Sunday, March 18, 2012

ಕಾಲವನ್ನು ಮೀರಿ ಯೋಚಿಸಿದ್ದ ದಾರ್ಶನಿಕ ಅರಸು

`ಕಾಲದ ಜತೆ ಹೆಜ್ಜೆ ಹಾಕುವಾಗ ಒಂದಷ್ಟು ಹೆಜ್ಜೆ ಮುಂದೆ ಹೋಗಿಬಿಟ್ಟೆನೇನೋ ಎಂದು ಅನಿಸುತ್ತಿದೆ~ ಎಂದು ಖ್ಯಾತ ರಾಜಕೀಯ ಚಿಂತಕ ರಾಮಮನೋಹರ ಲೋಹಿಯಾ ಹೇಳಿದ್ದರು. ತನ್ನನ್ನು ಸಮಾಜವಾದಿ ಎಂದು ಘೋಷಿಸಿಕೊಳ್ಳದೆ  ಲೋಹಿಯಾ ಅವರ ಬಹಳಷ್ಟು ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಬದುಕನ್ನು ನೋಡಿದಾಗಲೂ ಹೀಗೆಯೇ ಅನಿಸುತ್ತಿದೆ. ಪ್ರಾದೇಶಿಕ ಪಕ್ಷಗಳು ದೇಶದ ರಾಜಕಾರಣದ ದಿಕ್ಕು-ದೆಸೆಯನ್ನು ನಿರ್ಧರಿಸುವಷ್ಟು ನಿರ್ಣಾಯಕ ಪಾತ್ರ ವಹಿಸುತ್ತಿರುವ ಈ ಸಂದರ್ಭದಲ್ಲಿ ದೇವರಾಜ ಅರಸು ಪ್ರಾದೇಶಿಕ ರಾಜಕಾರಣದ ಮೂಲಕ ರಾಷ್ಟ್ರರಾಜಕಾರಣ ಪ್ರವೇಶಿಸಿದ್ದರೆ ಅವರ ಬದುಕು ದುರಂತದಲ್ಲಿ ಕೊನೆಗೊಳ್ಳುತ್ತಿರಲಿಲ್ಲವೇನೋ?
ಇದಕ್ಕಾಗಿ ಅರಸು ಅವರು 10-15ವರ್ಷಗಳ ನಂತರ ಹುಟ್ಟಬೇಕಿತ್ತು. ಅವರು ದೆಹಲಿ ಕಡೆ ಕತ್ತುಚಾಚಿದ್ದಾಗ ದೇಶದಲ್ಲಿ ಅದಕ್ಕೆ ಪೂರಕವಾದ ರಾಜಕೀಯ ವಾತಾವರಣ ಇರಲಿಲ್ಲ. ತುರ್ತುಪರಿಸ್ಥಿತಿಯ ನಂತರದ ಜನತಾ ಪ್ರಯೋಗದ ಕೇಂದ್ರ ಸ್ಥಾನದಲ್ಲಿದ್ದ ಕಾಂಗ್ರೆಸ್ ವಿರೋಧಿ ಗುಂಪಲ್ಲಿ ದೆಹಲಿ ಕೇಂದ್ರಿತ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಅವರ‌್ಯಾರೂ ಪ್ರಾದೇಶಿಕ ರಾಜಕಾರಣದ ಉತ್ಪನ್ನಗಳಾಗಿರಲಿಲ್ಲ. ಆದ್ದರಿಂದ ಪ್ರಾದೇಶಿಕ ನಾಯಕನಾಗಿ ರಾಷ್ಟ್ರರಾಜಕಾರಣದಲ್ಲಿ ಕಾಣಿಸಿಕೊಳ್ಳುವ ಅವರ ಮಹತ್ವಾಕಾಂಕ್ಷೆ ಆ ಕಾಲವನ್ನು ಮೀರಿದ ಹೆಜ್ಜೆಯಾಗಿತ್ತು. ಇದು ಅರಸು ಅವರಿಗೂ ಗೊತ್ತಿತ್ತು. ಅವರ ಕೊನೆಯ ದೆಹಲಿ ಭೇಟಿಯ ಸಂದರ್ಭದಲ್ಲಿ (1982 ಮೇ, 25) ಆಗ ದೆಹಲಿಯ ವರದಿಗಾರರಾಗಿದ್ದ ಪ್ರಜಾವಾಣಿಯ ಡಿ.ವಿ.ರಾಜಶೇಖರ್ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಕೆ.ವಿ.ರಮೇಶ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ ಅರಸು ಇದನ್ನು ಒಪ್ಪಿಕೊಂಡಿದ್ದರು. `ವೈಯಕ್ತಿಕವಾಗಿ ಹೇಳುವುದಾದರೆ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯ ಸೊನ್ನೆ~ ಎಂದು ಪ್ರಶ್ನೆಯೊಂದಕ್ಕೆ ಅರಸು ಉತ್ತರಿಸಿದ್ದರು.
ದೇಶದಲ್ಲಿ ಪ್ರಾದೇಶಿಕ ರಾಜಕಾರಣವನ್ನು ಕೇಂದ್ರವಾಗಿಟ್ಟುಕೊಂಡ ಮೈತ್ರಿ ರಾಜಕಾರಣ ಪ್ರಾರಂಭವಾಗಿದ್ದು 1989ರ ನಂತರದ ದಿನಗಳಲ್ಲಿ. ಅದು ಪೂರ್ಣಪ್ರಮಾಣದಲ್ಲಿ ಬೆಳೆದದ್ದು 1996ರ ನಂತರ. ಅದರ ಫಲವಾಗಿಯೇ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಾಗಿದ್ದು. ಇದಕ್ಕೆ ನಿಧಾನವಾಗಿ ದುರ್ಬಲಗೊಳ್ಳುತ್ತಾ ಬಂದ ಕಾಂಗ್ರೆಸ್ ಪಕ್ಷ, ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾ ಬಂದ ಪ್ರಾದೇಶಿಕ ಪಕ್ಷಗಳು, ಮಂಡಲ ವರದಿಯ ಜಾರಿಯ ನಂತರ ಹಿಂದುಳಿದ ಜಾತಿಗಳಲ್ಲಿ ಮೂಡಿದ ರಾಜಕೀಯ ಜಾಗೃತಿ-ಇವೆಲ್ಲ ಕಾರಣ. ದೇವರಾಜ ಅರಸು ಬದುಕಿದ್ದರೆ ಈ ಎಲ್ಲ ಬೆಳವಣಿಗೆಗಳು ಅವರ ರಾಜಕೀಯಕ್ಕೆ ಸಹಕಾರಿಯಾಗುತ್ತಿತ್ತು. ಆದರೆ ಆ ಅವಕಾಶವನ್ನು ಬಳಸಿಕೊಳ್ಳಲು ಅರಸು ಬದುಕುಳಿಯಲಿಲ್ಲ ಎನ್ನುವುದು ವಿಷಾದನೀಯ.
ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇಲ್ಲದೆ ಸೊರಗಿದ್ದ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ತಂದು ಕೊಡುವ ಅವರ ಯೋಚನೆ ಕೂಡಾ ಆ ಕಾಲವನ್ನು ಮೀರಿದ್ದಾಗಿತ್ತು. ಮಂಡಲ್ ವರದಿ ಅನುಷ್ಠಾನದ ಮೂಲಕ ಪ್ರಧಾನಿ ವಿ.ಪಿ.ಸಿಂಗ್ ರಾಷ್ಟ್ರಮಟ್ಟದಲ್ಲಿ ಆ ಯೋಚನೆ ಮಾಡಿದ್ದು ಹಾವನೂರು ವರದಿ ಜಾರಿಯಾದ ಹದಿನೈದು ವರ್ಷಗಳ ನಂತರ ಎನ್ನುವುದನ್ನು ಮರೆಯಬಾರದು. ಅರಸು ಕೇವಲ ಶಕ್ತಿರಾಜಕಾರಣವನ್ನು ಉದ್ದೇಶವಾಗಿಟ್ಟುಕೊಂಡ ಒಬ್ಬ ನಾಯಕರಾಗಿರಲಿಲ್ಲ ಅವರಲ್ಲೊಬ್ಬ ದಾರ್ಶನಿಕ ಇದ್ದ. ಅವರಿಗೆ ನಿಖರವಾದ ರಾಜಕೀಯ ಮತ್ತು ಸಾಮಾಜಿಕ ಮುನ್ನೋಟಗಳಿದ್ದವು. ರಾಜಕೀಯ ಅಧಿಕಾರ ಯಾಕೆ ಬೇಕು ಮತ್ತು ಅದರ ಮೂಲಕ ತಾವು ಮಾಡಬೇಕಾಗಿರುವುದು ಏನು ಎಂಬ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆ ಇತ್ತು.
1972ರ ವಿಧಾನಸಭಾ ಚುನಾವಣೆಗೆ ಪೂರ್ವದಲ್ಲಿಯೇ ಅದಕ್ಕೊಂದು ಭೂಮಿಕೆಯ ಸಿದ್ಧತೆಯಲ್ಲಿ ಅವರು ತೊಡಗಿದ್ದರು. ರಾಜ್ಯದಲ್ಲಿದ್ದ ಜಾತಿ ಸಮೀಕರಣವನ್ನು ಬದಲಾಯಿಸದೆ ಇದ್ದರೆ ತಾವು ಬಯಸಿರುವ ಪರಿವರ್ತನೆಯನ್ನು ಸಮಾಜದಲ್ಲಿ ತರಲು ಸಾಧ್ಯ ಇಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ಇದಕ್ಕಾಗಿ ಅಲ್ಲಿಯವರೆಗೆ ನಿರ್ಲಕ್ಷಿತರಾಗಿ ಮೂಲೆ ಸೇರಿದ್ದ ಕೆಳಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಇವೆಲ್ಲವನ್ನೂ ಸರಿಯಾದ ತಯಾರಿಯೊಂದಿಗೆ ಮಾಡಿ ಸಮರ್ಥರನ್ನು ಹುಡುಕಾಡುವಷ್ಟು ಸಮಯ ಅವರಿಗೆ ಇರಲಿಲ್ಲ. ಆದ್ದರಿಂದ ಕಣ್ಣಿಗೆ ಬಿದ್ದ ಹಿಂದುಳಿದ ಜಾತಿಗಳ ನಾಯಕರನ್ನು ಹುಡುಕಾಡಿ ತೆಗೆದು ಟಿಕೆಟ್ ಕೊಟ್ಟು ಜತೆಗೆ ದುಡ್ಡು ಕೊಟ್ಟು ಗೆಲ್ಲಿಸಿದರು. ಅಭ್ಯರ್ಥಿಗಳನ್ನು ಆರಿಸುವಾಗ ಈ ನಾಯಕರಿಗೆ ಇರುವ ಅರ್ಹತೆಯನ್ನು ಪರೀಕ್ಷೆಗೊಳಪಡಿಸುವಷ್ಟು ಪುರುಸೊತ್ತು ಅವರಿಗೆ ಇರಲಿಲ್ಲ.
 ಹಠಾತ್ತನೆ ಶಾಸಕರಾದವರಿಗೆ ಅರಸು ಅವರಿಗಿದ್ದ ರಾಜಕೀಯ ಚಿಂತನೆ, ಸಾಮಾಜಿಕ ಕಳಕಳಿ ಇಲ್ಲವೇ ದೂರದೃಷ್ಟಿ ಯಾವುದೂ ಇರಲಿಲ್ಲ. ಅವರಲ್ಲಿ ಬಹಳಷ್ಟು ಮಂದಿ ಮೂಲತಃ ಜಾತಿವಾದಿಗಳು, ಆಳದಲ್ಲಿ ಸ್ವಾರ್ಥಿಗಳು ಮತ್ತು ದುರ್ಬಲ ಮನಸ್ಸಿನವರಾಗಿದ್ದರು. ಅವರಲ್ಲಿ ಯಾರೂ ಹೋರಾಟದ ಮೂಲಕ ನಾಯಕರಾಗಿ ರೂಪುಗೊಂಡವರಲ್ಲ.
ಈ ಕಾರಣದಿಂದಾಗಿಯೇ ಮುಂದಿನ ದಿನಗಳಲ್ಲಿ ಅವರಲ್ಲಿ ಹೆಚ್ಚಿನವರು ಅವಕಾಶವಾದಿಗಳಾಗಿ, ಪಕ್ಷಾಂತರಿಗಳಾಗಿ ಬೆಳೆದರೇ ಹೊರತು ಅರಸು ಅವರಂತೆ ಪರಿವರ್ತನೆಯ ಹರಿಕಾರರಾಗಲಿಲ್ಲ. ಅರಸು ಅವರ ಈ `ಅವಸರದ ಕ್ರಾಂತಿ~ವಿಫಲಗೊಳ್ಳಲು ಇದು ಮುಖ್ಯ ಕಾರಣ. ಕೊನೆಗಾಲದಲ್ಲಿ ಅರಸು ಅವರು ಇಂದಿರಾ ಕಾಂಗ್ರೆಸ್‌ನಿಂದ ದೂರವಾಗಿ ರಾಜಕೀಯವಾಗಿ ಏಕಾಂಗಿಯಾದಾಗ ಅವರು ಬೆಳೆಸಿದವರಲ್ಲಿ ಯಾರೂ ಅವರ ಬೆಂಬಲಕ್ಕೆ ನಿಲ್ಲಲೇ ಇಲ್ಲ. ಅದಕ್ಕಿಂತಲೂ ಮುಖ್ಯವಾಗಿ ಮೀಸಲಾತಿ, ಭೂಸುಧಾರಣೆ ಮೊದಲಾದ ಅರಸು ಅವರ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ನಂತರದ ಸರ್ಕಾರಗಳು ತಿರುಚಿ ಸಾಯಿಸಿದಾಗ ಈ ನಾಯಕರಲ್ಲಿ ಯಾರೂ ಅದರ ವಿರುದ್ದ ದನಿ ಎತ್ತಲಿಲ್ಲ.
1995ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಎಚ್.ಡಿ.ದೇವೇಗೌಡರು ಕೈಗಾರಿಕೆಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡುವಂತೆ ಭೂ ಸುಧಾರಣೆಗೆ ಮೊದಲ ತಿದ್ದುಪಡಿಯನ್ನು ತಂದರು. ಈ ತಿದ್ದುಪಡಿ ಮೊದಲು ಕೃಷಿ ಆಧರಿತ ಕೈಗಾರಿಕೆಗಳಿಗಾಗಿ ನಡೆಯುವ ಭೂಸ್ವಾಧೀನಕ್ಕೆ ಸೀಮಿತವಾಗಿದ್ದರೂ ನಂತರದ ದಿನಗಳಲ್ಲಿ ಅದನ್ನು ಇನ್ನಷ್ಟು ಸಡಿಲಗೊಳಿಸಲಾಯಿತು.

ಕೃಷಿ ಭೂಮಿ ಪಡೆಯಲು ನಿಗದಿಗೊಳಿಸಲಾಗಿದ್ದ ಆದಾಯದ ಮಿತಿ ಮತ್ತು ಒಬ್ಬ ವ್ಯಕ್ತಿ ಹೊಂದಿರಬಹುದಾದ ಜಮೀನಿನ ಗರಿಷ್ಠಮಿತಿಗಳೆರಡನ್ನೂ ತಿದ್ದುಪಡಿ ಮೂಲಕ ಹೆಚ್ಚಿಸಲಾಯಿತು. ಇದರಿಂದಾಗಿ ಅರಸು ಅವರ ಕಲ್ಪನೆಯ ಭೂಸುಧಾರಣೆಯ ಅಸ್ಥಿಪಂಜರವಷ್ಟೇ ಈಗ ಉಳಿದಿದೆ. ಹೀಗೆ ಅರಸು ನಂತರ ಬಂದ ಸರ್ಕಾರಗಳು ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ಮೇಲೆ ತಿದ್ದುಪಡಿಗಳನ್ನು ತಂದು ಕೆಡಿಸಿದಾಗ ಅರಸು ಅವರ ಅನುಯಾಯಿಗಳಲ್ಲಿ ಕೆಲವರು ಆಡಳಿತ ಪಕ್ಷದಲ್ಲಿ, ಇನ್ನು ಕೆಲವರು ವಿರೋಧಪಕ್ಷದಲ್ಲಿದ್ದರು.

ಯಾರಿಂದಲೂ ಒಂದು ಸಂಘಟಿತ ಪ್ರತಿರೋಧ ವ್ಯಕ್ತವಾಗಲಿಲ್ಲ. ರಾಜ್ಯದಲ್ಲಿರುವ ಶಾಶ್ವತ ಹಿಂದುಳಿದ ಜಾತಿಗಳ ಆಯೋಗವನ್ನು ಕೂಡಾ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಕಾಟಾಚಾರಕ್ಕಷ್ಟೆ ಉಳಿಸಿಕೊಂಡು ಹೋಗಿವೆ. ವಕೀಲ ಸಿ.ಎಸ್.ದ್ವಾರಕನಾಥ್ ಆಯೋಗದ ಅಧ್ಯಕ್ಷರಾಗಿದ್ದಾಗ ಈಗಿನ ಬಿಜೆಪಿ ಸರ್ಕಾರ ಅವರಿಗೆ ನಿರಂತರವಾಗಿ ಕಿರುಕುಳ ಕೊಟ್ಟಿತು. ಅವರು ತಯಾರಿಸಿದ್ದ ವರದಿಯ ಅನುಷ್ಠಾನ ಬಿಡಿ, ಯಾರಾದರೂ ಅದರ ಪುಟ ತಿರುವಿ ನೋಡಿದ್ದಾರೆಂದು ಅನಿಸುವುದಿಲ್ಲ. ಪ್ರೊ.ರವಿವರ್ಮಕುಮಾರ್ ಸಲ್ಲಿಸಿದ್ದ ವರದಿಗೂ ಇದೇ ಗತಿ ಆಗಿದೆ. ಅರಸು ಗರಡಿಯಲ್ಲಿ ಪಳಗಿದವರು, ತಮ್ಮನ್ನು `ಅಹಿಂದ~ ನಾಯಕನೆಂದು ಬಿಂಬಿಸಿಕೊಳ್ಳುವ ನೂರಾರು ನಾಯಕರು ನಮ್ಮಲ್ಲಿ ಇದ್ದಾರೆ. ಯಾರಾದರೂ ಪ್ರತಿಭಟನೆಯ ಸೊಲ್ಲು ಎತ್ತಿದ್ದಾರೆಯೇ?
ಅನುಯಾಯಿಗಳನ್ನು ಬಿಟ್ಟುಬಿಡಿ, ಯಾರಿಗಾಗಿ ಅವರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದರೋ ಆ ಫಲಾನುಭವಿಗಳು ಕೂಡಾ ಅರಸು ಅವರ ಪರವಾಗಿ ನಿಲ್ಲಲಿಲ್ಲ. ಇದಕ್ಕೆ ಕೂಡಾ ಅರಸು ಅವರ ಕಾಲವನ್ನು ಮೀರಿದ ಚಿಂತನೆ ಕಾರಣ. ಅರಸು ಕ್ರಾಂತಿಯ ಫಲಾನುಭವಿಗಳ ಪಾಲಿಗೆ ಬಯಸಿದ್ದು ಮಾತ್ರವಲ್ಲ ಬಯಸದೆ ಇದ್ದದ್ದು ಕೂಡಾ ನಿರಾಯಾಸವಾಗಿ ಬಂತು. ಕಾಗೋಡು ಸತ್ಯಾಗ್ರಹವೊಂದನ್ನು ಹೊರತುಪಡಿಸಿ ಭೂ ಒಡೆತನಕ್ಕಾಗಿ ರಾಜ್ಯದಲ್ಲಿ ಎಲ್ಲಿಯೂ ದೊಡ್ಡಮಟ್ಟದ ಹೋರಾಟಗಳೇ ನಡೆದಿಲ್ಲ.
ಕೇಂದ್ರ ಸರ್ಕಾರ ಮಂಡಲ ವರದಿ ಅನುಷ್ಠಾನಕ್ಕೆ ತಂದಾಗ ಪರ-ವಿರೋಧವಾಗಿ ನಡೆದ ಚಳವಳಿಗಳೇನೂ ಹಾವನೂರು ಆಯೋಗದ ವರದಿ ಅನುಷ್ಠಾನದ ಹಿಂದೆಮುಂದೆ ನಡೆದಿರಲಿಲ್ಲ. ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಮೀಸಲಾತಿ ಇರಬಹುದು.
ಗೇಣಿದಾರರಿಗೆ ಸಿಕ್ಕ ಭೂ ಒಡೆತನ ಇರಬಹುದು, ಮಲಹೊರುವ ಪದ್ದತಿಯ ನಿಷೇಧ, ಜೀತ ನಿರ್ಮೂಲನೆ, ಋಣ ಪರಿಹಾರದ ಕಾರ್ಯಕ್ರಮಗಳಿರಬಹುದು. ಇವೆಲ್ಲವೂ ಬೆವರು-ಕಣ್ಣೀರು ಸುರಿಸದೆ ಸುಲಭದಲ್ಲಿ ಲಾಟರಿ ಹೊಡೆದಂತೆ ಸಿಕ್ಕಿಬಿಟ್ಟವು. ಈ ರೀತಿ ಸುಲಭದಲ್ಲಿ, ಪುಕ್ಕಟೆಯಾಗಿ ಸಿಕ್ಕರೆ ಅದರ ಮಹತ್ವ ಗೊತ್ತಾಗುವುದಿಲ್ಲ. ಪುಕ್ಕಟೆಯಾಗಿ ಪಡೆದದ್ದನ್ನು ಕಳೆದುಕೊಂಡರೂ ಯಾರಿಗೂ ಏನೂ ಅನಿಸುವುದಿಲ್ಲ, ಆದರೆ ದುಡಿದು ಗಳಿಸಿದ್ದನ್ನು ಕಳೆದುಕೊಂಡರೆ ಹೊಟ್ಟೆ ಉರಿಯುತ್ತದೆ ಅಲ್ಲವೇ ಹಾಗೆ.

ಅರಸು ಅವತಾರಪುರುಷನಂತೆ ಕಾಣಿಸಿಕೊಂಡು ಕೇಳಿದ್ದು-ಕೇಳದಿರುವುದು ಎಲ್ಲವನ್ನೂ ಕೊಟ್ಟು ಮಿಂಚಿ ಮರೆಯಾಗಿ ಹೋದ ಕಾರಣ ಅವರಿಂದ ಲಾಭಪಡೆದವರಿಗೂ ಅವರನ್ನು ಅರ್ಥಮಾಡಿಕೊಳ್ಳಲಾಗಲಿಲ್ಲ. ಬಹಳ ಮಂದಿಗೆ ಅದು ಬೇಕಾಗಿಯೂ ಇಲ್ಲ. ಇದು ನಿಜವಾದ ದುರಂತ.
ಇತ್ತೀಚೆಗೆ ನಾನು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ನಡೆಸಿದ್ದ ವಿಚಾರಸಂಕಿರಣಕ್ಕೆ ಹೋಗಿದ್ದೆ. ನಾನು ಮಾತನಾಡಿದ ನಂತರ ಸಭೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಪ್ರತಿಕ್ರಿಯಿಸಿ `ಕೆಲವು ದಿನಗಳ ಹಿಂದೆ ಹಿಂದುಳಿದ ಜಾತಿಗೆ ಸೇರಿರುವ ಬಳ್ಳಾರಿಯ ಶಾಸಕರೊಬ್ಬರು ನಡುರಾತ್ರಿಯಲ್ಲಿ ಫೋನ್ ಮಾಡಿ ನನ್ನನ್ನು ಎಬ್ಬಿಸಿ ದೇವರಾಜ ಅರಸು ಬಗ್ಗೆ ಸ್ಪಲ್ಪ ಹೇಳಿ ಎಂದರು.

ಮರುದಿನ ಅರಸು ಕುರಿತ ಕಾರ್ಯಕ್ರಮವೊಂದರಲ್ಲಿ ಅವರು ಭಾಷಣ ಮಾಡಬೇಕಿತ್ತಂತೆ. ಹಿಂದುಳಿದ ಜಾತಿಗಳ ನಾಯಕರಿಗೆ ಏನು ಗತಿ ಬಂತು ನೋಡಿ~ ಎಂದು ನಕ್ಕರು, ಸಭೆಯಲ್ಲಿದ್ದವರೆಲ್ಲರೂ ಕೂಡಿ ನಕ್ಕರು. ಆ ಶಾಸಕನ ಹೆಸರು ಶ್ರಿರಾಮುಲು. ಇವರು ಹಿಂದುಳಿದ ಜಾತಿಗಳ ಲೇಟೆಸ್ಟ್ ನಾಯಕ. ಅರಸು ಅವರ ಆತ್ಮ ತಣ್ಣಗಿರಲಿ.

Monday, March 12, 2012

ತೃತೀಯರಂಗ ಎಂಬ ಮರೀಚಿಕೆಯ ಬೆನ್ನತ್ತಿ.... March 12, 2012


ಯಾವುದೋ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲವೇ ಬಿಜೆಪಿಯನ್ನು ಬಿಟ್ಟು ಬೇರೊಂದು ಪ್ರಾದೇಶಿಕ ಪಕ್ಷ ಚುನಾವಣೆಯಲ್ಲಿ ಗೆದ್ದ ಕೂಡಲೇ ನಾಲ್ಕು ದಿಕ್ಕುಗಳಿಂದಲೂ ತೃತೀಯರಂಗದ ಗಂಟೆಗಳು ಮೊಳಗತೊಡಗುತ್ತವೆ. ಒಂದು ಕಾಲದಲ್ಲಿ ಈ ಗಂಟೆ ಆಡಿಸುತ್ತಿದ್ದವರು ಸಿಪಿಎಂ ಪಕ್ಷದ ನಾಯಕ ಹರಿಕಿಷನ್‌ಸಿಂಗ್ ಸುರ್ಜಿತ್.  ಬದುಕಿದ್ದರೆ ದೆಹಲಿಯಲ್ಲಿದ್ದ ಅವರ ಮನೆ ಈಗ ತೃತೀಯರಂಗದ ತಥಾಕಥಿತ ನಾಯಕರಿಂದ ತುಂಬಿ ತುಳುಕಾಡುತ್ತಿತ್ತೋ ಏನೋ? ಸುರ್ಜಿತ್ ನಂತರ ಅವರ ಚಪ್ಪಲಿಯಲ್ಲಿ ಕಾಲುತೂರಿ ಹೊರಟವರು ಮುಲಾಯಂ ಸಿಂಗ್ ಯಾದವ್. ಇದರಿಂದಾಗಿಯೇ ಉತ್ತರಪ್ರದೇಶದ ಚುನಾವಣೆಯ ನಂತರ ತೃತೀಯ ರಂಗದ ಆಶಾವಾದಿಗಳು ಮೈಮುರಿದು ಎದ್ದು ಕೂತಿದ್ದಾರೆ. ಆಗಲೇ ಮಾಧ್ಯಮಗಳು ತೃತೀಯರಂಗವನ್ನು ರಾಜಕೀಯ ಚರ್ಚೆಯ ಕೇಂದ್ರಸ್ಥಾನದಲ್ಲಿ ತಂದು ನಿಲ್ಲಿಸಿವೆ. ವಾಸ್ತವ ಸಂಗತಿ ಏನೆಂದರೆ, ಸದ್ಯದ ಭವಿಷ್ಯದಲ್ಲಿ ತೃತೀಯರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ. ಇನ್ನೂ ಸ್ವಲ್ಪ ಹುಂಬ ಧೈರ್ಯದಿಂದ ಹೇಳುವುದಾದರೆ ಭಾರತದಲ್ಲಿ ಕನಿಷ್ಠ ಮುಂದಿನ ಹತ್ತು ವರ್ಷ ತೃತೀಯರಂಗಕ್ಕೆ ಭವಿಷ್ಯ ಇಲ್ಲ.
ಈ ಸತ್ಯ ತೃತೀಯರಂಗದ ಪ್ರತಿಪಾದಕರೆಲ್ಲರಿಗೂ ಗೊತ್ತು, ಹೀಗಿದ್ದರೂ ಅವರು ತೃತೀಯ ರಂಗದ ಕನಸುಗಳನ್ನು ತುಂಬಿದ ಬಣ್ಣಬಣ್ಣದ ಬಲೂನ್‌ಗಳ ಮಾರಾಟವನ್ನು ನಿಲ್ಲಿಸುವುದಿಲ್ಲ, ಆ ಕನಸುಗಳ ಬಲೂನ್ ಎಷ್ಟು ಬಾರಿ ಒಡೆದುಹೋದರೂ ಅದನ್ನು ಒಂದಷ್ಟು ಜನ ಕೊಂಡು ಕೊಳ್ಳುವುದನ್ನೂ ನಿಲ್ಲಿಸುವುದಿಲ್ಲ. ಮೊದಲನೆಯದಾಗಿ, ತೃತೀಯರಂಗದ ಸ್ವರೂಪದ ಬಗ್ಗೆಯೇ ನಮ್ಮಲ್ಲಿ ಬಹಳಷ್ಟು ಗೊಂದಲಗಳಿವೆ. ಮೂಲ ಅರ್ಥದ ಪ್ರಕಾರ ತೃತೀಯರಂಗ ಎನ್ನುವುದು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ದೂರ ಇರುವ ಪಕ್ಷಗಳ ಒಕ್ಕೂಟ. ಈ ದೂರ ತತ್ವದ ಆಧಾರದ್ದು. ಆದರೆ ಬಹುತೇಕ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ವಿರೋಧಿಸುತ್ತಾ ವಿರೋಧಿಸುತ್ತಾ ಕೊನೆಗೆ ಅವುಗಳ ಗುಣಲಕ್ಷಣಗಳನ್ನೇ ಮೈಗೂಡಿಸಿಕೊಂಡಿವೆ. ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ ಮತ್ತು ವಂಶಪರಂಪರೆಯನ್ನು ವಿರೋಧಿಸಿಯೇ 1977ರಲ್ಲಿ  ಪರ್ಯಾಯ ಹುಟ್ಟಿಕೊಂಡದ್ದು. ಆದರೆ ಉತ್ತರಪ್ರದೇಶದಲ್ಲಿ ಈಗ ನಡೆಯುತ್ತಿರುವುದೇನು?
ಈಗಿನ ವಿಜಯೋತ್ಸಾಹದ ಭರದಲ್ಲಿ ಮಾಧ್ಯಮಗಳು ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯ ಎರಡು ಮುಖ್ಯ ಅನಿಷ್ಟಗಳಾದ ವಂಶಪರಂಪರೆಯ ಮುಂದುವರಿಕೆ ಮತ್ತು ಆಂತರಿಕ ಪ್ರಜಾಪ್ರಭುತ್ವದ ದಮನ, ಸಮಾಜವಾದಿ ಪಕ್ಷದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಕುರುಡರಾಗಿದ್ದಾರೆ. ಮಗನಿಗೆ ಪಟ್ಟ ಕಟ್ಟುವ ಅವಸರದಲ್ಲಿರುವ ಮುಲಾಯಂಸಿಂಗ್ ಯಾದವ್, ಪಕ್ಷ ಕಟ್ಟಲು ಬೆವರು ಸುರಿಸಿದ ಹಿರಿಯ ನಾಯಕರನ್ನು ಮೂಲೆಗೆ ತಳ್ಳಿದ್ದಾರೆ. ಅದು ನಿಜವಾದ ಅರ್ಥದಲ್ಲಿ `ತಂದೆ-ಮಗ`ನ ಪಕ್ಷವಾಗಿ ಹೋಗಿದೆ.  `ಲೋಹಿಯಾ ಕೆ ಸಾಥ್` ಎಂಬ ಬ್ಯಾನರ್-ಪೋಸ್ಟರ್‌ಗಳ ಮೂಲಕ ಚುನಾವಣಾ ಪ್ರಚಾರ ನಡೆಸಿದ ಸಮಾಜವಾದಿ ಪಕ್ಷ, ರಾಜಕೀಯದಲ್ಲಿ ವಂಶಪರಂಪರೆಯನ್ನು ಲೋಹಿಯಾ ವಿರೋಧಿಸಿದ್ದರು ಎನ್ನುವುದನ್ನು ಜಾಣತನದಿಂದ ಮರೆತುಬಿಟ್ಟಿದೆ.
ತತ್ವದ ವಿಚಾರವನ್ನು ಪಕ್ಕಕ್ಕಿಟ್ಟು ಸಂಖ್ಯೆಯನ್ನಷ್ಟೇ ಗಮನಕ್ಕೆ ತೆಗೆದುಕೊಳ್ಳುವುದಾದರೆ ತೃತೀಯರಂಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಎರಡು ರಾಷ್ಟ್ರೀಯ ಪಕ್ಷಗಳ ಬೆಂಬಲ ಇಲ್ಲದೆ ಸಾಮಾನ್ಯ ಬಹುಮತಕ್ಕೆ ಬೇಕಾಗಿರುವ 272 ಸದಸ್ಯರ ಸ್ವಂತ ಬಲವನ್ನು ಗಳಿಸಬೇಕು. 1952ರಿಂದ 2004ರ ವರೆಗಿನ ದೇಶದ ಚುನಾವಣಾ ಇತಿಹಾಸವನ್ನು ನೋಡಿದರೆ 1977ರ ಚುನಾವಣೆಯೊಂದನ್ನು (ಕಾಂಗ್ರೆಸ್ 154+ ಜನಸಂಘ 93=247) ಹೊರತುಪಡಿಸಿ ಬೇರೆ ಯಾವುದರಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿಯ ಒಟ್ಟು ಬಲ 272ಕ್ಕಿಂತ ಕೆಳಗೆ ಇಳಿದಿಲ್ಲ. ಕನಿಷ್ಠ ಎಂದರೆ 1989ರಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಗಳಿಸಿದ್ದ 282 ಸ್ಥಾನಗಳು. ಅಂದರೆ 1977ರ ಚುನಾವಣೆಯೊಂದನ್ನು ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ಒಟ್ಟು ಸದಸ್ಯ ಬಲ ಎಂದೂ 272 ತಲುಪಿಲ್ಲ. 1991ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಈ ಎರಡು ಪಕ್ಷಗಳು ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವುದು 2009ರ ಚುನಾವಣೆಯಲ್ಲಿ (ಕಾಂಗ್ರೆಸ್ 206+ಬಿಜೆಪಿ 114=320). ಹೀಗಿದ್ದಾಗ ಈ ಎರಡೂ ಪಕ್ಷಗಳನ್ನು ಹೊರಗಿಟ್ಟ ತೃತೀಯರಂಗ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ?
`ಅಂತರ ಇರುವುದು 40-50 ಸ್ಥಾನಗಳಲ್ಲವೇ? ಅದನ್ನು ಗಳಿಸುವುದು ಅಷ್ಟೇನೂ ಕಷ್ಟವಾಗಲಾರದು. ಉತ್ತರಪ್ರದೇಶದಲ್ಲಿಯೇ ಅದನ್ನು ಪಡೆದುಕೊಳ್ಳಬಹುದು` ಎಂದು ಯಾರೋ ಕಡು ಆಶಾವಾದಿಗಳು ಹೇಳಬಹುದು. ಅದು ಕೂಡಾ ನಿಜವಾಯಿತೆಂದು ತಿಳಿದುಕೊಳ್ಳಿ, ಆಗಲೂ ತೃತೀಯರಂಗ ಅಧಿಕಾರಕ್ಕೆ ಬರಲು ಸಾಧ್ಯವಾಗಲಾರದು. ಇದಕ್ಕೆ ಕಾರಣ ತೃತೀಯ ರಂಗದೊಳಗಿರುವ ಪಕ್ಷಗಳ ನಡುವಿನ ಬಿಕ್ಕಟ್ಟು. ಇದನ್ನು ಉತ್ತರಪ್ರದೇಶದಿಂದಲೇ ಪ್ರಾರಂಭಿಸೋಣ. ಅಲ್ಲಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒಟ್ಟಾಗಿ ಒಂದೇ ಸರ್ಕಾರದಲ್ಲಿ ಸೇರಿಕೊಳ್ಳಲು ಸಾಧ್ಯವೇ? ಅದೇ ರೀತಿ, ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ, ಬಿಹಾರದ ಜೆಡಿ (ಯು) ಮತ್ತು ಆರ್‌ಜೆಡಿ, ಪಶ್ಚಿಮಬಂಗಾಳದ ಎಡಪಕ್ಷಗಳು ಮತ್ತು ಟಿಎಂಸಿ, ಕಾಶ್ಮೀರದ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ಒಟ್ಟಾಗಿ ಒಂದು ಮೈತ್ರಿಕೂಟದಡಿ ಇರಲು ಸಾಧ್ಯವೇ? ತೃತೀಯರಂಗದ ಆಶಾವಾದಿಗಳು ಎಷ್ಟೇ ಬೊಬ್ಬಿಟ್ಟರೂ ಅಂತಿಮವಾಗಿ ಅವರು ಒಂದೋ ಕಾಂಗ್ರೆಸ್ ನೇತೃತ್ವದ ಯುಪಿಎ ಜತೆ ಇಲ್ಲವೇ ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಸೇರಿಕೊಳ್ಳಲೇಬೇಕು. ಅದನ್ನು ತೃತೀಯರಂಗ ಎಂದು ಕರೆಯಲು ಹೇಗೆ ಸಾಧ್ಯ? ಇನ್ನೂ ಹುಟ್ಟದ ತೃತೀಯರಂಗದ ಗಾಳಿಪಟ ಹಾರುತ್ತಿರುವುದನ್ನು ನೋಡಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮರೆಯಲ್ಲಿ ನಿಂತು ನಗುತ್ತಿರುವುದು ಈ ಕಾರಣಕ್ಕೆ. ಕೊನೆಗೂ ಈ ನಾಯಕರು ನಮ್ಮ ಮನೆ ಬಾಗಿಲು ತಟ್ಟಲೇ ಬೇಕು ಎಂದು ಅವರಿಗೆ ಗೊತ್ತಿದೆ.
ಈ ಹಿನ್ನೆಲೆಯಲ್ಲಿ 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಪೂರ್ವ ಮತ್ತು ನಂತರದಲ್ಲಿ ಕುತೂಹಲದಿಂದ ನೋಡಬೇಕಾಗಿರುವುದು ತೃತೀಯರಂಗದ ಹುಟ್ಟು-ಬೆಳವಣಿಗೆಯಲ್ಲ, ಅದು ಯುಪಿಎ ಇಲ್ಲವೇ ಎನ್‌ಡಿಎ-ಇವುಗಳಲ್ಲಿ ಯಾವ ರಂಗದ ಬಲವರ್ಧನೆಯಾಗಲಿದೆ ಎನ್ನುವುದನ್ನು. ಈಗಿನ ಬಲಾಬಲದಲ್ಲಿ ಕಾಂಗ್ರೆಸ್ (206) ನೇತೃತ್ವದ ಯುಪಿಎನಲ್ಲಿ, ತೃಣಮೂಲ ಕಾಂಗ್ರೆಸ್ (19), ಡಿಎಂಕೆ (18), ಎನ್‌ಸಿಪಿ (9) ಮತ್ತು ಇತರ ಸಣ್ಣಪಕ್ಷಗಳು (21) ಇವೆ. ಎಸ್‌ಪಿ (22), ಬಿಎಸ್‌ಪಿ (21) ಮತ್ತು ಇತರ ಸಣ್ಣಪಕ್ಷಗಳು (7) ಅದಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿವೆ. ಅದೇ ರೀತಿ, ಬಿಜೆಪಿ (114) ನೇತೃತ್ವದ ಎನ್‌ಡಿಎನಲ್ಲಿ ಜೆಡಿ (ಯು) (20) ಮತ್ತು ಇತರ ಸಣ್ಣಪಕ್ಷಗಳು (15) ಇವೆ. ಇವುಗಳ ಜತೆಗೆ ಈ ಎರಡೂ ಗುಂಪಿಗೂ ಸೇರದ ಸಿಪಿಎಂ (16), ಬಿಜೆಡಿ (14), ಎಐಎಡಿಎಂಕೆ (9) ಮತ್ತು ಇತರ ಪಕ್ಷಗಳು (26) ಇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳ ಬಲಾಬಲ ಏನಾಗಲಿದೆ ಎಂಬುದರ ಮೇಲೆ ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎನ್ನುವುದು ನಿರ್ಧಾರವಾಗಬಹುದು.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯೇನಾದರೂ ಕನಿಷ್ಠ 80-100 ಸ್ಥಾನಗಳನ್ನು ಗಳಿಸಿದ್ದರೆ ಆ ಗೆಲುವು ಎನ್‌ಡಿಎ ಬಲವರ್ಧನೆಗೆ ಚಾಲನೆ ನೀಡುತ್ತಿತ್ತೋ ಏನೋ? ಈಗಿನ ಪರಿಸ್ಥಿತಿಯಲ್ಲಿ ಹೆಚ್ಚು ಅನುಕೂಲಗಳಿರುವುದು ಯುಪಿಎಗೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳ ನಾಯಕರಲ್ಲಿ ಮುಲಾಯಂಸಿಂಗ್ ಯಾದವ್ ಸೇರಿದಂತೆ ಆಂತರಿಕವಾಗಿ ಹೆಚ್ಚಿನವರ ಒಲವು ಇರುವುದು ಎನ್‌ಡಿಎ ಕಡೆಗೆ. ಇದಕ್ಕೆ ವಾಜಪೇಯಿ ನೇತೃತ್ವದ ಆರು ವರ್ಷಗಳ ಎನ್‌ಡಿಎ ಸರ್ಕಾರದಲ್ಲಿ ಬಿಜೆಪಿ ನಾಯಕರು ಮಿತ್ರಪಕ್ಷಗಳನ್ನು ನಡೆಸಿಕೊಂಡ ರೀತಿ ಮೊದಲ ಕಾರಣ. ಬೇರೆ ಪಕ್ಷಗಳಿಗೆ ಎಷ್ಟು ಜಾಗ ಮತ್ತು ಅವಕಾಶವನ್ನು ಕೊಡಬೇಕೆಂದು ಆ ಪಕ್ಷದ ನಾಯಕರಿಗೆ ಗೊತ್ತಿದೆ. ಆದುದರಿಂದಲೇ ಬಿಜೆಪಿಯ ಕೇಂದ್ರನಾಯಕರೊಂದಿಗೆ ಜಗಳವಾಡಿಕೊಂಡು ಎನ್‌ಡಿಎಯಿಂದ ಹೊರಹೋದ ಪಕ್ಷಗಳು ಕಡಿಮೆ. ಹೆಚ್ಚಿನವರು ಎನ್‌ಡಿಎ ಜತೆ ಸಂಬಂಧ ಕಡಿದುಕೊಂಡಿದ್ದು ಮುಖ್ಯವಾಗಿ ತಮ್ಮ ರಾಜ್ಯದಲ್ಲಿನ ಮುಸ್ಲಿಂ ಮತದಾರರನ್ನು ಕಳೆದುಕೊಳ್ಳಬಹುದೆಂಬ ಭಯದಿಂದ. ಇನ್ನು ಕೆಲವು ಪಕ್ಷಗಳು ರಾಜ್ಯಮಟ್ಟದ ಬಿಜೆಪಿ ನಾಯಕರ ಜತೆಗಿನ ಸಂಘರ್ಷದ ಕಾರಣಕ್ಕೆ ದೂರವಾಗಿವೆ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ದುರಹಂಕಾರಿ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಮೈಗೂಡಿಸಿಕೊಂಡ ಪಕ್ಷ. ಏಕಚಕ್ರಾಧಿಪತ್ಯವನ್ನು ಅದು ಎಂದೋ ಕಳೆದುಕೊಂಡಿದ್ದರೂ ಆ ಗುಂಗಿನಿಂದ ಹೊರಬಂದಿಲ್ಲ. ಅದಕ್ಕೆ ಪ್ರತಿಯೊಂದು ಮಿತ್ರಪಕ್ಷಗಳ ಬೆಳವಣಿಗೆಯಲ್ಲಿಯೂ ತನ್ನ ವಿರುದ್ಧದ ಸಂಚು ಕಾಣಿಸುತ್ತದೆ. ಯುಪಿಎ ಯಲ್ಲಿ ಈಗ ಇರುವ ಟಿಎಂಸಿ, ಡಿಎಂಕೆ ಇಲ್ಲವೇ ಎನ್‌ಸಿಪಿ ಯಾವ ಪಕ್ಷದ ಜತೆಯಲ್ಲಿಯೂ ಕಾಂಗ್ರೆಸ್ ಸಂಬಂಧ ಸೌಹಾರ್ದವಾಗಿಲ್ಲ. ಬೇರೆ ದಾರಿ ಇಲ್ಲದೆ ಈ ಪಕ್ಷಗಳು ಯುಪಿಎ ಜತೆಯಲ್ಲಿವೆ. ಮೂಲತಃ ಕಾಂಗ್ರೆಸ್ ವಿರೋಧಿಯಾಗಿರುವ ಮುಲಾಯಂಸಿಂಗ್ ಯಾದವ್ ಅವರಿಗೆ ಇದು ಚೆನ್ನಾಗಿ ಗೊತ್ತು. ದುರಂತವೆಂದರೆ ಈಗಲೂ ಅವರು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯ ಇದ್ದರೆ ಅದು ತಾನು ವೈಯಕ್ತಿಕವಾಗಿ ಒಲ್ಲದ ಆದರೆ ರಾಜಕೀಯವಾಗಿ ಅನಿವಾರ್ಯವಾಗಿರುವ ಯುಪಿಎ ಜತೆ ಮಾತ್ರ. ಎನ್‌ಡಿಎ ಜತೆ ಕೂಡಿಕೊಂಡರೆ  ಅವರು ಮತ್ತೊಮ್ಮೆ ಮುಸ್ಲಿಮರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಈ ಚುನಾವಣೆಯಲ್ಲಿ ಗಳಿಸಿರುವ ಹೆಚ್ಚುವರಿ ನಾಲ್ಕುವರೆಯಷ್ಟು ಮತಗಳು ಕೈಜಾರಿ ಹೋಗಬಹುದು. ಆದುದರಿಂದ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ತೃತೀಯರಂಗದ ಬಲವರ್ಧನೆಗೆ ನೆರವಾಗುವ ಸಾಧ್ಯತೆ ಇಲ್ಲ.
ಉತ್ತರ ಪ್ರದೇಶದ ಮತದಾರರಂತೆ ದೇಶದ ಮತದಾರರು ಕೂಡಾ ತ್ರಿಶಂಕು ಸ್ಥಿತಿ ಬೇಡವೇ ಬೇಡ ಎಂದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏನಾದರೂ ತೀರ್ಮಾನಿಸಿದರೂ ಅದರ ಲಾಭ ಎರಡರಲ್ಲಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಸಿಗಬಹುದೇ ಹೊರತು, ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಸಿಗಲಾರದು. ಒಂದು ವೇಳೆ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕರಿಸಿ ಅವುಗಳ ಬಲ ತೀರಾ ಕುಸಿದು ಬಿಟ್ಟರೆ, ಆಗ ತೃತೀಯರಂಗಕ್ಕೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷದ ಬೆಂಬಲ ಪಡೆದು ತೃತೀಯ ರಂಗದ ನಾಯಕನೊಬ್ಬ ಪ್ರಧಾನಮಂತ್ರಿಯಾಗಲು ಸಾಧ್ಯ. ಅಂತಹ ಸಂದರ್ಭದಲ್ಲಿ  ಇಬ್ಬರ ಅವಕಾಶ ಉಜ್ವಲವಾಗಿದೆ. ಮೊದಲನೆಯವರು ನಿತೀಶ್‌ಕುಮಾರ್, ಎರಡನೆಯವರು ಮುಲಾಯಂಸಿಂಗ್ ಯಾದವ್. ಬೆಂಬಲಕ್ಕಾಗಿ ಯಾವ ರಾಷ್ಟ್ರೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಇವರಿಬ್ಬರಿಗೂ ಹೆಚ್ಚು ಆಯ್ಕೆಗಳಿಲ್ಲ. ನಿತೀಶ್‌ಗೆ ಬಿಜೆಪಿ ಮತ್ತು ಮುಲಾಯಂ ಸಿಂಗ್‌ಗೆ ಕಾಂಗ್ರೆಸ್ ಅನಿವಾರ್ಯ. ಆದರೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಬೆಂಬಲಿಸಿದ್ದ ತೃತೀಯರಂಗದ ಸರ್ಕಾರಗಳ ರಚನೆಯ ಈ ವರೆಗಿನ ಇತಿಹಾಸವನ್ನು ನೋಡಿದರೆ ಅಂತಹ ಸರ್ಕಾರ ಬಹಳ ದಿನ ಬಾಳಬಹುದೆಂದು ಅನಿಸುವುದಿಲ್ಲ. 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವನ್ನು ಬಿಜೆಪಿ ಉರುಳಿಸಿದ್ದರೆ, 1996ರಲ್ಲಿ ಮೊದಲು ಎಚ್.ಡಿ.ದೇವೇಗೌಡ ಮತ್ತು ನಂತರ ಐ.ಕೆ.ಗುಜ್ರಾಲ್ ನೇತೃತ್ವದ ಸಂಯುಕ್ತರಂಗ ಸರ್ಕಾರವನ್ನು ಉರುಳಿಸಿದ್ದು ಕಾಂಗ್ರೆಸ್. ತೃತೀಯರಂಗ ಎನ್ನುವುದು ಕೊನೆಗೂ ಮರೀಚಿಕೆಯೇ...

Monday, March 5, 2012

ಮುಖ್ಯಮಂತ್ರಿಗಳಿದ್ದಾರೆ, ಅವರ ಕೈಯಲ್ಲಿ ಅಧಿಕಾರ ಎಲ್ಲಿದೆ? March 05, 2012

ಕಳೆದ ತಿಂಗಳ ಎಂಟರಂದು ನಾನು ಉತ್ತರಪ್ರದೇಶದ ಫೈಜಾಬಾದ್‌ನಲ್ಲಿದ್ದೆ. ಆ ದಿನ ನಡೆಯಲಿದ್ದ ಮೊದಲ ಸುತ್ತಿನ ಮತದಾನವನ್ನು ಅಯೋಧ್ಯೆಯಿಂದ ವರದಿ ಮಾಡಲೆಂದು ಬಂದಿದ್ದ ಪತ್ರಕರ್ತರ ದಂಡು ನಾನಿದ್ದ ಹೊಟೇಲ್‌ನಲ್ಲಿಯೇ ಬೀಡುಬಿಟ್ಟಿತ್ತು.
 
ಬೆಳಿಗ್ಗೆ ಇನ್ನೂ ಏಳು ಗಂಟೆ ಆಗಿರಲಿಲ್ಲ, ಅಷ್ಟರಲ್ಲಿ ಯಾರೋ ಬಾಗಿಲು ಬಡಿದಂತಾಯಿತೆಂದು ತೆರೆದು ನೋಡಿದರೆ ಪಕ್ಕದ ಕೋಣೆಯಲ್ಲಿದ್ದ ಟಿವಿ ಚಾನೆಲ್‌ನ ವರದಿಗಾರ ಕೈಯಲ್ಲಿ `ದೈನಿಕ್ ಜಾಗರಣ್` ಪತ್ರಿಕೆ ಮತ್ತು ಮೈಕ್ ಹಿಡಿದುಕೊಂಡು ನಿಂತಿದ್ದ. ಹಿಂದಿನ ರಾತ್ರಿಯಷ್ಟೇ ಆತನ ಪರಿಚಯವಾಗಿತ್ತು. `ಆಪ್ ಹಿಂದಿ ಮೇ ದೋ ಶಬ್ದ್ ಬೋಲ್ ಸಕ್ತೆ ಹೋ?` ಎಂದ. `ಯಾಕೆ` ಎಂದು ಕೇಳಿದೆ.
 
ಆತ ನನ್ನ ಮುಖಕ್ಕೆ ಪತ್ರಿಕೆಯ ಮುಖಪುಟ ಹಿಡಿದ. ಅದರಲ್ಲಿ `ಬಿಜೆಪಿ ಮಂತ್ರಿಯೋಂ ಸದನ್ ಮೇ ಪೊರ್ನ್ ವಿಡಿಯೋ ದೇಖಾ` (ಬಿಜೆಪಿ ಮಂತ್ರಿಗಳು ಸದನದಲ್ಲಿ ಪೊರ್ನೋ ವಿಡಿಯೋ ನೋಡಿದರು) ಎಂಬ ಸುದ್ದಿ ಎರಡನೇ ಲೀಡ್ ಆಗಿ ಪ್ರಕಟವಾಗಿತ್ತು. ಆತನಿಗೆ ಅರ್ಜೆಂಟಾಗಿ ಒಂದು ಬೈಟ್ ಬೇಕಿತ್ತು. `ಸಾರಿ, ನನ್ನ ಹಿಂದಿ ಅಷ್ಟೊಂದು ಚೆನ್ನಾಗಿಲ್ಲ` (ಅಷ್ಟೊಂದು ಕೆಟ್ಟದೂ ಆಗಿಲ್ಲ) ಎಂದು ಹೇಳಿ ಬಾಗಿಲು ಮುಚ್ಚಿದೆ.

ಅದರ ನಂತರದ ದಿನಗಳಲ್ಲಿ ಯಾರಿಗೆ ನನ್ನನ್ನು ಪರಿಚಯಿಸಿಕೊಂಡರೂ ಅವರು ಮೊದಲು ಕೇಳುತ್ತಿದ್ದದು `ಶಾಸಕರ ಅಶ್ಲೀಲ ವಿಡಿಯೋ ವೀಕ್ಷಣೆ ಮತ್ತು ಯಡಿಯೂರಪ್ಪನವರಿಗೆ ಸಂಬಂಧಿಸಿದ್ದ ಪ್ರಶ್ನೆಗಳನ್ನು. ಉತ್ತರಪ್ರದೇಶದ ಬಹಳ ಮಂದಿ ಪತ್ರಕರ್ತರು ಯಡಿಯೂರಪ್ಪನವರನ್ನು `ವೊ ತೋ ಕರ್ನಾಟಕ್ ಕಾ ಕಲ್ಯಾಣ್‌ಸಿಂಗ್` ಎನ್ನುತ್ತಿದ್ದರು. ಇಬ್ಬರ ರಾಜಕೀಯ ಮತ್ತು ಖಾಸಗಿ ಜೀವನಗಳಿಗೆ ಬಹಳಷ್ಟು ಹೋಲಿಕೆಯೂ ಇದೆ. ಬಿಜೆಪಿಯ ಒಂದು ಕಾಲದ ಕಣ್ಮಣಿ ಕಲ್ಯಾಣ್‌ಸಿಂಗ್ ಕುಸುಮಾ ರಾಯ್ ಎಂಬ ಹೆಣ್ಣಿನ ಸ್ನೇಹಕ್ಕೆ ಬಿದ್ದು ರಾಜಕೀಯ ಜೀವನವನ್ನೇ ಕಳೆದುಕೊಂಡು ವನವಾಸ ಅನುಭವಿಸುತ್ತಿದ್ದಾರೆ. 

ಅವರೆಲ್ಲರ ಆಸಕ್ತಿಗೆ ಮುಖ್ಯ ಕಾರಣ ಉತ್ತರ ಭಾರತದ ಮಾಧ್ಯಮಗಳಲ್ಲಿ ಆ ಪ್ರಕರಣಕ್ಕೆ ನೀಡಿದ್ದ ವ್ಯಾಪಕ ಪ್ರಚಾರ. ಸ್ಥಳೀಯ ಕೇಬಲ್ ಚಾನೆಲ್‌ಗಳು ಯಾವುದೋ ಬ್ಲೂಫಿಲಂಗಳ ಕ್ಲಿಪ್ಪಿಂಗ್ಸ್‌ಗಳನ್ನೆಲ್ಲ ಕರ್ನಾಟಕದ ಬಿಜೆಪಿ ಶಾಸಕರು ನೋಡಿದ್ದೆಂದು ಹೇಳಿ ತೋರಿಸಿ ಪ್ರಸಾರ ಮಾಡುತ್ತಿದ್ದವು. 

 ಹೊರರಾಜ್ಯಗಳಲ್ಲಿ ಈ ರೀತಿ ಕರ್ನಾಟಕದ ಮಾನ ಎಂದೂ ಹರಾಜಾಗಿರಲಿಲ್ಲ. `ಬಿಮಾರು` ರಾಜ್ಯಗಳೆಂಬ ಕುಖ್ಯಾತಿ ಪಡೆದಿದ್ದ ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶಗಳಲ್ಲಿಯಾದರೂ ಕರ್ನಾಟಕದವರೆಂದು ಹೇಳಿಕೊಂಡರೆ ಒಂದಿಷ್ಟು ಮರ್ಯಾದೆ -ಗೌರವ ಇತ್ತು. ಈಗ ಆ ರಾಜ್ಯದ ಜನರೂ ನಮ್ಮನ್ನೂ ಗೇಲಿ ಮಾಡುತ್ತಿರುವವರಂತೆ ನೋಡುತ್ತಿದ್ದಾರೆ. ರೋಗಗ್ರಸ್ತವಾಗಿದ್ದ ಆ ನಾಲ್ಕೂ ರಾಜ್ಯಗಳಲ್ಲಿಯೂ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ.
 
ಕರ್ನಾಟಕ ಮತ್ತೆ ಶಿಲಾಯುಗದ ಕಡೆ ಹೋಗುತ್ತಿದೆ. ಬಹುಶಃ ನಿನ್ನೆಯೂ ಪತ್ರಕರ್ತರಿಗೆ ಕಲ್ಲೆತ್ತಿಕೊಂಡು ಹೊಡೆಯಲು ನಿಂತ ವಕೀಲರು ಮತ್ತು ಪಕ್ಕದಲ್ಲಿ ಕೈಕಟ್ಟಿ ನಿಂತ ಪೊಲೀಸರ ಚಿತ್ರಗಳು ಅಲ್ಲಿನ  ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗಿರಬಹುದು. ಇದು `ಶಿಲಾ`ಯುಗವಲ್ಲದೆ ಮತ್ತೇನು?

ಚುನಾಯಿತ ಸರ್ಕಾರವೊಂದು ಕೊನೆಯ ದಿನಗಳಲ್ಲಿ ಇಂತಹ  ಪರಿಸ್ಥಿತಿಯನ್ನು ಎದುರಿಸುತ್ತದೆ. ಆಡಳಿತದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವುದು, ಮನೆಗೆ ಹೋಗಲಿರುವ ಸರ್ಕಾರ ಎಂದು ಅಧಿಕಾರಿಗಳು ಕೂಡಾ ಆಡಳಿತಾರೂಢರ ಮಾತಿಗೆ ಬೆಲೆ ಕೊಡದಿರುವುದು, ಅಸಹಾಯಕ ಜನ ಬೀದಿಗಿಳಿಯುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು, ಸರ್ಕಾರದ ವಿರುದ್ಧ ಮಾತ್ರವಲ್ಲ, ಪರಸ್ಪರ ಬಡಿದಾಡಿಕೊಳ್ಳುವುದು... ಇವೆಲ್ಲ ಸಾಮಾನ್ಯ. ಆದರೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಇಂತಹ ಪರಿಸ್ಥಿತಿ ಇತ್ತು. 

ಬಿ.ಎಸ್.ಯಡಿಯೂರಪ್ಪನವರು ವಿಧಾನಸೌಧದ ಒಳಗೆ ಹೋಗಿ ಕೂತದ್ದೇ ಕಡಿಮೆ. ಕೂತಾಗಲೂ ಅವರ ಕೈಯಲ್ಲಿ ಅಧಿಕಾರ ಮಾತ್ರ ಇರಲೇ ಇಲ್ಲ. ಅವರ ಆಡಳಿತದ ಬಗ್ಗೆ ನಾನು ಬರೆದ ಮೊದಲ ಅಂಕಣ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು (`ಮುಖ್ಯಮಂತ್ರಿಗಳೇ, ಅಧಿಕಾರ ನಿಮ್ಮ ಕೈಯಲ್ಲಿಯೇ ಇರಲಿ`- ದೆಹಲಿನೋಟ. ಅಕ್ಟೋಬರ್ 6, 2008). ಪರಿಸ್ಥಿತಿ ಹಾಗೆಯೇ ಮುಂದುವರಿದಿತ್ತು, ಈಗಲೂ ಬದಲಾಗಿಲ್ಲ.

ಎರಡು ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಊರಾಗಿರುವ ಸುಳ್ಯದಲ್ಲಿಯೇ ಒಂದು ಘಟನೆ ನಡೆದಿತ್ತು. ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಜೈಲಿನಿಂದ ಬಿಡುಗಡೆಯಾಗಿದ್ದ ನಾಲ್ಕು ಮಂದಿ ಕಾರಿನಲ್ಲಿ ಊರಿಗೆ ಹೋಗುತ್ತಿದ್ದಾಗ ಸುಳ್ಯ ಬಳಿ ಅವರನ್ನು ತಡೆದು ನಿಲ್ಲಿಸಿದ ಹಿಂದು ಸಂಘಟನೆಯ ಸದಸ್ಯರು ಬಲಾತ್ಕಾರವಾಗಿ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದರು. 

ಕಾರಿನಲ್ಲಿ ಜತೆಯಲ್ಲಿ ಹೋಗುವುದನ್ನು ಅಪರಾಧ ಎಂದು ಸಾಬೀತುಪಡಿಸುವುದು ಹೇಗೆ ಎನ್ನುವುದು ಅರ್ಥವಾಗದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಅವರನ್ನು ಬಿಟ್ಟುಬಿಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲೆಸೆದಿದ್ದರು. ಕಲ್ಲಿನೇಟಿನಿಂದ ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದರು. ತಕ್ಷಣ ಪೊಲೀಸರು ದುಷ್ಕೃತ್ಯದಲ್ಲಿ ತೊಡಗಿದ್ದವರನ್ನು ಬಂಧಿಸಿದರು. ಅವರಲ್ಲಿ ಕೆಲವರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೂ ಇದ್ದರು. 

ಮರುದಿನ ಪೊಲೀಸರ ವಿರುದ್ದ ಭಾರಿ ಪ್ರತಿಭಟನೆ ನಡೆಯಿತು. `ಊರಿನ ಮಗ`ನಾದ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಾಯಿತು. ಅದರ ಮರುದಿನ ಆ ಠಾಣೆಯ ಒಬ್ಬ ಸರ್ಕಲ್ ಇನ್‌ಸ್ಪೆಕ್ಟರ್, ಇಬ್ಬರು ಸಬ್‌ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಲಾಯಿತು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವರ್ಗಾವಣೆಯೂ ನಡೆಯಿತು. ತಾವು ಮಾಡಿರುವ ತಪ್ಪೇನು ಎನ್ನುವುದು ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ.

ಆದುದರಿಂದ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಟಿವಿ ಚಾನೆಲ್‌ಗಳ ವರದಿಗಾರರು ಮತ್ತು ಕ್ಯಾಮೆರಾಮೆನ್‌ಗಳ ಮೇಲೆ ವಕೀಲರು ನಡೆಸುವಷ್ಟರ ಮಟ್ಟಿಗೆ ತೋರಿದ ದಾರ್ಷ್ಟ್ಯ ಮತ್ತು  ಮೂಕಪ್ರೇಕ್ಷಕರಂತೆ ನಿಂತಿದ್ದ ಪೊಲೀಸರ ವರ್ತನೆ  ಹೊಸತೇನಲ್ಲ. ಈ ಪ್ರಕರಣವನ್ನಷ್ಟೆ ಪ್ರತ್ಯೇಕವಾಗಿಟ್ಟು ನೋಡಿದರೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೂ ಇಲ್ಲ. 

ಇದೊಂದು ಸರಣಿ. ಇದನ್ನು ಬಿಜೆಪಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಘಟನೆಯಿಂದ ಪ್ರಾರಂಭಿಸಿ ಅದರ ನಂತರ ನಡೆದ ಚರ್ಚ್‌ಗಳ ಮೇಲೆ ದಾಳಿ, ಮಂಗಳೂರಿನಲ್ಲಿ ಪಬ್‌ಗಳಿಗೆ ನುಗ್ಗಿ ಹುಡುಗಿಯರ ಮೇಲೆ ನಡೆಸಲಾದ ದೌರ್ಜನ್ಯ, ಸಚಿವರೊಬ್ಬರ ವಿರುದ್ದ ನರ್ಸ್ ನೀಡಿರುವ ದೂರು, ಶಾಸಕರೊಬ್ಬರ ಪತ್ನಿಯ ಆತ್ಮಹತ್ಯೆ, ಬೆಂಗಳೂರಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ, ವಿಧಾನಸಭೆಯಲ್ಲಿಯೇ ಶಾಸಕರು ಅಶ್ಲೀಲ ವಿಡಿಯೋ ನೋಡಿದ ಪ್ರಸಂಗದ ವರೆಗಿನ ಎಲ್ಲ ಘಟನೆಗಳೊಂದಿಗೆ ಸೇರಿಸಿ ನೋಡಬೇಕಾಗುತ್ತದೆ.

 ಇವೆಲ್ಲವುಗಳಲ್ಲಿನ ಒಂದು ಸಾಮಾನ್ಯ ಅಂಶ ಏನೆಂದರೆ ಯಾವ ಪ್ರಕರಣಗಳಲ್ಲಿಯೂ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗದಿರುವುದು ಮತ್ತು ಎಷ್ಟೋ ಸಂದರ್ಭಗಳಲ್ಲಿ ನಿರಪರಾಧಿಗಳಿಗೆ ಶಿಕ್ಷೆಯಾಗಿರುವುದು. ಚುನಾಯಿತ ಸರ್ಕಾರವೊಂದು ಸಂವಿಧಾನದತ್ತ ಅಧಿಕಾರವನ್ನು ತನ್ನಲ್ಲಿ ಇಟ್ಟುಕೊಳ್ಳದೆ, ಪ್ರಜೆಗಳಿಗಾಗಲಿ, ಸರ್ಕಾರಕ್ಕಾಗಲಿ ಉತ್ತರದಾಯಿ ಅಲ್ಲದ ಸಂವಿಧಾನೇತರ ಶಕ್ತಿಗಳ ಕೈಗೆ ಅದನ್ನು ಕೊಟ್ಟು ಬಿಟ್ಟರೆ ಇಂತಹ ಅನಾಹುತಗಳಲ್ಲದೆ ಬೇರೇನೂ ನಡೆಯಲು ಸಾಧ್ಯ? 

ಇದರಿಂದಾಗಿಯೇ ಯಡಿಯೂರಪ್ಪನವರು ಹಾದಿ ತಪ್ಪಿದ್ದು. ಮುಖ್ಯಮಂತ್ರಿಯಾಗಿದ್ದಾಗ ಅವರು ಪಕ್ಷದ ಹೈಕಮಾಂಡ್‌ಗಿಂತಲೂ ಹೆಚ್ಚು ನಿಷ್ಠರಾಗಿದ್ದು ಉಳಿದ ಮೂರು ಹೈಕಮಾಂಡ್‌ಗಳಿಗೆ. ಮೊದಲನೆಯದು ಸಂಘ ಪರಿವಾರ, ಎರಡನೆಯದು ವೀರಶೈವ ಮಠಗಳು ಮತ್ತು ಮೂರನೆಯದು ಬಳ್ಳಾರಿಯ ರೆಡ್ಡಿ ಸೋದರರು. 

ಯಡಿಯೂರಪ್ಪನವರು ರಾಜ್ಯದ ಖಜಾನೆಯ ಕೀಲಿಕೈಯನ್ನಷ್ಟೇ ತಾವಿಟ್ಟುಕೊಂಡು ಆಡಳಿತದ ಕೀಲಿಕೈಯನ್ನು ಮೊದಲಿನ ಮೂರು ಹೈಕಮಾಂಡ್‌ಗಳಿಗೆ ಕೊಟ್ಟು ಬಿಟ್ಟಿದ್ದರು. 

ತಾವು, ತಮ್ಮ ಕುಟುಂಬದ ಸದಸ್ಯರು ಹಾಗೂ ಕೆಲವು ಆಪ್ತ ಸಚಿವರು ಮಧ್ಯೆ ಪ್ರವೇಶಿಸಿದ ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದಂತೆ ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ ಎಲ್ಲವೂ ಈ ಮೂರು ಹೈಕಮಾಂಡ್‌ಗಳ ಆದೇಶದಂತೆಯೇ ನಡೆಯುತ್ತಿತ್ತು. `ಆಪರೇಷನ್ ಕಮಲ`ವೂ ಸೇರಿದಂತೆ ಎಲ್ಲ ಬಗೆಯ ಅನೈತಿಕ ರಾಜಕಾರಣಕ್ಕೆ ಬೇಕಾದ ದುಡ್ಡನ್ನು ಗಣಿ ಲೂಟಿಕೋರರು ನೀಡಿದರೆ, ಜಾತಿಯ ಬೆಂಬಲವನ್ನು ವೀರಶೈವ ಮಠಗಳು ಧಾರೆ ಎರೆದವು.

ಸಂಘ ಪರಿವಾರದ ನಾಯಕರು ತಮ್ಮ ರಹಸ್ಯ ಕಾರ್ಯಸೂಚಿಯ ಅನುಷ್ಠಾನಕ್ಕೆ ಸರ್ಕಾರ ನೀಡುತ್ತಿರುವ ಬೆಂಬಲಕ್ಕೆ ಪ್ರತಿಯಾಗಿ ರಾಜಾರೋಷವಾಗಿ ನಡೆಯುತ್ತಿರುವ ಆರ್ಥಿಕ ಮತ್ತು ನೈತಿಕ ಭ್ರಷ್ಟಾಚಾರವನ್ನು ನೋಡಿಯೂ ನೋಡದಂತೆ ಕಣ್ಣುಮುಚ್ಚಿಕೊಂಡು ಕೂತುಬಿಟ್ಟರು. ಎಷ್ಟೋ ಸಂದರ್ಭಗಳಲ್ಲಿ ಅದರಲ್ಲಿ ಅವರೂ ಪಾಲುದಾರರಾಗಿ ಹೋದರು. ವಿಧಾನಸೌಧದಲ್ಲಿ ಆಡಳಿತ ಎಲ್ಲಿತ್ತು? ಸದ್ಯಕ್ಕೆ ಒಂದಷ್ಟು ವೀರಶೈವ ಮಠಗಳನ್ನು ಹೊರತುಪಡಿಸಿದರೆ ಉಳಿದೆಲ್ಲ `ಹೈಕಮಾಂಡ್`ಗಳು ಯಡಿಯೂರಪ್ಪನವರನ್ನು ಕೈ ಬಿಟ್ಟಿದ್ದರೂ ಅವರು ಪಾಠ ಕಲಿತ ಹಾಗಿಲ್ಲ.

ಈಗ ಡಿ.ವಿ.ಸದಾನಂದ ಗೌಡರ ಸರದಿ. ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ, ಶ್ರಿರಾಮುಲು ಪಕ್ಷ ಬಿಟ್ಟಿದ್ದಾರೆ. ಆದುದರಿಂದ ಆ ಹೈಕಮಾಂಡ್ ಈಗ ಇಲ್ಲ. ವೀರಶೈವ ಮಠಗಳು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿರುವ ಕಾರಣ ಆ ಕಡೆಯ ನಿಯಂತ್ರಣವೂ ಇಲ್ಲ. ಹೀಗಿದ್ದರೂ ಅವರದ್ದು ಇನ್ನೂ ದಯನೀಯ ಪರಿಸ್ಥಿತಿ. 

`ನಿಮ್ಮನ್ನು ನಾನೇ ಮುಖ್ಯಮಂತ್ರಿ ಮಾಡಿದ್ದು` ಎಂದು ಯಡಿಯೂರಪ್ಪನವರೇನೋ ಆಗಾಗ ಗುಡುಗುತ್ತಾರೆ. ಆದರೆ ಮಾಡಿದ್ದು ಯಾರು ಎನ್ನುವುದು ಅವರಿಗೂ ಗೊತ್ತು, ಸದಾನಂದ ಗೌಡರಿಗೂ ಗೊತ್ತು. ಇವರೆಲ್ಲರಿಗಿಂತಲೂ ಚೆನ್ನಾಗಿ ಕರಾವಳಿ, ಶಿವಮೊಗ್ಗ ಮತ್ತು ಬೆಂಗಳೂರಿನ ರಾಜ್ಯದ ಆರ್‌ಎಸ್‌ಎಸ್ ಮುಖಂಡರಿಗೆ ಗೊತ್ತು.
 
ಸಂಘ ಪರಿವಾರದ ಬೆಂಬಲದಿಂದಲೇ ಮುಖ್ಯಮಂತ್ರಿಯಾಗಿರುವ ಕಾರಣ ಆ `ಹೈಕಮಾಂಡ್`ಗೆ ಗೌಡರು ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಇದರಿಂದಾಗಿ ತಮ್ಮ ಹುಟ್ಟೂರಿನಲ್ಲಿಯೇ ಒಬ್ಬ ನಿರಪರಾಧಿ ಪೊಲೀಸ್ ಪೇದೆಗೆ ರಕ್ಷಣೆ ಕೊಡುವ ಸ್ಥಿತಿಯಲ್ಲಿಯೂ ಅವರಿಲ್ಲ. ಇದು ಒಂದು ಇಲಾಖೆಯ ಕತೆಯಲ್ಲ, ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಈ ಸ್ಥಿತಿ ಇದೆ. ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯಿಂದ ಕೆಲಸ ಮಾಡಬೇಕೆಂದು ಬಯಸುವವರ ನೈತಿಕಸ್ಥೈರ್ಯ ಕುಸಿದುಹೋಗುವಂತೆ ಮಾಡಲಾಗುತ್ತಿದೆ. ಭ್ರಷ್ಟರು ತಮಗೆ ಬೇಕಾದವರ `ಪ್ರಭಾವಳಿ`ಯ ರಕ್ಷಣೆಯಲ್ಲಿ ಪ್ರಜಾಪೀಡನೆ ನಡೆಸುತ್ತಾ ನಿಶ್ಚಿಂತೆಯಾಗಿದ್ದಾರೆ.

 ಆರೋಪಿ ಜನಾರ್ದನ ರೆಡ್ಡಿಯವರನ್ನು ನ್ಯಾಯಾಲಯಕ್ಕೆ ಕರೆತಂದ ದಿನ ಬೆಳಿಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಬ್ಬರು ಪತ್ರಕರ್ತರ ಬಳಿ ಬಂದು `ಇಂದು ನಿಮ್ಮ ಮೇಲೆ ದಾಳಿ ನಡೆಯಬಹುದು, ಎಚ್ಚರಿಕೆಯಿಂದ ಇರಿ` ಎಂದು ಹೇಳಿ ಹೋಗಿದ್ದರಂತೆ. ಅಂದರೆ ಪೂರ್ವನಿಯೋಜಿತವಾದ ಈ ದಾಳಿಯ ಮುನ್ಸೂಚನೆ ಪೊಲೀಸರಿಗೆ ಇತ್ತು ಎಂದಾಯಿತು. ಹಾಗಿದ್ದರೆ ಗೃಹಸಚಿವರಾದ ಆರ್.ಅಶೋಕ್ ಅವರಿಗೂ ಮಾಹಿತಿ ಇತ್ತೆಂದು ಆಯಿತಲ್ಲ? `ಇಲ್ಲ` ಎಂದು ಅವರು ಹೇಳಿದರೆ ಅವರ ದಕ್ಷತೆಯನ್ನು ಪ್ರಶ್ನಿಸಬೇಕಾಗುತ್ತದೆ. ಮಾಹಿತಿ ಇದ್ದೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅವರು ತಿಳಿಸಿಲ್ಲ ಎಂದಾದರೆ ಅವರಿಗೆ ಬೇರೇನೋ ದುರುದ್ದೇಶ ಇದ್ದಿರಬಹುದು ಎಂದಾಗುತ್ತದೆ. 

ಇಡೀ ಅಪರಾಧದ ಘಟನಾವಳಿಗಳನ್ನು ಚಿತ್ರೀಕರಿಸಿದ ವಿಡಿಯೋ ಕ್ಲಿಪ್ಪಿಂಗ್ಸ್‌ಗಳು ಮತ್ತು ಚಿತ್ರಗಳು ಎದುರಿಗಿದ್ದರೂ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಹೆಚ್ಚು ಕಡಿಮೆ 30 ಗಂಟೆ ಬೇಕಾಗುವಂತಹ ವ್ಯವಸ್ಥೆಯಲ್ಲಿ ಜನರೆಷ್ಟು ಸುರಕ್ಷಿತರು? ಜನರಿಗೆ ಕನಿಷ್ಠ ಭದ್ರತೆಯ ಭಾವನೆಯನ್ನು ನೀಡಲಾಗದಿದ್ದರೆ ಸರ್ಕಾರವಾದರೂ ಯಾಕಿರಬೇಕು? ಮುಖ್ಯಮಂತ್ರಿಗಳು, ಸಚಿವ ಸಂಪುಟ ಯಾಕೆ ಬೇಕು?

Monday, February 6, 2012

ಚಿದಂಬರಂ ಕಾಂಗ್ರೆಸ್ ಪಕ್ಷದ ಮಿತ್ರನೋ, ಶತ್ರುವೋ? February 06, 2012

ಪಳನಿಯಪ್ಪ ಚಿದಂಬರಂ ಸ್ವಯಂಘೋಷಿತ ನಾಸ್ತಿಕ. ಅದೃಷ್ಟ-ದುರದೃಷ್ಟದಲ್ಲಿ ತಮಗೆ ನಂಬಿಕೆ ಇದೆ ಎಂದು ಅವರು ಹೇಳಲಾರರು. ಆದರೆ, ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಅವಕಾಶ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸಿಬಿಐ ಕೋರ್ಟ್ ಶನಿವಾರ ವಜಾಗೊಳಿಸಿದ ನಂತರ  `ಕಾಣದ ಕೈ`ಗಳನ್ನೆಲ್ಲ ಅವರು ನಂಬುವಂತೆ ಮಾಡಲೂಬಹುದು.
 
2ಜಿ ತರಂಗಾಂತರ ಹಂಚಿಕೆ ಹಗರಣಗಳ ತನಿಖೆಯನ್ನು ಗಮನಿಸುತ್ತ ಬಂದವರ‌್ಯಾರೂ ಸಿಬಿಐ ಕೋರ್ಟ್‌ನ ಈ ಆದೇಶವನ್ನು ನಿರೀಕ್ಷಿಸಲಾರರು. ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಸಚಿವ ಚಿದಂಬರಂ ಮಾತ್ರ ಇಂತಹದ್ದೊಂದು ಆದೇಶವನ್ನು ನಿರೀಕ್ಷಿಸುತ್ತಿದ್ದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು.
 
ಅವರ ನಿರೀಕ್ಷೆಯಂತೆಯೇ ಆದೇಶ ಬಂದಿದೆ. ಸದ್ಯಕ್ಕೆ ಪ್ರಧಾನಿಯೂ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ, ಆಡಳಿತ ಪಕ್ಷದ ಮೇಲೆ ಎರಗುತ್ತಿದ್ದ ವಿರೋಧಪಕ್ಷಗಳ ಕೈಯ್ಯಲ್ಲಿದ್ದ ಕತ್ತಿಯೂ ಹರಿತ ಕಳೆದುಕೊಂಡಿದೆ. ಮಾಜಿ ಸಚಿವ ಎ.ರಾಜಾ ಇನ್ನಷ್ಟು ಕಾಲ ಜತೆಗಾರರಿಲ್ಲದೆಯೇ ಜೈಲಿನಲ್ಲಿ ದಿನ ಕಳೆಯಬೇಕಾಗಬಹುದು. ಚಿದಂಬರಂ ಅದೃಷ್ಟದ ಸವಾರಿ ಮುಂದುವರಿದಿದೆ.
 
ಚಿದಂಬರಂ ಅವರನ್ನು ಮತ್ತೆ ಮತ್ತೆ ಅದೃಷ್ಟಶಾಲಿ ಎಂದು ಹೇಳುವುದಕ್ಕೆ ಕಾರಣ ಇದೆ. `ಕಷ್ಟ ಕಾಲದಲ್ಲಿ ಜತೆಯಲ್ಲಿದ್ದವರನ್ನು ಮಿತ್ರರು ಮತ್ತು ಜತೆಯಲ್ಲಿ ಇಲ್ಲದವರನ್ನು ಶತ್ರುಗಳು` ಎನ್ನುವುದಾದರೆ ಕೇಂದ್ರ ಗೃಹಸಚಿವ ಪಳನಿಯಪ್ಪ ಚಿದಂಬರಂ ಕಾಂಗ್ರೆಸ್ ಪಕ್ಷದ ದೊಡ್ಡ ಶತ್ರು. ಆದರೆ ಕಾಂಗ್ರೆಸ್ ನೇತೃತ್ವದ ಈಗಿನ ಸರ್ಕಾರದಲ್ಲಿ ಅವರು ಎರಡನೆಯೋ, ಮೂರನೆಯೋ ಸ್ಥಾನದಲ್ಲಿದ್ದಾರೆ. 

ಅವರಿಗೆ ಕಷ್ಟ ಎದುರಾದಾಗ ಪ್ರಧಾನಿ ಮಾತ್ರ ಅಲ್ಲ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಅವರ ನೆರವಿಗೆ ಧಾವಿಸುತ್ತಾರೆ. ಯಾರೂ ಕೇಳದಿದ್ದರೂ ಅವರ ಪ್ರಾಮಾಣಿಕತೆಗೆ ಸರ್ಟಿಫಿಕೇಟ್ ನೀಡುತ್ತಾರೆ. ಇದನ್ನು ಅದೃಷ್ಟ ಎನ್ನದೆ ಬೇರೆ ಏನು ಹೇಳಲು ಸಾಧ್ಯ? 

ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದ 1996ರಿಂದ 2004ರ ವರೆಗಿನ ಎಂಟು ವರ್ಷ, ಆ ಪಕ್ಷದ ಪಾಲಿನ ಕಡು ಕಷ್ಟದ ಕಾಲ. ಆ ಸಮಯ ಚಿದಂಬರಂ ಕಾಂಗ್ರೆಸ್ ಪಕ್ಷದಲ್ಲಿ ಇರಲೇ ಇಲ್ಲ. ಅವರು 1996ರಲ್ಲಿ ಕಾಂಗ್ರೆಸ್ ತೊರೆದು ತಮಿಳು ಮಾನಿಲ ಕಾಂಗ್ರೆಸ್ ಸೇರಿಕೊಂಡಿದ್ದರು.
 
ಕಾಂಗ್ರೆಸ್ ನಾಯಕರು ಅಧಿಕಾರ ಇಲ್ಲದೆ ವನವಾಸ ಅನುಭವಿಸುತ್ತಿದ್ದಾಗ ಚಿದಂಬರಂ ತಮಿಳು ಮಾನಿಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿ 1996ರಿಂದ 1998ರ ವರೆಗೆ ಸಂಯುಕ್ತರಂಗ ಸರ್ಕಾರದಲ್ಲಿ ಹಣಕಾಸು ಸಚಿವರೂ ಆಗಿದ್ದರು. 

2004ರಲ್ಲಿ ಇನ್ನೇನು ಚುನಾವಣೆ ಘೋಷಣೆಯಾಗಲಿರುವಾಗ ಚಿದಂಬರಂ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದರು. ಚುನಾವಣೆಯಲ್ಲಿ ಗೆದ್ದರು, ಹಣಕಾಸು ಸಚಿವರೂ ಆಗಿಬಿಟ್ಟರು. ಅಧಿಕಾರದಲ್ಲಿ ಇಲ್ಲದಿದ್ದಾಗ ಜತೆಯಲ್ಲಿ ಇರಲಿಲ್ಲ, ಹೇಗೋ ಕಷ್ಟಪಟ್ಟು ಪಕ್ಷ ಅಧಿಕಾರ ಗಳಿಸಿದಾಗ ಮತ್ತೆ ಕಾಣಿಸಿಕೊಂಡು ಮತ್ತೆ ಅದೇ ಪಕ್ಷವನ್ನು ಪತನದ ಅಂಚಿಗೆ ಕೊಂಡುಹೋಗಿ ನಿಲ್ಲಿಸಿದವರು ಚಿದಂಬರಂ. ಅವರ ಸಮಕಾಲೀನರಲ್ಲಿ ಯಾರೂ ಇಷ್ಟೊಂದು ದೀರ್ಘಕಾಲ ಕೇಂದ್ರದಲ್ಲಿ ಅಧಿಕಾರ ಅನುಭವಿಸಿಲ್ಲ. 


ಕಷ್ಟಕಾಲದಲ್ಲಿ ಜತೆಯಲ್ಲಿ ಇಲ್ಲದೆ, ಅಧಿಕಾರಕ್ಕೆ ಬಂದಾಗ ಒಳಗೆ ಬಂದು ಮೆರೆಯುತ್ತಿರುವ `ಪಿಸಿ` ಬಗ್ಗೆ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ-ಕಿರಿಯ ನಾಯಕರಿಗೆ ಸಿಟ್ಟಿದೆ, ಅದಕ್ಕಿಂತ ಹೆಚ್ಚಾಗಿ ಅಸೂಯೆಯೂ ಇದೆ. ನಾಳೆ ಅವರನ್ನು ಪ್ರಧಾನಿ ಮನಮೋಹನ್‌ಸಿಂಗ್ ಸಂಪುಟದಿಂದ ಕಿತ್ತುಹಾಕಿದರೆ ಅಳುವವರು ಪಕ್ಷದಲ್ಲಿ ಯಾರೂ ಇಲ್ಲ.

ಹಾರ್ವರ್ಡ್‌ನಲ್ಲಿ ಓದಿ ಬಂದಿರುವ ಚಿದಂಬರಂ ರಾಜಕೀಯ ಗಾಳಿ ಬೀಸುವ ದಿಕ್ಕನ್ನು ಗ್ರಹಿಸಬಲ್ಲ ಬುದ್ಧಿವಂತ. ಈ ಬುದ್ಧಿವಂತಿಕೆಯೋ ಇಲ್ಲ, ಅದೃಷ್ಟವೋ ಯಾವುದೋ ಒಂದು, ಚಿದಂಬರಂ ಅವರನ್ನು ರಾಜಕೀಯ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದಿದೆ. 

1984ರಿಂದ ಇಲ್ಲಿಯವರೆಗೆ ನಿರಂತರವಾಗಿ ಆರು ಲೋಕಸಭಾ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ. ಈ ನಡುವೆ ಪಕ್ಷ ಬಿಟ್ಟಿದ್ದಾರೆ, ಬೇರೆ ಪಕ್ಷ ಸೇರಿದ್ದಾರೆ, ಸ್ವಂತ ಪಕ್ಷವನ್ನೂ ಕಟ್ಟಿದ್ದಾರೆ. ಆದರೆ ಕಳೆದ ಹದಿನೆಂಟು ವರ್ಷಗಳಲ್ಲಿ ಲೋಕಸಭೆಯಿಂದ ಹೊರಗೆ ಉಳಿದಿಲ್ಲ, ಅಧಿಕಾರದಿಂದಲೂ ಬಹಳ ದಿನ ದೂರವೂ ಉಳಿದಿಲ್ಲ.
 
ಇನ್ನೇನು ಇವರ ರಾಜಕೀಯ ಜೀವನ ಮುಗಿದೇ ಬಿಟ್ಟಿತು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ ಹಲವು ಬಾರಿ ಎದ್ದು ಬಂದಿದ್ದಾರೆ. ಈಗಲೂ ಹಾಗೆಯೇ ಆಗಿದೆ. ಇನ್ನೇನು ಅವರ ತಲೆ ಉರುಳಿಯೇ ಬಿಟ್ಟಿತು ಎನ್ನುವಾಗ ಸಿಬಿಐ ವಿಚಾರಣಾ ನ್ಯಾಯಾಲಯ ಅವರತ್ತ ಕರುಣೆಯ ನೋಟ ಹರಿಸಿದೆ. ಆದರೆ ಅವರೆಷ್ಟು ದಿನ ಸುರಕ್ಷಿತರಾಗಿ ಉಳಿಯಬಲ್ಲರು? ಅವರ ಮೇಲಿನ ಹಳೆಯ ಮತ್ತು ಹೊಸ ಆರೋಪಗಳನ್ನು ನೋಡಿದರೆ, ಬಹಳ ದಿನ ಚಿದಂಬರಂ ಅವರನ್ನು ಆದೃಷ್ಟವೊಂದೇ ಕಾಪಾಡಿಕೊಂಡು ಬರಲಾರದು ಎಂದೆನಿಸುತ್ತದೆ.

ಆರೋಪಗಳು, ವಿವಾದಗಳು, ರಾಜೀನಾಮೆಗಳು ಚಿದಂಬರಂ ಅವರಿಗೆ ಹೊಸತೇನಲ್ಲ. ಅವರದು ಕಳಂಕರಹಿತ ಶುಭ್ರ ವ್ಯಕ್ತಿತ್ವವೂ ಅಲ್ಲ. ಇಪ್ಪತ್ತು ವರ್ಷಗಳ ಹಿಂದೆ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದ ಚಿದಂಬರಂ ಷೇರುಹಗರಣದಲ್ಲಿ ಭಾಗಿಯಾಗಿದ್ದ `ಫೇರ್‌ಗ್ರೋತ್` ಎಂಬ ಹಣಕಾಸು ಸಂಸ್ಥೆಯಲ್ಲಿ ಹಣ ಹೂಡಿದ್ದಕ್ಕಾಗಿ ರಾಜೀನಾಮೆ ನೀಡಿದ್ದರು. ದಿವಾಳಿಯಾಗಿದ್ದ ವಿದ್ಯುತ್ ಉತ್ಪಾದನಾ ಸಂಸ್ಥೆ ಎನ್ರಾನ್‌ಗೆ ಅವರು ವಕೀಲರಾಗಿದ್ದರು.
 
ವಿವಾದಾತ್ಮಕ ದಾಬೋಲ್ ಇಂಧನ ಯೋಜನೆಯ ಪರವಾಗಿಯೂ ಅವರು ಲಾಬಿ ನಡೆಸುತ್ತಿದ್ದರು ಎನ್ನುವ ಆರೋಪವೂ ಕೇಳಿಬಂದಿತ್ತು. ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗಲೇ ಚಿದಂಬರಂ ಗಣಿಗಾರಿಕೆಯಲ್ಲಿ ತೊಡಗಿರುವ ಬ್ರಿಟನ್‌ನ ವೇದಾಂತ ರಿಸೋರ್ಸ್ ಕಂಪೆನಿಗೆ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ತನ್ನ ಉದ್ಧಟತನದ ಉತ್ತರಗಳಿಂದಾಗಿ ಪತ್ರಕರ್ತರನ್ನು ಆಗಾಗ ಕೆರಳಿಸುತ್ತಿರುವ ಚಿದಂಬರಂ ಮೇಲೆ ಹಿಂದಿ ದಿನಪತ್ರಿಕೆಯ ಪತ್ರಕರ್ತನೊಬ್ಬ ಮೂರು ವರ್ಷಗಳ ಹಿಂದೆ ಬೂಟು ಎಸೆದುಬಿಟ್ಟಿದ್ದ. 

ಸಚಿವರಾಗಿದ್ದುಕೊಂಡೇ ಸರ್ಕಾರದ ಲಾಭದಾಯಕ ಹುದ್ದೆಯಲ್ಲಿದ್ದರು ಮತ್ತು ಕಕ್ಷಿದಾರರಿಗೆ ನೆರವಾಗಿದ್ದರು ಎನ್ನುವ ಆರೋಪಗಳೂ ಕೇಳಿಬಂದಿದ್ದವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಗಂಗೆ ಕ್ಷೇತ್ರದಿಂದ ಗೆಲ್ಲಲು ಅಕ್ರಮ ಎಸಗಿದ್ದರು ಎನ್ನುವ ದೂರಿನ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಆದರೆ, ಪ್ರತಿ ಬಾರಿಯೂ ಅವರು ಸುಲಭದಲ್ಲಿ ಅಪಾಯದಿಂದ ಪಾರಾಗುತ್ತಾ ಬಂದಿದ್ದಾರೆ. ಇದಕ್ಕೆ ಪಕ್ಷ ಮತ್ತು ಸರ್ಕಾರದಲ್ಲಿರುವ ಹಿರಿಯರ ಜತೆಗೆ ಅವರು ಬೆಳೆಸಿಕೊಳ್ಳುವ ಸಂಬಂಧ ಕಾರಣ ಇರಬಹುದು. ಈಗಿನ ಬಿಕ್ಕಟ್ಟಿನಲ್ಲಿಯೂ ಪಾರಾಗಲು ಮನಮೋಹನ್‌ಸಿಂಗ್ ಜತೆಯಲ್ಲಿ ಅವರಿಗಿದ್ದ ಸೌಹಾರ್ದಯುತ ಸಂಬಂಧ ಕಾರಣ ಎನ್ನುವವರಿದ್ದಾರೆ.
 
ಇದಕ್ಕಿಂತಲೂ ಹೆಚ್ಚಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮೇಲೆ ಇಟ್ಟಿರುವ ವಿಶ್ವಾಸ ಕಾರಣ ಎನ್ನುವವರೂ ಇದ್ದಾರೆ. ಎರಡನೇ ಕಾರಣ ಸತ್ಯಕ್ಕೆ ಹೆಚ್ಚು ಸಮೀಪ ಇದ್ದಂತೆ ಕಾಣುತ್ತಿದೆ. ಚಿದಂಬರಂ ಸಮರ್ಥರು, ಯಾವ ಖಾತೆ ಕೊಟ್ಟರೂ ದಕ್ಷತೆಯಿಂದ ನಿರ್ವಹಿಸಬಲ್ಲರು ಎನ್ನುವ ಅಭಿಪ್ರಾಯ ಇದೆ. ಒಂದು ಕಾಲದಲ್ಲಿ ದೇಶಕ್ಕೆ `ಕನಸಿನ ಬಜೆಟ್` ಕೊಟ್ಟು ಅವರು ಜನಪ್ರಿಯರಾದವರು.. ಎಲ್ಲವೂ ನಿಜ. ಆದರೆ ಯುಪಿಎ ಎರಡನೇ ಅವಧಿಯಲ್ಲಿ ಸರ್ಕಾರಕ್ಕೆ ಅವರಿಂದಾದ ಲಾಭ-ನಷ್ಟಗಳ ಲೆಕ್ಕಹಾಕಿದರೆ ನಷ್ಟದ ಕಡೆ ತಕ್ಕಡಿ ವಾಲುತ್ತದೆ. 

2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಶಿವರಾಜ್ ಪಾಟೀಲ್ ಎಂಬ ಶೋಕಿಲಾಲ ಸಚಿವರಿಂದಾಗಿ ಗೃಹಖಾತೆ ಹೆಚ್ಚುಕಡಿಮೆ ನಿಷ್ಕ್ರಿಯ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಗೃಹಖಾತೆಯನ್ನು ವಹಿಸಿಕೊಂಡವರು ಚಿದಂಬರಂ. ಪ್ರಾರಂಭದ ದಿನಗಳ ಅವರ ಕಾರ‌್ಯನಿರ್ವಹಣೆ ವಿರೋಧಪಕ್ಷಗಳ ಶ್ಲಾಘನೆಗೂ ಪಾತ್ರವಾಗಿತ್ತು. 

ಆದರೆ ಎಚ್ಚರಿಕೆ ನೀಡುವ ಅವರ ಮಾತುಗಳಿಂದ ಭಯೋತ್ಪಾದಕರ ದುಷ್ಕೃತ್ಯಗಳು ನಿಲ್ಲಲಿಲ್ಲ. ಕಳೆದ ವರ್ಷದ ಜುಲೈನಲ್ಲಿ ಅದೇ ಮುಂಬೈನಲ್ಲಿ ಭಯೋತ್ಪಾದಕರು ಮತ್ತೆ ದಾಳಿ ನಡೆಸಿದ್ದರು. ಗೃಹಸಚಿವರಾದ ನಂತರ ಮಾವೋವಾದಿಗಳ ವಿರುದ್ಧ ಅವರು ಸಮರವನ್ನೇ ಸಾರಿದ್ದರು. ಆದರೆ, ಆ ಸಂಘಟನೆಯ ಒಂದಿಬ್ಬರು ನಾಯಕರನ್ನು ನಕಲಿ ಎನ್‌ಕೌಂಟರ್‌ಗಳ ಮೂಲಕ ಕೊಂದು ಹಾಕಿದ್ದನ್ನು ಹೊರತುಪಡಿಸಿದರೆ ಮಾವೋವಾದಿಗಳನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಿಲ್ಲ.
 
ಜಾರ್ಖಂಡ್, ಚತ್ತೀಸ್‌ಗಢ, ಒಡಿಶಾ ಮತ್ತು ಪಶ್ಚಿಮಬಂಗಾಳಗಳಲ್ಲಿ ಮಾವೋವಾದಿಗಳ ಹಿಂಸೆಗೆ ಪೊಲೀಸ್ ಸಿಬ್ಬಂದಿ ಮತ್ತು ಅಮಾಯಕ ನಾಗರಿಕರು ಬಲಿಯಾಗುತ್ತಲೇ ಇದ್ದಾರೆ. ಹಿಂದೂ ಭಯೋತ್ಪಾದನೆಯ ವಿರುದ್ಧ ವೀರಾವೇಶದಿಂದ ಮಾತನಾಡುತ್ತಿದ್ದ ಚಿದಂಬರಂ, ಇದೇ ಕಾರಣಕ್ಕೆ ಬಿಜೆಪಿ ತನ್ನನ್ನು ಗುರಿಯಾಗಿರಿಸಿಕೊಂಡಿದೆ ಎನ್ನುವುದು ಅರಿವಾದ ನಂತರ ಮೌನಕ್ಕೆ ಜಾರಿದ್ದಾರೆ. ಅಣ್ಣಾ ಹಜಾರೆಯವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸುವ ಮೂಲಕ ಅವರನ್ನು `ಹೀರೋ` ಮಾಡಿದ ಮೂರ್ಖ ನಿರ್ಧಾರ ಕೂಡಾ ಚಿದಂಬರಂ ಅವರದ್ದು.

ಇವೆಲ್ಲದರ ಜತೆಯಲ್ಲಿ ಹಣಕಾಸು ಸಚಿವರಾಗಿದ್ದ ದಿನಗಳಲ್ಲಿ ನಡೆದ 2ಜಿ ತರಂಗಾಂತರ ಹಗರಣ ಚಿದಂಬರಂ ಕೊರಳಿಗೆ ಸುತ್ತಿಕೊಂಡಿದೆ. ಸಿಬಿಐ ವಿಚಾರಣಾ ನ್ಯಾಯಾಲಯ ಅವರ ವಿರುದ್ಧದ ಆರೋಪಗಳ ತನಿಖೆಗೆ ಆದೇಶ ನೀಡಲು ನಿರಾಕರಿಸಿದ ನಂತರವೂ ಹಗರಣಕ್ಕೆ ಸಂಬಂಧಿಸಿದ ಒಂದಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ. 2001ರಲ್ಲಿ ನಿಗದಿಪಡಿಸಿದ ದರದಲ್ಲಿ ಆರು ವರ್ಷಗಳ ನಂತರ 2ಜಿ ತರಂಗಾಂತರದ ಪರವಾನಿಗೆಗಳನ್ನು ವಿತರಿಸುವುದನ್ನು ಆಕ್ಷೇಪಿಸಿ ಆಗ ಹಣಕಾಸು ಖಾತೆಯ ಕಾರ್ಯದರ್ಶಿ ಡಿ.ಸುಬ್ಬಾರಾವ್ ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಡಿ.ಎಸ್.ಮಾಥುರ್ ಅವರಿಗೆ 2007ರ ನವೆಂಬರ್ 22ರಂದು ಮೊದಲ ಪತ್ರ ಬರೆದಿದ್ದರು.
 
ಇಂತಹ ಮಹತ್ವದ ನಿರ್ಧಾರ ಕೈಗೊಂಡಾಗ ಹಣಕಾಸು ಇಲಾಖೆಯ ಜತೆ ಯಾಕೆ ಸಮಾಲೋಚನೆ ನಡೆಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಆ ದಿನದಿಂದ 122 ಪರವಾನಿಗೆಗಳ ವಿತರಣೆಯಾದ 2008ರ ಜನವರಿ ಒಂಬತ್ತರ ವರೆಗೆ ಹಣಕಾಸು ಇಲಾಖೆಯ ಅಧಿಕಾರಿಗಳು ಹತ್ತಾರು ಪತ್ರಗಳನ್ನು ದೂರಸಂಪರ್ಕ ಇಲಾಖೆಗೆ ಬರೆದಿದ್ದಾರೆ. ಇವೆಲ್ಲವೂ ಹಣಕಾಸು ಸಚಿವರಾದ ಪಿ.ಚಿದಂಬರಂ ಅವರ ಗಮನಕ್ಕೆ ಬರದಂತೆ ನಡೆದಿತ್ತು ಎಂದು ಯಾರೂ ಹೇಳಲಾರರು. ಒಂದೊಮ್ಮೆ ಹೇಳಿದರೂ ಅದನ್ನು ಯಾರೂ ನಂಬಲಾರರು.

ಸರ್ಕಾರದ ಯಾವುದೇ ಇಲಾಖೆಯಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ನಡೆಯುವ ವ್ಯವಹಾರದಲ್ಲಿ ಮಧ್ಯೆ ಪ್ರವೇಶಿಸುವ ಅಧಿಕಾರ ಹಣಕಾಸು ಸಚಿವರಿಗೆ ಇದೆ. 2ಜಿ ತರಂಗಾಂತರ ಹಗರಣದಲ್ಲಿ ಚಿದಂಬರಂ ಖಾತೆಯ ಅಧಿಕಾರಿಗಳೇ ರಾಜಾ ಅವರ ನಿರ್ಧಾರಕ್ಕೆ ವಿರುದ್ಧವಾಗಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರಗಳನ್ನು ಬರೆದಿರುವುದಕ್ಕೆ ಪುರಾವೆಗಳಿವೆ (ಆ ಪತ್ರಗಳು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಿದವರ ಮೂಲಕ ಈಗ ಬಹಿರಂಗಗೊಂಡಿವೆ). ಸ್ವತಃ ಚಿದಂಬರಂ ಅವರೇ ಹರಾಜು ಪರವಾಗಿ ಇದ್ದರು ಮತ್ತು `ಮೊದಲು ಬಂದವರಿಗೆ ಮೊದಲ ಆದ್ಯತೆ` ನೀತಿಗೆ 2007ರ ನವೆಂಬರ್‌ನಿಂದ 2008ರ ಜನವರಿ 15ರವರೆಗೆ ವಿರುದ್ಧವಾಗಿದ್ದರಂತೆ.
 
ಆ ಅವಧಿಯಲ್ಲಿ ಅವರು ಹಲವಾರು ಬಾರಿ ಎ.ರಾಜಾ ಅವರನ್ನು ಭೇಟಿ ಮಾಡಿ ಚರ್ಚೆ ಕೂಡಾ ನಡೆಸಿದ್ದರು. ಆದರೆ, ಇದ್ದಕ್ಕಿದ್ದಂತೆ ಅವರು 2008ರ ಜನವರಿ 15ರಂದು ಪ್ರಧಾನಿಗೆ `ಎ.ರಾಜಾ ಅವರ ನಿರ್ಧಾರ ಮುಗಿದ ಅಧ್ಯಾಯ` ಎಂದು ಪತ್ರ ಬರೆದು ಸುಮ್ಮನಾಗುತ್ತಾರೆ. ಈ ದಿಢೀರ್ `ಮೌನಸಮ್ಮತಿ`ಗೆ ಕಾರಣವೇನು? ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡುವ ಸಚಿವ ಎ.ರಾಜಾ ಅವರ ನಿರ್ಧಾರವನ್ನು ತಡೆಯಲು ಅವರು ಯಾಕೆ ಪ್ರಯತ್ನಿಸಲಿಲ್ಲ ಎನ್ನುವುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಾಗ ಚಿದಂಬರಂ ಅವರ ಬೆನ್ನ ಹಿಂದೆ ಇರುವ ಆದೃಷ್ಟದೇವತೆಯೂ ಬೆನ್ನು ತಿರುಗಿಸಬಹುದು.