Showing posts with label ಆರ್‌ಎಸ್‌ಎಸ್. Show all posts
Showing posts with label ಆರ್‌ಎಸ್‌ಎಸ್. Show all posts

Wednesday, April 24, 2013

ಎಸ್‌ಡಿಪಿಐ ಎಂದರೆ ಬಿಜೆಪಿಗೆ ಪ್ರೀತಿ, ಕಾಂಗ್ರೆಸ್‌ಗೆ ಭಯ.

ಮಂಗಳೂರು: `ಹಿಂದೂ ಕೋಮುವಾದದ ಬಗ್ಗೆ ಇಷ್ಟೆಲ್ಲ ಕೂಗಾಡುವ ನಿಮ್ಮ ಕಣ್ಣಿಗೆ ಮುಸ್ಲಿಂ ಕೋಮುವಾದ ಕಾಣುವುದೇ ಇಲ್ವಾ' ಎಂದು ಹಿಂದೂ ಸಂಘಟನೆಯ ನಾಯಕರು ಜಾತ್ಯತೀತರೆಂದು ಹೇಳಿಕೊಳ್ಳುವವರ
ನ್ನು ಆಗಾಗ ಕೆಣಕುವುದುಂಟು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರಶ್ನೆ ಉಳಿದೆಲ್ಲ ಕಡೆಗಿಂತಲೂ ಹೆಚ್ಚು ಕೇಳಿಸುತ್ತದೆ. ಇದು ತಳ್ಳಿಹಾಕುವಂತಹ ಪ್ರಶ್ನೆಯೂ ಅಲ್ಲ.
ಹಿಂದೂಗಳಂತೆ ಮುಸ್ಲಿಮರಲ್ಲಿ ಕೋಮುವಾದಿಗಳಿದ್ದರೂ ಇತ್ತೀಚಿನವರೆಗೆ ಅವರಿಗೆ ಸಂಘಟನೆಯ ಬೆಂಬಲ ಇರಲಿಲ್ಲ. ಬದಲಾಗಿರುವ ಪರಿಸ್ಥಿತಿಯಲ್ಲಿ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಎಂಬ ಸಂಘಟನೆ ಆ ಕೊರತೆಯನ್ನು ತುಂಬುವಂತೆ ಬೆಳೆಯುತ್ತಿದೆ. ಸಂಘ ಪರಿವಾರದ ನಾಯಕರು `ಮುಸ್ಲಿಂ ಗುಮ್ಮ'ನನ್ನು ತೋರಿಸಿ ಸಂಘಟನೆಯನ್ನು ಬೆಳೆಸುತ್ತಿದ್ದರೆ, ಪಾಪ್ಯುಲರ್ ಫ್ರಂಟ್ `ಹಿಂದೂ ಗುಮ್ಮ'ನನ್ನು ತಮ್ಮ ಸಂಘಟನೆ ಬಲಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ.
ಇದರಿಂದಾಗಿ ಹಿಂದೂ ಕೋಮುವಾದ ಬೆಳೆಯುತ್ತಾ ಹೋದಂತೆ ಸಮಾನಾಂತರವಾಗಿ ಮುಸ್ಲಿಂ ಕೋಮುವಾದವೂ ಜಿಲ್ಲೆಯಲ್ಲಿ ಬೆಳೆಯುತ್ತಿದೆ. ವಿಚಿತ್ರವೆಂದರೆ ಈ ಬೆಳವಣಿಗೆಯಿಂದ ಮುಸ್ಲಿಂ ವಿರೋಧಿ ಎಂಬ ಆರೋಪಕ್ಕೊಳಗಾಗಿರುವ ಬಿಜೆಪಿ ನಿಶ್ಚಿಂತೆಯಿಂದಿದ್ದರೆ, ಮುಸ್ಲಿಂ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ತಳಮಳಕ್ಕೀಡಾಗಿದೆ. ಈ ವಿಲಕ್ಷಣ ವಿದ್ಯಮಾನವೇ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯನ್ನು ಕುತೂಹಲಕಾರಿಯಾಗಿ ಮಾಡಿದೆ.
`ಪಾಪ್ಯುಲರ್ ಫ್ರಂಟ್'ನ ಸಂಘಟನೆಯ ರೂಪ, ಉದ್ದೇಶ ಮತ್ತು ಚಟುವಟಿಕೆಗಳನ್ನು ಗಮನಿಸಿದವರು ಇದು `ಮುಸ್ಲಿಮರ ಆರ್‌ಎಸ್‌ಎಸ್' ಎಂದು ಆರೋಪಿಸುವುದುಂಟು. ಆರ್‌ಎಸ್‌ಎಸ್ ರೀತಿಯಲ್ಲಿಯೇ ಇದಕ್ಕೆ ಹಲವಾರು ಅಂಗ ಸಂಸ್ಥೆಗಳಿವೆ.
ವಿಶ್ವಹಿಂದೂ ಪರಿಷತ್ ಮಾದರಿಯಲ್ಲಿ ಧಾರ್ಮಿಕ ಗುರುಗಳಿಗಾಗಿ `ಆಲ್ ಇಂಡಿಯಾ ಇಮಾಮಿ ಕೌನ್ಸಿಲ್', ಎಬಿವಿಪಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗಾಗಿ `ಸ್ಟೂಡೆಂಟ್ ಕ್ಯಾಂಪಸ್ ಫ್ರಂಟ್', ದುರ್ಗಾವಾಹಿನಿಯನ್ನು ಹೋಲುವಂತೆ ಮಹಿಳೆಯರಿಗಾಗಿ `ನ್ಯಾಷನಲ್ ವುಮೆನ್ ಫ್ರಂಟ್' ಮತ್ತು ಬಿಜೆಪಿ ಮಾದರಿಯಲ್ಲಿ ರಾಜಕೀಯ ಮುಖವಾಗಿ `ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ' (ಎಸ್‌ಡಿಪಿಐ) ಇವೆ. ಆರ್‌ಎಸ್‌ಎಸ್ ಖಾಕಿ ಚಡ್ಡಿ ಧರಿಸಿದರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಸೈನಿಕರ ಸಮವಸ್ತ್ರ ಧರಿಸಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಾರೆ.
ಸಂಘ ಪರಿವಾರದ ನಾಯಕರಂತೆ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಈ ಸಂಘಟನೆಯ ನಾಯಕರ ಮಾತು-ಕೃತಿಗಳಲ್ಲಿ ಧಾರ್ಮಿಕ ಮೂಲಭೂತವಾದದ ವಾಸನೆ ಬಡಿಯುತ್ತಿದೆ. ಮುಸ್ಲಿಂ ಹುಡುಗನ ಜತೆ ಹಿಂದೂ ಹುಡುಗಿ ಕಾಣಿಸಿಕೊಂಡರೆ ಸಂಘ ಪರಿವಾರದ ಸದಸ್ಯರು ದಾಳಿ ಮಾಡಿದರೆ, ಹಿಂದೂ ಹುಡುಗನ ಜತೆ ಮುಸ್ಲಿಂ ಹುಡುಗಿ ಕಾಣಿಸಿಕೊಂಡರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಅದನ್ನೇ ಮಾಡುತ್ತಾರೆ. ಇವರ ದಾಳಿಗಳ ಸಂಖ್ಯೆ ಕಡಿಮೆ ಇರಬಹುದು, ಉದ್ದೇಶದಲ್ಲಿ ವ್ಯತ್ಯಾಸ ಇಲ್ಲ. ಇತ್ತೀಚೆಗೆ ಜಿಲ್ಲೆಯ ಬಜಪೆಯಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮುಸ್ಲಿಮರನ್ನು ವಿರೋಧಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಮೂಲಭೂತವಾದಿ ಮುಸ್ಲಿಮರ ಸಂಘಟನೆ ಎಂಬ ಆರೋಪಕ್ಕೊಳಗಾಗಿರುವ `ಪಾಪ್ಯುಲರ್ ಫ್ರಂಟ್' ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿದ್ದು ಕಡಿಮೆ. `ಪಾಪ್ಯುಲರ್ ಫ್ರಂಟ್' ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿರುವುದೇ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ಕಾಲದಲ್ಲಿ ಎನ್ನುವುದು ಗಮನಾರ್ಹ. ಪೊಲೀಸ್ ಇಲಾಖೆಯನ್ನು ಅಂಗೈಯಲ್ಲಿಟ್ಟುಕೊಂಡಿರುವ ಸಂಘ ಪರಿವಾರದ ನಾಯಕರು ಪಾಪ್ಯುಲರ್ ಫ್ರಂಟ್‌ನ ಬೆಳವಣಿಗೆಯನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ.
ಸರ್ಕಾರದಿಂದ ಯಾವುದೇ ಬಗೆಯ ಕಿರುಕುಳ ಅನುಭವಿಸಿದ ಬಗ್ಗೆ ಪಾಪ್ಯುಲರ್ ಫ್ರಂಟ್ ನಾಯಕರೂ ದೂರಿಲ್ಲ. ಇವರು ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನೇ ದಾಳಿಗೆ ಗುರಿ ಮಾಡುತ್ತಿರುವುದು ಕೂಡಾ ನಿಜ. ಇವೆಲ್ಲವನ್ನೂ ನೋಡಿದವರು ಎಲ್ಲೋ ಒಂದು ಕಡೆ ಎರಡೂ ಸಂಘಟನೆಗಳ ನಡುವೆ ಹೊಂದಾಣಿಕೆ ಇದೆಯೇನೋ ಎಂಬ ಸಂಶಯ ವ್ಯಕ್ತ ಪಡಿಸುತ್ತಿರುವುದು ಸಹಜವೇ ಆಗಿದೆ.
ಆರ್‌ಎಸ್‌ಎಸ್ ಮಾಜಿ ನಾಯಕರೊಬ್ಬರ ಜತೆ ಮಾತನಾಡುತ್ತಿದ್ದಾಗ ಅವರೊಂದು ಘಟನೆಯನ್ನು ಹೇಳಿದರು. ನಾಲ್ಕೈದು ತಿಂಗಳ ಹಿಂದೆ ಪಾಪ್ಯುಲರ್ ಫ್ರಂಟ್ ಇಲ್ಲಿನ ನೆಹರೂ ಮೈದಾನದಲ್ಲಿ ಮುಸ್ಲಿಮರ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿತ್ತು. ಇದನ್ನು ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲೆಯ ಸಂಘ ಪರಿವಾರದ ಪ್ರಮುಖ ನಾಯಕರೊಬ್ಬರ ಬಳಿ ಹೋಗಿ ಮುಸ್ಲಿಮರಿಗಿಂತ ದೊಡ್ಡದಾದ ಹಿಂದೂ ಸಮಾಜೋತ್ಸವ ಮಾಡಬೇಕೆಂದು ಒತ್ತಾಯಿಸಿದರಂತೆ.
ಅವರ ಮಾತು ಕೇಳಿ ನಕ್ಕ ಆ ನಾಯಕರು `ಮೂರ್ಖ ನಿನಗೆ ಬುದ್ಧಿ ಇಲ್ಲ, ನಾವೇನೂ ಮಾಡುವುದು ಬೇಡ, ಅವರಿಗೆ ಇನ್ನಷ್ಟು ಸಮ್ಮೇಳನಗಳನ್ನು ಮಾಡಲು ದುಡ್ಡು ಕೊಟ್ಟು ಬಿಡುವ' ಎಂದರಂತೆ. ಮುಸ್ಲಿಮರು ಬಹಿರಂಗವಾಗಿ ಸೇರಿ ಶಕ್ತಿ ಪ್ರದರ್ಶನ ಮಾಡಿದರೆ ಅದರಿಂದ ಅಸುರಕ್ಷತೆಗೀಡಾಗುವ ಹಿಂದೂಗಳು ಇನ್ನಷ್ಟು ಸಂಖ್ಯೆಯಲ್ಲಿ ತಮ್ಮ ಕಡೆ ಬರುತ್ತಾರೆ ಎನ್ನುವುದು ಆ ನಾಯಕರ ತಂತ್ರ. ಪಾಪ್ಯುಲರ್ ಫ್ರಂಟ್‌ನ ನಾಯಕರಲ್ಲಿಯೂ ಈ ಉದ್ದೇಶ ಇದ್ದ ಹಾಗಿದೆ.
ಇದೇ ಪಾಪ್ಯುಲರ್ ಫ್ರಂಟ್‌ನ ರಾಜಕೀಯ ಮುಖ ಎಸ್‌ಡಿಪಿಐ. 2009ರಲ್ಲಿ ಎಸ್‌ಡಿಪಿಐ ಸ್ಥಾಪಿಸಿದಾಗ ಬಹಳ ಮಂದಿ ಇದನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಿದ್ದ ಎಸ್‌ಡಿಪಿಐ ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 206 ಕಡೆ ಸ್ಪರ್ಧಿಸಿ ಹದಿನೇಳು ಸ್ಥಾನಗಳನ್ನು ಗೆದ್ದಿರುವುದು ಮಾತ್ರವಲ್ಲ, ಹದಿನೆಂಟು ಕಡೆ ಎರಡನೆ ಸ್ಥಾನ ಪಡೆದ ನಂತರ ರಾಜಕೀಯ ಪಕ್ಷಗಳು ಜಾಗೃತವಾಗಿವೆ.
ಈಗ ರಾಜ್ಯದ 25 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆಗಿಳಿದಿದ್ದರೂ ಅದು ಗಮನ ಕೇಂದ್ರೀಕರಿಸಿರುವುದು ದಕ್ಷಿಣ ಕನ್ನಡದ ಮೇಲೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಸ್‌ಡಿಪಿಐ, ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
ಬಹಿರಂಗವಾಗಿ `ಬಿಜೆಪಿ ಮತ್ತು ಕಾಂಗ್ರೆಸ್ ನಮಗೆ ಸಮಾನ ಶತ್ರುಗಳು' ಎಂದು ಹೇಳುವ ಎಸ್‌ಡಿಪಿಐ ನಾಯಕರು ಖಾಸಗಿಯಾಗಿ `ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತೇವೆ' ಎನ್ನುತ್ತಾರೆ. ಇದು ಎಷ್ಟು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಕಾರ್ಯತಂತ್ರ ಸ್ಪಷ್ಟ. ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳದೆ ಇರುವ ಬಿಜೆಪಿಗೆ ಆ ಮತಗಳು ಬರದೆಹೋದರೂ ನಷ್ಟ ಇಲ್ಲ. ಇದೇ ಮಾತನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಲಾಗದು. ಕೆಲವು ಸಾವಿರದಷ್ಟು ಮುಸ್ಲಿಂ ಮತಗಳನ್ನು ಎಸ್‌ಡಿಪಿಐ ಕಿತ್ತುಕೊಂಡರೂ ಒಂದೆರಡು ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಬುಡಮೇಲಾಗಬಹುದು.
ಉದಾಹರಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಸ್ಲಿಂ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ರಮಾನಾಥ ರೈ ಗೆದ್ದಿರುವುದು ಕೇವಲ 1251 ಮತಗಳಿಂದ. ಈ ಬಾರಿಯೂ ಅಲ್ಲಿ ತುರುಸಿನ ಸ್ಪರ್ಧೆ ಇದೆ. ಈ ಸ್ಥಿತಿಯಲ್ಲಿ ಅಲ್ಲಿ ಕಣದಲ್ಲಿರುವ ಎಸ್‌ಡಿಪಿಐ ಅಭ್ಯರ್ಥಿ ಪಡೆಯುವ ಒಂದೆರಡು ಸಾವಿರ ಮತಗಳು ಕೂಡಾ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಬಹುದು. ಇದೇ ರೀತಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆದ್ದಿರುವುದು 7149 ಮತಗಳಿಂದ. ಅಲ್ಲಿನ ಎಸ್‌ಡಿಪಿಐ ಅಭ್ಯರ್ಥಿ ಏಳೆಂಟು ಸಾವಿರ ಮತಗಳನ್ನು ಪಡೆದರೆ ಕಾಂಗ್ರೆಸ್ ದೋಣಿ ಮುಳುಗಬಹುದು.
`ತಾತ್ವಿಕವಾಗಿ ನೀವೇ ವಿರೋಧಿಸುತ್ತಿರುವ ಬಿಜೆಪಿಯನ್ನು ನಿಮ್ಮ ಸ್ಪರ್ಧೆಯಿಂದಾಗಿ ಗೆಲ್ಲಿಸಿದ ಹಾಗಾಗುವುದಿಲ್ಲವೇ? ಬಿಜೆಪಿ ಜತೆ ಇಂತಹದ್ದೊಂದು ಗುಪ್ತ ಹೊಂದಾಣಿಕೆಯನ್ನೂ ನೀವು ಮಾಡಿಕೊಂಡಿದ್ದೀರಿ ಎಂಬ ಆರೋಪವೂ ಇದೆ ಅಲ್ಲವೇ?' ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಅವರನ್ನು ಕೇಳಿದರೆ `ಅಂತಹ ಆರೋಪಗಳಿಗೆ ಯಾವ ಆಧಾರವೂ ಇಲ್ಲ. ಈ ಚುನಾವಣೆಯಲ್ಲಿ ಹಾಗೆ ಅನಿಸಲೂಬಹುದು. ಆದರೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ನಾವು ಬೆಳೆಯಲು ಸಾಧ್ಯವಾಗುತ್ತದೆ' ಎಂದರು.
`ಅವರ ಉದ್ದೇಶ ಸ್ಪಷ್ಟ. ಅದು ಮೂಲಭೂತವಾದಿಗಳ ಜತೆಯಲ್ಲಿ ಕೈಜೋಡಿಸಿ ಜಾತ್ಯತೀತ ಶಕ್ತಿಗಳನ್ನು ಸೋಲಿಸುವುದು. ಇಂತಹ ಕುತಂತ್ರಗಳಿಗೆ ಮುಸ್ಲಿಮರು ಬಲಿಯಾಗಲಾರರು' ಎಂಬ ವಿಶ್ವಾಸ ವ್ಯಕ್ತಪಡಿಸಿದವರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ನಂತರ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಒಂದೆಡೆ ಟಿಕೆಟ್ ವಂಚಿತರ ಬಂಡಾಯ ಬೆದರಿಸುತ್ತಿದ್ದರೆ ಇನ್ನೊಂದೆಡೆ ಎಸ್‌ಡಿಪಿಐ ಭೂತ ಕಾಡುತ್ತಿದೆ.

Saturday, June 23, 2012

ನರೇಂದ್ರಮೋದಿ ಅವರಿಂದ ಬಿಜೆಪಿ ಅಪಹರಣ June 11, 2012

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಬ್ಬ ಆದರ್ಶ ಸ್ವಯಂಸೇವಕನಿಂದ ಬಯಸುವ ಎಲ್ಲ ಗುಣಗಳು ಸಂಜಯ್ ಜೋಷಿ ಅವರಲ್ಲಿವೆ.  ಆರ್‌ಎಸ್‌ಎಸ್ ಸಿದ್ಧಾಂತವನ್ನು ಮೂರುಹೊತ್ತು ಉಸಿರಾಡುತ್ತಿರುವ ಜೋಷಿ ಒಬ್ಬ ಸರಳ, ಪ್ರಾಮಾಣಿಕ, ಸಮರ್ಥ, ಸಜ್ಜನ ವ್ಯಕ್ತಿ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ, ಪ್ರಚಾರದ ಹಪಾಹಪಿ ಇಲ್ಲದ,  ಗಂಟೆ-ದಿನಗಳನ್ನು ಲೆಕ್ಕಿಸದೆ ಕೆಲಸ ಮಾಡಬಲ್ಲ ಶ್ರಮಜೀವಿ. 

ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪದವರು ಸೈದ್ಧಾಂತಿಕವಾಗಿ ಅವರೊಡನೆ ನೂರೆಂಟು ತಕರಾರುಗಳನ್ನು ತೆಗೆಯಬಹುದು. ಆದರೆ ಆರ್‌ಎಸ್‌ಎಸ್ ನುಡಿದಂತೆಯೇ ನಡೆಯುವಂತಿದ್ದರೆ ಅದಕ್ಕೆ ಜೋಷಿ ಅವರಲ್ಲಿ ಎಳ್ಳುಕಾಳಿನಷ್ಟು ದೋಷ ಕಾಣಿಸಬಾರದಿತ್ತು.

ಆಗಿರುವುದೇನು?  ಬಿಜೆಪಿ ತೀರಾ ಅವಮಾನಕಾರಿಯಾಗಿ ಜೋಷಿ ಅವರನ್ನು ಹೊರಹಾಕಿದಾಗ ಸ್ವಯಂಸೇವಕರಿಗೆ ಆದರ್ಶದ ಪಾಠ ಹೇಳುತ್ತಿರುವ ಆರ್‌ಎಸ್‌ಎಸ್ ತನ್ನೊಬ್ಬ ಆದರ್ಶಸ್ವರೂಪಿ ಪ್ರಚಾರಕನಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ನೋಡದವರಂತೆ ಕಣ್ಣುಮುಚ್ಚಿಕೊಂಡು ಅವರ ವಿರೋಧಿಗಳ ಜತೆ ಶಾಮೀಲಾಗಿದೆ.

2005ರ ಡಿಸೆಂಬರ್‌ನ ಕೊನೆ ವಾರದಲ್ಲಿ  ಭಾರತೀಯ ಜನತಾ ಪಕ್ಷಕ್ಕೆ ಇಪ್ಪತ್ತೈದು ತುಂಬಿದಾಗ ಐದು ದಿನಗಳ ರಜತ ಜಯಂತಿಯನ್ನು ಮುಂಬೈನಲ್ಲಿ ಆಚರಿಸಲಾಗಿತ್ತು. ಅದನ್ನು ವರದಿಮಾಡಲೆಂದು ಹೋಗಿದ್ದ ನಾನು  ಬೆಳಿಗ್ಗೆ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತಿದ್ದಾಗ ಯುವಕನೊಬ್ಬ ಬಂದು ಮಡಚಿದ್ದ ಬಿಳಿಹಾಳೆಯನ್ನು ಕೈಗಿತ್ತು ಮಾಯವಾಗಿ ಹೋದ. 

ಪಕ್ಷದ ಹೇಳಿಕೆ ಇರಬಹುದೆಂದು ಬಿಡಿಸಿ ನೋಡಿದರೆ ಅದು `ಸಂಜಯ್ ಜೋಷಿ ಅವರು ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದರು....` ಎಂದು ಆರೋಪಿಸಿ ಮಹಿಳೆಯೊಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ್ದ ದೂರಿನ ಪ್ರತಿ. 

ಆಶ್ಚರ್ಯದಿಂದ ಅಕ್ಕಪಕ್ಕ ನೋಡಿದರೆ ಅಂತಹ ಪ್ರತಿಗಳು ಇನ್ನೂ ಕೆಲವರ ಕೈಯಲ್ಲಿದ್ದವು. ಕೆಲವು ಪತ್ರಕರ್ತರಂತೂ ಮೊದಲೇ ಗೊತ್ತಿದ್ದವರಂತೆ `ಸಿಡಿ ಹೈ, ದೇಖ್ ನ ಹೈ ಕ್ಯಾ?` ಎಂದು ಕಣ್ಣುಮಿಟುಕಿಸತೊಡಗಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸಂಜಯ್ ಜೋಷಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುದ್ದಿ ಹೊರಬಿತ್ತು. ಪಕ್ಷದ ಬೆಳ್ಳಿಹಬ್ಬದ ಸಂಭ್ರಮ ಸಿ.ಡಿ ಹಗರಣದಲ್ಲಿ ಕರಗಿ ಹೋಗಿತ್ತು. 

ಇದು ಯಾರ ಕೈವಾಡ ಎನ್ನುವ ಚರ್ಚೆ ಅಲ್ಲಿ ನಡೆದಿದ್ದಾಗ ಕೇಳಿಬಂದ ಮೊದಲ ಹೆಸರು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರದ್ದು. ನಂತರದ ದಿನಗಳಲ್ಲಿ ಪೊಲೀಸರು ತನಿಖೆ ನಡೆಸಿ ಅದು ನಕಲಿ ಸಿ.ಡಿ. ಎಂದು ತೀರ್ಮಾನಕ್ಕೆ ಬಂದರು. ಆ ಸಿ.ಡಿ.ಯನ್ನು ಗುಜರಾತ್ ಪೊಲೀಸರು ವಿತರಿಸಿದ್ದರು ಎನ್ನುವುದು ಕೂಡಾ ಬಯಲಾಯಿತು. 

ಆದರೆ ಅದರ ಹಿಂದಿರುವ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. (ಗುಜರಾತ್‌ನಲ್ಲಿ ನಡೆದ ನರಮೇಧ ಮತ್ತು ಹರೇನ್ ಪಾಂಡ್ಯ ಹತ್ಯೆಯ ರೂವಾರಿ ಯಾರೆಂಬ ಪ್ರಶ್ನೆಯ ಹಾಗೆ). 

ಅವಮಾನದಿಂದ ಕುಗ್ಗಿಹೋಗಿ ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಸಂಜಯ್ ಜೋಷಿ ತನ್ನ ಮೇಲಿನ ಆರೋಪದಿಂದ ಮುಕ್ತರಾದ ನಂತರ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಆಗ ಮತ್ತೆ  ಬುಸುಗುಟ್ಟತೊಡಗಿದ್ದವರು ನರೇಂದ್ರ ಮೋದಿ. 

ಈ ಬಾರಿ ಪಕ್ಷವನ್ನೇ ತನ್ನ ಬೇಕು-ಬೇಡಗಳಿಗೆ ಒಪ್ಪುವ ಹಾಗೆ ಕುಣಿಸುವಷ್ಟು ಬೆಳೆದಿರುವ ಮೋದಿ ನೇರ ಕಾರ್ಯಾಚರಣೆಯಲ್ಲಿ ಜೋಷಿ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಮೋದಿ ಮತ್ತು ಜೋಷಿ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಆರ್‌ಎಸ್‌ಎಸ್ ಪ್ರವೇಶಿಸಿದವರು. 

ಗುಜರಾತ್‌ನಲ್ಲಿ ಇಂದು ಬಿಜೆಪಿ ಭದ್ರವಾಗಿ ಬೇರೂರಿದ್ದರೆ ಅದಕ್ಕೆ ಮೋದಿ ಅವರಂತೆ ಜೋಷಿಯವರೂ ಕಾರಣ. 2001ರಲ್ಲಿ ಕೇಶುಭಾಯಿ ಪಟೇಲ್ ಪದಚ್ಯುತಿಯಾದ ನಂತರ  ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಮೊದಲು ಮಾಡಿದ ಕೆಲಸ ಸಂಜಯ್ ಜೋಷಿ ಅವರನ್ನು ರಾಜ್ಯದಿಂದ ಹೊರಹಾಕಿದ್ದು. ಆಗಲೂ ಮೋದಿ ಒತ್ತಡಕ್ಕೆ ಮಣಿದ ಬಿಜೆಪಿ ಜೋಷಿ ಅವರನ್ನು ಗುಜರಾತ್‌ನಿಂದ ಕರೆಸಿಕೊಂಡು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತ್ತು.

ಬಿಜೆಪಿಯ ಈಗಿನ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಸಂಜಯ್ ಜೋಷಿ ಇಬ್ಬರದ್ದೂ ಒಂದೇ ಊರು. ನಾಗಪುರದಲ್ಲಿ ಇಬ್ಬರೂ ಜತೆಯಲ್ಲಿ ಆರ್‌ಎಸ್‌ಎಸ್ ಶಾಖೆಗೆ ಹೋಗುವ ಮೂಲಕ ಪರಿವಾರ ಸೇರಿದವರು. ಇಬ್ಬರು ಬೆಳೆಯುತ್ತಾ ಹೋದಂತೆ ಹಿಡಿದ ದಾರಿ ಮಾತ್ರ ಎಂದೂ ಪರಸ್ಪರ ಸಂಧಿಸಲು ಸಾಧ್ಯ ಇಲ್ಲದ್ದು.

ಮೊನ್ನೆಮೊನ್ನೆವರೆಗೆ ಜೋಷಿ ಅವರ ಬೆಂಬಲಕ್ಕೆ ನಿಂತಿದ್ದ ಪಕ್ಕಾ ವ್ಯಾಪಾರಿಯಂತೆ ಕಾಣುವ ಗಡ್ಕರಿ  ಇದ್ದಕ್ಕಿದ್ದಂತೆ ಬಾಲ್ಯದ ಗೆಳೆಯನ ಕೈಬಿಟ್ಟು ಮೋದಿ ಜತೆ ಸೇರಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಭೀಷ್ಮಾಚಾರ್ಯರೆಲ್ಲ  `ಹಿಂದೂ ಹೃದಯ ಸಾಮ್ರಾಟ`ನ ಆದೇಶಕ್ಕೆ ತಲೆಯಾಡಿಸುತ್ತಾಕೂತಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿ ನಂತರದ ಬೆಳವಣಿಗೆಗಳನ್ನು ನೋಡಿದರೆ ಪಕ್ಷದ ಏಕಮೇವಾದ್ವಿತಿಯ ನಾಯಕನಾಗಿ ನರೇಂದ್ರಮೋದಿ  ಉದಯಿಸಿರುವ ಹಾಗೆ ಕಾಣುತ್ತಿದೆ. `ಮೋದಿ ಅವರೇ ಮುಂದಿನ ಪ್ರಧಾನಿ` ಎಂದು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುವ ಮೊದಲೇ ಅವರ ಅಭಿಮಾನಿ ಬಳಗ ಜಯಘೋಷ ಮಾಡುತ್ತಿದೆ. 

ವಿಚಿತ್ರವೆಂದರೆ ಈ ಸಂಭ್ರಮ-ಸಡಗರ ಮೋದಿ ಅವರ ಪಕ್ಷದ ಇಲ್ಲವೇ, ಆರ್‌ಎಸ್‌ಎಸ್, ವಿಎಚ್‌ಪಿ, ಎಬಿವಿಪಿ, ಎಚ್‌ಎಂಎಸ್‌ನ ನಾಯಕರ ಮುಖಗಳಲ್ಲಿ ಕಾಣುತ್ತಿಲ್ಲ. ಮೋದಿ ಅವರ ಬಹುಕಾಲದ ವಿರೋಧಿಗಳಾಗಿರುವ ಕೇಶುಭಾಯಿ ಪಟೇಲ್, ಸುರೇಶ್‌ಮೆಹ್ತಾ, ರಾಣಾ ಮೊದಲಾದವರು ರಾಜ್ಯದಲ್ಲಿ ಮತ್ತೆ ಬಂಡೆದ್ದಿದ್ದಾರೆ. 

ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮೊದಲಾದವರು ಬಹಿರಂಗವಾಗಿ ಮೋದಿ ಅವರ ನಡವಳಿಕೆಯನ್ನು ವಿರೋಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ನಿತಿನ್ ಗಡ್ಕರಿ ಕಾರ್ಯಶೈಲಿಯನ್ನು ಟೀಕಿಸಿದ್ದರೂ ಅವರ ಬಾಣದ ಗುರಿ ನರೇಂದ್ರಮೋದಿಯವರೇ ಆಗಿದ್ದಾರೆ.

ಸಂಘ ಪರಿವಾರ ಎನ್ನುವುದು ಈಗ ಒಡೆದ ಮನೆ. ಬಿಜೆಪಿಯ ಮುಖವಾಣಿ ಪತ್ರಿಕೆಯಾದ `ಕಮಲ ಸಂದೇಶ`ದಲ್ಲಿ ಮೋದಿ ವಿರುದ್ಧ ಲೇಖನ ಪ್ರಕಟವಾಗಿದ್ದರೆ, ಆರ್‌ಎಸ್‌ಎಸ್ ಮುಖವಾಣಿ `ಆರ್ಗನೈಸರ್` ಪತ್ರಿಕೆಯಲ್ಲಿ ಮೋದಿ ಅವರನ್ನು ಅಟಲಬಿಹಾರಿ ವಾಜಪೇಯಿ ಅವರಿಗೆ ಹೋಲಿಸಿ ಹೊಗಳಿ ಬರೆಯಲಾಗಿದೆ.

ನಿಯಂತ್ರಣ ಮೀರಿ ಬೆಳೆಯುತ್ತಿರುವ ಮೋದಿ ಬಗ್ಗೆ ಆರ್‌ಎಸ್‌ಎಸ್ ನಾಯಕರಲ್ಲಿಯೂ ಅಸಮಾಧಾನ ಇದೆ. ಅನುಯಾಯಿಗಳ ಒತ್ತಡದಿಂದಾಗಿ ಅವರೂ ತುಟಿ ಬಿಚ್ಚಲಾರರು. ಬಿಜೆಪಿ ಮೂಲಕ ಅಧಿಕಾರದ ರುಚಿ ಕಂಡಿರುವ ಆರ್‌ಎಸ್‌ಎಸ್ ನಾಯಕರು ಇತ್ತೀಚಿನ ವರ್ಷಗಳಲ್ಲಿ ಬದಲಾಗಿ ಹೋಗಿದ್ದಾರೆ. 

ಆದರೆ ಸಂಘ ಸಾರುತ್ತಿದ್ದ ಹಿಂದುತ್ವದ ಮೂಲಸಿದ್ಧಾಂತಕ್ಕೆ ಈಗಲೂ ಬದ್ಧವಾಗಿರುವ ಅನುಯಾಯಿಗಳ ಒಂದು ವರ್ಗ ಮೋದಿ ಅವರಲ್ಲಿಯೇ ಭವಿಷ್ಯದ ನಾಯಕನನ್ನು ಕಾಣತೊಡಗಿದೆ. 

ಇದರಿಂದಾಗಿ ತಮ್ಮ ಮೇಲೆ ಸವಾರಿ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರ ಬಗ್ಗೆ ಎಷ್ಟೇ ಅಸಮಾಧಾನ ಇದ್ದರೂ ಆರ್‌ಎಸ್‌ಎಸ್ ಅನಿವಾರ್ಯವಾಗಿ ಮೋದಿ ಅವರನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ.

ನರೇಂದ್ರ ಮೋದಿಯವರು ಹೊಸದೇನನ್ನೂ ಮಾಡಲು ಹೊರಟಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿಯೇ ಮಾಡಿದ್ದನ್ನು ಈಗ ರಾಷ್ಟ್ರಮಟ್ಟದಲ್ಲಿ ಮಾಡಲು ಹೊರಟಿದ್ದಾರೆ.

ಮುಖ್ಯಮಂತ್ರಿಯಾದ ನಂತರ ನರೇಂದ್ರ ಮೋದಿ ಗುಜರಾತ್‌ನಲ್ಲಿ ಮೊದಲು ಮಾಡಿದ್ದು ವಿಶ್ವಹಿಂದೂ ಪರಿಷತ್, ಎಚ್‌ಎಂಎಸ್, ಎಬಿವಿಪಿ ಮೊದಲಾದ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿದ್ದು. ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಈಗಲೂ ತನ್ನ ಹುಟ್ಟೂರಿನಲ್ಲಿಯೇ ತುಟಿಬಿಚ್ಚುವಂತಿಲ್ಲ.

ಎಲ್.ಕೆ.ಅಡ್ವಾಣಿ ಅವರು ಈಗ ಗುಡುಗುತ್ತಿದ್ದರೂ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಮೋದಿ ಹಿತರಕ್ಷಕನಾಗಿಯೇ ಕೆಲಸ ಮಾಡಿದ್ದು. `ರಾಜಧರ್ಮ` ಪಾಲಿಸುವಂತೆ ವಾಜಪೇಯಿ ಕರೆಕೊಟ್ಟ ನಂತರ ಇನ್ನೇನು ಮೋದಿ ಪದಚ್ಯುತಿಯಾಗಿಯೇ ಹೋಯಿತು ಎಂದು ಎಲ್ಲರೂ ತಿಳಿದಿದ್ದರು.

ಆಗ ಅವರನ್ನು ರಕ್ಷಿಸಿದ್ದು ಅಡ್ವಾಣಿ. ಮೋದಿ ನೆರವಿಲ್ಲದೆ ಇದ್ದರೆ ಲೋಕಸಭೆಗೆ ಆರಿಸಿಬರುವುದು ಕಷ್ಟ ಎನ್ನುವುದು ಈ ಶರಣಾಗತಿಗೆ ಒಂದು ಕಾರಣವಾದರೆ, ಪ್ರಧಾನಮಂತ್ರಿ ಸ್ಥಾನದ ಓಟಕ್ಕೆ ಇಳಿದಾಗ ಮೋದಿ ಬೆಂಬಲಿಸಬಹುದು ಎಂಬ ದೂರಾಲೋಚನೆ ಇನ್ನೊಂದು ಕಾರಣ ಇರಬಹುದು.

ಗುಜರಾತ್‌ನಲ್ಲಿ ಈಗ ಇರುವುದು ದೇಶದ ಉಳಿದೆಡೆ ಕಾಣುತ್ತಿರುವ ಬಿಜೆಪಿ ಖಂಡಿತ ಅಲ್ಲ, ಅದು ನರೇಂದ್ರ ಮೋದಿ ಬಿಜೆಪಿ. ಆ ರಾಜ್ಯದ ಬಿಜೆಪಿಯನ್ನು ಅವರು ಪ್ರತ್ಯೇಕ ಪ್ರಾದೇಶಿಕ ಪಕ್ಷದಂತೆಯೇ ನಡೆಸಿಕೊಂಡು ಬಂದಿದ್ದಾರೆ. ಪಕ್ಕಾ ಪಾಳೆಯಗಾರನಂತೆ ವಿರೋಧಿಸಿದವರ ತಲೆ ಕಡಿಯುತ್ತಾ, ಶರಣಾದವರನ್ನು ಅಡಿಯಾಳುಗಳನ್ನಾಗಿ ಮಾಡುತ್ತಾ ಬಂದಿದ್ದಾರೆ. 

ಈಗ ಇಡೀ ಪಕ್ಷವನ್ನೇ ಅಪಹರಣ ಮಾಡಲು ಹೊರಟಿದ್ದಾರೆ. ಅಪಹರಣ ಎಂದರೆ ಪ್ರತಿಭಟಿಸಿದವರ ಕೈಕಾಲು ಕಟ್ಟಿಹಾಕಿ, ಬಾಯಿಮುಚ್ಚಿಸಿ ಹೊತ್ತುಕೊಂಡು ಹೋಗುವುದು. ಮೋದಿ ಅದನ್ನೇ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅಪಹರಣ ಎನ್ನುವುದು ಅಪರಾಧ.

ಆದರೆ `ಅಪಹರಣಕಾರನ` ಜತೆ ಶಾಮೀಲಾಗಿರುವ ಆರ್‌ಎಸ್‌ಎಸ್‌ನ ನ್ಯಾಯಶಾಸ್ತ್ರದಲ್ಲಿ ಅಪಹರಣಕ್ಕೆ ಬೇರೆ ಅರ್ಥ ಇದ್ದರೂ ಇರಬಹುದು ಇಲ್ಲವೇ ಅಪಹರಣಕಾರರ ಜತೆಯಲ್ಲಿಯೇ ಬದುಕುತ್ತಾ ಕೊನೆಗೆ ಆತನನ್ನೇ ಪ್ರೀತಿಸುವ `ಸ್ಟಾಕ್‌ಹೋಂ ಸಿಂಡ್ರೋಮ್`ಗೆ ಆರ್‌ಎಸ್‌ಎಸ್ ಒಳಗಾಗಿರಬಹುದು.

ಉಳಿದವರ ಗೊಂದಲ ಏನೇ ಇದ್ದರೂ ನರೇಂದ್ರ ಮೋದಿ ಅವರಿಗೆ ತನ್ನ ಮುಂದಿನ ದಾರಿ ಬಗ್ಗೆ ಸ್ಪಷ್ಟತೆ ಇರುವಂತೆ ಕಾಣುತ್ತಿದೆ. ಅವರ ರಾಜಕೀಯ ಜೀವನದಲ್ಲಿ ಮುಂದಿನ ಎರಡು ವರ್ಷಗಳು ನಿರ್ಣಾಯಕವಾದುದು. 

ಈ ವರ್ಷದ ಕೊನೆಯಲ್ಲಿ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ, ಆ ಚುನಾವಣೆಯ ಫಲಿತಾಂಶ, ನಂತರದ ಒಂದೂವರೆ ವರ್ಷಗಳ ಅವಧಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅವರ ಪಾತ್ರವನ್ನು ನಿರ್ಧರಿಸಲಿದೆ. 

ಇದಕ್ಕಾಗಿಯೇ ಅವರು ತಾಲೀಮು ಪ್ರಾರಂಭಿಸಿರುವುದು. ಅಡ್ವಾಣಿಯವರನ್ನೋ, ಸುಷ್ಮಾ ಸ್ವರಾಜ್ ಅವರನ್ನೋ ಪ್ರಧಾನಿಯಾಗಿ ಮಾಡುವುದು ಅವರ ಉದ್ದೇಶ ಖಂಡಿತ ಅಲ್ಲ. ತಾನೇ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಅವರಲ್ಲಿ ಎಂದೋ ಹುಟ್ಟಿಕೊಂಡು ಬಲವಾಗಿ ಬೇರುಬಿಟ್ಟಿದೆ. 

ಈ ಮಹತ್ವಾಕಾಂಕ್ಷಿ ಮೋದಿಯವರನ್ನು ನೊಡಿದಾಗ ಯಾಕೋ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ವಾಧಿಕಾರಿಯಾಗಿ ಬದಲಾಗಿ ಹೋದ ಇಂದಿರಾಗಾಂಧಿ ನೆನಪಾಗುತ್ತಾರೆ. ಅವರ ವಿರೋಧಿಗಳು ಕೂಡಾ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದಾರೆ. 

ಇಂದಿರಾಗಾಂಧಿಯವರಂತೆಯೇ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಮೋದಿ ಬಯಸಿದ್ದನ್ನು ಪಡೆಯಲು ಏನು ಬೇಕಾದರು ಮಾಡಲು ಹಿಂಜರಿಯಲಾರರು. ಮಹತ್ವಾಕಾಂಕ್ಷಿಗಳ ಹಾದಿ ತಪ್ಪಿಸುವುದು ಸೋಲಿನ ಭೀತಿಯಿಂದ ಹುಟ್ಟುವ ಹತಾಶೆ.

ಹತಾಶೆಗೀಡಾದ ವ್ಯಕ್ತಿ ಪರಿಣಾಮವನ್ನು ಲೆಕ್ಕಿಸದೆ ತನಗೆ ಸರಿಕಂಡ ದಾರಿಯಲ್ಲಿ ನುಗ್ಗುತ್ತಾನೆ. ಹತ್ತುವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯನ್ನು ಕಣ್ಣಾರೆ ನೋಡಿದ ನನಗೆ  ಯಾಕೋ ದೇಶದಲ್ಲಿ ಗುಜರಾತ್ ಕಾಣತೊಡಗಿದೆ. ನನ್ನ ಭೀತಿ