Tuesday, January 17, 2012

ರಾಷ್ಟ್ರ ರಾಜಕಾರಣದ ಪ್ರಶ್ನೆಗೆ ಉತ್ತರಪ್ರದೇಶದಲ್ಲಿ ಉತ್ತರ 02/01/2012

`ಉತ್ತರ ಪ್ರದೇಶದ ರಾಜಕೀಯ ಅರ್ಥವಾಗದೆ ಇದ್ದರೆ ನಿನಗೆ ದೇಶದ ರಾಜಕೀಯ ಅರ್ಥ ಆಗುವುದಿಲ್ಲ` ಎಂದು ನಾನು ದೆಹಲಿಗೆ ಹೋದ ಹೊಸದರಲ್ಲಿ ಹಿರಿಯ ಪತ್ರಕರ್ತರೊಬ್ಬರು ನನಗೆ ಹೇಳಿದ್ದರು.

ಎರಡು ಬಾರಿ ವಿಧಾನಸಭೆಗೆ ಇನ್ನೆರಡು ಬಾರಿ ಲೋಕಸಭೆಗೆ ನಡೆದ ಚುನಾವಣೆಯ ಕಾಲದಲ್ಲಿ ಆ ರಾಜ್ಯದ ಉದ್ದಗಲಕ್ಕೆ, ಮೀರತ್‌ನಿಂದ ಮಿರ್ಜಾಪುರದ ವರೆಗೆ, ಇಟಾವದಿಂದ ಗೋರಖ್‌ಪುರದ ವರೆಗೆ ನಾನು ಅಲೆದಾಡಿದ್ದೇನೆ.

ಆದರೆ ಆ ರಾಜ್ಯದ ರಾಜಕೀಯವನ್ನು ಇನ್ನೂ ನನಗೆ ಅರ್ಥ ಮಾಡಿಕೊಳ್ಳಲಿಕ್ಕೆ ಆಗಿಲ್ಲ. ಇದರಿಂದಾಗಿಯೋ ಏನೋ, ದೇಶದ ರಾಜಕೀಯ ಕೂಡಾ ನನಗಿನ್ನೂ ಅರ್ಥವಾಗಿಲ್ಲ.

ಈಗ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಯಾದ ದಿನದಿಂದಲೇ `ಯುಪಿಎ ಕಾ ಭವಿಷ್ಯ್ ಯುಪಿ ಕೆ ಊಪರ್` (ಯುಪಿಎ ಭವಿಷ್ಯ ಉತ್ತರ ಪ್ರದೇಶದ ಮೇಲಿದೆ) ಎನ್ನುವ ಮಾತು ಕೇಳಿಬರುತ್ತಿದೆ.

ಹೊಸ ವರ್ಷದಲ್ಲಿ ದೇಶದ ರಾಜಕೀಯ ಯಾವ ದಾರಿ ಹಿಡಿಯಲಿದೆ ಎನ್ನುವ ದಿಕ್ಸೂಚಿ ಮುಂದಿನ ತಿಂಗಳು ಆ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ಫಲಿತಾಂಶ ನೀಡಲಿದೆ ಎನ್ನುವ ನಿರೀಕ್ಷೆ ಎಲ್ಲರದ್ದು. ಆ ಫಲಿತಾಂಶ ಏನಿರಬಹುದೆನ್ನುವುದನ್ನು ಈಗಲೂ ಊಹಿಸುವುದು ಕಷ್ಟ.

ಉತ್ತರಪ್ರದೇಶವನ್ನು ಪಕ್ಕಕ್ಕೆ ಇಟ್ಟು ದೇಶದ ರಾಜಕೀಯ ಚಿತ್ರ ಬಿಡಿಸುವುದು ಸಾಧ್ಯವೇ ಇಲ್ಲ. ದೇಶಕ್ಕೆ ಅತಿಹೆಚ್ಚಿನ ಪ್ರಧಾನಿಗಳನ್ನು ನೀಡಿದ ಮತ್ತು ಲೋಕಸಭೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ಸದಸ್ಯರನ್ನು (ಮೊದಲು 83 ಈಗ 80) ಹೊಂದಿರುವ ಉತ್ತರಪ್ರದೇಶದ ರಾಜಕೀಯ ಮಹತ್ವ ಈ ಸಂಖ್ಯೆಯ ಆಟವನ್ನು ಮೀರಿದ್ದು.

ರಾಯಬರೇಲಿಯಲ್ಲಿ ಇಂದಿರಾಗಾಂಧಿಯ ಸೋಲು ಇರಬಹುದು ಇಲ್ಲವೇ ಬಾಬರಿ ಮಸೀದಿಯ ಧ್ವಂಸ ಇರಬಹುದು, ರಾಷ್ಟ್ರಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾದ ಘಟನೆಗಳು ನಡೆದದ್ದು ಉತ್ತರಪ್ರದೇಶದಲ್ಲಿ.

ಬಹುಕಾಲ ದೇಶವನ್ನು ಆಳಿದ ನೆಹರೂ ಕುಟುಂಬದ ತವರು ಕೂಡಾ  ಆ ರಾಜ್ಯ ಆಗಿರುವುದು ಅದಕ್ಕೆ ಇರುವ ರಾಜಕೀಯ ಮಹತ್ವಕ್ಕೆ ಕಾರಣ ಇರಬಹುದು.

ಉತ್ತರಪ್ರದೇಶದ ಮೇಲಿನ ರಾಜಕೀಯ ನಿಯಂತ್ರಣ ಕಳೆದುಕೊಂಡ ನಂತರವೇ ಕಾಂಗ್ರೆಸ್ ಏಕಚಕ್ರಾಧಿಪತ್ಯವನ್ನು ಕಳೆದುಕೊಂಡು ಮಿತ್ರಕೂಟದ ಔದಾರ‌್ಯದ ಉರುಳಲ್ಲಿ ಸಿಕ್ಕಿಹಾಕಿಕೊಂಡಿದ್ದು ಎನ್ನುವುದು ಕೂಡಾ ನಿಜ.

ರಾಜಕೀಯ ಎನ್ನುವುದು `ಸಾಧ್ಯತೆಗಳ ಕಲೆ` ಎನ್ನುವ ಮಾತು ಉತ್ತರಪ್ರದೇಶದ ಮಟ್ಟಿಗೆ ನೂರಕ್ಕೆ ನೂರರಷ್ಟು ನಿಜ. ಉಳಿದ ರಾಜ್ಯಗಳಲ್ಲಿ ರಾಜಕೀಯ ಲೆಕ್ಕಾಚಾರಕ್ಕೆ ಬಳಸುವ ಸೂತ್ರ, ಸಾಧನ ಇಲ್ಲವೇ ಅನುಭವ ಅಲ್ಲಿ ಕೆಲಸಕ್ಕೆ ಬರುವುದಿಲ್ಲ.

ಕಾಂಗ್ರೆಸ್ ಸುಮಾರು ನಾಲ್ಕುದಶಕಗಳ ಕಾಲ ಆ ರಾಜ್ಯವನ್ನು ಆಳಿಕೊಂಡು ಬಂದದ್ದು ಬ್ರಾಹ್ಮಣ, ಮುಸ್ಲಿಮ್ ಮತ್ತು ದಲಿತರನ್ನೊಳಗೊಂಡ ವಿಲಕ್ಷಣ ಜಾತಿ ಸೂತ್ರದಿಂದ. ಮುಸ್ಲಿಮರು ಪ್ರಾರಂಭದಿಂದಲೂ ಕಾಂಗ್ರೆಸ್ ಜತೆ ಗುರುತಿಸಿಕೊಂಡೇ ಬಂದವರು. ಆದರೆ ಉಳಿದ ರಾಜ್ಯಗಳಲ್ಲಿ ಬ್ರಾಹ್ಮಣರಿಗೆ ಕಾಂಗ್ರೆಸ್ ಬಗೆಗಿನ ಒಲವು ಅಷ್ಟಕ್ಕಷ್ಟೆ.

ನೆಹರೂ ಕುಟುಂಬ ತಮ್ಮ ಜಾತಿಗೆ ಸೇರಿರುವ ಕಾರಣಕ್ಕೆ ಬ್ರಾಹ್ಮಣರು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಬೆಂಬಲಿಸಿರಬಹುದೆನ್ನುವ ವಾದವನ್ನು ಕೂಡಾ ಆ ಕುಟುಂಬದಲ್ಲಿ ನಡೆಯುತ್ತಾ ಬಂದ ವರ್ಣಸಂಕರದ ಹಿನ್ನೆಲೆಯಲ್ಲಿ ಒಪ್ಪುವುದು ಕಷ್ಟ.

ಕರ್ನಾಟಕವೂ ಸೇರಿದಂತೆ ಬಹಳಷ್ಟು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳು (ಒಬಿಸಿ) ಕಾಂಗ್ರೆಸ್ ಜತೆ ಗುರುತಿಸಿಕೊಂಡದ್ದೇ ಹೆಚ್ಚು. ಆದರೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಒಬಿಸಿಗಳು ಎಂದೂ ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ಆಗಿರಲಿಲ್ಲ.

ಇದಕ್ಕೆ ವಿ.ಪಿ.ಸಿಂಗ್ ಅನುಷ್ಠಾನಕ್ಕೆ ತಂದ ಮಂಡಲ ವರದಿಯೊಂದೇ ಕಾರಣವಲ್ಲ; ಡಾ.ರಾಮಮನೋಹರ ಲೋಹಿಯಾ ಅವರ ನೇತೃತ್ವದ ಸಮಾಜವಾದಿ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯರಾಗಿದ್ದವರು ಈ ಎರಡು ರಾಜ್ಯಗಳ ಒಬಿಸಿಗಳು. ಆದ್ದರಿಂದ ಅಲ್ಲಿನ ಒಬಿಸಿಗಳು ಸ್ವಭಾವತಃ ಕಾಂಗ್ರೆಸ್ ವಿರೋಧಿಗಳು.

ಇದರಿಂದಾಗಿಯೇ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಅವರಂತಹ ನಾಯಕರು ಬೆಳೆಯಲು ಸಾಧ್ಯವಾಗಿದ್ದು.

ದಲಿತರಿಗೆ ಬ್ರಾಹ್ಮಣರು ನಾಯಕತ್ವ ನೀಡಿದ್ದ ಉದಾಹರಣೆಗಳು ದೇಶದ ಸಾಮಾಜಿಕ ಇತಿಹಾಸದಲ್ಲಿ ಬಹಳಷ್ಟಿವೆ. ಆದರೆ ದಲಿತ ನಾಯಕ ಇಲ್ಲವೇ ನಾಯಕಿಯನ್ನು ಬ್ರಾಹ್ಮಣರು ಒಪ್ಪಿಕೊಂಡ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಆದರೆ ಉತ್ತರಪ್ರದೇಶದಲ್ಲಿ ಬ್ರಾಹ್ಮಣರಿಗೆ ಮಾಯಾವತಿಯವರೇ ನಾಯಕಿ. ಬೇರೆ ರಾಜ್ಯಗಳಂತೆ ಅಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರೂ ಅಲ್ಲ, ಅಷ್ಟೊಂದು ಅಸಹಾಯಕರೂ ಅಲ್ಲ. ಆ ರಾಜ್ಯದಲ್ಲಿ ಬ್ರಾಹ್ಮಣರು ಶೇಕಡಾ ಹತ್ತರಷ್ಟಿದ್ದಾರೆ.

ಹೀಗಿದ್ದರೂ `ಮೇಲ್ಜಾತಿ ಜನರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು` ಎಂದು ಹೇಳುತ್ತಾ ರಾಜಕೀಯ ಪ್ರಾರಂಭಿಸಿದ್ದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಕಳೆದೆರಡು ವಿಧಾನಸಭಾ ಚುನಾವಣೆಗಳಲ್ಲಿ ಬ್ರಾಹ್ಮಣರ ಕಣ್ಮಣಿ.

ಬಿಜೆಪಿ ಎಂದರೆ `ಬಿಪಿ` (ಬ್ರಾಹ್ಮಣ-ಬನಿಯಾ) ಪಕ್ಷ ಎಂದು ಗೇಲಿ ಮಾಡುತ್ತಿದ್ದ ಬಿಎಸ್‌ಪಿ ಹದಿನೈದು ವರ್ಷಗಳ ಹಿಂದೆ ಅದೇ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಾಗ ಅಚ್ಚರಿ ಪಟ್ಟವರೇ ಹೆಚ್ಚು.

ಅಲ್ಲಿಗೆ ಬಿಎಸ್‌ಪಿ ಕತೆ ಮುಗಿಯಿತು ಎಂದೇ ಎಲ್ಲರೂ ವಿಶ್ಲೇಷಿಸತೊಡಗಿದ್ದರು. ಆದರೆ ಮಾಯಾವತಿ ಒಂದಲ್ಲ, ಮೂರು ಬಾರಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮೂರು ಬಾರಿ ಅದನ್ನು ಮುರಿದು ದಕ್ಕಿಸಿಕೊಂಡರು.

ದಲಿತ ಸಮುದಾಯದ ಅಖಂಡ ಬೆಂಬಲವೇ ಮಾಯಾವತಿಯವರ ರಾಜಕೀಯ ಶಕ್ತಿ. ಈ ರೀತಿಯ ಜಾತಿ ಆಧಾರಿತ  ರಾಜಕೀಯ ಮಾಡುವವರು ಬೇರೆ ರಾಜ್ಯಗಳಲ್ಲಿ, ಇಲ್ಲವೇ ಬೇರೆ ಜಾತಿಗಳಲ್ಲಿ ಬಹಳ ಕಾಲ ರಾಜಕೀಯ ಯಶಸ್ಸನ್ನು ಉಳಿಸಿಕೊಳ್ಳಲು ಆಗಿಲ್ಲ. ಬಿಹಾರದಲ್ಲಿ ಲಾಲುಪ್ರಸಾದ್ ಮಾಡಿದ್ದ ಇದೇ ರಾಜಕೀಯ ಹದಿನಾರು ವರ್ಷಗಳಲ್ಲಿ ಕೊನೆಗೊಂಡಿತ್ತು.

ಉತ್ತರಪ್ರದೇಶದಲ್ಲಿಯೇ ಮುಲಾಯಂ ಸಿಂಗ್ ಏದುಸಿರು ಬಿಡತೊಡಗಿದ್ದಾರೆ. ಆದರೆ ಬಿಎಸ್‌ಪಿ ಸ್ಥಾಪನೆಯಾದ ದಿನದಿಂದ ಇಲ್ಲಿಯ ವರೆಗಿನ ಸುಮಾರು ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನಡೆದ ಪ್ರತಿ ಚುನಾವಣೆಯಲ್ಲಿಯೂ ಬಿಎಸ್‌ಪಿಯ ದಲಿತರ ಬೆಂಬಲ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಇದು ಬರೀ ಬೆಂಬಲ ಅಲ್ಲ, ಒಂದು ರೀತಿಯಲ್ಲಿ ಕುರುಡು ಬೆಂಬಲ.

ಸಾಮಾಜಿಕವಾಗಿ ತಮ್ಮ ಶತ್ರುಗಳು ಎಂದು ತಿಳಿದುಕೊಂಡ ಮೇಲ್ಜಾತಿಗಳಿಗೆ ಸೇರಿದ ಅಭ್ಯರ್ಥಿಗಳನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಿದರೂ ಕಣ್ಣುಮುಚ್ಚಿ ಅವರಿಗೆ ಮತ ಹಾಕುವಷ್ಟು ಉತ್ತರಪ್ರದೇಶದ ದಲಿತರಿಗೆ ಮಾಯಾವತಿಯವರ ಮೇಲೆ ಅಂಧಾಭಿಮಾನ ಇದೆ ಎನ್ನುವುದು ಚುನಾವಣೆಗಳಲ್ಲಿ ಸಾಬೀತಾಗಿದೆ.

ಮಾಯಾವತಿ ಅವರ ನಾಯಕತ್ವದಿಂದ ದಲಿತರಿಗೇನಾದರೂ ಲಾಭ ಆಗಿದೆಯೇ? ಮಾಯಾವತಿ ಉತ್ತರಪ್ರದೇಶ ಪ್ರವೇಶಿಸಿದಾಗ ದಲಿತರು ಯಾವ ಸ್ಥಿತಿಯಲ್ಲಿದ್ದರೋ ಹೆಚ್ಚು ಕಡಿಮೆ ಈಗಲೂ ಹಾಗೆಯೇ ಇದ್ದಾರೆ.

ಅವರು ಸಮಾಜದಲ್ಲಿ ಭಯಮುಕ್ತರಾಗಿ  ಆತ್ಮಗೌರವದಿಂದ ಬದುಕುವ ವಾತಾವರಣವನ್ನಷ್ಟೇ ಮಾಯಾವತಿ ಕಲ್ಪಿಸಿದ್ದಾರೆ.  ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉಳಿದ ರಾಜ್ಯಗಳ ದಲಿತರಷ್ಟೇ ಹಿಂದುಳಿದಿದ್ದಾರೆ. ಭೂ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಈಗಲೂ ಮುಂದುವರಿದಿದೆ.

ಹೀಗಿದ್ದರೂ ಮಾಯಾವತಿ ಅವರ ಬಗೆಗಿನ ದಲಿತರ ಅಭಿಮಾನ ಕಡಿಮೆಯಾದಂತೆ ಕಾಣುತ್ತಿಲ್ಲ. ಅವರಿಗೆ ಇದಿರಾಗಿ ಇನ್ನೊಬ್ಬ ದಲಿತ ನಾಯಕ ಅಲ್ಲಿ ಬೆಳೆಯುವುದು ಕೂಡಾ ಇಲ್ಲಿಯ ವರೆಗೆ ಸಾಧ್ಯವಾಗಿಲ್ಲ.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಗತವೈಭವದ ಸ್ಥಿತಿಗೆ ಮರಳಲು ಸಾಧ್ಯವೇ ಇಲ್ಲವೆಂದು ವಿರೋಧಪಕ್ಷಗಳು ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ಮೂರು ವರ್ಷಗಳ ಹಿಂದೆ ಖಾಸಗಿ ಮಾತುಕತೆಯಲ್ಲಿ ಹೇಳುತ್ತಿದ್ದರು. ಕಾಗದದ ಮೇಲಿನ ಲೆಕ್ಕಾಚಾರ ಕೂಡಾ ಅದನ್ನೇ ಹೇಳುತ್ತಿತ್ತು.

ಬ್ರಾಹ್ಮಣರು ಮೊದಲು ಬಿಜೆಪಿಗೆ, ನಂತರ ಬಿಎಸ್‌ಪಿಗೆ, ದಲಿತರು ಬಿಎಸ್‌ಪಿಗೆ, ಮತ್ತು ಬಾಬರಿ ಮಸೀದಿ ಧ್ವಂಸದ ನಂತರ ಮುಸ್ಲಿಮರು ಮುಲಾಯಂಸಿಂಗ್ ಅವರ ಸಮಾಜವಾದಿ ಪಕ್ಷಕ್ಕೆ ವಲಸೆ ಹೋಗಿದ್ದ ಕಾರಣ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲದ ಮತಬುಟ್ಟಿ ಖಾಲಿಯಾಗಿತ್ತು.

ಯಾವುದೇ ನಿರ್ದಿಷ್ಟ ಜಾತಿ ಇಲ್ಲವೇ ಧರ್ಮದ ಜತೆ ಗುರುತಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿಲ್ಲ. ಮಂಡಲೋತ್ತರ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ನಡೆಯುತ್ತಾ ಬಂದ ಬಿರುಸಾದ ಜಾತಿ ಸಂಘರ್ಷದ ರಾಜಕೀಯ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡಿತ್ತು.

2007ರ ಚುನಾವಣೆಯಲ್ಲಿ ಮಾಯಾವತಿ ಅರ್ಧಕ್ಕಿಂತಲೂ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ಗಳಿಸಿದಾಗ ಉಳಿದೆಲ್ಲ ಪಕ್ಷಗಳ ಕತೆ ಮುಗಿಯಿತೆಂದೇ ಎಲ್ಲರೂ ತಿಳಿದಿದ್ದರು. ಬಿಎಸ್‌ಪಿಯ 208 ಸದಸ್ಯಬಲದ ಎದುರು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ 21 ಸದಸ್ಯರು ಲೆಕ್ಕಕ್ಕಿಲ್ಲದಷ್ಟು ನಗಣ್ಯರಾಗಿದ್ದರು.

ಇಷ್ಟೊಂದು ಭದ್ರವಾಗಿದ್ದ ಮಾಯಾವತಿಯವರ ರಾಜಕೀಯ ನೆಲೆ ಎರಡೇ ವರ್ಷಗಳ ಅವಧಿಯಲ್ಲಿ ಕುಸಿದು ಹೋಯಿತೇನೋ ಎಂಬ ಅನುಮಾನ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಹುಟ್ಟಿಸಿತ್ತು.

ಆ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಕಾಂಗ್ರೆಸ್ ಪಕ್ಷ ಚೇತರಿಸಿಕೊಂಡಿತ್ತು. 1984ರಲ್ಲಿ ಎಲ್ಲ 83 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಸದಸ್ಯ ಬಲ ಪ್ರತಿಚುನಾವಣೆಯಲ್ಲಿ ಕುಸಿಯುತ್ತಾ ಬಂದು 2004ರಲ್ಲಿ ಕೇವಲ ಒಂಬತ್ತಕ್ಕೆ ಇಳಿದಿತ್ತು.

ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಅದು ಇದ್ದಕ್ಕಿದ್ದಂತೆ 21ಕ್ಕೆ ಏರಿತ್ತು, ಬಿಎಸ್‌ಪಿ ಬಲ 19ಕ್ಕೆ ಇಳಿದಿತ್ತು. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಬಹಳಷ್ಟು ಕಾಲದಿಂದ ರಾಜಕೀಯ ಯಶಸ್ಸಿಗಾಗಿ ಕಾಯುತ್ತಿದ್ದ ರಾಹುಲ್‌ಗಾಂಧಿಯವರಿಗೂ ರಾಜಕೀಯವಾಗಿ ಜೀವದಾನ ಮಾಡಿದ ಫಲಿತಾಂಶ.

ಈ ಚುನಾವಣಾ ಗೆಲುವಿನ ಗುಟ್ಟೇನು? ಉತ್ತರಪ್ರದೇಶದ ಮತದಾರರ ಮನೋಭಾವದಲ್ಲಿ ದಿಢೀರನೆ ಆಗಿರುವ ಈ ಬದಲಾವಣೆಗೆ ಕಾರಣಗಳೇನು? ಎಂಬುದು ಈಗಲೂ ಯಾರಿಗೂ ಸ್ಪಷ್ಟ ಇಲ್ಲ.

ಬಹಳಷ್ಟು ಮಂದಿ ಇದಕ್ಕೆ ರಾಹುಲ್ ಗಾಂಧಿಯವರ ವರ್ಚಸ್ಸು ಕಾರಣ ಎನ್ನುತ್ತಾರೆ. ಜಾತಿ-ಧರ್ಮವನ್ನು ಲೆಕ್ಕಿಸದೆ ಟಿಕೆಟ್ ನೀಡಿದ ಕಾರ‌್ಯತಂತ್ರ ಫಲ ನೀಡಿತು ಎನ್ನುವವರೂ ಇದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ನಂತರ ಮಾಯಾವತಿಯವರಲ್ಲಿ ಹುಟ್ಟಿಕೊಂಡ ರಾಷ್ಟ್ರ ರಾಜಕಾರಣದ ಆಕಾಂಕ್ಷೆಯಿಂದಾಗಿ ರಾಜ್ಯ ರಾಜಕಾರಣವನ್ನು ನಿರ್ಲಕ್ಷಿಸಿದ್ದು ಇದಕ್ಕೆ ಕಾರಣ ಎನ್ನುವವರೂ ಇದ್ದಾರೆ.

ದಶಕಗಳ ಕಾಲದ ಪ್ರಾದೇಶಿಕ ಪಕ್ಷಗಳ ರಾಜಕಾರಣದಿಂದ ಬೇಸತ್ತು ಹೋಗಿರುವ ಉತ್ತರಪ್ರದೇಶದ ಮತದಾರರು ಮರಳಿ ರಾಷ್ಟ್ರೀಯ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿರಬಹುದೆಂಬ ವ್ಯಾಖ್ಯಾನ ಕೂಡಾ ಕೇಳಿಬಂದಿತ್ತು.

 ಈ ಎಲ್ಲ ಕಾರಣಗಳಿಂದಾಗಿಯೇ ಮುಂದಿನ ತಿಂಗಳು ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಬಗ್ಗೆ ದೇಶದ ಜನರಲ್ಲಿ ಕುತೂಹಲ ಇದೆ. ಒಂದೊಮ್ಮೆ ಮಾಯಾವತಿ ಮತ್ತೆ ಹಿಂದಿನ ವಿಧಾನಸಭಾ ಚುನಾವಣೆಯ ಗೆಲುವನ್ನು ಪುನರಾವರ್ತಿಸಿದರೆ ರಾಹುಲ್‌ಗಾಂಧಿಯವರ ರಾಜಕೀಯ ಭವಿಷ್ಯಕ್ಕೆ ಮಂಕು ಕವಿಯಲಿದೆ.

ಅಷ್ಟು ಮಾತ್ರವಲ್ಲ, ಅಂತಹ ಸಂದರ್ಭದಲ್ಲಿ ಮಾಯಾವತಿ ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ಯಾರೂ ತಡೆಯಲಾರರು.

  ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾದರೆ ಕಾಂಗ್ರೆಸ್ ಪಕ್ಷ, ವರ್ಷಗಳಿಂದ ಕಾಯುತ್ತಿರುವ ಭವಿಷ್ಯದ ನಾಯಕತ್ವ ರಾಹುಲ್‌ಗಾಂಧಿಯ ರೂಪದಲ್ಲಿ ಅದಕ್ಕೆ ಸಿಗಬಹುದು.

ಮಾಯಾವತಿಯವರ ರಾಜಕೀಯ ಸದ್ಯಕ್ಕೆ ಉತ್ತರಪ್ರದೇಶಕ್ಕಷ್ಟೇ ಸೀಮಿತವಾಗಬಹುದು. ಉತ್ತರಪ್ರದೇಶದ ಮತದಾರರ ಮನಸ್ಸಿನಲ್ಲಿ ಏನಿದೆ ಎನ್ನುವುದು ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ.

Tuesday, December 27, 2011

ರಾಜಕೀಯ ಸಂಘರ್ಷಗಳಲ್ಲೇ ಕಳೆದು ಹೋದ ಬಂಗಾರಪ್ಪ

ಎಸ್.ಬಂಗಾರಪ್ಪನವರು ಇಷ್ಟೊಂದು ಸಿಟ್ಟು ಮಾಡಿಕೊಳ್ಳದೆ ಇರುತ್ತಿದ್ದರೆ, ಅವಕಾಶಕ್ಕಾಗಿ ಕಾಯುವಷ್ಟು ತಾಳ್ಮೆಯನ್ನು ಹೊಂದಿದ್ದರೆ, ಅನ್ಯಾಯವನ್ನು ಸಹಿಸಿಕೊಳ್ಳುವಷ್ಟು ಸಂಯಮವನ್ನು ಪಡೆದಿದ್ದರೆ, ಬಂಡುಕೋರತನವನ್ನು ನಿಯಂತ್ರಿಸಿಕೊಳ್ಳುವಷ್ಟು ಹೊಂದಾಣಿಕೆ ಕಲಿತಿದ್ದರೆ, ಜೈಕಾರ ಹಾಕಿದವರನ್ನೆಲ್ಲ ನಂಬುವಷ್ಟು ಒಳ್ಳೆಯವನಾಗದೆ ಇರುತ್ತಿದ್ದರೆ, ಸಾರ್ವಜನಿಕ ಹಣದ ಬಗ್ಗೆ ಸ್ವಲ್ಪ ಸೂಕ್ಷ್ಮಮತಿಯಾಗಿದ್ದರೆ, ಬಡವರ ಬಗೆಗಿನ ಕಾಳಜಿಯ ಜತೆಯಲ್ಲಿ ಅಭಿವೃದ್ಧಿಯ ಮುನ್ನೋಟವನ್ನೂ ಹೊಂದಿದ್ದರೆ... ರಾಜಕೀಯವಾಗಿ ಅವರು ಇನ್ನಷ್ಟು ಮೇಲಕ್ಕೇರುತ್ತಿದ್ದರು, ಅವರಿಂದ ರಾಜ್ಯಕ್ಕೆ ಇನ್ನಷ್ಟು ಒಳ್ಳೆಯದಾಗುತ್ತಿತ್ತೋ ಏನೋ? ಆದರೆ ಸಿಟ್ಟು, ಅವಸರ, ಅಸಹನೆ, ಬಂಡಾಯ, ಹುಂಬತನಗಳೆಲ್ಲವೂ ಅವರ ಹುಟ್ಟುಗುಣಗಳು, ಅವುಗಳು ಇಲ್ಲದೆ ಇದ್ದಿದ್ದರೆ ಅವರು ಬಂಗಾರಪ್ಪ ಹೇಗಾಗುತ್ತಿದ್ದರು? ಈ ಗುಣಗಳಿಗಾಗಿಯೇ ಅವರನ್ನು ದ್ವೇಷಿಸುವವರು ಇದ್ದರು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿಸುವವರೂ ಇದ್ದರು.
1972ರಲ್ಲಿ ಮೊದಲ ಬಾರಿ ಸಿಟ್ಟಾದಾಗ ಅವರಿಗೆ 40ರ ಹರಯ. ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ತಮಗಿಂತ ಕಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಉನ್ನತ ಸ್ಥಾನ ನೀಡಿದಾಗ ಸಿಟ್ಟಾದ ಬಂಗಾರಪ್ಪ ಸಿಡಿದು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡರು. ಎರಡನೆ ಬಾರಿ ಅವರು ಸಿಟ್ಟಾಗಿದ್ದು 1980ರಲ್ಲಿ, ದೇವರಾಜ ಅರಸು ವಿರುದ್ಧದ ಸಮರಕ್ಕೆ ಬಂಗಾರಪ್ಪನವರನ್ನು ಬಳಸಿಕೊಂಡ ಇಂದಿರಾ ಗಾಂಧಿ ಉದ್ದೇಶ ಸಾಧಿಸಿದ ನಂತರ ಅವರನ್ನು ಕೈಬಿಟ್ಟು ಆರ್. ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ. 1983ರಲ್ಲಿ ಕ್ರಾಂತಿರಂಗದ ನಾಯಕರಾಗಿ ರಾಜ್ಯದ ತುಂಬಾ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬೆಂಗಳೂರಿಗೆ ಹಿಂದಿರುಗಿದಾಗ ಮುಖ್ಯಮಂತ್ರಿ ಕುರ್ಚಿಯಲ್ಲಿ ರಾಮಕೃಷ್ಣ ಹೆಗಡೆ ಕುಳಿತಿದ್ದನ್ನು ಕಂಡು ಅವರು  ಮೂರನೆ ಬಾರಿ ಸಿಟ್ಟಾಗಿದ್ದರು.
1989ರಲ್ಲಿ ನಾಲ್ಕನೆ ಬಾರಿ ಬಂಗಾರಪ್ಪನವರಿಗೆ ಸಿಟ್ಟು ಬಂದಿತ್ತು. ವೀರೇಂದ್ರ ಪಾಟೀಲ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಕನಿಷ್ಠ ಸಚಿವ ಸಂಪುಟದ ಪಟ್ಟಿಯಲ್ಲಿಯೂ ಅವರ ಹೆಸರಿರಲಿಲ್ಲ. 1993ರಲ್ಲಿ ಐದನೆ ಬಾರಿ ಸಿಟ್ಟಾಗಿದ್ದಾಗ ಅವರು ಮುಖ್ಯಮಂತ್ರಿಯಾಗಿದ್ದರು. ಭಿನ್ನಮತೀಯರ ದೂರಿನ ವಿಚಾರಣೆಗಾಗಿ ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ಎಸ್. ಬಿ.ಚವಾಣ್ ದನಿ ಎತ್ತಿ ಪ್ರಶ್ನಿಸತೊಡಗಿದಾಗ ಸಿಟ್ಟಾದ ಬಂಗಾರಪ್ಪ `ಶಾಲಾಬಾಲಕನನ್ನು ಪ್ರಶ್ನಿಸುವಂತೆ ನನ್ನನ್ನು ಪ್ರಶ್ನಿಸಬೇಡಿ~ ಎಂದು ತಿರುಗಿಬಿದ್ದಿದ್ದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಹತಾಶರಾಗಿಬಿಟ್ಟ ಬಂಗಾರಪ್ಪ ಸಿಟ್ಟಾಗುತ್ತಲೇ ಹೋದರು. ಎರಡು ಬಾರಿ ಸ್ವತಂತ್ರವಾಗಿ ಪಕ್ಷ ಕಟ್ಟಿದರು, ಬಿಜೆಪಿ, ಸಮಾಜವಾದಿ ಪಕ್ಷ, ಜಾತ್ಯತೀತ ಜನತಾದಳ ಸೇರಿದರು. ಮರಳಿ ಕಾಂಗ್ರೆಸ್‌ಗೆ ಹಿಂದಿರುಗಿ ವಾಪಸು ಬಂದರು. ಆದರೆ ಅವರು ಬಯಸಿದ ರಾಜಕೀಯ ಅಧಿಕಾರ ಮರಳಿ ಅವರ ಕೈಗೆ ಬರಲೇ ಇಲ್ಲ. ಅವರು ಬೆಳೆಸಿದ ಹುಡುಗರೆಲ್ಲ ಶಾಸಕರಾಗಿ, ಸಚಿವರಾಗಿ ಕಣ್ಣೆದುರು ಮೆರೆಯುತ್ತಿದ್ದಾಗ ಚುನಾವಣೆಯಲ್ಲಿಯೂ ಸೋತುಹೋಗಿ, `ಸೋಲಿಲ್ಲದ ಸರದಾರ~ನೆಂಬ ಖ್ಯಾತಿಯನ್ನೂ ಕಳೆದುಕೊಂಡು ರಾಜಕೀಯವಾಗಿ ಅವರು ಒಂಟಿಯಾಗಬೇಕಾಯಿತು. ಇದಕ್ಕೆಲ್ಲ ಒಂದು ಕಾರಣ ಅವರ ಸಿಟ್ಟು ಎನ್ನುವವರಿದ್ದಾರೆ.
ಬಂಗಾರಪ್ಪನವರು ಯಾಕೆ ಸಿಟ್ಟಾಗುತ್ತಿದ್ದರು? ತನಗೆ ಅನ್ಯಾಯವಾದಾಗಲೆಲ್ಲ ಅವರು ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ಅಭಿಮಾನಿಗಳು. ಮಹತ್ವಾಕಾಂಕ್ಷಿಯಾಗಿದ್ದ ಬಂಗಾರಪ್ಪ ಬಯಸಿದ್ದು ಸಿಗದೆ ಇದ್ದಾಗೆಲ್ಲ ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ವಿರೋಧಿಗಳು. ಈ ಎರಡು ಅಭಿಪ್ರಾಯಗಳ ನಡುವೆ ಎಲ್ಲೋ ಒಂದು ಕಡೆ ಅವರ ಸಿಟ್ಟಿನ ಕಾರಣ ಇದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಬಂಗಾರಪ್ಪನವರೂ ಮಾಡಲಿಲ್ಲ.
ಬಂಗಾರಪ್ಪನವರು ತನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು ಪ್ರಜಾಸೋಷಲಿಸ್ಟ್ ಪಕ್ಷದ ಮೂಲಕ; ಕೊನೆಗೊಳಿಸಿದ್ದು ಜಾತ್ಯತೀತ ಜನತಾದಳದ ಮೂಲಕ. ಬಹುಕಾಲ ರಾಜಕೀಯ ಮಾಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಆ ಪಕ್ಷದಲ್ಲಿ ಒಂದಷ್ಟು ದಿನ ಅಧಿಕಾರ ಅನುಭವಿಸಿದರೂ  ಹೈಕಮಾಂಡ್ ಸಂಸ್ಕೃತಿಯ ಪಕ್ಷಕ್ಕೆ ಹೊಂದಿಕೊಳ್ಳಲು ಅತ್ಯುಗ್ರ ಸ್ವಾಭಿಮಾನಿಯಾಗಿದ್ದ ಬಂಗಾರಪ್ಪನವರಿಗೆ ಸಾಧ್ಯವಾಗಲೇ ಇಲ್ಲ. ಬಂಗಾರಪ್ಪನವರ ಗುಣ-ಸ್ವಭಾವ ಒಬ್ಬ ಪ್ರಾದೇಶಿಕ ಪಕ್ಷದ ನಾಯಕನಾಗಲು ಹೊಂದಿಕೆಯಾಗುವಂತಿತ್ತೇ ಹೊರತು ರಾಷ್ಟ್ರೀಯ ಪಕ್ಷ ಬಯಸುವ ಶಿಸ್ತಿನ ಸಿಪಾಯಿಯಾಗಲು ಹೊಂದಿಕೆಯಾಗುವಂತಿರಲಿಲ್ಲ. ಕಾಂಗ್ರೆಸ್ ಸಂಸ್ಕೃತಿ ಮತ್ತು ತನ್ನ ಸ್ವಭಾವವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಅವರು ಆ ಪಕ್ಷದ ಸಹವಾಸಕ್ಕೆ ಹೋಗುತ್ತಿರಲಿಲ್ಲವೇನೋ? ಅದು ಅರಿವಾಗುವ ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಈ ಗೊಂದಲದಲ್ಲಿಯೇ ನಾಲ್ಕು ದಶಕಗಳ ತನ್ನ ರಾಜಕೀಯ ಜೀವನದಲ್ಲಿ ಅವರು ಐದು ಬಾರಿ ಕಾಂಗ್ರೆಸ್ ಬಿಟ್ಟು ಹೋಗಿದ್ದರು, ಐದು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದಿದ್ದರು.
ಬಂಗಾರಪ್ಪನವರ ರಾಜಕೀಯ ಜೀವನದ ಮೊದಲ ಪ್ರಮಾದ ತನ್ನನ್ನು ಕರೆದುಕೊಂಡು ಬಂದು ಬೆಳೆಸಿದ್ದ ದೇವರಾಜ ಅರಸು ಅವರನ್ನು ತೊರೆದು ತನ್ನ ಸ್ವಭಾವಕ್ಕೆ ಒಪ್ಪದ ಕಾಂಗ್ರೆಸ್ ಜತೆ ಹೋಗಿದ್ದು. ಅರಸು ಜತೆಯಲ್ಲಿಯೇ ಉಳಿದುಕೊಂಡಿದ್ದರೆ ನಿಜವಾದ ಅರ್ಥದಲ್ಲಿ ಅವರ ರಾಜಕೀಯ ಉತ್ತರಾಧಿಕಾರಿಯಾಗುತ್ತಿದ್ದರು. ಅದರಿಂದ ನೆರೆರಾಜ್ಯಗಳಂತೆ ಕರ್ನಾಟಕಕ್ಕೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವೂ ಸಿಕ್ಕಿಬಿಡುತ್ತಿತ್ತೋ ಏನೋ? ಅಂತಹ ಸಂದರ್ಭದಲ್ಲಿ ಕರ್ನಾಟಕದ ಇಂದಿನ ರಾಜಕೀಯ ಚಿತ್ರವೇ ಬೇರೆಯಾಗಿರುತ್ತಿತ್ತು. ರಾಜಕೀಯ ಅಧಿಕಾರ ಪಡೆಯುವ ಉದ್ದೇಶದಿಂದ ಅರಸು ಅವರನ್ನು ಕೈಬಿಟ್ಟರೂ ಕೊನೆಗೂ ಆ ಅಧಿಕಾರ ಪೂರ್ಣಪ್ರಮಾಣದಲ್ಲಿ ಅವರ ಕೈಗೆ ಬರಲೇ ಇಲ್ಲ. ಸುಮಾರು ನಲ್ವತ್ತು ವರ್ಷ ರಾಜಕೀಯದಲ್ಲಿದ್ದು `ಅಧಿಕಾರದಾಹಿ~, `ಪಕ್ಷಾಂತರಿ~ ಎಂಬ ಹೀಯಾಳಿಕೆಗೆ ತುತ್ತಾದರೂ ಅವರು ಅಧಿಕಾರ ಅನುಭವಿಸಿದ್ದು ಕೇವಲ ನಾಲ್ಕುವರೆ ವರ್ಷ.
ಅರಸು ಅವರನ್ನು ಬಿಟ್ಟು ಬಂದ ಒಂದು ಘಟನೆಯನ್ನು ಹೊರತುಪಡಿಸಿದರೆ ನಂತರದ ಅವರ ಯಾವ ಪಕ್ಷಾಂತರವೂ ರಾಜಕೀಯ ಲೆಕ್ಕಾಚಾರದಿಂದ ಮಾಡಿದ್ದಲ್ಲ. ಅವುಗಳೆಲ್ಲವೂ ಅನ್ಯಾಯದ ವಿರುದ್ಧ ಪ್ರತಿಭಟನೆಯ ಇಲ್ಲವೇ ಸೇಡು ತೀರಿಸಿಕೊಳ್ಳುವ ಹುಂಬತನದ ನಿರ್ಧಾರಗಳು. ಆದ್ದರಿಂದ ಆ  ಪಕ್ಷಾಂತರಗಳು ಅವರಿಗೆ `ಅಧಿಕಾರದಾಹಿ~ ಎಂಬ ಹಣೆಪಟ್ಟಿಯನ್ನು ತಂದುಕೊಟ್ಟಿತೇ ವಿನಾ ಅಧಿಕಾರವನ್ನು ತಂದುಕೊಡಲಿಲ್ಲ. ತನ್ನನ್ನು ಬಳಸಿಕೊಂಡು ಕೈಬಿಟ್ಟ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಲೆಂದೇ ಅವರು ಆ ಪಕ್ಷ ತೊರೆದು ಕ್ರಾಂತಿರಂಗ ಸೇರಿದರು, ಈ ಪಕ್ಷಾಂತರ ಕಾಂಗ್ರೆಸ್ ಸೋತು ಜನತಾರಂಗ ಅಧಿಕಾರಕ್ಕೆ ಬರಲು ಕಾರಣವಾಯಿತು, ಆದರೆ ಅವರು ಮುಖ್ಯಮಂತ್ರಿಯಾಗಲಿಲ್ಲ. 1985ರಲ್ಲಿ ಜನತಾರಂಗದ ಅನ್ಯಾಯ ಪ್ರತಿಭಟಿಸಿ ಕಾಂಗ್ರೆಸ್ ಸೇರಿ ಆ ಪಕ್ಷಕ್ಕೆ ತನ್ನ ಪಾಲಿನ ಬಲ ತುಂಬಿದರು, 1989ರಲ್ಲಿ ಆ ಪಕ್ಷವೇನೋ ಅಧಿಕಾರಕ್ಕೆ ಬಂತು ಆದರೆ ಆಗಲೂ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಕೂಡಿ ಬರಲಿಲ್ಲ.
1992ರಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಅದು ಕಿತ್ತುಕೊಂಡ ಶೇಕಡಾ ಏಳೂವರೆಯಷ್ಟು ಮತಗಳಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅಧಿಕಾರಕ್ಕೆ ಬಂದದ್ದು ಜನತಾ ಪಕ್ಷ. 1999ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ನಂತರದ ದಿನಗಳಲ್ಲಿ ಆ ಪಕ್ಷಕ್ಕೆ ಅಧಿಕಾರವೇನೋ ಬಂತು, ಆದರೆ ಬಂಗಾರಪ್ಪನವರು ಮೂಲೆಗುಂಪಾದರು. 2004ರಲ್ಲಿ ತನ್ನೊಳಗೆ ಸೆಳೆದುಕೊಂಡ ಬಿಜೆಪಿ ಅವರ ಬಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ಇನ್ನಷ್ಟು ವಿಸ್ತರಿಸಿತು, ಬಂಗಾರಪ್ಪನವರಿಗೆ ಏನೂ ಸಿಗಲಿಲ್ಲ. ಒಂದೇ ವರ್ಷದ ಅವಧಿಯೊಳಗೆ ಬಿಜೆಪಿ ವಿರುದ್ಧ ಸಿಡಿದೆದ್ದು ಸಮಾಜವಾದಿ ಪಕ್ಷ ಸೇರಿ ಲೋಕಸಭೆಗೆ ಆಯ್ಕೆಯಾದರು. ಆ ಪಕ್ಷಕ್ಕೆ ಲೋಕಸಭೆಯಲ್ಲಿ ಒಬ್ಬ ಸದಸ್ಯನ ಹೆಚ್ಚುವರಿ ಬಲ ಸಿಕ್ಕಿದ್ದೇ ಲಾಭ. 2009ರಲ್ಲಿ ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿದರು. ಆಗಲೂ ಅವರಿಗೆ ಸಿಕ್ಕಿದ್ದು ತಮ್ಮ ಚುನಾವಣಾ ರಾಜಕೀಯದ ಮೊದಲ ಸೋಲು ಅಷ್ಟೇ. ಅದರ ನಂತರ ಜಾತ್ಯತೀತ ಜನತಾದಳ ಸೇರಿದರೂ ಅದರಿಂದ ಅವರಿಗೇನೂ ಲಾಭ ಆಗಲಿಲ್ಲ.
 ಬಯಸಿದ್ದನೆಲ್ಲ ಮಾಡಿತೋರಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಒಬ್ಬ ಯಶಸ್ವಿ ರಾಜಕೀಯ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಬಂಗಾರಪ್ಪನವರು ಪಕ್ಷಗಳ ಜತೆಗಿನ  ಗುದ್ದಾಟ-ತಿಕ್ಕಾಟದಲ್ಲಿಯೇ ಕಳೆದುಹೋದರೇನೋ? ಅವರನ್ನು ಹಿಂದುಳಿದ ಜಾತಿಗಳ ನಾಯಕನಾಗಿ ಕೊಂಡಾಡಲಾಗುತ್ತಿದ್ದರೂ ಅವರು ಆಳದಲ್ಲಿ ಎಲ್ಲ ಜನವರ್ಗಗಳ ನಾಯಕನೆಂದೇ ಕರೆಸಿಕೊಳ್ಳಲು ಇಷ್ಟಪಡುತ್ತಿದ್ದರೆನ್ನುವುದು ಅವರ ಮಾತು ಮತ್ತು ಕೃತಿಗಳಿಂದ ಸ್ಪಷ್ಟವಾಗುತ್ತದೆ.  ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ ಇರಲಿ, ವಿಶ್ವ, ಆಶ್ರಯ, ಆರಾಧನಾ ಯೋಜನೆಗಳೇ ಇರಲಿ, ಅವುಗಳು ಸಾಮಾಜಿಕ ನ್ಯಾಯದ ಸಾಧನಕ್ಕಿಂತಲೂ ಹೆಚ್ಚಾಗಿ ಎಲ್ಲ ಜಾತಿ-ಜನಾಂಗಗಳ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡ ಕಲ್ಯಾಣ ಕಾರ‌್ಯಕ್ರಮಗಳು.
 ಸಮಾಜವಾದವನ್ನಾಗಲಿ ಇಲ್ಲವೇ ದೇವರಾಜ ಅರಸು ಅವರ ಆಸಕ್ತಿಯ ಸಾಮಾಜಿಕ ನ್ಯಾಯವನ್ನಾಗಲಿ ಅವರು ಯಥಾವತ್ತಾಗಿ ಅನುಕರಿಸಲು ಹೋಗಲೇ ಇಲ್ಲ. ವಿಶಾಲವಾದ ಅರ್ಥದಲ್ಲಿ ಎಲ್ಲ ಜಾತಿಗಳಲ್ಲಿರುವ ಬಡವರ ಉದ್ಧಾರವಾಗಬೇಕೆಂದೇ ಅವರು ಹೇಳುತ್ತಿದ್ದರು. ಈ ಕಾರಣದಿಂದಾಗಿಯೇ ಜಾತಿ-ಧರ್ಮವನ್ನು ಮೀರಿ ಅವರಿಗೆ ಅನುಯಾಯಿಗಳಿದ್ದರು. ಸಮಾಜದ ಅಭಿವೃದ್ದಿಯ ಬಗ್ಗೆ ಅವರಲ್ಲಿದ್ದ ಸೈದ್ಧಾಂತಿಕ ಒತ್ತಾಸೆ ಇಲ್ಲದ ಸಡಿಲವಾದ ಆಲೋಚನೆಗಳ ಪರಿಕಲ್ಪನೆ ಇನ್ನೊಂದು ರೀತಿಯಲ್ಲಿ ಅವರ ಮಿತಿಯೂ ಆಗಿತ್ತು. ಇದರಿಂದಾಗಿ ವೈಯಕ್ತಿಕವಾಗಿ ಉದಾರಿಗಳು, ಬಡವರ ಬಗ್ಗೆ ಕಳಕಳಿಯುಳ್ಳವರು, ವಿಶಾಲ ಹೃದಯಿಗಳೂ ಆಗಿದ್ದ ಬಂಗಾರಪ್ಪನವರಿಗೆ  ಸೈದ್ಧಾಂತಿಕ ಸ್ಪಷ್ಟತೆ ಹೊಂದಿದ್ದ ಇನ್ನೊಬ್ಬ ಗೋಪಾಲಗೌಡ ಇಲ್ಲವೇ ದೇವರಾಜ ಅರಸು ಆಗಲು ಸಾಧ್ಯವಾಗಲಿಲ್ಲ. ಬೆಂಬಲಿಗರಿಗೆ ನೆರವಾಗಬೇಕೆಂಬ ಒಂದೇ ಉದ್ದೇಶದಿಂದ ಅಧಿಕಾರ ಕೈಗೆ ಬಂದಾಗ ಅದನ್ನು ಸಡಿಲಬಿಟ್ಟರು. ಈ ಔದಾರ‌್ಯವನ್ನು ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಭ್ರಷ್ಟಾಚಾರದ ಕಳಂಕ ಅವರಿಗೆ ಹತ್ತಿಕೊಳ್ಳಲು ಇದು ಮುಖ್ಯ ಕಾರಣ.
 ಸಿಟ್ಟಾಗಬೇಡ ನಗುನಗುತ್ತಾ ಇರು, ಅನ್ಯಾಯವನ್ನು ಸಹಿಸಿಕೊಳ್ಳು, ಹೊಂದಾಣಿಕೆ ಮಾಡಿಕೋ, ಯಾರನ್ನೂ ನಂಬಬೇಡ, ತಂತ್ರಗಳನ್ನು ಹೆಣೆ, ಕುತಂತ್ರಗಳನ್ನು ಮಾಡು, ಕಾಳಜಿ ಅಂತಃಕರಣದಲ್ಲಿ ಇಲ್ಲದಿದ್ದರೂ ಮಾತಿನಲ್ಲಿ ಇರಲಿ ಎನ್ನುತ್ತಿದೆ ಇಂದಿನ ರಾಜಕೀಯ. ಈ ಹೊಸಬಗೆಯ ರಾಜಕೀಯಕ್ಕೆ ಹೊಂದಿಕೊಳ್ಳಲು ಕೊನೆಗೂ ಬಂಗಾರಪ್ಪನವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ರಾಜಕೀಯ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದರು. ನೇರಾನೇರ ಜಗಳಕ್ಕಿಳಿದರು, ಬಂಡೆದ್ದರು,  ಹೋರಾಡಿದರು, ಕೆಲವೊಮ್ಮೆ ಎದ್ದರು ಇನ್ನೂ ಕೆಲವೊಮ್ಮೆ ಬಿದ್ದರು. ಅಧಿಕಾರವನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಹೋರಾಟದಲ್ಲಿಯೇ ಬದುಕನ್ನು ಕಳೆದರು, ಅದನ್ನೇ  ಹೆಚ್ಚು ಪ್ರೀತಿಸುತ್ತಾ ಹೋದರು. ಕೆಲವು ದೌರ್ಬಲ್ಯಗಳ ಹೊರತಾಗಿಯೂ ಅವರೊಳಗೆ ಒಬ್ಬ ಅಪ್ರತಿಮ ಹೋರಾಟಗಾರನಿದ್ದ. ರಾಜಕೀಯವಾಗಿ ಅಡಿಗಡಿಗೆ ಹಿನ್ನಡೆಯಾದರೂ ಧೃತಿಗೆಟ್ಟು ಮೂಲೆ ಸೇರದೆ ಸೆಟೆದು ನಿಲ್ಲುವ ಚೈತನ್ಯವನ್ನು ಅವರು ಕೊನೆಯವರೆಗೂ ಉಳಿಸಿಕೊಳ್ಳಲು ಅವರೊಳಗಿನ ಈ ದಣಿವರಿಯದ ಹೋರಾಟಗಾರ ಕಾರಣ. ರಾಜಕೀಯದಲ್ಲಿ ಬೆಳೆಯಲು ಒಳದಾರಿ-ಅಡ್ಡದಾರಿಗಳನ್ನೇ ಹುಡುಕಾಡುತ್ತಿರುವ ಇಂದಿನ ರಾಜಕಾರಣದಲ್ಲಿ ಜಾತಿ ಬಲ ಇಲ್ಲದ ಬಡಗೇಣಿದಾರ ಕುಟುಂಬದ ಸಾಮಾನ್ಯ ಯುವಕ ಹೋರಾಟದ ರಾಜಕೀಯದ ಮೂಲಕವೇ ಜನಾನುರಾಗಿ ನಾಯಕನಾಗಿ ಬೆಳೆದದ್ದು ಒಂದು ದಂತಕತೆಯಂತಿದೆ.

ರಾಜಕೀಯ ಸಂಘರ್ಷಗಳಲ್ಲೇ ಕಳೆದು ಹೋದ ಬಂಗಾರಪ್ಪ

 
ಎಸ್.ಬಂಗಾರಪ್ಪನವರು ಇಷ್ಟೊಂದು ಸಿಟ್ಟು ಮಾಡಿಕೊಳ್ಳದೆ ಇರುತ್ತಿದ್ದರೆ, ಅವಕಾಶಕ್ಕಾಗಿ ಕಾಯುವಷ್ಟು ತಾಳ್ಮೆಯನ್ನು ಹೊಂದಿದ್ದರೆ, ಅನ್ಯಾಯವನ್ನು ಸಹಿಸಿಕೊಳ್ಳುವಷ್ಟು ಸಂಯಮವನ್ನು ಪಡೆದಿದ್ದರೆ, ಬಂಡುಕೋರತನವನ್ನು ನಿಯಂತ್ರಿಸಿಕೊಳ್ಳುವಷ್ಟು ಹೊಂದಾಣಿಕೆ ಕಲಿತಿದ್ದರೆ, ಜೈಕಾರ ಹಾಕಿದವರನ್ನೆಲ್ಲ ನಂಬುವಷ್ಟು ಒಳ್ಳೆಯವನಾಗದೆ ಇರುತ್ತಿದ್ದರೆ, ಸಾರ್ವಜನಿಕ ಹಣದ ಬಗ್ಗೆ ಸ್ವಲ್ಪ ಸೂಕ್ಷ್ಮಮತಿಯಾಗಿದ್ದರೆ, ಬಡವರ ಬಗೆಗಿನ ಕಾಳಜಿಯ ಜತೆಯಲ್ಲಿ ಅಭಿವೃದ್ಧಿಯ ಮುನ್ನೋಟವನ್ನೂ ಹೊಂದಿದ್ದರೆ... ರಾಜಕೀಯವಾಗಿ ಅವರು ಇನ್ನಷ್ಟು ಮೇಲಕ್ಕೇರುತ್ತಿದ್ದರು, ಅವರಿಂದ ರಾಜ್ಯಕ್ಕೆ ಇನ್ನಷ್ಟು ಒಳ್ಳೆಯದಾಗುತ್ತಿತ್ತೋ ಏನೋ? ಆದರೆ ಸಿಟ್ಟು, ಅವಸರ, ಅಸಹನೆ, ಬಂಡಾಯ, ಹುಂಬತನಗಳೆಲ್ಲವೂ ಅವರ ಹುಟ್ಟುಗುಣಗಳು, ಅವುಗಳು ಇಲ್ಲದೆ ಇದ್ದಿದ್ದರೆ ಅವರು ಬಂಗಾರಪ್ಪ ಹೇಗಾಗುತ್ತಿದ್ದರು? ಈ ಗುಣಗಳಿಗಾಗಿಯೇ ಅವರನ್ನು ದ್ವೇಷಿಸುವವರು ಇದ್ದರು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿಸುವವರೂ ಇದ್ದರು.
1972ರಲ್ಲಿ ಮೊದಲ ಬಾರಿ ಸಿಟ್ಟಾದಾಗ ಅವರಿಗೆ 40ರ ಹರಯ. ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ತಮಗಿಂತ ಕಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಉನ್ನತ ಸ್ಥಾನ ನೀಡಿದಾಗ ಸಿಟ್ಟಾದ ಬಂಗಾರಪ್ಪ ಸಿಡಿದು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡರು. ಎರಡನೆ ಬಾರಿ ಅವರು ಸಿಟ್ಟಾಗಿದ್ದು 1980ರಲ್ಲಿ, ದೇವರಾಜ ಅರಸು ವಿರುದ್ಧದ ಸಮರಕ್ಕೆ ಬಂಗಾರಪ್ಪನವರನ್ನು ಬಳಸಿಕೊಂಡ ಇಂದಿರಾ ಗಾಂಧಿ ಉದ್ದೇಶ ಸಾಧಿಸಿದ ನಂತರ ಅವರನ್ನು ಕೈಬಿಟ್ಟು ಆರ್. ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ. 1983ರಲ್ಲಿ ಕ್ರಾಂತಿರಂಗದ ನಾಯಕರಾಗಿ ರಾಜ್ಯದ ತುಂಬಾ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬೆಂಗಳೂರಿಗೆ ಹಿಂದಿರುಗಿದಾಗ ಮುಖ್ಯಮಂತ್ರಿ ಕುರ್ಚಿಯಲ್ಲಿ ರಾಮಕೃಷ್ಣ ಹೆಗಡೆ ಕುಳಿತಿದ್ದನ್ನು ಕಂಡು ಅವರು ಮೂರನೆ ಬಾರಿ ಸಿಟ್ಟಾಗಿದ್ದರು.
1989ರಲ್ಲಿ ನಾಲ್ಕನೆ ಬಾರಿ ಬಂಗಾರಪ್ಪನವರಿಗೆ ಸಿಟ್ಟು ಬಂದಿತ್ತು. ವೀರೇಂದ್ರ ಪಾಟೀಲ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಕನಿಷ್ಠ ಸಚಿವ ಸಂಪುಟದ ಪಟ್ಟಿಯಲ್ಲಿಯೂ ಅವರ ಹೆಸರಿರಲಿಲ್ಲ. 1993ರಲ್ಲಿ ಐದನೆ ಬಾರಿ ಸಿಟ್ಟಾಗಿದ್ದಾಗ ಅವರು ಮುಖ್ಯಮಂತ್ರಿಯಾಗಿದ್ದರು. ಭಿನ್ನಮತೀಯರ ದೂರಿನ ವಿಚಾರಣೆಗಾಗಿ ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ಎಸ್. ಬಿ.ಚವಾಣ್ ದನಿ ಎತ್ತಿ ಪ್ರಶ್ನಿಸತೊಡಗಿದಾಗ ಸಿಟ್ಟಾದ ಬಂಗಾರಪ್ಪ `ಶಾಲಾಬಾಲಕನನ್ನು ಪ್ರಶ್ನಿಸುವಂತೆ ನನ್ನನ್ನು ಪ್ರಶ್ನಿಸಬೇಡಿ~ ಎಂದು ತಿರುಗಿಬಿದ್ದಿದ್ದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಹತಾಶರಾಗಿಬಿಟ್ಟ ಬಂಗಾರಪ್ಪ ಸಿಟ್ಟಾಗುತ್ತಲೇ ಹೋದರು. ಎರಡು ಬಾರಿ ಸ್ವತಂತ್ರವಾಗಿ ಪಕ್ಷ ಕಟ್ಟಿದರು, ಬಿಜೆಪಿ, ಸಮಾಜವಾದಿ ಪಕ್ಷ, ಜಾತ್ಯತೀತ ಜನತಾದಳ ಸೇರಿದರು. ಮರಳಿ ಕಾಂಗ್ರೆಸ್‌ಗೆ ಹಿಂದಿರುಗಿ ವಾಪಸು ಬಂದರು. ಆದರೆ ಅವರು ಬಯಸಿದ ರಾಜಕೀಯ ಅಧಿಕಾರ ಮರಳಿ ಅವರ ಕೈಗೆ ಬರಲೇ ಇಲ್ಲ. ಅವರು ಬೆಳೆಸಿದ ಹುಡುಗರೆಲ್ಲ ಶಾಸಕರಾಗಿ, ಸಚಿವರಾಗಿ ಕಣ್ಣೆದುರು ಮೆರೆಯುತ್ತಿದ್ದಾಗ ಚುನಾವಣೆಯಲ್ಲಿಯೂ ಸೋತುಹೋಗಿ, `ಸೋಲಿಲ್ಲದ ಸರದಾರ~ನೆಂಬ ಖ್ಯಾತಿಯನ್ನೂ ಕಳೆದುಕೊಂಡು ರಾಜಕೀಯವಾಗಿ ಅವರು ಒಂಟಿಯಾಗಬೇಕಾಯಿತು. ಇದಕ್ಕೆಲ್ಲ ಒಂದು ಕಾರಣ ಅವರ ಸಿಟ್ಟು ಎನ್ನುವವರಿದ್ದಾರೆ.
ಬಂಗಾರಪ್ಪನವರು ಯಾಕೆ ಸಿಟ್ಟಾಗುತ್ತಿದ್ದರು? ತನಗೆ ಅನ್ಯಾಯವಾದಾಗಲೆಲ್ಲ ಅವರು ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ಅಭಿಮಾನಿಗಳು. ಮಹತ್ವಾಕಾಂಕ್ಷಿಯಾಗಿದ್ದ ಬಂಗಾರಪ್ಪ ಬಯಸಿದ್ದು ಸಿಗದೆ ಇದ್ದಾಗೆಲ್ಲ ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ವಿರೋಧಿಗಳು. ಈ ಎರಡು ಅಭಿಪ್ರಾಯಗಳ ನಡುವೆ ಎಲ್ಲೋ ಒಂದು ಕಡೆ ಅವರ ಸಿಟ್ಟಿನ ಕಾರಣ ಇದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಬಂಗಾರಪ್ಪನವರೂ ಮಾಡಲಿಲ್ಲ.
ಬಂಗಾರಪ್ಪನವರು ತನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು ಪ್ರಜಾಸೋಷಲಿಸ್ಟ್ ಪಕ್ಷದ ಮೂಲಕ; ಕೊನೆಗೊಳಿಸಿದ್ದು ಜಾತ್ಯತೀತ ಜನತಾದಳದ ಮೂಲಕ. ಬಹುಕಾಲ ರಾಜಕೀಯ ಮಾಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಆ ಪಕ್ಷದಲ್ಲಿ ಒಂದಷ್ಟು ದಿನ ಅಧಿಕಾರ ಅನುಭವಿಸಿದರೂ ಹೈಕಮಾಂಡ್ ಸಂಸ್ಕೃತಿಯ ಪಕ್ಷಕ್ಕೆ ಹೊಂದಿಕೊಳ್ಳಲು ಅತ್ಯುಗ್ರ ಸ್ವಾಭಿಮಾನಿಯಾಗಿದ್ದ ಬಂಗಾರಪ್ಪನವರಿಗೆ ಸಾಧ್ಯವಾಗಲೇ ಇಲ್ಲ. ಬಂಗಾರಪ್ಪನವರ ಗುಣ-ಸ್ವಭಾವ ಒಬ್ಬ ಪ್ರಾದೇಶಿಕ ಪಕ್ಷದ ನಾಯಕನಾಗಲು ಹೊಂದಿಕೆಯಾಗುವಂತಿತ್ತೇ ಹೊರತು ರಾಷ್ಟ್ರೀಯ ಪಕ್ಷ ಬಯಸುವ ಶಿಸ್ತಿನ ಸಿಪಾಯಿಯಾಗಲು ಹೊಂದಿಕೆಯಾಗುವಂತಿರಲಿಲ್ಲ. ಕಾಂಗ್ರೆಸ್ ಸಂಸ್ಕೃತಿ ಮತ್ತು ತನ್ನ ಸ್ವಭಾವವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಅವರು ಆ ಪಕ್ಷದ ಸಹವಾಸಕ್ಕೆ ಹೋಗುತ್ತಿರಲಿಲ್ಲವೇನೋ? ಅದು ಅರಿವಾಗುವ ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಈ ಗೊಂದಲದಲ್ಲಿಯೇ ನಾಲ್ಕು ದಶಕಗಳ ತನ್ನ ರಾಜಕೀಯ ಜೀವನದಲ್ಲಿ ಅವರು ಐದು ಬಾರಿ ಕಾಂಗ್ರೆಸ್ ಬಿಟ್ಟು ಹೋಗಿದ್ದರು, ಐದು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದಿದ್ದರು.
ಬಂಗಾರಪ್ಪನವರ ರಾಜಕೀಯ ಜೀವನದ ಮೊದಲ ಪ್ರಮಾದ ತನ್ನನ್ನು ಕರೆದುಕೊಂಡು ಬಂದು ಬೆಳೆಸಿದ್ದ ದೇವರಾಜ ಅರಸು ಅವರನ್ನು ತೊರೆದು ತನ್ನ ಸ್ವಭಾವಕ್ಕೆ ಒಪ್ಪದ ಕಾಂಗ್ರೆಸ್ ಜತೆ ಹೋಗಿದ್ದು. ಅರಸು ಜತೆಯಲ್ಲಿಯೇ ಉಳಿದುಕೊಂಡಿದ್ದರೆ ನಿಜವಾದ ಅರ್ಥದಲ್ಲಿ ಅವರ ರಾಜಕೀಯ ಉತ್ತರಾಧಿಕಾರಿಯಾಗುತ್ತಿದ್ದರು. ಅದರಿಂದ ನೆರೆರಾಜ್ಯಗಳಂತೆ ಕರ್ನಾಟಕಕ್ಕೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವೂ ಸಿಕ್ಕಿಬಿಡುತ್ತಿತ್ತೋ ಏನೋ? ಅಂತಹ ಸಂದರ್ಭದಲ್ಲಿ ಕರ್ನಾಟಕದ ಇಂದಿನ ರಾಜಕೀಯ ಚಿತ್ರವೇ ಬೇರೆಯಾಗಿರುತ್ತಿತ್ತು. ರಾಜಕೀಯ ಅಧಿಕಾರ ಪಡೆಯುವ ಉದ್ದೇಶದಿಂದ ಅರಸು ಅವರನ್ನು ಕೈಬಿಟ್ಟರೂ ಕೊನೆಗೂ ಆ ಅಧಿಕಾರ ಪೂರ್ಣಪ್ರಮಾಣದಲ್ಲಿ ಅವರ ಕೈಗೆ ಬರಲೇ ಇಲ್ಲ. ಸುಮಾರು ನಲ್ವತ್ತು ವರ್ಷ ರಾಜಕೀಯದಲ್ಲಿದ್ದು `ಅಧಿಕಾರದಾಹಿ~, `ಪಕ್ಷಾಂತರಿ~ ಎಂಬ ಹೀಯಾಳಿಕೆಗೆ ತುತ್ತಾದರೂ ಅವರು ಅಧಿಕಾರ ಅನುಭವಿಸಿದ್ದು ಕೇವಲ ನಾಲ್ಕುವರೆ ವರ್ಷ.
ಅರಸು ಅವರನ್ನು ಬಿಟ್ಟು ಬಂದ ಒಂದು ಘಟನೆಯನ್ನು ಹೊರತುಪಡಿಸಿದರೆ ನಂತರದ ಅವರ ಯಾವ ಪಕ್ಷಾಂತರವೂ ರಾಜಕೀಯ ಲೆಕ್ಕಾಚಾರದಿಂದ ಮಾಡಿದ್ದಲ್ಲ. ಅವುಗಳೆಲ್ಲವೂ ಅನ್ಯಾಯದ ವಿರುದ್ಧ ಪ್ರತಿಭಟನೆಯ ಇಲ್ಲವೇ ಸೇಡು ತೀರಿಸಿಕೊಳ್ಳುವ ಹುಂಬತನದ ನಿರ್ಧಾರಗಳು. ಆದ್ದರಿಂದ ಆ ಪಕ್ಷಾಂತರಗಳು ಅವರಿಗೆ `ಅಧಿಕಾರದಾಹಿ~ ಎಂಬ ಹಣೆಪಟ್ಟಿಯನ್ನು ತಂದುಕೊಟ್ಟಿತೇ ವಿನಾ ಅಧಿಕಾರವನ್ನು ತಂದುಕೊಡಲಿಲ್ಲ. ತನ್ನನ್ನು ಬಳಸಿಕೊಂಡು ಕೈಬಿಟ್ಟ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಲೆಂದೇ ಅವರು ಆ ಪಕ್ಷ ತೊರೆದು ಕ್ರಾಂತಿರಂಗ ಸೇರಿದರು, ಈ ಪಕ್ಷಾಂತರ ಕಾಂಗ್ರೆಸ್ ಸೋತು ಜನತಾರಂಗ ಅಧಿಕಾರಕ್ಕೆ ಬರಲು ಕಾರಣವಾಯಿತು, ಆದರೆ ಅವರು ಮುಖ್ಯಮಂತ್ರಿಯಾಗಲಿಲ್ಲ. 1985ರಲ್ಲಿ ಜನತಾರಂಗದ ಅನ್ಯಾಯ ಪ್ರತಿಭಟಿಸಿ ಕಾಂಗ್ರೆಸ್ ಸೇರಿ ಆ ಪಕ್ಷಕ್ಕೆ ತನ್ನ ಪಾಲಿನ ಬಲ ತುಂಬಿದರು, 1989ರಲ್ಲಿ ಆ ಪಕ್ಷವೇನೋ ಅಧಿಕಾರಕ್ಕೆ ಬಂತು ಆದರೆ ಆಗಲೂ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಕೂಡಿ ಬರಲಿಲ್ಲ.
1992ರಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಅದು ಕಿತ್ತುಕೊಂಡ ಶೇಕಡಾ ಏಳೂವರೆಯಷ್ಟು ಮತಗಳಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅಧಿಕಾರಕ್ಕೆ ಬಂದದ್ದು ಜನತಾ ಪಕ್ಷ. 1999ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ನಂತರದ ದಿನಗಳಲ್ಲಿ ಆ ಪಕ್ಷಕ್ಕೆ ಅಧಿಕಾರವೇನೋ ಬಂತು, ಆದರೆ ಬಂಗಾರಪ್ಪನವರು ಮೂಲೆಗುಂಪಾದರು. 2004ರಲ್ಲಿ ತನ್ನೊಳಗೆ ಸೆಳೆದುಕೊಂಡ ಬಿಜೆಪಿ ಅವರ ಬಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ಇನ್ನಷ್ಟು ವಿಸ್ತರಿಸಿತು, ಬಂಗಾರಪ್ಪನವರಿಗೆ ಏನೂ ಸಿಗಲಿಲ್ಲ. ಒಂದೇ ವರ್ಷದ ಅವಧಿಯೊಳಗೆ ಬಿಜೆಪಿ ವಿರುದ್ಧ ಸಿಡಿದೆದ್ದು ಸಮಾಜವಾದಿ ಪಕ್ಷ ಸೇರಿ ಲೋಕಸಭೆಗೆ ಆಯ್ಕೆಯಾದರು. ಆ ಪಕ್ಷಕ್ಕೆ ಲೋಕಸಭೆಯಲ್ಲಿ ಒಬ್ಬ ಸದಸ್ಯನ ಹೆಚ್ಚುವರಿ ಬಲ ಸಿಕ್ಕಿದ್ದೇ ಲಾಭ. 2009ರಲ್ಲಿ ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿದರು. ಆಗಲೂ ಅವರಿಗೆ ಸಿಕ್ಕಿದ್ದು ತಮ್ಮ ಚುನಾವಣಾ ರಾಜಕೀಯದ ಮೊದಲ ಸೋಲು ಅಷ್ಟೇ. ಅದರ ನಂತರ ಜಾತ್ಯತೀತ ಜನತಾದಳ ಸೇರಿದರೂ ಅದರಿಂದ ಅವರಿಗೇನೂ ಲಾಭ ಆಗಲಿಲ್ಲ.
ಬಯಸಿದ್ದನೆಲ್ಲ ಮಾಡಿತೋರಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಒಬ್ಬ ಯಶಸ್ವಿ ರಾಜಕೀಯ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಬಂಗಾರಪ್ಪನವರು ಪಕ್ಷಗಳ ಜತೆಗಿನ ಗುದ್ದಾಟ-ತಿಕ್ಕಾಟದಲ್ಲಿಯೇ ಕಳೆದುಹೋದರೇನೋ? ಅವರನ್ನು ಹಿಂದುಳಿದ ಜಾತಿಗಳ ನಾಯಕನಾಗಿ ಕೊಂಡಾಡಲಾಗುತ್ತಿದ್ದರೂ ಅವರು ಆಳದಲ್ಲಿ ಎಲ್ಲ ಜನವರ್ಗಗಳ ನಾಯಕನೆಂದೇ ಕರೆಸಿಕೊಳ್ಳಲು ಇಷ್ಟಪಡುತ್ತಿದ್ದರೆನ್ನುವುದು ಅವರ ಮಾತು ಮತ್ತು ಕೃತಿಗಳಿಂದ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ ಇರಲಿ, ವಿಶ್ವ, ಆಶ್ರಯ, ಆರಾಧನಾ ಯೋಜನೆಗಳೇ ಇರಲಿ, ಅವುಗಳು ಸಾಮಾಜಿಕ ನ್ಯಾಯದ ಸಾಧನಕ್ಕಿಂತಲೂ ಹೆಚ್ಚಾಗಿ ಎಲ್ಲ ಜಾತಿ-ಜನಾಂಗಗಳ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡ ಕಲ್ಯಾಣ ಕಾರ‌್ಯಕ್ರಮಗಳು.
ಸಮಾಜವಾದವನ್ನಾಗಲಿ ಇಲ್ಲವೇ ದೇವರಾಜ ಅರಸು ಅವರ ಆಸಕ್ತಿಯ ಸಾಮಾಜಿಕ ನ್ಯಾಯವನ್ನಾಗಲಿ ಅವರು ಯಥಾವತ್ತಾಗಿ ಅನುಕರಿಸಲು ಹೋಗಲೇ ಇಲ್ಲ. ವಿಶಾಲವಾದ ಅರ್ಥದಲ್ಲಿ ಎಲ್ಲ ಜಾತಿಗಳಲ್ಲಿರುವ ಬಡವರ ಉದ್ಧಾರವಾಗಬೇಕೆಂದೇ ಅವರು ಹೇಳುತ್ತಿದ್ದರು. ಈ ಕಾರಣದಿಂದಾಗಿಯೇ ಜಾತಿ-ಧರ್ಮವನ್ನು ಮೀರಿ ಅವರಿಗೆ ಅನುಯಾಯಿಗಳಿದ್ದರು. ಸಮಾಜದ ಅಭಿವೃದ್ದಿಯ ಬಗ್ಗೆ ಅವರಲ್ಲಿದ್ದ ಸೈದ್ಧಾಂತಿಕ ಒತ್ತಾಸೆ ಇಲ್ಲದ ಸಡಿಲವಾದ ಆಲೋಚನೆಗಳ ಪರಿಕಲ್ಪನೆ ಇನ್ನೊಂದು ರೀತಿಯಲ್ಲಿ ಅವರ ಮಿತಿಯೂ ಆಗಿತ್ತು. ಇದರಿಂದಾಗಿ ವೈಯಕ್ತಿಕವಾಗಿ ಉದಾರಿಗಳು, ಬಡವರ ಬಗ್ಗೆ ಕಳಕಳಿಯುಳ್ಳವರು, ವಿಶಾಲ ಹೃದಯಿಗಳೂ ಆಗಿದ್ದ ಬಂಗಾರಪ್ಪನವರಿಗೆ ಸೈದ್ಧಾಂತಿಕ ಸ್ಪಷ್ಟತೆ ಹೊಂದಿದ್ದ ಇನ್ನೊಬ್ಬ ಗೋಪಾಲಗೌಡ ಇಲ್ಲವೇ ದೇವರಾಜ ಅರಸು ಆಗಲು ಸಾಧ್ಯವಾಗಲಿಲ್ಲ. ಬೆಂಬಲಿಗರಿಗೆ ನೆರವಾಗಬೇಕೆಂಬ ಒಂದೇ ಉದ್ದೇಶದಿಂದ ಅಧಿಕಾರ ಕೈಗೆ ಬಂದಾಗ ಅದನ್ನು ಸಡಿಲಬಿಟ್ಟರು. ಈ ಔದಾರ‌್ಯವನ್ನು ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಭ್ರಷ್ಟಾಚಾರದ ಕಳಂಕ ಅವರಿಗೆ ಹತ್ತಿಕೊಳ್ಳಲು ಇದು ಮುಖ್ಯ ಕಾರಣ.
ಸಿಟ್ಟಾಗಬೇಡ ನಗುನಗುತ್ತಾ ಇರು, ಅನ್ಯಾಯವನ್ನು ಸಹಿಸಿಕೊಳ್ಳು, ಹೊಂದಾಣಿಕೆ ಮಾಡಿಕೋ, ಯಾರನ್ನೂ ನಂಬಬೇಡ, ತಂತ್ರಗಳನ್ನು ಹೆಣೆ, ಕುತಂತ್ರಗಳನ್ನು ಮಾಡು, ಕಾಳಜಿ ಅಂತಃಕರಣದಲ್ಲಿ ಇಲ್ಲದಿದ್ದರೂ ಮಾತಿನಲ್ಲಿ ಇರಲಿ ಎನ್ನುತ್ತಿದೆ ಇಂದಿನ ರಾಜಕೀಯ. ಈ ಹೊಸಬಗೆಯ ರಾಜಕೀಯಕ್ಕೆ ಹೊಂದಿಕೊಳ್ಳಲು ಕೊನೆಗೂ ಬಂಗಾರಪ್ಪನವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ರಾಜಕೀಯ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದರು. ನೇರಾನೇರ ಜಗಳಕ್ಕಿಳಿದರು, ಬಂಡೆದ್ದರು, ಹೋರಾಡಿದರು, ಕೆಲವೊಮ್ಮೆ ಎದ್ದರು ಇನ್ನೂ ಕೆಲವೊಮ್ಮೆ ಬಿದ್ದರು. ಅಧಿಕಾರವನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಹೋರಾಟದಲ್ಲಿಯೇ ಬದುಕನ್ನು ಕಳೆದರು, ಅದನ್ನೇ ಹೆಚ್ಚು ಪ್ರೀತಿಸುತ್ತಾ ಹೋದರು. ಕೆಲವು ದೌರ್ಬಲ್ಯಗಳ ಹೊರತಾಗಿಯೂ ಅವರೊಳಗೆ ಒಬ್ಬ ಅಪ್ರತಿಮ ಹೋರಾಟಗಾರನಿದ್ದ.
ರಾಜಕೀಯವಾಗಿ ಅಡಿಗಡಿಗೆ ಹಿನ್ನಡೆಯಾದರೂ ಧೃತಿಗೆಟ್ಟು ಮೂಲೆ ಸೇರದೆ ಸೆಟೆದು ನಿಲ್ಲುವ ಚೈತನ್ಯವನ್ನು ಅವರು ಕೊನೆಯವರೆಗೂ ಉಳಿಸಿಕೊಳ್ಳಲು ಅವರೊಳಗಿನ ಈ ದಣಿವರಿಯದ ಹೋರಾಟಗಾರ ಕಾರಣ. ರಾಜಕೀಯದಲ್ಲಿ ಬೆಳೆಯಲು ಒಳದಾರಿ-ಅಡ್ಡದಾರಿಗಳನ್ನೇ ಹುಡುಕಾಡುತ್ತಿರುವ ಇಂದಿನ ರಾಜಕಾರಣದಲ್ಲಿ ಜಾತಿ ಬಲ ಇಲ್ಲದ ಬಡಗೇಣಿದಾರ ಕುಟುಂಬದ ಸಾಮಾನ್ಯ ಯುವಕ ಹೋರಾಟದ ರಾಜಕೀಯದ ಮೂಲಕವೇ ಜನಾನುರಾಗಿ ನಾಯಕನಾಗಿ ಬೆಳೆದದ್ದು ಒಂದು ದಂತಕತೆಯಂತಿದೆ.

Monday, December 26, 2011

ಈ ಮೀಸಲಾತಿಯಿಂದ ಮುಸ್ಲಿಮರಿಗೂ ಲಾಭ ಇಲ್ಲ

ವಿವಾದದ ದೂಳು ಎದ್ದಾಗ ಕಣ್ಣು ಕುರುಡಾಗುತ್ತದೆ. ಮೀಸಲಾತಿಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಏಳುವ ವಿವಾದದ ದೂಳು ಜನತೆಯ ಕಣ್ಣು ಕುರುಡು ಮಾಡುತ್ತಾ ಬಂದಿದೆ. ಈ ದೂಳು ಎಬ್ಬಿಸುವವರ ಉದ್ದೇಶವೂ ಇದೇ ಆಗಿರುತ್ತದೆ. ಆಳುವವರ ಉದ್ದೇಶ ಪ್ರಾಮಾಣಿಕವಾಗಿದ್ದಾಗ ಮೀಸಲಾತಿ ಅನುಷ್ಠಾನ ಸಮಸ್ಯೆಯಾಗಿಯೇ ಇಲ್ಲ.
ಅಪ್ರಾಮಾಣಿಕತೆಯಿಂದ ಕೂಡಿದ್ದ ನಿರ್ಧಾರ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ಯುಪಿಎ ಸರ್ಕಾರ ಘೋಷಿಸಿರುವ ಅಲ್ಪಸಂಖ್ಯಾತರ ಒಳಮೀಸಲಾತಿಯ ಹಿಂದೆ ಇಂತಹದ್ದೇ ಅಪ್ರಾಮಾಣಿಕತೆ ಇದೆ. ಕೇಂದ್ರ ಸಂಪುಟ ಒಪ್ಪಿಕೊಂಡು ಗೆಜೆಟ್ ಅಧಿಸೂಚನೆ ಹೊರಡಿಸಿದ ಮಾತ್ರಕ್ಕೆ ಈ ಮೀಸಲಾತಿ ಜಾರಿಗೆ ಬಂದೇ ಬಿಟ್ಟಿತು ಎಂದು ಈಗಲೂ ಹೇಳುವ ಹಾಗಿಲ್ಲ. ಸುಪ್ರೀಂಕೋರ್ಟ್‌ನ ಪರಾಮರ್ಶೆಯಲ್ಲಿ ಇದು ಪಾರಾಗಿ ಬರಬೇಕಾಗಿದೆ.
ಇವೆಲ್ಲವೂ ಗೊತ್ತಿದ್ದೂ ಇಷ್ಟೊಂದು ಅವಸರದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಘೋಷಿಸಲು ಮುಖ್ಯ ಕಾರಣ ಅಲ್ಪಸಂಖ್ಯಾತರ ಮೇಲಿನ ಯುಪಿಎ ಸರ್ಕಾರದ ಕಳಕಳಿ ಖಂಡಿತ ಅಲ್ಲ, ಅದು ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ.
ಭಾವಿ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿರುವ ರಾಹುಲ್ ಗಾಂಧಿಯವರ ಪ್ರತಿಷ್ಠೆಯನ್ನು ಉತ್ತರಪ್ರದೇಶದಲ್ಲಿ ಉಳಿಸಲು ಕಾಂಗ್ರೆಸ್ ನಡೆಸುತ್ತಿರುವ ಹತಾಶೆಯ ಪ್ರಯತ್ನಗಳಲ್ಲಿ ಇದೂ ಒಂದು.

ಈ ಮೀಸಲಾತಿ ಹೆಸರಿಗೆ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ಜೈನ್ ಧರ್ಮಗಳನ್ನೊಳಗೊಂಡ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ್ದರೂ ಇದರ ಲಾಭ ದೊಡ್ಡ ಪ್ರಮಾಣದಲ್ಲಿ ದಕ್ಕಲಿರುವುದು ದೇಶದ ಜನಸಂಖ್ಯೆಯಲ್ಲಿ ಶೇಕಡಾ 12.2ರಷ್ಟಿರುವ ಮುಸ್ಲಿಮರಿಗೆ.
ಕಾಂಗ್ರೆಸ್‌ನ ಆಸಕ್ತಿ ಇರುವುದು ಈ ಮುಸ್ಲಿಮರ ಮೇಲೆ. ಉತ್ತರಪ್ರದೇಶದಲ್ಲಿ ಶೇಕಡಾ 15ರಷ್ಟಿರುವ ಮುಸ್ಲಿಮರು ಕನಿಷ್ಠ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು. ಬಾಬರಿ ಮಸೀದಿ ಧ್ವಂಸದ ನಂತರ ಅವರು ಬಹುಸಂಖ್ಯೆಯಲ್ಲಿ ಕಾಂಗ್ರೆಸ್ ಬಿಟ್ಟು ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಕಡೆ ಹೊರಟು ಹೋಗಿದ್ದಾರೆ.
ಅವರನ್ನು ಮರಳಿ ಸೆಳೆಯಲು ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಮೀಸಲಾತಿ ಘೋಷಣೆಯಿಂದಾದರೂ ಅವರನ್ನು ಒಲಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿಂದಲೇ ಚುನಾವಣೆ ಘೋಷಣೆಯ ಎರಡು ದಿನ ಮೊದಲು ಸಚಿವ ಸಂಪುಟ ಅಲ್ಪಸಂಖ್ಯಾತರ ಮೀಸಲಾತಿಗೆ ಅನುಮೋದನೆ ನೀಡಿದೆ.
ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರು ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಧ್ಯಯನ ನಡೆಸಿ ವರದಿ ನೀಡದೆ ಇದ್ದಿದ್ದರೆ ಮುಸ್ಲಿಮರು ಕುರುಡಾಗಿ ಕಾಂಗ್ರೆಸ್ ಹೇಳಿದ್ದನ್ನೆಲ್ಲ ನಂಬಿ ಬಿಡುತ್ತಿದ್ದರೇನೋ? ಆದರೆ ನ್ಯಾ.ಸಾಚಾರ್ ನೀಡಿದ್ದ ವರದಿ ಕಾಂಗ್ರೆಸ್ ಪಕ್ಷ ಮಾಡಿದ ಮುಸ್ಲಿಮರ ಕಲ್ಯಾಣದ ಅಸಲಿ ರೂಪವನ್ನು ಐದು ವರ್ಷಗಳ ಹಿಂದೆಯೇ ಬಯಲುಗೊಳಿಸಿತ್ತು.
ನ್ಯಾ.ಸಾಚಾರ್ ವರದಿ ಪ್ರಕಾರ ಶೇಕಡಾ 94.9ರಷ್ಟು ಮುಸ್ಲಿಮರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಶೇಕಡಾ 60.2ರಷ್ಟು ಮುಸ್ಲಿಮರು ಭೂ ರಹಿತರು, ಶೇಕಡಾ 54.6ರಷ್ಟು ನಗರದ ಮತ್ತು ಶೇಕಡಾ 60ರಷ್ಟು ಗ್ರಾಮೀಣ ಪ್ರದೇಶದ ಮುಸ್ಲಿಮರು ಶಾಲೆಯ ಮುಖ ನೋಡಿಲ್ಲ. ಶೇಕಡಾ 90ರಷ್ಟು ಮುಸ್ಲಿಮರು ಹತ್ತನೆ ತರಗತಿ ಮೆಟ್ಟಿಲು ಹತ್ತಿಲ್ಲ. ಶೇಕಡಾ 15.4ರಷ್ಟು ಜನಸಂಖ್ಯೆ ಇರುವ ಹದಿನೈದು ರಾಜ್ಯಗಳ ಸರ್ಕಾರಿ ಇಲಾಖೆಗಳಲ್ಲಿ ಮುಸ್ಲಿಮ್ ಉದ್ಯೋಗಿಗಳ ಪ್ರಮಾಣ ಶೇಕಡಾ 5.7 ಮಾತ್ರ. ಶೇಕಡಾ 12.2ರಷ್ಟು ಮುಸ್ಲಿಮರು ಇರುವ ಕರ್ನಾಟಕದ ಸರ್ಕಾರಿ ಇಲಾಖೆಗಳಲ್ಲಿ ಅವರ ಪ್ರಾತಿನಿಧ್ಯ ಶೇಕಡಾ 8.5 ಮಾತ್ರ.
ಮುಸ್ಲಿಮ್ ಪ್ರಾತಿನಿಧ್ಯ ಅವರ ಜನಸಂಖ್ಯೆಗಿಂತಲೂ ಅಧಿಕ ಇರುವ ಏಕೈಕ ಸ್ಥಳ ಎಂದರೆ ಜೈಲುಗಳು. ಮಹಾರಾಷ್ಟ್ರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 10.6ರಷ್ಟಿದ್ದರೂ ಅಲ್ಲಿನ ಜೈಲುಗಳಲ್ಲಿ ಶೇಕಡಾ 40ರಷ್ಟು ಮುಸ್ಲಿಮರಿದ್ದಾರೆ. ಗುಜರಾತ್ ಜೈಲುಗಳಲ್ಲಿ ಮುಸ್ಲಿಮ್ ಕೈದಿಗಳ ಪ್ರಮಾಣ ಶೇಕಡಾ 25.
ಇಂತಹ ದುಃಸ್ಥಿತಿಯಲ್ಲಿರುವ ಮುಸ್ಲಿಮರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ನ್ಯಾಯ ದೊರಕಿಸಿಕೊಡಬೇಕಾದರೆ ಮೀಸಲಾತಿಗಿಂತ ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ ಎನ್ನುವುದು ನಿರ್ವಿವಾದ. ಆದರೆ ಯಾವ ಆಧಾರದಲ್ಲಿ ಮೀಸಲಾತಿ ನೀಡಬೇಕೆನ್ನುವುದು ಈಗಿನ ಸಮಸ್ಯೆ.
ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ನೀಡುವಂತಿಲ್ಲ. ಮುಸ್ಲಿಮರ ಮೀಸಲಾತಿಗೆ ಸಂಬಂಧಿಸಿದಂತೆ ವಿವಾದ ಹೊಸ ಸಂಗತಿಯೇನಲ್ಲ. ಬ್ರಿಟಿಷರು ಹಲವಾರು ಶಾಸಕಾಂಗ ಸಮಿತಿಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಿದ್ದರು.
ಸಂವಿಧಾನ ರಚನಾ ಸಭೆಯಲ್ಲಿನ ಅಲ್ಪಸಂಖ್ಯಾತ ಮತ್ತು ಮೂಲಭೂತ ಹಕ್ಕುಗಳ ಸಲಹಾ ಸಮಿತಿ ಕೂಡಾ ಮುಸ್ಲಿಮರ ಮೀಸಲಾತಿಗೆ ಶಿಫಾರಸು ಮಾಡಿತ್ತು. ಆ ಕಾಲದಲ್ಲಿ ಮುಸ್ಲಿಮರು, ಇತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಒಂದೇ ಗುಂಪಿನಲ್ಲಿದ್ದರು. ಆದರೆ ಮೀಸಲಾತಿಗೆ ಜಾತಿ ಆಧಾರಿತ ತಾರತಮ್ಯವೇ ಆಧಾರ ಎನ್ನುವುದನ್ನು ಪರಿಗಣಿಸಿದ ಕಾರಣ ಆ ಗುಂಪಿನಲ್ಲಿದ್ದ ಅಲ್ಪಸಂಖ್ಯಾತರು ಹೊರಬರಬೇಕಾಯಿತು.

ಮುಸ್ಲಿಮರು ಮತ್ತು ಕ್ರಿಶ್ಚಿಯನರು ಪ್ರತ್ಯೇಕ ಧರ್ಮಗಳಿಗೆ ಸೇರಿದವರಾದ ಕಾರಣ ಅವರು ಮೀಸಲಾತಿ ಕಕ್ಷೆಯಿಂದ ಹೊರಗುಳಿಯಬೇಕಾಯಿತು. ಇದರಿಂದಾಗಿಯೇ ಇಸ್ಲಾಂ ಮತ್ತು ಕ್ರೈಸ್ತಧರ್ಮದ ಮೂಲ ಅನುಯಾಯಿಗಳು ಮಾತ್ರವಲ್ಲ, ಆ ಧರ್ಮಗಳಿಗೆ ಮತಾಂತರಗೊಂಡವರು ಕೂಡಾ ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿಯಿಂದ ವಂಚಿತರಾಗಬೇಕಾಗಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅಧ್ಯಕ್ಷತೆಯ `ರಾಷ್ಟ್ರೀಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಆಯೋಗ~ 2007ರಲ್ಲಿ ನೀಡಿದ್ದ ವರದಿಯಲ್ಲಿ ಮುಸ್ಲಿಮರಿಗೆ ಶೇಕಡಾ ಹತ್ತರ ಪ್ರತ್ಯೇಕ ಮೀಸಲಾತಿಯನ್ನು ಶಿಫಾರಸು ಮಾಡಿತ್ತು.
ಈ ಸೂತ್ರಕ್ಕೆ ಪರ್ಯಾಯವಾಗಿ ಹಿಂದುಳಿದ ಜಾತಿಗಳಿಗಾಗಿ ಇರುವ ಶೇಕಡಾ 27ರ ಮೀಸಲಾತಿಯ ಒಳಗಡೆಯೇ ಅಲ್ಪಸಂಖ್ಯಾತರಿಗೆ ಶೇಕಡಾ 8.4ರ ಮೀಸಲಾತಿ ನೀಡಬೇಕು, ಇದರಲ್ಲಿ ಶೇಕಡಾ ಆರರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಬೇಕು ಎನ್ನುವ ಇನ್ನೊಂದು ಪ್ರಸ್ತಾಪವನ್ನು ನ್ಯಾ.ಮಿಶ್ರಾ ವರದಿಯಲ್ಲಿ ಮಾಡಿದ್ದರು.
 ಆದರೆ, `ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿಯಾದುದು~ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಈ ಮೀಸಲಾತಿಯನ್ನು ಒಪ್ಪುವುದು ಕಷ್ಟ. ನ್ಯಾ.ಮಿಶ್ರಾ ಆಯೋಗದ ವರದಿಯನ್ನು ಆಧರಿಸಿ ಆಂಧ್ರಪ್ರದೇಶ ಸರ್ಕಾರ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿ ನೀಡಿರುವುದನ್ನು ಹೈಕೋರ್ಟ್ ರದ್ದು ಮಾಡಿತ್ತು. ಅದರ ನಂತರ ಮೀಸಲಾತಿ ನೀತಿಯನ್ನು ಪರಿಷ್ಕರಿಸಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ 15 ಮುಸ್ಲಿಮ್ ಜಾತಿಗಳಿಗೆ ಮೀಸಲಾತಿಯನ್ನು ಮಿತಿಗೊಳಿಸಿದ ನಂತರವಷ್ಟೇ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದ್ದು.
ಮಂಡಲ್ ಆಯೋಗ ಬಹಳ ಹಿಂದೆಯೇ ಮುಸ್ಲಿಮ್ ಮೀಸಲಾತಿ ಬಗ್ಗೆ ಮಧ್ಯದ ದಾರಿಯೊಂದನ್ನು ತೋರಿಸಿತ್ತು. ಅದು ಮುಸ್ಲಿಮರಲ್ಲಿ ಹಿಂದುಳಿದಿರುವ 400 ಜಾತಿಗಳನ್ನು ಗುರುತಿಸಿ ಅವರಿಗೆ ಹಿಂದುಳಿದ ಜಾತಿಗಳಿಗೆ ನೀಡಲಾಗಿರುವ ಶೇಕಡಾ 27ರ ಮೀಸಲಾತಿಯೊಳಗೆ ಶೇಕಡಾ ಮೂರರಷ್ಟು ಮೀಸಲಾತಿಯನ್ನು ನೀಡಿತ್ತು.
ಈ ಜಾತಿಗಳಲ್ಲಿ ನೇಕಾರರು, ಗಾಣಿಗರು, ಬಡಗಿಗಳು, ಚಮ್ಮಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ  ಮುಸ್ಲಿಮರ ಈ ಮೀಸಲಾತಿಗೆ ಧರ್ಮ ಆಧಾರವಾಗಿರದೆ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆ ಆಧಾರವಾಗಿರುವುದರಿಂದ ಸುಪ್ರೀಂ ಕೋರ್ಟ್ ಕೂಡಾ ಇದನ್ನು ಒಪ್ಪಿಕೊಂಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ದಕ್ಷಿಣ ಭಾರತದ ರಾಜ್ಯಗಳು ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿವೆ.
ಇಂದು ಉತ್ತರ ಭಾರತದ ಮುಸ್ಲಿಮರಿಗೆ ಹೋಲಿಸಿದರೆ ದಕ್ಷಿಣ ಭಾರತದ ಮುಸ್ಲಿಮರು ಉತ್ತಮ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಆ ರಾಜ್ಯಗಳ ಸಾಮಾಜಿಕ ವಾತಾವರಣ ಕೂಡಾ ಕಾರಣವಾಗಿರಬಹುದು. ಇದರ ಜತೆಗೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮುಸ್ಲಿಮರಿಗೆ ಇರುವ ಮೀಸಲಾತಿಯೂ ಅವರ ಏಳಿಗೆಗೆ ನೆರವಾಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳಿಗಾಗಿ ಇರುವ ಶೇಕಡಾ 30ರಷ್ಟು ಮೀಸಲಾತಿಯ ವ್ಯಾಪ್ತಿಯಲ್ಲಿ ಮುಸ್ಲಿಮರನ್ನು ಸೇರಿಸಲಾಗಿದೆ.

ಕೇರಳದಲ್ಲಿ ವಾರ್ಷಿಕ ಎರಡುವರೆ ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವ ಮುಸ್ಲಿಮರಿಗೆ ಶೇಕಡಾ ಹನ್ನೆರಡರಷ್ಟು, ಮತ್ತು ಕರ್ನಾಟಕದಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಲ್ಪಿಸಲಾಗಿದೆ.
ಎಂ.ವೀರಪ್ಪ ಮೊಯಿಲಿ ಅವರು ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ ಸೂತ್ರವನ್ನು ರೂಪಿಸಿದ್ದರೂ ಅಧಿಕಾರ ಕಳೆದುಕೊಂಡ ಕಾರಣ ಅದನ್ನು ಅನುಷ್ಠಾನಕ್ಕೆ ತರಲು ಅವರಿಗೆ ಸಾಧ್ಯವಾಗಿರಲಿಲ್ಲ. ಅವರ ನಂತರ ಮುಖ್ಯಮಂತ್ರಿಯಾದ ಎಚ್.ಡಿ.ದೇವೇಗೌಡರು 1994ರಲ್ಲಿ ಅದನ್ನು ಜಾರಿಗೆ ತಂದರು.

ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಾ ಬಂದ ಬಿಜೆಪಿ ಕೂಡಾ ಕರ್ನಾಟಕದಲ್ಲಿ ಇಲ್ಲಿಯವರೆಗೆ ಇದರ ವಿರುದ್ಧ ದನಿ ಎತ್ತಿಲ್ಲ. ಮಂಡಲ್ ವರದಿಗೆ ಸಂಬಂಧಿಸಿದಂತೆ `ಕೆನೆಪದರ~ದ ಬಗ್ಗೆ ತಾನು ನೀಡಿರುವ ಆದೇಶಕ್ಕನುಗುಣವಾಗಿಯೇ ಕೇರಳ ಮತ್ತು ಕರ್ನಾಟಕದ ಮುಸ್ಲಿಮ್ ಮೀಸಲಾತಿ ಇರುವುದರಿಂದ ಸುಪ್ರೀಂ ಕೋರ್ಟ್ ಕೂಡಾ ಇದಕ್ಕೆ ಅನುಮೋದನೆ ನೀಡಿದೆ.
ಆದರೆ, ಈಗ ಯುಪಿಎ ಸರ್ಕಾರ ಅತ್ಯವಸರದಿಂದ ಅಲ್ಪಸಂಖ್ಯಾತರಿಗಾಗಿ ಘೋಷಿಸಿರುವ ಮೀಸಲಾತಿ, ಮಂಡಲ್ ವರದಿ ಇಲ್ಲವೇ ಇತರ ನಾಲ್ಕು ರಾಜ್ಯಗಳಲ್ಲಿರುವ ಮುಸ್ಲಿಮ್ ಮೀಸಲಾತಿಯನ್ನು ಆಧಾರವಾಗಿಟ್ಟುಕೊಂಡು ರೂಪಿಸಿರುವಂತೆ ಕಾಣುತ್ತಿಲ್ಲ.
ಇದು ಮೀಸಲಾತಿಗೆ ಅರ್ಹವಾಗಿರುವ ಅಲ್ಪಸಂಖ್ಯಾತರನ್ನು ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳಿಂದ ಗುರುತಿಸಲು ಹೋಗದೆ ಸಾರಾಸಗಟಾಗಿ ಎಲ್ಲರನ್ನೂ ಒಂದೇ ಗುಂಪಿನಲ್ಲಿ ಸೇರಿಸಿದ ಹಾಗಿದೆ. ಈ ರೀತಿ ಇಡೀ ಧರ್ಮವನ್ನೇ ಹಿಂದುಳಿದಿದೆ ಎಂದು ಘೋಷಿಸಿ ಮೀಸಲಾತಿ ನೀಡುವುದು `ಧರ್ಮಾಧರಿತ ಮೀಸಲಾತಿ ಸಲ್ಲದು~ ಎನ್ನುವ ಸಂವಿಧಾನದ ಆಶಯ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿದೆ.
ಆದ್ದರಿಂದ ಒಂದೇ ಏಟಿಗೆ  ಸುಪ್ರೀಂ ಕೋರ್ಟ್ ಇದನ್ನು ರದ್ದುಪಡಿಸುವ ಸಾಧ್ಯತೆ ಇದೆ.
ಇದಕ್ಕಿಂತಲೂ ಮುಖ್ಯವಾಗಿ ಈ ಮೀಸಲಾತಿಯಿಂದಾಗಿ ಮುಸ್ಲಿಮರಲ್ಲಿ ನಿಜಕ್ಕೂ ಹಿಂದುಳಿದಿರುವ, ಬಡವರಾಗಿರುವ ಮುಸ್ಲಿಮರಿಗೆ ಅನ್ಯಾಯವಾಗಲಿದೆ. ಮಂಡಲ್ ಆಯೋಗದ ವರದಿಯನ್ನು ಆಧರಿಸಿದ ಈಗಿನ ಮೀಸಲಾತಿ ನೀತಿ ಪ್ರಕಾರ ಮುಸ್ಲಿಮರಲ್ಲಿರುವ 400 ಜಾತಿಗಳು ಶೇಕಡಾ ಮೂರರಷ್ಟು ಮೀಸಲಾತಿ ಪಡೆಯುತ್ತಿದ್ದವು.
ಯುಪಿಎ ಸರ್ಕಾರದ ಹೊಸ ಸೂತ್ರ ಮೀಸಲಾತಿಯ ಪ್ರಮಾಣವನ್ನು ಶೇಕಡಾ ನಾಲ್ಕೂವರೆಗೆ ಹೆಚ್ಚಿಸಿ ಅದರ ವ್ಯಾಪ್ತಿಯೊಳಗೆ ಎಲ್ಲ ಮುಸ್ಲಿಮರನ್ನು (ಶೇಕಡಾ 12.2) ಮಾತ್ರವಲ್ಲ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರಿಶ್ಚಿಯನ್(ಶೇಕಡಾ 2.3), ಸಿಖ್(ಶೇಕಡಾ 1.9), ಬೌದ್ಧ (ಶೇಕಡಾ 0.8) ಮತ್ತು ಜೈನರನ್ನೂ (ಶೇಕಡಾ 0.4) ಸೇರಿಸಿದೆ.

ಇವರೆಲ್ಲರ ಜತೆ ಮುಸ್ಲಿಮರಲ್ಲಿರುವ ಹಿಂದುಳಿದ ಜಾತಿಗಳು ಪೈಪೋಟಿ ನಡೆಸಿ ಮೀಸಲಾತಿಯ ಲಾಭವನ್ನು ಪಡೆಯುವುದಾದರೂ ಸಾಧ್ಯವೇ?