Thursday, June 7, 2012

ನ್ಯಾಯ ಕೇಳುವವರಿಗೆ ಅನ್ಯಾಯದ ಅರಿವಿರಬೇಕು May 28, 2012

ಬರಪೀಡಿತ ಕರ್ನಾಟಕಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯದ ಸಂಸತ್ ಸದಸ್ಯರು ಸಂಸತ್‌ನಲ್ಲಿ ಗದ್ದಲ ಮಾಡುತ್ತಿದ್ದುದನ್ನು ನೋಡಿದವರಿಗೆ, `ಪ್ರತಿಯೊಬ್ಬರೂ ಬರಗಾಲವನ್ನು ಪ್ರೀತಿಸುತ್ತಾರೆ` ಎಂದು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ದಶಕಗಳ ಹಿಂದೆ ವ್ಯಂಗ್ಯವಾಗಿ ಹೇಳಿದ್ದು ನೆನಪಾಗದೆ ಇರದು.
 
ಲೋಕಸಭೆಯಲ್ಲಿ ಇಂತಹ ಪ್ರಹಸನ ನಡೆದದ್ದು ಇದೇನೂ ಮೊದಲ ಸಲವಲ್ಲ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಅನಾವೃಷ್ಟಿ ಇಲ್ಲವೇ ಅತಿವೃಷ್ಟಿ ಎದುರಾದ ಸಂದರ್ಭದಲ್ಲಿ ಕೇಂದ್ರದಲ್ಲಿ ವಿರೋಧ ಪಕ್ಷದ ಸರ್ಕಾರ ಇದ್ದರೆ ರಾಜ್ಯಸರ್ಕಾರ ಮೊದಲು ಮಾಡುವ ಕೆಲಸ- ಹೆಚ್ಚುವರಿ ಪರಿಹಾರಕ್ಕೆ ಮೊರೆ ಇಡುವುದು. 

ಅದರ ನಂತರ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ಯುವುದು, ಕೊನೆಗೆ `ನಾವು ಕೇಳಿದಷ್ಟು ಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ` ಎಂದು ಆರೋಪಿಸುವುದು.
 
ಅನಾವೃಷ್ಟಿಯಾಗಿದ್ದರೆ ಈ ಜಗಳ ಮುಗಿಯುವ ಹೊತ್ತಿಗೆ ಮಳೆ ಬಂದಿರುತ್ತದೆ, ಅತಿವೃಷ್ಟಿಯಾಗಿದ್ದರೆ ಮಳೆ ನಿಂತಿರುತ್ತದೆ. ಅಷ್ಟರಲ್ಲಿ ಕೇಳಿದವರು ಮತ್ತು ಕೊಡುವವರು -ಇಬ್ಬರೂ ಮರೆತುಬಿಡುತ್ತಾರೆ. ಇದು ದಶಕಗಳಿಂದ ರಾಜ್ಯದ ಜನತೆ ನೋಡುತ್ತಾ ಬಂದ ಪ್ರಕೃತಿ ವಿಕೋಪ ಪರಿಹಾರದ ಪ್ರಹಸನ.

`ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ರಾಜ್ಯ ಸರ್ಕಾರ  ಕಳೆದ ಹತ್ತುವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕೇಳಿರುವ ನೆರವಿನ ಮೊತ್ತ ಸುಮಾರು 28 ಸಾವಿರ ಕೋಟಿ ರೂಪಾಯಿ, ಪಡೆದದ್ದು 2,800 ಕೋಟಿ ದಾಟಿಲ್ಲ` ಎನ್ನುತ್ತಾರೆ ವಿಧಾನಸೌಧದಲ್ಲಿ ಕೂತಿರುವ ಹಿರಿಯ ಅಧಿಕಾರಿಯೊಬ್ಬರು. 

ಈ ಬಾರಿಯೂ ರಾಜ್ಯ ಸರ್ಕಾರ 5,864 ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಕೇಳಿದೆ. ಇಲ್ಲಿಯವರೆಗೆ ಪೈಸೆ ಹಣ ಬಂದಿಲ್ಲ, ಕೇಂದ್ರ ಸರ್ಕಾರ ನೆರವು ನೀಡಿದರೂ ಅದು ಕೇಳಿರುವ ಮೊತ್ತದ ಶೇಕಡಾ ಹತ್ತರಷ್ಟನ್ನು ದಾಟಲಾರದು. 

ಇದನ್ನು ಅನ್ಯಾಯವೆನ್ನುವುದಾದರೆ ಇದಕ್ಕೆ ಕೇಂದ್ರ ಸರ್ಕಾರ ಮಾತ್ರ ಅಲ್ಲ, ನಮ್ಮನ್ನು ಆಳುತ್ತಾ ಬಂದ ರಾಜ್ಯ ಸರ್ಕಾರಗಳು ಮತ್ತು ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳೂ ಕಾರಣ. ಕರ್ನಾಟಕವನ್ನು ಹೊರತುಪಡಿಸಿದರೆ ಉಳಿದ ಯಾವ  ರಾಜ್ಯಕ್ಕೂ ಈ ರೀತಿಯ ಅನ್ಯಾಯ ಆಗಿಲ್ಲ. 

ಯಾಕೆ ಹೀಗಾಗುತ್ತಿದೆ?ರಾಜ್ಯಕ್ಕೆ ಅನ್ಯಾಯವಾಗುತ್ತಿದೆ... ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ..` ಎಂದು ರಾಜ್ಯದ ಸಂಸದರು ಕಳೆದ ವಾರ ಲೋಕಸಭೆಯಲ್ಲಿ ಎದೆ ಬಡಿದುಕೊಂಡರು. 

ಅವರ ಭಾಷಣಕ್ಕೆ ಮುಖ್ಯ ಆಧಾರ- ಸರ್ವಪಕ್ಷಗಳ ನಿಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳು ಬರೆದುಕೊಟ್ಟಿರುವ ಮನವಿಪತ್ರ. ಅದರ ಆಚೆಗೆ ಹೋಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಮೂಲವನ್ನು ಶೋಧಿಸಲು ಯಾರೂ ಹೋಗಲಿಲ್ಲ.
 
ಮೂಲದಲ್ಲಿಯೇ ಅನ್ಯಾಯವನ್ನು ಸರಿಪಡಿಸದೆ ಹೋದರೆ ಪ್ರತಿ ವರ್ಷ ಆರೋಪ-ಪ್ರತ್ಯಾರೋಪಗಳ ಪ್ರಹಸನಕ್ಕೆ ರಾಜ್ಯದ ಜನತೆ ಮೂಕ ಪ್ರೇಕ್ಷಕರಾಗಬೇಕಾಗುತ್ತದೆ ಅಷ್ಟೆ.

ವಿಪತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ನೀಡುವ ಆರ್ಥಿಕ ನೆರವು ಭಾರತದ ಒಕ್ಕೂಟ ವ್ಯವಸ್ಥೆಯೊಳಗಿನ ಆರ್ಥಿಕ ಸಂಬಂಧದ ಪ್ರಮುಖ ಭಾಗ. ಈ ನೆರವಿನ ಪಾಲಿನ ತೀರ್ಮಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವುದು ಕೇಂದ್ರ ಹಣಕಾಸು ಆಯೋಗ. 

ಪ್ರಕೃತಿ ವಿಕೋಪದಂತಹ ಅನಿರೀಕ್ಷಿತ ಸಂಕಷ್ಟಗಳನ್ನು ರಾಜ್ಯ ಸರ್ಕಾರಗಳು ಸ್ವಂತ ಬಲದಿಂದ ಎದುರಿಸುವುದು ಕಷ್ಟವಾದ ಕಾರಣ ಇದಕ್ಕೆ ಕೇಂದ್ರ ಸರ್ಕಾರ ನೆರವಾಗಬೇಕು ಎಂಬ ಎರಡನೆ ಹಣಕಾಸು ಆಯೋಗದ ಶಿಫಾರಸಿನಿಂದಾಗಿ `ಮಾರ್ಜಿನಲ್ ಮನಿ ಸ್ಕೀಮ್` ಜಾರಿಗೆ ಬಂದಿತ್ತು. 

ಹಣಕಾಸು ಆಯೋಗದ ಆಶಯ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿದ್ದು ಒಂಬತ್ತನೆ ಹಣಕಾಸು ಆಯೋಗ ವಿಪತ್ತು ಪರಿಹಾರ ನಿಧಿ (ಸಿಆರ್‌ಎಫ್) ಸ್ಥಾಪಿಸಿದ `ಇಷ್ಟರಿಂದಲೇ ನಮ್ಮ ಕಷ್ಟ ಬಗೆಹರಿಯಲಾರದು, ಇನ್ನೂ ಹೆಚ್ಚಿನ ನೆರವು ಬೇಕು` ಎಂಬ ರಾಜ್ಯ ಸರ್ಕಾರಗಳ ಮೊರೆಗೆ ಓಗೊಟ್ಟ ಹತ್ತನೆ ಹಣಕಾಸು ಆಯೋಗ `ರಾಷ್ಟ್ರೀಯ ವಿಕೋಪ ಪರಿಹಾರ ಸಂಚಿತ ನಿಧಿ` (ಎನ್‌ಸಿಸಿಎಫ್)  ಸ್ಥಾಪಿಸಿತು. 2005ರ ಪ್ರಕೃತಿ ವಿಕೋಪ ಪರಿಹಾರ ಕಾಯ್ದೆ ಜಾರಿಗೆ ಬಂದ ಮೇಲೆ ಈ ಎರಡು ನಿಧಿಗಳ ಹೆಸರು ಬದಲಾಯಿಸಲಾಗಿದೆ. 

ಸಿಆರ್‌ಎಫ್ ಎನ್ನುವುದು `ರಾಜ್ಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎಸ್‌ಡಿಆರ್‌ಎಫ್) ಮತ್ತು  ಎನ್‌ಸಿಸಿಎಫ್ ಎನ್ನುವುದು `ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎನ್‌ಡಿಆರ್‌ಎಫ್) ಆಗಿದೆ. ಹದಿನೈದನೆ ಕೇಂದ್ರ ಹಣಕಾಸು ಆಯೋಗ 2010ರಲ್ಲಿ ಮಾಡಿದ ಈ ಬದಲಾವಣೆಯಿಂದ ಪರಿಹಾರ ನಿಧಿಗಳ ಮೂಲ ರಚನೆ ಮತ್ತು ಉದ್ದೇಶದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ.

ಸಿಆರ್‌ಎಫ್‌ನಂತೆ ಎಸ್‌ಡಿಆರ್‌ಎಫ್‌ಗೆ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರ 75:25ರ ಅನುಪಾತದಲ್ಲಿ ಹಣ ನೀಡುತ್ತದೆ. ಐದು ವರ್ಷಗಳ ಅವಧಿಗೆ ಈ ನಿಧಿಯ ಒಟ್ಟು ಮೊತ್ತ ಮತ್ತು ಅದರಿಂದ ಪ್ರತಿಯೊಂದು ರಾಜ್ಯ ಪಡೆಯುವ ಪಾಲನ್ನು ನಿರ್ಧಾರ ಮಾಡುವುದು ಕೂಡಾ ಹಣಕಾಸು ಆಯೋಗ. 

ರಾಜ್ಯಗಳ ಸಾಮಾನ್ಯ ಹವಾಮಾನ, ಭೂಮಿಯ ಫಲವತ್ತತೆ, ಬರಪೀಡಿತ ಪ್ರದೇಶದ ವಿಸ್ತೀರ್ಣ, ಬರದ ಅವಧಿ, ಬರದ ಮರುಕಳಿಕೆಯ ಪ್ರಮಾಣ, ಪ್ರಕೃತಿ ವಿಕೋಪಗಳ ಇತಿಹಾಸ ಮತ್ತು ಇವೆಲ್ಲಕ್ಕಿಂತಲೂ ಮುಖ್ಯವಾಗಿ ಹಿಂದಿನ ಹತ್ತುವರ್ಷಗಳ ಅವಧಿಯಲ್ಲಿ ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ಖರ್ಚು ಮಾಡಿರುವ ಹಣ-ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಪಾಲನ್ನು ನಿರ್ಧರಿಸಲಾಗುತ್ತದೆ. ವಿಪತ್ತು ಪರಿಹಾರ ನಿಧಿ ಅಸ್ತಿತ್ವಕ್ಕೆ ಬಂದ ದಿನದಿಂದ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ  ಅನ್ಯಾಯವಾಗುತ್ತಾ ಬಂದಿದೆ.  

ಹದಿನೈದನೇ ಹಣಕಾಸು ಆಯೋಗ 2010-2015ರ ಐದು ವರ್ಷಗಳ ಅವಧಿಗೆ `ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ`ಗೆ (ಎಸ್‌ಡಿಆರ್‌ಎಫ್) ನಿಗದಿಪಡಿಸಿರುವ ಹಣದ ಒಟ್ಟು ಮೊತ್ತ 33,580 ಕೋಟಿ ರೂಪಾಯಿ. ಇದರಲ್ಲಿ ಕರ್ನಾಟಕಕ್ಕೆ ನಿಗದಿಪಡಿಸಿದ ಪಾಲಿನ ಹಣ ಕೇವಲ 889.41 ಕೋಟಿ ರೂಪಾಯಿ.

 ಈ ಅನ್ಯಾಯ ಇನ್ನಷ್ಟು ಸ್ಪಷ್ಟವಾಗಬೇಕಾದರೆ ಬೇರೆ ರಾಜ್ಯಗಳ ಪಾಲಿನ ಹಣವನ್ನು ತಿಳಿದುಕೊಳ್ಳಬೇಕು. ಒಟ್ಟು ಬರಪೀಡಿತ ಪ್ರದೇಶದ ಲೆಕ್ಕಾಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿರುವುದು ರಾಜಸ್ತಾನ ಮತ್ತು ಕರ್ನಾಟಕ. ವಿಸ್ತೀರ್ಣದಲ್ಲಿ ರಾಜಸ್ತಾನ ದೊಡ್ಡ ರಾಜ್ಯವಾದರೂ ಜನಸಂಖ್ಯೆಯಲ್ಲಿ ಎರಡೂ ರಾಜ್ಯಗಳು ಸಮನಾಗಿವೆ. ಆದರೆ ಎಸ್‌ಡಿಆರ್‌ಎಫ್‌ನಲ್ಲಿ ರಾಜಸ್ತಾನಕ್ಕೆ ನಿಗದಿಪಡಿಸಿರುವ ಪಾಲು 3,319 ಕೋಟಿ ರೂಪಾಯಿ. 

ಜನಸಂಖ್ಯೆ ಮತ್ತು ವಿಸ್ತಿರ್ಣದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆಯಲ್ಲಿ ಕರ್ನಾಟಕ ಕ್ರಮವಾಗಿ 9 ಮತ್ತು 8ರ ಸ್ಥಾನದಲ್ಲಿದೆ. ಆದರೆ ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟೂ ಇರದ, ಜನಸಂಖ್ಯೆಯಲ್ಲಿ ಮೂರನೆ ಎರಡರಷ್ಟಿರುವ ಅಸ್ಸಾಂನ ಪಾಲು 1457.51 ಕೋಟಿ ರೂಪಾಯಿ. ಅಸ್ಸಾಂಗಿಂತಲೂ ಸಣ್ಣ ರಾಜ್ಯವಾದ ಹರಿಯಾಣದ  ಪಾಲು 1,065 ಕೋಟಿ ರೂಪಾಯಿ. 

ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ಕರ್ನಾಟಕದಷ್ಟೇ ಇರುವ ಮತ್ತು ಅಭಿವೃದ್ದಿ ಹೊಂದಿರುವ ರಾಜ್ಯವೆಂದೇ ಬಿಂಬಿಸಲಾಗುತ್ತಿರುವ ಗುಜರಾತ್‌ನ ಪಾಲು 2,774.54 ಕೋಟಿ ರೂಪಾಯಿ. ಉಳಿದಂತೆ ಎಸ್‌ಡಿಆರ್‌ಎಫ್‌ನಲ್ಲಿ ದೊಡ್ಡ ಪಾಲನ್ನು ಪಡೆದಿರುವ ರಾಜ್ಯಗಳೆಂದರೆ ಆಂಧ್ರಪ್ರದೇಶ (2,811.64 ಕೋಟಿ ರೂಪಾಯಿ), ಒರಿಸ್ಸಾ  (2,163 ಕೋಟಿ ರೂಪಾಯಿ), ತಮಿಳುನಾಡು (1,621.90 ಕೋಟಿ ರೂಪಾಯಿ) ಮೊದಲಾದ ರಾಜ್ಯಗಳು.

ಹಣಕಾಸು ಆಯೋಗ ಸಾಮಾನ್ಯವಾಗಿ ನಿಷ್ಪಕ್ಷಪಾತವಾಗಿ ಹಣ ಹಂಚಿದರೂ ಆ ಕಾಲದ ರಾಜಕೀಯ ಪರಿಸ್ಥಿತಿ, ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಬಲ, ಮುಖ್ಯಮಂತ್ರಿಗಳ ಆಸಕ್ತಿ, ಅಧಿಕಾರಿಗಳ ಕಾರ್ಯಕ್ಷಮತೆ ಮೊದಲಾದ ಅಂಶಗಳ ಪ್ರಭಾವ ಇದ್ದೆ ಇರುತ್ತದೆ. ಇಲ್ಲಿಯೇ ಕರ್ನಾಟಕ ಸೋತುಹೋಗಿರುವುದು. 

ಮೊದಲನೆಯದಾಗಿ, ರಾಷ್ಟ್ರೀಯ ಪಕ್ಷದ ಬಗ್ಗೆಯೇ ಒಲವು ತೋರಿಸುತ್ತಾ ಬಂದಿರುವ ಕರ್ನಾಟಕ ಮೈತ್ರಿಕೂಟದ ರಾಜಕಾರಣದಲ್ಲಿ ದನಿ ಇಲ್ಲದ ದುರ್ಬಲ ರಾಜ್ಯವಾಗಿಯೇ ಉಳಿದುಬಿಟ್ಟಿದೆ. ಎನ್.ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಕಿರುಅವಧಿಯನ್ನು ಹೊರತುಪಡಿಸಿದರೆ ಕಳೆದ ಹದಿಮೂರು ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತವನ್ನು ಕರ್ನಾಟಕ ಕಂಡಿಲ್ಲ. 

ಎನ್‌ಡಿಎ ಸರ್ಕಾರಕ್ಕೆ ಬಾಹ್ಯಬೆಂಬಲ ನೀಡುತ್ತಾ, ಅಂತರಂಗದಲ್ಲಿ ಬ್ಲಾಕ್‌ಮೇಲ್ ಮಾಡುತ್ತಾ ಬಂದ ತೆಲುಗುದೇಶಂನ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂರುವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆ ಮತ್ತು ನೆರವಿನ ರೂಪದಲ್ಲಿ 27,000 ಕೋಟಿ ರೂಪಾಯಿ ಪಡೆದಿದ್ದರು. 

ತಮಿಳುನಾಡಿನ ಒಂದಲ್ಲ ಒಂದು ಪಕ್ಷ ಕೇಂದ್ರದ ಮೈತ್ರಿಕೂಟದಲ್ಲಿ ಸ್ಥಾನ ಪಡೆಯುತ್ತಾ ಬಂದ ಕಾರಣ ಆ ರಾಜ್ಯಕ್ಕೆ ಕೂಡಾ ಅನ್ಯಾಯವಾಗಿಲ್ಲ. ಆದರೆ ಕರ್ನಾಟಕದ ಭಿಕ್ಷಾಪಾತ್ರೆಗೆ ಕೇಂದ್ರ ಸರ್ಕಾರ ಎಸೆಯುತ್ತಾ ಬಂದದ್ದು ಪುಡಿಗಾಸು ಮಾತ್ರ. ಆದರೆ ಈವರೆಗಿನ ಯಾವ ಮುಖ್ಯಮಂತ್ರಿಯೂ ಈ ಅನ್ಯಾಯವನ್ನು ಬಳಸಿಕೊಂಡು ಕೇಂದ್ರದ ವಿರುದ್ದ ರಾಜಕೀಯ ಹೋರಾಟಕ್ಕೆ ಮುಂದಾಗಲೇ ಇಲ್ಲ.

ಎರಡನೆಯದಾಗಿ ರಾಜ್ಯ ಸರ್ಕಾರದ ನಿರಾಸಕ್ತಿ. ಹಣಕಾಸು ಆಯೋಗ ವರದಿ ತಯಾರಿಸುವ ಮುನ್ನ ರಾಜ್ಯ ಸರ್ಕಾರಗಳ ಜತೆ ಅನೇಕ ಸುತ್ತಿನ ಮಾತುಕತೆ ನಡೆಸುತ್ತದೆ. ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್, ತಮಿಳುನಾಡು, ಕೇರಳ ರಾಜ್ಯಗಳು ಮೊದಲಿನಿಂದಲೂ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ತಮ್ಮ ರಾಜ್ಯಗಳ ಪ್ರಕೃತಿ ವಿಕೋಪದ ಪರಿಸ್ಥಿತಿಯ ವಿವರ ನೀಡುವುದರ ಜತೆಯಲ್ಲಿ ರಾಜಕೀಯ ಪ್ರಭಾವವನ್ನೂ ಬಳಸಿಕೊಂಡು ತಮ್ಮ ಪಾಲು ಹೆಚ್ಚುಮಾಡಿಕೊಳ್ಳುತ್ತಾ ಬಂದಿವೆ. 

ಈ ರಾಜ್ಯಗಳು ನೀಡಿರುವ ಮನವಿ ಪತ್ರಗಳ ವಿವರಗಳು ಹಣಕಾಸು ಆಯೋಗದ ವರದಿಗಳಲ್ಲಿವೆ. ಆದರೆ, ಅಲ್ಲೆಲ್ಲೂ ಕರ್ನಾಟಕದ ಹೆಸರಿಲ್ಲ. ಅಂತಹ ಯಾವ ಪ್ರಯತ್ನವನ್ನೂ ಕರ್ನಾಟಕ ಇತ್ತೀಚಿನವರೆಗೆ ಮಾಡಿಲ್ಲ. 

ಮೊದಲ ಬಾರಿಗೆ ಹದಿನೈದನೆ ಹಣಕಾಸು ಆಯೋಗದ ಮುಂದೆ ಹಾಜರಾದ ರಾಜ್ಯದ ಕೆಲವು ಅಧಿಕಾರಿಗಳು  ಸ್ವಂತ ಆಸಕ್ತಿ ವಹಿಸಿ ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸಿದರೂ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಒಮ್ಮೆ ಹಣಕಾಸು ಆಯೋಗ `ಎಸ್‌ಡಿಆರ್‌ಎಫ್`ನ ಹಣದ ಪಾಲು ನಿರ್ಧರಿಸಿದ ನಂತರ ಐದು ವರ್ಷಗಳ ಕಾಲ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ನೆರವನ್ನು `ಎನ್‌ಡಿಆರ್‌ಎಫ್`ನಿಂದ ಮಾತ್ರ ಪಡೆಯಲು ಸಾಧ್ಯ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣ, ಈ ನಿಧಿಗೆ ರಾಜ್ಯ ಸರ್ಕಾರ ತನ್ನ ಪಾಲು ಕೊಡಬೇಕಾಗಿಲ್ಲ . 

ಕೇಂದ್ರದ ಗೃಹ, ಕೃಷಿ ಮತ್ತು ಹಣಕಾಸು ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನೊಳಗೊಂಡ ಉನ್ನತಾಧಿಕಾರದ ತಂಡ  ಮೊದಲು ರಾಜ್ಯ ಸರ್ಕಾರ ಸಲ್ಲಿಸುವ ಮನವಿಪತ್ರವನ್ನು ಪರಿಶೀಲಿಸುತ್ತದೆ. ಅದರ ನಂತರ ಪರಿಸ್ಥಿತಿಯ ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳುಹಿಸಿ ವರದಿಯನ್ನು ಪಡೆಯುತ್ತದೆ. 

ಅದರ ಆಧಾರದಲ್ಲಿ ಹೆಚ್ಚುವರಿ ನೆರವಿನ ಮೊತ್ತವನ್ನು ನಿರ್ಧರಿಸುತ್ತದೆ. ಕೇಂದ್ರ ಮತ್ತು ರಾಜ್ಯದ ನಡುವೆ ಈಗ ನಡೆಯುತ್ತಿರುವ ಜಟಾಪಟಿ ಈ ಹಣಕ್ಕಾಗಿ. ಕರ್ನಾಟಕ ಇಲ್ಲಿಯೂ ಎಡವಿದೆ. ಬರಪರಿಸ್ಥಿತಿ ನಿರ್ಮಾಣವಾಗಿ ತಿಂಗಳುಗಳೇ ಕಳೆದಿದ್ದರೂ ಮಳೆ ಬೀಳುವ ಹೊತ್ತಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ದು ನೆರವಿಗಾಗಿ ರಾಜ್ಯಸರ್ಕಾರ ಮನವಿಪತ್ರ ಅರ್ಪಿಸಿದೆ. 

ಇದನ್ನು ಗೃಹಸಚಿವ ಪಿ.ಚಿದಂಬರಂ ಛೇಡಿಸಿಯೂ ಆಗಿದೆ.ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವನ್ನು ಪಡೆಯಲು ರಾಜ್ಯಸರ್ಕಾರದ ಜತೆಯಲ್ಲಿ ನಿಂತು ಪ್ರಯತ್ನ ನಡೆಸಬೇಕಾದವರು ಸಂಸತ್ ಸದಸ್ಯರು. ಸದನದ ಒಳಗೆ ಮತ್ತು ಹೊರಗೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಆಧಾರ ಸಹಿತವಾಗಿ ಮುಂದಿಟ್ಟು ನ್ಯಾಯ ಪಡೆಯಲು ಸಂಸದರು ನೆರವಾಗಬೇಕು. 

ಆಗಿರುವ ಅನ್ಯಾಯದ ಬಗ್ಗೆಯೇ ಅಜ್ಞಾನಿಗಳಾಗಿರುವವರು ನ್ಯಾಯಕ್ಕಾಗಿ ಹೋರಾಟ ನಡೆಸಲು ಹೇಗೆ ಸಾಧ್ಯ? ಹಾಗಿಲ್ಲದಿದ್ದರೆ ಕೇಂದ್ರ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಒಬ್ಬ ಸಂಸದರಾದರೂ ಬಾಯಿ ಬಿಚ್ಚಬೇಕಿತ್ತಲ್ಲ?

Wednesday, May 23, 2012

ಅರವತ್ತು ತುಂಬಿದೆ ಎಂದು ಸಂಭ್ರಮ ಪಡೋಣವೇ? May 21, 2012

ಮೊದಲ cಯಲ್ಲಿ ಶೇ 58ರಷ್ಟಿದ್ದ ಪದವೀಧರ ಸದಸ್ಯರ ಪ್ರಮಾಣ ಈಗ 79ಕ್ಕೆ ಏರಿದೆ.  ಸ್ನಾತಕೋತ್ತರ ಪದವೀಧರ ಸದಸ್ಯರ ಪ್ರಮಾಣ ಶೇ 18ರಿಂದ 29ಕ್ಕೆ ಹೆಚ್ಚಿದೆ ಮತ್ತು ಕೇವಲ ಏಳನೆ ತರಗತಿವರೆಗೆ ಓದಿದ ಸದಸ್ಯರ ಪ್ರಮಾಣ ಶೇ 52ರಿಂದ 9ಕ್ಕೆ ಇಳಿದಿದೆ. ವಯಸ್ಸಾದವರು ಅನುಭವಿಗಳೂ ಹೌದು ಎನ್ನುವುದಾದರೆ ಲೋಕಸಭೆಯಲ್ಲಿ ಅನುಭವಿಗಳ ಸಂಖ್ಯೆ ಹೆಚ್ಚಾಗಿದೆ.

ಮೊದಲ ಲೋಕಸಭೆಯಲ್ಲಿ 56ಕ್ಕಿಂತ ಹೆಚ್ಚು ವಯಸ್ಸಾದವರ ಪ್ರಮಾಣ ಕೇವಲ ಶೇ 26ರಷ್ಟಿದ್ದರೆ, ಈಗ ಅದು ಶೇ 43ಆಗಿದೆ. 70ಕ್ಕಿಂತ ಹೆಚ್ಚು ವಯಸ್ಸಾದವರ ಪ್ರಮಾಣ ಈಗ ಶೇ 7ರಷ್ಟಿದ್ದರೆ ಮೊದಲ ಲೋಕಸಭೆಯಲ್ಲಿ ಈ ವಯಸ್ಸಿನ ಸದಸ್ಯರೇ ಇರಲಿಲ್ಲ.

ಸಂಸತ್ ಸದಸ್ಯರ `ಹುಡುಗಾಟ` ಕೂಡಾ ಕಡಿಮೆಯಾಗಿದೆ. 40ಕ್ಕಿಂತಲೂ ಕಡಿಮೆ ವಯಸ್ಸಿನ ಸದಸ್ಯರ ಸಂಖ್ಯೆ ಶೇ 26ರಿಂದ 14ಕ್ಕೆ ಇಳಿದಿದೆ. ಮಹಿಳಾ ಮೀಸಲಾತಿ ಜಾರಿಗೆ ಬರದೆ ಇದ್ದರೂ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಶೇ 5ರಿಂದ 15ಕ್ಕೆ ಏರಿದೆ.

ನಮ್ಮ ಈಗಿನ ಸಂಸದರು ಮಾಡುತ್ತಿರುವುದು `ಬಿಟ್ಟಿ ಚಾಕರಿ` ಅಲ್ಲ. ಎರಡು ವರ್ಷಗಳ ಹಿಂದೆಯಷ್ಟೆ ಸಂಸದರು ತಮ್ಮ ಸಂಬಳ ಮತ್ತು ಭತ್ಯೆಯನ್ನು 300 ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ಪ್ರತಿ ತಿಂಗಳು ಮೂಲವೇತನ, ಕ್ಷೇತ್ರ ಭತ್ಯೆ ಮತ್ತು ಕಚೇರಿ ಭತ್ಯೆ ರೂಪದಲ್ಲಿ 1.40 ಲಕ್ಷ ರೂ ಪಡೆಯುತ್ತಿದ್ದಾರೆ. ಇದರ ಜತೆಗೆ ಅಧಿವೇಶನ ನಡೆಯುವ ದಿನಗಳಲ್ಲಿ ದಿನಭತ್ಯೆ 2000 ರೂ ಪಡೆಯುತ್ತಾರೆ.

ವರ್ಷದಲ್ಲಿ 34 ಬಾರಿ ಉಚಿತ ವಿಮಾನ ಪ್ರಯಾಣ, ಪ್ರಥಮದರ್ಜೆ ರೈಲಿನಲ್ಲಿ ಲೆಕ್ಕವಿಲ್ಲದಷ್ಟು ಸಲ ಉಚಿತ ಪ್ರಯಾಣ, ದೆಹಲಿಯಲ್ಲಿ ಉಚಿತ ವಸತಿ, ಉಚಿತ ವಿದ್ಯುತ್,ನೀರು, ದೂರವಾಣಿ ಮತ್ತು ಇಂಟರ್‌ನೆಟ್ ಸೌಲಭ್ಯ ಪಡೆಯುತ್ತಾರೆ.

ಒಂದು ಅಂದಾಜಿನ ಪ್ರಕಾರ ಸಂಸದರ ಮಾಸಿಕ ಸಂಬಳ,ಭತ್ಯೆ ಮತ್ತು ಸೌಲಭ್ಯಗಳ ಒಟ್ಟು ಖರ್ಚು ತಲಾ 5 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಸಂಸದ ಬಡ ಭಾರತೀಯನ ದುಬಾರಿ ಪ್ರತಿನಿಧಿ!

 ಕಳೆದ 60 ವರ್ಷಗಳಲ್ಲಿ ಸಂಸದರ ಶಿಕ್ಷಣ ಮತ್ತು ಅನುಭವದ ಮಟ್ಟ ಏರಿರುವುದು ಮಾತ್ರವಲ್ಲ ಸಂಬಳ-ಭತ್ಯೆ ಕೂಡಾ ಹೆಚ್ಚಿದೆ. ಹಾಗಿದ್ದರೆ  ಹಿಂದಿಗಿಂತಲೂ ಹೆಚ್ಚು ಶಿಕ್ಷಿತ ಮತ್ತು ಅನುಭವಿಗಳೂ ಆಗಿರುವ, ಆರ್ಥಿಕ ಭದ್ರತೆ ಪಡೆದಿರುವ ಸದಸ್ಯರ ಕಾಣಿಕೆ ಲೋಕಸಭೆಯ ಕಾರ್ಯನಿರ್ವಹಣೆಯಲ್ಲಿ ಪ್ರತಿಫಲನಗೊಳ್ಳಬೇಕಿತ್ತಲ್ಲವೇ? ಅಲ್ಲಿನ ಚಿತ್ರ ಹೀಗಿದೆ:

1950ರಲ್ಲಿ ಲೋಕಸಭೆಯ ಕಲಾಪ 127 ದಿನ ಮತ್ತು ರಾಜ್ಯಸಭೆಯ ಕಲಾಪ 93 ದಿನ ನಡೆದಿದ್ದರೆ 2011ರಲ್ಲಿ ಎರಡೂ ಸದನಗಳ ಕಲಾಪ ತಲಾ 73ದಿನಗಳಿಗೆ ಇಳಿದಿದೆ. ಮೊದಲ ಲೋಕಸಭೆಯ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 72 ಮಸೂದೆಗಳಿಗೆ ಅಂಗೀಕಾರ ದೊರೆತಿದ್ದರೆ 15ನೇ ಲೋಕಸಭೆಯಲ್ಲಿ ಇದು 40ಕ್ಕೆ ಇಳಿದಿದೆ.

ಕಳೆದ ಚಳಿಗಾಲದ ಅಧಿವೇಶನದವರೆಗೆ 15ನೇ ಲೋಕಸಭೆ, ನಿಗದಿತ ಸಮಯದ ಕೇವಲ ಶೇಕಡಾ 70ರಷ್ಟು ಭಾಗವನ್ನು ಮಾತ್ರ ಬಳಸಿಕೊಂಡಿದೆ. ಇದು ಕಳೆದ 25 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಅವಧಿ ಕೆಲಸ ಮಾಡಿರುವ ಲೋಕಸಭೆ.

ಯಾಕೆ ಹೀಗಾಗಿದೆ ಎನ್ನುವುದಕ್ಕೆ ಒಂದಷ್ಟು ಮಾಹಿತಿ; ಹದಿನೈದನೆ ಲೋಕಸಭೆಯ 543 ಸದಸ್ಯರು ಚುನಾವಣೆಗೆ ಸ್ವರ್ಧಿಸುವ ಸಂದರ್ಭದಲ್ಲಿ ಸಲ್ಲಿಸಿರುವ ಸ್ವಪರಿಚಯದ ಪ್ರಮಾಣಪತ್ರಗಳ ಅಧ್ಯಯನ ನಡೆಸಿರುವ `ರಾಷ್ಟ್ರೀಯ ಚುನಾವಣಾ ವೀಕ್ಷಣೆ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಯ ಸಂಘಟನೆ`ಯ ವರದಿಯಲ್ಲಿದೆ.

ಇದರ ಪ್ರಕಾರ ಲೋಕಸಭೆಯಲ್ಲಿರುವ 162 ಸದಸ್ಯರ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಯಲ್ಲಿವೆ. ಇವರಲ್ಲಿ 76 ಸದಸ್ಯರ ವಿರುದ್ಧ ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪಗಳಿವೆ.

2004ರ ಲೋಕಸಭೆಯಲ್ಲಿ 128 ಸದಸ್ಯರ ವಿರುದ್ಧ ಮಾತ್ರ ಕ್ರಿಮಿನಲ್ ಆರೋಪಗಳಿದ್ದವು. ಕಳೆದ ಲೋಕಸಭೆಗಿಂತ ಕಳಂಕಿತರ ಪ್ರಮಾಣ ಶೇ 24ರಷ್ಟು ಹೆಚ್ಚಾಗಿದೆ.

ಹತ್ತಕ್ಕಿಂತ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕ್ರಿಮಿನಲ್ ಆರೋಪಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಶಿವಸೇನೆ (ಶೇ 82)ಯಲ್ಲಿ.

ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಸಂಯುಕ್ತ ಜನತಾದಳ (ಶೇ 40), ಸಮಾಜವಾದಿ ಜನತಾಪಕ್ಷ (ಶೇ 39) ಬಿಜೆಪಿ (ಶೇ 38),ಬಿಎಸ್‌ಪಿ (ಶೇ 29)ಡಿಎಂಕೆ  (ಶೇ 22) ಕಾಂಗ್ರೆಸ್ (ಶೇ 21) ಮತ್ತು ಸಿಪಿಎಂ (ಶೇ 19) ಇವೆ. ಆರ್‌ಜೆಡಿಯ ನಾಲ್ವರು ಸದಸ್ಯರಲ್ಲಿ ಮೂರು ಮಂದಿ, ಜೆಡಿ (ಎಸ್)ನ ಮೂವರಲ್ಲಿ ಇಬ್ಬರು, ಎಡಿಎಂಕೆಯ ಒಂಬತ್ತರಲ್ಲಿ ನಾಲ್ವರು ಕ್ರಿಮಿನಲ್ ಆರೋಪಿಗಳು.

ಲೋಕಸಭೆಯ ಕಳಂಕಕ್ಕೆ ದೊಡ್ಡ ಕೊಡುಗೆಯನ್ನು ನೀಡಿರುವುದು ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳು. ಕ್ರಿಮಿನಲ್ ಆರೋಪದ 163 ಸದಸ್ಯರಲ್ಲಿ 75 ಸದಸ್ಯರು ಈ ಮೂರು ರಾಜ್ಯಗಳಿಗೆ ಸೇರಿದವರು. 28 ಸದಸ್ಯರಲ್ಲಿ ಒಂಬತ್ತು ಮಂದಿ ಕ್ರಿಮಿನಲ್ ಆರೋಪಿಗಳನ್ನು ಹೊಂದಿರುವ ಕರ್ನಾಟಕ ಆರನೇ ಸ್ಥಾನದಲ್ಲಿದೆ.
ಹೀಗಿದ್ದರೂ `ಸಂಸದರು ಕೊಲೆಗಡುಕರು` ಎಂದರೆ ಇವರಿಗೆ ಕೋಪ ಉಕ್ಕಿ ಬರುತ್ತದೆ.
ಭಾರತೀಯರ ವಾರ್ಷಿಕ ತಲಾವಾರು ಆದಾಯ 50,000 ರೂಪಾಯಿ.  ಸಂಸತ್ ಎನ್ನುವುದು ಪ್ರಜೆಗಳ ಪ್ರಾತಿನಿಧಿಕ ಸಂಸ್ಥೆ ಎನ್ನುವುದಾದರೆ ಈ ಬಡಭಾರತವನ್ನೇ ಸಂಸತ್ ಪ್ರತಿನಿಧಿಸಬೇಕಲ್ಲವೇ? ಆದರೆ ನಮ್ಮ ಲೋಕಸಭಾ ಸದಸ್ಯರ ಆಸ್ತಿ ವಿವರವನ್ನು ಗಮನಿಸಿದಾಗ ದೇಶದ ತುಂಬಾ ಕೋಟ್ಯಧಿಪತಿಗಳೇ ತುಂಬಿ ತುಳುಕಾಡುತ್ತಿರಬಹುದೆಂಬ ಅಭಿಪ್ರಾಯ ಮೂಡುತ್ತದೆ.
ಹದಿನೈದನೆ ಲೋಕಸಭೆಯಲ್ಲಿರುವ ಕೋಟ್ಯಧಿಪತಿಗಳ ಸಂಖ್ಯೆ 315. ಸದಸ್ಯರ ಸರಾಸರಿ ವಾರ್ಷಿಕ ಆದಾಯ 5.33 ಕೋಟಿ ರೂ. ಹಿಂದಿನ ಲೋಕಸಭೆಯಲ್ಲಿ ಈ ಸಂಖ್ಯೆ 156 ಮತ್ತು ಸರಾಸರಿ ಆದಾಯ 1.86 ಕೋಟಿ ರೂ ಆಗಿತ್ತು. ಅಂದರೆ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ 102ರಷ್ಟು ಮತ್ತು ಸರಾಸರಿ ಆದಾಯದಲ್ಲಿ ಶೇ 186ರಷ್ಟು ಹೆಚ್ಚಳವಾಗಿದೆ.

ಅತಿ ಹೆಚ್ಚಿನ ಕೋಟ್ಯಧಿಪತಿಗಳಿರುವುದು ಶಿವಸೇನೆ (ಶೇ 82) ನಂತರದ ಸ್ಥಾನಗಳಲ್ಲಿ ಕ್ರಮವಾಗಿಯಲ್ಲಿ  ಡಿಎಂಕೆ (ಶೇ 72) ಕಾಂಗ್ರೆಸ್ (ಶೇ 71) ಬಿಜೆಪಿ (ಶೇ 51), ಬಿಎಸ್‌ಪಿ (ಶೇ 62), ಎಸ್‌ಪಿ (ಶೇ 61) ಬಿಜೆಡಿ (ಶೇ 43), ಸಂಯುಕ್ತ ಜನತಾದಳ (ಶೇ 40) ಮತ್ತು ತೃಣಮೂಲ ಕಾಂಗ್ರೆಸ್ ( ಶೇ 37) ಇವೆ. ಸಿಪಿಎಂನ ಹದಿನಾರು ಸದಸ್ಯರಲ್ಲಿ ಒಬ್ಬರು ಮಾತ್ರ ಕೋಟ್ಯಧಿಪತಿ.

ಇಂತಹ ಸಂಸತ್‌ಗೆ ಅರವತ್ತು ತುಂಬಿದ್ದಕ್ಕಾಗಿ ಸಂಭ್ರಮಪಡೋಣವೇ? ಇದು ನಮ್ಮ ರಾಷ್ಟ್ರ ನಿರ್ಮಾಪಕರು ಕನಸು ಕಂಡಿದ್ದ ಸಂಸತ್ ಖಂಡಿತಾ ಆಗಿರಲಾರದು. ಸಂಸತ್ ಎಂದರೆ ಕೇವಲ ಕಲ್ಲು-ಇಟ್ಟಿಗೆಗಳ ಸ್ಥಾವರ ಅಲ್ಲ. ಅದು ದೇಶದ ಸಾರ್ವಭೌಮತೆಯ ಸಂಕಲ್ಪದ ಪ್ರಾತಿನಿಧಿಕ ಸ್ವರೂಪ. ಚುನಾಯಿತ ಪ್ರತಿನಿಧಿಗಳ ಮೂಲಕ ಜನತೆ ಸಂಸದೀಯ ವ್ಯವಸ್ಥೆಯಲ್ಲಿ ಭಾಗವಹಿಸುವ ಒಂದು ಅನನ್ಯ ವ್ಯವಸ್ಥೆ.

ಹಾಗಿದೆಯೇ  ನಮ್ಮ ಸಂಸತ್? ಹಾಗಿದ್ದಾರೆಯೇ ನಮ್ಮ ಸಂಸದರು? ಕೊಲೆ,ಸುಲಿಗೆ,ಅತ್ಯಾಚಾರದ ಆರೋಪಿಗಳು ಮಾತ್ರವಲ್ಲ, ಸದನದೊಳಗೆ ಮತ ಚಲಾಯಿಸಲು ತಮ್ಮನ್ನು ಮಾರಿಕೊಂಡವರು, ಪ್ರಶ್ನೆ ಕೇಳಲು ದುಡ್ಡು ಪಡೆದವರು, ಕ್ಷೇತ್ರಾಭಿವೃದ್ದಿ ನಿಧಿಯ ಹಣವನ್ನೇ ನುಂಗಿ ಹಾಕಿದವರು, ತಮ್ಮ ಉದ್ಯಮದ ಹಿತಾಸಕ್ತಿ ರಕ್ಷಣೆಗಾಗಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡವರು, ...ಹೀಗೆ `ವರ್ಣರಂಜಿತ ಕಳಂಕಿತರು` ಸಂಸತ್‌ನೊಳಗೆ ವಿರಾಜಮಾನರಾಗಿದ್ದಾರೆ!

 ಇವೆಲ್ಲ ಇತ್ತೀಚಿನ ವಿದ್ಯಮಾನಗಳಲ್ಲ. ಕಳಂಕಿತ ಸದಸ್ಯರ ಸಂಖ್ಯೆ ಮತ್ತು ದುವರ್ತನೆಯ ಪ್ರಮಾಣವಷ್ಟೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಬಂದಿದೆ. ಮೊದಲ ಲೋಕಸಭೆಯಲ್ಲಿಯೇ ಬಾಂಬೆ ಬುಲಿಯನ್ ಅಸೋಸಿಯೇಷನ್ ಪರವಾಗಿ ಸಂಸತ್‌ನಲ್ಲಿ ಪ್ರಚಾರ ನಡೆಸಲು ಸದಸ್ಯ ಎಚ್.ಜಿ.ಮುದಗಲ್ ಅವರು ಆರ್ಥಿಕ ಲಾಭ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಅದರ ತನಿಖೆಗಾಗಿ ಪ್ರಧಾನಿ ಜವಾಹರಲಾಲ್ ನೆಹರೂ ನೇಮಿಸಿದ್ದ ಟಿ.ಟಿ.ಕೃಷ್ಣಮಾಚಾರಿ ನೇತೃತ್ವದ ಸಮಿತಿ ಮುದಗಲ್ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ಕಾರಣ ಮುದಗಲ್ ಅವರನ್ನು ಸದನದಿಂದ ಹೊರಹಾಕಲಾಗಿತ್ತು. ಆ ಸಮಿತಿಯಲ್ಲಿದ್ದ ಸದಸ್ಯೆ ದುರ್ಗಾಬಾಯಿ ಸಂಸತ್ ಸದಸ್ಯರಿಗಾಗಿ ಆಚಾರ ಸಂಹಿತೆಯ ಹನ್ನೆರಡು ಸೂತ್ರಗಳನ್ನು ರಚಿಸಿದ್ದರು.

ನಂತರದ ದಿನಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಅಧ್ಯಕ್ಷರ ಎಪ್ಪತ್ತಾರು ಸಮ್ಮೇಳನಗಳು ನಡೆದಿವೆ. ಅವು ನೂರಾರು ಗೊತ್ತುವಳಿಗಳನ್ನು ಅಂಗೀಕರಿಸಿವೆ. ಸ್ವಾತಂತ್ರ್ಯದ ಸ್ವರ್ಣಮಹೋತ್ಸವದ ಸಂದರ್ಭದಲ್ಲಿ ಕರೆಯಲಾದ ವಿಶೇಷ ಅಧಿವೇಶನ ಸಂಸತ್‌ನ ಘನತೆ ಮತ್ತು ಗೌರವದ ರಕ್ಷಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಂಡಿತ್ತು.

 2001ರಲ್ಲಿ ಆಗಿನ ಲೋಕಸಭಾಧ್ಯಕ್ಷ ಜಿ.ಎಂ.ಸಿ.ಬಾಲಯೋಗಿ ಅವರ ಅಧ್ಯಕತೆಯಲ್ಲಿ ನಡೆದ ಸಭಾಧ್ಯಕ್ಷರ ಸಮ್ಮೇಳನ ಆಚಾರಸಂಹಿತೆ ರಚನೆಯ ಜತೆಗೆ ಅದರ ಅನುಷ್ಠಾನಕ್ಕೆ ನಿಯಮಾವಳಿಗಳಲ್ಲಿ ತಿದ್ದುಪಡಿ, ಸದಸ್ಯರ ಹಕ್ಕು ಸಮಿತಿಯನ್ನು ಹಕ್ಕು ಮತ್ತು ನೀತಿ ಸಮಿತಿಯಾಗಿ ಪುನರ‌್ರಚನೆ, ಸಂಸದರ ನಡವಳಿಕೆಗಳ ಬಗ್ಗೆ ಮತದಾರರು ನೀಡುವ ದೂರು ಪರಿಶೀಲಿಸಲು ಆ ಸಮಿತಿಗೆ ಅಧಿಕಾರ-ಇವೇ ಮೊದಲಾದ ಗೊತ್ತುವಳಿಗಳನ್ನು ಅಂಗೀಕರಿಸಿತ್ತು.

ಸದನದ `ಬಾವಿ`ಯೊಳಗೆ ನುಗ್ಗಿ `ಪುಂಡಾಟ` ನಡೆಸುವ ಸದಸ್ಯರನ್ನು ಅಮಾನತುಗೊಳಿಸುವುದರಿಂದ ಹಿಡಿದು, ವರ್ಷಕ್ಕೆ ಕನಿಷ್ಠ 100 ದಿನಗಳ ಕಲಾಪ ನಡೆಸುವುದನ್ನು ಕಡ್ಡಾಯಗೊಳಿಸುವವರೆಗೆ ಹಲವಾರು ಸುಧಾರಣಾ ಕ್ರಮಗಳ ಬಗ್ಗೆ ಕಳೆದ 60 ವರ್ಷಗಳಿಂದ ಸದಸ್ಯರು ಚರ್ಚೆ ನಡೆಸಿದ್ದಾರೆ. ಯಾವ ಗೊತ್ತುವಳಿಗಳಾಗಲಿ, ನೀತಿ ಸಂಹಿತೆಯಾಗಲಿ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ.

ಸುಪ್ರೀಂಕೋರ್ಟ್ ಬೆನ್ನುಹತ್ತಿದ್ದ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅನಿವಾರ್ಯವಾಗಿ ಅಪರಾಧಗಳ ಹಿನ್ನೆಲೆ, ಆಸ್ತಿ ಮತ್ತು ಶಿಕ್ಷಣದ ವಿವರಗಳನ್ನೊಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ವ್ಯವಸ್ಥೆ ಮಾತ್ರ ಇನ್ನೂ ಬಂದಿಲ್ಲ.

ತಮ್ಮ ಸಂಬಳ-ಭತ್ಯೆ ಏರಿಕೆ ಮಸೂದೆಯ ಬಗ್ಗೆ ಚರ್ಚೆಯನ್ನೇ ನಡೆಸದೆ ಅದಕ್ಕೆ ಕ್ಷಣಾರ್ಧದಲ್ಲಿ ಅಂಗೀಕಾರ ನೀಡಲು ಒಂದಿಷ್ಟೂ ನಾಚಿಕೆ ಪಟ್ಟುಕೊಳ್ಳದ ಸಂಸದರು, ದಾರಿ ತಪ್ಪುತ್ತಿರುವ ಸದಸ್ಯರಿಗೆ ಕಡಿವಾಣ ಹಾಕುವ ಕ್ರಮಗಳಿಗೆ ಕಾನೂನಿನ ರೂಪಕೊಡಲು ಒಪ್ಪುತ್ತಿಲ್ಲ. ಇವೆಲ್ಲವನ್ನೂ `ಸ್ವಯಂ ನಿಯಂತ್ರಣ`ದ ಮೂಲಕವೇ ಸಾಧಿಸಬೇಕು ಎನ್ನುತ್ತಾರೆ ಅವರು.

ಸ್ವಯಂ ನಿಯಂತ್ರಣ ಎಂದರೆ ನಿಯಂತ್ರಣವೇ ಇಲ್ಲ ಎನ್ನುವುದು ಎಲ್ಲ ಕ್ಷೇತ್ರಗಳಲ್ಲಿನ  ಇಲ್ಲಿಯವರೆಗಿನ ಅನುಭವ. ಉಳಿದಿರುವುದು ಒಂದೇ ದಾರಿ ಮತದಾರರಾಗಿರುವ ಜನತೆಯೇ ತಮ್ಮ ಪ್ರತಿನಿಧಿಗಳನ್ನು ನಿಯಂತ್ರಿಸುವುದು. ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಇದೂ ಅಸಾಧ್ಯ.

ಸಾಧ್ಯವಾಗಬೇಕಾದರೆ ಜಾತಿ, ದುಡ್ಡು ಮತ್ತು ತೋಳ್ಬಲಗಳ ನಿಯಂತ್ರಣದಿಂದ ಚುನಾವಣಾ ವ್ಯವಸ್ಥೆಯನ್ನು ಬಿಡುಗಡೆಗೊಳಿಸಬೇಕು. ಇದಕ್ಕಾಗಿ ನೆನೆಗುದಿಗೆ ಬಿದ್ದಿರುವ ಚುನಾವಣಾ ಸುಧಾರಣೆಯ ಪ್ರಸ್ತಾವಗಳನ್ನು ಅನುಷ್ಠಾನಕ್ಕೆ ತರಬೇಕು.

ಇದಕ್ಕೆ ಸಂಸದರು ಅವಕಾಶ ಮಾಡಿಕೊಡಬೇಕಲ್ಲ? ಎಂತಹ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ನಾವು. ಇದಕ್ಕಾಗಿಯೇ ಇರಬೇಕು, `ಪ್ರಜೆಗಳು ತಮ್ಮ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ` ಎನ್ನುವುದು.

ಬಿಜೆಪಿ ಗಂಟಲಿನೊಳಗಿನ ಬಿಸಿತುಪ್ಪ ಯಡಿಯೂರಪ್ಪ, ದಿನೇಶ್ ಅಮೀನ್ ಮಟ್ಟು May 14, 2012

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಸುತ್ತಿಕೊಂಡಿರುವ ಜೋತಿಷಿಗಳು ಮತ್ತು ಅವರು ಅಡ್ಡಬೀಳುತ್ತಿರುವ ದೇವರುಗಳ ಮನಸ್ಸಲೇನಿದೆ ಎಂದು ಗೊತ್ತಿಲ್ಲ, ಆದರೆ ಎದುರಾಗಿರುವ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ, ಹೋರಾಟದ ಮೂಲಕ `ಬೂದಿಯಿಂದ ಎದ್ದು ಬರುತ್ತೇನೆ` ಎಂಬ ಛಲವನ್ನು ಯಡಿಯೂರಪ್ಪನವರು ಇಟ್ಟುಕೊಂಡಿದ್ದರೆ ಅದಕ್ಕೆ ಭಾರತೀಯ ಜನತಾ ಪಕ್ಷದಲ್ಲಿ ಅವಕಾಶ ಸಿಗುವುದು ಕಷ್ಟ. ಆ ಪಕ್ಷದಲ್ಲಿ ಅವರಿಗೆ ರಾಜಕೀಯ ಭವಿಷ್ಯ ಇಲ್ಲ.

ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಯಡಿಯೂರಪ್ಪನವರು ತಮ್ಮ ದಾರಿ ನೋಡಿಕೊಳ್ಳಬೇಕಾಗಬಹುದು, ಅದು ಕೂಡಾ ಹೂ ಚೆಲ್ಲಿದ ಹಾದಿ ಅಲ್ಲ, ಅಲ್ಲಿಯೂ ಕಲ್ಲು-ಮುಳ್ಳು, ಹೊಂಡ-ಖೆಡ್ಡಾಗಳಿವೆ. ಯಡಿಯೂರಪ್ಪನವರ ರಾಜಕೀಯ ಪಯಣ ನಿಜಕ್ಕೂ ಕಷ್ಟದಲ್ಲಿದೆ.

ಸಿಬಿಐ ತನಿಖೆ ಪ್ರಾರಂಭವಾದ ಕೂಡಲೇ ರಾಜಕಾರಣಿಯೊಬ್ಬನ ಭವಿಷ್ಯ ಅಂತ್ಯಗೊಳ್ಳಬೇಕಾಗಿಲ್ಲ. ಸೆರೆಮನೆವಾಸ ಮಾಡಿಬಂದ ನಂತರವೂ ಚುನಾವಣೆಯಲ್ಲಿ ಗೆದ್ದು ಮೊದಲಿನ (ಮುಖ್ಯಮಂತ್ರಿಯಾಗಿ ಮಾಡಿದ್ದ) `ಪಾಪ`ಗಳನ್ನು ತೊಳೆಯುವ ರೀತಿಯಲ್ಲಿ ದಕ್ಷತೆಯಿಂದ ರೈಲು ಸಚಿವರಾಗಿ ಹೆಸರು ಮಾಡಿದ ಲಾಲುಪ್ರಸಾದ್ ನಮ್ಮ ಕಣ್ಣಮುಂದೆ ಇದ್ದಾರೆ. ಬಿಹಾರದ ರಾಜಕೀಯದಲ್ಲಿ ಅವರ ಆಟ ಮುಗಿದಿದೆ ಎಂದು ಹೇಳುವ ಹಾಗಿಲ್ಲ. ಜೈಲುವಾಸದ ಹೊರತಾಗಿಯೂ ಕುಮಾರಿ  ಜಯಲಲಿತಾ ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಲಿಲ್ಲವೇ? ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆದ್ದಿರುವ ಕೊಲೆ-ಸುಲಿಗೆಯ ಆರೋಪಿಗಳಿಲ್ಲವೇ? ನೂರೆಂಟು ಹೀನ ಅಪರಾಧಗಳ ಆರೋಪಗಳನ್ನು ತಲೆಮೇಲೆ ಹೊತ್ತಿದ್ದರೂ, ಎಲ್ಲಿಯವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಾನೂನಿನಲ್ಲಿ ಇರುತ್ತದೋ, ಎಲ್ಲಿಯವರೆಗೆ ಅಂಥವರನ್ನು ಬೇರೆ ಬೇರೆ ಕಾರಣಗಳಿಗಾಗಿ (ಜಾತಿ,ದುಡ್ಡು, ತೋಳ್ಬಲ) ಆಯ್ಕೆಮಾಡುವ ಮೂರ್ಖ, ಭ್ರಷ್ಟ, ಅಸಹಾಯಕ ಮತದಾರರು ಇರುತ್ತಾರೋ ಅಲ್ಲಿಯವರೆಗೆ ಯಾವ ಪಾಪಿ ರಾಜಕಾರಣಿಯ ಭವಿಷ್ಯವೂ ಕೊನೆಗೊಳ್ಳುವುದಿಲ್ಲ.

ಬೇರೆಬೇರೆ ಕಾರಣಗಳಿಗಾಗಿ ಕಳಂಕಿತರಾದ ನಾಯಕರ ಪಟ್ಟಿ ನೋಡಿದರೆ `ಪಾಪ ಸುಟ್ಟುಹಾಕಿದ ಬೂದಿ`ಯಿಂದ ಎದ್ದು ಬಂದವರಲ್ಲಿ ಹೆಚ್ಚಿನವರು ಪ್ರಾದೇಶಿಕ ಪಕ್ಷಗಳ ನಾಯಕರು ಎನ್ನುವುದು ಸ್ಪಷ್ಟವಾಗುತ್ತದೆ. ರಾಷ್ಟ್ರೀಯ ಪಕ್ಷಗಳಲ್ಲಿ ಇಂತಹವರಿಗೆ ಅವಕಾಶ ಕಡಿಮೆ. ರಾಜಕೀಯವಾಗಿ ತಮಗೆ ಹೊರೆ ಎಂದು ಅನಿಸಿದ ಕೂಡಲೇ ರಾಷ್ಟ್ರೀಯ ಪಕ್ಷಗಳು ಇಂತಹವರನ್ನು ಮರುಯೋಚನೆ ಮಾಡದೆ ಹೊರಗೆತ್ತಿ ಎಸೆದುಬಿಡುತ್ತವೆ. ಆರೋಪಗಳಿಂದ ಖುಲಾಸೆ ಹೊಂದಿದ ಬಳಿಕ ಪಕ್ಷ ಇಲ್ಲವೇ ಸರ್ಕಾರದಲ್ಲಿ ಸಣ್ಣಪುಟ್ಟ ಹುದ್ದೆಗಳಿಗಷ್ಟೆ ಅವರು ತೃಪ್ತರಾಗಬೇಕು. ಉದಾಹರಣೆಗೆ ಮುಂದೊಂದು ದಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕೆಂದುಕೊಂಡಿದ್ದ ಸುರೇಶ್ ಕಲ್ಮಾಡಿ ಕನಸು ನನಸಾಗುವುದು ಕಷ್ಟ. ಬಂಗಾರು ಲಕ್ಷ್ಮಣ್ ಅವರ ರಾಜಕೀಯ ಕೊನೆಗೊಂಡು ಆಗಲೇ ಹತ್ತುವರ್ಷಗಳಾಗಿ ಹೋಯಿತು. ಇದರ ಅರ್ಥ ರಾಷ್ಟ್ರೀಯ ಪಕ್ಷಗಳು ಬಹಳ ಪ್ರಾಮಾಣಿಕವಾದ, ಮೌಲ್ಯಾಧಾರಿತ ರಾಜಕಾರಣಕ್ಕೆ ಬದ್ದವಾಗಿವೆ ಎಂದಲ್ಲ. ಅದು ರಾಷ್ಟ್ರರಾಜಕಾರಣದ ಅನಿವಾರ್ಯತೆ ಅಷ್ಟೆ. ಇದೇ ಮಾತನ್ನು ಲಾಲುಪ್ರಸಾದ್, ಮಧು ಕೋಡಾ, ಕನಿಮೋಳಿ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರ ಬಗ್ಗೆ ಹೇಳಲಾಗದು. ಇದಕ್ಕಾಗಿಯೇ ಭ್ರಷ್ಟರು ತಾವೇ ಹೈಕಮಾಂಡ್ ಆಗಿರುವ ಪ್ರತ್ಯೇಕ ಪಕ್ಷವೊಂದನ್ನು ಕಟ್ಟಿಕೊಂಡು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ.

ಈ ಹಿನ್ನೆಲೆಯಿಂದ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಭವಿಷ್ಯವನ್ನು ನೋಡಬೇಕಾಗುತ್ತದೆ. ಭಾರತೀಯ ಜನತಾ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುಪಿಎ ವಿರುದ್ದ  ಭ್ರಷ್ಟಾಚಾರವನ್ನು ಮುಖ್ಯ ಅಸ್ತ್ರವಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ಯುಪಿಎ ಸರ್ಕಾರದ 2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಗೇಮ್ಸ, ಆದರ್ಶ ಹೌಸಿಂಗ್ ಸೊಸೈಟಿ ಮೊದಲಾದ ಬಹುಕೋಟಿ ಹಗರಣಗಳನ್ನು ಸಂಸತ್‌ನ ಒಳಗೆ ಮತ್ತು ಹೊರಗೆ ಮತ್ತೆಮತ್ತೆ ಕೆದಕಿ ಜೀವಂತವಾಗಿಡಲು ಪ್ರಯತ್ನಿಸುತ್ತಿರುವುದು ಇದೇ ಕಾರಣಕ್ಕೆ. ಆದರೆ  ಬಿಜೆಪಿಯಿಂದ ತೂರಿಬರುತ್ತಿರುವ ಭ್ರಷ್ಟಾಚಾರ ವಿರೋಧಿ ಬಾಣಗಳನ್ನು ಕಾಂಗ್ರೆಸ್ ಪಕ್ಷ ಕರ್ನಾಟಕದ ಭ್ರಷ್ಟ ಸರ್ಕಾರದ ಗುರಾಣಿಯನ್ನು ಮುಂದೊಡ್ಡಿ ಮುರಿದುಹಾಕುತ್ತಿದೆ. ಯಡಿಯೂರಪ್ಪನವರನ್ನು ಬಗಲಲ್ಲಿ ಕಟ್ಟಿಕೊಂಡು ಭ್ರಷ್ಟಾಚಾರ ವಿರೋಧಿ ರಾಜಕೀಯ ಹೋರಾಟವನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಾರದು. ರಾಜಸ್ತಾನದಲ್ಲಿ ವಸುಂಧರ ರಾಜೇ ಅವರ ಬಂಡಾಯದ ಭೀತಿ, ಬಾಬರಿ ಮಸೀದಿ ಧ್ವಂಸದ ಪ್ರಕರಣದಲ್ಲಿ ಮತ್ತೆ ಎಲ್.ಕೆ.ಅಡ್ವಾಣಿ ವಿರುದ್ದ ತನಿಖೆ ಪುನರಾರಂಭಿಸಲು ಸಿಬಿಐ ತೋರಿಸುತ್ತಿರುವ ಆಸಕ್ತಿ, ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಲಂಚ ಹಗರಣದಲ್ಲಿ ಜೈಲಿಗೆ ಹೋಗಿರುವಂತಹ ಮುಜುಗರದ ಪರಿಸ್ಥಿತಿ-ಇವೆಲ್ಲವೂ ಬಿಜೆಪಿಯನ್ನು ನಿತ್ರಾಣಗೊಳಿಸಿದೆ.
ಇಂತಹ ಸ್ಥಿತಿಯಲ್ಲಿ ಭ್ರಷ್ಟನಾಯಕನೊಬ್ಬನನ್ನು ತಲೆಮೇಲೆ ಕೂರಿಸಿಕೊಂಡು ಮುನ್ನಡೆಯುವಷ್ಟು ತ್ರಾಣ ಆ ಪಕ್ಷಕ್ಕೂ ಇದ್ದ ಹಾಗಿಲ್ಲ.  ತನ್ನ ಸುತ್ತ ಸೃಷ್ಟಿಸಿಕೊಂಡಿರುವ ಹುಸಿ ನೈತಿಕತೆಯ ಪ್ರಭಾವಳಿ ಯಡಿಯೂರಪ್ಪನವರಿಂದಾಗಿ ಮಂಕಾಗಿ ಹೋಗುತ್ತಿರುವುದು ಸಂಘ ಪರಿವಾರಕ್ಕೂ ಇರುಸುಮುರುಸು ಉಂಟುಮಾಡುತ್ತಿದೆ. ಆದ್ದರಿಂದ ಪಕ್ಷ ಮತ್ತು ಪರಿವಾರ ಎರಡಕ್ಕೂ ಯಡಿಯೂರಪ್ಪ ಗಂಟಲಲ್ಲಿರುವ ಬಿಸಿತುಪ್ಪ.

ಯಡಿಯೂರಪ್ಪ ವಿರುದ್ಧದ ಸಿಬಿಐ ತನಿಖೆ ಐದಾರು ತಿಂಗಳಲ್ಲಿ ಮುಗಿದುಹೋಗುವಂತಹದ್ದಲ್ಲ, ಹಾಗೆ ಮುಗಿದುಹೋಗಲು ಕೇಂದ್ರ ಸರ್ಕಾರ ಬಿಡಲಾರದು. ಇದನ್ನು ಮುಂದಿನ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯವರೆಗೂ ಎಳೆದುಕೊಂಡು ಹೋಗಲು ಅಧಿಕಾರವನ್ನು ಉಪಯೋಗಿಸಿಕೊಂಡೋ, ದುರುಪಯೋಗಮಾಡಿಕೊಂಡೋ ಕಾಂಗ್ರೆಸ್ ಖಂಡಿತ ಪ್ರಯತ್ನಿಸಲಿದೆ. ಬಂಗಾರು ಲಕ್ಷ್ಮಣ್ ಅವರಂತೆ ಯಡಿಯೂರಪ್ಪನವರು ತಮ್ಮ ಪಾಡಿಗೆ ಮೂಲೆಯಲ್ಲಿದ್ದು ಬಿಟ್ಟರೆ ಸಮಸ್ಯೆ ಇಲ್ಲ. ಹಾಗೆ ಇರುವುದು ಅವರ ಜಾಯಮಾನ ಅಲ್ಲ.

ಮುಖ್ಯಮಂತ್ರಿ ಇಲ್ಲವೇ ಪಕ್ಷದ ಅಧ್ಯಕ್ಷ ಯಾರೇ ಆಗಲಿ, ಪ್ರಮುಖ ನಿರ್ಧಾರಗಳು ಮಾತ್ರ ತಮ್ಮ ಮನೆಯ ಉಪಹಾರದ ಮೇಜಿನಲ್ಲಿಯೇ ನಡೆಯಬೇಕು ಎಂಬ ಹಟಮಾರಿತನವನ್ನು ಹೊಂದಿರುವವರು ಯಡಿಯೂರಪ್ಪ. ಪಕ್ಷ ಮತ್ತು ಸರ್ಕಾರದ ಅತ್ಯುನ್ನತ ಹುದ್ದೆಗಳನ್ನು ಏರುವುದು ಸಾಧ್ಯ ಇಲ್ಲ ಎಂದಾದರೆ ಅಲ್ಲಿ ತಮ್ಮ ಕೈಗೊಂಬೆಗಳು ಇರಬೇಕು ಎಂದು ಬಯಸುತ್ತಾರೆ ಯಡಿಯೂರಪ್ಪ. ಬಿಜೆಪಿ ಇದನ್ನು ಒಪ್ಪಿಕೊಳ್ಳಬಹುದೇ?

ಬಿಜೆಪಿ ಮುಂದೆ ಇರುವ ಇನ್ನೊಂದು ದಾರಿ ಯಡಿಯೂರಪ್ಪನವರನ್ನು ಒಂದೋ ಪಕ್ಷದಿಂದ ಉಚ್ಚಾಟಿಸುವುದು ಇಲ್ಲವೇ ಅವರ ಯಾವ ಬೇಡಿಕೆಗಳನ್ನೂ ಈಡೇರಿಸಲು ಹೋಗದೆ ಅವರಾಗಿಯೇ ಪಕ್ಷ ಬಿಟ್ಟು ಹೋಗುವಂತೆ ಮಾಡುವುದು. ಅಲ್ಲಿಯೂ ಅಪಾಯ ಇದೆ. ಮುಖ್ಯಮಂತ್ರಿಯಾದ ನಂತರ ಯಡಿಯೂರಪ್ಪನವರು ತಮ್ಮ ನಡೆ-ನುಡಿ ಮತ್ತು ಅಧಿಕಾರದ ಮೂಲಕ ತಮ್ಮನ್ನು ಲಿಂಗಾಯತ ನಾಯಕರಾಗಿ ಬಿಂಬಿಸಿಕೊಳ್ಳುವುದರಲ್ಲಿ  ಯಶಸ್ವಿಯಾಗಿದ್ದಾರೆ. ಜಾತಿ ಕಾರಣಕ್ಕಾಗಿ ಬೆಂಬಲ ನೀಡುವ ಮತದಾರರು ತಮ್ಮ ಆಯ್ಕೆಯ ನಾಯಕನ ವಿರುದ್ದದ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎನ್ನುವುದು ಚುನಾವಣೆಯ ಇತಿಹಾಸವನ್ನು ನೋಡಿದರೆ ಮನವರಿಕೆಯಾಗುತ್ತದೆ. ಉಚ್ಚಾಟನೆ ಇಲ್ಲವೇ ಬಂಡಾಯದ ಮೂಲಕ ಪಕ್ಷ ಬಿಟ್ಟು ಹೋದವರಿಗೆ ಗೆಲ್ಲುವ ಸಾಮರ್ಥ್ಯ ಇರದೆ ಇದ್ದರೂ ತಾವು ಹಿಂದೆ ಇದ್ದ ಪಕ್ಷವನ್ನು ಸೋಲಿಸುವ ಶಕ್ತಿ ಇರುತ್ತದೆ. ಯಡಿಯೂರಪ್ಪನವರ ವಿಷಯದಲ್ಲಿಯೂ ಇದು ಸತ್ಯ.  ಅವರು ಪಕ್ಷ ಬಿಟ್ಟುಹೋಗಿ ಸ್ವಂತ ಬಲದಿಂದ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಿ ಗೆದ್ದು ಬಂದು ಮುಖ್ಯಮಂತ್ರಿಯಾಗಲಾರರು, ಆದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ಮಾಡಬಲ್ಲರು.

ಯಡಿಯೂರಪ್ಪನವರ ಭವಿಷ್ಯದ ಹಾದಿ ಕೂಡಾ ನಿರಾತಂಕವಾಗಿಲ್ಲ. ಪಕ್ಷದಲ್ಲಿಯೇ ಉಳಿದು ಒಂದಷ್ಟು ದಿನ ಬಾಯಿಮುಚ್ಚಿಕೊಂಡು ನ್ಯಾಯಾಂಗದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅವರ ಮುಂದಿನ ಒಂದು ಹಾದಿ. ಇದು ವೈಯಕ್ತಿಕವಾಗಿ ಸುರಕ್ಷಿತ ಹಾದಿ. ಇದರಲ್ಲಿ ಬಹಳ ಅಪಾಯಗಳು ಕಡಿಮೆ. ಆದರೆ ಯಡಿಯೂರಪ್ಪ ಆ ರೀತಿ ತೆಪ್ಪಗೆ ಕೂರುವವರಲ್ಲ. ಆಡಳಿತ ಪಕ್ಷದಲ್ಲಿದ್ದರೂ ಅವರು ವಿರೋಧ ಪಕ್ಷದ ನಾಯಕರಂತೆ ಗದ್ದಲ ಉಂಟು ಮಾಡುತ್ತಿದ್ದವರು. ಅವರು ಸುಮ್ಮನಿದ್ದರೂ ಅವರ ಸುತ್ತಮುತ್ತ ಇರುವ ಬೆಂಬಲಿಗರು ಸುಮ್ಮನಿರಲು ಬಿಡಲಾರರು.

ಅಂತಹ ಸಂದರ್ಭದಲ್ಲಿ ಅವರ ಮುಂದೆ ಇರುವ ಇನ್ನೊಂದು ದಾರಿ ಈಗಿನ ಪಕ್ಷ ತ್ಯಜಿಸಿ ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯವಾಗಿ ಸಕ್ರಿಯವಾಗಿ ಇರುವುದು. ಇದರಲ್ಲಿ ಅಪಾಯಗಳು ಹೆಚ್ಚು. ಮೊದಲನೆಯದಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಎಂದೂ ಯಶಸ್ಸು ಕಂಡಿಲ್ಲ. ಇದಕ್ಕೆ ಯಡಿಯೂರಪ್ಪನವರ ಜಿಲ್ಲೆಯವರೇ ಆಗಿದ್ದ ಎಸ್.ಬಂಗಾರಪ್ಪನವರ ರಾಜಕೀಯ ಜೀವನವೇ ಉತ್ತಮ ನಿದರ್ಶನ. ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ಬಂಡೆದ್ದು ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷ ಶೇ 7.5ರಷ್ಟು ಮತ ಮತ್ತು ಹತ್ತು ಶಾಸಕರನ್ನು ಗಳಿಸಲಷ್ಟೇ ಸಾಧ್ಯವಾಗಿತ್ತು. ಚುನಾವಣೆಯ ನಂತರ ಆ ಶಾಸಕರು ಕೂಡಾ ಬಂಗಾರಪ್ಪನವರ ಜತೆ ಉಳಿಯಲಿಲ್ಲ. ಬಂಗಾರಪ್ಪನವರಿಗೆ ಇಲ್ಲದ ಜಾತಿ ಬೆಂಬಲದ ಯಡಿಯೂರಪ್ಪನವರಿಗೆ ಇದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಇದೇ ಜಾತಿ ಬಲದಿಂದ ದಕ್ಷಿಣ ಕರ್ನಾಟಕದಲ್ಲಿ ಎಚ್.ಡಿ.ದೇವೇಗೌಡರು ಮಾಡುತ್ತಿರುವ ರಾಜಕೀಯವನ್ನು ಉತ್ತರಕರ್ನಾಟಕದಲ್ಲಿ ತಾವೂ ಮಾಡಬಹುದು ಎಂಬ ಲೆಕ್ಕಚಾರವೂ ಅವರ ತಲೆಯಲ್ಲಿ ಸುಳಿದಾಡುತ್ತಿರಬಹುದು.

 ಆದರೆ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಲು ಬೇಕಾದಷ್ಟು ಸಮಯ, ತಾಳ್ಮೆ, ಜಾಣ್ಮೆ ಯಡಿಯೂರಪ್ಪನವರಲ್ಲಿದೆಯೇ ಎನ್ನುವುದು ಪ್ರಶ್ನೆ. ಅವರು ಎದುರಿಸಬೇಕಾಗಿರುವ ಸಿಬಿಐ ತನಿಖೆ ಯಾವ ಹಾದಿ ಹಿಡಿಯಲಿದೆ ಎನ್ನುವುದನ್ನು ಹೇಳಲಾಗದು.

ಯಡಿಯೂರಪ್ಪನವರ ವಿರುದ್ದದ ಆರೋಪಗಳು ಮತ್ತು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ವ್ಯಕ್ತಪಡಿಸಿರುವ ಗಂಭೀರತೆಯನ್ನು ನೋಡಿದರೆ ಅವರ ಬಂಧನ ಅನಿವಾರ್ಯವಾಗಬಹುದು. ತನಿಖೆ ಅವರ ಕುಟುಂಬದ ಸದಸ್ಯರ ಬೆನ್ನು ಕೂಡಾ ಬಿಡಲಾರದು. ಇದರಿಂದಾಗಿ  ಆರೋಪಗಳಿಂದ ಮುಕ್ತವಾಗಿ ಹೊರಬರಲು ನಡೆಸುವ ಕಾನೂನಿನ ಹೋರಾಟದಲ್ಲಿಯೇ ಅವರು ಮುಳುಗಿಬಿಡುವ ಸಾಧ್ಯತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ನಡೆಸಿಕೊಂಡು ಹೋಗುವವರು ಯಾರು?

ಯಡಿಯೂರಪ್ಪನವರೊಬ್ಬರನ್ನು ಹೊರತುಪಡಿಸಿದರೆ ಜತೆಯಲ್ಲಿರುವ ಯಾವ ನಾಯಕರಲ್ಲಿಯೂ ಅವರ ಪರವಾಗಿ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ವರ್ಚಸ್ಸು ಇಲ್ಲವೇ ಸಾಮರ್ಥ್ಯ ಇದ್ದ ಹಾಗಿಲ್ಲ. ಈಗ ರಾಜೀನಾಮೆ ಕೊಟ್ಟವರೆಲ್ಲರೂ ಯಡಿಯೂರಪ್ಪನವರು ಪಕ್ಷ ಬಿಟ್ಟುಹೋದರೆ ಅವರ ಹಿಂದೆ ಹೋಗುತ್ತಾರೆ ಎನ್ನುವುದೂ ಖಾತರಿ ಇಲ್ಲ. ಇವೆಲ್ಲವೂ ತಿಳಿಯದಷ್ಟು ಯಡಿಯೂರಪ್ಪನವರು ದಡ್ಡರಿರಲಾರರು.

ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಕೋಪದ ಕೈಗೆ ಬುದ್ದಿ ಕೊಟ್ಟರೆ ಆಗುವುದೆಲ್ಲವೂ ಅನಾಹುತ. ಅವರ ಮೇಲಿನ ಆರೋಪಗಳಿಗಾಗಲಿ, ಸಿಬಿಐ ಅವರ ವಿರುದ್ಧ ನಡೆಸಲಿರುವ ತನಿಖೆಗಾಗಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕಾರಣರಲ್ಲ. 

ಗೌಡರು ಕೆಳಗಿಳಿದು ಯಡಿಯೂರಪ್ಪನವರ ಆಪ್ತರು ಮುಖ್ಯಮಂತ್ರಿಯಾದರೂ ಅವರು ಈಗ ಎದುರಿಸುತ್ತಿರುವ ಯಾವ ಕಷ್ಟವೂ ಪರಿಹಾರವಾಗಲಾರದು. ಹೀಗಿದ್ದರೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮುಖ್ಯಮಂತ್ರಿಯ ತಲೆದಂಡಕ್ಕಾಗಿ ಪಟ್ಟು ಹಿಡಿದಿದ್ದಾರೆ. ಇದು ಯಡಿಯೂರಪ್ಪ ಶೈಲಿ. ಅವರು ಸಿಟ್ಟಿಗೆ ಹೆಸರಾದವರೇ ಹೊರತು, ಸಹನೆ-ಸಂಯಮಕ್ಕಲ್ಲ. ತನ್ನ ಒಂದು ಕಣ್ಣುಹೋದರೂ ಸರಿ, ಎದುರಾಳಿಯ ಎರಡೂ ಕಣ್ಣು ಹೋಗಬೇಕೆಂದು ಹೇಳುವಂತಹ ಹಟಮಾರಿ ಅವರು.

ಈ ರೀತಿ ಹತಾಶೆಗೀಡಾಗಿರುವ ವ್ಯಕ್ತಿ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರೇನಾದರೂ ಪಕ್ಷದಿಂದ ಹೊರನಡೆದು ಸ್ವಂತ ಪಕ್ಷ ಕಟ್ಟುವ ನಿರ್ಧಾರಕ್ಕೆ ಬಂದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳಲಿರುವುದು ಖಚಿತ. ಅದಕ್ಕಿಂತಲೂ ಹೆಚ್ಚು ಅನಾಹುತವಾಗಲಿರುವುದು ಅವರು ಬಾಯಿ ಬಿಟ್ಟಾಗ. ಯಡಿಯೂರಪ್ಪನವರು ಅಕ್ರಮಗಳಲ್ಲಿ ಭಾಗಿಯಾಗಿರುವುದು ನಿಜವೇ ಆಗಿದ್ದರೆ ತನ್ನನ್ನು ಮೌಲ್ಯನಿಷ್ಠ ರಾಜಕೀಯ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿರುವ ಅವರ ಪಕ್ಷ ಏನು ಮಾಡುತ್ತಿತ್ತು? ಅದರ ರಾಷ್ಟ್ರೀಯ ಅಧ್ಯಕ್ಷರು ಏನು ಮಾಡುತ್ತಿದ್ದರು, ಶಿಕ್ಷೆ ಅವರೊಬ್ಬರೇ ಯಾಕೆ ಅನುಭವಿಸಬೇಕು? ಆದರೆ ಆಗುತ್ತಿರುವುದೇನು? ಯಡಿಯೂರಪ್ಪನವರ ಕೊರಳಿಗೆ ಸಿಬಿಐ ತನಿಖೆಯ ಕುಣಿಕೆ, ಕರ್ನಾಟಕದ ಬಿಜೆಪಿಯ ಎಲ್ಲ ಕರ್ಮಕಾಂಡಗಳಿಗೆ ಮೂಕಪ್ರೇಕ್ಷಕರಾಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗುವ ಅವಕಾಶದ ಉಡುಗೊರೆ. ಇದೆಂತಹ ನ್ಯಾಯ?

Saturday, May 12, 2012

ರಾಜಕೀಯದ ಕೆಸರಲ್ಲಿ ರಾಷ್ಟ್ರಪತಿ ಸ್ಥಾನ May 07, 2012

ರಾಷ್ಟ್ರಪತಿ ಸ್ಥಾನಕ್ಕೆ ಕಳೆದೆರಡು ಅವಧಿಗಳಲ್ಲಿ (2002 ಮತ್ತು 2007) ನಡೆದ ಚುನಾವಣೆಯನ್ನು ಸಮೀಪದಿಂದ ಗಮನಿಸಿದವರಲ್ಲಿ ಯಾರಿಗೂ ಈಗ ಚರ್ಚೆಯ ಅಂಗಳದಲ್ಲಿ ಸುಳಿದಾಡುತ್ತಿರುವ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಭರವಸೆ ಹುಟ್ಟಲಾರದು.
 
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇಲ್ಲವೇ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು  ರಾಷ್ಟ್ರಪತಿ ಭವನ ಪ್ರವೇಶಿಸಬಹುದು ಎನ್ನುವ ವಾತಾವರಣವೇ ಈಗ ಇದೆ. ಇವರಲ್ಲೊಬ್ಬರು ಅದೃಷ್ಟವಂತರು ಆಗಲೂಬಹುದು, ಇಲ್ಲವೇ ಕಳೆದೆರಡು ಅವಧಿಗಳಲ್ಲಿ ನಡೆದಂತೆ ಕೊನೆ ಗಳಿಗೆಯಲ್ಲಿ ಯಾವುದಾದರೂ `ಕಪ್ಪು ಕುದುರೆ` ಸ್ಪರ್ಧಾಕಣ ಪ್ರವೇಶಿಸಲೂಬಹುದು.

2002ರ ಜನವರಿ ತಿಂಗಳಲ್ಲಿ ಸಿಪಿಎಂ ನಾಯಕ ಸೋಮನಾಥ ಚಟರ್ಜಿ ಅವರು ವಿರೋಧ ಪಕ್ಷಗಳ ನಾಯಕರನ್ನು ಒಬ್ಬರಾದ ಮೇಲೆ ಒಬ್ಬರಂತೆ ಮನೆಗೆ ಆಹ್ವಾನಿಸತೊಡಗಿದ್ದರು. ಸ್ವಭಾವತಃ ತಿಂಡಿಪೋತರಾದ ಬಂಗಾಳಿಗಳಿಗಿಂತ ಅಲ್ಲಿನ ರಾಜಕಾರಣಿಗಳು ಬೇರೆ ಅಲ್ಲ. ಅವರಿಂದ ಊಟ-ತಿಂಡಿಗೆ ಆಹ್ವಾನ ಬಂದರೆ ಸಾಮಾನ್ಯವಾಗಿ ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ.
 
ಸೋಮನಾಥ ಬಾಬು ಮನೆಯಲ್ಲಿ ಊಟ ಎಂದರೆ `ಬಂಗಾಳಿಗಳ ಬಾಯಿಯಲ್ಲಿ ನೀರೂರಿಸುವ` `ಹಿಲ್ಸಾ` ಮೀನಿನ ಪಲ್ಯ ಇದ್ದೇ ಇರುತ್ತಿತ್ತು. ಆದರೆ ಆ ವರ್ಷದ ಜನವರಿ ತಿಂಗಳ ಔತಣಕೂಟಗಳಲ್ಲಿ `ಹಿಲ್ಸಾ` ಮೀನಿನ ಜತೆ ಅತಿಥಿಗಳು ನಡೆಸುತ್ತಿದ್ದ ಮಾತಿಗೆ ಗ್ರಾಸ ಒದಗಿಸಿದ್ದು ರಾಷ್ಟ್ರಪತಿ ಚುನಾವಣೆ. ಸೋಮನಾಥ ಚಟರ್ಜಿ ಅವರ ಈ `ಔತಣಕೂಟ ರಾಜಕೀಯ`ದ ಹಿಂದೆ ಆಗಿನ್ನೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡುವ ಉದ್ದೇಶ ಇತ್ತು. 

1996ರಲ್ಲಿ ಜ್ಯೋತಿಬಸು ಪ್ರಧಾನಿಯಾಗುವ ಅವಕಾಶವನ್ನು ತಪ್ಪಿಸಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಸಿಪಿಎಂ ನಾಯಕರು ಕೂಡಾ ಸಿದ್ಧವಾಗಿದ್ದರು.ಇದೇ ವೇಳೆ ಕರಣ್‌ಸಿಂಗ್ ಎಂಬ ಹಳೆಯ ಕಾಂಗ್ರೆಸ್ ನಾಯಕ `ಶಿವಭಕ್ತ` ಎಂಬ ಸುದ್ದಿ  ಹರಡತೊಡಗಿತ್ತು. ಇದು ಬಿಜೆಪಿ ಬೆಂಬಲ ಪಡೆಯುವ ಪ್ರಯತ್ನ ಎಂಬ ವ್ಯಾಖ್ಯಾನ ಕೇಳಿ ಬಂದಿತ್ತು. 

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ಸೇರಿದ ನಜ್ಮಾ ಹೆಪ್ತುಲ್ಲಾ ಇದ್ದಕ್ಕಿದ್ದ ಹಾಗೆ ಬಿಜೆಪಿ ಮೇಲೆ ದಾಳಿ ನಡೆಸತೊಡಗಿದ್ದರು. ಈ ಸಂದರ್ಭದಲ್ಲಿ  ಕೇಳಿಬಂದ ಮೊದಲ ಅಚ್ಚರಿಯ ಹೆಸರು ಪಿ.ಸಿ.ಅಲೆಗ್ಸಾಂಡರ್ ಅವರದ್ದು. 

ಐಎಎಸ್ ಅಧಿಕಾರಿಯಾಗಿದ್ದರೂ ಮೂವರು ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಅವರಜತೆ ಕೆಲಸ ಮಾಡಿದ್ದ ಅಲೆಗ್ಸಾಂಡರ್ `ಕಾಂಗ್ರೆಸಿಗರೇ` ಆಗಿ ಹೋಗಿದ್ದರು. ವಿಪರ್ಯಾಸವೆಂದರೆ ಅವರ ಹೆಸರನ್ನು ಮೊದಲು ಸೂಚಿಸಿದ್ದು ಶಿವಸೇನೆ ನಾಯಕ ಬಾಳಾ ಠಾಕ್ರೆ, ಬೆಂಬಲಿಸಿದ್ದು ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ವಿರೋಧಿಸತೊಡಗಿದ್ದು ಕಾಂಗ್ರೆಸ್. ಅಲೆಗ್ಸಾಂಡರ್ ಹೆಸರಿನ ಪ್ರಸ್ತಾವದ ಹಿಂದೆ ದುರುದ್ದೇಶ ಇದ್ದದ್ದು ನಿಜ. 

ಒಬ್ಬ ಕ್ರಿಶ್ಚಿಯನ್ ರಾಷ್ಟ್ರಪತಿಯಾಗಿ ಬಿಟ್ಟರೆ, ಅದೇ ಧರ್ಮಕ್ಕೆ ಸೇರಿರುವ ಸೋನಿಯಾಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು ಎನ್ನುವ ಕಾರಣಕ್ಕಾಗಿಯೇ ಅಲೆಗ್ಸಾಂಡರ್ ಬಗ್ಗೆ ಠಾಕ್ರೆ, ಪವಾರ್ ಮತ್ತು ಪ್ರಮೋದ್ ಮಹಾಜನ್ ಅವರಂಥವರಿಗೆ ಪ್ರೀತಿ ಉಕ್ಕಿ ಹರಿದಿತ್ತು. 

ಇದರ ಪರಿಣಾಮವಾಗಿ ತನ್ನ ವೃತ್ತಿ ಜೀವನದಲ್ಲಿ ಕೇಳದ ಆರೋಪಗಳನ್ನೆಲ್ಲ ಅಲೆಗ್ಸಾಂಡರ್ ಕೇಳುವಂತಾಯಿತು. ರಾಜೀವ್‌ಗಾಂಧಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ  ಪ್ರಧಾನಿ ಕಾರ್ಯಾಲಯದ ರಹಸ್ಯ ದಾಖಲೆ ಪತ್ರಗಳನ್ನು ಕುಖ್ಯಾತ ಬೇಹುಗಾರ ಕೂಮರ್ ನಾರಾಯಣ್‌ಅವರಿಗೆ ನೀಡಿದ್ದರು ಎನ್ನುವುದು ಅಲೆಗ್ಸಾಂಡರ್ ವಿರುದ್ದ ಕೇಳಿಬಂದ ಮುಖ್ಯ ಆರೋಪ. ಅದರ ನಂತರ ಅವರು ಅನಿವಾರ್ಯವಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.

ಇವೆಲ್ಲವೂ ನಡೆಯುತ್ತಿರುವಾಗಲೇ ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನೇ ಎರಡನೆ ಅವಧಿಗೆ ಮುಂದುವರಿಸಬೇಕೆಂಬ ಪ್ರಯತ್ನ  ಪ್ರಾರಂಭವಾಗಿತ್ತು. ಸುಮಾರು 150 ಸದಸ್ಯ ಬಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಸತ್ ಸದಸ್ಯರ ವೇದಿಕೆ ಸಭೆ ಸೇರಿ ಮುಂದಿನ ರಾಷ್ಟ್ರಪತಿ ಹುದ್ದೆಗೆ ದಲಿತರನ್ನೇ ನೇಮಿಸಬೇಕೆಂಬ ಗೊತ್ತುವಳಿ ಅಂಗೀಕರಿಸಿತ್ತು. 

ಕೆ.ಆರ್.ನಾರಾಯಣನ್ ಅವರನ್ನು ಉಪರಾಷ್ಟ್ರಪತಿ ಮಾಡಲು ಆ ಕಾಲದಲ್ಲಿ ವೇದಿಕೆಯ ಅಧ್ಯಕ್ಷರಾಗಿದ್ದ ಕರ್ನಾಟಕದ ರಾಜ್ಯಸಭಾ ಸದಸ್ಯ ಎಚ್.ಹನುಮಂತಪ್ಪ ನೇತೃತ್ವದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರಿಂದ ಈ ಪ್ರಯತ್ನವನ್ನು ಯಾರೂ ತಳ್ಳಿಹಾಕುವಂತೆ ಇರಲಿಲ್ಲ. ನಾರಾಯಣನ್ ಅವರು ಮುಂದುವರಿಯಲು ಬಯಸಿದರೆ ದಲಿತ ರಾಷ್ಟ್ರಪತಿಗೆ ಇನ್ನೊಂದು ಅವಕಾಶವನ್ನು ನಿರಾಕರಿಸುವ ಸ್ಥಿತಿಯಲ್ಲಿ ಬಿಜೆಪಿಯೂ ಇರಲಿಲ್ಲ. 

ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣನ್ ಖುದ್ದಾಗಿ ಸ್ಪರ್ಧೆಯಿಂದ ಹಿಂದೆ ಸರಿದುಬಿಟ್ಟರು. ಆಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೃಷ್ಣಕಾಂತ್ ಹೆಸರು ಮುಂದೆ ತಂದಿದ್ದರು. ಆವರ ಆಯ್ಕೆಗೆ ಅವರದ್ದೇ ಪಕ್ಷದ ನಾಯಕರು ಒಲವು ತೋರಲಿಲ್ಲ. 

ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಬಾಗಿಲು ಮುರಿದು ಒಳಗೆ ನುಗ್ಗಿದ   ಹಾಗೆ   ಕಾಣಿಸಿಕೊಂಡ  `ಕಪ್ಪು ಕುದುರೆ`-ಎ.ಪಿ.ಜೆ. ಅಬ್ದುಲ್ ಕಲಾಮ್. ಇದು ಯಾರ ಬತ್ತಳಿಕೆಯಿಂದ ಹೊರಟ `ಕ್ಷಿಪಣಿ` ಎಂಬ ಬಗ್ಗೆ ಆ ದಿನಗಳಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ನಾಲ್ಕು ತಿಂಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರು ಲೋಕಾಭಿರಾಮವಾಗಿ ಮಾತನಾಡುತ್ತಾ ಕಲಾಮ್ ಹೆಸರು ಪ್ರಸ್ತಾಪಿಸಿದ್ದರು. ನಂತರದ ದಿನಗಳಲ್ಲಿ ಆ ಹೆಸರನ್ನು ಎಲ್ಲರೂ ಮರೆತೇ ಬಿಟ್ಟಿದ್ದರು. 

ಕೊನೆಗಳಿಗೆಯಲ್ಲಿ ಅದನ್ನು ಕೈಗೆತ್ತಿಕೊಂಡದ್ದು ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಮತ್ತು  ಚಂದ್ರಬಾಬು ನಾಯ್ಡು. ಕಲಾಮ್ ಅವರನ್ನು ಮೊದಲು ಸಂಪರ್ಕಿಸಿದ್ದು ಕೂಡಾ ಈ ಇಬ್ಬರು ನಾಯಕರು. ಅಲೆಗ್ಸಾಂಡರ್ ಹೆಸರಿಗೆ ಪಟ್ಟು ಹಿಡಿದಿದ್ದ ಬಾಳ ಠಾಕ್ರೆಯವರನ್ನು ಒಲಿಸಿಕೊಳ್ಳಲು ಪ್ರಮೋದ್ ಮಹಾಜನ್ ಅವರನ್ನು ವಾಜಪೇಯಿ ತಕ್ಷಣ ಮುಂಬೈಗೆ ಕಳುಹಿಸಿದ್ದರು.  

ಮುಲಾಯಂಸಿಂಗ್ ಆಗಲೇ ಎನ್‌ಡಿಎ ಅಭ್ಯರ್ಥಿಗೆ ಕೈ ಎತ್ತಿದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಇಕ್ಕಟ್ಟಿಗೆ ಸಿಲುಕಿದ್ದವು. ಕಲಾಮ್ ಅವರನ್ನು ಬೆಂಬಲಿಸದೆ ಬೇರೆ ದಾರಿ ಅವರಿಗೂ ಇರಲಿಲ್ಲ. ಸುಮಾರು ಆರು ತಿಂಗಳ ಕಾಲ ನಡೆದ ಚರ್ಚೆಯಲ್ಲಿ ಕನಿಷ್ಠ 20 ಸಂಭವನೀಯ ಅಭ್ಯರ್ಥಿಗಳ ಹೆಸರು ಗಾಳಿಯಲ್ಲಿ ಹಾರಾಡಿದ್ದವು. ರಾಷ್ಟ್ರಪತಿ ಸ್ಥಾನ ಕೊನೆಗೂ ಒಲಿದಿದ್ದು ಅಬ್ದುಲ್ ಕಲಾಮ್ ಅವರಿಗೆ.

2007ರ ಚುನಾವಣೆಯಲ್ಲಿಯೂ ಹೀಗೆಯೇ ನಡೆಯಿತು. ಅಬ್ದುಲ್ ಕಲಾಮ್ ಅವರನ್ನು ಎರಡನೆ ಅವಧಿಗೆ ಮುಂದುವರಿಸಲು ಬಿಜೆಪಿ ಪ್ರಯತ್ನ ನಡೆಸಿತ್ತು. ಎನ್‌ಡಿಎ ಮಿತ್ರಪಕ್ಷಗಳಲ್ಲದೆ ಸಮಾಜವಾದಿ ಪಕ್ಷ ಕೂಡಾ ಇದನ್ನು ಬೆಂಬಲಿಸಿತ್ತು. 

ಆ ಕಾಲದಲ್ಲಿ ಕಾಂಗ್ರೆಸ್ ತೇಲಿಬಿಟ್ಟಿದ್ದ ಮೂರು ಹೆಸರುಗಳೆಂದರೆ ಕರಣ್‌ಸಿಂಗ್, ಸುಶೀಲ್‌ಕುಮಾರ್ ಶಿಂಧೆ ಮತ್ತು ಪ್ರಣವ್ ಮುಖರ್ಜಿ ಅವರದ್ದು.  `ಮೆದು ಹಿಂದುತ್ವ`ದ ಧೋರಣೆಯ ಕರಣ್‌ಸಿಂಗ್ ಅವರನ್ನು ಬಿಜೆಪಿ, ಬಂಗಾಳದವರಾದ ಪ್ರಣಬ್ ಮುಖರ್ಜಿ ಅವರನ್ನು ಎಡಪಕ್ಷಗಳು, ದಲಿತರಾದ ಸುಶೀಲ್‌ಕುಮಾರ್ ಶಿಂಧೆ ಅವರನ್ನು ಮಾಯಾವತಿ ಬೆಂಬಲಿಸಬಹುದೆಂಬ ರಾಜಕೀಯ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿತ್ತು. ಉತ್ತರಪ್ರದೇಶದ ನಂತರ ಮಹಾರಾಷ್ಟ್ರದಲ್ಲಿ ಬಿಎಸ್‌ಪಿಯನ್ನು ಕಟ್ಟುವ ಉದ್ದೇಶ ಹೊಂದಿದ್ದ ಮಾಯಾವತಿ ಪ್ರಾರಂಭದಲ್ಲಿ ಶಿಂಧೆ ಬಗ್ಗೆ ಒಲವು ತೋರಿದ್ದರು.
 
ಅಷ್ಟರಲ್ಲಿ ಉಪರಾಷ್ಟ್ರಪತಿ ಭೈರೋನ್‌ಸಿಂಗ್ ಶೆಖಾವತ್ ಅವರನ್ನು ಎನ್‌ಡಿಎ ಕಣಕ್ಕಿಳಿಸಿತ್ತು. ಅಲ್ಲಿಯೂ ಕೆಲಸ ಮಾಡಿದ್ದು ಜಾತಿ. ಠಾಕೂರ್‌ಗಳೆಲ್ಲ ಪಕ್ಷಭೇಧ ಇಲ್ಲದೆ ಒಟ್ಟಾಗತೊಡಗಿದ್ದರು. ಆಗಿನ್ನೂ ಅಮರ್‌ಸಿಂಗ್ ಪ್ರಭಾವಲಯದಲ್ಲಿದ್ದ ಮುಲಾಯಂಸಿಂಗ್ ಕೂಡಾ ಆ ಕಡೆ ವಾಲತೊಡಗಿದ್ದರು. 

ಆ ಹಂತದಲ್ಲಿ ತೂರಿಬಂದ ಹೆಸರು ಪ್ರತಿಭಾ ಪಾಟೀಲ್ ಅವರದ್ದು. ಇಪ್ಪತ್ತೇಳರ ಹರೆಯದಲ್ಲಿಯೇ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರತಿಭಾ ಪಾಟೀಲ್ ಅವರನ್ನು  ಜನ ಆಗಲೇ ಮರೆತಿದ್ದರು. ರಾಜಸ್ತಾನದ ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸಿದ ನಂತರ ಅವರು ರಾಜಕೀಯ ನಿವೃತ್ತಿ ದಿನಗಳನ್ನು ಕಳೆಯುತ್ತಿದ್ದರು.
 
ಪ್ರತಿಭಾ ಅವರ ಗಂಡ ಶೆಖಾವತ್ ಪರಿವಾರಕ್ಕೆ ಸೇರಿರುವುದು ಎನ್‌ಡಿಎ ಅಭ್ಯರ್ಥಿ ಭೈರೋನ್‌ಸಿಂಗ್ ಶೆಖಾವತ್ ಅವರನ್ನು ಎದುರಿಸಲು ಹೆಚ್ಚುವರಿ ಅರ್ಹತೆಯಾಗಿ ಹೋಯಿತು. ಆದರೆ ಅವರ ಹಾದಿ ಸುಗಮವಾಗಿರಲಿಲ್ಲ. ಹಿಂದೆ ಪಿ.ಸಿ.ಅಲೆಗ್ಸಾಂಡರ್ ಅವರನ್ನು ಹಿಂದಕ್ಕೆ ಸರಿಸಲು ಕೆಲವು ಕಾಂಗ್ರೆಸ್ ನಾಯಕರು ಹಿಡಿದ ಅಡ್ಡದಾರಿಯನ್ನೇ ಈ ಬಾರಿ ವಿರೋಧಿ ನಾಯಕರು ಆರಿಸಿಕೊಂಡರು.

 ಈ ಹಿನ್ನೆಲೆಯಲ್ಲಿಯೇ ಪ್ರತಿಭಾ ಪಾಟೀಲ್ ಅವರ ಪೂರ್ವಾಶ್ರಮದ ವಿವರಗಳ ಹುಡುಕಾಟ ಪ್ರಾರಂಭವಾಗಿದ್ದು. ಮಹಿಳಾ ಸಬಲೀಕರಣದ ಉದ್ದೇಶದಿಂದಲೇ 1973ರಲ್ಲಿ ಪ್ರತಿಭಾ ಪಾಟೀಲ್ ಸ್ಥಾಪಿಸಿದ್ದ `ಪ್ರತಿಭಾ ಮಹಿಳಾ ಸಹಕಾರಿ ಬ್ಯಾಂಕ್` ಅನ್ನು ಹಣಕಾಸು ಅವ್ಯವಹಾರದ ಆರೋಪಕ್ಕಾಗಿ ರಿಸರ್ವ್ ಬ್ಯಾಂಕ್ ಮುಚ್ಚಿಸಿತ್ತು.
 
ಸಾಲಮನ್ನಾ ಮಾಡಿಸಿಕೊಂಡ ಫಲಾನುಭವಿಗಳಲ್ಲಿ ಹೆಚ್ಚಿನವರು ಪ್ರತಿಭಾ ಪಾಟೀಲ್ ಸಂಬಂಧಿಗಳು ಎನ್ನುವುದು ಅವರ ವಿರುದ್ದದ ಪ್ರಮುಖ ಆರೋಪವಾಗಿತ್ತು. ಅವರು ಸದಸ್ಯೆಯಾಗಿರುವ ಟ್ರಸ್ಟ್‌ನಿಂದ ತಮ್ಮ ಆಡಳಿತದ ಶಿಕ್ಷಣ ಸಂಸ್ಥೆಗಳಿಗೆ ಹಣ ನೀಡಿದ್ದು, ಸಂಸತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ತನ್ನ ಗಂಡನೇ ಪದಾಧಿಕಾರಿಯಾಗಿರುವ ಸಂಸ್ಥೆಗೆ ನೀಡಿದ್ದು...ಹೀಗೆ ಹಲವಾರು ಆರೋಪಗಳು ಪುಂಖಾನುಪುಂಖವಾಗಿ ಕೇಳಿಬರತೊಡಗಿದ್ದವು.

 ತನ್ನ ಅಭ್ಯರ್ಥಿಯ ಮೇಲೆ ಆರೋಪಗಳು ಕೇಳಿಬಂದ ಕೂಡಲೇ ಯುಪಿಎ ನಾಯಕರು ಎನ್‌ಡಿಎ ಅಭ್ಯರ್ಥಿ ಭೈರೋನ್‌ಸಿಂಗ್ ಶೆಖಾವತ್ ಅವರ ಜಾತಕ ಜಾಲಾಡಿಸತೊಡಗಿದ್ದರು. `ಶೆಖಾವತ್ ಅವರು ಪೊಲೀಸ್ ಇಲಾಖೆಯಲ್ಲಿದ್ದಾಗ ಉಪ್ಪು ಸಾಗಾಣಿಕೆದಾರರಿಂದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಮಾನತ್‌ಗೊಂಡಿದ್ದರು.
 
ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಭೂಕಬಳಿಕೆಯ ಆರೋಪ ಹೊಂದಿದ್ದ ಅಳಿಯನನ್ನು ರಕ್ಷಿಸಿದ್ದರು...` ಎಂಬಿತ್ಯಾದಿ ಆರೋಪಗಳು ಅವರ ವಿರುದ್ಧವೂ ಇದ್ದವು. ಅಲ್ಲಿಗೆ ರಾಷ್ಟ್ರಪತಿ ಸ್ಥಾನದ ಇಬ್ಬರು ಅಭ್ಯರ್ಥಿಗಳು ಕಳಂಕಿತರು ಎಂದಾಗಿ ಹೋಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಆರೋಪ-ಪ್ರತ್ಯಾರೋಪಗಳು ಹೊಸತೇನಲ್ಲ. 

ಆದರೆ ಹಿಂದೆ ಅದು ಅಭ್ಯರ್ಥಿಗಳ ಅರ್ಹತೆ, ರಾಜಕೀಯ ನಿಲುವು ಇತ್ಯಾದಿ ಬಗೆಗಿನ ಟೀಕೆ-ಟಿಪ್ಪಣಿಗಷ್ಟೇ ಸೀಮಿತವಾಗಿತ್ತು. ಅದು ಸಭ್ಯತೆಯ ಸೀಮಾರೇಖೆ ದಾಟಿ ವೈಯಕ್ತಿಕ ಚಾರಿತ್ರ್ಯಹರಣದ ಮಟ್ಟಕ್ಕೆ ಇಳಿದದ್ದು ಕಳೆದೆರಡು ರಾಷ್ಟ್ರಪತಿಗಳ ಚುನಾವಣೆಯ ಕಾಲದಲ್ಲಿ.

ಅದನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು  ಸುಷ್ಮಾ ಸ್ವರಾಜ್  ತನ್ನ `ಒಡಕು ಬಾಯಿ` ಮೂಲಕ ಮಾಡಿದ್ದಾರೆ. ಸೋನಿಯಾಗಾಂಧಿ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುತ್ತೇನೆ ಎಂದು ಎಂಟು ವರ್ಷಗಳ ಹಿಂದೆ ಅವರು ಪ್ರತಿಜ್ಞೆ ಮಾಡಿದ್ದರು. ಸೋನಿಯಾ ಪ್ರಧಾನಿಯಾಗಲು ಹೋಗದೆ ಸುಷ್ಮಾ ಅವರ ಕೂದಲು ಉಳಿಸಿಕೊಟ್ಟರು. 

ಈಗ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವ ಘನತೆಯ ವ್ಯಕ್ತಿತ್ವ ಇಲ್ಲ ಎಂಬ ಬೀಸು ಹೇಳಿಕೆಯನ್ನು ನೀಡಿ ತಮ್ಮ ಪಕ್ಷದವರನ್ನೇ ಮುಜುಗರಕ್ಕೆ ಸಿಲುಕಿಸಿದ್ದಾರೆ. ಸಂವಿಧಾನದ ಪ್ರಕಾರ ರಾಷ್ಟ್ರಪತಿ ಅವರದ್ದು ಅತ್ಯುನ್ನತ ಗೌರವ ಮತ್ತು ಘನತೆಯ ಸ್ಥಾನವಾಗಿದ್ದರೂ ನಮ್ಮ ರಾಜಕೀಯ ವ್ಯವಸ್ಥೆ ಅದನ್ನು `ರಬ್ಬರ್‌ಸ್ಟಾಂಪ್` ಮಟ್ಟಕ್ಕೆ ಇಳಿಸಿಬಿಟ್ಟಿದೆ. 

ಇಂತಹ ಸ್ಥಿತಿಯಲ್ಲಿ ಆ ಸ್ಥಾನಕ್ಕೆ ಆಯ್ಕೆಯಾಗುವವರ ವ್ಯಕ್ತಿತ್ವವಷ್ಟೇ ಘನತೆ ಮತ್ತು ಗೌರವವನ್ನು ತಂದುಕೊಡಬಲ್ಲದು. ಈಗಿನ ಕೆಸರೆರಚಾಟವನ್ನು ನೋಡಿದರೆ ಅದೂ ಸಾಧ್ಯ ಇಲ್ಲ ಎಂದು ಅನಿಸುತ್ತಿದೆ.