Thursday, October 18, 2012

ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ... September 03, 2012


ಕಳೆದ ನಾಲ್ಕಾರು ದಿನಗಳಲ್ಲಿ ಮಾಧ್ಯಮಗಳ ಮೂಲಕ ಸೋರಿಬರುತ್ತಿರುವ ಸುದ್ದಿಗಳೆಲ್ಲವೂ ನಿಜವಾಗಿದ್ದರೆ ದೇಶದ ಭವಿಷ್ಯ ಭಯಾನಕವಾಗಿದೆ. ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ಮೇಲೆ ಹನ್ನೊಂದು ಮುಸ್ಲಿಮ್ ಯುವಕರನ್ನು ಬಂಧಿಸಿದ ನಂತರದ `ಸುದ್ದಿ ಸ್ಫೋಟ`ವನ್ನು ನಂಬಿದ ಯಾರಲ್ಲಿಯೂ ಹೊರಗೆ ಹೊರಟ ಮೇಲೆ ಸುರಕ್ಷಿತವಾಗಿ ಮನೆಗೆ ಮರಳುತ್ತೇನೆ ಎಂಬ ವಿಶ್ವಾಸ ಹುಟ್ಟಲಾರದು.

`...ರಾಜ್ಯದ ಮೆಟ್ರೊ ರೈಲ್ವೆ ನಿಲ್ದಾಣದಿಂದ ಹಿಡಿದು ಕೈಗಾ ಅಣುಸ್ಥಾವರದವರೆಗೆ, ಗಣೇಶೋತ್ಸವದಿಂದ ಹಿಡಿದು ಮೈಸೂರು ದಸರಾದ ವರೆಗೆ ಹಲವಾರು ಕಡೆ ಬಾಂಬು ಸ್ಫೋಟ ನಡೆಸುವ ಉದ್ದೇಶವನ್ನು ಈ ಶಂಕಿತ ಉಗ್ರರು ಹೊಂದಿದ್ದರು. ಎಲ್‌ಇಟಿ, ಹುಜಿ ಸೇರಿದಂತೆ ಹಲವು ಪ್ರಮುಖ ಉಗ್ರಗಾಮಿ ಸಂಘಟನೆಗಳ ಜತೆ ಇವರು ಸಂಪರ್ಕ ಹೊಂದಿದ್ದರು. ಉತ್ತರಪ್ರದೇಶ, ಮಹಾರಾಷ್ಟ್ರ, ಹೈದರಾಬಾದ್‌ಗಳಲ್ಲಿಯೂ ಇವರ ಜಾಲ ಹರಡಿದೆ, ಪಾಕಿಸ್ತಾನ ಮಾತ್ರವಲ್ಲ ಆಫ್ಘಾನಿಸ್ತಾನ ಮತ್ತು ಸೌದಿ ಅರೆಬಿಯಾ ದೇಶಗಳಿಗೂ ಇವರು ಭೇಟಿ ನೀಡಿದ್ದರು......` ಇತ್ಯಾದಿ ಊಹಾಪೋಹ ಆಧರಿತ ಸುದ್ದಿಗಳ ಮಹಾಪೂರವೇ ಹರಿದುಬರುತ್ತಿದೆ.

 ಇವುಗಳಲ್ಲಿ ಯಾವುದೂ ಪೊಲೀಸರ ಅಧಿಕೃತ ಹೇಳಿಕೆಗಳಲ್ಲ, ಸಾರ್ವಜನಿಕ ದಾಖಲೆಯಾಗಿರುವ ಪ್ರಥಮ ಮಾಹಿತಿ ವರದಿಯನ್ನೂ ಪೊಲೀಸರು ಹೊರಗೆ ಬಿಟ್ಟುಕೊಡುತ್ತಿಲ್ಲ.

ಹೀಗೆ ಹೇಳಿದ ಮಾತ್ರಕ್ಕೆ ಅವರು ಕಟ್ಟುನಿಟ್ಟಾಗಿ ತನಿಖೆಯ ರಹಸ್ಯಪಾಲನೆ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ, ಪರಿಚಿತ ಪತ್ರಕರ್ತರಿಗೆ ಪೊಲೀಸ್ ಅಧಿಕಾರಿಗಳು ಮುಕ್ತವಾಗಿ `ತನಿಖೆಯ ವಿವರ`ಗಳನ್ನು ಸೋರಿಬಿಡುತ್ತಿದ್ದಾರೆ. ಒಬ್ಬರು ಹೇಳಿರುವುದನ್ನು ಇನ್ನೊಬ್ಬರು ನಿರಾಕರಿಸುತ್ತಿದ್ದಾರೆ. ಕೈಗಾ ಅಣುಸ್ಥಾವರ ಶಂಕಿತ ಉಗ್ರರ ಗುರಿಯಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ಮಾಡಿರುವ ವರದಿಯನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ನಿರಾಕರಿಸುತ್ತಿದ್ದಾರೆ.

ಮೆಟ್ರೊ ನಿಲ್ದಾಣ ಸ್ಫೋಟ ಪ್ರಯತ್ನದ ಸುದ್ದಿಯನ್ನು ಕೂಡಾ ನಿರಾಕರಿಸಲಾಗಿದೆ. ಹಳೆಯ ಸುದ್ದಿಗಳನ್ನು ನಿರಾಕರಿಸಲಾಗುತ್ತಿದ್ದಂತೆಯೇ ಹೊಸ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಪೈಪೋಟಿಯ ಯುಗದಲ್ಲಿ ಸಿಕ್ಕ ಸುದ್ದಿಯನ್ನು ದೃಢೀಕರಿಸಲು ಬೇಕಾದ ಸಮಯಾವಕಾಶ ಪತ್ರಕರ್ತರಿಗೂ ಇಲ್ಲ. ಮಾಧ್ಯಮರಂಗದ ಈ ದೌರ್ಬಲ್ಯವನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೋ ಏನೋ ಎಂದು ಅನುಮಾನ ಪಡುವ ರೀತಿಯಲ್ಲಿ `ಸುದ್ದಿಸ್ಫೋಟ` ನಡೆಯುತ್ತಿದೆ.

ಇವೆಲ್ಲವನ್ನೂ ನೋಡುತ್ತಿದ್ದಾಗ `ಕಾಶ್ಮೆರ್ ಟೈಮ್ಸ` ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥರಾದ ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತ ನೆನಪಾಗುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ಪತ್ರಿಕೆಯ ಕಚೇರಿ ಇರುವ ಐಎನ್‌ಎಸ್ ಕಟ್ಟಡದಲ್ಲಿಯೇ ಗಿಲಾನಿ ಅವರ ಪತ್ರಿಕೆಯ ಕಚೇರಿಯೂ ಇದೆ. ಸ್ವಲ್ಪ ಕುಳ್ಳಗಿನ, ಸೌಮ್ಯ ಸ್ವಭಾವದ ಸುಮಾರು 35ರ ಆಜುಬಾಜಿನ ಈ ಗಿಲಾನಿ `ಪಾಕಿಸ್ತಾನದ ಜತೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ`ನೆಂದು ಒಂದು ದಿನ ಇದ್ದಕ್ಕಿದ್ದಂತೆ ಟಿವಿಚಾನೆಲ್‌ಗಳು ಕಿರಿಚಾಡುತ್ತಿರುವಾಗ ಅವರನ್ನು ಮೂರು ವರ್ಷಗಳಿಂದ ಆಗಾಗ ನೋಡುತ್ತಿದ್ದ ನನಗೆ ಆಘಾತವಾಗಿತ್ತು.

ಇಫ್ತಿಕರ್ ಗಿಲಾನಿ ಅವರು ಕಾಶ್ಮೆರದ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಹಾ ಗಿಲಾನಿ ಅಳಿಯನೆಂದು ಹೆಚ್ಚಿನವರಿಗೆ ಗೊತ್ತಾಗಿದ್ದು ಕೂಡಾ ಅವರ ಬಂಧನದ ನಂತರ. 2002ರ ಜುಲೈ ಒಂಬತ್ತರಂದು ದೆಹಲಿಯ ಮಾಳವೀಯ ನಗರದ ಅವರ ಮನೆ ಮೇಲೆ ದಾಳಿ ನಡೆಸಿದ ವರಮಾನ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಬಂದ ಐಬಿ ಅಧಿಕಾರಿಗಳು ಗಿಲಾನಿ ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಬಂಧಿಸಿ ಕರೆದೊಯ್ದಿದ್ದರು.

`ಅಧಿಕೃತ ರಹಸ್ಯ ಕಾಯಿದೆ`ಯಡಿ ಬಂಧಿಸಲಾದ ಅವರ ಮೇಲೆ ಬೇಹುಗಾರಿಕೆ, ರಾಜದ್ರೋಹದ ಆರೋಪಗಳನ್ನು ಮಾತ್ರವಲ್ಲ ಅಬ್ದುಲ್ ಗನಿ ಲೋನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪಗಳನ್ನೂ ಹೊರಿಸಲಾಗಿತ್ತು. ಅವರನ್ನು ಬಂಧಿಸಿದ ಎರಡು ತಿಂಗಳ ನಂತರ `ಅಶ್ಲೀಲ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದರು` ಎಂಬ ಹೊಸ ಆರೋಪ ಮಾಡಲಾಗಿತ್ತು.

 ಈ ಎಲ್ಲ ಆರೋಪಗಳಿಗೆ ಗುಪ್ತಚರ ಇಲಾಖೆ ಆಧಾರವಾಗಿ ಬಳಸಿದ್ದು ಅವರ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ `ಫ್ಯಾಕ್ಟ್‌ಶೀಟ್ ಆನ್ ಇಂಡಿಯನ್ ಫೋರ್ಸಸ್ ಇನ್ ಇಂಡಿಯಾ ಹೆಲ್ಡ್ ಕಾಶ್ಮೆರ್` ಎಂಬ ಹೆಸರಿನ ಫೈಲ್‌ನಲ್ಲಿದ್ದ ಐದು ಪುಟಗಳ ದಾಖಲೆ. ಕಾಶ್ಮೆರದ ಉತ್ತರ ಕಮಾಂಡ್‌ನ ವ್ಯಾಪ್ತಿಯಲ್ಲಿರುವ ಭಾರತೀಯ ಸೇನೆ ಮತ್ತು ಅರೆಸೇನಾಪಡೆಯ ಸಾಮರ್ಥ್ಯದ ಬಗ್ಗೆ ಅದರಲ್ಲಿ ವಿವರಗಳಿದ್ದವು.

ಈ ಬಗ್ಗೆ ಸೇನಾ ಗುಪ್ತಚರ ಮಹಾನಿರ್ದೇಶಕರ (ಡಿಜಿಎಂಐ) ಅಭಿಪ್ರಾಯ ಪಡೆಯಲಾಗಿತ್ತು. ` ..ಈ ಮಾಹಿತಿ ದೇಶದ ಭದ್ರತೆಗೆ ಅಪಾಯಕಾರಿ ಹಾಗೂ ಜಮ್ಮು ಮತ್ತು ಕಾಶ್ಮೆರದಲ್ಲಿನ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ..`ಎಂದು ಡಿಜಿಎಂಐ ಹೇಳಿತ್ತು. ಇಂಟಲಿಜೆನ್ಸ್ ಬ್ಯೂರೋ (ಐಬಿ) ಆಗಲೇ ಗಿಲಾನಿ ಅಪರಾಧಿ ಎಂದು ತೀರ್ಮಾನಿಸಿಯಾಗಿತ್ತು.

ಏಳು ತಿಂಗಳ ನಂತರ ಆರೋಪಮುಕ್ತರಾಗಿ ಹೊರಬಂದ ಗಿಲಾನಿ ತಿಹಾರ್ ಜೈಲಿನೊಳಗೆ ಪ್ರವೇಶಿಸಿದ ಮೊದಲ ದಿನದ ಅನುಭವವನ್ನು  `ಮೈ ಡೇಸ್ ಇನ್ ಪ್ರಿಸನ್` ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ:

`.....ತಿಹಾರ್ ಜೈಲು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಒಬ್ಬ ಅಧಿಕಾರಿ ತನ್ನನ್ನು ಹಿಂಬಾಲಿಸುವಂತೆ ನನಗೆ ಸೂಚನೆ ನೀಡಿದರು. ಅಲ್ಲಿರುವ ಮೇಜಿನ ಹಿಂದೆ ಕಿಶನ್ ಎನ್ನುವ ಅಧಿಕಾರಿ ಕೂತಿದ್ದರು,ಅವರ ಸುತ್ತ 10-12 ಮಂದಿ ನೆರೆದಿದ್ದರು. ಅವರಲ್ಲಿ ಕೆಲವರು ಜೈಲು ಸಿಬ್ಬಂದಿ, ಉಳಿದವರು ಕೈದಿಗಳು.

ನನ್ನ ಹೆಸರೇನೆಂದು ಕಿಶನ್ ಕೇಳಿದರು. ನಾನು ಉತ್ತರಿಸುವಷ್ಟರಲ್ಲಿ ಅಲ್ಲಿದ್ದ ಜೈಲು ಸಿಬ್ಬಂದಿಯೊಬ್ಬ ನನ್ನ ಕೆನ್ನೆಗೆ ಬೀಸಿ ಹೊಡೆದ. ತಕ್ಷಣ ಅಲ್ಲಿದ್ದವರೆಲ್ಲರೂ ನನ್ನ ಮೇಲೆ ಎರಗಿದರು, ಹೊಟ್ಟೆ,ಬೆನ್ನು, ತಲೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ಹೊಡೆದದ್ದು ಮಾತ್ರವಲ್ಲ ನನ್ನ ಕೂದಲನ್ನು ಹಿಡಿದು ಜಗ್ಗಿ ತಲೆಯನ್ನು ಮೇಜಿಗೆ ಅಪ್ಪಳಿಸಿದರು. ನನ್ನ ಬಾಯಿ,ಕಿವಿ, ಮೂಗುಗಳಿಂದ ರಕ್ತ ಸುರಿಯುತ್ತಿತ್ತು.

`ಸಾಲಾ, ಗದ್ದಾರ್, ಪಾಕಿಸ್ತಾನಿ ಏಜಂಟ್, ನಿನ್ನಂತಹವರು ಬದುಕಬಾರದು, ನೇರವಾಗಿ ಗಲ್ಲಿಗೇರಿಸಬೇಕು..` ಎಂದು ಬೈಯ್ಯುತ್ತಿರುವುದು ಪ್ರಜ್ಞೆ ತಪ್ಪುವವರೆಗೆ ಕೇಳುತ್ತಲೇ ಇತ್ತು. ಪ್ರಜ್ಞೆ ಬಂದ ಮೇಲೆ ನನ್ನ ಅಂಗಿಯಿಂದ ಟಾಯ್ಲೆಟ್ ಶುಚಿ ಮಾಡುವಂತೆ ತಿಳಿಸಿ ಮೂರು ದಿನಗಳ ಕಾಲ ಅದೇ ಅಂಗಿಯನ್ನು ತೊಡುವಂತೆ ಮಾಡಿದರು......`

ಯಾವ ಉದ್ದೇಶದಿಂದ ಗಿಲಾನಿ ಅವರನ್ನು ಬಂಧಿಸಿದ್ದರೆಂಬುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಬಂಧಿಸಿದ ಮರುಕ್ಷಣವೇ ಐಬಿ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿರಬಹುದು.

ಮಾಡಿರುವ ಆರೋಪವನ್ನು ಸಮರ್ಥಿಸಿಕೊಳ್ಳುವ ಸಾಕ್ಷ್ಯಾಧಾರಗಳು ಅವರಲ್ಲಿ ಇರಲಿಲ್ಲ. ಆಗ ಗೃಹಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ಹದಿನೇಳು ಬಾರಿ ಗಿಲಾನಿ ಸಂಬಂಧಿತ ಕಡತವನ್ನು ತರಿಸಿಕೊಂಡು ಪರಿಶೀಲಿಸಿದ್ದಾರೆ. ಪ್ರತಿಬಾರಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕೇಳಿದ್ದರು. ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಬದಲಿಗೆ ಐಬಿ ಅಧಿಕಾರಿಗಳು ಒಂದಷ್ಟು ಸುಳ್ಳುಕತೆಗಳನ್ನು ಕಟ್ಟಿ ಮಾಧ್ಯಮಗಳಲ್ಲಿ ತೇಲಿ ಬಿಡತೊಡಗಿದ್ದರು.

ಮಾಧ್ಯಮಗಳು ಕೂಡಾ `ನಂಬಲರ್ಹ ಮೂಲಗಳು` ಕೊಟ್ಟ ಮಾಹಿತಿಯನ್ನು ಪರಾಮರ್ಶಿಸಲು ಹೋಗದೆ ಪ್ರಕಟಣೆ-ಪ್ರಸಾರ ನಡೆಸಿದವು. `ಹಿಂದಿ ಟಿವಿ ಚಾನೆಲ್‌ನ ಒಬ್ಬ ವರದಿಗಾರ ತಮ್ಮ ಮನೆಯ ಮುಂಭಾಗದಲ್ಲಿ ತನ್ನ ಹೆಸರಿದ್ದ ಅಂಚೆಪೆಟ್ಟಿಗೆಯ ಮುಂದೆ ನಿಂತು `ಗಿಲಾನಿ ಪರಾರಿಯಾಗಿದ್ದಾರೆ` ಎಂದು ಹೇಳುತ್ತಿರುವಾಗ ಮನೆಯೊಳಗೆ ಐಬಿ ಅಧಿಕಾರಿಗಳು ತಮ್ಮನ್ನು ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದುದನ್ನು ಗಿಲಾನಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತೆಯೊಬ್ಬರು `ನಾನು ಐಎಸ್‌ಐ ಏಜಂಟ್ ಎಂದು ಗಿಲಾನಿ ತಪ್ಪೊಪ್ಪಿಕೊಂಡಿದ್ದಾರೆ` ಎಂದು ಐಬಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದರು. ಇದರಿಂದ ನೊಂದ ಗಿಲಾನಿ ಪತ್ನಿ ಅನಿಸಾ ಅವರು ಆ ಪತ್ರಿಕೆಯ ಮಾಲೀಕರನ್ನು ಸಂಪರ್ಕಿಸಿ ಆಗಿರುವ ಅನಾಹುತವನ್ನು ತಿಳಿಸಿದ್ದರು. ಮರುದಿನ ಪತ್ರಿಕೆ ಕ್ಷಮಾಪಣೆ ಕೇಳಿತ್ತು.

ನಿಜಾಂಶ ಏನೆಂದರೆ ಗಿಲಾನಿ ಅವರ ಮೇಲೆ `ಅಧಿಕೃತ ರಹಸ್ಯ ಕಾಯ್ದೆ`ಯ ಉಲ್ಲಂಘನೆಯ ಆರೋಪಕ್ಕೆ ಕಾರಣವಾದ ಅವರದ್ದೇ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ ದಾಖಲೆ ಭಾರತ ಸರ್ಕಾರದ್ದಾಗಿರದೆ, ಪಾಕಿಸ್ತಾನದ್ದಾಗಿತ್ತು. ಡಾ.ನಾಸಿರ್ ಕಮಾಲ್ ಎಂಬ ಪಾಕಿಸ್ತಾನಿ ರಕ್ಷಣಾ ತಜ್ಞರು ಬರೆದ ಈ ಲೇಖನವನ್ನು ಇಸ್ಲಾಮಾಬಾದ್‌ನ ರಕ್ಷಣಾ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು. ಅದನ್ನು ಗಿಲಾನಿ ತಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿ ಇಟ್ಟುಕೊಂಡಿದ್ದರು.

ಇದು ಆಗಲೇ ರಕ್ಷಣಾ ಖಾತೆಯ ಗ್ರಂಥಾಲಯಗಳಲ್ಲಿ ಲಭ್ಯ ಇತ್ತು. ಪಾಕಿಸ್ತಾನಿಗಳು ಜಮ್ಮು ಮತ್ತು ಕಾಶ್ಮೆರವನ್ನು ಹಾಗೆಂದು ಕರೆಯದೆ `ಇಂಡಿಯನ್ ಹೆಲ್ಡ್ ಕಾಶ್ಮೆರ್` ಎಂದೇ ಈಗಲೂ ಕರೆಯುವುದು. (ಅವರು `ಆಜಾದಿ ಕಾಶ್ಮೆರ` ಎಂದು ಹೇಳುತ್ತಿರುವ ಪ್ರದೇಶವನ್ನು ನಾವು `ಪಾಕಿಸ್ತಾನ ಆಕ್ರಮಿತ ಕಾಶ್ಮೆರ` ಎಂದು ಕರೆಯುತ್ತೇವೆಯಲ್ಲ ಹಾಗೆ). ಇದರ ಅರಿವಿದ್ದ ಐಬಿ ತಾನು ವಶಪಡಿಸಿಕೊಂಡ ದಾಖಲೆಯಲ್ಲಿ `ಇಂಡಿಯನ್‌ಹೆಲ್ಡ್ ಕಾಶ್ಮೆರ` ಎಂದು ಇದ್ದ ಕಡೆಗಳೆಲ್ಲ `ಜಮ್ಮು ಮತ್ತು ಕಾಶ್ಮೆರ` ಎಂದು ತಿದ್ದಿತ್ತು.

ಆಗಲೇ ಡಿಜಿಎಂಐಗೆ ತಪ್ಪಿನ ಅರಿವಾಗಿ ತಾನು ಮೊದಲು ನೀಡಿದ್ದ ಅಭಿಪ್ರಾಯವನ್ನು ವಾಪಸು ಪಡೆದು `ಪ್ರಾರಂಭದಲ್ಲಿ ನಾವು ನೀಡಿದ್ದ ಅಭಿಪ್ರಾಯ ಅತಿರಂಜಿತವಾಗಿತ್ತು. ಈ ದಾಖಲೆ ಎಲ್ಲ ಕಡೆ ಸುಲಭದಲ್ಲಿ ಲಭ್ಯ ಇರುವುದರಿಂದ ಅದಕ್ಕೆ ಭದ್ರತಾ ಮೌಲ್ಯ ಇಲ್ಲ` ಎಂಬ ಪರಿಷ್ಕೃತ ಅಭಿಪ್ರಾಯ ನೀಡಿತ್ತು.

ಅಷ್ಟು ಹೊತ್ತಿಗೆ ಪ್ರಾರಂಭದಿಂದಲೂ ಈ ಪ್ರಕರಣದಲ್ಲಿ ಗಿಲಾನಿ ಬಗ್ಗೆ ಅನುಕಂಪ ಹೊಂದಿದ್ದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರಿಗೆ ಕೂಡಾ ಐಬಿ ಎಡವಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಕೊನೆಗೆ ಏಳು ತಿಂಗಳ ನಂತರ ಇಫ್ತಿಕರ್ ಗಿಲಾನಿ ಅವರನ್ನು 2003 ಜೂನ್ 13ರಂದು ಬಿಡುಗಡೆ ಮಾಡಲಾಯಿತು. ಆದರೆ ಯಾರದೋ ಒತ್ತಡಕ್ಕೆ ಸಿಕ್ಕಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿದ ಅಧಿಕಾರಿಗಳ ಬಗ್ಗೆ ಯಾವ ವಿಚಾರಣೆಯೂ ನಡೆಯಲಿಲ್ಲ.

ಭಯೋತ್ಪಾದಕರು ಮತ್ತು ನಕ್ಸಲೀಯರ ಜತೆ ಸಂಪರ್ಕ ಕಲ್ಪಿಸಿ ಪತ್ರಕರ್ತರನ್ನು ಬಂಧಿಸಿ ಹಿಂಸಿಸುವ ಕಾರ್ಯ ದೇಶದಾದ್ಯಂತ ಈಗಲೂ ಮುಂದುವರಿದಿದೆ. ಕಳೆದ ಫೆಬ್ರವರಿಯಲ್ಲಿ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಯ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನಿ ವಾರ್ತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕಾಜ್ಮಿ ಎಂಬ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಐದು ತಿಂಗಳುಗಳಾದರೂ ಅವರು ಬಿಡುಗಡೆಯಾಗಿಲ್ಲ. ಬೆಂಗಳೂರು ಬಾಂಬು ಸ್ಫೋಟಕ್ಕೆ ಸಂಬಂಧಿಸಿದ ಇಬ್ಬರು ಸಾಕ್ಷಿಗಳ ಜತೆ ಮಾತನಾಡಿದ್ದರು ಎನ್ನುವ ಕಾರಣಕ್ಕೆ ದೆಹಲಿಯ ವಾರಪತ್ರಿಕೆಯ ಕೇರಳ ವರದಿಗಾರರಾಗಿದ್ದ ಶಾಹಿನಾ ಎಂಬುವವರ ಮೇಲೆ ಕರ್ನಾಟಕ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಇಫ್ತಿಕರ್ ಗಿಲಾನಿ ಅವರು ನಿರಪರಾಧಿಯಾಗಿ ಹೊರಬಂದ ಮಾತ್ರಕ್ಕೆ ಭಯೋತ್ಪಾದನೆ ಸಂಬಂಧಿ ಆರೋಪಿಗಳೆಲ್ಲರೂ ನಿರಪರಾಧಿಗಳಿರಲಾರರು. ಆದರೆ ಮಾಡಿದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗದ ನಮ್ಮ ಪೊಲೀಸ್ ತನಿಖಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ನಿರಪರಾಧಿಗಳು ಅಪರಾಧಿಯಾಗುತ್ತಿರುವುದು ಮಾತ್ರವಲ್ಲ, ಅಪರಾಧಿ ನಿರಪರಾಧಿ ಎಂದು ಅನಿಸಿಕೊಂಡು ತಪ್ಪಿಸಿಕೊಳ್ಳುವ ಸಾಧ್ಯತೆಗಳೂ ಇವೆ.

ಮೊದಲನೆಯದರಷ್ಟೇ ಎರಡನೆಯದೂ ಅಪಾಯಕಾರಿ. ಆರೋಪಗಳನ್ನು ಹೊರಿಸಲು ಒಂದೆರಡು ನಾಲಿಗೆ, ಒಂದಷ್ಟು ಕಿವಿಗಳಷ್ಟೇ ಸಾಕು. ಆದರೆ ಅದನ್ನು ಸಾಬೀತುಪಡಿಸಲು ಅಷ್ಟೇ ಸಾಲದು, ಸತ್ಯದ ನೆರವು ಕೂಡಾ ಬೇಕಾಗುತ್ತದೆ.

Monday, August 27, 2012

ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ August 27, 2012

ನ್ಯಾಯಾಂಗದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಕಲ್ಲೆಸೆಯಲು ಹೊರಟವರು ಮೊದಲು ಗಾಜಿನ ಮನೆಯಲ್ಲಿ ಕೂತಿರುವ ನ್ಯಾಯಾಂಗದ ಕಡೆ  ಕಣ್ಣುಹಾಯಿಸಬೇಕು.  ಮಮತಾ ಬ್ಯಾನರ್ಜಿ ಅವರಿಗೆ ಈ ರೀತಿಯ ಆರೋಪ ಹೊರಿಸುವುದಕ್ಕೆ ವೈಯಕ್ತಿಕವಾದ ಕಾರಣಗಳು ಇದ್ದಿರಬಹುದು.

ಆದರೆ ಅವರು ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಎದೆಮುಟ್ಟಿ ಹೇಳುವ ಧೈರ್ಯ ವಕೀಲರು, ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನೊಳಗೊಂಡ ನ್ಯಾಯಾಂಗ ವ್ಯವಸ್ಥೆಗೆ ಇದೆಯೇ?

2007ರಲ್ಲಿ `ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್` ಮತ್ತು ದೆಹಲಿ ಮೂಲದ ಸಂಶೋಧನಾ ಸಂಸ್ಥೆ `ಮಾಧ್ಯಮ ಅಧ್ಯಯನ ಕೇಂದ್ರ` ಭಾರತದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ನಡೆಸಿತ್ತು.  ಸಾರ್ವಜನಿಕ ಸೇವೆ ನೀಡುವ ಮತ್ತು ಪಡೆಯುವ ವ್ಯಕ್ತಿಗಳ ಜತೆಗಿನ ಸಂದರ್ಶನವೂ ಸೇರಿದಂತೆ ಇಪ್ಪತ್ತು ರಾಜ್ಯಗಳ 14,405 ವ್ಯಕ್ತಿಗಳ ಪ್ರತಿಕ್ರಿಯೆ ಪಡೆದು ಈ ಎರಡು ಸಂಸ್ಥೆಗಳು ಸಮೀಕ್ಷಾ ವರದಿಯೊಂದನ್ನು ನೀಡಿದ್ದವು.

`ಹನ್ನೊಂದು ಬಗೆಯ ಸಾರ್ವಜನಿಕ ಸೇವೆಗಳನ್ನು ಪಡೆಯಲು ಭಾರತೀಯರು ವರ್ಷಕ್ಕೆ 21,068 ಕೋಟಿ ರೂಪಾಯಿಗಳನ್ನು ಲಂಚದ ರೂಪದಲ್ಲಿ ನೀಡುತ್ತಿದ್ದಾರೆ. ಇದರಲ್ಲಿ ನ್ಯಾಯಾಂಗದ ಪಾಲು 2,630 ಕೋಟಿ ರೂಪಾಯಿ.

  ಶೇಕಡಾ 59ರಷ್ಟು ವಕೀಲರು, ಶೇಕಡಾ 30ರಷ್ಟು ನ್ಯಾಯಾಲಯದ ಅಧಿಕಾರಿಗಳು ಮತ್ತು ಶೇಕಡಾ ಐದರಷ್ಟು ನ್ಯಾಯಮೂರ್ತಿಗಳು ಲಂಚಪಡೆಯುತ್ತಿದ್ದಾರೆ` ಎಂದು ಆ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಸ್.ಪಿ.ಭರೂಚಾ ಅವರು ಹತ್ತುವರ್ಷಗಳ ಹಿಂದೆಯೇ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. `

ಶೇಕಡಾ 20ರಷ್ಟು ನ್ಯಾಯಮೂರ್ತಿಗಳು ಭ್ರಷ್ಟರು` ಎಂಬ ಅವರ ಆರೋಪ ಸಾರ್ವಜನಿಕವಾಗಿ ಸಂಚಲನವನ್ನುಂಟುಮಾಡಿತ್ತು. ಈ ಹತ್ತು ವರ್ಷಗಳ ಅವಧಿಯಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಮಟ್ಟ ಕಡಿಮೆಯಾಗಿದೆ ಎಂದು ಹೇಳಲು ಆಧಾರಗಳು ಸಿಗುತ್ತಿಲ್ಲ, ಹೆಚ್ಚಾಗಿದೆ ಎಂದು ಅನುಮಾನ ಪಡಲು ಕಾರಣಗಳಿವೆ.

ನ್ಯಾ.ಭರೂಚಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಆರುತಿಂಗಳ ನಂತರ ಪಂಜಾಬ್ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಶಾಮೀಲಾಗಿದ್ದ ಕೋಟ್ಯಂತರ ರೂಪಾಯಿ ಲಂಚದ ಆರೋಪದ ಲೋಕಸೇವಾ ಹಗರಣ ಬಯಲಾಯಿತು. ಪ್ರಶ್ನೆಪತ್ರಿಕೆಯ ಸೋರಿಕೆಗೆ ಅವಕಾಶ ನೀಡಿರುವುದು ಮಾತ್ರವಲ್ಲ ಉತ್ತರಪತ್ರಿಕೆಗಳನ್ನು ತಿದ್ದಲು ನ್ಯಾಯಮೂರ್ತಿಗಳು ಅವಕಾಶ ನೀಡಿದ್ದರೆಂದು ರಾಜ್ಯ ಜಾಗೃತದಳ ಆರೋಪ ಮಾಡಿತ್ತು.

ಭೂ ಮಾಫಿಯಾಗಳಿಂದ ಹಣ-ಹೆಂಡ-ಹೆಣ್ಣುಗಳನ್ನು ಪಡೆದು ತೀರ್ಪು ನೀಡಿದ್ದಾರೆಂಬ ಆರೋಪದ ಮೇಲೆ ಸಿಬಿಐ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಶಮಿತ್ ಮುಖರ್ಜಿ ಅವರನ್ನು ಬಂಧಿಸಿತ್ತು. ನ್ಯಾಯಾಲಯದ ಸಿಬ್ಬಂದಿಯ ಭವಿಷ್ಯನಿಧಿ ಹಣವನ್ನು ದುರ್ಬಳಕೆ ಮಾಡಿದ್ದಾರೆಂದು ಸುಪ್ರೀಂಕೋರ್ಟ್‌ನಿಂದ ಹಿಡಿದು ಕೆಳ ನ್ಯಾಯಾಲಯದವರೆಗಿನ 34 ನ್ಯಾಯಮೂರ್ತಿಗಳ ವಿರುದ್ಧ ಆರೋಪ ಕೇಳಿಬಂದಿತ್ತು.

ಅಹ್ಮದಾಬಾದ್‌ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ 40,000 ರೂಪಾಯಿ ಹಣ ಪಡೆದು ರಾಷ್ಟ್ರಪತಿಗಳ ವಿರುದ್ಧವೇ ಬಂಧನದ ವಾರೆಂಟ್ ಹೊರಡಿಸಿರುವುದನ್ನು ಒಂದು ಟಿವಿಚಾನೆಲ್ ಕುಟುಕುಕಾರ್ಯಾಚರಣೆ ಮೂಲಕ ಬಯಲಿಗೆಳೆದಿತ್ತು. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರಿಗೆ ಸಂಬಂಧಿಸಿದ ಜಾಮೀನು ನೀಡಿಕೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆಂಧ್ರಪ್ರದೇಶದ ನಾಲ್ವರು ನ್ಯಾಯಾಧೀಶರು ಕಂಬಿ ಎಣಿಸುತ್ತಿರುವುದು ಇತ್ತೀಚಿನ ಉದಾಹರಣೆ.

ಭ್ರಷ್ಟಾಚಾರದ ವಿಷಯದಲ್ಲಿ ಈಗಲೂ ನ್ಯಾಯಾಂಗವನ್ನು ಕಾರ್ಯಾಂಗ ಮತ್ತು ಶಾಸಕಾಂಗಗಳ ಸಮಕ್ಕೆ ಹೋಲಿಸಲಾಗದು. ನಮ್ಮ ಬಹುಸಂಖ್ಯಾತ ನ್ಯಾಯಮೂರ್ತಿಗಳು ವೃತ್ತಿನಿಷ್ಠೆಯಿಂದ ಕಾರ್ಯನಿರ್ವಹಿಸುವ ಪ್ರಾಮಾಣಿಕರೆನ್ನುವುದು ನಿಜ. ಆದರೆ ಕೆಳನ್ಯಾಯಾಲಯಗಳಿಗೆ ಸೀಮಿತವಾಗಿದ್ದ ಭ್ರಷ್ಟಾಚಾರದ ವೈರಸ್ ನಿಧಾನವಾಗಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಿಗೂ ಪ್ರವೇಶಿಸಿದೆ.

ಸಂವಿಧಾನದ ಉಳಿದೆರಡು ಅಂಗಗಳ ರೀತಿಯಲ್ಲಿ ನ್ಯಾಯಾಂಗಕ್ಕೆ ತಗಲಿರುವ ರೋಗವನ್ನು ಸುಲಭದಲ್ಲಿ ನಿಯಂತ್ರಿಸುವುದು ಕಷ್ಟ. ಇದಕ್ಕೆ ಮೊದಲನೆಯ ಕಾರಣ- ನ್ಯಾಯಾಂಗದ ಭ್ರಷ್ಟತೆಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾರ್ಯಾಂಗ ಮತ್ತು ಶಾಸಕಾಂಗ ಮಾತ್ರವಲ್ಲ ಮಾಧ್ಯಮರಂಗವೂ ಉಳಿಸಿಕೊಳ್ಳದೆ ಇರುವುದು. ಎರಡನೆಯ ಕಾರಣ-ಉಳಿದ ಮೂರು ಅಂಗಗಳನ್ನೂ ಮೀರಿದ ವಿಶೇಷ ರಕ್ಷಣೆ (ಇಮ್ಯುನಿಟಿ)ಯನ್ನು ನ್ಯಾಯಾಂಗ ಪಡೆದಿರುವುದು.

ಭಾರತದಲ್ಲಿ ಈಗಲೂ ನ್ಯಾಯಾಂಗ ಎನ್ನುವುದು ಒಂದು `ಪವಿತ್ರಗೋವು`. ಬೀದಿಯಲ್ಲಿ ನಿಂತು ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ಆಡುವ ಮಾತುಗಳನ್ನು ನ್ಯಾಯಮೂರ್ತಿಗಳ ಬಗ್ಗೆ ಮಾತನಾಡಲಾಗದು. ನ್ಯಾಯಾಂಗ ನಿಂದನೆಯ ಕತ್ತಿ ತಲೆ ಮೇಲೆ ಸದಾ ತೂಗುತ್ತಿರುತ್ತದೆ.

ಬಹುಪದರಗಳ ಈ `ಆತ್ಮರಕ್ಷಣೆ`ಯ ವ್ಯವಸ್ಥೆಯೇ ನ್ಯಾಯಾಂಗದ ಆರೋಗ್ಯವನ್ನು ಒಳಗಿಂದೊಳಗೆ ಕೆಡಿಸುತ್ತಿದೆಯೇ?ಈಗಿನ ಕಾನೂನಿನ ಪ್ರಕಾರ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ಪೂರ್ವಾನುಮತಿ ಇಲ್ಲದೆ ನ್ಯಾಯಮೂರ್ತಿಗಳ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸುವಂತಿಲ್ಲ.

ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೂ ಸಾಧ್ಯ ಇಲ್ಲ. ಹೈಕೋರ್ಟ್ ಇಲ್ಲವೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳನ್ನು ಸಂಸತ್‌ನ ಎರಡೂ ಸದನಗಳ ಸದಸ್ಯರು ಬಹುಮತದ `ವಾಗ್ದಂಡನೆ` ಮೂಲಕವಷ್ಟೇ ಕಿತ್ತುಹಾಕಬಹುದು. ಆದರೆ  ಇಲ್ಲಿಯವರೆಗೆ ಯಾವ ನ್ಯಾಯಮೂರ್ತಿಯವರನ್ನೂ `ವಾಗ್ದಂಡನೆ`ಯ ಮೂಲಕ ಕಿತ್ತುಹಾಕಲು ಸಂಸತ್‌ಗೆ ಸಾಧ್ಯವಾಗಿಲ್ಲ. ನ್ಯಾಯಮೂರ್ತಿ ವಿ.ರಾಮಸ್ವಾಮಿ ಅವರಿಗೆ ವಾಗ್ದಂಡನೆ  ವಿಧಿಸಬೇಕೆಂಬ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರವೇ ಸಿಗದೆ ಬಿದ್ದುಹೋಗಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲಿಯೂ ಕಾಂಗ್ರೆಸ್ ಸದಸ್ಯರು ಗೈರುಹಾಜರಾಗಿದ್ದರು.

ನ್ಯಾಯಾಲಯದ ರಿಸೀವರ್ ಆಗಿ ಸ್ವೀಕರಿಸಿದ್ದ 24 ಲಕ್ಷ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡಿದ್ದ ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರಸೇನ್ ವಿರುದ್ಧದ ವಾಗ್ದಂಡನೆಗೆ ಲೋಕಸಭೆ ಅಂಗೀಕಾರ ನೀಡಿದರೂ, ಅದು ರಾಜ್ಯಸಭೆಗೆ ಹೋಗುವ ಮೊದಲೇ ಅವರು  ರಾಜೀನಾಮೆ ನೀಡಿದ್ದರು. ತನಿಖೆ ನಡೆಯುತ್ತಿರುವಾಗಲೇ ನ್ಯಾಯಮೂರ್ತಿ ಪಿ.ಡಿ.ದಿನಕರನ್ ರಾಜೀನಾಮೆ ನೀಡಿದ ಕಾರಣ  ಅವರಿಗೂ ವಾಗ್ದಂಡನೆ ನೀಡಲು ಸಾಧ್ಯವಾಗಲಿಲ್ಲ.

ಆರೋಪ ಹೊತ್ತ ನ್ಯಾಯಮೂರ್ತಿಗಳ ವಿಚಾರಣೆ ನಡೆಸುವ ಈಗಿನ ವ್ಯವಸ್ಥೆ ತೀರಾ ದುರ್ಬಲವಾಗಿದೆ. ಇದೊಂದು `ಗೃಹಸಮಿತಿ`. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ನ್ಯಾಯಾಂಗ ಆಯೋಗದಲ್ಲಿ ಹೈಕೋರ್ಟ್‌ನ ತಲಾ ಇಬ್ಬರು ನ್ಯಾಯಮೂರ್ತಿಗಳು ಸದಸ್ಯರು.

ನ್ಯಾಯಮೂರ್ತಿಗಳ ಮೇಲಿನ ಆರೋಪ ಸಾಬೀತಾದಾರೂ ಆಯೋಗ ಹೆಚ್ಚೆಂದರೆ ಆರೋಪಿ ನ್ಯಾಯಮೂರ್ತಿಗಳನ್ನು ಅಮಾನತ್‌ನಲ್ಲಿಡಬಹುದು ಇಲ್ಲವೆ ವರ್ಗಾವಣೆ ಮಾಡಬಹುದು. ಆಯೋಗಕ್ಕೆ ಕಾನೂನುಬದ್ಧ ಅಧಿಕಾರ ಇಲ್ಲ. ಆರೋಪಿ ಸ್ಥಾನದಲ್ಲಿರುವವರು ಆಯೋಗದ ನಿರ್ಧಾರವನ್ನು ಪ್ರಶ್ನಿಸಬಹುದು.

ನ್ಯಾಯಾಂಗ ಎದುರಿಸುತ್ತಿರುವ ಈಗಿನ ಆರೋಪಗಳಿಗೆ ನ್ಯಾಯಮೂರ್ತಿಗಳ ನೇಮಕದಲ್ಲಿರುವ ದೋಷವೂ ಕಾರಣ. 1950ರಿಂದ 1993ರ ವರೆಗೆ ನ್ಯಾಯಮೂರ್ತಿಗಳ ನೇಮಕದ ಅಧಿಕಾರ ಶಾಸಕಾಂಗದ ಕೈಯಲ್ಲಿಯೇ ಇತ್ತು. `ಸೆಕೆಂಡ್ ಜಡ್ಜಸ್` ಎಂದೇ ಜನಪ್ರಿಯವಾಗಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಒಂಬತ್ತು ಸದಸ್ಯರ ಪೀಠ ಸಂವಿಧಾನದ 124ನೇ ಕಲಂ ಅನ್ನು ಪುನರ್‌ವ್ಯಾಖ್ಯಾನಿಸಿ ನ್ಯಾಯಮೂರ್ತಿಗಳ ನೇಮಕದಲ್ಲಿ ನ್ಯಾಯಾಂಗಕ್ಕೆ ಪರಮಾಧಿಕಾರವನ್ನು ನೀಡಿತ್ತು.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳದ್ದೇ ಅಂತಿಮ ನಿರ್ಧಾರ. ಈ ಬಗ್ಗೆ ಕೇಂದ್ರ ಸರ್ಕಾರದ `ಸಲಹೆ`ಪಡೆದರಷ್ಟೇ ಸಾಕು, `ಅನುಮತಿ` ಬೇಕಾಗಿಲ್ಲ. ಮುಖ್ಯನ್ಯಾಯಮೂರ್ತಿಗಳು ಇಬ್ಬರು ಹಿರಿಯಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸಿ ಕೈಗೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇಬೇಕು. ಕೆಲವು ವಿವಾದಾತ್ಮಕ ನ್ಯಾಯಮೂರ್ತಿಗಳ ಪ್ರಕರಣವನ್ನು ಪರಿಶೀಲಿಸಿದರೆ ನೇಮಕಾತಿಯ ಈ ವ್ಯವಸ್ಥೆಯಲ್ಲಿನ ದೋಷ ಸ್ಪಷ್ಟವಾಗುತ್ತದೆ.

ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಸೌಮಿತ್ರಸೇನ್ ಹಣ ದುರುಪಯೋಗ ಮಾಡಿಕೊಂಡದ್ದು 1993ರಲ್ಲಿ. ಆದರೆ ಅದು ಬೆಳಕಿಗೆ ಬಂದದ್ದು 2009ರಲ್ಲಿ. ನ್ಯಾಯಮೂರ್ತಿ ಸೇನ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಮೊದಲು ಹಳೆಯ ಆರೋಪಗಳನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಯಾಕೆ ಪರಿಶೀಲಿಸಿರಲಿಲ್ಲ? ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾಗ ಪಿ.ಡಿ.ದಿನಕರನ್ ಅವರು ಅಕ್ರಮವಾಗಿ ನೂರಾರು ಎಕರೆ ಜಮೀನು ಕಬಳಿಸಿದ್ದಾರೆ ಎನ್ನುವುದು ಆರೋಪ.

ಆದರೆ ಅದು ಬಯಲಿಗೆ ಬಂದಿರುವುದು ಅವರನ್ನು ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ ಸಂದರ್ಭದಲ್ಲಿ. ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ ಸುಪ್ರೀಂಕೋರ್ಟ್ ಸಮಿತಿ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೇಗೆ ನೇಮಿಸಿತು?

ಇದು ಆರೋಪಕ್ಕೊಳಗಾಗಿರುವ ಒಬ್ಬಿಬ್ಬರು ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಲೋಪಗಳಲ್ಲ. ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಹಲವಾರು ನ್ಯಾಯಮೂರ್ತಿಗಳ ಹಿನ್ನೆಲೆ ಸಂಶಯಾಸ್ಪದವಾಗಿಯೇ ಇದ್ದರೂ ಅವರೆಲ್ಲ ಸಲೀಸಾಗಿ  ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.

 ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದ ಯಾರೂ ಕೂಡಾ ನ್ಯಾಯಾಂಗ ಎನ್ನುವುದು 50ವರ್ಷಗಳ ಹಿಂದಿನಷ್ಟೇ ಆರೋಗ್ಯಕರವಾಗಿದೆ ಎಂದು ಹೇಳಲಾರರು. ಆರೋಗ್ಯ ಹಾಳಾಗಿದ್ದರೆ ಚಿಕಿತ್ಸೆ ಅನಿವಾರ್ಯ. ಆದರೆ ನಮ್ಮ ಸಂವಿಧಾನದಲ್ಲಿ ನ್ಯಾಯಾಂಗದ ಅನಾರೋಗ್ಯಕ್ಕೆ ಔಷಧಿ ಏನೆಂದು ಹೇಳಿಲ್ಲ.

ಭವಿಷ್ಯದಲ್ಲಿ ನ್ಯಾಯಮೂರ್ತಿಗಳ ಪ್ರಾಮಾಣಿಕತೆಯನ್ನೇ ಸಂಶಯಿಸುವಂತಹ ದಿನಗಳು ಬರಬಹುದೆಂದು ಸಂವಿಧಾನ ರಚನೆಯ ಕಾಲದಲ್ಲಿ  ಸ್ವತ: ವಕೀಲರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಯಾರೂ ಊಹಿಸಿರಲಿಲ್ಲವೇನೋ? ನ್ಯಾಯಾಂಗವನ್ನು ಪ್ರಶ್ನಾತೀತವಾಗಿ ಉಳಿಸಿಕೊಳ್ಳಬೇಕೆಂಬ ಅವರ ಸದಾಶಯವೂ ಇದಕ್ಕೆ ಕಾರಣ ಇರಬಹುದು. ಆದರೆ ಈ ಭರವಸೆಯನ್ನು ನ್ಯಾಯಾಂಗ ಉಳಿಸಿಕೊಂಡಿದೆಯೇ?

ಇತ್ತೀಚಿನ ವರ್ಷಗಳಲ್ಲಿ ಬಯಲಾಗುತ್ತಿರುವ ನ್ಯಾಯಾಂಗದ ಹಗರಣಗಳ ನಂತರ ನ್ಯಾಯಮೂರ್ತಿಗಳನ್ನು ಕೂಡಾ ಸಮಾಜಕ್ಕೆ ಉತ್ತರದಾಯಿಯನ್ನಾಗಿ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂವಿಧಾನ ಪುನರ್‌ಪರಿಶೀಲನಾ ಆಯೋಗ  `ರಾಷ್ಟ್ರೀಯ ನ್ಯಾಯಾಂಗ ಆಯೋಗ` ರಚನೆಗೆ ಶಿಫಾರಸು ಮಾಡಿತ್ತು. ಎನ್‌ಡಿಎ ಸರ್ಕಾರದ ಕಾಲದಲ್ಲಿ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಯ ಅಧಿಕಾರವನ್ನೂ ಒಳಗೊಂಡ `ರಾಷ್ಟ್ರೀಯ ನ್ಯಾಯಾಂಗ ಆಯೋಗ`ದ ಮಸೂದೆಯನ್ನು ರೂಪಿಸಿತ್ತು.

ಕೇಂದ್ರ ಕಾನೂನು ಸಚಿವರು ಮತ್ತು ಕೇಂದ್ರ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ಆಯೋಗದ ಮುಂದೆ ನ್ಯಾಯಮೂರ್ತಿಗಳು ಆಸ್ತಿ ಘೋಷಣೆ ಮಾಡಬೇಕು ಎಂದು ಮಸೂದೆ ಹೇಳಿತ್ತು. ಆಗಲೂ ನ್ಯಾಯಮೂರ್ತಿಗಳು ಆಯೋಗ ರಚನೆಯನ್ನು ವಿರೋಧಿಸಿದ್ದರು.

ವಿಳಂಬವಾಗಿಯಾದರೂ ಈ ವರ್ಷದ ಮೇ ತಿಂಗಳಲ್ಲಿ ಲೋಕಸಭೆ `ನ್ಯಾಯಾಂಗ ಗುಣಮಟ್ಟ ಮತ್ತು ಉತ್ತರದಾಯಿತ್ವ ಮಸೂದೆ 2002`ಕ್ಕೆ ಅನುಮೋದನೆ ನೀಡಿದೆ. 2011ರಲ್ಲಿ ಮಂಡನೆಯಾಗಿದ್ದ ಈ ಮಸೂದೆಯನ್ನು ತಿದ್ದುಪಡಿಯೊಂದಿಗೆ ಮರಳಿ ಮಂಡಿಸಲಾಗಿತ್ತು. ಆದರೆ ಆಗಲೇ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರು  ಮಸೂದೆಯ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗದ ಸುಧಾರಣೆಯ ಪ್ರಯತ್ನ ನಡೆದಾಗಲೆಲ್ಲ, ಅದನ್ನು ನ್ಯಾಯಾಂಗದ ಮೇಲೆ ಶಾಸಕಾಂಗದ ಆಕ್ರಮಣ ಎಂದೇ ಬಿಂಬಿಸುತ್ತಾ ನ್ಯಾಯಮೂರ್ತಿಗಳು ಆತ್ಮರಕ್ಷಣೆಗಿಳಿಯುವುದು ಸಹಜ. ಈಗಿನ ಮುಖ್ಯನ್ಯಾಯಮೂರ್ತಿಗಳು ಅದನ್ನು ಮಾತಿನಲ್ಲಿ ಹೇಳದೆ ಇದ್ದರೂ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ಚಾಚುತ್ತಿರುವ ಸಮಯದಲ್ಲಿ ಎಲ್ಲ ವ್ಯವಸ್ಥೆಗಳೂ  ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿ ಆಗಿರಬೇಕು ಎಂದು ಸಾರ್ವಜನಿಕರು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬಹಳ ದಿನಗಳ ಕಾಲ ನ್ಯಾಯಾಂಗ ಮುಸುಕುಹಾಕಿಕೊಂಡು ತನ್ನನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗಲಾರದು.

Friday, August 24, 2012

ಬೂದಿ ಮುಚ್ಚಿದ ಕೆಂಡದಂತೆ ಸುಡುತ್ತಿರುವ ವಲಸೆ ಸಮಸ್ಯೆ August 20, 2012

ಯಾರೋ ಕಿಡಿಗೇಡಿಗಳು ಹಚ್ಚಿದ ಗಾಳಿಮಾತಿನ ಕಿಡಿಗಳಲ್ಲಿ ತಮ್ಮನ್ನು ಸುಟ್ಟುಬಿಡುವ ಬೆಂಕಿಯನ್ನು ಕಂಡು ಬೆದರಿ ಬೆಂಗಳೂರು ಬಿಟ್ಟು ಓಡಿಹೋಗಿರುವ ಈಶಾನ್ಯ ರಾಜ್ಯದ ಜನರು ಮುಂದಿನ ದಿನಗಳಲ್ಲಿ ಮರಳಿ ಬರಬಹುದು. ತಾವು ಊರು ಬಿಟ್ಟು ಹೋಗುವಂತಹ ಭಯಾನಕ ಪರಿಸ್ಥಿತಿ ಬೆಂಗಳೂರಿನಲ್ಲಿ ಇಲ್ಲ ಎನ್ನುವುದು ನಿಧಾನವಾಗಿ ಅರಿವಾಗಿ ಅವರು ಪಶ್ಚಾತಾಪಪಡಲೂ ಬಹುದು.
 
ಈ ಭಯಭೀತ ವಾತಾವರಣದ ನಿರ್ಮಾಣಕ್ಕೆ ಕಾರಣರಾದವರನ್ನು ಪೊಲೀಸರು ಬಂಧಿಸಿ ಸಂಚನ್ನು ಬಯಲುಮಾಡಿದರೆ ಮುಖ್ಯಮಂತ್ರಿಗಳು ಮತ್ತು ಅವರ ಸಹೊದ್ಯೋಗಿಗಳು ನೀಡಿರುವ ಆಶ್ವಾಸನೆಯನ್ನು ಅವರು ನಂಬಲೂಬಹುದು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸದೆ ಇದ್ದರೆ ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡು ಇದೊಂದು ದುಃಸ್ವಪ್ನ ಎಂದು ಅವರು ಮರೆತುಬಿಡಬಹುದು. ಇಷ್ಟಕ್ಕೆ ಎಲ್ಲ ಸಮಸ್ಯೆಗಳು ಶಾಶ್ವತ ಪರಿಹಾರ ಕಂಡು ವಲಸೆ ಬಂದವರು ಮತ್ತು ಸ್ಥಳೀಯರು ಹಾಲುಜೇನಿನಂತೆ ಒಂದಾಗಿ ನೂರುಕಾಲ ನೆಮ್ಮದಿಯಿಂದ ಬಾಳ್ವೆಮಾಡಬಹುದೇ?

ಪೊಲೀಸರ ತನಿಖೆ, ಅಪರಾಧಿಗಳ ಪತ್ತೆ, ರಾಜ್ಯದ ರಾಜಕಾರಣಿಗಳೆಲ್ಲ ಕೂಡಿ ನೀಡಿರುವ ಭದ್ರತೆಯ ಆಶ್ವಾಸನೆ ...ಇವೆಲ್ಲವೂ ಮೊನ್ನೆ ನಡೆದ ನಿರ್ದಿಷ್ಟ ದುರ್ಘಟನೆಗೆ ತಾತ್ಕಾಲಿಕ ರೂಪದ ಪರಿಹಾರ ಅಷ್ಟೆ. ಇದಕ್ಕೆ ಕಾರಣವಾದ ಸಮಸ್ಯೆಯ ಬೇರುಗಳು ಇನ್ನೂ ಆಳದಲ್ಲಿವೆ. 

ಅವುಗಳನ್ನು ಹುಡುಕಿತೆಗೆದು ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಇಂತಹ ಸಂಘರ್ಷಗಳು ಪುನರಾವರ್ತನೆಯಾಗುವುದನ್ನು ತಡೆಯುವುದು ಸಾಧ್ಯವಾಗಲಾರದು. ಆ ಸಮಸ್ಯೆಯ ಹೆಸರು ವಲಸೆ. ಬೆಂಗಳೂರನ್ನು ಮಾತ್ರವಲ್ಲ ದೇಶದ ಎಲ್ಲ ಮಹಾನಗರಗಳನ್ನೂ ಕಾಡುತ್ತಿರುವ ಮತ್ತು ಭವಿಷ್ಯದಲ್ಲಿ ಭೂತಾಕಾರವಾಗಿ ಬೆಳೆದು ಕಾಡಲಿರುವ ಸಮಸ್ಯೆ ಇದು. ಕೇಂದ್ರ ಯೋಜನಾ ಆಯೋಗದ ಮಟ್ಟದಲ್ಲಿ ಈ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇದ್ದರೂ ಪರಿಹಾರವನ್ನು ಮಾತ್ರ ಕಂಡುಕೊಳ್ಳಲಾಗಿಲ್ಲ.

ಬಹುಶಃ ಹುಟ್ಟಿದ ಊರಿನಲ್ಲಿಯೇ ಬಯಸಿದ್ದೆಲ್ಲವೂ ಸಿಕ್ಕಿಬಿಟ್ಟರೆ ಯಾರೂ ಊರು ಬಿಡಲಾರರೇನೋ? ವಲಸೆ ಬಂದವರಲ್ಲಿ ಯಾರೂ ಕೂಡಾ ಬಹಳ ಸಂತೋಷದಿಂದ ಊರು ಬಿಟ್ಟು ಬಂದಿರುವುದಿಲ್ಲ, ವಲಸೆ ಬಂದವರೆಲ್ಲರೂ ಬಹಳ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಹೇಳುವುದೂ ಸಾಧ್ಯ ಇಲ್ಲ.
 
ವಲಸೆಕೋರರ ಮನಸ್ಸು ಇರುವುದೇ ಹಾಗೆ. ಹುಟ್ಟೂರಿನ ಬೇರು ಕಳಚಿಕೊಂಡು ಬೇರೆ ಊರುಗಳಲ್ಲಿ ನೆಲೆ ಕಂಡುಕೊಂಡಿರುವ ಈ ಜನ ಸದಾ ಅಸುರಕ್ಷತೆಯಿಂದ ಬಳಲುತ್ತಾ ಇರುತ್ತಾರೆ. ಬೀದಿಯಲ್ಲಿ ಅಪರಿಚಿತರು ಸುಮ್ಮನೆ ದಿಟ್ಟಿಸಿ ನೋಡಿದರೂ ಅವರ ಎದೆ ಬಡಿದುಕೊಳ್ಳುತ್ತದೆ. ಒಂಟಿಯಾಗಿ ಹೊರಟಾಗ ಪಕ್ಕದಲ್ಲಿ ನೆರಳೊಂದು ಹಾದುಹೋದರೂ ಅವರು ಬೆಚ್ಚಿಬೀಳುತ್ತಾರೆ. 

ಸಣ್ಣಪುಟ್ಟ ಕಾಯಿಲೆಗಳು ಕೂಡಾ ಅವರನ್ನು ಮಾನಸಿಕವಾಗಿ ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ.  ಮನೆಯಿಂದ ಹೊರಗೆಹೋದವರು ಹಿಂದಿರುಗುವುದು ವಿಳಂಬವಾದ ಕೂಡಲೇ ಕೆಟ್ಟಯೋಚನೆಗಳು ಸುಳಿದಾಡುತ್ತಿರುತ್ತವೆ.
 
ಇದರ ಜತೆಗೆ ಊರಲ್ಲಿರುವ ವಯಸ್ಸಾದ ತಂದೆ-ತಾಯಿ, ಜತೆಯಲ್ಲಿ ಆಡಿ ಬೆಳೆದ ಸೋದರ - ಸೋದರಿಯರು, ಸಲಿಗೆಯಿಂದ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯ ಇರುವಂತಹ ಗೆಳೆಯ-ಗೆಳತಿಯರು..ಹೀಗೆ ಎಲ್ಲರ ನೆನಪುಗಳು ಕಾಡಲಾರಂಭಿಸುತ್ತವೆ. ಇವೆಲ್ಲ ಹೇಳಿ ಅರ್ಥವಾಗುವಂತಹದ್ದಲ್ಲ, ಅನುಭವಿಸಿ ತಿಳಿದುಕೊಳ್ಳಬೇಕು.

ನೂರಾರು ಬಗೆಯ ವಲಸೆಗಳಿದ್ದರೂ ಇದರಲ್ಲಿ ಪ್ರಧಾನವಾಗಿ ಎರಡು ಗುಂಪುಗಳಿವೆ. ಮೊದಲನೆಯದು ದೈಹಿಕಶ್ರಮದ ಉದ್ಯೋಗ ಮಾಡುತ್ತಿರುವವರ ಗುಂಪು, ಎರಡನೆಯದು ಕಚೇರಿಗಳಲ್ಲಿ ಬಿಳಿ ಕಾಲರ್ ಉದ್ಯೋಗದಲ್ಲಿರುವವರ ಗುಂಪು. ಬರಗಾಲ, ನೆರೆಹಾವಳಿ, ಭೂಕಂಪ ಮೊದಲಾದ ಪ್ರಾಕೃತಿಕ ವಿಕೋಪಗಳಿಂದಾಗಿ ನಿರ್ಗತಿಕರಾದವರು, ಜಮೀನ್ದಾರಿ ವ್ಯವಸ್ಥೆಯ ಶೋಷಣೆಗೆ ಸಿಕ್ಕವರು, ಜಾತಿ-ಧರ್ಮ ಆಧಾರಿತ ದ್ವೇಷ ಭುಗಿಲೆದ್ದಾಗ ಪ್ರಾಣಬೆದರಿಕೆಯಿಂದ ಓಡಿ ಬಂದವರೆಲ್ಲ ಮೊದಲ ಗುಂಪಿಗೆ ಸೇರಿದವರು. 

ಇದಕ್ಕೆ ಉತ್ತಮ ಉದಾಹರಣೆ `ಬಿಮಾರು` ಎಂಬ ಹಣೆಪಟ್ಟಿಹಚ್ಚಿಕೊಂಡಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶಗಳದ್ದು. ಭಾರತದಲ್ಲಿ ಈಗಲೂ ಅತಿಹೆಚ್ಚಿನ ಪ್ರಮಾಣದಲ್ಲಿ ವಲಸೆ ನಡೆಯುತ್ತಿರುವುದು ರಾಜ್ಯಗಳಿಂದ. ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಉಳಿದೆರಡು ರಾಜ್ಯಗಳಷ್ಟು ಬರಪೀಡಿತ ಅಲ್ಲದೆ ಇದ್ದರೂ ಅಲ್ಲಿ ಈಗಲೂ ಜೀವಂತವಾಗಿರುವ ಊಳಿಗಮಾನ್ಯ ವ್ಯವಸ್ಥೆಯಿಂದಾಗಿ ಸಮಾನವಾಗಿ ಭೂಮಿ ಹಂಚಿಕೆ ಆಗಿಲ್ಲ. 

ಶೇಕಡಾ 80ರಷ್ಟು ಜನರ ಕೈಯಲ್ಲಿ ಒಟ್ಟು ಭೂಮಿಯ ಶೇಕಡಾ 20ರಷ್ಟಿದ್ದರೆ, ಶೇಕಡಾ 20ರಷ್ಟು ಜನರ ಕೈಯಲ್ಲಿ ಒಟ್ಟುಭೂಮಿಯ ಶೇಕಡಾ 80ರಷ್ಟು ಭೂಮಿ ಇದೆ. ಮೊದಲು ಡಕಾಯಿತರು, ನಂತರದ ದಿನಗಳಲ್ಲಿ ಮಾವೋವಾದಿಗಳು ಹುಟ್ಟಿಕೊಂಡದ್ದಕ್ಕೆ ಇದೂ ಕಾರಣ.

 ಬಿಹಾರಿಗಳ ರೀತಿಯಲ್ಲಿಯೇ ಇತ್ತೀಚೆಗೆ ಹೆಚ್ಚು ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವವರು ಈಶಾನ್ಯ ರಾಜ್ಯದ ಜನರು. ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಕೊಲ್ಕೊತ್ತಾಗಳಂತಹ ಮಹಾನಗರಗಳಲ್ಲಿ ಇವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಷ್ಟ್ರ ಮತ್ತು ರಾಜ್ಯಗಳನ್ನು ಆಳಿದವರ ನಿರಂತರ ರಾಜಕೀಯ ನಿರ್ಲಕ್ಷ, ಕರ್ತವ್ಯಲೋಪ ಮತ್ತು ಆಂತರಿಕವಾದ ಸಾಮಾಜಿಕ ಬಿಕ್ಕಟ್ಟಿನಿಂದಾಗಿ ಕಳೆದ ನಾಲ್ಕೈದು ದಶಕಗಳಿಂದ ಆ ರಾಜ್ಯಗಳಲ್ಲಿನ ಸಾಮಾನ್ಯ ಜನ ಅನೇಕ ಬಗೆಯ ಕಷ್ಟ-ನಷ್ಟಗಳಿಗೆ ಈಡಾಗುತ್ತಾ ಬಂದಿದ್ದಾರೆ.
 
ಕೇಂದ್ರ ಯೋಜನಾ ಆಯೋಗ ನಡೆಸಿರುವ ಸಾಮಾಜಿಕ-ಆರ್ಥಿಕ ಅಧ್ಯಯನಗಳು ಕೂಡಾ ಇದನ್ನೆ ಹೇಳುತ್ತಿವೆ. ಇದರ ಪ್ರಕಾರ  ಕಳೆದ 1996-97ರಿಂದ 2007-2008ರ ಅವಧಿಯ ಹತ್ತುವರ್ಷಗಳಲ್ಲಿ ಕೃಷಿ ಕ್ಷೇತ್ರದ ಸರಾಸರಿ ಅಭಿವೃದ್ಧಿ ದರ ಕರ್ನಾಟಕದಲ್ಲಿ ಶೇಕಡಾ 7.16, ಆಂಧ್ರ ಪ್ರದೇಶದಲ್ಲಿ ಶೇಕಡಾ 6.82 ಮತ್ತು ಗುಜರಾತ್‌ನಲ್ಲಿ ಶೇಕಡಾ 7.46 ಆಗಿದ್ದರೆ, ಅದು ಅಸ್ಸಾಂನಲ್ಲಿ ಶೇಕಡಾ 1.51, ಮಣಿಪುರದಲ್ಲಿ ಶೇಕಡಾ 1.31, ಅರುಣಾಚಲ ಪ್ರದೇಶದಲ್ಲಿ ಶೇಕಡಾ 4.49, ನಾಗಲ್ಯಾಂಡ್‌ನಲ್ಲಿ ಶೇಕಡಾ 4.92, ತ್ರಿಪುರದಲ್ಲಿ ಶೇಕಡಾ 3.74, ಮಿಜೋರಾಂನಲ್ಲಿ ಶೇಕಡಾ 2.85, ಮತ್ತು ಮೇಘಾಲಯದಲ್ಲಿ ಶೇಕಡಾ 5.06 ಆಗಿದೆ. ಈ ರಾಜ್ಯಗಳ ಜತೆ ಸೇರಿಸಬಹುದಾದ ಇನ್ನೊಂದು ರಾಜ್ಯ ಒರಿಸ್ಸಾ. 

ಹತ್ತು ವರ್ಷಗಳ ಅವಧಿಯಲ್ಲಿ ಆ ರಾಜ್ಯದ ಕೃಷಿಕ್ಷೇತ್ರದ ಅಭಿವೃದ್ಧಿ ದರ ಶೇಕಡಾ 2.93ರಲ್ಲಿಯೇ ಇದೆ. ಕೃಷಿಕ್ಷೇತ್ರದ ಜತೆಯಲ್ಲಿ ದುಡಿಯುವ ಕೈಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಕೈಗಾರಿಕಾ ಕ್ಷೇತ್ರದ ಸ್ಥಿತಿ ಭಿನ್ನವಾಗಿಲ್ಲ. 1997-98ರಿಂದ 2007-08ರ ಅವಧಿಯ ಹತ್ತು ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದ ಸರಾಸರಿ ಅಭಿವೃದ್ಧಿ ದರ ಕರ್ನಾಟಕದಲ್ಲಿ ಶೇಕಡಾ 8.36 ಮತ್ತು ಆಂಧ್ರಪ್ರದೇಶದಲ್ಲಿ ಶೇಕಡಾ 6.61 ಆಗಿದ್ದರೆ, ಇದು ಅಸ್ಸಾಂನಲ್ಲಿ ಶೇಕಡಾ 1.51, ಅರುಣಾಚಲಪ್ರದೇಶದಲ್ಲಿ ಶೇಕಡಾ 4.49, ಮಣಿಪುರದಲ್ಲಿ ಶೇಕಡಾ 1.31, 

ಮೇಘಾಲಯದಲ್ಲಿ ಶೇಕಡಾ 5.06, ಮಿಜೋರಾಂನಲ್ಲಿ ಶೇಕಡಾ 2.85, ನಾಗಲ್ಯಾಂಡ್‌ನಲ್ಲಿ ಶೇಕಡಾ 4.92 ಮತ್ತು ತ್ರಿಪುರದಲ್ಲಿ ಶೇಕಡಾ 3.74 ಆಗಿದೆ. ಬಡತನದ ರೇಖೆಗಿಂತ ಕೆಳಗಿರುವವರ ಪ್ರಮಾಣ ಕರ್ನಾಟಕದಲ್ಲಿ ಶೇಕಡಾ 23.6 ಮತ್ತು ಆಂಧ್ರಪ್ರದೇಶದಲ್ಲಿ ಶೇಕಡಾ 21.1 ಆಗಿದ್ದರೆ, ಮಣಿಪುರದಲ್ಲಿ ಶೇಕಡಾ 47.1,ಅಸ್ಸಾಂನಲ್ಲಿ ಶೇಕಡಾ 40, ಅರುಣಾಚಲ ಪ್ರದೇಶದಲ್ಲಿ ಶೇಕಡಾ 26 ಆಗಿದೆ. ಆರೋಗ್ಯ, ಕುಡಿಯುವ ನೀರಿನ ಪೂರೈಕೆ, ಮೂಲಸೌಕರ್ಯ ಇತ್ಯಾದಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಇತರ 

ಸೂಚ್ಯಂಕಗಳಲ್ಲಿಯೂ ಈಶಾನ್ಯ ರಾಜ್ಯಗಳು ದಕ್ಷಿಣದ ರಾಜ್ಯಗಳಿಂದ ಹಿಂದೆ ಉಳಿದಿವೆ.
ಸಾಮಾನ್ಯ ಓದು-ಬರಹಗಳಿಗಷ್ಟೇ ಸೀಮಿತಗೊಳಿಸಿ ಲೆಕ್ಕಹಾಕುವ ಸಾಕ್ಷರತೆಯ ಪ್ರಮಾಣದಲ್ಲಿ ಮಾತ್ರ ಈಶಾನ್ಯರಾಜ್ಯಗಳ ಸಾಧನೆ ಇತರ ಹಲವಾರು ರಾಜ್ಯಗಳಿಗಿಂತ ಉತ್ತಮವಾಗಿದೆ. ಸಾಕ್ಷರರ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಶೇಕಡಾ 74.4 ಮತ್ತು ಕರ್ನಾಟಕದಲ್ಲಿ ಶೇಕಡಾ 75.60 ಆಗಿದೆ. ಅಸ್ಸಾಂ (ಶೇಕಡಾ 73.18) ರಾಜ್ಯವೊಂದನ್ನು ಹೊರತುಪಡಿಸಿ ಮಣಿಪುರ ( ಶೇಕಡಾ 80) ಮಿಜೋರಾಂ (ಶೇಕಡಾ 91.58) 

ನಾಗಲ್ಯಾಂಡ್ (ಶೇಕಡಾ 80.4),ಮೇಘಾಲಯ (ಶೇಕಡಾ 75.58) ಮತ್ತು ತ್ರಿಪುರ (ಶೇಕಡಾ 87.75) ರಾಜ್ಯಗಳು ದಕ್ಷಿಣದ ಕೆಲವು ರಾಜ್ಯಗಳಿಗಿಂತಲೂ ಮುಂದೆ ಇವೆ. ಆದರೆ ಉನ್ನತ ಶಿಕ್ಷಣದ ಕ್ಷೇತ್ರಗಳಲ್ಲಿ ಈಶಾನ್ಯರಾಜ್ಯಗಳು ಹಿಂದೆ ಉಳಿದಿವೆ. ಇದರಿಂದಾಗಿ ಆ ರಾಜ್ಯಗಳಲ್ಲಿ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಈ ಕಾರಣದಿಂದಾಗಿಯೇ ಉನ್ನತ ಶಿಕ್ಷಣವನ್ನರಸಿಕೊಂಡು ಆ ರಾಜ್ಯಗಳ ವಿದ್ಯಾರ್ಥಿಗಳು ದೆಹಲಿ, ಬೆಂಗಳೂರು, ಹೈದರಾಬಾದ್, ಪುಣೆಯಂತಹ ಮಹಾನಗರಗಳಿಗೆ ಬರುತ್ತಿದ್ದಾರೆ.

ಸಾಮಾನ್ಯವಾಗಿ ದೈಹಿಕ ಶ್ರಮದ ಉದ್ಯೋಗ ಮಾಡಲು ವಲಸೆ ಬರುವವರನ್ನು ಮಹಾನಗರಗಳು ತೆರೆದ ಬಾಹುಗಳಿಂದ ಸ್ವಾಗತಿಸುತ್ತವೆ. ನಗರವಾಸಿಗಳ ಚಾಕರಿ ಮಾಡಲು ಕೂಲಿಕಾರ್ಮಿಕರು ಬೇಕಾಗುತ್ತಾರೆ. ಈಗಲೂ ಬಿಹಾರ,ರಾಜಸ್ತಾನ, ಉತ್ತರಪ್ರದೇಶ, ಜಾರ್ಖಂಡ್ ಮೊದಲಾದ ರಾಜ್ಯಗಳಿಂದ ಬರುವ ಕೂಲಿಕಾರ್ಮಿಕರಿಲ್ಲದೆ ಹೋದರೆ ಮಹಾನಗರಗಳಲ್ಲಿನ ಕಟ್ಟಡ ನಿರ್ಮಾಣ ಕೆಲಸ ನಡೆಯಲಾರದು.
 
ವಲಸೆ ಸಮಸ್ಯೆ ಉಲ್ಬಣಗೊಂಡಿರುವುದು  ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ಬಿಳಿಕಾಲರ್ ಉದ್ಯೋಗಗಳನ್ನು ಅರಸುತ್ತಾ  ನಗರಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗತೊಡಗಿದಾಗ. ಮುಂಬೈ, ಕೊಲ್ಕೊತ್ತಾ, ದೆಹಲಿಗಳಿಗೆ ಸೀಮಿತವಾಗಿದ್ದ ಈ ಸಂಘರ್ಷ ಈಗ ಬೆಂಗಳೂರು ಮಹಾನಗರದಲ್ಲಿಯೂ ಕಾಣಿಸಿಕೊಂಡಿದೆ.
 
ಬಿಳಿ ಬಣ್ಣದ, ನೋಡಲು ವಿದೇಶಿಯರಂತೆ ಕಾಣುವ, ಇಂಗ್ಲಿಷ್ ಮಾತನಾಡಬಲ್ಲ ಈಶಾನ್ಯ ರಾಜ್ಯಗಳ ಯುವಕ-ಯುವತಿಯರು ಮಹಾನಗರಗಳ ಆತಿಥ್ಯ, ವೈದ್ಯಕೀಯ, ಪ್ರವಾಸೋದ್ಯಮ, ಸೌಂದರ್ಯವರ್ಧನೆ ಮೊದಲಾದ ಕ್ಷೇತ್ರಗಳ ಅವಶ್ಯಕತೆಗಳಿಗೆ ಹೇಳಿ ಮಾಡಿಸಿದಂತಿದ್ದಾರೆ.
 
ಉದ್ಯೋಗಾವಕಾಶ ಹೆಚ್ಚುತ್ತಿದ್ದಂತೆ ಆ ರಾಜ್ಯಗಳ ವಲಸೆಯ ಪ್ರಮಾಣ ಕೂಡಾ ಹೆಚ್ಚಾಗತೊಡಗಿದೆ. ಈಶಾನ್ಯರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕೂಡಾ ವಲಸೆಹೋಗಲು ಜನರನ್ನು ದೂಡುತ್ತಿರುವ ಹಾಗೆ ಕಾಣುತ್ತಿದೆ. ಇಲ್ಲಿಯವರೆಗೆ ಪೊಲೀಸರು ನಡೆಸಿರುವ ತನಿಖೆಯ ಪ್ರಕಾರ ಕಳೆದ ವಾರ ಇಲ್ಲಿ ನಡೆದ ಘಟನೆಗಳಿಗೆ ವಲಸೆಯ ಸಮಸ್ಯೆ ನೇರವಾಗಿ ಕಾರಣ ಆಗಿರಲಾರದೆಂದು ಅನಿಸಿದರೂ ಎಚ್ಚರಿಕೆಯ ಗಂಟೆಗಳಂತಿರುವ ಇಂತಹ ಘಟನೆಗಳನ್ನು ನಿರ್ಲಕ್ಷಿಸಲಾಗದು.

ಭಾರತದ ಯಾವ ಮೂಲೆಯಲ್ಲಿಯಾದರೂ ಬದುಕುವ ಹಕ್ಕನ್ನು ಸಂವಿಧಾನ ನೀಡಿರುವುದು ನಿಜ. ಈ ಅಸ್ತ್ರವನ್ನೇ ಎತ್ತಿಕೊಂಡು ವಲಸೆಯನ್ನು ಸಮರ್ಥಿಸುವ ರೀತಿಯಲ್ಲಿಯೇ ಭಾಷಾವಾರು ಪ್ರಾಂತ್ಯ ರಚನೆಯ ಆಶಯವನ್ನು ಮುಂದಿಟ್ಟುಕೊಂಡು ವಲಸೆಯನ್ನು ಪ್ರಶ್ನಿಸಲು ಕೂಡಾ ಸಾಧ್ಯ. ಆದರೆ ಇಂತಹ ತರ್ಕ-ಕುತರ್ಕಗಳ ಮೂಲಕ ವಲಸೆಯಿಂದಾಗಿ ಹುಟ್ಟಿಕೊಳ್ಳುವ ನೂರಾರು ಬಗೆಯ ಸಂಘರ್ಷಗಳನ್ನು ತಡೆಯಲಿಕ್ಕಾಗದು. 

ವಲಸೆಯ ಮೂಲ ಕಾರಣ ರಾಜ್ಯಗಳ ಅಸಮಾನ ಅಭಿವೃದ್ಧಿಯಲ್ಲಿದೆ. ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಮತ್ತು ಅಭಿವೃದ್ಧಿಯ ಪ್ಯಾಕೇಜ್‌ಗಳನ್ನು ನೀಡಿದರಷ್ಟೇ ಸಾಲದು. ಆ ರಾಜ್ಯಗಳ ಆಡಳಿತ ಸೂತ್ರ ಹಿಡಿದವರು ಪ್ರಜೆಗಳ ಮೂಲಭೂತ 

ಅವಶ್ಯಕತೆಗಳನ್ನು ಮೂಲ ಸೌಕರ್ಯಗಳನ್ನು ಒದಗಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು, ಇಲ್ಲದೆ ಹೋದರೆ ಹಿಂದುಳಿದ ರಾಜ್ಯಗಳನ್ನು ಆಳುವವರು ಮಾಡಿದ ತಪ್ಪಿಗೆ ನಾವು ಯಾಕೆ ಬೆಲೆ ಕೊಡಬೇಕು ಎಂದು ಅಭಿವೃದ್ಧಿಹೊಂದುತ್ತಿರುವ ರಾಜ್ಯಗಳ ಜನರ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಬಹುದು. 

ವಲಸೆ ಎನ್ನುವುದು ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಿದೆ, ನಿರ್ಲಕ್ಷಿಸಿದರೆ ಅದು ಬೆಂಕಿಯಾಗಿ ಹೊತ್ತಿಕೊಳ್ಳುವ ಅಪಾಯ ಇದೆ.

ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ August 13, 2012


ಮಳೆ ನಿಂತರೂ ಒಂದಷ್ಟು ಹೊತ್ತು ಮಳೆಹನಿ ನಿಲ್ಲುವುದಿಲ್ಲ. ಅಣ್ಣಾ ತಂಡವನ್ನು ಬರ್ಖಾಸ್ತುಗೊಳಿಸಲಾಗಿದ್ದರೂ ಅದು ಪ್ರಾರಂಭಿಸಿದ್ದ ಚಳವಳಿ ಬಗ್ಗೆ ಚರ್ಚೆ-ವಿಶ್ಲೇಷಣೆಗಳು ನಿಂತಿಲ್ಲ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ.

ಮಿಂಚಿಮರೆಯಾಗಿ ಹೋದ ಈ ಚಳವಳಿಯ ಗರ್ಭಪಾತಕ್ಕೆ ಕಾರಣರಾದ ಖಳನಾಯಕರು ಯಾರು ಎನ್ನುವುದನ್ನು ಗುರುತಿಸುವ ಕೆಲಸ ಈಗ ಪ್ರಾರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಎಲ್ಲರೂ ಅಣ್ಣಾತಂಡದ ಪ್ರಮುಖ ಸದಸ್ಯರಾದ ಅರವಿಂದ್ ಕೇಜ್ರಿವಾಲ್, ಕಿರಣ್‌ಬೇಡಿ ಮತ್ತು ಪ್ರಶಾಂತ್ ಭೂಷಣ್ ಮೇಲೆ ಎರಗಿಬಿದ್ದಿದ್ದಾರೆ.

`ಸೃಷ್ಟಿ, ಪಾಲನೆ ಮತ್ತು ಲಯ`ದ ಮೂರೂ ಕೆಲಸಗಳನ್ನು ಈ ತ್ರಿಮೂರ್ತಿಗಳೇ ಮಾಡಿದ್ದು ಎಂದು ಅಣ್ಣಾಬೆಂಬಲಿಗರು ಆರೋಪಿಸತೊಡಗಿದ್ದಾರೆ. ಚಳವಳಿ ಹಾದಿ ತಪ್ಪಲು ಕಾರಣವಾದ ಇವರ ಪಾತ್ರ  ಕ್ಷಮಿಸಿ ಬಿಡುವಂತಹದ್ದು ಖಂಡಿತ ಅಲ್ಲ.

ಆದರೆ ಇವರಷ್ಟೇ ಖಳನಾಯಕರೇ? ಹಾಗೆಂದು ತೀರಾ ಸರಳವಾಗಿ ತೀರ್ಮಾನಿಸಿಬಿಟ್ಟರೆ ಈ ಚಳವಳಿಯ ಸೋಲು-ಗೆಲುವುಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಾರದು.

ಈ ತ್ರಿಮೂರ್ತಿಗಳಷ್ಟೇ ಖಳರು ಅಲ್ಲದೆ ಇದ್ದರೆ ಬೇರೆ ಯಾರು ? ಕೆಲವರು ಅಣ್ಣಾಹಜಾರೆಯವರನ್ನೇ ಹೆಸರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡಾ. ಹಜಾರೆ ಅವರು ಸಜ್ಜನ, ಪ್ರಾಮಾಣಿಕ, ನಿಸ್ವಾರ್ಥಿ, ಸರಳಜೀವಿ ಎನ್ನುವುದರ ಬಗ್ಗೆ ಬಹಳ ಮಂದಿಗೆ ಅನುಮಾನ ಇಲ್ಲ.

ಆದರೆ ಈ ಗುಣಗಳಿಂದಷ್ಟೇ ನಾಯಕನಾಗಲು ಸಾಧ್ಯವೇ ಎನ್ನುವುದು ಪ್ರಶ್ನೆ. ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ನಂತರದಲ್ಲಿ ನಡೆದ ಎರಡು ಪ್ರಮುಖ ಚಳವಳಿಗಳನ್ನು ಮುನ್ನಡೆಸಿದ್ದ ಗಾಂಧೀಜಿ ಮತ್ತು ಜಯಪ್ರಕಾಶ್ ನಾರಾಯಣ್ ಕೇವಲ ಸಜ್ಜನರು ಮತ್ತು ಪ್ರಾಮಾಣಿಕರಾಗಿರಲಿಲ್ಲ.

ಅವರು ಬುದ್ದಿವಂತರೂ ಆಗಿದ್ದರು.  ವಿಸ್ತಾರವಾದ ಓದು, ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು, ಪ್ರವಾಸ ಮತ್ತು ಜನರ ಜತೆಗಿನ ಒಡನಾಟ ಅವರಿಗೆ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ತೀಕ್ಷ್ಣಗ್ರಹಣಶಕ್ತಿಯನ್ನು ತಂದು ಕೊಟ್ಟಿತ್ತು.  ಒಂದು ಅನ್ನದ ಅಗುಳನ್ನು ಮುಟ್ಟಿಯೇ ಪಾತ್ರೆಯಲ್ಲಿದ್ದ ಅನ್ನ ಬೆಂದಿದೆಯೇ ಇಲ್ಲವೇ ಎನ್ನುವುದನ್ನು ಹೇಳುವಷ್ಟು ಸಮಾಜದ ನಾಡಿಮಿಡಿತವನ್ನ್ನು ಬಲ್ಲವರಾಗಿದ್ದರು.

ಜನಪ್ರಿಯತೆಯಲ್ಲಿ ತೇಲಿಹೋಗದೆ ಅದನ್ನು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುವ ನಿರ್ವಹಣಾ ಶಕ್ತಿ ಮತ್ತು ಸಂಯಮ ಅವರಲ್ಲಿತ್ತು. ಜಾತಿ,ಧರ್ಮ,ಪ್ರದೇಶಗಳಲ್ಲಿ ಒಳಗಿಂದೊಳಗೆ ಒಡೆದುಹೋಗಿರುವ ದೇಶದಲ್ಲಿ ಒಂದು ಸಾಮೂಹಿಕ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ಇಂತಹ ಸಾಮರ್ಥ್ಯಬೇಕಾಗುತ್ತದೆ. ಈ ಗುಣಗಳು ಅಣ್ಣಾಹಜಾರೆಯವರಲ್ಲಿ ಇದ್ದಿದ್ದರೆ ಭ್ರಷ್ಟಾಚಾರ ವಿರೋಧಿ ಚಳವಳಿ ನಡುಹಾದಿಯಲ್ಲಿಯೇ ಅಪಘಾತಕ್ಕೆ ಈಡಾಗುತ್ತಿರಲಿಲ್ಲ.

ಅಣ್ಣಾಚಳವಳಿ ಹಾದಿ ತಪ್ಪಲು ಮಾಧ್ಯಮರಂಗ ವಹಿಸಿದ ಖಳನಾಯಕನ ಪಾತ್ರವೇ ಕಾರಣ ಎನ್ನುವವರೂ ಇದ್ದಾರೆ. ಈ ಆರೋಪವನ್ನು ಮಾಡುವ ಅಣ್ಣಾತಂಡದ ಸದಸ್ಯರು ಮತ್ತು  ಬೆಂಬಲಿಗರು  ಕೊನೆದಿನಗಳಲ್ಲಿ ಮಾಧ್ಯಮಗಳ ನಿರ್ಲಕ್ಷ್ಯ ಮತ್ತು ಟೀಕೆಗಳನ್ನು ಉದಹರಿಸುತ್ತಿದ್ದಾರೆ.

ಇದು ಮಾಧ್ಯಮಗಳನ್ನು ಅರ್ಥಮಾಡಿಕೊಳ್ಳಲಾಗದ ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಕೊನೆದಿನಗಳ ನಿರ್ಲಕ್ಷ್ಯಗಿಂತಲೂ  ಅಣ್ಣಾಚಳವಳಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು ಪ್ರಾರಂಭದ ದಿನಗಳ ಅತಿಪ್ರಚಾರ.

ಕಣ್ಣುಕಟ್ಟಿನ ಪ್ರಚಾರ ವೈಖರಿ ಮೂಲಕ ಉಪವಾಸ ಶಿಬಿರದ ಮುಂದೆ ಸೇರಿದ್ದ ಸಾವಿರ ಜನರನ್ನು  ಲಕ್ಷವಾಗಿ, ಲಕ್ಷ ಜನರನ್ನು ಕೋಟಿಯಾಗಿ ಮಾಧ್ಯಮಗಳು ಬಿಂಬಿಸಿದ್ದನ್ನು ನಿಜವೆಂದೇ ನಂಬಿದ ಅಣ್ಣಾತಂಡದ ಸದಸ್ಯರು ದೇಶದ 120 ಕೋಟಿ ಜನ ತಮ್ಮ ಬೆನ್ನಹಿಂದೆ ಇದ್ದಾರೆ ಎಂದು ಭ್ರಮಿಸಿಬಿಟ್ಟರು.
 
ಮೂರೂಹೊತ್ತು ಟಿವಿ ಪರದೆಗಳಲ್ಲಿ, ಪತ್ರಿಕೆಗಳ ಪುಟಗಳಲ್ಲಿ ಕಾಣಿಸುವ ತಮ್ಮ ಮುಖಗಳನ್ನು ಪ್ರೀತಿಸುತ್ತಾ ಆತ್ಮರತಿಗೆ ಜಾರಿಬಿಟ್ಟರು. ಮಾಧ್ಯಮರಂಗ ವಾಣಿಜ್ಯೀಕರಣಗೊಂಡ ಬದಲಾದ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್‌ಗಳು ಹುಟ್ಟು-ಸಾವುಗಳೆರಡನ್ನು ಸಂಭ್ರಮದಿಂದ ಆಚರಿಸುತ್ತದೆ.

ಈ ಭರದಲ್ಲಿ ಸರಿ-ತಪ್ಪು ಇಲ್ಲವೆ ಒಳ್ಳೆಯದು-ಕೆಟ್ಟದನ್ನು ಗುರುತಿಸುವ ನ್ಯಾಯಪ್ರಜ್ಞೆ ಜನಪ್ರಿಯತೆಯ ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುತ್ತದೆ. ಮಾಧ್ಯಮಗಳಿಂದ ಪ್ರಚಾರ ಬಯಸುವವರಿಗೆ ಇದನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಇದ್ದರೆ ಅಣ್ಣಾತಂಡಕ್ಕಾದ ಗತಿಯೇ ಆಗುತ್ತದೆ.

ಮಾಧ್ಯಮಗಳ ಪ್ರಚಾರದ ಊರುಗೋಲಿನ ಬಲದಿಂದ ಎದ್ದುನಿಂತದ್ದು, ಆ ಊರುಗೋಲನ್ನು ಕಿತ್ತುಕೊಂಡ ಕೂಡಲೇ ಕುಸಿದುಬೀಳುತ್ತದೆ. ಹಾಗೆಯೇ ಆಯಿತು.

ಇವರೆಲ್ಲರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ಅಣ್ಣಾಚಳವಳಿಯ ವೈಫಲ್ಯದಲ್ಲಿ ಖಳನಾಯಕರ ಪಾತ್ರವಹಿಸಿದ್ದ ಬಹುಮುಖ್ಯವಾದ ಸಮುದಾಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಅದು ಚಳವಳಿಗೆ ಸೇರುತ್ತಿದ್ದ ಜನ. ಜಯಪ್ರಕಾಶ್ ನಾರಾಯಣ್ ನೇತೃತ್ವದ `ಸಂಪೂರ್ಣ ಕ್ರಾಂತಿ`ಯ ನಂತರದ ದಿನಗಳಲ್ಲಿ ಒಂದು ಚಳವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಎಂದೂ ಭಾಗವಹಿಸಿರಲಿಲ್ಲ.

`ನಾನೇ ಅಣ್ಣಾ` ಎಂದು ತಲೆಪಟ್ಟಿ ಕಟ್ಟಿಕೊಂಡು, ಎದೆಮೇಲೆ ಬರೆಸಿಕೊಂಡು, ಹಗಲುಹೊತ್ತಿನಲ್ಲಿ ಘೋಷಣೆ ಕೂಗುತ್ತಾ, ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಕ್ರೀಯಾಶೀಲರಾಗಿ `ಅರಬ್ ವಸಂತ` ಇನ್ನೇನು ಭಾರತದಲ್ಲಿ ಪ್ರಾರಂಭವಾಗಿಯೇ ಬಿಟ್ಟಿತೆನ್ನುವ ಭ್ರಮಾಲೋಕವನ್ನು ಸೃಷ್ಟಿಸುತ್ತಿದ್ದವರು ಚಳವಳಿಯಲ್ಲಿ ಭಾಗವಹಿಸಿದ್ದ ಜನ.

ಅಣ್ಣಾಹಜಾರೆ ಅವರ ಮೊದಲೆರಡು ಉಪವಾಸಗಳ ಕಾಲದಲ್ಲಿ ಸಕ್ರಿಯವಾಗಿದ್ದ ಈ ಜನಸಮೂಹ ನಂತರದ ಎರಡು ಉಪವಾಸಗಳ ಕಾಲಕ್ಕೆ ಆಸಕ್ತಿಯನ್ನು ಕಳೆದುಕೊಂಡುಬಿಟ್ಟಿತು.

ಹಿಂದಿನಷ್ಟು ಜನ ಸೇರುತ್ತಿಲ್ಲ ಎಂದು ಗೊತ್ತಾದ ಕೂಡಲೇ ಆಡಳಿತಾರೂಢ ಪಕ್ಷ ಚಳವಳಿಗಾರರನ್ನು ಕರೆಸಿ ಮಾತನಾಡಲು ಕೂಡಾ ಹೋಗದೆ ಸುಮ್ಮನಾಯಿತು, ಜನ ಕಡಿಮೆ ಸೇರುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಮಾಧ್ಯಮಗಳು ಕೂಡಾ ಹಿಂದೆ ಸರಿದುಬಿಟ್ಟವು. ಅಣ್ಣಾತಂಡ ಯುದ್ಧಮುಗಿಯವ ಮೊದಲೇ ಶಸ್ತ್ರತ್ಯಾಗ ಮಾಡಲು ಮುಖ್ಯ ಕಾರಣ ತಮ್ಮ ಹಿಂದೆ ಲಕ್ಷಲಕ್ಷ ಸಂಖ್ಯೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸಿದ್ದ ಜನ ದೂರವಾಗಿದ್ದು.

ಈ ಜನ ಹೀಗೆ ಯಾಕೆ ವರ್ತಿಸಿದರು ಎನ್ನುವುದನ್ನು ವಿಶ್ಲೇಷಿಸುವ ಮೊದಲು ಇವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ನಡೆಯುವ ಚಳವಳಿಗಳನ್ನು ಒಂದು ನಿರ್ದಿಷ್ಟವಾದ ಆವರಣದೊಳಗೆ ಸೇರಿಸುವುದು ಕಷ್ಟವಾದರೂ ಸ್ಥೂಲವಾಗಿ ಇವುಗಳನ್ನು ರಾಜಕೀಯ ಮತ್ತು ರಾಜಕೀಯೇತರ  ಎಂದು ಗುರುತಿಸಬಹುದು.

ಈ ವ್ಯಾಖ್ಯಾನ ಕೂಡಾ ಚಳವಳಿಗಳ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ. ರಾಜಕೀಯ ಉದ್ದೇಶದ ಚಳವಳಿಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಉದಾಹರಣೆಗೆ ಕಾಂಗ್ರೆಸ್,ಬಿಜೆಪಿ, ಕಮ್ಯುನಿಸ್ಟ್ ಇತ್ಯಾದಿ ಪಕ್ಷಗಳು ನಡೆಸುವ ಚಳವಳಿಗಳು.

ಇಲ್ಲಿ ಎಲ್ಲವೂ ಪಾರದರ್ಶಕ. ಸಮಸ್ಯೆ ರಾಜಕೀಯೇತರ ಚಳವಳಿಗಳದ್ದು. ನಿರ್ದಿಷ್ಟವಾದ ರಾಜಕೀಯ ಸಿದ್ಧಾಂತವನ್ನು ಹೊಂದಿಯೂ ಚುನಾವಣಾ ರಾಜಕೀಯದಿಂದ ದೂರವಾಗಿರುವ ರಾಜಕೀಯೇತರ ಚಳವಳಿಗಳಿವೆ.

ಇದೇ ರೀತಿ  ರಾಜಕೀಯೇತರ ಚಳವಳಿಗಳಾಗಿ ಪ್ರಾರಂಭಗೊಂಡು ಕ್ರಮೇಣ ನೇರ ಚುನಾವಣೆಯಲ್ಲಿ ಪಾಲ್ಗೊಂಡ ಚಳವಳಿಗಳೂ ಇವೆ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕವೂ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಲ್ಲಿನ ರೈತ ಮತ್ತು ದಲಿತ ಚಳವಳಿಗಳು. ರಾಜಕೀಯ ಚಳವಳಿಗಳಲ್ಲಿ ಭಾಗವಹಿಸಿದವರು ಒಂದು ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಿರುವವರು.

ರಾಜಕೀಯೇತರ ಚಳವಳಿಗೆ ವಿಶಾಲವಾದ ಹರಹು ಇರುತ್ತದೆ. ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಇಲ್ಲವೆ ಭೂಮಿ ಕಳೆದುಕೊಂಡವರು, ಮನೆ ಕಳೆದುಕೊಂಡವರು,ಅನ್ಯಾಯಕ್ಕೀಡಾದವರು...

ಹೀಗೆ ಬೇರೆಬೇರೆ ಜನವರ್ಗವನ್ನು ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ನಡೆಯುತ್ತಿರುತ್ತವೆ. ಈ ಎರಡೂ ಬಗೆಯ ಚಳವಳಿಗಳಿಗೆ ಸ್ಪಷ್ಟವಾದ ಐಡೆಂಟಿಟಿ ಇರುತ್ತದೆ. ಇದರಿಂದಾಗಿ ಚಳವಳಿಯ ನಾಯಕರಿಗೆ ಕೂಡಾ ತಮ್ಮ ಉದ್ದೇಶ ಮತ್ತು ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರುತ್ತದೆ.

 ಆದರೆ ಬಹಳ ದೊಡ್ಡ ಕ್ಯಾನ್‌ವಾಸ್ ಇಟ್ಟುಕೊಂಡು ಪ್ರಾರಂಭವಾದ ಅಣ್ಣಾಚಳವಳಿಗೆ ಒಂದು ನಿರ್ದಿಷ್ಟ ಐಡೆಂಟಿಟಿ ಇರಲಿಲ್ಲ. ಇದು ಈ ಚಳವಳಿಯ ಶಕ್ತಿಯೂ ಹೌದು, ದೌರ್ಬಲ್ಯ ಕೂಡಾ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳದವರು ಮಾತ್ರವಲ್ಲ, ಗುರುತಿಸಿಕೊಂಡವರು ಕೂಡಾ ಎದೆಮೇಲಿದ್ದ ಪಕ್ಷದ ಬ್ಯಾಡ್ಜ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಅಣ್ಣಾಬ್ಯಾಡ್ಜ್ ಧರಿಸಿ ಉಪವಾಸ ಕೂತಿದ್ದರು.

ಭ್ರಷ್ಟಾಚಾರ ಎನ್ನುವುದು ಈ ದೇಶದ ಬಡವನಿಂದ ಹಿಡಿದು ಶ್ರಿಮಂತರವರೆಗೆ, ಅಶಿಕ್ಷಿತರಿಂದ ಹಿಡಿದು ಶಿಕ್ಷಿತರವರೆಗೆ ಎಲ್ಲರನ್ನೂ ಆವರಿಸಿರುವ ಸಮಸ್ಯೆಯಾಗಿರುವ ಕಾರಣ ನಮ್ಮ ಗುರಿ ದೇಶದ 120 ಕೋಟಿ ಜನ ಎಂದು ಅಣ್ಣಾತಂಡ ತಿಳಿದುಕೊಂಡುಬಿಟ್ಟಿತು.

ತಂಡದ ಸದಸ್ಯರು ಎಲ್ಲರನ್ನೂ ಬನ್ನಿಬನ್ನಿ ಎಂದು ಕೈಬೀಸಿ ಕರೆಯಲಾರಂಭಿಸಿದರು. ಹೀಗೆ ಬಂದವರಲ್ಲಿ ಬಹುಸಂಖ್ಯಾತರು ಮಧ್ಯಮವರ್ಗಕ್ಕೆ ಸೇರಿರುವ ನಗರ ಕೇಂದ್ರಿತ, ಉದ್ಯೋಗಸ್ಥ, ಸದಾ ಸುರಕ್ಷತೆಯ ಕಕ್ಷೆಯೊಳಗೆ ಇರಬೇಕೆಂದು ಬಯಸುವ ಮತ್ತು ಯಾವುದೇ ಚಳವಳಿಯಲ್ಲಿ ಭಾಗವವಹಿಸಿ ಕಷ್ಟ-ನಷ್ಟ ಅನುಭವಿಸದವರು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಹುಟ್ಟಿದ ಮತ್ತು ಆರ್ಥಿಕ ಉದಾರೀಕರಣದ ಯುಗದಲ್ಲಿ ಕಣ್ಣುಬಿಟ್ಟ 25-35 ವಯಸ್ಸಿನ ಆಜುಬಾಜಿನ ಈ ಯುವವರ್ಗ  ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡೇ ಮುಂದೆ ಹೆಜ್ಜೆ ಇಡುವವರು. `ಸೋಡಾಗ್ಯಾಸ್` ರೀತಿ ಒಮ್ಮೆಲೇ ಚಿಮ್ಮಿದ ಈ `ಯುವಬೆಂಬಲ`ವನ್ನು ಅಣ್ಣಾತಂಡ ನಂಬಿತು.ನಂಬಿಕೆ ಕೈಕೊಟ್ಟಿತು.

 ಈ ಮಧ್ಯಮ ವರ್ಗ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ರಾಜಕೀಯ ಇಲ್ಲವೆ ಸಾಮಾಜಿಕ ಬದಲಾವಣೆಯಲ್ಲಿ ಭಾಗವಹಿಸಿಲ್ಲ. ಇದನ್ನು ಹೇಳಿದಾಗ ಕೆಲವರು ಅರಬ್‌ರಾಷ್ಟ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಉದಾಹರಣೆ ಕೊಡಬಹುದು. ಅಲ್ಲಿನ ಮಧ್ಯಮವರ್ಗದಿಂದಲೇ ಚಳವಳಿ ಪ್ರಾರಂಭವಾದರೂ ಅದು ಅನ್ಯಾಯಕ್ಕೀಡಾದ ಎಲ್ಲ ವರ್ಗಗಳನ್ನು ಜತೆಯಲ್ಲಿ ಕಟ್ಟಿಕೊಂಡು ಬೆಳೆಯುತ್ತಾಹೋಯಿತು.

ಆ ದೇಶಗಳಲ್ಲಿ ಸರ್ವಾಧಿಕಾರದಿಂದ ನಲುಗಿಹೋದ ಸಾಮಾನ್ಯ ಜನ ಅದರಲ್ಲಿ ಭಾಗವಹಿಸಿದ್ದರು. ಪ್ರಾಣವೊಂದನ್ನು ಬಿಟ್ಟು ಕಳೆದುಕೊಳ್ಳಲು ಬೇರೆ ಏನೂ ಇಲ್ಲದವರು ಅವರು. ಇಲ್ಲಿ ಹಾಗಾಗಲಿಲ್ಲ. ಅಣ್ಣಾಚಳವಳಿ ಎತ್ತಿದ ಭ್ರಷ್ಟಾಚಾರದ ವಿಷಯ ಎಲ್ಲರಿಗೆ ಸಂಬಂಧಿಸಿದ್ದೇ ಆಗಿದ್ದರೂ ಅದರ ತೀವ್ರತೆಯ ಅನುಭವ ಬೇರೆಬೇರೆ ವರ್ಗದ ಜನರಿಗೆ ಬೇರೆಬೇರೆ ರೀತಿಯದಾಗಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎನ್ನುವ ರೈತ, ಹೆಚ್ಚು ಸಂಬಳ ಸಿಗುತ್ತಿಲ್ಲ ಎನ್ನುವ ಕಾರ್ಮಿಕ, ಲಿಂಗತಾರತಮ್ಯ  ನಡೆಯುತ್ತಿದೆ ಎನ್ನುವ ಮಹಿಳೆ, ಜಾತಿತಾರತಮ್ಯದಿಂದಾಗಿ ದೌರ್ಜನ್ಯ ನಡೆಯುತ್ತಿದೆ ಎನ್ನುವ ದಲಿತರು, ಉದ್ಯೋಗ ಸಿಗುತ್ತಿಲ್ಲ ಎನ್ನುವ ಯುವಕರು..ಹೀಗೆ ಸಮಸ್ಯೆಗಳು ಹತ್ತಾರು.

ಇವರ ಕಷ್ಟಗಳ ಪಟ್ಟಿಯಲ್ಲಿ ಭ್ರಷ್ಟಾಚಾರ  ಇದ್ದರೂ ಅದು ಮೊದಲ ಸ್ಥಾನದಲ್ಲಿ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಇವರ ಕಷ್ಟಪರಿಹಾರಕ್ಕೆ ನೆರವಾಗಲೂಬಹುದು. ಆದರೆ ಇದನ್ನು ಯಾರೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ.

ಆದುದರಿಂದ ಅವರಲ್ಲಿ ಹೆಚ್ಚಿನ ಮಂದಿ ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ದೂರವೇ ಉಳಿದುಬಿಟ್ಟರು. ಅವರನ್ನು ಹತ್ತಿರಕ್ಕೆ ಕರೆದುಕೊಂಡು ಬರುವ ಪ್ರಯತ್ನವನ್ನೂ ಯಾರೂ ಮಾಡಲಿಲ್ಲ. ಈ ಕಾರಣದಿಂದಾಗಿಯೇ ಜನಲೋಕಪಾಲರ ನೇಮಕಕ್ಕಾಗಿ ನಡೆದ ಹೋರಾಟ ನಿಜವಾದ ಅರ್ಥದಲ್ಲಿ ಜನಚಳವಳಿ ಆಗಲೇ ಇಲ್ಲ.

ಅಣ್ಣಾಚಳವಳಿ ವಿಫಲಗೊಂಡ ಮಾತ್ರಕ್ಕೆ ಮುಂದಿನ ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದರ್ಥ ಅಲ್ಲ. ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಮರೆಗೆ ಸರಿದು ಪ್ರಾದೇಶಿಕ ಪಕ್ಷಗಳು ವಿಜೃಂಭಿಸುತ್ತಿರುವ ಈಗಿನ ರಾಜಕಾರಣದಿಂದಲೂ ಚಳವಳಿಗಾರರೂ ಕಲಿಯಬೇಕಾದ ಪಾಠ ಇದೆ.

ಬಹುಶಃ ರಾಷ್ಟ್ರಮಟ್ಟದ ಒಂದು ಚಳವಳಿಯನ್ನು ಇನ್ನುಮುಂದೆ ನಡೆಸಿಕೊಂಡು ಹೋಗುವುದು ಸಾಧ್ಯ ಇಲ್ಲವೇನೋ? ಇದರಿಂದ ನಿರಾಶರಾಗಬೇಕಾಗಿಲ್ಲ, ಈಗಲೂ ದೇಶದ ನಾನಾಭಾಗಗಳಲ್ಲಿ ನೀರು,ಭೂಮಿ, ಉದ್ಯೊಗ, ಶಿಕ್ಷಣ,ಆರೋಗ್ಯ,ಆತ್ಮಗೌರವ...ಹೀಗೆ ನಾನಾ ಉದ್ದೇಶದ ಚಳವಳಿಗಳು ತಮ್ಮ ಮಿತಿಯಲ್ಲಿ ನಡೆಯುತ್ತಿರುತ್ತವೆ.

ಪ್ರಜಾಪ್ರಭುತ್ವವನ್ನು ಜೀವಂತವಾಗಿ ಮತ್ತು ಆರೋಗ್ಯಪೂರ್ಣವಾಗಿ ಇಟ್ಟಿರುವ ಈ ಸಣ್ಣಸಣ್ಣ ಚಳವಳಿಗಳೇ ಭವಿಷ್ಯದ ಭರವಸೆಗಳು. ದೊಡ್ಡ ಚಳವಳಿಗಳ ಕಾಲ ಮುಗಿದುಹೋಗಿದೆ.