Showing posts with label ಚಳವಳಿ. Show all posts
Showing posts with label ಚಳವಳಿ. Show all posts

Friday, August 24, 2012

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ August 13, 2012


ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.

`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.

ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.

ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.

ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.

ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.

ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.
 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲ`ವನ್ನು ಅಣ್ಣಾತಂಡ ನಂಬಿತು.ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು,ಭೂಮಿ, ಉದ್ಯೊಗ, ಶಿಕ್ಷಣ,ಆರೋಗ್ಯ,ಆತ್ಮಗೌರವ...ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.

Tuesday, May 1, 2012

ಕಮರಿಹೋದ ಅಣ್ಣಾ ಚಳವಳಿ ಎಂಬ ಕನಸು April 09, 2012


ಭ್ರಷ್ಟಾಚಾರ ವಿರೋಧಿಸಿ ನಡೆದ ದೇಶದ ಮೂರನೇ ಹೋರಾಟದ ಗರ್ಭಪಾತವಾಗಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ನಡೆದ ಚಳವಳಿಗಳು ಕೂಡಾ  ಭ್ರಷ್ಟಾಚಾರ ನಿರ್ಮೂಲನೆಯ ಗುರಿಯನ್ನೇ ಹೊಂದಿದ್ದವು.

ಆ ಎರಡೂ ಚಳವಳಿಗಳು ಅಂತಿಮವಾಗಿ ಚುನಾವಣೆಯಲ್ಲಿ ಭ್ರಷ್ಟರ ಸೋಲಿನ ಮೂಲಕ ಸತ್ತೆಯ ಬದಲಾವಣೆಯಲ್ಲಿ ಕೊನೆಗೊಂಡಿದ್ದವು. ತನ್ನ ನೇತೃತ್ವದ ಚಳವಳಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡಿರುವ ಅಣ್ಣಾ ಹಜಾರೆ ಅವರೂ ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ನಿರ್ಣಾಯಕ ಹೋರಾಟ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಆದರೆ, ಹಿಂದಿನ ಎರಡು ಭ್ರಷ್ಟಾಚಾರ ವಿರೋಧಿ ಚಳವಳಿಗಳ ಜತೆ ಕೆಲವು ಅತ್ಯುತ್ಸಾಹಿಗಳು ಹೋಲಿಸುತ್ತಾ ಬಂದ ಅಣ್ಣಾ ಹಜಾರೆ ಚಳವಳಿ ಮುಂದೆ ಹೆಜ್ಜೆ ಇಡಲಾಗದೆ ನಡು ಹಾದಿಯಲ್ಲಿಯೇ ಏದುಸಿರು ಬಿಡುತ್ತಿರುವುದನ್ನು ನೋಡಿದರೆ ಬಹಳ ದೂರ ಸಾಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಕಳೆದ ವರ್ಷದ ಏಪ್ರಿಲ್ ಐದರಂದು ದೇಶಕ್ಕೆ ಅಷ್ಟೇನೂ ಪರಿಚಿತರಲ್ಲದ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದಾಗ ಹರಿದುಬಂದ ಜನಬೆಂಬಲವನ್ನು ಮುಗ್ಧ ಕಣ್ಣುಗಳಿಂದ ನೋಡಿದವರಲ್ಲಿ ಹೆಚ್ಚಿನವರು ಆಗಲೇ ಲೋಕಪಾಲರ ನೇಮಕವಾಗಿಯೇ ಬಿಟ್ಟಿತು ಎಂಬ ಸಂಭ್ರಮದಲ್ಲಿದ್ದರು.

ಒಂದು ವರ್ಷ ಕಳೆದ ಮೇಲೂ ಲೋಕಪಾಲರ ನೇಮಕದ ಮಸೂದೆಯನ್ನು ಸಂಸತ್ ಅಂಗೀಕರಿಸಿಲ್ಲ, ಅದಕ್ಕೆ ಅಂಗೀಕಾರ ದೊರೆಯುವ ಭರವಸೆಯೂ ಇಲ್ಲ. ಸದ್ಯಕ್ಕೆ ಇದು ಮುಗಿದ ಅಧ್ಯಾಯ.

ಇದನ್ನು ಇನ್ನೊಂದು `ಸ್ವಾತಂತ್ರ್ಯ ಹೋರಾಟ` ಎಂದು ಬಣ್ಣಿಸುತ್ತಾ ಅರಬ್ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿ ಇಲ್ಲಿಯೂ ನಡೆದೇ ಬಿಟ್ಟಿತು ಎಂಬ ಭ್ರಮೆಯನ್ನು ಸೃಷ್ಟಿಸಿದ್ದ ಮಾಧ್ಯಮಗಳು, ಮುಖ್ಯವಾಗಿ ಟಿವಿ ಚಾನೆಲ್‌ಗಳು, ಕೂಡಾ ಅಣ್ಣಾಹಜಾರೆ ಚಳವಳಿಯನ್ನು ಮರೆತುಬಿಟ್ಟಿವೆ. ವರ್ಷದ ಹಿಂದೆ ಹರಿದು ಬಂದ ಜನಸಾಗರ ಈಗ ಬೇಸಿಗೆಯ ಕಾಲದ ನದಿಯಂತಾಗಿದೆ.

ಅಣ್ಣಾ ಹಜಾರೆ ಉಪವಾಸ ಕೂತರೆ ಜಂತರ್‌ಮಂತರ್ ಮುಂದೆಯೇ ಜನಸೇರುತ್ತಿಲ್ಲ, ರಾಮಲೀಲಾ ಮೈದಾನವನ್ನು ತುಂಬುವುದು ಇನ್ನೂ ಕಷ್ಟ. ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದವರು ಆಗಲೇ ಮೌನವಾಗಿದ್ದಾರೆ.

ಇವೆಲ್ಲವನ್ನೂ ನೋಡಿಯೋ ಏನೋ, ತಮ್ಮ ಬೇಡಿಕೆ ಈಡೇರಿಕೆಗೆ `ಒಂದು ದಿನ ಇಲ್ಲವೇ ಒಂದು ಗಂಟೆಯನ್ನೂ ಕೊಡಲಾರೆ` ಎಂದು ಗುಡುಗುತ್ತಿದ್ದ ಅಣ್ಣಾ ಹಜಾರೆ ಅವರು ಈಗ ಒಂದೂವರೆ ವರ್ಷಗಳ ದೀರ್ಘ ಗಡುವನ್ನು ನೀಡಿದ್ದಾರೆ.

ಜೆ.ಪಿ. ಮತ್ತು ವಿ.ಪಿ. ನೇತೃತ್ವದ ಚಳವಳಿಗಳ ಹರಹು ಮತ್ತು ತೀವ್ರತೆ ಗುರಿ ಮುಟ್ಟುವವರೆಗೆ ಹೆಚ್ಚಾಗುತ್ತಾ ಹೋಗಿತ್ತೇ ಹೊರತು ಕಡಿಮೆಯಾಗಿರಲಿಲ್ಲ. ಆದರೆ, ಅಣ್ಣಾ ಚಳವಳಿ ನಡುಹಾದಿಯಲ್ಲಿಯೇ ಸೊರಗಿಹೋಗುತ್ತಿದೆ. ಒಂದು ಚಳವಳಿಯ ಸೋಲು-ಗೆಲುವು ಅದರ ಉದ್ದೇಶ, ಸಂಘಟನೆಯ ಬಲ ಮತ್ತು ಹೋರಾಟದ ದಾರಿಯನ್ನು ಅವಲಂಬಿಸಿರುತ್ತದೆ.

ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಅಣ್ಣಾ ಮತ್ತು ಅವರ ತಂಡದ ಸದಸ್ಯರು ಎಷ್ಟೇ ಭಾಷಣ ಮಾಡಿದರೂ ಉದ್ದೇಶವನ್ನು ಮಾತ್ರ ಲೋಕಪಾಲರ ನೇಮಕಕ್ಕೆ ಸೀಮಿತಗೊಳಿಸುತ್ತಾ ಬಂದಿದ್ದಾರೆ.

ಬಹುಮುಖ್ಯವಾದ ಚುನಾವಣಾ ಸುಧಾರಣೆ ಬಗ್ಗೆಯೂ ಅವರು ಹೆಚ್ಚು ಮಾತನಾಡುತ್ತಿಲ್ಲ. ಲೋಕಪಾಲರ ನೇಮಕವಾದ ಕೂಡಲೇ ಸಾರ್ವಜನಿಕ ಜೀವನದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಯಾಗಿ ಬಿಡುತ್ತದೆ ಎಂಬ ಭ್ರಮೆ ಅವರಿಗೂ ಇರಲಾರದು. ಆದರೆ ಅವರ ಮಾತುಗಳು ಮಾತ್ರ ಆ ಭ್ರಮೆಯನ್ನು ಹುಟ್ಟಿಸುವ ರೀತಿಯಲ್ಲಿಯೇ ಇವೆ. ಇದು ಬಹಳ ಸರಳೀಕೃತ ಅಭಿಪ್ರಾಯ.

ತಾವು ತಿಳಿದುಕೊಂಡಿರುವ ಭ್ರಷ್ಟಾಚಾರದ ಅರ್ಥ ಏನು ಎಂಬುದನ್ನು ಅಣ್ಣಾ ತಂಡ ಈ ವರೆಗೆ ಬಿಡಿಸಿ ಹೇಳಿಲ್ಲ. ಭ್ರಷ್ಟಾಚಾರ ಎಂದರೆ ಕೇವಲ ಸಾರ್ವಜನಿಕ ಹಣದ ದುರುಪಯೋಗ ಇಲ್ಲವೇ ಹಣದ ಸೋರಿಕೆ ಮಾತ್ರವೇ? ತಾಲ್ಲೂಕು ಕಚೇರಿಯ ಗುಮಾಸ್ತ ಪಡೆಯುವ ಲಂಚ ಮತ್ತು  ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ದಲ್ಲಾಳಿಗಳಿಂದ ಪಡೆಯುವ ಕಮಿಷನ್ ಎರಡನ್ನೂ ಒಂದೇ ಗುಂಪಿನಲ್ಲಿ ಸೇರಿಸಬಹುದೇ?

ಅಧಿಕಾರದ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ವಶೀಲಿ ಕೂಡಾ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತವೆಯೇ? ಅಧಿಕಾರದ ದುರುಪಯೋಗವೂ ಭ್ರಷ್ಟಾಚಾರದ ವ್ಯಾಖ್ಯೆಯಲ್ಲಿ ಸೇರಿಕೊಳ್ಳುವುದಿದ್ದರೆ ಯಾವ ಅಧಿಕಾರ? ರಾಜಕಾರಣದ ಮೂಲಕ ಗಳಿಸಿದ್ದೇ ಇಲ್ಲವೇ ಶ್ರೇಣಿಕೃತ ಸಮಾಜ ಮತ್ತು ಆರ್ಥಿಕ ಅಸಮಾನತೆಯ ವ್ಯವಸ್ಥೆಯ ನೆರವಿನಿಂದ ಪಡೆದುಕೊಂಡದ್ದೇ?

ಭ್ರಷ್ಟಾಚಾರವನ್ನು ಕೇವಲ ಕಾನೂನಿನ ಮೂಲಕ ವ್ಯಾಖ್ಯಾನಿಸುವುದು ಸರಿಯೇ? ಅದನ್ನು ನೈತಿಕ ದೃಷ್ಟಿಯಿಂದಲೂ ನೋಡುವುದು ಬೇಡವೇ?- ಈ ಪ್ರಶ್ನೆಗಳಿಗೆ ಅಣ್ಣಾ ತಂಡದ ಸದಸ್ಯರಲ್ಲಿ ಉತ್ತರ ಇಲ್ಲ, ಹುಡುಕಲು ಹೋದರೆ ಸಿಗುವ ಉತ್ತರ ಚಳವಳಿಗೆ ಇನ್ನಷ್ಟು ಮುಜುಗರ ಉಂಟುಮಾಡಬಹುದು.

ಇದಕ್ಕಾಗಿ `ಮೊದಲು ಲೋಕಪಾಲರು ಬರಲಿ` ಎಂಬ ಮಂತ್ರವನ್ನಷ್ಟೇ ಅವರು ಪಠಿಸುತ್ತಿದ್ದಾರೆ. ಬಹುಮುಖಗಳ ರಕ್ಕಸನಂತೆ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಕೇವಲ ಲೋಕಪಾಲರ ನೇಮಕದಿಂದ ನಾಶಮಾಡಬಹುದೆಂದು ಅಣ್ಣಾ ತಂಡ ಈಗಲೂ ತಿಳಿದುಕೊಂಡಿರುವುದೇ ಅವರ ಕಾಲಿನಡಿಯ ನೆಲ ಕುಸಿಯುತ್ತಿರುವುದಕ್ಕೆ ಕಾರಣ.

ಇನ್ನು ಸಂಘಟನೆ. ಚಳವಳಿಗೆ ಅಗತ್ಯವಾದ ಸಂಘಟನೆಯನ್ನು ಕಟ್ಟುವುದರಲ್ಲಿಯೂ ಅಣ್ಣಾ ತಂಡ ಸೋತಿದೆ. ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ಜತೆ ಸೇರಿಕೊಂಡಿರುವ ಎಪ್ಪತ್ತರ ದಶಕದ ನವನಿರ್ಮಾಣ ಚಳವಳಿ ಅವರಿಂದಲೇ ಪ್ರಾರಂಭವಾದುದಲ್ಲ. ಅದು ಭ್ರಷ್ಟಾಚಾರ ಇಲ್ಲವೇ ಸರ್ವಾಧಿಕಾರದ ವಿರುದ್ಧದ ಹೋರಾಟ ಆಗಿಯೂ ಪ್ರಾರಂಭವಾಗಿರಲಿಲ್ಲ.

ಅಹ್ಮದಾಬಾದ್‌ನ ಎಲ್.ಡಿ.ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ದ 1973ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಸಣ್ಣಮಟ್ಟದ ಪ್ರತಿಭಟನೆ ಬೆಳೆಯುತ್ತಾ ಹೋಗಿ ನಂತರದ ದಿನಗಳಲ್ಲಿ ಸ್ವತಂತ್ರಭಾರತದ ಅತ್ಯಂತ ಬಲಿಷ್ಠ ರಾಜಕೀಯ ನಾಯಕಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು.

ಅಣ್ಣಾ ತಂಡದ ರೀತಿಯಲ್ಲಿ ಅಹ್ಮದಾಬಾದ್‌ನ ವಿದ್ಯಾರ್ಥಿಗಳಿಗೂ ತಮ್ಮ ಹೋರಾಟಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಎಳೆಯರಾದರೂ ಪರಿಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಂಡ ವಿದ್ಯಾರ್ಥಿ ನಾಯಕರು ಒಂದೇ ತಿಂಗಳ ಅವಧಿಯಲ್ಲಿ ತಮ್ಮ ಹೋರಾಟಕ್ಕೆ ಸಾರ್ವಜನಿಕವಾದ ರೂಪ ಕೊಟ್ಟರು.

1973ರ ಜನವರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಅಹ್ಮದಾಬಾದ್ ಬಂದ್‌ಗೆ ಕರೆಕೊಟ್ಟಾಗ ಅವರ ಮುಖ್ಯ ಘೋಷಣೆ ಬೆಲೆ ಏರಿಕೆ ವಿರುದ್ಧವಾಗಿತ್ತು, ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ಧದ ಪ್ರತಿಭಟನೆ ನೇಪಥ್ಯಕ್ಕೆ ಸರಿದುಹೋಗಿತ್ತು.

ಎಪ್ಪತ್ತರ ದಶಕದ ಸಮಾಜ ಭ್ರಷ್ಟಾಚಾರ, ಬೆಲೆ ಏರಿಕೆ, ಆಹಾರ ಸಾಮಗ್ರಿಗಳ ಕೊರತೆ, ಸರ್ಕಾರಿ ನೌಕರರ ಸಂಬಳದ ಮೇಲೆ ಮಿತಿ ಹೇರಿಕೆ ಮೊದಲಾದ ಕಾರಣಗದಾಗಿ ಒಳಗಿಂದೊಳಗೆ ಕುದಿಯುತ್ತಿತ್ತು. ಅದು ಸಿಡಿಯಲು ಬೇಕಾದ ದಾರಿಯನ್ನಷ್ಟೇ ನವನಿರ್ಮಾಣ ಚಳವಳಿ ಮಾಡಿಕೊಟ್ಟಿತ್ತು.

ಅಣ್ಣಾ ಹಜಾರೆ ಉಪವಾಸ ಪ್ರಾರಂಭಿಸಿದಾಗ ದೇಶದಲ್ಲಿ ಎಪ್ಪತ್ತರ ದಶಕದ ಪರಿಸ್ಥಿತಿಯೇ ಇತ್ತು, ಈಗಲೂ ಇದೆ. ಒಂದಾದ ಮೇಲೆ ಒಂದರಂತೆ ಭ್ರಷ್ಟಾಚಾರದ ಹಗರಣಗಳು ಬಯಲಾಗತೊಡಗಿವೆ, ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿಹೋಗಿದ್ದಾರೆ, ಉದ್ಯೋಗದ ಅವಕಾಶಗಳು ಕಡಿಮೆಯಾಗತೊಡಗಿವೆ.

ಜನ ಎದುರಿಸುತ್ತಿರುವ ಈ ಎಲ್ಲ ಸಮಸ್ಯೆಗಳ ಗಂಗೋತ್ರಿ ಭ್ರಷ್ಟಾಚಾರದಲ್ಲಿಯೇ ಇದೆ. ಆದ್ದರಿಂದಲೇ ಅಣ್ಣಾ ಹಜಾರೆ ಚಳವಳಿಗೆ ಜನ ಪ್ರಾಮಾಣಿಕವಾಗಿಯೇ ಸ್ಪಂದಿಸಿದ್ದರು. ಆದರೆ, ಅದನ್ನು ಬಳಸಿಕೊಳ್ಳಲು ಚಳವಳಿಯ ನಾಯಕರು ಸೋತುಹೋದರು.

ನವನಿರ್ಮಾಣ ಚಳವಳಿಯ ನೇತೃತ್ವ ವಹಿಸಲು ಜೆಪಿ ಅಹ್ಮದಾಬಾದ್‌ಗೆ ಹೋಗಿದ್ದಾಗ ಆಗಲೇ ವಿದ್ಯಾರ್ಥಿ ಚಳವಳಿಗಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಚಿಮಣ್ ಬಾಯ್ ಪಟೇಲ್ ಸರ್ಕಾರವನ್ನು ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮಾಡಿಬಿಟ್ಟಿದ್ದರು.

ಆ ಚಳವಳಿಗಾರರಿಗೆ ಜೆಪಿಯ ಅಗತ್ಯಕ್ಕಿಂತ ಹೆಚ್ಚಾಗಿ ಜೆಪಿಗೆ ಆ ಚಳವಳಿಯ ಅಗತ್ಯ ಇತ್ತು.  `ನಾನು ಎರಡು ವರ್ಷಗಳ ಕಾಲ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಸಹಮತ ಮೂಡಿಸಲು ಪ್ರಯತ್ನಪಟ್ಟು ಸೋತುಹೋಗಿದ್ದೆ.

ಆಗ ನನ್ನ ಕಣ್ಣಿಗೆ ಬಿದ್ದ ಗುಜರಾತ್ ವಿದ್ಯಾರ್ಥಿಗಳು ನನಗೆ ದಾರಿ ತೋರಿಸಿದ್ದರು` ಎಂದು ಜೆಪಿಯವರೇ ವಿನಯಪೂರ್ವಕವಾಗಿ ಬರೆದುಕೊಂಡಿದ್ದಾರೆ. `ಅಣ್ಣಾ ಹಜಾರೆ ಅವರು ಸಂಸತ್‌ಗಿಂತಲೂ ಮೇಲು` ಎಂಬ ಅರವಿಂದ ಕೇಜ್ರಿವಾಲ್ ಅವರ ಮೂರ್ಖ ಹೇಳಿಕೆ ನೆನಪಾಗುತ್ತಿದೆಯೇ?

 ಒಂದು ಚಳವಳಿ ಯಶಸ್ವಿಯಾಗಬೇಕಾದರೆ ಅದರ ನೇತೃತ್ವ ವಹಿಸುವ ಸಂಘಟನೆಯ ಮೇಲೆ ಸಾಮಾನ್ಯ ಜನರಿಗೂ ನಂಬಿಕೆ ಇರಬೇಕಾಗುತ್ತದೆ. ಅಣ್ಣಾ ತಂಡದ ನಡೆ ಮೊದಲ ದಿನದಿಂದಲೇ ನಿಗೂಢವಾಗಿತ್ತು. ಪ್ರಾರಂಭದಲ್ಲಿಯೇ ಬೇರೆಬೇರೆ ಕಾರಣಗಳಿಗಾಗಿ ಅಲ್ಲಿಂದ ಹೊರನಡೆದವರು ಯೋಗಗುರು ರಾಮ್‌ದೇವ್; ನಂತರ ಸ್ವಾಮಿ ಅಗ್ನಿವೇಶ್, ರಾಜೀಂದರ್‌ಸಿಂಗ್, ವೇಣುಗೋಪಾಲ್ ಮೊದಲಾದವರು ಬಿಟ್ಟುಹೋದರು.

ಆಗಲೇ ಅಣ್ಣಾ ತಂಡದ ಉಳಿದ ಕೆಲವು ಸದಸ್ಯರ ಮೇಲೆ ಆರೋಪಗಳು ಕೇಳಿ ಬರತೊಡಗಿದ್ದವು. ಅದು ಮುಖ್ಯವಾಗಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದವು. ಅಷ್ಟು ಹೊತ್ತಿಗೆ ಇಡೀ ದೇಶದಲ್ಲಿ ಚಳವಳಿ ಪಸರಿಸಿತ್ತು.

`ಜನ ಸ್ವಂತ ಇಚ್ಛೆಯಿಂದ ಬರುತ್ತಿದ್ದಾರೆ` ಎಂದು ಹೇಳಿಕೊಂಡರೂ ಜನ ಸೇರಿಸುವುದು, ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಜೋಡಿಸುವುದು, ಸಂಪನ್ಮೂಲ ಕ್ರೋಡೀಕರಿಸುವುದು ಸುಲಭದ ಕೆಲಸ ಅಲ್ಲ.

ನೋಡುನೋಡುತ್ತಿದ್ದಂತೆಯೇ ಭ್ರಷ್ಟ ರಾಜಕಾರಣಿಗಳು, ದುಷ್ಟ ಆಲೋಚನೆಯ ಉದ್ಯಮಿಗಳು, ಆಷಾಢಭೂತಿ ಧರ್ಮಗುರುಗಳು, ಶಿಕ್ಷಣದ ವ್ಯಾಪಾರಿಗಳು, ರೋಗಿಗಳನ್ನು ಸುಲಿಯುವ ವೈದ್ಯರು, ಕಕ್ಷಿದಾರರನ್ನು ಕಾಡಿಸುವ ವಕೀಲರು ಹೀಗೆ ಎಲ್ಲರೂ ಸೇರಿಕೊಳ್ಳತೊಡಗಿದ್ದರು.

ಯಾರು ಪ್ರಾಮಾಣಿಕರು, ಯಾರು ಭ್ರಷ್ಟರು? ಎನ್ನುವುದನ್ನು ಗುರುತಿಸಲಾಗದ ಅಯೋಮಯ ಸ್ಥಿತಿ. ಸೇರಿದವರಲ್ಲಿ ನಿಜವಾದ ಕಾಳಜಿ ಹೊಂದಿದ್ದವರು ಎಷ್ಟು ಮಂದಿ ಇದ್ದರೆನ್ನುವುದನ್ನು ಹುಡುಕುವುದೇ ಕಷ್ಟವಾಗಿತ್ತು. ಜೆಪಿ ಪ್ರವೇಶಕ್ಕೆ ಮುನ್ನವೇ ಗುಜರಾತ್‌ನಲ್ಲಿ ತಾರಕಕ್ಕೇರಿದ್ದ ನವನಿರ್ಮಾಣ ಚಳವಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 80 ಮಂದಿ ಪೊಲೀಸ್ ಗುಂಡೇಟಿನಿಂದ ಪ್ರಾಣ ಕಳೆದುಕೊಂಡಿದ್ದರು.

ಅಂತಹ ಒಂದು ಗೋಲಿಬಾರ್ ನಡೆದಿದ್ದರೆ ಸತ್ಯಾಗ್ರಹದ ಶಿಬಿರದಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಅಣ್ಣಾ ಚಳವಳಿಗೆ ಏಟು ನೀಡಿದ್ದೇ ಅವರ ಸಂಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಹುಟ್ಟಿಕೊಳ್ಳತೊಡಗಿದ್ದ ಇಂತಹ ಗುಮಾನಿಗಳು.

ಇದನ್ನು ಇನ್ನಷ್ಟು ಬಲಪಡಿಸಿದ್ದು ಹರಿಯಾಣದ ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಣ್ಣಾ ತಂಡ ನಡೆಸಿದ್ದ ಪ್ರಚಾರ. ಅದರ ನಂತರ ನಡೆದ ಉತ್ತರಪ್ರದೇಶದ ಚುನಾವಣೆಯಲ್ಲಿ ಅಣ್ಣಾ ತಂಡದ ಸದಸ್ಯರನ್ನು ಯಾರೂ ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ.

ಕೊನೆಯದಾಗಿ ಹೋರಾಟದ ದಾರಿ. ಉದ್ದೇಶ ಉದಾತ್ತವಾಗಿದ್ದರೂ ಸಂಘಟನೆ  ಬಲವಾಗಿದ್ದರೂ ಹೋರಾಟದ ದಾರಿಯಲ್ಲಿ ಎಡವಿದರೆ ಚಳವಳಿ ಗುರಿಮುಟ್ಟುವುದು ಕಷ್ಟ. ಉಪವಾಸ ಬಹಳ ಪರಿಣಾಮಕಾರಿ ಹೋರಾಟದ ಅಸ್ತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಪವಾಸದ ಮೊದಲ ಉದ್ದೇಶ ಸ್ವಂತ ಆತ್ಮಾವಲೋಕನ, ಎರಡನೆಯದು, ಎದುರಾಳಿಯ ಆತ್ಮಪರಿವರ್ತನೆ.

ಈ ಉದ್ದೇಶಗಳಿಲ್ಲದ ಉಪವಾಸ `ಬ್ಲಾಕ್‌ಮೇಲ್` ಆಗುತ್ತದೆ. ಅದಕ್ಕಾಗಿಯೇ ಗಾಂಧೀಜಿಯವರು ಹದಿನಾರು ಬಾರಿ ಉಪವಾಸ ಮಾಡಿದ್ದರೂ ಆ ಅಸ್ತ್ರವನ್ನು ಅವರೆಂದೂ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲಿಲ್ಲ. ಅವರು ಬಳಸಿದ್ದೆಲ್ಲವೂ ಆತ್ಮಶುದ್ಧಿ ಮತ್ತು ಆತ್ಮಪರಿವರ್ತನೆಗಾಗಿ.

ಉಪವಾಸದ ಮೂಲಕ ಉದ್ದೇಶ ಸಾಧಿಸುವುದಕ್ಕಿಂತ ಹೆಚ್ಚಾಗಿ ಹುತಾತ್ಮನಾಗುವ ಆಸೆಯೇ ಹೆಚ್ಚಿದೆಯೋ ಏನೋ ಎಂದು ಅನಿಸುವ ರೀತಿಯಲ್ಲಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು ಸದಾ ಝಳಪಿಸುತ್ತಿರುತ್ತಾರೆ.

ಆದರೆ ಆತ್ಮಾವಲೋಕನಕ್ಕೆ ಅವರು ತಯಾರಿಲ್ಲ, ಆತ್ಮಪರಿವರ್ತನೆಗೆ ತಮ್ಮನ್ನು ಒಡ್ಡಿಕೊಳ್ಳುವಷ್ಟು ಅಧಿಕಾರರೂಢರು ಸೂಕ್ಷ್ಮಮತಿಗಳಾಗಿಲ್ಲ. ಈ ಸ್ಥಿತಿಯಲ್ಲಿ ಉಪವಾಸ ಕೇವಲ `ಬ್ಲಾಕ್‌ಮೇಲ್` ಆಗುವ ಅಪಾಯ ಇದೆ.
ಕೊನೆಗೂ ಇದರ ಅರಿವು ಅಣ್ಣಾ ಹಜಾರೆ ಅವರಿಗೂ ಆಗುತ್ತಿದೆಯೇನೋ? ಇತ್ತೀಚೆಗೆ ಅವರು ಆತ್ಮಾವಲೋಕನದ ಧಾಟಿಯಲ್ಲಿ `ದೇಶ ಸುತ್ತಿ ಜನಜಾಗೃತಿಗೊಳಿಸುವ` ಮಾತುಗಳನ್ನಾಡುತ್ತಿದ್ದಾರೆ. ಜಂತರ್ ಮಂತರ್‌ಗೆ ಹೋಗುವ ಮೊದಲು ಈ ಕೆಲಸ ಮಾಡಿದ್ದರೆ ಅವರ ಕೈಗೆ ತಮ್ಮ ಕನಸುಗಳನ್ನೆಲ್ಲ ಕೊಟ್ಟವರು ಭಗ್ನಹೃದಯಿಗಳಾಗುತ್ತಿರಲಿಲ್ಲ.