Monday, November 5, 2012

ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ Nov 05 2012


ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತಾನು ಹೋದಲ್ಲೆಲ್ಲಾ `ಇಸ್ ಪ್ರದೇಶ್ ಕಾ ಭವಿಷ್ಯ್ ಆಫ್ ಕಾ ಹಾಥ್ ಮೇ ಹೈ~ ಎಂದು ಕೈ ಎತ್ತಿ ಎತ್ತಿ ಹೇಳುತ್ತಿದ್ದರು. ರಾಹುಲ್ ಲಖನೌದ ಸಾರ್ವಜನಿಕ ಸಭೆಯಲ್ಲಿ ಇದೇ ರೀತಿ ಹೇಳುತ್ತಿದ್ದಾಗ ಪಕ್ಕದಲ್ಲಿದ್ದ ಪತ್ರಕರ್ತ ಗೆಳೆಯನೊಬ್ಬ `ಉತ್ತರಪ್ರದೇಶ್ ಕಾ ನಹೀ, ಆಪ್ ಕಾ ಭವಿಷ್ಯ್~ ಎಂದು ಕಣ್ಣುಮಿಟುಕಿಸಿ ನಕ್ಕಿದ್ದ.
`2007ರ ಚುನಾವಣೆಯ ಕಾಲದಲ್ಲಿ ನಾನಿಲ್ಲಿ ಬಂದಿದ್ದಾಗಲೂ ನೀವೆಲ್ಲ ಹೀಗೆಯೇ ಹೇಳಿದ್ದ ನೆನಪು, ಆದರೆ 403 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 25 ಸ್ಥಾನಗಳನ್ನು ಗೆದ್ದರೂ ರಾಹುಲ್ ಭವಿಷ್ಯ ಮಂಕಾಗಲಿಲ್ಲವಲ್ಲಾ? ಆತ ಈಗಲೂ ನಾಯಕನಲ್ಲವೇ?~ ಎಂದು ಆ ಗೆಳೆಯನನ್ನು ಕಿಚಾಯಿಸಿದ್ದೆ. ಹೌದು ಇದು ವಂಶಪರಂಪರೆಯ ಶಕ್ತಿ.
ಯಾವಾಗಲೂ ಹೀಗೆ, ಮೇಲೇರುವುದು ಸುಲಭ, ಏರಿರುವ ಎತ್ತರವನ್ನು ಉಳಿಸಿಕೊಳ್ಳುವುದು ಕಷ್ಟ. ರಾಹುಲ್‌ಗಾಂಧಿ ಈಗ ಎದುರಿಸುತ್ತಿರುವುದು ಈ ಕಷ್ಟವನ್ನು. ನಿರೀಕ್ಷೆಯ ಭಾರದಿಂದ ಆಗಲೇ ಅವರು ಬಗ್ಗಿಹೋಗಿದ್ದಾರೆ.
ಕಾಂಗ್ರೆಸ್ ಪಕ್ಷ ಮಾತ್ರ ಅಲ್ಲ, ಇಡೀ ದೇಶದ ಕಣ್ಣು ರಾಹುಲ್‌ಗಾಂಧಿ ಕಡೆಗಿದೆ. ಇನ್ನೇನು ಕೇಂದ್ರ ಸಚಿವ ಸಂಪುಟ ಸೇರಿಯೇ ಬಿಡುತ್ತಾರೆ ಎಂಬ ಊಹಾಪೋಹ ಪುನರ‌್ರಚನೆಯ ಹಿಂದಿನ ಕ್ಷಣದ ವರೆಗೂ ಕೇಳಿಬಂದಿತ್ತು. ಈ ಬಾರಿಯೂ ಅವರು ಧೈರ್ಯ ತೋರಲಿಲ್ಲ. ಹಾಗಾಗದಿದ್ದರೂ ಸಣ್ಣಖಾತೆಗಳನ್ನು ಹೊಂದಿದ್ದ ಯುವಸಚಿವರಿಗೆ ನೀಡಲಾಗಿರುವ ಬಡ್ತಿಯನ್ನೇ `ಸಂಪುಟಕ್ಕೆ ಯುವ ರಕ್ತ~ ಎಂದು ಬಣ್ಣಿಸಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಮತ್ತು ಪಕ್ಷದ ಪ್ರತಿಯೊಂದು ನಿರ್ಧಾರದಲ್ಲಿಯೂ ಮಾಧ್ಯಮಗಳ ಕಣ್ಣಿಗೆ `ರಾಹುಲ್ ಮೊಹರು~  ಕಾಣುತ್ತಿದೆ. ಭಾರತದ ಯಾವ ಯುವ ರಾಜಕಾರಣಿಗೆ ಈ ಅನುಕೂಲತೆಗಳು ಒದಗಿ ಬಂದಿವೆ? ಆದರೆ  ಇವುಗಳನ್ನೆಲ್ಲ ಬಳಸಿಕೊಂಡು ರಾಹುಲ್‌ಗಾಂಧಿ ಬೆಳೆದಿದ್ದಾರೆಯೇ ಎನ್ನುವುದು ಪ್ರಶ್ನೆ. ರಾಜಕೀಯದಲ್ಲಿ ಅನುಕೂಲತೆಗಳನ್ನೇ ಬಳಸಿಕೊಳ್ಳಲಾಗದವರು ಅನಾನೂಕುಲತೆಗಳನ್ನು ಹೇಗೆ ಎದುರಿಸಲು ಸಾಧ್ಯ?
ರಾಹುಲ್‌ಗಾಂಧಿಯ ರಾಜಕೀಯ ಪ್ರವೇಶದ ನಂತರದ ಎಂಟುವರ್ಷಗಳ ಅವಧಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ` ಈ ಯುವ ನಾಯಕ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ~ ಎಂದು ಅನಿಸಿಬಿಡುತ್ತದೆ. ಉತ್ತರಪ್ರದೇಶದ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು `ಈ ಬಾರಿ ನೀವು ಅಲ್ಲಿಗೆ ಹೋಗಿದ್ದಾಗ ರಾಹುಲ್‌ನಲ್ಲಿ ಏನಾದರೂ ಬದಲಾವಣೆಯನ್ನು ಕಾಣಲು ಸಾಧ್ಯವಾಯಿತೇ?~ಎಂದು ಬಹಳ ನಿರೀಕ್ಷೆಯಿಂದ ನನ್ನನ್ನು ಕೇಳಿದ್ದರು. ಆಗಿನ್ನೂ ಚುನಾವಣೆಯ ಫಲಿತಾಂಶ ಪ್ರಕಟವಾಗಿರಲಿಲ್ಲ.
 `ಚುನಾವಣೆಗೆ ಮೊದಲೇ ನಡೆಸಿದ್ದ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಹಿಸಿದ್ದ ಪಾತ್ರ, ಆಕ್ರಮಣಕಾರಿ ಪ್ರಚಾರ ಶೈಲಿ, ಕೆಲವೆಡೆ ಸಡಿಲಗೊಂಡರೂ ಆತ್ಮವಿಶ್ವಾಸದಿಂದ ಕೂಡಿದ ಮಾತುಗಳು ಇವೆಲ್ಲವನ್ನೂ ನೋಡಿದಾಗ ಕೊನೆಗೂ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿತ್ತು.
ಆದರೆ ಒಬ್ಬ ರಾಜಕೀಯ ನಾಯಕನ ನಿಜವಾದ ಬಣ್ಣ ಗೊತ್ತಾಗುವುದು ಚುನಾವಣೆಯಲ್ಲಿ ಸೋತಾಗ ನಡೆದುಕೊಳ್ಳುವ ರೀತಿಯಿಂದ. ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ಕುಗ್ಗಿಹೋಗದೆ ಮರುದಿನದಿಂದಲೇ ಪಕ್ಷ ಸಂಘಟನೆಗಾಗಿ ಉತ್ತರಪ್ರದೇಶದಲ್ಲಿ ಓಡಾಡಿದರೆ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಬಹುದು.
ಮತದಾನ ಮುಗಿದ ಮರುದಿನವೇ ದಣಿವಾರಿಸಿಕೊಳ್ಳಲು ವಿದೇಶಕ್ಕೆ ಹಾರಿದರೆ ಆತ ಗಂಭೀರವಾಗಿಲ್ಲ ಎಂದು ಹೇಳಬೇಕಾಗುತ್ತದೆ~ ಎಂದು ಅವರಿಗೆ ಉತ್ತರಿಸಿದ್ದೆ. ಫಲಿತಾಂಶ ಪ್ರಕಟವಾದ ಕೆಲವು ದಿನಗಳ ನಂತರ ರಾಹುಲ್ ಯಾವುದೋ ದೇಶಕ್ಕೆ ಹೋಗಿ ಹಲವು ದಿನಗಳನ್ನು ಹಾಯಾಗಿ ಕಳೆದು ಬಂದಿದ್ದರು. ನನಗೆ ನಿರಾಶೆಯಾಗಿರಲಿಲ್ಲ, ಯುವನಾಯಕನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ನ ಆ ಹಿರಿಯರಿಗೆ ನಿರಾಶೆಯಾಗಿತ್ತು.
ರಾಜಕೀಯ ಎನ್ನುವುದು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ತೊಡಗಿಕೊಳ್ಳಬೇಕಾದ ಗಂಭೀರ ವೃತ್ತಿ. ಐದು ದಿನ ಕೆಲಸ ಮಾಡಿ ವಾರಾಂತ್ಯದ ಎರಡು ದಿನಗಳನ್ನು ಎಲ್ಲಿಯೋ ಮೋಜಿನ ತಾಣದಲ್ಲಿ ಕಳೆದು ದಣಿವಾರಿಸಿಕೊಳ್ಳುವ ಕಾರ್ಪೋರೇಟ್ ಉದ್ಯೋಗ ಅಲ್ಲ. ಖಾದಿ ಜುಬ್ಬಾಪೈಜಾಮ ಧರಿಸಿ ಹಳ್ಳಿಗಳಲ್ಲಿ ತಿರುಗಾಡಿ, ದಲಿತರ ಮನೆಗಳಲ್ಲಿ ಒಂದು ತುಂಡು ರೊಟ್ಟಿ ತಿಂದು ನಂತರ ದೆಹಲಿಗೆ ಹೋಗಿ ಟೀಶರ್ಟ್, ಜೀನ್ಸ್‌ಪ್ಯಾಂಟ್ ಧರಿಸಿ `ಪೇಜ್ ತ್ರಿ~ಪಾರ್ಟಿಗೆ ಹೋಗಿ ಕುಣಿಯುವುದರಿಂದ ರಾಜಕೀಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲ. ಭಾರತದ ಮತದಾರರ ಮನಸ್ಥಿತಿ ಕೂಡಾ ಭಿನ್ನ.
ಇಲ್ಲಿನ ಮತದಾರರು ಆತ್ಮವಿಶ್ವಾಸದಿಂದ ಕೂಡಿದ  ಆಕ್ರಮಣಕಾರಿ ನಡವಳಿಕೆಯ ಮತ್ತು ಕ್ಷಿಪ್ರನಿರ್ಧಾರ ಕೈಗೊಳ್ಳುವ ಧೈರ್ಯವಂತ ನಾಯಕರನ್ನು ಇಷ್ಟಪಡುತ್ತಾರೆ. ಅಂತರ್ಮುಖಿಯಾದ, ಸೌಮ್ಯಸ್ವಭಾವದ ಮತ್ತು ನಿರ್ಧಾರಕೈಗೊಳ್ಳಲು ಹಿಂಜರಿಯುವ ಪುಕ್ಕಲುತನದ ನಾಯಕರು ಅವರ ಆಯ್ಕೆ ಅಲ್ಲ.  ಒಂದೆರಡು ಕಡೆ  ಜುಬ್ಬಾದ ತೋಳುಗಳನ್ನು ಮೇಲೆತ್ತಿ ವೀರಾವೇಶದ ಭಾಷಣ ಮಾಡಿದ ಕೂಡಲೇ ಯಾರೂ ನಾಯಕರಾಗುವುದಿಲ್ಲ. ರಾಹುಲ್‌ಗಾಂಧಿ ತಾನೊಬ್ಬ ಕಸುಬುದಾರ ರಾಜಕಾರಣಿಯೆಂದು ಇನ್ನೂ ಸಾಬೀತುಪಡಿಸಿಲ್ಲ.
ರಾಹುಲ್‌ಗಾಂಧಿಗೆ ಹೋಲಿಸಿದರೆ ತಾಯಿ ಸೋನಿಯಾಗಾಂಧಿಯೇ ನಿಜವಾದ ನಾಯಕಿಯಂತೆ ಕಾಣುತ್ತಾರೆ. ಗಂಡ ರಾಜಕೀಯ ಪ್ರವೇಶ ಮಾಡುವುದರ ವಿರುದ್ಧ `ಹುಲಿಯಂತೆ ಹೋರಾಟ~ ಮಾಡಿದ್ದ ಸೋನಿಯಾಗಾಂಧಿ ಅನಿವಾರ್ಯವಾಗಿ ಪ್ರವೇಶ ಮಾಡಿದ ರಾಜಕೀಯದಲ್ಲಿ ಉಳಿಯಲು ಅದೇ ರೀತಿಯ ಹೋರಾಟ ನಡೆಸುತ್ತಾ ಬಂದಿದ್ದಾರೆ. ಪಕ್ಷ ಎದುರಿಸಿದ ಸೋಲಿನ ಸರಮಾಲೆ, ವಿದೇಶಿ ಮಹಿಳೆ ಎಂಬ ಚುಚ್ಚುನುಡಿ, ನಾಡಿನ ಭಾಷೆ-ಸಂಸ್ಕೃತಿ ಗೊತ್ತಿಲ್ಲದ ಪರಕೀಯ ಭಾವನೆ... ಇವೆಲ್ಲದರ ವಿರುದ್ಧ ಹೋರಾಡುತ್ತಲೇ ಬಂದಿರುವ ಸೋನಿಯಾಗಾಂಧಿ ಇತ್ತೀಚೆಗೆ ತನ್ನ  ಅನಾರೋಗ್ಯದ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಮಗ ಅಮ್ಮನಿಂದಾದರೂ ಪ್ರೇರಣೆ ಪಡೆಯಬಾರದೇ?
ಸಂಪುಟ ಸೇರಲು ಪ್ರಧಾನಿ ಮನಮೋಹನ್‌ಸಿಂಗ್ ನೀಡುತ್ತಲೇ ಇರುವ ಆಹ್ಹಾನದ ನಿರಾಕರಣೆಯಲ್ಲಿಯೂ ಪೂರ್ಣಪ್ರಮಾಣದ ರಾಜಕೀಯ ನಾಯಕನ ಪಾತ್ರವಹಿಸಲು ಹಿಂದೇಟು ಹಾಕುತ್ತಿರುವ ರಾಹುಲ್‌ಗಾಂಧಿಯ ದೌರ್ಬಲ್ಯವನ್ನು ಕಾಣಬಹುದು. ಯುಪಿಎ ಎರಡನೆ ಅವಧಿಯಲ್ಲಿಯಾದರೂ ರಾಹುಲ್ ಸಂಪುಟ ಸೇರಿ ಅನುಭವ ಗಳಿಸಿಕೊಳ್ಳಬಹುದಿತ್ತು. ರಾಜೀವ್‌ಗಾಂಧಿ ತನ್ನೆಲ್ಲ ಒಳ್ಳೆಯತನ ಮತ್ತು ಜನಪರ ಕಾಳಜಿಯ ಹೊರತಾಗಿಯೂ ವಿಫಲಗೊಳ್ಳಲು ಕಾರಣ ಅನುಭವದ ಕೊರತೆ ಎನ್ನುವುದನ್ನು ರಾಹುಲ್ ಅರ್ಥಮಾಡಿಕೊಂಡಿಲ್ಲ. ಈ ಕೊರತೆಯನ್ನು ನೀಗಿಸಲು ಗೆಳೆಯರ ಗುಂಪಿನ ಮೊರೆಹೋದ ರಾಜೀವ್‌ಗಾಂಧಿ ಅವರ ಮಾತುಕೇಳಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದರು.
ಅವರಿಗೆ ಎರಡನೆ ಅವಧಿ ಸಿಕ್ಕಿಬಿಟ್ಟಿದ್ದರೆ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಗುತ್ತಿದ್ದರೇನೋ? ಪ್ರಧಾನಿಯಾದ ನಂತರ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಅಧಿವೇಶನದಲ್ಲಿ ಮಾತನಾಡಿದ್ದ ರಾಜೀವ್ `ಪಕ್ಷದಲ್ಲಿ ಅಧಿಕಾರದ ದಲ್ಲಾಳಿಗಳಿದ್ದಾರೆ~ ಎಂದು ಹೇಳಿ ಸೇರಿದ್ದವರನ್ನು ಬೆಚ್ಚಿಬೀಳಿಸಿದ್ದರು. ಅಂತಹ ದಿಟ್ಟತನವನ್ನು ಪ್ರದರ್ಶಿಸಿದ್ದಕ್ಕಾಗಿಯೇ ಅರುಣ್‌ಶೌರಿಯವರಂತಹ ನೆಹರೂ ಕುಟುಂಬದ ಕಟುಟೀಕಾಕಾರ ಪತ್ರಕರ್ತರೂ ಒಂದಷ್ಟು ಕಾಲ ರಾಜೀವ್‌ಗಾಂಧಿ ಅಭಿಮಾನಿಗಳಾಗಿಬಿಟ್ಟಿದ್ದರು.
ಬಹಳಷ್ಟು ಮಂದಿ ರಾಹುಲ್‌ಗಾಂಧಿಯನ್ನು ಅಪ್ಪ ರಾಜೀವ್‌ಗಾಂಧಿಗೆ ಹೋಲಿಸುತ್ತಾರೆ. ರೂಪವೊಂದನ್ನು ಬಿಟ್ಟರೆ ಇಬ್ಬರ ನಡುವೆ ಸಮಾನ ಅಂಶಗಳು ಕಡಿಮೆ ಎಂದೇ ಹೇಳಬೇಕಾಗುತ್ತದೆ. ಮೊದಲನೆಯದಾಗಿ ರಾಜೀವ್ ತಾನು ಪ್ರೀತಿಸಿದ್ದ ಕ್ರಿಶ್ಚಿಯನ್ ಧರ್ಮದ ವಿದೇಶಿ ಹುಡುಗಿಯನ್ನು 21ನೇ ವರ್ಷಕ್ಕೆ ಮದುವೆಯಾಗುವ ಧೈರ್ಯ ತೋರಿಸಿದ್ದರು. 26ನೇ ವರ್ಷಕ್ಕೆ ರಾಹುಲ್‌ಗಾಂಧಿ ಹುಟ್ಟಿಯೇ ಬಿಟ್ಟಿದ್ದರು. ನಲ್ವತ್ತೆರಡು ದಾಟಿದರೂ ರಾಹುಲ್‌ಗಾಂಧಿಗೆ ತನ್ನ ಮದುವೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.   ರಾಜಕೀಯ ಪ್ರವೇಶ ರಾಜೀವ್‌ಗಾಂಧಿಯವರ ಜೀವನದ ಉದ್ದೇಶವಾಗಿರಲಿಲ್ಲ.
ಸೋದರ ಸಂಜಯ್‌ಗಾಂಧಿ ಸಾವಿನ ನಂತರ ತಾಯಿಗೆ ನೆರವಾಗಲು ಒಲ್ಲದ ಮನಸ್ಸಿನಿಂದ ಅವರು ರಾಜಕೀಯ ಪ್ರವೇಶಿಸಬೇಕಾಯಿತು. ಆದರೆ ರಾಜಕೀಯದಲ್ಲಿ ನೆಹರೂ ಕುಟುಂಬದ ಪರಂಪರೆಯನ್ನು ಉಳಿಸಿಕೊಳ್ಳಲು ಇಂದಲ್ಲ ನಾಳೆ ರಾಜಕೀಯ ಪ್ರವೇಶಿಸುವುದು ಅನಿವಾರ್ಯ ಎಂದು ರಾಹುಲ್‌ಗಾಂಧಿಗೆ ಗೊತ್ತಿತ್ತು. ರಾಜೀವ್ ಗಾಂಧಿಯಂತೆ ರಾಜಕೀಯ ಮಾರ್ಗದರ್ಶನ ನೀಡಲು ಇಂದಿರಾಗಾಂಧಿಯಂತಹ ತಾಯಿ ರಾಹುಲ್‌ಗೆ ಇರಲಿಲ್ಲ ನಿಜ, ಆದರೆ ಮಾನಸಿಕವಾಗಿ ಸಿದ್ಧಗೊಳ್ಳಲು ಅವರಿಗೆ ಬೇಕಾದಷ್ಟು ಕಾಲಾವಕಾಶ ಇತ್ತು. ರಾಜೀವ್‌ಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು 37ನೇ ವರ್ಷದಲ್ಲಿ, ಅವರಿಗಿಂತ ಮೂರುವರ್ಷ ಕಡಿಮೆ ವಯಸ್ಸಿನಲ್ಲಿಯೇ ರಾಹುಲ್ ಅಮೇಠಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ನಿರಂತರ ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಬಾಯಿಬಿಟ್ಟು ಹೇಳಬೇಕಾಗಿಲ್ಲ ಕೇವಲ ಸನ್ನೆಯ ಮೂಲಕವೇ ಸರ್ಕಾರಕ್ಕೆ ಆದೇಶವನ್ನು ನೀಡುವಂತಹ ಸ್ಥಾನದಲ್ಲಿ ರಾಹುಲ್‌ಗಾಂಧಿ ಇದ್ದಾರೆ. ಆದರೆ ಮಾಡಿದ್ದೇನು?
ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆ. ಆದರೆ ಕೇವಲ ಅದರ ಬಲದಿಂದಲೇ ರಾಜಕೀಯದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಷ್ಟು ಇಂದಿನ ಮತದಾರರು ಉದಾರಿಗಳಲ್ಲ. ವಂಶದ ಬಲದಿಂದ ರಂಗಪ್ರವೇಶವಷ್ಟೇ ಸಲೀಸು, ಆದರೆ ರಂಗದ ಮೇಲೆ ಉಳಿಸುವುದು ಸಾಧನೆ ಮಾತ್ರ. ಅದರಲ್ಲಿ ಸೋತುಹೋದರೆ ಜೈಕಾರ ಹಾಕಿದ ಅದೇ ಜನ ಮುಖತಿರುಗಿಸಿಬಿಡುತ್ತಾರೆ. ಇದಕ್ಕಾಗಿಯೇ ಅಗಾಧವಾದ ಸಾಧ್ಯತೆಗಳನ್ನು ಹೊಂದಿರುವಂತಹ ನಾಯಕ ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು, ಇತರರನ್ನು ಬೆರಗುಗೊಳಿಸುವಂತಹ ಸವಾಲುಗಳನ್ನು ಸ್ವೀಕರಿಸಬೇಕು. ಅದರ ಮೂಲಕವೇ ತಾನೊಬ್ಬ ನಾಯಕನೆಂಬುದನ್ನು ಸಾಬೀತುಪಡಿಸಬೇಕು. ರಾಮಮನೋಹರ ಲೋಹಿಯಾ ಅವರಿಂದ `ಗೂಂಗಿಗುಡಿಯಾ~ ಎಂದು ಗೇಲಿಮಾಡಿಸಿಕೊಂಡ ಇಂದಿರಾಗಾಂಧಿ,  `ದುರ್ಗಿ~ ಎಂದು ಅಟಲಬಿಹಾರಿ ವಾಜಪೇಯಿ ಅವರಿಂದ ಅಭಿಮಾನದಿಂದ ಕರೆಸಿಕೊಳ್ಳುವವರೆಗೆ ಸವೆಸಿದ್ದ ರಾಜಕೀಯ ಪಯಣದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಸಂಜಯ್ ಮತ್ತು ರಾಜೀವ್ ಕೂಡಾ ಇಂತಹ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಭಾರತವನ್ನು ಇಪ್ಪತ್ತೊಂದನೆ ಶತಮಾನಕ್ಕೆ ಕೊಂಡೊಯ್ಯುವ ಮಾತನ್ನು ಪ್ರವಾದಿಯಂತೆ ರಾಜೀವ್ ಹೇಳಿದಾಗ ಗೇಲಿಮಾಡಿದವರೇ ಹೆಚ್ಚು. ಆ ಕನಸು ಒಂದು ತಲೆಮಾರಿನ ಆಯುಷ್ಯದೊಳಗೆಯೇ ನಿಜವಾದಾಗ ರಾಜೀವ್‌ಗಾಂಧಿಯವರ ದೂರಾಲೋಚನೆಯನ್ನು ಶ್ಲಾಘಿಸದಿರಲು ಹೇಗೆ ಸಾಧ್ಯ?
ಒಂದೆರಡು ಲಿಖಿತ ಭಾಷಣಗಳನ್ನು ಓದಿರುವುದನ್ನು ಬಿಟ್ಟರೆ ಲೋಕಸಭೆಯ ಯಾವ ಚರ್ಚೆಯಲ್ಲಿಯೂ ಓರಗೆಯ ಇತರ ಯುವನಾಯಕರಂತೆ ರಾಹುಲ್ ಭಾಗವಹಿಸಿಲ್ಲ.  ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್‌ಗಳಿಗೆ ಪೂರ್ಣಪ್ರಮಾಣದ ಸಂದರ್ಶನವನ್ನು ನೀಡಿಲ್ಲ. ಒಂದಷ್ಟು ಚುನಾವಣಾ ಭಾಷಣಗಳು,ಪತ್ರಿಕಾ ವರದಿಗಳು ಮತ್ತು ಟಿವಿ ಬೈಟ್‌ಗಳ ಹೊರತಾಗಿ ರಾಹುಲ್ ಮನಸ್ಸಲ್ಲೇನಿದೆ ಎಂದು ತಿಳಿದುಕೊಳ್ಳಲು ಬೇರೆದಾರಿ ಇಲ್ಲ.
ನಾಲ್ಕು ದಿಕ್ಕುಗಳಿಂದಲೂ ಮಾಧ್ಯಮಗಳು ಮುತ್ತಿಕೊಂಡಿರುವ ಈಗಿನ ದಿನಮಾನದಲ್ಲಿ ಅದರಿಂದ ದೂರ ಓಡುವವ ಹೇಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ನಾಯಕನಾಗಲು ಸಾಧ್ಯವೋ ಗೊತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆ, ಸಾಮಾಜಿಕ ಜಾಲತಾಣಗಳು ಮತ್ತು ಭ್ರಷ್ಟಾಚಾರದ ವಿರುದ್ದದ ಹೋರಾಟದಿಂದಾಗಿ ಭಾರತದ ರಾಜಕೀಯ ಕ್ಷೇತ್ರ ಅನಿವಾರ್ಯವಾಗಿ ಪಾರದರ್ಶಕತೆಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲೇಬೇಕಾಗಿದೆ. ಕಳೆದ ಒಂದು ವಾರದಿಂದ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ತಾಯಿ-ಮಗನ ವಿರುದ್ಧ ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಮಾಡಿದ್ದಾರೆ.
ಇದಕ್ಕೆಲ್ಲ ಕಾಂಗ್ರೆಸ್ ಬೆಂಬಲಿಗರಿಂದ ಉತ್ತರ ಕೊಡಿಸಿ ರಾಹುಲ್‌ಗಾಂಧಿ ಎಷ್ಟು ದಿನ ದಂತಗೋಪುರದಲ್ಲಿ ಉಳಿಯಲು ಸಾಧ್ಯ? ಉಳಿದ ಕ್ಷೇತ್ರಗಳಂತೆ ರಾಜಕೀಯದಲ್ಲಿಯೂ ತನ್ನ ಶಿಲುಬೆಯನ್ನು ತಾನೇ ಹೊರಬೇಕು.
ಸಚಿವ ಸಂಪುಟ ಸೇರುವ ಅವಕಾಶವನ್ನು ರಾಹುಲ್‌ಗಾಂಧಿ ಕಳೆದುಕೊಂಡಿದ್ದಾರೆ. ಈಗ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸುವ ಬಗ್ಗೆ ಊಹಾಪೋಹಗಳು ಎದ್ದಿವೆ. ರಾಜಕೀಯ ಜೀವನವನ್ನು ರಾಹುಲ್‌ಗಾಂಧಿ ನಿಜಕ್ಕೂ ಗಂಭೀರವಾಗಿ ಸ್ವೀಕರಿಸಲು ನಿರ್ಧರಿಸಿದ್ದರೆ ಅಲಂಕಾರಿಕ ಹುದ್ದೆಗಳಲ್ಲಿ ಕೂರುವುದಲ್ಲ, ತಾಯಿಗೆ ನಿವೃತ್ತಿಯನ್ನು ದಯಪಾಲಿಸಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು.  ಜವಾಹರಲಾಲ್ ನೆಹರೂ 40ನೇ ವರ್ಷಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಬಿಟ್ಟಿದ್ದರು.ಆ ಧೈರ್ಯ ರಾಹುಲ್‌ಗಾಂಧಿಯಲ್ಲಿದೆಯೇ?

Monday, October 22, 2012

ಎಸ್.ಎಂ. ಕೃಷ್ಣ ಸಮಸ್ಯೆಯೇ, ಪರಿಹಾರವೇ? OCT 29 2012


ವಿದೇಶಾಂಗ ವ್ಯವಹಾರ ಸಚಿವ ಖಾತೆಗೆ ರಾಜೀನಾಮೆ ನೀಡಿರುವ ಎಸ್.ಎಂ. ಕೃಷ್ಣ  ರಾಜ್ಯ ರಾಜಕಾರಣಕ್ಕೆ ಯಾವ ಪಾತ್ರ ಧರಿಸಿ ಮರಳಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟ ಇಲ್ಲ. ಆದರೆ ರಾಜಕೀಯ ಸನ್ಯಾಸವನ್ನು ಘೋಷಿಸದೆ ಇರುವುದರಿಂದ ಕೃಷ್ಣ ಅವರು ಬೆಂಗಳೂರಿಗೆ ಬಂದು ಇಲ್ಲಿನ ರಾಜಕೀಯವನ್ನು `ಯುವಕರಿಗೆ~ ಬಿಟ್ಟುಕೊಟ್ಟು ತಮ್ಮ ನೆಚ್ಚಿನ ಶಟಲ್ ಬ್ಯಾಡ್ಮಿಂಟನ್ ಆಡುತ್ತಾ ಕಾಲ ಕಳೆಯಲಿದ್ದಾರೆ ಎಂದು ಹೇಳಲಾಗುವುದಿಲ್ಲ.

ಅವರು ಅಂತಹ ನಿರ್ಧಾರ ಮಾಡಿದರೂ ಬೆಂಬಲಿಗರು ಅವರನ್ನು ಸುಮ್ಮನಿರಲು ಬಿಡಲಾರರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಹೀಗೆ ರಾಜಕಾರಣದಲ್ಲಿ ಮಹತ್ವದ ಸ್ಥಾನಗಳೆಲ್ಲವನ್ನೂ ಅಲಂಕರಿಸಿರುವ ಕೃಷ್ಣ ಅವರಿಗೆ ಅವರದ್ದೇ ಆಗಿರುವ ಬೆಂಬಲಿಗರಿದ್ದಾರೆ.
ಅವರ ಶಕ್ತಿ, ಅನುಭವ, ಸಂಪರ್ಕ, ಸಂಪನ್ಮೂಲಗಳ ವಿಸ್ತಾರ ದೊಡ್ಡದು. ವಯಸ್ಸಿನಲ್ಲಿಯೂ ಹಿರಿಯರು, ಹೈಕಮಾಂಡ್‌ನಲ್ಲಿ ಈಗಲೂ ಅವರ ಮಾತಿಗೆ ಒಂದಿಷ್ಟು ಬೆಲೆ ಇದೆ. ಆದುದರಿಂದ ಅವರು ಕರ್ನಾಟಕಕ್ಕೆ ಯಾವ ಪಾತ್ರದಲ್ಲಿ ಪ್ರವೇಶಿಸಿದರೂ ರಾಜ್ಯ ರಾಜಕಾರಣ ಮೊದಲಿನಂತೆ ಇರಲಾರದು.
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಕೃಷ್ಣ ಸಕ್ರಿಯವಾದರೆ ಅನುಕೂಲತೆಗಳಿವೆಯೇ? ಖಂಡಿತ ಇವೆ. ಮೊದಲನೆಯದಾಗಿ ಕೃಷ್ಣ ತಮ್ಮ `ಇಮೇಜ್~ ಬಗ್ಗೆ ಸದಾ ಧ್ಯಾನಸ್ಥರಾಗಿರುವವರು. ವಿದೇಶಿ ಶಿಕ್ಷಣ, ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವ, ಎಚ್ಚರಿಕೆಯ ಮಾತುಗಳು, ಉಡುಗೆ-ತೊಡುಗೆ, ಅಪಾರವಾದ ಸಂಯಮ, ಎದುರಿಗಿದ್ದವರಲ್ಲಿ ಗೌರವದ ಭಾವನೆಯನ್ನು ಹುಟ್ಟಿಸುವಂತಹ ನಡವಳಿಕೆಗಳ ಮೂಲಕ ಅವರು ತಮ್ಮ `ಇಮೇಜ್~ ಪೋಷಿಸಿಕೊಂಡು ಬಂದವರು.
ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ರಾಜಕಾರಣಿಗಳು ಗೌರವ ಕಳೆದುಕೊಂಡಿದ್ದು, ಬೀದಿಬೀದಿಗಳಲ್ಲಿ ಜನ ತುಚ್ಚವಾಗಿ ಮಾತನಾಡುವಂತಾಗಿದೆ. ರಾಜಕಾರಣಿಗಳು ಭ್ರಷ್ಟರು ಎನ್ನುವುದಷ್ಟೇ ಇದಕ್ಕೆ ಕಾರಣ ಅಲ್ಲ, ಭ್ರಷ್ಟಾಚಾರದ ಹಣದಿಂದ ಗಳಿಸಿದ ಶ್ರೀಮಂತಿಕೆಯ ಅಸಹ್ಯಕರ ಪ್ರದರ್ಶನ, ರೆಸಾರ್ಟ್ ರಾಜಕೀಯ, ಸದನದಲ್ಲಿಯೇ ಅಶ್ಲೀಲಚಿತ್ರಗಳ ವೀಕ್ಷಣೆ, ಸೊಂಟದ ಕೆಳಗಿನ ಭಾಷೆಯಲ್ಲಿ ಬೈದಾಟ, ರಕ್ತದ ರುಚಿ ತೋರಿಸುವ ಬೆದರಿಕೆ ಮೊದಲಾದ ಅವರ ಒಟ್ಟು ನಡವಳಿಕೆಯೇ ಜನರಲ್ಲಿ ರೇಜಿಗೆ ಹುಟ್ಟಿಸಿದೆ.
ಇಂತಹ ವಾತಾವರಣದಲ್ಲಿ ಎಸ್.ಎಂ.ಕೃಷ್ಣ ಅವರ `ಭಿನ್ನ ವ್ಯಕ್ತಿತ್ವ~ ಸಹಜವಾಗಿಯೇ ಜನರ ಮನಸ್ಸನ್ನು ಸೆಳೆಯಬಹುದು. ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಗರಕೇಂದ್ರಿತ, ಮಧ್ಯಮವರ್ಗ ಮತ್ತು ಯುವವರ್ಗಕ್ಕೆ ಸೇರಿರುವ ಮತದಾರರಲ್ಲಿ ಬಹಳಷ್ಟು ಮಂದಿಗೆ ಕೃಷ್ಣ ಇಷ್ಟವಾಗಬಹುದು.
ಎರಡನೆಯ ಅನುಕೂಲತೆ ಅವರಲ್ಲಿರುವ ಅಭಿವೃದ್ಧಿಯ ಮುನ್ನೋಟ. ಬಹಳಷ್ಟು ರಾಜಕೀಯ ಪಕ್ಷಗಳು ಸೀರೆ, ಮಂಗಳಸೂತ್ರ, ಸೈಕಲ್ ಹಂಚಿಕೆ ಇತ್ಯಾದಿ ಅಗ್ಗದ ಜನಪ್ರಿಯ ಕಾರ್ಯಕ್ರಮಗಳ ದೌರ್ಬಲ್ಯಕ್ಕೆ ಬಿದ್ದುಬಿಡುತ್ತವೆ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚಿಸಿದ್ದ ತೆರಿಗೆ ಸುಧಾರಣಾ ಆಯೋಗ, ಆಡಳಿತ ಸುಧಾರಣಾ ಆಯೋಗ, ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ, ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಐಟಿ ಮತ್ತು ಬಿಟಿ ಉದ್ಯಮಕ್ಕೆ ಕೊಟ್ಟ ಪ್ರೋತ್ಸಾಹ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ, ಗ್ರಾಮೀಣಪ್ರದೇಶದಲ್ಲಿ ವಸತಿ ನಿರ್ಮಾಣದಂತಹ ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿತ್ತು. ಕಳೆದ ಎಂಟು ವರ್ಷಗಳ ಆಡಳಿತವನ್ನು ಕಂಡ ಮತದಾರನಿಗೆ ಕೃಷ್ಣ ಅವರ ಕಾಲದ ಸಾಧಾರಣ ಸಾಧನೆ ಕೂಡಾ ಹಿರಿದಾದುದು ಎಂದು ಅನಿಸದೆ ಇರದು.
ಮೂರನೆಯದಾಗಿ ಕೃಷ್ಣ ಅವರ ವಯಸ್ಸು ಮತ್ತು ಅನುಭವ ಸಹಜವಾಗಿ ಯಜಮಾನನ ಸ್ಥಾನವನ್ನು ತಂದುಕೊಟ್ಟಿದೆ. ಅವರಿಗಿಂತ ಹಿರಿಯ ಜನಪ್ರಿಯ ನಾಯಕರು ರಾಜ್ಯ ಕಾಂಗ್ರೆಸ್‌ನಲ್ಲಿ ಬೇರೆ ಯಾರೂ ಇಲ್ಲ. ಒಳಜಗಳಕ್ಕೆ ಕುಖ್ಯಾತಿ ಪಡೆದ ಪಕ್ಷ ಕಾಂಗ್ರೆಸ್.
ಮೂರು ಮಂದಿ ಇದ್ದಲ್ಲಿ ನಾಲ್ಕು ಗುಂಪುಗಳಿರುತ್ತವೆ. ಡಾ.ಪರಮೇಶ್ವರ್, ಸಿದ್ದರಾಮಯ್ಯ, ಶಾಮನೂರು ಶಿವಶಂಕರಪ್ಪ ಹೀಗೆ ಪ್ರತಿ ನಾಯಕನ ಸುತ್ತ ಮರಿನಾಯಕರ ಗುಂಪುಗಳಿರುತ್ತವೆ. ಇವರ ನಡುವಿನ ಜಗಳ ಬಿಡಿಸುವ ಪಂಚಾಯಿತಿ ಕೆಲಸ ಮಾಡುವುದು ಕೃಷ್ಣ ಅವರಂತಹ ಹಿರಿಯ ಮತ್ತು ವಿವಾದಾತೀತ ನಾಯಕನಿಗೆ ಉಳಿದವರಿಗಿಂತ ಸುಲಭ.
ಈ ಮೂಲಕ ಪಕ್ಷಕ್ಕೆ ತುರ್ತಾಗಿ ಬೇಕಾಗಿರುವ ಒಗ್ಗಟ್ಟನ್ನು ಮೂಡಿಸಲು ಸಾಧ್ಯ.
ನಾಲ್ಕನೆಯದಾಗಿ ಕೃಷ್ಣ ಅವರ ಜಾತಿ. ಬಿಜೆಪಿಯ ಬೆಂಬಲಕ್ಕಿರುವ ಲಿಂಗಾಯತ ಮತಗಳನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನ ಪಡಬೇಕಾಗಿಲ್ಲ. ಆ ಕೆಲಸವನ್ನು ಮಾಡಲು ಆಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಿದ್ಧತೆ ಪ್ರಾರಂಭಿಸಿದ್ದಾರೆ. ಇನ್ನೊಂದು ಎದುರಾಳಿ ಪಕ್ಷವಾದ ಜೆಡಿ(ಎಸ್) ಬೆಂಬಲಕ್ಕಿರುವ ಒಕ್ಕಲಿಗರ ಮತಗಳನ್ನು ಒಡೆದು ಸೆಳೆಯುವಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ.
ಕೃಷ್ಣ ಅವರು ಪ್ರಶ್ನಾತೀತ ಒಕ್ಕಲಿಗ ನಾಯಕರಲ್ಲದೆ ಇದ್ದರೂ ಆ ಕೆಲಸವನ್ನು ತಮ್ಮ ಮಿತಿಯಲ್ಲಿಯೇ ಅವರು ಮಾಡಬಲ್ಲರು. ಕಾಂಗ್ರೆಸ್ ಪಕ್ಷದೊಳಗಿರುವ ಬಹಳಷ್ಟು ಅತೃಪ್ತ ಲಿಂಗಾಯತ ನಾಯಕರಿಗೂ ಎಸ್.ಎಂ.ಕೃಷ್ಣ ಆಪ್ತರು. ಅವರಲ್ಲಿ ಬಹಳಷ್ಟು ಮಂದಿ  ಶಾಮನೂರು ಶಿವಶಂಕರಪ್ಪನವರನ್ನು ಕೈಬಿಟ್ಟು ಕೃಷ್ಣ ಅವರನ್ನು ಸ್ವಾಗತಿಸಲು ಹೂವಿನ ಹಾರ ಹಿಡಿದುಕೊಂಡು ನಿಂತಿದ್ದಾರೆ.
ಮೇಲ್ನೋಟಕ್ಕೆ ಇವೆಲ್ಲವೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ನೆರವಾಗಬಲ್ಲಂತಹ ಅನುಕೂಲಗಳಂತೆ ಕಾಣುತ್ತಿವೆ. ಆದರೆ ಈ ನಾಲ್ಕು ಅನುಕೂಲತೆಗಳನ್ನು ಇನ್ನೊಂದು ಮಗ್ಗುಲಿನಿಂದ ನೋಡಿದರೆ ಇವು ಹೊಸ ಸಮಸ್ಯೆಗಳಾಗಿ ಕಾಣುತ್ತವೆ.
ಮೊದಲನೆಯದಾಗಿ ಕೃಷ್ಣ ಹೊಂದಿರುವ ಮತ್ತು ಮನುಷ್ಯ ಪ್ರಯತ್ನದ ಮೂಲಕ ಬದಲಾಯಿಸಲಾಗದ ಅನಾನುಕೂಲತೆ ಅವರ ವಯಸ್ಸು. ಅವರು 80 ವರ್ಷ ಪೂರ್ಣಗೊಳಿಸಿ 81ಕ್ಕೆ ಕಾಲಿಟ್ಟಿದ್ದಾರೆ. ಒಬ್ಬ ವ್ಯಕ್ತಿಯ `ಇಮೇಜ್~ನಲ್ಲಿ ವಯಸ್ಸಿನ ಪಾತ್ರವೂ ಇದೆ. ಜನಸಂಖ್ಯೆಯಲ್ಲಿ ಶೇಕಡಾ 65ರಷ್ಟಿರುವ 35 ವರ್ಷಗಳೊಳಗಿನ ಯುವಜನರು 80 ವರ್ಷದ ನಾಯಕನನ್ನು ಆತ ಎಷ್ಟೇ ಸಮರ್ಥನಾಗಿದ್ದರೂ ಒಪ್ಪಿಕೊಳ್ಳುತ್ತಾರೆಯೇ? ಉದ್ಯಮ ಕ್ಷೇತ್ರಗಳ ನಾಯಕರ ಸರಾಸರಿ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ನಿಧಾನವಾಗಿಯಾದರೂ ಈ ಬದಲಾವಣೆ ರಾಜಕೀಯದಲ್ಲಿಯೂ ಪ್ರಾರಂಭವಾಗಿದೆ. ಉತ್ತರಪ್ರದೇಶದಲ್ಲಿ ಮುಲಾಯಂಸಿಂಗ್ ತನ್ನ ಮಗನನ್ನು ಮುಖ್ಯಮಂತ್ರಿ ಮಾಡಿಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಈಗಿನ ಆಡಳಿತ ಪಕ್ಷಗಳೇ ಪುನರಾಯ್ಕೆಯಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ತಂದೆಯ ಬದಲಿಗೆ ಮಕ್ಕಳು ಕೂರಬಹುದು.
ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳೆಲ್ಲ 60 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು. ಕೃಷ್ಣ ಅವರ ಪಕ್ಷವೇ ಯುವನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲು ಹೊರಟಿದೆ.
ಈ ಪರಿಸ್ಥಿತಿಯಲ್ಲಿ ಎಂಬತ್ತು ದಾಟಿದ ಕೃಷ್ಣ ಅವರು ಪಾಂಚಜನ್ಯ ಊದಿದರೆ ಎಷ್ಟು ಮಂದಿ ಯುವಕ-ಯುವತಿಯರು ಓಡಿಬರಬಹುದು?ಎರಡನೆಯದಾಗಿ, 1999ರಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಮೊದಲ ಬಾರಿಗೆ ಕೂತಾಗ ಅವರು ಹೊಂದಿದ್ದ `ಕ್ಲೀನ್ ಇಮೇಜ್~ ಈಗಲೂ ಇದೆ ಎಂದು ಹೇಳುವುದು ಕಷ್ಟ. ತಮ್ಮ ಆಡಳಿತ ಭ್ರಷ್ಟಚಾರ ಮುಕ್ತವಾಗಿತ್ತು ಎಂದು ಹೇಳುವ ಎದೆಗಾರಿಕೆ ಕೃಷ್ಣ ಅವರಿಗೂ ಇರಲಾರದು. 
ನೈಸ್ ಹಗರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅವರನ್ನು ಆರೋಪಿಯನ್ನಾಗಿ ಮಾಡಿರುವುದು ಇತ್ತೀಚಿನ ಘಟನೆ. ಅವರ ಅಧಿಕಾರಾವಧಿಯ ಕಾಲದಲ್ಲಿಯೇ ಅಕ್ರಮ ಗಣಿಗಾರಿಕೆಯ ಅಧ್ಯಾಯ ಪ್ರಾರಂಭವಾಗಿದ್ದು. ಕಾಲ ಬದಲಾಗಿದೆ, ಸಾಮಾನ್ಯ ಜನರು ಹಿಂದಿನಷ್ಟು ಅಸಹಾಯಕರಲ್ಲ. ಅವರ ಕೈಗೆ ಸಿಕ್ಕಿರುವ ಮಾಹಿತಿ ಹಕ್ಕು ಕಾಯಿದೆಯ ಅಸ್ತ್ರ ಮತ್ತು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂತಹ ಪ್ರಾಮಾಣಿಕ ರಾಜಕಾರಣಿಯ ಎದೆಯಲ್ಲಿಯೂ ದಿಗಿಲು ಹುಟ್ಟಿಸುವಂತಿದೆ.

ಈಗಿನ ಹೋರಾಟ ಆಟದ ನಿಯಮಗಳನ್ನು ಬದಲಿಸಿಬಿಟ್ಟಿದೆ. ರಾಜಕಾರಣಿಗಳ ಮಕ್ಕಳು ಮಾತ್ರವಲ್ಲ ಅಳಿಯಂದಿರ ಬಂಡವಾಳ ಕೂಡಾ ಬಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಐದು ದಶಕಗಳ ಕಾಲ ದೀರ್ಘ ರಾಜಕೀಯ ಮಾಡಿ ಅಧಿಕಾರದ ಹಲವಾರು ಸ್ಥಾನಮಾನಗಳನ್ನು ಅನುಭವಿಸಿರುವ ಕೃಷ್ಣ ಅವರ `ಕ್ಲೀನ್ ಇಮೇಜ್~ನ ಕೋಟೆಯನ್ನು ಒಡೆದುಹಾಕಲು ರಾಜಕೀಯ ವಿರೋಧಿಗಳು ಖಂಡಿತ ಪ್ರಯತ್ನ ನಡೆಸಬಹುದು.
ಕೃಷ್ಣ ಒಬ್ಬ ಉತ್ತಮ ಆಡಳಿತಗಾರನೆನ್ನುವ ಖ್ಯಾತಿಯ ಜತೆಯಲ್ಲಿ, ಅವರ ಅಭಿವೃದ್ಧಿಯ ಮುನ್ನೋಟ  ನಗರ ಕೇಂದ್ರಿತವಾಗಿತ್ತು ಎಂಬ ಆರೋಪ ಕೂಡಾ ಇದೆ. ಬೆಂಗಳೂರು ನಗರವನ್ನು `ಸಿಲಿಕಾನ್ ಸಿಟಿ~ಯಾಗಿ ಬೆಳೆಸಲು ತೋರಿದ ಆಸಕ್ತಿಯನ್ನು ಅವರು ಗ್ರಾಮೀಣ ಅಭಿವೃದ್ಧಿಗಾಗಿ ತೋರಿಸಲಿಲ್ಲ ಎಂದು ದೂರುವವರಿದ್ದಾರೆ. ಅ
ವರ ಕಾಲದಲ್ಲಿ ಕಾಣಿಸಿಕೊಂಡ ಬರಗಾಲವನ್ನು ಎದುರಿಸಲು ವಿಫಲವಾಗಿದ್ದು ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣ ಎನ್ನುವವರಿದ್ದಾರೆ. ಈ ದೇಶದಲ್ಲಿ ನಗರಕೇಂದ್ರಿತ ಅಭಿವೃದ್ಧಿಯ ಪೂರ್ವಗ್ರಹ ಹೊಂದಿರುವವರು ಚುನಾವಣೆಯಲ್ಲಿ ಯಶಸ್ಸು ಕಂಡದ್ದು ಕಡಿಮೆ. ಇದಕ್ಕೆ ಉದಾಹರಣೆಯಾಗಿ ಡಾ. ಮನಮೋಹನ್‌ಸಿಂಗ್ ಅವರನ್ನೇ ಉಲ್ಲೇಖಿಸಬಹುದು.
ಶರದ್ ಪವಾರ್ ತನ್ನ ವಿರುದ್ಧದ ಭ್ರಷ್ಟಾಚಾರದ ನೂರೆಂಟು ಆರೋಪಗಳ ಹೊರತಾಗಿಯೂ ರಾಜಕೀಯವಾಗಿ ಇಂದಿಗೂ ಯಶಸ್ಸು ಕಾಣಲು ಸಾಧ್ಯವಾಗಿರುವುದು ಗ್ರಾಮಕೇಂದ್ರಿತ ಅಭಿವೃದ್ಧಿ ಯೋಜನೆಗಳಿಂದಾಗಿ. ಎಚ್.ಡಿ. ದೇವೇಗೌಡರು  ಬಹಳ ಜಾಣತನದಿಂದ `ಮಣ್ಣಿನ ಮಗ~ ಎಂಬ ಬಿರುದನ್ನು ಕಾಪಾಡಿಕೊಂಡು ಬಂದ ಕಾರಣದಿಂದಾಗಿಯೇ ಈಗಲೂ ರಾಜಕೀಯವಾಗಿ ಪ್ರಸ್ತುತವಾಗಿ ಉಳಿದಿದ್ದಾರೆ.
 ನಗರದ ಮತದಾರರು ಕೃಷ್ಣ ಅವರಂತಹ ರಾಜಕಾರಣಿಗಳ ಬಗ್ಗೆ ಒಲವು ಹೊಂದಿರಬಹುದು. ಆದರೆ ನಗರ ಪ್ರದೇಶದಲ್ಲಿ ಚಲಾವಣೆಯಾಗುವ ಮತಗಳ ಪ್ರಮಾಣ ಎಷ್ಟು? ನಗರದ ಮತದಾರರಲ್ಲಿ ಅಷ್ಟೊಂದು ರಾಜಕೀಯ ಜಾಗೃತಿ ಹೊಂದಿದ್ದರೆ, ಜಾತಿ, ದುಡ್ಡು ಮೊದಲಾದ ದೌರ್ಬಲ್ಯಗಳು ಅವರಲ್ಲಿ ಇಲ್ಲವೆಂದಾದರೆ ಬೆಂಗಳೂರು ಪದವೀಧರ ಮತದಾರ ಕ್ಷೇತ್ರದಲ್ಲಿ ಅಶ್ವಿನ್ ಮಹೇಶ್ ಅವರಂತಹ ನಗರಪ್ರೇಮಿ, ಶಿಕ್ಷಿತ, ಜಾಗೃತ ಅಭ್ಯರ್ಥಿ ಸೋತು ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಮಚಂದ್ರಗೌಡರಂತಹವರು ಗೆಲ್ಲಲು ಹೇಗೆ ಸಾಧ್ಯ?
ಮೂರನೆಯದಾಗಿ ಕೃಷ್ಣ ಅವರ ಆಗಮನದಿಂದ ರಾಜ್ಯ ಕಾಂಗ್ರೆಸ್‌ನಲ್ಲಿರುವ ಒಳಜಗಳ ಶಮನವಾಗಲಿದೆ ಎಂದು ಆ ಪಕ್ಷದಲ್ಲಿರುವ ಕಡು ಆಶಾವಾದಿಗಳು ನಂಬಿದ್ದಾರೆ. 2008ರಲ್ಲಿ ಇದೇ ಕೆಲಸಕ್ಕಾಗಿ ಕೃಷ್ಣ ಅವರನ್ನು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕಕ್ಕೆ ಕಳುಹಿಸಿತ್ತೆನ್ನುವುದನ್ನು ಅವರು ಮರೆತುಬಿಟ್ಟಿದ್ದಾರೆ.
ಆದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯನವರ ಗುಂಪುಗಳ ನಡುವಿನ ಒಳಜಗಳ ಬಗೆಹರಿಸಲು ಕೃಷ್ಣ ಅವರಿಗೆ ಸಾಧ್ಯವಾಗಲಿಲ್ಲ, ಆ ಜಗಳ ಕಾಂಗ್ರೆಸ್ ಸೋಲಿನಲ್ಲಿಯೇ ಕೊನೆಗೊಂಡದ್ದು. ಆಗ ಮಾಡಲಾಗದ ಪವಾಡವನ್ನು ಕೃಷ್ಣ ಈಗ ಮಾಡುತ್ತಾರೆ ಎನ್ನುವುದಕ್ಕೆ ಖಾತರಿ ಏನಿದೆ?  ತಮ್ಮ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಕೃಷ್ಣ ನೆರವಾಗಬಹುದು ಎನ್ನುವ ವಿಶ್ವಾಸ ಇರುವವರೆಗೆ ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಇರಬಹುದು.

ಆ ವಿಶ್ವಾಸ ಕಳೆದುಕೊಂಡ ಮರುಕ್ಷಣ ಅವರಿಬ್ಬರೂ ಇಲ್ಲವೇ ಅವರಲ್ಲೊಬ್ಬರು ತಿರುಗಿಬೀಳಬಹುದು. ಈ ಇಬ್ಬರು ಕಾಂಗ್ರೆಸ್ ನಂಬಿಕೊಂಡ ಮತಬ್ಯಾಂಕ್‌ನಲ್ಲಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದವರು. ಕೃಷ್ಣ ತಂದುಕೊಡುವ ಒಕ್ಕಲಿಗರ ಮತಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಲಿತ-ಹಿಂದುಳಿದ ಜಾತಿಗಳ ಮತಗಳನ್ನು ಕಾಂಗ್ರೆಸ್ ಕಳೆದುಕೊಳ್ಳುವಂತಾದರೆ ಲಾಭಕ್ಕಿಂತ ನಷ್ಟ ಹೆಚ್ಚಾಗಬಹುದು.
ಈ ಕಾರಣಗಳಿಂದಾಗಿಯೇ ಒಂದು ಕೋನದಲ್ಲಿ ರಾಜ್ಯ ಕಾಂಗ್ರೆಸ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರದಂತೆ ಕಾಣುವ ಎಸ್.ಎಂ. ಕೃಷ್ಣ ಇನ್ನೊಂದು ಕೋನದಲ್ಲಿ ಸಮಸ್ಯೆಯಂತೆ ಕಾಣುತ್ತಿರುವುದು.

ಪ್ರತ್ಯೇಕತೆಯ ಕತ್ತಿ ಬೀಸುವ ಮುನ್ನ


ಕೃಷಿ ಸಚಿವ ಉಮೇಶ್ ಕತ್ತಿಯವರ ಪ್ರತ್ಯೇಕ ರಾಜ್ಯದ ಕೂಗು ಸಮಗ್ರ ಉತ್ತರಕರ್ನಾಟಕದ ಜನರ ಅಭಿಪ್ರಾಯ ಖಂಡಿತ ಅಲ್ಲವಾದ ಕಾರಣ ಅದನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯ ಇಲ್ಲ. ಇಂತಹ ಬೇಜವಾಬ್ದಾರಿ ಬುಡಬುಡಿಕೆಗಳಿಗೆ ಸಮೀಪದಲ್ಲಿರುವ ಕಸದ ಬುಟ್ಟಿಯೇ ಸರಿಯಾದ ಜಾಗ.
ವೃತ್ತಿಯಲ್ಲಿ ಉದ್ಯಮಿ-ವ್ಯಾಪಾರಿಯಾಗಿದ್ದುಕೊಂಡು  ತಾವು ಕಟ್ಟಿಕೊಂಡಿರುವ ಸಾಮ್ರಾಜ್ಯದ ರಕ್ಷಣೆಗಾಗಿ ರಾಜಕೀಯವನ್ನು ಹವ್ಯಾಸವಾಗಿ ಸ್ವೀಕರಿಸಿರುವವರ ಸಂಖ್ಯೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿಯೂ ಹೆಚ್ಚಾಗುತ್ತಿದೆ. (ಕನ್ನಡಿಗರಾದ ವಿಜಯ ಮಲ್ಯ ಇನ್ನೊಂದು ಉದಾಹರಣೆ).

ಇಂತಹ ಹವ್ಯಾಸಿ ರಾಜಕಾರಣಿಗಳಲ್ಲಿ ರಾಜ್ಯಹಿತದ ದೂರದೃಷ್ಟಿ, ಸಾಮಾಜಿಕ ಜವಾಬ್ದಾರಿ ಇಲ್ಲವೇ ನಾಡು-ನುಡಿಯ ಬಗ್ಗೆ ಕಾಳಜಿಯನ್ನು ಕಾಣುವುದು ಸಾಧ್ಯ ಇಲ್ಲ. ಕತ್ತಿಯವರ ಹಿನ್ನೆಲೆ ಮತ್ತು  ನಡವಳಿಕೆಯನ್ನು ನೋಡಿದರೆ ಅವರೂ ಇಂತಹವರ ಸಾಲಿಗೆ ಸೇರಿರುವಂತೆ ಕಾಣುತ್ತಿದೆ. 
ನಾಲಿಗೆ ಸಡಿಲಬಿಟ್ಟು ಅವರು ಆಡಿರುವ ಮಾತುಗಳಲ್ಲಿ ಬೇಜವಾಬ್ದಾರಿತನ ಮತ್ತು ಅಜ್ಞಾನ ಮಾತ್ರ ಅಲ್ಲ ದುಷ್ಟ ಯೋಜನೆಯೂ ಇದ್ದಂತಿದೆ.ಪ್ರತ್ಯೇಕ ರಾಜ್ಯದ ಕೂಗು ಹಾಕಿದವರಲ್ಲಿ ಕತ್ತಿಯವರು ರಾಜ್ಯದಲ್ಲಿಯಾಗಲಿ, ದೇಶದಲ್ಲಿಯಾಗಲಿ  ಮೊದಲಿಗರಲ್ಲ. ಕೊನೆಯವರು ಆಗುವುದೂ ಇಲ್ಲ.  ದೇಶದ ಮೊದಲ ರಾಜ್ಯ ಪುನರ್‌ವಿಂಗಡಣಾ ಸಮಿತಿ ಭಾಷಾವಾರು ರಾಜ್ಯಗಳ ರಚನೆ ಮಾಡಿದೆ ಎಂದು ಸಾಮಾನ್ಯವಾಗಿ ಹೇಳುವುದಿದ್ದರೂ ಅದಕ್ಕೆ ಭಾಷೆಯೊಂದೇ ಆಧಾರವಾಗಿರಲಿಲ್ಲ ಎನ್ನುವುದು ವಾಸ್ತವ.
ಹಾಗಾಗಿದ್ದರೆ ಅಲ್ಪಸ್ವಲ್ಪ ಬದಲಾವಣೆಯೊಡನೆ ಹಿಂದಿ ಭಾಷೆಯನ್ನು ಆಡುವ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳು ಒಂದೇ ರಾಜ್ಯವಾಗಬೇಕಿತ್ತು. ಮೊದಲು ಸ್ಥಾಪನೆಗೊಂಡ ಹದಿನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ, ಆಂಧ್ರಪ್ರದೇಶ,ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳು ಮಾತ್ರ ಭಾಷೆಯ ಆಧಾರದಲ್ಲಿ ರಚನೆಗೊಂಡ ರಾಜ್ಯಗಳು. ಉಳಿದ ರಾಜ್ಯಗಳ ರಚನೆಗೆ ಭಾಷೆಯ ಜತೆಗೆ ಬೇರೆ ಕಾರಣಗಳೂ ಇದ್ದವು.

ಇದರಿಂದಾಗಿಯೇ ಭಾಷೆಯ ಆಧಾರದಲ್ಲಿ ರಚನೆಗೊಂಡ ರಾಜ್ಯಗಳಲ್ಲಿಯೂ ಪ್ರತ್ಯೇಕ ರಾಜ್ಯದ ಕೂಗು ಎದ್ದಿರುವುದು. ಭಾಷಾಭಿಮಾನದ ಭಾವುಕತೆ ಇಳಿಯುತ್ತಿದ್ದಂತೆಯೇ ಎದುರಾದ ಹಿಂದುಳಿಯುವಿಕೆ ಮತ್ತು ಪ್ರಾದೇಶಿಕ ಅಸಮಾನತೆಯ ವಾಸ್ತವ  ಪ್ರತ್ಯೇಕ  ರಾಜ್ಯದ ಬೇಡಿಕೆಗೆ ಮುಖ್ಯ ಪ್ರೇರಣೆ.
ಈ ಹಿನ್ನೆಲೆಯಿಂದಲೇ ಕತ್ತಿಯವರ ಹೇಳಿಕೆಯನ್ನು ಗಮನಿಸಬೇಕಾಗುತ್ತದೆ. ರಾಜ್ಯದಲ್ಲಿ ಈವರೆಗೆ ಸರ್ಕಾರದಿಂದ ಮತ್ತು ಸ್ವತಂತ್ರವಾಗಿ ನಡೆದಿರುವ ಬಹುತೇಕ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳು ಹಿಂದುಳಿದಿದೆ ಎಂದು ಗುರುತಿಸಿರುವುದು ಉತ್ತರ ಕರ್ನಾಟಕದ ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೀದರ್, ಕೊಪ್ಪಳ ,ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳನ್ನು.
ಮಾನವ ಅಭಿವೃದ್ಧಿಯ ಸೂಚಿಗಳಾದ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಲಿಂಗಸಮಾನತೆ ಮತ್ತು ಪರಿಶಿಷ್ಟಜಾತಿ-ಪಂಗಡಗಳ ಸ್ಥಿತಿಗತಿಗಳ ನೆಲೆಯಿಂದ ನೋಡಿದರೂ ಈ ಏಳು ಜಿಲ್ಲೆಗಳು ಹಿಂದುಳಿದಿರುವುದು ಸ್ಪಷ್ಟ. ರಾಜ್ಯದ ಜನಸಂಖ್ಯೆಯಲ್ಲಿ ಈ ಏಳು ಜಿಲ್ಲೆಗಳ ಪಾಲು ಶೇಕಡಾ ಇಪ್ಪತ್ತೈದು, ಆದರೆ ರಾಜ್ಯದ ವರಮಾನದಲ್ಲಿ ಪಡೆದಿರುವ ಪಾಲು ಶೇಕಡಾ ಹದಿನೇಳು.
ಹಿಂದುಳಿದಿರುವ ಈ ಜಿಲ್ಲೆಗಳ ಜತೆ ಅವಿಭಜಿತ ಧಾರವಾಡವನ್ನಾಗಲಿ ಇಲ್ಲವೇ ಬೆಳಗಾವಿ ಜಿಲ್ಲೆಯನ್ನಾಗಲಿ ಹೋಲಿಸುವುದು ಸಾಧ್ಯ ಇಲ್ಲ. ಘಟಪ್ರಭಾ ಮತ್ತು ಮಲಪ್ರಭಾ ಮಾತ್ರವಲ್ಲ ಕೃಷ್ಣಾ ನದಿ ನೀರನ್ನು ಪಡೆದಿರುವ ಬೆಳಗಾವಿ ಜಿಲ್ಲೆಯ ರೈತರು ಉತ್ತರಕರ್ನಾಟಕದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾಕಷ್ಟು ಸ್ಥಿತಿವಂತರೇ ಆಗಿದ್ದಾರೆ. ಈ ಜಿಲ್ಲೆಯ ಬೆಳಗಾವಿ, ರಾಯಭಾಗ, ಹುಕ್ಕೇರಿ, ಚಿಕ್ಕೋಡಿ ಹಾಗೂ ಗೋಕಾಕ ಮತ್ತು ಅಥಣಿ ತಾಲ್ಲೂಕಿನ ಕೆಲವು ಭಾಗಗಳು ಸಮೃದ್ಧವಾಗಿವೆ.
ಹಿಂದುಳಿದಿರುವುದು ಬೈಲಹೊಂಗಲ, ರಾಮದುರ್ಗ ಹಾಗೂ ಗೋಕಾಕ ಮತ್ತು ಅಥಣಿಯ ಕೆಲವು ಭಾಗಗಳು ಮಾತ್ರ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜತೆ ಇರುವ ಸಂಪರ್ಕ ಕೂಡಾ ಇಲ್ಲಿನ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ನೆರವಾಗಿದೆ. ಉತ್ತರ ಕರ್ನಾಟಕದ ಇತರ ಜಿಲ್ಲೆಗಳ ಜತೆಗಿನ ಹೋಲಿಕೆಯಲ್ಲಿ ಬೆಳಗಾವಿ ಹಿಂದುಳಿದಿದೆ ಇಲ್ಲವೇ ಪ್ರಾದೇಶಿಕ ಅಸಮಾನತೆಗೆ ಗುರಿಯಾಗಿದೆ ಎಂದು ಆರೋಪಿಸುವಂತಿಲ್ಲ.
 ಮಹಾರಾಷ್ಟ್ರ ಕಣ್ಣಿಟ್ಟಿರುವ ಕಾರಣಕ್ಕಾಗಿ ಇದು ಕರ್ನಾಟಕ ರಾಜ್ಯದ ಮುದ್ದಿನ ಕೂಸು. ಮತ್ತೆಮತ್ತೆ ಬೆಳಗಾವಿ ನಮ್ಮದು ಎನ್ನುವುದನ್ನು ಸಾಬೀತುಪಡಿಸುವುದಕ್ಕಾಗಿ ರಾಜ್ಯ ಸರ್ಕಾರ ಬೊಕ್ಕಸದಿಂದ ಧಾರಾಳವಾಗಿ ಇಲ್ಲಿಗೆ ಹಣ ಹರಿಸುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಅಲ್ಲಿ ನಿರ್ಮಿಸಲಾದ ಸುವರ್ಣ ಸೌಧ.
ಪ್ರಾದೇಶಿಕ ಅಸಮಾನತೆ ಮತ್ತು ಹಿಂದುಳಿಯುವಿಕೆಯನ್ನು ತೊಡೆದುಹಾಕುವ ಉದ್ದೇಶದಿಂದ ನೋಡಿದರೆ ಈ ಸುವರ್ಣಸೌಧ ಗುಲ್ಬರ್ಗ ಇಲ್ಲವೇ ಬೀದರ್ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಬೇಕಿತ್ತು. ಬೆಳಗಾವಿ ನಮ್ಮದಾಗಿಯೇ ಉಳಿಸಬೇಕೆಂಬ ಬದ್ಧತೆ ಸಮಸ್ತ ಕನ್ನಡಿಗರಿಗೆ ಇರುವ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಸಾರ್ವಜನಿಕ ತೆರಿಗೆ ಹಣವನ್ನು ಉದಾರವಾಗಿ ಬೆಳಗಾವಿ ಜಿಲ್ಲೆಗೆ ನೀಡಿದಾಗಲೂ ಯಾರೂ ಅದರ ವಿರುದ್ಧ ಚಕಾರ ಎತ್ತಿಲ್ಲ.
ಇದರ ಹೊರತಾಗಿಯೂ ಅಲ್ಲಿನ ಚುನಾಯಿತ ಪ್ರತಿನಿಧಿಯೊಬ್ಬರು ಪ್ರತ್ಯೇಕತೆಯ ಕತ್ತಿಯನ್ನು ಅನಗತ್ಯವಾಗಿ ಝಳಪಿಸಿ ಅಮಾಯಕ ಜನರ ದಾರಿ ತಪ್ಪಿಸುವ ಕೆಲಸ ಮಾಡಲು ಹೊರಟಿರುವುದನ್ನು ನೋಡಿದರೆ ಅವರಿಗೆ ಬೇರೆ ಉದ್ದೇಶಗಳಿರಬಹುದೆಂಬ ಅನುಮಾನ ಮೂಡುತ್ತದೆ.
ಮುಂದೊಂದು ದಿನ ಉತ್ತರಕರ್ನಾಟಕ ಎಂಬ ರಾಜ್ಯ ರಚನೆಯಾದರೆ ಅದರ ರಾಜಧಾನಿ ಬೆಳಗಾವಿಯಾಗಲಿ, ಅದರ ಮುಖ್ಯಮಂತ್ರಿ ಬೆಳಗಾವಿಯವರಾಗಲಿ ಎಂಬ ದೂರಾಲೋಚನೆಯೂ ಅವರಲ್ಲಿದ್ದಿರಬಹುದೇನೋ?
ಬಹುಭಾಷೆ,ಧರ್ಮ ಮತ್ತು ಸಂಸ್ಕೃತಿ ಮಾತ್ರವಲ್ಲ ಬಹು ಬಗೆಯ ಅಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಒಂದು ದೇಶದಲ್ಲಿ ಪ್ರತ್ಯೇಕ ರಾಜ್ಯದ ಎಲ್ಲ ಬೇಡಿಕೆಗಳನ್ನು ಸಾರಾಸಗಟಾಗಿ ತಳ್ಳಿಹಾಕಲಾಗುವುದಿಲ್ಲ ಎನ್ನುವುದು ನಿಜ. ಪ್ರತಿಯೊಂದನ್ನೂ ಪ್ರತ್ಯೇಕ ಮಾನದಂಡಗಳ ಮೂಲಕ 
ಪರಿಶೀಲನೆಗೊಳಪಡಿಸಬೇಕಾಗುತ್ತದೆ. ಉದಾಹರಣೆಗೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳು ಹಿಂದುಳಿಯಲು ಅದರ ವಿಸ್ತೀರ್ಣವೂ ಪ್ರಮುಖ ಕಾರಣವಾಗಿತ್ತು. ಸರ್ಕಾರ ಮತ್ತು ಪ್ರಜೆಗಳ ನಡುವಿನ ಮಾನಸಿಕ ದೂರ ಮಾತ್ರವಲ್ಲ ಭೌಗೋಳಿಕ ದೂರ ಕೂಡಾ ಪ್ರಗತಿಗೆ ಮಾರಕವಾಗಬಲ್ಲದು.
ಜಯಪ್ರಕಾಶ್ ನಾರಾಯಣ್ ಅವರೇ ಉತ್ತರಪ್ರದೇಶವನ್ನು ಐದುರಾಜ್ಯಗಳಾಗಿ ವಿಂಗಡಿಸಬೇಕೆಂಬ ಸಲಹೆ ನೀಡಿದ್ದರು. ಹನ್ನೆರೆಡು ವರ್ಷಗಳ ಹಿಂದೆ ಜಾರ್ಖಂಡ್, ಉತ್ತರಖಂಡ ಮತ್ತು ಛತ್ತೀಸ್‌ಗಡ ರಾಜ್ಯಗಳ ರಚನೆಯಾಗಿದ್ದು ಭಾಷೆ, ಜಾತಿ,ಧರ್ಮದ ಆಧಾರಗಳಲ್ಲಿ ಅಲ್ಲ.
ಆಡಳಿತದ ಅನುಕೂಲತೆಯ ದೃಷ್ಟಿಯಿಂದ ರಚನೆಗೊಂಡ ಆ ರಾಜ್ಯಗಳ ಪ್ರಗತಿ ಅವುಗಳ ಮೂಲ ರಾಜ್ಯಗಳಾದ ಬಿಹಾರ ಮತ್ತು ಉತ್ತರಪ್ರದೇಶಗಳಿಗಿಂತ ಉತ್ತಮವಾಗಿವೆ. ಈ ಅನುಭವದ ಹಿನ್ನೆಲೆಯಲ್ಲಿಯೇ  ಹರಿತ್‌ಪ್ರದೇಶ ಮತ್ತು ಪೂರ್ವಾಂಚಲಗಳೆಂಬ ಎರಡು ಪ್ರತ್ಯೇಕ ರಾಜ್ಯರಚನೆಯ ಬೇಡಿಕೆ ಉತ್ತರಪ್ರದೇಶದಲ್ಲಿ ಹುಟ್ಟಿಕೊಂಡಿರುವುದು.
ಆದರೆ ಜಾತಿ-ಧರ್ಮ, ಭಾಷಾ ವೈವಿಧ್ಯ, ಸಂಸ್ಕೃತಿ-ಉಪಸಂಸ್ಕೃತಿ, ಜನಾಂಗೀಯ ಅನನ್ಯತೆಯ ಅಂಶಗಳ ಆಧಾರದಲ್ಲಿ ಪ್ರತ್ಯೇಕ ರಾಜ್ಯಗಳನ್ನು ಮಾಡುವುದು ಕೊನೆಯಿಲ್ಲದ ಕಸರತ್ತು ಎನ್ನುವುದನ್ನು ದೇಶದ ಈಶಾನ್ಯಭಾಗದ ಅನುಭವ ಹೇಳುತ್ತಿದೆ.
ಸ್ವಾತಂತ್ರ್ಯಪೂರ್ವದ ಅಸ್ಸಾಂ ಈಗ ಏಳು ರಾಜ್ಯಗಳಾಗಿ ಒಡೆದುಹೋಗಿರುವುದು ಹಿಂದುಳಿಯುವಿಕೆ ಇಲ್ಲವೇ ಪ್ರಾದೇಶಿಕ ಅಸಮಾನತೆಯಿಂದಾಗಿ ಅಲ್ಲ, ಅದಕ್ಕೆ ಜಾತಿ,ಧರ್ಮ ಮತ್ತು ಜನಾಂಗೀಯ ಪ್ರತ್ಯೇಕತೆ ಕಾರಣ.

ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ,ನಾಗಾಲ್ಯಾಂಡ್, ಅರುಣಾಚಲ ಮತ್ತು ತ್ರಿಪುರ ಸೇರಿದಂತೆ ಈಶಾನ್ಯದ `ಸಪ್ತಸುಂದರಿಯರ~  ಒಟ್ಟು ಜನಸಂಖ್ಯೆ ಸುಮಾರು ಮೂರು ಮುಕ್ಕಾಲು ಕೋಟಿ, ಒಟ್ಟು ವಿಸ್ತೀರ್ಣ ಎರಡೂವರೆ ಲಕ್ಷ ಚದರ ಕಿ.ಮೀ. ಏಳು ಭಾಗಗಳಾದ ನಂತರವೂ ಅಲ್ಲಿ ಪ್ರತ್ಯೇಕತೆಯ ಬೇಡಿಕೆ ನಿಂತಿಲ್ಲ  ಮಾತ್ರವಲ್ಲ ಪ್ರತ್ಯೇಕಗೊಂಡ ರಾಜ್ಯಗಳಲ್ಲಿ ಆರ್ಥಿಕ,ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈ ಏಳೂ ರಾಜ್ಯಗಳ ಒಳಗೆ  ಪ್ರತ್ಯೇಕ  ರಾಜ್ಯ ಮತ್ತು ಸ್ವಾಯತ್ತ ಪ್ರದೇಶ ಬೇಕೆಂದು  ಮಾತ್ರವಲ್ಲ ಪ್ರತ್ಯೇಕ ದೇಶ ಬೇಕೆಂಬ ಕೂಗೂ ಕೇಳುತ್ತಿದೆ.
ಈ ಹಿನ್ನೆಲೆಯಲ್ಲಿ ಒಂದು ಪ್ರದೇಶದ ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಅನನ್ಯತೆಯನ್ನುಉಳಿಸಲು ಇಲ್ಲವೇ ಆ ಪ್ರದೇಶದ   ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕಲು ಪ್ರತ್ಯೇಕ ರಾಜ್ಯ ರಚನೆ ಮಾತ್ರ ದಾರಿಯೇ ಎಂಬ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯ ಇದೆ.
ಉತ್ತರಕರ್ನಾಟಕದಲ್ಲಿ ಆಗಾಗ ಕೇಳಿಬರುತ್ತಿರುವ  ಪ್ರತ್ಯೇಕ  ರಾಜ್ಯದ ಬೇಡಿಕೆಗೆ ಖಂಡಿತ ಜಾತಿ-ಧರ್ಮ ಇಲ್ಲವೇ ಭಾಷೆ ಕಾರಣ ಅಲ್ಲ. ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರದ ಜಿಲ್ಲೆಗಳು ಹಿಂದುಳಿದಿರುವುದು ನಿಜವಾದರೂ ಇದಕ್ಕೆ ರಾಜ್ಯದ ವಿಸ್ತೀರ್ಣ ಇಲ್ಲವೇ ಭೌಗೋಳಿಕ ದೂರ ಕಾರಣ ಎಂದು ಹೇಳಲಾಗದು.  ಕರ್ನಾಟಕ ರಾಜ್ಯದ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ದೇಶದ ಹಲವಾರು ರಾಜ್ಯಗಳಿಗಿಂತ ಉತ್ತಮವಾಗಿದೆ.
ಉತ್ತರಕರ್ನಾಟಕದ ಹಿಂದುಳಿಯುವಿಕೆ ಬಗ್ಗೆ ನಡೆಯುವ ಚರ್ಚೆಗಳಲ್ಲಿ ಸಾಮಾನ್ಯವಾಗಿ ಅಲ್ಲಿನ ಭೂಮಿಯ ಅಸಮಾನ ಹಂಚಿಕೆಯ ಪ್ರಸ್ತಾಪವಾಗುವುದಿಲ್ಲ. ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೀದರ್, ಕೊಪ್ಪಳ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಭೂ ಹಿಡುವಳಿಗಳ ಒಟ್ಟು ವಿಸ್ತೀರ್ಣ 51.31 ಲಕ್ಷ ಹೆಕ್ಟೇರ್‌ಗಳು. ಇದರಲ್ಲಿ  ಅತಿಸಣ್ಣ, ಸಣ್ಣ ಮತ್ತು ಅರೆಮಧ್ಯಮ ರೈತರಿಗೆ ಸೇರಿದ ಹಿಡುವಳಿಯ ಪ್ರಮಾಣ ಶೇಕಡಾ 76.35,
ಜಮೀನ್ದಾರರೆನಿಸಿಕೊಂಡ ಮಧ್ಯಮ ಮತ್ತು ದೊಡ್ಡ ರೈತರಿಗೆ ಸೇರಿದ ಹಿಡುವಳಿಯ ಪ್ರಮಾಣ ಶೇಕಡಾ 23.65. ಈ ಏಳು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ರೈತರ ಹಿಡುವಳಿಯ ಪ್ರಮಾಣ ಶೇಕಡಾ 90.78 ಮತ್ತು ಜಮೀನ್ದಾರಿ ಹಿಡುವಳಿಗಳ ಪ್ರಮಾಣ ಶೇಕಡಾ 9.22. ಈ ಅಸಮಾನತೆಯ ವಿರುದ್ಧ ಉಮೇಶ್ ಕತ್ತಿಯವರಂತಹ ನಾಯಕರು ಎಂದಾದರೂ ದನಿ ಎತ್ತಿದ್ದಾರೆಯೇ?
 ಉತ್ತರ ಕರ್ನಾಟಕ ಹಿಂದುಳಿಯಲು ಇಲ್ಲವೆ ಪ್ರಾದೇಶಿಕ ಅಸಮಾನತೆಗೆ ಗುರಿಯಾಗಲು ಮುಖ್ಯವಾಗಿ ಈ ರಾಜ್ಯವನ್ನು ಆಳಿದವರ ಧೋರಣೆ ಕಾರಣ. ಇದು ಕೇವಲ ದಕ್ಷಿಣಕರ್ನಾಟಕದ ರಾಜಕಾರಣಿಗಳ ಪೂರ್ವಗ್ರಹ ಎನ್ನುವುದಕ್ಕೂ ಆಧಾರಗಳಿಲ್ಲ. ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂತ ಉತ್ತರಕರ್ನಾಟಕದ `ಮಣ್ಣಿನ ಮಕ್ಕಳ~ ಕಾಲದಲ್ಲಿಯೂ ಈ ಅನ್ಯಾಯ ಮುಂದುವರಿದಿದೆ.

ಸರ್ಕಾರವೆಂದರೆ ಕೇವಲ ಮುಖ್ಯಮಂತ್ರಿ ಇಲ್ಲವೇ ವಿಧಾನಸೌಧದಲ್ಲಿ ಕೂತಿರುವ ಒಂದಷ್ಟು ಅಧಿಕಾರಿಗಳು ಮಾತ್ರ ಅಲ್ಲ. ಸರ್ವಾಧಿಕಾರಿಯೆಂದು ಆರೋಪಿಸುವಂತಹ ಸರ್ವಶಕ್ತ ಮುಖ್ಯಮಂತ್ರಿಗಳ ಕಾಲ ಕಳೆದುಹೋಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮುಖ್ಯಮಂತ್ರಿಯವರಿಗಿಂತ ಉಮೇಶ್ ಕತ್ತಿಯವರಂತಹ ಸಚಿವರು ರಾಜಕೀಯವಾಗಿ ಹೆಚ್ಚು ಬಲಶಾಲಿಯಾಗಿರುತ್ತಾರೆ.
ಮನಸ್ಸು ಮಾಡಿದರೆ ಇಂತಹವರು ಸರ್ಕಾರದ ಮೇಲೆ ಒತ್ತಡ ಹೇರಿ ಎಂತಹ ಅಸಾಧ್ಯ ಕೆಲಸವನ್ನೂ ಮಾಡಿಸುವಷ್ಟು ಸಶಕ್ತರು. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮೂರು ವರ್ಷಗಳ ಹಿಂದಿನ ಅತಿವೃಷ್ಟಿಯಿಂದಾಗಿ ಮನೆಮಾರು ಕಳೆದುಕೊಂಡ ಬಹಳಷ್ಟು ಕುಟುಂಬಗಳು ಈಗಲೂ ಸ್ವಂತಕ್ಕೊಂದು ಸೂರು ಪಡೆಯಲಿಕ್ಕಾಗದೆ  ತಗಡುಶೀಟುಗಳ ತಾತ್ಕಾಲಿಕ ಮನೆಗಳಲ್ಲಿ ನರಕಯಾತನೆ ಅನುಭವಿಸುತ್ತಿವೆ.
ಉತ್ತರ ಕರ್ನಾಟಕಕ್ಕೆ ಸೇರಿರುವವರೇ ಮುಖ್ಯಮಂತ್ರಿಗಳಾದರೂ ಅವರ ಬವಣೆ ಕೊನೆಗೊಂಡಿಲ್ಲ. ಪ್ರತ್ಯೇಕ  ರಾಜ್ಯದ ಬಗ್ಗೆ ಮಾತನಾಡುತ್ತಿರುವ ಉಮೇಶ್ ಕತ್ತಿಯವರು ಮೊದಲು ದನಿ ಎತ್ತಬೇಕಾಗಿರುವುದು ಈ ರೀತಿ ನೊಂದವರ ಪರವಾಗಿ ಅಲ್ಲವೇ?
ಆಳುವವರ ಇಂತಹ ಅಸಂವೇದನಾಶೀಲ ಮನಸ್ಥಿತಿ ಬದಲಾಗದೆ ಬೆಳಗಾವಿಯಲ್ಲಿ ಕಟ್ಟಿದ ಸುವರ್ಣ ಸೌಧದಲ್ಲಿ ಇನ್ನೊಂದು ಮುಖ್ಯಮಂತ್ರಿಯವರ ಕುರ್ಚಿಯನ್ನು  ಮಾಡಿಸಿ ಅದರಲ್ಲಿ ಕತ್ತಿ ಇಲ್ಲವೇ ಕೋರೆಯವರನ್ನು ಕೂರಿಸಿದರೂ ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಲಾರದು. ಆದುದರಿಂದ ಇಂತಹ ದೂರಾಲೋಚನೆ ಇಲ್ಲವೇ ದುರಾಲೋಚನೆಯ `ಕತ್ತಿ~ಯನ್ನು ಒರೆಯಲ್ಲಿಡುವುದೇ ಕ್ಷೇಮ.

Thursday, October 18, 2012

ಮನಸ್ಸಿದ್ದರೆ ವಿವಾದ ಇತ್ಯರ್ಥಕ್ಕೆ ಮಾರ್ಗವೂ ಇದೆ October 15, 2012

ಕಾವೇರಿ ನೀರು ಹಂಚಿಕೆಯ ವಿಷಯ ರಾಷ್ಟ್ರದ ಗಮನ ಸೆಳೆಯುವುದು ವಿವಾದ ಉಲ್ಬಣಗೊಂಡಾಗ ಮಾತ್ರ. ಈ ಸಂದರ್ಭದಲ್ಲಿ  ದಿಢೀರ್ `ಕಾವೇರಿ ತಜ್ಞ`ರಾಗಿಬಿಡುವ ರಾಜಕಾರಣಿಗಳು, ಕನ್ನಡ ಹೋರಾಟಗಾರರು ಮತ್ತು ಚಲನಚಿತ್ರ ನಟ-ನಟಿಯರ ಅರೆಬೆಂದ ತಿಳಿವಳಿಕೆ ಮಾತುಗಳ ಮೂಲಕವೇ ಈ ವಿವಾದವನ್ನು ಇತರರು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. 

`ಪ್ರಾಣ ಕೊಡುವ` `ರಕ್ತ ಹರಿಸುವ`... ಇವರ ವೀರಾವೇಶದ ಮಾತುಗಳ ಅಬ್ಬರದ ನಡುವೆ ಸಮಚಿತ್ತದ ಮತ್ತು ಪ್ರಜ್ಞಾವಂತಿಕೆಯ ಮಾತುಗಳು ನಮ್ಮವರಿಗೂ ರುಚಿಸುವುದಿಲ್ಲ. ಬೆಂಕಿ ಕಾರುವ ಮಾತುಗಳನ್ನೆಲ್ಲ ಕೇಳುವಾಗ ಸಂಘರ್ಷದ ಹಾದಿಯಲ್ಲದೆ ವಿವಾದ ಇತ್ಯರ್ಥಕ್ಕೆ ಬೇರೆ ದಾರಿಯೇ ಇಲ್ಲವೇನೋ ಎಂದು ಅನಿಸುವ ಅಪಾಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಪ್ರಮುಖ ಅಭಿವ್ಯಕ್ತಿಯಾದ ಬಂದ್, ಧರಣಿ, ಮುಷ್ಕರ-  ಒಂದು ಹಂತದವರೆಗೆ ಅವಶ್ಯಕವಾದರೂ ಅದರಿಂದಲೇ ವಿವಾದ ಇತ್ಯರ್ಥ ಸಾಧ್ಯ ಇಲ್ಲ.  ಬೇರೆ ಮಾರ್ಗಗಳೂ ಇವೆ, ಮನಸ್ಸು ಮಾಡಬೇಕು ಅಷ್ಟೆ. ಅಂತಹ  ಏಳು ಮಾರ್ಗಗಳು ಇಲ್ಲಿವೆ:

1. ನೀರನ್ನು ಮಂತ್ರದ ಮೂಲಕ ಸೃಷ್ಟಿಸಲಾಗುವುದಿಲ್ಲ, ಯಂತ್ರದ ಮೂಲಕ ಉತ್ಪಾದಿಸಲೂ ಆಗುವುದಿಲ್ಲ. ನೀರಿಗೆ ಇರುವ ಏಕೈಕ ಮೂಲ ಮಳೆ ಮಾತ್ರ. ಇದರಿಂದಾಗಿ ನಮ್ಮ ಬಳಕೆಗೆ ಅಗತ್ಯ ಇರುವಷ್ಟು ನೀರನ್ನು ಪಡೆಯಲು ಇರುವುದು ಎರಡೇ ಮಾರ್ಗ - ಒಂದು ಮಳೆ, ಇನ್ನೊಂದು ಮಳೆಯಿಂದ ಪಡೆದ ನೀರಿನ ವೈಜ್ಞಾನಿಕ ಬಳಕೆ. ಕಾವೇರಿ ಉಳಿದ ನದಿಗಳಂತಲ್ಲ, ಇದರಲ್ಲಿ ಲಭ್ಯ ಇರುವ ನೀರು ಕೇವಲ 740 ಟಿಎಂಸಿ. ಎಷ್ಟೇ ಮಳೆ ಬಂದರೂ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳು ಕೇಳುತ್ತಿರುವ ಸುಮಾರು 1200 ಟಿಎಂಸಿಗಳಷ್ಟು ನೀರನ್ನು ಒದಗಿಸುವುದು ಸಾಧ್ಯವೇ ಇಲ್ಲ. 

ಈ ಹಿನ್ನೆಲೆಯಲ್ಲಿ ನೀರಿನ ವೈಜ್ಞಾನಿಕ ಬಳಕೆಯ ಬಗ್ಗೆ ಯೋಚಿಸಲೇಬೇಕಾಗಿದೆ. ಇದಕ್ಕೆ ಇರುವ ಒಂದು ದಾರಿ ಬೆಳೆ ಪರಿವರ್ತನೆ. ಕಾವೇರಿ ಕಣಿವೆಯಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬಹುಪಾಲು ರೈತರು ಬೆಳೆಯುತ್ತಿರುವುದು ಹೆಚ್ಚು ನೀರಿನ ಅಗತ್ಯ ಇರುವ ಭತ್ತ ಮತ್ತು ಕಬ್ಬು. ಒಂದು ಅಂದಾಜಿನ ಪ್ರಕಾರ ಎರಡೂ ರಾಜ್ಯಗಳ ಕನಿಷ್ಠ ಶೇಕಡಾ 30ರಷ್ಟು ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಬೆಳೆಯ ಬದಲಿಗೆ ಕಡಿಮೆ ನೀರನ್ನು ಬಳಸಿ ಹತ್ತಿ, ಸೂರ್ಯಕಾಂತಿ ಮತ್ತು ನೆಲಗಡಲೆ ಬೆಳೆಸಲು ಸಾಧ್ಯ.

2. ಬೆಳೆ ಪರಿವರ್ತನೆ ಸಾಧ್ಯವೇ ಇಲ್ಲದ ಕಾವೇರಿ ಕೊಳ್ಳದ ಶೇಕಡಾ 70ರಷ್ಟು ಪ್ರದೇಶದಲ್ಲಿ ನೀರು ಪೋಲಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಕೃಷಿನೀರು ಬಳಕೆಯ ಬಗ್ಗೆ `ಸಾಮಾಜಿಕ ಲೆಕ್ಕಪರಿಶೋಧನೆ` (ಸೋಷಿಯಲ್ ಅಡಿಟ್) ನಡೆದೇ ಇಲ್ಲ.

 ಹೆಚ್ಚಿನ ನೀರಾವರಿ ಯೋಜನೆಗಳಲ್ಲಿ ರೈತರ ಗದ್ದೆಗಳಿಗೆ ಹರಿಯುವುದಕ್ಕಿಂತ ಹೆಚ್ಚು ನೀರು ಕಾಲುವೆಗಳಲ್ಲಿ ಪೋಲಾಗುತ್ತದೆ. ಶೇಕಡಾ 40ರಷ್ಟು ನೀರು ಇಂಗಿ ನಷ್ಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಕಾಲುವೆಗಳ ಸಿಮೆಂಟ್ ಲೈನಿಂಗ್, ಸ್ಲ್ಯೂಸ್‌ಗಳ ದುರಸ್ತಿ, ಬೇಕಾಬಿಟ್ಟಿ ಕೆರೆಗಳಿಗೆ ಹರಿಸುವ ಬದಲಿಗೆ ಗದ್ದೆಕಾಲುವೆಗಳ (ಫೀಲ್ಡ್ ಚಾನೆಲ್) ನಿರ್ಮಾಣ ಇತ್ಯಾದಿ ಕ್ರಮಗಳ ಮೂಲಕ ನೀರು ಉಳಿಸಲು ಸಾಧ್ಯ. ಸಹಜವಾಗಿಯೇ ಇದಕ್ಕೆ ಹಣ ಎಲ್ಲಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೂ ದಾರಿಗಳಿವೆ. ಅಂತಹದ್ದೊಂದು ದಾರಿ ಅಂದಾಜು 5,100 ಕೋಟಿ ರೂಪಾಯಿ ವೆಚ್ಚದ ವಿಶ್ವಸಂಸ್ಥೆ ನೆರವಿನ `ಕಾವೇರಿ ಆಧುನೀಕರಣ ಯೋಜನೆ`. ಇದು ಮೂರು ದಶಕಗಳಿಂದ ದೂಳು ತಿನ್ನುತ್ತಾ ಬಿದ್ದಿದೆ. ನ್ಯಾಯಮಂಡಳಿ ಮತ್ತು ನ್ಯಾಯಾಲಯದಲ್ಲಿ ಕಾವೇರಿ ವಿವಾದ ಇರುವವರೆಗೆ ಈ ಯೋಜನೆಯನ್ನು ಜಾರಿಗೆ ತರುವುದು ಸಾಧ್ಯ ಇಲ್ಲ. 

3. ಕಾವೇರಿ ನ್ಯಾಯಮಂಡಳಿಯಿಂದ ರಾಜ್ಯದ ಕುಡಿಯುವ ನೀರಿನ ಪಾಲಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂಕೋರ್ಟ್‌ಗೆ ಮೊರೆಹೋಗಲು ಅವಕಾಶ ಇದೆ. ರಾಷ್ಟ್ರೀಯ ಜಲನೀತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ನ್ಯಾಯಮಂಡಳಿ ಇದಕ್ಕೆ ಕೊನೆಯ ಆದ್ಯತೆ ನೀಡಿರುವುದು ಮಾತ್ರವಲ್ಲ ನೀರಿನ ಲೆಕ್ಕಾಚಾರದಲ್ಲಿಯೂ ಎಡವಿದೆ.  ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಹಳ್ಳಿ-ಪಟ್ಟಣಗಳ ಕುಡಿಯುವ ನೀರಿಗಾಗಿ ಕರ್ನಾಟಕ ಕೇಳಿದ್ದು 50 ಟಿಎಂಸಿ. ನ್ಯಾಯಮಂಡಳಿ ಗುರುತಿಸಿರುವುದು 17.22 ಟಿಎಂಸಿ. 

ಇದರಲ್ಲಿ ಬೆಂಗಳೂರಿಗೆ 8.70 ಮತ್ತು ಇತರ ಪ್ರದೇಶಕ್ಕೆ 8.52 ಟಿಎಂಸಿ. ಈ 17.22 ಟಿಎಂಸಿಯಲ್ಲಿ ಅರ್ಧದಷ್ಟು ನೀರು ಅಂತರ್ಜಲದಿಂದ ಲಭ್ಯ ಎಂದು ನ್ಯಾಯಮಂಡಳಿ ಹೇಳಿದೆ. ಅಷ್ಟಕ್ಕೆ ಸುಮ್ಮನಾಗದೆ ನೀರು ಬಳಕೆಯಾದ ನಂತರ ಶೇಕಡಾ 80 ಭಾಗ ಭೂಮಿ ಸೇರಿ ಅಂತರ್ಜಲವಾಗುವುದರಿಂದ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಕುಡಿಯುವ ನೀರಿನ ಅವಶ್ಯಕತೆ  1.75 ಟಿಎಂಸಿ ಮಾತ್ರ ಎಂದು ಹೇಳಿ ಗಾಯದ ಮೇಲೆ ಬರೆ ಹಾಕಿದೆ. ಈ ಅನ್ಯಾಯಕ್ಕೆ ಅವೈಜ್ಞಾನಿಕವಾದ ಲೆಕ್ಕಾಚಾರ ಮಾತ್ರ ಕಾರಣ ಅಲ್ಲ, ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಯಲ್ಲಿದೆ ಎಂಬ ಅಭಿಪ್ರಾಯವೂ ಕಾರಣ. 

ಇಷ್ಟು ಮಾತ್ರವಲ್ಲ ಕುಡಿಯುವ ನೀರನ್ನು ಲೆಕ್ಕಹಾಕುವಾಗ ಬೆಂಗಳೂರು ಮಹಾನಗರದ 2011ರ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಯಾವ ಕೋನದಿಂದ ಈ ನೀರು ವಿತರಣೆಯ ಕ್ರಮವನ್ನು ನೋಡಿದರೂ ಇದರಿಂದ ಅನ್ಯಾಯವಾಗಿರುವುದು ಸ್ಪಷ್ಟ. 

ಕುಡಿಯುವ ನೀರಿನ ವಿಚಾರದಲ್ಲಿ ನದಿ ಕಣಿವೆಯ ಗಡಿಗಳನ್ನು ಎಂದೋ ಉಲ್ಲಂಘಿಸಿಯಾಗಿದೆ. ಕಾವೇರಿ ನ್ಯಾಯಮಂಡಳಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ಮಹಾನಗರ ಯಮುನಾ ನದಿ ಕಣಿವೆಗೆ ಸೇರಿದ್ದು, ಅಲ್ಲಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ರಾವಿ-ಬಿಯಾಸ್‌ನಿಂದ ಎಂಬುದನ್ನು ನ್ಯಾಯಮೂರ್ತಿಗಳು ಹೇಗೆ ಮರೆತರೋ ಗೊತ್ತಿಲ್ಲ. ಆಂಧ್ರಪ್ರದೇಶ ಮತ್ತು ಕರ್ನಾಟಕ ತಮ್ಮ ಪಾಲನ್ನೂ ಮದ್ರಾಸ್ ನಗರದ ಕುಡಿಯುವ ನೀರಿಗಾಗಿ ನೀಡಿಲ್ಲವೇ? ಕಾವೇರಿ ಕಣಿವೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸಲು ಕಣಿವೆಯ ಗಡಿ ಅಡ್ಡಿ ಆಗಲೇ ಬಾರದು.ಇದರ ಜತೆಗೆ ನ್ಯಾಯಮಂಡಳಿಯೇ ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಗೆ ಸೇರಿದೆ ಎಂದು ಹೇಳಿರುವ ಕಾರಣ ಪೆನ್ನಾರ್-ಕಾವೇರಿ ನದಿಗಳ ಜೋಡಣೆಯ ಯೋಜನೆಗೆ ಚಾಲನೆ ನೀಡಬಹುದು.

4. ಈಗಿನ ವ್ಯವಸ್ಥೆಯಲ್ಲಿ ಕೃಷ್ಣರಾಜ ಸಾಗರದಿಂದ ಬಿಟ್ಟನೀರು ಬಿಳಿಗುಂಡ್ಲು ಮೂಲಕ ನೇರವಾಗಿ ಮೆಟ್ಟೂರು ಜಲಾಶಯಕ್ಕೆ ಹೋಗುತ್ತದೆ, ಅಲ್ಲಿಂದ ಸಮುದ್ರಕ್ಕೆ. ಕೆ.ಆರ್.ಸಾಗರದಿಂದ ಬಿಳಿಗುಂಡ್ಲು ವರೆಗಿನ ನಡುಹಾದಿಯಲ್ಲಿ ಯಾವ ಬ್ಯಾರೇಜ್ ಇಲ್ಲವೆ ಆಣೆಕಟ್ಟು ಇಲ್ಲ. ಈ ನಡುಮಾರ್ಗದಲ್ಲಿ ಬರುವ ಮೇಕೆದಾಟು, ಶಿವನಸಮುದ್ರ, ಹೊಗೆನಕಲ್ ಮತ್ತು ರಾಸಿಮಲೆಯಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುತ್ ನಿಗಮ ತಯಾರಿಸಿತ್ತು. ಮೇಕೆದಾಟು ಮತ್ತು ಶಿವನಸಮುದ್ರ ಕರ್ನಾಟಕದ ಗಡಿಯೊಳಗೆ ಬರುವುದರಿಂದ ಇವುಗಳನ್ನು ನಾವೇ ಅನುಷ್ಠಾನಗೊಳಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ಬಹಳ ಹಿಂದೆಯೇ ಹೇಳಿತ್ತು. 

ಆದರೆ ಈ ಯೋಜನೆಗಳಿಗೆ ನಮ್ಮಿಂದ ಅನುಮತಿ ಪಡೆಯಬೇಕೆಂದು ತಮಿಳುನಾಡು ಹಟ ಹಿಡಿದು ಕೂತಿದೆ. ಮೇಕೆದಾಟುವಿನಲ್ಲಿ 60ರಿಂದ 80 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಿದರೆ ಅವಶ್ಯಕತೆ ಇದ್ದಾಗ ಮೆಟ್ಟೂರಿಗೆ ಅಲ್ಲಿಂದ ನೀರು ಹರಿಸಬಹುದು ಇಲ್ಲದಿದ್ದರೆ ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಯೋಜನೆಗಳಿಗೆ ತಮಿಳುನಾಡು ರಾಜ್ಯದ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಬೇಕೆಂದು ಕರ್ನಾಟಕ ಸರ್ಕಾರ ಕೋರಬಹುದು.

5. ಮೆಟ್ಟೂರು ಆಣೆಕಟ್ಟು ಮತ್ತು ಅದರ ಮೂಲಕ ನಿರ್ಮಿಸಲಾಗಿರುವ ಸ್ಟಾನ್ಲಿ ಜಲಾಶಯ ಸುಮಾರು 78 ವರ್ಷಗಳಷ್ಟು ಹಳೆಯದು. ಇತ್ತೀಚಿನ ವರ್ಷಗಳಲ್ಲಿ ಹೂಳು ತುಂಬಿ ಜಲಾಶಯದ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕುಸಿದಿದ್ದು ದುರಸ್ತಿ ಮಾಡುವ ಪ್ರಯತ್ನ ನಡೆದಿಲ್ಲ. ಇದರಿಂದಾಗಿ ತನ್ನ ಮೂಲ ಸಾಮರ್ಥ್ಯದಷ್ಟನ್ನು ಸಂಗ್ರಹಿಸಿಟ್ಟುಕೊಳ್ಳಲಾಗದೆ ಜಲಾಶಯದಿಂದ ಬಿಟ್ಟ ನೀರು ಸಮುದ್ರದ ಪಾಲಾಗುತ್ತಿದೆ. ಜಲಾಶಯದ ಹೂಳು ತೆಗೆದು ದುರಸ್ತಿ ಮಾಡುವ ಮೂಲಕ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದು.

6. `ಕಾವೇರಿ ಕುಟುಂಬ`ವನ್ನು ಸಕ್ರಿಯಗೊಳಿಸುವ ಪ್ರಯತ್ನಕ್ಕೆ ಚಾಲನೆ ನೀಡಬೇಕಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ರೈತರ ಮುಖಂಡರನ್ನೊಳಗೊಂಡ ಈ ಸಂಘಟನೆಯನ್ನು ಹುಟ್ಟುಹಾಕಿದ್ದು `ಮದ್ರಾಸ್ ಅಭಿವೃದ್ಧಿ ಅಧ್ಯಯನ ಸಂಸ್ಥೆ`. 2003-04ರಲ್ಲಿ ಎರಡೂ ರಾಜ್ಯಗಳ ನಡುವಿನ ನೀರಿನ ವ್ಯಾಜ್ಯ ತಾರಕಕ್ಕೇರಿದಾಗ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಈ ಸಂಘಟನೆ ಶ್ರಮಿಸಿತ್ತು. 

ತಮಿಳುನಾಡಿನ ರೈತ ನಾಯಕ ರಂಗನಾಥನ್ ನೇತೃತ್ವದ ತಂಡ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶಕ್ಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ಸಾಹಿತಿ ಎಚ್.ಎಲ್. ಕೇಶವಮೂರ್ತಿ, ಬೋರಯ್ಯ ಮತ್ತಿತರನ್ನೊಳಗೊಂಡ ತಂಡ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿತ್ತು. ಎರಡೂ ರಾಜ್ಯಗಳ ರೈತನಾಯಕರು ಸೇರಿ ಈಗಾಗಲೇ ಹದಿನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ನಿಗದಿಗೊಳಿಸಲಾಗಿದ್ದ ಸಭೆ ನಡೆದಿದ್ದರೆ ಈಗಿನ ಸಂಘರ್ಷದ ಕಾವು ಕಡಿಮೆಯಾಗುತ್ತಿತ್ತೋ ಏನೋ?

7. ಕಾವೇರಿ ನದಿ ನೀರಿನ ವಿವಾದವೂ ಸೇರಿದಂತೆ ರಾಜ್ಯದ ನೆಲ-ಜಲ-ಭಾಷೆಗಳ ರಕ್ಷಣೆಯ ಜವಾಬ್ದಾರಿ ಆಯಾ ಕ್ಷೇತ್ರಗಳ ಹೋರಾಟಗಾರರಿಗೆ ಒಪ್ಪಿಸಿಬಿಟ್ಟು ಉಳಿದವರು ಆರಾಮವಾಗಿ ಇದ್ದು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಕೆಟ್ಟುಹೋಗಿದೆ, ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಎಂಟು ವರ್ಷಗಳ ಹಿಂದೆ ಭೂಮಿ-ಆಕಾಶ ಒಂದು ಮಾಡಿಬಿಟ್ಟಿದ್ದರು.
 
ದೆಹಲಿಯ ಪತ್ರಿಕೆಗಳಲ್ಲಿಯೂ ಇದು ದೊಡ್ಡ ಸುದ್ದಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಎದ್ದೆನೋ, ಬಿದ್ದೆನೋ ಎಂದು ದೆಹಲಿಗೆ ಓಡಿಹೋಗಿ ಪ್ರಧಾನಿಯಿಂದ ಹಿಡಿದು ಅವರ ಪಕ್ಷದ ನಾಯಕ-ನಾಯಕಿಯರವರೆಗೆ ಎಲ್ಲರಿಗೂ ಸ್ಪಷ್ಟೀಕರಣ ಕೊಟ್ಟಿದ್ದರು. ಪತ್ರಿಕಾ ಸಂಪಾದಕರನ್ನು ಭೇಟಿ ಮಾಡಿ ಕೈಜೋಡಿಸಿ ಬೇಡಿಕೊಂಡಿದ್ದರು. ರಸ್ತೆಗಳು ಇಂದಿಗೂ ಹಾಗೆಯೇ ಇವೆ ಎನ್ನುವುದು ಬೇರೆ ಮಾತು. ನಾರಾಯಣ ಮೂರ್ತಿಗಳು ಮಾತ್ರ ನಂತರ ಯಾಕೋ ಮೌನವಾಗಿಬಿಟ್ಟರು. 

ಈ ರೀತಿಯ ಪ್ರಭಾವಶಾಲಿ ಗಣ್ಯರ ದೊಡ್ಡ ದಂಡು ನಮ್ಮಲ್ಲಿದೆ. (ತಮಿಳುನಾಡಿನಲ್ಲಿ ಇಲ್ಲ). ರಾಜಕಾರಣಿಗಳ ವಿಶ್ವಾಸಾರ್ಹತೆ ಪಾತಾಳ ತಲುಪಿರುವುದರಿಂದ ಅವರನ್ನು ನೆಚ್ಚಿಕೊಳ್ಳುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ನಾರಾಯಣಮೂರ್ತಿ, ಅಜೀಂ ಪ್ರೇಮ್‌ಜಿ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಡಾ.ದೇವಿಪ್ರಸಾದ್ ಶೆಟ್ಟಿ ಮೊದಲಾದವರು ನಿಯೋಗ ಹೋಗಿ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಬಾರದೇಕೆ? ಕಾವೇರಿ ಕಣಿವೆಯ ಕುಡಿಯುವ ನೀರಿಗೆ 1.75 ಟಿಎಂಸಿ, ಕೈಗಾರಿಕಾ ಬಳಕೆಗಾಗಿ 0.10 ಟಿಎಂಸಿ ನೀಡಿರುವುದು ನ್ಯಾಯವೇ ಎಂದಾದರೂ ಕೇಳಬಹುದಲ್ಲವೇ?