Showing posts with label ಬಂಗಾರಪ್ಪ. Show all posts
Showing posts with label ಬಂಗಾರಪ್ಪ. Show all posts

Monday, November 12, 2012

ಬಂಗಾರಪ್ಪನವರ ಹಾದಿಯಲ್ಲಿ ಯಡಿಯೂರಪ್ಪ Nov 12 2012


ಸಾರೆಕೊಪ್ಪ ಬಂಗಾರಪ್ಪ ಮತ್ತು ಬೂಕನಕೆರೆ ಯಡಿಯೂರಪ್ಪನವರ ನಡುವೆ ಶಿವಮೊಗ್ಗ ಎನ್ನುವ ರಾಜಕೀಯ ಕರ್ಮಭೂಮಿಯ ಸಾಮ್ಯತೆ ಒಂದೇ ಅಲ್ಲ, ಇನ್ನೂ ಹಲವು ಇವೆ.
ರಾಜಕೀಯ ಮಹತ್ವಾಕಾಂಕ್ಷೆ, ನೇರಮಾತು, ಮುಂಗೋಪ, ಅತ್ಯುಗ್ರ ಸ್ವಾಭಿಮಾನ, ಬಂಡುಕೋರ ಮನಸ್ಸು, ನಂಬಿದವರನ್ನು ಕಷ್ಟಕಾಲದಲ್ಲಿಯೂ ಕೈಬಿಡದ ಸ್ನೇಹನಿಷ್ಠೆ  ಮತ್ತು ಭ್ರಷ್ಟಾಚಾರ ಎಂಬುದು ರಾಜಕೀಯ ಕ್ಷೇತ್ರದ ಅನಿವಾರ್ಯ ಕರ್ಮ ಎಂದು ಭಾವಿಸುವ ಅಸೂಕ್ಷ್ಮತೆಯಂತಹ ಗುಣಗಳು ಶಿವಮೊಗ್ಗ ಜಿಲ್ಲೆಯ ಇವರಿಬ್ಬರ ವ್ಯಕ್ತಿತ್ವದಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಗಳಿಸಿರುವ ಗರಿಷ್ಠ ಯಶಸ್ಸಿನ ದಾಖಲೆ (ಶೇಕಡಾ ಏಳೂವರೆಯಷ್ಟು ಮತ ಮತ್ತು ಹತ್ತು ಶಾಸಕರು) ಎಸ್.ಬಂಗಾರಪ್ಪನವರ ಹೆಸರಲ್ಲಿದೆ. ಯಡಿಯೂರಪ್ಪನವರು ಈ ದಾಖಲೆಯನ್ನು ಮುರಿಯಬಹುದೇ?
ಯಡಿಯೂರಪ್ಪನವರಿಗೆ ಇನ್ನೂ ಬಿಜೆಪಿಯನ್ನು ಬಿಟ್ಟುಹೋಗುವ ಮನಸ್ಸಿಲ್ಲ, ಪಕ್ಷಕ್ಕೂ ಪ್ರೀತಿಗಿಂತ ಹೆಚ್ಚಾಗಿ ಭಯದಿಂದ ಅವರನ್ನು ಉಳಿಸಿಕೊಳ್ಳಬೇಕೆಂಬ ಆಸೆ ಇದೆ. ಎರಡೂ ಪಾಳಯಗಳಲ್ಲಿ ಈ ತಳಮಳ ಮುಂದುವರಿದಿದೆ.

ಪಕ್ಷ ಸ್ಥಾಪಿಸಿ ಪದಾಧಿಕಾರಿಗಳ ನೇಮಕ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯಿತೆಂದು ಹೇಳಲಾಗುವುದಿಲ್ಲ. ಯಡಿಯೂರಪ್ಪನವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವರೆಗೆ ಯಾವುದೂ ಅಂತಿಮ ಅಲ್ಲ, ಅದರ ನಂತರವೂ ಅಲ್ಲ. ಭಯಗ್ರಸ್ತ ಬಿಜೆಪಿ ಯಡಿಯೂರಪ್ಪನವರ ಷರತ್ತುಗಳನ್ನು ಒಪ್ಪಿಬಿಟ್ಟರೆ ಅವರು ಹೊಸ ಪಕ್ಷವನ್ನೇ ಬಿಜೆಪಿಯಲ್ಲಿ ವಿಲೀನಗೊಳಿಸಲೂಬಹುದು.

ಈಗಾಗಲೇ ಅವರು ರಾಜ್ಯ ಸರ್ಕಾರವನ್ನು `ಮೈತ್ರಿ ಸರ್ಕಾರ~ ಎಂದಿದ್ದಾರೆ. ಆದುದರಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವರೆಗೆ ಯಡಿಯೂರಪ್ಪನವರ ಬಂಡಾಯದ ಬಗ್ಗೆ ಕೊನೆಯ ಮಾತನ್ನು ಬರೆಯಲಾಗದು.
ಉಭಯ ಬಣಗಳ ಪ್ರಯತ್ನಗಳೆಲ್ಲವೂ ವಿಫಲಗೊಂಡು ಕೊನೆಗೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮೂಲಕ ಚುನಾವಣೆಯನ್ನು ಎದುರಿಸಿದರೆ ಏನಾಗಬಹುದು? ಮೊದಲನೆಯದಾಗಿ ಬಿಜೆಪಿ ಜತೆ ಸಂಬಂಧ ಕಡಿದುಕೊಂಡಾಕ್ಷಣ ಈ ವರೆಗೆ `ಕಮ್ಯುನಲ್~ ಆಗಿದ್ದ ಯಡಿಯೂರಪ್ಪನವರು  `ಸೆಕ್ಯುಲರ್~ ಆಗಿಬಿಡುತ್ತಾರೆ. 
ತಮಾಷೆಯಂತೆ ಕಂಡರೂ ಇದು ದೇಶದ ರಾಜಕೀಯ ವಾಸ್ತವ. ಗುಜರಾತ್‌ನ ಶಂಕರ್‌ಸಿಂಗ್ ವಘೇಲಾ ಅವರಿಂದ ಹಿಡಿದು ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ವರೆಗೆ ರಾಷ್ಟ್ರರಾಜಕಾರಣದಲ್ಲಿ ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ,  ಇದರ ಲಾಭ ಖಂಡಿತ ಅವರಿಗೆ ಸಿಗಲಿದೆ.
`ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಯಡಿಯೂರಪ್ಪನವರ ಕೈಬಲಪಡಿಸಬೇಕಾಗುತ್ತದೆ~ ಎಂದು ಈಗಾಗಲೇ ನಮ್ಮ ಅನೇಕ ಜಾತ್ಯತೀತ ಚಿಂತಕರು ಖಾಸಗಿಯಾಗಿ ಹೇಳುತ್ತಿರುವ ಮಾತುಗಳು ಬಹಿರಂಗವಾಗಿ ಕೇಳಿಬರಬಹುದು. ಕಳೆದ 40 ವರ್ಷಗಳಿಂದ ಸಂಘ ಪರಿವಾರದ ಜತೆ ಸಂಬಂಧ ಹೊಂದಿದ್ದರೂ ಯಡಿಯೂರಪ್ಪನವರಿಗೆ ಕೋಮುವಾದಿ ಎಂಬ ಕಳಂಕ ಇಲ್ಲ. 
ಬಿಜೆಪಿಯನ್ನು `ರಾಮನಾಮ~ದ ಮೂಲಕ ಕಟ್ಟಲು ರಾಷ್ಟ್ರನಾಯಕರು ಪ್ರಯತ್ನಿಸುತ್ತಿದ್ದಾಗ ರಾಜ್ಯದಲ್ಲಿ ರೈತಪರ ಹೋರಾಟದ ಮೂಲಕ ಪಕ್ಷವನ್ನು ಬೆಳೆಸಿದವರು ಯಡಿಯೂರಪ್ಪ. ಆದುದರಿಂದ  ಈ `ರೂಪಾಂತರ~ ಅವರಿಗೆ ಕಷ್ಟ ಅಲ್ಲ.
ಎರಡನೆಯದಾಗಿ ಜಾತಿ ಬಲ. ಮುಖ್ಯಮಂತ್ರಿಯಾಗುವ ವರೆಗಿನ ತನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಕಟ್ಟಾಜಾತಿವಾದಿಯಂತೆ ನಡೆದುಕೊಂಡಿರಲಿಲ್ಲ. ಅಂತಹ ಆರೋಪ ಅವರ ರಾಜಕೀಯ ವಿರೋಧಿಗಳು ಕೂಡಾ ಮಾಡಿದ್ದು ಕಡಿಮೆ.
ಆದರೆ ಮುಖ್ಯಮಂತ್ರಿಯಾದ ನಂತರ ಬಹಿರಂಗವಾಗಿ ಲಿಂಗಾಯತ ಮಠಗಳ ಜತೆ ಗುರುತಿಸಿಕೊಂಡ ರೀತಿ, ಬಜೆಟ್‌ನಲ್ಲಿ ನೀಡಿದ `ಉಡುಗೊರೆ~ಗಳು ಮತ್ತು  ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾಗಲೂ ಲಿಂಗಾಯತ ಸ್ವಾಮಿಗಳು ಅವರನ್ನು ಸಮರ್ಥಿಸಿಕೊಂಡ ವರ್ತನೆ ಎಲ್ಲವೂ ಸೇರಿ ಯಡಿಯೂರಪ್ಪನವರಿಗೆ ಜಾತಿವಾದಿ ಎಂಬ ಹಣೆಪಟ್ಟಿ ತಂದುಕೊಟ್ಟಿತು.
ಜಾತಿಯನ್ನು ಅವರು ಖಂಡಿತ ರಾಜಕೀಯವಾಗಿ ಬಳಸಿಕೊಂಡಿದ್ದಾರೆ, ಜಾತಿ ಬೆಂಕಿ ಇದ್ದಹಾಗೆ, ಆರಿಸಲು ಹೋದಾಗಲೂ ಕೈಗೆ ತಗಲಿಬಿಡುತ್ತದೆ. ಅಂತಹದ್ದರಲ್ಲಿ ಅದೇ `ಜಾತಿ ಬೆಂಕಿ~ಯ ಜತೆ ಆಟವಾಡಲು ಹೋದ ಯಡಿಯೂರಪ್ಪನವರು ಜಾತಿವಾದಿ ಎಂಬ ಆರೋಪ ಹೊತ್ತಿರುವುದು ಸಹಜವೇ ಆಗಿದೆ.
ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಧನಂಜಯಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಹಿಂದುಳಿದ ಜಾತಿಗೆ ಸೇರಿರುವ ಎಂ.ಡಿ.ಲಕ್ಷ್ಮಿನಾರಾಯಣ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಹೊಸ ಪಕ್ಷಕ್ಕೆ ಜಾತ್ಯತೀತ ಸ್ವರೂಪವನ್ನು ನೀಡಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ.
ಇದರಿಂದ ಲಿಂಗಾಯತರ ಬೆಂಬಲ ಕಡಿಮೆಯಾಗಲಾರದು ಎಂದು ಅವರಿಗೆ ಗೊತ್ತು. ನಿಜವಾದ ಜಾತಿನಾಯಕನಲ್ಲಿ ಸ್ವಜಾತಿ ಮತದಾರರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿ ಇರುತ್ತದೆ. ಸದ್ಯ ದೇಶದ ರಾಜಕಾರಣದಲ್ಲಿ ಅಂತಹ ಶಕ್ತಿ ಹೊಂದಿರುವವರು ಬಿಎಸ್‌ಪಿ ನಾಯಕಿ ಮಾಯಾವತಿ ಮಾತ್ರ. 
ಬ್ರಾಹ್ಮಣ ಅಭ್ಯರ್ಥಿಗೂ ದಲಿತರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿಯೇ ಮಾಯಾವತಿಯವರ ಈ ಯಶಸ್ಸಿಗೆ ಕಾರಣ. ಯಡಿಯೂರಪ್ಪನವರ ಬಗ್ಗೆ ಲಿಂಗಾಯತರಲ್ಲಿರುವ ಕುರುಡು ಅಭಿಮಾನ ನೋಡಿದರೆ ಅವರೂ ಇಂತಹ ಶಕ್ತಿ ಹೊಂದಿರುವಂತೆ ಕಾಣುತ್ತಿದೆ.
ಮೂರನೆಯ ಅನುಕೂಲತೆ ಪ್ರಾದೇಶಿಕ ಆಶೋತ್ತರಗಳಿಗೆ ಸ್ಪಂದಿಸುವ ಸ್ವಾತಂತ್ರ್ಯ. ಹಲವು ರಾಜ್ಯಗಳಲ್ಲಿ ಪಕ್ಷದ ಸಂಘಟನೆಗಳನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯ-ರಾಜ್ಯಗಳ ನಡುವಿನ ನೆಲ-ಜಲ-ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿಟ್ಟನಿಲುವನ್ನು ಕೈಗೊಳ್ಳುವುದು ಸಾಧ್ಯ ಇಲ್ಲ.

ಮೈತ್ರಿರಾಜಕಾರಣದ ಯುಗದಲ್ಲಿ ಇದು ಇನ್ನೂ ಕಷ್ಟ. ಆದರೆ ಪ್ರಾದೇಶಿಕ ಪಕ್ಷಕ್ಕೆ ಈ ಸಮಸ್ಯೆ ಇಲ್ಲ, ಅದು ಸ್ವತಂತ್ರ ನಿಲುವನ್ನು ಕೈಗೊಳ್ಳಬಹುದು. ಇತ್ತೀಚಿನ ಕಾವೇರಿ ವಿವಾದದಲ್ಲಿ ಎಚ್.ಡಿ.ದೇವೇಗೌಡರು ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಉಪಾಯದಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಇದಕ್ಕೆ ಉದಾಹರಣೆ.
ಪ್ರಾದೇಶಿಕ ಪಕ್ಷಗಳ ರಾಜಕಾರಣ ಇರುವ ಕರ್ನಾಟಕದ ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗೆ ಹೋಲಿಸಿದರೆ ಕರ್ನಾಟಕದ ಚೌಕಾಸಿ ರಾಜಕಾರಣ ದುರ್ಬಲ ಎಂದು ಅನಿಸಿಕೊಳ್ಳಲು  ರಾಷ್ಟ್ರೀಯ ಪಕ್ಷಗಳ ಬಗ್ಗೆ ಕರ್ನಾಟಕದ ಜನರ ಒಲವೇ ಕಾರಣ ಎನ್ನುವ ಅಭಿಪ್ರಾಯ ಇದೆ. ಇಂತಹ ಹೊತ್ತಿನಲ್ಲಿಯೇ ಯಡಿಯೂರಪ್ಪನವರ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆಯಾಗಿದೆ.
ನಾಲ್ಕನೆಯದಾಗಿ, ಬಿಜೆಪಿಯಿಂದ ನಿರ್ಗಮಿಸುವ ಮೂಲಕ ಆಡಳಿತಾರೂಡ ಪಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಅದು ಎದುರಿಸಲಿರುವ ಆಡಳಿತವಿರೋಧಿ ಅಲೆಯಿಂದಲೂ ಯಡಿಯೂರಪ್ಪನವರು ಸ್ಪಲ್ಪಮಟ್ಟಿಗೆ ಮುಕ್ತರಾಗಲಿದ್ದಾರೆ.  `ನಾನು ಮಂಡಿಸಿದ ಬಜೆಟ್‌ನ ಆಶಯಗಳು ಈಡೇರಿಲ್ಲ, ನನ್ನ ಕಾರ್ಯಕ್ರಮಗಳನ್ನು ನಂತರ ಬಂದವರು ಹಾಳು ಮಾಡಿದ್ದಾರೆ~ ಎಂಬ ಆರೋಪಗಳನ್ನು ಅವರು ಈಗಾಗಲೇ ಮಾಡುತ್ತಿದ್ದಾರೆ. ಜನ ಇದನ್ನು ನೂರಕ್ಕೆ ನೂರರಷ್ಟು ನಂಬಲಾರರು. ಆದರೆ ಇಂತಹ ಆರೋಪಗಳನ್ನು ಮಾಡುವ ಸ್ವಾತಂತ್ರ್ಯ ಅವರಿಗೆ ಹೊಸ ಪಕ್ಷದಿಂದ ಸಿಗಲಿದೆ.
ಕೊನೆಯದಾಗಿ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತುಕೂಡಾ ಪ್ರಾದೇಶಿಕ ಪಕ್ಷದಲ್ಲಿ ನಿಶ್ಚಿಂತೆಯಿಂದ ನಾಯಕರಾಗಿ ಮುಂದುವರಿಯಲು ಯಡಿಯೂರಪ್ಪನವರಿಗೆ ಸಾಧ್ಯ. ಇದು ರಾಷ್ಟ್ರೀಯ ಪಕ್ಷಗಳಲ್ಲಿ ಕಷ್ಟ. ಈ ಕಾರಣದಿಂದಾಗಿಯೇ ಅಲ್ಲವೇ, ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವಂತಾಗಿದ್ದು?
ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮೊದಲಾದವರು ಅಧಿಕಾರ ಕಳೆದುಕೊಂಡದ್ದು ಕೂಡಾ ಇದೇ ಕಾರಣದಿಂದಾಗಿ. ಯಡಿಯೂರಪ್ಪನವರ ಮೇಲಿನ ಆರೋಪಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಅದು ಯಾವ ದಾರಿ ಹಿಡಿಯಲಿದೆಯೋ ಗೊತ್ತಿಲ್ಲ. ಇದರ ಹೊರತಾಗಿಯೂ ಒಂದೊಮ್ಮೆ ಅವರು ಚುನಾವಣೆಯ ನಂತರ ಅಧಿಕಾರಕ್ಕೆ ಬರುವಂತಹ ಸಂದರ್ಭ ಕೂಡಿಬಂದರೆ ಅವರ ಮೇಲಿನ ಭ್ರಷ್ಟಾಚಾರದ ಕಳಂಕ ಅದಕ್ಕೆ ಅಡ್ಡಿಯಾಗುವುದಿಲ್ಲ.
ಲಾಲುಪ್ರಸಾದ್ ತನ್ನ ಪತ್ನಿಯನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಜೈಲಿಗೆ ಹೋಗಿ ಬರಲಿಲ್ಲವೇ? ಮಾಯಾವತಿ, ಜಯಲಲಿತಾ ಮೊದಲಾದವರು ಆರೋಪಗಳ ವಿಚಾರಣೆ ನಡೆಯುತ್ತಿರುವಾಗಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿಲ್ಲವೇ?
ಇಷ್ಟೆಲ್ಲ ಅನುಕೂಲತೆಗಳಿದ್ದರೂ ಅಂತಿಮವಾಗಿ ಯಡಿಯೂರಪ್ಪನವರು ಬಯಸಿದ್ದು ಸಿಗಬಹುದೇ? ಇದು ಕಷ್ಟ.
ಮೊದಲನೆಯದಾಗಿ ಹೊಸ ಪಕ್ಷಕ್ಕೆ ಎಷ್ಟೇ ಅನುಕೂಲತೆಗಳಿದ್ದರೂ ಕೂಡಾ ಅದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತವನ್ನಾಗಲಿ, ಇಲ್ಲವೆ ಅತ್ಯಧಿಕ ಸ್ಥಾನಗಳನ್ನು ಗಳಿಸುವುದಾಗಲಿ ಸಾಧ್ಯವೇ ಇಲ್ಲ. ರಾಜಕೀಯವನ್ನೇ ಉಸಿರಾಡುತ್ತಾ ಬಂದ ಯಡಿಯೂರಪ್ಪನವರಿಗೂ ಇದು ತಿಳಿದಿರಬಹುದು.
ಈ ರೀತಿಯ ಬಂಡುಕೋರ ಪಕ್ಷಗಳು ಮಾತೃಪಕ್ಷವನ್ನು ಸುಲಭದಲ್ಲಿ ಸೋಲಿಸಬಹುದು, ಆದರೆ ತಾನು ಗೆಲ್ಲಲಾಗುವುದಿಲ್ಲ. ಮತ್ತೆ ಬಂಗಾರಪ್ಪನವರ ರಾಜಕಾರಣವನ್ನೇ ಉಲ್ಲೇಖಿಸುವುದಾದರೆ ಅವರ `ಕರ್ನಾಟಕ ಕಾಂಗ್ರೆಸ್ ಪಕ್ಷ~ದಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅವರು ಅಧಿಕಾರಕ್ಕೆ ಬರಲಾಗಲಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕಾಗಿಯೇ ಇಷ್ಟೆಲ್ಲ ಬಡಿದಾಡಿ ಕೊನೆಗೆ ಅದೇ ಸಿಗದೆ ಹೋದರೆ ಹೊಸ ಪಕ್ಷ ರಚಿಸಿ ಏನು ಫಲ ಎಂಬ ಪ್ರಶ್ನೆ ಇಂದಲ್ಲ ನಾಳೆ ಯಡಿಯೂರಪ್ಪನವರಲ್ಲಿ ಹುಟ್ಟಿಕೊಳ್ಳಬಹುದು. ಬಿಜೆಪಿಯಲ್ಲಿಯೇ ಉಳಿದುಬಿಟ್ಟರೆ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಹೆಚ್ಚಿದೆ, ಅದು ಹೊಸ ಪಕ್ಷದಲ್ಲಿ ಖಂಡಿತ ಅವರಿಗೆ ಇಲ್ಲ.
ಎರಡನೆಯದಾಗಿ ಯಡಿಯೂರಪ್ಪನವರು ಬಿಜೆಪಿಯಲ್ಲಿರುವ ವರೆಗೆ ನಿಷ್ಠೆ ತೋರಿಸುತ್ತಿರುವ ಬೆಂಬಲಿಗರಲ್ಲಿ ಹೆಚ್ಚಿನವರು ಹೊಸ ಪಕ್ಷ ಸೇರುವುದು ಕಷ್ಟ. ಇದರ ಸುಳಿವನ್ನರಿತಿರುವ ಯಡಿಯೂರಪ್ಪನವರು `ತಳಮಟ್ಟದಿಂದಲೇ ಪಕ್ಷವನ್ನು ಕಟ್ಟುತ್ತೇನೆ, ನಾಯಕರನ್ನು ತಯಾರು ಮಾಡುತ್ತೇನೆ~ ಎಂದು ಹೇಳುತ್ತಿದ್ದರೂ ಅದು ಸುಲಭದ ಮಾತಲ್ಲ.
ಅಷ್ಟೊಂದು ಕಾಲಾವಕಾಶವೂ ಅವರಿಗಿಲ್ಲ. ಒಂದಷ್ಟು ನಾಯಕರು ಯಡಿಯೂರಪ್ಪನವರ ಜತೆಯಲ್ಲಿ ಉಳಿದು ಚುನಾವಣೆಯಲ್ಲಿ ಗೆದ್ದರೂ, ಅವರೆಲ್ಲ ಪಕ್ಷದಲ್ಲಿಯೇ ಉಳಿಯುತ್ತಾರೆ ಎಂದು ಹೇಳಲು ಸಾಧ್ಯ ಇಲ್ಲ. ಬಂಗಾರಪ್ಪನವರ ಪಕ್ಷದಿಂದ ಹತ್ತುಮಂದಿ ಆಯ್ಕೆಯಾದರೂ ಕೊನೆಗೆ ಅವರೂ ಸೇರಿದಂತೆ ಉಳಿದವರು ಇಬ್ಬರು ಮಾತ್ರ. 
ಸದಸ್ಯಬಲ ಸಂಖ್ಯೆ ಕಡಿಮೆ ಇದ್ದಾಗ ಪಕ್ಷವನ್ನು ಒಡೆಯುವುದು ಸುಲಭ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಬಹುಮತ ಬರುವ ಸಾಧ್ಯತೆ ಈ ಕ್ಷಣದಲ್ಲಿ ಕಾಣುವುದಿಲ್ಲವಾದ ಕಾರಣ ಚುನಾವಣೋತ್ತರ ಧ್ರುವೀಕರಣಗಳು ಅನಿವಾರ್ಯವಾಗಿ ನಡೆದುಹೋಗಬಹುದು. ಅಂತಹ ಸಂದರ್ಭದಲ್ಲಿ ಬಂಗಾರಪ್ಪನವರಂತೆ ಯಡಿಯೂರಪ್ಪನವರೂ ಕೊನೆಗೆ ಒಂಟಿಯಾಗಿ ಉಳಿದುಬಿಡಬಹುದು.
ಮೂರನೆಯದಾಗಿ ಲೆಕ್ಕಾಚಾರ ತಪ್ಪಿದರೆ ರಾಜಕೀಯವಾಗಿ ಜಾತಿ ಎಷ್ಟು ಲಾಭ ತಂದುಕೊಡುತ್ತೋ, ಅಷ್ಟೇ ನಷ್ಟವನ್ನುಂಟು ಮಾಡುತ್ತದೆ. ಯಡಿಯೂರಪ್ಪನವರು ನಂಬಿಕೊಂಡಿರುವುದು ಲಿಂಗಾಯತ ಜಾತಿಯನ್ನು.
ಕಳೆದ ನಾಲ್ಕುವರೆ ವರ್ಷಗಳ ರಾಜ್ಯದ ರಾಜಕಾರಣದಲ್ಲಿ ಈ ಜಾತಿಯ ಪ್ರಭಾವವನ್ನು ಯಾರೂ ನಿರಾಕರಿಸಲಾರರು. ಮುಖ್ಯಮಂತ್ರಿ ಮತ್ತು ಸಚಿವರ ಆಯ್ಕೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆ ವರೆಗೆ ಜಾತಿ ಪ್ರಧಾನ ಪಾತ್ರ ವಹಿಸಿದೆ. ಇದು ಒಕ್ಕಲಿಗ, ಬ್ರಾಹಣ ಮೊದಲಾದ ಇತರ ಮೇಲ್ಜಾತಿಗಳಲ್ಲಿ ಅಸೂಯೆ ಮತ್ತು ಆಕ್ರೋಶವನ್ನು ಮತ್ತು ಕೆಳಜಾತಿಗಳಲ್ಲಿ ಅಭದ್ರತೆಯನ್ನು ಹುಟ್ಟಿಸಿದೆ. ಈ ಎರಡೂ ಗುಂಪುಗಳು ತಮ್ಮ ಒಟ್ಟು ಮತಗಳಿಂದ ಲಿಂಗಾಯತ ಅಭ್ಯರ್ಥಿಗಳು ಸೋಲುವ ಸಾಧ್ಯತೆ ಇದ್ದ ಕಡೆ ಒಟ್ಟಾಗಲೂ ಬಹುದು.
ಇದೇ ವೇಳೆ ಬಿಜೆಪಿ ಈಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ, `ಬಿಜೆಪಿ ಲಿಂಗಾಯತರಿಗೆ ಅನ್ಯಾಯಮಾಡಿದೆ~ ಎಂಬ ಯಡಿಯೂರಪ್ಪನವರ ಆರೋಪ ಮೊನಚುಕಳೆದುಕೊಳ್ಳಬಹುದು. ಈ ಭಯದಿಂದಲ್ಲವೇ, `ಶೆಟ್ಟರ್ ಸರ್ಕಾರವನ್ನು ಉರುಳಿಸುವುದಿಲ್ಲ~ ಎಂದು ಯಡಿಯೂರಪ್ಪ ಹೇಳುತ್ತಿರುವುದು?
ನಾಲ್ಕನೆಯದಾಗಿ ವೈಯಕ್ತಿಕವಾಗಿ ಅನ್ಯಾಯಕ್ಕೀಡಾಗಿದ್ದೇನೆ ಎಂದು ಹೇಳಿಕೊಂಡು ಪ್ರಾದೇಶಿಕ ಪಕ್ಷ ಕಟ್ಟಿದವರು ಯಶಸ್ಸು ಕಂಡದ್ದು ಕಡಿಮೆ.  ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗೆ ದ್ರಾವಿಡ ಚಳವಳಿ ಪ್ರೇರಣೆ, `ಕಾಂಗ್ರೆಸ್ ಪಕ್ಷ ತೆಲುಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿದೆ~ ಎಂಬ ಪ್ರಚಾರದ ಬಲದಿಂದಲೇ ಎನ್‌ಟಿಆರ್ ಮುಖ್ಯಮಂತ್ರಿಯಾಗಿದ್ದು.
ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿಯೇ ಕಾನ್ಶಿರಾಮ್ ಮತ್ತು ಮಾಯಾವತಿ ಬಿಎಸ್‌ಪಿ ಕಟ್ಟಿದ್ದು. ಇವೆಲ್ಲ ಯಶಸ್ಸಿನ ಮಾದರಿಗಳು. ಕರ್ನಾಟಕದಲ್ಲಿರುವುದು  ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಗುಂಡೂರಾವ್, ಮತ್ತು ಎಸ್.ಬಂಗಾರಪ್ಪ ಮೊದಲಾದವರ ವೈಫಲ್ಯದ ಮಾದರಿಗಳು ಮಾತ್ರ.
ಅವರಿಗೆ ಸಿಗದ ಯಶಸ್ಸು ಯಡಿಯೂರಪ್ಪನವರಿಗೆ ಸಿಗುತ್ತಾ? ಕನಿಷ್ಠ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರಿಗೆ ಸಿಕ್ಕ ಯಶಸ್ಸಾದರೂ ಸಿಗಬಹುದೇ? ಇದನ್ನು ನೋಡಲು ಯಡಿಯೂರಪ್ಪನವರು ಮೊದಲು ಬಿಜೆಪಿ ತ್ಯಜಿಸಬೇಕು, ಹೊಸಪಕ್ಷ ಸೇರಬೇಕು, ಚುನಾವಣೆ ಎದುರಿಸಬೇಕು...ದಾರಿ ದೂರ ಇದೆ, ಸ್ಪಷ್ಟವೂ ಇಲ್ಲ.

Tuesday, December 27, 2011

ರಾಜಕೀಯ ಸಂಘರ್ಷಗಳಲ್ಲೇ ಕಳೆದು ಹೋದ ಬಂಗಾರಪ್ಪ

 
ಎಸ್.ಬಂಗಾರಪ್ಪನವರು ಇಷ್ಟೊಂದು ಸಿಟ್ಟು ಮಾಡಿಕೊಳ್ಳದೆ ಇರುತ್ತಿದ್ದರೆ, ಅವಕಾಶಕ್ಕಾಗಿ ಕಾಯುವಷ್ಟು ತಾಳ್ಮೆಯನ್ನು ಹೊಂದಿದ್ದರೆ, ಅನ್ಯಾಯವನ್ನು ಸಹಿಸಿಕೊಳ್ಳುವಷ್ಟು ಸಂಯಮವನ್ನು ಪಡೆದಿದ್ದರೆ, ಬಂಡುಕೋರತನವನ್ನು ನಿಯಂತ್ರಿಸಿಕೊಳ್ಳುವಷ್ಟು ಹೊಂದಾಣಿಕೆ ಕಲಿತಿದ್ದರೆ, ಜೈಕಾರ ಹಾಕಿದವರನ್ನೆಲ್ಲ ನಂಬುವಷ್ಟು ಒಳ್ಳೆಯವನಾಗದೆ ಇರುತ್ತಿದ್ದರೆ, ಸಾರ್ವಜನಿಕ ಹಣದ ಬಗ್ಗೆ ಸ್ವಲ್ಪ ಸೂಕ್ಷ್ಮಮತಿಯಾಗಿದ್ದರೆ, ಬಡವರ ಬಗೆಗಿನ ಕಾಳಜಿಯ ಜತೆಯಲ್ಲಿ ಅಭಿವೃದ್ಧಿಯ ಮುನ್ನೋಟವನ್ನೂ ಹೊಂದಿದ್ದರೆ... ರಾಜಕೀಯವಾಗಿ ಅವರು ಇನ್ನಷ್ಟು ಮೇಲಕ್ಕೇರುತ್ತಿದ್ದರು, ಅವರಿಂದ ರಾಜ್ಯಕ್ಕೆ ಇನ್ನಷ್ಟು ಒಳ್ಳೆಯದಾಗುತ್ತಿತ್ತೋ ಏನೋ? ಆದರೆ ಸಿಟ್ಟು, ಅವಸರ, ಅಸಹನೆ, ಬಂಡಾಯ, ಹುಂಬತನಗಳೆಲ್ಲವೂ ಅವರ ಹುಟ್ಟುಗುಣಗಳು, ಅವುಗಳು ಇಲ್ಲದೆ ಇದ್ದಿದ್ದರೆ ಅವರು ಬಂಗಾರಪ್ಪ ಹೇಗಾಗುತ್ತಿದ್ದರು? ಈ ಗುಣಗಳಿಗಾಗಿಯೇ ಅವರನ್ನು ದ್ವೇಷಿಸುವವರು ಇದ್ದರು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿಸುವವರೂ ಇದ್ದರು.
1972ರಲ್ಲಿ ಮೊದಲ ಬಾರಿ ಸಿಟ್ಟಾದಾಗ ಅವರಿಗೆ 40ರ ಹರಯ. ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ತಮಗಿಂತ ಕಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಉನ್ನತ ಸ್ಥಾನ ನೀಡಿದಾಗ ಸಿಟ್ಟಾದ ಬಂಗಾರಪ್ಪ ಸಿಡಿದು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡರು. ಎರಡನೆ ಬಾರಿ ಅವರು ಸಿಟ್ಟಾಗಿದ್ದು 1980ರಲ್ಲಿ, ದೇವರಾಜ ಅರಸು ವಿರುದ್ಧದ ಸಮರಕ್ಕೆ ಬಂಗಾರಪ್ಪನವರನ್ನು ಬಳಸಿಕೊಂಡ ಇಂದಿರಾ ಗಾಂಧಿ ಉದ್ದೇಶ ಸಾಧಿಸಿದ ನಂತರ ಅವರನ್ನು ಕೈಬಿಟ್ಟು ಆರ್. ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ. 1983ರಲ್ಲಿ ಕ್ರಾಂತಿರಂಗದ ನಾಯಕರಾಗಿ ರಾಜ್ಯದ ತುಂಬಾ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬೆಂಗಳೂರಿಗೆ ಹಿಂದಿರುಗಿದಾಗ ಮುಖ್ಯಮಂತ್ರಿ ಕುರ್ಚಿಯಲ್ಲಿ ರಾಮಕೃಷ್ಣ ಹೆಗಡೆ ಕುಳಿತಿದ್ದನ್ನು ಕಂಡು ಅವರು ಮೂರನೆ ಬಾರಿ ಸಿಟ್ಟಾಗಿದ್ದರು.
1989ರಲ್ಲಿ ನಾಲ್ಕನೆ ಬಾರಿ ಬಂಗಾರಪ್ಪನವರಿಗೆ ಸಿಟ್ಟು ಬಂದಿತ್ತು. ವೀರೇಂದ್ರ ಪಾಟೀಲ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಕನಿಷ್ಠ ಸಚಿವ ಸಂಪುಟದ ಪಟ್ಟಿಯಲ್ಲಿಯೂ ಅವರ ಹೆಸರಿರಲಿಲ್ಲ. 1993ರಲ್ಲಿ ಐದನೆ ಬಾರಿ ಸಿಟ್ಟಾಗಿದ್ದಾಗ ಅವರು ಮುಖ್ಯಮಂತ್ರಿಯಾಗಿದ್ದರು. ಭಿನ್ನಮತೀಯರ ದೂರಿನ ವಿಚಾರಣೆಗಾಗಿ ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ಎಸ್. ಬಿ.ಚವಾಣ್ ದನಿ ಎತ್ತಿ ಪ್ರಶ್ನಿಸತೊಡಗಿದಾಗ ಸಿಟ್ಟಾದ ಬಂಗಾರಪ್ಪ `ಶಾಲಾಬಾಲಕನನ್ನು ಪ್ರಶ್ನಿಸುವಂತೆ ನನ್ನನ್ನು ಪ್ರಶ್ನಿಸಬೇಡಿ~ ಎಂದು ತಿರುಗಿಬಿದ್ದಿದ್ದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಹತಾಶರಾಗಿಬಿಟ್ಟ ಬಂಗಾರಪ್ಪ ಸಿಟ್ಟಾಗುತ್ತಲೇ ಹೋದರು. ಎರಡು ಬಾರಿ ಸ್ವತಂತ್ರವಾಗಿ ಪಕ್ಷ ಕಟ್ಟಿದರು, ಬಿಜೆಪಿ, ಸಮಾಜವಾದಿ ಪಕ್ಷ, ಜಾತ್ಯತೀತ ಜನತಾದಳ ಸೇರಿದರು. ಮರಳಿ ಕಾಂಗ್ರೆಸ್‌ಗೆ ಹಿಂದಿರುಗಿ ವಾಪಸು ಬಂದರು. ಆದರೆ ಅವರು ಬಯಸಿದ ರಾಜಕೀಯ ಅಧಿಕಾರ ಮರಳಿ ಅವರ ಕೈಗೆ ಬರಲೇ ಇಲ್ಲ. ಅವರು ಬೆಳೆಸಿದ ಹುಡುಗರೆಲ್ಲ ಶಾಸಕರಾಗಿ, ಸಚಿವರಾಗಿ ಕಣ್ಣೆದುರು ಮೆರೆಯುತ್ತಿದ್ದಾಗ ಚುನಾವಣೆಯಲ್ಲಿಯೂ ಸೋತುಹೋಗಿ, `ಸೋಲಿಲ್ಲದ ಸರದಾರ~ನೆಂಬ ಖ್ಯಾತಿಯನ್ನೂ ಕಳೆದುಕೊಂಡು ರಾಜಕೀಯವಾಗಿ ಅವರು ಒಂಟಿಯಾಗಬೇಕಾಯಿತು. ಇದಕ್ಕೆಲ್ಲ ಒಂದು ಕಾರಣ ಅವರ ಸಿಟ್ಟು ಎನ್ನುವವರಿದ್ದಾರೆ.
ಬಂಗಾರಪ್ಪನವರು ಯಾಕೆ ಸಿಟ್ಟಾಗುತ್ತಿದ್ದರು? ತನಗೆ ಅನ್ಯಾಯವಾದಾಗಲೆಲ್ಲ ಅವರು ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ಅಭಿಮಾನಿಗಳು. ಮಹತ್ವಾಕಾಂಕ್ಷಿಯಾಗಿದ್ದ ಬಂಗಾರಪ್ಪ ಬಯಸಿದ್ದು ಸಿಗದೆ ಇದ್ದಾಗೆಲ್ಲ ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ವಿರೋಧಿಗಳು. ಈ ಎರಡು ಅಭಿಪ್ರಾಯಗಳ ನಡುವೆ ಎಲ್ಲೋ ಒಂದು ಕಡೆ ಅವರ ಸಿಟ್ಟಿನ ಕಾರಣ ಇದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಬಂಗಾರಪ್ಪನವರೂ ಮಾಡಲಿಲ್ಲ.
ಬಂಗಾರಪ್ಪನವರು ತನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು ಪ್ರಜಾಸೋಷಲಿಸ್ಟ್ ಪಕ್ಷದ ಮೂಲಕ; ಕೊನೆಗೊಳಿಸಿದ್ದು ಜಾತ್ಯತೀತ ಜನತಾದಳದ ಮೂಲಕ. ಬಹುಕಾಲ ರಾಜಕೀಯ ಮಾಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಆ ಪಕ್ಷದಲ್ಲಿ ಒಂದಷ್ಟು ದಿನ ಅಧಿಕಾರ ಅನುಭವಿಸಿದರೂ ಹೈಕಮಾಂಡ್ ಸಂಸ್ಕೃತಿಯ ಪಕ್ಷಕ್ಕೆ ಹೊಂದಿಕೊಳ್ಳಲು ಅತ್ಯುಗ್ರ ಸ್ವಾಭಿಮಾನಿಯಾಗಿದ್ದ ಬಂಗಾರಪ್ಪನವರಿಗೆ ಸಾಧ್ಯವಾಗಲೇ ಇಲ್ಲ. ಬಂಗಾರಪ್ಪನವರ ಗುಣ-ಸ್ವಭಾವ ಒಬ್ಬ ಪ್ರಾದೇಶಿಕ ಪಕ್ಷದ ನಾಯಕನಾಗಲು ಹೊಂದಿಕೆಯಾಗುವಂತಿತ್ತೇ ಹೊರತು ರಾಷ್ಟ್ರೀಯ ಪಕ್ಷ ಬಯಸುವ ಶಿಸ್ತಿನ ಸಿಪಾಯಿಯಾಗಲು ಹೊಂದಿಕೆಯಾಗುವಂತಿರಲಿಲ್ಲ. ಕಾಂಗ್ರೆಸ್ ಸಂಸ್ಕೃತಿ ಮತ್ತು ತನ್ನ ಸ್ವಭಾವವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಅವರು ಆ ಪಕ್ಷದ ಸಹವಾಸಕ್ಕೆ ಹೋಗುತ್ತಿರಲಿಲ್ಲವೇನೋ? ಅದು ಅರಿವಾಗುವ ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಈ ಗೊಂದಲದಲ್ಲಿಯೇ ನಾಲ್ಕು ದಶಕಗಳ ತನ್ನ ರಾಜಕೀಯ ಜೀವನದಲ್ಲಿ ಅವರು ಐದು ಬಾರಿ ಕಾಂಗ್ರೆಸ್ ಬಿಟ್ಟು ಹೋಗಿದ್ದರು, ಐದು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದಿದ್ದರು.
ಬಂಗಾರಪ್ಪನವರ ರಾಜಕೀಯ ಜೀವನದ ಮೊದಲ ಪ್ರಮಾದ ತನ್ನನ್ನು ಕರೆದುಕೊಂಡು ಬಂದು ಬೆಳೆಸಿದ್ದ ದೇವರಾಜ ಅರಸು ಅವರನ್ನು ತೊರೆದು ತನ್ನ ಸ್ವಭಾವಕ್ಕೆ ಒಪ್ಪದ ಕಾಂಗ್ರೆಸ್ ಜತೆ ಹೋಗಿದ್ದು. ಅರಸು ಜತೆಯಲ್ಲಿಯೇ ಉಳಿದುಕೊಂಡಿದ್ದರೆ ನಿಜವಾದ ಅರ್ಥದಲ್ಲಿ ಅವರ ರಾಜಕೀಯ ಉತ್ತರಾಧಿಕಾರಿಯಾಗುತ್ತಿದ್ದರು. ಅದರಿಂದ ನೆರೆರಾಜ್ಯಗಳಂತೆ ಕರ್ನಾಟಕಕ್ಕೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವೂ ಸಿಕ್ಕಿಬಿಡುತ್ತಿತ್ತೋ ಏನೋ? ಅಂತಹ ಸಂದರ್ಭದಲ್ಲಿ ಕರ್ನಾಟಕದ ಇಂದಿನ ರಾಜಕೀಯ ಚಿತ್ರವೇ ಬೇರೆಯಾಗಿರುತ್ತಿತ್ತು. ರಾಜಕೀಯ ಅಧಿಕಾರ ಪಡೆಯುವ ಉದ್ದೇಶದಿಂದ ಅರಸು ಅವರನ್ನು ಕೈಬಿಟ್ಟರೂ ಕೊನೆಗೂ ಆ ಅಧಿಕಾರ ಪೂರ್ಣಪ್ರಮಾಣದಲ್ಲಿ ಅವರ ಕೈಗೆ ಬರಲೇ ಇಲ್ಲ. ಸುಮಾರು ನಲ್ವತ್ತು ವರ್ಷ ರಾಜಕೀಯದಲ್ಲಿದ್ದು `ಅಧಿಕಾರದಾಹಿ~, `ಪಕ್ಷಾಂತರಿ~ ಎಂಬ ಹೀಯಾಳಿಕೆಗೆ ತುತ್ತಾದರೂ ಅವರು ಅಧಿಕಾರ ಅನುಭವಿಸಿದ್ದು ಕೇವಲ ನಾಲ್ಕುವರೆ ವರ್ಷ.
ಅರಸು ಅವರನ್ನು ಬಿಟ್ಟು ಬಂದ ಒಂದು ಘಟನೆಯನ್ನು ಹೊರತುಪಡಿಸಿದರೆ ನಂತರದ ಅವರ ಯಾವ ಪಕ್ಷಾಂತರವೂ ರಾಜಕೀಯ ಲೆಕ್ಕಾಚಾರದಿಂದ ಮಾಡಿದ್ದಲ್ಲ. ಅವುಗಳೆಲ್ಲವೂ ಅನ್ಯಾಯದ ವಿರುದ್ಧ ಪ್ರತಿಭಟನೆಯ ಇಲ್ಲವೇ ಸೇಡು ತೀರಿಸಿಕೊಳ್ಳುವ ಹುಂಬತನದ ನಿರ್ಧಾರಗಳು. ಆದ್ದರಿಂದ ಆ ಪಕ್ಷಾಂತರಗಳು ಅವರಿಗೆ `ಅಧಿಕಾರದಾಹಿ~ ಎಂಬ ಹಣೆಪಟ್ಟಿಯನ್ನು ತಂದುಕೊಟ್ಟಿತೇ ವಿನಾ ಅಧಿಕಾರವನ್ನು ತಂದುಕೊಡಲಿಲ್ಲ. ತನ್ನನ್ನು ಬಳಸಿಕೊಂಡು ಕೈಬಿಟ್ಟ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಲೆಂದೇ ಅವರು ಆ ಪಕ್ಷ ತೊರೆದು ಕ್ರಾಂತಿರಂಗ ಸೇರಿದರು, ಈ ಪಕ್ಷಾಂತರ ಕಾಂಗ್ರೆಸ್ ಸೋತು ಜನತಾರಂಗ ಅಧಿಕಾರಕ್ಕೆ ಬರಲು ಕಾರಣವಾಯಿತು, ಆದರೆ ಅವರು ಮುಖ್ಯಮಂತ್ರಿಯಾಗಲಿಲ್ಲ. 1985ರಲ್ಲಿ ಜನತಾರಂಗದ ಅನ್ಯಾಯ ಪ್ರತಿಭಟಿಸಿ ಕಾಂಗ್ರೆಸ್ ಸೇರಿ ಆ ಪಕ್ಷಕ್ಕೆ ತನ್ನ ಪಾಲಿನ ಬಲ ತುಂಬಿದರು, 1989ರಲ್ಲಿ ಆ ಪಕ್ಷವೇನೋ ಅಧಿಕಾರಕ್ಕೆ ಬಂತು ಆದರೆ ಆಗಲೂ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಕೂಡಿ ಬರಲಿಲ್ಲ.
1992ರಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಅದು ಕಿತ್ತುಕೊಂಡ ಶೇಕಡಾ ಏಳೂವರೆಯಷ್ಟು ಮತಗಳಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅಧಿಕಾರಕ್ಕೆ ಬಂದದ್ದು ಜನತಾ ಪಕ್ಷ. 1999ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ನಂತರದ ದಿನಗಳಲ್ಲಿ ಆ ಪಕ್ಷಕ್ಕೆ ಅಧಿಕಾರವೇನೋ ಬಂತು, ಆದರೆ ಬಂಗಾರಪ್ಪನವರು ಮೂಲೆಗುಂಪಾದರು. 2004ರಲ್ಲಿ ತನ್ನೊಳಗೆ ಸೆಳೆದುಕೊಂಡ ಬಿಜೆಪಿ ಅವರ ಬಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ಇನ್ನಷ್ಟು ವಿಸ್ತರಿಸಿತು, ಬಂಗಾರಪ್ಪನವರಿಗೆ ಏನೂ ಸಿಗಲಿಲ್ಲ. ಒಂದೇ ವರ್ಷದ ಅವಧಿಯೊಳಗೆ ಬಿಜೆಪಿ ವಿರುದ್ಧ ಸಿಡಿದೆದ್ದು ಸಮಾಜವಾದಿ ಪಕ್ಷ ಸೇರಿ ಲೋಕಸಭೆಗೆ ಆಯ್ಕೆಯಾದರು. ಆ ಪಕ್ಷಕ್ಕೆ ಲೋಕಸಭೆಯಲ್ಲಿ ಒಬ್ಬ ಸದಸ್ಯನ ಹೆಚ್ಚುವರಿ ಬಲ ಸಿಕ್ಕಿದ್ದೇ ಲಾಭ. 2009ರಲ್ಲಿ ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿದರು. ಆಗಲೂ ಅವರಿಗೆ ಸಿಕ್ಕಿದ್ದು ತಮ್ಮ ಚುನಾವಣಾ ರಾಜಕೀಯದ ಮೊದಲ ಸೋಲು ಅಷ್ಟೇ. ಅದರ ನಂತರ ಜಾತ್ಯತೀತ ಜನತಾದಳ ಸೇರಿದರೂ ಅದರಿಂದ ಅವರಿಗೇನೂ ಲಾಭ ಆಗಲಿಲ್ಲ.
ಬಯಸಿದ್ದನೆಲ್ಲ ಮಾಡಿತೋರಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಒಬ್ಬ ಯಶಸ್ವಿ ರಾಜಕೀಯ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಬಂಗಾರಪ್ಪನವರು ಪಕ್ಷಗಳ ಜತೆಗಿನ ಗುದ್ದಾಟ-ತಿಕ್ಕಾಟದಲ್ಲಿಯೇ ಕಳೆದುಹೋದರೇನೋ? ಅವರನ್ನು ಹಿಂದುಳಿದ ಜಾತಿಗಳ ನಾಯಕನಾಗಿ ಕೊಂಡಾಡಲಾಗುತ್ತಿದ್ದರೂ ಅವರು ಆಳದಲ್ಲಿ ಎಲ್ಲ ಜನವರ್ಗಗಳ ನಾಯಕನೆಂದೇ ಕರೆಸಿಕೊಳ್ಳಲು ಇಷ್ಟಪಡುತ್ತಿದ್ದರೆನ್ನುವುದು ಅವರ ಮಾತು ಮತ್ತು ಕೃತಿಗಳಿಂದ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ ಇರಲಿ, ವಿಶ್ವ, ಆಶ್ರಯ, ಆರಾಧನಾ ಯೋಜನೆಗಳೇ ಇರಲಿ, ಅವುಗಳು ಸಾಮಾಜಿಕ ನ್ಯಾಯದ ಸಾಧನಕ್ಕಿಂತಲೂ ಹೆಚ್ಚಾಗಿ ಎಲ್ಲ ಜಾತಿ-ಜನಾಂಗಗಳ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡ ಕಲ್ಯಾಣ ಕಾರ‌್ಯಕ್ರಮಗಳು.
ಸಮಾಜವಾದವನ್ನಾಗಲಿ ಇಲ್ಲವೇ ದೇವರಾಜ ಅರಸು ಅವರ ಆಸಕ್ತಿಯ ಸಾಮಾಜಿಕ ನ್ಯಾಯವನ್ನಾಗಲಿ ಅವರು ಯಥಾವತ್ತಾಗಿ ಅನುಕರಿಸಲು ಹೋಗಲೇ ಇಲ್ಲ. ವಿಶಾಲವಾದ ಅರ್ಥದಲ್ಲಿ ಎಲ್ಲ ಜಾತಿಗಳಲ್ಲಿರುವ ಬಡವರ ಉದ್ಧಾರವಾಗಬೇಕೆಂದೇ ಅವರು ಹೇಳುತ್ತಿದ್ದರು. ಈ ಕಾರಣದಿಂದಾಗಿಯೇ ಜಾತಿ-ಧರ್ಮವನ್ನು ಮೀರಿ ಅವರಿಗೆ ಅನುಯಾಯಿಗಳಿದ್ದರು. ಸಮಾಜದ ಅಭಿವೃದ್ದಿಯ ಬಗ್ಗೆ ಅವರಲ್ಲಿದ್ದ ಸೈದ್ಧಾಂತಿಕ ಒತ್ತಾಸೆ ಇಲ್ಲದ ಸಡಿಲವಾದ ಆಲೋಚನೆಗಳ ಪರಿಕಲ್ಪನೆ ಇನ್ನೊಂದು ರೀತಿಯಲ್ಲಿ ಅವರ ಮಿತಿಯೂ ಆಗಿತ್ತು. ಇದರಿಂದಾಗಿ ವೈಯಕ್ತಿಕವಾಗಿ ಉದಾರಿಗಳು, ಬಡವರ ಬಗ್ಗೆ ಕಳಕಳಿಯುಳ್ಳವರು, ವಿಶಾಲ ಹೃದಯಿಗಳೂ ಆಗಿದ್ದ ಬಂಗಾರಪ್ಪನವರಿಗೆ ಸೈದ್ಧಾಂತಿಕ ಸ್ಪಷ್ಟತೆ ಹೊಂದಿದ್ದ ಇನ್ನೊಬ್ಬ ಗೋಪಾಲಗೌಡ ಇಲ್ಲವೇ ದೇವರಾಜ ಅರಸು ಆಗಲು ಸಾಧ್ಯವಾಗಲಿಲ್ಲ. ಬೆಂಬಲಿಗರಿಗೆ ನೆರವಾಗಬೇಕೆಂಬ ಒಂದೇ ಉದ್ದೇಶದಿಂದ ಅಧಿಕಾರ ಕೈಗೆ ಬಂದಾಗ ಅದನ್ನು ಸಡಿಲಬಿಟ್ಟರು. ಈ ಔದಾರ‌್ಯವನ್ನು ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಭ್ರಷ್ಟಾಚಾರದ ಕಳಂಕ ಅವರಿಗೆ ಹತ್ತಿಕೊಳ್ಳಲು ಇದು ಮುಖ್ಯ ಕಾರಣ.
ಸಿಟ್ಟಾಗಬೇಡ ನಗುನಗುತ್ತಾ ಇರು, ಅನ್ಯಾಯವನ್ನು ಸಹಿಸಿಕೊಳ್ಳು, ಹೊಂದಾಣಿಕೆ ಮಾಡಿಕೋ, ಯಾರನ್ನೂ ನಂಬಬೇಡ, ತಂತ್ರಗಳನ್ನು ಹೆಣೆ, ಕುತಂತ್ರಗಳನ್ನು ಮಾಡು, ಕಾಳಜಿ ಅಂತಃಕರಣದಲ್ಲಿ ಇಲ್ಲದಿದ್ದರೂ ಮಾತಿನಲ್ಲಿ ಇರಲಿ ಎನ್ನುತ್ತಿದೆ ಇಂದಿನ ರಾಜಕೀಯ. ಈ ಹೊಸಬಗೆಯ ರಾಜಕೀಯಕ್ಕೆ ಹೊಂದಿಕೊಳ್ಳಲು ಕೊನೆಗೂ ಬಂಗಾರಪ್ಪನವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ರಾಜಕೀಯ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದರು. ನೇರಾನೇರ ಜಗಳಕ್ಕಿಳಿದರು, ಬಂಡೆದ್ದರು, ಹೋರಾಡಿದರು, ಕೆಲವೊಮ್ಮೆ ಎದ್ದರು ಇನ್ನೂ ಕೆಲವೊಮ್ಮೆ ಬಿದ್ದರು. ಅಧಿಕಾರವನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಹೋರಾಟದಲ್ಲಿಯೇ ಬದುಕನ್ನು ಕಳೆದರು, ಅದನ್ನೇ ಹೆಚ್ಚು ಪ್ರೀತಿಸುತ್ತಾ ಹೋದರು. ಕೆಲವು ದೌರ್ಬಲ್ಯಗಳ ಹೊರತಾಗಿಯೂ ಅವರೊಳಗೆ ಒಬ್ಬ ಅಪ್ರತಿಮ ಹೋರಾಟಗಾರನಿದ್ದ.
ರಾಜಕೀಯವಾಗಿ ಅಡಿಗಡಿಗೆ ಹಿನ್ನಡೆಯಾದರೂ ಧೃತಿಗೆಟ್ಟು ಮೂಲೆ ಸೇರದೆ ಸೆಟೆದು ನಿಲ್ಲುವ ಚೈತನ್ಯವನ್ನು ಅವರು ಕೊನೆಯವರೆಗೂ ಉಳಿಸಿಕೊಳ್ಳಲು ಅವರೊಳಗಿನ ಈ ದಣಿವರಿಯದ ಹೋರಾಟಗಾರ ಕಾರಣ. ರಾಜಕೀಯದಲ್ಲಿ ಬೆಳೆಯಲು ಒಳದಾರಿ-ಅಡ್ಡದಾರಿಗಳನ್ನೇ ಹುಡುಕಾಡುತ್ತಿರುವ ಇಂದಿನ ರಾಜಕಾರಣದಲ್ಲಿ ಜಾತಿ ಬಲ ಇಲ್ಲದ ಬಡಗೇಣಿದಾರ ಕುಟುಂಬದ ಸಾಮಾನ್ಯ ಯುವಕ ಹೋರಾಟದ ರಾಜಕೀಯದ ಮೂಲಕವೇ ಜನಾನುರಾಗಿ ನಾಯಕನಾಗಿ ಬೆಳೆದದ್ದು ಒಂದು ದಂತಕತೆಯಂತಿದೆ.