಡುತ್ತಿಲ್ಲ. ಅವೆಲ್ಲವೂ ಪತ್ರಿಕೆಯಲ್ಲಿ ಪ್ರಕಟವಾಗಬಾರದಿತ್ತು ಎನ್ನುವುದಷ್ಟೇ ಅವರ ವಾದ. ಇದಕ್ಕೇನು ಪರಿಹಾರ?

 ಪೊಲೀಸರು ಒಂದಷ್ಟು ದಿನ ಕಾವಲು ಕಾಯಬಹುದು, ಅದರ ನಂತರ? ಕಪ್ಪಸೋಗೆ ಎನ್ನುವ ಊರು ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು. ಆ ಊರಲ್ಲಿ ಇಂತಹ ಘಟನೆ ನಡೆದಾಗ ಅಲ್ಲಿಗೆ ಮೊದಲು ಧಾವಿಸಿಹೋಗಬೇಕಾದವರು ಅಲ್ಲಿನ ಶಾಸಕರು. 

ಆದರೆ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ನೊಂದಿರುವ ದಲಿತರಿಗೆ ನೆರವಾಗಬೇಕೆಂಬ ಪ್ರಾಮಾಣಿಕ ಉದ್ದೇಶ ಮೀಸಲು ಕ್ಷೇತ್ರದ ದಲಿತ ಪ್ರತಿನಿಧಿಗಳಿಗೆ ಇದ್ದರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ. 

ಎಲ್ಲ ಜಾತಿ-ಧರ್ಮಗಳ ಮತಗಳನ್ನು ಅವಲಂಬಿಸಿರುವ ಅವರು ಕೇವಲ ದಲಿತರ ಪರವಾಗಿ ನಿಂತರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಭವಿಷ್ಯದಲ್ಲಿ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದೆಂಬ ಎಚ್ಚರಿಕೆಯಿಂದಲೇ ಅಂಬೇಡ್ಕರ್ ಅವರು ದಲಿತ ಮತದಾರರಷ್ಟೇ ದಲಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕಿಗಾಗಿ ಒತ್ತಾಯಿಸಿದ್ದು.   

ಇತಿಹಾಸವನ್ನು ಕೆದಕಿ, ಪ್ರತ್ಯೇಕ ಮತದಾನ ಹಕ್ಕು ಯಾಕೆ ಸಿಗಲಿಲ್ಲ ಎನ್ನುವ ಚರ್ಚೆಯನ್ನು ಬೆಳೆಸುವುದರಿಂದ ಇನ್ನಷ್ಟು ಮನಸ್ಸುಗಳು ಒಡೆದುಹೋಗಬಹುದೇ ಹೊರತು ಬೇರೇನೂ ಲಾಭವಾಗಲಾರದು. ಇದಕ್ಕಾಗಿ ಬೇರೆಯೇ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. 

ಈ ಹಿನ್ನೆಲೆಯಲ್ಲಿ ದೇವನೂರ ಮಹಾದೇವ ಅವರು ವಿಶೇಷ ಸಂಚಿಕೆಯ ಸಂಪಾದಕೀಯಕ್ಕೆ ಸೂಚಿಸಿದ್ದ `ಸಾಮಾಜಿಕ ಪೊಲೀಸರು` ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುವ ಅಗತ್ಯ ಇದೆ. ಜರ್ಮನಿಯೂ ಸೇರಿದಂತೆ ಕೆಲವು ದೇಶಗಳಲ್ಲಿ ಇಂತಹದ್ದೊಂದು ವ್ಯವಸ್ಥೆ ಇರುವುದನ್ನು ಅವರು ಹೇಳಿದ್ದರು. 

ಜಾತಿ ತಾರತಮ್ಯ ಇಲ್ಲವೇ ಅಸ್ಪೃಶ್ಯತೆಯ ಆಚರಣೆ ವಿಕೋಪಕ್ಕೆ ಹೋಗುವವರೆಗೆ ಕಾಯುತ್ತ ಕೂರದೆ, ಅಂತಹ ನಡವಳಿಕೆಗಳ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಎರಡು ಪಂಗಡಗಳ ಜತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ. 

ವೃತ್ತಿನಿರತ ರಾಜಕಾರಣಿಗಳನ್ನು ದೂರ ಇಟ್ಟು ಸಾಮಾಜಿಕ ಕಳಕಳಿ ಹೊಂದಿರುವ ಅಧಿಕಾರಿಗಳು,ಪ್ರಾಧ್ಯಾಪಕರು, ವಕೀಲರು, ಪತ್ರಕರ್ತರು, ಸಮಾಜಸೇವಕರು -ಹೀಗೆ ವಿವಿಧ ವರ್ಗಗಳ ಪ್ರತಿನಿಧಿಗಳನ್ನು ಈ `ಸಾಮಾಜಿಕ ಪೊಲೀಸ್` ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ದೇವನೂರ ಹೇಳುತ್ತಾರೆ.

  ಕಪ್ಪಸೋಗೆಯಿಂದಲೇ ಇಂತಹದ್ದೊಂದು ಸಾಮಾಜಿಕ ಸಾಮರಸ್ಯದ ಪ್ರಯೋಗವನ್ನು ಪ್ರಾರಂಭಿಸಬಹುದೇನೋ?

`ಹಳ್ಳಿಗಳಲ್ಲಿ ಇಂತಹ ಪರಿಸ್ಥಿತಿ ಇರಬಹುದು, ನಗರದ ಶಿಕ್ಷಿತ ವಲಯಗಳಲ್ಲಿ ಅಸ್ಪೃಶ್ಯತೆ ಎಲ್ಲಿದೆ? ಯಾರು ಯಾರ ಮನೆಯ ಒಳಗೆ ಹೋಗಿ ಊಟ-ತಿಂಡಿ ಮಾಡುವ ಪರಿಸ್ಥಿತಿ ಇಲ್ಲವೇ? ಮಡಿ-ಮೈಲಿಗೆಯನ್ನು ಯಾರು ಆಚರಿಸುತ್ತಾರೆ?` ಎಂದೆಲ್ಲ ಪ್ರಶ್ನಿಸುವವರು ಇದ್ದಾರೆ. ಮೇಲ್ನೋಟಕ್ಕೆ ಇದು ಸತ್ಯದಂತೆ ಕಾಣುತ್ತದೆ ಕೂಡಾ.
 
ಆದರೆ ಇದು ನಿಜವಾದ ಸತ್ಯ ಅಲ್ಲ. ಇದಕ್ಕೆ ಸಂಬಂಧಿಸಿದಂತೆ ಸಂಪಾದಕರು ಕೊಟ್ಟಿದ್ದ ಇನ್ನೊಂದು ಸಲಹೆ ಕುತೂಹಲಕರವಾಗಿತ್ತು. `ಸರ್ಕಾರೇತರ ಅದರಲ್ಲೂ ಮುಖ್ಯವಾಗಿ ಅಸಂಪ್ರದಾಯಿಕವಾದ, ಉದಾಹರಣೆಗೆ ಕ್ರಿಕೆಟ್, ಸಿನೆಮಾ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಂದ ಅನುಭವವನ್ನು ಬರೆಸಬೇಕು, ಆ ಮೂಲಕ ಅವರನ್ನು ಸ್ಪೂರ್ತಿದಾಯಕರನ್ನಾಗಿ ಬಿಂಬಿಸಬೇಕು` ಎನ್ನುವುದು ಅವರ ಅಭಿಪ್ರಾಯವಾಗಿತ್ತು. 

ಆದರೆ ಅಂತಹವರನ್ನು ಹುಡುಕಲು ಹೊರಟಾಗ ಆದ ಅನುಭವ ಉತ್ತೇಜನಕಾರಿಯಾಗಿರಲಿಲ್ಲ. ಸಾಂಪ್ರದಾಯಿಕವಾಗಿ ದಲಿತರ ಪ್ರಾತಿನಿಧ್ಯ ಇಲ್ಲದೆ ಇರುವ ಹಲವಾರು ಕ್ಷೇತ್ರಗಳಲ್ಲಿ ಈಗ ದಲಿತರಿದ್ದಾರೆ ಎನ್ನುವುದು ನಿಜ. ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಗುರುತು ಬಹಿರಂಗಕ್ಕೆ ಇಚ್ಚಿಸುವುದಿಲ್ಲ. ಇದರಿಂದಾಗಿ ಈ ಬಗ್ಗೆ ಲೇಖನ ಪ್ರಕಟಣೆ ಸಾಧ್ಯವಾಗಲಿಲ್ಲ.

ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿರುವ ದಲಿತರು ತಮ್ಮ ಜಾತಿಯನ್ನು ಬಹಿರಂಗಪಡಿಸಲು ಇಚ್ಚಿಸುವುದಿಲ್ಲ. ರಾಜಕೀಯದಲ್ಲಿ ಜಾತಿ ಒಂದು ಬಂಡವಾಳದ ರೂಪದಲ್ಲಿ ಕೆಲಸ ಮಾಡುವುದರಿಂದ ಅಲ್ಲಿ  ದಲಿತರು ಪೈಪೋಟಿಗೆ ಬಿದ್ದು ಜಾತಿಯನ್ನು ಘೋಷಿಸಿಕೊಳ್ಳುತ್ತಾರೆ. 

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ದಲಿತ ಸಾಹಿತ್ಯ ಚಳುವಳಿ ಶಕ್ತಿಶಾಲಿ ರೂಪದಲ್ಲಿ ಸಾಗಿಬಂದ ಕಾರಣದಿಂದಾಗಿ ಆ ಕ್ಷೇತ್ರದಲ್ಲಿಯೂ ದಲಿತ ಲೇಖಕರು ತಮ್ಮ ಗುರುತನ್ನು ಬಹಿರಂಗಪಡಿಸಲು ಹಿಂಜರಿಯುವುದಿಲ್ಲ. 

ಆದರೆ ಬೇರೆ ಕ್ಷೇತ್ರಗಳಲ್ಲಿ ಅಂತಹ ಸ್ಥಿತಿ ಇಲ್ಲ. ದಲಿತರೆನ್ನುವುದು ಬಹಿರಂಗಗೊಂಡರೆ ಬಹಳ ಕಷ್ಟಪಟ್ಟು ಗಳಿಸಿಕೊಂಡಿರುವ ಸ್ಥಾನಕ್ಕೆ ಕುತ್ತು ಬರಬಹುದು ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ. ಇದು ಕಣ್ಣಿಗೆ ಕಾಣಿಸಿಕೊಳ್ಳದ ಮತ್ತು ರಹಸ್ಯವಾಗಿ ಕಾರ್ಯರೂಪದಲ್ಲಿರುವ ಅಸ್ಪೃಶ್ಯತೆ. 

ಹಳ್ಳಿಗಳಲ್ಲಿ ಎಲ್ಲರ ಕಣ್ಣಿಗೆ ಕಾಣಿಸುವಂತೆ ಬಹಿರಂಗವಾಗಿ ನಡೆಯುತ್ತಿರುವ `ಮುಟ್ಟದಿರುವ` ಇಲ್ಲವೆ `ಒಳಗೆ ಕರೆದುಕೊಳ್ಳದ` ಸಾಮಾನ್ಯ ಬಗೆಯ ಅಸ್ಪೃಶ್ಯತೆಗಿಂತ ಭಿನ್ನವಾದುದು. ನಗರದಲ್ಲಿ ದಲಿತರಿಗೆ ಮನೆಯೊಳಗೆ ಪ್ರವೇಶ ಇರುತ್ತದೆ, ಜತೆಯಲ್ಲಿಯೇ ಕೂತು ಊಟಮಾಡುವ ಅವಕಾಶವೂ ಇರುತ್ತದೆ. 

ಆದರೆ ಅದೇ ದಲಿತ ಯುವಕ ಯಾವುದೋ ಉದ್ಯೋಗಕ್ಕೆ ಅರ್ಜಿ ಹಾಕಿದರೆ ಅದನ್ನು ಮೆತ್ತಗೆ ಪಕ್ಕಕ್ಕೆ ಸರಿಸಲಾಗುತ್ತದೆ. ಸರ್ಕಾರಿ ಇಲಾಖೆಗಳಲ್ಲಿ ಭರ್ತಿಯಾಗದೆ ಬಿದ್ದಿರುವ ಬ್ಯಾಕ್‌ಲಾಗ್ ಹುದ್ದೆಗಳ ಹಿಂದೆಯೂ ಇಂತಹದ್ದೇ ಹುನ್ನಾರ ಇದೆ. ಪರಿಣಾಮದ ದೃಷ್ಟಿಯಿಂದ ನೋಡಿದರೆ ಇದು ಹಳ್ಳಿಗಳಲ್ಲಿ ನಡೆಯುವ ಅಸ್ಪೃಶ್ಯತೆಗಿಂತಲೂ ಕ್ರೂರವಾದುದು.
 
ಬಹಿರಂಗವಾಗಿ ಆಚರಿಸಲಾಗುವ ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸಬಹುದು, ಅದರ ವಿರುದ್ಧ ಹೋರಾಟಕ್ಕೆ ಕಾನೂನಿನ ಬೆಂಬಲವೂ ಇದೆ. ಆದರೆ ಕಣ್ಣಿಗೆ ಕಾಣದ ಎರಡನೆ ಬಗೆಯ ಅಸ್ಪೃಶ್ಯತೆಯನ್ನು ಎದುರಿಸಲು ಅಂತಹ ಯಾವ ಹತಾರಗಳೂ ಸದ್ಯಕ್ಕೆ ಇಲ್ಲ, ಸುಲಭದಲ್ಲಿ ಶತ್ರುವರ್ಗ ರಚಿಸುವ ವ್ಯೆಹಗಳು ಬಡಪಾಯಿ ದಲಿತರಿಗೆ ಗೊತ್ತಾಗುವುದೂ ಇಲ್ಲ. 

ದಲಿತ ಸಮುದಾಯದ ಯಶಸ್ವಿ ವ್ಯಕ್ತಿಗಳೆಲ್ಲರೂ ಇಂತಹ ಆತಂಕದಿಂದಲೇ ತಮ್ಮ  ಗುರುತನ್ನು ಬಚ್ಚಿಡುತ್ತಾರೆ ಎಂದು ಸಾರಸಗಟಾಗಿ ಹೇಳುವುದು ಕೂಡಾ ಸರಿಯಾಗಲಾರದು. ದೇಶ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರಾಗಿರುವ ವಿಜಯಕೃಷ್ಣ ತಮ್ಮನ್ನು ದಲಿತರೆಂದು ಗುರುತಿಸಿಕೊಳ್ಳಲೇ ಇಲ್ಲ, ಈಗಲೂ ಯಾರಾದರೂ ತಮ್ಮ ಜಾತಿ ಮೂಲಕ ಗುರುತಿಸುವುದು ಅವರಿಗೆ ಇಷ್ಟವಾಗುವುದಿಲ್ಲ. 

ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಆ ರೀತಿ ನಡೆದುಕೊಂಡಿದ್ದರೆ ಅದಕ್ಕೆ ಕಾರಣಗಳು ಇರಬಹುದು. ಆದರೆ ಈಗ ? ಖ್ಯಾತ ಸಂಗೀತಗಾರ ಇಳಯರಾಜಾ ಅವರು  ಇಂದು ಯಾವ ಎತ್ತರಕ್ಕೆ ಏರಿದ್ದಾರೆಂದರೆ ಅವರು ದಲಿತರೆಂದು ಹೇಳಿಕೊಂಡರೂ ಆ ಕಾರಣಕ್ಕಾಗಿ ಅವರನ್ನು ಈಗ ಇರುವ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಾಗಲಾರದು.
 
ಪೊಲೀಸ್ ಸೇವೆಯಿಂದ ನಿವೃತ್ತರಾಗಿರುವ ಡಾ.ಅಜಯಕುಮಾರ್‌ಸಿಂಗ್ ದಲಿತರೆಂದು ಹೇಳಿಕೊಳ್ಳುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಇಂತಹ ಪ್ರಭಾವಶಾಲಿ ದಲಿತ ಸಾಧಕರು  ಜಾತಿ ರಹಸ್ಯವನ್ನು ಕಾಪಾಡಿಕೊಂಡು ಬರುವುದನ್ನು ಸಮರ್ಥಿಸಿಕೊಳ್ಳುವುದು ಕಷ್ಟ.

ಇತ್ತೀಚೆಗೆ ನಮ್ಮ ಪುರವಣಿಯೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ರಂಗಕರ್ಮಿಯ ಪರಿಚಯ ಪ್ರಕಟವಾಯಿತು. ಅದನ್ನು ಓದಿದ ಸ್ನೇಹಿತರೊಬ್ಬರು ದಲಿತ ಕಲಾವಿದ ಎಂದು ಕರೆದಿದ್ದು ಸರಿಯೇ ಎಂದು ಪ್ರಶ್ನಿಸಿದರು. ಇವೆಲ್ಲವೂ ಚರ್ಚೆ ನಡೆಯಬೇಕಾದ ಸೂಕ್ಷ್ಮ ವಿಚಾರಗಳು. ಒಬ್ಬ ಕಳ್ಳನನ್ನೊ, ವಂಚಕನನ್ನೋ ಆತ ಹುಟ್ಟಿದ ಜಾತಿ ಮೂಲಕ ಪರಿಚಯಿಸುವುದು  (ಉದಾಹರಣೆಗೆ ಚಂದಪ್ಪ ಹರಿಜನ) ಖಂಡಿತ ಸರಿ ಅಲ್ಲ.
 
ವ್ಯಕ್ತಿಯೊಬ್ಬ ನಡೆಸಿರುವ ಅಪರಾಧಕ್ಕೂ, ಆತ ಹುಟ್ಟಿದ ಜಾತಿಗೂ ಸಂಬಂಧ ಇರುವುದಿಲ್ಲ. ಆದರೆ ಉತ್ತಮ ಕೆಲಸ ಮಾಡಿರುವ ಇಲ್ಲವೆ ಇತರರಿಗೆ ಸ್ಪೂರ್ತಿ ನೀಡಬಲ್ಲಂತಹ ಸಾಧನೆ ಮಾಡಿದ  ದಲಿತ ವ್ಯಕ್ತಿಯನ್ನು ದಲಿತನೆಂದು ಯಾಕೆ ಪರಿಚಯಿಸಬಾರದು ಎಂದು ಕೇಳುವವರಿದ್ದಾರೆ. 

ದಲಿತ ಸಾಧಕರು ತಮ್ಮ ಜಾತಿಯನ್ನು ಬಹಿರಂಗ ಪಡಿಸುವುದರಿಂದ, ಕೀಳರಿಮೆಯಿಂದ ಬಳಲುತ್ತಿರುವ ಕೋಟ್ಯಂತರ ದಲಿತ ಯುವಕ-ಯುವತಿಯರಿಗೆ ಸ್ಫ್ಪೂರ್ತಿ ನೀಡಿದಂತಾಗುತ್ತದೆ ಎನ್ನುವುದು ಅವರ ವಾದ. ವಿಜಯಕೃಷ್ಣ, ಇಳಯರಾಜಾ ಇಲ್ಲವೇ ಇತ್ತೀಚಿನ ಯಶಸ್ವಿ ಚಿತ್ರ `ಸಂಜು ವೆಡ್ಸ್ ಗೀತಾ` ಚಿತ್ರದ ನಿರ್ದೇಶಕ ನಾಗಶೇಖರ್ ಅವರು ಜಾತಿಯ ಬಲದಿಂದ ಸಾಧನೆಯ ಶಿಖರ ಏರಿದವರಲ್ಲ.
 
ಆದರೆ ಜಾತಿ ಎನ್ನುವ ಹೊರೆಯನ್ನು ಬೆನ್ನಮೇಲೆ ಕಟ್ಟಿಕೊಂಡು ಸಾಧನೆಯ ಶಿಖರವನ್ನು ಏರಿದ ಅವರ ಪ್ರಯತ್ನ ಖಂಡಿತ ಇತರ ದಲಿತರು ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಪ್ರೇರೇಪಿಸುವಂತಹದ್ದು. ಈ ಹಿನ್ನೆಲೆಯಲ್ಲಿ ದಲಿತ ಐಡೆಂಟಿಟಿಯ ಬಿಕ್ಕಟ್ಟನ್ನು ಇನ್ನಷ್ಟು ಚರ್ಚೆಗೆ ಒಡ್ಡುವ ಅಗತ್ಯ ಇದೆ.

ದಲಿತ ರಾಜಕಾರಣಕ್ಕೆ ಯಾರು ಮಾದರಿ? April 16, 2012

`ನಾ ವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.
 
ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ. 

ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.
 
ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ. 

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.
ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು. 

1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ. 

ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು. 

ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.
 
ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ. 

ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು. 

ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ. 

ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ  ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು. 

ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ  ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.

1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು. 

ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.

ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.
 
ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ. 

ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು.  ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.

1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು. 

ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು. 

ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.

ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ. 

ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು. 

ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ. 

ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.