Sunday, January 13, 2013

ದೆಹಲಿ ಎನ್ನುವ `ಅತ್ಯಾಚಾರದ ಬಲಿಪಶು`

ದೇಶದಲ್ಲಿ ನಡೆಯುವ ಪ್ರತಿ ನಾಲ್ಕು ಅತ್ಯಾಚಾರಗಳಲ್ಲಿ ಒಂದು, ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಗೃಹ ಇಲಾಖೆಗೆ ಸೇರಿರುವ ಅಪರಾಧ ವಿಭಾಗದ ದಾಖಲೆಗಳು ಹೇಳುತ್ತಿವೆ. ದೇಶದ 35 ನಗರಗಳಲ್ಲಿ ಮಹಿಳೆಯರ ದೃಷ್ಟಿಯಿಂದ `ಅತ್ಯಂತ ಅಸುರಕ್ಷಿತ ನಗರ ದೆಹಲಿ' ಎಂದು ಎರಡು ವರ್ಷಗಳ ಹಿಂದೆ ನಡೆಸಲಾಗಿದ್ದ ಸಮೀಕ್ಷೆ ಹೇಳಿತ್ತು.
34 ವರ್ಷಗಳ ಹಿಂದೆ ಬಿಲ್ಲಾ ಮತ್ತು ರಂಗಾ ಎಂಬ ಇಬ್ಬರು ಕೇಡಿಗಳು ಗೀತಾ ಚೋಪ್ರಾ ಎಂಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಜತೆಯಲ್ಲಿದ್ದ ಅಣ್ಣನ ಜತೆ ಆಕೆಯನ್ನು ಸಾಯಿಸಿದ ಬರ್ಬರ ಕೃತ್ಯದಿಂದ ಹಿಡಿದು, ಹತ್ತುವರ್ಷಗಳ ಹಿಂದೆ ರಾಜಧಾನಿಯ ಹೃದಯಭಾಗದಲ್ಲಿರುವ ವೈದ್ಯಕೀಯ ಕಾಲೇಜಿನ ಆವರಣದಲ್ಲಿಯೇ ಹಾಡಹಗಲೇ ವಿದ್ಯಾರ್ಥಿನಿ ಮೇಲೆ ನಡೆಸಿದ ಅತ್ಯಾಚಾರದ ವರೆಗೆ, ಅಲ್ಲಿಂದ ಕಳೆದ ತಿಂಗಳಷ್ಟೇ ಸಾವಿನಲ್ಲಿ ಕೊನೆಗೊಂಡ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ವರೆಗಿನ ಎಲ್ಲ ಪ್ರಕರಣಗಳು ಮತ್ತೆ ಮತ್ತೆ ದೆಹಲಿ `ಅತ್ಯಾಚಾರಗಳ ರಾಜಧಾನಿ' ಎಂಬುದನ್ನು ಸಾಬೀತುಪಡಿಸುತ್ತಲೇ ಇವೆ. ಅಲ್ಲಿನ ಮಣ್ಣಿನಲ್ಲಿಯೇ ಇಂತಹ ಗುಣ ಇದೆಯೇ? `ದೆಹಲಿ ಕೇವಲ ಅತ್ಯಾಚಾರಗಳ ನಗರ ಅಲ್ಲ, ಇದು ನಿರಂತರ ಅತ್ಯಾಚಾರದ ಬಲಿಪಶು' ಕೂಡಾ ಹೌದು ಎನ್ನುತ್ತಿದೆ ಇತಿಹಾಸ.
ದೆಹಲಿಯ ನಿಗೂಢ ವ್ಯಕ್ತಿತ್ವವನ್ನು ಇತಿಹಾಸದ ಬೆಳಕಲ್ಲಿ ಮೊದಲು ಭೇದಿಸಲು ಪ್ರಯತ್ನ ಪಟ್ಟವರು ದೇಶ ಕಂಡ ಅಪರೂಪದ ಚಿಂತಕ ಡಾ.ರಾಮಮನೋಹರ ಲೋಹಿಯಾ. 1958ರಲ್ಲಿ ಬರೆದಿದ್ದ `ಡೆಲ್ಲಿ ಎಂದೂ ಕರೆಯುವ ದಿಲ್ಲಿ' ಎನ್ನುವ ತಮ್ಮ ಜನಪ್ರಿಯ ಲೇಖನದಲ್ಲಿ ಮೊದಲ ಬಾರಿಗೆ ದೆಹಲಿಯನ್ನು ಅವರು `ನಾಯಕಸಾನಿ'ಗೆ ಹೋಲಿಸಿದ್ದರು.
`ಪ್ರಪಂಚದ ಅತ್ಯಂತ ಮೋಹಕ ಮತ್ತು ಕುತ್ಸಿತ ನಾಯಕಸಾನಿ ಡೆಲ್ಲಿ. ಯಾವ ಪ್ರೇಮಿಯೂ ಆಕೆಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಲಿಲ್ಲ, ಯಾವ ಪ್ರಾಮಾಣಿಕ ಪ್ರೇಮಿಗೂ ಈಕೆ ತನ್ನನ್ನು ಒಪ್ಪಿಸಿಕೊಂಡವಳಲ್ಲ, ಯಾರಲ್ಲಿ ಉತ್ತಮ ನಡವಳಿಕೆ  ಮತ್ತು ಕೋಮಲ ಭಾವವನ್ನು ಉದ್ದೀಪನಗೊಳಿಸಲು ಈಕೆ ಪ್ರಯತ್ನಪಡುತ್ತಿದ್ದಳೋ, ಅವರಿಂದಲೇ ಅತ್ಯಂತ ಅನಾಗರಿಕ ರೀತಿಯ ದೌರ್ಜನ್ಯಕ್ಕೆ ಈಡಾಗುತ್ತಾ ಬಂದವಳು ಇವಳು. ದುಷ್ಟರ ಸುಧಾರಣೆಯ ಈಕೆಯ ಪ್ರಯತ್ನ ಇನ್ನೇನು ಮುಗಿಯುತ್ತಾ ಬಂತು ಎನ್ನುವಾಗಲೇ ದುಷ್ಟರ ಇನ್ನೊಂದು ಗುಂಪು ಈಕೆ ಮೇಲೆ ಎರಗಿಬೀಳುತ್ತಿತ್ತು.
ಇದರಿಂದ ಈಕೆ ಹತಾಶೆಗೀಡಾದವಳಲ್ಲ, ದಣಿದವಳೂ ಅಲ್ಲ, ನಿರಂತರವಾಗಿ ತನ್ನ ಪ್ರಯತ್ನದಲ್ಲಿ ತೊಡಗಿದವಳು, ಈಕೆಯ ಮರುಳುಗೊಳಿಸುವ ಚೆಲುವಿನ ಪ್ರಣಯ ವಿಲಾಸ, ಒಳ್ಳೆಯದನ್ನೇ ಮಾಡಬೇಕು, ಕೆಟ್ಟದ್ದನ್ನು ತಿದ್ದಬೇಕು ಈ ಮೂಲಕ ಜಗತ್ತನ್ನು ಇನ್ನಷ್ಟು ಸುಂದರಗೊಳಿಸಬೇಕು ಎಂಬ ದಯಾಳು ಗುಣವನ್ನು ನೋಡಿದಾಗಲೆಲ್ಲ ಈಕೆಯಲ್ಲಿ ಏನೋ ಒಂದು ಧಾರ್ಮಿಕ ದ್ರವ್ಯವಿದ್ದೀತೇ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ..'
`...ಗೆಲ್ಲಲು ಬಂದವನಿಗೆ ಈಕೆ ತನ್ನ ಸ್ತನಗಳನ್ನು ಪ್ರದರ್ಶಿಸಿದ್ದಾಳೆ, ಆತ ಮರುಳಾಗಿ ಬಿಡುತ್ತಾನೆ, ಕೊನೆಯಲ್ಲಿ ಪಳಗಿಹೋಗುತ್ತಾನೆ ಎಂಬ ಆಸೆಯಿಂದ...ಎಷ್ಟೊ ಸಲ ತಕ್ಷಣದ ಯಾವುದೇ ಲಾಭ ಇಲ್ಲದೆ ಕೂಡಾ ಹಾಗೆ ಮಾಡಿದ್ದಾಳೆ,  ಈ ಮುದಿ ಮಾಟಗಾತಿ ತನ್ನ ಯಾವುದೋ ಭಾಗವನ್ನು ರಹಸ್ಯವಾಗಿ ಇಟ್ಟುಕೊಂಡಿದ್ದಾಳೆ, ಯಾವುದೋ ಸಂಜೀವಿನಿ ಲೇಪವನ್ನು ಗುಟ್ಟಾಗಿ ಮುಚ್ಚಿಟ್ಟುಕೊಂಡಿದ್ದಾಳೆ ಎಂದು ಅನುಮಾನಪಟ್ಟು ಶರಣಾದ ನಂತರವೂ ತೈಮೂರ್ ಮತ್ತು ನಾದಿರ್‌ಷಾನಂತಹವರು ಅಗತ್ಯ ಇಲ್ಲದಿದ್ದರೂ ಈಕೆಯನ್ನು ಗಾಯಗೊಳಿಸಿ ವಿರೂಪ ಮಾಡಿದ್ದರು.... ಡೆಲ್ಲಿಯನ್ನು ಆಳಬೇಕೆನ್ನುವವರು ಆಕೆಯನ್ನು ಒಲಿಸಿಕೊಳ್ಳಲು ಹೋಗಲೇ ಇಲ್ಲ, ಮೇಲೆರಗಿ ಹತ್ತಿಕ್ಕಿ ವಶಪಡಿಸಿಕೊಳ್ಳಲು ಪ್ರಯತ್ನಪಟ್ಟವರೇ ಹೆಚ್ಚು..' ಎಂದು ಹೇಳುತ್ತಾ ಲೋಹಿಯಾ, ದೆಹಲಿ ಎಂಬ ಮಹಾನಗರ ಜಾಗತಿಕ ಇತಿಹಾಸದ ಅತ್ಯಂತ ಹೃದಯಹೀನ ನಾಯಕಸಾನಿಯಾಗಿ ರೂಪುಗೊಳ್ಳಲು ಕಾರಣಗಳೇನು ಎಂಬುದನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಲೋಹಿಯಾ ನೀಡಿರುವ ಒಳನೋಟಗಳ ಮೂಲಕ ನೋಡಿದರೆ ಮಾತ್ರ ಈಗಿನ ದೆಹಲಿಯನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳಲು ಸಾಧ್ಯ.
ಸುಮಾರು 750 ವರ್ಷಗಳಷ್ಟು ಹಳೆಯದಾದ ದೆಹಲಿಯನ್ನು ಇತಿಹಾಸದ ಪುಟಗಳಲ್ಲಿ ಹುಡುಕುತ್ತಾ ಹೋದರೆ ಮತ್ತೆಮತ್ತೆ ಇದಿರಾಗುವುದು  `ದೆಹಲಿ ಎನ್ನುವ ಯುದ್ಧಭೂಮಿ' ಮಾತ್ರ. ಯುದ್ಧಗಳಲ್ಲಿ ದೆಹಲಿ ಸೋತದ್ದೇ ಹೆಚ್ಚು. ಸೋತುಹೋದ ನಗರಗಳಲ್ಲಿ ಸಾಮಾನ್ಯವಾಗಿ ನಡೆಯುವ ಹತ್ಯೆ, ಲೂಟಿ ಮತ್ತು ಅತ್ಯಾಚಾರಗಳಿಂದ ದೆಹಲಿ ಕೂಡಾ ಹೊರತಾಗಿರಲಿಲ್ಲ. ಹದಿನೈದು ಮೈಲಿಗಿಂತಲೂ ಕಡಿಮೆ ವಿಸ್ತೀರ್ಣದಲ್ಲಿ ಸುಮಾರು ಎಂಟು ಶತಮಾನಗಳ ಕಡಿಮೆ ಅವಧಿಯಲ್ಲಿ ಏಳು ಡೆಲ್ಲಿಗಳು ನಿರ್ಮಾಣಗೊಂಡಿದ್ದವು. ಡೆಲ್ಲಿಯನ್ನು ಗೆದ್ದವರೆಲ್ಲರೂ ರಾಜಧಾನಿಯ ನಿವೇಶನವನ್ನು ಬದಲಾಯಿಸುತ್ತಾ ಹೋಗಿದ್ದಾರೆ.1947ರಲ್ಲಿ ಬ್ರಿಟಿಷರು ದೇಶ ಬಿಟ್ಟು ಹೊರಟಾಗ ಡೆಲ್ಲಿಯ ರಸ್ತೆಗಳಲ್ಲಿ ಹರಿದ ರಕ್ತವನ್ನು ಕಂಡ ಒಬ್ಬ ಮುಸ್ಲಿಮ್ ಮಹಿಳೆ `ಡೆಲ್ಲಿ ತನ್ನ ಪತ್ನಿತ್ವ ಬದಲಿಸುತ್ತಲೇ ಬಂದಿದ್ದಾಳೆ, ಹಾಗೆ ಬದಲಿಸುವಾಗೆಲ್ಲ ರಕ್ತ ಹರಿದೇ ಹರಿಯುತ್ತದೆ' ಎಂದಿದ್ದನ್ನು ಲೋಹಿಯಾ ಉಲ್ಲೇಖಿಸುತ್ತಾರೆ.
ಹಳೆಯ ದಿಲ್ಲಿ, ಡೆಲ್ಲಿ ಈಗ ನವದೆಹಲಿ. ಈ ದೆಹಲಿಯಲ್ಲಿ  ಅರಸರಿಲ್ಲ, ಅರಮನೆಗಳೂ ಇಲ್ಲ, ಈಗಿನ ದೆಹಲಿ ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ರಾಜಧಾನಿ. ಈ ಹೊಸ ಅವತಾರದ ಹೊರತಾಗಿಯೂ ದೆಹಲಿ ಅದೇ ಹಳೆಯ `ಅತ್ಯಾಚಾರಗಳ ನಗರ'ವಾಗಿಯೇ ಉಳಿದಿರುವುದು ಅಚ್ಚರಿ ಉಂಟು ಮಾಡುತ್ತಿದೆ. ದೆಹಲಿಯ ಮಟ್ಟಿಗೆ ಅತ್ಯಾಚಾರದ ಇತಿಹಾಸ ಮರುಕಳಿಸುತ್ತಿದೆ ಎಂದು ಹೇಳುವ ಹಾಗಿಲ್ಲ, ಮರುಕಳಿಸಲು ಇಲ್ಲಿ ಇತಿಹಾಸ ಬದಲಾಗಿಯೇ ಇಲ್ಲ, ಅದು ಮುಂದುವರಿಯುತ್ತಾ ಬಂದಿದೆ.
  ದೆಹಲಿಯ ಬಹಳ ದೊಡ್ಡ ಸಮಸ್ಯೆಯೆಂದರೆ  ದೇಶದ ಮಹಾನಗರಗಳಿಗೆಲ್ಲ ಇರುವ ಒಂದು ಐಡೆಂಟಿಟಿ ದೆಹಲಿಗೆ ಇಲ್ಲ. ಕರ್ನಾಟಕ ಕನ್ನಡಿಗರದ್ದು, ಮುಂಬೈ ಮರಾಠಿಗರದ್ದು, ಕೊಲ್ಕತ್ತ ಬಂಗಾಳಿಗಳದ್ದು, ಚೆನ್ನೈ ತಮಿಳರದ್ದು, ದೆಹಲಿ ಯಾರದ್ದು?  ಮೂಲತಃ ಮುಸ್ಲಿಮ್‌ಬಾಹುಳ್ಯದ ಈ ನಗರವನ್ನು ನಂತರದ ದಿನಗಳಲ್ಲಿ ಪಂಜಾಬಿಗಳು ಆಕ್ರಮಿಸಿಕೊಂಡರೂ `ನಾವು ಇಲ್ಲಿನ ಮಣ್ಣಿನ ಮಕ್ಕಳು' ಎಂದು ಹೇಳುವವರು ಈಗಲೂ ಅಲ್ಲಿ ಯಾರೂ ಇಲ್ಲ. ಅಲ್ಲಿರುವ ಹೆಚ್ಚಿನವರು `ದಾಳಿಕೋರ'ರ ರೂಪದಲ್ಲಿಯೇ ಪ್ರವೇಶಿಸಿದವರು. ಈ `ದಾಳಿಕೋರ' ಮನಸ್ಸೇ ದೆಹಲಿಯನ್ನು ಅಸುರಕ್ಷಿತ ನಗರವನ್ನಾಗಿ ಮಾಡಿರುವುದು.
ದೆಹಲಿಯಲ್ಲಿ ಅತ್ಯಂತ ಸುರಕ್ಷಿತವಾಗಿರುವವರು `ಗಣ್ಯರು ಮತ್ತು ಅತೀಗಣ್ಯರು' ಎಂಬ ಆವರಣದಲ್ಲಿರುವ ರಾಜಕಾರಣಿಗಳು ಮತ್ತು ಬ್ಯೂರೋಕ್ರಾಟ್‌ಗಳು. ಈ ಎರಡು ವರ್ಗವೇ ದೆಹಲಿಯನ್ನು ಆಳುತ್ತಿರುವುದು. ಇದರಿಂದಾಗಿ ದೆಹಲಿಯ ಪೊಲೀಸರೇ ಇರಲಿ ಇಲ್ಲವೇ ಕೆಳಹಂತದ ಸರ್ಕಾರಿ ಅಧಿಕಾರಿಗಳೇ ಇರಲಿ ಅವರಿಗೆಲ್ಲ ಅರ್ಥವಾಗುವುದು `ರಾಜಕೀಯದ ಭಾಷೆ' ಮಾತ್ರ. ಕಣ್ಣೆದುರು ಅಪರಾಧ ನಡೆಯುತ್ತಿದ್ದರೂ ಪೊಲೀಸರು ಸಮೀಪ ಹೋಗಲು ನೂರು ಬಾರಿ ಯೋಚನೆ ಮಾಡುತ್ತಾರೆ.
ಅಕಸ್ಮಾತ್ ಅಪರಾಧದಲ್ಲಿ ತೊಡಗಿರುವವರು ಯಾವುದೋ ರಾಜಕಾರಣಿ ಇಲ್ಲವೇ ಅಧಿಕಾರಿಯ ಮಗನೋ,ಮಗಳೋ ಆಗಿದ್ದರೆ ತಮ್ಮ ಗತಿ ಏನು ಎಂದು ಅವರು ಯೋಚನೆ ಮಾಡುತ್ತಾರೆ. (ಖಂಡಿತ ನಂಬಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳನ್ನು ರಕ್ಷಿಸಲು ದೂರದಲ್ಲಿ ಕೂತಿರುವ ಯಾವುದೋ ರಾಜಕಾರಣಿ ಖಂಡಿತ ಪ್ರಯತ್ನಿಸುತ್ತಿದ್ದಾನೆ. ಈ ಬಗ್ಗೆ ಅನುಮಾನ ಬೇಡ).  ಗಣ್ಯರ ಪ್ರವೇಶಕ್ಕಾಗಿ ಇರುವ ಗುರುತುಪತ್ರವನ್ನೇ ನಕಲು ಮಾಡಿ ಭಯೋತ್ಪಾದಕರು ಸಂಸತ್ ಪ್ರವೇಶಿಸಲು ಸಾಧ್ಯವಾಗಿದ್ದು ಕೂಡಾ ಗಣ್ಯರ ಬಗ್ಗೆ ಪೊಲೀಸರಿಗೆ ಇರುವ ಭಯದಿಂದಾಗಿಯೇ.
ದೆಹಲಿ ಅಪರಾಧಗಳ ನಗರವಾಗಿ ಬೆಳೆಯಲು ಇನ್ನೂ ಆಳವಾದ ಕಾರಣಗಳಿವೆ. ದೆಹಲಿ ಎಂದರೆ ಶೀಲಾದೀಕ್ಷಿತ್ ಮುಖ್ಯಮಂತ್ರಿಯಾಗಿರುವ ರಾಜ್ಯ ಮಾತ್ರ ಅಲ್ಲ. ಈ ರಾಜ್ಯಕ್ಕಿಂತಲೂ ವಿಸ್ತಾರವಾದ `ರಾಷ್ಟ್ರೀಯ ರಾಜಧಾನಿ ಪ್ರದೇಶ' (ಎನ್‌ಸಿಆರ್) ಇದೆ. ಹರಿಯಾಣ, ಉತ್ತರಪ್ರದೇಶ, ರಾಜಸ್ತಾನ ಮತ್ತು ದೆಹಲಿ ರಾಜ್ಯಗಳು ಈ `ಎನ್‌ಸಿಆರ್' ವ್ಯಾಪ್ತಿಯಲ್ಲಿ ಬರುತ್ತದೆ. ದೆಹಲಿಯ ಪೂರ್ವಭಾಗದಲ್ಲಿ ನೊಯ್ಡಾ ಮತ್ತು ಗಾಜಿಯಾಬಾದ್, ದಕ್ಷಿಣದಲ್ಲಿ ಗುಡಗಾಂವ್ ಮತ್ತು ಉತ್ತರದಲ್ಲಿ ಚಂಡೀಗಢ ಇದೆ. ಈ ನಾಲ್ಕು ನಗರಗಳು ಕಳೆದೆರಡು ದಶಕಗಳಲ್ಲಿ ಊಹಿಸಲಾಗದಷ್ಟು ವೇಗವಾಗಿ ಬೆಳೆದಿದೆ. ನೊಯ್ಡಾ,ಗಾಜಿಯಾಬಾದ್, ಗೂಡ್‌ಗಾಂವ್‌ಗಳಲ್ಲಿ ಕೃಷಿ ಮಾಡಿಕೊಂಡು ಸಾಮಾನ್ಯ ರೈತರಂತೆ ಬದುಕುತ್ತಿದ್ದವರ ಬದುಕು `ಎನ್‌ಸಿಆರ್'ಗೆ ಸೇರಿಕೊಂಡ ನಂತರ ಗುರುತಿಸಲಾಗದಷ್ಟು ಬದಲಾಗಿದೆ.
ಭೂಮಿಗೆ ಸಿಕ್ಕ ಚಿನ್ನದ ಬೆಲೆ ಈ ರೈತರನ್ನು ರಾತ್ರಿ ಹಗಲಾಗುವುದರೊಳಗೆ ಲಕ್ಷಾಧಿಪತಿ-ಕೋಟ್ಯಧಿಪತಿಗಳನ್ನಾಗಿ ಮಾಡಿದೆ. ಈ ಕುಟುಂಬಗಳ ಹೊಸ ತಲೆಮಾರು ರೈತರಾಗಿ ಉಳಿದಿಲ್ಲ. ಕುಟುಂಬಕ್ಕೆ ಬಂದಿರುವ ದಿಡೀರ್ ಶ್ರಿಮಂತಿಕೆ ಹೊಸ ತಲೆಮಾರನ್ನು ಅಡ್ಡದಾರಿಗಳಲ್ಲಿ ಕೊಂಡೊಯ್ದಿದೆ. ಇವರಲ್ಲಿ ಕೆಲವರು ನೇರವಾಗಿ ರಾಜಕೀಯಕ್ಕೆ ಇಳಿದಿದ್ದಾರೆ, ಉಳಿದವರಲ್ಲಿ ಹೆಚ್ಚಿನವರು ಸುಲಭದ ಹಣವನ್ನು ಮೋಜು-ಮಸ್ತಿಯಲ್ಲಿ ಕಳೆಯುತ್ತಿದ್ದಾರೆ. ತಾವು ಮಾಡುತ್ತಿರುವ ಅಪರಾಧಗಳಿಗೆ ರಾಜಕೀಯ ರಕ್ಷಣೆ ಪಡೆಯಲು ರಾಜಕಾರಣಿಗಳ ಹಿಂಬಾಲಕರ ಪಡೆ ಸೇರಿಕೊಂಡಿದ್ದಾರೆ.
ಸಂಜೆಯಾಗುತ್ತಿದ್ದಂತೆಯೇ ಗೂಡ್‌ಗಾಂವ್, ಚಂಡೀಗಢ, ನೋಯ್ಡಾ, ಗಾಜಿಯಾಬಾದ್ ಕಡೆಗಳಿಂದ ಈ ಪುಂಡರ ಗುಂಪು ವಿಲಾಸಿ ಕಾರುಗಳಲ್ಲಿ ರಾಜಧಾನಿಗೆ ದಾಳಿ ಇಡುತ್ತದೆ, ಅಲ್ಲಿನ ಪಬ್-ಬಾರ್‌ಗಳಲ್ಲಿ, ಐಷಾರಾಮಿ ಹೊಟೇಲ್ ರೂಮ್‌ಗಳಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಮರಳುತ್ತಾರೆ. ದೆಹಲಿ ಈಗಲೂ ದಾಳಿಕೋರರನ್ನು ಸೆಳೆಯುವ ಗುರಿ. ಜೆಸ್ಸಿಕಾಲಾಲ್ ಎಂಬ ಬಾರ್ ಅಟೆಂಡರ್‌ನಿಂದ ಹಿಡಿದು ನಿತೀಶ್ ಕಟಾರ ಎಂಬ ಪ್ರೇಮಿಯ ವರೆಗಿನ ಹತ್ಯೆ ಪ್ರಕರಣಗಳಲ್ಲಿ ಅಪರಾಧಿಗಳಾಗಿರುವವರು ಇದೇ ಗುಂಪಿಗೆ ಸೇರಿದವರು.
ಇವರಿಗಿಂತ ಕೆಳಹಂತದಲ್ಲಿರುವ ಇನ್ನೊಂದು ಪುಂಡರ ಗುಂಪಿದೆ.  ಖಾಸಗಿ `ಬ್ಲೂಲೈನ್' ಬಸ್‌ಗಳನ್ನು ಓಡಿಸುವವರು ಈ ಗುಂಪಿನಡಿ ಬರುತ್ತಾರೆ. ಕಳೆದ ತಿಂಗಳು ಪ್ಯಾರಾಮೆಡಿಕಲ್‌ವಿದ್ಯಾರ್ಥಿನಿಯನ್ನು ಬಲಿತೆಗೆದುಕೊಂಡದ್ದು ಇಂತಹದ್ದೇ ದುಷ್ಕರ್ಮಿಗಳ ಗುಂಪು.  ದೆಹಲಿಯಲ್ಲಿ ಸರ್ಕಾರಿ ಬಸ್‌ಗಳ ಜತೆಯಲ್ಲಿ ಖಾಸಗಿ ಬಸ್‌ಗಳಿಗೂ ಅವಕಾಶ ನೀಡಲಾಗಿದೆ.  ಅತ್ಯಾಧುನಿಕ ಮೆಟ್ರೋ ಜತೆ, ಜನ ಕೂರಲು ಅಸಹ್ಯ ಪಡುವಂತಹ ಖಾಸಗಿ `ಬ್ಲೂಲೈನ್' ಬಸ್‌ಗಳು ದೆಹಲಿಯಲ್ಲಿವೆ. ಹೆಚ್ಚಿನ ಬಸ್‌ಗಳಿಗೆ ರಾಜಕಾರಣಿಗಳು ಮಾಲೀಕರಾಗಿರುತ್ತಾರೆ. ಅವರಿಂದ ನಾಲ್ಕೈದು ಮಂದಿ ಯುವಕರು ಸೇರಿ ಬಸ್‌ಗಳನ್ನು ದಿನಬಾಡಿಗೆಗೆ ಓಡಿಸುತ್ತಾರೆ.
ಒಂದೊಂದು ಬಸ್‌ನಲ್ಲಿ ಡ್ರೈವರ್,ಕಂಡಕ್ಟರ್, ಕ್ಲೆನರ್ ಸೇರಿದಂತೆ ಕನಿಷ್ಠ ಮೂರರಿಂದ ಐದು ಮಂದಿ ಇರುತ್ತಾರೆ. ಇವರಲ್ಲಿ ಹೆಚ್ಚಿನವರು ರಾಜಸ್ತಾನ, ಉತ್ತರಪ್ರದೇಶ, ಚಂಡೀಗಡದ ಕಡೆಯಿಂದ ಬಂದವರು. ಮೇಲ್ನೋಟದಲ್ಲಿಯೇ ಕ್ರಿಮಿನಲ್‌ಗಳಂತೆ ಕಾಣಿಸುತ್ತಾರೆ. ಯಾವ ಬಸ್‌ಗೂ ನಿರ್ದಿಷ್ಠ ರೂಟ್‌ಗಳಾಗಲಿ, ವೇಳಾಪಟ್ಟಿಯಾಗಲಿ ಇಲ್ಲ. ಪ್ರಯಾಣಿಕರ ಜತೆ ಅಸಭ್ಯವರ್ತನೆಯಿಂದ ಹಿಡಿದು ಇವರು ಮಾಡುವ ಪುಂಡಾಟಿಕೆ ಅನುಭವಿಸಿದವರಿಗೇ ಗೊತ್ತು. ದೆಹಲಿಯಲ್ಲಿ ಎಂಟು ಗಂಟೆಗೆ ಲಿಕ್ಕರ್‌ಶಾಪ್‌ಗಳು ಮುಚ್ಚುವುದರಿಂದ ಸಂಜೆಯಾಗುತ್ತಿದ್ದಂತೆಯೇ ಇವರು ಸಾರಾಯಿ ಬಾಟಲಿಗಳನ್ನು ತಂದು ಕೂಡಿಡುತ್ತಾರೆ. ಬಸ್ ಓಡಿಸುತ್ತಲೇ ಬಾಟಲಿಗೆ  ಬಾಯಿ ಹಾಕುವವರು ಇದ್ದಾರೆ. (ಒಂಬತ್ತು ವರ್ಷಗಳ ಕಾಲ ದೆಹಲಿಯ ಇಂತಹ ಬಸ್‌ಗಳಲ್ಲಿ ಸಂಚಾರಮಾಡಿದ ನನ್ನ ಅನುಭವ ಇದು.)
ಬಸ್ ಮಾಲೀಕರಿಗೆ ಪೊಲೀಸರ ಜತೆ ಸಂಬಂಧ ಇರುವುದರಿಂದ ಸಂಚಾರದ ನಿಯಮಗಳ ಉಲ್ಲಂಘನೆಯೂ ಸೇರಿದಂತೆ ಯಾವ ಅಪರಾಧಕ್ಕೂ ಶಿಕ್ಷೆಯಾಗುವುದಿಲ್ಲ. ಈ ಬಸ್‌ಗಳು ನಡೆಸಿದ ಅಪಘಾತದಲ್ಲಿ ಪ್ರತಿವರ್ಷ ನೂರಾರು ಮಂದಿ ಪ್ರಾಣಕಳೆದುಕೊಳ್ಳುತ್ತಾರೆ. ಇಂತಹದ್ದೊಂದು ಅಪಾಯಕಾರಿ ಮತ್ತು ಅಷ್ಟೇ ಅಸಹ್ಯಕರವಾದ ಸಂಚಾರ ವ್ಯವಸ್ಥೆಯನ್ನು ದೇಶದ ರಾಜಧಾನಿಯ ಜನ ಹೇಗೆ ಸಹಿಸಿಕೊಂಡು ಬಂದಿದ್ದಾರೆ ಎನ್ನುವುದೇ ಅಶ್ಚರ್ಯಕರ. ಮೊನ್ನೆ ಪ್ರತಿಭಟನೆ ನಡೆಸುತ್ತಿದ್ದ ಜನ ಕನಿಷ್ಠ ನಾಲ್ಕೈದು `ಬ್ಲೂಲೈನ್' ಬಸ್‌ಗಳಿಗಾದರೂ ಬೆಂಕಿ ಹಚ್ಚಬಹುದೆಂದು ನಾನು ನಿರೀಕ್ಷಿಸಿದ್ದೆ. ಆ ಬರ್ಬರ ಘಟನೆಯ ನಂತರವೂ ಯಾರೊಬ್ಬರೂ ಖಾಸಗಿ ಬಸ್‌ಗಳ ಪುಂಡಾಟಿಕೆ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತಿಲ್ಲ.
 ದೇಶದ ರಾಜಧಾನಿಯ ಕುಖ್ಯಾತಿಯನ್ನು ಸಾಬೀತುಪಡಿಸಲು ಇಷ್ಟೆಲ್ಲ ಇತಿಹಾಸ, ಹಳೆಯ ಪ್ರಕರಣಗಳ ಪಟ್ಟಿ ಇಲ್ಲವೇ ಪೊಲೀಸ್ ದಾಖಲೆಗಳ ನೆರವು ಬೇಕಾಗಿಲ್ಲ. ಅಲ್ಲಿನ ಗಾಳಿಯಲ್ಲಿಯೇ ತಣ್ಣಗೆ ಕೊರೆಯುವ ಅಸುರಕ್ಷತೆಯ ಭಾವ ಇದೆ. ಹೊರರಾಜ್ಯಗಳಿಂದ ಹೋಗುವ ಸಾಮಾನ್ಯ ಜನರಿಗೆ ಅಲ್ಲಿ ಕಾಲಿಟ್ಟ ಕ್ಷಣವೇ ಇದರ ಅನುಭವವಾಗುತ್ತದೆ. ಯಾವುದೋ ರಾಜಕಾರಣಿ ಇಲ್ಲವೇ ಅಧಿಕಾರಿಯ `ಕೇರಾಫ್' ಇಲ್ಲದೆ ಹೋದರೆ ಅಲ್ಲಿ ಗಟ್ಟಿಯಾಗಿ ಉಸಿರಾಡುವುದೂ ಕಷ್ಟ.
ಅನುಭವಗಳು ಭಿನ್ನವಾಗಿರಬಹುದು, ಆದರೆ ಮುಂಬೈ, ಬೆಂಗಳೂರು, ಕೊಲ್ಕತ್ತ ಇಲ್ಲವೇ ಚೆನ್ನೈ ಮಹಾನಗರಗಳಲ್ಲಿ ಅಪರಿಚಿತರಾಗಿ ಅಡ್ಡಾಡುವಾಗ ಇಂತಹ ಅಸುರಕ್ಷತೆ ಕಾಡುವುದಿಲ್ಲ. ದೆಹಲಿ ಎನ್ನುವ ಸಮಸ್ಯೆಗೆ ಸುಲಭದ ಪರಿಹಾರ ಇಲ್ಲ. ಬಹುಶಃ ಮಹಮ್ಮದ್ ಬಿನ್ ತುಘಲಕ್ ರಾಜಧಾನಿಯನ್ನು ಸ್ಥಳಾಂತರಿಸಲು ನಡೆಸಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದರೆ...ದೆಹಲಿ ಈಗಿನಂತೆ ಇರುತ್ತಿರಲಿಲ್ಲವೇನೋ?

Monday, December 24, 2012

ಮೋದಿ ಪಾಲಿಗೆ ದೆಹಲಿ ಸಮೀಪ, ಅಷ್ಟೇ ದೂರ Dec 24 2012


ಹತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿ, ಮೂರು ಚುನಾವಣೆಗಳನ್ನು ಗೆದ್ದು, ದೇಶದಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನವನ್ನು ಉಂಟು ಮಾಡಿರುವ ನರೇಂದ್ರಮೋದಿ, ಗುಜರಾತ್‌ನಲ್ಲಿಯೇ ಉಳಿದು ಮುಂದೊಂದು ದಿನ ಅಲ್ಲಿಂದಲೇ ರಾಜಕೀಯ ನಿವೃತ್ತಿ ಘೋಷಿಸುತ್ತಾರೆ ಎಂದು ತಿಳಿದುಕೊಂಡವರು ಮೂರ್ಖರು. ನರೇಂದ್ರಮೋದಿ ಮೂರ್ಖರಲ್ಲ, ಅವರೊಬ್ಬ ಮಹತ್ವಾಕಾಂಕ್ಷಿ ಅಷ್ಟೇ ಜಾಣ ರಾಜಕಾರಣಿ. ರಾಷ್ಟ್ರರಾಜಕಾರಣದ ಕಡೆಗೆ ಅವರು ಹೊರಟಿರುವ ದಾರಿಯಲ್ಲಿ ಹಲವಾರು ಅಡ್ಡಿಆತಂಕಗಳಿವೆ ನಿಜ, ಆದರೆ ಇವು ಯಾವುದೂ ಮುಂದಿನ ದಿನಗಳ ಅವರ ದೆಹಲಿ ಪ್ರಯಾಣದ ಸಂಕಲ್ಪವನ್ನು ಬದಲಾಯಿಸದು. ಈ `ರಸ್ತೆತಡೆ'ಗಳನ್ನೆಲ್ಲ ಎದುರಿಸಿ ಅವರು ದೆಹಲಿ ತಲುಪಿದರೂ ಮುಂದೊಂದು ದಿನ ಪ್ರಧಾನಿಯಾಗಿಯೇ ಬಿಡುತ್ತಾರೆ ಎನ್ನುವುದಕ್ಕೂ ಖಾತರಿ ಇಲ್ಲ.  ಆದರೆ ಮನೆಬಾಗಿಲಿಗೆ ಬಂದಿರುವ ಈ ಅವಕಾಶವನ್ನು ಸುಲಭದಲ್ಲಿ ಬಿಟ್ಟುಕೊಡುವಷ್ಟು ಉದಾರಿ ನರೇಂದ್ರಮೋದಿ ಅಲ್ಲ. 
  ಮೋದಿ ಇಂತಹದ್ದೊಂದು ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲು ಅವರದ್ದೇ ಆಗಿರುವ ಕಾರಣಗಳಿವೆ. ಗುಜರಾತ್ ಮುಖ್ಯಮಂತ್ರಿಯಾಗಲು ಹನ್ನೊಂದು ವರ್ಷಗಳ ಹಿಂದೆ ದೆಹಲಿಯಿಂದ ನರೇಂದ್ರಮೋದಿ ಅವರನ್ನು ಕಳುಹಿಸಿದಾಗ ಆ ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಏನಿತ್ತೋ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಈಗಿನ ಸ್ಥಿತಿ ಹೆಚ್ಚುಕಡಿಮೆ ಹಾಗೆಯೇ ಇದೆ. 1998ರ ಲೋಕಸಭಾ ಚುನಾವಣೆಯ ನಂತರದ ದಿನಗಳಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಎದುರಿಸಿದ್ದು ನಿರಂತರ ಸೋಲಿನ ಸರಮಾಲೆಯನ್ನು. ಸಾಬರಮತಿ ವಿಧಾನಸಭಾ ಕ್ಷೇತ್ರ ಮತ್ತು ಸಬರ್‌ಕಾಂಟಾ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ, ಅನಂತರ ನಡೆದ ಪಂಚಾಯತ್ ಚುನಾವಣೆ ಹಾಗೂ ಅಹ್ಮದಾಬಾದ್ ಮತ್ತು ರಾಜಕೋಟ್ ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಪರಾಭವಗೊಂಡಿತ್ತು. ಆ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಂಕರ್‌ಸಿಂಗ್ ವಘೇಲಾ. ಮುಖ್ಯಮಂತ್ರಿಯಾಗಿದ್ದ ಕೇಶುಭಾಯಿ ಪಟೇಲ್ ಅವರು ಪಕ್ಷದ ಹಿನ್ನಡೆಯನ್ನು ತಡೆಯಲಿಕ್ಕಾಗದೆ ಕೈಚೆಲ್ಲಿ ಕೂತಿದ್ದರು. ಆ ಕಾಲದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರಮೋದಿ ಅವರನ್ನು ಗುಜರಾತ್‌ಗೆ ಕಳುಹಿಸಿಕೊಡಲಾಯಿತು. ಅದರ ನಂತರ ಮೋದಿ ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ. ಪ್ರಧಾನಮಂತ್ರಿ ಅಭ್ಯರ್ಥಿಯಾಗಲು ಅರ್ಜಿಯನ್ನೇನಾದರೂ ಬರೆದುಕೊಡಬೇಕಾದ ಪರಿಸ್ಥಿತಿ ಬಂದರೆ ಮೋದಿ ಖಂಡಿತ ಈ ಸಾಧನೆಯನ್ನು ಅದರಲ್ಲಿ ಉಲ್ಲೇಖಿಸಬಹುದು. 

ಲೋಕಸಭಾ ಚುನಾವಣೆಯಲ್ಲಿ ಸತತ ಎರಡು ಸೋಲು, ಸಾಲುಸಾಲು ವಿಧಾನಸಭಾ ಚುನಾವಣೆಗಳಲ್ಲಿ ಪರಾಭವ, ಪಕ್ಷದ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪ, ದೆಹಲಿ ನಾಯಕರ ನಡುವಿನ ಬಿಕ್ಕಟ್ಟು, ದುರ್ಬಲವಾಗಿ ಹೋಗಿರುವ ಹೈಕಮಾಂಡ್, ಕರ್ನಾಟಕದಲ್ಲಿ ಹೋಳಾಗಿರುವ ಪಕ್ಷ, ರಾಜಸ್ತಾನದಲ್ಲಿ ತಣ್ಣಗಾಗದ ಬಂಡಾಯದ ಉರಿ...-ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಸ್ಥಿತಿ ಚಿಂತಾಜನಕವಾಗಿದೆ. ಪಕ್ಷವನ್ನು ಈಗಿನ ಸ್ಥಿತಿಯಿಂದ ಮೇಲೆತ್ತಲು ಸಾಧ್ಯ ಇರುವ ಏಕೈಕ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರಿಗೆ ವಯಸ್ಸಾಗಿದೆ, ಜತೆಗೆ ಸಂಘ ಪರಿವಾರ ಅವರ ನಿವೃತ್ತಿಯನ್ನು ಬಯಸುತ್ತಿದೆ. ಹಾಗೆಂದ ಮಾತ್ರಕ್ಕೆ ನರೇಂದ್ರಮೋದಿ  ಪ್ರಧಾನಿ ಸ್ಥಾನಕ್ಕೆ ಪಕ್ಷದ ಒಮ್ಮತದ ಅಭ್ಯರ್ಥಿ ಅಲ್ಲ. ಅವರು ದೆಹಲಿಗೆ ಜಿಗಿಯಲು ನಿರ್ಧರಿಸಿದರೆ ಅಲ್ಲಿರುವ ನಾಯಕರು ಆರತಿಬೆಳಗಿ ಸ್ವಾಗತಿಸಲಿದ್ದಾರೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಮೋದಿಯವರು ಒಂದಲ್ಲ ಕನಿಷ್ಠ ಮೂರು ದಿಕ್ಕುಗಳಿಂದ ವಿರೋಧವನ್ನು ಎದುರಿಸಬೇಕಾಗುತ್ತದೆ.
 ವಿರೋಧಿಸುವ ಮೊದಲನೆಯ ಗುಂಪು-  ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ರಾಜನಾಥ್ ಸಿಂಗ್  ಎಂಬ `ಡೆಲ್ಲಿ-4' ಗ್ಯಾಂಗ್.  ಇವರಲ್ಲಿ ಜೇಟ್ಲಿ ಮತ್ತು ಸುಷ್ಮಾ ಖಂಡಿತ  ಪ್ರಧಾನಿ ಅಭ್ಯರ್ಥಿಯಾಗುವ ಅರ್ಹತೆ ಉಳ್ಳವರು, ಆ ಮಹತ್ವಾಕಾಂಕ್ಷೆ ಕೂಡಾ ಅವರಲ್ಲಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ನಾಯಕ ಇಲ್ಲವೆ ನಾಯಕಿಗೆ ಇರಬೇಕಾದ ರಾಷ್ಟ್ರಮಟ್ಟದ ಪ್ರಭಾವ ಇಬ್ಬರಲ್ಲಿಯೂ ಇಲ್ಲ. ಸುಷ್ಮಾಸ್ವರಾಜ್ ಮಧ್ಯಪ್ರದೇಶದ ಸುರಕ್ಷಿತ ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಗೆದ್ದು ಬಂದವರು. ಜೇಟ್ಲಿಗೆ ರಾಜ್ಯಸಭೆಯನ್ನು ಪ್ರವೇಶಿಸಲು ಕೂಡಾ ನರೇಂದ್ರಮೋದಿ ನೆರವು ಬೇಕು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜನಾಥ್‌ಸಿಂಗ್‌ಗೆ ತನ್ನ ಜನಪ್ರಿಯತೆಯನ್ನು ಅವರ ರಾಜ್ಯದಲ್ಲಿಯೇ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ವೆಂಕಯ್ಯನಾಯ್ಡು ಅವರನ್ನು ಪಕ್ಷದಲ್ಲಿಯೇ ಯಾರೂ ಗಂಭೀರವಾಗಿ ಸ್ವೀಕರಿಸಿಲ್ಲ. 
 ಇಂತಹ `ಮನಮೋಹನ್‌ಸಿಂಗ್'ಗಳು ಪ್ರಧಾನಿಯಾಗಬೇಕಾದರೆ ಒಬ್ಬ `ಸೋನಿಯಾಗಾಂಧಿ' ಬೇಕಾಗುತ್ತದೆ. ಸದ್ಯದ  ಬಿಜೆಪಿಯಲ್ಲಿ ಅಂತಹ ಯಾವ `ಸೋನಿಯಾಗಾಂಧಿ'ಯೂ ಕಾಣುತ್ತಿಲ್ಲ. ಈ `ಡೆಲ್ಲಿ-4' ತಮ್ಮವರಲ್ಲಿ ಒಬ್ಬರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಒಪ್ಪಿಕೊಂಡರೆ ಮೋದಿ ಅವರನ್ನು ತಡೆಯುವ ಒಂದು ಸಣ್ಣ ಅವಕಾಶ ಇದೆ. ಅಂತಹ ವಿಶಾಲ ಮನಸ್ಸು ಈ ಗ್ಯಾಂಗ್‌ನಲ್ಲಿ ಕಾಣುತ್ತಿಲ್ಲ. ಈ ಬಿಕ್ಕಟ್ಟು ನರೇಂದ್ರ ಮೋದಿಯವರಿಗೆ ನೆರವಾಗಬಹುದಾದ ಅನುಕೂಲತೆ. ಆದರೆ ಪರಸ್ಪರ ಸಹಮತ ಇಲ್ಲದೆ ಇದ್ದರೂ ಹೊರಗಿನವರ ಪ್ರವೇಶವನ್ನು ಸಹಿಸಲಾರದು ಈ `ಡೆಲ್ಲಿ-4'ಗ್ಯಾಂಗ್. ನಿತಿನ್ ಗಡ್ಕರಿ ಅವರನ್ನು ಆರ್‌ಎಸ್‌ಎಸ್ ನಾಗಪುರದಿಂದ ದೆಹಲಿಗೆ `ರಫ್ತು' ಮಾಡಿದಾಗ ಇವರೇ ಒಟ್ಟಾಗಿ ವಿರೋಧಿಸಿದವರು. ಸರ್ವಾಧಿಕಾರಿಯಂತಿರುವ ಮೋದಿ ತಮ್ಮನ್ನು ಮೂಲೆಗುಂಪು ಮಾಡಬಹುದೆಂಬ ಭೀತಿಯಿಂದ ನರಳುತ್ತಿರುವ ಈ ನಾಯಕರು ಅವರನ್ನು ಸ್ವಾಗತಿಸಲು ಹೇಗೆ ಸಾಧ್ಯ?
 ಎರಡನೆಯ ಗುಂಪು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರದ್ದು. ಅಟಲಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ನಂತರ ಆರ್‌ಎಸ್‌ಎಸ್ ಪ್ರಯಾಸಪಟ್ಟು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.  ಆಕ್ರಮಣಕಾರಿ ಮತ್ತು ಸ್ವತಂತ್ರ ವ್ಯಕ್ತಿತ್ವದ ಮೋದಿ ಅವರನ್ನು ತಮ್ಮ ಹಿಡಿತದಲ್ಲಿಡುವುದು ಕಷ್ಟ ಎಂದು ಈ ಹಿರಿತಲೆಗಳಿಗೆ ಗೊತ್ತಿದೆ. (ಬಿ.ಎಸ್.ಯಡಿಯೂರಪ್ಪನವರು ಕಲಿಸಿದ ಪಾಠದ ನಂತರ ಆರ್‌ಎಸ್‌ಎಸ್‌ನ ಈ ಅಭಿಪ್ರಾಯ ಇನ್ನಷ್ಟು ಬಲವಾಗಿರಬಹುದು). ಇದಕ್ಕಾಗಿಯೇ ಅಲ್ಲವೆ ಅವರು  ಭ್ರಷ್ಟಾಚಾರದ ಆರೋಪಗಳ ಬಗ್ಗೆ ತಿಳಿದಿದ್ದರೂ ಮತ್ತು ನರೇಂದ್ರಮೋದಿಯವರೇ ವಿರೋಧಿಸಿದ್ದರೂ ನಿತಿನ್ ಗಡ್ಕರಿ ಎಂಬ ಬೇರುಗಳಿಲ್ಲದ ದುರ್ಬಲ ನಾಯಕನನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದು ಮತ್ತು ಇನ್ನೊಂದು ಅವಧಿಗೂ ಅವರನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿರುವುದು.
  ಮೋದಿ ಬಗ್ಗೆ ಸಂಘ ಪರಿವಾರದ ಆತಂಕಗಳಿಗೆ ಕಾರಣಗಳಿವೆ. ಕಳೆದ ಹತ್ತುವರ್ಷಗಳ ತನ್ನ ಆಳ್ವಿಕೆ ಕಾಲದಲ್ಲಿ ಮೋದಿ ಅವರು ಗುಜರಾತ್‌ನಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿ ಕೂರಿಸಿದ್ದಾರೆ. ದೇಶದಾದ್ಯಂತ ಸುತ್ತಾಡಿ ಬೆಂಕಿ ಉಗುಳುವ ವಿಶ್ವಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಗುಜರಾತ್‌ನವರೇ ಆಗಿದ್ದರೂ ಮೋದಿ ಆಳ್ವಿಕೆ ಕಾಲದಲ್ಲಿ ಅವರು ಅಲ್ಲಿ ಮಾತನಾಡಿದ್ದನ್ನು ಯಾರಾದರೂ ಕೇಳಿದ್ದಾರೆಯೇ?
ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಬೊಬ್ಬಿರಿದು ಅಬ್ಬರಿಸುವ ಹಿಂದೂ ಜಾಗರಣ ವೇದಿಕೆ, ಬಜರಂಗದಳ, ಹಿಂದೂ ಸೇನೆ ಇತ್ಯಾದಿ ಕೇಸರಿ ಪಡೆಗಳನ್ನು ಬಿಟ್ಟುಬಿಡಿ, ವಿಶ್ವಹಿಂದು ಪರಿಷತ್‌ನ ಹೆಸರನ್ನೂ ಅಲ್ಲಿ ಕೇಳುವವರಿಲ್ಲ. ಮೋದಿ ಈ ಸಂಘಟನೆಗಳ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದೇ ಕಡಿಮೆ. ಕಳೆದೆರಡೂ ಚುನಾವಣೆಗಳಲ್ಲಿ ಪರಿವಾರದ ಹೆಚ್ಚಿನ ನಾಯಕರು ಮೋದಿ ವಿರುದ್ಧವೇ ಕೆಲಸಮಾಡಿದ್ದಾರೆ. ಇವರಲ್ಲಿ ಯಾರಿಗೂ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದು ಬೇಡ.
 ಮೂರನೆಯ ಗುಂಪು ಎನ್‌ಡಿಎ ಮಿತ್ರಪಕ್ಷಗಳದ್ದು. ಈ ವಿರೋಧಕ್ಕೆ ಬಹಳ ಬಲವಾದ ತಾತ್ವಿಕ ಕಾರಣ ಇದೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಈಗ ಮೋದಿ ವಿರುದ್ದ ನಿಂತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ 2001ರಲ್ಲಿ ಗುಜರಾತ್ ಕೋಮುಗಲಭೆ ನಡೆದಾಗ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಅವರೇನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.
ಮನಸ್ಸು ಮಾಡಿದ್ದರೆ ಗೋಧ್ರಾದಲ್ಲಿ ರೈಲ್ವೆ ಬೋಗಿಗೆ ಬೆಂಕಿ ತಗಲಿದ್ದು ಹೇಗೆ ಎಂಬುದನ್ನು ಪತ್ತೆಹಚ್ಚಿ ಸತ್ಯವನ್ನು ಬಹಿರಂಗಪಡಿಸಲು ಅವರಿಗೆ ಸಾಧ್ಯವಾಗಿತ್ತು. ಆಗ್ ಜಾರ್ಜ್ ಫರ್ನಾಂಡಿಸ್ ಜತೆಯಲ್ಲಿ ಮೋದಿ ರಕ್ಷಣೆಗೆ ನಿಂತವರಲ್ಲಿ ನಿತೀಶ್ ಕುಮಾರ್ ಕೂಡಾ ಒಬ್ಬರು. ಎನ್‌ಡಿಎ ಬಿಟ್ಟುಹೋದವರು ರಾಮ್‌ವಿಲಾಸ್ ಪಾಸ್ವಾನ್ ಮಾತ್ರ. ವೈಯಕ್ತಿಕವಾಗಿ ನರೇಂದ್ರಮೋದಿ ಬಗ್ಗೆ ವಿರೋಧ ಇಲ್ಲದವರು ಕೂಡಾ ಬಹಿರಂಗವಾಗಿ ಅವರ ಜತೆ ಗುರುತಿಸಿಕೊಳ್ಳಲು ಇಷ್ಟಪಡದೆ ಇರುವುದಕ್ಕೆ ಮುಖ್ಯ ಕಾರಣ ಅವರ ಮುಖಕ್ಕೆ ಅಂಟಿಕೊಂಡಿರುವ 2002ರ ಕೋಮು ಗಲಭೆಯ ಕಳಂಕ. ಮೋದಿ ಜತೆ ಕೈಜೋಡಿಸಿದರೆ ಮುಸ್ಲಿಮ್ ಮತಗಳನ್ನು ಕಳೆದುಕೊಳ್ಳಬಹುದೆಂಬ ಭೀತಿ ಎನ್‌ಡಿಎ ಮಿತ್ರಪಕ್ಷಗಳನ್ನು ಕಾಡುತ್ತಿದೆಯೇ ಹೊರತು ಈ ವಿರೋಧಕ್ಕೆ ಜಾತ್ಯತೀತತೆ ಬಗೆಗಿನ ಅಖಂಡ ಬದ್ಧತೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಕಾರಣಗಳೇನೇ ಇರಬಹುದು ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಎನ್‌ಡಿಎ ಮಿತ್ರಪಕ್ಷಗಳು ಸುಲಭದಲ್ಲಿ ಒಪ್ಪಿಕೊಳ್ಳಲಾರವು.
 ಮಿತ್ರಪಕ್ಷಗಳ ಬೆಂಬಲ ಬೇಡವೇ ಬೇಡ ಎಂದಾದರೆ ನರೇಂದ್ರಮೋದಿ ಪ್ರಧಾನಿಯಾಗಲು ಬಹುಮತಕ್ಕೆ ಅಗತ್ಯ ಇರುವ 272 ಸ್ಥಾನಗಳನ್ನು ಬಿಜೆಪಿ ಸ್ವಂತಬಲದಿಂದ  ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಮಿತ್ರಪಕ್ಷಗಳ ಮುಲಾಜಿಲ್ಲದೆ ಅವರು ಪ್ರಧಾನಿಯಾಗಲು ಸಾಧ್ಯ. ಮೈತ್ರಿ ಅನಿವಾರ್ಯ ಎಂದಾದರೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನದಿಂದ ದೂರ ಇಡಬೇಕಾಗಬಹುದು. ಈಗಿನ ರಾಜಕೀಯ ಸ್ಥಿತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ನಂತರ ಯಾವುದೇ ಒಂದು ಪಕ್ಷ, ಸರ್ಕಾರ ರಚನೆಗೆ ಅಗತ್ಯ ಇರುವಷ್ಟು ಸ್ಪಷ್ಟ ಬಹುಮತ ಪಡೆಯುವುದು ಕಷ್ಟ. ಯುಪಿಎ, ಎನ್‌ಡಿಎ ಇಲ್ಲವೆ ತೃತೀಯರಂಗ-ಇವುಗಳಲ್ಲಿ ಯಾವುದಾದರೂ ಒಂದು ಮೈತ್ರಿಕೂಟವಷ್ಟೇ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚು. ಈ ಪರಿಸ್ಥಿತಿಯಲ್ಲಿ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಮಿತ್ರಪಕ್ಷಗಳ ಮೂಲಕ ಯಾರು ಗಳಿಸಿಕೊಳ್ಳಬಲ್ಲರೋ ಅವರೇ 2014ರ ಲೋಕಸಭಾ ಚುನಾವಣೆಯ ನಂತರ ಅಧಿಕಾರದ ಚುಕ್ಕಾಣಿ ಹಿಡಿಯುವವರು. ಅಧಿಕಾರದ ಈ ಓಟದಲ್ಲಿ ಮೋದಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಎನ್‌ಡಿಎ ಹೊರಟರೆ ಮುಗ್ಗರಿಸಿ ಬೀಳುವ ಅಪಾಯ ಇದೆ.
ಸದ್ಯ ಜತೆಯಲ್ಲಿರುವ ಮಿತ್ರಪಕ್ಷಗಳನ್ನಷ್ಟೇ ನಂಬಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸನ್ನೂ ಕಾಣಲು ಬಿಜೆಪಿಗೆ ಸಾಧ್ಯ ಇಲ್ಲ. ಇದಕ್ಕಾಗಿ ಈಗಿನ ಮಿತ್ರಪಕ್ಷಗಳನ್ನು ಉಳಿಸಿಕೊಳ್ಳುವ ಜತೆಯಲ್ಲಿ ಬಿಟ್ಟುಹೋಗಿರುವ ಹಳೆಯ ಮಿತ್ರರನ್ನು ಒಲಿಸಿಕೊಳ್ಳಬೇಕಾಗುತ್ತದೆ. ಬಿಜು ಜನತಾದಳ, ತೆಲುಗುದೇಶಂ, ತೃಣಮೂಲ ಕಾಂಗ್ರೆಸ್, ನ್ಯಾಷನಲ್ ಕಾನಫರೆನ್ಸ್ ಮೊದಲಾದ ಪಕ್ಷಗಳು ವಾಜಪೇಯಿ ಕಾಲದಲ್ಲಿ ಎನ್‌ಡಿಎ ಜತೆ ಗುರುತಿಸಿಕೊಂಡಿದ್ದವು. ಇವುಗಳು ಸುಲಭದಲ್ಲಿ ಗೋಡೆಹಾರಿ ಬಂದುಬಿಡಬಹುದು.
ಅಧಿಕಾರದ ತಕ್ಕಡಿ ಎನ್‌ಡಿಎ ಕಡೆ ವಾಲುವುದು ಖಾತರಿಯಾದರೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಎನ್‌ಸಿಪಿ ನಾಯಕ ಶರದ್‌ಪವಾರ್ ಕೂಡಾ ಬೆಂಬಲಕ್ಕೆ ನಿಂತರೆ ಅಚ್ಚರಿಯೇನಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಬಿಡಿ, ಪ್ರಧಾನಿ ಅಭ್ಯರ್ಥಿಯಾಗುವುದನ್ನೂ ಕೂಡಾ ಈ ಪಕ್ಷಗಳು ಒಪ್ಪಲಾರವು. ಇವೆಲ್ಲವೂ ಗೊತ್ತಿರುವುದಕ್ಕಾಗಿಯೇ ಈ `ರಸ್ತೆತಡೆ'ಗಳನ್ನು ದಾಟಿಬರುವ ಪ್ರಯತ್ನವನ್ನು ಮೋದಿ ಪ್ರಾರಂಭಿಸಿರುವುದು. ಕಳೆದ ಹತ್ತುವರ್ಷಗಳಲ್ಲಿ ಎಷ್ಟೇ ಒತ್ತಡ ಬಂದರೂ `ತಪ್ಪಾಗಿದ್ದರೆ ಕ್ಷಮಿಸಿ' ಎಂಬ ಎರಡು ಶಬ್ದಗಳನ್ನು ಉಚ್ಚರಿಸಲು ಒಪ್ಪದ ನರೇಂದ್ರಮೋದಿ ಚುನಾವಣಾ ಫಲಿತಾಂಶ ಹೊರಬಿದ್ದ ಮರುಗಳಿಗೆಯಲ್ಲಿ ಅದನ್ನು ಹೇಳಿದ್ದಾರೆ. ಈಗಲೂ `ಗುಜರಾತ್ ಗಲಭೆಗಾಗಿ ಕ್ಷಮಿಸಿ' ಎಂದು ಹೇಳದೆ ತಪ್ಪಿಸಿಕೊಂಡಿದ್ದರೂ, ಮುಂದೊಂದು ದಿನ ಅದನ್ನೂ ಹೇಳಿಬಿಡಬಹುದು. ಆದರೆ ಅಷ್ಟಕ್ಕೆ ಎನ್‌ಡಿಎ ಮಿತ್ರಪಕ್ಷಗಳು ಮೋದಿ ಅವರನ್ನು ಒಪ್ಪಿಕೊಳ್ಳಬಹುದೇ?
ಬಹುಶಃ ಈ ಕಾರಣಗಳಿಂದಾಗಿಯೇ ವರ್ಷ 86 ದಾಟಿದರೂ ಲಾಲ್‌ಕೃಷ್ಣ ಅಡ್ವಾಣಿಯವರು ಪ್ರಧಾನಿಯಾಗುವ ಕನಸಿನ ಚುಂಗು ಹಿಡಿದು ಕೂತಿದ್ದಾರೆ. ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದರೂ ಆಗಬಹುದು, ಎನ್‌ಡಿಎ ಅಭ್ಯರ್ಥಿ ಆಗಲಾರರು ಎಂಬ ಸತ್ಯ ಅವರಿಗೆ ಗೊತ್ತಿದೆ. ಅನಿವಾರ್ಯವಾದರೆ ಎನ್‌ಡಿಎ ಅಭ್ಯರ್ಥಿ ತಾನೇ ಎನ್ನುವುದೂ ಅವರಿಗೆ ತಿಳಿದಿದೆ. ಅಡ್ವಾಣಿಯವರನ್ನು ಆರ್‌ಎಸ್‌ಎಸ್ ವಿರೋಧಿಸಿದರೂ ಮೋದಿಯವರನ್ನು ತಡೆಯಲಿಕ್ಕಾಗಿ ಒಪ್ಪಿಕೊಳ್ಳಲೂ ಬಹುದು. ಉಳಿದಂತೆ `ಡೆಲ್ಲಿ-4' ಗ್ಯಾಂಗ್ ಮತ್ತು ಎನ್‌ಡಿಎ ಮಿತ್ರಪಕ್ಷಗಳಿಗೆ ಅಡ್ವಾಣಿ ಬಗ್ಗೆ ತಕರಾರಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಎದುರು ನರೇಂದ್ರಮೋದಿ ಅವರನ್ನು ತಂದು ನಿಲ್ಲಿಸುವ ಅವಸರದಲ್ಲಿದ್ದಾರೆ ಮೋದಿ ಅಭಿಮಾನಿಗಳು. ಆದರೆ ಅದಕ್ಕಿಂತ ಮೊದಲು ಮೋದಿ ಮನೆಯೊಳಗಿನ ವಿರೋಧದ `ರಸ್ತೆತಡೆ'ಗಳನ್ನು ದಾಟಿ ಬರಬೇಕಾಗುತ್ತದೆ. ಬರಬಹುದೇ?

Monday, December 17, 2012

ಗುಜರಾತ್ ಜಾತಿ ಸೂತ್ರ ಬದಲಾಯಿಸಿದ ಮೋದಿ Dec 17 2012


`ಗುಜರಾತ್ ರಾಜ್ಯವನ್ನು ನರೇಂದ್ರಮೋದಿ ತನ್ನ ಮಾಯಾಜಾಲದಲ್ಲಿ ಕೆಡವಿಹಾಕಿದಂತೆ ಕಾಣುತ್ತಿದೆ. ಯಾವ ಚುನಾವಣಾ ಸಮೀಕ್ಷೆಯ ಸೂತ್ರಗಳಿಗೂ ನಿಲುಕದ ಮೋದಿ ಯಶಸ್ಸಿನ ಒಗಟನ್ನು ಒಡೆಯುವುದು ಕಷ್ಟ. ಅವರ ಜನಪ್ರಿಯತೆ ನೂರಕ್ಕೆ ನೂರರಷ್ಟು ಮತಗಳಾಗಿ ಪರಿವರ್ತನೆ ಹೊಂದಿದರೆ ಬಿಜೆಪಿ ಈ ರಾಜ್ಯದಲ್ಲಿ `ಹ್ಯಾಟ್ರಿಕ್' ಜಯ ಗಳಿಸಬಹುದು..' ಎಂದು ಹತ್ತುವರ್ಷಗಳ ಹಿಂದೆ ( ಪ್ರಜಾವಾಣಿ ವರದಿ:11,ಡಿಸೆಂಬರ್ 2002) ಆ ರಾಜ್ಯಕ್ಕೆ ವಿಧಾನಸಭಾ ಚುನಾವಣಾ ಸಮೀಕ್ಷೆಗೆಂದು ಹೋದವನು `ಮೋದಿ ಮೋಡಿ'ಗೆ ಬೆರಗಾಗಿ ಬರೆದಿದ್ದೆ. 

2002ರ ಕೋಮುದಂಗೆಯ ಹಸಿಹಸಿ ನೆನಪಿನ ಜತೆಯಲ್ಲಿಯೇ ನಡೆದ ಚುನಾವಣೆ ಅದು. `ನೀವು ನನಗೆ ಮತನೀಡಬೇಕೆಂದು ಹೇಳುವುದಿಲ್ಲ, ಆದರೆ ಗೋಧ್ರಾ ಹತ್ಯಾಕಾಂಡವನ್ನು ಮಾತ್ರ ಮರೆತುಬಿಡಿ ಎಂದು ಹೇಳಬೇಡಿ.  ಅದನ್ನು ನಾನು ಹೇಗೆ ಮರೆಯಲಿ? ಬೆಂಕಿ ಹತ್ತಿಕೊಂಡ ರೈಲ್ವೆಬೋಗಿಯೊಳಗಿನ ದೈವಭಕ್ತರ ಆರ್ತನಾದ ನನ್ನ ಕಿವಿಗಳಲ್ಲಿ ಈಗಲೂ ಗುಂಯ್‌ಗುಡುತ್ತಿದೆ....' -ಮೋದಿಯವರ ಕಣ್ಣೀರು `ನರ್ಮದಾ ನದಿ'ಯಾಗಿ ಹರಿಯುತ್ತಿದ್ದರೆ, ಅವರ ಗುಜರಾತಿ ಭಾಷೆಯ ಭಾಷಣ ಕೇಳಿದವರು ನಿಂತಲ್ಲೇ ಕಣ್ಣೀರಾಗಿ ಬಿಡುತ್ತಿದ್ದರು. ಇದು ಮೋದಿ ಮೋಡಿ.
 
ಈ ಮೋಡಿಯೇ ನರೇಂದ್ರಮೋದಿ ಅವರನ್ನು ಸತತ ಎರಡು ಬಾರಿ ಗೆಲ್ಲಿಸಿದ್ದೇ? ಹಾಗೆಂದು 2002ರ ಚುನಾವಣೆಯ ಕಾಲದಲ್ಲಿ ಮೂರ್ಖನಂತೆ ನಾನೂ ತಿಳಿದುಕೊಂಡಿದ್ದೆ, ಆದರೆ 2007ರ ವಿಧಾನಸಭಾ ಚುನಾವಣೆಯನ್ನು ತುಸು ಆಳಕ್ಕೆ ಇಳಿದು ನೋಡಿದಾಗ ಮೋದಿಯವರ ಇನ್ನೊಂದು ಮುಖ ಅನಾವರಣಗೊಳ್ಳಹತ್ತಿತ್ತು. ಹೊರನೋಟಕ್ಕೆ  ಕಟ್ಟಾ ಕೋಮುವಾದಿಯಂತೆ ಕಾಣುವ ನರೇಂದ್ರ ಮೋದಿ ಅವರೊಳಗೊಬ್ಬ ಚಾಣಾಕ್ಷ ರಾಜಕಾರಣಿ ಇದ್ದಾನೆ. ಸಂಖ್ಯೆಯ ಆಟವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯೆಯಲ್ಲಿ ಜಾತಿಜನರನ್ನು ಹೊಂದಿರುವ ರಾಜಕೀಯ ನಾಯಕರಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಅಸುರಕ್ಷತೆ ಅವರನ್ನು ಹೆಚ್ಚು ಜಾಗೃತರು ಮತ್ತು ಚಾಣಾಕ್ಷರನ್ನಾಗಿ ಮಾಡುತ್ತದೆ. ಮೋದಿ  ಇದಕ್ಕೆ ಹೊರತಲ್ಲ. ಈ ಚಾಣಾಕ್ಷತನದ ಬಲದಿಂದಲೇ ಅವರು ಜನಸಂಖ್ಯೆಯಲ್ಲಿ ಶೇಕಡಾ ಹದಿನಾರರಷ್ಟಿರುವ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಪಟೇಲರನ್ನು ಎದುರಿಸಿ ಹಿಂದಿನ ಎರಡು ಚುನಾವಣೆಗಳನ್ನು ಗ್ದ್ದೆದದ್ದು.
 
ಕಳೆದ ಹತ್ತುವರ್ಷಗಳಲ್ಲಿ ಗುಜರಾತ್ ರಾಜಕೀಯ ಬದಲಾಗಿದೆ ಎಂದು ಅನಿಸುವುದಿಲ್ಲ. ಕೇಶುಭಾಯಿಪಟೇಲ್ ಬಂಡೆದ್ದು ರಚಿಸಿರುವ ಹೊಸ ಪಕ್ಷದ ಪರಿಣಾಮದಿಂದಾಗಿ ಮೋದಿಗೆ ಹಿನ್ನಡೆ ಆಗಬಹುದು ಎಂದು ಹಲವಾರು ರಾಜಕೀಯ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ.
ಆದರೆ ಕೇಶುಭಾಯಿ ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿದ್ದು ಹೊಸದಾಗಿದ್ದರೂ ಅವರ ಬಂಡಾಯ ಹೊಸದಲ್ಲ, ಹತ್ತುವರ್ಷಗಳ ಹಿಂದೆ ನರೇಂದ್ರ ಮೋದಿ ತನ್ನಿಂದ ಮುಖ್ಯಮಂತ್ರಿ ಪಟ್ಟ ಕಸಿದುಕೊಂಡ ದಿನದಿಂದಲೂ ಕೇಶುಭಾಯಿ ಬಂಡುಕೋರರು. ನರೇಂದ್ರ ಮೋದಿ ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿದವರು. ಪಟೇಲರು ಎಣ್ಣೆಗಿರಣಿ ಮಾಲೀಕರು. ಕೆಳಜಾತಿಯ ಒಬ್ಬ ವ್ಯಕ್ತಿ ಪಟೇಲರ ನಾಯಕನನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗಿದ್ದನ್ನು ಕೇಶುಭಾಯಿ ಪಟೇಲ್ ಮತ್ತು ಬೆಂಬಲಿಗರು ಇನ್ನೂ ಮರೆತಿಲ್ಲ. ಕಳೆದೆರಡೂ ಚುನಾವಣೆಗಳಲ್ಲಿ ಕೇಶುಭಾಯಿ ಬೆಂಬಲಿಗರು ಕಾಂಗ್ರೆಸ್ ಜತೆ ಗುಪ್ತಹೊಂದಾಣಿಕೆಯೂ ಸೇರಿದಂತೆ ಮೋದಿಯವರನ್ನು ಸೋಲಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ.  ಸಾಮಾನ್ಯವಾಗಿ ಆಡಳಿತ ಪಕ್ಷದ ಆಂತರಿಕ ಬಂಡಾಯ ವಿರೋಧಪಕ್ಷಗಳಿಗೆ ನೆರವಾಗುತ್ತದೆ. ಒಳಗಿನ ಬಂಡುಕೋರರು ಪ್ರತ್ಯೇಕ ಪಕ್ಷ ಕಟ್ಟಿ ಚುನಾವಣೆ ಎದುರಿಸಿದಾಗ ಅವರ ಪಾಲಿನ ಮತಗಳು ಅವರ ಪಕ್ಷಕ್ಕೆ ಹೋಗುವುದರಿಂದ ವಿರೋಧಪಕ್ಷಗಳಿಗೆ ಹೆಚ್ಚು ಲಾಭವಾಗುವುದಿಲ್ಲ. ಹೌದು, ಈ ಬಾರಿ ಬಿಜೆಪಿ ಶಾಸಕರ ಸಂಖ್ಯೆ ಕುಸಿಯಲೂಬಹುದು, ಆದರೆ ಕೇಶುಭಾಯಿ ಬಂಡಾಯ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾರದು.
 
 ರಾಜಕೋಟ್, ಅಮ್ರೇಲಿ, ಪೋರಬಂದರ್, ಜುನಾಗಡ್,ಸುರೇಂದ್ರನಗರ ಮತ್ತು ಭಾವನಗರ ಜಿಲ್ಲೆಗಳನ್ನೊಳಗೊಂಡ ಸೌರಾಷ್ಟ್ರ ಎನ್ನುವುದು `ಪಟೇಲರ ಕೋಟೆ'. ರಾಜ್ಯದ 182 ಕ್ಷೇತ್ರಗಳ ಪೈಕಿ 60ರಲ್ಲಿ ಪಟೇಲರು ನಿರ್ಣಾಯಕರಾಗುವಷ್ಟು ಸಂಖ್ಯೆಯಲ್ಲಿದ್ದಾರೆ. ಇವರು ಮೂಲತ: ಕೃಷಿಕರಾದರೂ ಈಗ  ಉದ್ಯಮ ಕ್ಷೇತ್ರವನ್ನೂ ಪ್ರವೇಶಿಸಿದ್ದಾರೆ. ಸೌರಾಷ್ಟ್ರದಲ್ಲಿನ ಎಣ್ಣೆ ಗಿರಣಿಗಳು ಮತ್ತು ಸೂರತ್‌ನಲ್ಲಿನ ವಜ್ರದ ವ್ಯಾಪಾರದಲ್ಲಿ ಅವರದ್ದೇ ಪ್ರಾಬಲ್ಯ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ಅವರು ಕೈಚಾಚಿದ್ದಾರೆ.
ಅನಿವಾಸಿ ಗುಜರಾತಿಗಳಲ್ಲಿ ಪಟೇಲರದ್ದೇ ಮೇಲುಗೈ. ರಾಜ್ಯದ ನೌಕರಶಾಹಿಯಲ್ಲಿಯೂ ಅವರು ಆಯಕಟ್ಟಿನ ಸ್ಥಾನದಲ್ಲಿದ್ದಾರೆ. 
ಇಂತಹ ಪಟೇಲರನ್ನು ಮೋದಿ  ಎದುರಿಸಿದ್ದು ಹೇಗೆ? ಇದಕ್ಕೆ ಕಾರಣ- `ಗುಜರಾತ್‌ನಲ್ಲಿ ಈಗ ಇರುವುದು ದೇಶದಾದ್ಯಂತ ಕಾಣುತ್ತಿರುವ ಬಿಜೆಪಿ ಅಲ್ಲ, ಮೋದಿ ನೇತೃತ್ವದ ಪಕ್ಷದೊಳಗಿರುವುದು 20 ವರ್ಷಗಳ ಹಿಂದಿನ ಕಾಂಗ್ರೆಸ್'. ಈ ಒಳನೋಟವನ್ನು ನನಗೆ ನೀಡಿದ್ದವರು `ಗುಜರಾತ್‌ನ ದೇವರಾಜ ಅರಸು' ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಮಾಧವಸಿನ್ಹ ಸೋಳಂಕಿ. 2007ರ ಚುನಾವಣಾ ಸಮೀಕ್ಷೆಗೆಂದು ಹೋದವ ಗಾಂಧಿನಗರದ ಹಳೆಯ ಬಂಗಲೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದ ಸೋಳಂಕಿ ಅವರನ್ನು ಭೇಟಿಮಾಡಿದ್ದೆ.
ಗುಜರಾತ್ ರಾಜಕೀಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ `ಪಟೇಲ್‌ಗಿರಿ'ಯನ್ನು `ಕ್ಷತ್ರಿಯ-ಹರಿಜನ- ಆದಿವಾಸಿ-ಮುಸ್ಲಿಮ್'   ಸಮುದಾಯಗಳನ್ನೊಳಗೊಂಡ `ಖಾಮ್' ಕೂಟಕಟ್ಟಿ  ಮೊದಲ ಬಾರಿ ಮುರಿದವರು  ಸೋಳಂಕಿ. ಈ ಜಾತಿ ಸಮೀಕರಣದ ರಾಜಕೀಯ ಲಾಭವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟವರು ಹಿಂದುಳಿದ ಜಾತಿಗಳ ಹಿರಿಯ ನಾಯಕ ಜೀನಾಭಾಯಿ ದರ್ಜಿ. ಈ ಬಲದಿಂದ ಕಾಂಗ್ರೆಸ್‌ಪಕ್ಷಕ್ಕೆ ಸೇರಿರುವ ಕ್ಷತ್ರಿಯ ಸೋಳಂಕಿ ಮಾತ್ರವಲ್ಲ ಆದಿವಾಸಿ ಸಮುದಾಯಕ್ಕೆ ಸೇರಿರುವ ಅಮರ್‌ಸಿಂಗ್ ಚೌದರಿ ಕೂಡಾ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು.
 
ಆದರೆ ಬದಲಾದ ರಾಜಕೀಯದ ಆಟ ಬಹಳ ದಿನ ನಡೆಯಲಿಲ್ಲ. ಜನಸಂಖ್ಯೆ ಮತ್ತು ಸಂಪನ್ಮೂಲದ ಬಲದಿಂದಾಗಿ ರಾಜಕೀಯವಾಗಿ ಶಕ್ತಿಶಾಲಿಯಾಗಿದ್ದ ಪಟೇಲರು ಬಹಳ ಬೇಗ ತಿರುಗೇಟು ನೀಡಿದ್ದರು. 1990ರ ವಿಧಾನಸಭಾ ಚುನಾವಣೆಯಲ್ಲಿ ಚಿಮಣ್‌ಭಾಯ್ ಪಟೇಲ್ ನಾಯಕತ್ವದಲ್ಲಿ ಪಟೇಲರು ಜನತಾದಳದ ಗಾಡಿ ಹತ್ತಿದರು. ಅದರ ಫಲವಾಗಿಯೇ 1990ರಲ್ಲಿ ಬಿಜೆಪಿ-ಜನತಾ ಮೈತ್ರಿಕೂಟ ಅಧಿಕಾರಕ್ಕೆ ಬಂದದ್ದು. ಆ ಸರ್ಕಾರದಲ್ಲಿ ಚಿಮಣ್‌ಭಾಯ್ ಮುಖ್ಯಮಂತ್ರಿಯಾಗಿದ್ದರೆ, ಕೇಶುಭಾಯಿ ಉಪಮುಖ್ಯಮಂತ್ರಿಯಾಗಿದ್ದರು. ಇಂತಹ ಜನತಾದಳವನ್ನು ಬಿಜೆಪಿಯೇ ಒಡೆದುಹಾಕಿತು. ಕಾಂಗ್ರೆಸ್ ಪಕ್ಷದ ಯಶಸ್ವಿ `ಖಾಮ್' ಸೂತ್ರವನ್ನು ಮುರಿಯುವ ಜತೆಯಲ್ಲಿ ಜನತಾದಳದಲ್ಲಿದ್ದ ಪಟೇಲರನ್ನು ಪಕ್ಷಕ್ಕೆ ಕರೆತರುವ `ಮಹಾ ಜಾತಿ ಧ್ರುವೀಕರಣ'ದ ಯೋಜನೆಯನ್ನು ರೂಪಿಸಿದ್ದ ಬಿಜೆಪಿ, ಅದಕ್ಕಾಗಿ ಕಣಕ್ಕಿಳಿಸಿದ್ದು ಕೇಶುಭಾಯಿ, ನರೇಂದ್ರಮೋದಿ ಮತ್ತು ಶಂಕರ್‌ಸಿಂಗ್ ವಘೇಲಾ ಎಂಬ ತ್ರಿಮೂರ್ತಿಗಳನ್ನು.
 
 ನರೇಂದ್ರಮೋದಿ ಅವರು `ಮುಸ್ಲಿಮ್' ಭೂತವನ್ನು ಬಳಸಿಕೊಂಡು ಆದಿವಾಸಿಗಳನ್ನು `ಹಿಂದೂ'ಗಳಾಗಿ ಪರಿವರ್ತಿಸುವ ಕೆಲಸವನ್ನು ಮಾಡಿದರೆ, ಕ್ಷತ್ರಿಯರಾದ ವಘೇಲಾ `ಖಾಮ್' ಸೂತ್ರದ ಪ್ರಮುಖ ಕೊಂಡಿಯಾಗಿದ್ದ ಕ್ಷತ್ರಿಯರನ್ನು ಕರೆತಂದರು. ಮಾಧವಸಿನ್ಹಾ ಸೋಳಂಕಿಯವರ `ಖಾಮ್' ರಾಜಕೀಯದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ನೆಲೆ ಕಳೆದುಕೊಂಡು ಜನತಾ ಮತ್ತು ಬಿಜೆಪಿಯಲ್ಲಿ ಸೇರಿಕೊಂಡಿದ್ದ ಪಟೇಲರನ್ನು ಬಿಜೆಪಿ ಕಡೆ ಎಳೆದು ತರುವ ಕೆಲಸವನ್ನು ಕೇಶುಭಾಯಿ ಮಾಡಿದರು. ಈ ಜಾತಿ ಮರುಧ್ರುವೀಕರಣದಿಂದಾಗಿ ಬಹುಸಂಖ್ಯೆಯಲ್ಲಿ `ಹಿಂದೂ' ಮತದಾರರು  ಬಿಜೆಪಿ ಕಡೆ ವಲಸೆ ಹೋಗುವಂತಾಯಿತು. ಕಾಂಗ್ರೆಸ್ ಪಕ್ಷದ `ಖಾಮ್'ಕೂಟಕ್ಕೆ ನಿಷ್ಠರಾಗಿ ಉಳಿದವರು ಮುಸ್ಲಿಮರು ಮಾತ್ರ, ಅದು ಅವರಿಗೆ ಅನಿವಾರ್ಯವೂ ಆಗಿತ್ತು. ಇದರಿಂದಾಗಿ 1985ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದ ಗೆಲುವೇ ಕೊನೆಯದ್ದು, ಅದರ ನಂತರದ ಐದು ಚುನಾವಣೆಗಳಲ್ಲಿಯೂ ಅದು ಸೋತಿದೆ.
 
2002ರಲ್ಲಿ ನರೇಂದ್ರಮೋದಿ  ಮುಖ್ಯಮಂತ್ರಿಯಾಗಿ ರಾಜಕೀಯ ಪ್ರವೇಶಿಸಿದ ನಂತರ ಈ ಜಾತಿ ಸಮೀಕರಣ ಮತ್ತೆ ಬದಲಾಗಿಹೋಯಿತು. ಕೇಶುಭಾಯಿ ಪದಚ್ಯುತಿಯಿಂದಾಗಿ ಅತೃಪ್ತರಾಗಿರುವ ಪಟೇಲರನ್ನು ನಂಬಿಕೊಂಡು ಅಧಿಕಾರದಲ್ಲಿ ಉಳಿಯುವುದು ಸಾಧ್ಯವಾಗಲಾರದು ಎಂಬ ವಾಸ್ತವ ಬಹಳ ಬೇಗ ಮೋದಿಯವರಿಗೆ ಅರಿವಾಗಿತ್ತು. ಆಗಲೇ ಅವರು `ಉಗ್ರ ಹಿಂದುತ್ವ'ದ ಪ್ರತಿಪಾದನೆಯ ಮೂಲಕ ಮುಸ್ಲಿಮೇತರರ ಸಮುದಾಯವನ್ನು ಒಗ್ಗೂಡಿಸುವ ಜತೆಗೆ ಪಟೇಲ್ ಸಮುದಾಯವನ್ನು  ಒಡೆಯುವ ಪ್ರಯತ್ನಕ್ಕೆ ಚಾಲನೆ ನೀಡಿದ್ದು. ಲೇವಾ ಮತ್ತು ಕಡುವಾ ಎಂಬ ಪಟೇಲರೊಳಗಿನ ಎರಡು ಪ್ರಮುಖ ಒಳಪಂಗಡಗಳ ರಾಜಕೀಯವನ್ನು ಮೋದಿ ಕಳೆದ ಒಂದು ದಶಕದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಕೇಶುಭಾಯಿ ಪ್ರತಿನಿಧಿಸುವ ಲೇವಾ ಪಟೇಲರು ರಾಜಕೋಟ್ ಮತ್ತು ಅಮ್ರೇಲಿಗಳಲ್ಲಿ ಬಹುಸಂಖ್ಯೆಯಲ್ಲಿದ್ದರೆ ಸೂರತ್ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಡುವಾ ಪಟೇಲರಿದ್ದಾರೆ. ಮೋದಿ ಬಲಗೈಯಂತಿರುವ ವಜುಭಾಯಿವಾಲಾ ಕಡುವಾ ಪಟೇಲ್. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಟಿಕೆಟ್ ಪಡೆದದ್ದೇ ಕಡುವಾ ಪಟೇಲರು.
 
ಮೋದಿಯವರ ಇನ್ನೊಂದು ಶಕ್ತಿ ಕೇಂದ್ರ ಆದಿವಾಸಿ ಬಾಹುಳ್ಯದ ಪಂಚಮಹಲ್, ದಾಹೋದ್, ವಡೋದರ ಜಿಲ್ಲೆಗಳನ್ನೊಳಗೊಂಡ ಕೇಂದ್ರ ಗುಜರಾತ್. ಅಲ್ಲಿ ಒಟ್ಟು 48 ವಿಧಾನಸಭಾ ಕ್ಷೇತ್ರಗಳಿವೆ. ಕಳೆದೆರಡೂ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 2007ರ ಚುನಾವಣೆಯ ಕಾಲದಲ್ಲಿ ಕಲೋಲ್ ಕಡೆ ಹೊರಟಿದ್ದ ನಾನು ಹೆದ್ದಾರಿ ಪಕ್ಕದ ಚಹದಂಗಡಿಯಲ್ಲಿ ಕೂತಿದ್ದೆ. ನಮ್ಮ ವಾಹನ ನೋಡಿ ಪತ್ರಕರ್ತನಿರಬಹುದೆಂಬ ಸುಳಿವು ಸಿಕ್ಕ ಹಣೆಗೆ ಕೇಸರಿಪಟ್ಟಿ ಕಟ್ಟಿಕೊಂಡಿದ್ದ ಯುವಕನೊಬ್ಬ `ಜೈ ಶ್ರಿರಾಮ್' ಎಂದು ಎದೆಯುಬ್ಬಿಸಿ ಕೂಗಿದ್ದ. ಅಲ್ಲಿಯೇ ಮೂಲೆಯೊಂದರಲ್ಲಿ ಕೂತಿದ್ದ ಅರೆಬೆತ್ತಲೆ ವೃದ್ಧರೊಬ್ಬರು  ಎತ್ತಲೋ ನೋಡುತ್ತಾ ` ಹಮ್ಹಾರಾ ಬಾಬೋ ಪಿತೋರೋ ಚೆ' ಎಂದು ಸಣ್ಣಗೆ ಕೆಮ್ಮುವಂತೆ ಗೊಣಗಿದ. ಜಗಳದ ಕಿಡಿ ಹಾರಿಯೇ ಬಿಟ್ಟಿತ್ತು.
ಅಷ್ಟರಲ್ಲಿ ವೃದ್ಧ ವ್ಯಕ್ತಿ ಅಲ್ಲಿಂದ ಸದ್ದಿಲ್ಲದೆ ಕಣ್ಮರೆಯಾಗಿದ್ದ. ಆ ನಂತರ ತಿಳಿದುಬಂದಂತೆ ಇಬ್ಬರೂ ಆದಿವಾಸಿ ಸಮುದಾಯದವರು. ಇದು ಕೇವಲ ಬೀದಿ ಜಗಳ ಅಲ್ಲ, ಗುಜರಾತ್‌ನ ಜನಸಂಖ್ಯೆಯಲ್ಲಿ ಶೇಕಡಾ ಹದಿನೇಳರಷ್ಟಿರುವ ಆದಿವಾಸಿಗಳ `ಮನೆ' ಜಗಳ ಕೂಡಾ ಹೌದು.
 
ಆದಿವಾಸಿಗಳು ಪಾರಂಪರಿಕವಾಗಿ ಧಾರ್ಮಿಕ ವ್ಯಕ್ತಿಗಳು. ಆದರೆ ಅವರು ಪೂಜಿಸುವುದು ಅವರದ್ದೇ ದೇವತೆಗಳನ್ನು. ಗುಜರಾತ್‌ನ ಆದಿವಾಸಿಗಳು ಬಾಬೋ ಪಿತೋರೇ, ಇತೆರಾನ್, ಮಾಕಾಳಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾ ಬಂದವರು. ಹಳೆಯ ತಲೆಮಾರಿನ ಆದಿವಾಸಿಗಳು ಈ ದೇವತೆಗಳಿಗೆ ನಿಷ್ಠರಾಗಿಯೇ ಉಳಿದಿದ್ದಾರೆ. ಆದರೆ ತಲೆಗೆ ಕೇಸರಿಪಟ್ಟಿ ಕಟ್ಟಿಕೊಂಡ ಹೊಸತಲೆಮಾರಿನ ಕುಟುಂಬಗಳ ಮನೆಯಲ್ಲಿ ಆಗಲೇ ರಾಮ,ಕೃಷ್ಣ, ಲಕ್ಷ್ಮಿ, ಸರಸ್ವತಿಗಳ ಪ್ರವೇಶವಾಗಿದೆ. ಆಸಾರಾಮ್ ಬಾಪೂ, ಜಯಶ್ರಿ ತಲವಾಲ್ಕರ್, ದಾದಾ ಭಗವಾನ್ ಪ್ರವಚನಗಳಿಗೆ ಪಂಚಮಹಲ್, ದಾಹೋದ್ ಜಿಲ್ಲೆಗಳಲ್ಲಿ ಸಾವಿರಾರು ಆದಿವಾಸಿಗಳು ಸೇರುತ್ತಾರೆ. ಒಂದು ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಗುತ್ತಿಗೆಯಾಗಿ ಹೋಗಿದ್ದ ಆದಿವಾಸಿ ಪ್ರದೇಶದಲ್ಲಿ ಸಂಘ ಪರಿವಾರಕ್ಕೆ ಸೇರಿರುವ `ವನವಾಸಿ ಕಲ್ಯಾಣ ಪರಿಷತ್'ಗಳ ಶಾಖೆಗಳು ಕಳೆದ 15-20 ವರ್ಷಗಳಲ್ಲಿ ವ್ಯಾಪಕವಾಗಿ ಹರಡಿವೆ. ಅನಿವಾಸಿ ಗುಜರಾತಿಗಳ ದೇಣಿಗೆಯಿಂದಾಗಿ ಈ ಹಿಂದೂ ಎನ್‌ಜಿಒಗಳು ಸಂಪನ್ಮೂಲದ ವಿಷಯದಲ್ಲಿಯೂ ಕ್ರಿಶ್ಚಿಯನ್ ಮಿಷನರಿಗಳನ್ನು ಮೀರಿಸುವಂತಿವೆ. ಚಹದಂಗಡಿಯಲ್ಲಿ ನನ್ನೆದುರಿಗೆ ಬಂದು `ಜೈ ಶ್ರಿರಾಮ್'ಎಂದು ಕೂಗಿದ್ದ ಯುವಕನ ಹೆಸರು ಭಾನು ರಾತ್ವಾ. ಆತ ಒಂದಷ್ಟು ದಿನ ಕ್ರಿಶ್ಚಿಯನ್ ಮಿಷನರಿ ಜತೆ ಇದ್ದವನಂತೆ.
ಆದರೆ ಅಲ್ಲಿ ಆದಿವಾಸಿ ದೇವತೆಗಳ ಹಾಡು ಹಾಡಬಾರದು, ಅವರ ಚಿತ್ರ ಬಿಡಿಸಬಾರದು ಎಂದೆಲ್ಲ ಪ್ರತಿಬಂಧನೆಗಳು ಹೆಚ್ಚತೊಡಗಿದಾಗ ಪ್ರತಿಭಟಿಸಿ ಹೊರಬಂದವ. ಅಲ್ಲಿಂದ ಆತ ಪಾವಗಡದ ವನವಾಸಿ ಕಲ್ಯಾಣ ಪರಿಷತ್ ಸೇರಿಕೊಂಡು ಮೋದಿ ಪ್ರಚಾರಕನಾಗಿದ್ದಾನೆ. 2002ರ ಕೋಮುಗಲಭೆಯಲ್ಲಿ ಅಹಮದಾಬಾದ್ ನಗರವನ್ನು ಹೊರತುಪಡಿಸಿದರೆ ಅತಿಹೆಚ್ಚು ಸಾವು-ನೋವು ಸಂಭವಿಸಿದ್ದು ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳಲ್ಲಿ.
 
 `ಕೋಮು ಗಲಭೆಗಳಲ್ಲಿ ಸಂಘಪರಿವಾರದ ಕಾಲಾಳುಗಳಾಗಿ ಕೆಲಸ ಮಾಡಿದ್ದವರು ನಿರುದ್ಯೋಗಿ ಆದಿವಾಸಿ ಯುವಕರು. ಅವರಲ್ಲಿ ಈಗಲೂ ಬಹಳಷ್ಟು ಮಂದಿ ಜೈಲಲ್ಲಿದ್ದಾರೆ. ತಮ್ಮ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರಿಗೆ ಅರಿವಾಗಿದೆ' ಎಂದು ಕಳೆದ ಚುನಾವಣೆಯ ಕಾಲದಲ್ಲಿ ವಡೋಧರಾದ ಸಮಾಜವಿಜ್ಞಾನ ಸಂಶೋಧಕ ಗಣೇಶ್ ದೇವಿ ನನಗೆ ಹೇಳಿದ್ದರು. ಆದರೆ `ಪಟೇಲರ ಬಂಡಾಯ, ಸಂಘಪರಿವಾರದ ಅಸಮಾಧಾನ, ಆದಿವಾಸಿ ಯುವಕರ ಜ್ಞಾನೋದಯ'ಗಳ ಹೊರತಾಗಿಯೂ 2007ರ ಚುನಾವಣೆಯಲ್ಲಿ ನರೇಂದ್ರಮೋದಿ ಗೆದ್ದಿದ್ದರು. ಈ ಬಾರಿಯೂ ಗೆಲ್ಲದಿರಲು ಕಾರಣಗಳು ಬಹಳ ಇಲ್ಲ.

Monday, December 10, 2012

ಸುಭದ್ರ ಸರ್ಕಾರ ಎಂಬ ಮಾಯಾಮೃಗದ ಬೆನ್ನಟ್ಟಿ... Dec 10 2012


`ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡ ಏಕೈಕ ಪಕ್ಷ ಕಾಂಗ್ರೆಸ್. ಬಹಿರಂಗ ಘೋಷಣೆಗಳೇನೇ ಇರಲಿ, ಬೇರೆ ಯಾವ ಪಕ್ಷವೂ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಅಂತರಂಗದಲ್ಲಿ ಇಟ್ಟುಕೊಂಡ ಹಾಗೆ ಕಾಣುವುದಿಲ್ಲ.
ಹಿಂದಿನ ಯಾವ ಚುನಾವಣೆಯಲ್ಲಿಯೂ ಈ ಪರಿಸ್ಥಿತಿಯನ್ನು ನಾನು ಕಂಡಿರಲಿಲ್ಲ, ಕನಿಷ್ಠ ಎರಡು ಪಕ್ಷಗಳ ನಡುವೆ ಬಹುಮತಕ್ಕಾಗಿ ಒಂದಷ್ಟು ಪೈಪೋಟಿ ಇರುತ್ತಿತ್ತು, ಫಲಿತಾಂಶವನ್ನು ಊಹಿಸುವುದು ಕಷ್ಟವಾಗುತ್ತಿತ್ತು..' ಎಂದು ಹೇಳಿದವರು ಲಂಡನ್‌ನ ಕಾಮನ್‌ವೆಲ್ತ್ ಅಧ್ಯಯನ ಸಂಸ್ಥೆಯ ಪ್ರೊ.ಜೇಮ್ಸ ಮೇನರ್.
ಇತ್ತೀಚೆಗೆ `ಪ್ರಜಾವಾಣಿ' ಕಚೇರಿಗೆ ಬಂದು ನಮ್ಮನ್ನುದ್ದೇಶಿಸಿ ಮಾತನಾಡಿದ ಜೇಮ್ಸ ತನ್ನ ಇತ್ತೀಚಿನ ಸುತ್ತಾಟದಲ್ಲಿ ಕಂಡುಕೊಂಡ ಈ ರಾಜಕೀಯ ಒಳನೋಟವನ್ನು ನೀಡಿದರು. 1972ರಿಂದ ರಾಜ್ಯದಲ್ಲಿ ನಡೆದ ಎಲ್ಲ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಸಮೀಪದಿಂದ ಕಂಡಿರುವ, ಅದರ ವಿಶ್ಲೇಷಣೆಗಳನ್ನು ನಿಖರವಾಗಿ ಮಾಡಿರುವ ಮತ್ತು ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿ ಹೆಚ್ಚು ಕಡಿಮೆ ಕನ್ನಡಿಗರೇ ಆಗಿರುವ ಜೇಮ್ಸ, ಕರ್ನಾಟಕದ ರಾಜಕೀಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ರಾಜಕೀಯ ಪಂಡಿತ. ಅವರು ಹೇಳಿದ್ದನ್ನು ನಂಬಲೇ ಬೇಕು ಆದರೆ..?
ಹಿಂದಿನ ಚುನಾವಣೆಗಳ ಫಲಿತಾಂಶ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ನೋಡಿದರೆ ಅಧಿಕಾರದ ಕಡೆಗೆ ಕಾಂಗ್ರೆಸ್ ಹಾದಿ ಸುಲಭದ್ದೆಂದು  ಅನಿಸಿಬಿಡುವುದು ಸಹಜ. ಎಚ್.ಡಿ.ಕುಮಾರಸ್ವಾಮಿಯವರ ವಚನಭಂಗದಿಂದಾಗಿ ಯಡಿಯೂರಪ್ಪನವರ ಪರ ಎದ್ದಿದ್ದ ಅನುಕುಂಪದ ಅಲೆ, ಬಳ್ಳಾರಿಯ ರೆಡ್ಡಿ ಸೋದರರ ದುಡ್ಡಿನ ಬಲ, ತಳಮಟ್ಟದಲ್ಲಿನ ಸಂಘ ಪರಿವಾರದ ಬದ್ದ ಕಾರ್ಯಕರ್ತರ ಜಾಲ ಹಾಗೂ ಪರಿಶಿಷ್ಟ ಜಾತಿಯ ಗುಂಪನ್ನು ಒಡೆದು ಮಾದಿಗರು, ಲಂಬಾಣಿ ಮತ್ತು ಬೋವಿ ಸಮುದಾಯಗಳನ್ನು ಸೆಳೆದುಕೊಂಡ `ಸೋಷಿಯಲ್ ಎಂಜಿನಿಯರಿಂಗ್'- 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಈಗ ಬಿಜೆಪಿ ನಾಯಕರು ಚೀರಿಚೀರಿ ಹೇಳಿದರೂ ಅಂದಿನ ಪರಿಸ್ಥಿತಿ ಈಗ ಇಲ್ಲವೆನ್ನುವುದು ಅವರ ಅಂತರಂಗಕ್ಕೂ ಗೊತ್ತು.
ಯಡಿಯೂರಪ್ಪನವರ ನಿರ್ಗಮನ ಮತ್ತು ರೆಡ್ಡಿ ಸೋದರರ ಜೈಲು ವಾಸದಿಂದಾಗಿ ಈ ಎರಡು ಮೂಲಗಳ ಬಲವನ್ನು ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯ ಸೋಲು ನಿಶ್ಚಿತ ಎಂಬುದಕ್ಕೆ ಬೇರೆ ಕಾರಣಗಳು ಬೇಕಿಲ್ಲ. ಆದರೆ ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಬಹುದೇ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಶೇಕಡಾ 1.2ರಷ್ಟು ಹೆಚ್ಚು ಮತಗಳನ್ನು ಗಳಿಸಿದ್ದರೂ ಸ್ಥಾನಗಳ ಲೆಕ್ಕದಲ್ಲಿ ಬಿಜೆಪಿಗಿಂತ 30 ಸ್ಥಾನಗಳನ್ನು ಕಡಿಮೆ ಪಡೆದಿತ್ತು.
ಚುನಾವಣಾ ಫಲಿತಾಂಶದ ಈ ಗಣಿತ ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ. ಮತಪ್ರಮಾಣಕ್ಕೆ ಅನುಗುಣವಾಗಿ ಸ್ಥಾನಗಳ ಲೆಕ್ಕ ಹಾಕಲಾಗುವುದಿಲ್ಲ. ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸುವುದು ಕೇವಲ ಮತಗಳಲ್ಲ, ಅದು ಮತಸಾಂದ್ರತೆ. ಈ ಕಾರಣದಿಂದಾಗಿಯೇ ಹಳೆಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಜೆಡಿ(ಎಸ್) ಶೇಕಡಾ 19.44ರಷ್ಟು ಮತಗಳಿಸಿದರೂ 28  ಸ್ಥಾನಗಳನ್ನು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಿಜೆಪಿ 33.93ರಷ್ಟು ಮತಗಳ ಆಧಾರದಲ್ಲಿ  110 ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರುವುದು.
ಕಾಂಗ್ರೆಸ್ ಪಕ್ಷ ಶೇಕಡಾ 35.13ರಷ್ಟು ಮತಗಳನ್ನು ಪಡೆದರೂ 80ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಾಗದಿರುವುದಕ್ಕೂ ಇದೇ ಕಾರಣ. ಕಾಂಗ್ರೆಸ್ ರಾಜ್ಯದ ಎಲ್ಲ ಭಾಗಗಳಲ್ಲಿ ಸಾಮಾನ್ಯವಾದ ಜನ ಬೆಂಬಲ ಹೊಂದಿದ್ದರೆ, ಬಿಜೆಪಿ ಮತ್ತು ಜೆಡಿ (ಎಸ್) ನಿರ್ದಿಷ್ಟ ಪ್ರದೇಶಗಳಲ್ಲಿ ಕಾಂಗ್ರೆಸ್‌ಪಕ್ಷದ ಸರಾಸರಿ ಜನಬೆಂಬಲಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಂಬಲ ಹೊಂದಿವೆ.
ಯಡಿಯೂರಪ್ಪನವರ ನಿರ್ಗಮನದಿಂದ ಬಿಜೆಪಿ ಶಕ್ತಿ ಕುಂದಲಿರುವುದು ಖಾತರಿ. ಆದರೆ ಬಿಜೆಪಿ ಬುಟ್ಟಿಯಿಂದ ಜಿಗಿದ ಮತಗಳು ನೇರವಾಗಿ ಕಾಂಗ್ರೆಸ್ ಮಡಿಲಿಗೆ ಬೀಳುವುದೇ ಇಲ್ಲವೆ ಅದು ಯಡಿಯೂರಪ್ಪನವರ ಕಡೆಗೆ ಹೋಗಲಿದೆಯೇ ಎನ್ನುವುದು ಪ್ರಶ್ನೆ. ಬಹುಶಃ ಈ ಪ್ರಶ್ನೆಯೇ ಮುಂದಿನ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.
ಬಿಜೆಪಿಯಿಂದ ಸಿಡಿದುಹೋಗಲಿರುವುದು ಬಹುತೇಕ ಲಿಂಗಾಯತ ಮತಗಳು. ಅವುಗಳು ಯಡಿಯೂರಪ್ಪನವರ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು. ಈ `ಮತಾಂತರ'ದಿಂದ ಯಾರಿಗೆ ಎಷ್ಟು ಲಾಭ? ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಬಹುದೇ? ಯಡಿಯೂರಪ್ಪನವರ ಪಕ್ಷವನ್ನು ನಿರ್ಣಾಯಕ ಸ್ಥಾನದಲ್ಲಿ ಕೊಂಡೊಯ್ದು ನಿಲ್ಲಿಸಬಹುದೇ?
ಯಡಿಯೂರಪ್ಪನವರೇ ಬಿಜೆಪಿಯಿಂದ ಒಂದಷ್ಟು ಮತಗಳನ್ನು ಕಿತ್ತುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭವಾಗಲಾರದು. ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿಯಿಂದ ಹೊರಹೋಗುವ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುವಂತೆ ಕಾಂಗ್ರೆಸ್ ಪಕ್ಷ ಮಾಡಬೇಕಾಗುತ್ತದೆ. ಅದೇ ರೀತಿ ಬಿಜೆಪಿಯಿಂದ ಕಿತ್ತುಕೊಂಡ ಮತಗಳಿಂದಲೇ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಯಡಿಯೂರಪ್ಪನವರಿಗೂ ಸಾಧ್ಯವಾಗಲಾರದು.
ಲಿಂಗಾಯತರೆಲ್ಲರೂ ಮತಹಾಕಿದರೂ ಅದು ಶೇಕಡಾ ಹದಿನೈದರ ಪ್ರಮಾಣವನ್ನು ದಾಟುವುದಿಲ್ಲ, ಉತ್ತರ ಕರ್ನಾಟಕದ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಲಿಂಗಾಯತರ ಜನಸಂಖ್ಯೆ ಶೇಕಡಾ 20-25ರಷ್ಟಿದೆ ಎಂದಿಟ್ಟುಕೊಂಡರೂ ಅವರೆಲ್ಲರೂ ಕಣ್ಣುಮುಚ್ಚಿ ಯಡಿಯೂರಪ್ಪನವರ ಪಕ್ಷಕ್ಕೆ ಮತಹಾಕಲಿದ್ದಾರೆ ಎಂಬ ಖಾತರಿ ಇಲ್ಲ. ಕನಿಷ್ಠ ಶೇಕಡಾ 25ರಿಂದ 30ರಷ್ಟು ಮತಗಳನ್ನು ಪಡೆಯದೆ ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಇದಕ್ಕಾಗಿ ಎಲ್ಲ ಜಾತಿ-ಧರ್ಮಗಳ ಮತದಾರರ ಬೆಂಬಲ ಅಗತ್ಯ.
ಯಡಿಯೂರಪ್ಪನವರು ಅದೇ ಪ್ರಯತ್ನದಲ್ಲಿದ್ದಾರೆ.  ಯಡಿಯೂರಪ್ಪನವರ ಬಂಡಾಯ ಬಿಜೆಪಿ ಸೋಲಿನಲ್ಲಿ ಕೊನೆಗೊಳ್ಳಬಹುದು, ಆದರೆ ಕೆಜೆಪಿ ಇಲ್ಲವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಬಹುದು ಎಂದು ಹೇಳಲು ಸಾಧ್ಯ ಇಲ್ಲ.ಹೀಗಾದರೆ ಸುಭದ್ರ ಸರ್ಕಾರ ಸಾಧ್ಯವೇ? ಯಾವುದಾದರೂ ಒಂದು ಪಕ್ಷ 113 ಸ್ಥಾನಗಳನ್ನು ಗಳಿಸಿದರೆ ಇದು ಸಾಧ್ಯವಾಗಬಹುದು.
ಜೇಮ್ಸ ಮೇನರ್ ಪ್ರಕಾರ  ಸದ್ಯಕ್ಕೆ ಅಂತಹ ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ. ಆದರೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯಾವ ಪಕ್ಷವೂ ನೂರರ ಗಡಿಯನ್ನು ದಾಟದೆ ಹೋದರೆ? ಉದಾಹರಣೆಗೆ ಕಾಂಗ್ರೆಸ್ ಪಕ್ಷ 90-95, ಬಿಜೆಪಿ 60-65, ಬಿ.ಎಸ್.ಯಡಿಯೂರಪ್ಪ 30-35, ಜೆಡಿ (ಎಸ್) 30-35 ಮತ್ತು ಬಿಎಸ್‌ಆರ್ ಪಕ್ಷ ಹಾಗೂ ಪಕ್ಷೇತರರು 10-15 ಸ್ಥಾನಗಳನ್ನು ಗಳಿಸಿದರೆ ಸುಲಭದಲ್ಲಿ ಸರ್ಕಾರ ರಚಿಸುವುದು ಸಾಧ್ಯವಾದೀತೇ? ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡುವುದು ರೂಢಿಯಾಗಿರುವ ಕಾರಣ ಮತ್ತು ರಾಜಭವನದಲ್ಲಿ ಅನುಕೂಲಕರ ರಾಜ್ಯಪಾಲರೇ ಕೂತಿರುವುದರಿಂದ  ಸರ್ಕಾರ ರಚನೆಗೆ ಆಹ್ವಾನ ಪಡೆಯುವುದು ಆಗಲೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಅಲ್ಲ.
ಯಾರಿಗೂ ಸ್ಪಷ್ಟ ಬಹುಮತ ಇಲ್ಲದೆ ಇರುವ ಇಂತಹ ಸಂದರ್ಭದಲ್ಲಿ ಬಗೆಬಗೆಯ ಆಪರೇಷನ್‌ಗಳು ನಡೆಯಲಿರುವುದು ಖಂಡಿತ. ಹೆಚ್ಚು ಸ್ಥಾನಗಳನ್ನು ಹೊಂದಿರುವ ಮತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವ ಕಾರಣಗಳಿಂದಾಗಿ ಕಾಂಗ್ರೆಸ್ ನಡೆಸುವ `ಆಪರೇಷನ್'ಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿದ್ದರೂ ಉಳಿದ ಪಕ್ಷಗಳೂ ಕೈಕಟ್ಟಿ ಕೂರಲಾರವು.
ಯಡಿಯೂರಪ್ಪನವರು ಬಿಜೆಪಿಯನ್ನು ತೊರೆದು ಬಂದಿರಬಹುದು, ಬಿಜೆಪಿ ನಾಯಕರನ್ನು ಮನಸಾರೆ ನಿಂದಿಸಿರಬಹುದು, ಅಷ್ಟೇ ಕೆಟ್ಟದಾಗಿ ಯಡಿಯೂರಪ್ಪ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮಾತನಾಡಿರಬಹುದು. ಆದರೆ ಮುಂದಿನ ಚುನಾವಣೆಯ ಫಲಿತಾಂಶದ ನಂತರ ಪರಸ್ಪರ ಒಟ್ಟಾಗುವುದರಿಂದ ಅಧಿಕಾರ ಹಿಡಿಯುವುದು ಸಾಧ್ಯ ಎಂದು ಗೊತ್ತಾದ ಮರುಕ್ಷಣವೇ ಬಿಜೆಪಿ ನಾಯಕರು ಯಡಿಯೂರಪ್ಪನವರಿಗೆ `ನೀವೇ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಹೇಳಿ ಕೆಜೆಪಿಯನ್ನು ತಮ್ಮ ಪಕ್ಷದ ಜತೆ ವಿಲೀನಗೊಳಿಸಲೂ ಮನವೊಲಿಸಬಹುದು.
ಯಡಿಯೂರಪ್ಪನವರು ಒಪ್ಪದೆ ಇದ್ದರೆ (ಅಂತಹ ಆಹ್ವಾನವನ್ನು ಯಡಿಯೂರಪ್ಪ ಖಂಡಿತ ತಿರಸ್ಕರಿಸಲಾರರು) ಕೆಜೆಪಿಯನ್ನೇ ಒಡೆದು ಹಾಕಲು ಬಿಜೆಪಿ ಮುಂದಾಗಬಹುದು. ಯಡಿಯೂರಪ್ಪನವರೂ ಸುಮ್ಮನಿರಲಾರರು, ಬಿಜೆಪಿಯನ್ನು ಒಡೆದು ತಮ್ಮ ಬಲ ಹೆಚ್ಚಿಸಿಕೊಳ್ಳಲು ಅವರೂ ಪ್ರಯತ್ನ ಪಡಬಹುದು.
ಇಷ್ಟೇ ಅಲ್ಲ, ಒಂದೊಮ್ಮೆ ಕೆಜೆಪಿ 45-50, ಜೆಡಿ (ಎಸ್) 45-50  ಮತ್ತು ಬಿಎಸ್‌ಆರ್ ಪಕ್ಷ 10-15 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತೃತೀಯರಂಗದ ಪ್ರಯೋಗ ನಡೆಸಲೂ ಅವಕಾಶ ಇದೆ. ಈ ಮೂರು ಪಕ್ಷಗಳ ನಾಯಕರ ಇಲ್ಲಿಯ ವರೆಗಿನ ನಡವಳಿಕೆಗಳನ್ನು ಗಮನಿಸುತ್ತಾ ಬಂದರೆ  ಯಾವುದೇ ನಿರ್ದಿಷ್ಠ ರಾಜಕೀಯ ಸಿದ್ಧಾಂತ ಇಲ್ಲವೇ ಮೌಲ್ಯಗಳ ಬಗ್ಗೆ ಅವರಿಗೆ ಬದ್ಧತೆ ಕಂಡುಬರುವುದಿಲ್ಲ.
ಪರಸ್ಪರ ಎಷ್ಟೇ ಕೆಸರೆರಚಾಡಿಕೊಂಡರೂ ಅಧಿಕಾರ ಹಿಡಿಯಲು ಮತ್ತೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ ಆಶ್ಚರ್ಯವೇನಿಲ್ಲ. ಈ ಇಬ್ಬರಿಗೂ ಶ್ರಿರಾಮುಲು ಆತ್ಮೀಯರಾಗಿರುವ ಕಾರಣ ಅವರು ಹೊಂದಿಕೊಳ್ಳುವುದು ಕಷ್ಟ ಅಲ್ಲ. ಮುಂದಿನ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತೀಯರಂಗ ಅಧಿಕಾರಕ್ಕೆ ಬರಬಹುದೆಂಬ ಕನಸನ್ನು ಅನೇಕ ಪ್ರಾದೇಶಿಕ ಪಕ್ಷಗಳ ನಾಯಕರು ಕಾಣುತ್ತಿರುವುದರಿಂದ ದೇವೇಗೌಡರು ಕೂಡಾ ಈ ಪ್ರಯೋಗವನ್ನು ಬೆಂಬಲಿಸಬಹುದು.
ಆದರೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಖಚಿತವಾಗಿ ನಂಬಿರುವ ಕಾಂಗ್ರೆಸ್ ನಾಯಕರು ಮನೆಹೊಸಿಲಿಗೆ ಬಂದಿರುವ ಅಧಿಕಾರವನ್ನು ಅಷ್ಟು ಸುಲಭದಲ್ಲಿ ಉಳಿದವರು ಅಪಹರಿಸಿಕೊಂಡು ಹೋಗಲು ಬಿಡಲಾರದು. ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಾಕ್ಷಣ  ಕೆಜೆಪಿ ಇಲ್ಲವೇ ಜೆಡಿ (ಎಸ್) ಜತೆ ಅದು ವ್ಯವಹಾರಕ್ಕೆ ಇಳಿಯಬಹುದು.
ಜೆಡಿ (ಎಸ್)ಗಿಂತಲೂ ಕೆಜೆಪಿಯನ್ನು ಒಲಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭ. ಬಿಜೆಪಿ ತೊರೆದ ನಂತರ ಅವರು `ಸೆಕ್ಯುಲರ್' ಆಗಿರುವುದರಿಂದ ಕೋಮುವಾದಿಗಳ ಜತೆ ಕೈಜೋಡಿಸಿದ ಅಪವಾದವನ್ನು ಕೂಡಾ ಎದುರಿಸಬೇಕಾಗಿಲ್ಲ. ತಲೆಮೇಲೆ ಸಿಬಿಐ ತೂಗುಕತ್ತಿಯನ್ನು ಇಟ್ಟುಕೊಂಡೇ ತಿರುಗಾಡುತ್ತಿರುವ ಯಡಿಯೂರಪ್ಪ ಬಹಳ ಬೇಗ ಕಾಂಗ್ರೆಸ್ ಹಾಕುವ ಗಾಳವನ್ನು ನುಂಗಿಬಿಡಲೂಬಹುದು. ಈ ಎಲ್ಲ ಸಾಧ್ಯತೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಬಹುಕಾಲದಿಂದ ಮರೀಚಿಕೆಯಾಗಿದ್ದ ಸುಭದ್ರ ಸರ್ಕಾರವೊಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಬಹಳ ಕಾರಣಗಳು ಸಿಗುತ್ತಿಲ್ಲ.
ಜೇಮ್ಸ ಮೇನರ್ ಅವರು ರಾಜ್ಯದ ಚುನಾವಣಾ ಇತಿಹಾಸವನ್ನು ಮೆಲುಕುಹಾಕುತ್ತಾ ಕೊನೆಯಲ್ಲಿ ಕರ್ನಾಟಕದ ಜಾಗೃತ ಮತದಾರರನ್ನು ಬಾಯ್ತುಂಬಾ ಹೊಗಳಿದರು. ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ಉಲ್ಲೇಖಿಸಿದ್ದು 1984ರ ಲೋಕಸಭಾ ಚುನಾವಣೆ ಮತ್ತು 1985ರ ಮಧ್ಯಂತರ ವಿಧಾನಸಭಾ ಚುನಾವಣೆಯನ್ನು.
1984ರ ಡಿಸೆಂಬರ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ ನಾಲ್ಕು ಸ್ಥಾನಗಳನ್ನಷ್ಟೇ ನೀಡಿ ರಾಜ್ಯದ ಆಡಳಿತಾರೂಢ ಜನತಾ ಪಕ್ಷಕ್ಕೆ ಮುಖಭಂಗ ಮಾಡಿದ್ದ ಮತದಾರರು, ಎರಡು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 139 ಕ್ಷೇತ್ರಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. `ಭಾರತ ಮಾತ್ರವಲ್ಲ ಬೇರೆ ಯಾವ ದೇಶದಲ್ಲಿಯೂ ಇಂತಹ ನಿದರ್ಶನ ಅಪರೂಪ' ಎಂದು ಅವರು ಬಣ್ಣಿಸಿದರು.
ಕರ್ನಾಟಕದ ಮತದಾರರು ರಾಜ್ಯಕ್ಕೊಂದು ಸುಭದ್ರ ಸರ್ಕಾರ ನೀಡುತ್ತಾರೆ ಎಂಬ ಭರವಸೆ ಅವರ ಮಾತಿನಲ್ಲಿತ್ತು.  ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮೇ ತಿಂಗಳಲ್ಲಿ ಬರುವುದಾಗಿ ಜೇಮ್ಸ ಮೇನರ್ ಹೇಳಿ ಹೋಗಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಕರ್ನಾಟಕದ ಜಾಗೃತ ಮತದಾರರು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನು ಐದು ತಿಂಗಳು ಕಾಯಬೇಕು.