Wednesday, April 17, 2013

ಹಾವೇರಿಯಲ್ಲಿ ಕಾವೇರಿದ ಚುನಾವಣಾ ಕದನ

ಹಾವೇರಿ: ಭಾರತೀಯ ಜನತಾ ಪಕ್ಷದ ಆಳ್ವಿಕೆಯ ಐದು ವರ್ಷಗಳ ಅವಧಿಯಲ್ಲಿ ಸದಾ ಸುದ್ದಿಯಲ್ಲಿದ್ದ ಜಿಲ್ಲೆ ಹಾವೇರಿ. ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳ ವಿಜಯೋತ್ಸಾಹಕ್ಕೆ `ದೃಷ್ಟಿಬೊಟ್ಟು' ಇಟ್ಟಂತೆ ನಡೆದ ರೈತರ ಮೇಲಿನ ಗೋಲಿಬಾರ್, ಬಿಜೆಪಿ ತೊರೆದು ಬಂದ ಬಿ.ಎಸ್.ಯಡಿಯೂರಪ್ಪನವರ ಶಕ್ತಿ ಪ್ರದರ್ಶನದ ಸಮಾವೇಶ, ಒಂದು ಜಿಲ್ಲೆಯ
ಬಹುಪಾಲು ಬಿಜೆಪಿ ಶಾಸಕರ ಪಕ್ಷಾಂತರ... ಎಲ್ಲವೂ ನಡೆದದ್ದು ಈ ಜಿಲ್ಲೆಯಲ್ಲಿ.
ಕಳೆದ ಚುನಾವಣೆಯಲ್ಲಿ ಇಲ್ಲಿನ ಆರರಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿ ನಾಲ್ಕು ಮಂದಿಯ ಜತೆಗೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವರಾಜ್ ಸಜ್ಜನರ್ ಕೂಡಾ ಈಗ ಕೆಜೆಪಿ ಅಭ್ಯರ್ಥಿಗಳು. ಯಡಿಯೂರಪ್ಪ  ಸ್ಪರ್ಧಿಸದೆ ಇದ್ದರೂ ಈ ಜಿಲ್ಲೆ ಅವರ ಪಾಲಿನ ಪ್ರತಿಷ್ಠೆಯ ಕಣ. ಇಲ್ಲಿ ಅವರು ಗೆದ್ದರೆ ಕೆಜೆಪಿ ಚುನಾವಣೆಯನ್ನು ಅರ್ಧ ಗೆದ್ದಂತೆ.
ತನ್ನನ್ನು ನಂಬಿಕೊಂಡು ಬೆನ್ನಹಿಂದೆ ಬಂದ ಐದು ಮಂದಿ ಬೆಂಬಲಿಗರನ್ನು ಇಲ್ಲಿ ಗೆಲ್ಲಿಸುವ ಜತೆಯಲ್ಲಿ ಕೊನೆಕ್ಷಣದಲ್ಲಿ ಕೈಕೊಟ್ಟ `ನೀಲಿ ಕಣ್ಣಿನ ಹುಡುಗ' ಬಸವರಾಜ್ ಬೊಮ್ಮಾಯಿ ಅವರನ್ನು ಸೋಲಿಸುವ ಸವಾಲು ಯಡಿಯೂರಪ್ಪನವರ ಮುಂದಿದೆ. ಇದಕ್ಕಾಗಿ ಜಾತಿ,ದುಡ್ಡು, ಕಣ್ಣೀರು ಎಲ್ಲವೂ ಬಳಕೆಯಾಗುತ್ತಿದೆ.  ಸಾದರ ಜಾತಿಗೆ ಸೇರಿದ ಬೊಮ್ಮಾಯಿಯವರಿಗೆ ಇದಿರಾಗಿ ಸಂಖ್ಯೆಯಲ್ಲಿ ಹೆಚ್ಚಿರುವ ಮತ್ತು ಸಂಘಟನಾತ್ಮಕವಾಗಿ ಬಲವಾಗಿರುವ ಪಂಚಮಸಾಲಿ ಬಣಕ್ಕೆ ಸೇರಿರುವ ಬಾಪುಗೌಡ ಪಾಟೀಲರನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಯಡಿಯೂರಪ್ಪ ಅಖಾಡಕ್ಕಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಣ್ಣುಮುಚ್ಚಿ ಬೊಮ್ಮಾಯಿ ಅವರನ್ನು ಬೆಂಬಲಿಸಿದ್ದ ಪಂಚಮಸಾಲಿ ಸಮುದಾಯ ಈಗ ಕಣ್ಣುಬಿಡುತ್ತಿರುವುದಕ್ಕೆ ಅಲ್ಲಲ್ಲಿ ನಡೆಯುತ್ತಿರುವ ಗುಪ್ತ ಸಭೆಗಳು ಸಾಕ್ಷಿ. `ಇಪ್ಪತ್ತರ ನಂತರ ಎಲ್ಲ ನಿರ್ಧಾರ ಆಗ್ತೈತಿ. ಅಲ್ಲಿಯ ವರೆಗೆ ಸುಮ್ಮನಿರಾಕ ಹೇಳ್ಯಾರೆ, ಅಜ್ಜಾವ್ರ (ಪಂಚಮಸಾಲಿ ಮಠದ ಸ್ವಾಮಿಗಳು) ಹೇಳ್ದಂಗ ಮಾಡ್ತೇವ್ರಿ' ಎನ್ನುವ ಶಿವಾನಂದ ಬಾಗೂರು ಹಿಂದಿನ ದಿನವಷ್ಟೇ ಇಂತಹದ್ದೇ ಗುಪ್ತಸಭೆಯಲ್ಲಿ ಭಾಗವಹಿಸಿ ಬಂದವ.
`ಯಡಿಯೂರಪ್ಪನವರ ಬೆನ್ನಿಗೆ ಬೊಮ್ಮಾಯಿ ಚೂರಿ ಹಾಕಿದರು' ಎನ್ನುವ ಸಾಮಾನ್ಯ ಅಭಿಪ್ರಾಯ ಜನತೆಯಲ್ಲಿದೆ. ಕೆಜೆಪಿ ಸಮಾವೇಶಕ್ಕೆ ಮುನ್ನ ಹಾವೇರಿಯ ಶಿವರಾಜ್ ಸಜ್ಜನರ್ ಮನೆಯಲ್ಲಿ ನಡೆದ `ಟೀ ಪಾರ್ಟಿ'ಯಲ್ಲಿಯೂ ಭಾಗವಹಿಸಿ ಬೆಂಬಲ ಸೂಚಿಸಿದ್ದ ಬೊಮ್ಮಾಯಿ ನಂತರ ಯಾಕೆ ಹಿಂದೆ ಸರಿದರು ಎನ್ನುವುದು ಎಲ್ಲರ ಕುತೂಹಲದ ಪ್ರಶ್ನೆ. ಬಿಜೆಪಿಯಲ್ಲಿಯೇ ಉಳಿದರೂ ಅಲ್ಲಿಯೂ ಇವರೇನು ಸರ್ವಜನಪ್ರಿಯರಲ್ಲ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಇದಿರಾಗಿ ಪ್ರತಿಸ್ಪರ್ಧಿಯೊಬ್ಬನನ್ನು ನಿಲ್ಲಿಸಬೇಕೆಂಬ ರಾಜಕೀಯ ಉದ್ದೇಶದಿಂದಲೇ ಯಡಿಯೂರಪ್ಪನವರು  ಬೊಮ್ಮಾಯಿ ಅವರನ್ನು ಬೆಳೆಸಿದ್ದರು. ಇದಕ್ಕಾಗಿಯೇ ಜಲಸಂಪನ್ಮೂಲದಂತಹ ಪ್ರಮುಖ ಖಾತೆಯನ್ನು ವಹಿಸಿಕೊಡುವ ಜತೆಯಲ್ಲಿ ರಾಜಕೀಯ ಬೆಂಬಲವನ್ನು ಅವರಿಗೆ ಧಾರೆಯೆರೆದಿದ್ದರು. ಈ ಹುನ್ನಾರವನ್ನು ಬಲ್ಲ ಶೆಟ್ಟರ್ ಹೃತ್ಪೂರ್ವಕವಾಗಿ ಬೊಮ್ಮಾಯಿ ಗೆಲುವಿಗೆ ಪ್ರಯತ್ನಿಸುತ್ತಾರೆ ಎಂದು ಹೇಳಲಾಗದು.   
ಹಾವೇರಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಸೇನಾಪತಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ. ಬೊಮ್ಮಾಯಿಯವರಂತೆ ಉದಾಸಿಯವರಿಗೂ ಯಡಿಯೂರಪ್ಪನವರು ಪ್ರಮುಖವಾದ ಲೋಕೋಪಯೋಗಿ ಖಾತೆಯನ್ನು ನೀಡಿ ರಾಜಕೀಯವಾಗಿ ಪ್ರೊತ್ಸಾಹ ನೀಡಿದ್ದರು. ಮುಂಬೈ ಕರ್ನಾಟಕದ ಮಟ್ಟಿಗೆ ಉದಾಸಿ-ಬೊಮ್ಮಾಯಿ ಇಬ್ಬರೂ ಯಡಿಯೂರಪ್ಪನವರ ಎಡಗೈ-ಬಲಗೈಗಳಾಗಿದ್ದವರು. ಉದಾಸಿ ವಿಶ್ವಾಸ ಭಂಗಗೊಳಿಸದೆ ಯಡಿಯೂರಪ್ಪನವರ ಜತೆಯಲ್ಲಿಯೇ ಉಳಿದಿದ್ದಾರೆ.
ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಇನ್ನೊಬ್ಬ ಬಂಟ ಉಮೇಶ್ ಕತ್ತಿ ಬಿಜೆಪಿ ಲೋಕಸಭಾ ಸದಸ್ಯನಾದ ತನ್ನ ಸೋದರನ ಕಾರಣಕ್ಕಾಗಿ ಪಕ್ಷದಲ್ಲಿಯೇ ಉಳಿದರೆಂದು ಹೇಳಲಾಗುತ್ತಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಉದಾಸಿಯವರೂ ಎದುರಿಸಿದ್ದಾರೆ. ಆದರೆ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಗನ ರಾಜಕೀಯ ಭವಿಷ್ಯವನ್ನು ಲೆಕ್ಕಿಸದೆ ಅವರು ಕೆಜೆಪಿ ಜತೆ ಗುರುತಿಸಿಕೊಂಡಿದ್ದಾರೆ.
ಬಿಜೆಪಿ ಈಗಾಗಲೇ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿ ಅವರನ್ನು ಅಮಾನತ್‌ಗೊಳಿಸಿದೆ.ವೈಯಕ್ತಿಕವಾಗಿ ಉದಾಸಿ ಅವರಿಗೆ ತಾವು ಎದುರಿಸುತ್ತಿರುವ ಈ ಚುನಾವಣೆ ಸೆಮಿಫೈನಲ್, ಇನ್ನೊಂದು ವರ್ಷಕ್ಕೆ ಮಗ ಎದುರಿಸಲಿರುವ ಮುಂದಿನ ಲೋಕಸಭಾ ಚುನಾವಣೆಯೇ ಫೈನಲ್. ಈ ಹಿನ್ನೆಲೆಯಲ್ಲಿ ತಮ್ಮ ಹಾಗೂ ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಾವೇರಿ ಜಿಲ್ಲೆಯಲ್ಲಿ ಕೆಜೆಪಿಯನ್ನು ಗೆಲ್ಲಿಸುವುದು ಉದಾಸಿ ಅವರಿಗೆ ಅನಿವಾರ್ಯ.
ತಾವೂ ಸೇರಿದಂತೆ ನಾಲ್ವರು ಹಾಲಿ ಶಾಸಕರಾದ ನೆಹರೂ ಓಲೇಕಾರ್ (ಹಾವೇರಿ) ಜಿ.ಶಿವಣ್ಣ (ರಾಣೆಬೆನ್ನೂರು), ಮತ್ತು ಸುರೇಶ್‌ಗೌಡ ಪಾಟೀಲ್ (ಬ್ಯಾಡಗಿ) ಕೆಜೆಪಿಯಲ್ಲಿರುವುದು ಉದಾಸಿ ಅವರು ಹೊಂದಿರುವ ಅನುಕೂಲತೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾನಗಲ್, ಬ್ಯಾಡಗಿ ಮತ್ತು ಹಿರೇಕೆರೂರಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವುದು ಕೆಜೆಪಿ.
ಮೂಲತಃ ಜನತಾ ಪರಿವಾರಕ್ಕೆ ಸೇರಿದ್ದ ಉದಾಸಿ ಅವರಿಗೆ ಇದು ಎಂಟನೆ ಚುನಾವಣೆ. ಹಿಂದಿನ ಏಳು ಚುನಾವಣೆಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಹಿಂದಿನ ಏಳು ಚುನಾವಣೆಗಳಲ್ಲಿಯೂ ಉದಾಸಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಕಾಂಗ್ರೆಸ್ ಪಕ್ಷದ ಮನೋಹರ್ ತಹಶೀಲ್ದಾರ್. ಈ ಬಾರಿಯೂ ಅವರೇ ಎದುರಾಳಿ. ವಿಚಿತ್ರವೆಂದರೆ ಚುನಾವಣೆಯಲ್ಲಿ ಜಾತಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಲಾಗುತ್ತಿದ್ದರೂ ಇಬ್ಬರು ಅಭ್ಯರ್ಥಿಗಳಿಗೂ ಹೇಳಿಕೊಳ್ಳುವಂತಹ ಜಾತಿ ಬಲ ಇಲ್ಲ. ಉದಾಸಿ ಅವರ ಲಿಂಗಾಯತ ಬಣವಾದ ಬಣಜಿಗರ ಸಂಖ್ಯೆ ಅವರ ಸ್ವಂತ ಕ್ಷೇತ್ರವಾದ ಹಾನಗಲ್‌ನಲ್ಲಿ ಕಡಿಮೆ.
ಹಿಂದುಳಿದ ಬೆಸ್ತ ಜಾತಿಗೆ ಸೇರಿದ ಮನೋಹರ್ ತಹಶೀಲ್ದಾರ್ ಅವರ ಜಾತಿಯವರನ್ನು ದೂರದರ್ಶಕ ಹಿಡಿದುಕೊಂಡು ಹುಡುಕಬೇಕು. ಈ ದೃಷ್ಟಿಯಿಂದ ಹಾನಗಲ್ ಮಟ್ಟಿಗೆ ಚುನಾವಣೆ ಜಾತ್ಯತೀತವಾದುದು. `ಬಿಜೆಪಿಯಲ್ಲಿದ್ದಾಗ ಈ ವೈಶಿಷ್ಟತೆಯ ಲಾಭವನ್ನು ಪಡೆದುಕೊಳ್ಳಲಾಗಿರಲಿಲ್ಲ. ಪ್ರಾರಂಭದಿಂದಲೂ ನನ್ನನ್ನು ಬೆಂಬಲಿಸುತ್ತಾ ಬಂದಿದ್ದ ಮುಸ್ಲಿಂ ಮತದಾರರು ಬಿಜೆಪಿಯಿಂದ ಸ್ಪರ್ಧಿಸಿದ್ದ ಕಳೆದೆರಡು ಚುನಾವಣೆಗಳಲ್ಲಿ ದೂರವಾಗಿದ್ದರು. ಈಗ ಮತ್ತೆ ಹತ್ತಿರವಾಗಿದ್ದಾರೆ. ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಕೇರಿಗಳಲ್ಲಿಯೇ ನಮ್ಮ ಅಭ್ಯರ್ಥಿಗಳು ಗೆದ್ದಿರುವುದು ಇದಕ್ಕೆ ಸಾಕ್ಷಿ' ಎನ್ನುತ್ತಾರೆ ಸಿ.ಎಂ.ಉದಾಸಿ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹುಬ್ಬಳ್ಳಿ ಕೇಂದ್ರ ಸ್ಥಾನವಾಗಿರುವಂತೆ ಕೆಜೆಪಿಗೆ ಹಾವೇರಿ. ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳ ತವರೂರಾಗಿರುವ ಅವಿಭಜಿತ ಧಾರವಾಡ ಜಿಲ್ಲೆಯ ಚುನಾವಣೆ ಬಿಜೆಪಿ ಪಾಲಿಗೂ ಪ್ರತಿಷ್ಠೆಯ ಪ್ರಶ್ನೆ. ಕೆಜೆಪಿ-ಬಿಜೆಪಿ ನಡುವಿನ ನಿಜವಾದ ರಾಜಕೀಯ ಸಮರಕ್ಕೆ ಹಾವೇರಿ ಜಿಲ್ಲೆ ರಣರಂಗವಾಗಲಿದೆ. ಈ ಎರಡು ಪಕ್ಷಗಳ ಹೊಡೆದಾಟವನ್ನು ದೂರದಿಂದಲೇ ನೋಡುತ್ತಿರುವ  ಕಾಂಗ್ರೆಸ್ ಪಕ್ಷ ಯುದ್ಧಕ್ಕಿಳಿಯದೆ ಯುದ್ಧದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ.
`ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ...'
ಚುನಾವಣಾ ರಾಜಕೀಯದ ಗದ್ದಲದಲ್ಲಿ ಐದು ವರ್ಷಗಳ ಹಿಂದೆ ರೈತರ ಮೇಲೆ ನಡೆದ ಗೋಲಿಬಾರ್ ಘಟನೆ ಈ ಜಿಲ್ಲೆಯ ಸಾಮಾನ್ಯ ಮತದಾರನ ನೆನೆಪಿನಿಂದಲೂ ಮರೆಯಾಗಿ ಹೋಗಿದೆ. ಮೃತಪಟ್ಟ ಇಬ್ಬರು ರೈತರಾದ ಪುಟ್ಟಪ್ಪ ಹೊನ್ನತ್ತಿ ಮತ್ತು ಸಿದ್ದಲಿಂಗಪ್ಪ ಚೂರಿ ಕುಟುಂಬಗಳ ಸದಸ್ಯರು ಕೂಡಾ `ಸಮಸ್ಯೆ ಏನೂ ಇಲ್ಲಾರಿ, ಆರಾಮವಾಗಿದ್ದೀವಿ' ಎಂದು ಹೇಳುವಷ್ಟು ನಿಶ್ಚಿಂತೆಯಾಗಿದ್ದಾರೆ. ಚುನಾವಣೆಯಲ್ಲಿ ಪ್ರಧಾನ ವಿಷಯವಾಗಿ ರಾಜಕೀಯ ಪಕ್ಷಗಳನ್ನು `ಸತ್ತವರು ರೈತರಲ್ಲ ಗೂಂಡಾಗಳು' ಎಂದು ನಾಲಗೆ ಸಡಿಲಬಿಟ್ಟು ಮಾತನಾಡಿದ್ದ ಹಾವೇರಿ ಶಾಸಕ ನೆಹರೂ ಓಲೇಕಾರ್ ಕೆಜೆಪಿಯಿಂದ  ಮರು ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಗೋಲಿಬಾರ್ ಘಟನೆಯ ಬಗ್ಗೆ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ ಆಯೋಗದ ವರದಿ ವಿಧಾನಸೌಧದಲ್ಲಿ ಎಲ್ಲೋ ದೂಳು ತಿನ್ನುತ್ತಾ ಬಿದ್ದಿದೆ.
ಗಾಯಗೊಂಡಿದ್ದ ಹದಿಮೂರು ಮಂದಿ ಮಾತ್ರ ನರಕಯಾತನೆ ಅನುಭವಿಸುತ್ತಿದ್ದಾರೆ. `ಗುಂಡು ಬಿದ್ದು ಸತ್ತ್ ಹೋಗಿದ್ರೆ ಮನಿಮಂದಿಗೆ ಒಂದಿಷ್ಟ್ ರೊಕ್ಕ ಬರ‌್ತಿತ್ತು. ಈಗ ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ ತ್ರಿಸಂಕು ಸ್ಥಿತಿ ಆಗೈತೆ. ಇದರಿಂದ ಪಾರು ಮಾಡಿ' ಎಂದು ಕೈಮುಗಿಯುತ್ತಾನೆ ಆಲದಕಟ್ಟಿಯ ಅಬ್ದುಲ್ ರಜಾಕ್. ಇದೇ ಸ್ಥಿತಿ ಉಳಿದವರದ್ದು. ಗುಂಡು ತಗಲಿದ್ದ ಈತನ ಬಲಗೈ ಸಂಪೂರ್ಣ ನಿಷ್ಕ್ರೀಯವಾಗಿದೆ. ಹಮಾಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಕುಟುಂಬಕ್ಕೆ ಈಗ ನಾಲ್ವರು ಹೆಣ್ಣುಮಕ್ಕಳು ಮಾಡುವ ಕೂಲಿ ಕೆಲಸವೇ ಜೀವನಾಧಾರ. ಇನ್ನೊಬ್ಬ ಗಾಯಾಳು ಹೆಡಿಗ್ಗೊಂಡದ ಮಲ್ಲಪ್ಪ ಬಣಕಾರ್ ಅವರದ್ದೂ ಇದೇ ಸ್ಥಿತಿ. ತೋಳಿಗೆ ಗುಂಡು ತಗಲಿದ ನಂತರ ಬೇಸಾಯ ಮಾಡಲಿಕ್ಕಾಗದೆ ಇದ್ದ ಎರಡು ಎಕರೆ ಹೊಲವನ್ನು ಲಾವಣಿಗೆ ಕೊಟ್ಟಿದ್ದಾರೆ.
`ಮೂರೂ ಹೊತ್ತು ತೋಳು ಹರಿತೈತಿ, ನೋವ್ ಮರ‌್ಯಾಕ್ ಇಂಜಕ್ಷನ್ ಚುಚ್ಚಿಸಿಕೊಂಡು ಜೀವ್ನಾ ಸಾಕಾಗಿಹೋಗೈತಿ' ಎನ್ನುತ್ತಾರೆ ಬಣಕಾರ್.ಪೊಲೀಸರ ಲಾಠಿ ಏಟಿನಿಂದಾಗಿ ಬಲ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ನೆಲೋಗಲ್‌ನ ವೀರಭದ್ರ ಬಸವನಗೌಡರಿಗೆ ಆಗಾಗ ತಲೆ ಸುತ್ತುವುದರಿಂದ ಒಬ್ಬಂಟಿಯಾಗಿ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ಇವರೂ ಇದ್ದ ಮೂರು ಎಕರೆ ಜಮೀನನ್ನು ಲಾವಣಿಗೆ ಕೊಟ್ಟು ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಗಾಯಾಳುಗಳಿಗೆಲ್ಲ ಪ್ರಾರಂಭದಲ್ಲಿ 25 ರಿಂದ 50 ಸಾವಿರ ರೂಪಾಯಿ ಕೊಟ್ಟು ಕೈತೊಳೆದುಕೊಂಡ ಸರ್ಕಾರ ಆ ಮೇಲೆ ಇವರ ಕಡೆ ಕಣ್ಣೆತ್ತಿ ನೋಡಿಲ್ಲ.  ನ್ಯಾ.ಜಗನ್ನಾಥ್ ಶೆಟ್ಟಿ ಆಯೋಗ ಶಿಫಾರಸು ಮಾಡಿದಂತೆ ಗಾಯಾಳುಗಳಾಗಿರುವ ತಮಗೆ ತಲಾ ಮೂರು ಲಕ್ಷ ರೂಪಾಯಿ ನೀಡಬೇಕೆಂದು ಕೋರಿ ಕನಿಷ್ಠ ಹತ್ತು ಬಾರಿ ಬೆಂಗಳೂರಿಗೆ ಹೋಗಿ ಅರ್ಜಿ ನೀಡಿ ಬಂದಿದ್ದಾರೆ.
`ಗೋಲಿಬಾರ್ ನಡೆದದ್ದು ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು. ಆ ಸಮಸ್ಯೆ ಈಗಲೂ ಇದೆ. ಈ ಜಿಲ್ಲೆಯಲ್ಲಿ ತುಂಗಾಭದ್ರಾ, ವರದಾ, ಕುಮದ್ವತಿ ಮತ್ತು ಧರ್ಮಾ ನದಿಗಳು ಹರಿಯುತ್ತಿದ್ದರೂ ನೀರಾವರಿ ಯೋಜನೆಗಳೇ ಇಲ್ಲ. ಏನಿದ್ದರೂ ಪಂಪ್‌ಸೆಟ್ ನೀರಾವರಿ. ಇವೆಲ್ಲವೂ ಚುನಾವಣೆಯ ಕಾಲದಲ್ಲಿ ಚರ್ಚೆಗೆ ಬರಬೇಕಿತ್ತು. ಯಾರೂ ಮಾತನಾಡುವವರೇ ಇಲ್ಲ. ರೈತರೂ ಪರಿಸ್ಥಿತಿಗೆ ಒಗ್ಗಿಹೋಗಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಬಿಟಿ ಹತ್ತಿ ವಿರೋಧಿಸಿ ಚಳವಳಿ ನಡೆದ ಜಿಲ್ಲೆಯಲ್ಲಿ ಈಗ ರೈತರು ಅತಿಹೆಚ್ಚಿನ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯುತ್ತಿದ್ದಾರೆ' ಎಂದು ದೀರ್ಘ ನಿಟ್ಟುಸಿರು ಬಿಟ್ಟರು ಕರ್ನಾಟಕ ರಾಜ್ಯ ರೈತ (ಚುನಾವಣೇತರ) ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ್.

Monday, April 8, 2013

ರಾಹುಲ್ ಗಾಂಧಿ ಕಳೆದುಕೊಳ್ಳುತ್ತಿರುವ ಅವಕಾಶ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗದೆ ಏದುಸಿರು ಬಿಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಅನುಭವ ಹೊಸದೇನಲ್ಲ. ವಿವಾದವೇ ಇಲ್ಲದೆ  ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸುಸೂತ್ರವಾಗಿ ನಡೆದ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿ  ಇಲ್ಲ. ಟಿಕೆಟ್‌ಗಾಗಿ ಬಹಿರಂಗವಾಗಿ ನಡೆಯುತ್ತಿರುವ ಕಾದಾಟ, ಗುಟ್ಟಾಗಿ ನಡೆಯುವ ಮಸಲತ್ತು, ಪ್ರತಿಭಟನೆ, ಬಂಡಾಯ, ವಶೀಲಿ, ಆಮಿಷ, ಪ್ರಭಾವ, ಕಣ್ಣೀರು, ಜೈಕಾರ, ಧಿಕ್ಕಾರ ...ಇವೆಲ್ಲವೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯ ಭಾಗವೇ ಆಗಿಬಿಟ್ಟಿದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ದೆಹಲಿಯ ಸರ್ಕಾರಿ ಭವನಗಳು, ಹೊಟೇಲ್‌ಗಳು ತುಂಬಿ ತುಳುಕಾಡುವುದು, ಸೋನಿಯಾಗಾಂಧಿ ಮನೆ ಮತ್ತು ಎಐಸಿಸಿ ಕಚೇರಿಗಳಿರುವ ಜನಪಥ ಮತ್ತು ಅಕ್ಬರ್ ರಸ್ತೆ ತುಂಬಾ ಜನಜಂಗುಳಿ ಎಲ್ಲವೂ ಸಾಮಾನ್ಯ ದೃಶ್ಯ. ಆದರೆ ಈ ಬಾರಿ ಹೀಗಾಗಲಿಕ್ಕಿಲ್ಲ ಎಂದು ತಿಳಿದುಕೊಂಡಿದ್ದ ಒಂದಷ್ಟು ಕಡು ಆಶಾವಾದಿಗಳಿದ್ದರು.
ಇತ್ತೀಚೆಗೆ ಹಲವಾರು ವೇದಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ನೂತನ ಉಪಾಧ್ಯಕ್ಷ ರಾಹುಲ್‌ಗಾಂಧಿಯವರು ಮಾತನಾಡಿದ ಆದರ್ಶ ರಾಜಕಾರಣದ ಮಾತುಗಳು ಈ ಆಶಾವಾದಕ್ಕೆ ಕಾರಣ. `ರಾಜಕೀಯ ಅಧಿಕಾರದ ಹಿಂದೆ ಓಡಬೇಡಿ, ಅದು ಪಾಷಾಣ' ಎಂದು ರಾಹುಲ್ ಜೈಪುರ ಚಿಂತನಾ ಶಿಬಿರದಲ್ಲಿ ಎಚ್ಚರಿಸಿದ್ದರು. ಅಲ್ಲಿ ಅವರು ಆಡಿದ ಮಾತುಗಳು ದೇಶದ ಅಮಾಯಕ ಜನರನ್ನು ರೋಮಾಂಚನಗೊಳಿಸಿದ್ದು ಮಾತ್ರವಲ್ಲ ಕಡು ನಿರಾಶವಾದಿಗಳಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಹಿಂದಿನ ಮಾತುಗಳ ಮುಂದುವರಿಕೆಯಂತೆ ನಂತರದ ದಿನಗಳಲ್ಲಿ ಮಾತನಾಡಿದ ರಾಹುಲ್ `ಹೈಕಮಾಂಡ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು' ಎಂದಿದ್ದರು. ಕೊನೆಯದಾಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಾರಂಭವಾಗುವಾಗ  `ಅಭ್ಯರ್ಥಿಗಳ ಆಯ್ಕೆ ಸ್ಥಳೀಯ ಮಟ್ಟದಲ್ಲಿಯೇ ನಡೆಯುತ್ತದೆ, ಯಾರೂ ದೆಹಲಿಗೆ ಬರುವ ಅಗತ್ಯ ಇಲ್ಲ' ಎಂದಿದ್ದರು. ಇವೆಲ್ಲವನ್ನು ಹೇಳಿದ ರಾಹುಲ್‌ಗಾಂಧಿಯ ನಾಲಗೆಯ ಪಸೆ ಆರುವುದರೊಳಗಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಅಸಹ್ಯ ಪ್ರದರ್ಶನ ಯಥಾ ಪ್ರಕಾರ ಪ್ರಾರಂಭವಾಗಿತ್ತು.
ರಾಹುಲ್‌ಗಾಂಧಿಯವರಂತೆ, ಅವರ ಅಮ್ಮನೂ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಇಂತಹದ್ದೇ ಆದರ್ಶ ರಾಜಕಾರಣದ ಮಾತುಗಳನ್ನಾಡಿದ್ದು ಮಾತ್ರವಲ್ಲ ಬದಲಾವಣೆಯ ಪ್ರಯತ್ನಕ್ಕೂ ಕೈಹಾಕಿದ್ದರು. ಅಟಲಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ 1999ರಲ್ಲಿ ಎರಡನೇ ಬಾರಿ ಲೋಕಸಭಾ ಚುನಾವಣೆ ಗೆದ್ದಾಗ ಸೋನಿಯಾಗಾಂಧಿ ಕಂಗಾಲಾಗಿದ್ದರು. ಸೀತಾರಾಂ ಕೇಸರಿಯವರನ್ನು ಕೆಳಗಿಳಿಸಿ ಪಕ್ಷದ ಅಧ್ಯಕ್ಷರಾದ ಸೋನಿಯಾ ನಾಯಕತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 119 ಸ್ಥಾನಗಳನ್ನು ಗಳಿಸಿದ್ದ ಕಾಲ ಅದು. ಸೋಲಿಗೆ ಕಾರಣಗಳನ್ನು ಹುಡುಕಿ ಗೆಲುವಿಗೆ ದಾರಿ ತೋರಿಸಲು ಎ.ಕೆ.ಆಂಟನಿ ನೇತೃತ್ವದ 19 ಸದಸ್ಯರ ಸಮಿತಿಯೊಂದನ್ನು ಸೋನಿಯಾಗಾಂಧಿ ರಚಿಸಿದ್ದರು. ಸಮಿತಿ ಸದಸ್ಯರು ಒಂಬತ್ತು ರಾಜ್ಯಗಳಲ್ಲಿ  ಕಾಲ ಓಡಾಡಿ ಅಭಿಪ್ರಾಯ ಸಂಗ್ರಹಿಸಿದ್ದರು. 40 ದಿನಗಳ ಅಧ್ಯಯನದ ನಂತರ ಆಂಟನಿ ಸಮಿತಿ 200 ಪುಟಗಳ ವರದಿಯನ್ನು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಈ ವರದಿಯನ್ನು ಗೌಪ್ಯವಾಗಿಡುವ ಉದ್ದೇಶದಿಂದ ಅದರ ಒಂದು ಪ್ರತಿಯನ್ನು ಮಾತ್ರ ಮಾಡಲಾಗಿತ್ತಂತೆ. (ಯಾಕೆ ಈ ರಹಸ್ಯವೊ ಗೊತ್ತಿಲ್ಲ) ಸೋನಿಯಾಗಾಂಧಿ ಮತ್ತು ಕೆಲವು ಆಪ್ತರನ್ನು ಹೊರತುಪಡಿಸಿದರೆ ಅದನ್ನು ನೋಡಿದವರೂ ಇಲ್ಲ. ದೆಹಲಿಯಲ್ಲಿರುವಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರ ಕೈಯಲ್ಲಿದ್ದ ವರದಿ ಮೇಲೆ ಕಣ್ಣಾಡಿಸಿದ್ದ ನನ್ನ ನೆನಪಿನ ಪ್ರಕಾರ ಅದರ ಕೆಲವು ಮುಖ್ಯಾಂಶಗಳು ಹೀಗಿವೆ:
-ಚುನಾವಣೆಗೆ ಅಭ್ಯರ್ಥಿಗಳನ್ನು ಮೂರು ತಿಂಗಳ ಮೊದಲೇ ಆಯ್ಕೆ ಮಾಡಿ ಪ್ರಚಾರಕ್ಕೆ ಅನುಕೂಲ ಮಾಡಿಕೊಡಬೇಕು.
-ಗೆಲುವಿನ ಅವಕಾಶದ ಖಾತರಿ ಇಲ್ಲದೆ ನಾಯಕರ ಪತ್ನಿ ಇಲ್ಲವೆ ಮಕ್ಕಳಿಗೆ ಟಿಕೆಟ್ ನೀಡಬಾರದು.
-ಪಕ್ಷದ ಜಿಲ್ಲಾಸಮಿತಿಗಳು ಶೇಕಡಾ 75ರಷ್ಟು, ಪ್ರದೇಶ ಕಾಂಗ್ರೆಸ್ ಸಮಿತಿ ಶೇಕಡಾ 20ರಷ್ಟು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಶೇಕಡಾ ಐದರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
-ಚುನಾವಣೆಯ ಪೂರ್ವದಲ್ಲಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬಾರದು.
-ಪ್ರಚಾರದಲ್ಲಿ ಅಭಿವೃದ್ಧಿಯ ಚರ್ಚೆಗೆ ಮಹತ್ವ ನೀಡಬೇಕು, ಇದಕ್ಕೆ ಅನುಗುಣವಾಗಿ ಚುನಾವಣಾ ತಂತ್ರವನ್ನು ರೂಪಿಸಬೇಕು
-ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯವನ್ನು ಸಂಗ್ರಹಿಸಬೇಕು.
ಇಂತಹ ಮಾನದಂಡಗಳನ್ನು ಶಿಫಾರಸು ಮಾಡಿದ್ದು ಆಂಟನಿ ಸಮಿತಿಯೊಂದೇ ಅಲ್ಲ, 1998ರಲ್ಲಿ ಪಿ.ಎ.ಸಂಗ್ಮಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. 2003ರಲ್ಲಿ ರಾಜಸ್ತಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಡ ವಿಧಾನಸಭಾ ಚುನಾವಣೆ ಸೋತಾಗ ಪ್ರಣಬ್ ಮುಖರ್ಜಿ ಅಧ್ಯಕ್ಷತೆಯ ಸಮಿತಿ ವರದಿಯನ್ನು ನೀಡಿತ್ತು. ಮನಮೋಹನ್‌ಸಿಂಗ್, ಕರುಣಾಕರನ್ ಹೀಗೆ ಪಕ್ಷದ ಹಿರಿಯ ನಾಯಕರೆಲ್ಲ ತಲೆಗೊಂದರಂತೆ ಚುನಾವಣಾ ಸೋಲಿನ ಆತ್ಮಾವಲೋಕನ ಮತ್ತು ಮಾನದಂಡಗಳ ಪಾಲನೆ ಬಗ್ಗೆ ವರದಿಗಳನ್ನು ನೀಡಿದ್ದರು. 2012ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಚತ್ತೀಸ್‌ಗಡಗಳಲ್ಲಿ ಪಕ್ಷ ಪರಾಭವಗೊಂಡ ನಂತರ ಆಂಟನಿ ನೇತೃತ್ವದ ಸಮಿತಿ ವರದಿಯನ್ನು ನೀಡಿತ್ತು. ಇವೆಲ್ಲವೂ 1999ರ ಆಂಟನಿ ವರದಿಯ ಮಾದರಿಯಲ್ಲಿಯೇ ಇವೆ. ಗೆಲುವಿನ ಕಾರ್ಯತಂತ್ರ, ಸೋಲಿನ ಆತ್ಮಾವಲೋಕನ, ಮಾನದಂಡ-ನೀತಿ ಸಂಹಿತೆಗಳ ವರದಿಗಳಿಗೇನು ಕಾಂಗ್ರೆಸ್ ಪಕ್ಷದಲ್ಲಿ ಬರ ಇಲ್ಲ.
`ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಗಳೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು, ದೆಹಲಿಗೆ ಬರಬಾರದು ...ಇತ್ಯಾದಿ ಬುದ್ದಿಮಾತುಗಳನ್ನು ಆಂಟನಿ ವರದಿಯ ದೂಳು ಕೊಡವಿದ ನಂತರವೇ ರಾಹುಲ್‌ಗಾಂಧಿ ಹೇಳಿರುವುದು. ಇದನ್ನು ಪಾಲಿಸುವವರು ಯಾರು? ಪಾಲಿಸುವಂತೆ ಮಾಡುವವರು ಯಾರು?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಾರಿ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣಾ ಸಮಿತಿಗಳಲ್ಲದೆ ಹಿರಿಯ ನಾಯಕರ ನೇತೃತ್ವದಲ್ಲಿ ಪ್ರಾಂತೀಯ ಸಮಿತಿಗಳನ್ನು ಕೂಡಾ ರಚಿಸಿತ್ತು. ಜಿಲ್ಲಾ ಸಮಿತಿ ಅಧ್ಯಕ್ಷರು ಒಂದು ಇಲ್ಲವೆ ಎರಡು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಬೇಕೆಂದು ತಿಳಿಸಲಾಗಿತ್ತು. ಇಷ್ಟೆಲ್ಲ ಕಸರತ್ತಿನ ನಂತರ ನಡೆದದ್ದು ಮಾತ್ರ ಹಳೆಯ ಪ್ರಹಸನದ ಮರುಪ್ರದರ್ಶನ. ಯಥಾಪ್ರಕಾರ ಬೆಂಬಲಿಗರೊಂದಿಗೆ ನಾಯಕರ ದಂಡು ದೆಹಲಿಗೆ ದಾಳಿ ಹಾರಿತು. ಹೋದವರೆಲ್ಲರೂ ತಮ್ಮ ಸಾಮರ್ಥ್ಯಕ್ಕೆ ಎಟುಕಬಲ್ಲ  ನಾಯಕರನ್ನು ಭೇಟಿ ಮಾಡಿದರು. ಒಂದಷ್ಟು ಮಹಿಳಾ ಆಕಾಂಕ್ಷಿಗಳು ಸೋನಿಯಾ ಮನೆ ಮುಂದೆ ಧರಣಿಯನ್ನೂ ಮಾಡಿದರು. ಇಷ್ಟೆಲ್ಲಾ ನಡೆಯುವಾಗ `ದೆಹಲಿಗೆ ಬರಬೇಡಿ' ಎಂಬ ಆದೇಶ ನೀಡಿದ್ದ ರಾಹುಲ್‌ಗಾಂಧಿ ಎಲ್ಲಿದ್ದರು? ತಮ್ಮ ಆದೇಶ ಉಲ್ಲಂಘಿಸಿದ್ದ ನಾಲ್ಕು ನಾಯಕರಿಗೆ ಟಿಕೆಟ್ ನಿರಾಕರಿಸುವ ಶಿಸ್ತುಕ್ರಮಕೈಗೊಂಡಿದ್ದರೆ ಉಳಿದವರು ಕರ್ನಾಟಕಕ್ಕೆ ಓಡಿಬರುತ್ತಿದ್ದರು. ಇದನ್ನೆಲ್ಲ ನೋಡಿದ ಟಿಕೆಟ್ ವಂಚಿತ ಯುವ ಅಭ್ಯರ್ಥಿಯೊಬ್ಬ `ನಮ್ಮ ನಾಯಕರ ಮಾತು ಕೇಳಿ ದೆಹಲಿಗೆ ಹೋಗದೆ ಇಲ್ಲಿಯೇ ಇದ್ದು ತಪ್ಪು ಮಾಡಿದೆ. ನನ್ನನ್ನು ವಿರೋಧಿಸಿ ಅಲ್ಲಿಗೆ ಹೋದವರೆಲ್ಲರೂ ಸಂಚು ಮಾಡಿ ಟಿಕೆಟ್ ತಪ್ಪಿಸಿದರು' ಎಂದು ಗೋಳಾಡುತ್ತಿದ್ದ.
2008ರಲ್ಲಿ ಸತತ ಎರಡನೆ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಾಗ ಪಕ್ಷದ ಹೈಕಮಾಂಡ್ ಚಿಂತಾಕ್ರಾಂತವಾಗಿತ್ತು. ಆಗಲೂ ಸೋಲಿನ ಕಾರಣಗಳನ್ನು ಹುಡುಕಲು ಎ.ಕೆ.ಆಂಟನಿ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗಿತ್ತು. ಬೆಳಕಿಗೆ ಬಾರದ ಈ ವರದಿಯಲ್ಲಿಯೂ `ಕಾಂಗ್ರೆಸ್ ಸೋಲಿಗೆ ಆಂತರಿಕ ಕಚ್ಚಾಟ ಮತ್ತು ಹಿರಿಯ ನಾಯಕರು ಸ್ವಂತ ಕ್ಷೇತ್ರಗಳಲ್ಲಿ ಗೆಲ್ಲಲು ವಿಫಲವಾಗಿದ್ದು ಕಾರಣ' ಎಂಬ ಅಂಶ ಪ್ರಮುಖವಾಗಿ ಉಲ್ಲೇಖವಾಗಿತ್ತಂತೆ. `ಕಾಂಗ್ರೆಸ್ ಸೋಲಿಗೆ ಕಾಂಗ್ರೆಸಿನವರೇ ಸಾಕು, ವಿರೋಧಪಕ್ಷಗಳು ಬೇಕಿಲ್ಲ' ಎನ್ನುವ ವ್ಯಂಗ್ಯೋಕ್ತಿ ರಾಜ್ಯದ ರಾಜಕಾರಣದಲ್ಲಿ ಪ್ರಚಾರದಲ್ಲಿದೆ. ಇದನ್ನು ಸುಳ್ಳೆಂದು ಕಾಂಗ್ರೆಸಿನವರೇ ಹೇಳುವುದಿಲ್ಲ. ಕಳೆದ ವರ್ಷ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ಮಾತನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. 2008ರ ಚುನಾವಣಾ ಕಾಲದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಖರ್ಗೆ ಅವರು ಬಹಿರಂಗವಾಗಿ ಹೇಳಲಾಗದ ಇನ್ನಷ್ಟು ಸತ್ಯಗಳನ್ನು ಬಚ್ಚಿಟ್ಟುಕೊಂಡಿರಬಹುದು.
2008ರ ಕಾಂಗ್ರೆಸ್ ಪಕ್ಷದ ಸೋಲಿಗೆ ದಲಿತ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರೋಕ್ಷವಾಗಿ ಬಿಂಬಿಸಿದ್ದೂ ಕಾರಣ ಎಂದು ಇಂದಿಗೂ ಹೇಳುವವರಿದ್ದಾರೆ. ಆದರೆ ಆಂಟನಿ ಸಮಿತಿ ಎತ್ತಿರುವ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿದ್ದ 34 ಮಾಜಿ ಸಚಿವರು ಸೋಲು ಅನುಭವಿಸಿದ್ದರು ಎನ್ನುವುದನ್ನು ಬಹಳ ಮಂದಿ ಮರೆತೇ ಬಿಟ್ಟಿದ್ದಾರೆ. ಸೋಲಿನ ಸರದಾರರ ಪಟ್ಟಿಯಲ್ಲಿ ಎನ್.ಧರ್ಮಸಿಂಗ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಎಚ್.ವಿಶ್ವನಾಥ್, ಅಂಬರೀಷ್, ಎಚ್.ಸಿ.ಶ್ರಿಕಂಠಯ್ಯ, ಡಿ.ಬಿ.ಚಂದ್ರೇಗೌಡ, ಎಂ.ಪಿ.ಪ್ರಕಾಶ್, ಕಾಗೋಡು ತಿಮ್ಮಪ್ಪ, ವಸಂತ್ ವಿ.ಸಾಲ್ಯಾನ್,ಎಂ.ವೈ ಮೇಟಿ, ಕೆ.ಬಿ.ಕೋಳಿವಾಡ್, ಶ್ರಿನಿವಾಸಗೌಡ ಮೊದಲಾದವರ ಹೆಸರುಗಳಿವೆ. ಇವರಲ್ಲಿ ಒಂದಷ್ಟು ಮಂದಿ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳೂ ಆಗಿದ್ದರು. ಇವರಲ್ಲಿ ಹತ್ತು ನಾಯಕರು ಗೆದ್ದುಬಿಟ್ಟಿದ್ದರೂ ರಾಜ್ಯದ ರಾಜಕೀಯ ಚಿತ್ರವೇ ಬದಲಾಗಿರುತ್ತಿತ್ತು. ಬೇರೆ ಕ್ಷೇತ್ರಗಳಿಗೆ ಹೋಗಿ ಪ್ರಚಾರಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದ್ದ ಈ ನಾಯಕರನ್ನು ಅವರ ಕ್ಷೇತ್ರಗಳಲ್ಲಿ ಗೆಲ್ಲಿಸಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಪ್ರಚಾರಕ್ಕೆ ಹೋಗಬೇಕಿತ್ತೇ? ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ `ಕಾಲೆಳೆಯುವ ರಾಜಕಾರಣ' ಕೂಡಾ ಕಾರಣ ಎನ್ನುವುದನ್ನು ಆಂಟನಿ ಗುರುತಿಸಿದ್ದಾರೆ. ಹಲವಾರು ನಾಯಕರು ಪಕ್ಷದಲ್ಲಿರುವ ತಮ್ಮ ವಿರೋಧಿಗಳನ್ನು ಸೋಲಿಸಲು ವಿರೋಧಪಕ್ಷಗಳ ಅಭ್ಯರ್ಥಿಗೆ ಹಣಕಾಸು ನೆರವು ನೀಡಿದ್ದ ಪ್ರಕರಣಗಳನ್ನು ಕೂಡಾ ಪಕ್ಷದ ಹಿರಿಯ ನಾಯಕರು ಆಂಟನಿ ಅವರ ಗಮನಕ್ಕೆ ತಂದಿದ್ದರು. ಆದರೆ ಯಾರ ತಲೆಯೂ ಉರುಳಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಹಾಕಿದ ಆರೋಪ ಹೊತ್ತವರಿಗೆ ಟಿಕೆಟ್ ನೀಡಿದ ನಂತರ ಯಾವ ತಲೆ ಉರುಳಲು ಸಾಧ್ಯ?
ತಾನು ಕನಸು ಕಾಣುತ್ತಿರುವ ಆದರ್ಶ ರಾಜಕಾರಣವನ್ನು ಕಾರ್ಯರೂಪಕ್ಕೆ ತರಲು ರಾಹುಲ್‌ಗಾಂಧಿ ಈ ಬಾರಿ ಕರ್ನಾಟಕವನ್ನು ಪ್ರಯೋಗಶಾಲೆಯಾಗಿ ಮಾಡಬಹುದಿತ್ತು. ಅಂತಹದ್ದೊಂದು ಅಪೂರ್ವ ಅವಕಾಶ ಕೂಡಿ ಬಂದಿತ್ತು. ಇತ್ತೀಚಿನ ಎಲ್ಲ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಬಹುಮತ ಗಳಿಸಬಹುದೆಂಬ ಭವಿಷ್ಯ ನುಡಿಯುತ್ತಿವೆ.  `ರಾಜಕೀಯ ಆತ್ಮಹತ್ಯೆ' ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ಪಕ್ಷವೊಂದು `ರಿಸ್ಕ್'ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಂತಹ ಅನುಕೂಲಕರ ಪರಿಸ್ಥಿತಿಯಲ್ಲಿ. ಅಷ್ಟೇನು ಜನಪ್ರಿಯರಲ್ಲದ, ಜಾತಿ ಮತ್ತು ದುಡ್ಡಿನ ಬಲ ಇಲ್ಲದ, ಸಜ್ಜನ, ಪ್ರಾಮಾಣಿಕ, ಕಳಂಕರಹಿತ ಮತ್ತು ಸೇವಾಸಕ್ತ ವ್ಯಕ್ತಿಗಳನ್ನು ಗುರುತಿಸಿ ಟಿಕೆಟ್‌ನೀಡಲು ಇದೊಂದು ಅವಕಾಶ. ಪಕ್ಷದ ಜನಪ್ರಿಯತೆಯ ಅಲೆಯ ಮೇಲೇರಿ ಇಂತಹವರು ಗೆಲುವಿನ ದಡ ಸೇರುವ ಸಾಧ್ಯತೆ ಇರುತ್ತದೆ. ಮುಳುಗುತ್ತಿರುವ ಹಡಗಿನಂತಾಗಿರುವ ಬಿಜೆಪಿ ಇಂತಹ ದಿಟ್ಟತನದ ರಾಜಕೀಯ ನಿರ್ಧಾರವನ್ನು ತೋರಿಸುವ ಸ್ಥಿತಿಯಲ್ಲಿ ಇಲ್ಲ.  ಆದರೆ ಈಗಾಗಲೇ ಬಿಡುಗಡೆಗೊಂಡಿರುವ ಅಭ್ಯರ್ಥಿಗಳ ಪಟ್ಟಿ ಮತ್ತು ಅದರ ಬೆನ್ನಲ್ಲಿಯೇ ಎದ್ದಿರುವ ವಿವಾದಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷ ರಾಹುಲ್‌ಗಾಂಧಿ ತೋರುತ್ತಿರುವ ದಾರಿಯನ್ನು ಬಿಟ್ಟು ಹಳೆಯ ದಾರಿಯಲ್ಲಿಯೇ ಸಾಗುವ ಹಾಗೆ ಕಾಣುತ್ತಿದೆ. ಇಷ್ಟೆಲ್ಲ ಅವಾಂತರಗಳ ನಂತರವೂ ಕಾಂಗ್ರೆಸ್ ಪಕ್ಷವೇ ಚುನಾವಣೆಯಲ್ಲಿ ಬಹುಮತ ಗಳಿಸಬಹುದು, ಆ ಪಕ್ಷವೇ ಸರ್ಕಾರ ರಚಿಸಬಹುದು. ಆದರೆ ಪಕ್ಷ ಗೆದ್ದರೂ ಕೂಡ ಪ್ರಧಾನಮಂತ್ರಿಯಾಗಲು ಹೊರಟ ರಾಹುಲ್‌ಗಾಂಧಿಯ ಆದರ್ಶದ ಸೋಲು ಆಗಲಿದೆ.

Sunday, March 31, 2013

ಮುಲಾಯಂ ಮುಲಾಮಿನಿಂದ ಎದ್ದು ನಿಂತ ಅಡ್ವಾಣಿ

ತೃತೀಯ ರಂಗದ ಗಂಟೆ ಆಗಾಗ ಮೊಳಗಿ ಸುಮ್ಮನಾಗುವುದು ರೂಢಿಯಾಗಿಬಿಟ್ಟಿರುವ ಕಾರಣದಿಂದಾಗಿ
ಯೇ ಇದನ್ನು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಲೇವಡಿ ಮಾಡುತ್ತಿವೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಗ್ಯಾಂಗ್ ತೃತೀಯರಂಗದ ಗಾಳಿಪಟವನ್ನು ಎಷ್ಟು ಎತ್ತರಕ್ಕೆ ಹಾರಿಸಿದರೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಕೆಳಗೆ ಇಳಿದುಬಂದು ನಮ್ಮ ಮನೆಬಾಗಿಲು ಬಡಿಯಲೇಬೇಕು ಎನ್ನುವುದು ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನ ದೂರದಲ್ಲಿಟ್ಟು ನಿಜವಾದ ತೃತೀಯ ರಂಗ ಅಧಿಕಾರಕ್ಕೆ ಬರುವ ರಾಜಕೀಯ ವಾತಾವರಣ ಸದ್ಯಕ್ಕೆ ದೇಶದಲ್ಲಿ ಇಲ್ಲ. ಅಂದ ಮಾತ್ರಕ್ಕೆ ಪ್ರಾದೇಶಿಕ ರಾಜಕಾರಣದ `ಚಾಣಕ್ಯ' ಮುಲಾಯಂಸಿಂಗ್ ಹಾಗೆ ಸುಮ್ಮನೆ ತೃತೀಯರಂಗದ ಗಂಟೆ ಆಡಿಸುವವರೂ ಅಲ್ಲ. ಯುಪಿಎಗೆ ಪರ್ಯಾಯವಾಗಿ ಎನ್‌ಡಿಎಯನ್ನು ಬಲಪಡಿಸುವ ಉದ್ದೇಶವೇನಾದರೂ ಅವರಲ್ಲಿದೆಯೇ? ಇದನ್ನೇ ಬಳಸಿಕೊಂಡು ಮೋದಿಯವರನ್ನು ಪಕ್ಕಕ್ಕೆ ಸರಿಸಿ ಅಡ್ವಾಣಿ ಅವರನ್ನು ಮೇಲಕ್ಕೆತ್ತುವ ತಂತ್ರವನ್ನು ಮೋದಿ ವಿರೋಧಿ ಬಿಜೆಪಿ ನಾಯಕರು ಹೆಣೆಯುತ್ತಿದ್ದಾರೆಯೇ?
ಇದೇ ಅಂಕಣದಲ್ಲಿ ಹಿಂದೆ ಹಲವಾರು ಬಾರಿ ಚರ್ಚಿಸಿದಂತೆ ತತ್ವಾಧಾರಿತವಾದ ನೈಜ ತೃತೀಯರಂಗ ದೆಹಲಿ ಗದ್ದುಗೆ ಏರಲು ಇನ್ನೂ ರಾಜಕೀಯ ಕಾಲ ಪಕ್ವವಾಗಿಲ್ಲ. ಯಾವುದೇ ಪಕ್ಷ ಇಲ್ಲವೇ ಮೈತ್ರಿಕೂಟ ಕೇಂದ್ರದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆಬರಲು ಕನಿಷ್ಠ 272 ಸದಸ್ಯರ ಬೆಂಬಲ ಬೇಕು.
1952ರಿಂದ 2009ರ ವರೆಗಿನ ಹದಿನೈದು ಲೋಕಸಭಾ ಚುನಾವಣೆಗಳ ಇತಿಹಾಸವನ್ನು ಅವಲೋಕಿಸಿದರೆ 1977ರ ಚುನಾವಣೆಯೊಂದನ್ನು ಹೊರತುಪಡಿಸಿ ಬೇರೆ ಯಾವುದರಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ (1980ರ ಮೊದಲು ಜನಸಂಘ)ಯೇತರ ಪಕ್ಷಗಳ  ಒಟ್ಟು ಸಂಖ್ಯಾಬಲ 272ರ ಸಮೀಪಕ್ಕೂ ಬಂದಿಲ್ಲ. (1977ರಲ್ಲಿ ಜನಸಂಘ ಆಗಿನ ಜನತಾಪಕ್ಷದಲ್ಲಿ ವಿಲೀನಗೊಂಡಿತ್ತು ಎನ್ನುವುದನ್ನೂ ಗಮನಿಸಬೇಕಾಗಿದೆ.) ಕಾಂಗ್ರೆಸ್ ಮತ್ತು ಬಿಜೆಪಿಯ ಒಟ್ಟು ಬಲ ಎಂದೂ 272ಕ್ಕಿಂತ ಕೆಳಗೆ ಇಳಿದಿಲ್ಲ. ಕನಿಷ್ಠ ಬಲ ಎಂದರೆ 1989ರಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಗಳಿಸಿದ್ದ 282 ಸ್ಥಾನಗಳು.
1991ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಈ ಎರಡು ಪಕ್ಷಗಳು ಅತ್ಯಧಿಕ ಸ್ಥಾನ ಗಳಿಸಿರುವುದು 2009ರ ಚುನಾವಣೆಯಲ್ಲಿ (ಕಾಂಗ್ರೆಸ್ 206+ ಬಿಜೆಪಿ 114= 320), ಅಂದರೆ  ಆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಹೊರತಾಗಿ ಇತರ ಎಲ್ಲ ಪಕ್ಷಗಳು ಗಳಿಸಿದ್ದ ಒಟ್ಟು ಸ್ಥಾನಗಳು 220 ಮಾತ್ರ.
ಇದನ್ನು ನೋಡಿದರೆ ಬಹುಮತಕ್ಕೆ ಬೇಕಾಗುವ ಸಂಖ್ಯೆ ಗಳಿಸುವುದು ತೃತೀಯರಂಗಕ್ಕೆ ಅಸಾಧ್ಯ ಎಂದು ಮೇಲ್ನೋಟಕ್ಕೆ ಅನಿಸುವುದಿಲ್ಲ ಎನ್ನುವುದು ನಿಜ. ಅಂತರ ಇರುವುದು 40-50 ಸ್ಥಾನಗಳಲ್ಲವೇ? ಅದನ್ನು ಗಳಿಸುವುದು ಅಷ್ಟೇನು ಕಷ್ಟವಾಗಲಾರದು ಎಂದು ಯಾರಾದರೂ ಅಂದುಕೊಳ್ಳಬಹುದು. ಆದರೆ ಇದರಲ್ಲೊಂದು ಒಳ ಲೆಕ್ಕಾಚಾರ ಇದೆ.ಒಂದೊಮ್ಮೆ ತೃತೀಯರಂಗದ ಪಕ್ಷಗಳ ಒಟ್ಟು ಸದಸ್ಯಬಲ 272 ತಲುಪಿದರೂ ಆಗಲೂ ಕಷ್ಟಗಳಿವೆ. ಈ ಪ್ರಾದೇಶಿಕ ಪಕ್ಷಗಳಲ್ಲಿನ ಪರಸ್ಪರ ವಿರೋಧ, ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಅವುಗಳ ಒಟ್ಟು ವಿರೋಧಕ್ಕಿಂತಲೂ ತೀವ್ರವಾಗಿದೆ. ಉ
ತ್ತರಪ್ರದೇಶದಲ್ಲಿ ಎಸ್-ಬಿಎಸ್‌ಪಿ, ತಮಿಳುನಾಡಿನಲ್ಲಿ ಡಿಎಂಕೆ-ಎಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಸಿಪಿಎಂ-ತೃಣಮೂಲ ಕಾಂಗ್ರೆಸ್, ಮತ್ತು ಬಿಹಾರದಲ್ಲಿ ಜೆಡಿ(ಯು)-ಆರ್‌ಜೆಡಿ ಪಕ್ಷಗಳು ಎಂದಾದರೂ ಒಂದೇ ಮೈತ್ರಿಕೂಟದಲ್ಲಿ ಸೇರಿಕೊಳ್ಳಲು ಸಾಧ್ಯವೇ?
ರಾಜಕೀಯದ ಈ ಗಣಿತ ಗೊತ್ತಿಲ್ಲದಷ್ಟು ಮುಲಾಯಂಸಿಂಗ್ ದಡ್ಡರಲ್ಲ. ಅವರ ತಲೆಯಲ್ಲಿ ಬೇರೆ ರಾಜಕೀಯ ಲೆಕ್ಕಾಚಾರ ಸುಳಿದಾಡುತ್ತಿರುವ ಹಾಗೆ ಕಾಣುತ್ತಿದೆ. ತೃತೀಯರಂಗದ ಬಗ್ಗೆ ಚರ್ಚೆ ಪ್ರಾರಂಭಿಸಿದ ಬೆನ್ನಲ್ಲೇ ಅವರು ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿರುವುದು ಅವರ ನಡೆ-ನುಡಿಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.ಬಿಜೆಪಿ ಮತ್ತು ಅದರ ಪೂರ್ವಾಶ್ರಮದ ರೂಪವಾದ ಜನಸಂಘ ತನ್ನ ಬಲಪಂಥೀಯ ತತ್ವವನ್ನು ಬಹಿರಂಗವಾಗಿಯೇ ಪ್ರತಿಪಾದಿಸುತ್ತಾ ಬಂದಿದ್ದರೂ ಕಾಂಗ್ರೆಸೇತರ ವಿರೋಧ ಪಕ್ಷಗಳು ಆ ಕಾರಣಕ್ಕಾಗಿಯೇ ಅದನ್ನು ಎಂದೂ ದೂರ ಇಟ್ಟಿರಲಿಲ್ಲ.
1977ರಲ್ಲಿ ಜನಸಂಘ, ಜನತಾಪಕ್ಷದ ಜತೆ ವಿಲೀನಗೊಂಡಿದ್ದರೆ 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗದಲ್ಲಿ ಬಿಜೆಪಿ ಮಾತ್ರವಲ್ಲ ಎಡಪಕ್ಷಗಳು ಕೂಡಾ ಸೇರಿಕೊಂಡಿದ್ದವು.ಆದರೆ ಬಾಬರಿ ಮಸೀದಿಯ ಧ್ವಂಸದ ಘಟನೆ ದೇಶದ ರಾಜಕಾರಣದ ಸಮೀಕರಣವನ್ನೇ ಬದಲಾಯಿಸಿಬಿಟ್ಟಿತು. ಕಾಂಗ್ರೆಸ್ ಮಾತ್ರವಲ್ಲ ಕಾಂಗ್ರೆಸೇತರ ಪಕ್ಷಗಳು ಕೂಡಾ ಬಿಜೆಪಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳದೆ ದೂರ ಇಟ್ಟುಬಿಟ್ಟಿವೆ. ಅದರ ನಂತರದ ದಿನಗಳಲ್ಲಿಯೇ ದೇಶದ ರಾಜಕಾರಣದಲ್ಲಿ `ಕೋಮುವಾದ' ಮತ್ತು `ಜಾತ್ಯತೀತ' ನೆಲೆಯ ಧ್ರುವೀಕರಣ ಪ್ರಾರಂಭವಾಗಿದ್ದು.
ಈ `ರಾಜಕೀಯ ಅಸ್ಪೃಶ್ಯತೆ'ಯಿಂದ ತನ್ನನ್ನು ಮುಕ್ತಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಲೇ ಬಂದಿದೆ. ಇದರ ಫಲಸ್ವರೂಪವೇ  ಎನ್‌ಡಿಎ ರಚನೆ. ಸಮಾಜವಾದಿ ಜಾರ್ಜ್ ಫರ್ನಾಂಡಿಸ್ ಮತ್ತು ನಿತೀಶ್‌ಕುಮಾರ್, ದ್ರಾವಿಡ ಪಕ್ಷಗಳ ಜಯಲಲಿತಾ ಮತ್ತು ಕರುಣಾನಿಧಿಯವರಿಂದ  ದಲಿತ ನಾಯಕ ರಾಮ್‌ವಿಲಾಸ್ ಪಾಸ್ವಾನ್ ವರೆಗೆ ಎಲ್ಲರನ್ನೂ ಜತೆಯಲ್ಲಿ ಸೇರಿಸಿಕೊಂಡಿದ್ದು ಇದೇ ಪ್ರಯತ್ನದ ಭಾಗವಾಗಿತ್ತು.
ಬಹುಜನ ಸಮ್ಮತ ಮುಖ ವಾಜಪೇಯಿ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸಿದ ಈ ಪ್ರಯತ್ನವನ್ನು ಮತ್ತೆ ಭಂಗಗೊಳಿಸಿದವರು ನರೇಂದ್ರಮೋದಿ. ಬಾಬರಿ ಮಸೀದಿ ಧ್ವಂಸದ ಕಳಂಕ ನಿಧಾನವಾಗಿ ಅಳಿಸಿಹೋಗುತ್ತಿದ್ದಾಗ ಮತ್ತೆ ಬಿಜೆಪಿಯ ಮುಖಕ್ಕೆ ಕೋಮುವಾದದ ಮಸಿ ಬಳಿದವರು ಮೋದಿ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ನಡೆದ ಕೋಮು ಹಿಂಸಾಚಾರದಿಂದಾಗಿ ಬಿಜೆಪಿ ರಾಜಕೀಯವಾಗಿ ಅಸ್ಪೃಶ್ಯವಾಗಿಯೇ ಉಳಿಯುವಂತಾಯಿತು. ಲೋಕಜನಶಕ್ತಿ ಪಕ್ಷ, ತೆಲುಗುದೇಶಂ, ನ್ಯಾಷನಲ್ ಕಾಂಗ್ರೆಸ್ ಮೊದಲಾದ ಪಕ್ಷಗಳು ಎನ್‌ಡಿಎ ತೊರೆದುಹೋಗಲು ಗುಜರಾತ್ ಗಲಭೆ ಕಾರಣ.
ಹನ್ನೊಂದು ವರ್ಷಗಳಿಂದ ಈ ಕಳಂಕವನ್ನು ತೊಳೆಯಲು ಬಿಜೆಪಿ ಒದ್ದಾಡುತ್ತಿದೆ. `ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ದೇಶದಲ್ಲಿಯಾಗಲಿ ಇತರ ರಾಜ್ಯದಲ್ಲಿಯಾಗಲಿ ಕೋಮುಗಲಭೆಗಳು ನಡೆದಿಲ್ಲ' ಎಂದು ಆ ಪಕ್ಷದ ನಾಯಕರು ಸಾರಿ ಸಾರಿ ಹೇಳುತ್ತಿರುವುದು ಮತ್ತು  ನರೇಂದ್ರಮೋದಿ ಅವರು ಕೋಮುವಾದದ ಬಗ್ಗೆ ಉಸಿರೆತ್ತದೆ ಗುಜರಾತ್‌ನಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳನ್ನೇ ಪ್ರಸ್ತಾಪಿಸುತ್ತಾ ತಾನೊಬ್ಬ `ವಿಕಾಸ ಪುರುಷ'ನೆಂಬ ರೀತಿಯಲ್ಲಿ ತನ್ನನ್ನು ಬಿಂಬಿಸಿಕೊಳ್ಳುತ್ತಿರುವುದು-ಎಲ್ಲವೂ ಈ `ಆತ್ಮಾವಲೋಕನದ ರಾಜಕಾರಣ'ದ ಚಿತ್ರಕತೆಯ ಭಾಗ.
ಮೋದಿ ಅವರು ತನ್ನಿಂದ ತಪ್ಪಾಗಿದೆ ಎಂದು ತಲೆಕೆಳಗೆ ಕಾಲು ಮೇಲೆ ಮಾಡಿ ದೇಶದ ಜನರ ಕ್ಷಮೆ ಕೇಳಿದರೂ ಜನಸಂಖ್ಯೆಯಲ್ಲಿ ಶೇಕಡಾ 13ರಷ್ಟಿರುವ ಮುಸ್ಲಿಮರು ಅವರನ್ನು ಕ್ಷಮಿಸಲಾರರು. ಈ ಕ್ಷಮೆ ಸಿಗದೆ  ಕಾಂಗ್ರೆಸೇತರ ಪಕ್ಷಗಳು ಬಿಜೆಪಿಯ ಜತೆಗೂಡುವುದು ಕಷ್ಟ. ಆದರೆ ಕಳೆದ ಒಂದು ದಶಕದ ಅವಧಿಯಲ್ಲಿ ಕಾಂಗ್ರೆಸೇತರ ರಾಜಕೀಯ ಪಕ್ಷಗಳ ಒಟ್ಟು ಬಿಜೆಪಿ ವಿರೋಧ ಈಗ ಆ ಪಕ್ಷದ ಒಬ್ಬ ನಾಯಕನಾದ ನರೇಂದ್ರಮೋದಿ ಬಗ್ಗೆಯಷ್ಟೇ ಸೀಮಿತವಾಗಿರುವುದು ವಿಶೇಷ.
ಹಾಗಿದ್ದರೆ ನರೇಂದ್ರಮೋದಿ ಅವರನ್ನು ಕೈಬಿಟ್ಟು ಬೇರೆಯಾರನ್ನಾದರೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ ಬಿಜೆಪಿ ಮನೆಯೊಳಗೆ ಜಾತ್ಯತೀತ ಪಕ್ಷಗಳು ಪ್ರವೇಶಿಸಿ ಅಸ್ಪೃಶ್ಯತೆಯನ್ನು ತೊಲಗಿಸಲು ಸಿದ್ಧ ಇವೆಯೇ? `ಹೌದು' ಎಂದು ಮುಲಾಯಂಸಿಂಗ್ ಯಾದವ್ ಬಾಯಿಬಿಟ್ಟು ಹೇಳುವ ಒಂದು ದಿನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಬಿಜೆಪಿಯೊಳಗಿನ ಕೆಲವು ನಾಯಕರು ಇಂತಹ ದಿನಕ್ಕಾಗಿಯೇ ಕಾಯುತ್ತಿರುವಂತಿದೆ. ಮೋದಿ ಅಲ್ಲದೆ ಇದ್ದರೆ ಬೇರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಕಷ್ಟಪಡಬೇಕಾಗಿಲ್ಲ. ಆಗಲೇ ಲಾಲ್‌ಕೃಷ್ಣ ಅಡ್ವಾಣಿಯವರು ಎದ್ದು ನಿಂತಿದ್ದಾರೆ. ತುಸು ಬಾಗಿದಂತಿದ್ದ ಅವರ ಬೆನ್ನು ಮುಲಾಯಂ ಹೊಗಳಿಕೆಯ ಮುಲಾಮು ಹಚ್ಚಿದ ಮೇಲೆ ನೆಟ್ಟಗಾಗಿದೆ, ಅವರನ್ನು ಕಾಡುತ್ತಾ ಬಂದಿರುವ ಪ್ರಧಾನಿ ಪಟ್ಟದ ಹಳೆಯ ಕನಸು ಮತ್ತೆ ಚಿಗುರೊಡೆದಿದೆ.
ಆದರೆ ಮುಲಾಯಂಸಿಂಗ್ ಅವರಿಗೆ ಕಾಂಗ್ರೆಸ್ ಬಗ್ಗೆ ಎಷ್ಟೇ ದ್ವೇಷವಿದ್ದರೂ ಆ ಕಾರಣಕ್ಕಾಗಿ ಲಾಲ್‌ಕೃಷ್ಣ ಅಡ್ವಾಣಿಯವರನ್ನು ಪ್ರಧಾನಿ ಮಾಡಲು ಅವರು ಹೊರಡಲಾರರು. ಮೋದಿಯನ್ನು ಕೈಬಿಟ್ಟ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರೂ ಪ್ರಧಾನಿ ಪಟ್ಟಕ್ಕೆ ಮುಲಾಯಂಸಿಂಗ್ ಅವರ ಮೊದಲ ಆಯ್ಕೆ ಮುಲಾಯಂಸಿಂಗ್ ಅವರೇ ಎಂಬುದು ಸ್ಪಷ್ಟ.
ಇತ್ತೀಚೆಗೆ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್‌ಕುಮಾರ್ ಅವರನ್ನು ಯಾಕೆ ಬಿಂಬಿಸಬಾರದು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವುದು ಕೂಡಾ ಮುಲಾಯಂಸಿಂಗ್ ಯಾದವ್   ಇದ್ದಕ್ಕಿದ್ದಂತೆ ಸಕ್ರಿಯವಾಗಲು ಕಾರಣ ಇರಬಹುದು. ಇದರ ಜತೆಗೆ ಯುಪಿಎ ಮೇಲೆ ಒತ್ತಡ ಹೇರಿ ಕಾರ್ಯ ಸಾಧಿಸಿಕೊಳ್ಳುವ ದುರಾಲೋಚನೆಯೂ ಅವರಲ್ಲಿದ್ದಿರಬಹುದು. ನಿಜವಾಗಿಯೂ ಎನ್‌ಡಿಎ ಜತೆ ಸೇರಿಕೊಳ್ಳುವ ಉದ್ದೇಶ ಮುಲಾಯಂ ಮತ್ತಿತರ ತೃತೀಯರಂಗದ ನಾಯಕರು ಹೊಂದಿದ್ದರೆ ಕಾಂಗ್ರೆಸ್ ಪಕ್ಷದ ನಿದ್ದೆ ಹಾಳಾಗಲಿದೆ.
ಈಗಿನ ಸಂಖ್ಯಾಬಲದ ಹಿನ್ನೆಲೆಯಲ್ಲಿ ಹೇಳುವುದಾದರೆ ತೃತೀಯರಂಗದ ನಾಯಕರೆಲ್ಲರೂ ಒಟ್ಟು ಸೇರಿದರೂ ಯುಪಿಎ ಸರ್ಕಾರವನ್ನು ಉರುಳಿಸಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಸಾಧ್ಯ ಇಲ್ಲ ಎನ್ನುವುದು ವಾಸ್ತವ. ಇದು ಸಾಧ್ಯವಾಗಬೇಕಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ 150ಕ್ಕಿಂತ ಕೆಳಗಿಳಿಯಬೇಕು,ಬಿಜೆಪಿಯ ಬಲ 150ಕ್ಕಿಂತ ಮೇಲೇರಬೇಕು ಮತ್ತು ತೃತೀಯರಂಗದ ಗಂಟೆ ಆಡಿಸುತ್ತಿರುವ ಎಸ್‌ಪಿ, ಟಿಎಂಸಿ,ಡಿಎಂಕೆ ಇಲ್ಲವೆ ಎಡಿಎಂಕೆ,ಬಿಜೆಡಿ, ತೆಲುಗುದೇಶಂ, ಜೆಡಿ (ಎಸ್) ಮೊದಲಾದ ಪಕ್ಷಗಳು ಕನಿಷ್ಠ ಈಗ ಇರುವ ಸಂಖ್ಯಾಬಲವನ್ನಾದರೂ ಉಳಿಸಿಕೊಳ್ಳಬೇಕು. ಅದು ಸಾಧ್ಯವಾದರೆ ಈಗಿನ ಮಿತ್ರಪಕ್ಷಗಳ ಜತೆ ತೃತೀಯ ರಂಗದ ನಾಯಕರ ಬೆಂಬಲವನ್ನೂ ಬಳಸಿಕೊಂಡು ಉಳಿದ 100-120 ಸ್ಥಾನಗಳನ್ನು ಹೊಂದಿಸಿಕೊಳ್ಳುವುದು ಬಿಜೆಪಿಗೆ ಕಷ್ಟವಾಗಲಾರದು. ಅಂತಹ ಸಂದರ್ಭದಲ್ಲಿ ಈಗ ಯುಪಿಎನಲ್ಲಿರುವ ಶರದ್ ಪವಾರ್ ಅವರ ಎನ್‌ಸಿಪಿ, ಅಜಿತ್‌ಸಿಂಗ್ ಅವರ ಆರ್‌ಎಲ್‌ಡಿ  ಕೂಡಾ ಶಿಬಿರ ಬದಲಾಯಿಸಬಹುದು.
ಬದಲಾಗಿರುವಂತೆ ಕಾಣುತ್ತಿರುವ ಮುಲಾಯಂಸಿಂಗ್ ಅವರ ಹೊಗಳಿಕೆಯಲ್ಲಿ ಲಾಲ್‌ಕೃಷ್ಣ ಅಡ್ವಾಣಿಯವರಿಗೆ `ಸುರಂಗದ ಕೊನೆಯಲ್ಲಿನ ಬೆಳಕು' ಕಂಡಿರಲೂಬಹುದು. ಪ್ರಧಾನಿ ಅಭ್ಯರ್ಥಿಯಾಗಲು ತುದಿಗಾಲಲ್ಲಿ ನಿಂತಿರುವ ನರೇಂದ್ರಮೋದಿಯವರನ್ನು ಪಕ್ಕಕ್ಕೆ ತಳ್ಳಿ ತನ್ನ ಬದುಕಿನ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಈ ಅವಕಾಶವನ್ನು ಯಾಕೆ ಬಳಸಿಕೊಳ್ಳಬಾರದು ಎಂಬ ಯೋಚನೆ ಅವರಲ್ಲಿ ಹುಟ್ಟಿರಲೂ ಬಹುದು.
ಮಿತ್ರಪಕ್ಷಗಳಾದ ಜೆಡಿ (ಯು) ಮತ್ತು ಶಿವಸೇನೆ ಮಾತ್ರವಲ್ಲ ಬಿಜೆಪಿಯೊಳಗಿನ ಬಹುತೇಕ ಹಿರಿಯ ನಾಯಕರು ಕೂಡಾ ನರೇಂದ್ರಮೋದಿ ಅವರಿಗೆ ವಿರುದ್ಧವಾಗಿರುವುದರಿಂದ ತೃತೀಯರಂಗದ ನಾಯಕರು ಸ್ನೇಹಹಸ್ತ ಚಾಚಿದರೆ ಮೋದಿ ಅವರನ್ನು ಕೊಡವಿಕೊಳ್ಳುವುದು ಪಕ್ಷಕ್ಕೆ ಕಷ್ಟವಾಗಲಾರದು. ಮುಸ್ಲಿಮರನ್ನು ಓಲೈಸುತ್ತಿದ್ದಾರೆಂದು ಆರೋಪಿಸಿ ಸಮಾಜವಾದಿ ಪಕ್ಷದ ನಾಯಕನನ್ನು `ಮುಲ್ಲಾ ಮುಲಾಯಂ' ಎಂದು ದೂಷಿಸಿದ್ದ ಸಂಘ ಪರಿವಾರದ ನಾಯಕರು ಇಂತಹ `ಅಪವಿತ್ರ ಸಂಬಂಧ'ವನ್ನು ಒಪ್ಪಬಹುದೇ?
ದೇವರ ಮೂರ್ತಿಗಳಿಗೆ ಚಪ್ಪಲಿ ಹಾರ ಹಾಕಿದ ದ್ರಾವಿಡ ಪಕ್ಷಗಳ ಜತೆಯಲ್ಲಿಯೇ ಸೇರಿಕೊಂಡಾಗ ಆಕ್ಷೇಪ ಎತ್ತದವರು ಇದನ್ನು ಯಾಕೆ ಒಪ್ಪಲಾರರು? ಪಕ್ಷಕ್ಕೆ ಅಧಿಕಾರ ಬಂದರೆ ತಮಗೆ ಬಂದಂತೆ ಎಂದು ಅವರು ಅನುಭವದ ಬಲದಿಂದ ಕಂಡುಕೊಂಡಿಲ್ಲವೇ?  ಅಧಿಕಾರವನ್ನು ಚಪ್ಪರಿಸಿದವರಿಗೆ ಅದರ ಸವಿ ಗೊತ್ತಿಲ್ಲವೇ?

Sunday, March 24, 2013

ಸಂಜೂಬಾಬಾಗೆ ಕಣ್ಣೀರಿಡುವ ಮುನ್ನ ಯೋಚಿಸಿ

ಪ್ರಜಾಪ್ರಭುತ್ವದ ಹಾದಿ ತಪ್ಪಿಸುವ ಪ್ರಯತ್ನ ನಡೆದ ಸಂದರ್ಭಗಳಲ್ಲಿ ಕೆಲವರು ವ್ಯಂಗ್ಯವಾಗಿ `ಇಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು' ಎಂದು ಹೇಳುವುದುಂಟು. ಮುಂಬೈ ಸ್ಫೋಟದ ಅಪರಾಧಿಗಳಲ್ಲಿ ಒಬ್ಬನಾದ ಹಿಂದಿ ಚಿತ್ರನಟ ಸಂಜಯ್‌ದತ್‌ಗೆ ಐದುವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಕ್ಕಾಗಿ ಗಣ್ಯಾತಿಗಣ್ಯರು ಕಣ್ಣೀರು ಸುರಿಸುತ್ತಿರುವುದು ಇಂತಹದ್ದೊಂದು ಸಂದರ್ಭ. ಚಲನಚಿತ್ರ ನಟನಟಿಯರಿಂದ ಹಿಡಿದು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯ ಕಟ್ಜು ವರೆಗೆ ಹಲವು ಖ್ಯಾತನಾಮರು ಸಂಜಯ್‌ದತ್ ಪರವಾಗಿ ಬೊಗಸೆಯೊಡ್ಡಿ ಸರ್ಕಾರ ಮತ್ತು ನ್ಯಾಯಾಲಯದ ಮುಂದೆ ದಯಾಭಿಕ್ಷೆ ಬೇಡುತ್ತಿದ್ದಾರೆ. ಸಾರ್ವಜನಿಕ ಅಭಿಪ್ರಾಯ ರೂಪಿಸುವ ಶಕ್ತಿ ಹೊಂದಿರುವ ಸಮಾಜದ `ಕೆನೆಪದರ'ದಂತಿರುವ ಈ ಗಣ್ಯರು ತಮ್ಮ ಪ್ರಭಾವಳಿಯ ಬಲದಿಂದ ಸಂಜಯ್‌ದತ್‌ಗೆ ಜೈಲು ಶಿಕ್ಷೆಯಾಗದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ ಗೆಲ್ಲಲೂ ಬಹುದು. ಆದರೆ ಸಮಾನತೆಯ ಬೀಜ ಮಂತ್ರದ ಪ್ರಜಾಪ್ರಭುತ್ವವನ್ನು ತಾವು ಸೋಲಿಸುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನವಾದರೂ ಈ ಗಣ್ಯರಿಗಿದೆಯೇ?
ಮುಂಬೈ ಸ್ಫೋಟ ನಡೆದಾಗ ಸಂಜಯ್‌ದತ್ ಎಳೆಯ ಬಾಲಕನಾಗಿರಲಿಲ್ಲ, ಆತನಿಗೆ 33 ವರ್ಷವಾಗಿತ್ತು. ಸರಿ-ತಪ್ಪುಗಳನ್ನು ಅರ್ಥಮಾಡಿಕೊಳ್ಳದಷ್ಟು ಆತ ಅಮಾಯಕನಾಗಿರಲಿಲ್ಲ.  ಲೋಕಸಭಾ ಸದಸ್ಯ ತಂದೆ ಮತ್ತು ಖ್ಯಾತ ನಟಿ ನರ್ಗಿಸ್‌ದತ್‌ನಂತಹ ಪ್ರಭಾವಿ ದಂಪತಿಗಳ ಮುದ್ದಿನ ಮಗನಾದ ಸಂಜಯ್ ಆತನ ಓರಗೆಯ ಇತರ ಕೆಲವು ಯುವಕರು ಅನುಭವಿಸುತ್ತಿದ್ದಂತಹ ಅಸಹಾಯಕತೆ, ಅಸುರಕ್ಷತೆ ಹೊಂದಿರಲು ಕಾರಣಗಳೇ ಇಲ್ಲ. ಒಂದಲ್ಲ ಒಂದು ಬಗೆಯ ಅಪರಾಧಗಳಿಗಾಗಿ ಮುಂಬೈನ ಪತ್ರಿಕೆಗಳಲ್ಲಿ ನಿತ್ಯ ಸುದ್ದಿಯಲ್ಲಿರುತ್ತಿದ್ದ ದಾವೂದ್ ಇಬ್ರಾಹಿಂ, ಅಬುಸಲೇಮ್, ಶರತ್‌ಶೆಟ್ಟಿ ಮೊದಲಾದವರ ಅಸಲಿ ಚಹರೆಯೇನು ಎಂದು ತಿಳಿಯದಷ್ಟು ಸಂಜಯ್‌ದತ್ ಮುಗ್ಧನಾಗಿರಲಿಲ್ಲ. ಬೇಕಿದ್ದರೆ ಆತ್ಮರಕ್ಷಣೆಗಾಗಿ ರೈಫಲ್ ಇಟ್ಟುಕೊಳ್ಳಲು ಪರವಾನಗಿ ಪಡೆಯುವುದು ಸಂಸದರ ಮಗನಿಗೆ ಕಷ್ಟವೂ ಆಗಿರಲಿಲ್ಲ. ಆತ್ಮರಕ್ಷಣೆಗಿಂತ ಬೇರೆ ದುರುದ್ದೇಶ ಆತನಿಗೆ ಇತ್ತು ಎನ್ನುವುದನ್ನು ಆಗಿನ ಸಾಂಧರ್ಭಿಕ ಪುರಾವೆಗಳು ಹೇಳುತ್ತವೆ.
ಗುಜರಾತ್‌ನ ಕರಾವಳಿಯಲ್ಲಿ ಬಂದು ಬಿದ್ದಿದ್ದ ಬಂದೂಕು, ಪಿಸ್ತೂಲ್ ಮತ್ತು ಕೈಬಾಂಬುಗಳನ್ನು ದಾವೂದ್ ಸೂಚನೆ ಮೇರೆಗೆ ಮುಂಬೈಗೆ ತಂದಿದ್ದವನು ಅಬುಸಲೇಮ್. ಅವುಗಳನ್ನು ಎಲ್ಲಿ ಸಂಗ್ರಹಿಸಿಡುವುದು ಎನ್ನುವ ಪ್ರಶ್ನೆ ಎದುರಾದಾಗ ನೆನಪಾದವನು ಪರಿಚಯಸ್ಥನಾದ ಸಂಜಯ್‌ದತ್ ಎಂಬ ನಟ. ದುಬೈನಿಂದ ಬಂದ ಆದೇಶದ ಮೇರೆಗೆ ಈ ಕೆಲಸವನ್ನು ಸಂತೋಷದಿಂದಲೇ ಒಪ್ಪಿಕೊಂಡಿದ್ದ ಸಂಜಯ್‌ದತ್  ಶಸ್ತ್ರಾಸ್ತ್ರಗಳನ್ನೆಲ್ಲ ತಮ್ಮ ಮನೆಯ ಗ್ಯಾರೇಜ್‌ನಲ್ಲಿಟ್ಟುಕೊಂಡಿದ್ದ. ಕೆಲವು ದಿನಗಳನಂತರ ಕೈಬಾಂಬುಗಳನ್ನು ವಾಪಸು ಕೊಂಡುಹೋಗುವಂತೆ ಅಬುಸಲೇಮ್‌ಗೆ ಹೇಳಿದ್ದ ಸಂಜಯದತ್ ಎಕೆ-56 ಬಂದೂಕು ಮತ್ತು ಪಿಸ್ತೂಲ್‌ಗಳನ್ನು ಮಾತ್ರ ತನ್ನಲ್ಲಿಯೇ ಇಟ್ಟುಕೊಂಡಿದ್ದ. ಒಂದು ಪಿಸ್ತೂಲ್ ಮಾತ್ರ ಇಟ್ಟುಕೊಂಡಿದ್ದರೆ ಅದು ಆತ್ಮರಕ್ಷಣೆಗೆಂದು ವಾದವನ್ನಾದರೂ ಮಾಡಬಹುದಿತ್ತು. ಇದರ ಸುಳಿವು ಪೊಲೀಸರಿಗೆ ಇದ್ದರೂ ಮಾರಿಷಸ್‌ನಲ್ಲಿದ್ದ ಸಂಜಯ್‌ದತ್ ದೇಶಕ್ಕೆ ಹಿಂದಿರುಗಲೆಂದು ಕಾಯುತ್ತಾ ಕೂತಿದ್ದರು.ಆದರೆ ಪತ್ರಿಕೆಯೊಂದು ಈ ಸುದ್ದಿ ಪ್ರಕಟಿಸಿದ ಕೂಡಲೇ ವಿಷಯ ತಿಳಿದುಕೊಂಡು ಜಾಗೃತನಾದ ಸಂಜಯ್‌ದತ್ ಗೆಳೆಯರಿಗೆ ಪೋನ್ ಮಾಡಿ ಮನೆಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವಂತೆ ಕೇಳಿಕೊಂಡಿದ್ದ. ಸಂಜಯ್‌ದತ್ ಈ ಎಲ್ಲ ಕೃತ್ಯಗಳನ್ನು ಅಮಾಯಕತನದಿಂದ ಇಲ್ಲವೆ ಆತ್ಮರಕ್ಷಣೆಗಾಗಿ ಮಾಡಿದ್ದ ಎಂದು ಹೇಳುವವರನ್ನು ಮೂರ್ಖರೆನ್ನದೆ ಬೇರೆ ಹೇಗೆ ಕರೆಯಲು ಸಾಧ್ಯ? 1993ರಲ್ಲಿ ಆತ ಏನು ಮಾಡಿದ್ದನೋ ಅದು ಬುದ್ದಿಪೂರ್ವಕವಾಗಿ, ಪರಿಣಾಮದ ಬಗ್ಗೆ ಅರಿವಿದ್ದೂ ಮಾಡಿದ್ದ ಅಪರಾಧ. ಎಲ್ಲರಿಗೂ ಅನ್ವಯವಾಗುವ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ಅಪರಾಧಿ ಎಂದೆನಿಸಿಕೊಳ್ಳಲು ಇನ್ನೇನು ಬೇಕು?
ಸಂಜಯ್‌ದತ್‌ನ ನುಣುಪು ಕೆನ್ನೆಗಳಿಂದ ಜಾರಿಬೀಳುತ್ತಿರುವ ಕಣ್ಣೀರು ಒರೆಸಲು ಹೊರಟ ಈ ಗಣ್ಯರಿಗೆ 1993ರಲ್ಲಿ ಮುಂಬೈನ ಹನ್ನೆರಡು ಕಡೆಗಳಲ್ಲಿ ನಡೆದ ಬಾಂಬ್ ಸ್ಫೋಟದಿಂದ ಮೃತರಾದ 257 ಅಮಾಯಕರ ಕುಟುಂಬದ ಸದಸ್ಯರು 20 ವರ್ಷಗಳಿಂದ ಹರಿಸುತ್ತಿರುವ ಕಣ್ಣೀರು ಯಾಕೆ ಕಾಣಿಸುತ್ತಿಲ್ಲವೋ ಗೊತ್ತಿಲ್ಲ. ಸಂಜಯ್‌ದತ್ ಬಂಧನದಿಂದ ಆತನ ಮೇಲೆ ಚಿತ್ರನಿರ್ಮಾಪಕರು ಹೂಡಿದ್ದ 250 ಕೋಟಿ ರೂಪಾಯಿ ಮುಳುಗಿ ಹೋಗುತ್ತದೆ ಎನ್ನುವುದು ಇನ್ನು ಕೆಲವರ ಚಿಂತೆ. ಬಾಲಿವುಡ್‌ನ ಬಹುತೇಕ ನಿರ್ಮಾಪಕರ ಹಿನ್ನೆಲೆ ಏನು, ಅವರ ದುಡ್ಡಿನ ಮೂಲ ಯಾವುದು ಎನ್ನುವುದು ಈ ಗಣ್ಯರಿಗೆ ಗೊತ್ತಿಲ್ಲವೇ? ಇದರಿಂದ ಚಿತ್ರರಂಗವನ್ನೇ ನಂಬಿದ್ದ ನೂರಾರು ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಎಂದಿನ ಒಗ್ಗರಣೆ ಬೇರೆ. ಮುಂಬೈನ ಬಟ್ಟೆಗಿರಣಿಗಳು ಮುಚ್ಚಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಾಗ ಇವರ‌್ಯಾರೂ ಕಣ್ಣೀರು ಹಾಕಿಲ್ಲ. ಮಹಾರಾಷ್ಟ್ರದಲ್ಲಿಯೇ ಬರದ ಬೇಗೆ ಮತ್ತ ಸಾಲದ ಹೊರೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಇವರ‌್ಯಾರೂ ದನಿ ಎತ್ತಲಿಲ್ಲ. ವಿರೋಧಿಗಳಿಂದ `ಆಸ್ಥಾನ ವಿದೂಷಕ'ನೆಂದು ಆರೋಪಕ್ಕೊಳಗಾಗಿರುವ ನ್ಯಾ.ಕಟ್ಜು ಅವರು ಒಮ್ಮಮ್ಮೆ ಈ ಪಾತ್ರವನ್ನು ಗಂಭೀರವಾಗಿ ಸ್ವೀಕರಿಸಲು ಹೊರಟವರಂತೆ ಕಾಣುತ್ತಾರೆ. ಮಹಾತ್ಮಗಾಂಧೀಜಿಯನ್ನು ಬಳಸಿಕೊಂಡು ಒಂದೆರಡು ವ್ಯಾಪಾರಿ ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬನನ್ನು ಸಮಾಜಸುಧಾರಕನೆಂದು ಬಿಂಬಿಸಲು ಹೊರಟಿರುವ ನ್ಯಾ.ಕಟ್ಜು ಅವರ ಕುರುಡುಕಣ್ಣಿಗೆ ಏನೆನ್ನಬೇಕು. ಅವರಿಗೆ ಕಾಣದೆ ಇದ್ದದ್ದು ಇನ್ನಷ್ಟು ಇದೆ.
ಯುಸೂಪ್ ನಲ್‌ವಾಲಾ ಜೀವನದಲ್ಲಿ ಮಾಡಿದ್ದ ಏಕೈಕ ತಪ್ಪೆಂದರೆ ಸಂಜಯ್‌ದತ್‌ನ ಇನ್ನೊಂದು ಅಕ್ರಮ ಚಟುವಟಿಕೆಯಾಗಿದ್ದ ಮೃಗ ಬೇಟೆಗೆ ಆಗಾಗ ಜತೆಯಲ್ಲಿ ಹೋಗಿದ್ದು. ಉಳಿದಂತೆ ದಾವೂದ್ ಮತ್ತಿತರ ಪಾತಕಿಗಳ ಜತೆ ಆತನಿಗೆ ಯಾವ ಸಂಬಂಧವೂ ಇರಲಿಲ್ಲ. ಸಂಜಯ್‌ದತ್ ಸೂಚನೆಯಂತೆ ಆತನ ಮನೆಯಲ್ಲಿದ್ದ ಎಕೆ-56 ಮತ್ತು ಪಿಸ್ತೂಲ್‌ಗಳನ್ನು ಕುಲುಮೆಯಲ್ಲಿ ಹಾಕಿ ನಾಶಪಡಿಸಲು ಪ್ರಯತ್ನಿಸಿದ್ದ ನಲ್‌ವಾಲಾ ಈಗಾಗಲೇ ಐದುವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ನಲ್‌ವಾಲಾನಿಗೆ ನೆರವಾಗಿದ್ದ ಕುಲುಮೆಯ ಮಾಲೀಕ ಕೇರ್ಸಿ ಅಡ್‌ಜೇನಿಯಾ ಎರಡು ವರ್ಷ, ಶಸ್ತ್ರಾಸ್ತ್ರ ನಾಶಕ್ಕೆ ಮೊದಲು ಅವುಗಳನ್ನು ಎರಡು ದಿನ ಮನೆಯಲ್ಲಿ ಇಟ್ಟುಕೊಂಡಿದ್ದ ಜೈಬುನ್ಸಿಯಾ ಖಾದ್ರಿ ಐದು ವರ್ಷ, ಶಸ್ತ್ರಾಸ್ತ್ರಗಳನ್ನು ಸಂಜಯ್‌ದತ್ ಮನೆಯಿಂದ ಕೊಂಡೊಯ್ದಿದ್ದ ಮನಸೂರ್ ಅಹ್ಮದ್ ಐದುವರ್ಷ, ಸಂಜಯ್‌ದತ್‌ಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದ ಇಬ್ರಾಹಿಂ ಮೂಸಾ ಹತ್ತುವರ್ಷ, ಸಂಜಯ್‌ದತ್ ಮನೆಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದಿದ್ದ ಸಮೀರ್ ಹಿಂಗೋರಾ 9 ವರ್ಷ, ಮತ್ತು ದುಬೈನಲ್ಲಿ ನಡೆದಿದ್ದ ಸಂಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ಏಜಾಜ್ ಪಠಾಣ್ ಹತ್ತು ವರ್ಷ ಉಗ್ರ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ.  ಇವರೆಲ್ಲರಿಗೂ ಮುಂಬೈ ಟಾಡಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ನಾಶದ ಪ್ರಕರಣದಲ್ಲಿ ಸಂಜಯ್‌ದತ್ ಜತೆ ಭಾಗಿಯಾಗಿದ್ದ ಕಾರಣಕ್ಕಾಗಿ ಎರಡರಿಂದ ಹತ್ತುವರ್ಷಗಳ ಜೈಲುಶಿಕ್ಷೆ ಅನುಭವಿಸಿದ್ದ ಏಳು ಮಂದಿಯ ಬಗ್ಗೆ ಯಾರೂ ಹಿಂದೆಯೂ  ಮಾತನಾಡಿಲ್ಲ ಮತ್ತು ಈಗಲೂ ಮಾತನಾಡುತ್ತಿಲ್ಲ. ಇವರಲ್ಲಿ ಹೆಚ್ಚಿನವರಿಗೆ ದೊಡ್ಡ ಅಪರಾಧಗಳ ಹಿನ್ನೆಲೆ ಇರಲಿಲ್ಲ, ಅವರು ಮಾಡಿದ್ದ ಏಕೈಕ ಅಪರಾಧ ಎಂದರೆ ಸಂಜಯ್‌ದತ್ ಜತೆಗಿನ ಸ್ನೇಹ ಮಾಡಿದ್ದು.
ಈ ಏಳು ಮಂದಿಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಲಯ ಸಂಜಯ್‌ದತ್ ಅವರನ್ನು ಮುಂಬೈ ಬಾಂಬುಸ್ಫೋಟದ ಸಂಚಿನ ಆರೋಪದಿಂದ ಬಿಡುಗಡೆಗೊಳಿಸಿತ್ತು. ಇದರಲ್ಲಿ ಆ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಶಿವಸೇನೆಯ ನಾಯಕ ಬಾಳ್ ಠಾಕ್ರೆ ಪಾತ್ರ ಇತ್ತು. ಮುಸ್ಲಿಮರೆಂದರೆ ಬೆಂಕಿಕಾರುತ್ತಿದ್ದ ಮತ್ತು ಬಾಂಬು ಸ್ಫೋಟದಲ್ಲಿ ಭಾಗವಹಿಸಿದ್ದವರನ್ನೆಲ್ಲ ಗಲ್ಲಿಗೇರಿಸಬೇಕೆಂದು ಮಾತನಾಡುತ್ತಿದ್ದ ಠಾಕ್ರೆ ಅದೇ ಪ್ರಕರಣದ ಒಬ್ಬ ಆರೋಪಿ ಸಂಜಯ್‌ದತ್‌ಗೆ ಯಾಕೆ ನೆರವಾದರು? ಇದರಲ್ಲಿ ಅವರಿಗೆ ಏನು ಆಸಕ್ತಿ ಇತ್ತು? ಈ ಪ್ರಶ್ನೆಗಳ ಬಗ್ಗೆ ಈ ವರೆಗೆ ಚರ್ಚೆಯಾಗಿಲ್ಲ. ಈಗ ಬಾಳ್ ಠಾಕ್ರೆ ಮಾದರಿಯಲ್ಲಿಯೇ ಇತರರು ಮಾತನಾಡತೊಡಗಿದ್ದಾರೆ.
`ಮರಣದಂಡನೆಗೆ ಗುರಿಯಾಗಿರುವವರೆಲ್ಲರೂ ಯಾಕೆ ಸಮಾಜದಲ್ಲಿರುವ ಬಡವರು, ದುರ್ಬಲರು, ದಲಿತರು ಮತ್ತು ಅಲ್ಪಸಂಖ್ಯಾತರು ಮಾತ್ರ ಆಗಿರುತ್ತಾರೆ?' ಎಂದು ಡಾ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಪ್ರಶ್ನಿಸಿದ್ದರು. ಇದೇ ಅಭಿಪ್ರಾಯವನ್ನು ಬೆಂಬಲಿಸುವವರಂತೆ ಮಾತನಾಡಿದ್ದ ಹಿರಿಯ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ` ಯಾಕೆ ಬಡವರು, ಕೆಳಜಾತಿ ಜನರು ಮತ್ತು ವ್ಯವಸ್ಥೆಯನ್ನು ಪ್ರಶ್ನಿಸುವವರು ಮಾತ್ರ ಮರಣದಂಡನೆಗೆ ಗುರಿಯಾಗುತ್ತಾರೆ,  ಶ್ರಿಮಂತರು, ಮೇಲ್ಜಾತಿ ಜನರು ಮತ್ತು ವ್ಯವಸ್ಥೆಯ ಪರಿಪಾಲಕರು ಯಾಕೆ ಮರಣದಂಡನೆಗೀಡಾದವರ ಅಪರಾಧಿಗಳ ಪಟ್ಟಿಯಲ್ಲಿ ಕಾಣುತ್ತಿಲ್ಲ' ಎಂದು ಪ್ರಶ್ನಿಸಿದ್ದರು. ಗಲ್ಲಿಗೇರಲು ಸಿದ್ದವಾಗಿ ಜೈಲಲ್ಲಿ ದಿನ ಎಣಿಸುತ್ತಿರುವ ಅಪರಾಧಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಅಧ್ಯಯನವನ್ನು ಯಾರಾದರೂ ಮಾಡಿದರೆ ಡಾ.ಕಲಾಂ ಮತ್ತು ನ್ಯಾ.ಅಯ್ಯರ್ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಮನುಷ್ಯನ ಸಹಜ ಸ್ವಭಾವಗಳಲ್ಲೊಂದಾದ ಅಪರಾಧಗಳಿಗೆ ಜಾತಿ,ಧರ್ಮ ವರ್ಗಗಳ ಭೇದ ಇಲ್ಲದೆ ಇದ್ದರೂ ಅಪರಾಧಿಗಳಲ್ಲಿ ಮಾತ್ರ ಈ ಭೇದ ಯಾಕೆ ಕಾಣುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಹೋದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ನಾವು ನೋಡಲಿಚ್ಚಿಸದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ.
ಪ್ರಶ್ನೆ ಅಷ್ಟೊಂದು ಕಷ್ಟದ್ದಲ್ಲ. ಎಂತಹ ಘನಘೋರ ಅಪರಾಧಗಳನ್ನು ಮಾಡಿದರೂ ಖ್ಯಾತ ವಕೀಲರನ್ನು ನೇಮಿಸಿಕೊಂಡರೆ ಯಾವ ಕಾನೂನಿನಿಂದಲೂ ಕೂದಲು ಕೊಂಕದ ರೀತಿಯಲ್ಲಿ ಪಾರಾಗಬಹುದೆನ್ನುವುದಕ್ಕೆ ಎಷ್ಟಾದರೂ ಉದಾಹರಣೆಗಳನ್ನು ಕೊಡುತ್ತಾಹೋಗಬಹುದು. ಆದರೆ ಆ ಕ್ಷಣದ ಆವೇಶ, ಅಮಾಯಕತನ ಇಲ್ಲವೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಅಪರಾಧ ಮಾಡಿ ಜೈಲು ಸೇರುವ ದುರ್ಬಲ,ಬಡವ, ಕೆಳಜಾತಿಯ ಕೈದಿಗಳಿಗೆ ದುಬಾರಿ ವಕೀಲರನ್ನು ನೇಮಿಸಿಕೊಳ್ಳುವ ಆರ್ಥಿಕ ಶಕ್ತಿಯೂ ಇರುವುದಿಲ್ಲ. ಒಂದೊಮ್ಮೆ ನ್ಯಾಯಾಲಯ ಜಾಮೀನು ನೀಡಿದರೂ ಅದನ್ನು ಒದಗಿಸುವ ಸಾಮರ್ಥ್ಯ ಅವರಲ್ಲಿಲ್ಲದೆ ಜೈಲಲ್ಲಿಯೇ ಇದ್ದು ಬಿಡುತ್ತಾರೆ. ಎಷ್ಟೊ ಸಂದರ್ಭಗಳಲ್ಲಿ ಒಡೆಯನ ಮೇಲಿನ ಆರೋಪವನ್ನು ಬೆದರಿಕೆಯಿಂದಲೋ, ದುಡ್ಡಿನ ಆಸೆಯಿಂದಲೋ ತಮ್ಮ ತಲೆಮೇಲೆ ಹೊತ್ತು ಜೈಲು ಸೇರುವವರೂ ಇದ್ದಾರೆ. ಸಲ್ಮಾನ್‌ಖಾನ್ ಡ್ರೈವ್ ಮಾಡುತ್ತಿದ್ದ ಕಾರು ಅಪಘಾತ ಮಾಡಿದರೂ ಆರೋಪಿ ಮಾತ್ರ ಆತನ ಚಾಲಕನಾಗಿರುತ್ತಾನೆ.ವಿಚಾರಾಧೀನ ಕೈದಿಗಳಲ್ಲಿ ಬಹುಪಾಲು ಮಂದಿ ಈ ರೀತಿ ದಾಳಗಳಾಗಿ ಬಳಕೆಯಾದವರು. ಸೂತ್ರದಾರರು ಬೇರೆಲ್ಲೊ ಇರುತ್ತಾರೆ. ಅಪರಾಧಗಳ ಸುಪಾರಿ ಕೊಟ್ಟವರನ್ನು ಪೊಲೀಸರು ಬಂಧಿಸಿದ್ದೇ ಕಡಿಮೆ, ಜೈಲು ಸೇರಿದವರಲ್ಲಿ ಹೆಚ್ಚಿನವರು ಕಾಸಿಗಾಗಿ ಸುಪಾರಿ ಪಡೆದು ಕೊಲೆ-ಹಲ್ಲೆ ನಡೆಸಿದವರು. ಸಾಮಾನ್ಯವಾಗಿ ಅವರಿಗೂ ಮತ್ತು ಅವರಿಗೆ ಬಲಿಯಾದವರಿಗೂ ವೈಯಕ್ತಿಕವಾದ ಯಾವ ದ್ವೇಷವೂ ಇರುವುದಿಲ್ಲ.
ಎಂಟುವರ್ಷಗಳ ಹಿಂದೆ ಅಸ್ಸಾಂನ ಗುಡ್ಡಗಾಡು ಜನಾಂಗಕ್ಕೆ ಸೇರಿದ್ದ ಮಾಚಂಗ್ ಲಲುಂಗ್ ಹೆಸರು ಇಡೀ ದೇಶದ ಗಮನ ಸೆಳೆದಿತ್ತು . ಯಾರದ್ದೋ ಮೇಲೆ ಹಲ್ಲೆ ನಡೆಸಿದ್ದ ಕಾರಣಕ್ಕೆ 23ನೇ ವರ್ಷದಲ್ಲಿ ಬಂಧಿತನಾಗಿದ್ದ ಲಲುಂಗ್ 54 ವರ್ಷಗಳನ್ನು ಜೈಲಲ್ಲಿ ಕಳೆದು 77ನೇ ವರ್ಷದಲ್ಲಿ ಬಿಡುಗಡೆಯಾಗಿದ್ದರು. ಅದರ ನಂತರದ ಎರಡೇ ವರ್ಷಗಳಲ್ಲಿ ಅವರು ಮೃತಪಟ್ಟಿದ್ದರು. ಇದು ಒಬ್ಬ ಲಲುಂಗ್ ಅವರಿಗೆ ಸಂಬಂಧಿಸಿದ್ದ ಕತೆಯಲ್ಲ. ಭಾರತದ ಜೈಲುಗಳ ಒಳಗೆ ಇಣುಕಿದರೆ ಇಂತಹ ನೂರಾರು ಲಲುಂಗ್‌ಗಳು ಪತ್ತೆಯಾಗಬಹುದು. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ದೇಶದ 1356 ಜೈಲುಗಳಲ್ಲಿರುವ ಮೂರುವರೆ ಲಕ್ಷ ಕೈದಿಗಳಲ್ಲಿ ವಿಚಾರಣಾಧೀನ ಕೈದಿಗಳೇ ಶೇಕಡಾ 70ರಷ್ಟಿದ್ದಾರೆ. ಈ ವಿಚಾರಾಧೀನ ಕೈದಿಗಳಲ್ಲಿ ಸುಮಾರು 1.75 ಲಕ್ಷ ಕೈದಿಗಳು ಹಲ್ಲೆ, ಕಳ್ಳತನ ಮೊದಲಾದ ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾಗಿದ್ದವರಂತೆ. ಇವರೆಲ್ಲ ತಮ್ಮ ಮೇಲಿನ ಆರೋಪಿತ ಅಪರಾಧಗಳಿಗೆ ನೀಡಲಾಗುವ ಶಿಕ್ಷೆಯನ್ನು ಎಂದೋ ಅನುಭವಿಸಿಬಿಟ್ಟಿದ್ದಾರೆ. ಇಂತಹ ವಿಚಾರಣಾಧೀನ ಕೈದಿಗಳ ಬಗ್ಗೆ ಶೀಘ್ರಗತಿಯಲ್ಲಿ ವಿಚಾರಣೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಕೆಳನ್ಯಾಯಾಲಯಗಳಿಗೆ ಸೂಚನೆ ನೀಡುವಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಎಂ.ವೀರಪ್ಪ ಮೊಯಿಲಿ  ಕಾನೂನು ಸಚಿವರಾಗಿದ್ದ ಪತ್ರ ಬರೆದಿದ್ದರು. ಇದಕ್ಕಾಗಿ ಬಡ ಮತ್ತು ದುರ್ಬಲ ಕೈದಿಗಳಿಗೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ನೀಡಲು ಕೂಡಾ ಸೂಚನೆ ನೀಡಿದ್ದರು. ಆದರೆ ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ.
ಸಂಜೂಬಾಬಾನಿಗಾಗಿ ಕಣ್ಣೀರು ಸುರಿಸುವವರು ಅದರ ಬದಲಿಗೆ ಜೈಲಲ್ಲಿ ಕೊಳೆಯುತ್ತಿರುವ ಆರೋಪಿಗಳ ಶೀಘ್ರ ವಿಚಾರಣೆಗಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಮುಂದಾದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನತೆಯ ವಿಶ್ವಾಸವನ್ನು ಉಳಿಸಲು ನೆರವು ನೀಡಿದ ಪುಣ್ಯವನ್ನಾದರೂ ಕಟ್ಟಿಕೊಳ್ಳಬಹುದು. ಅದನ್ನು ಮಾಡಲಿಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಇಂತಹ `ಗಣ್ಯ ಅಪರಾಧಿ'ಗಳ ನೆರವಿಗೆ ಧಾವಿಸಿ ಪ್ರಜಾಪ್ರಭುತ್ವವನ್ನು ಅಪಹ್ಯಾಸಕ್ಕೀಡು ಮಾಡಬಾರದು, ಬಾಯಿ ಮುಚ್ಚಿಕೊಂಡು ಕೂರಬೇಕು.