Showing posts with label ಪ್ರಾದೇಶಿಕ ಪಕ್ಷ. Show all posts
Showing posts with label ಪ್ರಾದೇಶಿಕ ಪಕ್ಷ. Show all posts

Monday, December 19, 2011

ಕನ್ನಡಿಗರು ಒಲ್ಲದ ಪ್ರಾದೇಶಿಕ ರಾಜಕಾರಣ

ಕರ್ನಾಟಕದ ಇಬ್ಬರು ರಾಜಕೀಯ ನಾಯಕರು ಇತ್ತೀಚೆಗೆ ಪ್ರಾದೇಶಿಕ ಪಕ್ಷ ರಚನೆಯ ಕನಸು ಕಾಣತೊಡಗಿದ್ದಾರೆ. ಒಬ್ಬರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನೊಬ್ಬರು ಮಾಜಿ ಸಚಿವ ಶ್ರಿರಾಮುಲು.
ರಾಜ್ಯದ ನೆಲ-ಜಲ-ಭಾಷೆಯನ್ನು ಪ್ರೀತಿಸುವ, ಪೋಷಿಸುವ ಮತ್ತು ರಕ್ಷಿಸುವಂತಹ ಪ್ರಾದೇಶಿಕ ಪಕ್ಷವೊಂದರ ಕನಸನ್ನು ಕಂಡಿರುವ ಮತ್ತು ಈಗಲೂ ಕಾಣುತ್ತಿರುವ ಕನ್ನಡಿಗರು ಬಹುಸಂಖ್ಯೆಯಲ್ಲಿ ನಮ್ಮಲ್ಲಿದ್ದಾರೆ.
ಪ್ರಾದೇಶಿಕ ಪಕ್ಷಗಳ ಹಿಡಿತದ ರಾಜ್ಯಗಳನ್ನು `ನೆರೆಮನೆ~ಗಳಾಗಿ ಹೊಂದಿರುವ ಕರ್ನಾಟಕ, ಬಲಿಷ್ಠ ಪ್ರಾದೇಶಿಕ ಪಕ್ಷದ ಕೊರತೆಯಿಂದಾಗಿ ಗಡಿತಂಟೆ, ನೀರು ಹಂಚಿಕೆ, ಕೇಂದ್ರದ ಸಂಪನ್ಮೂಲದಲ್ಲಿನ ಪಾಲಿನಂತಹ ಸೂಕ್ಷ್ಮ ವಿಚಾರಗಳಲ್ಲಿ ಅನ್ಯಾಯಕ್ಕೀಡಾಗುತ್ತಾ ಬಂದಿರುವುದು ಕೂಡಾ ಸುಳ್ಳಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೆರೆಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ, ಎನ್‌ಸಿಪಿ, ತೆಲುಗುದೇಶಂನಂತಹ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಹಿತರಕ್ಷಣೆಗಾಗಿ ಬಳಸಿಕೊಳ್ಳುತ್ತಾ ಬಂದಿರುವ ನಿದರ್ಶನಗಳೂ ನಮ್ಮ ಕಣ್ಣಮುಂದೆ ಇವೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಬಗೆಗಿನ ಕನ್ನಡಿಗರ ಒಲವು ಕರ್ನಾಟಕದ ಮುನ್ನಡೆಗೆ ಕಾಲ್ತೊಡಕಾಗಿ ಹೋಯಿತೇನೋ ಎಂಬ ಚಿಂತೆ ಭಾಷಾಂಧ ಕನ್ನಡಿಗರನ್ನು ಮಾತ್ರವಲ್ಲ, ಹೃದಯ ವೈಶಾಲ್ಯದ ಕನ್ನಡಿಗರನ್ನೂ ಒಮ್ಮಮ್ಮೆ ಕಾಡುತ್ತಿರುವುದು ಸತ್ಯ.
ಆದರೆ ರಾಜ್ಯದ ರಾಜಕೀಯ ಪರಂಪರೆಯನ್ನು ನೋಡಿದರೆ ಇಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಗಳಿಸಿರುವ ಉದಾಹರಣೆಗಳು ಸಿಗುವುದಿಲ್ಲ.
ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮೆರೆದಾಡುತ್ತಿದ್ದರೂ ರಾಜ್ಯದ ಜನತೆ ಮಾತ್ರ ಇಲ್ಲಿಯ ವರೆಗೆ ಅದರ ಪ್ರಭಾವಕ್ಕೊಳಗಾಗದೆ ದೂರವೇ ಉಳಿದುಬಿಟ್ಟಿದ್ದಾರೆ.
ಇದಕ್ಕೆ ಪ್ರಾದೇಶಿಕ ಪಕ್ಷ ಕಟ್ಟಲು ಪ್ರಯತ್ನಿಸಿದ ರಾಜಕೀಯ ನಾಯಕರ ಆತ್ಮವಂಚನೆಯ ನಡವಳಿಕೆಗಳೂ ಕಾರಣ. ಇಂತಹದ್ದರಲ್ಲಿ ಯಡಿಯೂರಪ್ಪ ಮತ್ತು ಶ್ರಿರಾಮುಲು ಅವರು ರಾಜಕೀಯ ಬ್ಲಾಕ್‌ಮೇಲ್‌ಗಷ್ಟೇ `ಪ್ರಾದೇಶಿಕ ಪಕ್ಷದ ಗುಮ್ಮ~ನನ್ನು ಬಳಸದೆ ನಿಜಕ್ಕೂ ಅದನ್ನು ಕಟ್ಟಲು ಹೊರಟರೆ ಯಶಸ್ಸು ಕಾಣಬಹುದೇ?
ಪ್ರಾದೇಶಿಕ ಪಕ್ಷ ರಚನೆಯ ಹಲವಾರು ಅವಕಾಶಗಳು ಬಂದು ಹೋಗಿರುವುದನ್ನು ಕರ್ನಾಟಕ ರಾಜಕಾರಣದ ಇತಿಹಾಸ ಹೇಳುತ್ತಿದೆ. ಅಂತಹ ಮೊದಲ ಅವಕಾಶ ದೇವರಾಜ ಅರಸು ಅವರಿಗೆ ಒದಗಿ ಬಂದಿತ್ತು.

ಕಾಂಗ್ರೆಸ್ ವಿರುದ್ಧದ ರಾಜಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಜನ ಬೆಂಬಲ ಸಿಗದೆ ಇದ್ದರೂ ವಿಚಲಿತರಾಗದ ಅರಸು ಅವರು ತಮ್ಮ ಕೊನೆಯ ದಿನಗಳಲ್ಲಿ `ಕ್ರಾಂತಿರಂಗ~ವನ್ನು ಕಟ್ಟಿದ್ದರು. ಆದರೆ, ಅದನ್ನು ಮುನ್ನಡೆಸಲು ಅವರು ಉಳಿಯಲಿಲ್ಲ.
ಅವರು ಬದುಕಿದ್ದರೆ ಪ್ರಾದೇಶಿಕ ಪಕ್ಷವನ್ನು ರಾಜ್ಯ ಪಡೆಯುತ್ತಿತ್ತೋ ಏನೋ? ಹೀಗೆ ಅಂದುಕೊಳ್ಳಲು ಕಾರಣ ಇದೆ. ಕರ್ನಾಟಕದ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟು, ಅದರ ವಿರೋಧಿ ಪಕ್ಷಗಳ ಬಗ್ಗೆ ಒಲವು ತೋರಿಸಿದ್ದೇ ಎಪ್ಪತ್ತರ ದಶಕದ ಅಂತ್ಯ ಮತ್ತು ಎಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ.
1983ರಲ್ಲಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದದ್ದೇ ಇದಕ್ಕೆ ಸಾಕ್ಷಿ. ಆಗ ಅರಸು ಬದುಕಿದ್ದರೆ ಅವರೇ ಅದಕ್ಕೆ ನಾಯಕರಾಗುತ್ತಿದ್ದರು. ಜನತಾ ಪಕ್ಷದ ಜತೆ ಕ್ರಾಂತಿರಂಗ ವಿಲೀನಗೊಳ್ಳದೆ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಆಗ ಅವಕಾಶ ಇತ್ತು.
ಎರಡನೇ ಅವಕಾಶ ಗೋಕಾಕ್ ಚಳವಳಿಯ ನಂತರದ ದಿನಗಳಲ್ಲಿ ಸೃಷ್ಟಿಯಾಗಿತ್ತು. ರೈತ, ದಲಿತ ಮತ್ತು ಭಾಷಾ ಚಳವಳಿಗಳಿಂದ ಪಕ್ವಗೊಂಡಿದ್ದ ರಾಜ್ಯದ ರಾಜಕಾರಣ ಪ್ರಾದೇಶಿಕ ಪಕ್ಷದ ಹುಟ್ಟನ್ನು ಎದುರು ನೋಡುತ್ತಿದ್ದ ಕಾಲ ಅದು. ಬಹುಶಃ ನಟ ರಾಜಕುಮಾರ್ ರಾಜಕೀಯ ಪ್ರವೇಶಿಸಲು ಒಪ್ಪಿಕೊಂಡಿದ್ದರೆ  ಪ್ರಾದೇಶಿಕ ಪಕ್ಷ ರಚನೆಯಾಗುತ್ತಿತ್ತು.

ಆದರೆ ವರನಟ ನಿರಾಕರಿಸಿದ ಕಾರಣ ಅದು ಸಾಧ್ಯವಾಗದೆ ಹೋಯಿತು. ಅದರ ಲಾಭ ಪಡೆದದ್ದು ಜನತಾರಂಗ ಎಂಬ ಮೈತ್ರಿಕೂಟಕ್ಕೆ. ಈ ಕೂಟಕ್ಕೆ ಸಂಪೂರ್ಣವಾಗಿ ಪ್ರಾದೇಶಿಕ ಪಕ್ಷದ ರೂಪ ಇರಲಿಲ್ಲ.
ಅದರೊಳಗಿದ್ದ ಕ್ರಾಂತಿರಂಗ ಪ್ರಾದೇಶಿಕ ಪಕ್ಷವಾದರೂ, ಒಟ್ಟು ಜನತಾರಂಗ ಎನ್ನುವುದು ಕ್ರಾಂತಿರಂಗ, ಜನತಾ ಪಕ್ಷ ಮತ್ತು ಎಡಪಕ್ಷಗಳು ಕೂಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಕಟ್ಟಿದ ಮೈತ್ರಿಕೂಟವಾಗಿತ್ತು.
ಮೂರನೆಯ ಅವಕಾಶ ಕೂಡಿಬಂದದ್ದು ಮಾತ್ರವಲ್ಲ, ಅದನ್ನು ಬಳಸಿಕೊಂಡು ಸೀಮಿತ ರೂಪದಲ್ಲಿಯಾದರೂ ಯಶಸ್ಸು ಗಳಿಸಿದ್ದು ಎಸ್. ಬಂಗಾರಪ್ಪನವರು.
1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೊರಬಂದ ಬಂಗಾರಪ್ಪನವರು ಕಟ್ಟಿದ `ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) 1994ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಏಳುವರೆಯಷ್ಟು ಮತಗಳನ್ನು ಗಳಿಸಿ ಹತ್ತುಸ್ಥಾನಗಳನ್ನು ಗೆದ್ದಿತ್ತು.
ಕರ್ನಾಟಕದ ಪ್ರಾದೇಶಿಕ ಪಕ್ಷಗಳ ಮಟ್ಟಿಗೆ ಈಗಲೂ ಇದೇ ದಾಖಲೆ. ಬೇರೆ ಯಾವ ಪ್ರಾದೇಶಿಕ ಪಕ್ಷವೂ ಚುನಾವಣೆಯಲ್ಲಿ ಇಷ್ಟು ಯಶಸ್ಸನ್ನೂ ಗಳಿಸಿಲ್ಲ.
ಆದರೆ ಬಂಗಾರಪ್ಪನವರ ಈ ಸಾಧನೆ ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣವಾಯಿತೇ ಹೊರತು ಅದರಿಂದ ಅವರ ಪಕ್ಷಕ್ಕಾಗಲಿ, ರಾಜ್ಯದ ಜನರಿಗಾಗಲಿ ಲಾಭವಾಗಲಿಲ್ಲ.
ಪ್ರಾದೇಶಿಕ ಪಕ್ಷ ಕಟ್ಟುವ ಛಾತಿ ಇದ್ದ ಎಚ್.ಡಿ.ದೇವೇಗೌಡರು ಒಂದು ಹಂತದಲ್ಲಿ `ಕರ್ನಾಟಕ ವಿಕಾಸ ವೇದಿಕೆ~ಯನ್ನು ಕಟ್ಟಿ ಊರೂರೂ ಅಲೆಯತೊಡಗಿದಾಗ ಕರ್ನಾಟಕದ ಬಹುದಿನಗಳ ಆಸೆಯೊಂದು ಈಡೇರುತ್ತದೆಯೇನೋ ಎಂಬ ನಿರೀಕ್ಷೆ ಹುಟ್ಟಿತ್ತು.
ಆದರೆ ಅವರೂ ರಾಷ್ಟ್ರೀಯ ಪಕ್ಷದ ಹುಚ್ಚಿಗೆ ಬಿದ್ದು ಕೊನೆಗೆ ಜನತಾಪಕ್ಷದ ಜತೆಯೇ ಲೀನರಾದರು. ಪ್ರಾದೇಶಿಕ ಪಕ್ಷದ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಪ್ರಧಾನಿ ಪಟ್ಟಕ್ಕೇರಿದ ನಂತರ ರಾಷ್ಟ್ರ ರಾಜಕಾರಣದ ದೌರ್ಬಲ್ಯದಿಂದ ಅವರು ಹೊರಗೆ ಬರಲೇ ಇಲ್ಲ.
ರಾಷ್ಟ್ರೀಯ ನಾಯಕರಾಗಿಯೇ ಉಳಿಯುವ ಹಂಬಲ ಮತ್ತು ಮೈತ್ರಿಕೂಟದ ಯುಗದಲ್ಲಿ ಮತ್ತೊಮ್ಮೆ ಅನಿರೀಕ್ಷಿತ ಬೆಳವಣಿಗೆ ಘಟಿಸಬಹುದೆಂಬ ದುರಾಸೆ ಇದಕ್ಕೆ ಕಾರಣ ಇರಬಹುದು. ಆದ್ದರಿಂದ ಎಚ್.ಡಿ.ಕುಮಾರಸ್ವಾಮಿ ಪ್ರಾದೇಶಿಕ ಪಕ್ಷ ಕಟ್ಟುವ ಆಸಕ್ತಿ ತೋರಿದರೂ ದೇವೇಗೌಡರು ಅದಕ್ಕೆ ಹಸಿರು ನಿಶಾನೆ ತೋರಿಸುತ್ತಲೇ ಇಲ್ಲ.
ದೇವೇಗೌಡರು ಪ್ರಧಾನಿಯಾದ ನಂತರ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದಾಗ ಮತ್ತೆ ಪ್ರಾದೇಶಿಕ ಪಕ್ಷದ ಚರ್ಚೆ ಪ್ರಾರಂಭವಾಗಿತ್ತು. ಹೆಗಡೆ ಅವರು ಕಟ್ಟಿದ `ನವನಿರ್ಮಾಣ ವೇದಿಕೆ~ಗೆ ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಬೆಂಬಲವೂ ವ್ಯಕ್ತವಾಗಿತ್ತು.
ನಾಯಕತ್ವದ ಕೊರತೆಯಿಂದ ಕೊರಗುತ್ತಿದ್ದ ರಾಜ್ಯದ ಲಿಂಗಾಯತ ಸಮುದಾಯ ಹೆಗಡೆ ಅವರಲ್ಲಿ ತಮ್ಮ ನಾಯಕನನ್ನು ಕಾಣುತ್ತಾ ಬಂದದ್ದು ಕೂಡಾ ಈ ಜನಬೆಂಬಲಕ್ಕೆ ಒಂದು ಕಾರಣ.

ಆದರೆ ಹೆಗಡೆಯವರಿಗೆ ಪ್ರಾದೇಶಿಕ ಪಕ್ಷದ ಬಗ್ಗೆ ನಂಬಿಕೆಯೇ ಇರಲಿಲ್ಲ. ಅದನ್ನು ಕಟ್ಟಿ ಬೆಳೆಸುವ ಶ್ರಮಜೀವಿಯೂ ಅವರು ಆಗಿರಲಿಲ್ಲ. ಆದ್ದರಿಂದ `ನವನಿರ್ಮಾಣ ವೇದಿಕೆ~ಯನ್ನು  `ಲೋಕಶಕ್ತಿ~ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತಿಸುವಾಗಲೂ ಅದಕ್ಕೆ ರಾಷ್ಟ್ರೀಯ ಪಕ್ಷದ ರೂಪು ಕೊಟ್ಟು ಅದನ್ನು ಎಡಬಿಡಂಗಿ ಮಾಡಿಬಿಟ್ಟರು.
ಈ ಸಾಲಿನಲ್ಲಿ ಕೊನೆಯ ಅವಕಾಶ ಒದಗಿಬಂದದ್ದು ಸಿದ್ದರಾಮಯ್ಯನವರಿಗೆ. ಆದರೆ ಆಟದ ಕಣಕ್ಕೆ ಇಳಿಯುವ ಮೊದಲೇ ಅವರು ಸೋಲೊಪ್ಪಿಕೊಂಡು `ಗೆಲ್ಲುವ ತಂಡ~ ಎಂದು ನಂಬಿ ಕಾಂಗ್ರೆಸ್ ಸೇರಿಕೊಂಡುಬಿಟ್ಟರು.
ಅವರು ಕಾಂಗ್ರೆಸ್ ಸೇರಿದ್ದ ದಿನ ಎಐಸಿಸಿ ಕಚೇರಿ ಸಭಾಂಗಣದಲ್ಲಿ ಪಕ್ಷದ ನಾಯಕರನ್ನು ಎಡಬಲದಲ್ಲಿ ಕೂರಿಸಿಕೊಂಡು ತೋರಿದ್ದ ಆತ್ಮವಿಶ್ವಾಸವನ್ನು ಸಂಸತ್‌ಭವನದ ಎದುರಿನ ಬೋಟ್‌ಕ್ಲಬ್‌ನಲ್ಲಿ ತನ್ನ ಕಾಲಮೇಲೆ ನಿಂತು ತೋರಿಸಿದ್ದರೆ ಲಾಲು, ಮುಲಾಯಂ, ಪವಾರ್, ಕರುಣಾನಿಧಿ, ಚಂದ್ರಬಾಬು ನಾಯ್ಡು ಅವರಂತೆ ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗುತ್ತಿರುವ ಪ್ರಾದೇಶಿಕ ಪಕ್ಷದ ನಾಯಕರಾಗುತ್ತಿದ್ದರು.
ಆದರೆ ಸಿದ್ದರಾಮಯ್ಯನವರು `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಇಲ್ಲ, ಅದಕ್ಕಾಗಿ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ~ ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿದ್ದದ್ದೇ ಆಗ.
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಊರಲು ಯಾಕೆ ಆಗುತ್ತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಗುಂಡೂರಾವ್ ದುರಾಡಳಿತದ ವಿರುದ್ಧದ ಚಳವಳಿಗಳ ದಿನಗಳಲ್ಲಿ ಸೃಷ್ಟಿಯಾಗಿದ್ದ ಅವಕಾಶವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಯ ಪ್ರಯತ್ನಗಳು ತಾವಿದ್ದ ಪಕ್ಷದಿಂದ ಅನ್ಯಾಯ-ಅಪಮಾನಕ್ಕೀಡಾದ ಕಾರಣಕ್ಕೆ ಸಿಡಿದು ಹೊರಬಂದ ರಾಜಕೀಯ ನಾಯಕರಿಂದ ನಡೆದುದು.
ರಾಜ್ಯದ ಹಿತಕ್ಕೆ ಆಗಿರುವ ಅನ್ಯಾಯ ಇಲ್ಲವೇ ರಾಜ್ಯದ ಜನರಿಗೆ ಆಗಿರುವ ಅಪಮಾನಕ್ಕಲ್ಲ ಎನ್ನುವುದು ಮುಖ್ಯ ಕಾರಣ. ಅರಸು, ಬಂಗಾರಪ್ಪ, ದೇವೇಗೌಡ, ಹೆಗಡೆ, ಸಿದ್ದರಾಮಯ್ಯ- ಈ ಎಲ್ಲರ ವಿಷಯದಲ್ಲಿಯೂ ಇದು ಸತ್ಯ.
ಇದಕ್ಕೆ ಎರಡು ಅಪವಾದಗಳೆಂದರೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತಸಂಘದ ರಾಜಕೀಯ ಮುಖವಾಗಿ ಕಟ್ಟಿದ `ಕನ್ನಡ ನಾಡು~ ಮತ್ತು ಸಾಹಿತಿ ಪಿ.ಲಂಕೇಶ್ ಅವರು ವೈಯಕ್ತಿಕ ರಾಜಕೀಯ ಪ್ರಯೋಗದ ರೀತಿಯಲ್ಲಿ ಕಟ್ಟಿದ `ಪ್ರಗತಿರಂಗ~.
ಈ ಎರಡೂ ಪ್ರಯತ್ನಗಳಿಗೆ ರಾಜ್ಯದ ಎಲ್ಲ ಜನವರ್ಗಗಳ ಪ್ರಾತಿನಿಧಿಕ ಬೆಂಬಲವೂ ಇರದಿದ್ದ ಕಾರಣ ಅವುಗಳು ಕೂಡಾ ವಿಫಲ ಪ್ರಯೋಗಗಳಾಗಿ ಕಣ್ಣುಮುಚ್ಚಿದವು.
ಭಾಷೆ-ಪ್ರದೇಶಕ್ಕೆ ಸಂಬಂಧಿಸಿದಂತೆ ಅಂಧರಾಗಿ ಯೋಚಿಸದ ಮತ್ತು ಅತಿ ಎನಿಸುವಷ್ಟು ಉದಾರಿಗಳಾಗಿರುವ ಕನ್ನಡಿಗರ ಸ್ವಭಾವವೂ ಪ್ರಾದೇಶಿಕ ಪಕ್ಷದ ರಾಜಕಾರಣಕ್ಕೆ ವಿರುದ್ಧವಾಗಿದೆ.
ದುಡುಕು ಸ್ವಭಾವದವರಂತೆ ಕಾಣುವ ಬಿ.ಎಸ್.ಯಡಿಯೂರಪ್ಪನವರು ಪ್ರತ್ಯೇಕ ಪಕ್ಷ ರಚನೆಯ ಪ್ರಶ್ನೆ ಬಂದಾಗೆಲ್ಲ ಅಚ್ಚರಿ ಮೂಡುವಷ್ಟು ಎಚ್ಚರಿಕೆಯಿಂದ ವರ್ತಿಸುತ್ತಾ ಬಂದಿರಲು ಇದೂ ಕಾರಣ ಇರಬಹುದು.
ಈಗಲೂ ಅವರ ಸುತ್ತ ಇರುವ ಸಚಿವರು ಮತ್ತು ಸಂಸದರು `ಒಂದು ಕೈ ನೋಡಿಯೇ ಬಿಡುವ~ ಎಂದು ತೊಡೆ ತಟ್ಟುತ್ತಿದ್ದರೂ ಯಡಿಯೂರಪ್ಪನವರು ತಾನಿರುವ ಪಕ್ಷದ ಬಗ್ಗೆ ತನ್ನ ಬದ್ಧತೆಯನ್ನು ಸಾರುತ್ತಾ ಆ  ನಿರ್ಧಾರವನ್ನು ಉಪಾಯದಿಂದಲೇ ಮುಂದೂಡುತ್ತಾ ಬಂದಿದ್ದಾರೆ.
ಹಿಂದಿನ ಕೆಲವು ಬಿಕ್ಕಟ್ಟುಗಳ ಸಂದರ್ಭಗಳಲ್ಲಿಯೂ ಅವರು ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷದ ಜತೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೆಂಬ ಗಾಳಿಸುದ್ದಿ ಹರಡಿತ್ತೇ ಹೊರತು ಪ್ರಾದೇಶಿಕ ಪಕ್ಷ ರಚನೆಯ ಆಲೋಚನೆ ಗಾಳಿಯಲ್ಲಿಯೂ ತೇಲಿ ಬಂದಿರಲಿಲ್ಲ.

ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು.
ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ~ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ.
ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು.
ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ.
ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯ ವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.

Monday, May 16, 2011

ಪ್ರಾದೇಶಿಕ ಪಕ್ಷಗಳ ಬಗ್ಗೆ ಹೆಚ್ಚುತ್ತಿರುವ ಒಲವು

‘ಪ್ರಾದೇಶಿಕ ಪಕ್ಷಗಳೆಂಬ ಶಾಪದಿಂದಾಗಿಯೇ ಸರ್ಕಾರಗಳು ಪೂರ್ಣಾವಧಿ ಬಾಳದೆ ಅನಿಶ್ಚಿತ ರಾಜಕೀಯದ ಕೆಟ್ಟಕಾಲ ಪ್ರಾರಂಭವಾಗಿರುವುದು. ಇವುಗಳಿಗೆ ಅಂಟಿಕೊಂಡಿರುವ ಪಕ್ಷಾಂತರದ ಪಿಡುಗಿನಿಂದಾಗಿಯೇ ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿರುವುದು..’ ಎಂದೆಲ್ಲಾ ಆರೋಪಿಸುವವರಿದ್ದಾರೆ.
 ಆದರೆ ಇತ್ತೀಚೆಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಸೇರಿದಂತೆ ಇತ್ತೀಚಿನ ಬಹುತೇಕ  ಚುನಾವಣೆಗಳಲ್ಲಿ  ಭಾರತೀಯ ಮತದಾರರು ಮೇಲಿನ ಆರೋಪಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಂತೆ ಕಾಣುತ್ತಿಲ್ಲವೇ? ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆಂದು ಅನಿಸುವುದಿಲ್ಲವೇ?
ಪಶ್ಚಿಮಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಎಡಿಎಂಕೆಗಳೇ ಗೆಲುವಿನ ಮುಂಚೂಣಿಯಲ್ಲಿರುವುದು.ಅಸ್ಸಾಂನಲ್ಲಿ ತರುಣ್ ಗೋಗೋಯ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಪ್ರಾದೇಶಿಕ ಪಕ್ಷದ ನಾಯಕನ ಶೈಲಿಯಲ್ಲಿಯೇ ರಾಜ್ಯಭಾರ ಮಾಡಿಕೊಂಡು ಬಂದಿರುವುದು.

ಸಿಪಿಎಂನ ದೆಹಲಿ ನಾಯಕರಿಂದ ನಿರಂತರವಾಗಿ ಅವಮಾನಕ್ಕೆಡಾಗುತ್ತಾ ಬಂದ ವಿ.ಎಸ್ ಅಚ್ಯುತಾನಂದನ್ ಅವರನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಕೇರಳ ಮತದಾರರ ರೋಷದಲ್ಲಿ ‘ಮಲೆಯಾಳಿ ಸ್ವಾಭಿಮಾನ’ದ ಅಭಿವ್ಯಕ್ತಿ ಇರಲಿಲ್ಲವೇ?
ಕಾಂಗ್ರೆಸ್ ವಿರುದ್ಧ ಬಂಡೆದ್ದ ಪುದುಚೇರಿಯ ಸರಳ-ಸಜ್ಜನ ನಾಯಕ ಎನ್.ರಂಗಸ್ವಾಮಿ ಅವರನ್ನು ಗೆಲ್ಲಿಸಿದ್ದು ಆ ಸಣ್ಣ ರಾಜ್ಯದ ಮತದಾರರ ಆತ್ಮಾಭಿಮಾನದ ದೊಡ್ಡ ಶಕ್ತಿಯಲ್ಲವೇ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ಮಾತ್ರವಲ್ಲ, ದೇಶದ ಎರಡನೇ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಭೌಗೋಳಿಕ ಮಿತಿ ಕೂಡಾ ಬಯಲಾಗಿದೆ.

ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಐವರು ಶಾಸಕರು ಆಯ್ಕೆಯಾಗಿರುವುದನ್ನು ಬಿಟ್ಟರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಕನಿಷ್ಠ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗಿಲ್ಲ.
ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವಾಗ ಬಿಜೆಪಿ ಈ ಐದು ರಾಜ್ಯಗಳಲ್ಲಿರುವ ಒಟ್ಟು 115 ಲೋಕಸಭಾ ಸ್ಥಾನಗಳನ್ನು ಪಕ್ಕಕ್ಕೆ ಇಟ್ಟು ರಾಜಕೀಯ ಬಲದ ಲೆಕ್ಕಾಚಾರ ಮಾಡಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಗಿಂತ ಮೊದಲು ವಿಧಾನಸಭಾ ಚುನಾವಣೆ ನಡೆಯಲಿರುವ 19 ರಾಜ್ಯಗಳ ರಾಜಕೀಯದ ಮೇಲೆ ಕಣ್ಣಾಡಿಸಿದರೂ ರಾಷ್ಟ್ರೀಯ ಪಕ್ಷಗಳ ಬಲ ಕುಂದುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

ಈ 19 ರಾಜ್ಯಗಳಲ್ಲಿ ಎಂಟರಲ್ಲಿ (ಆಂಧ್ರಪ್ರದೇಶ, ದೆಹಲಿ, ಗೋವಾ, ಮಣಿಪುರ, ರಾಜಸ್ತಾನ,ಮೇಘಾಲಯ ಮತ್ತು ಮಿಜೋರಾಂ) ಕಾಂಗ್ರೆಸ್ ಅಧಿಕಾರದಲ್ಲಿದೆ. ಇನ್ನೊಂದು ರಾಜ್ಯವಾದ ಜಮ್ಮು ಮತ್ತು ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಜತೆಗಿನ ಮೈತ್ರಿ ಸರ್ಕಾರ ಇದೆ.
ಎರಡು ಅವಧಿಗಳ ಆಡಳಿತ ವಿರೋಧಿ ಅಲೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳುವಳಿ ಮತ್ತು ಜಗನ್‌ಮೋಹನ್ ರೆಡ್ಡಿಯವರ ಬಂಡಾಯದಿಂದಾಗಿ ಆಂಧ್ರಪ್ರದೇಶದ ಕಾಂಗ್ರೆಸ್ ಆಗಲೇ ನಿರ್ಗಮನದ ಹಾದಿಯಲ್ಲಿದೆ. ಮೂರನೇ ಅವಧಿಗೆ ಚುನಾವಣೆ ಎದುರಿಸಲಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದಾಗಿ ಮುಖ ಮಸಿಮಾಡಿಕೊಂಡು ಮತದಾರರನ್ನು ಎದುರಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಕಷ್ಟ. ಈಶಾನ್ಯದ ಮೂರು ಸಣ್ಣ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್ ಭರವಸೆ ಇಡಬಲ್ಲಂತಹ ಏಕೈಕ ರಾಜ್ಯ ರಾಜಸ್ತಾನ ಮಾತ್ರ. ಅದು ಪಕ್ಷಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರ ವೈಯುಕ್ತಿಕ ವರ್ಚಸ್ಸನ್ನು ಅವಲಂಬಿಸಿದೆ.
ರಾಜಸ್ತಾನ  ಮತ್ತು ದೆಹಲಿ ರಾಜ್ಯಗಳಲ್ಲಿ ತೃತೀಯರಂಗದ ಯಾವ ಪಕ್ಷವೂ ಇಲ್ಲದಿರುವ ಕಾರಣ ಕಾಂಗ್ರೆಸ್‌ನ ನಷ್ಟ  ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಲಾಭವಾಗಬಹುದು.
ಬಿಜೆಪಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ  ಆರು ರಾಜ್ಯಗಳು ( ಗುಜರಾತ್,ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ) ವಿಧಾನಸಭಾ ಚುನಾವಣೆ ಎದುರಿಸಲಿವೆ. 1995ರಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಮೂರನೇ ಚುನಾವಣೆಯನ್ನು ಎದುರಿಸುವ ತಯಾರಿಯಲ್ಲಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿಯೂ ಬಿಜೆಪಿಯದ್ದು ಈಗ ಎರಡನೇ ಅವಧಿಯ ಸರ್ಕಾರ. ಗುಜರಾತ್‌ನಲ್ಲಿ ಸತತ ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ರಾಜಕೀಯವಾಗಿ ಮಾತ್ರವಲ್ಲ ನೈತಿಕವಾಗಿಯೂ ಕುಗ್ಗಿಹೋಗಿದೆ. ಆದ್ದರಿಂದ ನರೇಂದ್ರಮೋದಿ ಈಗಲೂ ಸುರಕ್ಷಿತವಾಗಿರುವಂತೆ ಕಾಣುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರಗಳ ಆರೋಪಗಳು ಎಷ್ಟೇ ಇದ್ದರೂ ಈ ವರೆಗಿನ ಉಪಚುನಾವಣೆಗಳಲ್ಲಿ ಮತದಾರರು ಅವರ ಕೈಬಿಟ್ಟಿಲ್ಲ. ಭ್ರಷ್ಟ್ರರ ಬೆನ್ನಟ್ಟಿ ಮನೆಗೆ ಅಟ್ಟುತ್ತಿರುವ ದೇಶದ ಪ್ರಜ್ಞಾವಂತ ಮತದಾರರಿಗೆ ಸವಾಲು ಹಾಕುವಂತಿದೆ ಕರ್ನಾಟಕದ ಮತದಾರರ ವರ್ತನೆ.

ಇದು ಬಿಜೆಪಿಗೆ ನೆರವಾಗಲೂ ಬಹುದು.ಆದರೆ ಇದೇ ಮಾತನ್ನು ಇನ್ನಿಬ್ಬರು ಮುಖ್ಯಮಂತ್ರಿಗಳಾದ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಮಣ್‌ಸಿಂಗ್ ಅವರ ಬಗ್ಗೆ ಹೇಳುವ ಹಾಗಿಲ್ಲ. ಇಬ್ಬರೂ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಾದೇಶಿಕ ಪಕ್ಷಗಳ ಸತ್ವಪರೀಕ್ಷೆಯ ಫಲಿತಾಂಶ ಮೊದಲು ಗೊತ್ತಾಗಲಿರುವುದು ಮುಂದಿನವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ. ಕಾಂಗ್ರೆಸ್ ಪಾಲಿಗೆ ಸಂಖ್ಯೆ ಮತ್ತು ಪ್ರತಿಷ್ಠೆಗಳೆರಡರ ದೃಷ್ಟಿಯಿಂದಲೂ ಈ ಚುನಾವಣೆ ನಿರ್ಣಾಯಕ. ರಾಹುಲ್‌ಗಾಂಧಿಯ ರಾಜಕೀಯ ಭವಿಷ್ಯ ಕೂಡಾ ಈ ಚುನಾವಣೆಯನ್ನು ಅವಲಂಬಿಸಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಮುಖಭಂಗ ಅನುಭವಿಸಿದರೂ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಮೈಕೊಡವಿ ಎದ್ದುನಿಂತು ಶಕ್ತಿಪ್ರದರ್ಶನ ಮಾಡಿತ್ತು.ವಿಧಾನಸಭಾ ಚುನಾವಣೆಯಲ್ಲಿಯೂ ಈ ಮ್ಯಾಜಿಕ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ರಾಹುಲ್‌ಗಾಂಧಿ.

ಆದರೆ ಪ್ರಾದೇಶಿಕ ರಾಜಕಾರಣದ ಎಲ್ಲ ವರಸೆಗಳನ್ನು ಬಲ್ಲ ಮಾಯಾವತಿ ಮತ್ತು ಮುಲಾಯಂಸಿಂಗ್ ಅವರಂತಹ ಚಾಣಕ್ಷ ರಾಜಕಾರಣಿಗಳನ್ನು ನಿರ್ಲಕ್ಷಿಸುವುದು ಸಾಧ್ಯ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯ ಜತೆಯಲ್ಲಿಯೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಒರಿಸ್ಸಾದಲ್ಲಿ ಬಿಜು ಜನತಾದಳಕ್ಕೆ ಸಮರ್ಥ ಎದುರಾಳಿಯೇ ಇಲ್ಲದಿರುವಂತಹ ಸ್ಥಿತಿ ಇದೆ. ಅಲ್ಲಿ ಕಾಂಗ್ರೆಸ್ ಒಂದಷ್ಟು ಸ್ಥಾನಗಳನ್ನು ಗಳಿಸಲೂ ಬಹುದು.

ಆದರೆ ಬಿಜೆಪಿಗೆ ಹೆಚ್ಚಿನ ಲಾಭವಾಗದು. ಭವಿಷ್ಯದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನವೀನ್ ಪಟ್ನಾಯಕ್  ಹ್ಯಾಟ್ರಿಕ್ ಸಾಧಿಸಿದರೆ ದೆಹಲಿ ಕಡೆ ಹೊರಡುವ ಸಾಧ್ಯತೆ ಇರುವುದರಿಂದ ಆ ರಾಜ್ಯದ ಮತದಾರರು ಆಶೀರ್ವದಿಸಲೂ ಬಹುದು.
ಪಂಜಾಬ್‌ನಲ್ಲಿ ಮಾತ್ರ ಪ್ರಾದೇಶಿಕ ಪಕ್ಷವಾದ ಅಕಾಲಿದಳದ ಅಧಿಕಾರ ಕೊನೆಗೊಂಡು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಿವೆ.
ಈ ರೀತಿ ಮೇಲ್ನೋಟಕ್ಕೆ ಪ್ರಾದೇಶಿಕ ಪಕ್ಷಗಳ ಬಲವರ್ಧನೆಯಾಗುತ್ತಿರುವಂತೆ ಕಾಣುತ್ತಿರುವುದು ನಿಜವಾದರೂ ವಾಸ್ತವ ಹಾಗಿಲ್ಲ. ಇದಕ್ಕೆ ಕಾರಣ ಜನಬೆಂಬಲದ ಕೊರತೆ ಅಲ್ಲ.

ಪ್ರಾದೇಶಿಕ ಪಕ್ಷಗಳ ಮುಖ್ಯ ದೌರ್ಬಲ್ಯವಾದ ‘ದಾಯಾದಿ ಕಲಹ’ ಅವುಗಳನ್ನು ದುರ್ಬಲಗೊಳಿಸುತ್ತಿದೆ. ಈ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಿರುವಂತೆ ಕಂಡರೂ ನಿಜವಾಗಿಯೂ ಇವುಗಳು ಕಾದಾಡುವುದು ಇನ್ನೊಂದು ಪ್ರಾದೇಶಿಕ ಪಕ್ಷದ ಜತೆಯಲ್ಲಿಯೇ.

ಹಾಗಿಲ್ಲದೆ ಇದ್ದಿದ್ದರೆ  ಲೋಕಸಭೆಯಲ್ಲಿ 205 ಸದಸ್ಯ ಬಲದ ಕಾಂಗ್ರೆಸ್ ಮತ್ತು 117 ಸದಸ್ಯ ಬಲದ ಬಿಜೆಪಿ ಎರಡೂ ವಿರೋಧ ಪಕ್ಷದಲ್ಲಿ ಕೂರಬೇಕಿತ್ತು. ಒಟ್ಟು 221 ಸದಸ್ಯಬಲದ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿರಬೇಕಿತ್ತು.

ಹಾಗಾಗುವುದೇ ಇಲ್ಲ. ಎಡಪಕ್ಷಗಳನ್ನು ಹೊರತುಪಡಿಸಿ ಲೋಕಸಭೆಯಲ್ಲಿ 33 ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ ಹೊಂದಿವೆ. ಇವುಗಳಲ್ಲಿ ಒಂಭತ್ತು ಯುಪಿಎ ಜತೆಯಲ್ಲಿವೆ, ಆರು ಎನ್‌ಡಿಎ ಜತೆಯಲ್ಲಿವೆ ಮತ್ತು ಹದಿನೆಂಟು ಪಕ್ಷಗಳು ಎರಡೂ ಮೈತ್ರಿಕೂಟದಲ್ಲಿ ಸೇರದೆ ಸ್ವತಂತ್ರವಾಗಿದ್ದುಕೊಂಡು ಆಗಾಗ ಷರತ್ತುಬದ್ದ ಬೆಂಬಲ ನೀಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಬಿಎಸ್‌ಪಿ ಮತ್ತು ಎಸ್‌ಪಿ ಜತೆಗಿನ ಕಾಂಗ್ರೆಸ್ ಪಕ್ಷದ ಸ್ನೇಹ ಮತ್ತು ದ್ವೇಷದ ಸಂಬಂಧ.
ಈ ಪ್ರಾದೇಶಿಕ ಪಕ್ಷಗಳ ಜಾತಕ ಬಿಡಿಸಿದರೆ ಅವುಗಳಲ್ಲಿ ಹೆಚ್ಚಿನವು ಒಂದರ ಜತೆ ಒಂದು ಹೊಂದುವುದೇ ಇಲ್ಲ. ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಬಿಹಾರದಲ್ಲಿ ಜೆಡಿ (ಯು) ಮತ್ತು ಆರ್‌ಜೆಡಿ, ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ, ಅಸ್ಸಾಂನಲ್ಲಿ ಅಸ್ಸಾಂ ಗಣ  ಪರಿಷತ್ ಮತ್ತು ಎಐಯುಡಿಎಫ್ ಪರಸ್ಪರ ವಿರೋಧಪಕ್ಷಗಳು.

ಇವುಗಳು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಆದರೆ ತನ್ನ ವಿರೋಧಿಯಾದ ಪ್ರಾದೇಶಿಕ ಪಕ್ಷದ ಜತೆ ಕೈಜೋಡಿಸಲಾರದು. ಪ್ರಾದೇಶಿಕ ಪಕ್ಷಗಳ ಈ ದೌರ್ಬಲ್ಯವನ್ನೇ ಬಳಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಅಧಿಕಾರ ಹಂಚಿಕೊಂಡಿರುವುದು. ಪ್ರಾದೇಶಿಕ ಪಕ್ಷಗಳ ನಾಯಕರು ಭ್ರಷ್ಟರು, ಅಧಿಕಾರದಾಹಿಗಳು ಎಂಬ ಪ್ರಚಾರ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ತಮ್ಮ ಕೈಯಲ್ಲಿಯೇ ಇರಿಸಿಕೊಳ್ಳಲು ನೆರವಾಗಿದೆ.
ಪ್ರಾದೇಶಿಕ ಪಕ್ಷಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವಿರೋಧ-ಅಸಹನೆ ವ್ಯಕ್ತವಾಗಲು ಮುಖ್ಯ ಕಾರಣ- ಪ್ರಾದೇಶಿಕ ಪಕ್ಷಗಳ ಸಾಧನೆಯ ಮೌಲ್ಯಮಾಪನವನ್ನು ದೇಶದ ಉತ್ತರ ಭಾಗದ ರಾಜ್ಯಗಳಿಂದ ಪ್ರಾರಂಭಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುವುದು.

ದೇಶದ ಮೊದಲ ಪ್ರಾದೇಶಿಕ ಪಕ್ಷದ ರಚನೆಯಾಗಿದ್ದು ತಮಿಳುನಾಡಿನಲ್ಲಿ. 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದ ಡಿಎಂಕೆಯಿಂದಾಗಿ ದೂಳೀಪಟವಾದ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಕೂಡಾ ಸ್ವಂತಬಲದಿಂದ ಮರಳಿ ಅಧಿಕಾರಕ್ಕೆ ಬರಲಾಗಿಲ್ಲ. ಕಳೆದ ನಾಲ್ಕು ದಶಕಗಳಿಂದ ಕಳಗಂಗಳೇ ಹಂಚಿಕೊಂಡು ಆ ರಾಜ್ಯವನ್ನು ಆಳಿವೆ.
ಆಂಧ್ರಪ್ರದೇಶದಲ್ಲಿ 1983ರ ನಂತರದ 23 ವರ್ಷಗಲ್ಲಿ ನಡುವಿನ ಏಳುವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿದ್ದದ್ದು ತೆಲುಗುದೇಶಂ ಎಂಬ ಪ್ರಾದೇಶಿಕ ಪಕ್ಷದ ಸರ್ಕಾರ. ಅಭಿವೃದ್ಧಿಯ ಯಾವ ಮಾನದಂಡದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಇತರ ರಾಜ್ಯಗಳಿಗಿಂತ ಹಿಂದೆ ಉಳಿದಿದೆ?

ಕೇರಳದಲ್ಲಿ ಹೆಚ್ಚುಕಡಿಮೆ ಎಡಪಕ್ಷಗಳು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಾ ಬಂದಿವೆ. ಬಿಜು ಜನತಾದಳವನ್ನು ಸತತ ಎರಡು ಬಾರಿ ಗೆಲ್ಲಿಸಿದ ಒರಿಸ್ಸಾದ ಮತದಾರರು ಮೂರ್ಖರಿರಲಾರರು.

ಮಹಾರಾಷ್ಟ್ರದಲ್ಲಿಯೂ ಕಳೆದ ಹದಿನೈದು ವರ್ಷಗಳಲ್ಲಿ ಒಂದೋ ಎನ್‌ಸಿಪಿ ಇಲ್ಲವೇ ಶಿವಸೇನೆಯನ್ನು ಕಟ್ಟಿಕೊಂಡ ಮೈತ್ರಿಕೂಟವೇ ಆಡಳಿತ ನಡೆಸಿರುವುದು. ದೇಶದ ವಾಣಿಜ್ಯ ರಾಜಧಾನಿಯನ್ನು ಹೊಂದಿರುವ ಆ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆಯೇ?
ಪ್ರಾದೇಶಿಕ ಪಕ್ಷಗಳೆಂದಾಕ್ಷಣ ಎಲ್ಲರ ಕಣ್ಣು  ಬಿಹಾರ ಮತ್ತು ಉತ್ತರಪ್ರದೇಶಗಳತ್ತ ಹೊರಳುತ್ತಿರುವುದೇ ದೊಡ್ಡ ಸಮಸ್ಯೆ. ಸರ್ಕಾರಗಳ ಸಾಧನೆಯ ಮೌಲ್ಯಮಾಪನವನ್ನು ಉತ್ತರದ ಬದಲಿಗೆ ದಕ್ಷಿಣದಿಂದ ಪ್ರಾರಂಭಿಸಿದರೆ ಪ್ರಾದೇಶಿಕ ಪಕ್ಷಗಳ ಬಗೆಗಿನ ಪೂರ್ವಗ್ರಹ ನಿವಾರಣೆಯಾದೀತೇನೋ?
ಯಾವ ಪ್ರಾದೇಶಿಕ ಪಕ್ಷದ ನಾಯಕನೂ ಅಭಿವೃದ್ಧಿ ಬಗೆಗಿನ ಈಚರ್ಚೆಯನ್ನು ಎತ್ತಿಕೊಳ್ಳುತ್ತಲೇ ಇಲ್ಲ. ಎಲ್ಲರೂ ಮತದಾರರ ಪ್ರಾದೇಶಿಕ ಆಶೋತ್ತರಗಳನ್ನು ಒಳಗೊಂಡಿರುವ ಬೆಂಬಲವನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಸೆಣಸಾಟದಲ್ಲಿದ್ದಾರೆ.
ಮತದಾರರು ರಾಷ್ಟ್ರೀಯ ಪಕ್ಷಗಳಿಂದ ರೋಸಿಹೋಗಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದರೆ, ‘ಪ್ರಾದೇಶಿಕ ಪಾಳೆಗಾರರು’ ಆ ಬೆಂಬಲವನ್ನು ರಾಷ್ಟ್ರೀಯ ಪಕ್ಷಗಳ ಯಜಮಾನರ ಪಾದಗಳಿಗೆ ಅರ್ಪಿಸಿ ಅಧಿಕಾರದ ಫಲವುಂಡು ಕೃತಾರ್ಥರಾಗುತ್ತಿದ್ದಾರೆ.