Showing posts with label ಅಣ್ಣಾ ಹಜಾರೆ. Show all posts
Showing posts with label ಅಣ್ಣಾ ಹಜಾರೆ. Show all posts

Tuesday, May 1, 2012

ಕಮರಿಹೋದ ಅಣ್ಣಾ ಚಳವಳಿ ಎಂಬ ಕನಸು April 09, 2012


ಭ್ರಷ್ಟಾಚಾರ ವಿರೋಧಿಸಿ ನಡೆದ ದೇಶದ ಮೂರನೇ ಹೋರಾಟದ ಗರ್ಭಪಾತವಾಗಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ನಡೆದ ಚಳವಳಿಗಳು ಕೂಡಾ  ಭ್ರಷ್ಟಾಚಾರ ನಿರ್ಮೂಲನೆಯ ಗುರಿಯನ್ನೇ ಹೊಂದಿದ್ದವು.

ಆ ಎರಡೂ ಚಳವಳಿಗಳು ಅಂತಿಮವಾಗಿ ಚುನಾವಣೆಯಲ್ಲಿ ಭ್ರಷ್ಟರ ಸೋಲಿನ ಮೂಲಕ ಸತ್ತೆಯ ಬದಲಾವಣೆಯಲ್ಲಿ ಕೊನೆಗೊಂಡಿದ್ದವು. ತನ್ನ ನೇತೃತ್ವದ ಚಳವಳಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡಿರುವ ಅಣ್ಣಾ ಹಜಾರೆ ಅವರೂ ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ನಿರ್ಣಾಯಕ ಹೋರಾಟ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಆದರೆ, ಹಿಂದಿನ ಎರಡು ಭ್ರಷ್ಟಾಚಾರ ವಿರೋಧಿ ಚಳವಳಿಗಳ ಜತೆ ಕೆಲವು ಅತ್ಯುತ್ಸಾಹಿಗಳು ಹೋಲಿಸುತ್ತಾ ಬಂದ ಅಣ್ಣಾ ಹಜಾರೆ ಚಳವಳಿ ಮುಂದೆ ಹೆಜ್ಜೆ ಇಡಲಾಗದೆ ನಡು ಹಾದಿಯಲ್ಲಿಯೇ ಏದುಸಿರು ಬಿಡುತ್ತಿರುವುದನ್ನು ನೋಡಿದರೆ ಬಹಳ ದೂರ ಸಾಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಕಳೆದ ವರ್ಷದ ಏಪ್ರಿಲ್ ಐದರಂದು ದೇಶಕ್ಕೆ ಅಷ್ಟೇನೂ ಪರಿಚಿತರಲ್ಲದ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದಾಗ ಹರಿದುಬಂದ ಜನಬೆಂಬಲವನ್ನು ಮುಗ್ಧ ಕಣ್ಣುಗಳಿಂದ ನೋಡಿದವರಲ್ಲಿ ಹೆಚ್ಚಿನವರು ಆಗಲೇ ಲೋಕಪಾಲರ ನೇಮಕವಾಗಿಯೇ ಬಿಟ್ಟಿತು ಎಂಬ ಸಂಭ್ರಮದಲ್ಲಿದ್ದರು.

ಒಂದು ವರ್ಷ ಕಳೆದ ಮೇಲೂ ಲೋಕಪಾಲರ ನೇಮಕದ ಮಸೂದೆಯನ್ನು ಸಂಸತ್ ಅಂಗೀಕರಿಸಿಲ್ಲ, ಅದಕ್ಕೆ ಅಂಗೀಕಾರ ದೊರೆಯುವ ಭರವಸೆಯೂ ಇಲ್ಲ. ಸದ್ಯಕ್ಕೆ ಇದು ಮುಗಿದ ಅಧ್ಯಾಯ.

ಇದನ್ನು ಇನ್ನೊಂದು `ಸ್ವಾತಂತ್ರ್ಯ ಹೋರಾಟ` ಎಂದು ಬಣ್ಣಿಸುತ್ತಾ ಅರಬ್ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿ ಇಲ್ಲಿಯೂ ನಡೆದೇ ಬಿಟ್ಟಿತು ಎಂಬ ಭ್ರಮೆಯನ್ನು ಸೃಷ್ಟಿಸಿದ್ದ ಮಾಧ್ಯಮಗಳು, ಮುಖ್ಯವಾಗಿ ಟಿವಿ ಚಾನೆಲ್‌ಗಳು, ಕೂಡಾ ಅಣ್ಣಾಹಜಾರೆ ಚಳವಳಿಯನ್ನು ಮರೆತುಬಿಟ್ಟಿವೆ. ವರ್ಷದ ಹಿಂದೆ ಹರಿದು ಬಂದ ಜನಸಾಗರ ಈಗ ಬೇಸಿಗೆಯ ಕಾಲದ ನದಿಯಂತಾಗಿದೆ.

ಅಣ್ಣಾ ಹಜಾರೆ ಉಪವಾಸ ಕೂತರೆ ಜಂತರ್‌ಮಂತರ್ ಮುಂದೆಯೇ ಜನಸೇರುತ್ತಿಲ್ಲ, ರಾಮಲೀಲಾ ಮೈದಾನವನ್ನು ತುಂಬುವುದು ಇನ್ನೂ ಕಷ್ಟ. ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದವರು ಆಗಲೇ ಮೌನವಾಗಿದ್ದಾರೆ.

ಇವೆಲ್ಲವನ್ನೂ ನೋಡಿಯೋ ಏನೋ, ತಮ್ಮ ಬೇಡಿಕೆ ಈಡೇರಿಕೆಗೆ `ಒಂದು ದಿನ ಇಲ್ಲವೇ ಒಂದು ಗಂಟೆಯನ್ನೂ ಕೊಡಲಾರೆ` ಎಂದು ಗುಡುಗುತ್ತಿದ್ದ ಅಣ್ಣಾ ಹಜಾರೆ ಅವರು ಈಗ ಒಂದೂವರೆ ವರ್ಷಗಳ ದೀರ್ಘ ಗಡುವನ್ನು ನೀಡಿದ್ದಾರೆ.

ಜೆ.ಪಿ. ಮತ್ತು ವಿ.ಪಿ. ನೇತೃತ್ವದ ಚಳವಳಿಗಳ ಹರಹು ಮತ್ತು ತೀವ್ರತೆ ಗುರಿ ಮುಟ್ಟುವವರೆಗೆ ಹೆಚ್ಚಾಗುತ್ತಾ ಹೋಗಿತ್ತೇ ಹೊರತು ಕಡಿಮೆಯಾಗಿರಲಿಲ್ಲ. ಆದರೆ, ಅಣ್ಣಾ ಚಳವಳಿ ನಡುಹಾದಿಯಲ್ಲಿಯೇ ಸೊರಗಿಹೋಗುತ್ತಿದೆ. ಒಂದು ಚಳವಳಿಯ ಸೋಲು-ಗೆಲುವು ಅದರ ಉದ್ದೇಶ, ಸಂಘಟನೆಯ ಬಲ ಮತ್ತು ಹೋರಾಟದ ದಾರಿಯನ್ನು ಅವಲಂಬಿಸಿರುತ್ತದೆ.

ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಅಣ್ಣಾ ಮತ್ತು ಅವರ ತಂಡದ ಸದಸ್ಯರು ಎಷ್ಟೇ ಭಾಷಣ ಮಾಡಿದರೂ ಉದ್ದೇಶವನ್ನು ಮಾತ್ರ ಲೋಕಪಾಲರ ನೇಮಕಕ್ಕೆ ಸೀಮಿತಗೊಳಿಸುತ್ತಾ ಬಂದಿದ್ದಾರೆ.

ಬಹುಮುಖ್ಯವಾದ ಚುನಾವಣಾ ಸುಧಾರಣೆ ಬಗ್ಗೆಯೂ ಅವರು ಹೆಚ್ಚು ಮಾತನಾಡುತ್ತಿಲ್ಲ. ಲೋಕಪಾಲರ ನೇಮಕವಾದ ಕೂಡಲೇ ಸಾರ್ವಜನಿಕ ಜೀವನದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಯಾಗಿ ಬಿಡುತ್ತದೆ ಎಂಬ ಭ್ರಮೆ ಅವರಿಗೂ ಇರಲಾರದು. ಆದರೆ ಅವರ ಮಾತುಗಳು ಮಾತ್ರ ಆ ಭ್ರಮೆಯನ್ನು ಹುಟ್ಟಿಸುವ ರೀತಿಯಲ್ಲಿಯೇ ಇವೆ. ಇದು ಬಹಳ ಸರಳೀಕೃತ ಅಭಿಪ್ರಾಯ.

ತಾವು ತಿಳಿದುಕೊಂಡಿರುವ ಭ್ರಷ್ಟಾಚಾರದ ಅರ್ಥ ಏನು ಎಂಬುದನ್ನು ಅಣ್ಣಾ ತಂಡ ಈ ವರೆಗೆ ಬಿಡಿಸಿ ಹೇಳಿಲ್ಲ. ಭ್ರಷ್ಟಾಚಾರ ಎಂದರೆ ಕೇವಲ ಸಾರ್ವಜನಿಕ ಹಣದ ದುರುಪಯೋಗ ಇಲ್ಲವೇ ಹಣದ ಸೋರಿಕೆ ಮಾತ್ರವೇ? ತಾಲ್ಲೂಕು ಕಚೇರಿಯ ಗುಮಾಸ್ತ ಪಡೆಯುವ ಲಂಚ ಮತ್ತು  ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ದಲ್ಲಾಳಿಗಳಿಂದ ಪಡೆಯುವ ಕಮಿಷನ್ ಎರಡನ್ನೂ ಒಂದೇ ಗುಂಪಿನಲ್ಲಿ ಸೇರಿಸಬಹುದೇ?

ಅಧಿಕಾರದ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ವಶೀಲಿ ಕೂಡಾ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತವೆಯೇ? ಅಧಿಕಾರದ ದುರುಪಯೋಗವೂ ಭ್ರಷ್ಟಾಚಾರದ ವ್ಯಾಖ್ಯೆಯಲ್ಲಿ ಸೇರಿಕೊಳ್ಳುವುದಿದ್ದರೆ ಯಾವ ಅಧಿಕಾರ? ರಾಜಕಾರಣದ ಮೂಲಕ ಗಳಿಸಿದ್ದೇ ಇಲ್ಲವೇ ಶ್ರೇಣಿಕೃತ ಸಮಾಜ ಮತ್ತು ಆರ್ಥಿಕ ಅಸಮಾನತೆಯ ವ್ಯವಸ್ಥೆಯ ನೆರವಿನಿಂದ ಪಡೆದುಕೊಂಡದ್ದೇ?

ಭ್ರಷ್ಟಾಚಾರವನ್ನು ಕೇವಲ ಕಾನೂನಿನ ಮೂಲಕ ವ್ಯಾಖ್ಯಾನಿಸುವುದು ಸರಿಯೇ? ಅದನ್ನು ನೈತಿಕ ದೃಷ್ಟಿಯಿಂದಲೂ ನೋಡುವುದು ಬೇಡವೇ?- ಈ ಪ್ರಶ್ನೆಗಳಿಗೆ ಅಣ್ಣಾ ತಂಡದ ಸದಸ್ಯರಲ್ಲಿ ಉತ್ತರ ಇಲ್ಲ, ಹುಡುಕಲು ಹೋದರೆ ಸಿಗುವ ಉತ್ತರ ಚಳವಳಿಗೆ ಇನ್ನಷ್ಟು ಮುಜುಗರ ಉಂಟುಮಾಡಬಹುದು.

ಇದಕ್ಕಾಗಿ `ಮೊದಲು ಲೋಕಪಾಲರು ಬರಲಿ` ಎಂಬ ಮಂತ್ರವನ್ನಷ್ಟೇ ಅವರು ಪಠಿಸುತ್ತಿದ್ದಾರೆ. ಬಹುಮುಖಗಳ ರಕ್ಕಸನಂತೆ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಕೇವಲ ಲೋಕಪಾಲರ ನೇಮಕದಿಂದ ನಾಶಮಾಡಬಹುದೆಂದು ಅಣ್ಣಾ ತಂಡ ಈಗಲೂ ತಿಳಿದುಕೊಂಡಿರುವುದೇ ಅವರ ಕಾಲಿನಡಿಯ ನೆಲ ಕುಸಿಯುತ್ತಿರುವುದಕ್ಕೆ ಕಾರಣ.

ಇನ್ನು ಸಂಘಟನೆ. ಚಳವಳಿಗೆ ಅಗತ್ಯವಾದ ಸಂಘಟನೆಯನ್ನು ಕಟ್ಟುವುದರಲ್ಲಿಯೂ ಅಣ್ಣಾ ತಂಡ ಸೋತಿದೆ. ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ಜತೆ ಸೇರಿಕೊಂಡಿರುವ ಎಪ್ಪತ್ತರ ದಶಕದ ನವನಿರ್ಮಾಣ ಚಳವಳಿ ಅವರಿಂದಲೇ ಪ್ರಾರಂಭವಾದುದಲ್ಲ. ಅದು ಭ್ರಷ್ಟಾಚಾರ ಇಲ್ಲವೇ ಸರ್ವಾಧಿಕಾರದ ವಿರುದ್ಧದ ಹೋರಾಟ ಆಗಿಯೂ ಪ್ರಾರಂಭವಾಗಿರಲಿಲ್ಲ.

ಅಹ್ಮದಾಬಾದ್‌ನ ಎಲ್.ಡಿ.ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ದ 1973ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಸಣ್ಣಮಟ್ಟದ ಪ್ರತಿಭಟನೆ ಬೆಳೆಯುತ್ತಾ ಹೋಗಿ ನಂತರದ ದಿನಗಳಲ್ಲಿ ಸ್ವತಂತ್ರಭಾರತದ ಅತ್ಯಂತ ಬಲಿಷ್ಠ ರಾಜಕೀಯ ನಾಯಕಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು.

ಅಣ್ಣಾ ತಂಡದ ರೀತಿಯಲ್ಲಿ ಅಹ್ಮದಾಬಾದ್‌ನ ವಿದ್ಯಾರ್ಥಿಗಳಿಗೂ ತಮ್ಮ ಹೋರಾಟಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಎಳೆಯರಾದರೂ ಪರಿಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಂಡ ವಿದ್ಯಾರ್ಥಿ ನಾಯಕರು ಒಂದೇ ತಿಂಗಳ ಅವಧಿಯಲ್ಲಿ ತಮ್ಮ ಹೋರಾಟಕ್ಕೆ ಸಾರ್ವಜನಿಕವಾದ ರೂಪ ಕೊಟ್ಟರು.

1973ರ ಜನವರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಅಹ್ಮದಾಬಾದ್ ಬಂದ್‌ಗೆ ಕರೆಕೊಟ್ಟಾಗ ಅವರ ಮುಖ್ಯ ಘೋಷಣೆ ಬೆಲೆ ಏರಿಕೆ ವಿರುದ್ಧವಾಗಿತ್ತು, ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ಧದ ಪ್ರತಿಭಟನೆ ನೇಪಥ್ಯಕ್ಕೆ ಸರಿದುಹೋಗಿತ್ತು.

ಎಪ್ಪತ್ತರ ದಶಕದ ಸಮಾಜ ಭ್ರಷ್ಟಾಚಾರ, ಬೆಲೆ ಏರಿಕೆ, ಆಹಾರ ಸಾಮಗ್ರಿಗಳ ಕೊರತೆ, ಸರ್ಕಾರಿ ನೌಕರರ ಸಂಬಳದ ಮೇಲೆ ಮಿತಿ ಹೇರಿಕೆ ಮೊದಲಾದ ಕಾರಣಗದಾಗಿ ಒಳಗಿಂದೊಳಗೆ ಕುದಿಯುತ್ತಿತ್ತು. ಅದು ಸಿಡಿಯಲು ಬೇಕಾದ ದಾರಿಯನ್ನಷ್ಟೇ ನವನಿರ್ಮಾಣ ಚಳವಳಿ ಮಾಡಿಕೊಟ್ಟಿತ್ತು.

ಅಣ್ಣಾ ಹಜಾರೆ ಉಪವಾಸ ಪ್ರಾರಂಭಿಸಿದಾಗ ದೇಶದಲ್ಲಿ ಎಪ್ಪತ್ತರ ದಶಕದ ಪರಿಸ್ಥಿತಿಯೇ ಇತ್ತು, ಈಗಲೂ ಇದೆ. ಒಂದಾದ ಮೇಲೆ ಒಂದರಂತೆ ಭ್ರಷ್ಟಾಚಾರದ ಹಗರಣಗಳು ಬಯಲಾಗತೊಡಗಿವೆ, ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿಹೋಗಿದ್ದಾರೆ, ಉದ್ಯೋಗದ ಅವಕಾಶಗಳು ಕಡಿಮೆಯಾಗತೊಡಗಿವೆ.

ಜನ ಎದುರಿಸುತ್ತಿರುವ ಈ ಎಲ್ಲ ಸಮಸ್ಯೆಗಳ ಗಂಗೋತ್ರಿ ಭ್ರಷ್ಟಾಚಾರದಲ್ಲಿಯೇ ಇದೆ. ಆದ್ದರಿಂದಲೇ ಅಣ್ಣಾ ಹಜಾರೆ ಚಳವಳಿಗೆ ಜನ ಪ್ರಾಮಾಣಿಕವಾಗಿಯೇ ಸ್ಪಂದಿಸಿದ್ದರು. ಆದರೆ, ಅದನ್ನು ಬಳಸಿಕೊಳ್ಳಲು ಚಳವಳಿಯ ನಾಯಕರು ಸೋತುಹೋದರು.

ನವನಿರ್ಮಾಣ ಚಳವಳಿಯ ನೇತೃತ್ವ ವಹಿಸಲು ಜೆಪಿ ಅಹ್ಮದಾಬಾದ್‌ಗೆ ಹೋಗಿದ್ದಾಗ ಆಗಲೇ ವಿದ್ಯಾರ್ಥಿ ಚಳವಳಿಗಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಚಿಮಣ್ ಬಾಯ್ ಪಟೇಲ್ ಸರ್ಕಾರವನ್ನು ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮಾಡಿಬಿಟ್ಟಿದ್ದರು.

ಆ ಚಳವಳಿಗಾರರಿಗೆ ಜೆಪಿಯ ಅಗತ್ಯಕ್ಕಿಂತ ಹೆಚ್ಚಾಗಿ ಜೆಪಿಗೆ ಆ ಚಳವಳಿಯ ಅಗತ್ಯ ಇತ್ತು.  `ನಾನು ಎರಡು ವರ್ಷಗಳ ಕಾಲ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಸಹಮತ ಮೂಡಿಸಲು ಪ್ರಯತ್ನಪಟ್ಟು ಸೋತುಹೋಗಿದ್ದೆ.

ಆಗ ನನ್ನ ಕಣ್ಣಿಗೆ ಬಿದ್ದ ಗುಜರಾತ್ ವಿದ್ಯಾರ್ಥಿಗಳು ನನಗೆ ದಾರಿ ತೋರಿಸಿದ್ದರು` ಎಂದು ಜೆಪಿಯವರೇ ವಿನಯಪೂರ್ವಕವಾಗಿ ಬರೆದುಕೊಂಡಿದ್ದಾರೆ. `ಅಣ್ಣಾ ಹಜಾರೆ ಅವರು ಸಂಸತ್‌ಗಿಂತಲೂ ಮೇಲು` ಎಂಬ ಅರವಿಂದ ಕೇಜ್ರಿವಾಲ್ ಅವರ ಮೂರ್ಖ ಹೇಳಿಕೆ ನೆನಪಾಗುತ್ತಿದೆಯೇ?

 ಒಂದು ಚಳವಳಿ ಯಶಸ್ವಿಯಾಗಬೇಕಾದರೆ ಅದರ ನೇತೃತ್ವ ವಹಿಸುವ ಸಂಘಟನೆಯ ಮೇಲೆ ಸಾಮಾನ್ಯ ಜನರಿಗೂ ನಂಬಿಕೆ ಇರಬೇಕಾಗುತ್ತದೆ. ಅಣ್ಣಾ ತಂಡದ ನಡೆ ಮೊದಲ ದಿನದಿಂದಲೇ ನಿಗೂಢವಾಗಿತ್ತು. ಪ್ರಾರಂಭದಲ್ಲಿಯೇ ಬೇರೆಬೇರೆ ಕಾರಣಗಳಿಗಾಗಿ ಅಲ್ಲಿಂದ ಹೊರನಡೆದವರು ಯೋಗಗುರು ರಾಮ್‌ದೇವ್; ನಂತರ ಸ್ವಾಮಿ ಅಗ್ನಿವೇಶ್, ರಾಜೀಂದರ್‌ಸಿಂಗ್, ವೇಣುಗೋಪಾಲ್ ಮೊದಲಾದವರು ಬಿಟ್ಟುಹೋದರು.

ಆಗಲೇ ಅಣ್ಣಾ ತಂಡದ ಉಳಿದ ಕೆಲವು ಸದಸ್ಯರ ಮೇಲೆ ಆರೋಪಗಳು ಕೇಳಿ ಬರತೊಡಗಿದ್ದವು. ಅದು ಮುಖ್ಯವಾಗಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದವು. ಅಷ್ಟು ಹೊತ್ತಿಗೆ ಇಡೀ ದೇಶದಲ್ಲಿ ಚಳವಳಿ ಪಸರಿಸಿತ್ತು.

`ಜನ ಸ್ವಂತ ಇಚ್ಛೆಯಿಂದ ಬರುತ್ತಿದ್ದಾರೆ` ಎಂದು ಹೇಳಿಕೊಂಡರೂ ಜನ ಸೇರಿಸುವುದು, ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಜೋಡಿಸುವುದು, ಸಂಪನ್ಮೂಲ ಕ್ರೋಡೀಕರಿಸುವುದು ಸುಲಭದ ಕೆಲಸ ಅಲ್ಲ.

ನೋಡುನೋಡುತ್ತಿದ್ದಂತೆಯೇ ಭ್ರಷ್ಟ ರಾಜಕಾರಣಿಗಳು, ದುಷ್ಟ ಆಲೋಚನೆಯ ಉದ್ಯಮಿಗಳು, ಆಷಾಢಭೂತಿ ಧರ್ಮಗುರುಗಳು, ಶಿಕ್ಷಣದ ವ್ಯಾಪಾರಿಗಳು, ರೋಗಿಗಳನ್ನು ಸುಲಿಯುವ ವೈದ್ಯರು, ಕಕ್ಷಿದಾರರನ್ನು ಕಾಡಿಸುವ ವಕೀಲರು ಹೀಗೆ ಎಲ್ಲರೂ ಸೇರಿಕೊಳ್ಳತೊಡಗಿದ್ದರು.

ಯಾರು ಪ್ರಾಮಾಣಿಕರು, ಯಾರು ಭ್ರಷ್ಟರು? ಎನ್ನುವುದನ್ನು ಗುರುತಿಸಲಾಗದ ಅಯೋಮಯ ಸ್ಥಿತಿ. ಸೇರಿದವರಲ್ಲಿ ನಿಜವಾದ ಕಾಳಜಿ ಹೊಂದಿದ್ದವರು ಎಷ್ಟು ಮಂದಿ ಇದ್ದರೆನ್ನುವುದನ್ನು ಹುಡುಕುವುದೇ ಕಷ್ಟವಾಗಿತ್ತು. ಜೆಪಿ ಪ್ರವೇಶಕ್ಕೆ ಮುನ್ನವೇ ಗುಜರಾತ್‌ನಲ್ಲಿ ತಾರಕಕ್ಕೇರಿದ್ದ ನವನಿರ್ಮಾಣ ಚಳವಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 80 ಮಂದಿ ಪೊಲೀಸ್ ಗುಂಡೇಟಿನಿಂದ ಪ್ರಾಣ ಕಳೆದುಕೊಂಡಿದ್ದರು.

ಅಂತಹ ಒಂದು ಗೋಲಿಬಾರ್ ನಡೆದಿದ್ದರೆ ಸತ್ಯಾಗ್ರಹದ ಶಿಬಿರದಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಅಣ್ಣಾ ಚಳವಳಿಗೆ ಏಟು ನೀಡಿದ್ದೇ ಅವರ ಸಂಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಹುಟ್ಟಿಕೊಳ್ಳತೊಡಗಿದ್ದ ಇಂತಹ ಗುಮಾನಿಗಳು.

ಇದನ್ನು ಇನ್ನಷ್ಟು ಬಲಪಡಿಸಿದ್ದು ಹರಿಯಾಣದ ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಣ್ಣಾ ತಂಡ ನಡೆಸಿದ್ದ ಪ್ರಚಾರ. ಅದರ ನಂತರ ನಡೆದ ಉತ್ತರಪ್ರದೇಶದ ಚುನಾವಣೆಯಲ್ಲಿ ಅಣ್ಣಾ ತಂಡದ ಸದಸ್ಯರನ್ನು ಯಾರೂ ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ.

ಕೊನೆಯದಾಗಿ ಹೋರಾಟದ ದಾರಿ. ಉದ್ದೇಶ ಉದಾತ್ತವಾಗಿದ್ದರೂ ಸಂಘಟನೆ  ಬಲವಾಗಿದ್ದರೂ ಹೋರಾಟದ ದಾರಿಯಲ್ಲಿ ಎಡವಿದರೆ ಚಳವಳಿ ಗುರಿಮುಟ್ಟುವುದು ಕಷ್ಟ. ಉಪವಾಸ ಬಹಳ ಪರಿಣಾಮಕಾರಿ ಹೋರಾಟದ ಅಸ್ತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಪವಾಸದ ಮೊದಲ ಉದ್ದೇಶ ಸ್ವಂತ ಆತ್ಮಾವಲೋಕನ, ಎರಡನೆಯದು, ಎದುರಾಳಿಯ ಆತ್ಮಪರಿವರ್ತನೆ.

ಈ ಉದ್ದೇಶಗಳಿಲ್ಲದ ಉಪವಾಸ `ಬ್ಲಾಕ್‌ಮೇಲ್` ಆಗುತ್ತದೆ. ಅದಕ್ಕಾಗಿಯೇ ಗಾಂಧೀಜಿಯವರು ಹದಿನಾರು ಬಾರಿ ಉಪವಾಸ ಮಾಡಿದ್ದರೂ ಆ ಅಸ್ತ್ರವನ್ನು ಅವರೆಂದೂ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲಿಲ್ಲ. ಅವರು ಬಳಸಿದ್ದೆಲ್ಲವೂ ಆತ್ಮಶುದ್ಧಿ ಮತ್ತು ಆತ್ಮಪರಿವರ್ತನೆಗಾಗಿ.

ಉಪವಾಸದ ಮೂಲಕ ಉದ್ದೇಶ ಸಾಧಿಸುವುದಕ್ಕಿಂತ ಹೆಚ್ಚಾಗಿ ಹುತಾತ್ಮನಾಗುವ ಆಸೆಯೇ ಹೆಚ್ಚಿದೆಯೋ ಏನೋ ಎಂದು ಅನಿಸುವ ರೀತಿಯಲ್ಲಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು ಸದಾ ಝಳಪಿಸುತ್ತಿರುತ್ತಾರೆ.

ಆದರೆ ಆತ್ಮಾವಲೋಕನಕ್ಕೆ ಅವರು ತಯಾರಿಲ್ಲ, ಆತ್ಮಪರಿವರ್ತನೆಗೆ ತಮ್ಮನ್ನು ಒಡ್ಡಿಕೊಳ್ಳುವಷ್ಟು ಅಧಿಕಾರರೂಢರು ಸೂಕ್ಷ್ಮಮತಿಗಳಾಗಿಲ್ಲ. ಈ ಸ್ಥಿತಿಯಲ್ಲಿ ಉಪವಾಸ ಕೇವಲ `ಬ್ಲಾಕ್‌ಮೇಲ್` ಆಗುವ ಅಪಾಯ ಇದೆ.
ಕೊನೆಗೂ ಇದರ ಅರಿವು ಅಣ್ಣಾ ಹಜಾರೆ ಅವರಿಗೂ ಆಗುತ್ತಿದೆಯೇನೋ? ಇತ್ತೀಚೆಗೆ ಅವರು ಆತ್ಮಾವಲೋಕನದ ಧಾಟಿಯಲ್ಲಿ `ದೇಶ ಸುತ್ತಿ ಜನಜಾಗೃತಿಗೊಳಿಸುವ` ಮಾತುಗಳನ್ನಾಡುತ್ತಿದ್ದಾರೆ. ಜಂತರ್ ಮಂತರ್‌ಗೆ ಹೋಗುವ ಮೊದಲು ಈ ಕೆಲಸ ಮಾಡಿದ್ದರೆ ಅವರ ಕೈಗೆ ತಮ್ಮ ಕನಸುಗಳನ್ನೆಲ್ಲ ಕೊಟ್ಟವರು ಭಗ್ನಹೃದಯಿಗಳಾಗುತ್ತಿರಲಿಲ್ಲ.

Monday, November 7, 2011

ಹಾದಿ ತಪ್ಪುತ್ತಿರುವ ಭ್ರಷ್ಟಾಚಾರ ವಿರೋಧಿ ಚಳವಳಿ

..ಎಲ್ಲಿಯವರೆಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ, ಅಲ್ಲಿಯವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು.
ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ಧವಾಗಬೇಕಾಗಬಹುದು.
ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿ ಮತ್ತು ಶಕ್ತಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ.
ರಾಜಕೀಯ ಪಕ್ಷಗಳು ಕೂಡಾ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ~ ಎಂದು ಏಳು ತಿಂಗಳ ಹಿಂದೆ ಈ ಅಂಕಣದಲ್ಲಿ (`ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ~) ಬರೆದಾಗ ಕೆಲವು ಅಣ್ಣಾ ಬೆಂಬಲಿಗರು `ಅಷ್ಟೊಂದು ಸಿನಿಕರಾಗುವುದು ಬೇಡ~ ಎಂದಿದ್ದರು.
ಅವರಲ್ಲಿ ಕೆಲವರಿಗಾದರೂ ಅಣ್ಣಾ ಹಜಾರೆ ಅವರು ಈಗ ನಿರಾಶೆ ಉಂಟು ಮಾಡಿರಬಹುದು.
ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ದ ಹೋರಾಟ ಪ್ರಾರಂಭಿಸಿದಾಗ ಪ್ರಮುಖವಾಗಿ ಎರಡು ಕಾರಣಗಳಿಂದಾಗಿ ಜನಬೆಂಬಲ ಹರಿದು ಬಂದಿತ್ತು. ಮೊದಲನೆಯದಾಗಿ ಸಾರಾಸಗಟಾಗಿ ರಾಜಕಾರಣಿಗಳನ್ನು ದ್ವೇಷಿಸುವಷ್ಟು ರಾಜಕೀಯದ ಬಗ್ಗೆ ಜನರು ಹೊಂದಿರುವ ತಿರಸ್ಕಾರ.
ಎರಡನೆಯದಾಗಿ ಭ್ರಷ್ಟಾಚಾರದ ವಿರುದ್ಧದ ಸಾರ್ವಜನಿಕ ಆಕ್ರೋಶ. ಈ ಪರಿಸ್ಥಿತಿಯಲ್ಲಿ ಪ್ರವೇಶ ಮಾಡಿದ ಅಣ್ಣಾಹಜಾರೆ ಜನರ ಕಣ್ಣಿಗೆ ತಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಲು ಬಂದ ಅವತಾರ ಪುರುಷನಂತೆ ಕಂಡಿದ್ದರು.
ಯಾಕೆಂದರೆ ಅಣ್ಣಾ ಹಜಾರೆ ರಾಜಕಾರಣಿಯಾಗಿರಲಿಲ್ಲ ಮತ್ತು ಪ್ರಾಮಾಣಿಕರಾಗಿದ್ದರು. ಇದು ಏಳು ತಿಂಗಳ ಹಿಂದಿನ ಕತೆ, ಈಗಲೂ ಅವರು ಅಂದಿನ ಅಣ್ಣಾ ಆಗಿಯೇ ಉಳಿದಿದ್ದಾರೆಯೇ? ಅವರ ಅಭಿಮಾನಿಗಳಿಗೂ ಉತ್ತರಿಸುವುದು ಕಷ್ಟ.

ರಾಜಕಾರಣಿಗಳನ್ನು ವಿರೋಧಿಸುತ್ತಲೇ ಅಣ್ಣಾ ಹಜಾರೆ ರಾಜಕಾರಣಿಯಾದಂತಿದೆ ಮತ್ತು ಇತರರ ವಿರುದ್ಧ ಬಳಸುತ್ತಿದ್ದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತು ಕುಯ್ಯತೊಡಗಿದೆ.
ಜನಪ್ರಿಯತೆಯಿಂದ ಸಾರ್ಥಕ್ಯದ ಭಾವನೆ ಮೂಡುವುದರಿಂದ ಅದು ವೈಯಕ್ತಿಕವಾಗಿ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗದೆ ಹೋದರೆ ಬಹಳ ಅಪಾಯಕಾರಿ.
ಸಂಭಾಳಿಸಿಕೊಳ್ಳಲಾಗದ ಜನಪ್ರಿಯತೆಯ ವ್ಯಸನಕ್ಕೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಬಹುತೇಕ ದೇಶಗಳ ಸಾರ್ವಜನಿಕ ಜೀವನದಲ್ಲಿ ಜನಪ್ರಿಯರಾದವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನವನ್ನು ಅಭಿಮಾನಿ ಬಳಗ ಮಾಡುತ್ತಾ ಬಂದಿದೆ.
ಅವರ ಜನಪ್ರಿಯತೆಯನ್ನು ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲಿಕ್ಕಾಗಿ ಪಟ್ಟಭದ್ರ ರಾಜಕಾರಣಿಗಳೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುತ್ತಾರೆ. ಪ್ರಮುಖವಾಗಿ ಸಮಾಜ ಸೇವಕರು, ಚಿತ್ರನಟರು, ಕ್ರೀಡಾಪಟುಗಳು, ಉದ್ಯಮಿಗಳೆಲ್ಲ ಈ ಗುಂಪಲ್ಲಿ ಬರುತ್ತಾರೆ.
ಇವರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ, ಆದರೆ ಗುಂಡಿಗೆ ಬಿದ್ದವರೇ ಹೆಚ್ಚು. ಅಣ್ಣಾ ಹಜಾರೆ ವಿಷಯದಲ್ಲಿಯೂ ಇದು ನಡೆದಿದೆ.
ಕಳೆದ ಏಪ್ರಿಲ್‌ನಲ್ಲಿ ಮೊದಲ ಉಪವಾಸ ಕೈಬಿಟ್ಟ ಮರುಕ್ಷಣವೇ ಅವರನ್ನು ಮುತ್ತಿಕೊಂಡ ಪತ್ರಕರ್ತರು `ನೀವು ರಾಜಕೀಯ ಪ್ರವೇಶ ಮಾಡುತ್ತೀರಾ? ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?~ ಎಂಬ ಪ್ರಶ್ನೆಗಳನ್ನು ಕೇಳಿದ್ದರು.
ರಾಜಕೀಯದಲ್ಲಿ ತಮಗೆ ಆಸಕ್ತಿ ಇಲ್ಲವೇ ಇಲ್ಲ ಎಂದು ಆ ಕ್ಷಣದಲ್ಲೇನೋ ಅಣ್ಣಾಹಜಾರೆ ತಲೆಕೊಡವಿಬಿಟ್ಟರು. ಆದರೆ ಅವರ ಅಕ್ಕಪಕ್ಕದಲ್ಲಿರುವ ತಲೆಗೆ ಆಗಲೇ ರಾಜಕೀಯದ ಗುಂಗಿಹುಳ ಪ್ರವೇಶ ಮಾಡಿಬಿಟ್ಟಿತ್ತು.
ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ದೇಶದಾದ್ಯಂತ ವ್ಯಕ್ತವಾದ ಜನಬೆಂಬಲ, ಮಾಧ್ಯಮಗಳಲ್ಲಿ, ಮುಖ್ಯವಾಗಿ 24ಗಂಟೆಗಳ ಸುದ್ದಿ ಚಾನೆಲ್‌ಗಳಲ್ಲಿ ನೀಡಲಾದ ಪ್ರಚಾರ, `ಅಣ್ಣಾ ಎಂದರೆ ಇಂಡಿಯಾ~ ಎನ್ನುವಂತಹ ಮೂರ್ಖ ಘೋಷಣೆಗಳು, `ಅಣ್ಣಾ ಸಂಸತ್‌ಗಿಂತಲೂ ದೊಡ್ಡವರು~ ಎನ್ನುವ ಅಪ್ರಬುದ್ಧ ಹೇಳಿಕೆಗಳು - ಎಂತಹ ಸಂಯಮಿಯ ಮನಸ್ಸೂ ಕೂಡಾ ಆಚೀಚೆ ಹೊಯ್ದಾಡಲು ಸಾಕು. ಇವತ್ತು `ಇಮೇಜ್ ಬಿಲ್ಡಿಂಗ್~ ಎನ್ನುವುದು ಬಹಳ ಜನಪ್ರಿಯ ದಂಧೆ.
ಅಣ್ಣಾ ಹಜಾರೆ ಜತೆಯಲ್ಲಿದ್ದವರು ಬಹಳ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಧಾನವಾಗಿ ಅಣ್ಣಾ ಹಜಾರೆ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಾ ಬಂದದ್ದು, ಎಲ್ಲರ ಮೈಮೇಲೆ `ಐ ಯಾಮ್ ಅನ್ನಾ~ ಎಂಬ ಘೋಷಣೆಗಳು ಕಾಣಿಸಲಾರಂಭಿಸಿದ್ದು ಇವೆಲ್ಲವೂ ಈ ಪ್ರಯತ್ನದ ಭಾಗ.
ಆದರೆ ನಾಮಬಲದಿಂದಲೇ ರಾಜಕೀಯದಲ್ಲಿ ಯಶಸ್ವಿಯಾಗುವ ಕಾಲ ಎಂದೋ ಕಳೆದುಹೋಗಿದೆ. ಯಶಸ್ವಿ ರಾಜಕಾರಣ ಮಾಡಲು ಬದ್ಧ ಕಾರ್ಯಕರ್ತರ ಪಡೆ ಮತ್ತು ಸಂಪನ್ಮೂಲ ಬೇಕಾಗುತ್ತದೆ.

ವಾರಂತ್ಯದ ರಜೆಗಳನ್ನು ಉಪವಾಸ ಶಿಬಿರದಲ್ಲಿ ಕಳೆದುಕೊಳ್ಳುವುದೇ ಸಮಾಜಸೇವೆ ಎಂದು ತಿಳಿದುಕೊಂಡ ಬೆಂಬಲಿಗರನ್ನು ಕಟ್ಟಿಕೊಂಡು ರಾಜಕೀಯ ಮಾಡಲಾಗುವುದಿಲ್ಲ.
ಚುನಾವಣಾ ಸುಧಾರಣೆಯಾಗದ ಹೊರತು, ರಶೀದಿ ಕೊಟ್ಟು ಸಂಗ್ರಹಿಸುವ ದೇಣಿಗೆಯ ದುಡ್ಡಿನಿಂದ ಈಗಾಗಲೇ ಬೇರು ಬಿಟ್ಟಿರುವ ರಾಜಕೀಯ ಪಕ್ಷಗಳನ್ನು ಎದುರಿಸಲು ಸಾಧ್ಯವೂ ಇಲ್ಲ.
ರಾಜಕೀಯದ ಈ ವಾಸ್ತವ ಅಣ್ಣಾ ತಂಡಕ್ಕೆ ಖಂಡಿತ ಗೊತ್ತಿದೆ. ಅದಕ್ಕಾಗಿ ಅವರು `ಹವ್ಯಾಸಿ ರಾಜಕಾರಣ~ವನ್ನು ಪ್ರಾರಂಭಿಸಿದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಒಂದು ಪಕ್ಷದ ವಿರುದ್ಧ ಪ್ರಚಾರ ಮಾಡಿ ಒಬ್ಬ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನಿಸುವುದು.
ಆ ಗೆಲುವೇ ತಮ್ಮ ಗೆಲುವು, ತಮ್ಮ ಬೇಡಿಕೆಗೆ ಸಿಕ್ಕ ಜನಮನ್ನಣೆ ಎಂದು ಹೇಳಿಕೊಂಡು ತಿರುಗಾಡುವುದು- ಇದು ಸದ್ಯಕ್ಕೆ ಅಣ್ಣಾ ತಂಡದ ಕಾರ್ಯತಂತ್ರ. ಆದರೆ ರಾಜಕಾರಣ ಎನ್ನುವುದು ಪೂರ್ಣಾವಧಿ ವೃತ್ತಿ, ಅದು ಹವ್ಯಾಸ ಅಲ್ಲ.

ಹವ್ಯಾಸಿ ರಾಜಕಾರಣಿಗಳನ್ನು ಜನ ಒಪ್ಪುವುದೂ ಇಲ್ಲ, ಯಾಕೆಂದರೆ ಅದು ಕರ್ತವ್ಯ ನಿರ್ವಹಣೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲದ ರಾಜಕಾರಣ.
ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ತಾವು ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಣ್ಣಾ ತಂಡ, ಅಲ್ಲಿ ಗೆದ್ದಿರುವ ಕುಲದೀಪ್ ವೈಷ್ಣೋವಿ ಅವರ ನಡವಳಿಕೆಗೆ ಉತ್ತರದಾಯಿಯಾಗುವುದೇ? `ಇಲ್ಲ~ ಎಂದಾದರೆ ಇದು ಪಲಾಯನವಾದವಾಗುವುದಿಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಜನದ್ರೋಹವಾಗುವುದಿಲ್ಲವೇ?
ಅಣ್ಣಾ ಹಜಾರೆ ಅವರ ಅನಿಶ್ಚಿತ ನಿಲುವುಗಳಿಗೆ ಕೂಡಾ `ಹವ್ಯಾಸಿ ರಾಜಕಾರಣ~ ನೀಡುವ ಸ್ವಾತಂತ್ರ್ಯ ಕಾರಣ.
ಹಿಸ್ಸಾರ್ ಉಪಚುನಾವಣೆಯ ನಂತರ  ಅಣ್ಣಾ ಅವರು ದಿಢೀರ್ ಜ್ಞಾನೋದಯವಾದವರಂತೆ `ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವುದಿಲ್ಲ~ ಎಂದು ಬಿಟ್ಟರು. ದೆಹಲಿಗೆ ಬಂದವರೇ ಮತ್ತೆ ಕಾಂಗ್ರೆಸ್ ವಿರುದ್ಧದ ಪ್ರಚಾರದ ಹಳೆ ಬೆದರಿಕೆಯನ್ನೇ ಪುನರುಚ್ಚರಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಇತ್ತೀಚಿಗೆ ತಮ್ಮದೇ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್ ವರೆಗೆ ಕಳೆದ ಆರು ತಿಂಗಳಲ್ಲಿ ಅಣ್ಣಾ ಹಜಾರೆ ಅವರು ನೀಡುತ್ತಾ ಬಂದ ಹೇಳಿಕೆಗಳನ್ನು ಗಮನಿಸುತ್ತಾ ಬಂದರೆ ಉದ್ದಕ್ಕೂ ಗೊಂದಲಕಾರಿ ನಿಲುವುಗಳನ್ನು ಕಾಣಬಹುದು.

ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ರಾಜಕಾರಣಿಗಳಿಂದ ರೋಸಿಹೋದ ಜನರಿಗೆ ಅಣ್ಣಾ ಅವರಲ್ಲಿಯೂ ಅದೇ ಬಣ್ಣಗಳು ಕಂಡರೆ ಅವರನ್ನೂ ಹಳೆಯ ರಾಜಕಾರಣಿಗಳ ಗುಂಪಿಗೆ ಸೇರಿಸಿಬಿಡುವ ಅಪಾಯ ಇದೆ, ಹಾಗಾಗುತ್ತಿದೆ.
ಇದರಿಂದ ಈಗಾಗಲೇ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಹಾನಿಯೂ ಆಗಿದೆ, ಇದು ಅಣ್ಣಾತಂಡಕ್ಕೆ ಗೊತ್ತಾಗಬೇಕು, ಅಷ್ಟೆ.ಇದರ ಜತೆಗೆ ಅಣ್ಣಾ ಹಜಾರೆಯವರು ಝಳಪಿಸುತ್ತಾ ಬಂದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತನ್ನೇ ಕುಯ್ಯತೊಡಗಿದೆ.
ಹಣದ ಮೊತ್ತ ಇಲ್ಲವೇ ಉದ್ದೇಶದ ದೃಷ್ಟಿಯಿಂದ ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ವಿರುದ್ಧ ಕೇಳಿ ಬಂದ ಆರೋಪಗಳು ಅಷ್ಟೊಂದು ಗಂಭೀರವಾದವೇನೂ ಅಲ್ಲ.

ಆದರೆ  ಸಾರ್ವಜನಿಕ ಜೀವನದಲ್ಲಿರಬೇಕಾದ ಪ್ರಾಮಾಣಿಕತೆಯ ಮಟ್ಟವನ್ನು ಇಷ್ಟೊಂದು ಎತ್ತರಕ್ಕೆ ಏರಿಸಿಟ್ಟವರು ಅದೇ ಮಟ್ಟದ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ.
ಚುನಾಯಿತ ಪ್ರತಿನಿಧಿಯೊಬ್ಬ ಮಾತಿನಲ್ಲಿ ಮಾತ್ರವಲ್ಲ, ಯೋಚನೆಯಲ್ಲಿಯೂ ಪ್ರಾಮಾಣಿಕವಾಗಿರಬೇಕೆಂದು ಬಯಸುತ್ತದೆ ಅಣ್ಣಾ ತಂಡ.
ಇದಕ್ಕಾಗಿಯೇ ಅಲ್ಲವೇ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂದು ಪ್ರಧಾನಿ ಸಾರ್ವಜನಿಕವಾಗಿ ಹೇಳಿದರೂ ನಂಬದೆ ಲಿಖಿತ ಹೇಳಿಕೆಗಾಗಿ ಒತ್ತಾಯಿಸಿದ್ದು.
ತೆರಿಗೆ ವಂಚನೆಯನ್ನು ಚಿತ್ರನಟನೋ, ಕೇಜ್ರಿವಾಲಾನೋ ಯಾರು ಮಾಡಿದರೂ ಅಪರಾಧವೇ. ತಾನು ತಪ್ಪನ್ನು ಮಾಡಿಲ್ಲ, ವರಮಾನ ತೆರಿಗೆ ಇಲಾಖೆಯೇ ದುರುದ್ದೇಶದಿಂದ ವರ್ತಿಸಿದೆ ಎನ್ನುವುದು ಅರವಿಂದ್ ಕೇಜ್ರಿವಾಲಾ ಅವರ ವಾದವಾಗಿದ್ದರೆ ಬಾಕಿ ಉಳಿಸಿಕೊಂಡಿರುವುದನ್ನು ಪಾವತಿ ಮಾಡದೆ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿತ್ತು.
ಕಾನೂನಿನಲ್ಲಿ ಪರಿಣತಿ ಹೊಂದಿರುವ ಕೇಜ್ರಿವಾಲಾ ಅವರಿಗೆ ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಬಾಕಿ ಪಾವತಿಸುವುದೆಂದರೆ ತಪ್ಪನ್ನು ಒಪ್ಪಿಕೊಂಡಂತಲ್ಲವೇ? ಹಾಗಿದ್ದರೆ ತನ್ನಿಂದ ತಪ್ಪಾಗಿದೆ ಎಂದಾದರೂ ಹೇಳಬಹುದಿತ್ತಲ್ಲವೇ?
ಇಷ್ಟು ಮಾತ್ರವಲ್ಲ, ಜನಲೋಕಪಾಲ ಚಳವಳಿಗಾಗಿ ಸಂಗ್ರಹಿಸಿದ್ದ ಹಣದಲ್ಲಿ ಸುಮಾರು 70-80 ಲಕ್ಷ ರೂಪಾಯಿಗಳನ್ನು ತಮ್ಮ `ಸಾರ್ವಜನಿಕ ಹಿತಾಸಕ್ತಿ ಸಂಶೋಧನಾ ಸಂಸ್ಥೆ~ಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಕೂಡಾ ಕೇಜ್ರಿವಾಲಾ ಅವರ ಮೇಲಿದೆ. ಈ ಸಂಸ್ಥೆಯಲ್ಲಿ ಅಣ್ಣಾ ತಂಡದ ಯಾರೂ ಸದಸ್ಯರಾಗಿಲ್ಲ.
 ಕಿರಣ್ ಬೇಡಿಯವರದ್ದೂ ಇನ್ನೊಂದು  ಕತೆ. ಕಡಿಮೆ ಟಿಕೆಟ್ ದರದ ವಿಭಾಗದಲ್ಲಿ ವಿಮಾನ ಪ್ರಯಾಣ ಮಾಡಿ ಉಳಿಸಿದ ದುಡ್ಡನ್ನು ತಾನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗೆ ದೇಣಿಗೆಯಾಗಿ ನೀಡುವುದು ಒಳ್ಳೆಯ ಕೆಲಸ.
ಆದರೆ ಸರಳ ಜೀವಿ ಅಣ್ಣಾ ಹಜಾರೆಯವರ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಕಿರಣ್ ಬೇಡಿ ಅವರಿಂದ ಒಂದು ಭಾಷಣ ಮಾಡಿಸಬೇಕಾದರೆ ಪ್ರಯಾಣಕ್ಕಾಗಿಯೇ 39ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದೆಯೆಂಬುದು ನಿಜಕ್ಕೂ ಅಚ್ಚರಿಯ ಸುದ್ದಿ.
ಅದೂ ಅಲ್ಲದೆ, ಕಿರಣ್ ಬೇಡಿಯವರು ತನ್ನ ಸರ್ಕಾರೇತರ ಸಂಸ್ಥೆಗೆ ಹಣ ಸಂಗ್ರಹಿಸಲು ಪ್ರಯಾಣವೆಚ್ಚವನ್ನು ಅಧಿಕವಾಗಿ ವಸೂಲಿ ಮಾಡಿರುವುದು ತನ್ನಂತೆಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇಂದೋರ್‌ನ `ಅಭ್ಯಾಸ್ ಮಂಡಳ್~ನಿಂದ ಎನ್ನುವುದು ಗಮನಾರ್ಹ.
ಕಿರಣ್ ಬೇಡಿಯವರ ಭಾಷಣದಿಂದ ಅಲ್ಲಿನ ಸಮಾಜಕ್ಕೆ ಏನು ಸೇವೆ ಆಗಿದೆಯೋ ಗೊತ್ತಿಲ್ಲ, ಆದರೆ ಆ ಭಾಷಣ ಮಾಡದಿದ್ದರೆ ಉಳಿಯುತ್ತಿದ್ದ ಕನಿಷ್ಠ 50 ಸಾವಿರ ರೂಪಾಯಿಗಳಿಂದ ಆ ಸಂಸ್ಥೆ ಸಮಾಜಕ್ಕೆ ಒಂದಷ್ಟು ಸೇವೆ ಮಾಡಲು ಸಾಧ್ಯವಾಗುತ್ತಿತ್ತೋ ಏನೋ?
ಇವೆಲ್ಲವೂ ಸಣ್ಣ ವಿಚಾರಗಳು ನಿಜ, ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ನಡವಳಿಕೆಯಲ್ಲಿನ ಪ್ರಾಮಾಣಿಕತೆಯ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿರುವ ಅಣ್ಣಾ ತಂಡದ ಸದಸ್ಯರು ಅದನ್ನು ಪಾಲಿಸುವುದು ಬೇಡವೇ?
ತಮ್ಮ ವಿರುದ್ಧದ ಆರೋಪಗಳೆಲ್ಲವೂ ದುರುದ್ದೇಶದಿಂದ ಕೂಡಿದ್ದು ಎಂದು ಕೇಜ್ರಿವಾಲಾ ಮತ್ತು ಬೇಡಿ ಹೇಳುತ್ತಲೇ ಬಂದಿದ್ದಾರೆ. ಹಾಗಿದ್ದರೆ ಅಣ್ಣಾ ತಂಡದಿಂದ ಹೊರಬಿದ್ದಿರುವ ರಾಜಿಂದರ್‌ಸಿಂಗ್ ಮತ್ತು ಪಿ.ವಿ.ರಾಜಗೋಪಾಲ್ ಹಾಗೂ ಈಗಲೂ ತಂಡದಲ್ಲಿರುವ

ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಈ ಇಬ್ಬರು ಸದಸ್ಯರ ಬಗ್ಗೆ ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನೂ ಹಾಗೆಯೇ ತಳ್ಳಿಹಾಕಲು ಸಾಧ್ಯವೇ? `ಸಾಧ್ಯ ಇಲ್ಲ~ ಎಂದಾದರೆ ದೇಶದ ಕೋಟ್ಯಂತರ ಸಾಮಾನ್ಯ ಜನ ಈಗಲೂ ಅಪಾರವಾದ ಭರವಸೆ ಇಟ್ಟುಕೊಂಡಿರುವ ಚಳವಳಿಯ ತಂಡವನ್ನು ಪುನರ್‌ರಚಿಸಿ ಅದನ್ನು ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿಯನ್ನಾಗಿ ಮಾಡಲು ಅಣ್ಣಾ ಹಜಾರೆಯವರು ಮುಂದಾಗಬೇಕು.
ಇದನ್ನು ಮಾಡಬೇಕಾದಾಗ ಒಂದಷ್ಟು ತಲೆ ಉರುಳಿಸಬೇಕಾಗಿ ಬಂದರೆ ಅದಕ್ಕೂ ಹಿಂಜರಿಯಬಾರದು. ವಿಳಂಬ ಮಾಡಿದರೆ ಅನಾಹುತವಾದೀತು.

Monday, June 27, 2011

ನುಂಗಲಾರದಷ್ಟನ್ನು ಬಾಯಲ್ಲಿ ಹಾಕಿಕೊಂಡರೆ ಅಣ್ಣಾ?

ಅಣ್ಣಾ ಹಜಾರೆ ಅವರು ನುಂಗಲಾರದಷ್ಟನ್ನು ಬಾಯಲ್ಲಿ ಹಾಕಿಕೊಂಡುಬಿಟ್ಟಿದ್ದಾರೆ.ಉಗಿಯುವಂತಿಲ್ಲ, ನುಂಗುವಂತಿಲ್ಲ. ಈ ಸಂಕಟದಿಂದ ಪಾರಾಗಬೇಕಾದರೆ ಅವರು ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ.
ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯಲ್ಲಿನ ಎಲ್ಲ ಅಂಶಗಳನ್ನು  ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.

ಆದ್ದರಿಂದ ನುಡಿದಂತೆಯೇ ನಡೆಯಬೇಕೆಂದು ಹೊರಟರೆ ಆಗಸ್ಟ್ ಹದಿನಾರರಿಂದ ಅಣ್ಣಾ ಹಜಾರೆ ಅವರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದು ಅನಿವಾರ‌್ಯವಾಗಬಹುದು.
ಉಳಿದಿರುವ ಇನ್ನೊಂದು ಆಯ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಜನಜಾಗೃತಿಗೆ ಹೊರಡುತ್ತೇನೆ ಎಂದು ಘೋಷಿಸಿ ಯುದ್ದಭೂಮಿಯಿಂದ ಗೌರವಪೂರ್ವಕವಾಗಿ ನಿರ್ಗಮಿಸುವುದು.
ಸರ್ಕಾರದ ಮುಂದೆ ಕೂಡಾ ಇರುವುದು ಎರಡೇ ಆಯ್ಕೆ. ಒಂದೋ ನಾಗರಿಕ ಸಮಿತಿ ಹೇಳಿರುವುದನ್ನೆಲ್ಲ ಬಾಯಿಮುಚ್ಚಿಕೊಂಡು ಒಪ್ಪಿಕೊಳ್ಳುವುದು, ಇಲ್ಲವೇ ಮಾತುಕತೆಯ ಮಾರ್ಗವನ್ನು ಕೈಬಿಟ್ಟು ನೇರವಾಗಿ ಸಂಘರ್ಷಕ್ಕಿಳಿಯುವುದು. ಅಣ್ಣಾ ಹಜಾರೆ ಅವರಿಗೆ ಇರುವಷ್ಟು ಗೊಂದಲ ಸರ್ಕಾರಕ್ಕೆ ಇದ್ದ ಹಾಗಿಲ್ಲ.
ಅದು ಎರಡನೇ ಆಯ್ಕೆಗೆ  ಸಿದ್ದತೆ ನಡೆಸಿದಂತಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಕೂಗುಮಾರಿಯಾಗಿರುವ ದಿಗ್ವಿಜಯ್‌ಸಿಂಗ್ ಸಹೋದ್ಯೋಗಿಗಳ ಜತೆಗೂಡಿ ಆಗಲೇ ಈ ಕೆಲಸ ಪ್ರಾರಂಭಿಸಿದ್ದಾರೆ.
ಅಣ್ಣಾ ಹಜಾರೆ ಅವರ ಹಠಮಾರಿತನ ಮತ್ತು ಅವರ ಸಂಗಡಿಗರ ಬಾಯಿಬಡುಕತನ ಅತಿಯಾಯಿತು ಎನ್ನುವ ಜನರ ಗೊಣಗಾಟವನ್ನು ಕೂಡಾ ಕಾಂಗ್ರೆಸ್ ನಾಯಕರು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಭ್ರಷ್ಟ ವ್ಯವಸ್ಥೆಯಿಂದ ರೋಸಿಹೋಗಿರುವ ಅಸಹಾಯಕ ಜನರನ್ನು ಪಾರುಮಾಡಲು ಅವತಾರ ಎತ್ತಿ ಬಂದವರಂತೆ ಕಾಣಿಸಿಕೊಂಡ ಅಣ್ಣಾ ಹಜಾರೆ ಅವರು ಬಹುಬೇಗ ನೇಪಥ್ಯಕ್ಕೆ ಸರಿದು ಹೋಗುತ್ತಿದ್ದಾರೆಯೇ? ಇಂತಹ ಅನುಮಾನ ಅವರ ಅಭಿಮಾನಿಗಳನ್ನೂ ಕಾಡತೊಡಗಿದೆ.
ಒಂದೊಮ್ಮೆ ಅಣ್ಣಾ ಹಜಾರೆ `ಉಪವಾಸ ಸತ್ಯಾಗ್ರಹ ಪ್ರಾರಂಭಿಸಿಯೇ ತೀರುತ್ತೇನೆ~ ಎಂದು ಹೊರಟರೆ ಏನಾಗಬಹುದು? ಮೊದಲು ಕೇಂದ್ರ ಸರ್ಕಾರ ಅದನ್ನು ತಡೆಯಲು ಹತ್ತಾರು ಅಡ್ಡಿ-ಆತಂಕಗಳನ್ನು ಒಡ್ಡಬಹುದು (ಅನುಮತಿ ನಿರಾಕರಣೆ, ಇನ್ನಷ್ಟು ಆರೋಪಗಳ ಸುರಿಮಳೆ..ಇತ್ಯಾದಿ).
ಅವೆಲ್ಲವನ್ನೂ ಮೀರಿ ಉಪವಾಸ ಪ್ರಾರಂಭಿಸಿದರೆ ಒಂದೆರಡು ದಿನಗಳಲ್ಲಿಯೇ ಸರ್ಕಾರ ಅವರನ್ನು ಬಲಾತ್ಕಾರವಾಗಿ ಎಬ್ಬಿಸಿ ಆಸ್ಪತ್ರೆಗೆ ಸೇರಿಸಬಹುದು.

ಕಳೆದ ಬಾರಿಯ ಉಪವಾಸದ ನಂತರ ಅವರ ತಪಾಸಣೆ ನಡೆಸಿದ್ದ ವೈದ್ಯರು  ಮತ್ತೆ ಉಪವಾಸ ನಡೆಸುವುದು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ಹೇಳಿರುವುದನ್ನೇ ಸರ್ಕಾರ ತನ್ನ ಸಮರ್ಥನೆಗೆ ಬಳಸಬಹುದು.

ಈ ರೀತಿ ಅಣ್ಣಾ ಹಜಾರೆ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದರೆ ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವವರು ಯಾರು? ಶಾಂತಿಭೂಷಣ್? ಪ್ರಶಾಂತ್ ಭೂಷಣ್? ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ? ಕಿರಣ್ ಬೇಡಿ? ಸ್ವಾಮಿ ಅಗ್ನಿವೇಶ್ ಅವರು ಈಗಾಗಲೇ ಮೆತ್ತಗೆ ದೂರ ಸರಿಯುತ್ತಿರುವುದರಿಂದ ಅವರ ಹೆಸರೂ ಹೇಳುವಂತಿಲ್ಲ.
ಬೇರೆ ಯಾರು? ಈಜಿಪ್ಟ್, ಟ್ಯುನೇಷಿಯಾದಂತೆ ಜನ ದಂಗೆ ಎದ್ದು ಬೀದಿಬೀದಿಗಳಲ್ಲಿ ಸೇರಲಿದ್ದಾರೆ ಎಂದೇನಾದರೂ ಅಣ್ಣಾ ಹಜಾರೆ ಮತ್ತು ಸಂಗಡಿಗರು ತಿಳಿದುಕೊಂಡಿದ್ದಾರೆಯೇ?
ಬದ್ಧತೆ ಮತ್ತು ಪ್ರಾಮಾಣಿಕತೆ ಎರಡರ ದೃಷ್ಟಿಯಿಂದಲೂ ಅಣ್ಣಾ ಹಜಾರೆ ಅವರನ್ನು ಬಾಬಾ ರಾಮ್‌ದೇವ್ ಜತೆ  ಹೋಲಿಸುವುದು ಸಾಧ್ಯ ಇಲ್ಲ ಎನ್ನುವುದು ನಿಜ.

ಆದರೆ ಸಂಘಟನೆಯ ದೃಷ್ಟಿಯಿಂದ ಅಣ್ಣಾ ಹಜಾರೆ ಅವರಿಗಿಂತ ಬಾಬಾ ರಾಮ್‌ದೇವ್ ಎಷ್ಟೋ ಪಾಲು ಹೆಚ್ಚು ಬಲಶಾಲಿಯಾಗಿದ್ದರು.  ದೇಶದಾದ್ಯಂತ ಪತಂಜಲಿ ಯೋಗಪೀಠದ ನೂರಾರು ಶಾಖೆಗಳಿವೆ.
ಯೋಗ ಶಿಬಿರಗಳು ಮತ್ತು ಟಿವಿ ಚಾನೆಲ್ ಮೂಲಕ ಕೋಟ್ಯಂತರ ಜನರ ಜತೆ ಅವರು ಸಂಪರ್ಕ ಸಾಧಿಸಿದ್ದಾರೆ. ಲಕ್ಷಾಂತರ ಮಂದಿ ಅವರ ಯೋಗ ಚಿಕಿತ್ಸೆಯ ಫಲಾನುಭವಿಗಳೂ ಆಗಿದ್ದಾರೆ.
ಇಷ್ಟಾಗಿಯೂ ಸರ್ಕಾರ ಅಮಾನುಷ ರೀತಿಯಲ್ಲಿ ಅವರ ಮೇಲೆ ಎರಗಿಬಿದ್ದಾಗ ಟಿವಿ ಕ್ಯಾಮೆರಾಗಳ ಮುಂದೆ ಒಂದಷ್ಟು ಮಹಿಳೆಯರು ಕಣ್ಣೀರು ಸುರಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವ ಅನಾಹುತವೂ ಆಗಲಿಲ್ಲ. ನಾಳೆ ಅಣ್ಣಾ ಹಜಾರೆ ಅವರನ್ನು ಬಂಧಿಸಿದರೆ ದೇಶದ ಜನ ಸಿಡಿದೆದ್ದು ಬೀದಿಗೆ ಇಳಿಯಬಹುದೇ?
ಅಣ್ಣಾ ಹಜಾರೆ ಅವರು ಆಗಲೇ ಸರ್ಕಾರ ಒಡ್ಡಿರುವ ಬೋನಿನಲ್ಲಿ ಬಿದ್ದಿದ್ದಾರೆ. ತಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖವಾಡ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದಿಂದ ಸಿಟ್ಟಾದ ಅಣ್ಣಾ ಹಜಾರೆ ಆ ಎರಡೂ ಸಂಘಟನೆಗಳ ಜತೆ ತನಗೆ ಸಂಬಂಧ ಇರುವುದನ್ನು ನಿರಾಕರಿಸಿರುವುದು ಮಾತ್ರವಲ್ಲ, ಆ ಬಗ್ಗೆ ಪುರಾವೆಗಳಿದ್ದರೆ ಒದಗಿಸಿ ಎಂದು ಸವಾಲು ಹಾಕಿದ್ದಾರೆ.

ಅಂದರೆ ಬಿಜೆಪಿ ಜತೆ ಅವರು ಮುಂದೆಯೂ ಸೇರಿಕೊಳ್ಳುವುದಿಲ್ಲ ಎಂದೇ ಅರ್ಥ. ಬೆನ್ನ ಹಿಂದೆ ಮೀಸಲಾತಿ ವಿರೋಧಿ ಫಲಕಗಳನ್ನು ಬಚ್ಚಿಟ್ಟುಕೊಂಡು ಛದ್ಮವೇಷದಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು, ಕೂಡಾ ಅಣ್ಣಾ ಹಜಾರೆ ಅವರ ಈ ಹೇಳಿಕೆ ನಂತರ ದೂರ ಸರಿಯತೊಡಗಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧವೇ ಅವರು ಹೋರಾಟ ನಡೆಸುತ್ತಿದ್ದಾರೆ, ವಿರೋಧಪಕ್ಷವಾದ ಬಿಜೆಪಿ ಜತೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಿಎಸ್‌ಪಿ, ಡಿಎಂಕೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ, ಶಿವಸೇನೆ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರು ಒಂದಲ್ಲ ಒಂದು ಭ್ರಷ್ಟಾಚಾರದ ಹಗರಣಗಳಲ್ಲಿ ಆರೋಪಿಯಾಗಿದ್ದಾರೆ.

ಉಳಿದವು ಎಡಪಕ್ಷಗಳು. ಎರಡು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ದಣಿವಾರಿಸಿಕೊಳ್ಳುತ್ತಿರುವ ಆ ಪಕ್ಷಗಳು ಅಣ್ಣಾ ಹಜಾರೆ ಅವರ ಬೆಂಬಲಕ್ಕೆ ನಿಲ್ಲುವುದು ಅಷ್ಟರಲ್ಲೇ ಇದೆ. ಬೇರೆ ಯಾವ ಶಕ್ತಿಗಳನ್ನು ನಂಬಿ ಅಣ್ಣಾ ಹಜಾರೆ ಮತ್ತು ಸಂಗಡಿಗರು ಚುನಾಯಿತ ಸರ್ಕಾರವೊಂದಕ್ಕೆ ಸವಾಲು ಹಾಕುತ್ತಿದ್ದಾರೆ? ಜನ ಎಂಬ ಅಮೂರ್ತ ಶಕ್ತಿಯನ್ನೇ?
ಸಮಸ್ಯೆ ಅಣ್ಣಾ ಹಜಾರೆ ಅವರ ಚಳವಳಿಯ ಮೂಲದಲ್ಲಿಯೇ ಇದೆ. `ಪ್ರಜಾಪ್ರಭುತ್ವ ಎಂದರೆ ಜನರಿಂದ ಆಯ್ಕೆಯಾದ ನಂತರ ಮುಂದಿನ ಚುನಾವಣೆಯ ವರೆಗೆ ನಿರಂಕುಶವಾಗಿ ಆಡಳಿತ ನಡೆಸಿಕೊಂಡು ಹೋಗುವುದಲ್ಲ, ಚುನಾಯಿತ ಸರ್ಕಾರ ಹಾದಿ ತಪ್ಪಿದಾಗ ಪ್ರಶ್ನಿಸುವ, ಎಚ್ಚರಿಸುವ, ಮಣಿಸುವ ಮತ್ತು ಸರಿಯಾದ ದಾರಿ ತೋರಿಸುವ ಅಧಿಕಾರ ನಾಗರಿಕರಿಗೆ ಇದೆ. ಅದನ್ನೇ ನಾವು ಮಾಡುತ್ತಿದ್ದೇವೆ~ ಎನ್ನುವ ನಾಗರಿಕ  ಸಮಿತಿಯ ವಾದ ಸರಿಯಾಗಿಯೇ ಇದೆ.

ಇಂತಹ ನಾಗರಿಕ ಹೋರಾಟಗಳು ರಾಜಕೀಯಾತೀತವಾಗಿ ಸಾಮಾಜಿಕ ಚೌಕಟ್ಟಿನಲ್ಲಿದ್ದಾಗ ಅದಕ್ಕೆ ಮಿತಿಗಳು ಇರುತ್ತವೆ.ತಮ್ಮ ಸಾಮರ್ಥ್ಯದ ಅರಿವು ಹೋರಾಟದಲ್ಲಿ ತೊಡಗಿರುವವರಿಗೂ ಗೊತ್ತಿರುತ್ತದೆ.
ಆದ್ದರಿಂದಲೇ ಅವು ನೇರವಾಗಿ ಸರ್ಕಾರದ ಜತೆ ಸಂಘರ್ಷಕ್ಕಿಳಿಯದೆ ಒತ್ತಡ ಹೇರುವ ಮಟ್ಟಕ್ಕೆ ಮಾತ್ರ ತಮ್ಮ ಹೋರಾಟವನ್ನು ಸೀಮಿತಗೊಳಿಸುತ್ತವೆ. ಮೇಧಾ ಪಾಟ್ಕರ್ ನೇತೃತ್ವದ `ನರ್ಮದಾ ಬಚಾವೋ ಆಂದೋಲನ~ ಇದಕ್ಕೆ ಉತ್ತಮ ಉದಾಹರಣೆ.
`ನಮ್ಮ ಬೇಡಿಕೆಯನ್ನು ತಿಂಗಳೊಳಗೆ ಈಡೇರಿಸದಿದ್ದರೆ ಜಂತರ್‌ಮಂತರ್‌ನಲ್ಲಿ ಆಮರಣ ಉಪವಾಸ ಮಾಡಿ ಪ್ರಾಣಬಿಡುತ್ತೇನೆ~ಎಂದು ಮೇಧಾ ಪಾಟ್ಕರ್ ಎಂದೂ ಹೇಳಿರಲಿಲ್ಲ. ಅಂದ ಮಾತ್ರಕ್ಕೆ ಅವರ ಸಾಧನೆ ಕಡೆಗಣಿಸುವಂತಹದ್ದಲ್ಲ. ಅವಸರ ಮಾಡಿದ್ದರೆ ಚಳವಳಿಯ ಮೂಲಕ ಈಗಿನಷ್ಟನ್ನೂ ಸಾಧಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲವೇನೋ?
ಪ್ರತಿದಿನ ದೇಶಾದ್ಯಂತ  ಪ್ರತಿಭಟನೆ, ಚಳವಳಿ, ಸತ್ಯಾಗ್ರಹ, ಧರಣಿ, ಜಾಥಾಗಳು ನಡೆಯುತ್ತಲೇ ಇರುತ್ತವೆ. ಪ್ರಜಾಪ್ರಭುತ್ವದ ಜೀವಂತಿಕೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಇವುಗಳು ನೆರವಾಗುತ್ತವೆ.

ಇಂತಹ ಸಾಮಾಜಿಕ ಹೋರಾಟಗಳು ತಮ್ಮ ಘೋಷಿತ ಉದ್ದೇಶ ಸಾಧನೆಯ ಜತೆಗೆ  ರಾಜಕೀಯ ಬದಲಾವಣೆಗೂ ಕೊಡುಗೆಗಳನ್ನು ನೀಡುತ್ತಾ ಹೋಗುತ್ತವೆ. ಅದು ನಿಧಾನವಾಗಿ ನಡೆಯುವ ಪ್ರಕ್ರಿಯೆ, ಅವಸರದ್ದಲ್ಲ.
ಸ್ವತಂತ್ರ ಭಾರತದಲ್ಲಿ ಸರ್ಕಾರವೊಂದು ಪ್ರಜೆಗಳ ಕೈಗೆ ಕೊಟ್ಟಿರುವ ದೊಡ್ಡ ಅಸ್ತ್ರ ಮಾಹಿತಿ ಹಕ್ಕು ಕಾನೂನು. ಪರಿಣಾಮದ ದೃಷ್ಟಿಯಿಂದ ಇದು ಲೋಕಪಾಲರ ನೇಮಕಕ್ಕಿಂತಲೂ ದೊಡ್ಡ ಅಸ್ತ್ರ. ಈ ಕಾನೂನು ಅನುಷ್ಠಾನದ ಹಿಂದೆ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲಾ ಮೊದಲಾದವರು ನಡೆಸಿರುವ ಹೋರಾಟ ಇದೆ ಎನ್ನುವುದು ನಿಜ.
ಆದರೆ ಮಾಹಿತಿ ಪಡೆಯುವ ಹಕ್ಕಿಗಾಗಿ ಹೋರಾಟ ಮೊದಲು ಪ್ರಾರಂಭವಾಗಿದ್ದು ತೊಂಬತ್ತರ ದಶಕದಲ್ಲಿ. ರಾಜಸ್ತಾನದ ರಾಜ್‌ಸಾಮಾಂಡ್ ಜಿಲ್ಲೆಯಲ್ಲಿ ಕಾರ್ಮಿಕರು ಮತ್ತು ರೈತರು ಕೂಡಿ 1990ರಲ್ಲಿ `ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ (ಎಂಕೆಎಸ್‌ಎಸ್) ಕಟ್ಟಿ ಮೊದಲ ಬಾರಿ ಮಾಹಿತಿ ಹಕ್ಕಿಗಾಗಿ ಒತ್ತಾಯಿಸಿದ್ದರು.
1996ರಲ್ಲಿ ರಾಜಸ್ತಾನದ ಬೇವಾರ್ ಪಟ್ಟಣದಲ್ಲಿ `ಮಾಹಿತಿ ಹಕ್ಕು, ಬದುಕುವ ಹಕ್ಕು~ ಎಂಬ ಘೋಷಣೆಯೊಂದಿಗೆ ಜನ 40 ದಿನಗಳ ಧರಣಿ ಸತ್ಯಾಗ್ರಹ ನಡೆಸಿದ್ದರು. ಅಂತಿಮವಾಗಿ ಆ ಕಾನೂನು ಅನುಷ್ಠಾನಕ್ಕೆ ಬಂದದ್ದು 2005ರಲ್ಲಿ.
ಆದರೆ ಲೋಕಾಯುಕ್ತ-ಲೋಕಪಾಲರ ನೇಮಕಕ್ಕಾಗಿ ಇತ್ತೀಚಿನ ವರೆಗೆ ಯಾವುದೇ ರಾಜ್ಯ ಇಲ್ಲವೇ ರಾಷ್ಟ್ರಮಟ್ಟದಲ್ಲಿ ಸಣ್ಣ ಪ್ರಮಾಣದ ಸತ್ಯಾಗ್ರಹ ಚಳವಳಿಗಳೂ  ನಡೆದಿಲ್ಲ. ಈ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಮತ್ತು ಬೆಂಬಲಿಗರು  ಅವಸರದ ಕ್ರಾಂತಿಗೆ ಹೊರಟಿರುವಂತೆ ಕಾಣುತ್ತಿದ್ದಾರೆ.
ಆಗಲೇ ಕೆಲವರು ಈ ಹೋರಾಟವನ್ನು ಎಪ್ಪತ್ತರ ದಶಕದಲ್ಲಿ ನಡೆದ ಜೆಪಿ ಚಳವಳಿಗೆ ಹೋಲಿಸತೊಡಗಿದ್ದಾರೆ. ಕೆಲವರು ಇನ್ನಷ್ಟು ಹಿಂದೆ ಹೋಗಿ ಸ್ವಾತಂತ್ರ್ಯ ಚಳವಳಿಗೆ ಹೋಲಿಸುತ್ತಿದ್ದಾರೆ. ಇವೆರಡೂ ಶುದ್ಧ ರಾಜಕೀಯ ಚಳವಳಿಗಳು, ಅದರಲ್ಲಿ ಯಾವ ಮುಚ್ಚುಮರೆಯೂ ಇರಲಿಲ್ಲ.
ಗಾಂಧೀಜಿಯಾಗಲಿ,  ಜೆಪಿಯಾಗಲಿ ತಮ್ಮನ್ನು ಸಮಾಜಸೇವಕರೆಂದು ಕರೆದುಕೊಂಡಿರಲಿಲ್ಲ. ರಾಜಕಾರಣಿಗಳು ತಾವು ಕುಳಿತ ವೇದಿಕೆ ಹತ್ತಬಾರದೆಂದು ಅವರ‌್ಯಾರೂ ಹೇಳಿರಲಿಲ್ಲ.
ಅವರು  ಅಪ್ಪಟ ರಾಜಕಾರಣಿಗಳಾಗಿದ್ದರು, ರಾಜಕೀಯದಲ್ಲಿಯೂ ಉಳಿದುಕೊಂಡಿರುವ ಒಂದಷ್ಟು ಸಜ್ಜನರನ್ನು ಸೇರಿಸಿಕೊಂಡು ಚಳವಳಿಯನ್ನು ಮುನ್ನಡೆಸಿದ್ದರು. ಸರ್ವಾಧಿಕಾರಿ ಇಂದಿರಾಗಾಂಧಿಯವರ ವಿರುದ್ಧದ ಹೋರಾಟದ ಬಗ್ಗೆ ಮಾತ್ರವಲ್ಲ, ಆಕೆಯ ಪತನದ ನಂತರದ ಪರ್ಯಾಯದ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು.
ದುರದೃಷ್ಟವಶಾತ್ ಅಣ್ಣಾ ಹಜಾರೆ ಅವರಿಗೆ ಅಂತಹ ಆಯ್ಕೆಗಳಿಲ್ಲ ಎನ್ನುವುದು ನಿಜ. ಸರ್ಕಾರ ಇಲ್ಲವೇ ಆಡಳಿತಾರೂಢ ಪಕ್ಷ ಭ್ರಷ್ಟಗೊಂಡಿರುವುದು ಈಗಿನ ಸಮಸ್ಯೆ ಅಲ್ಲ. ದೇಶದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸ ನೋಡಿದರೆ ಇದೊಂದು ಸಾಮಾನ್ಯ ಬೆಳವಣಿಗೆ ಎಂದು ಗೊತ್ತಾಗುತ್ತದೆ.
ಅಧಿಕಾರಕ್ಕೇರಿದ ರಾಜಕೀಯ ಪಕ್ಷ ಭ್ರಷ್ಟಗೊಳ್ಳುತ್ತಾ ಹೋಗುವುದು, ವಿರೋಧಪಕ್ಷಗಳು ಸರ್ಕಾರದ ವಿರುದ್ದ ಹೋರಾಟಕ್ಕೆ ಇಳಿಯುವುದು, ಕ್ರಮೇಣ ಮತದಾರರ ಕಣ್ಣಿಗೆ ವಿರೋಧ ಪಕ್ಷಗಳ ನಾಯಕರೇ ಸಂಭಾವಿತರಂತೆ ಕಂಡು ಅವರನ್ನು ಮತ್ತೆ ಆಯ್ಕೆ ಮಾಡುವುದು.. ಇವೆಲ್ಲ ಸಾಮಾನ್ಯ.

ಆದರೆ ನೈತಿಕವಾಗಿ ದಿವಾಳಿಯಾಗಿರುವ ನಮ್ಮ ವಿರೋಧ ಪಕ್ಷಗಳು ಭ್ರಷ್ಟ ಸರ್ಕಾರವನ್ನು ಪ್ರಶ್ನಿಸಲಾಗದಷ್ಟು ಅಸಹಾಯಕವಾಗಿರುವುದು ಕೂಡಾ ಇಂದಿನ ಬಿಕ್ಕಟ್ಟಿಗೆ ಕಾರಣ.
ಈ ಹತಾಶೆ ಜನಸಮುದಾಯದಲ್ಲಿಯೂ ವ್ಯಕ್ತವಾಗುತ್ತಿದೆ. ಇದಕ್ಕೆ ಏನು ಪರಿಹಾರ? ರಾಜಕಾರಣಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸುವುದೇ?
 ಸಮಸ್ಯೆ ಏನೆಂದರೆ ತಮ್ಮ ಹೋರಾಟ ಸಾಮಾಜಿಕವಾದುದೇ, ರಾಜಕೀಯವಾದುದೇ ಎಂಬ ಬಗ್ಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರಲ್ಲಿಯೇ ಸ್ಪಷ್ಟತೆ ಇಲ್ಲ.

ತಮ್ಮದು ರಾಜಕೀಯಾತೀತ ಚಳವಳಿ ಎಂದು ಘೋಷಿಸಿಕೊಂಡರೂ ಅವರ ನಡೆ-ನುಡಿಗಳು ರಾಜಕೀಯ ಹೋರಾಟದ ಶೈಲಿಯಲ್ಲಿಯೇ ಇವೆ. ಆಡಳಿತಾರೂಢ ಸರ್ಕಾರವನ್ನು ಮಣಿಸಲು ಹೊರಟವರು ತಮ್ಮ ಚಳವಳಿಯನ್ನು `ರಾಜಕೀಯದಿಂದ ದೂರ ಇದ್ದು ಮಾಡುತ್ತೇವೆ~ ಎಂದು ಹೇಳಲಾಗುವುದಿಲ್ಲ.

ಒಂದು ಸರ್ಕಾರವನ್ನೇ ಉರುಳಿಸುತ್ತೇನೆಂದು ಹೊರಟಾಗ ಅದಕ್ಕೊಂದು ಪರ್ಯಾಯ ಸಿದ್ಧ ಇರಬೇಕಾಗುತ್ತದೆ. ಇಲ್ಲದಿದ್ದರೆ ಅರಾಜಕತೆಯನ್ನು ಹುಟ್ಟುಹಾಕಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ್ಯಾಯ ಕೂಡ ರಾಜಕೀಯ ಕ್ಷೇತ್ರದೊಳಗಡೆಯಿಂದಲೇ ಸೃಷ್ಟಿಯಾಗಬೇಕಾಗುತ್ತದೆ.
ಆದರೆ ನಾಗರಿಕ ಸಮಿತಿ ಸದಸ್ಯರು ಒಂದು ಭ್ರಷ್ಟ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ರಾಜಕಾರಣ, ರಾಜಕಾರಣಿ ಮತ್ತು ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆಯೇ  ವಿಶ್ವಾಸ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಪರಿಹಾರ ಏನು? ದೇಶದ ಆಡಳಿತವನ್ನೇ ಲೋಕಪಾಲರಿಗೆ ಒಪ್ಪಿಸುವುದೇ?

Monday, April 25, 2011

ಕಲ್ಲೆಸೆದು ಕೆಸರು ಸಿಡಿಸಿಕೊಂಡವರು

‘ಕೆಸರಿಗೆ ಕಲ್ಲೆಸೆದು ಮುಖಕ್ಕೆ ಯಾಕೆ ಸಿಡಿಸಿಕೊಳ್ಳುತ್ತೀರಿ?’ ಎಂದು ಭ್ರಷ್ಟರ ವಿರುದ್ಧ ಹೋರಾಟಕ್ಕೆ ಹೊರಟ ಉತ್ಸಾಹಿಗಳಿಗೆ ಹಿರಿಯರು ಬುದ್ದಿ ಹೇಳುವುದುಂಟು. ಅಣ್ಣಾ ಹಜಾರೆ ಅವರಿಗೂ ಹಿರಿಯರು ಈ ಬುದ್ದಿ ಮಾತನ್ನು ಹಲವಾರು ಬಾರಿ ಹೇಳಿರಬಹದು.

ಅದಕ್ಕೆ ಕಿವಿಗೊಡದೆ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧದ ತಮ್ಮ ಆಂದೋಲವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಹೋರಾಟ ಒಂದು ರಾಜ್ಯಕ್ಕಷ್ಟೇ ಸೀಮಿತವಾ ಗಿತ್ತು. ಅಲ್ಲಿಯೂ  ಶರದ್ ಪವಾರ್ ಅವರಂತಹ ಬಲಿಷ್ಠ ರಾಜಕಾರಣಿಯನ್ನು ಎದುರು ಹಾಕಿಕೊಂಡು ಮುಖಕ್ಕೆ ಒಂದಷ್ಟು ಕೆಸರು ಸಿಡಿಸಿಕೊಂಡಿದ್ದರು.ಈಗ ನೂರಾರು ‘ಪವಾರ್’ಗಳನ್ನು ಎದುರು ಹಾಕಿಕೊಂಡಿದ್ದಾರೆ.
‘ಸಾಮ್ರಾಜ್ಯ’ ತಿರುಗಿ ಹೊಡೆದಿದೆ. ಭ್ರಷ್ಟತೆಯ ಕೆಸರಲ್ಲಿ ಮುಳುಗಿ ಹೋಗಿರುವ ರಾಜಕೀಯ ವ್ಯವಸ್ಥೆಯನ್ನು ತೊಳೆಯಲು ಹೊರಟಿರುವ ಅಣ್ಣಾ ಮತ್ತು ಬೆಂಬಲಿಗರ ಮುಖದ ಮೇಲೆಲ್ಲ ಈಗ ಸಿಡಿದ ಕೆಸರಿನ ಕಲೆಗಳು. ಹಿಂದಡಿ ಇಡುವಂತಿಲ್ಲ, ಮುಂದೆ ಹೋಗಲು ದಾರಿಗಳು ಬಹಳ ಇಲ್ಲ.
ಇವೆಲ್ಲ ಅನಿರೀಕ್ಷಿತವೇ? ಬಹುಶಃ ಅಲ್ಲ. ‘....ರಾಜಕೀಯ ಪಕ್ಷಗಳು  ಮೈಯೆಲ್ಲ ಕಣ್ಣಾಗಿ ಅಣ್ಣಾ ಹಜಾರೆ ಮತ್ತು ಬೆಂಬಲಿಗರ ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ....’ ಎಂದು ಎರಡು ವಾರಗಳ ಹಿಂದೆ ಇದೇ ಅಂಕಣದಲ್ಲಿ ಬರೆದದ್ದನ್ನು ಓದಿ ‘ನಿರಾಶವಾದ ಅತಿಯಾಯಿತು’ ಎಂದವರೂ ಇದ್ದರು.
ಆದರೆ ಈ ದೇಶದ ರಾಜಕೀಯ ವ್ಯವಸ್ಥೆಯನ್ನು ತುಸು ಹತ್ತಿರದಿಂದ ನೋಡಿದ ಯಾರೂ ಅಣ್ಣಾ ಹಜಾರೆ  ಎದುರು ಸರ್ಕಾರ ಸೋಲು ಒಪ್ಪಿಕೊಂಡಿತು ಎಂದು ಸಂಭ್ರಮಿಸುವ ಆತುರ ತೋರಿಸಲಾರರು.

ಜನ ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲು ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ಭ್ರಮಿಸಿ ಅಣ್ಣಾ ಹಜಾರೆ ಅವರ ಕೆಲ ಮುಗ್ಧ ಬೆಂಬಲಿಗರು ಕುಣಿದಾಡಿದ್ದರು.
ಆದರೆ ಆಗಲೇ ‘ಸಾಮ್ರಾಜ್ಯ’ ತನ್ನ ಹತಾರುಗಳನ್ನು ಸಾಣೆ ಹಿಡಿಯುತ್ತಿತ್ತು ಎಂದು ಅವರಿಗೆ ತಿಳಿದಿರಲಿಲ್ಲ. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹದ ಬಾಣದಿಂದ ಪ್ರಾಣ ಉಳಿಸಿಕೊಳ್ಳಲು ಸರ್ಕಾರ ತಲೆಯನ್ನು ಒಂದಿಷ್ಟು ಕೆಳಗೆ ತಗ್ಗಿಸಿತ್ತು ಅಷ್ಟೆ.  ಅದು ಪ್ರತಿ ದಾಳಿ ಪೂರ್ವದ ಸಮರ ತಂತ್ರ.
ಭಾರತದ ರಾಜಕಾರಣದಲ್ಲಿ ಕುಟುಂಬ ರಾಜಕೀಯ ಹಳೆಯ ವಿವಾದ. ಇದರಿಂದಾಗಿ ಈ ವಿವಾದದ ಸುತ್ತಲಿನ ಚರ್ಚೆ ಬಹಳ ಬೇಗ ಸಾರ್ವಜನಿಕರ ಗಮನ ಸೆಳೆಯುತ್ತದೆ.ಈಗ ವಿವಾದದ ಕೇಂದ್ರಬಿಂದುವಾಗಿರುವ ಹಿರಿಯ ವಕೀಲ ಶಾಂತಿಭೂಷಣ್ ಕೂಡಾ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಅವರ ಕುಟುಂಬ ರಾಜಕೀಯದ ವಿರುದ್ಧ ದನಿ ಎತ್ತಿದವರು. ಇಷ್ಟೆಲ್ಲ ಗೊತ್ತಿದ್ದೂ ಅಣ್ಣಾ ಹಜಾರೆ ಆಗಲೇ ಒಂದು ತಪ್ಪು ಹೆಜ್ಜೆ ಇಟ್ಟಿದ್ದರು.

ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಅವರನ್ನು ಲೋಕಪಾಲ ಮಸೂದೆ ರಚನಾ ಸಮಿತಿಗೆ ಸೇರಿಸಿಬಿಟ್ಟಿದ್ದರು. ನೂರು ಕೋಟಿ ನಾಗರಿಕ ಸಮಾಜದ ಪ್ರತಿನಿಧಿಗಳಾಗಿ ನೇಮಕಗೊಂಡ ಐವರು ಸದಸ್ಯರಲ್ಲಿ ಒಂದೇ ಕುಟುಂಬದ ಇಬ್ಬರು. ಕಾರಣಗಳೇನೇ ಇರಬಹುದು, ಸಾರ್ವಜನಿಕವಾಗಿ ಇದನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಅಲ್ಲಿಂದ ಪ್ರಾರಂಭವಾಯಿತು ಪ್ರತಿ ದಾಳಿ.

ಇವೆಲ್ಲವೂ ಕೇವಲ ಆಡಳಿತಾರೂಢರ ಹುನ್ನಾರ ಎಂದು ತಿಳಿದುಕೊಳ್ಳಬೇಕಾಗಿಲ್ಲ.ಬಹಿರಂಗವಾಗಿ ಅಣ್ಣಾ ಹಜಾರೆ ಚಳವಳಿಗೆ ಬೆಂಬಲ ಘೋಷಿಸಿರುವ ವಿರೋಧ ಪಕ್ಷಗಳು ಕೂಡಾ ಅಂತರಂಗದಲ್ಲಿ ಅದನ್ನು ಮುರಿಯಲು ಗುಪ್ತ ಬೆಂಬಲ ನೀಡುತ್ತಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಮತ ಪಡೆದು ಅಧಿಕಾರಕ್ಕೆ ಬಂದಿದ್ದ ಎನ್‌ಡಿಎ ಸರ್ಕಾರದ ಮೊದಲ ಆದ್ಯತೆಯೇ ಲೋಕಪಾಲ ಮಸೂದೆಗೆ ಕಾನೂನಿನ ರೂಪ ಕೊಡುವುದು ಆಗಬೇಕಾಗಿತ್ತು.

ಆದರೆ ಹಾಗಾಗಲಿಲ್ಲ. ಆಗಲೂ ಪ್ರಧಾನಿಯನ್ನು ಲೋಕಪಾಲರ ವ್ಯಾಪ್ತಿಯಿಂದ ಹೊರಗಿಡಬೇಕೆಂಬುದು ಬಿಜೆಪಿಯ ಅಧಿಕೃತ ನಿಲುವಾಗಿತ್ತು ಎನ್ನುವುದನ್ನು ಈಗ ಎಲ್ಲರೂ ಮರೆತುಬಿಟ್ಟಿದ್ದಾರೆ.
ಅಣ್ಣಾ ಹಜಾರೆ ವಿರುದ್ಧ ಮೊದಲು ಎರಗಿಬಿದ್ದವರು ಕೂಡಾ ಕಾಂಗ್ರೆಸ್ ಪಕ್ಷದ ಪ್ರಮುಖ ಟೀಕಾಕಾರರಾದ ಯೋಗಗುರು ಬಾಬಾ ರಾಮ್‌ದೇವ್. ಇವರಿಗೆ ಸಲಹೆಗಾರರಾಗಿರುವವರು ಬಿಜೆಪಿಯಿಂದ ಹೊರ ಹೋಗಿದ್ದರೂ ಸಂಘ ಪರಿವಾರದ ಜತೆ ಸಂಬಂಧ ಇಟ್ಟುಕೊಂಡಿರುವ ಗೋವಿಂದಾಚಾರ್ಯ ಮತ್ತು ಹವ್ಯಾಸಿ ಪತ್ರಕರ್ತ ಎಸ್.ಗುರುಮೂರ್ತಿ. ಎರಡು ದಿನಗಳ ಮೊದಲು ಹೋಗಿ ಅಣ್ಣಾ ಹಜಾರೆ ಅವರನ್ನು ಅಪ್ಪಿಕೊಂಡಿದ್ದ ರಾಮ್‌ದೇವ್ ಯಾಕೆ ತಿರುಗಿಬಿದ್ದರು ಎನ್ನುವುದಕ್ಕೂ ಹಿನ್ನೆಲೆ ಇದೆ.
ಮೊದಲನೆಯದಾಗಿ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದ ರಾಮ್‌ದೇವ್ ಅವರ ಪ್ರಯತ್ನಕ್ಕೆ ಅಣ್ಣಾ ಹಜಾರೆ ಅವರ ದಿಢೀರ್ ರಂಗಪ್ರವೇಶದಿಂದಾಗಿ ಹಿನ್ನಡೆಯಾಗಿದೆ. ಕಳೆದೆರಡು ವಾರಗಳಲ್ಲಿ ಅವರ ದನಿ ಬದಲಾಗಿರುವುದನ್ನು ಗಮನಿಸಬಹುದು.

‘ಹೊಸ ರಾಜಕೀಯ ಪಕ್ಷ ಕಟ್ಟುವುದಿಲ್ಲ, ಈಗಿರುವ ಪಕ್ಷಗಳಿಂದಲೇ ಒಳ್ಳೆಯ ಕೆಲಸ ಮಾಡಿಸಲು ಜನಬಲದ ಮೂಲಕ ಒತ್ತಡ ಹಾಕುತ್ತೇವೆ’ ಎಂದು ಯೋಗಗುರು ಹೇಳುತ್ತಿದ್ದಾರೆ. ಗೋವಿಂದಾಚಾರ್ಯರ ಶಿಷ್ಯೆ ಉಮಾಭಾರತಿ ಅವರನ್ನು ಅಣ್ಣಾ ಹಜಾರೆ ಬೆಂಬಲಿಗರು ಹತ್ತಿರಕ್ಕೆ ಬಿಟ್ಟು ಕೊಡದಿರುವುದು ಕೂಡಾ ರಾಮ್‌ದೇವ್ ಅಸಮಾಧಾನಕ್ಕೆ ಕಾರಣ ಆಗಿರಬಹುದು.
ಬಾಬಾ ರಾಮ್‌ದೇವ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಂತಹ ಆಟಗಳಲ್ಲಿ ಪಳಗಿರುವ ಅಮರ್ ಸಿಂಗ್ ಎಂಬ ರಾಜಕೀಯ ದಲ್ಲಾಳಿಯ ಪ್ರವೇಶವಾಗಿದೆ. ಇದು ಕೂಡಾ ರಾಜಕೀಯ ಸಮರದ ಹಳೆಯ ತಂತ್ರ. ಯುದ್ಧಭೂಮಿಯಲ್ಲಿ ಭೀಷ್ಮಾಚಾರ್ಯರ ಎದುರು ಶಿಖಂಡಿಯನ್ನು ತಂದು ನಿಲ್ಲಿಸಿದ ಹಾಗೆ.
ಅಮರ್‌ಸಿಂಗ್ ಅವರಿಗೆ ಶಾಂತಿಭೂಷಣ್ ಬಗ್ಗೆ ಮೊದಲೇ ಹಳೆಯ ದ್ವೇಷ ಇತ್ತು. ಇದಕ್ಕಿಂತಲೂ ಮಿಗಿಲಾಗಿ ಮುಲಾಯಂ ಸಿಂಗ್ ಕೈಬಿಟ್ಟ ನಂತರ ಮೂಲೆಗುಂಪಾಗಿದ್ದ ಅವರಿಗೆ ರಾಜಕೀಯವಾಗಿ ಜೀವದಾನ ಬೇಕಾಗಿತ್ತು. ಉತ್ತರಪ್ರದೇಶದಲ್ಲಿ ಕಾಲೂರಲು ಪ್ರಯತ್ನಿಸುತ್ತಲೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಮಾಯಾವತಿ ಮತ್ತು ಮುಲಾಯಂ ಸಿಂಗ್ ಅವರನ್ನು ಎದುರು ಹಾಕಿಕೊಂಡಿರುವ ಜತೆಗೆ ಠಾಕೂರ್ ಸಮುದಾಯದ ಮತಗಳನ್ನು ಸೆಳೆಯಬಲ್ಲ ನಾಯಕನೊಬ್ಬ ಬೇಕಿತ್ತು.

ಇವೆಲ್ಲವೂ ಒಟ್ಟಾಗಿ ಅಮರ್‌ಸಿಂಗ್ ಕಾಂಗ್ರೆಸ್ ನಾಯಕರ ಕೈ ದಾಳವಾಗಿ ಬಿಟ್ಟರು.ಅಮರ್‌ಸಿಂಗ್ ಮೊದಲು ‘ಸಿಡಿ’ಯೊಂದನ್ನು ಹೊರಹಾಕಿದರು. ಅದರಲ್ಲಿ ಶಾಂತಿಭೂಷಣ್ ಅವರು ಮಗನ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಒಲಿಸಿಕೊಳ್ಳುವ ಭರವಸೆ ನೀಡಿರುವ ಸಂಭಾಷಣೆ ಇದೆ.
ಅದರ ಬೆನ್ನಲ್ಲೇ ಉತ್ತರಪ್ರದೇಶದ ಮಾಯಾವತಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದಿರುವ ಪ್ರಕರಣ ಬಯಲಾಗಿದೆ. ಈಗ ಆಸ್ತಿ ಖರೀದಿಯಲ್ಲಿ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ವಂಚಿಸಿರುವ ಆರೋಪ ಎದುರಾಗಿದೆ.
ಹಿರಿಯ ವಕೀಲರಾದ ಶಾಂತಿಭೂಷಣ್ ಮತ್ತು ಮಕ್ಕಳು ಕೇವಲ ದುಡ್ಡು ಸಂಪಾದನೆಗಾಗಿಯೇ ವಕೀಲಿ ವೃತ್ತಿ ಮಾಡಿಕೊಂಡವರಲ್ಲ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನೆತ್ತಿಕೊಂಡು ಕಾನೂನು ಹೋರಾಟ ನಡೆಸುತ್ತಾ ಬಂದವರು.
ನ್ಯಾಯಮೂರ್ತಿಗಳ ಭ್ರಷ್ಟಾಚಾರದ ವಿರುದ್ಧವೂ ದನಿ ಎತ್ತಿ ಅಪಾಯವನ್ನು ಮೈಮೇಲೆ ಎಳೆದುಕೊಂಡವರು. ಅವರು ಹೇಳುತ್ತಿರುವಂತೆ ಅಮರ್‌ಸಿಂಗ್ ಸಿಡಿ ನಕಲಿಯೂ ಇರಬಹುದು, ಉತ್ತರಪ್ರದೇಶ ದಲ್ಲಿ ಪಡೆದಿರುವ ಜಮೀನು ಮಾರುಕಟ್ಟೆ ಬೆಲೆಗೆ ಖರೀದಿಸಿರಬಹುದು. ಮುದ್ರಾಂಕ ಶುಲ್ಕ ವಂಚಿಸದೆಯೂ ಇರಬಹುದು.
ಆದರೆ ಯಾವುದೇ ಚುನಾವಣೆ ಇಲ್ಲದೆ ನೂರು ಕೋಟಿ ನಾಗರಿಕರ ಪ್ರತಿನಿಧಿಗಳಾಗಿ ಲೋಕಪಾಲ ರಚನಾ ಸಮಿತಿಯ ಸದಸ್ಯರಾಗಿ ನೇಮಕ ಗೊಂಡವರ ಮೇಲೆ ಈ ರೀತಿಯ ಸಂಶಯದ ನೆರಳೂ ಚಾಚಬಾರದಲ್ಲವೇ? ಯಾಕೆಂದರೆ ಅಣ್ಣಾ ಹಜಾರೆ ಅವರ ಹೋರಾಟ ಕಾನೂನಿ ನದ್ದಲ್ಲ, ಅದು ನೈತಿಕತೆಯದ್ದು.

ಶರದ್‌ಪವಾರ್ ಸೇರಿದಂತೆ ಅಣ್ಣಾ ಹಜಾರೆ ಅವರು ಗುರಿ ಇಟ್ಟಿರುವ ರಾಜಕಾರಣಿಗಳು ಹೊಂದಿರುವ ಕೋಟ್ಯಂತರ ರೂಪಾಯಿ ಮೌಲ್ಯದ  ಆಸ್ತಿ ಅಕ್ರಮವಾಗಿ ಗಳಿಸಿದ್ದೆಂದು ಎಲ್ಲಿ ಸಾಬೀತಾಗಿದೆ? ಲೋಕಪಾಲರ ನೇಮಕ ಕೂಡಾ ಭ್ರಷ್ಟರ ವಿರುದ್ಧದ ನೈತಿಕ ಹೋರಾಟದ ಒಂದು ಭಾಗ ಅಲ್ಲವೇ?
ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ನಂತರ ಕೆಸರೆರಚಾಟಕ್ಕೆ ಬಲಿಯಾದವರು ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಾಯುಕ್ತರಿಗೆ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಕೆಣಕಿದ್ದೇ ತಡ, ನ್ಯಾ.ಹೆಗ್ಡೆ ಅವರು ಕೆಂಡಾಮಂಡಲವಾಗಿಬಿಟ್ಟರು.
ಇದೇ ಅಭಿಪ್ರಾಯವನ್ನು ಇನ್ನೊಂದು ರೀತಿಯಲ್ಲಿ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕೆಲವು ವಾರಗಳ ಹಿಂದೆ ಹೇಳಿದ್ದಾಗಲೂ ವಿವಾದ ಸೃಷ್ಟಿಯಾಗಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವೈಯಕ್ತಿಕವಾದ ಪ್ರಾಮಾಣಿಕತೆಯನ್ನಾಗಲಿ, ಕ್ಷಮತೆಯನ್ನಾಗಲಿ ಯಾರೂ ಪ್ರಶ್ನಿಸುವ ಹಾಗಿಲ್ಲ.
ಹಾಗಿದ್ದರೂ ಯಾಕೆ ಅವರನ್ನು ಕೆಣಕುವಂತಹ ಚುಚ್ಚುಮಾತುಗಳು ತೂರಿಬರುತ್ತಿವೆ? ಇದಕ್ಕೆ ಸ್ವಲ್ಪಮಟ್ಟಿಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೂ ಕಾರಣ.ರಾಜ್ಯ ಸರ್ಕಾರದ ಅಸಹಕಾರದಿಂದ ನೊಂದು ಹತ್ತು ತಿಂಗಳ ಹಿಂದೆ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದಾಗ ನ್ಯಾ. ಸಂತೋಷ್‌ಹೆಗ್ಡೆ ದೇಶದ ಗಮನ ಸೆಳೆದಿದ್ದರು. ಅದು ಅವರ ಜನಪ್ರಿಯತೆಯ ಉತ್ತುಂಗ ಸ್ಥಿತಿ.

ಆದರೆ ಕರ್ನಾಟಕದ ಜನತೆ ಮಾತ್ರವಲ್ಲ, ಇಡೀ ದೇಶದ ಪ್ರಜ್ಞಾವಂತರು ರಾಜೀನಾಮೆ ಹಿಂತೆಗೆದುಕೊಳ್ಳಲು ಒತ್ತಾಯಿಸಿದಾಗಲೂ ಜಗ್ಗದ ಅವರು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಮಾತಿಗೆ ಮಣಿದು ರಾಜೀನಾಮೆ ಹಿಂತೆಗೆದುಕೊಂಡರು.
ಮರುಗಳಿಗೆಯಿಂದ ಅವರ ಜನಪ್ರಿಯತೆ ಕುಸಿಯತೊಡಗಿತ್ತು. ಅಲ್ಲಿಯ ವರೆಗೆ ಲೋಕಾಯುಕ್ತರ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದವರೂ ನಂತರದ ದಿನಗಳಲ್ಲಿ ನಾಲಿಗೆ ಸಡಿಲ ಬಿಡತೊಡಗಿದ್ದರು. ತಮ್ಮನ್ನು ಕೆಣಕಲೆಂದೇ ಇಂತಹ ಚುಚ್ಚುಮಾತುಗಳನ್ನು ತೂರಿಬಿಡಲಾಗುತ್ತಿದೆ ಎಂದು ಗೊತ್ತಿದ್ದರೂ ನ್ಯಾ.ಸಂತೋಷ್‌ಹೆಗ್ಡೆ ಅವುಗಳಿಗೆ ಭಾವಾವೇಶದಿಂದ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ.
ದಿಗ್ವಿಜಯ್‌ಸಿಂಗ್ ಟೀಕೆಗೆ ಪ್ರತಿಕ್ರಿಯಿಸಿದ ರೀತಿಯಲ್ಲಿಯೂ ಈ ಭಾವಾವೇಶ ಇತ್ತು.ಒಮ್ಮೊಮ್ಮೆ ಸಾತ್ವಿಕರ ಮೌನ ಕೂಡಾ ಅವರ ಟೀಕಾಕಾರರ ಬಾಯಿಮುಚ್ಚಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದು ಲೋಕಾಯುಕ್ತರಿಗೆ ಯಾಕೋ ಮನವರಿಕೆಯಾದಂತಿಲ್ಲ.
ಇವರನ್ನೆಲ್ಲ ಕಟ್ಟಿಕೊಂಡಿರುವ ಅಣ್ಣಾ ಹಜಾರೆ ಅವರೂ ಆರೋಪ ಮುಕ್ತರಾಗಿಲ್ಲ. ಅಣ್ಣಾ ಹಜಾರೆ ಅಧ್ಯಕ್ಷರಾಗಿರುವ ಹಿಂದ್ ಸ್ವರಾಜ್ ಟ್ರಸ್ಟ್‌ನ ಖಾತೆಯಲ್ಲಿದ್ದ 2.2 ಲಕ್ಷ ರೂಪಾಯಿಗಳನ್ನು ಅವರ ಹುಟ್ಟುಹಬ್ಬ ಆಚರಣೆಗೆ ಬಳಸಲಾಗಿತ್ತಂತೆ. ಈ ಬಗ್ಗೆ 2005ರಲ್ಲಿ ತನಿಖೆ ಮಾಡಿದ ಸಾವಂತ್ ಆಯೋಗ ಈ ಆರೋಪ ನಿಜ ಎಂದು ವರದಿ ನೀಡಿದೆ.
ರಾಜಕಾರಣಿಗಳು, ಉದ್ಯಮಿಗಳು, ಚಿತ್ರತಾರೆಯರು ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವಾಗ ಈ ಎರಡು ಲಕ್ಷ ರೂಪಾಯಿ ಯಾವ ಲೆಕ್ಕದ್ದು ಎಂದು ಪ್ರಶ್ನಿಸಬಹುದು. ಖರ್ಚಾಗಿರುವ ಹಣವನ್ನು ಅಣ್ಣಾ ಹಜಾರೆ ಸ್ವಂತಕ್ಕಾಗಿ ಬಳಸಿಕೊಳ್ಳಲಿಲ್ಲ ಎಂದು ಸಮರ್ಥಿಸಿಕೊಳ್ಳಲೂ ಬಹುದು.
ಆದರೆ ಅಣ್ಣಾ ಹಜಾರೆ ಅವರಲ್ಲಿ ಗಾಂಧೀಜಿಯನ್ನು ಕಾಣಬಯಸುವ ಕೋಟ್ಯಂತರ ಜನರ ಕಣ್ಣಿನಲ್ಲಿ ಇಂತಹ ಸಣ್ಣ ತಪ್ಪುಗಳು ಭ್ರಮನಿರಸನವನ್ನು ಉಂಟುಮಾಡಬಲ್ಲದು. ಯಾಕೆಂದರೆ ಹಣಕಾಸಿನ ವಿಷಯದಲ್ಲಿ ಗಾಂಧೀಜಿ ಇಂತಹ ಸಣ್ಣ ತಪ್ಪುಗಳನ್ನೂ ಮಾಡಿರಲಿಲ್ಲ.

ಸುಮಾರು 30 ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಮತ್ತು ಇದಕ್ಕಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸಿದ್ದ ಗಾಂಧೀಜಿ ವಿರುದ್ಧ ಯಾರೂ ಹಣ ದುರುಪಯೋಗದ ಸಣ್ಣ ಸೊಲ್ಲು ಕೂಡಾ ಎತ್ತಿರಲಿಲ್ಲ.

ಇದನ್ನು ನೋಡಿಯೇ ಆಲ್‌ಬರ್ಟ್ ಐನ್‌ಸ್ಟೀನ್ ‘ರಕ್ತ ಮೂಳೆ ಮಾಂಸಗಳನ್ನು ಹೊಂದಿದ್ದ ಇಂತಹ ವ್ಯಕ್ತಿ ಜಗತ್ತಿನಲ್ಲಿ ಸಂಚರಿಸಿದ್ದನೇ, ಬದುಕಿದ್ದನೇ ಎಂದು ಮುಂಬರುವ ಪೀಳಿಗೆ ಸಂಶಯಪಡಬಹುದು’ ಎಂದು ಉದ್ಗರಿಸಿದ್ದು.

ಭ್ರಷ್ಟಾಚಾರ ನಿರ್ಮೂಲನೆ ಈಗಲೂ ಸಾಧ್ಯ. ಅದಕ್ಕಾಗಿ ಮಹಾತ್ಮ ಗಾಂಧೀಜಿಯವರಂತಹ ನಾಯಕರ ಅಗತ್ಯ ಇದೆ. ಅವರನ್ನು ಎಲ್ಲಿಂದ ತರುವುದು?

Monday, April 11, 2011

ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ

ಕತ್ತಲೆಯ ಹಾದಿಯಲ್ಲಿ ಕನಸುಗಳ ದೀಪ ಹಿಡಿದುಕೊಂಡು ಹೊರಟವರಿಗೆ ಎದುರಾಗುವ ಪ್ರತಿಯೊಂದು ನೆರಳುಗಳಲ್ಲಿಯೂ ತಮ್ಮನ್ನು ಮುನ್ನಡೆಸುವ ಅವತಾರಪುರುಷ ಕಾಣುವುದು ಸಹಜ. ಭ್ರಷ್ಟ ವ್ಯವಸ್ಥೆಯಿಂದಾಗಿ ರೋಸಿಹೋಗಿ ಹತಾಶೆಗೀಡಾದ ಜನತೆಯ ಕಣ್ಣುಗಳಿಗೆ ಸರ್ಕಾರದ ವಿರುದ್ಧ ಸಣ್ಣಗೆ ಸಿಟ್ಟುಮಾಡಿಕೊಂಡ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಲ್ಲಿ ಒಬ್ಬ ಜಯಪ್ರಕಾಶ್ ನಾರಾಯಣ್ ಕಾಣುತ್ತಾರೆ, ಕಪ್ಪು ಹಣದ ವಿರುದ್ಧ ಮಾತನಾಡುವ ಒಬ್ಬ ಸಾಮಾನ್ಯ ಯೋಗಗುರು ಬಾಬಾ ರಾಮ್‌ದೇವ್ ಅವರಲ್ಲಿ ಒಬ್ಬ ವಿನೋಬಾ ಭಾವೆ ಕಾಣುತ್ತಾರೆ, ಒಬ್ಬ  ಸಾಮಾಜಿಕ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರಲ್ಲಿ ಮಹಾತ್ಮ ಗಾಂಧೀಜಿ ಕಾಣುತ್ತಾರೆ.
ಆದರೆ ಒಬ್ಬ ಮಹಾತ್ಮ, ಒಬ್ಬ ಜೆಪಿ ಇಲ್ಲವೇ ಒಬ್ಬ ವಿನೋಬಾ ಭಾವೆ ರಾತ್ರಿ ಹಗಲಾಗುವುದರೊಳಗೆ ಸುದ್ದಿಮಾಧ್ಯಮಗಳ ಮಿಂಚುಬೆಳಕಲ್ಲಿ ಉದಿಸಿದ ತಾರೆಗಳಲ್ಲ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಆ ಮಹನೀಯರ ಹೋರಾಟದ ಬದುಕನ್ನು ಅಗೌರವಿಸಿದಂತಾಗುವುದು ಮಾತ್ರವಲ್ಲ, ಭ್ರಷ್ಟಚಾರದ ವಿರುದ್ದ ದೇಶದಾದ್ಯಂತ ಹುಟ್ಟಿಕೊಂಡಿರುವ ಜನಾಭಿಪ್ರಾಯ ತಾರ್ಕಿಕ ಅಂತ್ಯ ಕಾಣದೆ ವ್ಯರ್ಥಗೊಂಡು ಮತ್ತೊಂದು ಭ್ರಮನಿರಸನಕ್ಕೆ ದಾರಿಮಾಡಿಕೊಡುವ ಅಪಾಯವೂ ಇದೆ.
ಸರ್ಕಾರ ಮಣಿಯಲು ಕಾರಣವಾದ ‘ಕ್ರಾಂತಿಯ ಹರಿಕಾರರು’ ತಾವೇ ಎಂದು  ಮಾಧ್ಯಮಗಳು ಆಗಲೇ ತಮ್ಮ ಬೆನ್ನು ತಟ್ಟಿಕೊಳ್ಳುತ್ತಿವೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹದ ಯಶಸ್ಸಿನಲ್ಲಿ ಅತೀ ಎನಿಸುವಷ್ಟು ಕ್ರಿಯಾಶೀಲವಾಗಿದ್ದ ಮಾಧ್ಯಮಗಳ, ಅದರಲ್ಲೂ ಹುಟ್ಟು-ಸಾವುಗಳೆರಡನ್ನೂ ಹಬ್ಬದಂತೆ ಆಚರಿಸುವ ಟಿವಿ ಚಾನೆಲ್‌ಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಅದೇ ಟಿವಿ ಚಾನೆಲ್‌ಗಳು ಆಗಲೇ ಭಿನ್ನ ರಾಗ ಹಾಡುತ್ತಿರುವ ಬಾಬಾ ರಾಮ್‌ದೇವ್ ಅವರ ಸುತ್ತ ನೆರೆದಿವೆ. ಮಾಧ್ಯಮಗಳ ಮೇಲಿನ ಅತಿ ಅವಲಂಬನೆಯ ಅಪಾಯ ಇದು.
ಒಂದು ಮಸೂದೆಯ ರಚನೆಯ ಸಮಿತಿಯಲ್ಲಿ ನಾಗರಿಕ ಸಮಾಜದ ಐವರು ಪ್ರತಿನಿಧಿಗಳು ಪಾಲ್ಗೊಳ್ಳಲು ಸರ್ಕಾರ ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ತಿಳಿದುಕೊಳ್ಳಬೇಕಾಗಿಲ್ಲ. ಈಗಿನ ಭ್ರಷ್ಟ ರಾಜಕೀಯ ವ್ಯವಸ್ಥೆಯ ಆಳ-ಅಗಲಗಳ ಪರಿಚಯ ಇರುವ ಯಾರೂ ಅಷ್ಟೊಂದು ಆಶಾವಾದಿಯಾಗುವುದು ಸಾಧ್ಯ ಇಲ್ಲ. ಕರ್ನಾಟಕಕ್ಕಿಂತ ಬೇರೆ ಉದಾಹರಣೆ ಯಾಕೆ ಬೇಕು? ರಾಜ್ಯದ ಮುಖ್ಯಮಂತ್ರಿ ಮತ್ತು ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಲೋಕಾಯುಕ್ತರು ಮಾಡಬೇಕಾಗಿದ್ದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟು ಕೈ ಕಟ್ಟಿಹಾಕಿಲ್ಲವೇ? ಇಲ್ಲಿ ಹೈಕೋರ್ಟ್ ಇದ್ದರೆ ಅಲ್ಲಿ ಸುಪ್ರೀಂಕೋರ್ಟ್ ಇದೆ. ನ್ಯಾಯಾಲಯಗಳು ಕೂಡಾ ಇಂದು ಸಂಶಯಾತೀತವಾಗಿ ಉಳಿದಿಲ್ಲ. ಆದ್ದರಿಂದ ಲೋಕಪಾಲರ ನೇಮಕದಿಂದಲೇ ಭ್ರಷ್ಟಾಚಾರ ನಿರ್ಮೂಲನೆಗೊಳ್ಳಲಿದೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಹಾಗೆ ನೋಡಿದರೆ ಲೋಕಪಾಲರ ನೇಮಕಕ್ಕಿಂತಲೂ ಮೊದಲು ಈಗಿನ ಭ್ರಷ್ಟರಾಜಕೀಯ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಯಾಗಬೇಕಿತ್ತು. ಪ್ರತಿಯೊಂದು ಕಾನೂನನ್ನೂ ನಾಗರಿಕ ಸಮಾಜವೇ ರಚಿಸುವ ಇಲ್ಲವೇ ತಿದ್ದುವ ಕೆಲಸವನ್ನು ಮಾಡುವುದು ಸಾಧ್ಯ ಇಲ್ಲವಲ್ಲಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸವನ್ನು ಮಾಡಬೇಕಾಗಿರುವುದು ಶಾಸನ ರಚನೆಯ ಜವಾಬ್ದಾರಿ ಹೊಂದಿರುವ ಜನಪ್ರತಿನಿಧಿಗಳಲ್ಲವೇ? ಆದ್ದರಿಂದ ಶಾಸನಸಭೆಗೆ ಪ್ರಾಮಾಣಿಕರು, ಸಚ್ಚಾರಿತ್ರ್ಯಉಳ್ಳವರು ಮತ್ತು ಪ್ರಜ್ಞಾವಂತರು ಆರಿಸಿಬರುವಂತಹ ಚುನಾವಣಾ ವ್ಯವಸ್ಥೆ ಇಲ್ಲದೆ ಹೋದರೆ ಪ್ರತಿಬಾರಿ ಜನಪರವಾದ ಕಾನೂನು ರಚನೆಗೆ ಅಣ್ಣಾ ಹಜಾರೆ ಅವರು ಉಪವಾಸ ಕೂರಬೇಕಾಗುತ್ತದೆ.
ಅಂದ ಮಾತ್ರಕ್ಕೆ ಸಿನಿಕರಾಗುವ ಅಗತ್ಯ ಖಂಡಿತ ಇಲ್ಲ. ಬೇರೇನೂ ಆಗಬೇಕಾಗಿಲ್ಲ, ಸಿವಿಲ್ ಸೊಸೈಟಿ ರಚಿಸಿರುವ ‘ಜನಲೋಕಪಾಲ ಮಸೂದೆ’ ಅದರ ಮೂಲರೂಪದಲ್ಲಿಯೇ ಕಾಯಿದೆಯಾಗಿ ಅನುಷ್ಠಾನಕ್ಕೆ ಬಂದರಷ್ಟೇ ಸಾಕು. ದೇಶದ ಈಗಿನ ಜನಾಂಗ ಮಾತ್ರವಲ್ಲ ಭವಿಷ್ಯದ ಜನಾಂಗ ಕೂಡಾ ಹಜಾರೆ ಅವರಿಗೆ ಚಿರಋಣಿಯಾಗಿರುತ್ತದೆ. ಆದರೆ  ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಹೊಂದಿದ್ದರೆ ಮುಂದಿನ ದಾರಿ ತುಳಿಯುವಾಗ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ಹೋರಾಟಗಾರರೆಲ್ಲರೂ ಶತ್ರುಗಳನ್ನು ಸರಿಯಾಗಿಯೇ ಗುರುತಿಸಿಕೊಂಡಿರುತ್ತಾರೆ, ಆದರೆ ಯಾವಾಗಲೂ ಹೋರಾಟ ಎಡವಿ ಬೀಳುವುದು ಅದರ ನಾಯಕರು ಆರಿಸಿಕೊಳ್ಳುವ ಮಿತ್ರರ ಆಯ್ಕೆಯಲ್ಲಿ. ಅಣ್ಣಾ ಹಜಾರೆ ಮತ್ತು ಅವರ ಸಂಗಾತಿಗಳು ಎಚ್ಚರ ವಹಿಸಬೇಕಾಗಿರುವುದು ಮಿತ್ರರ ಬಗ್ಗೆ, ಶತ್ರುಗಳ ಬಗ್ಗೆ ಅಲ್ಲ.
ಆಮರಣ ಉಪವಾಸ ಕೊನೆಗೊಳಿಸುವ ಮುನ್ನ ಅಣ್ಣಾ ಹಜಾರೆ ಅವರು ಅಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತಿದ್ದವು. ಆ ಹೊತ್ತಿನಲ್ಲಿ ವೇದಿಕೆಯಲ್ಲಿದ್ದ ವ್ಯಕ್ತಿಯೊಬ್ಬ ಕಾಗದದ ಪೊಟ್ಟಣವೊಂದನ್ನು ಬಿಚ್ಚಿ ದೊಡ್ಡ ಕತ್ತಿಯೊಂದನ್ನು ಹೊರತೆಗೆದು ಅಣ್ಣಾ ಅವರ ಕೈಗೆ ಕೊಡಲು ಹೊರಟಿದ್ದ. ಪಕ್ಕದಲ್ಲಿದ್ದ ಸ್ವಾಮಿ ಅಗ್ನಿವೇಶ್ ತಕ್ಷಣ ಜಾಗೃತರಾಗಿ ಕತ್ತಿ ಕೊಡಲು ಬಂದವನನ್ನು ಹಿಂದಕ್ಕೆ ಸರಿಸಿದರು. ಇಲ್ಲದೆ ಹೋಗಿದ್ದರೆ ನಾವೆಲ್ಲ ಕಾಣಬಯಸುವ ‘ಮಹಾತ್ಮಗಾಂಧಿ’ ಅವರು ಕೈಯಲ್ಲಿ ಕತ್ತಿ ಹಿಡಿದ ‘ರೋಮಾಂಚಕಾರಿ’ ಕ್ಷಣಗಳನ್ನು ಟಿವಿ ಚಾನೆಲ್‌ಗಳು ನೇರಪ್ರಸಾರ ಮಾಡಿಬಿಡುತ್ತಿದ್ದವು. ಮರುದಿನದ ಪತ್ರಿಕೆಗಳಲ್ಲಿ ಅದೇ ಚಿತ್ರ ಪ್ರಕಟವಾಗುತ್ತಿತ್ತೋ ಏನೋ? ಕಣ್ಣರೆಪ್ಪೆ ಮುಚ್ಚಿ ತೆರೆದುಕೊಳ್ಳುವಷ್ಟರಲ್ಲಿ ನಡೆದುಹೋದ ಈ ಸಣ್ಣ ಘಟನೆ ಅಣ್ಣಾ ಹಜಾರೆ ಹೋರಾಟದ ಶಕ್ತಿ-ದೌರ್ಬಲ್ಯಗಳೆರಡನ್ನೂ ಹೇಳುವಂತಿತ್ತು.
ಕತ್ತಿ ಮತ್ತು ಉಪವಾಸದ ಸಂಕೇತಗಳು ಬೇರೆ. ಅವುಗಳು ಬಿಂಬಿಸುವ ವಿಚಾರಧಾರೆಗಳು ಕೂಡಾ ಬೇರೆಬೇರೆ. ಅಣ್ಣಾ ಅವರ ಪಕ್ಕದಲ್ಲಿ ಮಾವೋವಾದಿಗಳಿಗೂ ಅಹಿಂಸೆಯ ಪಾಠ ಬೋಧಿಸುತ್ತಿರುವ ಸ್ವಾಮಿ ಅಗ್ನಿವೇಶ್ ಅಂತಹವರು ಮಾತ್ರವಲ್ಲ ಬಂದೂಕಿನ ನಳಿಕೆಯ ಮೂಲಕ ಬದಲಾವಣೆಯನ್ನು ತರಬಯಸುವ ಕಾಡಲ್ಲಿರುವ ಮಾವೋವಾದಿಗಳಿಗೂ, ಅದನ್ನೇ ಉಪವಾಸದ ಮೂಲಕ ಮಾಡಲು ಹೊರಟಿರುವ ಅಣ್ಣಾ ಹಜಾರೆ ಎಂಬ ಗಾಂಧಿವಾದಿಗೂ ಇರುವ ವ್ಯತ್ಯಾಸವನ್ನೇ ಅರಿಯದ ಕುರುಡುಕಣ್ಣುಗಳ ಕತ್ತಿವೀರರೂ ಇದ್ದಾರೆ. ಸ್ವಾಮಿ ಅಗ್ನಿವೇಶ್, ಶಾಂತಿಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇರ್ಜಿವಾಲಾ, ಕಿರಣ್‌ಬೇಡಿ ಮೊದಲಾದವರ ಜತೆಯಲ್ಲಿ ಬಾಲಿವುಡ್ ತಾರೆಯರು, ಆಧ್ಯಾತ್ಮವನ್ನೇ ವ್ಯಾಪಾರ ಕೊಂಡಿರುವ ‘ದೇವಮಾನವ’ರು, ಅಧಿಕಾರ ಕಳೆದುಕೊಂಡಿರುವ ಭಗ್ನಹೃದಯಿ ರಾಜಕಾರಣಿಗಳು ಕೂಡಾ ಇದ್ದಾರೆ.
ಇವರೆಲ್ಲರ ನಡುವೆ ಅಣ್ಣಾ ಹಜಾರೆ ಅವರ ಜತೆಯಲ್ಲಿಯೇ ಆಮರಣ ಉಪವಾಸ ಕೂತ ವ್ಯಕ್ತಿಗಳ ಹೆಸರಾದರೂ ಯಾರಿಗಾದರೂ ಗೊತ್ತಿದೆಯೇ? ಯಾವ ಪತ್ರಿಕೆಗಳಲ್ಲಿಯಾದರೂ ಅವರ ಹೆಸರು ಪ್ರಕಟಗೊಂಡಿದೆಯೇ? ಯಾವುದಾದರೂ ಟಿವಿ ಚಾನೆಲ್ ಅವರ ಹೆಸರು ಹೇಳಿದೆಯೇ? ತಾನು ಉಪವಾಸ ಅಂತ್ಯಗೊಳಿಸುವ ಮೊದಲು ಅಣ್ಣಾ ಅವರು ಉಪವಾಸ ಕೂತಿದ್ದವರನ್ನು ಎಬ್ಬಿಸಿ ಅವರ ಗಲ್ಲ ಎತ್ತಿ ಹಣ್ಣಿನ ರಸ ಕುಡಿಸುತ್ತಿದ್ದಾಗಷ್ಟೇ ಆ ಅನಾಮಿಕ ಸತ್ಯಾಗ್ರಹಿಗಳ ಮುಖದರ್ಶನವಾಗಿದ್ದು. ಆಗಲೂ ಅವರ ಹೆಸರುಗಳನ್ನು ಯಾರೂ ಹೇಳಲಿಲ್ಲ.  ಆದರೆ ಮುಂಬೈನಲ್ಲಿ ವಿಮಾನದಲ್ಲಿ ಹಾರಿಬಂದು, ದೆಹಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ತಿಂಡಿ-ತೀರ್ಥ ಸೇವಿಸಿ ಪಿಆರ್‌ಗಳ ಮೂಲಕ ಮಾಧ್ಯಮಮಿತ್ರರಿಗೆ ತಮ್ಮ ಆಗಮನದ ವಿಷಯವನ್ನು ಮುಂಚಿತವಾಗಿಯೇ ತಿಳಿಸಿ ಅಣ್ಣಾಹಜಾರೆಯವರ ಜತೆಯಲ್ಲಿ ಒಂದಷ್ಟು ಹೊತ್ತು ಕಾಣಿಸಿಕೊಂಡು ಮಿಂಚಿದ ಬಾಲಿವುಡ್ ತಾರೆಯರ ಹೆಸರುಗಳೆಲ್ಲ ಟಿವಿ ನೋಡುವ, ಪತ್ರಿಕೆ ಓದುವ ಜನರಿಗೆಲ್ಲ ಬಾಯಿಪಾಠವಾಗಿದೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಟಿವಿ ಕ್ಯಾಮೆರಾಗಳು ಕಣ್ಣಿಟ್ಟಿರುವ ವೇದಿಕೆಗಳಿಂದ ಪ್ರಾರಂಭವಾಗುವುದಲ್ಲ, ಅದು ಪ್ರತಿಯೊಬ್ಬರ ಮನೆ ಮತ್ತು ಮನಸ್ಸಿನೊಳಗಿಂದ ಪ್ರಾರಂಭವಾಗಬೇಕು.  ಎದೆ-ತೋಳುಗಳ ಮೇಲೆ ಅಣ್ಣಾಹಜಾರೆ ಹೆಸರು ಬರೆಸುವುದರಿಂದ, ಒಂದೆರಡು ಗಂಟೆ ಧರಣಿ ಕೂತು ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವುದರಿಂದ, ಇಲ್ಲವೇ ಬೀದಿಗಳಲ್ಲಿ ಕ್ಯಾಂಡಲ್‌ಗಳನ್ನು ಹಚ್ಚುವುದರಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸುವುದು ಸಾಧ್ಯ ಇಲ್ಲ. ಈ ಚಿತ್ರತಾರೆಯರು ಸರ್ಕಾರಕ್ಕೆ ವಂಚನೆ ಮಾಡದೆ ಗಳಿಸಿದ ಹಣಕ್ಕೆ ಸರಿಯಾಗಿ ವರಮಾನ ತೆರಿಗೆ ಕೊಟ್ಟರೆ ಸಾಕು.
ಅಣ್ಣಾ ಹಜಾರೆ ಅವರಿಗೆ ಅದಕ್ಕಿಂತ ದೊಡ್ಡ ಬೆಂಬಲ ಬೇಕಿಲ್ಲ. ಸಾಧ್ಯವಾದರೆ ಒಂದಷ್ಟು ಒಳ್ಳೆಯ ಅಭಿರುಚಿಯ ಚಿತ್ರಗಳನ್ನು ಸಮಾಜಕ್ಕೆ ನೀಡಲಿ. ಈ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ ಎಂದು ಎದೆಮೇಲೆ ಕೈಯಿಟ್ಟು ಹೇಳುವ ಎಷ್ಟು ಮಂದಿ ಚಿತ್ರರಂಗದಲ್ಲಿದ್ದಾರೆ? ಲಂಚ ಸ್ವೀಕರಿಸುವುದಿಲ್ಲ ಮಾತ್ರವಲ್ಲ ಕೊಡುವುದೂ ಇಲ್ಲ,  ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಗೊತ್ತಿದ್ದೂ ಕಾನೂನಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದವರು ಮಾತ್ರ ವೇದಿಕೆ ಹತ್ತಿ ಎಂದು  ಹಜಾರೆ ಹೇಳಿದ್ದರೆ ಅವರು ಉಪವಾಸ ಕೂತಿದ್ದ ವೇದಿಕೆ ಮುಕ್ಕಾಲು ಪಾಲು ಖಾಲಿಯಾಗಿರುತ್ತಿತ್ತು.
ಎರಡನೆಯ ದೊಡ್ಡ ಅಪಾಯ ಇರುವುದು ಇಂತಹ ಹೋರಾಟಗಾರರನ್ನೆಲ್ಲ ಸುಲಭದಲ್ಲಿ ಸಮ್ಹೋಹನಕ್ಕೊಳಪಡಿಸುವ ರಾಜಕೀಯ ಮಾಯಾಂಗನೆಯಿಂದ. ಎಂಬತ್ತರ ದಶಕದ ಆದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದಾಗೆಲ್ಲ ಬೆಂಗಳೂರಿನ ಜನಜೀವನ ಸ್ಥಗಿತಗೊಳ್ಳುತ್ತಿತ್ತು. ಅಧಿಕಾರದಲ್ಲಿದ್ದವರು ಕೈಕಾಲು ಕಂಪಿಸುತ್ತಿದ್ದವು. ಮುಂದೆ ರೈತರದ್ದೇ ಸರ್ಕಾರ ಎಂದು ಭ್ರಮಿಸಿಕೊಂಡವರು ಆ ಕಾಲದಲ್ಲಿ ಬಹಳ ಮಂದಿ ಇದ್ದರು. ಇನ್ನೊಂದೆಡೆ ಅಲ್ಲಿಯ ವರೆಗೆ ಕೇವಲ ಮುಖರಹಿತ ಮತಬ್ಯಾಂಕ್ ಆಗಿದ್ದ ದಲಿತರು ಸಂಘಟಿತರಾಗಿ ನಡೆಸುತ್ತಿದ್ದ ಚಳವಳಿಯಿಂದ ರಾಜಕೀಯ ಪಕ್ಷಗಳು ತಮ್ಮ ನೆಲೆ ಕಳೆದುಕೊಂಡವರಂತೆ ಭೀತಿಗೊಳಗಾಗಿದ್ದವು. ಆದರೇನಾಯಿತು? ಈ ಎರಡೂ ಚಳವಳಿಗಳ ನಾಯಕರು ರಾಜಕೀಯದ ಮೋಹಪಾಶಕ್ಕೆ ಸಿಕ್ಕಿ ತಾವು ನೆಲೆಕಲೆದುಕೊಂಡಿದ್ದು ಮಾತ್ರವಲ್ಲ ಚಳವಳಿಗಳು ಕೂಡಾ ದಿಕ್ಕು ತಪ್ಪಲು ಕಾರಣರಾದರು. ಈ ಅಪಾಯವನ್ನು ಅಣ್ಣಾ ಹಜಾರೆ ಮತ್ತು ಸಂಗಡಿಗರು ಕೂಡಾ ಮುಂದಿನ ದಿನಗಳಲ್ಲಿ ಎದುರಿಸುವ ಸಾಧ್ಯತೆ ಇದೆ.
ಆಗಲೇ ‘ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಯನ್ನು ಪತ್ರಕರ್ತರು ಅಣ್ಣಾ ಹಜಾರೆ ಅವರನ್ನು ಪೆದ್ದುಪೆದ್ದಾಗಿ ಕೇಳತೊಡಗಿದ್ದಾರೆ. ಈ ರೀತಿಯ ಜನಬೆಂಬಲ ಕಂಡಾಗ ಎಂತಹ ಗಟ್ಟಿಮನಸ್ಸಿನ ನಾಯಕರ ಸಂಯಮವೂ ಕರಗುವುದು ಸಹಜ. ಅಣ್ಣಾ ಹಜಾರೆ ಅವರಲ್ಲಿ ಅಲ್ಲದಿದ್ದರೂ ಅವರ ಬೆಂಬಲಿಗರಲ್ಲಿ ರಾಜಕೀಯ ಆಕಾಂಕ್ಷೆ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಬಾಬಾ ರಾಮ್‌ದೇವ್ ಅವರ ಭಿನ್ನಮತದ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರಿಂದಾಗಿ ತನ್ನ ರಾಜಕೀಯ ಆಕಾಂಕ್ಷೆ ಭಗ್ನಗೊಳ್ಳಬಹುದೆಂಬ ಭೀತಿಯಿಂದ ಹುಟ್ಟಿಕೊಂಡ ಹತಾಶೆಯೂ ಇರುವಂತೆ ಕಾಣುತ್ತಿದೆ.
ಆದ್ದರಿಂದ ಎಲ್ಲಿಯ ವರೆಗೆ ಅಣ್ಣಾಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ ಅಲ್ಲಿಯ ವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು. ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ  ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ದವಾಗಬೇಕು. ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿಯಾಗಲಿ, ಶಕ್ತಿಯಾಗಲಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ. ರಾಜಕೀಯ ಪಕ್ಷಗಳು ಕೂಡಾ  ಮೈಯೆಲ್ಲ ಕಣ್ಣಾಗಿ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ.