Monday, November 19, 2012

ಪತ್ರಕರ್ತ ಸಾಕ್ಷಿಯಾಗಬೇಕೆ, ರಕ್ಷಕನಾಗಬೇಕೆ? Nov 19 2012


ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.
ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.
ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.
ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.
ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ~ ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್~ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..~ ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.
ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು~ ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ~ನ ಸಂಪಾದಕರು ವಿವರಣೆ ಕೊಡಬೇಕಾಯಿತು.
ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.
ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.
`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ~ ಎಂದು ಬಡಬಡಿಸುತ್ತಿದ್ದ~ ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.
ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್~ ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.
ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?~ ಎನ್ನುವುದು ಮೊದಲ ಪ್ರಶ್ನೆ. 
ಮಂಗಳೂರಿನ `ಸ್ಟೇಹೋಂ~ ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.
ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ~ ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.
ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು~ ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.
ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ~ ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ~ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.
ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?~ ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.
ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ~ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ~ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ~ ಎಂದು ಪೊಲೀಸರು ಹೇಳುತ್ತಿದ್ದಾರೆ. 
ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ~ ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.
`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?~ ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್~ ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.
ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್~ ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.
 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್~ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.
ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....~ ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ. 
 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.
ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

Monday, November 12, 2012

ಬಂಗಾರಪ್ಪನವರ ಹಾದಿಯಲ್ಲಿ ಯಡಿಯೂರಪ್ಪ Nov 12 2012


ಸಾರೆಕೊಪ್ಪ ಬಂಗಾರಪ್ಪ ಮತ್ತು ಬೂಕನಕೆರೆ ಯಡಿಯೂರಪ್ಪನವರ ನಡುವೆ ಶಿವಮೊಗ್ಗ ಎನ್ನುವ ರಾಜಕೀಯ ಕರ್ಮಭೂಮಿಯ ಸಾಮ್ಯತೆ ಒಂದೇ ಅಲ್ಲ, ಇನ್ನೂ ಹಲವು ಇವೆ.
ರಾಜಕೀಯ ಮಹತ್ವಾಕಾಂಕ್ಷೆ, ನೇರಮಾತು, ಮುಂಗೋಪ, ಅತ್ಯುಗ್ರ ಸ್ವಾಭಿಮಾನ, ಬಂಡುಕೋರ ಮನಸ್ಸು, ನಂಬಿದವರನ್ನು ಕಷ್ಟಕಾಲದಲ್ಲಿಯೂ ಕೈಬಿಡದ ಸ್ನೇಹನಿಷ್ಠೆ  ಮತ್ತು ಭ್ರಷ್ಟಾಚಾರ ಎಂಬುದು ರಾಜಕೀಯ ಕ್ಷೇತ್ರದ ಅನಿವಾರ್ಯ ಕರ್ಮ ಎಂದು ಭಾವಿಸುವ ಅಸೂಕ್ಷ್ಮತೆಯಂತಹ ಗುಣಗಳು ಶಿವಮೊಗ್ಗ ಜಿಲ್ಲೆಯ ಇವರಿಬ್ಬರ ವ್ಯಕ್ತಿತ್ವದಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಗಳಿಸಿರುವ ಗರಿಷ್ಠ ಯಶಸ್ಸಿನ ದಾಖಲೆ (ಶೇಕಡಾ ಏಳೂವರೆಯಷ್ಟು ಮತ ಮತ್ತು ಹತ್ತು ಶಾಸಕರು) ಎಸ್.ಬಂಗಾರಪ್ಪನವರ ಹೆಸರಲ್ಲಿದೆ. ಯಡಿಯೂರಪ್ಪನವರು ಈ ದಾಖಲೆಯನ್ನು ಮುರಿಯಬಹುದೇ?
ಯಡಿಯೂರಪ್ಪನವರಿಗೆ ಇನ್ನೂ ಬಿಜೆಪಿಯನ್ನು ಬಿಟ್ಟುಹೋಗುವ ಮನಸ್ಸಿಲ್ಲ, ಪಕ್ಷಕ್ಕೂ ಪ್ರೀತಿಗಿಂತ ಹೆಚ್ಚಾಗಿ ಭಯದಿಂದ ಅವರನ್ನು ಉಳಿಸಿಕೊಳ್ಳಬೇಕೆಂಬ ಆಸೆ ಇದೆ. ಎರಡೂ ಪಾಳಯಗಳಲ್ಲಿ ಈ ತಳಮಳ ಮುಂದುವರಿದಿದೆ.

ಪಕ್ಷ ಸ್ಥಾಪಿಸಿ ಪದಾಧಿಕಾರಿಗಳ ನೇಮಕ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯಿತೆಂದು ಹೇಳಲಾಗುವುದಿಲ್ಲ. ಯಡಿಯೂರಪ್ಪನವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವರೆಗೆ ಯಾವುದೂ ಅಂತಿಮ ಅಲ್ಲ, ಅದರ ನಂತರವೂ ಅಲ್ಲ. ಭಯಗ್ರಸ್ತ ಬಿಜೆಪಿ ಯಡಿಯೂರಪ್ಪನವರ ಷರತ್ತುಗಳನ್ನು ಒಪ್ಪಿಬಿಟ್ಟರೆ ಅವರು ಹೊಸ ಪಕ್ಷವನ್ನೇ ಬಿಜೆಪಿಯಲ್ಲಿ ವಿಲೀನಗೊಳಿಸಲೂಬಹುದು.

ಈಗಾಗಲೇ ಅವರು ರಾಜ್ಯ ಸರ್ಕಾರವನ್ನು `ಮೈತ್ರಿ ಸರ್ಕಾರ~ ಎಂದಿದ್ದಾರೆ. ಆದುದರಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವರೆಗೆ ಯಡಿಯೂರಪ್ಪನವರ ಬಂಡಾಯದ ಬಗ್ಗೆ ಕೊನೆಯ ಮಾತನ್ನು ಬರೆಯಲಾಗದು.
ಉಭಯ ಬಣಗಳ ಪ್ರಯತ್ನಗಳೆಲ್ಲವೂ ವಿಫಲಗೊಂಡು ಕೊನೆಗೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮೂಲಕ ಚುನಾವಣೆಯನ್ನು ಎದುರಿಸಿದರೆ ಏನಾಗಬಹುದು? ಮೊದಲನೆಯದಾಗಿ ಬಿಜೆಪಿ ಜತೆ ಸಂಬಂಧ ಕಡಿದುಕೊಂಡಾಕ್ಷಣ ಈ ವರೆಗೆ `ಕಮ್ಯುನಲ್~ ಆಗಿದ್ದ ಯಡಿಯೂರಪ್ಪನವರು  `ಸೆಕ್ಯುಲರ್~ ಆಗಿಬಿಡುತ್ತಾರೆ. 
ತಮಾಷೆಯಂತೆ ಕಂಡರೂ ಇದು ದೇಶದ ರಾಜಕೀಯ ವಾಸ್ತವ. ಗುಜರಾತ್‌ನ ಶಂಕರ್‌ಸಿಂಗ್ ವಘೇಲಾ ಅವರಿಂದ ಹಿಡಿದು ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ವರೆಗೆ ರಾಷ್ಟ್ರರಾಜಕಾರಣದಲ್ಲಿ ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ,  ಇದರ ಲಾಭ ಖಂಡಿತ ಅವರಿಗೆ ಸಿಗಲಿದೆ.
`ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಯಡಿಯೂರಪ್ಪನವರ ಕೈಬಲಪಡಿಸಬೇಕಾಗುತ್ತದೆ~ ಎಂದು ಈಗಾಗಲೇ ನಮ್ಮ ಅನೇಕ ಜಾತ್ಯತೀತ ಚಿಂತಕರು ಖಾಸಗಿಯಾಗಿ ಹೇಳುತ್ತಿರುವ ಮಾತುಗಳು ಬಹಿರಂಗವಾಗಿ ಕೇಳಿಬರಬಹುದು. ಕಳೆದ 40 ವರ್ಷಗಳಿಂದ ಸಂಘ ಪರಿವಾರದ ಜತೆ ಸಂಬಂಧ ಹೊಂದಿದ್ದರೂ ಯಡಿಯೂರಪ್ಪನವರಿಗೆ ಕೋಮುವಾದಿ ಎಂಬ ಕಳಂಕ ಇಲ್ಲ. 
ಬಿಜೆಪಿಯನ್ನು `ರಾಮನಾಮ~ದ ಮೂಲಕ ಕಟ್ಟಲು ರಾಷ್ಟ್ರನಾಯಕರು ಪ್ರಯತ್ನಿಸುತ್ತಿದ್ದಾಗ ರಾಜ್ಯದಲ್ಲಿ ರೈತಪರ ಹೋರಾಟದ ಮೂಲಕ ಪಕ್ಷವನ್ನು ಬೆಳೆಸಿದವರು ಯಡಿಯೂರಪ್ಪ. ಆದುದರಿಂದ  ಈ `ರೂಪಾಂತರ~ ಅವರಿಗೆ ಕಷ್ಟ ಅಲ್ಲ.
ಎರಡನೆಯದಾಗಿ ಜಾತಿ ಬಲ. ಮುಖ್ಯಮಂತ್ರಿಯಾಗುವ ವರೆಗಿನ ತನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಕಟ್ಟಾಜಾತಿವಾದಿಯಂತೆ ನಡೆದುಕೊಂಡಿರಲಿಲ್ಲ. ಅಂತಹ ಆರೋಪ ಅವರ ರಾಜಕೀಯ ವಿರೋಧಿಗಳು ಕೂಡಾ ಮಾಡಿದ್ದು ಕಡಿಮೆ.
ಆದರೆ ಮುಖ್ಯಮಂತ್ರಿಯಾದ ನಂತರ ಬಹಿರಂಗವಾಗಿ ಲಿಂಗಾಯತ ಮಠಗಳ ಜತೆ ಗುರುತಿಸಿಕೊಂಡ ರೀತಿ, ಬಜೆಟ್‌ನಲ್ಲಿ ನೀಡಿದ `ಉಡುಗೊರೆ~ಗಳು ಮತ್ತು  ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾಗಲೂ ಲಿಂಗಾಯತ ಸ್ವಾಮಿಗಳು ಅವರನ್ನು ಸಮರ್ಥಿಸಿಕೊಂಡ ವರ್ತನೆ ಎಲ್ಲವೂ ಸೇರಿ ಯಡಿಯೂರಪ್ಪನವರಿಗೆ ಜಾತಿವಾದಿ ಎಂಬ ಹಣೆಪಟ್ಟಿ ತಂದುಕೊಟ್ಟಿತು.
ಜಾತಿಯನ್ನು ಅವರು ಖಂಡಿತ ರಾಜಕೀಯವಾಗಿ ಬಳಸಿಕೊಂಡಿದ್ದಾರೆ, ಜಾತಿ ಬೆಂಕಿ ಇದ್ದಹಾಗೆ, ಆರಿಸಲು ಹೋದಾಗಲೂ ಕೈಗೆ ತಗಲಿಬಿಡುತ್ತದೆ. ಅಂತಹದ್ದರಲ್ಲಿ ಅದೇ `ಜಾತಿ ಬೆಂಕಿ~ಯ ಜತೆ ಆಟವಾಡಲು ಹೋದ ಯಡಿಯೂರಪ್ಪನವರು ಜಾತಿವಾದಿ ಎಂಬ ಆರೋಪ ಹೊತ್ತಿರುವುದು ಸಹಜವೇ ಆಗಿದೆ.
ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಧನಂಜಯಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಹಿಂದುಳಿದ ಜಾತಿಗೆ ಸೇರಿರುವ ಎಂ.ಡಿ.ಲಕ್ಷ್ಮಿನಾರಾಯಣ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಹೊಸ ಪಕ್ಷಕ್ಕೆ ಜಾತ್ಯತೀತ ಸ್ವರೂಪವನ್ನು ನೀಡಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ.
ಇದರಿಂದ ಲಿಂಗಾಯತರ ಬೆಂಬಲ ಕಡಿಮೆಯಾಗಲಾರದು ಎಂದು ಅವರಿಗೆ ಗೊತ್ತು. ನಿಜವಾದ ಜಾತಿನಾಯಕನಲ್ಲಿ ಸ್ವಜಾತಿ ಮತದಾರರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿ ಇರುತ್ತದೆ. ಸದ್ಯ ದೇಶದ ರಾಜಕಾರಣದಲ್ಲಿ ಅಂತಹ ಶಕ್ತಿ ಹೊಂದಿರುವವರು ಬಿಎಸ್‌ಪಿ ನಾಯಕಿ ಮಾಯಾವತಿ ಮಾತ್ರ. 
ಬ್ರಾಹ್ಮಣ ಅಭ್ಯರ್ಥಿಗೂ ದಲಿತರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿಯೇ ಮಾಯಾವತಿಯವರ ಈ ಯಶಸ್ಸಿಗೆ ಕಾರಣ. ಯಡಿಯೂರಪ್ಪನವರ ಬಗ್ಗೆ ಲಿಂಗಾಯತರಲ್ಲಿರುವ ಕುರುಡು ಅಭಿಮಾನ ನೋಡಿದರೆ ಅವರೂ ಇಂತಹ ಶಕ್ತಿ ಹೊಂದಿರುವಂತೆ ಕಾಣುತ್ತಿದೆ.
ಮೂರನೆಯ ಅನುಕೂಲತೆ ಪ್ರಾದೇಶಿಕ ಆಶೋತ್ತರಗಳಿಗೆ ಸ್ಪಂದಿಸುವ ಸ್ವಾತಂತ್ರ್ಯ. ಹಲವು ರಾಜ್ಯಗಳಲ್ಲಿ ಪಕ್ಷದ ಸಂಘಟನೆಗಳನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯ-ರಾಜ್ಯಗಳ ನಡುವಿನ ನೆಲ-ಜಲ-ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿಟ್ಟನಿಲುವನ್ನು ಕೈಗೊಳ್ಳುವುದು ಸಾಧ್ಯ ಇಲ್ಲ.

ಮೈತ್ರಿರಾಜಕಾರಣದ ಯುಗದಲ್ಲಿ ಇದು ಇನ್ನೂ ಕಷ್ಟ. ಆದರೆ ಪ್ರಾದೇಶಿಕ ಪಕ್ಷಕ್ಕೆ ಈ ಸಮಸ್ಯೆ ಇಲ್ಲ, ಅದು ಸ್ವತಂತ್ರ ನಿಲುವನ್ನು ಕೈಗೊಳ್ಳಬಹುದು. ಇತ್ತೀಚಿನ ಕಾವೇರಿ ವಿವಾದದಲ್ಲಿ ಎಚ್.ಡಿ.ದೇವೇಗೌಡರು ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಉಪಾಯದಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಇದಕ್ಕೆ ಉದಾಹರಣೆ.
ಪ್ರಾದೇಶಿಕ ಪಕ್ಷಗಳ ರಾಜಕಾರಣ ಇರುವ ಕರ್ನಾಟಕದ ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗೆ ಹೋಲಿಸಿದರೆ ಕರ್ನಾಟಕದ ಚೌಕಾಸಿ ರಾಜಕಾರಣ ದುರ್ಬಲ ಎಂದು ಅನಿಸಿಕೊಳ್ಳಲು  ರಾಷ್ಟ್ರೀಯ ಪಕ್ಷಗಳ ಬಗ್ಗೆ ಕರ್ನಾಟಕದ ಜನರ ಒಲವೇ ಕಾರಣ ಎನ್ನುವ ಅಭಿಪ್ರಾಯ ಇದೆ. ಇಂತಹ ಹೊತ್ತಿನಲ್ಲಿಯೇ ಯಡಿಯೂರಪ್ಪನವರ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆಯಾಗಿದೆ.
ನಾಲ್ಕನೆಯದಾಗಿ, ಬಿಜೆಪಿಯಿಂದ ನಿರ್ಗಮಿಸುವ ಮೂಲಕ ಆಡಳಿತಾರೂಡ ಪಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಅದು ಎದುರಿಸಲಿರುವ ಆಡಳಿತವಿರೋಧಿ ಅಲೆಯಿಂದಲೂ ಯಡಿಯೂರಪ್ಪನವರು ಸ್ಪಲ್ಪಮಟ್ಟಿಗೆ ಮುಕ್ತರಾಗಲಿದ್ದಾರೆ.  `ನಾನು ಮಂಡಿಸಿದ ಬಜೆಟ್‌ನ ಆಶಯಗಳು ಈಡೇರಿಲ್ಲ, ನನ್ನ ಕಾರ್ಯಕ್ರಮಗಳನ್ನು ನಂತರ ಬಂದವರು ಹಾಳು ಮಾಡಿದ್ದಾರೆ~ ಎಂಬ ಆರೋಪಗಳನ್ನು ಅವರು ಈಗಾಗಲೇ ಮಾಡುತ್ತಿದ್ದಾರೆ. ಜನ ಇದನ್ನು ನೂರಕ್ಕೆ ನೂರರಷ್ಟು ನಂಬಲಾರರು. ಆದರೆ ಇಂತಹ ಆರೋಪಗಳನ್ನು ಮಾಡುವ ಸ್ವಾತಂತ್ರ್ಯ ಅವರಿಗೆ ಹೊಸ ಪಕ್ಷದಿಂದ ಸಿಗಲಿದೆ.
ಕೊನೆಯದಾಗಿ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತುಕೂಡಾ ಪ್ರಾದೇಶಿಕ ಪಕ್ಷದಲ್ಲಿ ನಿಶ್ಚಿಂತೆಯಿಂದ ನಾಯಕರಾಗಿ ಮುಂದುವರಿಯಲು ಯಡಿಯೂರಪ್ಪನವರಿಗೆ ಸಾಧ್ಯ. ಇದು ರಾಷ್ಟ್ರೀಯ ಪಕ್ಷಗಳಲ್ಲಿ ಕಷ್ಟ. ಈ ಕಾರಣದಿಂದಾಗಿಯೇ ಅಲ್ಲವೇ, ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವಂತಾಗಿದ್ದು?
ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮೊದಲಾದವರು ಅಧಿಕಾರ ಕಳೆದುಕೊಂಡದ್ದು ಕೂಡಾ ಇದೇ ಕಾರಣದಿಂದಾಗಿ. ಯಡಿಯೂರಪ್ಪನವರ ಮೇಲಿನ ಆರೋಪಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಅದು ಯಾವ ದಾರಿ ಹಿಡಿಯಲಿದೆಯೋ ಗೊತ್ತಿಲ್ಲ. ಇದರ ಹೊರತಾಗಿಯೂ ಒಂದೊಮ್ಮೆ ಅವರು ಚುನಾವಣೆಯ ನಂತರ ಅಧಿಕಾರಕ್ಕೆ ಬರುವಂತಹ ಸಂದರ್ಭ ಕೂಡಿಬಂದರೆ ಅವರ ಮೇಲಿನ ಭ್ರಷ್ಟಾಚಾರದ ಕಳಂಕ ಅದಕ್ಕೆ ಅಡ್ಡಿಯಾಗುವುದಿಲ್ಲ.
ಲಾಲುಪ್ರಸಾದ್ ತನ್ನ ಪತ್ನಿಯನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಜೈಲಿಗೆ ಹೋಗಿ ಬರಲಿಲ್ಲವೇ? ಮಾಯಾವತಿ, ಜಯಲಲಿತಾ ಮೊದಲಾದವರು ಆರೋಪಗಳ ವಿಚಾರಣೆ ನಡೆಯುತ್ತಿರುವಾಗಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿಲ್ಲವೇ?
ಇಷ್ಟೆಲ್ಲ ಅನುಕೂಲತೆಗಳಿದ್ದರೂ ಅಂತಿಮವಾಗಿ ಯಡಿಯೂರಪ್ಪನವರು ಬಯಸಿದ್ದು ಸಿಗಬಹುದೇ? ಇದು ಕಷ್ಟ.
ಮೊದಲನೆಯದಾಗಿ ಹೊಸ ಪಕ್ಷಕ್ಕೆ ಎಷ್ಟೇ ಅನುಕೂಲತೆಗಳಿದ್ದರೂ ಕೂಡಾ ಅದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತವನ್ನಾಗಲಿ, ಇಲ್ಲವೆ ಅತ್ಯಧಿಕ ಸ್ಥಾನಗಳನ್ನು ಗಳಿಸುವುದಾಗಲಿ ಸಾಧ್ಯವೇ ಇಲ್ಲ. ರಾಜಕೀಯವನ್ನೇ ಉಸಿರಾಡುತ್ತಾ ಬಂದ ಯಡಿಯೂರಪ್ಪನವರಿಗೂ ಇದು ತಿಳಿದಿರಬಹುದು.
ಈ ರೀತಿಯ ಬಂಡುಕೋರ ಪಕ್ಷಗಳು ಮಾತೃಪಕ್ಷವನ್ನು ಸುಲಭದಲ್ಲಿ ಸೋಲಿಸಬಹುದು, ಆದರೆ ತಾನು ಗೆಲ್ಲಲಾಗುವುದಿಲ್ಲ. ಮತ್ತೆ ಬಂಗಾರಪ್ಪನವರ ರಾಜಕಾರಣವನ್ನೇ ಉಲ್ಲೇಖಿಸುವುದಾದರೆ ಅವರ `ಕರ್ನಾಟಕ ಕಾಂಗ್ರೆಸ್ ಪಕ್ಷ~ದಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅವರು ಅಧಿಕಾರಕ್ಕೆ ಬರಲಾಗಲಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕಾಗಿಯೇ ಇಷ್ಟೆಲ್ಲ ಬಡಿದಾಡಿ ಕೊನೆಗೆ ಅದೇ ಸಿಗದೆ ಹೋದರೆ ಹೊಸ ಪಕ್ಷ ರಚಿಸಿ ಏನು ಫಲ ಎಂಬ ಪ್ರಶ್ನೆ ಇಂದಲ್ಲ ನಾಳೆ ಯಡಿಯೂರಪ್ಪನವರಲ್ಲಿ ಹುಟ್ಟಿಕೊಳ್ಳಬಹುದು. ಬಿಜೆಪಿಯಲ್ಲಿಯೇ ಉಳಿದುಬಿಟ್ಟರೆ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಹೆಚ್ಚಿದೆ, ಅದು ಹೊಸ ಪಕ್ಷದಲ್ಲಿ ಖಂಡಿತ ಅವರಿಗೆ ಇಲ್ಲ.
ಎರಡನೆಯದಾಗಿ ಯಡಿಯೂರಪ್ಪನವರು ಬಿಜೆಪಿಯಲ್ಲಿರುವ ವರೆಗೆ ನಿಷ್ಠೆ ತೋರಿಸುತ್ತಿರುವ ಬೆಂಬಲಿಗರಲ್ಲಿ ಹೆಚ್ಚಿನವರು ಹೊಸ ಪಕ್ಷ ಸೇರುವುದು ಕಷ್ಟ. ಇದರ ಸುಳಿವನ್ನರಿತಿರುವ ಯಡಿಯೂರಪ್ಪನವರು `ತಳಮಟ್ಟದಿಂದಲೇ ಪಕ್ಷವನ್ನು ಕಟ್ಟುತ್ತೇನೆ, ನಾಯಕರನ್ನು ತಯಾರು ಮಾಡುತ್ತೇನೆ~ ಎಂದು ಹೇಳುತ್ತಿದ್ದರೂ ಅದು ಸುಲಭದ ಮಾತಲ್ಲ.
ಅಷ್ಟೊಂದು ಕಾಲಾವಕಾಶವೂ ಅವರಿಗಿಲ್ಲ. ಒಂದಷ್ಟು ನಾಯಕರು ಯಡಿಯೂರಪ್ಪನವರ ಜತೆಯಲ್ಲಿ ಉಳಿದು ಚುನಾವಣೆಯಲ್ಲಿ ಗೆದ್ದರೂ, ಅವರೆಲ್ಲ ಪಕ್ಷದಲ್ಲಿಯೇ ಉಳಿಯುತ್ತಾರೆ ಎಂದು ಹೇಳಲು ಸಾಧ್ಯ ಇಲ್ಲ. ಬಂಗಾರಪ್ಪನವರ ಪಕ್ಷದಿಂದ ಹತ್ತುಮಂದಿ ಆಯ್ಕೆಯಾದರೂ ಕೊನೆಗೆ ಅವರೂ ಸೇರಿದಂತೆ ಉಳಿದವರು ಇಬ್ಬರು ಮಾತ್ರ. 
ಸದಸ್ಯಬಲ ಸಂಖ್ಯೆ ಕಡಿಮೆ ಇದ್ದಾಗ ಪಕ್ಷವನ್ನು ಒಡೆಯುವುದು ಸುಲಭ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಬಹುಮತ ಬರುವ ಸಾಧ್ಯತೆ ಈ ಕ್ಷಣದಲ್ಲಿ ಕಾಣುವುದಿಲ್ಲವಾದ ಕಾರಣ ಚುನಾವಣೋತ್ತರ ಧ್ರುವೀಕರಣಗಳು ಅನಿವಾರ್ಯವಾಗಿ ನಡೆದುಹೋಗಬಹುದು. ಅಂತಹ ಸಂದರ್ಭದಲ್ಲಿ ಬಂಗಾರಪ್ಪನವರಂತೆ ಯಡಿಯೂರಪ್ಪನವರೂ ಕೊನೆಗೆ ಒಂಟಿಯಾಗಿ ಉಳಿದುಬಿಡಬಹುದು.
ಮೂರನೆಯದಾಗಿ ಲೆಕ್ಕಾಚಾರ ತಪ್ಪಿದರೆ ರಾಜಕೀಯವಾಗಿ ಜಾತಿ ಎಷ್ಟು ಲಾಭ ತಂದುಕೊಡುತ್ತೋ, ಅಷ್ಟೇ ನಷ್ಟವನ್ನುಂಟು ಮಾಡುತ್ತದೆ. ಯಡಿಯೂರಪ್ಪನವರು ನಂಬಿಕೊಂಡಿರುವುದು ಲಿಂಗಾಯತ ಜಾತಿಯನ್ನು.
ಕಳೆದ ನಾಲ್ಕುವರೆ ವರ್ಷಗಳ ರಾಜ್ಯದ ರಾಜಕಾರಣದಲ್ಲಿ ಈ ಜಾತಿಯ ಪ್ರಭಾವವನ್ನು ಯಾರೂ ನಿರಾಕರಿಸಲಾರರು. ಮುಖ್ಯಮಂತ್ರಿ ಮತ್ತು ಸಚಿವರ ಆಯ್ಕೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆ ವರೆಗೆ ಜಾತಿ ಪ್ರಧಾನ ಪಾತ್ರ ವಹಿಸಿದೆ. ಇದು ಒಕ್ಕಲಿಗ, ಬ್ರಾಹಣ ಮೊದಲಾದ ಇತರ ಮೇಲ್ಜಾತಿಗಳಲ್ಲಿ ಅಸೂಯೆ ಮತ್ತು ಆಕ್ರೋಶವನ್ನು ಮತ್ತು ಕೆಳಜಾತಿಗಳಲ್ಲಿ ಅಭದ್ರತೆಯನ್ನು ಹುಟ್ಟಿಸಿದೆ. ಈ ಎರಡೂ ಗುಂಪುಗಳು ತಮ್ಮ ಒಟ್ಟು ಮತಗಳಿಂದ ಲಿಂಗಾಯತ ಅಭ್ಯರ್ಥಿಗಳು ಸೋಲುವ ಸಾಧ್ಯತೆ ಇದ್ದ ಕಡೆ ಒಟ್ಟಾಗಲೂ ಬಹುದು.
ಇದೇ ವೇಳೆ ಬಿಜೆಪಿ ಈಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ, `ಬಿಜೆಪಿ ಲಿಂಗಾಯತರಿಗೆ ಅನ್ಯಾಯಮಾಡಿದೆ~ ಎಂಬ ಯಡಿಯೂರಪ್ಪನವರ ಆರೋಪ ಮೊನಚುಕಳೆದುಕೊಳ್ಳಬಹುದು. ಈ ಭಯದಿಂದಲ್ಲವೇ, `ಶೆಟ್ಟರ್ ಸರ್ಕಾರವನ್ನು ಉರುಳಿಸುವುದಿಲ್ಲ~ ಎಂದು ಯಡಿಯೂರಪ್ಪ ಹೇಳುತ್ತಿರುವುದು?
ನಾಲ್ಕನೆಯದಾಗಿ ವೈಯಕ್ತಿಕವಾಗಿ ಅನ್ಯಾಯಕ್ಕೀಡಾಗಿದ್ದೇನೆ ಎಂದು ಹೇಳಿಕೊಂಡು ಪ್ರಾದೇಶಿಕ ಪಕ್ಷ ಕಟ್ಟಿದವರು ಯಶಸ್ಸು ಕಂಡದ್ದು ಕಡಿಮೆ.  ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗೆ ದ್ರಾವಿಡ ಚಳವಳಿ ಪ್ರೇರಣೆ, `ಕಾಂಗ್ರೆಸ್ ಪಕ್ಷ ತೆಲುಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿದೆ~ ಎಂಬ ಪ್ರಚಾರದ ಬಲದಿಂದಲೇ ಎನ್‌ಟಿಆರ್ ಮುಖ್ಯಮಂತ್ರಿಯಾಗಿದ್ದು.
ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿಯೇ ಕಾನ್ಶಿರಾಮ್ ಮತ್ತು ಮಾಯಾವತಿ ಬಿಎಸ್‌ಪಿ ಕಟ್ಟಿದ್ದು. ಇವೆಲ್ಲ ಯಶಸ್ಸಿನ ಮಾದರಿಗಳು. ಕರ್ನಾಟಕದಲ್ಲಿರುವುದು  ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಗುಂಡೂರಾವ್, ಮತ್ತು ಎಸ್.ಬಂಗಾರಪ್ಪ ಮೊದಲಾದವರ ವೈಫಲ್ಯದ ಮಾದರಿಗಳು ಮಾತ್ರ.
ಅವರಿಗೆ ಸಿಗದ ಯಶಸ್ಸು ಯಡಿಯೂರಪ್ಪನವರಿಗೆ ಸಿಗುತ್ತಾ? ಕನಿಷ್ಠ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರಿಗೆ ಸಿಕ್ಕ ಯಶಸ್ಸಾದರೂ ಸಿಗಬಹುದೇ? ಇದನ್ನು ನೋಡಲು ಯಡಿಯೂರಪ್ಪನವರು ಮೊದಲು ಬಿಜೆಪಿ ತ್ಯಜಿಸಬೇಕು, ಹೊಸಪಕ್ಷ ಸೇರಬೇಕು, ಚುನಾವಣೆ ಎದುರಿಸಬೇಕು...ದಾರಿ ದೂರ ಇದೆ, ಸ್ಪಷ್ಟವೂ ಇಲ್ಲ.

Monday, November 5, 2012

ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ Nov 05 2012


ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತಾನು ಹೋದಲ್ಲೆಲ್ಲಾ `ಇಸ್ ಪ್ರದೇಶ್ ಕಾ ಭವಿಷ್ಯ್ ಆಫ್ ಕಾ ಹಾಥ್ ಮೇ ಹೈ~ ಎಂದು ಕೈ ಎತ್ತಿ ಎತ್ತಿ ಹೇಳುತ್ತಿದ್ದರು. ರಾಹುಲ್ ಲಖನೌದ ಸಾರ್ವಜನಿಕ ಸಭೆಯಲ್ಲಿ ಇದೇ ರೀತಿ ಹೇಳುತ್ತಿದ್ದಾಗ ಪಕ್ಕದಲ್ಲಿದ್ದ ಪತ್ರಕರ್ತ ಗೆಳೆಯನೊಬ್ಬ `ಉತ್ತರಪ್ರದೇಶ್ ಕಾ ನಹೀ, ಆಪ್ ಕಾ ಭವಿಷ್ಯ್~ ಎಂದು ಕಣ್ಣುಮಿಟುಕಿಸಿ ನಕ್ಕಿದ್ದ.
`2007ರ ಚುನಾವಣೆಯ ಕಾಲದಲ್ಲಿ ನಾನಿಲ್ಲಿ ಬಂದಿದ್ದಾಗಲೂ ನೀವೆಲ್ಲ ಹೀಗೆಯೇ ಹೇಳಿದ್ದ ನೆನಪು, ಆದರೆ 403 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 25 ಸ್ಥಾನಗಳನ್ನು ಗೆದ್ದರೂ ರಾಹುಲ್ ಭವಿಷ್ಯ ಮಂಕಾಗಲಿಲ್ಲವಲ್ಲಾ? ಆತ ಈಗಲೂ ನಾಯಕನಲ್ಲವೇ?~ ಎಂದು ಆ ಗೆಳೆಯನನ್ನು ಕಿಚಾಯಿಸಿದ್ದೆ. ಹೌದು ಇದು ವಂಶಪರಂಪರೆಯ ಶಕ್ತಿ.
ಯಾವಾಗಲೂ ಹೀಗೆ, ಮೇಲೇರುವುದು ಸುಲಭ, ಏರಿರುವ ಎತ್ತರವನ್ನು ಉಳಿಸಿಕೊಳ್ಳುವುದು ಕಷ್ಟ. ರಾಹುಲ್‌ಗಾಂಧಿ ಈಗ ಎದುರಿಸುತ್ತಿರುವುದು ಈ ಕಷ್ಟವನ್ನು. ನಿರೀಕ್ಷೆಯ ಭಾರದಿಂದ ಆಗಲೇ ಅವರು ಬಗ್ಗಿಹೋಗಿದ್ದಾರೆ.
ಕಾಂಗ್ರೆಸ್ ಪಕ್ಷ ಮಾತ್ರ ಅಲ್ಲ, ಇಡೀ ದೇಶದ ಕಣ್ಣು ರಾಹುಲ್‌ಗಾಂಧಿ ಕಡೆಗಿದೆ. ಇನ್ನೇನು ಕೇಂದ್ರ ಸಚಿವ ಸಂಪುಟ ಸೇರಿಯೇ ಬಿಡುತ್ತಾರೆ ಎಂಬ ಊಹಾಪೋಹ ಪುನರ‌್ರಚನೆಯ ಹಿಂದಿನ ಕ್ಷಣದ ವರೆಗೂ ಕೇಳಿಬಂದಿತ್ತು. ಈ ಬಾರಿಯೂ ಅವರು ಧೈರ್ಯ ತೋರಲಿಲ್ಲ. ಹಾಗಾಗದಿದ್ದರೂ ಸಣ್ಣಖಾತೆಗಳನ್ನು ಹೊಂದಿದ್ದ ಯುವಸಚಿವರಿಗೆ ನೀಡಲಾಗಿರುವ ಬಡ್ತಿಯನ್ನೇ `ಸಂಪುಟಕ್ಕೆ ಯುವ ರಕ್ತ~ ಎಂದು ಬಣ್ಣಿಸಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಮತ್ತು ಪಕ್ಷದ ಪ್ರತಿಯೊಂದು ನಿರ್ಧಾರದಲ್ಲಿಯೂ ಮಾಧ್ಯಮಗಳ ಕಣ್ಣಿಗೆ `ರಾಹುಲ್ ಮೊಹರು~  ಕಾಣುತ್ತಿದೆ. ಭಾರತದ ಯಾವ ಯುವ ರಾಜಕಾರಣಿಗೆ ಈ ಅನುಕೂಲತೆಗಳು ಒದಗಿ ಬಂದಿವೆ? ಆದರೆ  ಇವುಗಳನ್ನೆಲ್ಲ ಬಳಸಿಕೊಂಡು ರಾಹುಲ್‌ಗಾಂಧಿ ಬೆಳೆದಿದ್ದಾರೆಯೇ ಎನ್ನುವುದು ಪ್ರಶ್ನೆ. ರಾಜಕೀಯದಲ್ಲಿ ಅನುಕೂಲತೆಗಳನ್ನೇ ಬಳಸಿಕೊಳ್ಳಲಾಗದವರು ಅನಾನೂಕುಲತೆಗಳನ್ನು ಹೇಗೆ ಎದುರಿಸಲು ಸಾಧ್ಯ?
ರಾಹುಲ್‌ಗಾಂಧಿಯ ರಾಜಕೀಯ ಪ್ರವೇಶದ ನಂತರದ ಎಂಟುವರ್ಷಗಳ ಅವಧಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ` ಈ ಯುವ ನಾಯಕ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ~ ಎಂದು ಅನಿಸಿಬಿಡುತ್ತದೆ. ಉತ್ತರಪ್ರದೇಶದ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು `ಈ ಬಾರಿ ನೀವು ಅಲ್ಲಿಗೆ ಹೋಗಿದ್ದಾಗ ರಾಹುಲ್‌ನಲ್ಲಿ ಏನಾದರೂ ಬದಲಾವಣೆಯನ್ನು ಕಾಣಲು ಸಾಧ್ಯವಾಯಿತೇ?~ಎಂದು ಬಹಳ ನಿರೀಕ್ಷೆಯಿಂದ ನನ್ನನ್ನು ಕೇಳಿದ್ದರು. ಆಗಿನ್ನೂ ಚುನಾವಣೆಯ ಫಲಿತಾಂಶ ಪ್ರಕಟವಾಗಿರಲಿಲ್ಲ.
 `ಚುನಾವಣೆಗೆ ಮೊದಲೇ ನಡೆಸಿದ್ದ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಹಿಸಿದ್ದ ಪಾತ್ರ, ಆಕ್ರಮಣಕಾರಿ ಪ್ರಚಾರ ಶೈಲಿ, ಕೆಲವೆಡೆ ಸಡಿಲಗೊಂಡರೂ ಆತ್ಮವಿಶ್ವಾಸದಿಂದ ಕೂಡಿದ ಮಾತುಗಳು ಇವೆಲ್ಲವನ್ನೂ ನೋಡಿದಾಗ ಕೊನೆಗೂ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿತ್ತು.
ಆದರೆ ಒಬ್ಬ ರಾಜಕೀಯ ನಾಯಕನ ನಿಜವಾದ ಬಣ್ಣ ಗೊತ್ತಾಗುವುದು ಚುನಾವಣೆಯಲ್ಲಿ ಸೋತಾಗ ನಡೆದುಕೊಳ್ಳುವ ರೀತಿಯಿಂದ. ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ಕುಗ್ಗಿಹೋಗದೆ ಮರುದಿನದಿಂದಲೇ ಪಕ್ಷ ಸಂಘಟನೆಗಾಗಿ ಉತ್ತರಪ್ರದೇಶದಲ್ಲಿ ಓಡಾಡಿದರೆ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಬಹುದು.
ಮತದಾನ ಮುಗಿದ ಮರುದಿನವೇ ದಣಿವಾರಿಸಿಕೊಳ್ಳಲು ವಿದೇಶಕ್ಕೆ ಹಾರಿದರೆ ಆತ ಗಂಭೀರವಾಗಿಲ್ಲ ಎಂದು ಹೇಳಬೇಕಾಗುತ್ತದೆ~ ಎಂದು ಅವರಿಗೆ ಉತ್ತರಿಸಿದ್ದೆ. ಫಲಿತಾಂಶ ಪ್ರಕಟವಾದ ಕೆಲವು ದಿನಗಳ ನಂತರ ರಾಹುಲ್ ಯಾವುದೋ ದೇಶಕ್ಕೆ ಹೋಗಿ ಹಲವು ದಿನಗಳನ್ನು ಹಾಯಾಗಿ ಕಳೆದು ಬಂದಿದ್ದರು. ನನಗೆ ನಿರಾಶೆಯಾಗಿರಲಿಲ್ಲ, ಯುವನಾಯಕನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ನ ಆ ಹಿರಿಯರಿಗೆ ನಿರಾಶೆಯಾಗಿತ್ತು.
ರಾಜಕೀಯ ಎನ್ನುವುದು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ತೊಡಗಿಕೊಳ್ಳಬೇಕಾದ ಗಂಭೀರ ವೃತ್ತಿ. ಐದು ದಿನ ಕೆಲಸ ಮಾಡಿ ವಾರಾಂತ್ಯದ ಎರಡು ದಿನಗಳನ್ನು ಎಲ್ಲಿಯೋ ಮೋಜಿನ ತಾಣದಲ್ಲಿ ಕಳೆದು ದಣಿವಾರಿಸಿಕೊಳ್ಳುವ ಕಾರ್ಪೋರೇಟ್ ಉದ್ಯೋಗ ಅಲ್ಲ. ಖಾದಿ ಜುಬ್ಬಾಪೈಜಾಮ ಧರಿಸಿ ಹಳ್ಳಿಗಳಲ್ಲಿ ತಿರುಗಾಡಿ, ದಲಿತರ ಮನೆಗಳಲ್ಲಿ ಒಂದು ತುಂಡು ರೊಟ್ಟಿ ತಿಂದು ನಂತರ ದೆಹಲಿಗೆ ಹೋಗಿ ಟೀಶರ್ಟ್, ಜೀನ್ಸ್‌ಪ್ಯಾಂಟ್ ಧರಿಸಿ `ಪೇಜ್ ತ್ರಿ~ಪಾರ್ಟಿಗೆ ಹೋಗಿ ಕುಣಿಯುವುದರಿಂದ ರಾಜಕೀಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲ. ಭಾರತದ ಮತದಾರರ ಮನಸ್ಥಿತಿ ಕೂಡಾ ಭಿನ್ನ.
ಇಲ್ಲಿನ ಮತದಾರರು ಆತ್ಮವಿಶ್ವಾಸದಿಂದ ಕೂಡಿದ  ಆಕ್ರಮಣಕಾರಿ ನಡವಳಿಕೆಯ ಮತ್ತು ಕ್ಷಿಪ್ರನಿರ್ಧಾರ ಕೈಗೊಳ್ಳುವ ಧೈರ್ಯವಂತ ನಾಯಕರನ್ನು ಇಷ್ಟಪಡುತ್ತಾರೆ. ಅಂತರ್ಮುಖಿಯಾದ, ಸೌಮ್ಯಸ್ವಭಾವದ ಮತ್ತು ನಿರ್ಧಾರಕೈಗೊಳ್ಳಲು ಹಿಂಜರಿಯುವ ಪುಕ್ಕಲುತನದ ನಾಯಕರು ಅವರ ಆಯ್ಕೆ ಅಲ್ಲ.  ಒಂದೆರಡು ಕಡೆ  ಜುಬ್ಬಾದ ತೋಳುಗಳನ್ನು ಮೇಲೆತ್ತಿ ವೀರಾವೇಶದ ಭಾಷಣ ಮಾಡಿದ ಕೂಡಲೇ ಯಾರೂ ನಾಯಕರಾಗುವುದಿಲ್ಲ. ರಾಹುಲ್‌ಗಾಂಧಿ ತಾನೊಬ್ಬ ಕಸುಬುದಾರ ರಾಜಕಾರಣಿಯೆಂದು ಇನ್ನೂ ಸಾಬೀತುಪಡಿಸಿಲ್ಲ.
ರಾಹುಲ್‌ಗಾಂಧಿಗೆ ಹೋಲಿಸಿದರೆ ತಾಯಿ ಸೋನಿಯಾಗಾಂಧಿಯೇ ನಿಜವಾದ ನಾಯಕಿಯಂತೆ ಕಾಣುತ್ತಾರೆ. ಗಂಡ ರಾಜಕೀಯ ಪ್ರವೇಶ ಮಾಡುವುದರ ವಿರುದ್ಧ `ಹುಲಿಯಂತೆ ಹೋರಾಟ~ ಮಾಡಿದ್ದ ಸೋನಿಯಾಗಾಂಧಿ ಅನಿವಾರ್ಯವಾಗಿ ಪ್ರವೇಶ ಮಾಡಿದ ರಾಜಕೀಯದಲ್ಲಿ ಉಳಿಯಲು ಅದೇ ರೀತಿಯ ಹೋರಾಟ ನಡೆಸುತ್ತಾ ಬಂದಿದ್ದಾರೆ. ಪಕ್ಷ ಎದುರಿಸಿದ ಸೋಲಿನ ಸರಮಾಲೆ, ವಿದೇಶಿ ಮಹಿಳೆ ಎಂಬ ಚುಚ್ಚುನುಡಿ, ನಾಡಿನ ಭಾಷೆ-ಸಂಸ್ಕೃತಿ ಗೊತ್ತಿಲ್ಲದ ಪರಕೀಯ ಭಾವನೆ... ಇವೆಲ್ಲದರ ವಿರುದ್ಧ ಹೋರಾಡುತ್ತಲೇ ಬಂದಿರುವ ಸೋನಿಯಾಗಾಂಧಿ ಇತ್ತೀಚೆಗೆ ತನ್ನ  ಅನಾರೋಗ್ಯದ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಮಗ ಅಮ್ಮನಿಂದಾದರೂ ಪ್ರೇರಣೆ ಪಡೆಯಬಾರದೇ?
ಸಂಪುಟ ಸೇರಲು ಪ್ರಧಾನಿ ಮನಮೋಹನ್‌ಸಿಂಗ್ ನೀಡುತ್ತಲೇ ಇರುವ ಆಹ್ಹಾನದ ನಿರಾಕರಣೆಯಲ್ಲಿಯೂ ಪೂರ್ಣಪ್ರಮಾಣದ ರಾಜಕೀಯ ನಾಯಕನ ಪಾತ್ರವಹಿಸಲು ಹಿಂದೇಟು ಹಾಕುತ್ತಿರುವ ರಾಹುಲ್‌ಗಾಂಧಿಯ ದೌರ್ಬಲ್ಯವನ್ನು ಕಾಣಬಹುದು. ಯುಪಿಎ ಎರಡನೆ ಅವಧಿಯಲ್ಲಿಯಾದರೂ ರಾಹುಲ್ ಸಂಪುಟ ಸೇರಿ ಅನುಭವ ಗಳಿಸಿಕೊಳ್ಳಬಹುದಿತ್ತು. ರಾಜೀವ್‌ಗಾಂಧಿ ತನ್ನೆಲ್ಲ ಒಳ್ಳೆಯತನ ಮತ್ತು ಜನಪರ ಕಾಳಜಿಯ ಹೊರತಾಗಿಯೂ ವಿಫಲಗೊಳ್ಳಲು ಕಾರಣ ಅನುಭವದ ಕೊರತೆ ಎನ್ನುವುದನ್ನು ರಾಹುಲ್ ಅರ್ಥಮಾಡಿಕೊಂಡಿಲ್ಲ. ಈ ಕೊರತೆಯನ್ನು ನೀಗಿಸಲು ಗೆಳೆಯರ ಗುಂಪಿನ ಮೊರೆಹೋದ ರಾಜೀವ್‌ಗಾಂಧಿ ಅವರ ಮಾತುಕೇಳಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದರು.
ಅವರಿಗೆ ಎರಡನೆ ಅವಧಿ ಸಿಕ್ಕಿಬಿಟ್ಟಿದ್ದರೆ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಗುತ್ತಿದ್ದರೇನೋ? ಪ್ರಧಾನಿಯಾದ ನಂತರ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಅಧಿವೇಶನದಲ್ಲಿ ಮಾತನಾಡಿದ್ದ ರಾಜೀವ್ `ಪಕ್ಷದಲ್ಲಿ ಅಧಿಕಾರದ ದಲ್ಲಾಳಿಗಳಿದ್ದಾರೆ~ ಎಂದು ಹೇಳಿ ಸೇರಿದ್ದವರನ್ನು ಬೆಚ್ಚಿಬೀಳಿಸಿದ್ದರು. ಅಂತಹ ದಿಟ್ಟತನವನ್ನು ಪ್ರದರ್ಶಿಸಿದ್ದಕ್ಕಾಗಿಯೇ ಅರುಣ್‌ಶೌರಿಯವರಂತಹ ನೆಹರೂ ಕುಟುಂಬದ ಕಟುಟೀಕಾಕಾರ ಪತ್ರಕರ್ತರೂ ಒಂದಷ್ಟು ಕಾಲ ರಾಜೀವ್‌ಗಾಂಧಿ ಅಭಿಮಾನಿಗಳಾಗಿಬಿಟ್ಟಿದ್ದರು.
ಬಹಳಷ್ಟು ಮಂದಿ ರಾಹುಲ್‌ಗಾಂಧಿಯನ್ನು ಅಪ್ಪ ರಾಜೀವ್‌ಗಾಂಧಿಗೆ ಹೋಲಿಸುತ್ತಾರೆ. ರೂಪವೊಂದನ್ನು ಬಿಟ್ಟರೆ ಇಬ್ಬರ ನಡುವೆ ಸಮಾನ ಅಂಶಗಳು ಕಡಿಮೆ ಎಂದೇ ಹೇಳಬೇಕಾಗುತ್ತದೆ. ಮೊದಲನೆಯದಾಗಿ ರಾಜೀವ್ ತಾನು ಪ್ರೀತಿಸಿದ್ದ ಕ್ರಿಶ್ಚಿಯನ್ ಧರ್ಮದ ವಿದೇಶಿ ಹುಡುಗಿಯನ್ನು 21ನೇ ವರ್ಷಕ್ಕೆ ಮದುವೆಯಾಗುವ ಧೈರ್ಯ ತೋರಿಸಿದ್ದರು. 26ನೇ ವರ್ಷಕ್ಕೆ ರಾಹುಲ್‌ಗಾಂಧಿ ಹುಟ್ಟಿಯೇ ಬಿಟ್ಟಿದ್ದರು. ನಲ್ವತ್ತೆರಡು ದಾಟಿದರೂ ರಾಹುಲ್‌ಗಾಂಧಿಗೆ ತನ್ನ ಮದುವೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.   ರಾಜಕೀಯ ಪ್ರವೇಶ ರಾಜೀವ್‌ಗಾಂಧಿಯವರ ಜೀವನದ ಉದ್ದೇಶವಾಗಿರಲಿಲ್ಲ.
ಸೋದರ ಸಂಜಯ್‌ಗಾಂಧಿ ಸಾವಿನ ನಂತರ ತಾಯಿಗೆ ನೆರವಾಗಲು ಒಲ್ಲದ ಮನಸ್ಸಿನಿಂದ ಅವರು ರಾಜಕೀಯ ಪ್ರವೇಶಿಸಬೇಕಾಯಿತು. ಆದರೆ ರಾಜಕೀಯದಲ್ಲಿ ನೆಹರೂ ಕುಟುಂಬದ ಪರಂಪರೆಯನ್ನು ಉಳಿಸಿಕೊಳ್ಳಲು ಇಂದಲ್ಲ ನಾಳೆ ರಾಜಕೀಯ ಪ್ರವೇಶಿಸುವುದು ಅನಿವಾರ್ಯ ಎಂದು ರಾಹುಲ್‌ಗಾಂಧಿಗೆ ಗೊತ್ತಿತ್ತು. ರಾಜೀವ್ ಗಾಂಧಿಯಂತೆ ರಾಜಕೀಯ ಮಾರ್ಗದರ್ಶನ ನೀಡಲು ಇಂದಿರಾಗಾಂಧಿಯಂತಹ ತಾಯಿ ರಾಹುಲ್‌ಗೆ ಇರಲಿಲ್ಲ ನಿಜ, ಆದರೆ ಮಾನಸಿಕವಾಗಿ ಸಿದ್ಧಗೊಳ್ಳಲು ಅವರಿಗೆ ಬೇಕಾದಷ್ಟು ಕಾಲಾವಕಾಶ ಇತ್ತು. ರಾಜೀವ್‌ಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು 37ನೇ ವರ್ಷದಲ್ಲಿ, ಅವರಿಗಿಂತ ಮೂರುವರ್ಷ ಕಡಿಮೆ ವಯಸ್ಸಿನಲ್ಲಿಯೇ ರಾಹುಲ್ ಅಮೇಠಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ನಿರಂತರ ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಬಾಯಿಬಿಟ್ಟು ಹೇಳಬೇಕಾಗಿಲ್ಲ ಕೇವಲ ಸನ್ನೆಯ ಮೂಲಕವೇ ಸರ್ಕಾರಕ್ಕೆ ಆದೇಶವನ್ನು ನೀಡುವಂತಹ ಸ್ಥಾನದಲ್ಲಿ ರಾಹುಲ್‌ಗಾಂಧಿ ಇದ್ದಾರೆ. ಆದರೆ ಮಾಡಿದ್ದೇನು?
ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆ. ಆದರೆ ಕೇವಲ ಅದರ ಬಲದಿಂದಲೇ ರಾಜಕೀಯದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಷ್ಟು ಇಂದಿನ ಮತದಾರರು ಉದಾರಿಗಳಲ್ಲ. ವಂಶದ ಬಲದಿಂದ ರಂಗಪ್ರವೇಶವಷ್ಟೇ ಸಲೀಸು, ಆದರೆ ರಂಗದ ಮೇಲೆ ಉಳಿಸುವುದು ಸಾಧನೆ ಮಾತ್ರ. ಅದರಲ್ಲಿ ಸೋತುಹೋದರೆ ಜೈಕಾರ ಹಾಕಿದ ಅದೇ ಜನ ಮುಖತಿರುಗಿಸಿಬಿಡುತ್ತಾರೆ. ಇದಕ್ಕಾಗಿಯೇ ಅಗಾಧವಾದ ಸಾಧ್ಯತೆಗಳನ್ನು ಹೊಂದಿರುವಂತಹ ನಾಯಕ ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು, ಇತರರನ್ನು ಬೆರಗುಗೊಳಿಸುವಂತಹ ಸವಾಲುಗಳನ್ನು ಸ್ವೀಕರಿಸಬೇಕು. ಅದರ ಮೂಲಕವೇ ತಾನೊಬ್ಬ ನಾಯಕನೆಂಬುದನ್ನು ಸಾಬೀತುಪಡಿಸಬೇಕು. ರಾಮಮನೋಹರ ಲೋಹಿಯಾ ಅವರಿಂದ `ಗೂಂಗಿಗುಡಿಯಾ~ ಎಂದು ಗೇಲಿಮಾಡಿಸಿಕೊಂಡ ಇಂದಿರಾಗಾಂಧಿ,  `ದುರ್ಗಿ~ ಎಂದು ಅಟಲಬಿಹಾರಿ ವಾಜಪೇಯಿ ಅವರಿಂದ ಅಭಿಮಾನದಿಂದ ಕರೆಸಿಕೊಳ್ಳುವವರೆಗೆ ಸವೆಸಿದ್ದ ರಾಜಕೀಯ ಪಯಣದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಸಂಜಯ್ ಮತ್ತು ರಾಜೀವ್ ಕೂಡಾ ಇಂತಹ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಭಾರತವನ್ನು ಇಪ್ಪತ್ತೊಂದನೆ ಶತಮಾನಕ್ಕೆ ಕೊಂಡೊಯ್ಯುವ ಮಾತನ್ನು ಪ್ರವಾದಿಯಂತೆ ರಾಜೀವ್ ಹೇಳಿದಾಗ ಗೇಲಿಮಾಡಿದವರೇ ಹೆಚ್ಚು. ಆ ಕನಸು ಒಂದು ತಲೆಮಾರಿನ ಆಯುಷ್ಯದೊಳಗೆಯೇ ನಿಜವಾದಾಗ ರಾಜೀವ್‌ಗಾಂಧಿಯವರ ದೂರಾಲೋಚನೆಯನ್ನು ಶ್ಲಾಘಿಸದಿರಲು ಹೇಗೆ ಸಾಧ್ಯ?
ಒಂದೆರಡು ಲಿಖಿತ ಭಾಷಣಗಳನ್ನು ಓದಿರುವುದನ್ನು ಬಿಟ್ಟರೆ ಲೋಕಸಭೆಯ ಯಾವ ಚರ್ಚೆಯಲ್ಲಿಯೂ ಓರಗೆಯ ಇತರ ಯುವನಾಯಕರಂತೆ ರಾಹುಲ್ ಭಾಗವಹಿಸಿಲ್ಲ.  ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್‌ಗಳಿಗೆ ಪೂರ್ಣಪ್ರಮಾಣದ ಸಂದರ್ಶನವನ್ನು ನೀಡಿಲ್ಲ. ಒಂದಷ್ಟು ಚುನಾವಣಾ ಭಾಷಣಗಳು,ಪತ್ರಿಕಾ ವರದಿಗಳು ಮತ್ತು ಟಿವಿ ಬೈಟ್‌ಗಳ ಹೊರತಾಗಿ ರಾಹುಲ್ ಮನಸ್ಸಲ್ಲೇನಿದೆ ಎಂದು ತಿಳಿದುಕೊಳ್ಳಲು ಬೇರೆದಾರಿ ಇಲ್ಲ.
ನಾಲ್ಕು ದಿಕ್ಕುಗಳಿಂದಲೂ ಮಾಧ್ಯಮಗಳು ಮುತ್ತಿಕೊಂಡಿರುವ ಈಗಿನ ದಿನಮಾನದಲ್ಲಿ ಅದರಿಂದ ದೂರ ಓಡುವವ ಹೇಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ನಾಯಕನಾಗಲು ಸಾಧ್ಯವೋ ಗೊತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆ, ಸಾಮಾಜಿಕ ಜಾಲತಾಣಗಳು ಮತ್ತು ಭ್ರಷ್ಟಾಚಾರದ ವಿರುದ್ದದ ಹೋರಾಟದಿಂದಾಗಿ ಭಾರತದ ರಾಜಕೀಯ ಕ್ಷೇತ್ರ ಅನಿವಾರ್ಯವಾಗಿ ಪಾರದರ್ಶಕತೆಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲೇಬೇಕಾಗಿದೆ. ಕಳೆದ ಒಂದು ವಾರದಿಂದ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ತಾಯಿ-ಮಗನ ವಿರುದ್ಧ ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಮಾಡಿದ್ದಾರೆ.
ಇದಕ್ಕೆಲ್ಲ ಕಾಂಗ್ರೆಸ್ ಬೆಂಬಲಿಗರಿಂದ ಉತ್ತರ ಕೊಡಿಸಿ ರಾಹುಲ್‌ಗಾಂಧಿ ಎಷ್ಟು ದಿನ ದಂತಗೋಪುರದಲ್ಲಿ ಉಳಿಯಲು ಸಾಧ್ಯ? ಉಳಿದ ಕ್ಷೇತ್ರಗಳಂತೆ ರಾಜಕೀಯದಲ್ಲಿಯೂ ತನ್ನ ಶಿಲುಬೆಯನ್ನು ತಾನೇ ಹೊರಬೇಕು.
ಸಚಿವ ಸಂಪುಟ ಸೇರುವ ಅವಕಾಶವನ್ನು ರಾಹುಲ್‌ಗಾಂಧಿ ಕಳೆದುಕೊಂಡಿದ್ದಾರೆ. ಈಗ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸುವ ಬಗ್ಗೆ ಊಹಾಪೋಹಗಳು ಎದ್ದಿವೆ. ರಾಜಕೀಯ ಜೀವನವನ್ನು ರಾಹುಲ್‌ಗಾಂಧಿ ನಿಜಕ್ಕೂ ಗಂಭೀರವಾಗಿ ಸ್ವೀಕರಿಸಲು ನಿರ್ಧರಿಸಿದ್ದರೆ ಅಲಂಕಾರಿಕ ಹುದ್ದೆಗಳಲ್ಲಿ ಕೂರುವುದಲ್ಲ, ತಾಯಿಗೆ ನಿವೃತ್ತಿಯನ್ನು ದಯಪಾಲಿಸಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು.  ಜವಾಹರಲಾಲ್ ನೆಹರೂ 40ನೇ ವರ್ಷಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಬಿಟ್ಟಿದ್ದರು.ಆ ಧೈರ್ಯ ರಾಹುಲ್‌ಗಾಂಧಿಯಲ್ಲಿದೆಯೇ?

Monday, October 22, 2012

ಎಸ್.ಎಂ. ಕೃಷ್ಣ ಸಮಸ್ಯೆಯೇ, ಪರಿಹಾರವೇ? OCT 29 2012


ವಿದೇಶಾಂಗ ವ್ಯವಹಾರ ಸಚಿವ ಖಾತೆಗೆ ರಾಜೀನಾಮೆ ನೀಡಿರುವ ಎಸ್.ಎಂ. ಕೃಷ್ಣ  ರಾಜ್ಯ ರಾಜಕಾರಣಕ್ಕೆ ಯಾವ ಪಾತ್ರ ಧರಿಸಿ ಮರಳಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟ ಇಲ್ಲ. ಆದರೆ ರಾಜಕೀಯ ಸನ್ಯಾಸವನ್ನು ಘೋಷಿಸದೆ ಇರುವುದರಿಂದ ಕೃಷ್ಣ ಅವರು ಬೆಂಗಳೂರಿಗೆ ಬಂದು ಇಲ್ಲಿನ ರಾಜಕೀಯವನ್ನು `ಯುವಕರಿಗೆ~ ಬಿಟ್ಟುಕೊಟ್ಟು ತಮ್ಮ ನೆಚ್ಚಿನ ಶಟಲ್ ಬ್ಯಾಡ್ಮಿಂಟನ್ ಆಡುತ್ತಾ ಕಾಲ ಕಳೆಯಲಿದ್ದಾರೆ ಎಂದು ಹೇಳಲಾಗುವುದಿಲ್ಲ.

ಅವರು ಅಂತಹ ನಿರ್ಧಾರ ಮಾಡಿದರೂ ಬೆಂಬಲಿಗರು ಅವರನ್ನು ಸುಮ್ಮನಿರಲು ಬಿಡಲಾರರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಹೀಗೆ ರಾಜಕಾರಣದಲ್ಲಿ ಮಹತ್ವದ ಸ್ಥಾನಗಳೆಲ್ಲವನ್ನೂ ಅಲಂಕರಿಸಿರುವ ಕೃಷ್ಣ ಅವರಿಗೆ ಅವರದ್ದೇ ಆಗಿರುವ ಬೆಂಬಲಿಗರಿದ್ದಾರೆ.
ಅವರ ಶಕ್ತಿ, ಅನುಭವ, ಸಂಪರ್ಕ, ಸಂಪನ್ಮೂಲಗಳ ವಿಸ್ತಾರ ದೊಡ್ಡದು. ವಯಸ್ಸಿನಲ್ಲಿಯೂ ಹಿರಿಯರು, ಹೈಕಮಾಂಡ್‌ನಲ್ಲಿ ಈಗಲೂ ಅವರ ಮಾತಿಗೆ ಒಂದಿಷ್ಟು ಬೆಲೆ ಇದೆ. ಆದುದರಿಂದ ಅವರು ಕರ್ನಾಟಕಕ್ಕೆ ಯಾವ ಪಾತ್ರದಲ್ಲಿ ಪ್ರವೇಶಿಸಿದರೂ ರಾಜ್ಯ ರಾಜಕಾರಣ ಮೊದಲಿನಂತೆ ಇರಲಾರದು.
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಕೃಷ್ಣ ಸಕ್ರಿಯವಾದರೆ ಅನುಕೂಲತೆಗಳಿವೆಯೇ? ಖಂಡಿತ ಇವೆ. ಮೊದಲನೆಯದಾಗಿ ಕೃಷ್ಣ ತಮ್ಮ `ಇಮೇಜ್~ ಬಗ್ಗೆ ಸದಾ ಧ್ಯಾನಸ್ಥರಾಗಿರುವವರು. ವಿದೇಶಿ ಶಿಕ್ಷಣ, ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವ, ಎಚ್ಚರಿಕೆಯ ಮಾತುಗಳು, ಉಡುಗೆ-ತೊಡುಗೆ, ಅಪಾರವಾದ ಸಂಯಮ, ಎದುರಿಗಿದ್ದವರಲ್ಲಿ ಗೌರವದ ಭಾವನೆಯನ್ನು ಹುಟ್ಟಿಸುವಂತಹ ನಡವಳಿಕೆಗಳ ಮೂಲಕ ಅವರು ತಮ್ಮ `ಇಮೇಜ್~ ಪೋಷಿಸಿಕೊಂಡು ಬಂದವರು.
ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ರಾಜಕಾರಣಿಗಳು ಗೌರವ ಕಳೆದುಕೊಂಡಿದ್ದು, ಬೀದಿಬೀದಿಗಳಲ್ಲಿ ಜನ ತುಚ್ಚವಾಗಿ ಮಾತನಾಡುವಂತಾಗಿದೆ. ರಾಜಕಾರಣಿಗಳು ಭ್ರಷ್ಟರು ಎನ್ನುವುದಷ್ಟೇ ಇದಕ್ಕೆ ಕಾರಣ ಅಲ್ಲ, ಭ್ರಷ್ಟಾಚಾರದ ಹಣದಿಂದ ಗಳಿಸಿದ ಶ್ರೀಮಂತಿಕೆಯ ಅಸಹ್ಯಕರ ಪ್ರದರ್ಶನ, ರೆಸಾರ್ಟ್ ರಾಜಕೀಯ, ಸದನದಲ್ಲಿಯೇ ಅಶ್ಲೀಲಚಿತ್ರಗಳ ವೀಕ್ಷಣೆ, ಸೊಂಟದ ಕೆಳಗಿನ ಭಾಷೆಯಲ್ಲಿ ಬೈದಾಟ, ರಕ್ತದ ರುಚಿ ತೋರಿಸುವ ಬೆದರಿಕೆ ಮೊದಲಾದ ಅವರ ಒಟ್ಟು ನಡವಳಿಕೆಯೇ ಜನರಲ್ಲಿ ರೇಜಿಗೆ ಹುಟ್ಟಿಸಿದೆ.
ಇಂತಹ ವಾತಾವರಣದಲ್ಲಿ ಎಸ್.ಎಂ.ಕೃಷ್ಣ ಅವರ `ಭಿನ್ನ ವ್ಯಕ್ತಿತ್ವ~ ಸಹಜವಾಗಿಯೇ ಜನರ ಮನಸ್ಸನ್ನು ಸೆಳೆಯಬಹುದು. ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಗರಕೇಂದ್ರಿತ, ಮಧ್ಯಮವರ್ಗ ಮತ್ತು ಯುವವರ್ಗಕ್ಕೆ ಸೇರಿರುವ ಮತದಾರರಲ್ಲಿ ಬಹಳಷ್ಟು ಮಂದಿಗೆ ಕೃಷ್ಣ ಇಷ್ಟವಾಗಬಹುದು.
ಎರಡನೆಯ ಅನುಕೂಲತೆ ಅವರಲ್ಲಿರುವ ಅಭಿವೃದ್ಧಿಯ ಮುನ್ನೋಟ. ಬಹಳಷ್ಟು ರಾಜಕೀಯ ಪಕ್ಷಗಳು ಸೀರೆ, ಮಂಗಳಸೂತ್ರ, ಸೈಕಲ್ ಹಂಚಿಕೆ ಇತ್ಯಾದಿ ಅಗ್ಗದ ಜನಪ್ರಿಯ ಕಾರ್ಯಕ್ರಮಗಳ ದೌರ್ಬಲ್ಯಕ್ಕೆ ಬಿದ್ದುಬಿಡುತ್ತವೆ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚಿಸಿದ್ದ ತೆರಿಗೆ ಸುಧಾರಣಾ ಆಯೋಗ, ಆಡಳಿತ ಸುಧಾರಣಾ ಆಯೋಗ, ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ, ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಐಟಿ ಮತ್ತು ಬಿಟಿ ಉದ್ಯಮಕ್ಕೆ ಕೊಟ್ಟ ಪ್ರೋತ್ಸಾಹ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ, ಗ್ರಾಮೀಣಪ್ರದೇಶದಲ್ಲಿ ವಸತಿ ನಿರ್ಮಾಣದಂತಹ ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿತ್ತು. ಕಳೆದ ಎಂಟು ವರ್ಷಗಳ ಆಡಳಿತವನ್ನು ಕಂಡ ಮತದಾರನಿಗೆ ಕೃಷ್ಣ ಅವರ ಕಾಲದ ಸಾಧಾರಣ ಸಾಧನೆ ಕೂಡಾ ಹಿರಿದಾದುದು ಎಂದು ಅನಿಸದೆ ಇರದು.
ಮೂರನೆಯದಾಗಿ ಕೃಷ್ಣ ಅವರ ವಯಸ್ಸು ಮತ್ತು ಅನುಭವ ಸಹಜವಾಗಿ ಯಜಮಾನನ ಸ್ಥಾನವನ್ನು ತಂದುಕೊಟ್ಟಿದೆ. ಅವರಿಗಿಂತ ಹಿರಿಯ ಜನಪ್ರಿಯ ನಾಯಕರು ರಾಜ್ಯ ಕಾಂಗ್ರೆಸ್‌ನಲ್ಲಿ ಬೇರೆ ಯಾರೂ ಇಲ್ಲ. ಒಳಜಗಳಕ್ಕೆ ಕುಖ್ಯಾತಿ ಪಡೆದ ಪಕ್ಷ ಕಾಂಗ್ರೆಸ್.
ಮೂರು ಮಂದಿ ಇದ್ದಲ್ಲಿ ನಾಲ್ಕು ಗುಂಪುಗಳಿರುತ್ತವೆ. ಡಾ.ಪರಮೇಶ್ವರ್, ಸಿದ್ದರಾಮಯ್ಯ, ಶಾಮನೂರು ಶಿವಶಂಕರಪ್ಪ ಹೀಗೆ ಪ್ರತಿ ನಾಯಕನ ಸುತ್ತ ಮರಿನಾಯಕರ ಗುಂಪುಗಳಿರುತ್ತವೆ. ಇವರ ನಡುವಿನ ಜಗಳ ಬಿಡಿಸುವ ಪಂಚಾಯಿತಿ ಕೆಲಸ ಮಾಡುವುದು ಕೃಷ್ಣ ಅವರಂತಹ ಹಿರಿಯ ಮತ್ತು ವಿವಾದಾತೀತ ನಾಯಕನಿಗೆ ಉಳಿದವರಿಗಿಂತ ಸುಲಭ.
ಈ ಮೂಲಕ ಪಕ್ಷಕ್ಕೆ ತುರ್ತಾಗಿ ಬೇಕಾಗಿರುವ ಒಗ್ಗಟ್ಟನ್ನು ಮೂಡಿಸಲು ಸಾಧ್ಯ.
ನಾಲ್ಕನೆಯದಾಗಿ ಕೃಷ್ಣ ಅವರ ಜಾತಿ. ಬಿಜೆಪಿಯ ಬೆಂಬಲಕ್ಕಿರುವ ಲಿಂಗಾಯತ ಮತಗಳನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನ ಪಡಬೇಕಾಗಿಲ್ಲ. ಆ ಕೆಲಸವನ್ನು ಮಾಡಲು ಆಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಿದ್ಧತೆ ಪ್ರಾರಂಭಿಸಿದ್ದಾರೆ. ಇನ್ನೊಂದು ಎದುರಾಳಿ ಪಕ್ಷವಾದ ಜೆಡಿ(ಎಸ್) ಬೆಂಬಲಕ್ಕಿರುವ ಒಕ್ಕಲಿಗರ ಮತಗಳನ್ನು ಒಡೆದು ಸೆಳೆಯುವಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ.
ಕೃಷ್ಣ ಅವರು ಪ್ರಶ್ನಾತೀತ ಒಕ್ಕಲಿಗ ನಾಯಕರಲ್ಲದೆ ಇದ್ದರೂ ಆ ಕೆಲಸವನ್ನು ತಮ್ಮ ಮಿತಿಯಲ್ಲಿಯೇ ಅವರು ಮಾಡಬಲ್ಲರು. ಕಾಂಗ್ರೆಸ್ ಪಕ್ಷದೊಳಗಿರುವ ಬಹಳಷ್ಟು ಅತೃಪ್ತ ಲಿಂಗಾಯತ ನಾಯಕರಿಗೂ ಎಸ್.ಎಂ.ಕೃಷ್ಣ ಆಪ್ತರು. ಅವರಲ್ಲಿ ಬಹಳಷ್ಟು ಮಂದಿ  ಶಾಮನೂರು ಶಿವಶಂಕರಪ್ಪನವರನ್ನು ಕೈಬಿಟ್ಟು ಕೃಷ್ಣ ಅವರನ್ನು ಸ್ವಾಗತಿಸಲು ಹೂವಿನ ಹಾರ ಹಿಡಿದುಕೊಂಡು ನಿಂತಿದ್ದಾರೆ.
ಮೇಲ್ನೋಟಕ್ಕೆ ಇವೆಲ್ಲವೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ನೆರವಾಗಬಲ್ಲಂತಹ ಅನುಕೂಲಗಳಂತೆ ಕಾಣುತ್ತಿವೆ. ಆದರೆ ಈ ನಾಲ್ಕು ಅನುಕೂಲತೆಗಳನ್ನು ಇನ್ನೊಂದು ಮಗ್ಗುಲಿನಿಂದ ನೋಡಿದರೆ ಇವು ಹೊಸ ಸಮಸ್ಯೆಗಳಾಗಿ ಕಾಣುತ್ತವೆ.
ಮೊದಲನೆಯದಾಗಿ ಕೃಷ್ಣ ಹೊಂದಿರುವ ಮತ್ತು ಮನುಷ್ಯ ಪ್ರಯತ್ನದ ಮೂಲಕ ಬದಲಾಯಿಸಲಾಗದ ಅನಾನುಕೂಲತೆ ಅವರ ವಯಸ್ಸು. ಅವರು 80 ವರ್ಷ ಪೂರ್ಣಗೊಳಿಸಿ 81ಕ್ಕೆ ಕಾಲಿಟ್ಟಿದ್ದಾರೆ. ಒಬ್ಬ ವ್ಯಕ್ತಿಯ `ಇಮೇಜ್~ನಲ್ಲಿ ವಯಸ್ಸಿನ ಪಾತ್ರವೂ ಇದೆ. ಜನಸಂಖ್ಯೆಯಲ್ಲಿ ಶೇಕಡಾ 65ರಷ್ಟಿರುವ 35 ವರ್ಷಗಳೊಳಗಿನ ಯುವಜನರು 80 ವರ್ಷದ ನಾಯಕನನ್ನು ಆತ ಎಷ್ಟೇ ಸಮರ್ಥನಾಗಿದ್ದರೂ ಒಪ್ಪಿಕೊಳ್ಳುತ್ತಾರೆಯೇ? ಉದ್ಯಮ ಕ್ಷೇತ್ರಗಳ ನಾಯಕರ ಸರಾಸರಿ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ನಿಧಾನವಾಗಿಯಾದರೂ ಈ ಬದಲಾವಣೆ ರಾಜಕೀಯದಲ್ಲಿಯೂ ಪ್ರಾರಂಭವಾಗಿದೆ. ಉತ್ತರಪ್ರದೇಶದಲ್ಲಿ ಮುಲಾಯಂಸಿಂಗ್ ತನ್ನ ಮಗನನ್ನು ಮುಖ್ಯಮಂತ್ರಿ ಮಾಡಿಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಈಗಿನ ಆಡಳಿತ ಪಕ್ಷಗಳೇ ಪುನರಾಯ್ಕೆಯಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ತಂದೆಯ ಬದಲಿಗೆ ಮಕ್ಕಳು ಕೂರಬಹುದು.
ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳೆಲ್ಲ 60 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು. ಕೃಷ್ಣ ಅವರ ಪಕ್ಷವೇ ಯುವನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲು ಹೊರಟಿದೆ.
ಈ ಪರಿಸ್ಥಿತಿಯಲ್ಲಿ ಎಂಬತ್ತು ದಾಟಿದ ಕೃಷ್ಣ ಅವರು ಪಾಂಚಜನ್ಯ ಊದಿದರೆ ಎಷ್ಟು ಮಂದಿ ಯುವಕ-ಯುವತಿಯರು ಓಡಿಬರಬಹುದು?ಎರಡನೆಯದಾಗಿ, 1999ರಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಮೊದಲ ಬಾರಿಗೆ ಕೂತಾಗ ಅವರು ಹೊಂದಿದ್ದ `ಕ್ಲೀನ್ ಇಮೇಜ್~ ಈಗಲೂ ಇದೆ ಎಂದು ಹೇಳುವುದು ಕಷ್ಟ. ತಮ್ಮ ಆಡಳಿತ ಭ್ರಷ್ಟಚಾರ ಮುಕ್ತವಾಗಿತ್ತು ಎಂದು ಹೇಳುವ ಎದೆಗಾರಿಕೆ ಕೃಷ್ಣ ಅವರಿಗೂ ಇರಲಾರದು. 
ನೈಸ್ ಹಗರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅವರನ್ನು ಆರೋಪಿಯನ್ನಾಗಿ ಮಾಡಿರುವುದು ಇತ್ತೀಚಿನ ಘಟನೆ. ಅವರ ಅಧಿಕಾರಾವಧಿಯ ಕಾಲದಲ್ಲಿಯೇ ಅಕ್ರಮ ಗಣಿಗಾರಿಕೆಯ ಅಧ್ಯಾಯ ಪ್ರಾರಂಭವಾಗಿದ್ದು. ಕಾಲ ಬದಲಾಗಿದೆ, ಸಾಮಾನ್ಯ ಜನರು ಹಿಂದಿನಷ್ಟು ಅಸಹಾಯಕರಲ್ಲ. ಅವರ ಕೈಗೆ ಸಿಕ್ಕಿರುವ ಮಾಹಿತಿ ಹಕ್ಕು ಕಾಯಿದೆಯ ಅಸ್ತ್ರ ಮತ್ತು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂತಹ ಪ್ರಾಮಾಣಿಕ ರಾಜಕಾರಣಿಯ ಎದೆಯಲ್ಲಿಯೂ ದಿಗಿಲು ಹುಟ್ಟಿಸುವಂತಿದೆ.

ಈಗಿನ ಹೋರಾಟ ಆಟದ ನಿಯಮಗಳನ್ನು ಬದಲಿಸಿಬಿಟ್ಟಿದೆ. ರಾಜಕಾರಣಿಗಳ ಮಕ್ಕಳು ಮಾತ್ರವಲ್ಲ ಅಳಿಯಂದಿರ ಬಂಡವಾಳ ಕೂಡಾ ಬಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಐದು ದಶಕಗಳ ಕಾಲ ದೀರ್ಘ ರಾಜಕೀಯ ಮಾಡಿ ಅಧಿಕಾರದ ಹಲವಾರು ಸ್ಥಾನಮಾನಗಳನ್ನು ಅನುಭವಿಸಿರುವ ಕೃಷ್ಣ ಅವರ `ಕ್ಲೀನ್ ಇಮೇಜ್~ನ ಕೋಟೆಯನ್ನು ಒಡೆದುಹಾಕಲು ರಾಜಕೀಯ ವಿರೋಧಿಗಳು ಖಂಡಿತ ಪ್ರಯತ್ನ ನಡೆಸಬಹುದು.
ಕೃಷ್ಣ ಒಬ್ಬ ಉತ್ತಮ ಆಡಳಿತಗಾರನೆನ್ನುವ ಖ್ಯಾತಿಯ ಜತೆಯಲ್ಲಿ, ಅವರ ಅಭಿವೃದ್ಧಿಯ ಮುನ್ನೋಟ  ನಗರ ಕೇಂದ್ರಿತವಾಗಿತ್ತು ಎಂಬ ಆರೋಪ ಕೂಡಾ ಇದೆ. ಬೆಂಗಳೂರು ನಗರವನ್ನು `ಸಿಲಿಕಾನ್ ಸಿಟಿ~ಯಾಗಿ ಬೆಳೆಸಲು ತೋರಿದ ಆಸಕ್ತಿಯನ್ನು ಅವರು ಗ್ರಾಮೀಣ ಅಭಿವೃದ್ಧಿಗಾಗಿ ತೋರಿಸಲಿಲ್ಲ ಎಂದು ದೂರುವವರಿದ್ದಾರೆ. ಅ
ವರ ಕಾಲದಲ್ಲಿ ಕಾಣಿಸಿಕೊಂಡ ಬರಗಾಲವನ್ನು ಎದುರಿಸಲು ವಿಫಲವಾಗಿದ್ದು ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣ ಎನ್ನುವವರಿದ್ದಾರೆ. ಈ ದೇಶದಲ್ಲಿ ನಗರಕೇಂದ್ರಿತ ಅಭಿವೃದ್ಧಿಯ ಪೂರ್ವಗ್ರಹ ಹೊಂದಿರುವವರು ಚುನಾವಣೆಯಲ್ಲಿ ಯಶಸ್ಸು ಕಂಡದ್ದು ಕಡಿಮೆ. ಇದಕ್ಕೆ ಉದಾಹರಣೆಯಾಗಿ ಡಾ. ಮನಮೋಹನ್‌ಸಿಂಗ್ ಅವರನ್ನೇ ಉಲ್ಲೇಖಿಸಬಹುದು.
ಶರದ್ ಪವಾರ್ ತನ್ನ ವಿರುದ್ಧದ ಭ್ರಷ್ಟಾಚಾರದ ನೂರೆಂಟು ಆರೋಪಗಳ ಹೊರತಾಗಿಯೂ ರಾಜಕೀಯವಾಗಿ ಇಂದಿಗೂ ಯಶಸ್ಸು ಕಾಣಲು ಸಾಧ್ಯವಾಗಿರುವುದು ಗ್ರಾಮಕೇಂದ್ರಿತ ಅಭಿವೃದ್ಧಿ ಯೋಜನೆಗಳಿಂದಾಗಿ. ಎಚ್.ಡಿ. ದೇವೇಗೌಡರು  ಬಹಳ ಜಾಣತನದಿಂದ `ಮಣ್ಣಿನ ಮಗ~ ಎಂಬ ಬಿರುದನ್ನು ಕಾಪಾಡಿಕೊಂಡು ಬಂದ ಕಾರಣದಿಂದಾಗಿಯೇ ಈಗಲೂ ರಾಜಕೀಯವಾಗಿ ಪ್ರಸ್ತುತವಾಗಿ ಉಳಿದಿದ್ದಾರೆ.
 ನಗರದ ಮತದಾರರು ಕೃಷ್ಣ ಅವರಂತಹ ರಾಜಕಾರಣಿಗಳ ಬಗ್ಗೆ ಒಲವು ಹೊಂದಿರಬಹುದು. ಆದರೆ ನಗರ ಪ್ರದೇಶದಲ್ಲಿ ಚಲಾವಣೆಯಾಗುವ ಮತಗಳ ಪ್ರಮಾಣ ಎಷ್ಟು? ನಗರದ ಮತದಾರರಲ್ಲಿ ಅಷ್ಟೊಂದು ರಾಜಕೀಯ ಜಾಗೃತಿ ಹೊಂದಿದ್ದರೆ, ಜಾತಿ, ದುಡ್ಡು ಮೊದಲಾದ ದೌರ್ಬಲ್ಯಗಳು ಅವರಲ್ಲಿ ಇಲ್ಲವೆಂದಾದರೆ ಬೆಂಗಳೂರು ಪದವೀಧರ ಮತದಾರ ಕ್ಷೇತ್ರದಲ್ಲಿ ಅಶ್ವಿನ್ ಮಹೇಶ್ ಅವರಂತಹ ನಗರಪ್ರೇಮಿ, ಶಿಕ್ಷಿತ, ಜಾಗೃತ ಅಭ್ಯರ್ಥಿ ಸೋತು ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಮಚಂದ್ರಗೌಡರಂತಹವರು ಗೆಲ್ಲಲು ಹೇಗೆ ಸಾಧ್ಯ?
ಮೂರನೆಯದಾಗಿ ಕೃಷ್ಣ ಅವರ ಆಗಮನದಿಂದ ರಾಜ್ಯ ಕಾಂಗ್ರೆಸ್‌ನಲ್ಲಿರುವ ಒಳಜಗಳ ಶಮನವಾಗಲಿದೆ ಎಂದು ಆ ಪಕ್ಷದಲ್ಲಿರುವ ಕಡು ಆಶಾವಾದಿಗಳು ನಂಬಿದ್ದಾರೆ. 2008ರಲ್ಲಿ ಇದೇ ಕೆಲಸಕ್ಕಾಗಿ ಕೃಷ್ಣ ಅವರನ್ನು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕಕ್ಕೆ ಕಳುಹಿಸಿತ್ತೆನ್ನುವುದನ್ನು ಅವರು ಮರೆತುಬಿಟ್ಟಿದ್ದಾರೆ.
ಆದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯನವರ ಗುಂಪುಗಳ ನಡುವಿನ ಒಳಜಗಳ ಬಗೆಹರಿಸಲು ಕೃಷ್ಣ ಅವರಿಗೆ ಸಾಧ್ಯವಾಗಲಿಲ್ಲ, ಆ ಜಗಳ ಕಾಂಗ್ರೆಸ್ ಸೋಲಿನಲ್ಲಿಯೇ ಕೊನೆಗೊಂಡದ್ದು. ಆಗ ಮಾಡಲಾಗದ ಪವಾಡವನ್ನು ಕೃಷ್ಣ ಈಗ ಮಾಡುತ್ತಾರೆ ಎನ್ನುವುದಕ್ಕೆ ಖಾತರಿ ಏನಿದೆ?  ತಮ್ಮ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಕೃಷ್ಣ ನೆರವಾಗಬಹುದು ಎನ್ನುವ ವಿಶ್ವಾಸ ಇರುವವರೆಗೆ ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಇರಬಹುದು.

ಆ ವಿಶ್ವಾಸ ಕಳೆದುಕೊಂಡ ಮರುಕ್ಷಣ ಅವರಿಬ್ಬರೂ ಇಲ್ಲವೇ ಅವರಲ್ಲೊಬ್ಬರು ತಿರುಗಿಬೀಳಬಹುದು. ಈ ಇಬ್ಬರು ಕಾಂಗ್ರೆಸ್ ನಂಬಿಕೊಂಡ ಮತಬ್ಯಾಂಕ್‌ನಲ್ಲಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದವರು. ಕೃಷ್ಣ ತಂದುಕೊಡುವ ಒಕ್ಕಲಿಗರ ಮತಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಲಿತ-ಹಿಂದುಳಿದ ಜಾತಿಗಳ ಮತಗಳನ್ನು ಕಾಂಗ್ರೆಸ್ ಕಳೆದುಕೊಳ್ಳುವಂತಾದರೆ ಲಾಭಕ್ಕಿಂತ ನಷ್ಟ ಹೆಚ್ಚಾಗಬಹುದು.
ಈ ಕಾರಣಗಳಿಂದಾಗಿಯೇ ಒಂದು ಕೋನದಲ್ಲಿ ರಾಜ್ಯ ಕಾಂಗ್ರೆಸ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರದಂತೆ ಕಾಣುವ ಎಸ್.ಎಂ. ಕೃಷ್ಣ ಇನ್ನೊಂದು ಕೋನದಲ್ಲಿ ಸಮಸ್ಯೆಯಂತೆ ಕಾಣುತ್ತಿರುವುದು.