Thursday, May 9, 2013

ಬಿಜೆಪಿಗೆ ಮುಖಭಂಗ... ಜೆಡಿಎಸ್‌ಗೆ ಆಶಾಭಂಗ... ಕೆಜೆಪಿಗೆ ಗರ್ವಭಂಗ...

ಬದಲಾವಣೆಗಿದು ಜನಾದೇಶ

ಬೆಂಗಳೂರು: ದುರಾಡಳಿತದ ವಿರುದ್ಧದ ಆಕ್ರೋಶ, `ಆಪರೇಷನ್ ಕಮಲ'ವನ್ನೊಳಗೊಂಡ ಅನೈತಿಕ ರಾಜಕಾರಣಕ್ಕೆ ಪ್ರತಿರೋಧ, ದಕ್ಷ ಆಡಳಿತದ ಆಶಯ ಮತ್ತು ಬದಲಾವಣೆಯ ನಿರೀಕ್ಷೆಯನ್ನೊಳಗೊಂಡ ರಾಜ್ಯದ ಜನಾದೇಶ ಬಿಜೆಪಿ ಹಾಗೂ ಕೆಜೆಪಿಗಳೆರಡನ್ನೂ ಸ್ಪಷ್ಟವಾಗಿ ತಿರಸ್ಕರಿಸಿ ಒಂಬತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡಿದೆ.
ಬಿಜೆಪಿಯನ್ನು ಧ್ವಂಸ ಮಾಡುವ ಉದ್ದೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಫಲರಾದರೂ ತಾವು ಕಟ್ಟಿದ ಕೆಜೆಪಿಯನ್ನು ಪ್ರಾದೇಶಿಕ ಪಕ್ಷದ ರೂಪದಲ್ಲಿ ನೆಲೆಗೊಳಿಸಲು ಅವರು ವಿಫಲರಾಗಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿ ಮತ್ತು ಕೆಜೆಪಿಯನ್ನು ಪ್ರತ್ಯೇಕವಾಗಿ ನೋಡಲು ಹೋಗದೆ ಒಂದೇ ನಾಣ್ಯದ ಎರಡು ಮುಖಗಳೆಂದೇ ಪರಿಗಣಿಸಿ ತಿರಸ್ಕರಿಸಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ನಿರ್ಗಮನದಿಂದ ತಮ್ಮ ಪಕ್ಷ ಕಳಂಕಮುಕ್ತವಾಗಿ ಸ್ವಚ್ಛವಾಗಿದೆ ಎಂಬ ಬಿಜೆಪಿಯ ವಾದ ಮತ್ತು ಬಿಜೆಪಿಯಿಂದ ಅನ್ಯಾಯವಾಗಿದೆ ಎಂಬ ಯಡಿಯೂರಪ್ಪನವರ ಅಳಲುಗಳೆರಡನ್ನೂ ತಳ್ಳಿಹಾಕಿದ್ದಾರೆ.
ಕಳೆದ ಚುನಾವಣೆಯ ಕಾಲದಲ್ಲಿ ಎದುರಾದ ವಚನಭ್ರಷ್ಟತೆಯ ಆರೋಪದಿಂದಾಗಿ ಕುಸಿದುಹೋಗಿದ್ದ ಜಾತ್ಯತೀತ ಜನತಾದಳದ ಸಾಧನೆ ನಿರೀಕ್ಷೆಯನ್ನು ಮೀರಿದ್ದು. ಆದರೆ ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಜೆ.ಡಿ (ಎಸ್) ಗಳಿಸಿದ ಬಹುಪಾಲು ಸ್ಥಾನಗಳು ಹಳೆಮೈಸೂರು ಭಾಗಕ್ಕೆ ಸೇರಿವೆ  (40ರಲ್ಲಿ 27) ಎಂಬುದು ಗಮನಾರ್ಹ. ಇದರಿಂದಾಗಿ ಉತ್ತರಕರ್ನಾಟಕಕ್ಕೆ ದಾಳಿ ಮಾಡಿ `ಗಡಿ ವಿಸ್ತರಣೆ' ಮಾಡುವ ಅದರ ಪ್ರಯತ್ನ ಮತ್ತೊಮ್ಮೆ ವಿಫಲಗೊಂಡಿದೆ. ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಜೆ.ಡಿ (ಎಸ್)ಗಳಿಸಿದ ಸ್ಥಾನಗಳು (5) ಪಕ್ಷದ ನೆಲೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ತೋರಿಸಿದೆ. ಕಾಂಗ್ರೆಸ್ ಪಕ್ಷ ತನ್ನ ಬಲವರ್ಧನೆ ಮಾಡಿಕೊಂಡರೂ ಹಳೆಮೈಸೂರು ಭಾಗದ ತನ್ನ ಸಾಮ್ರಾಜ್ಯವನ್ನು ಜೆಡಿ (ಎಸ್) ಬಿಟ್ಟುಕೊಟ್ಟಿಲ್ಲ.

ಸರ್ಕಾರ ರಚನೆಗೆ ಬೇಕಾದ ಬಹುಮತವನ್ನಷ್ಟೇ ಪಡೆದಿರುವ ಕಾಂಗ್ರೆಸ್ ಪಕ್ಷ ಗೆಲುವಿನಿಂದ ಬೀಗುವ ಸ್ಥಿತಿಯಲ್ಲಿ ಇಲ್ಲ. ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಆಡಳಿತ ವೈಫಲ್ಯದಿಂದಾಗಿ ನಾಗರಿಕರಲ್ಲಿ ಹುಟ್ಟಿಕೊಂಡಿರುವ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಇದರ ಜತೆಗೆ ಟಿಕೆಟ್ ಹಂಚಿಕೆಯಿಂದಾಗಿ ಉದ್ಭವವಾಗಿರುವ ಭಿನ್ನಮದಿಂದಾಗಿ ಸುಲಭದಲ್ಲಿ ಗೆಲ್ಲಬಹುದಾದ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಪಕ್ಷದ ರಾಜ್ಯ ಅಧ್ಯಕ್ಷರೇ ಮರು ಆಯ್ಕೆಯಾಗಲು ವಿಫಲಗೊಂಡಿರುವುದು ಗೆಲುವಿನ ಸಂಭ್ರಮವನ್ನು ತುಸು ಮಂಕುಗೊಳಿಸಿದೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಉದ್ದನೆಯ ಪಟ್ಟಿಯಲ್ಲಿದ್ದ ಒಂದು ಹೆಸರು ಕಡಿಮೆಯಾಗಿದೆ ಅಷ್ಟೆ.
ಚುನಾವಣಾಪೂರ್ವ ಸಮೀಕ್ಷೆಯಲ್ಲಿ `ಪ್ರಜಾವಾಣಿ' ನಿರೀಕ್ಷಿಸಿದಂತೆಯೇ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಮತದಾರರು ಜನಾದೇಶದ `ಆಟ ಬದಲಿಸಿದ್ದಾರೆ'. ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಮುಂಬೈ ಕರ್ನಾಟಕದಲ್ಲಿರುವ ಒಟ್ಟು 50 ಸ್ಥಾನಗಳಲ್ಲಿ ಕಳೆದ ಬಾರಿ ಬಿಜೆಪಿ 36 ಸ್ಥಾನಗಳನ್ನು ಗಳಿಸಿದ್ದರೆ ಈ ಬಾರಿ ಅದಕ್ಕೆ ಉಳಿಸಲು ಸಾಧ್ಯವಾಗಿದ್ದು ಹನ್ನೆರಡು ಮಾತ್ರ. ಇದೇ ವೇಳೆ ಕಳೆದ ಚುನಾವಣೆಯಲ್ಲಿ ಕೇವಲ 12 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ ತನ್ನ ಬಲವನ್ನು 31ಕ್ಕೆ ಹೆಚ್ಚಿಸಿಕೊಂಡಿದೆ.
ಹೈದರಾಬಾದ್ ಕರ್ನಾಟಕದಲ್ಲಿಯೂ ಸ್ಥಾನಪಲ್ಲಟ ಸ್ಪಷ್ಟವಾಗಿದೆ. ಗುಲ್ಬರ್ಗ, ಬೀದರ್, ರಾಯಚೂರು ,ಕೊಪ್ಪಳ ಮತ್ತು ಬಳ್ಳಾರಿಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದಲ್ಲಿರುವ ಒಟ್ಟು 39 ಸ್ಥಾನಗಳಲ್ಲಿ ಕಳೆದ ಬಾರಿ 19ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಐದು ಮಾತ್ರ. ಇದಕ್ಕೆ ವಿರುದ್ಧವಾಗಿ 15 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ 21ಕ್ಕೆ ತನ್ನ ಬಲ ವೃದ್ಧಿಸಿಕೊಂಡಿದೆ. ಈ `ಎರಡು ಕರ್ನಾಟಕ'ಗಳ ಒಟ್ಟು 89 ಸ್ಥಾನಗಳ ಪೈಕಿ ಬಿಜೆಪಿ ಬಲ 55ರಿಂದ 17ಕ್ಕೆ ಇಳಿದಿರುವುದು ಮತ್ತು ಕಾಂಗ್ರೆಸ್ ಬಲ 22ರಿಂದ 55ಕ್ಕೆ ಹೆಚ್ಚಿರುವುದು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿರುವ ಮುಖ್ಯ ಬೆಳವಣಿಗೆ. ಕುಸಿದುಹೋಗಿರುವ ಜನಪ್ರಿಯತೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೋಡಿ ಎತ್ತಿಹಿಡಿಯುತ್ತದೆ ಎಂದು ನಿರೀಕ್ಷಿಸಿದ್ದ ಬಿಜೆಪಿಯ ನಿರೀಕ್ಷೆ ಹುಸಿಯಾಗಿರುವುದಕ್ಕೆ ರಾಜ್ಯದ ಕರಾವಳಿ ಭಾಗದ ಫಲಿತಾಂಶವೇ ಸಾಕ್ಷಿ.
`ಹಿಂದುತ್ವದ ಪ್ರಯೋಗಶಾಲೆ' ಎಂದೇ ಬಣ್ಣಿಸಲಾಗುತ್ತಿದ್ದ ರಾಜ್ಯದ ಕರಾವಳಿ ಭಾಗದಲ್ಲಿಯೂ ಮೋದಿ ಪ್ರಚಾರವು ಬಿಜೆಪಿ ದೂಳಿಪಟವಾಗುವುದನ್ನು ತಪ್ಪಿಸಲಾಗಿಲ್ಲ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಹದಿಮೂರು ಕ್ಷೇತ್ರಗಳಲ್ಲಿ ಹತ್ತರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿಗೆ ಉಳಿಸಿಕೊಂಡಿರುವುದು ಎರಡನ್ನು ಮಾತ್ರ. ನೈತಿಕ ಪೊಲೀಸ್‌ಗಿರಿ ಮತ್ತು ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ದದ ಸ್ಪಷ್ಟವಾದ ತೀರ್ಪನ್ನು ಕರಾವಳಿಯ ಮತದಾರರು ನೀಡಿದ್ದಾರೆ.
ಮೋದಿ ಭಾಷಣಕ್ಕೆ ಹೇಗೆ ಜನ ಮರುಳಾಗಿಲ್ಲವೋ ಹಾಗೆಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆಯೂ ರಾಜ್ಯದ ಮತದಾರರು ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯನ್ನು ಪ್ರತ್ಯೇಕವಾಗಿ ಗಮನಿಸುವ ಪ್ರಬುದ್ಧತೆ ಇದಕ್ಕೆ ಕಾರಣ ಇರಬಹುದು. `ಆಪರೇಷನ್ ಕಮಲ'ದ ದೌರ್ಬಲ್ಯಕ್ಕೆ ಬಲಿಯಾಗಿದ್ದ ಪ್ರಮುಖರನ್ನು ಸೋಲಿಸುವ ಮೂಲಕ ದುಡ್ಡಿನ ಬಲದಿಂದ ಜನಾಭಿಪ್ರಾಯವನ್ನೂ ಖರೀದಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಕೂಡಾ ಮತದಾರರು ಹುಸಿಗೊಳಿಸಿದ್ದಾರೆ. ಹಣದ ಹೊಳೆ ಹರಿಸಿದ ಅನೇಕ ಸಿರಿವಂತ ಅಭ್ಯರ್ಥಿಗಳು ಸೋಲಿನ ಶಿಕ್ಷೆಗೆ ಈಡಾಗಿದ್ದಾರೆ.
ಈ ಚುನಾವಣೆಯಲ್ಲಿ ಜಾತಿ ವಹಿಸಿರುವ ಪಾತ್ರವನ್ನು ನಿರಾಕರಿಸಲಾಗದಿದ್ದರೂ ನಿರ್ದಿಷ್ಟ ಜಾತಿಯ ಜನರು ಯಾವುದಾದರೂ ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನನ್ನು ಬೆಂಬಲಿಸುತ್ತಾರೆಂಬ ಜನಪ್ರಿಯ ಅಭಿಪ್ರಾಯವನ್ನು ಮತದಾರರು ಹುಸಿಗೊಳಿಸಿದ್ದಾರೆ. ವೀರಶೈವ ಮಠಗಳಿಗೆ ಉದಾರವಾಗಿ ಬಜೆಟ್‌ನಲ್ಲಿ ಹಣ ನೀಡಿದ ಯಡಿಯೂರಪ್ಪನವರನ್ನು ಲಿಂಗಾಯತರ ಪ್ರಶ್ನಾತೀತ ನಾಯಕರೆಂದೇ ಬಿಂಬಿಸಲಾಗಿದ್ದರೂ ಕೆಜೆಪಿಗೆ ಆ ಜಾತಿಯ ಮತದಾರರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ ಎನ್ನುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಇದೇ ವೇಳೆ ಅನೇಕ ಕ್ಷೇತ್ರಗಳಲ್ಲಿ ಜಾತಿ ಬಲ ಇಲ್ಲದ ವೈ.ಎಸ್.ವಿ.ದತ್ತ, ರಮೇಶ್‌ಕುಮಾರ್, ಅಭಯಚಂದ್ರ ಜೈನ್, ಡಿ.ಸುಧಾಕರ್, ಅಜಯಸಿಂಗ್ ಮೊದಲಾದ ನಾಯಕರನ್ನು ಮತದಾರರು ತಮ್ಮ  ಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಮೇಲುಕೋಟೆ ಕ್ಷೇತ್ರದಿಂದ ರೈತಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಆಯ್ಕೆಯಾಗಿರುವುದು ಕೂಡಾ ಚುನಾವಣಾ ಫಲಿತಾಂಶದ ಅಚ್ಚರಿಗಳಲ್ಲೊಂದು.
ಆಡಳಿತ ವಿರೋಧಿ ಅಲೆಯಲ್ಲಿ ಸೋಮಣ್ಣ, ಎ.ರಾಮದಾಸ್, ಮುರುಗೇಶ ನಿರಾಣಿ, ಬಚ್ಚೇಗೌಡ, ಸೊಗಡು ಶಿವಣ್ಣ ಸೇರಿದಂತೆ ರಾಜ್ಯದ ಹನ್ನೆರಡು ಸಚಿವರು ಕೊಚ್ಚಿಕೊಂಡು ಹೋಗಿದ್ದಾರೆ. ಕೊನೆ ಗಳಿಗೆಯಲ್ಲಿ ಸರ್ಕಾರದಿಂದ ಹೊರಬಂದರೂ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಸದನದಲ್ಲಿ ಬ್ಲೂಫಿಲಂ ವೀಕ್ಷಣೆಯ ಆರೋಪಕ್ಕೊಳಗಾಗಿರುವ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಸೋಲುಂಡಿದ್ದಾರೆ. ಇದೇ ವೇಳೆ  ಎಚ್.ಕೆ.ಪಾಟೀಲ್, ರಮೇಶಕುಮಾರ್. ಹಾಲಾಡಿ ಶ್ರಿನಿವಾಸ ಶೆಟ್ಟಿ, ಬಿ.ಆರ್.ಪಾಟೀಲ್, ಸುರೇಶ್‌ಕುಮಾರ್ ಡಾ.ಎ.ಬಿ.ಮಾಲಕರೆಡ್ಡಿ. ಕಾಗೋಡು ತಿಮ್ಮಪ್ಪ , ಕಿಮ್ಮನೆ ರತ್ನಾಕರ, ವೈ.ಎಸ್.ವಿ.ದತ್ತ ಮೊದಲಾದ ಒಂದಷ್ಟು ಸಜ್ಜನ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಜನ ಗೆಲ್ಲಿಸಿದ್ದಾರೆ.
1999ರ ಚುನಾವಣೆಯ ನಂತರ ಬೆಳಗಾವಿ ನಗರದಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲಾಗದ ಎಂಇಎಸ್ ತಣ್ಣಗಾಗಿತ್ತು. ಈ ಬಾರಿ ಅದು ನಗರದಲ್ಲಿ ಮತ್ತೆ ಖಾತೆ ತೆರೆದಿದೆ. ಆ ಸಂಘಟನೆಯ ಬೆಂಬಲ ಪಡೆದು ಆಯ್ಕೆಯಾಗಿರುವ ಇಬ್ಬರು (ಖಾನಾಪುರದಲ್ಲಿ ಸ್ಥಾನ ಉಳಿಸಿಕೊಂಡಿದೆ) ಶಾಸಕರು ಮತ್ತೆ ಗಡಿವಿವಾದವನ್ನು ಕೆದಕುವ ದುಸ್ಸಾಹಸ ಮಾಡಬಹುದು. ಇನ್ನೊಂದು ಬೆಳವಣಿಗೆಯಲ್ಲಿ ಚಾಮರಾಜನಗರದ ಕನ್ನಡ ಚಳಚಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೋತುಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸ್ಪರ್ಧಿಸಿದ್ದ ಸಿಪಿಎಂನ ಜಿ.ವಿ. ಶ್ರೀರಾಮ ರೆಡ್ಡಿ ಅವರ ಸೋಲಿನೊಂದಿಗೆ ವಿಧಾನಸಭೆಯಲ್ಲಿ ಮತ್ತೆ ಖಾತೆ ತೆರೆಯುವ ಅವಕಾಶವನ್ನು ಎಡ ಪಕ್ಷ ಕಳೆದುಕೊಂಡಿದೆ.

Monday, May 6, 2013

ಕಾಂಗ್ರೆಸ್ ಸರ್ಕಾರ ರಚಿಸಬಹುದು, ಆದರೆ...?

ರ್ನಾಟಕದಲ್ಲಿ ಈ ಬಾರಿ ಚುನಾವಣೋತ್ತರ ಭವಿಷ್ಯ ನುಡಿಯುವುದಕ್ಕೆ ಚುನಾವಣಾ ಶಾಸ್ತ್ರದ ಪರಿಣತಿ ಬೇಕಾಗಿಲ್ಲ. ಮೊದಲಿನ ನಾಲ್ಕು ಸ್ಥಾನಗಳ
ಲ್ಲಿ ಯಾರು ಇರುತ್ತಾರೆ ಎನ್ನುವುದು ಚುನಾವಣೆ ಘೋಷಣೆಯಾಗುವ ದಿನವೇ ನಿರ್ಧಾರವಾಗಿದೆ. ಅದು ಕ್ರಮವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ಮತ್ತು ಕೆಜೆಪಿ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವುದನ್ನು ಊಹಿಸುವುದು ಕೂಡಾ ಕಷ್ಟದ ಕೆಲಸ ಅಲ್ಲ, ಅದು ಕಾಂಗ್ರೆಸ್. ಯಾವ ಪಕ್ಷದವರು ಮುಖ್ಯಮಂತ್ರಿಯಾಗಬಹುದು ಎನ್ನುವುದನ್ನು ಕೂಡಾ ಹೇಳಿಬಿಡಬಹುದು, ಅದೂ ಕಾಂಗ್ರೆಸ್. ಇಷ್ಟು ಹೇಳಿದ ಮಾತ್ರಕ್ಕೆ ಚುನಾವಣೋತ್ತರ ಭವಿಷ್ಯ ಪೂರ್ಣವಾಗುವುದಿಲ್ಲ. ಯಾಕೆಂದರೆ ಇದರೊಳಗೆ ಒಂದಷ್ಟು ಒಳಸುಳಿಗಳಿವೆ.
ಕಾಂಗ್ರೆಸ್ ಎಷ್ಟೇ ಕಡಿಮೆ ಸ್ಥಾನಗಳಿಸಿದರೂ ಎಂಬತ್ತಕ್ಕಿಂತ ಕೆಳಗಿಳಿಯಲಾರದು. ಅದು 80,90,100,120 ಹೀಗೆ ಯಾವುದೇ ಸಂಖ್ಯೆಯಲ್ಲಿ ಹೋಗಿ ನಿಲ್ಲಬಹುದು. ಚುನಾವಣಾಪೂರ್ವ ಮೈತ್ರಿ ಇಲ್ಲದ ಸಂದರ್ಭಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ಹಾನಿಸುವುದು ಸಂಪ್ರದಾಯ. ಇದನ್ನು ಮುರಿದ ಅನೇಕ ಪ್ರಸಂಗಗಳಿದ್ದರೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರ ರಾಜ್ಯಪಾಲರೆಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳತೊಡಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಒಂದು ಅನುಕೂಲತೆ ಇದೆ. ಇಲ್ಲಿನ ರಾಜ್ಯಪಾಲರು ಒಂದು ಕಾಲದಲ್ಲಿ ಕಾಂಗ್ರೆಸಿಗರಾಗಿದ್ದವರು ಮಾತ್ರವಲ್ಲ ತಮ್ಮ ಹಳೆಯ ಪಕ್ಷದ ಬಗೆಗಿನ ಒಲವನ್ನು ಬಚ್ಚಿಟ್ಟುಕೊಳ್ಳಲಾಗದಷ್ಟು ಪಕ್ಷ ನಿಷ್ಠರಾಗಿರುವುದರಿಂದ ಮೊದಲ ಆಹ್ವಾನ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಖಾತರಿ.
ಒಮ್ಮೆ ರಾಜ್ಯಪಾಲರಿಂದ ಆಹ್ವಾನ ಬಂದುಬಿಟ್ಟರೆ ಬಹುಮತವನ್ನು ಗಳಿಸುವುದು ಯಾವ ರಾಜಕೀಯ ಪಕ್ಷಕ್ಕೂ ಕಷ್ಟದ ಕೆಲಸ ಅಲ್ಲ.
ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ಎಂಬತ್ತು ತಲುಪಬಲ್ಲ ಇಲ್ಲವೆ ಅದಕ್ಕಿಂತಲೂ ಮುಂದೆ ಹೋಗಬಲ್ಲ ಯಾವ ರಾಜಕೀಯ ಪಕ್ಷವೂ ಸದ್ಯ ಚುನಾವಣಾ ಕಣದಲ್ಲಿ ಇಲ್ಲ. ಸ್ವಂತ ಬಲದಿಂದ ಸರ್ಕಾರ ರಚಿಸುವುದಾಗಿ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಕೂಗಿ ಕೂಗಿ ಹೇಳಿದರೂ ಖಾಸಗಿಯಾಗಿ ಅವರು ಕೊಡುವ ಲೆಕ್ಕಾಚಾರ ಅರವತ್ತರ ಸಂಖ್ಯೆಯನ್ನು ದಾಟುವುದಿಲ್ಲ. ದೇವೇಗೌಡರು ತಮ್ಮ ಪಕ್ಷವೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಎಂದು ಗುಡುಗಿದರೂ ಅವರ ಶಾಸಕರ ಸಂಖ್ಯೆ 30-40ಕ್ಕಿಂತ ಮೇಲೇರಲಾರದು. ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ನಾಯಕ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿರುವ ಪ್ರಕಾರ ಅವರ ನಿರೀಕ್ಷೆಯ ಗರಿಷ್ಠ ಸಂಖ್ಯೆ ಅರವತ್ತು.
ಯಡಿಯೂರಪ್ಪನವರ ಲೆಕ್ಕದ ಮೂರನೆ ಒಂದರಷ್ಟು ಸ್ಥಾನಗಳನ್ನು ಗೆದ್ದರೂ ಅದು ಅವರ ಪಕ್ಷದ ದೊಡ್ಡ ಸಾಧನೆ. `ಸ್ವಂತಬಲದಿಂದ ಸರ್ಕಾರ ರಚಿಸಲಿದ್ದೇವೆ' ಎಂದು ದೇವೇಗೌಡ ಇಲ್ಲವೆ ಯಡಿಯೂರಪ್ಪನವರು ಹೇಳುತ್ತಿಲ್ಲ, `ನಮ್ಮನ್ನು ಬಿಟ್ಟು ಬೇರೆಯವರು ಸರ್ಕಾರ ರಚನೆ ಮಾಡುವುದು ಸಾಧ್ಯ ಇಲ್ಲ' ಎಂದಷ್ಟೇ ಅವರ ವಾದ. ಈ ರೀತಿ ಕಾಂಗ್ರೆಸ್ ಪಕ್ಷವೇ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ವಿರೋಧಪಕ್ಷಗಳೇ ಪರೋಕ್ಷವಾಗಿ ಒಪ್ಪಿಕೊಂಡಿರುವಾಗ ಸರ್ಕಾರ ರಚನೆಗಾಗಿ  ಕಾಂಗ್ರೆಸ್ ಪಕ್ಷ ಮೊದಲ ಆಹ್ವಾನ ಪಡೆಯುವುದಕ್ಕೆ ಏನು ಅಡ್ಡಿ ಇದೆ?
ಕಾಂಗ್ರೆಸ್ ಪಕ್ಷವೇನೋ ಸರ್ಕಾರ ರಚಿಸಿಬಿಡಬಹುದು. ಆದರೆ ಆ ಸರ್ಕಾರ ಏಕಪಕ್ಷದ್ದೇ ಇಲ್ಲವೆ ಮೈತ್ರಿಕೂಟದ್ದೇ? ಎನ್ನುವುದನ್ನು ಮಾತ್ರ  ಚುನಾವಣಾ ಫಲಿತಾಂಶ ನಿರ್ಧರಿಸಬೇಕಾಗಿದೆ. ಬಹುಮತಕ್ಕೆ ಬೇಕಾಗಿರುವ 113 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ ವಿಧಾನಸೌಧ ಪ್ರವೇಶಿಸಲು ಬೇರೆಯವರ ನೆರವು ಬೇಕಾಗಲಾರದು. ಒಂದೊಮ್ಮೆ ಅದು 105ರ ವರೆಗೂ ಇಳಿದರೂ ಸಮಸ್ಯೆಯಾಗಲಾರದು, ಏಳೆಂಟು ಪಕ್ಷೇತರರು ಮತ್ತುಬಂಡುಕೋರರು ಆರಿಸಿಬರುವ ಸಾಧ್ಯತೆ ಇರುವುದರಿಂದ ಅವರನ್ನು ಕಟ್ಟಿಕೊಂಡು ಸರ್ಕಾರ ರಚಿಸಬಹುದು. ಆದರೆ ನೂರು ಇಲ್ಲವೆ ಅದಕ್ಕಿಂತಲೂ ಕೆಳಗಿಳಿದರೆ ಮಿತ್ರಪಕ್ಷಗಳನ್ನು ಹುಡುಕುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಂದೆ ಇರುವುದು ಎರಡೇ ಆಯ್ಕೆ - ಜಾತ್ಯತೀತ ಜನತಾದಳ ಮತ್ತು ಕರ್ನಾಟಕ ಜನತಾ ಪಕ್ಷ. ಚುನಾವಣಾ ಪ್ರಚಾರವನ್ನು ಗಮನಿಸಿದರೆ ಈ ಎರಡು ಪಕ್ಷಗಳಲ್ಲಿ ಜೆಡಿ(ಎಸ್) ನಿರಂತರವಾಗಿ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಪಕ್ಷದ ವಿರುದ್ಧ. ಬಿಜೆಪಿ ಬಗೆಗಿನ ಅದರ ಮೆದುಧೋರಣೆ `ಎರಡು ಪಕ್ಷಗಳೊಳಗೆ ಒಳಒಪ್ಪಂದ ಆಗಿದೆ' ಎಂದು ಆರೋಪಿಸುವಷ್ಟು ಎದ್ದು ಕಾಣುತ್ತಿತ್ತು. ಅಧಿಕಾರಾರೂಢ ಪಕ್ಷ ಬಿಜೆಪಿಯಾದರೂ ಜೆಡಿ (ಎಸ್) ಆ ಪಕ್ಷವನ್ನು ಕಾಂಗ್ರೆಸ್‌ನಷ್ಟು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿಲ್ಲ ಎನ್ನುವುದು ಗಮನಾರ್ಹ.
ಇದೇ ರೀತಿ ಕೆಜೆಪಿ ಗುರಿ ಮಾಡಿದ್ದು ಜೆಡಿ (ಎಸ್) ಮತ್ತು ಬಿಜೆಪಿಯನ್ನು ಕಾಂಗ್ರೆಸ್ ಪಕ್ಷವನ್ನಲ್ಲ. ಚುನಾವಣಾ ಪ್ರಚಾರದ ಮಧ್ಯೆ ಮಾತಿಗೆ ಸಿಕ್ಕಿದ್ದ ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪನವರು ಕಾಂಗ್ರೆಸ್ ಮತ್ತು ಕೆಜೆಪಿ ಮೈತ್ರಿಕೂಟದ ಸರ್ಕಾರದ ಇಂಗಿತ ವ್ಯಕ್ತಪಡಿಸಿದ್ದರು. ಸ್ಪಷ್ಟವಾಗಿ ಏನನ್ನೂ ಹೇಳದೆ ಇದ್ದರೂ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರ ಮೇಲೆ ವಿಪರೀತ ಭರವಸೆಯಿಂದ ಅವರು ಮಾತನಾಡಿ ಅಚ್ಚರಿಗೊಳಿಸಿದ್ದರು. ಯಡಿಯೂರಪ್ಪನರು ಇನ್ನೂ ಸಿಬಿಐ ಕಣ್ಗಾವಲಿನಲ್ಲಿ ಇರುವುದರಿಂದ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸುಲಭ ಮತ್ತು ವೈಯಕ್ತಿಕವಾಗಿ ದೇವೇಗೌಡರಿಗಿಂತ ಇವರು ವಾಸಿ ಎನ್ನುವ ಕಾಂಗ್ರೆಸ್ ನಾಯಕರ ಅಭಿಪ್ರಾಯ ನಿಜ ಇರಬಹುದು. ಆದರೆ ಕೆಜೆಪಿ ಜತೆ ಮೈತ್ರಿಗೆ ಕಾಂಗ್ರೆಸ್ ಸಿದ್ಧ ಇದೆಯೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ಯಾವ ಮುಖ ಹೊತ್ತು ಅವರ ನೇತೃತ್ವದ ಪಕ್ಷದ ಜತೆ ಮೈತ್ರಿ ಮಾಡಲು ಸಾಧ್ಯ? ಇನ್ನೇನು ಒಂದು ವರ್ಷದೊಳಗೆ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ಯಡಿಯೂರಪ್ಪನವರನ್ನು ಕಟ್ಟಿಕೊಂಡು ಎದುರಿಸಲು ಸಾಧ್ಯವೇ?
ಇದು ಸಾಧ್ಯ ಇಲ್ಲ ಎಂದಾದರೆ ಕಾಂಗ್ರೆಸ್‌ಗೆ ಉಳಿದಿರುವ ಆಯ್ಕೆ ಜೆಡಿ (ಎಸ್). ಈ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದರ ಬದಲಿಗೆ ವಿರೋಧಪಕ್ಷದಲ್ಲಿ ಕೂರುವುದು ಒಳ್ಳೆಯ ಮಾರ್ಗ ಎನ್ನುವವರು ಕಾಂಗ್ರೆಸ್‌ನಲ್ಲಿ ಬಹಳ ಸಂಖ್ಯೆಯಲ್ಲಿದ್ದಾರೆ.  ಈ ಮೈತ್ರಿಯಲ್ಲಿ ಸೈದ್ಧಾಂತಿಕವಾದ ತೊಡಕುಗಳಿಲ್ಲ, ನೈತಿಕ ಪ್ರಶ್ನೆಗಳ ಮುಜುಗರವೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿದರೆ ಬಿಜೆಪಿಯನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಕೂಡಾ ಒಪ್ಪುವಂತಹದ್ದು. ಆದರೆ ಈ ಮೈತ್ರಿ ಬಗ್ಗೆ ಇಡೀ ಕಾಂಗ್ರೆಸ್ ಪಕ್ಷದಲ್ಲಿ ಭಯ ಇದೆ. ಹಿಂದಿನ ಇಪ್ಪತ್ತು ತಿಂಗಳ ಅವಧಿಯ ಮೈತ್ರಿ ಸರ್ಕಾರದ ದುಃಸ್ವಪ್ನ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ದೇವೇಗೌಡರ ಜತೆ ಚೌಕಾಶಿ ಮಾಡುವುದು ಸುಲಭದ ಕೆಲಸ ಅಲ್ಲ. ಕಾಂಗ್ರೆಸ್ ಕಡೆಯಿಂದ ಮೈತ್ರಿ ಕೋರಿ ಯಾರಾದರೂ ಕೈಚಾಚಿದರೆ ಗೌಡರು ಹಳೆಸಾಲವನ್ನೆಲ್ಲ ಬಡ್ಡಿ ಸಮೇತ ತೀರಿಸಿಕೊಳ್ಳಲು ಮುಂದಾಗಬಹುದು.
ದೇವೇಗೌಡರಿಗೆ ಸಂಪೂರ್ಣ ಶರಣಾಗಿ  ಜೆಡಿ (ಎಸ್) ಜತೆ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷ ಮೊದಲ ಬಂಡಾಯವನ್ನು ಮನೆಯೊಳಗಿಂದಲೇ ಎದುರಿಸಬೇಕಾಗಬಹುದು. ಜೆಡಿ (ಎಸ್) ಜತೆ ಮೈತ್ರಿ ಏರ್ಪಟ್ಟರೆ  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ದೇವೇಗೌಡರು ಖಂಡಿತ ಒಪ್ಪಲಾರರು.  ಜೀವಂತವಿರುವಾಗಲೇ ಬೀದಿಗಳಲ್ಲಿ ಸಿದ್ದರಾಮಯ್ಯನವರ ಬೆಂಬಲಿಗರು ತನ್ನ `ಹೆಣ'ಸುಟ್ಟದ್ದನ್ನು ಮರೆತುಬಿಡುವವರು ಗೌಡರಲ್ಲ. ದೇವೇಗೌಡರಿಂದ ಇಂತಹದ್ದೊಂದು ಷರತ್ತು ಎದುರಾದರೆ ಅದನ್ನು ಸಿದ್ದರಾಮಯ್ಯ ಸುಮ್ಮನಿದ್ದು ಸಹಿಸಿಕೊಳ್ಳುವವರೂ ಅಲ್ಲ. ಪಕ್ಷ ತೊರೆಯುವ ಅತಿರೇಕದ ನಿರ್ಧಾರವನ್ನು ಕೈಗೊಳ್ಳಲು ಕೂಡಾ ಅವರು ಹಿಂಜರಿಯಲಾರರು. ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ತನ್ನ ಬೆಂಬಲಿಗರಿಗೂ ಒಂದಷ್ಟು ಟಿಕೆಟ್ ಕೊಡಿಸಿರುವುದರಿಂದ ಒಂದೊಮ್ಮೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಾಲಿಟ್ಟರೆ ಜತೆಯಲ್ಲಿ ಒಂದಷ್ಟು ಶಾಸಕರೂ ಅವರನ್ನು ಹಿಂಬಾಲಿಸಬಹುದು. ಇಂತಹ ಸಂದರ್ಭದಲ್ಲಿ ಜೆಡಿ (ಎಸ್) ಬೆಂಬಲದ ಮೂಲಕ ಸಂಖ್ಯೆಯನ್ನು ಹೊಂದಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಲಾರದು ನಿಜ, ಆದರೆ ದೇವೇಗೌಡರನ್ನು ನಂಬಿಕೊಂಡು ಸಿದ್ದರಾಮಯ್ಯನವರನ್ನು ತ್ಯಾಗ ಮಾಡಲು ಕಾಂಗ್ರೆಸ್ ಮುಂದಾಗಬಹುದೇ?
ಈ ಎರಡು ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸಂಖ್ಯಾಬಲ ಗಳಿಸುವ ಮೂರನೆಯ ದಾರಿಯೂ ಇದೆ, ಇದು ಅಡ್ಡದಾರಿ. ಇದು ಕಳೆದ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಹಿಡಿದ ದಾರಿಯೂ ಹೌದು. ಈ ಬಾರಿ ಕಾಂಗ್ರೆಸ್ ಇಂತಹ ಅಡ್ಡದಾರಿ ಹಿಡಿದರೆ ಅದಕ್ಕೆ ಬಲಿಯಾಗಲಿರುವುದು ಅದೇ ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಜನತಾ ಪಕ್ಷ. ಕೆಜೆಪಿ 30ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದರೆ `ಮನೆಮುರಿಯುವುದು' ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು. ಒಂದೊಮ್ಮೆ ಕೆಜೆಪಿ 15-20ರಲ್ಲಿ ಉಳಿದುಬಿಟ್ಟರೆ `ಆಪರೇಷನ್ ಕೈ' ನಡೆಯಬಹುದು. ಬಿಜೆಪಿಯಂತೆ ಶಾಸಕರಿಂದ ರಾಜೀನಾಮೆ ಕೊಡಿಸದೆ ನೇರವಾಗಿ ಕೆಜೆಪಿಯ ಮೂರನೆಯ ಎರಡರಷ್ಟು ಶಾಸಕರನ್ನು ಕಾಂಗ್ರೆಸ್ ಹೊತ್ತುಕೊಂಡು ಹೋಗಬಹುದು. ವೈಯಕ್ತಿಕ ಮತ್ತು ರಾಜಕೀಯ ನಡವಳಿಕೆಯ ಹಲವಾರು ಮಾದರಿಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರನ್ನು ಹೋಲುವ ಯಡಿಯೂರಪ್ಪನವರು ಈ ವಿಷಯದಲ್ಲಿಯೂ ಸೊರಬದ ಸರದಾರ ಎದುರಿಸಿದ ಪರಿಸ್ಥಿತಿಯನ್ನೇ ಎದುರಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. 2004ರಲ್ಲಿ ಬಂಗಾರಪ್ಪನವರು ಸ್ವತಂತ್ರ ಪಕ್ಷ ಕಟ್ಟಿ ಗೆಲ್ಲಿಸಿಕೊಂಡು ಬಂದ ಹತ್ತು ಶಾಸಕರಲ್ಲಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಜನತಾದಳ ಸೇರಿಬಿಟ್ಟಿದ್ದರು. ಅದೇ ರೀತಿ ಯಡಿಯೂರಪ್ಪನವರೂ ತನ್ನ ಶಾಸಕರ ಪಕ್ಷದ್ರೋಹಕ್ಕೆ ಬಲಿಯಾಗಲೂಬಹುದು. ಇಂತಹ `ಆಪರೇಷನ್'ಗಳಲ್ಲಿ ಕಾಂಗ್ರೆಸ್ ಹಳೆಯ ವೈದ್ಯ ಎನ್ನುವುದನ್ನು ಮರೆಯಬಾರದು.
ಇದರ ಹೊರತಾಗಿ ಸರ್ಕಾರ ರಚನೆಯ ಇನ್ನೊಂದು ಸಾಧ್ಯತೆಯೂ ಇದೆ. ರಾಜ್ಯದ ಒಟ್ಟು 224 ಸ್ಥಾನಗಳಲ್ಲಿ ಕಾಂಗ್ರೆಸ್ ನೂರನ್ನು ಗೆದ್ದರೂ ಉಳಿಯುವುದು 124 ಎನ್ನುವುದು ಸರಳ ಲೆಕ್ಕ. ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಈ 124 ಶಾಸಕರು ಒಟ್ಟಾಗಿಬಿಟ್ಟರೆ? ಅಂದರೆ ಬಿಜೆಪಿ,ಕೆಜೆಪಿ,ಜೆಡಿ (ಎಸ್),ಬಿಎಸ್‌ಆರ್ ಮತ್ತು ಪಕ್ಷೇತರರೆಲ್ಲರೂ ಒಂದಾಗಿಬಿಟ್ಟರೆ? ಈ ರೀತಿ  ಮೈತ್ರಿಕೂಟ ಸರ್ಕಾರದ ರಚನೆ  ಅಸಾಧ್ಯವಲ್ಲ. ಆದರೆ ಇದು ಸಾಧ್ಯವಾಗಬೇಕಾದರೆ ಮೊದಲ ಆಹ್ಹಾನ ಪಡೆದ ಕಾಂಗ್ರೆಸ್ ಬಹುಮತವನ್ನು ಹೊಂದಿಸಿಕೊಳ್ಳಲಾಗದೆ ಅವಕಾಶವನ್ನು ಬಿಟ್ಟುಕೊಡಬೇಕು ಮತ್ತು ಜೆಡಿ (ಎಸ್) ಹಾಗೂ ಕೆಜೆಪಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಸೇರಿಕೊಳ್ಳುವುದಿಲ್ಲ ಎನ್ನುವ ದೃಢ ನಿರ್ಧಾರ ಕೈಗೊಳ್ಳಬೇಕು. ಆದರೆ ಈ ಎರಡು ಪಕ್ಷಗಳಲ್ಲಿ ಕನಿಷ್ಠ ಕೆಜೆಪಿಯ ಮಂಡಿ ಊರಿಸುವುದು ಹೇಗೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತು. ಸಿಬಿಐ ಇರುವುದಾದರೂ ಯಾಕೆ?
ಚುನಾವಣೋತ್ತರ ಸ್ಥಿತಿಯ ಈ ಚಿತ್ರ ಸುಮಾರು ಇಪ್ಪತ್ತು ದಿನಗಳ ಕಾಲ ರಾಜ್ಯದಲ್ಲಿ ಅಡ್ಡಾಡಿದಾಗ ಎದುರಾದ ಮತದಾರರ ಅಭಿಪ್ರಾಯವನ್ನು ಆಧರಿಸಿದ್ದು. ಕಳೆದ ಒಂಬತ್ತು ವರ್ಷಗಳ ಅವಧಿಯ ಅಭದ್ರ ಸರ್ಕಾರಗಳು ಸಾಮಾನ್ಯ ಜನರನ್ನು ಕೆರಳಿಸಿದೆ. ಈ ಹತಾಶ ಮತದಾರ ವರ್ಗ ಒಳ್ಳೆಯವರೋ ,ಕೆಟ್ಟವರೋ ಯಾವುದೋ ಒಂದು ಪಕ್ಷ ಇರಲಿ ಎಂದು ಮತಹಾಕುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮುಖ್ಯವಾಗಿ ಈ ಚುನಾವಣೆಯಲ್ಲಿ ಸೇರ್ಪಡೆಯಾಗಿರುವ 35 ಲಕ್ಷ ಯುವ ಮತದಾರರಲ್ಲಿ ನಾನು ಕಂಡ ಈ ಅಭಿಪ್ರಾಯ ಅವರು ಹಾಕುವ ಮತಗಳಲ್ಲಿ ಪ್ರತಿಫಲಿಸಿದರೆ ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬಹುದು. ಮತದಾನದ ಪ್ರಮಾಣ ಶೇಕಡಾ 70-75 ದಾಟಿ ಬಿಟ್ಟರೆ ಈ ಸಾಧ್ಯತೆ ಇನ್ನೂ ಹೆಚ್ಚಿದೆ. ಕಾದು ನೋಡೋಣ.

Saturday, May 4, 2013

ಚುನಾವಣೆ ಸಂಭ್ರಮ ಮಂಕುಗೊಳಿಸಿರುವ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ಪ್ರಜಾಪ್ರಭುತ್ವದ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಾ ಬಂದಿರುವ ಚುನಾವಣೆ  ತನ್ನ ಸಾಂಪ್ರದಾಯಿಕ ಸಂಭ್ರಮ-ಸಡಗರಗಳನ್ನು ಕಳೆದುಕೊಳ್ಳುತ್ತಿದೆಯೇ?.
ಚುನಾವಣಾ ಕಾಲದಲ್ಲಿ ಸಾಮಾನ್ಯವಾಗಿ ನಡೆಯುವ  ಚರ್ಚೆ -ಜಗಳಗಳೂ ಕೂಡಾ ಅಂಜಿಕೆ-ಅಳುಕಿನ ವಾತಾವರಣದಿಂದಾಗಿ ನಡೆಯದೆ  ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗತ್ಯವಾದ ಸಾರ್ವಜನಿಕ ಸಂವಾದ ನಡೆಯದಂತಾಗಿದೆಯೇ? ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಬೀದಿಗಳಲ್ಲಿ ನೋಡುತ್ತಾ ಬಂದವರನ್ನು ಇಂತಹ ಪ್ರಶ್ನೆಗಳು ಖಂಡಿತ ಕಾಡಬಹುದು.
ಇಪ್ಪತ್ತು ದಿನ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ನಾನು ಅಂದಾಜು ಎರಡುಸಾವಿರ ಕಿ.ಮೀ. ಪ್ರಯಾಣ ಮಾಡಿದ್ದೇನೆ. ರಾಜಕೀಯ ಸಭೆಗಳ ವೇದಿಕೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಪೋಸ್ಟರ್,ಬ್ಯಾನರ್, ಕರಪತ್ರ, ಬ್ಯಾಡ್ಜ್, ಪಕ್ಷಗಳ ಧ್ವಜಗಳು ಕಣ್ಣಿಗೆ ಬಿದ್ದಿಲ್ಲ. ನನ್ನ ಕಣ್ಣಿನಲ್ಲಿಯೇ ದೋಷ ಇರಬಹುದೇನೋ ಎಂಬ ಅನುಮಾನ ಮೂಡಿ ಎಲ್ಲಿಯಾದರೂ ಪೋಸ್ಟರ್-ಬ್ಯಾನರ್ ಕಣ್ಣಿಗೆ ಬಿದ್ದರೆ ಕಾರು ನಿಲ್ಲಿಸುವಂತೆ ಚಾಲಕನಿಗೂ ಹೇಳಿದ್ದೆ. ಅವನ ಕಣ್ಣಿಗೂ ಬೀಳಲಿಲ್ಲ. ಇದನ್ನು ಕಂಡು ಎಷ್ಟೊಂದು ಕಟ್ಟುನಿಟ್ಟಿನಿಂದ ಚುನಾವಣೆ ನಡೆಯುತ್ತಿದೆ ಎಂದು ಸಂತೋಷಪಡೋಣವೇ?
ಊರು ತುಂಬಾ ಪೋಸ್ಟರ್,ಬ್ಯಾನರ್‌ಗಳು,ಕಾರು-ಅಟೋರಿಕ್ಷಾಗಳಲ್ಲಿ ಮೈಕ್ ಪ್ರಚಾರ, ಕರಪತ್ರ, ಬ್ಯಾಡ್ಜ್‌ಗಳನ್ನು ಸಂಗ್ರಹಿಸಲು ಕಾರು-ರಿಕ್ಷಾಗಳ ಹಿಂದೆ ಓಡುವ ಬಾಲಕರು, ಪಕ್ಷ ನಿಷ್ಠೆಯನ್ನು ಬಹಿರಂಗವಾಗಿ ಘೋಷಿಸುವ ರೀತಿಯಲ್ಲಿ ಮನೆಗಳ ಮೇಲೆ ಹಾರಾಡುವ ಧ್ವಜಗಳು...ಇವೆಲ್ಲವೂ ಚುನಾವಣೆಯ ಕಾಲದಲ್ಲಿ  ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದ ಕಾಲವೊಂದಿತ್ತು.
ಎಲ್ಲೆಲ್ಲೂ ಖಾಲಿ ಖಾಲಿ: ಪಕ್ಷಗಳ ಪರವಿರೋಧದಿಂದಾಗಿ ನಡೆಯುವ ಸಣ್ಣಪುಟ್ಟ ಜಗಳ ಮತ್ತು  ಕೋಪ-ದ್ವೇಷಗಳು ಒಂದಷ್ಟು ದಿನ ಸ್ನೇಹ-ಸಂಬಂಧಗಳನ್ನು ಕದಡಿ ನಂತರ ತಿಳಿಯಾಗುತ್ತಿತ್ತು. ಆದರೆ ಇಂದು ಯಾವುದಾದರೂ ಊರೊಳಗೆ ಪ್ರವೇಶಿಸಿದರೆ ಇಂತಹ ವಾತಾವರಣವನ್ನು ಕಾಣಲು ಸಾಧ್ಯವಿಲ್ಲ. ಎಲ್ಲಿಯೂ ಚುನಾವಣೆಯ ಸುಳಿವೇ ಇಲ್ಲ. ಎಲ್ಲವೂ ಖಾಲಿ-ಖಾಲಿ, ಬೋಳು-ಬೋಳು.
`ಅನಗತ್ಯ ವೆಚ್ಚವನ್ನು ಕಡಿಮೆ ಮಾಡುವ ಇಂತಹ ಕ್ರಮಗಳು ಸ್ವಾಗತಾರ್ಹ' ಎಂದು ಹೇಳುವವರಿದ್ದಾರೆ. ಚುನಾವಣಾ ಪ್ರಚಾರದ ಅವಧಿಯನ್ನು ಒಂದುವಾರಕ್ಕೆ ಸೀಮಿತಗೊಳಿಸಿದರೆ ಮತದಾರರಿಗೆ ಒಡ್ಡುವ ಆಮಿಷ ಇನ್ನೂ ಕಡಿಮೆಯಾಗಬಹುದು' ಎಂದು ಸಲಹೆ ನೀಡುವವರೂ ಇದ್ದಾರೆ.
ಆದರೆ ದುಡ್ಡು,ಹೆಂಡ,ಬಾಡು,ಸೀರೆ ಹಂಚುವ, ಜಾತಿ-ಧರ್ಮವನ್ನು ಬಳಸಿಕೊಳ್ಳುವ ಚುನಾವಣಾ ಅಕ್ರಮಗಳ ಅತಿರೇಕ ಒಂದೆಡೆಯಾದರೆ, ಈ ಅಕ್ರಮಗಳನ್ನೆಲ್ಲ ತಡೆಯಲು ಹೊರಟು ಚುನಾವಣೆಯಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳದಂತೆ ಮಾಡುವುದು ಇನ್ನೊಂದು ಅತಿರೇಕದಂತೆ ಕಾಣಿಸುತ್ತದೆ.
`ದುಡ್ಡು ಹಂಚುವುದನ್ನು ತಡೆಯಲಿ, ಪ್ರಚಾರಕ್ಕೆ ಬಂದ ಕಾರ್ಯಕರ್ತರು ಊಟ ಮಾಡಿದ ತಟ್ಟೆಗಳನ್ನೂ ಲೆಕ್ಕ ಮಾಡುವುದು ಏನು ಅಸಹ್ಯ ಸಾರ್? ನಮಗಾಗಿ ಬಂದು ಈ ಬಿಸಿಲಿನಲ್ಲಿ ಅವರು ಬೆವರು ಸುರಿಸುತ್ತಾರೆ ಅವರಿಗೆ ಅಷ್ಟೂ ಕೊಡುವುದು ಬೇಡವೇ? ರೂ16 ಲಕ್ಷದಲ್ಲಿ ಚುನಾವಣೆ ಮಾಡ್ಲಿಕ್ಕಾಗುತ್ತಾ? ಎಂದು ಪ್ರಶ್ನಿಸಿದ ಗುಲ್ಬರ್ಗ ಜಿಲ್ಲೆಯ ಕ್ಷೇತ್ರವೊಂದರ ಅಭ್ಯರ್ಥಿಯೊಬ್ಬ.
`ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ನಿಜವಾಗಿ ನಿಮ್ಮ ಚುನಾವಣಾ ವೆಚ್ಚ ಕಡಿಮೆಯಾಗಿದೆಯೇ?' ಎಂಬ ಪ್ರಶ್ನೆಯನ್ನು ಹಲವಾರು ಅಭ್ಯರ್ಥಿಗಳನ್ನು ನಾನು ಕೇಳಿದ್ದೆ. ಕೆಲವರು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು, ಇನ್ನೂ ಕೆಲವರು ದುಡ್ಡು ಯಾಕೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬ ವಿವರ ನೀಡಿದರೇ ಹೊರತು  ಯಾರೊಬ್ಬರೂ `ಈ ಬಾರಿ ಖರ್ಚು ಕಡಿಮೆ' ಎಂದು  ಹೇಳಲಿಲ್ಲ.
ಈ ಪೋಸ್ಟರ್,ಬ್ಯಾನರ್,ಕರಪತ್ರ, ಟೋಪಿ, ಬ್ಯಾಡ್ಜ್‌ಗಳಿಗೆ ಒಬ್ಬ ಅಭ್ಯರ್ಥಿ ಮಾಡುವ ಖರ್ಚು ಕೆಲವು ಲಕ್ಷ         ರೂಪಾಯಿ ಮಾತ್ರ. ಸಾಮಾನ್ಯವಾಗಿ ಇವುಗಳನ್ನೆಲ್ಲ ಪಕ್ಷಗಳೇ ಪೂರೈಸುತ್ತವೆ. ಮತದಾರರಿಗೆ ಆಮಿಷವೊಡ್ಡಲು ನೀಡುವ ಹಣದ ಮೊತ್ತವೇ ದೊಡ್ಡದು. ಇದು ಕಡಿಮೆಯಾಗಿದೆಯೇ?
ಹಣದ ಪ್ರಭಾವ ಕಡಿಮೆ?: ಅಕ್ರಮವಾಗಿ ಹಣ ಸಂಗ್ರಹ ಮತ್ತು ಸಾಗಾಣಿಕೆಯ ವಿರುದ್ಧದ ಕ್ರಮದಿಂದಾಗಿ ಚುನಾವಣೆಯಲ್ಲಿ ಹಣದ ಪ್ರಭಾವ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ವಾಹನಗಳ ತಪಾಸಣೆ  ನಡೆಸಲಾಗುತ್ತದೆ.  ಪ್ರವಾಸದುದ್ದಕ್ಕೂ ಕನಿಷ್ಠ 25-30 ಕಡೆಗಳಲ್ಲಿ ನಮ್ಮ ಕಾರಿನ ತಪಾಸಣೆ ನಡೆಸಿದ್ದಾರೆ. ಎಲ್ಲ ಕಡೆಗಳಲ್ಲಿ ತಪಾಸಣೆಯ ಕ್ರಮ ಒಂದೇ ರೀತಿಯದ್ದು. ಕಾರು ನಿಲ್ಲಿಸಿದ ಮೇಲೆ ಡಿಕ್ಕಿ ತೆರೆಯಲು ಹೇಳುವುದು, ಎಲ್ಲಿಂದ ಬಂದಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುವುದು, ಚಾಲಕನ ಹೆಸರು ಮತ್ತು ಕಾರಿನ ನಂಬರ್ ಬರೆದುಕೊಳ್ಳುವುದು-ಅಲ್ಲಿಗೆ ತಪಾಸಣೆ ಮುಗಿಯಿತು. ಯಾರೂ ಕೂಡಾ ಕಾರಿನಲ್ಲಿದ್ದ ನನ್ನನ್ನು ಯಾರು ಎಂದು ಕೇಳಿಲ್ಲ, ಕಾರಿನೊಳಗಿದ್ದ ನನ್ನ ಬ್ಯಾಗ್ ಚೆಕ್ ಮಾಡಿಲ್ಲ. `ಈ ರೀತಿ ಹೆದ್ದಾರಿಯಲ್ಲಿ ತಪಾಸಣೆ ಮಾಡುವುದರಿಂದ ಹಣದ ಸಾಗಾಣಿಕೆಗೆ ತೊಂದರೆಯಾಗಿದೆಯೇ?' ಎಂದು ರಾಜಕೀಯ ಪಕ್ಷದ ನಾಯಕರೊಬ್ಬರನ್ನು ಕೇಳಿದೆ. `ದುಡ್ಡು ಸಾಗಿಸುವವರು ಹೆದ್ದಾರಿಯಲ್ಲಿ  ಅದೂ ಕಾರುಗಳಲ್ಲಿ  ಹೋಗುತ್ತಾರೆಯೇ? ಹೆದ್ದಾರಿ ಬಿಟ್ಟು ಊರೊಳಗೆ ಒಳದಾರಿಗಳಿಲ್ಲವೇ? ಕಾರು ಯಾಕೆ ಬೇಕು, ಮೋಟಾರ್ ಸೈಕಲ್,ಬಸ್,ಲಾರಿಗಳಿಲ್ಲವೇ? ಎಂದು ಪ್ರಶ್ನಿಸಿದ, ಆತ ದುಡ್ಡು ಸಾಗಿಸುವ ಅನೇಕ ಹೊಸ ವಿಧಾನಗಳನ್ನು ತಿಳಿಸಿ ಅಚ್ಚರಿಗೊಳಿಸಿದ.
`ಚುನಾವಣಾ ಆಯೋಗದ ಕ್ರಮಗಳಿಂದಾಗಿ ಬರುವ ದುಡ್ಡು ಹೋಯಿತು' ಎಂದು ಹಳ್ಳಿಗಳಲ್ಲಿ ಜನ ಕೊರಗುತ್ತಿದ್ದಾರೆ. `ಖರ್ಚು ಕಡಿಮೆಯಾಗಿಲ್ಲ' ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಚುನಾವಣೆ ಘೋಷಣೆಯಾದ ಕೂಡಲೇ ಬಹಳಷ್ಟು ರಾಜಕಾರಣಿಗಳು  ಊರುಗಳಲ್ಲಿರುವ ತಮ್ಮ ಬೆಂಬಲಿಗರ ಮನೆಗಳಿಗೆ ಹಣ ಸಾಗಿಸಿದ್ದಾರೆ.
`ಸಮಸ್ಯೆ ಹಣದ್ದು ಸಾರ್, ಸಾಗಿಸುವುದು, ವಿತರಿಸುವುದು ಅಲ್ಲ. ಅದಕ್ಕೆ ಬೇಕಾದಷ್ಟು ದಾರಿಗಳಿವೆ ' ಎಂದ ಹಾಸನದ ರಾಜಕೀಯ ಕಾರ್ಯಕರ್ತನೊಬ್ಬ. `ನಮ್ಮ ಲೀಡರ್‌ಗಳಿಗೆ ದುಡ್ಡು ಕೊಟ್ಟಿದ್ದಾರಂತೆ, ಎಲೆಕ್ಷನ್ ಅಧಿಕಾರಿಗಳ ಭಯ ತೋರಿಸಿ ಅದನ್ನು ತಾವೇ ಇಟ್ಟುಕೊಂಡಿದ್ದಾರೆ' ಎಂದ ಬಳ್ಳಾರಿಯ ಮತದಾರನೊಬ್ಬ.
ಇದಕ್ಕೆಲ್ಲ ಏನು ಪರಿಹಾರ? ಹಿಂದಿನ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಅಕ್ರಮ ಸಂಗ್ರಹಿಸಿದ್ದ ಮತ್ತು ಸಾಗಿಸುತ್ತಿದ್ದ ಹಲವಾರು ಕೋಟಿ ರೂಪಾಯಿಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಂಬ್ಯುಲೆನ್ಸ್‌ನಲ್ಲಿ ಹಣ ಸಾಗಿಸುತ್ತಿರುವವರನ್ನೂ ಬಂಧಿಸಿದ್ದರು. ಆ ಪ್ರಕರಣಗಳೇನಾಯಿತು? ಯಾರಿಗಾದರೂ ಶಿಕ್ಷೆಯಾಯಿತೇ? ಇಂತಹ ಅಕ್ರಮಗಳನ್ನು ಮಾಡಿದ್ದ ಎಷ್ಟು ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ? ಕೋಟ್ಯಂತರ ರೂಪಾಯಿ ಖರ್ಚು ಮಾಡುವವರಿಗೆ ಅದರಲ್ಲಿ ಒಂದಷ್ಟು ಪಾಲು ಕೈಬಿಟ್ಟುಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ. ಶಿಕ್ಷೆಯ ಭಯದಿಂದ ಮಾತ್ರ ಅವರನ್ನು ಹದ್ದುಬಸ್ಸಿನಲ್ಲಿಡಲು ಸಾಧ್ಯ. ಅದು ಆಗುತ್ತಿಲ್ಲ.
ಕೋಟ್ಯಧಿಪತಿಗಳಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆಯನ್ನೂ ಮಾಡದಂತಹ ಸ್ಥಿತಿ ಇದೆ. ಯಾವ ರಾಜಕೀಯ ಪಕ್ಷವೂ ದುಡ್ಡಿಲ್ಲದವರಿಗೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ಆಕಾಂಕ್ಷಿ ಕೋಟ್ಯಧಿಪತಿಗಳ ದುಡ್ಡಿನ ಮೂಲ ಯಾವುದು? ಅದು ಅಕ್ರಮವೇ,ಸಕ್ರಮವೇ? ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಸ್ವ ಇಚ್ಛೆಯಿಂದ ನೀಡಿದ ಆಸ್ತಿವಿವರದ ಸತ್ಯಾಸತ್ಯತೆಯನ್ನು ಯಾರಾದರೂ ಪರಿಶೀಲಿಸುತ್ತಾರೆಯೇ? ಅದನ್ನು ಮಾಡಲು ಚುನಾವಣಾ ಆಯೋಗದಲ್ಲಿ ಸಿಬ್ಬಂದಿಯೂ ಇಲ್ಲ, ಅದಕ್ಕೆ ಸಮಯವೂ ಇಲ್ಲ.
ಚುನಾವಣೆ ಮುಗಿದ ನಂತರವಾದರೂ ಅಭ್ಯರ್ಥಿಗಳ ಆಸ್ತಿ ವಿವರವನ್ನು ವರಮಾನ ತೆರಿಗೆ ಇಲಾಖೆಗೆ ಕಳುಹಿಸಿ ಎಂದು ಪರಿಶೀಲನೆಗೆ ಒಳಪಡಿಸಬಹುದಲ್ಲಾ? ಈ ರೀತಿ ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಅದರ ಮೂಲದಲ್ಲಿಯೇ ತಡೆಯುವ ಪ್ರಯತ್ನ ಮಾಡದೆ ಪೋಸ್ಟರ್,ಬ್ಯಾನರ್‌ಗಳ ಮೇಲೆ ಕಡಿವಾಣ ಹಾಕುವುದರಿಂದ ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯವೇ? ಇಂತಹ `ಕಟ್ಟುನಿಟ್ಟಿನ ಕ್ರಮಗಳು' ಚುನಾವಣೆಯ ಸಂಭ್ರಮವನ್ನು ಮಂಕುಗೊಳಿಸಬಹುದು ಅಷ್ಟೆ.

Friday, May 3, 2013

ಜಾತ್ಯತೀತ ಜನತಾದಳ ಕೈಗೆ ಎಟುಕದಿರುವ `ಉತ್ತರ'

ತುಮಕೂರು: ತಮ್ಮದು ರಾಷ್ಟ್ರೀಯ ಪಕ್ಷ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಷ್ಟೇ ಹೇಳಿಕೊಂಡರೂ ಮೂಲತಃ ಜಾತ್ಯತೀತ ಜನತಾದಳ ಹಳೆ ಮೈಸೂರು ಭಾಗಕ್ಕೆ ಸೇರಿರುವ ಒಂದು ಪ್ರಾದೇಶಿಕ ಪಕ್ಷ. ಈ ಇಮೇಜನ್ನು ತೊಡೆದುಹಾಕಿ ಕನಿಷ್ಠ ರಾಜ್ಯಮಟ್ಟದ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಜೆಡಿ (ಎಸ್) ಅನ್ನು ಬೆಳೆಸಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಕಳೆದೆರಡು ಚುನಾವಣೆಗಳಲ್ಲಿ ಈ ಪ್ರಯತ್ನದಲ್ಲಿ ವಿಫಲವಾಗಿರುವ ಪಕ್ಷದ ನಾಯಕತ್ವ ವಹಿಸಿರುವ ದೇವೇಗೌಡರು ಮತ್ತು ಮಗ ಎಚ್.ಡಿ.ಕುಮಾರಸ್ವಾಮಿ ಈ ಬಾರಿ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.
ಉತ್ತರ ಕರ್ನಾಟಕದ ಮತದಾರರು ಕೈಹಿಡಿದರೆ ಮಾತ್ರ ಈ ಕನಸು ನನಸಾಗಲು ಸಾಧ್ಯ ಎಂಬ ಸತ್ಯವನ್ನು ಚೆನ್ನಾಗಿಯೇ ಬಲ್ಲ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಡೆಬಿಡದೆ ಆ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ವಚನಭಂಗದಿಂದಾಗಿ ಹಿಡಿದ ಗ್ರಹಣದಿಂದ ಜೆಡಿ (ಎಸ್) ಇನ್ನೂ ಸಂಪೂರ್ಣವಾಗಿ ಬಿಡುಗಡೆ ಪಡೆದ ಹಾಗಿಲ್ಲ.
ಕೇವಲ 28 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾದ 2008ರ ವಿಧಾನಸಭಾ ಚುನಾವಣೆಯನ್ನು ಒಂದು ದುಃಸ್ವಪ್ನದಂತೆ ಮರೆತುಬಿಟ್ಟು 58 ಸ್ಥಾನಗಳ ಗೆಲುವಿಗೆ ಕಾರಣವಾದ 2004ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಬಹುದೆಂಬ ಕನಸನ್ನು ಜೆಡಿ (ಎಸ್) ಕಾಣುತ್ತಿದೆ.  2004ರ ಚುನಾವಣೆಯಲ್ಲಿ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಸೂಚನೆಯನ್ನು ಜೆಡಿ(ಎಸ್) ನೀಡಿದ್ದು ನಿಜ. ಆ ಚುನಾವಣೆಯಲ್ಲಿ ಜೆಡಿ(ಎಸ್) ಪಕ್ಷದಿಂದ ಆರಿಸಿ ಬಂದಿರುವ 58 ಶಾಸಕರಲ್ಲಿ 20ಕ್ಕೂ ಹೆಚ್ಚು ಶಾಸಕರು ಉತ್ತರ ಕರ್ನಾಟಕಕ್ಕೆ ಸೇರಿರುವ  ಬೀದರ್, ಗುಲ್ಬರ್ಗ,ರಾಯಚೂರು,ಕೊಪ್ಪಳ,ಬಳ್ಳಾರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಸೇರಿದವರು.
ಗೆಲುವಿನ ಚೈತ್ರಯಾತ್ರೆ ಮುಂದುವರಿಯುವ ಎಲ್ಲ ಸಾಧ್ಯತೆಗಳಿದ್ದವು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿ ರಾಜ್ಯದಲ್ಲಿ ಅವರ ಪರವಾದ ಸದ್ಭಾವನೆಯ ಅಲೆಯನ್ನು ಎಬ್ಬಿಸಿತ್ತು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಚ್.ಡಿ.ದೇವೇಗೌಡರು ಗಳಿಸಲಾಗದ ಜನಪ್ರಿಯತೆಯನ್ನು ಕುಮಾರಸ್ವಾಮಿ ಅವರು  ಅಧಿಕಾರದ ಕಿರು ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಪಡೆದುಕೊಂಡಿದ್ದರು. ಆದರೆ, ವಚನಭಂಗದ ಬಿರುಗಾಳಿ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ಜನಪ್ರಿಯತೆಯ ಜತೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಕೂಡಾ ಜೆಡಿ (ಎಸ್) ಕಳೆದುಕೊಳ್ಳಬೇಕಾಯಿತು.
2008ರ ಚುನಾವಣೆಯಲ್ಲಿ ಆಯ್ಕೆಯಾದ 28 ಶಾಸಕರಲ್ಲಿ 18 ಶಾಸಕರು ಹಳೆಮೈಸೂರು ಭಾಗಕ್ಕೆ ಸೇರಿರುವ ಹಾಸನ, ಮಂಡ್ಯ,ತುಮಕೂರು, ರಾಮನಗರ,ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೇರಿದವರೆಂಬುದು ಗಮನಾರ್ಹ. ಈಗ ಮತ್ತೆ ಜೆಡಿ (ಎಸ್)ಗೆ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷ ವರ್ಚಸ್ಸು ತಂದುಕೊಡುವ ಪ್ರಯತ್ನ ನಡೆದಿದೆಯಾದರೂ ಅವಕಾಶಗಳು ಕ್ಷೆಣವಾಗಿವೆ.
ಉತ್ತರ ಕರ್ನಾಟಕದ ಒಂದಷ್ಟು ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಪಕ್ಷದಲ್ಲಿಯೇ ಉಳಿದುಕೊಂಡವರು ವೈಯಕ್ತಿಕವಾದ ಆಡಳಿತವಿರೋಧಿ ಅಲೆ ಎದುರಿಸುತ್ತಿದ್ದಾರೆ. ಜೆಡಿ(ಎಸ್) ಶಾಸಕರಾಗಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಅರಬಾವಿ ಕ್ಷೇತ್ರಗಳ ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ, ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ, ದೇವದುರ್ಗ ಕ್ಷೇತ್ರದ ಶಿವನಗೌಡ ನಾಯಕ ಮೊದಲಾದವರು ಈಗ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿ (ಎಸ್) ಹಿನ್ನಡೆಗೆ ಇನ್ನೊಂದು ಪ್ರಮುಖ ಕಾರಣ, ಕರ್ನಾಟಕ ಜನತಾ ಪಕ್ಷ (ಕೆಜೆಪಿ). ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ವಿರೋಧಿಸುವವರು ಇಲ್ಲವೆ ಆ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಇರುವವರಿಗೆ ಹಿಂದಿನ ಚುನಾವಣೆಗಳಲ್ಲಿ ಇದ್ದ ಆಯ್ಕೆ ಜೆಡಿ (ಎಸ್) ಮಾತ್ರ. ಈ ಬಾರಿ ಆ ಸ್ಥಾನವನ್ನು ಕೆಜೆಪಿ ಆಕ್ರಮಿಸಿಕೊಂಡಿದೆ.
ಉದಾಹರಣೆಗೆ 2004ರ ಚುನಾವಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ವೈಜನಾಥ ಪಾಟೀಲ್, ಬಿ.ಆರ್.ಪಾಟೀಲ್ ಮತ್ತು ಎಂ.ವೈ.ಪಾಟೀಲ್ ಈ ಬಾರಿ ಕೆಜೆಪಿ ಅಭ್ಯರ್ಥಿಗಳು. ರಾಯಚೂರು ಜಿಲ್ಲೆಯ ಲಿಂಗಸಗೂರು, ರಾಯಚೂರು, ಸಿಂಧನೂರು ಮತ್ತು ಮಾನ್ವಿ, ಬೀದರ್‌ನ ಬಸವಕಲ್ಯಾಣ, ಗುಲ್ಬರ್ಗ ಜಿಲ್ಲೆಯ ಅಫ್ಜಲ್‌ಪುರ ಮತ್ತು ಅಳಂದ, ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರಗಳನ್ನು ಹೊರತುಪಡಿಸಿ ಹೈದರಾಬಾದ್ ಕರ್ನಾಟಕದ ಬೇರೆ ಕ್ಷೇತ್ರಗಳಲ್ಲಿ ಜೆಡಿ (ಎಸ್) ವಿರೋಧಿ ಅಭ್ಯರ್ಥಿಗಳಿಗೆ ಪೈಪೋಟಿ ಕೊಡುವ ಸ್ಥಿತಿಯಲ್ಲಿ ಇಲ್ಲ.
ಇದರಿಂದಾಗಿ ಜೆಡಿ (ಎಸ್) ತನ್ನ ಸಂಖ್ಯಾವೃದ್ಧಿಗಾಗಿ ಹಳೆಮೈಸೂರು ಭಾಗವನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಈ ಭಾಗದಲ್ಲಿ ಜೆಡಿ (ಎಸ್)ನ ಸಾಂಪ್ರದಾಯಿಕ ನೆಲೆಗಳಿರುವ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿಯೇ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಸನದ ಮೂವರು ನಿಷ್ಠಾವಂತರಾದ ಸಿ.ಎಸ್.ಪುಟ್ಟೇಗೌಡ, ಎಚ್.ಎಂ.ವಿಶ್ವನಾಥ ಮತ್ತು ಜವರೇಗೌಡ ಪಕ್ಷ ತ್ಯಜಿಸಿದ್ದಾರೆ.
ಅವರಲ್ಲೊಬ್ಬರನ್ನು ಬಿಟ್ಟು ಉಳಿದಿಬ್ಬರು ಕ್ರಮವಾಗಿ ಕಾಂಗ್ರೆಸ್ ಮತ್ತು ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರು ಪಕ್ಷದ ವಿರುದ್ಧ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ನೆಲೆ ಪಡೆದುಕೊಳ್ಳುತ್ತಿರುವ ಕೆಜೆಪಿ,  ಕಾಂಗ್ರೆಸ್ ವಿರೋಧಿ ಮತಬುಟ್ಟಿಗೆ  ಕೈಹಾಕಲಿದೆ. ಇದರಿಂದಾಗಿ ತುರುವೆಕೆರೆ ಮತ್ತು ಗುಬ್ಬಿಯ ಹಾಲಿ ಶಾಸಕರು ಕೆಜೆಪಿಯಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. ಮಧುಗಿರಿ ಕ್ಷೇತ್ರದ ಶಾಸಕಿಯಾಗಿದ್ದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಪಲಾಯನ ಮಾಡಿರುವುದರಿಂದ ಆ ಕ್ಷೇತ್ರಕ್ಕೆ ಸ್ವಯಂನಿವೃತ್ತಿ ಪಡೆದಿರುವ ಅಧಿಕಾರಿ ವಿ.ವೀರಭದ್ರಯ್ಯ ಅವರನ್ನು ತರಾತುರಿಯಲ್ಲಿ ಕರೆತಂದು ಜೆಡಿ (ಎಸ್) ಕಣಕ್ಕಿಳಿಸಿದೆ.
ಕಳೆದೆರಡು ಚುನಾವಣೆಗಳಲ್ಲಿ ಅಲ್ಪಮತಗಳಿಂದ ಸೋತಿರುವ ಜಿಲ್ಲೆಯ ಜನಪ್ರಿಯ ನಾಯಕ ಕೆ.ಎನ್.ರಾಜಣ್ಣ ಈ ಕ್ಷೇತ್ರದಲ್ಲಿ ಜೆಡಿ (ಎಸ್)ಗೆ ನಿರಾಶೆ ಉಂಟುಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೊರಟಗೆರೆಯಲ್ಲಿ ಈಕ್ಷಣದ ವರೆಗೆ ಜೆಡಿ (ಎಸ್) ಅಭ್ಯರ್ಥಿ ಗೆಲ್ಲುವ ಅವಕಾಶ ಹೆಚ್ಚಿದ್ದರೂ ಕೊನೆಕ್ಷಣದ ಬೆಳವಣಿಗೆಗಳು ಫಲಿತಾಂಶವನ್ನು ಬದಲಿಸಿಬಿಡಬಹುದು.
`ಉತ್ತರ'ದ ಕಡೆ ಚಾಚಿರುವ ಕೈಗಳಿಗೆ ಬಯಸಿದ್ದು ಸಿಗದೆ ಹೋಗುವ ಸಾಧ್ಯತೆಗಳಿರುವ ಈಗಿನ ಪರಿಸ್ಥಿತಿಯಲ್ಲಿ ಕೈಯಲ್ಲಿದ್ದುದನ್ನಾದರೂ ಉಳಿಸಿಕೊಳ್ಳುವ ಸವಾಲು ಜೆಡಿ (ಎಸ್) ಮುಂದಿದೆ.
ಇಷ್ಟು ಮಾತ್ರವಲ್ಲ, ವಯಸ್ಸಿನ ಭಾರದಿಂದ ಕುಗ್ಗಿಹೋಗಿರುವ ಎಚ್.ಡಿ.ದೇವೇಗೌಡರು ಮುಂದಿನ ಚುನಾವಣೆಗಳಲ್ಲಿ ಈಗಿನಷ್ಟು ಸಕ್ರಿಯವಾದ ಪಾತ್ರವನ್ನು ವಹಿಸಲು ಸಾಧ್ಯವಾಗದೆ ಹೋಗಬಹುದು. ಅವರ ಅನುಭವ ಮತ್ತು ಜನಪ್ರಿಯತೆಯ ಗರಿಷ್ಠ ಬಳಕೆ ಈ ಚುನಾವಣೆಯಲ್ಲಿ ಮಾತ್ರ ಸಾಧ್ಯ. ರಾಜ್ಯದಲ್ಲಿ ಜೆಡಿ (ಎಸ್) ಪಕ್ಷವನ್ನು ತೃತೀಯರಂಗವಾಗಿ ಕಟ್ಟಿ ಅಧಿಕಾರಕ್ಕೆ ತರಬೇಕೆಂಬ ಕನಸು ಕಂಡ ದೇವೇಗೌಡರು ತಮ್ಮ ಮಕ್ಕಳ ಮೂಲಕವಾದರೂ ಅದು ನನಸಾದೀತೆಂಬ ನಿರೀಕ್ಷೆ ಇಟ್ಟುಕೊಂಡವರು. ಈ ಕಾರಣಗಳಿಂದಾಗಿ ಜೆಡಿ (ಎಸ್) ಪಾಲಿಗೆ ಈಗಿನ ಚುನಾವಣೆ ಅತ್ಯಂತ ನಿರ್ಣಾಯಕ.