Monday, May 13, 2013

ಜಾತಿ ಮೀರಿ ಯೋಚನೆ ಮಾಡಿದ ರಾಜ್ಯದ ಮತದಾರ

ರ್ನಾಟಕದ ರಾಜಕಾರಣಿಗಳು ಮಾತ್ರವಲ್ಲ ಮತದಾರರೂ ಜಾತಿವಾದಿಗಳು ಎಂಬ ಅಭಿಪ್ರಾಯ ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ ಹರಡಿತ್ತು. ಇದನ್ನು ವಿಶ್ವಾಸಪೂರ್ವಕವಾಗಿ ನಿರಾಕರಿಸುವ ಸ್ಥಿತಿಯಲ್ಲಿ ಕನ್ನಡಿಗರೂ ಇರಲಿಲ್ಲ. ಸಾಮಾನ್ಯವಾಗಿ ಜಾತಿಯನ್ನೇ ಆಧರಿಸಿ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಇಂತಹದ್ದೊಂದು ಅಭಿಪ್ರಾಯ ಹುಟ್ಟಿಕೊಳ್ಳುವುದು ಸಹಜ.
ಉದಾಹರಣೆಗೆ ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ ಇತ್ಯಾದಿ. ಆದರೆ ಸಾಮಾನ್ಯವಾಗಿ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಿಗೆ `ಜಾತಿವಾದಿ ಸರ್ಕಾರ' ಎಂಬ ಹಣೆಪಟ್ಟಿ ಎಲ್ಲರೂ ಆಡಿಕೊಳ್ಳುವಂತೆ ಅಂಟಿಕೊಳ್ಳುವುದು ಕಡಿಮೆ. ಕರ್ನಾಟಕ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸದೆ ಸದಾ ರಾಷ್ಟ್ರೀಯ ಪಕ್ಷಗಳ ಪರವಾಗಿ ನಿಂತ ರಾಜ್ಯ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿಯೂ ಈ ಆರೋಪ ಕನ್ನಡಿಗರು ನಾಚಿಕೆಪಟ್ಟುಕೊಳ್ಳುವ ರೀತಿಯಲ್ಲಿ ಕೇಳಿಬಂತು. `ನಾವೆಲ್ಲ ಹಿಂದೂ, ಜಾತಿ ಮೀರಿ ನಾವೆಲ್ಲ ಒಂದು' ಎಂಬ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬಂದ ಭಾರತೀಯ ಜನತಾ ಪಕ್ಷದ ಆಳ್ವಿಕೆಯ ಕಾಲದಲ್ಲಿಯೇ ಇದು ಜೋರಾಗಿ ಕೇಳಿಬಂದದ್ದು ವಿಪರ್ಯಾಸ.
ಇದಕ್ಕೆ ಕಾರಣಗಳು ಅನೇಕ. ಬಾಬ್ರಿ ಮಸೀದಿ ಧ್ವಂಸದ ನಂತರ ಎದ್ದ `ಹಿಂದುತ್ವ'ದ ಅಲೆಯ ಮೇಲೇರಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ರಾಜಕೀಯವಾಗಿ ಬೆಳೆಯುವ ಸೂಚನೆ ನೀಡಿದಾಗಲೂ 1994ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅದು ಗೆಲ್ಲಲು ಸಾಧ್ಯವಾಗಿದ್ದು 40 ಸ್ಥಾನಗಳನ್ನು ಮಾತ್ರ. ಅದರ ನಂತರದ ಚುನಾವಣೆಯಲ್ಲಿಯೂ ಬಿಜೆಪಿ ಪ್ರಯಾಸಪಟ್ಟು ನಾಲ್ಕು ಸ್ಥಾನಗಳನ್ನಷ್ಟೇ ಹೆಚ್ಚುವರಿಯಾಗಿ ಗಳಿಸಿತ್ತು. ಆಗಲೇ ಬಿಜೆಪಿ ನಾಯಕರು ಕರ್ನಾಟಕದಲ್ಲಿ `ಸೋಷಿಯಲ್ ಎಂಜಿನಿಯರಿಂಗ್' ಹೆಸರಲ್ಲಿ ಜಾತಿ ರಾಜಕಾರಣವನ್ನು ಬಹಿರಂಗವಾಗಿಯೇ ಪ್ರಾರಂಭಿಸಿದ್ದು. ಇದಕ್ಕಾಗಿ ಲಿಂಗಾಯತರಾದ ಬಿ.ಎಸ್.ಯಡಿಯೂರಪ್ಪನವರನ್ನು ನಾಯಕನಾಗಿ ಬಿಂಬಿಸಿದ್ದು. 1999ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ವೀರೇಂದ್ರ ಪಾಟೀಲರ ಪದಚ್ಯುತಿಯಿಂದಾಗಿ ಅಸಮಾಧಾನಕ್ಕೀಡಾದ ಲಿಂಗಾಯತರನ್ನು ಸೆಳೆಯುವ
ಯೋಚನೆ ಕೂಡಾ ಬಿಜೆಪಿಯದ್ದಾಗಿತ್ತು. 79 ಶಾಸಕರನ್ನು ಗೆಲ್ಲಿಸಿದ್ದ 2004ರ ವಿಧಾನಸಭಾ ಚುನಾವಣೆ ಬಿಜೆಪಿಯ ಜಾತಿ ರಾಜಕಾರಣದ ಲೆಕ್ಕಾಚಾರವನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಎಚ್.ಡಿ.ಕುಮಾರಸ್ವಾಮಿಯವರ ಮೇಲಿನ ವಚನಭ್ರಷ್ಟತೆಯ ಆರೋಪವನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಂಡ 2008ರ ಚುನಾವಣೆಯಲ್ಲಿ ಕಣ್ಣಿಗೆ ರಾಚುವ ರೀತಿಯಲ್ಲಿ ಜಾತಿ ರಾಜಕಾರಣ ಮೆರೆದಾಡಿತು. `ಲಿಂಗಾಯತ ಯಡಿಯೂರಪ್ಪನವರಿಗೆ ಆಗಿರುವ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಮತ ಹಾಕಿ' ಎಂದು ನೇರವಾಗಿ ಹೇಳುವ ಮಟ್ಟಕ್ಕೆ ಬಿಜೆಪಿ ಚುನಾವಣಾ ಪ್ರಚಾರವನ್ನು ಕೊಂಡೊಯ್ದಿತ್ತು.
ರಾಜ್ಯದ ಮತದಾರರು ಮುಖ್ಯವಾಗಿ ಲಿಂಗಾಯತರು ಬಿಜೆಪಿಯ ಜಾತಿ ಕೂಗಿಗೆ ಓಗೊಟ್ಟರೇನೋ ಎಂದು ಅನುಮಾನ ಮೂಡಿಸುವ ರೀತಿಯಲ್ಲಿ ಫಲಿತಾಂಶವೂ ಹೊರಬಿತ್ತು. ಬಿಜೆಪಿ 110 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲಿಂದಲೇ ಬಿಜೆಪಿಯ ಅದರಲ್ಲೂ ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪ ಎಂಬ ನಾಯಕನ ಪತನ ಪ್ರಾರಂಭವಾಗಿದ್ದು. ಆ ಚುನಾವಣೆಯಲ್ಲಿ 59 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದು ಮಾತ್ರವಲ್ಲ ಅವರಲ್ಲಿ 38 ಶಾಸಕರು ಬಿಜೆಪಿಗೆ ಸೇರಿದವರಾಗಿದ್ದರು. ಅಷ್ಟು ಮಾತ್ರವಲ್ಲ ಒಕ್ಕಲಿಗರು ಮತ್ತು ಮುಸ್ಲಿಮರನ್ನು ಹೊರತುಪಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (29), ಹಿಂದುಳಿದ ವರ್ಗ (16) ಹಾಗೂ ಬ್ರಾಹ್ಮಣ (9) ಶಾಸಕರು ಕೂಡಾ ಅತಿಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬಂದದ್ದು ಕೂಡಾ ಬಿಜೆಪಿಯಲ್ಲಿ. ಲಿಂಗಾಯತರು ಬಿಜೆಪಿಯಲ್ಲಿರುವ ಲಿಂಗಾಯತ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕದೆ ಆ ಪಕ್ಷದಿಂದ ಸ್ಪರ್ಧಿಸಿದ್ದ ಅನ್ಯ ಜಾತಿಯ ಅಭ್ಯರ್ಥಿಗಳಿಗೂ ಮತಹಾಕಿದ್ದು ಇದರಿಂದ ಸ್ಪಷ್ಟ.
ತಮಗೆ ಅನುಕೂಲವಾಗಿರುವ `ಜನಾಭಿಪ್ರಾಯ'ದ ಕುದುರೆಯೇರಿ ಯಡಿಯೂರಪ್ಪನವರೂ ಹೊರಟರು. ಮುಖ್ಯಮಂತ್ರಿಯಾಗುವವರೆಗೆ ರಾಜಾರೋಷವಾಗಿ ತನ್ನನ್ನು ಲಿಂಗಾಯತ ನಾಯಕನೆಂದು ಬಿಂಬಿಸಿಕೊಳ್ಳದೆ ಇದ್ದ ಯಡಿಯೂರಪ್ಪ ನಿಧಾನವಾಗಿ ಆ ಕೆಲಸವನ್ನು ಶುರು ಮಾಡಿದ್ದರು. ಜಾತಿ ನಾಯಕರಾಗುವ ಮೂಲಕ ಯಡಿಯೂರಪ್ಪ ರಾಜಕೀಯ ಪ್ರವೇಶ ಮಾಡಿದವರಲ್ಲ. ಅಧಿಕಾರಕ್ಕೆ ಬರುವವರೆಗೆ ಅಂತಹ ಆರೋಪವೂ ಅವರ ಮೇಲೆ ಇರಲಿಲ್ಲ. ಆರ್‌ಎಸ್‌ಎಸ್‌ನ ನಿಷ್ಠಾವಂತ ಅನುಯಾಯಿಯಾಗಿದ್ದ ಅವರು ಅದು ಬಹಿರಂಗವಾಗಿ ಪ್ರತಿಪಾದಿಸುವ `ಜಾತಿಮೀರಿದ ಧರ್ಮ'ವನ್ನೇ ಹೆಚ್ಚು ನಂಬಿ ರಾಜಕಾರಣ ಮಾಡಿದವರು. ಆದರೆ ಕಳೆದ ಚುನಾವಣೆಯ ಫಲಿತಾಂಶ ಯಡಿಯೂರಪ್ಪನವರ ತಲೆಯನ್ನೂ ತಿರುಗಿಸಿಬಿಟ್ಟಿತು. ಅವರ ಹೃದಯದೊಳಗೆ ಜಾತಿ ಇತ್ತೋ ಇಲ್ಲವೋ ಆದರೆ ಬಹಿರಂಗವಾಗಿ ತಮ್ಮನ್ನು ಲಿಂಗಾಯತರ ನಾಯಕನಾಗಿಯೇ ಬಿಂಬಿಸಿಕೊಳ್ಳುವುದರಲ್ಲಿಯೇ ಯಡಿಯೂರಪ್ಪನವರು ಸಂಭ್ರಮಪಟ್ಟರು. ಇದರಿಂದ ರಾಜಕೀಯವಾಗಿ ಲಾಭವಾಗಲಿದೆ ಎಂಬ ಬೆಂಬಲಿಗರ ಮಾತನ್ನು ನಂಬಿಬಿಟ್ಟರು. ಅಗತ್ಯಕ್ಕಿಂತಲೂ ಹೆಚ್ಚಾಗಿ ವೀರಶೈವ ಮಠಗಳಿಗೆ ಭೇಟಿಕೊಟ್ಟರು. ರಾಜ್ಯದ ಬಜೆಟ್‌ನಲ್ಲಿ ಆ ಮಠಗಳಿಗೆ ಅನುದಾನವನ್ನು ಬೇಕಾಬಿಟ್ಟಿಯಾಗಿ ಹಂಚುವ ಕೆಟ್ಟಸಂಪ್ರದಾಯವನ್ನು ಪ್ರಾರಂಭಿಸಿದರು. ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ ಜಾತಿಯ ಗುರಾಣಿ ಬಳಸಿಕೊಂಡು ಬಚಾವಾಗುವ ಪ್ರಯತ್ನ ಪಟ್ಟರು. ಕೊನೆಗೆ ಅದೇ ಜಾತಿಯನ್ನು ನಂಬಿ ಸ್ವಂತ ಪಕ್ಷವನ್ನೂ ಕಟ್ಟಿದರು.
ಇದನ್ನೆಲ್ಲ ನೋಡುತ್ತಾ ಲಿಂಗಾಯತರಲ್ಲಿದ್ದ `ಪ್ರಜ್ಞಾವಂತ'ರೆನಿಸಿಕೊಂಡವರು ಕೂಡಾ ಜಾತಿ ಬಳಸಿಕೊಂಡೇ ಹೆಚ್ಚು ಖಾಸಗಿಯಾಗಿ, ಸ್ವಲ್ಪ ಬಹಿರಂಗವಾಗಿ ಯಡಿಯೂರಪ್ಪನವರನ್ನು ಸಮರ್ಥಿಸಿಕೊಳ್ಳತೊಡಗಿದರು. ಆ ಸಮಯದಲ್ಲಿಯೇ `ಬೇರೆ ಜಾತಿಗಳ ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮಾಡಿಲ್ಲವೇ?' ಎಂಬ ನೀತಿಗೆಟ್ಟ ಸಮರ್ಥನೆಗಳು ಕೇಳಿಬರತೊಡಗಿದ್ದು. ಇಲ್ಲಿಯೇ ನಮ್ಮ ಅನೇಕ ಬುದ್ದಿಜೀವಿಗಳು, ಪ್ರೊಫೆಸರ್‌ಗಳು, ಪತ್ರಕರ್ತರು, ಸಮಾಜವಿಜ್ಞಾನಿಗಳು ಎಡವಿದ್ದು. ಇವರಲ್ಲಿ ಹೆಚ್ಚಿನವರು ಸಾಮಾನ್ಯ ಲಿಂಗಾಯತ ಮತದಾರರ ಅಂತರಾಳವನ್ನು ಅರಿತುಕೊಳ್ಳಲು ವಿಫಲರಾಗಿದ್ದರು. ಮನಸ್ಸಿನೊಳಗೆ ಎಷ್ಟೇ ಜಾತಿಪ್ರೀತಿ ಇದ್ದರೂ ಸಾಮಾನ್ಯವಾಗಿ ಯಾವ ವ್ಯಕ್ತಿ ಕೂಡಾ ತನ್ನನ್ನು ಜಾತಿವಾದಿ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ, ತಾನೊಬ್ಬ ಜಾತ್ಯತೀತ ಎಂದೇ ಹೇಳಿಕೊಳ್ಳುತ್ತಾನೆ. ಈ ನಡವಳಿಕೆಯನ್ನು ಆತ್ಮವಂಚನೆ ಎಂದೂ ಹೇಳಬಹುದು. ಆದರೆ ಸಜ್ಜನರೆಂದು ಅನಿಸಿಕೊಳ್ಳುವವರು ಕನಿಷ್ಠ ಇಷ್ಟರಮಟ್ಟಿಗೆ ಮುಜುಗರವನ್ನು ಇಟ್ಟುಕೊಳ್ಳಬೇಕಾಗುತ್ತದೆ.
ಕಳೆದ ಐದು ವರ್ಷಗಳಲ್ಲಿ ಅಸಹ್ಯಕರವಾಗಿ ವಿಜೃಂಭಿಸತೊಡಗಿದ್ದ ಜಾತಿಯ ಆವುಟವನ್ನು ನೋಡಿದ ನಂತರ ಲಿಂಗಾಯತರು ಮಾತ್ರವಲ್ಲ ಎಲ್ಲ ಜಾತಿಗಳ ಮತದಾರರಲ್ಲಿ ಇಂತಹದ್ದೊಂದು ಮುಜುಗರ ಹುಟ್ಟಿಕೊಂಡದ್ದು ನಿಜ. ಇದನ್ನು ಮೀರುವ ಪ್ರಯತ್ನವನ್ನು ಮತದಾರರು ಮಾಡಿರುವುದು 2013ರ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಈ ಬಾರಿ ಗೆದ್ದಿರುವ 50 ಲಿಂಗಾಯತ ಶಾಸಕರಲ್ಲಿ 27 ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಬಿಜೆಪಿಯ ಪಾಲು ಕೇವಲ ಹತ್ತು. ಲಿಂಗಾಯತ ಮತದಾರರನ್ನೇ ನಂಬಿ ಪಕ್ಷ ಕಟ್ಟಿದ ಬಿ.ಎಸ್.ಯಡಿಯೂರಪ್ಪನವರು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ಆರು ಲಿಂಗಾಯತ ಶಾಸಕರನ್ನು. ಜಾತಿ ಮೀರಿದ ಮತದಾನವನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ರಾಜಕೀಯ ಪಕ್ಷಗಳು ಬಿಂಬಿಸಿದ್ದ ಮುಖ್ಯಮಂತ್ರಿ ಅಭ್ಯರ್ಥಿಗಳ ಜಾತಿಗಳನ್ನು ನೋಡಬೇಕು.
`ಲಿಂಗಾಯತ ಇಲ್ಲವೇ ಒಕ್ಕಲಿಗರ ನಾಯಕರ ನೇತೃತ್ವ ಇಲ್ಲದೆ ಇದ್ದರೆ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ' ಎನ್ನುವ ಬಹುದೊಡ್ಡ `ಮಿಥ್' ಅನ್ನು ಕೂಡಾ ಈ ಚುನಾವಣೆ ಒಡೆದುಹಾಕಿದೆ. ಬಿಜೆಪಿ ಮತ್ತು ಕೆಜೆಪಿ ಕ್ರಮವಾಗಿ ಲಿಂಗಾಯತ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಗಳಾಗಿ ಬಿಂಬಿಸಿದ್ದರೆ ಜೆಡಿ (ಎಸ್)ನ ಆಯ್ಕೆ ಎಚ್.ಡಿ.ಕುಮಾರಸ್ವಾಮಿ ಆಗಿದ್ದರು. ಕಾಂಗ್ರೆಸ್ ಪಕ್ಷ ತನ್ನ ಸಂಪ್ರದಾಯದಂತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಇದ್ದರೂ ಓಟದಲ್ಲಿದ್ದವರು ಹಿಂದುಳಿದ ಜಾತಿಗೆ ಸೇರಿರುವ ಸಿದ್ದರಾಮಯ್ಯ ಮತ್ತು ದಲಿತರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಎನ್ನುವುದು ಮತದಾರರಿಗೆ ಗೊತ್ತಿತ್ತು. ಚುನಾವಣೆಯ ಮೊದಲು ಮಾತ್ರವಲ್ಲ ಫಲಿತಾಂಶದ ನಂತರ ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸಿಕೊಂಡವರಲ್ಲಿಯೂ ಲಿಂಗಾಯತ ಜಾತಿಗೆ ಸೇರಿರುವ ಗಂಭೀರ ಅಭ್ಯರ್ಥಿಗಳು ಇರಲಿಲ್ಲ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಸಿದ್ದರಾಮಯ್ಯ ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೊದಲ ದಿನದಿಂದಲೇ ಆತ್ಮವಂಚನೆ ಇಲ್ಲದೆ ಹೇಳಿಕೊಂಡು ಬಂದಿದ್ದರು. ಹೀಗಿದ್ದರೂ ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳನ್ನಾಗಿ ಬಿಂಬಿಸಿದ್ದ ಬಿಜೆಪಿ ಮತ್ತು ಕೆಜೆಪಿ ಹಾಗೂ ಒಕ್ಕಲಿಗ ನಾಯಕನನ್ನು ಬಿಂಬಿಸಿದ್ದ ಜೆಡಿ (ಎಸ್) ಪಕ್ಷಗಳನ್ನು ರಾಜ್ಯದ ಜನತೆ ತಿರಸ್ಕರಿಸಿದ್ದು ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಆರಿಸಿದ್ದನ್ನು ಐತಿಹಾಸಿಕ ಬದಲಾವಣೆ ಎನ್ನದೆ ಬೇರೇನು ಹೇಳಲು ಸಾಧ್ಯ?
ಕಳೆದ ಬಾರಿಯ ಫಲಿತಾಂಶಕ್ಕೆ ತದ್ವಿರುದ್ಧವಾಗಿ ಒಕ್ಕಲಿಗರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಗಳಿಗೆ ಸೇರಿದ ಅತೀ ಹೆಚ್ಚಿನ ಶಾಸಕರನ್ನು (ಪರಿಶಿಷ್ಟ ಜಾತಿ-17, ಪರಿಶಿಷ್ಟ ಪಂಗಡ-11, ಹಿಂದುಳಿದ ವರ್ಗ 27, ಮುಸ್ಲಿಮ್-9, ಬ್ರಾಹ್ಮಣ -5, ಕ್ರೈಸ್ತ-2, ಜೈನ-2 ) ಕಾಂಗ್ರೆಸ್ ಹೊಂದಿರುವುದು ಕೂಡಾ ವಿಶೇಷ. ಇದು ರಾಜ್ಯದ ಮತದಾರರು ಜಾತಿ ಮೀರಿದ ಪ್ರಜ್ಞಾವಂತಿಕೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿರುವುದಕ್ಕೆ ಸಾಕ್ಷಿ. ಉದಾಹರಣೆಗೆ ಉತ್ತರಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಲಿಂಗಾಯತ ಶಾಸಕರು ಹೆಚ್ಚಿನಸಂಖ್ಯೆಯಲ್ಲಿ ಆರಿಸಿಬರಲು ಲಿಂಗಾಯತ ಮತದಾರರಲ್ಲದೆ ಬೇರೆ ಜಾತಿಗಳ ಮತದಾರರೂ ಹೇಗೆ ಕಾರಣವೋ, ಅದೇ ರೀತಿ ಲಿಂಗಾಯತೇತರ ಶಾಸಕರು ಉಳಿದ ಪಕ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬರಲಿಕ್ಕೆ ಅವರವರ ಜಾತಿಯ ಮತದಾರರಲ್ಲದೆ ಲಿಂಗಾಯತರೂ ಮತಹಾಕಿದ್ದು ಕಾರಣ. ರಾಜ್ಯದ ಮತದಾರರು ತಮ್ಮ ಜಾತಿಯವರನ್ನೇ ಆಯ್ಕೆ ಮಾಡುವಾಗಲೂ ಅಭ್ಯರ್ಥಿಯ ಅರ್ಹತೆ ಮತ್ತು ಅವರು ಪ್ರತಿನಿಧಿಸುವ ಪಕ್ಷವನ್ನು ಆಧಾರವಾಗಿಟ್ಟುಕೊಂಡಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಗೊತ್ತಾಗುತ್ತದೆ.
ಈ ಚುನಾವಣೆಯಲ್ಲಿ ರಾಜ್ಯದ ಮತದಾರರು ಜಾತಿಯನ್ನು ಮಾತ್ರವಲ್ಲ ದುಡ್ಡಿನ ಆಮಿಷವನ್ನು ಕೂಡಾ ಮೀರಲು ಪ್ರಯತ್ನ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಹರಿದಿದ್ದ ದುಡ್ಡಿನ ಹೊಳೆಯಲ್ಲಿ ಮತದಾರರೂ ಕೊಚ್ಚಿಕೊಂಡು ಹೋಗಿದ್ದರು. ಫಲಿತಾಂಶ ಹೊರಬಿದ್ದ ನಂತರ ಪ್ರಾರಂಭವಾದ `ಆಪರೇಷನ್ ಕಮಲ'ಕ್ಕೆ ರಾಜಕಾರಣಿಗಳು ಮಾತ್ರವಲ್ಲ ಮತದಾರರೂ ಬಲಿಯಾಗಿದ್ದರು. ಪಕ್ಷಾಂತರಿ ಶಾಸಕರು ರಾಜೀನಾಮೆ ನೀಡಿ ಮಧ್ಯಂತರ ಚುನಾವಣೆ ಎದುರಿಸಲು ಹೊರಟ ಕಾರಣ ಪಕ್ಷಾಂತರ ನಿಷೇಧ ಕಾಯ್ದೆ ಕೂಡಾ ನಿಷ್ಪ್ರಯೋಜಕವಾಗಿತ್ತು. ಈ ಪಕ್ಷಾಂತರಿಗಳು ಎದುರಿಸಿದ ಮೊದಲ ಮಧ್ಯಂತರ ಚುನಾವಣೆಯಲ್ಲಿಯೇ ಮತದಾರರು ಸೋಲಿಸಿಬಿಟ್ಟಿದ್ದರೆ ರಾಜ್ಯದ ರಾಜಕಾರಣ ಈ ರೀತಿ ಅನೈತಿಕತೆಯ ಕೆಸರಲ್ಲಿ ಹೊರಳಾಡುತ್ತಿರಲಿಲ್ಲ. ಮತದಾರರ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಬಿಜೆಪಿ ನಾಯಕರು ಗಣಿಲೂಟಿಕೋರರ ದುಡ್ಡನ್ನುಬಳಸಿಕೊಂಡು `ಯಾರನ್ನಾದರೂ, ಯಾವುದನ್ನಾದರೂ ಖರೀದಿಸಿಬಿಡಬಹುದು' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು. ಇದರಿಂದಾಗಿಯೇ ಅಗತ್ಯ ಇಲ್ಲದಿದ್ದರೂ ಶಾಸಕರ `ಖರೀದಿ' ನಡೆದದ್ದು. ಕೆಲವೇ ಕೆಲವು ಮಂದಿ ಆಡುತ್ತಿರುವ ಈ ದುಡ್ಡಿನ ಆಟವನ್ನು ದೂರದಲ್ಲಿ ನಿಂತು ನೋಡುತ್ತಿದ್ದ ಜನ ಅಸಹಾಯಕರಾಗಿದ್ದರು. ಇದಕ್ಕೆ ಕೊನೆಯೇ ಇಲ್ಲವೇ ಎಂದು ಅವರ ಮನಸ್ಸು ರೋದಿಸುತ್ತಿತ್ತೋ ಏನೋ?.
ಆಗಲೇ ಬದಲಾವಣೆಯ ಬಿರುಗಾಳಿ ಬೀಸಲಾರಂಭಿಸಿದ್ದು. ಈಗಿನದ್ದು ಆಗಿನ ಬದಲಾವಣೆಯ ಮುಂದುವರಿದ ಭಾಗ. ಗಣಿಲೂಟಿ ಮಾಡಿದ ಆರೋಪ ಎದುರಿಸುತ್ತಿದ್ದ ಸಚಿವರು ಮಾತ್ರವಲ್ಲ ಸಾಕ್ಷಾತ್ ಮುಖ್ಯಮಂತ್ರಿಗಳೇ ಜೈಲಿಗೆ ಹೋದದ್ದು, ಅಧಿಕಾರವನ್ನು ಕಳೆದುಕೊಂಡದ್ದು... ಎಲ್ಲವೂ ನಡೆದುಹೋಯಿತು. ಇದರ ತಾರ್ಕಿಕ ಅಂತ್ಯ ಎಂಬಂತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಮಣ್ಣುಮುಕ್ಕಿ ಬಿಟ್ಟಿದೆ. ಕೇವಲ ಐದು ವರ್ಷಗಳ ಕಿರುಅವಧಿಯಲ್ಲಿ ರಾಜ್ಯದ ಜನತೆ ರಾಜಕಾರಣದ ಈ ಏಳು-ಬೀಳುಗಳಿಗೆ ಸಾಕ್ಷಿಯಾಗಿದ್ದಾರೆ. `ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ' ಎಂಬ ಸಾಮಾನ್ಯ ಜನರ ಮುಗ್ಧ ನಂಬಿಕೆ ಹುಸಿಯಾಗಲಿಲ್ಲ. ರಾಜ್ಯದ ಪ್ರಜ್ಞಾವಂತ ಮತದಾರರು ಜಾತಿಯ ದೌರ್ಬಲ್ಯ, ದುಡ್ಡಿನ ಆಮಿಷವನ್ನು ಮೀರಿ ಹೊಸ ಕರ್ನಾಟಕವೊಂದನ್ನು ತೆರೆದಿಟ್ಟಿದ್ದಾರೆ. ಬದಲಾವಣೆಯ ಹೊಸ್ತಿಲಲ್ಲಿ ರಾಜ್ಯ ನಿಂತಿದೆ, ಅದೇ ದಾರಿಯಲ್ಲಿ ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸಿದ್ದರಾಮಯ್ಯನವರ ಮೇಲಿದೆ.

Thursday, May 9, 2013

ಬಿಜೆಪಿಗೆ ಮುಖಭಂಗ... ಜೆಡಿಎಸ್‌ಗೆ ಆಶಾಭಂಗ... ಕೆಜೆಪಿಗೆ ಗರ್ವಭಂಗ...

ಬದಲಾವಣೆಗಿದು ಜನಾದೇಶ

ಬೆಂಗಳೂರು: ದುರಾಡಳಿತದ ವಿರುದ್ಧದ ಆಕ್ರೋಶ, `ಆಪರೇಷನ್ ಕಮಲ'ವನ್ನೊಳಗೊಂಡ ಅನೈತಿಕ ರಾಜಕಾರಣಕ್ಕೆ ಪ್ರತಿರೋಧ, ದಕ್ಷ ಆಡಳಿತದ ಆಶಯ ಮತ್ತು ಬದಲಾವಣೆಯ ನಿರೀಕ್ಷೆಯನ್ನೊಳಗೊಂಡ ರಾಜ್ಯದ ಜನಾದೇಶ ಬಿಜೆಪಿ ಹಾಗೂ ಕೆಜೆಪಿಗಳೆರಡನ್ನೂ ಸ್ಪಷ್ಟವಾಗಿ ತಿರಸ್ಕರಿಸಿ ಒಂಬತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡಿದೆ.
ಬಿಜೆಪಿಯನ್ನು ಧ್ವಂಸ ಮಾಡುವ ಉದ್ದೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಫಲರಾದರೂ ತಾವು ಕಟ್ಟಿದ ಕೆಜೆಪಿಯನ್ನು ಪ್ರಾದೇಶಿಕ ಪಕ್ಷದ ರೂಪದಲ್ಲಿ ನೆಲೆಗೊಳಿಸಲು ಅವರು ವಿಫಲರಾಗಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿ ಮತ್ತು ಕೆಜೆಪಿಯನ್ನು ಪ್ರತ್ಯೇಕವಾಗಿ ನೋಡಲು ಹೋಗದೆ ಒಂದೇ ನಾಣ್ಯದ ಎರಡು ಮುಖಗಳೆಂದೇ ಪರಿಗಣಿಸಿ ತಿರಸ್ಕರಿಸಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ನಿರ್ಗಮನದಿಂದ ತಮ್ಮ ಪಕ್ಷ ಕಳಂಕಮುಕ್ತವಾಗಿ ಸ್ವಚ್ಛವಾಗಿದೆ ಎಂಬ ಬಿಜೆಪಿಯ ವಾದ ಮತ್ತು ಬಿಜೆಪಿಯಿಂದ ಅನ್ಯಾಯವಾಗಿದೆ ಎಂಬ ಯಡಿಯೂರಪ್ಪನವರ ಅಳಲುಗಳೆರಡನ್ನೂ ತಳ್ಳಿಹಾಕಿದ್ದಾರೆ.
ಕಳೆದ ಚುನಾವಣೆಯ ಕಾಲದಲ್ಲಿ ಎದುರಾದ ವಚನಭ್ರಷ್ಟತೆಯ ಆರೋಪದಿಂದಾಗಿ ಕುಸಿದುಹೋಗಿದ್ದ ಜಾತ್ಯತೀತ ಜನತಾದಳದ ಸಾಧನೆ ನಿರೀಕ್ಷೆಯನ್ನು ಮೀರಿದ್ದು. ಆದರೆ ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಜೆ.ಡಿ (ಎಸ್) ಗಳಿಸಿದ ಬಹುಪಾಲು ಸ್ಥಾನಗಳು ಹಳೆಮೈಸೂರು ಭಾಗಕ್ಕೆ ಸೇರಿವೆ  (40ರಲ್ಲಿ 27) ಎಂಬುದು ಗಮನಾರ್ಹ. ಇದರಿಂದಾಗಿ ಉತ್ತರಕರ್ನಾಟಕಕ್ಕೆ ದಾಳಿ ಮಾಡಿ `ಗಡಿ ವಿಸ್ತರಣೆ' ಮಾಡುವ ಅದರ ಪ್ರಯತ್ನ ಮತ್ತೊಮ್ಮೆ ವಿಫಲಗೊಂಡಿದೆ. ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಜೆ.ಡಿ (ಎಸ್)ಗಳಿಸಿದ ಸ್ಥಾನಗಳು (5) ಪಕ್ಷದ ನೆಲೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ತೋರಿಸಿದೆ. ಕಾಂಗ್ರೆಸ್ ಪಕ್ಷ ತನ್ನ ಬಲವರ್ಧನೆ ಮಾಡಿಕೊಂಡರೂ ಹಳೆಮೈಸೂರು ಭಾಗದ ತನ್ನ ಸಾಮ್ರಾಜ್ಯವನ್ನು ಜೆಡಿ (ಎಸ್) ಬಿಟ್ಟುಕೊಟ್ಟಿಲ್ಲ.

ಸರ್ಕಾರ ರಚನೆಗೆ ಬೇಕಾದ ಬಹುಮತವನ್ನಷ್ಟೇ ಪಡೆದಿರುವ ಕಾಂಗ್ರೆಸ್ ಪಕ್ಷ ಗೆಲುವಿನಿಂದ ಬೀಗುವ ಸ್ಥಿತಿಯಲ್ಲಿ ಇಲ್ಲ. ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಆಡಳಿತ ವೈಫಲ್ಯದಿಂದಾಗಿ ನಾಗರಿಕರಲ್ಲಿ ಹುಟ್ಟಿಕೊಂಡಿರುವ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಇದರ ಜತೆಗೆ ಟಿಕೆಟ್ ಹಂಚಿಕೆಯಿಂದಾಗಿ ಉದ್ಭವವಾಗಿರುವ ಭಿನ್ನಮದಿಂದಾಗಿ ಸುಲಭದಲ್ಲಿ ಗೆಲ್ಲಬಹುದಾದ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಪಕ್ಷದ ರಾಜ್ಯ ಅಧ್ಯಕ್ಷರೇ ಮರು ಆಯ್ಕೆಯಾಗಲು ವಿಫಲಗೊಂಡಿರುವುದು ಗೆಲುವಿನ ಸಂಭ್ರಮವನ್ನು ತುಸು ಮಂಕುಗೊಳಿಸಿದೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಉದ್ದನೆಯ ಪಟ್ಟಿಯಲ್ಲಿದ್ದ ಒಂದು ಹೆಸರು ಕಡಿಮೆಯಾಗಿದೆ ಅಷ್ಟೆ.
ಚುನಾವಣಾಪೂರ್ವ ಸಮೀಕ್ಷೆಯಲ್ಲಿ `ಪ್ರಜಾವಾಣಿ' ನಿರೀಕ್ಷಿಸಿದಂತೆಯೇ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಮತದಾರರು ಜನಾದೇಶದ `ಆಟ ಬದಲಿಸಿದ್ದಾರೆ'. ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಮುಂಬೈ ಕರ್ನಾಟಕದಲ್ಲಿರುವ ಒಟ್ಟು 50 ಸ್ಥಾನಗಳಲ್ಲಿ ಕಳೆದ ಬಾರಿ ಬಿಜೆಪಿ 36 ಸ್ಥಾನಗಳನ್ನು ಗಳಿಸಿದ್ದರೆ ಈ ಬಾರಿ ಅದಕ್ಕೆ ಉಳಿಸಲು ಸಾಧ್ಯವಾಗಿದ್ದು ಹನ್ನೆರಡು ಮಾತ್ರ. ಇದೇ ವೇಳೆ ಕಳೆದ ಚುನಾವಣೆಯಲ್ಲಿ ಕೇವಲ 12 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ ತನ್ನ ಬಲವನ್ನು 31ಕ್ಕೆ ಹೆಚ್ಚಿಸಿಕೊಂಡಿದೆ.
ಹೈದರಾಬಾದ್ ಕರ್ನಾಟಕದಲ್ಲಿಯೂ ಸ್ಥಾನಪಲ್ಲಟ ಸ್ಪಷ್ಟವಾಗಿದೆ. ಗುಲ್ಬರ್ಗ, ಬೀದರ್, ರಾಯಚೂರು ,ಕೊಪ್ಪಳ ಮತ್ತು ಬಳ್ಳಾರಿಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದಲ್ಲಿರುವ ಒಟ್ಟು 39 ಸ್ಥಾನಗಳಲ್ಲಿ ಕಳೆದ ಬಾರಿ 19ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಐದು ಮಾತ್ರ. ಇದಕ್ಕೆ ವಿರುದ್ಧವಾಗಿ 15 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ 21ಕ್ಕೆ ತನ್ನ ಬಲ ವೃದ್ಧಿಸಿಕೊಂಡಿದೆ. ಈ `ಎರಡು ಕರ್ನಾಟಕ'ಗಳ ಒಟ್ಟು 89 ಸ್ಥಾನಗಳ ಪೈಕಿ ಬಿಜೆಪಿ ಬಲ 55ರಿಂದ 17ಕ್ಕೆ ಇಳಿದಿರುವುದು ಮತ್ತು ಕಾಂಗ್ರೆಸ್ ಬಲ 22ರಿಂದ 55ಕ್ಕೆ ಹೆಚ್ಚಿರುವುದು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿರುವ ಮುಖ್ಯ ಬೆಳವಣಿಗೆ. ಕುಸಿದುಹೋಗಿರುವ ಜನಪ್ರಿಯತೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೋಡಿ ಎತ್ತಿಹಿಡಿಯುತ್ತದೆ ಎಂದು ನಿರೀಕ್ಷಿಸಿದ್ದ ಬಿಜೆಪಿಯ ನಿರೀಕ್ಷೆ ಹುಸಿಯಾಗಿರುವುದಕ್ಕೆ ರಾಜ್ಯದ ಕರಾವಳಿ ಭಾಗದ ಫಲಿತಾಂಶವೇ ಸಾಕ್ಷಿ.
`ಹಿಂದುತ್ವದ ಪ್ರಯೋಗಶಾಲೆ' ಎಂದೇ ಬಣ್ಣಿಸಲಾಗುತ್ತಿದ್ದ ರಾಜ್ಯದ ಕರಾವಳಿ ಭಾಗದಲ್ಲಿಯೂ ಮೋದಿ ಪ್ರಚಾರವು ಬಿಜೆಪಿ ದೂಳಿಪಟವಾಗುವುದನ್ನು ತಪ್ಪಿಸಲಾಗಿಲ್ಲ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಹದಿಮೂರು ಕ್ಷೇತ್ರಗಳಲ್ಲಿ ಹತ್ತರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿಗೆ ಉಳಿಸಿಕೊಂಡಿರುವುದು ಎರಡನ್ನು ಮಾತ್ರ. ನೈತಿಕ ಪೊಲೀಸ್‌ಗಿರಿ ಮತ್ತು ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ದದ ಸ್ಪಷ್ಟವಾದ ತೀರ್ಪನ್ನು ಕರಾವಳಿಯ ಮತದಾರರು ನೀಡಿದ್ದಾರೆ.
ಮೋದಿ ಭಾಷಣಕ್ಕೆ ಹೇಗೆ ಜನ ಮರುಳಾಗಿಲ್ಲವೋ ಹಾಗೆಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆಯೂ ರಾಜ್ಯದ ಮತದಾರರು ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯನ್ನು ಪ್ರತ್ಯೇಕವಾಗಿ ಗಮನಿಸುವ ಪ್ರಬುದ್ಧತೆ ಇದಕ್ಕೆ ಕಾರಣ ಇರಬಹುದು. `ಆಪರೇಷನ್ ಕಮಲ'ದ ದೌರ್ಬಲ್ಯಕ್ಕೆ ಬಲಿಯಾಗಿದ್ದ ಪ್ರಮುಖರನ್ನು ಸೋಲಿಸುವ ಮೂಲಕ ದುಡ್ಡಿನ ಬಲದಿಂದ ಜನಾಭಿಪ್ರಾಯವನ್ನೂ ಖರೀದಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಕೂಡಾ ಮತದಾರರು ಹುಸಿಗೊಳಿಸಿದ್ದಾರೆ. ಹಣದ ಹೊಳೆ ಹರಿಸಿದ ಅನೇಕ ಸಿರಿವಂತ ಅಭ್ಯರ್ಥಿಗಳು ಸೋಲಿನ ಶಿಕ್ಷೆಗೆ ಈಡಾಗಿದ್ದಾರೆ.
ಈ ಚುನಾವಣೆಯಲ್ಲಿ ಜಾತಿ ವಹಿಸಿರುವ ಪಾತ್ರವನ್ನು ನಿರಾಕರಿಸಲಾಗದಿದ್ದರೂ ನಿರ್ದಿಷ್ಟ ಜಾತಿಯ ಜನರು ಯಾವುದಾದರೂ ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನನ್ನು ಬೆಂಬಲಿಸುತ್ತಾರೆಂಬ ಜನಪ್ರಿಯ ಅಭಿಪ್ರಾಯವನ್ನು ಮತದಾರರು ಹುಸಿಗೊಳಿಸಿದ್ದಾರೆ. ವೀರಶೈವ ಮಠಗಳಿಗೆ ಉದಾರವಾಗಿ ಬಜೆಟ್‌ನಲ್ಲಿ ಹಣ ನೀಡಿದ ಯಡಿಯೂರಪ್ಪನವರನ್ನು ಲಿಂಗಾಯತರ ಪ್ರಶ್ನಾತೀತ ನಾಯಕರೆಂದೇ ಬಿಂಬಿಸಲಾಗಿದ್ದರೂ ಕೆಜೆಪಿಗೆ ಆ ಜಾತಿಯ ಮತದಾರರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ ಎನ್ನುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಇದೇ ವೇಳೆ ಅನೇಕ ಕ್ಷೇತ್ರಗಳಲ್ಲಿ ಜಾತಿ ಬಲ ಇಲ್ಲದ ವೈ.ಎಸ್.ವಿ.ದತ್ತ, ರಮೇಶ್‌ಕುಮಾರ್, ಅಭಯಚಂದ್ರ ಜೈನ್, ಡಿ.ಸುಧಾಕರ್, ಅಜಯಸಿಂಗ್ ಮೊದಲಾದ ನಾಯಕರನ್ನು ಮತದಾರರು ತಮ್ಮ  ಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಮೇಲುಕೋಟೆ ಕ್ಷೇತ್ರದಿಂದ ರೈತಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಆಯ್ಕೆಯಾಗಿರುವುದು ಕೂಡಾ ಚುನಾವಣಾ ಫಲಿತಾಂಶದ ಅಚ್ಚರಿಗಳಲ್ಲೊಂದು.
ಆಡಳಿತ ವಿರೋಧಿ ಅಲೆಯಲ್ಲಿ ಸೋಮಣ್ಣ, ಎ.ರಾಮದಾಸ್, ಮುರುಗೇಶ ನಿರಾಣಿ, ಬಚ್ಚೇಗೌಡ, ಸೊಗಡು ಶಿವಣ್ಣ ಸೇರಿದಂತೆ ರಾಜ್ಯದ ಹನ್ನೆರಡು ಸಚಿವರು ಕೊಚ್ಚಿಕೊಂಡು ಹೋಗಿದ್ದಾರೆ. ಕೊನೆ ಗಳಿಗೆಯಲ್ಲಿ ಸರ್ಕಾರದಿಂದ ಹೊರಬಂದರೂ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಸದನದಲ್ಲಿ ಬ್ಲೂಫಿಲಂ ವೀಕ್ಷಣೆಯ ಆರೋಪಕ್ಕೊಳಗಾಗಿರುವ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಸೋಲುಂಡಿದ್ದಾರೆ. ಇದೇ ವೇಳೆ  ಎಚ್.ಕೆ.ಪಾಟೀಲ್, ರಮೇಶಕುಮಾರ್. ಹಾಲಾಡಿ ಶ್ರಿನಿವಾಸ ಶೆಟ್ಟಿ, ಬಿ.ಆರ್.ಪಾಟೀಲ್, ಸುರೇಶ್‌ಕುಮಾರ್ ಡಾ.ಎ.ಬಿ.ಮಾಲಕರೆಡ್ಡಿ. ಕಾಗೋಡು ತಿಮ್ಮಪ್ಪ , ಕಿಮ್ಮನೆ ರತ್ನಾಕರ, ವೈ.ಎಸ್.ವಿ.ದತ್ತ ಮೊದಲಾದ ಒಂದಷ್ಟು ಸಜ್ಜನ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಜನ ಗೆಲ್ಲಿಸಿದ್ದಾರೆ.
1999ರ ಚುನಾವಣೆಯ ನಂತರ ಬೆಳಗಾವಿ ನಗರದಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲಾಗದ ಎಂಇಎಸ್ ತಣ್ಣಗಾಗಿತ್ತು. ಈ ಬಾರಿ ಅದು ನಗರದಲ್ಲಿ ಮತ್ತೆ ಖಾತೆ ತೆರೆದಿದೆ. ಆ ಸಂಘಟನೆಯ ಬೆಂಬಲ ಪಡೆದು ಆಯ್ಕೆಯಾಗಿರುವ ಇಬ್ಬರು (ಖಾನಾಪುರದಲ್ಲಿ ಸ್ಥಾನ ಉಳಿಸಿಕೊಂಡಿದೆ) ಶಾಸಕರು ಮತ್ತೆ ಗಡಿವಿವಾದವನ್ನು ಕೆದಕುವ ದುಸ್ಸಾಹಸ ಮಾಡಬಹುದು. ಇನ್ನೊಂದು ಬೆಳವಣಿಗೆಯಲ್ಲಿ ಚಾಮರಾಜನಗರದ ಕನ್ನಡ ಚಳಚಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೋತುಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸ್ಪರ್ಧಿಸಿದ್ದ ಸಿಪಿಎಂನ ಜಿ.ವಿ. ಶ್ರೀರಾಮ ರೆಡ್ಡಿ ಅವರ ಸೋಲಿನೊಂದಿಗೆ ವಿಧಾನಸಭೆಯಲ್ಲಿ ಮತ್ತೆ ಖಾತೆ ತೆರೆಯುವ ಅವಕಾಶವನ್ನು ಎಡ ಪಕ್ಷ ಕಳೆದುಕೊಂಡಿದೆ.

Monday, May 6, 2013

ಕಾಂಗ್ರೆಸ್ ಸರ್ಕಾರ ರಚಿಸಬಹುದು, ಆದರೆ...?

ರ್ನಾಟಕದಲ್ಲಿ ಈ ಬಾರಿ ಚುನಾವಣೋತ್ತರ ಭವಿಷ್ಯ ನುಡಿಯುವುದಕ್ಕೆ ಚುನಾವಣಾ ಶಾಸ್ತ್ರದ ಪರಿಣತಿ ಬೇಕಾಗಿಲ್ಲ. ಮೊದಲಿನ ನಾಲ್ಕು ಸ್ಥಾನಗಳ
ಲ್ಲಿ ಯಾರು ಇರುತ್ತಾರೆ ಎನ್ನುವುದು ಚುನಾವಣೆ ಘೋಷಣೆಯಾಗುವ ದಿನವೇ ನಿರ್ಧಾರವಾಗಿದೆ. ಅದು ಕ್ರಮವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ಮತ್ತು ಕೆಜೆಪಿ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವುದನ್ನು ಊಹಿಸುವುದು ಕೂಡಾ ಕಷ್ಟದ ಕೆಲಸ ಅಲ್ಲ, ಅದು ಕಾಂಗ್ರೆಸ್. ಯಾವ ಪಕ್ಷದವರು ಮುಖ್ಯಮಂತ್ರಿಯಾಗಬಹುದು ಎನ್ನುವುದನ್ನು ಕೂಡಾ ಹೇಳಿಬಿಡಬಹುದು, ಅದೂ ಕಾಂಗ್ರೆಸ್. ಇಷ್ಟು ಹೇಳಿದ ಮಾತ್ರಕ್ಕೆ ಚುನಾವಣೋತ್ತರ ಭವಿಷ್ಯ ಪೂರ್ಣವಾಗುವುದಿಲ್ಲ. ಯಾಕೆಂದರೆ ಇದರೊಳಗೆ ಒಂದಷ್ಟು ಒಳಸುಳಿಗಳಿವೆ.
ಕಾಂಗ್ರೆಸ್ ಎಷ್ಟೇ ಕಡಿಮೆ ಸ್ಥಾನಗಳಿಸಿದರೂ ಎಂಬತ್ತಕ್ಕಿಂತ ಕೆಳಗಿಳಿಯಲಾರದು. ಅದು 80,90,100,120 ಹೀಗೆ ಯಾವುದೇ ಸಂಖ್ಯೆಯಲ್ಲಿ ಹೋಗಿ ನಿಲ್ಲಬಹುದು. ಚುನಾವಣಾಪೂರ್ವ ಮೈತ್ರಿ ಇಲ್ಲದ ಸಂದರ್ಭಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ಹಾನಿಸುವುದು ಸಂಪ್ರದಾಯ. ಇದನ್ನು ಮುರಿದ ಅನೇಕ ಪ್ರಸಂಗಗಳಿದ್ದರೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರ ರಾಜ್ಯಪಾಲರೆಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳತೊಡಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಒಂದು ಅನುಕೂಲತೆ ಇದೆ. ಇಲ್ಲಿನ ರಾಜ್ಯಪಾಲರು ಒಂದು ಕಾಲದಲ್ಲಿ ಕಾಂಗ್ರೆಸಿಗರಾಗಿದ್ದವರು ಮಾತ್ರವಲ್ಲ ತಮ್ಮ ಹಳೆಯ ಪಕ್ಷದ ಬಗೆಗಿನ ಒಲವನ್ನು ಬಚ್ಚಿಟ್ಟುಕೊಳ್ಳಲಾಗದಷ್ಟು ಪಕ್ಷ ನಿಷ್ಠರಾಗಿರುವುದರಿಂದ ಮೊದಲ ಆಹ್ವಾನ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಖಾತರಿ.
ಒಮ್ಮೆ ರಾಜ್ಯಪಾಲರಿಂದ ಆಹ್ವಾನ ಬಂದುಬಿಟ್ಟರೆ ಬಹುಮತವನ್ನು ಗಳಿಸುವುದು ಯಾವ ರಾಜಕೀಯ ಪಕ್ಷಕ್ಕೂ ಕಷ್ಟದ ಕೆಲಸ ಅಲ್ಲ.
ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ಎಂಬತ್ತು ತಲುಪಬಲ್ಲ ಇಲ್ಲವೆ ಅದಕ್ಕಿಂತಲೂ ಮುಂದೆ ಹೋಗಬಲ್ಲ ಯಾವ ರಾಜಕೀಯ ಪಕ್ಷವೂ ಸದ್ಯ ಚುನಾವಣಾ ಕಣದಲ್ಲಿ ಇಲ್ಲ. ಸ್ವಂತ ಬಲದಿಂದ ಸರ್ಕಾರ ರಚಿಸುವುದಾಗಿ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಕೂಗಿ ಕೂಗಿ ಹೇಳಿದರೂ ಖಾಸಗಿಯಾಗಿ ಅವರು ಕೊಡುವ ಲೆಕ್ಕಾಚಾರ ಅರವತ್ತರ ಸಂಖ್ಯೆಯನ್ನು ದಾಟುವುದಿಲ್ಲ. ದೇವೇಗೌಡರು ತಮ್ಮ ಪಕ್ಷವೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಎಂದು ಗುಡುಗಿದರೂ ಅವರ ಶಾಸಕರ ಸಂಖ್ಯೆ 30-40ಕ್ಕಿಂತ ಮೇಲೇರಲಾರದು. ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ನಾಯಕ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿರುವ ಪ್ರಕಾರ ಅವರ ನಿರೀಕ್ಷೆಯ ಗರಿಷ್ಠ ಸಂಖ್ಯೆ ಅರವತ್ತು.
ಯಡಿಯೂರಪ್ಪನವರ ಲೆಕ್ಕದ ಮೂರನೆ ಒಂದರಷ್ಟು ಸ್ಥಾನಗಳನ್ನು ಗೆದ್ದರೂ ಅದು ಅವರ ಪಕ್ಷದ ದೊಡ್ಡ ಸಾಧನೆ. `ಸ್ವಂತಬಲದಿಂದ ಸರ್ಕಾರ ರಚಿಸಲಿದ್ದೇವೆ' ಎಂದು ದೇವೇಗೌಡ ಇಲ್ಲವೆ ಯಡಿಯೂರಪ್ಪನವರು ಹೇಳುತ್ತಿಲ್ಲ, `ನಮ್ಮನ್ನು ಬಿಟ್ಟು ಬೇರೆಯವರು ಸರ್ಕಾರ ರಚನೆ ಮಾಡುವುದು ಸಾಧ್ಯ ಇಲ್ಲ' ಎಂದಷ್ಟೇ ಅವರ ವಾದ. ಈ ರೀತಿ ಕಾಂಗ್ರೆಸ್ ಪಕ್ಷವೇ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ವಿರೋಧಪಕ್ಷಗಳೇ ಪರೋಕ್ಷವಾಗಿ ಒಪ್ಪಿಕೊಂಡಿರುವಾಗ ಸರ್ಕಾರ ರಚನೆಗಾಗಿ  ಕಾಂಗ್ರೆಸ್ ಪಕ್ಷ ಮೊದಲ ಆಹ್ವಾನ ಪಡೆಯುವುದಕ್ಕೆ ಏನು ಅಡ್ಡಿ ಇದೆ?
ಕಾಂಗ್ರೆಸ್ ಪಕ್ಷವೇನೋ ಸರ್ಕಾರ ರಚಿಸಿಬಿಡಬಹುದು. ಆದರೆ ಆ ಸರ್ಕಾರ ಏಕಪಕ್ಷದ್ದೇ ಇಲ್ಲವೆ ಮೈತ್ರಿಕೂಟದ್ದೇ? ಎನ್ನುವುದನ್ನು ಮಾತ್ರ  ಚುನಾವಣಾ ಫಲಿತಾಂಶ ನಿರ್ಧರಿಸಬೇಕಾಗಿದೆ. ಬಹುಮತಕ್ಕೆ ಬೇಕಾಗಿರುವ 113 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ ವಿಧಾನಸೌಧ ಪ್ರವೇಶಿಸಲು ಬೇರೆಯವರ ನೆರವು ಬೇಕಾಗಲಾರದು. ಒಂದೊಮ್ಮೆ ಅದು 105ರ ವರೆಗೂ ಇಳಿದರೂ ಸಮಸ್ಯೆಯಾಗಲಾರದು, ಏಳೆಂಟು ಪಕ್ಷೇತರರು ಮತ್ತುಬಂಡುಕೋರರು ಆರಿಸಿಬರುವ ಸಾಧ್ಯತೆ ಇರುವುದರಿಂದ ಅವರನ್ನು ಕಟ್ಟಿಕೊಂಡು ಸರ್ಕಾರ ರಚಿಸಬಹುದು. ಆದರೆ ನೂರು ಇಲ್ಲವೆ ಅದಕ್ಕಿಂತಲೂ ಕೆಳಗಿಳಿದರೆ ಮಿತ್ರಪಕ್ಷಗಳನ್ನು ಹುಡುಕುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಂದೆ ಇರುವುದು ಎರಡೇ ಆಯ್ಕೆ - ಜಾತ್ಯತೀತ ಜನತಾದಳ ಮತ್ತು ಕರ್ನಾಟಕ ಜನತಾ ಪಕ್ಷ. ಚುನಾವಣಾ ಪ್ರಚಾರವನ್ನು ಗಮನಿಸಿದರೆ ಈ ಎರಡು ಪಕ್ಷಗಳಲ್ಲಿ ಜೆಡಿ(ಎಸ್) ನಿರಂತರವಾಗಿ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಪಕ್ಷದ ವಿರುದ್ಧ. ಬಿಜೆಪಿ ಬಗೆಗಿನ ಅದರ ಮೆದುಧೋರಣೆ `ಎರಡು ಪಕ್ಷಗಳೊಳಗೆ ಒಳಒಪ್ಪಂದ ಆಗಿದೆ' ಎಂದು ಆರೋಪಿಸುವಷ್ಟು ಎದ್ದು ಕಾಣುತ್ತಿತ್ತು. ಅಧಿಕಾರಾರೂಢ ಪಕ್ಷ ಬಿಜೆಪಿಯಾದರೂ ಜೆಡಿ (ಎಸ್) ಆ ಪಕ್ಷವನ್ನು ಕಾಂಗ್ರೆಸ್‌ನಷ್ಟು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿಲ್ಲ ಎನ್ನುವುದು ಗಮನಾರ್ಹ.
ಇದೇ ರೀತಿ ಕೆಜೆಪಿ ಗುರಿ ಮಾಡಿದ್ದು ಜೆಡಿ (ಎಸ್) ಮತ್ತು ಬಿಜೆಪಿಯನ್ನು ಕಾಂಗ್ರೆಸ್ ಪಕ್ಷವನ್ನಲ್ಲ. ಚುನಾವಣಾ ಪ್ರಚಾರದ ಮಧ್ಯೆ ಮಾತಿಗೆ ಸಿಕ್ಕಿದ್ದ ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪನವರು ಕಾಂಗ್ರೆಸ್ ಮತ್ತು ಕೆಜೆಪಿ ಮೈತ್ರಿಕೂಟದ ಸರ್ಕಾರದ ಇಂಗಿತ ವ್ಯಕ್ತಪಡಿಸಿದ್ದರು. ಸ್ಪಷ್ಟವಾಗಿ ಏನನ್ನೂ ಹೇಳದೆ ಇದ್ದರೂ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರ ಮೇಲೆ ವಿಪರೀತ ಭರವಸೆಯಿಂದ ಅವರು ಮಾತನಾಡಿ ಅಚ್ಚರಿಗೊಳಿಸಿದ್ದರು. ಯಡಿಯೂರಪ್ಪನರು ಇನ್ನೂ ಸಿಬಿಐ ಕಣ್ಗಾವಲಿನಲ್ಲಿ ಇರುವುದರಿಂದ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸುಲಭ ಮತ್ತು ವೈಯಕ್ತಿಕವಾಗಿ ದೇವೇಗೌಡರಿಗಿಂತ ಇವರು ವಾಸಿ ಎನ್ನುವ ಕಾಂಗ್ರೆಸ್ ನಾಯಕರ ಅಭಿಪ್ರಾಯ ನಿಜ ಇರಬಹುದು. ಆದರೆ ಕೆಜೆಪಿ ಜತೆ ಮೈತ್ರಿಗೆ ಕಾಂಗ್ರೆಸ್ ಸಿದ್ಧ ಇದೆಯೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ಯಾವ ಮುಖ ಹೊತ್ತು ಅವರ ನೇತೃತ್ವದ ಪಕ್ಷದ ಜತೆ ಮೈತ್ರಿ ಮಾಡಲು ಸಾಧ್ಯ? ಇನ್ನೇನು ಒಂದು ವರ್ಷದೊಳಗೆ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ಯಡಿಯೂರಪ್ಪನವರನ್ನು ಕಟ್ಟಿಕೊಂಡು ಎದುರಿಸಲು ಸಾಧ್ಯವೇ?
ಇದು ಸಾಧ್ಯ ಇಲ್ಲ ಎಂದಾದರೆ ಕಾಂಗ್ರೆಸ್‌ಗೆ ಉಳಿದಿರುವ ಆಯ್ಕೆ ಜೆಡಿ (ಎಸ್). ಈ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದರ ಬದಲಿಗೆ ವಿರೋಧಪಕ್ಷದಲ್ಲಿ ಕೂರುವುದು ಒಳ್ಳೆಯ ಮಾರ್ಗ ಎನ್ನುವವರು ಕಾಂಗ್ರೆಸ್‌ನಲ್ಲಿ ಬಹಳ ಸಂಖ್ಯೆಯಲ್ಲಿದ್ದಾರೆ.  ಈ ಮೈತ್ರಿಯಲ್ಲಿ ಸೈದ್ಧಾಂತಿಕವಾದ ತೊಡಕುಗಳಿಲ್ಲ, ನೈತಿಕ ಪ್ರಶ್ನೆಗಳ ಮುಜುಗರವೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿದರೆ ಬಿಜೆಪಿಯನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಕೂಡಾ ಒಪ್ಪುವಂತಹದ್ದು. ಆದರೆ ಈ ಮೈತ್ರಿ ಬಗ್ಗೆ ಇಡೀ ಕಾಂಗ್ರೆಸ್ ಪಕ್ಷದಲ್ಲಿ ಭಯ ಇದೆ. ಹಿಂದಿನ ಇಪ್ಪತ್ತು ತಿಂಗಳ ಅವಧಿಯ ಮೈತ್ರಿ ಸರ್ಕಾರದ ದುಃಸ್ವಪ್ನ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ದೇವೇಗೌಡರ ಜತೆ ಚೌಕಾಶಿ ಮಾಡುವುದು ಸುಲಭದ ಕೆಲಸ ಅಲ್ಲ. ಕಾಂಗ್ರೆಸ್ ಕಡೆಯಿಂದ ಮೈತ್ರಿ ಕೋರಿ ಯಾರಾದರೂ ಕೈಚಾಚಿದರೆ ಗೌಡರು ಹಳೆಸಾಲವನ್ನೆಲ್ಲ ಬಡ್ಡಿ ಸಮೇತ ತೀರಿಸಿಕೊಳ್ಳಲು ಮುಂದಾಗಬಹುದು.
ದೇವೇಗೌಡರಿಗೆ ಸಂಪೂರ್ಣ ಶರಣಾಗಿ  ಜೆಡಿ (ಎಸ್) ಜತೆ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷ ಮೊದಲ ಬಂಡಾಯವನ್ನು ಮನೆಯೊಳಗಿಂದಲೇ ಎದುರಿಸಬೇಕಾಗಬಹುದು. ಜೆಡಿ (ಎಸ್) ಜತೆ ಮೈತ್ರಿ ಏರ್ಪಟ್ಟರೆ  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ದೇವೇಗೌಡರು ಖಂಡಿತ ಒಪ್ಪಲಾರರು.  ಜೀವಂತವಿರುವಾಗಲೇ ಬೀದಿಗಳಲ್ಲಿ ಸಿದ್ದರಾಮಯ್ಯನವರ ಬೆಂಬಲಿಗರು ತನ್ನ `ಹೆಣ'ಸುಟ್ಟದ್ದನ್ನು ಮರೆತುಬಿಡುವವರು ಗೌಡರಲ್ಲ. ದೇವೇಗೌಡರಿಂದ ಇಂತಹದ್ದೊಂದು ಷರತ್ತು ಎದುರಾದರೆ ಅದನ್ನು ಸಿದ್ದರಾಮಯ್ಯ ಸುಮ್ಮನಿದ್ದು ಸಹಿಸಿಕೊಳ್ಳುವವರೂ ಅಲ್ಲ. ಪಕ್ಷ ತೊರೆಯುವ ಅತಿರೇಕದ ನಿರ್ಧಾರವನ್ನು ಕೈಗೊಳ್ಳಲು ಕೂಡಾ ಅವರು ಹಿಂಜರಿಯಲಾರರು. ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ತನ್ನ ಬೆಂಬಲಿಗರಿಗೂ ಒಂದಷ್ಟು ಟಿಕೆಟ್ ಕೊಡಿಸಿರುವುದರಿಂದ ಒಂದೊಮ್ಮೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಾಲಿಟ್ಟರೆ ಜತೆಯಲ್ಲಿ ಒಂದಷ್ಟು ಶಾಸಕರೂ ಅವರನ್ನು ಹಿಂಬಾಲಿಸಬಹುದು. ಇಂತಹ ಸಂದರ್ಭದಲ್ಲಿ ಜೆಡಿ (ಎಸ್) ಬೆಂಬಲದ ಮೂಲಕ ಸಂಖ್ಯೆಯನ್ನು ಹೊಂದಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಲಾರದು ನಿಜ, ಆದರೆ ದೇವೇಗೌಡರನ್ನು ನಂಬಿಕೊಂಡು ಸಿದ್ದರಾಮಯ್ಯನವರನ್ನು ತ್ಯಾಗ ಮಾಡಲು ಕಾಂಗ್ರೆಸ್ ಮುಂದಾಗಬಹುದೇ?
ಈ ಎರಡು ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸಂಖ್ಯಾಬಲ ಗಳಿಸುವ ಮೂರನೆಯ ದಾರಿಯೂ ಇದೆ, ಇದು ಅಡ್ಡದಾರಿ. ಇದು ಕಳೆದ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಹಿಡಿದ ದಾರಿಯೂ ಹೌದು. ಈ ಬಾರಿ ಕಾಂಗ್ರೆಸ್ ಇಂತಹ ಅಡ್ಡದಾರಿ ಹಿಡಿದರೆ ಅದಕ್ಕೆ ಬಲಿಯಾಗಲಿರುವುದು ಅದೇ ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಜನತಾ ಪಕ್ಷ. ಕೆಜೆಪಿ 30ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದರೆ `ಮನೆಮುರಿಯುವುದು' ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು. ಒಂದೊಮ್ಮೆ ಕೆಜೆಪಿ 15-20ರಲ್ಲಿ ಉಳಿದುಬಿಟ್ಟರೆ `ಆಪರೇಷನ್ ಕೈ' ನಡೆಯಬಹುದು. ಬಿಜೆಪಿಯಂತೆ ಶಾಸಕರಿಂದ ರಾಜೀನಾಮೆ ಕೊಡಿಸದೆ ನೇರವಾಗಿ ಕೆಜೆಪಿಯ ಮೂರನೆಯ ಎರಡರಷ್ಟು ಶಾಸಕರನ್ನು ಕಾಂಗ್ರೆಸ್ ಹೊತ್ತುಕೊಂಡು ಹೋಗಬಹುದು. ವೈಯಕ್ತಿಕ ಮತ್ತು ರಾಜಕೀಯ ನಡವಳಿಕೆಯ ಹಲವಾರು ಮಾದರಿಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರನ್ನು ಹೋಲುವ ಯಡಿಯೂರಪ್ಪನವರು ಈ ವಿಷಯದಲ್ಲಿಯೂ ಸೊರಬದ ಸರದಾರ ಎದುರಿಸಿದ ಪರಿಸ್ಥಿತಿಯನ್ನೇ ಎದುರಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. 2004ರಲ್ಲಿ ಬಂಗಾರಪ್ಪನವರು ಸ್ವತಂತ್ರ ಪಕ್ಷ ಕಟ್ಟಿ ಗೆಲ್ಲಿಸಿಕೊಂಡು ಬಂದ ಹತ್ತು ಶಾಸಕರಲ್ಲಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಜನತಾದಳ ಸೇರಿಬಿಟ್ಟಿದ್ದರು. ಅದೇ ರೀತಿ ಯಡಿಯೂರಪ್ಪನವರೂ ತನ್ನ ಶಾಸಕರ ಪಕ್ಷದ್ರೋಹಕ್ಕೆ ಬಲಿಯಾಗಲೂಬಹುದು. ಇಂತಹ `ಆಪರೇಷನ್'ಗಳಲ್ಲಿ ಕಾಂಗ್ರೆಸ್ ಹಳೆಯ ವೈದ್ಯ ಎನ್ನುವುದನ್ನು ಮರೆಯಬಾರದು.
ಇದರ ಹೊರತಾಗಿ ಸರ್ಕಾರ ರಚನೆಯ ಇನ್ನೊಂದು ಸಾಧ್ಯತೆಯೂ ಇದೆ. ರಾಜ್ಯದ ಒಟ್ಟು 224 ಸ್ಥಾನಗಳಲ್ಲಿ ಕಾಂಗ್ರೆಸ್ ನೂರನ್ನು ಗೆದ್ದರೂ ಉಳಿಯುವುದು 124 ಎನ್ನುವುದು ಸರಳ ಲೆಕ್ಕ. ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಈ 124 ಶಾಸಕರು ಒಟ್ಟಾಗಿಬಿಟ್ಟರೆ? ಅಂದರೆ ಬಿಜೆಪಿ,ಕೆಜೆಪಿ,ಜೆಡಿ (ಎಸ್),ಬಿಎಸ್‌ಆರ್ ಮತ್ತು ಪಕ್ಷೇತರರೆಲ್ಲರೂ ಒಂದಾಗಿಬಿಟ್ಟರೆ? ಈ ರೀತಿ  ಮೈತ್ರಿಕೂಟ ಸರ್ಕಾರದ ರಚನೆ  ಅಸಾಧ್ಯವಲ್ಲ. ಆದರೆ ಇದು ಸಾಧ್ಯವಾಗಬೇಕಾದರೆ ಮೊದಲ ಆಹ್ಹಾನ ಪಡೆದ ಕಾಂಗ್ರೆಸ್ ಬಹುಮತವನ್ನು ಹೊಂದಿಸಿಕೊಳ್ಳಲಾಗದೆ ಅವಕಾಶವನ್ನು ಬಿಟ್ಟುಕೊಡಬೇಕು ಮತ್ತು ಜೆಡಿ (ಎಸ್) ಹಾಗೂ ಕೆಜೆಪಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಸೇರಿಕೊಳ್ಳುವುದಿಲ್ಲ ಎನ್ನುವ ದೃಢ ನಿರ್ಧಾರ ಕೈಗೊಳ್ಳಬೇಕು. ಆದರೆ ಈ ಎರಡು ಪಕ್ಷಗಳಲ್ಲಿ ಕನಿಷ್ಠ ಕೆಜೆಪಿಯ ಮಂಡಿ ಊರಿಸುವುದು ಹೇಗೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತು. ಸಿಬಿಐ ಇರುವುದಾದರೂ ಯಾಕೆ?
ಚುನಾವಣೋತ್ತರ ಸ್ಥಿತಿಯ ಈ ಚಿತ್ರ ಸುಮಾರು ಇಪ್ಪತ್ತು ದಿನಗಳ ಕಾಲ ರಾಜ್ಯದಲ್ಲಿ ಅಡ್ಡಾಡಿದಾಗ ಎದುರಾದ ಮತದಾರರ ಅಭಿಪ್ರಾಯವನ್ನು ಆಧರಿಸಿದ್ದು. ಕಳೆದ ಒಂಬತ್ತು ವರ್ಷಗಳ ಅವಧಿಯ ಅಭದ್ರ ಸರ್ಕಾರಗಳು ಸಾಮಾನ್ಯ ಜನರನ್ನು ಕೆರಳಿಸಿದೆ. ಈ ಹತಾಶ ಮತದಾರ ವರ್ಗ ಒಳ್ಳೆಯವರೋ ,ಕೆಟ್ಟವರೋ ಯಾವುದೋ ಒಂದು ಪಕ್ಷ ಇರಲಿ ಎಂದು ಮತಹಾಕುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮುಖ್ಯವಾಗಿ ಈ ಚುನಾವಣೆಯಲ್ಲಿ ಸೇರ್ಪಡೆಯಾಗಿರುವ 35 ಲಕ್ಷ ಯುವ ಮತದಾರರಲ್ಲಿ ನಾನು ಕಂಡ ಈ ಅಭಿಪ್ರಾಯ ಅವರು ಹಾಕುವ ಮತಗಳಲ್ಲಿ ಪ್ರತಿಫಲಿಸಿದರೆ ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬಹುದು. ಮತದಾನದ ಪ್ರಮಾಣ ಶೇಕಡಾ 70-75 ದಾಟಿ ಬಿಟ್ಟರೆ ಈ ಸಾಧ್ಯತೆ ಇನ್ನೂ ಹೆಚ್ಚಿದೆ. ಕಾದು ನೋಡೋಣ.

Saturday, May 4, 2013

ಚುನಾವಣೆ ಸಂಭ್ರಮ ಮಂಕುಗೊಳಿಸಿರುವ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ಪ್ರಜಾಪ್ರಭುತ್ವದ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಾ ಬಂದಿರುವ ಚುನಾವಣೆ  ತನ್ನ ಸಾಂಪ್ರದಾಯಿಕ ಸಂಭ್ರಮ-ಸಡಗರಗಳನ್ನು ಕಳೆದುಕೊಳ್ಳುತ್ತಿದೆಯೇ?.
ಚುನಾವಣಾ ಕಾಲದಲ್ಲಿ ಸಾಮಾನ್ಯವಾಗಿ ನಡೆಯುವ  ಚರ್ಚೆ -ಜಗಳಗಳೂ ಕೂಡಾ ಅಂಜಿಕೆ-ಅಳುಕಿನ ವಾತಾವರಣದಿಂದಾಗಿ ನಡೆಯದೆ  ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗತ್ಯವಾದ ಸಾರ್ವಜನಿಕ ಸಂವಾದ ನಡೆಯದಂತಾಗಿದೆಯೇ? ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಬೀದಿಗಳಲ್ಲಿ ನೋಡುತ್ತಾ ಬಂದವರನ್ನು ಇಂತಹ ಪ್ರಶ್ನೆಗಳು ಖಂಡಿತ ಕಾಡಬಹುದು.
ಇಪ್ಪತ್ತು ದಿನ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ನಾನು ಅಂದಾಜು ಎರಡುಸಾವಿರ ಕಿ.ಮೀ. ಪ್ರಯಾಣ ಮಾಡಿದ್ದೇನೆ. ರಾಜಕೀಯ ಸಭೆಗಳ ವೇದಿಕೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಪೋಸ್ಟರ್,ಬ್ಯಾನರ್, ಕರಪತ್ರ, ಬ್ಯಾಡ್ಜ್, ಪಕ್ಷಗಳ ಧ್ವಜಗಳು ಕಣ್ಣಿಗೆ ಬಿದ್ದಿಲ್ಲ. ನನ್ನ ಕಣ್ಣಿನಲ್ಲಿಯೇ ದೋಷ ಇರಬಹುದೇನೋ ಎಂಬ ಅನುಮಾನ ಮೂಡಿ ಎಲ್ಲಿಯಾದರೂ ಪೋಸ್ಟರ್-ಬ್ಯಾನರ್ ಕಣ್ಣಿಗೆ ಬಿದ್ದರೆ ಕಾರು ನಿಲ್ಲಿಸುವಂತೆ ಚಾಲಕನಿಗೂ ಹೇಳಿದ್ದೆ. ಅವನ ಕಣ್ಣಿಗೂ ಬೀಳಲಿಲ್ಲ. ಇದನ್ನು ಕಂಡು ಎಷ್ಟೊಂದು ಕಟ್ಟುನಿಟ್ಟಿನಿಂದ ಚುನಾವಣೆ ನಡೆಯುತ್ತಿದೆ ಎಂದು ಸಂತೋಷಪಡೋಣವೇ?
ಊರು ತುಂಬಾ ಪೋಸ್ಟರ್,ಬ್ಯಾನರ್‌ಗಳು,ಕಾರು-ಅಟೋರಿಕ್ಷಾಗಳಲ್ಲಿ ಮೈಕ್ ಪ್ರಚಾರ, ಕರಪತ್ರ, ಬ್ಯಾಡ್ಜ್‌ಗಳನ್ನು ಸಂಗ್ರಹಿಸಲು ಕಾರು-ರಿಕ್ಷಾಗಳ ಹಿಂದೆ ಓಡುವ ಬಾಲಕರು, ಪಕ್ಷ ನಿಷ್ಠೆಯನ್ನು ಬಹಿರಂಗವಾಗಿ ಘೋಷಿಸುವ ರೀತಿಯಲ್ಲಿ ಮನೆಗಳ ಮೇಲೆ ಹಾರಾಡುವ ಧ್ವಜಗಳು...ಇವೆಲ್ಲವೂ ಚುನಾವಣೆಯ ಕಾಲದಲ್ಲಿ  ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದ ಕಾಲವೊಂದಿತ್ತು.
ಎಲ್ಲೆಲ್ಲೂ ಖಾಲಿ ಖಾಲಿ: ಪಕ್ಷಗಳ ಪರವಿರೋಧದಿಂದಾಗಿ ನಡೆಯುವ ಸಣ್ಣಪುಟ್ಟ ಜಗಳ ಮತ್ತು  ಕೋಪ-ದ್ವೇಷಗಳು ಒಂದಷ್ಟು ದಿನ ಸ್ನೇಹ-ಸಂಬಂಧಗಳನ್ನು ಕದಡಿ ನಂತರ ತಿಳಿಯಾಗುತ್ತಿತ್ತು. ಆದರೆ ಇಂದು ಯಾವುದಾದರೂ ಊರೊಳಗೆ ಪ್ರವೇಶಿಸಿದರೆ ಇಂತಹ ವಾತಾವರಣವನ್ನು ಕಾಣಲು ಸಾಧ್ಯವಿಲ್ಲ. ಎಲ್ಲಿಯೂ ಚುನಾವಣೆಯ ಸುಳಿವೇ ಇಲ್ಲ. ಎಲ್ಲವೂ ಖಾಲಿ-ಖಾಲಿ, ಬೋಳು-ಬೋಳು.
`ಅನಗತ್ಯ ವೆಚ್ಚವನ್ನು ಕಡಿಮೆ ಮಾಡುವ ಇಂತಹ ಕ್ರಮಗಳು ಸ್ವಾಗತಾರ್ಹ' ಎಂದು ಹೇಳುವವರಿದ್ದಾರೆ. ಚುನಾವಣಾ ಪ್ರಚಾರದ ಅವಧಿಯನ್ನು ಒಂದುವಾರಕ್ಕೆ ಸೀಮಿತಗೊಳಿಸಿದರೆ ಮತದಾರರಿಗೆ ಒಡ್ಡುವ ಆಮಿಷ ಇನ್ನೂ ಕಡಿಮೆಯಾಗಬಹುದು' ಎಂದು ಸಲಹೆ ನೀಡುವವರೂ ಇದ್ದಾರೆ.
ಆದರೆ ದುಡ್ಡು,ಹೆಂಡ,ಬಾಡು,ಸೀರೆ ಹಂಚುವ, ಜಾತಿ-ಧರ್ಮವನ್ನು ಬಳಸಿಕೊಳ್ಳುವ ಚುನಾವಣಾ ಅಕ್ರಮಗಳ ಅತಿರೇಕ ಒಂದೆಡೆಯಾದರೆ, ಈ ಅಕ್ರಮಗಳನ್ನೆಲ್ಲ ತಡೆಯಲು ಹೊರಟು ಚುನಾವಣೆಯಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳದಂತೆ ಮಾಡುವುದು ಇನ್ನೊಂದು ಅತಿರೇಕದಂತೆ ಕಾಣಿಸುತ್ತದೆ.
`ದುಡ್ಡು ಹಂಚುವುದನ್ನು ತಡೆಯಲಿ, ಪ್ರಚಾರಕ್ಕೆ ಬಂದ ಕಾರ್ಯಕರ್ತರು ಊಟ ಮಾಡಿದ ತಟ್ಟೆಗಳನ್ನೂ ಲೆಕ್ಕ ಮಾಡುವುದು ಏನು ಅಸಹ್ಯ ಸಾರ್? ನಮಗಾಗಿ ಬಂದು ಈ ಬಿಸಿಲಿನಲ್ಲಿ ಅವರು ಬೆವರು ಸುರಿಸುತ್ತಾರೆ ಅವರಿಗೆ ಅಷ್ಟೂ ಕೊಡುವುದು ಬೇಡವೇ? ರೂ16 ಲಕ್ಷದಲ್ಲಿ ಚುನಾವಣೆ ಮಾಡ್ಲಿಕ್ಕಾಗುತ್ತಾ? ಎಂದು ಪ್ರಶ್ನಿಸಿದ ಗುಲ್ಬರ್ಗ ಜಿಲ್ಲೆಯ ಕ್ಷೇತ್ರವೊಂದರ ಅಭ್ಯರ್ಥಿಯೊಬ್ಬ.
`ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ನಿಜವಾಗಿ ನಿಮ್ಮ ಚುನಾವಣಾ ವೆಚ್ಚ ಕಡಿಮೆಯಾಗಿದೆಯೇ?' ಎಂಬ ಪ್ರಶ್ನೆಯನ್ನು ಹಲವಾರು ಅಭ್ಯರ್ಥಿಗಳನ್ನು ನಾನು ಕೇಳಿದ್ದೆ. ಕೆಲವರು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು, ಇನ್ನೂ ಕೆಲವರು ದುಡ್ಡು ಯಾಕೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬ ವಿವರ ನೀಡಿದರೇ ಹೊರತು  ಯಾರೊಬ್ಬರೂ `ಈ ಬಾರಿ ಖರ್ಚು ಕಡಿಮೆ' ಎಂದು  ಹೇಳಲಿಲ್ಲ.
ಈ ಪೋಸ್ಟರ್,ಬ್ಯಾನರ್,ಕರಪತ್ರ, ಟೋಪಿ, ಬ್ಯಾಡ್ಜ್‌ಗಳಿಗೆ ಒಬ್ಬ ಅಭ್ಯರ್ಥಿ ಮಾಡುವ ಖರ್ಚು ಕೆಲವು ಲಕ್ಷ         ರೂಪಾಯಿ ಮಾತ್ರ. ಸಾಮಾನ್ಯವಾಗಿ ಇವುಗಳನ್ನೆಲ್ಲ ಪಕ್ಷಗಳೇ ಪೂರೈಸುತ್ತವೆ. ಮತದಾರರಿಗೆ ಆಮಿಷವೊಡ್ಡಲು ನೀಡುವ ಹಣದ ಮೊತ್ತವೇ ದೊಡ್ಡದು. ಇದು ಕಡಿಮೆಯಾಗಿದೆಯೇ?
ಹಣದ ಪ್ರಭಾವ ಕಡಿಮೆ?: ಅಕ್ರಮವಾಗಿ ಹಣ ಸಂಗ್ರಹ ಮತ್ತು ಸಾಗಾಣಿಕೆಯ ವಿರುದ್ಧದ ಕ್ರಮದಿಂದಾಗಿ ಚುನಾವಣೆಯಲ್ಲಿ ಹಣದ ಪ್ರಭಾವ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ವಾಹನಗಳ ತಪಾಸಣೆ  ನಡೆಸಲಾಗುತ್ತದೆ.  ಪ್ರವಾಸದುದ್ದಕ್ಕೂ ಕನಿಷ್ಠ 25-30 ಕಡೆಗಳಲ್ಲಿ ನಮ್ಮ ಕಾರಿನ ತಪಾಸಣೆ ನಡೆಸಿದ್ದಾರೆ. ಎಲ್ಲ ಕಡೆಗಳಲ್ಲಿ ತಪಾಸಣೆಯ ಕ್ರಮ ಒಂದೇ ರೀತಿಯದ್ದು. ಕಾರು ನಿಲ್ಲಿಸಿದ ಮೇಲೆ ಡಿಕ್ಕಿ ತೆರೆಯಲು ಹೇಳುವುದು, ಎಲ್ಲಿಂದ ಬಂದಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುವುದು, ಚಾಲಕನ ಹೆಸರು ಮತ್ತು ಕಾರಿನ ನಂಬರ್ ಬರೆದುಕೊಳ್ಳುವುದು-ಅಲ್ಲಿಗೆ ತಪಾಸಣೆ ಮುಗಿಯಿತು. ಯಾರೂ ಕೂಡಾ ಕಾರಿನಲ್ಲಿದ್ದ ನನ್ನನ್ನು ಯಾರು ಎಂದು ಕೇಳಿಲ್ಲ, ಕಾರಿನೊಳಗಿದ್ದ ನನ್ನ ಬ್ಯಾಗ್ ಚೆಕ್ ಮಾಡಿಲ್ಲ. `ಈ ರೀತಿ ಹೆದ್ದಾರಿಯಲ್ಲಿ ತಪಾಸಣೆ ಮಾಡುವುದರಿಂದ ಹಣದ ಸಾಗಾಣಿಕೆಗೆ ತೊಂದರೆಯಾಗಿದೆಯೇ?' ಎಂದು ರಾಜಕೀಯ ಪಕ್ಷದ ನಾಯಕರೊಬ್ಬರನ್ನು ಕೇಳಿದೆ. `ದುಡ್ಡು ಸಾಗಿಸುವವರು ಹೆದ್ದಾರಿಯಲ್ಲಿ  ಅದೂ ಕಾರುಗಳಲ್ಲಿ  ಹೋಗುತ್ತಾರೆಯೇ? ಹೆದ್ದಾರಿ ಬಿಟ್ಟು ಊರೊಳಗೆ ಒಳದಾರಿಗಳಿಲ್ಲವೇ? ಕಾರು ಯಾಕೆ ಬೇಕು, ಮೋಟಾರ್ ಸೈಕಲ್,ಬಸ್,ಲಾರಿಗಳಿಲ್ಲವೇ? ಎಂದು ಪ್ರಶ್ನಿಸಿದ, ಆತ ದುಡ್ಡು ಸಾಗಿಸುವ ಅನೇಕ ಹೊಸ ವಿಧಾನಗಳನ್ನು ತಿಳಿಸಿ ಅಚ್ಚರಿಗೊಳಿಸಿದ.
`ಚುನಾವಣಾ ಆಯೋಗದ ಕ್ರಮಗಳಿಂದಾಗಿ ಬರುವ ದುಡ್ಡು ಹೋಯಿತು' ಎಂದು ಹಳ್ಳಿಗಳಲ್ಲಿ ಜನ ಕೊರಗುತ್ತಿದ್ದಾರೆ. `ಖರ್ಚು ಕಡಿಮೆಯಾಗಿಲ್ಲ' ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಚುನಾವಣೆ ಘೋಷಣೆಯಾದ ಕೂಡಲೇ ಬಹಳಷ್ಟು ರಾಜಕಾರಣಿಗಳು  ಊರುಗಳಲ್ಲಿರುವ ತಮ್ಮ ಬೆಂಬಲಿಗರ ಮನೆಗಳಿಗೆ ಹಣ ಸಾಗಿಸಿದ್ದಾರೆ.
`ಸಮಸ್ಯೆ ಹಣದ್ದು ಸಾರ್, ಸಾಗಿಸುವುದು, ವಿತರಿಸುವುದು ಅಲ್ಲ. ಅದಕ್ಕೆ ಬೇಕಾದಷ್ಟು ದಾರಿಗಳಿವೆ ' ಎಂದ ಹಾಸನದ ರಾಜಕೀಯ ಕಾರ್ಯಕರ್ತನೊಬ್ಬ. `ನಮ್ಮ ಲೀಡರ್‌ಗಳಿಗೆ ದುಡ್ಡು ಕೊಟ್ಟಿದ್ದಾರಂತೆ, ಎಲೆಕ್ಷನ್ ಅಧಿಕಾರಿಗಳ ಭಯ ತೋರಿಸಿ ಅದನ್ನು ತಾವೇ ಇಟ್ಟುಕೊಂಡಿದ್ದಾರೆ' ಎಂದ ಬಳ್ಳಾರಿಯ ಮತದಾರನೊಬ್ಬ.
ಇದಕ್ಕೆಲ್ಲ ಏನು ಪರಿಹಾರ? ಹಿಂದಿನ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಅಕ್ರಮ ಸಂಗ್ರಹಿಸಿದ್ದ ಮತ್ತು ಸಾಗಿಸುತ್ತಿದ್ದ ಹಲವಾರು ಕೋಟಿ ರೂಪಾಯಿಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಂಬ್ಯುಲೆನ್ಸ್‌ನಲ್ಲಿ ಹಣ ಸಾಗಿಸುತ್ತಿರುವವರನ್ನೂ ಬಂಧಿಸಿದ್ದರು. ಆ ಪ್ರಕರಣಗಳೇನಾಯಿತು? ಯಾರಿಗಾದರೂ ಶಿಕ್ಷೆಯಾಯಿತೇ? ಇಂತಹ ಅಕ್ರಮಗಳನ್ನು ಮಾಡಿದ್ದ ಎಷ್ಟು ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ? ಕೋಟ್ಯಂತರ ರೂಪಾಯಿ ಖರ್ಚು ಮಾಡುವವರಿಗೆ ಅದರಲ್ಲಿ ಒಂದಷ್ಟು ಪಾಲು ಕೈಬಿಟ್ಟುಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ. ಶಿಕ್ಷೆಯ ಭಯದಿಂದ ಮಾತ್ರ ಅವರನ್ನು ಹದ್ದುಬಸ್ಸಿನಲ್ಲಿಡಲು ಸಾಧ್ಯ. ಅದು ಆಗುತ್ತಿಲ್ಲ.
ಕೋಟ್ಯಧಿಪತಿಗಳಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆಯನ್ನೂ ಮಾಡದಂತಹ ಸ್ಥಿತಿ ಇದೆ. ಯಾವ ರಾಜಕೀಯ ಪಕ್ಷವೂ ದುಡ್ಡಿಲ್ಲದವರಿಗೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ಆಕಾಂಕ್ಷಿ ಕೋಟ್ಯಧಿಪತಿಗಳ ದುಡ್ಡಿನ ಮೂಲ ಯಾವುದು? ಅದು ಅಕ್ರಮವೇ,ಸಕ್ರಮವೇ? ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಸ್ವ ಇಚ್ಛೆಯಿಂದ ನೀಡಿದ ಆಸ್ತಿವಿವರದ ಸತ್ಯಾಸತ್ಯತೆಯನ್ನು ಯಾರಾದರೂ ಪರಿಶೀಲಿಸುತ್ತಾರೆಯೇ? ಅದನ್ನು ಮಾಡಲು ಚುನಾವಣಾ ಆಯೋಗದಲ್ಲಿ ಸಿಬ್ಬಂದಿಯೂ ಇಲ್ಲ, ಅದಕ್ಕೆ ಸಮಯವೂ ಇಲ್ಲ.
ಚುನಾವಣೆ ಮುಗಿದ ನಂತರವಾದರೂ ಅಭ್ಯರ್ಥಿಗಳ ಆಸ್ತಿ ವಿವರವನ್ನು ವರಮಾನ ತೆರಿಗೆ ಇಲಾಖೆಗೆ ಕಳುಹಿಸಿ ಎಂದು ಪರಿಶೀಲನೆಗೆ ಒಳಪಡಿಸಬಹುದಲ್ಲಾ? ಈ ರೀತಿ ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಅದರ ಮೂಲದಲ್ಲಿಯೇ ತಡೆಯುವ ಪ್ರಯತ್ನ ಮಾಡದೆ ಪೋಸ್ಟರ್,ಬ್ಯಾನರ್‌ಗಳ ಮೇಲೆ ಕಡಿವಾಣ ಹಾಕುವುದರಿಂದ ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯವೇ? ಇಂತಹ `ಕಟ್ಟುನಿಟ್ಟಿನ ಕ್ರಮಗಳು' ಚುನಾವಣೆಯ ಸಂಭ್ರಮವನ್ನು ಮಂಕುಗೊಳಿಸಬಹುದು ಅಷ್ಟೆ.