Monday, December 19, 2011

ಕನ್ನಡಿಗರು ಒಲ್ಲದ ಪ್ರಾದೇಶಿಕ ರಾಜಕಾರಣ

ಕರ್ನಾಟಕದ ಇಬ್ಬರು ರಾಜಕೀಯ ನಾಯಕರು ಇತ್ತೀಚೆಗೆ ಪ್ರಾದೇಶಿಕ ಪಕ್ಷ ರಚನೆಯ ಕನಸು ಕಾಣತೊಡಗಿದ್ದಾರೆ. ಒಬ್ಬರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನೊಬ್ಬರು ಮಾಜಿ ಸಚಿವ ಶ್ರಿರಾಮುಲು.
ರಾಜ್ಯದ ನೆಲ-ಜಲ-ಭಾಷೆಯನ್ನು ಪ್ರೀತಿಸುವ, ಪೋಷಿಸುವ ಮತ್ತು ರಕ್ಷಿಸುವಂತಹ ಪ್ರಾದೇಶಿಕ ಪಕ್ಷವೊಂದರ ಕನಸನ್ನು ಕಂಡಿರುವ ಮತ್ತು ಈಗಲೂ ಕಾಣುತ್ತಿರುವ ಕನ್ನಡಿಗರು ಬಹುಸಂಖ್ಯೆಯಲ್ಲಿ ನಮ್ಮಲ್ಲಿದ್ದಾರೆ.
ಪ್ರಾದೇಶಿಕ ಪಕ್ಷಗಳ ಹಿಡಿತದ ರಾಜ್ಯಗಳನ್ನು `ನೆರೆಮನೆ~ಗಳಾಗಿ ಹೊಂದಿರುವ ಕರ್ನಾಟಕ, ಬಲಿಷ್ಠ ಪ್ರಾದೇಶಿಕ ಪಕ್ಷದ ಕೊರತೆಯಿಂದಾಗಿ ಗಡಿತಂಟೆ, ನೀರು ಹಂಚಿಕೆ, ಕೇಂದ್ರದ ಸಂಪನ್ಮೂಲದಲ್ಲಿನ ಪಾಲಿನಂತಹ ಸೂಕ್ಷ್ಮ ವಿಚಾರಗಳಲ್ಲಿ ಅನ್ಯಾಯಕ್ಕೀಡಾಗುತ್ತಾ ಬಂದಿರುವುದು ಕೂಡಾ ಸುಳ್ಳಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೆರೆಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ, ಎನ್‌ಸಿಪಿ, ತೆಲುಗುದೇಶಂನಂತಹ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಹಿತರಕ್ಷಣೆಗಾಗಿ ಬಳಸಿಕೊಳ್ಳುತ್ತಾ ಬಂದಿರುವ ನಿದರ್ಶನಗಳೂ ನಮ್ಮ ಕಣ್ಣಮುಂದೆ ಇವೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಬಗೆಗಿನ ಕನ್ನಡಿಗರ ಒಲವು ಕರ್ನಾಟಕದ ಮುನ್ನಡೆಗೆ ಕಾಲ್ತೊಡಕಾಗಿ ಹೋಯಿತೇನೋ ಎಂಬ ಚಿಂತೆ ಭಾಷಾಂಧ ಕನ್ನಡಿಗರನ್ನು ಮಾತ್ರವಲ್ಲ, ಹೃದಯ ವೈಶಾಲ್ಯದ ಕನ್ನಡಿಗರನ್ನೂ ಒಮ್ಮಮ್ಮೆ ಕಾಡುತ್ತಿರುವುದು ಸತ್ಯ.
ಆದರೆ ರಾಜ್ಯದ ರಾಜಕೀಯ ಪರಂಪರೆಯನ್ನು ನೋಡಿದರೆ ಇಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಗಳಿಸಿರುವ ಉದಾಹರಣೆಗಳು ಸಿಗುವುದಿಲ್ಲ.
ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮೆರೆದಾಡುತ್ತಿದ್ದರೂ ರಾಜ್ಯದ ಜನತೆ ಮಾತ್ರ ಇಲ್ಲಿಯ ವರೆಗೆ ಅದರ ಪ್ರಭಾವಕ್ಕೊಳಗಾಗದೆ ದೂರವೇ ಉಳಿದುಬಿಟ್ಟಿದ್ದಾರೆ.
ಇದಕ್ಕೆ ಪ್ರಾದೇಶಿಕ ಪಕ್ಷ ಕಟ್ಟಲು ಪ್ರಯತ್ನಿಸಿದ ರಾಜಕೀಯ ನಾಯಕರ ಆತ್ಮವಂಚನೆಯ ನಡವಳಿಕೆಗಳೂ ಕಾರಣ. ಇಂತಹದ್ದರಲ್ಲಿ ಯಡಿಯೂರಪ್ಪ ಮತ್ತು ಶ್ರಿರಾಮುಲು ಅವರು ರಾಜಕೀಯ ಬ್ಲಾಕ್‌ಮೇಲ್‌ಗಷ್ಟೇ `ಪ್ರಾದೇಶಿಕ ಪಕ್ಷದ ಗುಮ್ಮ~ನನ್ನು ಬಳಸದೆ ನಿಜಕ್ಕೂ ಅದನ್ನು ಕಟ್ಟಲು ಹೊರಟರೆ ಯಶಸ್ಸು ಕಾಣಬಹುದೇ?
ಪ್ರಾದೇಶಿಕ ಪಕ್ಷ ರಚನೆಯ ಹಲವಾರು ಅವಕಾಶಗಳು ಬಂದು ಹೋಗಿರುವುದನ್ನು ಕರ್ನಾಟಕ ರಾಜಕಾರಣದ ಇತಿಹಾಸ ಹೇಳುತ್ತಿದೆ. ಅಂತಹ ಮೊದಲ ಅವಕಾಶ ದೇವರಾಜ ಅರಸು ಅವರಿಗೆ ಒದಗಿ ಬಂದಿತ್ತು.

ಕಾಂಗ್ರೆಸ್ ವಿರುದ್ಧದ ರಾಜಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಜನ ಬೆಂಬಲ ಸಿಗದೆ ಇದ್ದರೂ ವಿಚಲಿತರಾಗದ ಅರಸು ಅವರು ತಮ್ಮ ಕೊನೆಯ ದಿನಗಳಲ್ಲಿ `ಕ್ರಾಂತಿರಂಗ~ವನ್ನು ಕಟ್ಟಿದ್ದರು. ಆದರೆ, ಅದನ್ನು ಮುನ್ನಡೆಸಲು ಅವರು ಉಳಿಯಲಿಲ್ಲ.
ಅವರು ಬದುಕಿದ್ದರೆ ಪ್ರಾದೇಶಿಕ ಪಕ್ಷವನ್ನು ರಾಜ್ಯ ಪಡೆಯುತ್ತಿತ್ತೋ ಏನೋ? ಹೀಗೆ ಅಂದುಕೊಳ್ಳಲು ಕಾರಣ ಇದೆ. ಕರ್ನಾಟಕದ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟು, ಅದರ ವಿರೋಧಿ ಪಕ್ಷಗಳ ಬಗ್ಗೆ ಒಲವು ತೋರಿಸಿದ್ದೇ ಎಪ್ಪತ್ತರ ದಶಕದ ಅಂತ್ಯ ಮತ್ತು ಎಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ.
1983ರಲ್ಲಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದದ್ದೇ ಇದಕ್ಕೆ ಸಾಕ್ಷಿ. ಆಗ ಅರಸು ಬದುಕಿದ್ದರೆ ಅವರೇ ಅದಕ್ಕೆ ನಾಯಕರಾಗುತ್ತಿದ್ದರು. ಜನತಾ ಪಕ್ಷದ ಜತೆ ಕ್ರಾಂತಿರಂಗ ವಿಲೀನಗೊಳ್ಳದೆ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಆಗ ಅವಕಾಶ ಇತ್ತು.
ಎರಡನೇ ಅವಕಾಶ ಗೋಕಾಕ್ ಚಳವಳಿಯ ನಂತರದ ದಿನಗಳಲ್ಲಿ ಸೃಷ್ಟಿಯಾಗಿತ್ತು. ರೈತ, ದಲಿತ ಮತ್ತು ಭಾಷಾ ಚಳವಳಿಗಳಿಂದ ಪಕ್ವಗೊಂಡಿದ್ದ ರಾಜ್ಯದ ರಾಜಕಾರಣ ಪ್ರಾದೇಶಿಕ ಪಕ್ಷದ ಹುಟ್ಟನ್ನು ಎದುರು ನೋಡುತ್ತಿದ್ದ ಕಾಲ ಅದು. ಬಹುಶಃ ನಟ ರಾಜಕುಮಾರ್ ರಾಜಕೀಯ ಪ್ರವೇಶಿಸಲು ಒಪ್ಪಿಕೊಂಡಿದ್ದರೆ  ಪ್ರಾದೇಶಿಕ ಪಕ್ಷ ರಚನೆಯಾಗುತ್ತಿತ್ತು.

ಆದರೆ ವರನಟ ನಿರಾಕರಿಸಿದ ಕಾರಣ ಅದು ಸಾಧ್ಯವಾಗದೆ ಹೋಯಿತು. ಅದರ ಲಾಭ ಪಡೆದದ್ದು ಜನತಾರಂಗ ಎಂಬ ಮೈತ್ರಿಕೂಟಕ್ಕೆ. ಈ ಕೂಟಕ್ಕೆ ಸಂಪೂರ್ಣವಾಗಿ ಪ್ರಾದೇಶಿಕ ಪಕ್ಷದ ರೂಪ ಇರಲಿಲ್ಲ.
ಅದರೊಳಗಿದ್ದ ಕ್ರಾಂತಿರಂಗ ಪ್ರಾದೇಶಿಕ ಪಕ್ಷವಾದರೂ, ಒಟ್ಟು ಜನತಾರಂಗ ಎನ್ನುವುದು ಕ್ರಾಂತಿರಂಗ, ಜನತಾ ಪಕ್ಷ ಮತ್ತು ಎಡಪಕ್ಷಗಳು ಕೂಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಕಟ್ಟಿದ ಮೈತ್ರಿಕೂಟವಾಗಿತ್ತು.
ಮೂರನೆಯ ಅವಕಾಶ ಕೂಡಿಬಂದದ್ದು ಮಾತ್ರವಲ್ಲ, ಅದನ್ನು ಬಳಸಿಕೊಂಡು ಸೀಮಿತ ರೂಪದಲ್ಲಿಯಾದರೂ ಯಶಸ್ಸು ಗಳಿಸಿದ್ದು ಎಸ್. ಬಂಗಾರಪ್ಪನವರು.
1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೊರಬಂದ ಬಂಗಾರಪ್ಪನವರು ಕಟ್ಟಿದ `ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) 1994ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಏಳುವರೆಯಷ್ಟು ಮತಗಳನ್ನು ಗಳಿಸಿ ಹತ್ತುಸ್ಥಾನಗಳನ್ನು ಗೆದ್ದಿತ್ತು.
ಕರ್ನಾಟಕದ ಪ್ರಾದೇಶಿಕ ಪಕ್ಷಗಳ ಮಟ್ಟಿಗೆ ಈಗಲೂ ಇದೇ ದಾಖಲೆ. ಬೇರೆ ಯಾವ ಪ್ರಾದೇಶಿಕ ಪಕ್ಷವೂ ಚುನಾವಣೆಯಲ್ಲಿ ಇಷ್ಟು ಯಶಸ್ಸನ್ನೂ ಗಳಿಸಿಲ್ಲ.
ಆದರೆ ಬಂಗಾರಪ್ಪನವರ ಈ ಸಾಧನೆ ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣವಾಯಿತೇ ಹೊರತು ಅದರಿಂದ ಅವರ ಪಕ್ಷಕ್ಕಾಗಲಿ, ರಾಜ್ಯದ ಜನರಿಗಾಗಲಿ ಲಾಭವಾಗಲಿಲ್ಲ.
ಪ್ರಾದೇಶಿಕ ಪಕ್ಷ ಕಟ್ಟುವ ಛಾತಿ ಇದ್ದ ಎಚ್.ಡಿ.ದೇವೇಗೌಡರು ಒಂದು ಹಂತದಲ್ಲಿ `ಕರ್ನಾಟಕ ವಿಕಾಸ ವೇದಿಕೆ~ಯನ್ನು ಕಟ್ಟಿ ಊರೂರೂ ಅಲೆಯತೊಡಗಿದಾಗ ಕರ್ನಾಟಕದ ಬಹುದಿನಗಳ ಆಸೆಯೊಂದು ಈಡೇರುತ್ತದೆಯೇನೋ ಎಂಬ ನಿರೀಕ್ಷೆ ಹುಟ್ಟಿತ್ತು.
ಆದರೆ ಅವರೂ ರಾಷ್ಟ್ರೀಯ ಪಕ್ಷದ ಹುಚ್ಚಿಗೆ ಬಿದ್ದು ಕೊನೆಗೆ ಜನತಾಪಕ್ಷದ ಜತೆಯೇ ಲೀನರಾದರು. ಪ್ರಾದೇಶಿಕ ಪಕ್ಷದ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಪ್ರಧಾನಿ ಪಟ್ಟಕ್ಕೇರಿದ ನಂತರ ರಾಷ್ಟ್ರ ರಾಜಕಾರಣದ ದೌರ್ಬಲ್ಯದಿಂದ ಅವರು ಹೊರಗೆ ಬರಲೇ ಇಲ್ಲ.
ರಾಷ್ಟ್ರೀಯ ನಾಯಕರಾಗಿಯೇ ಉಳಿಯುವ ಹಂಬಲ ಮತ್ತು ಮೈತ್ರಿಕೂಟದ ಯುಗದಲ್ಲಿ ಮತ್ತೊಮ್ಮೆ ಅನಿರೀಕ್ಷಿತ ಬೆಳವಣಿಗೆ ಘಟಿಸಬಹುದೆಂಬ ದುರಾಸೆ ಇದಕ್ಕೆ ಕಾರಣ ಇರಬಹುದು. ಆದ್ದರಿಂದ ಎಚ್.ಡಿ.ಕುಮಾರಸ್ವಾಮಿ ಪ್ರಾದೇಶಿಕ ಪಕ್ಷ ಕಟ್ಟುವ ಆಸಕ್ತಿ ತೋರಿದರೂ ದೇವೇಗೌಡರು ಅದಕ್ಕೆ ಹಸಿರು ನಿಶಾನೆ ತೋರಿಸುತ್ತಲೇ ಇಲ್ಲ.
ದೇವೇಗೌಡರು ಪ್ರಧಾನಿಯಾದ ನಂತರ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದಾಗ ಮತ್ತೆ ಪ್ರಾದೇಶಿಕ ಪಕ್ಷದ ಚರ್ಚೆ ಪ್ರಾರಂಭವಾಗಿತ್ತು. ಹೆಗಡೆ ಅವರು ಕಟ್ಟಿದ `ನವನಿರ್ಮಾಣ ವೇದಿಕೆ~ಗೆ ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಬೆಂಬಲವೂ ವ್ಯಕ್ತವಾಗಿತ್ತು.
ನಾಯಕತ್ವದ ಕೊರತೆಯಿಂದ ಕೊರಗುತ್ತಿದ್ದ ರಾಜ್ಯದ ಲಿಂಗಾಯತ ಸಮುದಾಯ ಹೆಗಡೆ ಅವರಲ್ಲಿ ತಮ್ಮ ನಾಯಕನನ್ನು ಕಾಣುತ್ತಾ ಬಂದದ್ದು ಕೂಡಾ ಈ ಜನಬೆಂಬಲಕ್ಕೆ ಒಂದು ಕಾರಣ.

ಆದರೆ ಹೆಗಡೆಯವರಿಗೆ ಪ್ರಾದೇಶಿಕ ಪಕ್ಷದ ಬಗ್ಗೆ ನಂಬಿಕೆಯೇ ಇರಲಿಲ್ಲ. ಅದನ್ನು ಕಟ್ಟಿ ಬೆಳೆಸುವ ಶ್ರಮಜೀವಿಯೂ ಅವರು ಆಗಿರಲಿಲ್ಲ. ಆದ್ದರಿಂದ `ನವನಿರ್ಮಾಣ ವೇದಿಕೆ~ಯನ್ನು  `ಲೋಕಶಕ್ತಿ~ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತಿಸುವಾಗಲೂ ಅದಕ್ಕೆ ರಾಷ್ಟ್ರೀಯ ಪಕ್ಷದ ರೂಪು ಕೊಟ್ಟು ಅದನ್ನು ಎಡಬಿಡಂಗಿ ಮಾಡಿಬಿಟ್ಟರು.
ಈ ಸಾಲಿನಲ್ಲಿ ಕೊನೆಯ ಅವಕಾಶ ಒದಗಿಬಂದದ್ದು ಸಿದ್ದರಾಮಯ್ಯನವರಿಗೆ. ಆದರೆ ಆಟದ ಕಣಕ್ಕೆ ಇಳಿಯುವ ಮೊದಲೇ ಅವರು ಸೋಲೊಪ್ಪಿಕೊಂಡು `ಗೆಲ್ಲುವ ತಂಡ~ ಎಂದು ನಂಬಿ ಕಾಂಗ್ರೆಸ್ ಸೇರಿಕೊಂಡುಬಿಟ್ಟರು.
ಅವರು ಕಾಂಗ್ರೆಸ್ ಸೇರಿದ್ದ ದಿನ ಎಐಸಿಸಿ ಕಚೇರಿ ಸಭಾಂಗಣದಲ್ಲಿ ಪಕ್ಷದ ನಾಯಕರನ್ನು ಎಡಬಲದಲ್ಲಿ ಕೂರಿಸಿಕೊಂಡು ತೋರಿದ್ದ ಆತ್ಮವಿಶ್ವಾಸವನ್ನು ಸಂಸತ್‌ಭವನದ ಎದುರಿನ ಬೋಟ್‌ಕ್ಲಬ್‌ನಲ್ಲಿ ತನ್ನ ಕಾಲಮೇಲೆ ನಿಂತು ತೋರಿಸಿದ್ದರೆ ಲಾಲು, ಮುಲಾಯಂ, ಪವಾರ್, ಕರುಣಾನಿಧಿ, ಚಂದ್ರಬಾಬು ನಾಯ್ಡು ಅವರಂತೆ ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗುತ್ತಿರುವ ಪ್ರಾದೇಶಿಕ ಪಕ್ಷದ ನಾಯಕರಾಗುತ್ತಿದ್ದರು.
ಆದರೆ ಸಿದ್ದರಾಮಯ್ಯನವರು `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಇಲ್ಲ, ಅದಕ್ಕಾಗಿ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ~ ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿದ್ದದ್ದೇ ಆಗ.
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಊರಲು ಯಾಕೆ ಆಗುತ್ತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಗುಂಡೂರಾವ್ ದುರಾಡಳಿತದ ವಿರುದ್ಧದ ಚಳವಳಿಗಳ ದಿನಗಳಲ್ಲಿ ಸೃಷ್ಟಿಯಾಗಿದ್ದ ಅವಕಾಶವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಯ ಪ್ರಯತ್ನಗಳು ತಾವಿದ್ದ ಪಕ್ಷದಿಂದ ಅನ್ಯಾಯ-ಅಪಮಾನಕ್ಕೀಡಾದ ಕಾರಣಕ್ಕೆ ಸಿಡಿದು ಹೊರಬಂದ ರಾಜಕೀಯ ನಾಯಕರಿಂದ ನಡೆದುದು.
ರಾಜ್ಯದ ಹಿತಕ್ಕೆ ಆಗಿರುವ ಅನ್ಯಾಯ ಇಲ್ಲವೇ ರಾಜ್ಯದ ಜನರಿಗೆ ಆಗಿರುವ ಅಪಮಾನಕ್ಕಲ್ಲ ಎನ್ನುವುದು ಮುಖ್ಯ ಕಾರಣ. ಅರಸು, ಬಂಗಾರಪ್ಪ, ದೇವೇಗೌಡ, ಹೆಗಡೆ, ಸಿದ್ದರಾಮಯ್ಯ- ಈ ಎಲ್ಲರ ವಿಷಯದಲ್ಲಿಯೂ ಇದು ಸತ್ಯ.
ಇದಕ್ಕೆ ಎರಡು ಅಪವಾದಗಳೆಂದರೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತಸಂಘದ ರಾಜಕೀಯ ಮುಖವಾಗಿ ಕಟ್ಟಿದ `ಕನ್ನಡ ನಾಡು~ ಮತ್ತು ಸಾಹಿತಿ ಪಿ.ಲಂಕೇಶ್ ಅವರು ವೈಯಕ್ತಿಕ ರಾಜಕೀಯ ಪ್ರಯೋಗದ ರೀತಿಯಲ್ಲಿ ಕಟ್ಟಿದ `ಪ್ರಗತಿರಂಗ~.
ಈ ಎರಡೂ ಪ್ರಯತ್ನಗಳಿಗೆ ರಾಜ್ಯದ ಎಲ್ಲ ಜನವರ್ಗಗಳ ಪ್ರಾತಿನಿಧಿಕ ಬೆಂಬಲವೂ ಇರದಿದ್ದ ಕಾರಣ ಅವುಗಳು ಕೂಡಾ ವಿಫಲ ಪ್ರಯೋಗಗಳಾಗಿ ಕಣ್ಣುಮುಚ್ಚಿದವು.
ಭಾಷೆ-ಪ್ರದೇಶಕ್ಕೆ ಸಂಬಂಧಿಸಿದಂತೆ ಅಂಧರಾಗಿ ಯೋಚಿಸದ ಮತ್ತು ಅತಿ ಎನಿಸುವಷ್ಟು ಉದಾರಿಗಳಾಗಿರುವ ಕನ್ನಡಿಗರ ಸ್ವಭಾವವೂ ಪ್ರಾದೇಶಿಕ ಪಕ್ಷದ ರಾಜಕಾರಣಕ್ಕೆ ವಿರುದ್ಧವಾಗಿದೆ.
ದುಡುಕು ಸ್ವಭಾವದವರಂತೆ ಕಾಣುವ ಬಿ.ಎಸ್.ಯಡಿಯೂರಪ್ಪನವರು ಪ್ರತ್ಯೇಕ ಪಕ್ಷ ರಚನೆಯ ಪ್ರಶ್ನೆ ಬಂದಾಗೆಲ್ಲ ಅಚ್ಚರಿ ಮೂಡುವಷ್ಟು ಎಚ್ಚರಿಕೆಯಿಂದ ವರ್ತಿಸುತ್ತಾ ಬಂದಿರಲು ಇದೂ ಕಾರಣ ಇರಬಹುದು.
ಈಗಲೂ ಅವರ ಸುತ್ತ ಇರುವ ಸಚಿವರು ಮತ್ತು ಸಂಸದರು `ಒಂದು ಕೈ ನೋಡಿಯೇ ಬಿಡುವ~ ಎಂದು ತೊಡೆ ತಟ್ಟುತ್ತಿದ್ದರೂ ಯಡಿಯೂರಪ್ಪನವರು ತಾನಿರುವ ಪಕ್ಷದ ಬಗ್ಗೆ ತನ್ನ ಬದ್ಧತೆಯನ್ನು ಸಾರುತ್ತಾ ಆ  ನಿರ್ಧಾರವನ್ನು ಉಪಾಯದಿಂದಲೇ ಮುಂದೂಡುತ್ತಾ ಬಂದಿದ್ದಾರೆ.
ಹಿಂದಿನ ಕೆಲವು ಬಿಕ್ಕಟ್ಟುಗಳ ಸಂದರ್ಭಗಳಲ್ಲಿಯೂ ಅವರು ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷದ ಜತೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೆಂಬ ಗಾಳಿಸುದ್ದಿ ಹರಡಿತ್ತೇ ಹೊರತು ಪ್ರಾದೇಶಿಕ ಪಕ್ಷ ರಚನೆಯ ಆಲೋಚನೆ ಗಾಳಿಯಲ್ಲಿಯೂ ತೇಲಿ ಬಂದಿರಲಿಲ್ಲ.

ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು.
ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ~ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ.
ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು.
ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ.
ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯ ವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.

Monday, December 12, 2011

ಬಳ್ಳಾರಿ ರಿಪಬ್ಲಿಕ್ ವಿಸ್ತರಣೆಗೆ ಶ್ರೀರಾಮುಲು ನಾಯಕತ್ವ?

ಭಾರತದಲ್ಲಿ ಜಾತ್ಯತೀತ ನಾಯಕರಾಗುವುದು ಬಹಳ ಸುಲಭದ ಕೆಲಸ. ಮೊದಲು ಬಿಜೆಪಿಯಲ್ಲಿದ್ದು ಜಾತ್ಯತೀತರನ್ನೆಲ್ಲ ವಿರೋಧಿಸಬೇಕು, ನಂತರ ಆ ಪಕ್ಷವನ್ನು ವಿರೋಧಿಸಿ ಹೊರಗೆ ಬರಬೇಕು. ಅಲ್ಲಿಗೆ ಅವರು ಪ್ರಶ್ನಾತೀತ ಜಾತ್ಯತೀತ ನಾಯಕರು.
ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕಾರಣದಲ್ಲಿ ನಮ್ಮ ಹಲವಾರು ತಥಾಕಥಿತ ಸೆಕ್ಯುಲರ್ ನಾಯಕರ ನಡವಳಿಕೆಯನ್ನು ಗಮನಿಸಿದರೆ ಅದರಲ್ಲಿ ಇಂತಹ ಆತ್ಮವಂಚನೆಯ ರಾಜಕೀಯವನ್ನು ಕಾಣಬಹುದು.
ಗುಜರಾತ್‌ನ  `ಕೋಮುವಾದಿ~ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎದುರಾಗಿ ಕಾಂಗ್ರೆಸ್ ತಂದು ನಿಲ್ಲಿಸಿದ್ದು ಶಂಕರ್‌ಸಿಂಗ್ ವಘೇಲಾ ಎಂಬ ಬಿಜೆಪಿಯ ಮಾಜಿ ನಾಯಕನನ್ನು.

ಮಹಾರಾಷ್ಟ್ರದಲ್ಲಿ ಬಾಳ ಠಾಕ್ರೆ ಮತ್ತು ಕುಟುಂಬಕ್ಕೆ ಸವಾಲು ಹಾಕುತ್ತಿರುವವರು ಈಗ ಕಾಂಗ್ರೆಸ್‌ನಲ್ಲಿರುವ ಶಿವಸೇನೆಯ ಮಾಜಿ ನಾಯಕ ಸಂಜಯ್ ನಿರುಪಮ್. ಗುಜರಾತ್, ಮಹಾರಾಷ್ಟ್ರಗಳಲ್ಲಿ ಈಗಲೂ ಈ ವಲಸೆ ನಡೆಯುತ್ತಲೇ ಇದೆ.

ಇಷ್ಟು ಮಾತ್ರವಲ್ಲ, ಈಗಿನ ಜಾತ್ಯತೀತರ ಶಿಬಿರದಲ್ಲಿರುವ ಮಾಯಾವತಿ, ಎಂ.ಕರುಣಾನಿಧಿ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್, ರಾಮ್‌ವಿಲಾಸ್ ಪಾಸ್ವಾನ್, ಎಚ್.ಡಿ.ಕುಮಾರಸ್ವಾಮಿ ಮೊದಲಾದವರೆಲ್ಲರೂ ಬಿಜೆಪಿಯ `ಕೋಮುವಾದದ ರಾಜಕೀಯ~ದಲ್ಲಿ ಮುಳುಗಿ ಎದ್ದು ಬಂದವರೇ ಆಗಿದ್ದಾರೆ.
ಇವರಲ್ಲಿ ಯಾರೂ ಕೂಡಾ ಮತ್ತೆ ಬಿಜೆಪಿ ತೆಕ್ಕೆಗೆ ಹೋಗಿ ಬೀಳಲಾರರು ಎಂಬ ಬಗ್ಗೆ ಖಾತರಿ ಇಲ್ಲ. ಸದ್ಯಕ್ಕೆ ಇವರೆಲ್ಲ ಜಾತ್ಯತೀತರು. ಈ ಗುಂಪಿಗೆ ಕರ್ನಾಟಕದ ಕೊಡುಗೆ ಬಳ್ಳಾರಿಯ ಶ್ರಿರಾಮುಲು.
ಬಳ್ಳಾರಿ ಉಪಚುನಾವಣೆಯ ಗೆಲುವಿನಲ್ಲಿ ಕೆಲವರು ಸೆಕ್ಯುಲರ್ ನಾಯಕನೊಬ್ಬ ಉದಯವನ್ನು, ಇನ್ನು ಕೆಲವರು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಭಾಗ್ಯವಿಧಾತನ ಅವತಾರವನ್ನು ಕಾಣತೊಡಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾತ್ಯತೀತ ಜನತಾದಳಕ್ಕೆ ಶ್ರಿರಾಮುಲು ಅವರನ್ನು ಸ್ವಾಗತಿಸಲು ಆರತಿತಟ್ಟೆ ಹಿಡಿದುಕೊಂಡು ಕಾಯುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯೇತರ `ಅಹಿಂದ~ ನಾಯಕರು ಬಿಜೆಪಿಯ `ಲಂಕೆಯನ್ನು ಧ್ವಂಸ~ ಮಾಡಲು ಹೊರಟಿರುವ ಶ್ರಿರಾ(ಮ)ಮುಲು ಸೇನೆಗೆ ಭರ್ತಿಯಾಗಲು ಸರತಿಯ ಸಾಲಲ್ಲಿ ನಿಂತಿದ್ದಾರೆ. ರಾಜ್ಯದ ಸೆಕ್ಯುಲರ್  ಮತ್ತು `ಅಹಿಂದ~ ನಾಯಕರ ಸದ್ಯದ ಕಣ್ಮಣಿ ಶ್ರಿರಾಮುಲು.
ಬಿಜೆಪಿಯ ಸಂಗದಲ್ಲಿದ್ದ ರಾಷ್ಟ್ರೀಯ ನಾಯಕರು ಅದರಿಂದ ಹೊರಗೆ ಬಂದಾಗ ಹೇಳಿಕೊಳ್ಳಲಿಕ್ಕಾದರೂ ಸರಿಯಾದ ಕಾರಣಗಳನ್ನು ಇಟ್ಟುಕೊಂಡಿದ್ದರು. ಶ್ರಿರಾಮುಲು ಬಿಜೆಪಿ ತೊರೆಯಲು ಏನು ಕಾರಣ? ಹಿಂದಿನ ಮೂರು ವರ್ಷಗಳಲ್ಲಿ ನಡೆಸದ ಕೋಮುವಾದಿ ಚಟುವಟಿಕೆಗಳನ್ನು ಬಿಜೆಪಿ ಕಳೆದೆರಡು ತಿಂಗಳಲ್ಲಿ ನಡೆಸಿದೆಯೇ?
ಹಿಂದುಳಿದ ಜಾತಿ ಜನರಿಗೆ ಇತ್ತೀಚೆಗೆ ಏನಾದರೂ ಅನ್ಯಾಯ ಮಾಡಿದೆಯೇ? ದಲಿತರ ಮೇಲೆ ದೌರ್ಜನ್ಯ ಪ್ರಾರಂಭಿಸಿದೆಯೇ?  ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಾರಂಭ ಮಾಡಿದ ಮೊದಲ ಕೆಲಸ ಹಿಂದುಳಿದ ವರ್ಗಗಳ ಆಯೋಗದ ಮೇಲೆ ದಾಳಿ.

ಅದರ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕನಾಥ್ ಅವರನ್ನು ಕಿತ್ತುಹಾಕಲು ನಿರಂತರವಾಗಿ ಅದು ಪ್ರಯತ್ನ ನಡೆಸಿತು. ರಾಜ್ಯದಲ್ಲಿ ಜಾತಿಗಣತಿ ನಡೆಸಲಿಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದರೂ ಆ ಕೆಲಸ ಪ್ರಾರಂಭಿಸಲು ಅವಕಾಶವನ್ನೇ ನೀಡಲಿಲ್ಲ. ದ್ವಾರಕಾನಾಥ್ ಅವರು ಕಷ್ಟಪಟ್ಟು ತಯಾರಿಸಿದ ವರದಿಯ ಗತಿ ಏನಾಯಿತೋ ಗೊತ್ತಿಲ್ಲ.
ಇವೆಲ್ಲವೂ ನಡೆಯುತ್ತಿರುವಾಗ ಶ್ರಿರಾಮುಲು ಬಳ್ಳಾರಿ ಮತ್ತು ಬೆಂಗಳೂರು ನಡುವೆ ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಾ ಬಿಜೆಪಿಯಲ್ಲಿಯೇ ಇದ್ದರಲ್ಲವೇ? ಅವರೆಂದಾದರೂ ಇದರ ವಿರುದ್ಧ ದನಿ ಎತ್ತಿದ್ದರೇ? ಈಗ ಪ್ರತಿನಿಧಿಸಲು ಹೊರಟ `ಅಹಿಂದ~ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ಕೊಡಲು ಮುಂದಾಗಿದ್ದರೇ?

ಕನಿಷ್ಠ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಡೆಸ್ನಾನದ ಮೇಲೆ ಹೇರಲಾದ ನಿಷೇಧವನ್ನು ಬಿಜೆಪಿ ಸರ್ಕಾರ ವಾಪಸು ಪಡೆದುದನ್ನಾದರೂ ಶ್ರೀರಾಮುಲು ಎಲ್ಲಾದರೂ ವಿರೋಧಿಸಿದ್ದಾರೆಯೇ?
ಹಾಗಿದ್ದರೆ ಅವರು ಬಿಜೆಪಿ ತೊರೆಯಲು ಏನು ಕಾರಣ? ಶ್ರಿರಾಮುಲು ಅವರೇ ಹೇಳಿಕೊಂಡ ಕಾರಣ- ಲೋಕಾಯುಕ್ತ ವರದಿಯಲ್ಲಿನ ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡ ನಂತರ ಅವರನ್ನು ಸಂಪುಟದಿಂದ ಕೈಬಿಟ್ಟದ್ದು.

ಇದರಿಂದ ಜಾತ್ಯತೀತ ಮೌಲ್ಯದ ಮಾನಭಂಗ ಹೇಗಾಯಿತೋ, ರಾಜ್ಯದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಸ್ವಾಭಿಮಾನಕ್ಕೆ ಹೇಗೆ ಧಕ್ಕೆಯಾಯಿತೋ, ಅವರು ಇದ್ದಕ್ಕಿದ್ದಂತೆ ವಾಲ್ಮೀಕಿ, ಏಕಲವ್ಯ, ಕರ್ಣ ಮೊದಲಾದ ಪುರಾಣಪುರುಷರ ಅಪರವತಾರ ಹೇಗಾದರೋ ಗೊತ್ತಾಗುತ್ತಿಲ್ಲ.
ಒಂದೊಮ್ಮೆ ಶ್ರಿರಾಮುಲು ಅವರ ಈಗಿನ ಜಾತ್ಯತೀತ ರಾಜಕೀಯ ನಿಲುವು ಪ್ರಾಮಾಣಿಕವಾದುದು ಎಂದೇ ತಿಳಿದುಕೊಂಡರೂ ಅವರ ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಹೇಗೆ ಮನ್ನಿಸಲು ಸಾಧ್ಯ?

ನಗ್ನ ಸತ್ಯ ಏನೆಂದರೆ ಶ್ರಿರಾಮುಲು ಅವರು ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಮೊದಲಾದವರಂತೆ ಒಬ್ಬ ಕಳಂಕಿತರು, ಭ್ರಷ್ಟಾಚಾರದ ಆರೋಪಗಳನ್ನು ತಲೆಮೇಲೆ ಹೊತ್ತುಕೊಂಡವರು.
ಬಿಜೆಪಿಯನ್ನು ತೊರೆದು ಹೊರಬಂದ ಮಾತ್ರಕ್ಕೆ ಇವರಿಗೆ ಮೆತ್ತಿಕೊಂಡ ಭ್ರಷ್ಟಾಚಾರದ ಕಳಂಕ ಏಕಾಏಕಿ ತೊಡೆದುಹೋಗಲಾರದು. ಬಳ್ಳಾರಿಯ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದ ಮತ್ತು ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ ಆರೋಪದಿಂದ ಮುಕ್ತಿ ಪಡೆಯಲಾರರು.
ದೇಶದ ಜಾತ್ಯತೀತ ಮತ್ತು `ಅಹಿಂದ~ ನಾಯಕರು ಕೂಡಾ ಮಾಡುತ್ತಾ ಬಂದಿರುವುದು ಇದೇ ತಪ್ಪನ್ನು. ಲಾಲುಪ್ರಸಾದ್ ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗೆಲ್ಲ ಅದು ಜಾತ್ಯತೀತ ನಾಯಕನೊಬ್ಬನನ್ನು ದಮನಮಾಡುವ ಕೋಮುವಾದಿಗಳ ಸಂಚು ಎಂದೇ ಆರೋಪಿಸುತ್ತಿದ್ದರು.

ಮುಲಾಯಂ ಸಿಂಗ್, ಮಾಯಾವತಿ ಸೇರಿದಂತೆ ಬಹುತೇಕ ಸೆಕ್ಯುಲರ್ ಭ್ರಷ್ಟರು  ಒಂದು ಸಂದರ್ಭದಲ್ಲಿ ತಮ್ಮ ಹುಳುಕನ್ನು ಬಚ್ಚಿಡಲು ಈ ಆರೋಪ ಮಾಡುತ್ತಾ ಬಂದಿದ್ದಾರೆ. ಇದನ್ನು ನೋಡಿದರೆ ಕೋಮುವಾದ ಮಾತ್ರವಲ್ಲ, ಭ್ರಷ್ಟಾಚಾರ ಹೆಚ್ಚಾಗಲು ಕೂಡಾ ಬಿಜೆಪಿ ಕಾರಣ ಎನ್ನಬಹುದೇನೋ?

ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಿದರೆ ಕರ್ನಾಟಕ ಕೋಮುವಾದದ ಬೆಂಕಿಯಲ್ಲಿ ಸುಟ್ಟುಹೋಗಲಿದೆ ಎಂಬ ಕಾರಣವನ್ನೇ ತನ್ನ ವಚನಭಂಗಕ್ಕೆ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಲ್ಲವೇ? ಆ ಮೂಲಕ ಜಾತ್ಯತೀತನೆಂಬ ಕಿರೀಟವನ್ನು ಮರಳಿ ಮುಡಿಗೇರಿಸಿಕೊಂಡದ್ದಲ್ಲವೇ?
ಭ್ರಷ್ಟಾಚಾರದ ಭಾಗವಾಗಿರುವ ಅಕ್ರಮ ಗಣಿಗಾರಿಕೆಯಿಂದ ಪ್ರಜ್ಞಾಪೂರ್ವಕವಾಗಿ ದೂರ ಸರಿಯುವ ಪಶ್ಚಾತ್ತಾಪದ ಆಶಯವನ್ನು ತೋರಿಕೆಗಾಗಿಯಾದರೂ ಶ್ರಿರಾಮುಲು ವ್ಯಕ್ತಪಡಿಸಿದ್ದರೆ ಅವರ ಹಿಂದೆ ಹೊರಟವರಿಗೆ ಕನಿಷ್ಠ ಗೌರವವಾದರೂ ಇರುತ್ತಿತ್ತು.

ಈಗಲೂ ಶ್ರಿರಾಮುಲು ಅವರ ನಿಷ್ಠೆ ತನ್ನ ಮತದಾರರರು ಇಲ್ಲವೇ ಬೆಂಬಲಿಗರಾದ ಜಾತ್ಯತೀತ ನಾಯಕರ ಮೇಲೆ ಅಲ್ಲ, ಅದು ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿ ಜನಾರ್ದನ ರೆಡ್ಡಿಯವರ ಮೇಲೆ.
ಚುನಾವಣೆಯಲ್ಲಿ ಗೆದ್ದ ಮರುಕ್ಷಣದಲ್ಲಿ ಅವರು ಸ್ಮರಿಸಿಕೊಂಡದ್ದು ಅಂಬೇಡ್ಕರ್ ಇಲ್ಲವೇ ದೇವರಾಜ ಅರಸು ಅವರನ್ನಲ್ಲ. ಈ ಭೂಮಿ ಇರುವಷ್ಟು ದಿನ ರಾಜ್ಯದ ಹಿಂದುಳಿದ ಜಾತಿ ಜನ ಕೃತಜ್ಞರಾಗಬೇಕಾಗಿರುವ ಲಕ್ಷ್ಮಣ ಜಿ. ಹಾವನೂರು ಅವರನ್ನೂ ಅಲ್ಲ. ಅವರು ಸ್ಮರಿಸಿಕೊಂಡದ್ದು ಜನಾರ್ದನ ರೆಡ್ಡಿಯವರನ್ನು.

`ಜನಾರ್ದನ ರೆಡ್ಡಿಯವರ ಸಲಹೆಯನ್ನು ಪಡೆದು ನನ್ನ ಮುಂದಿನ ರಾಜಕೀಯದ ನಿರ್ಧಾರ ಕೈಗೊಳ್ಳುತ್ತೇನೆ~ ಎಂದಲ್ಲವೇ ಚುನಾವಣೆಯಲ್ಲಿ ಗೆಲುವಿನ ಮರುಕ್ಷಣದಲ್ಲಿ ಶ್ರಿರಾಮುಲು ಹೇಳಿದ್ದು.
`ಸೆರೆಮನೆಯಲ್ಲಿರುವ ಒಬ್ಬ ವಿಚಾರಣಾಧೀನ ಕೈದಿಯ ಮಾರ್ಗದರ್ಶನದಲ್ಲಿ ರಾಜಕೀಯ ಮಾಡುತ್ತೇನೆ~ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಅಕ್ರಮ ಗಣಿಗಾರಿಕೆಯ ಆರೋಪಿ ಶ್ರಿರಾಮುಲು ಅವರನ್ನು ನಾಯಕನೆಂದು ಒಪ್ಪಿಕೊಳ್ಳುವುದಾದರೆ, ನಾಳೆ ಬಿಜೆಪಿಯ ಶಾಸಕರು ಕೂಡಿ ಭ್ರಷ್ಟಾಚಾರದ ಆರೋಪಗಳನ್ನು ಇನ್ನೂ ಎದುರಿಸುತ್ತಿರುವ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಯಾವ ನೈತಿಕತೆಯ ಮೇಲೆ ವಿರೋಧಿಸಲು ಸಾಧ್ಯ?
`ಯಾವ ರಾಜಕಾರಣಿ ಭ್ರಷ್ಟನಾಗಿರಲಿಲ್ಲ~ ಎಂದು ಶ್ರಿರಾಮುಲು ಅಭಿಮಾನಿಗಳು ಕೇಳಬಹುದು. ಹಿಂದುಳಿದ ವರ್ಗಗಳ ನಾಯಕನೆಂದು ಹೇಳುವ ದೇವರಾಜ ಅರಸು ಅವರು ಭ್ರಷ್ಟಾಚಾರ ನಡೆಸಿಲ್ಲವೇ ಎಂದು ಉಡಾಫೆಯಾಗಿ ಕೇಳಿ ಬಾಯಿಮುಚ್ಚಿಸುವ ಪ್ರಯತ್ನವನ್ನೂ ಕೆಲವರು ಮಾಡುತ್ತಿದ್ದಾರೆ.
ಜಾತಿಯ ಬಲ ಇಲ್ಲದ ಅರಸು ಭ್ರಷ್ಟಾಚಾರಕ್ಕೆ ಕೈ ಹಾಕಬೇಕಾಗಿ ಬಂದದ್ದು ಭ್ರಷ್ಟ ಶಾಸಕರ ಬೆಂಬಲವನ್ನು ಉಳಿಸಿಕೊಳ್ಳಲಿಕ್ಕಾಗಿ ಮತ್ತು ಅದರ ಮೂಲಕ ಗಳಿಸುವ ರಾಜಕೀಯ ಅಧಿಕಾರದಿಂದ ಭೂ ಸುಧಾರಣೆ, ಮೀಸಲಾತಿ, ಜೀತಪದ್ಧತಿ ನಿರ್ಮೂಲನೆ, ಋಣ ಪರಿಹಾರ, ಮಲಹೊರುವ ಪದ್ಧತಿ ನಿಷೇಧದಂತಹ ಸಾಮಾಜಿಕ ನ್ಯಾಯದ ಕಾರ‌್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಕ್ಕಾಗಿ.

ಆ ಶಾಸಕರು (ಅವರಲ್ಲಿ ಹೆಚ್ಚಿನವರು ಹಿಂದುಳಿದ ಜಾತಿಯವರು) ಭ್ರಷ್ಟರಾಗದೆ ಇದ್ದಿದ್ದರೆ ಅರಸು ಖಂಡಿತ ಭ್ರಷ್ಟರಾಗುತ್ತಿರಲಿಲ್ಲ. ಅರಸು ವೈಯಕ್ತಿಕವಾಗಿ ಭ್ರಷ್ಟರಾಗಿದ್ದರು ಎನ್ನುವುದಕ್ಕೆ ಗ್ರೋವರ್ ಆಯೋಗಕ್ಕೂ ಪುರಾವೆಗಳು ಸಿಗಲಿಲ್ಲ ಎನ್ನುವುದನ್ನು ನಮ್ಮ ಅನೇಕ ಇತಿಹಾಸಕಾರರು ಮತ್ತು ರಾಜಕೀಯ ವಿಶ್ಲೇಷಕರು ಮರೆತೇ ಬಿಡುತ್ತಾರೆ.

ನಿಜ, ರಾಜಕಾರಣಿಗಳು ಆಗಲೂ ಭ್ರಷ್ಟರಾಗಿದ್ದರು, ಈಗಲೂ ಅದಕ್ಕೆ ಹೊರತಲ್ಲ.. ಆದರೆ, ಅವರು ಭ್ರಷ್ಟರಾದರೆ ಅವರನ್ನು ನಿವಾರಿಸಿಕೊಳ್ಳಲು ಚುನಾವಣೆಯ ಅಸ್ತ್ರ ಇದೆ. ಆದರೆ ಈ ಅಸ್ತ್ರ ಪ್ರಯೋಗ ಮಾಡಬೇಕಾದ ಮತದಾರರೇ ಭ್ರಷ್ಟರಾದರೇ?
ಕರ್ನಾಟಕ ರಾಜಕಾರಣಕ್ಕೆ `ಬಳ್ಳಾರಿ ರಿಪಬ್ಲಿಕ್~ನ ಮಹಾ ಕೊಡುಗೆ ಇದು. ಅದು ಬಳ್ಳಾರಿ ಮಾತ್ರವಲ್ಲ, ರಾಜ್ಯದ ಮತದಾರರನ್ನೇ ಭ್ರಷ್ಟಗೊಳಿಸಲು ಹೊರಟಿದೆ. ಚುನಾವಣೆ ಕಾಲದಲ್ಲಿ ಹಿಂದೆಯೂ ಹಣ-ಹೆಂಡ ಹಂಚಲಾಗುತ್ತಿತ್ತು.

ಆದರೆ, ಅದನ್ನು ಕೊಟ್ಟವರಿಗೆಲ್ಲ, ಅದನ್ನು ಪಡೆದವರು ಮತಹಾಕುತ್ತಾರೆ ಎನ್ನುವ ಖಾತರಿ ಇರಲಿಲ್ಲ. ಯಾಕೆಂದರೆ ಆ ಆಮಿಷಗಳು ಒಂದು ದಿನದ ಮೋಜು-ಜೂಜಿಗಷ್ಟೇ ಸಾಕಾಗುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಮತದಾರರಿಗೆ ಒಡ್ಡಲಾಗುತ್ತಿರುವ ಆಮಿಷಗಳಿಗೆ ಮಿತಿಯೇ ಇಲ್ಲದಂತಾಗಿದೆ.

ಬಳ್ಳಾರಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶವೊಂದನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಚುನಾವಣಾ ಕಾಲದಲ್ಲಿ ಈ ರೀತಿಯ ಹಣದ ಹೊಳೆ ಹರಿದಿಲ್ಲ. `ಆಪರೇಷನ್ ಕಮಲ~ ಎಂಬ ಅನೈತಿಕ ರಾಜಕಾರಣವೇ `ಬಳ್ಳಾರಿ ರಿಪಬ್ಲಿಕ್~ನ ಕಪ್ಪುಹಣದಿಂದಲೇ ಪ್ರಾರಂಭವಾಗಿದ್ದಲ್ಲವೇ?
ಕಳೆದ ವಿಧಾನಸಭಾ ಚುನಾವಣಾ ಕಾಲದಲ್ಲಿ ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕರೊಬ್ಬರು ಮನೆಕೆಲಸದಾಕೆ ಬರುತ್ತಿಲ್ಲ ಎಂದು ಒದ್ದಾಡುತ್ತಿದ್ದರು. ಚುನಾವಣಾ ಕಾಲದಲ್ಲಿ ಹತ್ತು ದಿನ ರಜೆ ಹಾಕಿ ಆಕೆ ಪ್ರಚಾರಕ್ಕೆ ಹೋಗಿದ್ದಳಂತೆ.

ಮತದಾನದ ಮರುದಿನ ಬಂದ ಆಕೆ `ಹತ್ತು ದಿನಗಳಲ್ಲಿ ನಾವು ನಾಲ್ಕು ಮಂದಿ 30 ಸಾವಿರ ರೂಪಾಯಿ ದುಡಿದೆವು, ಇನ್ನು ಮುಂದೆಯೂ ಅಣ್ಣಾವ್ರ ದುಡ್ಡು ಕೊಡುತ್ತೇನೆ ಎಂದಿದ್ದಾರೆ ~ ಎಂದು ಹೇಳಿದಳಂತೆ. ಅವಳಂತಹವರ ನಂಬಿಕೆಯೇನು ಹುಸಿಯಾಗಿಲ್ಲ.
ಬಳ್ಳಾರಿ ಜಿಲ್ಲೆಯನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುವವರು ಕೇವಲ ಶಾಸಕರಲ್ಲ, ಅವರೆಲ್ಲ ಆಧುನಿಕ `ರಾಬಿನ್ ಹುಡ್~ಗಳು. ಮಗಳ ಮದುವೆಗೆ, ಮಗನ ಓದಿಗೆ, ಗಂಡನ ಕಾಯಿಲೆಗೆ ದುಡ್ಡು ಕೇಳಲು ಹೋದರೆ ಸಾಮಾನ್ಯವಾಗಿ ಅವರು ಬರಿಗೈಯಲ್ಲಿ ಹಿಂದಕ್ಕೆ ಕಳುಹಿಸುವುದಿಲ್ಲ.
ರಾಜ್ಯದ ಬೊಕ್ಕಸಕ್ಕೆ ದ್ರೋಹವೆಸಗಿ ಅಕ್ರಮ ಗಣಿಗಾರಿಕೆಯಿಂದ ಸಂಪಾದನೆ ಮಾಡಿದ ನೂರಾರು ಕೋಟಿ ರೂಪಾಯಿ ಹಣದಲ್ಲಿ ಒಂದಷ್ಟು ಸಾವಿರ ರೂಪಾಯಿಗಳನ್ನು ನಮಗೆ ಹಂಚಲಾಗುತ್ತಿದೆ ಎಂದು ಈ ಮುಗ್ಧ ಮತದಾರರಿಗೆ ಗೊತ್ತಿಲ್ಲ.

ಗೊತ್ತಿದ್ದರೂ ಅದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. `ರಸ್ತೆ, ಶಾಲೆ, ಆಸ್ಪತ್ರೆ ಯಾರಿಗೆ ಬೇಕ್ರಿ? ಅವರು ಕೊಟ್ಟಿದ್ದಾರೆ, ನೀವೇನು ಕೊಡ್ತೀರಿ?~ ಎಂದು ಮತದಾರರೇ ಕೈಚಾಚಿ ನಿಂತರೆ, ಅಲ್ಲಿಗೆ ಪ್ರಜಾಪ್ರಭುತ್ವದ ತಿಥಿ. ಇದನ್ನೇ `ಬನಾನ ರಿಪಬ್ಲಿಕ್~ ಎನ್ನುವುದು.
ರಾಜ್ಯದ ಜಾತ್ಯತೀತ ಮತ್ತು ಅಹಿಂದ ನಾಯಕರು ಈಗ `ಬನಾನ ರಿಪಬ್ಲಿಕ್~ನ ಸಾಮ್ರಾಜ್ಯವನ್ನು `ಸ್ವಾಭಿಮಾನಿ ನಾಯಕ~ನ ನೇತೃತ್ವದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಅವಸರದಲ್ಲಿದ್ದಾರೆ. ಅವಸರದ ಕೆಲಸ ಯಾವತ್ತೂ ಅಪಘಾತಕ್ಕೆ ದಾರಿ ಎಂದು ಇವರಿಗೆ ಹೇಳುವವರು ಯಾರು?

Monday, December 5, 2011

ರಾಜಕೀಯದ ಎಂಜಲಲ್ಲಿ ಅಮಾಯಕರ ಉರುಳುಸೇವೆ

ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನ ಗೆರೆ ತೀರಾ ತೆಳ್ಳನೆಯದು. ನಂಬಿಕೆಯ ಹಾದಿಯಲ್ಲಿ ಹೋಗುತ್ತಿರುವವರು ತುಸು ಹೆಜ್ಜೆ ತಪ್ಪಿದರೆ ಮೂಢನಂಬಿಕೆಯ ಕಂದಕಕ್ಕೆ ಜಾರಿಬಿಡುವ ಅಪಾಯ ಇದೆ.

ನಂಬಿಕೆ ಪ್ರಜ್ಞಾಪೂರ್ವಕವಾದ ನಡವಳಿಕೆ, ಮೂಢನಂಬಿಕೆ ಪ್ರಜ್ಞೆ ಇಲ್ಲದೆ ಮಾಡಿಕೊಳ್ಳುವ ಅಪಘಾತ. ಆದುದರಿಂದಲೇ ನಂಬಿಕೆ ಎಂದರೆ ಬದುಕು, ಮೂಢನಂಬಿಕೆ ಎಂದರೆ ಒಮ್ಮಮ್ಮೆ  ಸಾವು ಕೂಡಾ.

ನಂಬಿಕೆಯ ಹಾದಿಯಲ್ಲಿ ನಡೆಯುವವರನ್ನು ಮೂಢನಂಬಿಕೆಯ ಗುಂಡಿಗೆ ತಳ್ಳಲು ಕಾಯುತ್ತಿರುವವರು ಎಲ್ಲ ಧರ್ಮಗಳಲ್ಲಿ ಇರುತ್ತಾರೆ, ಹಿಂದೂ ಧರ್ಮದಲ್ಲಿ ಹೊಟ್ಟೆಪಾಡಿಗಾಗಿ ಅಮಾಯಕರ ದಾರಿ ತಪ್ಪಿಸುವ  ಕೆಲಸವನ್ನು ಮಾಡುತ್ತಾ ಬಂದವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ.
ಖೊಟ್ಟಿ ಜ್ಯೊತಿಷಿಗಳು, ವಂಚಕ ಪೂಜಾರಿಗಳು, ಮಾಟ ಗಾರರು, ಮಂತ್ರವಾದಿಗಳು, ಕೈಮದ್ದು ಹಾಕುವವರು, ತಥಾಕಥಿತ ವಿದ್ವಾಂಸರು -ಇಂತಹವರ ದೊಡ್ಡ ವರ್ಗವೇ ಇದೆ. ಅವರಿಗಿಂತಲೂ ಅಪಾಯಕಾರಿಯಾದ ಹೊಸ ಪೀಳಿಗೆಯೊಂದು ಈಗ ಸೇರಿಕೊಂಡಿದೆ, ಇದು ರಾಜಕಾರಣಿಗಳದ್ದು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವುದು ನಂಬಿಕೆ-ಮೂಢನಂಬಿಕೆಗಳ ನಡುವಿನ ಸಂಘರ್ಷ ಅಲ್ಲವೇ ಅಲ್ಲ, ಅದು ಎಂಜಲು ರಾಜಕೀಯ. ರಕ್ತದ ರುಚಿಹತ್ತಿದ ಹುಲಿಯಂತೆ ಧರ್ಮದ ಹೆಸರಲ್ಲಿ ನಡೆಯುವ ವಿವಾದದ ರಾಜಕೀಯ ಲಾಭದ ರುಚಿ ಏನೆಂದು ಈ `ಎಂಜಲು ರಾಜಕೀಯ~ದಲ್ಲಿ ತೊಡಗಿರುವವರಿಗೆ ಗೊತ್ತಾಗಿಹೋಗಿದೆ.
ಅದಕ್ಕೆ ಹೀಗಾಗುತ್ತಿದೆ. `ಅಯ್ಯ ದಕ್ಷಿಣ ಕನ್ನಡದ ಬುದ್ಧಿವಂತರು ಹೀಗ್ಯಾಕೆ ಮತಾಂಧರಾಗಿ ಹೋದರು? ಎಂದು ಸಾಮಾನ್ಯವಾಗಿ ಅಚ್ಚರಿಪಡುತ್ತಿರುವವರಿಗೆ ಆ ಜಿಲ್ಲೆಯ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸದ ಅರಿವು ಸರಿಯಾಗಿಲ್ಲ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 75ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಮೂಲನಿವಾಸಿಗಳಾದ ಕೊರಗರು, ಮಲೆಕುಡಿಯರು, ಬಿಲ್ಲವರು, ಮೊಗವೀರರು, ಬಂಟರು, ಗೌಡರು ಯಾರೇ ಇರಲಿ,  ಅವರ‌್ಯಾರೂ ವೈದಿಕ ಸಂಸ್ಕೃತಿ-ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬಂದವರಲ್ಲ. ಅವರ ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಗುಡ್ಡಗಾಡು ಜನಾಂಗದ ಕೆಲವು ಗುಣಲಕ್ಷಣಗಳಿವೆ.

ಅಲ್ಲಿಯೂ ರಾಮ, ಕೃಷ್ಣ, ಶಿವನ ದೇವಾಲಯಗಳಿವೆ ನಿಜ, ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭೂತದ ಸಾನಗಳು, ನಾಗನ ಬನಗಳು, ಗರೋಡಿಗಳು ಇವೆ.
ಈ ಮೂಲ ನಿವಾಸಿಗಳ `ದೇವರು~ಗಳೇನೇ ಇದ್ದರೂ ಕೋಡ್ದಬ್ಬು, ಜುಮಾದಿ, ಪಂಜುರ್ಲಿ, ನಾಗಬ್ರಹ್ಮ, ಸಿರಿ, ಕೋಟಿ ಚೆನ್ನಯ, ಕಾಂತಬಾರೆ ಬುದಭಾರೆಗಳು. ಈ ಭೂತ-ದೈವ್ವಗಳೆಲ್ಲ ಅನ್ಯಾಯದ ವಿರುದ್ದ ಹೋರಾಡಿ ಹುತಾತ್ಮರಾದ ಹಿಂದಿನ ತಲೆಮಾರುಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರು. 
ಪ್ರತಿ ಊರಿಗೆ ಮಾತ್ರವಲ್ಲ ಪ್ರತಿ ಕುಟುಂಬಕ್ಕೂ ಒಂದು ಭೂತ, ನಾಗ ಇರುತ್ತದೆ. ಕಷ್ಟ ಬಂದಾಗ ಅದಕ್ಕೆ ಹರಕೆಹೊರುತ್ತಾರೆ, ಇಷ್ಟಾರ್ಥ ನೆರವೇರದಿದ್ದಾಗ ಮನೆಯವನಿಗೆ ಬೈದ ಹಾಗೆ ಬೈಯ್ಯುತ್ತಾರೆ, ಫಲಸಿಕ್ಕಿದಾಗ ಉಣ್ಣುವ, ತಿನ್ನುವ, ಉಡುವ ಎಲ್ಲವನ್ನೂ ಅರ್ಪಿಸಿ ಕಣ್ಣುತೇವ ಮಾಡಿಕೊಳ್ಳುತ್ತಾರೆ.
ಈಗ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿಗಳ ರೀತಿ ಈ ಭೂತಗಳು ಯಾವ ಕುಟುಂಬವನ್ನು ಒಡೆದಿಲ್ಲ, ದ್ವೇಷ ಬಿತ್ತಿಲ್ಲ, ಜಗಳ ತಂದು ಹಾಕಿಲ್ಲ. ಅವುಗಳು ನಿಜವಾದ ರಕ್ಷಕರು ಮತ್ತು ಕೌಟುಂಬಿಕ ಸಲಹೆಗಾರರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆಯುವ ಭೂತದ ಕೋಲದ ಕೊನೆಯ ಘಟ್ಟ ಬೆಳಗಿನ ಜಾವ ನಡೆಯುವ ಹರಕೆ ಕಾರ‌್ಯಕ್ರಮ. ಅಲ್ಲಿ ಊರಿನ ಜನ ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ತೋಡಿಕೊಂಡು ಭೂತ ನೀಡುವ ಅಭಯದಿಂದ ಪರಿಹಾರ ಪಡೆದುಕೊಳ್ಳುತ್ತಾರೆ.
ಕಾಯಿಲೆ ಬಿದ್ದವರು ಪಂಜುರ್ಲಿ ನೀಡುವ ಪ್ರಸಾದದಿಂದ `ಗುಣಮುಖ~ರಾಗುತ್ತಾರೆ, ಮಕ್ಕಳಾಗದ ದಂಪತಿಗೆ  ಕೋರ‌್ದಬ್ಬು ನೀಡುವ ಕರಿಗಂಧವನ್ನು ತಿಂದ ನಂತರ `ಮಕ್ಕಳಾಗುತ್ತವೆ~, ಮಗಳಿಗೆ ಮದುವೆಯಾಗಲು `ಸಂಬಂಧಕೂಡಿ~ ಬರುತ್ತವೆ.
ಕಚ್ಚಾಡಿಕೊಂಡ ಅಣ್ಣ-ತಮ್ಮಂದಿರು ಭೂತ ನಡೆಸಿದ ಪಂಚಾಯಿತಿಯಿಂದ ಒಂದಾಗುತ್ತಾರೆ, ಪರಊರಿಗೆ ಹೋದ ಮಕ್ಕಳು ಊರಿನ ಭೂತ ಹಾಕಿದ ಒಂದು ಬೆದರಿಕೆಯಿಂದ ಓಡಿ ಬಂದು ತಂದೆ-ತಾಯಿ ಕಾಲು ಹಿಡಿಯುತ್ತಾರೆ.
ಇನ್ನೂ ಬುದ್ಧಿ ಬಲಿಯದೆ ಇದ್ದ ಬಾಲ್ಯದ ದಿನಗಳಲ್ಲಿ ಇದು ಭೂತದ ಕಾರಣೀಕ ಎಂದು ಎಲ್ಲರಂತೆ ನಮ್ಮಂತವಹರೂ ತಿಳಿದುಕೊಂಡಿದ್ದೆವು. ಬುದ್ಧಿ ಬೆಳೆದ ಹಾಗೆ ಇದರ ಹಿಂದಿನ ಗುಟ್ಟುಗಳೆಲ್ಲ ಒಂದೊಂದಾಗಿ ಅರಿವಾಗತೊಡಗಿತ್ತು.
ಈಗಲೂ ಇದು ನಡೆಯುತ್ತಿದೆ. ಆದರೆ ಜನೋಪಕಾರಿಯಾದ ಮತ್ತು ಸಮಾಜಕ್ಕೆ ಅಪಾಯಕಾರಿಯಲ್ಲದ ಇಂತಹ ನಂಬಿಕೆಗಳ ಪೊಳ್ಳುತನವನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಯಾವ ವಿಚಾರವಾದಿಯೂ ಬಂದು ಇದನ್ನು ತಡೆಯುವುದಿಲ್ಲ, ಇದನ್ನು ಮೂಢನಂಬಿಕೆ ಎಂದು ಹೀಯಾಳಿಸುವುದಿಲ್ಲ.
ಯಾಕೆಂದರೆ ಅಲ್ಲಿ ಭಕ್ತರ ಶೋಷಣೆ ಇರುವುದಿಲ್ಲ. ಇಷ್ಟೆಲ್ಲ ಸೇವೆಗೆ ಭೂತ ಕೇಳುತಿದ್ದದ್ದು ಏನು? `ಒಂದು ಚೆಂಡು ಮಲ್ಲಿಗೆ~ ಒಂದು ಗೊನೆ ಎಳೆನೀರು, ಒಂದು ಹಾಳೆ ಪಿಂಗಾರ  ಇನ್ನೂ ಹೆಚ್ಚೆಂದರೆ ಇನ್ನೊಂದು ಕೋಲ-ನೇಮದ ಸೇವೆ. ಅಲ್ಲಿ ಶೋಷಣೆ ಇಲ್ಲ, ಯಾರ ಆತ್ಮಗೌರವವನ್ನೂ ಅದು ಕೆಣಕುವುದಿಲ್ಲ. ಭೂತದ ಪಾತ್ರಧಾರಿಯಾದ ದಲಿತ ಸಮುದಾಯಕ್ಕೆ ಸೇರಿದ ಪಂಬದ ಇಲ್ಲವೇ ನಲ್ಕೆಯವನ ಮುಂದೆ ಮೇಲ್ಜಾತಿ-ಕೆಳಜಾತಿ ಎನ್ನದೆ ಎಲ್ಲರೂ ಕೈಮುಗಿದು ತಲೆತಗ್ಗಿಸಿ ನಿಲ್ಲುತ್ತಾರೆ.
ಆದರೆ ಈ ಭೂತದ ಕೋಲ-ನೇಮಗಳು ಕೂಡಾ ಹಿಂದಿನಷ್ಟು ಸರಳವಾಗಿ ಉಳಿದಿಲ್ಲ, ಇವುಗಳು ವಾಣಿಜ್ಯೀಕರಣಗೊಳ್ಳಲು ತೊಡಗಿ ಬಹಳ ದಿನಗಳಾಗಿವೆ. ಪಾಡ್ದನ-ಭಜನೆ ಹಾಡುಗಳಿಗೆ, ತೆಂಬರೆ-ದುಡಿಗಳ ವಾದನಕ್ಕೆ ಹೆಜ್ಜೆ ಹಾಕುತ್ತಿದ್ದ ಭೂತಗಳು ಈಗ ಜನಪ್ರಿಯ ಚಿತ್ರಗೀತೆಗಳಿಗೆ ಕುಣಿಯತೊಡಗಿವೆ.

ವೇಷಭೂಷಣ, ಕೋಲದ ದೊಂಪ, ಅಲಂಕಾರ ಎಲ್ಲವೂ ಬದಲಾಗುತ್ತಾ ಬಂದಿದೆ. ಇದೇ ಹೊತ್ತಿಗೆ ಸರಿಯಾಗಿ  `ಅವಿಭಜಿತ ದಕ್ಷಿಣ ಕನ್ನಡ~ವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟವರು ಶೂದ್ರ ಸಮುದಾಯದ ಆರಾಧಾನ ಕೇಂದ್ರಗಳಾದ ಈ ಭೂತ, ದೈವ್ವ, ನಾಗಗಳ ಲೋಕವನ್ನು ಪ್ರವೇಶಿಸಿದ್ದಾರೆ.
ಕೋಲ ನಡೆಯುವ ಸ್ಥಳಗಳಲ್ಲಿ ಭಗವಧ್ವಜಗಳು, ಹಿಂದುಗಳ ಏಕತೆ ಸಾರುವ ಬ್ಯಾನರ್‌ಗಳು ರಾರಾಜಿಸತೊಡಗಿವೆ. ಈಗ  ಭೂತಗಳು ಕೂಡಾ ಒಮ್ಮಮ್ಮೆ ಹಿಂದುಗಳ ಏಕತೆ ಬಗ್ಗೆ ಭಾಷಣ ಮಾಡಿಬಿಡುವುದುಂಟು. ಮುಂಬೈ ಕಡೆಯಿಂದ ಹರಿದುಬರುತ್ತಿರುವ ಹಣದ ಹೊಳೆಯನ್ನು ಬಳಸಿಕೊಂಡು  ಸಾನ-ಗರೋಡಿ, ನಾಗಬನಗಳ ಜೀರ್ಣೋದ್ಧಾರ ನಡೆಯುತ್ತಿದೆ. ಅಮಾಯಕ ಭೂತ, ದೈವ್ವ, ನಾಗಗಳು ಕೂಡಾ ಯಾವುದೋ `ಅದೃಶ್ಯ ಶಕ್ತಿ~ಗಳ ಕೈಗೊಂಬೆಗಳಾಗಿ ಕುಣಿಯತೊಡಗಿವೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನದ ವೈಭವೀಕರಣ ಇದೇ ಕಾರ‌್ಯಸೂಚಿಯ ಮುಂದುವರಿದ ಭಾಗ. ಇತ್ತೀಚಿನ ವರ್ಷಗಳವರೆಗೂ ಧರ್ಮಸ್ಥಳದ ಮಂಜುನಾಥ ದರ್ಶನ ಮಾಡಲಿಕ್ಕೆ ಹೋದವರು ಸುಬ್ರಹ್ಮಣ್ಯಕ್ಕೆ ಹೋಗಿ ಬರುತ್ತಿದ್ದರು. ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಅದರ ಚಹರೆಯೇ ಬದಲಾಗಿ ಹೋಯಿತು.
ರವಿಶಾಸ್ತ್ರಿ, ಸಚಿನ ತೆಂಡೂಲ್ಕರ್ ಮೊದಲಾದ ಕ್ರಿಕೆಟಿಗರು, ಸಿನಿಮಾನಟರು, ಗಣ್ಯರು ದಂಡು ಕಟ್ಟಿ ಹೋಗತೊಡಗಿದರು. ಭ್ರಷ್ಟರಾಜಕಾರಣಿಗಳು ತಮ್ಮ ಪಾಪದ ಭಾರ ಇಳಿಸಿಕೊಳ್ಳಲು ಅಲ್ಲಿಗೆ ಬಂದು ತುಲಾಭಾರ ನಡೆಸತೊಡಗಿದರು. ಇವೆಲ್ಲವೂ ಆಕಸ್ಮಿಕವಾಗಿ ನಡೆದ ಬೆಳವಣಿಗೆಗಳಲ್ಲ, ಇಂತಹ `ಹುಚ್ಚುತನಗಳಲ್ಲಿಯೂ ಒಂದು ಕ್ರಮ~ ಇರುತ್ತದೆ.
ಇಂತಹ ಗೊಡ್ಡು ಆಚರಣೆಗಳನ್ನು ವಿರೋಧಿಸುತ್ತಿರುವವರೆಲ್ಲರೂ `ಹಿಂದೂ ವಿರೋಧಿ~ಗಳು ಮತ್ತು ಸಮರ್ಥಿಸುತ್ತಿರುವವರು `ಹಿಂದೂ ಧರ್ಮದ ರಕ್ಷಕ~ರು ಬ್ರಾಂಡ್ ಮಾಡುತ್ತಾ, ತಮ್ಮ ಬಳಗವನ್ನು ವಿಸ್ತರಿಸುತ್ತಾ ಹೋಗುವ ಹುನ್ನಾರ ಇದು. ಸಿದ್ಧಾಂತ ಮತ್ತು ಕಾರ‌್ಯಕ್ರಮಗಳ ಆಧಾರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ನಡೆಯಬೇಕಾದ ಹೋರಾಟ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ, ಭೂತಗಳ ಸಾನ, ನಾಗನ ಬನಗಳ ಅಂಗಳಗಳಲ್ಲಿ ನಡೆಯುತ್ತಿದೆ.
ಮಡೆಸ್ನಾನದ ಸಮೂಹಸನ್ನಿಯನ್ನು ಅರ್ಥಮಾಡಿಕೊಳ್ಳಲು ಕುಕ್ಕೆ ಸುಬ್ರಹ್ಮಣ್ಯ ಇರುವ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರವನ್ನು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ಅಧ್ಯಯನ ಮಾಡಿದರೆ ಸಾಕು. ಈ ಕ್ಷೇತ್ರವನ್ನು ಬಿಜೆಪಿಗೆ ಸೇರಿರುವ ಟಿ.
ಅಂಗರ ಅವರು ಕಳೆದ ಐದು ಅವಧಿಗಳಲ್ಲಿ ಪ್ರತಿನಿಧಿಸುತ್ತಾ ಬಂದಿದ್ದಾರೆ. ಊಳಿಗಮಾನ್ಯ ವ್ಯವಸ್ಥೆಯ ಬೇರುಗಳು ಇನ್ನೂ ಬಲವಾಗಿರುವ ಈ ಕ್ಷೇತ್ರದಲ್ಲಿ ಅಂಗರ ಅವರು ತಮ್ಮದೇ ಸಮುದಾಯದ ಜನ ಎಂಜಲೆಲೆ ಮೇಲೆ ಉರುಳಾಡತ್ತಿದ್ದರೂ ತಪ್ಪು ಎಂದು ಬಹಿರಂಗವಾಗಿ ಹೇಳಲಾರದಷ್ಟು ಅಸಹಾಯಕರು.

ಅವರು ಮಾತ್ರವಲ್ಲ ಅವರ ವಿರುದ್ಧ ಸ್ಪರ್ಧಿಸುತ್ತಾ ಬಂದ ಬೇರೆ ಪಕ್ಷದವರೂ ಮಡೆಸ್ನಾನದ ವಿರುದ್ಧ ತಪ್ಪಿಯೂ ಮಾತನಾಡುವುದಿಲ್ಲ.  ದಲಿತರೊಬ್ಬರು ಅಧ್ಯಕ್ಷರು ಮತ್ತು ಹಿಂದುಳಿದ ಜಾತಿ ನಾಯಕರೊಬ್ಬರು ವಿರೋಧಪಕ್ಷದ ನಾಯಕರಾಗಿರುವ ರಾಜ್ಯ ಕಾಂಗ್ರೆಸ್ ವಹಿಸಿರುವ ಮೌನಕ್ಕೆ ಏನನ್ನಬೇಕು?
ವೈದ್ಯರು, ಆಸ್ಪತ್ರೆ, ಆಧುನಿಕ ಔಷಧಿಗಳ್ಯಾವುದೂ ಇಲ್ಲದ ಕಾಲದಲ್ಲಿ ಅಸಹಾಯಕ ಜನ ಇಂತಹ ನಂಬಿಕೆಗಳನ್ನು ಹೊಂದಿರಬಹುದು. ಈಗಲೂ ಹಳ್ಳಿಗಳಲ್ಲಿ ಜ್ವರಬಂದರೆ ತಾಯತ ಕಟ್ಟುವ, ಮಂತ್ರಹಾಕುವ `ಚಿಕಿತ್ಸೆ~ ನೀಡಲಾಗುತ್ತದೆ.
ಇವುಗಳ ಮೇಲಿನ ನಂಬಿಕೆಯಿಂದ ಹುಟ್ಟುವ ಆತ್ಮವಿಶ್ವಾಸ ಸಣ್ಣ-ಪುಟ್ಟರೋಗಗಳನ್ನು ಗುಣಪಡಿಸುತ್ತದೆ ಕೂಡಾ. ಆದರೆ ಇದನ್ನು ಸಮರ್ಥಿಸಿಕೊಳ್ಳಲಾದೀತೇ? ಎಂಜಲೆಲೆ ಯಾರದ್ದೇ ಇರಲಿ ಅದರಲ್ಲಿ ಬೇಕಾದರೆ ಉಂಡವರೇ ಉರುಳಾಡಲಿ, ಆಗಲೂ ಅದು ತಪ್ಪು. ಎಂಜಲು ಮೈಗೆ ಅಂಟುವುದರಿಂದ ರೋಗ ಗುಣವಾಗುವುದು ಒತ್ತಟ್ಟಿಗಿರಲಿ ರೋಗ ಅಂಟಿಕೊಳ್ಳದಿದ್ದರೆ ಸಾಕು.

ಯಾಕೆಂದರೆ ಎಂಜಲಿನ ಮೂಲಕ ಹರಡುವ ರೋಗಗಳೂ ಇವೆ. ಉಡಾಫೆ ಮಾತುಗಳಿಂದ ಆಗಾಗ ಮನರಂಜನೆ ನೀಡುತ್ತಿರುವ ಸಚಿವ ರೇಣುಕಾಚಾರ್ಯರಂತಹವರು ಇದನ್ನು ಸಮರ್ಥಿಸಿ ಮಾತನಾಡಿದ್ದರೆ ನಕ್ಕು ಸುಮ್ಮನಿರಬಹುದಿತ್ತು.

ಆದರೆ ವೈದ್ಯಕೀಯ ವಿಜ್ಞಾನವನ್ನು ವ್ಯಾಸಂಗ ಮಾಡಿರುವ ಡಾ.ವಿ.ಎಸ್.ಆಚಾರ್ಯ ಅವರಂತಹವರೇ ಸಮರ್ಥನೆಗೆ ಇಳಿದುಬಿಟ್ಟರೇ? `ಎಂಜಲೆಲೆ ಮೇಲೆ ಉರುಳಾಡುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ~ ಎಂದು ಭಾರತೀಯ ವೈದ್ಯಕೀಯ ಮಂಡಳಿ ಮುಂದೆ ಹೇಳುವ ಧೈರ್ಯ ಡಾ.ಆಚಾರ್ಯರಲ್ಲಿದೆಯೇ? ಇಷ್ಟು ಸುಲಭದ ಚಿಕಿತ್ಸೆಯ ಉಪಾಯಗಳಿದ್ದರೆ ಜನರ ತೆರಿಗೆಯ ಕೋಟ್ಯಂತರ ರೂಪಾಯಿಗಳನ್ನು ನುಂಗಿಹಾಕುತ್ತಿರುವ ಆರೋಗ್ಯ ಇಲಾಖೆ, ಒಬ್ಬರು ಸಚಿವರು, ಸರ್ಕಾರಿ ಆಸ್ಪತ್ರೆಗಳು, ವೈದ್ಯರು, ವೈದ್ಯಕೀಯ ಕಾಲೇಜುಗಳು ಯಾಕೆ ಬೇಕು? ಆಚಾರ್ಯರು ಯಾಕೆ ಎಂಬಿಬಿಎಸ್ ಓದಿ ವೈದ್ಯರಾಗಬೇಕಿತ್ತು?
ಬೆತ್ತಲೆಸೇವೆ, ದೇವದಾಸಿ ಪದ್ಧತಿ, ಸತಿಸಹಗಮನ, ಅಜಲು ಪದ್ಧತಿ ಮೊದಲಾದವುಗಳೆಲ್ಲ ಧರ್ಮದ ಪೋಷಾಕು ತೊಟ್ಟ ನಂಬಿಕೆಯ ಹೆಸರಲ್ಲಿಯೇ ನಡೆಯುತ್ತಿದ್ದ ಕಂದಾಚಾರಗಳು. ಅವುಗಳನ್ನು ನಡೆಸುತ್ತಿದ್ದವರ‌್ಯಾರೂ ಸರ್ಕಾರಕ್ಕೆ ಅರ್ಜಿ ಹಾಕಿ ನಿಷೇಧ ಹೇರಲು ಕೋರಿಲ್ಲ.
ಜಾಗೃತ ಸಮುದಾಯದ ಒತ್ತಡಕ್ಕೆ ಮಣಿದು ಸರ್ಕಾರವೇ ನಿಷೇಧಿಸಿದ್ದು. ಜನಮತಗಣನೆ ನಡೆಸಿ ಇಂತಹ ಮೂಢನಂಬಿಕೆಗಳನ್ನು ತೊಡೆದುಹಾಕಲು ಸಾಧ್ಯವೇ ಇಲ್ಲ, ಅಂತಹ ನಿದರ್ಶನಗಳೂ ದೇಶದಲ್ಲೆಲ್ಲೂ ಇಲ್ಲ. ಸಮಾಜದಲ್ಲಿ ಅಸ್ಪೃಶ್ಯತೆ ಕಡಿಮೆಯಾಗಿರುವುದು ಅದನ್ನು ಆಚರಿಸುವವರಲ್ಲಿ ಉಂಟಾಗಿರುವ ಜ್ಞಾನೋದಯದಿಂದಲೇ ಅಲ್ಲ, ಅದಕ್ಕೆ ಮುಖ್ಯ ಕಾರಣ ಸರ್ಕಾರ ಜಾರಿಗೆ ತಂದಿರುವ ಕಾನೂನು. ಮೂಢನಂಬಿಕೆಗಳ ವಿರುದ್ಧದ ಹೋರಾಟವನ್ನು ಜಾಗೃತ ಜನಸಮುದಾಯ ಮತ್ತು ಕಾನೂನು ಜತೆಜತೆಯಾಗಿ ನಡೆಸಬೇಕಾಗುತ್ತದೆ.
ಭಾರತದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದುದು ಅದಕ್ಕೆ ಎದುರಾಗಿ ಬಂದ ಸುಧಾರಣಾವಾದಿ ಚಳವಳಿಗಳ ಪರಂಪರೆ. ಬುದ್ಧ ಬಸವನಿಂದ ಪ್ರಾರಂಭಗೊಂಡು ಜ್ಯೋತಿಬಾ ಪುಲೆ, ನಾರಾಯಣಗುರು, ಪೆರಿಯಾರ್, ಅಂಬೇಡ್ಕರ್, ಗಾಂಧಿ, ಲೋಹಿಯಾ, ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ ಮೊದಲಾದವರ  ವರೆಗೆ ನಡೆದುಕೊಂಡು ಬಂದ ಈ ಚಳವಳಿಗಳಲ್ಲಿ ಪ್ರತಿಭಟನೆಯ ಭಿನ್ನ ಅಭಿವ್ಯಕ್ತಿಗಳನ್ನು ಕಾಣಬಹುದು.
ಧರ್ಮ ಸಮಾಜವನ್ನು ಜಡಗೊಳಿಸಿದಾಗೆಲ್ಲ ಅದಕ್ಕೆ ಚಲನಶೀಲತೆಯನ್ನು ತಂದುಕೊಟ್ಟದ್ದು ಈ ಚಳುವಳಿಗಳು. ಸನಾತನ ಎಂದು ಹೇಳಿಕೊಳ್ಳುವ ಹಿಂದೂ ಧರ್ಮ ಉಳಿದುಕೊಂಡದ್ದೇ ಈ ಸುಧಾರಣಾವಾದಿ ಚಳವಳಿಗಳು ಕೆಟ್ಟದ್ದನ್ನು ಕಳಚಿಕೊಂಡು ಒಳ್ಳೆಯದನ್ನು ಪಡೆದುಕೊಂಡು ಬೆಳೆಯಲು ನೀಡುತ್ತಾ ಬಂದ ಒತ್ತಾಸೆಯ ಮೂಲಕ. `ತಾಲೀಬಾನಿಕರಣ~ದ ಮೂಲಕ ಧರ್ಮ ಬೆಳೆಯಲಾರದು.
ಇದು ನಡೆಯದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ಸಿ.ಆರ್.ರಾಜಗೋಪಾಲಾಚಾರಿ ಅವರು ಕೇರಳದಲ್ಲಿ ನಾರಾಯಣಗುರು ಚಳವಳಿ ನಡೆಯುತ್ತಿದ್ದ ಕಾಲದಲ್ಲಿ ತಿರುವಾಂಕೂರು ಸಂಸ್ಥಾನದ ದಿವಾನರಿಗೆ ಬರೆದ ಪತ್ರದಲ್ಲಿ ಉತ್ತರ ಇದೆ. ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದುದನ್ನು ಕಂಡ ರಾಜಗೋಪಾಲಾಚಾರಿ ಅವರು ದಿವಾನರಿಗೆ ಪತ್ರಬರೆದು `ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದೆ ಇದ್ದರೆ ಕೇರಳದಲ್ಲಿ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರೈಸ್ತಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು~ ಎಂದು ಎಚ್ಚರಿಸಿದ್ದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂ ಧರ್ಮದಿಂದ ಮತಾಂತರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ದಾಂದಲೆ ಮಾಡುತ್ತಿರುವವರೇ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದೇ `ಹಿಂದೂ~ಗಳನ್ನು  ಎಂಜಲೆಲೆಯಲ್ಲಿ ಉರುಳಾಡಿಸುತ್ತಿರುವುದು ಎಂತಹ ವ್ಯಂಗ್ಯ ಅಲ್ಲವೇ?

Monday, November 28, 2011

ನಾಯಕನೊಬ್ಬ ಖಳನಾಯಕನಾಗುತ್ತಾ ಹೋದ ದುರಂತ ಕತೆ

ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು ಭ್ರಷ್ಟರೆನಿಸಿಕೊಂಡು, ಕಳಂಕ ಹಚ್ಚಿಕೊಂಡು ಜನಪ್ರಿಯತೆ ಕಳೆದುಕೊಳ್ಳುವುದು ಸಾಮಾನ್ಯ. ಅಧಿಕಾರದಲ್ಲಿದ್ದಾಗ ಜನಪ್ರಿಯರಾಗಿದ್ದವರು ವಿರೋಧಪಕ್ಷದಲ್ಲಿದ್ದಾಗ ಹೆಸರು ಕೆಡಿಸಿಕೊಂಡು ಜನರ ದೂಷಣೆಗೊಳಗಾಗುವುದು ಅಷ್ಟೇನೂ ಸಾಮಾನ್ಯ ಅಲ್ಲ.
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎರಡನೆಯ `ಅಸಾಮಾನ್ಯ~ರ ಗುಂಪಿಗೆ ಸೇರಿದವರು. ಮುಖ್ಯಮಂತ್ರಿಯಾಗಲು ತಂದೆಯ ವಿರುದ್ಧವೇ `ಬಂಡಾಯ~ ಎದ್ದವರು, ತಮ್ಮ ಪಕ್ಷದ ಜಾತ್ಯತೀತ ನೀತಿಯನ್ನೇ ಗೇಲಿ ಮಾಡಿದ್ದವರು  ಮತ್ತು ತಮ್ಮ ಪಕ್ಷ ವಿರೋಧಿಸುತ್ತಾ ಬಂದ ಬಿಜೆಪಿ ಜತೆಗೇ ಕೈಜೋಡಿಸಿದ್ದವರು ಕುಮಾರಸ್ವಾಮಿ.
ಮುಖ್ಯಮಂತ್ರಿಯಾದ ನಂತರ ಈ ಮೂರು ಕಾರಣಗಳಿಗಾಗಿ ಅವರು ಜನಪ್ರಿಯತೆ ಕಳೆದುಕೊಳ್ಳಬೇಕಿತ್ತು. ಕುಮಾರಣ್ಣನ ನಡೆ ಬಗ್ಗೆ ದೊಡ್ಡಗೌಡರ ಬೆಂಬಲಿಗರು ಅಸಮಾಧಾನಗೊಳ್ಳಬೇಕಿತ್ತು.

ಅವರ ಆತ್ಮವಂಚನೆಯ ಮಾತಿನ ಬಗ್ಗೆ ಜನ ಅವರನ್ನು ದೂಷಿಸಬೇಕಿತ್ತು. ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಆ ಪಕ್ಷದ ವಿರೋಧಿಗಳೆಲ್ಲ ಜೆಡಿ (ಎಸ್)ವಿರೋಧಿಗಳಾಗಬೇಕಿತ್ತು.
ಅಂತಹದ್ದೇನೂ ಆಗಲೇ ಇಲ್ಲ, ಅವರ ಪಕ್ಷದ  ಕಾರ್ಯಕರ್ತರು ಮತ್ತು ರಾಜ್ಯದ ಜನತೆ ಕುಮಾರಸ್ವಾಮಿ ಬಗ್ಗೆ ಉದಾರವಾಗಿ ನಡೆದುಕೊಂಡಿದ್ದರು. ಅವರು ಇಪ್ಪತ್ತು ತಿಂಗಳ ಅವಧಿಯ ಜನಪ್ರಿಯ ಮುಖ್ಯಮಂತ್ರಿ.
ಅಭೂತಪೂರ್ವ ಸಾಧನೆ ಮಾಡಿ ಅವರು ಈ ಜನಪ್ರಿಯತೆ ಗಳಿಸಿದ್ದಲ್ಲ. ದ್ವೇಷಾಸೂಯೆ ಇಲ್ಲದ ಅವರ ಆ ಕಾಲದ ನಡವಳಿಕೆ, ಸಾಮಾನ್ಯ ಜನರ ಜತೆಗೆ ಅವರು ಒಂದಾಗುತ್ತಿದ್ದ ರೀತಿ, ತಪ್ಪು ಮಾತನಾಡಿದರೂ ಅದನ್ನು ತಿದ್ದಿಕೊಳ್ಳುತ್ತಿದ್ದ ವಿನಯವಂತಿಕೆ, ಜನಪರವಾದ ಕೆಲಸಗಳನ್ನು ಮಾಡಿ ಜನಪ್ರೀತಿ ಗಳಿಸಬೇಕೆಂಬ ಅವರ ತುಡಿತ -ಇವೆಲ್ಲವೂ ಅವರನ್ನು ಜನಪ್ರಿಯ ಮಾಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ಮುಖ್ಯಮಂತ್ರಿಗಳೆನಿಸಿದವರು ಇಬ್ಬರು. ಒಬ್ಬರು ರಾಮಕೃಷ್ಣ ಹೆಗಡೆ, ಇನ್ನೊಬ್ಬರು ಎಸ್.ಎಂ.ಕೃಷ್ಣ. ಶಿಕ್ಷಣ, ಓದು, ಅನುಭವ, ಚಿಂತನೆ, ಸಂಪರ್ಕ- ಇವು ಯಾವುದರಲ್ಲಿಯೂ ಕುಮಾರಸ್ವಾಮಿಯವರನ್ನು ಅವರಿಬ್ಬರಿಗೆ ಹೋಲಿಸಲಾಗದು.
ಅವರಿಬ್ಬರೂ ನಗರದ `ಜಂಟಲ್‌ಮೆನ್~ಗಳಾದರೆ, ಕುಮಾರಸ್ವಾಮಿ `ಹಳ್ಳಿ ಹೈದ~. ಜಾಗತೀಕರಣದ ನಂತರದ ದಿನಗಳಲ್ಲಿ ಆಳುವ ದೊರೆಗಳೆಲ್ಲ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ತಮ್ಮ ವಿರುದ್ಧವೇ ಸಂಚು ಮಾಡುತ್ತಿದ್ದಾರೆ ಎಂಬ ಕೊರಗು ಮತ್ತು ಆತಂಕದಲ್ಲಿರುವ ಹಳ್ಳಿಜನರಲ್ಲಿ ಕುಮಾರಸ್ವಾಮಿ `ನಮ್ಮವ~ನೆಂಬ ಭಾವನೆ ಹುಟ್ಟಿಸಿದ್ದು ನಿಜ.
ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರತೀಕಾರ ಮತ್ತು ಸಂಘರ್ಷದ ರಾಜಕೀಯಕ್ಕೆ ಹೆಸರಾದ ದೇವೇಗೌಡರ ನಡವಳಿಕೆಗೆ ವಿರುದ್ಧವಾದ ಸ್ನೇಹಶೀಲ ಗುಣವೂ ಅವರನ್ನು ಜನಪ್ರಿಯ ಮಾಡಿತ್ತು.
ಜನ ಮೆಚ್ಚಿದ್ದು ಕುಮಾರಸ್ವಾಮಿ ದೇವೇಗೌಡರ ಮಗ ಎಂಬ ಕಾರಣಕ್ಕಲ್ಲ, ಮಗನಾದರೂ ಅವರ ಹಾಗೆ ಇಲ್ಲ ಎನ್ನುವ ಕಾರಣಕ್ಕೆ. ಇದರಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಎಂದೂ ದೇವೇಗೌಡರ ಸಭೆಗೆ ಸೇರದಷ್ಟು ಜನ ಕುಮಾರಸ್ವಾಮಿ ಸಭೆಗೆ ಸೇರುತ್ತಿದ್ದರು.
ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡದೆ, ದೀರ್ಘವಾದ ರಾಜಕೀಯ ಅನುಭವವೂ ಇಲ್ಲದೆ ಕ್ಷಿಪ್ರಗತಿಯಲ್ಲಿ ಇಷ್ಟೊಂದು ಜನಪ್ರಿಯರಾದ ಮುಖ್ಯಮಂತ್ರಿಯನ್ನು ಕರ್ನಾಟಕ ಎಂದೂ ಕಂಡಿಲ್ಲ.
ರಾಜ್ಯದ ಬಹಳಷ್ಟು ಪ್ರಜ್ಞಾವಂತರು ಕುಮಾರಸ್ವಾಮಿಯವರಲ್ಲಿ ಭವಿಷ್ಯದ ನಾಯಕನನ್ನು ಕಂಡಿದ್ದರು.
ಇಂತಹ ಮುಖ್ಯಮಂತ್ರಿಯಾಗಿದ್ದ ಎಚ್. ಡಿ.ಕುಮಾರಸ್ವಾಮಿಯವರ ಬಗ್ಗೆ ಈಗ ಯಾರಾದರೂ ಜನಾಭಿಪ್ರಾಯ ಸಂಗ್ರಹ ಮಾಡಿದರೆ ಬಹುಶಃ  ಅವರ ಜನಪ್ರಿಯತೆಯ ಸೂಚ್ಯಂಕ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗಿಂತಲೂ ಕೆಳಗಿರಬಹುದು.
ಹಾಲಿ ಆಗಿದ್ದಾಗ ಶಿಖರದಲ್ಲಿದ್ದ ಜನಪ್ರಿಯತೆ ಮಾಜಿ ಆದ ಮೇಲೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಕರ್ನಾಟಕದ ಆಡಳಿತಾರೂಢರು ದೇಶದಲ್ಲಿಯೇ ಅತೀ ಭ್ರಷ್ಟರು ಎಂಬ ಅಭಿಪ್ರಾಯ ಇರುವ ಕಾಲದಲ್ಲಿ ವಿರೋಧಪಕ್ಷದ ನಾಯಕನೊಬ್ಬ ಈ ರೀತಿ ಜನಪ್ರಿಯತೆ ಕಳೆದುಕೊಳ್ಳುವುದು ಭಾರತದ ರಾಜಕಾರಣದಲ್ಲಿಯೇ ಅಪರೂಪದ ಪ್ರಸಂಗ.
ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗೆಲ್ಲ `ಅಪ್ಪನಿಗಿಂತ ಮಗ ವಾಸಿ~ ಎನ್ನುತ್ತಿದ್ದವರೇ ಈಗ `ಮಗನಿಗಿಂತ ಅಪ್ಪನೇ ವಾಸಿ~ ಎನ್ನುವಂತಾಗಿದೆ.
ಯಾಕೆ ಹೀಗಾಯಿತು?
ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟನೆಂದು ಅನಿಸಿಕೊಂಡಾಗಲೂ ಯಾರೂ ಕುಮಾರಸ್ವಾಮಿಯವರನ್ನು ಅಧಿಕಾರಲಾಲಸಿ ಎಂದು ದೂರಲಿಲ್ಲ, `ಅಪ್ಪನ ಹಟಕ್ಕೆ ಕಟ್ಟುಬಿದ್ದು ಅವರು ಹೀಗೆ ಮಾಡಬೇಕಾಯಿತು~ ಎಂದು ಅನುಕಂಪ ವ್ಯಕ್ತಪಡಿಸಿದವರೇ ಹೆಚ್ಚು.
ಆದರೆ ತಮ್ಮ ಬಗ್ಗೆ ಜನತೆ ಹೊಂದಿದ್ದ ಅಭಿಪ್ರಾಯ ತಪ್ಪೆನ್ನುವುದನ್ನು ಕುಮಾರಸ್ವಾಮಿಯವರೇ ನಂತರದ ದಿನಗಳಲ್ಲಿ ಸಾಬೀತುಪಡಿಸುತ್ತಾ ಬಂದಿದ್ದಾರೆ.
ಅಧಿಕಾರ ಹಸ್ತಾಂತರ ಮಾಡದೆ ಇದ್ದಾಗ ಅವರನ್ನು ಅಧಿಕಾರ ಲಾಲಸಿ ಎಂದು ಹೇಳದವರು ಈಗ ಅದನ್ನು ಹೇಳುತ್ತಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕನಾಗಿ ಅವರು ನಡೆದುಕೊಳ್ಳುತ್ತಿರುವ ರೀತಿ ಕಾರಣ.
ಅಧಿಕಾರದಲ್ಲಿದ್ದವರನ್ನು ಕೆಳಗಿಳಿಸುವುದೇ ವಿರೋಧಪಕ್ಷಗಳ ಕೆಲಸ ಅಲ್ಲ, ಆ ರೀತಿಯ ವರ್ತನೆಯನ್ನು ಐದು ವರ್ಷಗಳ ಅವಧಿಗೆ ಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಜನ ಇಷ್ಟಪಡುವುದಿಲ್ಲ.
ವಿರೋಧಪಕ್ಷಗಳು ಆಡಳಿತಾರೂಢರನ್ನು ಎಚ್ಚರಿಸಬೇಕು, ಟೀಕಿಸಬೇಕು ಮತ್ತು ತಿದ್ದುವ ಪ್ರಯತ್ನ ಮಾಡಬೇಕು. ಮಿತಿ ಮೀರಿದರೆ ಮಾತ್ರ ಅಧಿಕಾರದಿಂದ ಕೆಳಗಿಳಿಸುವ ಕಸರತ್ತಿಗೆ ಕೈ ಹಾಕಬೇಕು.
ಅಧಿಕಾರಕ್ಕೆ ಬಂದ ಬಿಜೆಪಿಯವರನ್ನು ಸಾವರಿಸಿಕೊಳ್ಳಲು ಬಿಡದೆ ಕುಮಾರಸ್ವಾಮಿ ಅವರ ಮೇಲೆ ದಾಳಿಗೆ ಇಳಿದಿದ್ದರು. ಸರ್ಕಾರ ರಚನೆಯ ಮೊದಲೇ ಅದನ್ನು ಉರುಳಿಸುವ ಕಾರ್ಯಾಚರಣೆಯನ್ನು ಅವರು ಪ್ರಾರಂಭಿಸಿದ್ದರು.
ಪುಕ್ಕಲತನದಿಂದಲೋ, ಒಳ್ಳೆಯತನದಿಂದಲೋ ಕಾಂಗ್ರೆಸ್ ನಾಯಕರು ಆಗ ಅವರ ಜತೆ ಕೈಜೋಡಿಸದೆ ಇದ್ದ ಕಾರಣ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಅದರ ನಂತರ ಮತ್ತೆ ಬಿಜೆಪಿ ಭಿನ್ನಮತೀಯರನ್ನು ಅವರು ಎತ್ತಿಕಟ್ಟಿದರು, ಹೋಟೆಲ್, ರೆಸಾರ್ಟ್ ವಾಸ, ತೀರ್ಥಯಾತ್ರೆ ಎಂದು ಊರೆಲ್ಲ ಸುತ್ತಾಡಿಸಿದರು.
ಕುಮಾರಸ್ವಾಮಿಯವರ ಯಾವ ಪ್ರಯತ್ನವೂ ಜವಾಬ್ದಾರಿಯುತ ವಿರೋಧಪಕ್ಷದ ನಾಯಕ ಮಾಡಬೇಕಾದ ಎಚ್ಚರಿಸುವ, ಟೀಕಿಸುವ ಇಲ್ಲವೇ ತಿದ್ದುವ ಪ್ರಯತ್ನ ಆಗಿರಲಿಲ್ಲ. ಸರ್ಕಾರ ಉರುಳಿಸುವುದೇ ಆಗಿತ್ತು. ಅಲ್ಲಿಂದಲೇ ಅವರ ಜನಪ್ರಿಯತೆ ಕುಸಿಯತೊಡಗಿದ್ದು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡತೊಡಗಿದ ನಂತರದ ದಿನಗಳಲ್ಲಿ ಕುಮಾರಸ್ವಾಮಿಯವರು ಇನ್ನಷ್ಟು ತ್ವರಿತಗತಿಯಲ್ಲಿ ಜನಪ್ರಿಯತೆ ಕಳೆದುಕೊಳ್ಳತೊಡಗಿದರು.
ಅವರು ಮಾಡಿದ ಆರೋಪಗಳೆಲ್ಲವೂ ನಿರಾಧಾರವಾದುವೇನಲ್ಲ. ಅವುಗಳಲ್ಲಿ ಕೆಲವು ಆರೋಪಗಳು ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರನ್ನು ಕಷ್ಟಕ್ಕೆ ಸಿಲುಕಿಸಲೂಬಹುದು.
ಆದರೆ ಆರೋಪಗಳನ್ನು ಮಾಡುವವರು ಕಳಂಕಿತರಾಗಿದ್ದಾಗ ಮಾಡಿದ ಆರೋಪಗಳು ದುರ್ಬಲವಾಗುತ್ತವೆ. ಜನ ಆರೋಪ ಮಾಡುವವರ ಪ್ರಾಮಾಣಿಕತೆಯನ್ನು ಪ್ರಶ್ನಿಸತೊಡಗುತ್ತಾರೆ.
ಬಹುಶಃ ಕುಮಾರಸ್ವಾಮಿಯವರು ಬಯಲುಗೊಳಿಸಿದ ಹಗರಣಗಳನ್ನು ಬೇರೆ ಯಾರಾದರೂ ಹೊರಹಾಕಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು.
ಆದರೆ ಕುಮಾರಸ್ವಾಮಿಯವರು ತಾವು ಪ್ರಾಮಾಣಿಕರು, ಶುದ್ಧಹಸ್ತರು ಎಂದು ಎಷ್ಟೇ ಎದೆಬಡಿದುಕೊಂಡರೂ ರಾಜ್ಯದ ಜನತೆ ಹಾಗೆಂದು ತಿಳಿದಿಲ್ಲ. ಕಾನೂನಿನ ಬಲೆಯಲ್ಲಿ ಅವರನ್ನು ಕೆಡವಿಹಾಕುವುದು ಸಾಧ್ಯವಾಗದೆ ಹೋಗಬಹುದು.
ಆದರೆ ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ ಅವರ ಮತ್ತು ಕುಟುಂಬದ ಆಸ್ತಿ ಇದ್ದಕ್ಕಿದ್ದಂತೆ ವೃದ್ಧಿಸಿದ್ದನ್ನು ನೈತಿಕವಾಗಿ ಸಮರ್ಥಿಸಿಕೊಳ್ಳುವುದು ಅವರಿಗೂ ಕಷ್ಟ.
ಇದರಿಂದಾಗಿ ಯಡಿಯೂರಪ್ಪನವರಿಗೂ ಕಳಂಕಿತ ಕುಮಾರಸ್ವಾಮಿಯವರನ್ನು ಎದುರಿಸುವುದು ಸುಲಭವಾಗಿ ಹೋಯಿತು. ದಿನ ಕಳೆದಂತೆ ಜನ ಕೂಡಾ `ಇವರೇನು ಸಾಚಾನಾ?~ ಎಂದೇ ಮಾತನಾಡಿಕೊಳ್ಳತೊಡಗಿದರು.
ಇದರಿಂದಾಗಿಯೇ ಯಡಿಯೂರಪ್ಪನವರ ಪದಚ್ಯುತಿಗೆ ಅವರು ತೋರಿದ ಆತುರವನ್ನು ಕಂಡ ಜನ ಅವರನ್ನು `ಅಧಿಕಾರ ಲಾಲಸಿ~ ಎಂದು ಕರೆಯುವಂತಾಯಿತು.
ಅದಕ್ಕೆ ಸರಿಯಾಗಿ ಲೋಕಾಯುಕ್ತರು ಕೂಡಾ ತಮ್ಮ ವರದಿಯಲ್ಲಿ ಅವರ ಅಧಿಕಾರ ಕಾಲದ ಗಣಿ ಅಕ್ರಮಗಳನ್ನು ಬಯಲಿಗೆಳೆದರು. ಯಾವಾಗ ಆರೋಪಿಯ ಕಟಕಟೆಯಲ್ಲಿ ತಾನು ಕೂಡಾ ಯಡಿಯೂರಪ್ಪನವರ ಜತೆಯಲ್ಲಿ ನಿಲ್ಲಬೇಕಾಯಿತೋ, ಅದರ ನಂತರ ಅವರ ಮಾತಿನ ವರಸೆ ಬದಲಾಗಿಹೋಯಿತು.

`ಜೈಲಿಗೆ ಕಳುಹಿಸಿಯೇ ಸಿದ್ಧ~ ಎಂದು ತೊಡೆತಟ್ಟುತ್ತಿದ್ದ ಅವರು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ಬಗ್ಗೆ ಅನುಕಂಪದ ಮಳೆ ಹರಿಸತೊಡಗಿದರು.

ಉಕ್ಕಿ ಹರಿದ ಅನುಕಂಪ ಅವರನ್ನು ಪರಪ್ಪನ ಅಗ್ರಹಾರದ ವರೆಗೂ ಕರೆದುಕೊಂಡು ಹೋಯಿತು. ಅದರ ನಂತರ ಇಬ್ಬರು ಆರೋಪಿಗಳು ಕೂಡಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ಮೇಲೆ ನಾಲಿಗೆ ಸಡಿಲ ಬಿಟ್ಟು ದಾಳಿ ಮಾಡತೊಡಗಿದರು.
ನ್ಯಾ.ಹೆಗ್ಡೆ ವಿರುದ್ದ ಮಾಡಿದ ಆಧಾರರಹಿತ ಆರೋಪಗಳು ಬೂಮರಾಂಗ್ ಆಗಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಜನ ಚರ್ಚೆ ನಡೆಸುವಂತಾಯಿತು.

ಆದರೆ ಇದ್ಯಾವುದರಿಂದಲೂ ಕುಮಾರಸ್ವಾಮಿಯವರು ಬುದ್ಧಿ ಕಲಿತಂತೆ ಇಲ್ಲ. ಸಹವಾಸ ದೋಷವೋ, ಸುಲಭದಲ್ಲಿ ಅನುಭವಿಸಿದ ಅಧಿಕಾರದ ಮೇಲೆ ಹುಟ್ಟಿದ ಲಾಲಸೆಯೋ, ಕನಸುಗಳು ಭಗ್ನಗೊಂಡ ಕಾರಣದಿಂದ ಉಂಟಾದ ಹತಾಶೆಯೋ -ರಾಜ್ಯದ ರಾಜಕೀಯದಲ್ಲಿ ಎತ್ತರಕ್ಕೆ ಏರಬಹುದೆಂದು ಜನ ನಿರೀಕ್ಷಿಸಿದ್ದ ಕುಮಾರಸ್ವಾಮಿಯವರು ಜಾರಿ ಬೀಳುತ್ತಿದ್ದಾರೆ.
ಈಗ ರಾಜಕೀಯ ಆತ್ಮವಂಚನೆಯ ಕ್ಲೈಮ್ಯಾಕ್ಸ್ ಎಂಬಂತೆ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶ್ರಿರಾಮುಲು ಅವರಿಗೆ ಕುಮಾರಸ್ವಾಮಿ ಬೆಂಬಲ ಘೋಷಿಸಿದ್ದಾರೆ.
ಯಾರು ಈ ಶ್ರಿರಾಮುಲು? ಲೋಕಾಯುಕ್ತರ ವರದಿ ಪ್ರಕಾರ ಯಡಿಯೂರಪ್ಪ ಅವರಂತೆ ಶ್ರಿರಾಮುಲು ಕೂಡಾ ಒಬ್ಬ ಆರೋಪಿ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತು ಹೈದರಾಬಾದ್‌ನ ಸೆರೆಮನೆಯಲ್ಲಿರುವ ಗಾಲಿ ಜನಾರ್ದನ ರೆಡ್ಡಿಯವರ ಆಪ್ತ ಸ್ನೇಹಿತ.

ಬಳ್ಳಾರಿಯಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ ಮಾಡಿದ ಮತ್ತು ರಾಜ್ಯ ರಾಜಕೀಯವನ್ನು ವ್ಯಾಪಾರೀಕರಣಗೊಳಿಸಿ ಅಧೋಗತಿಗಿಳಿಸಿದ ಆರೋಪಗಳನ್ನು ಹೊತ್ತವರು ಜನಾರ್ದನ ರೆಡ್ಡಿ.
ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿಗಳ ಗಣಿಕಪ್ಪ ಪಡೆದಿರುವ ಗಂಭೀರ ಆರೋಪವನ್ನು ಜನಾರ್ದನ ರೆಡ್ಡಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.
ದೇವೇಗೌಡ ಮತ್ತು ಕುಟುಂಬದ ಸದಸ್ಯರನ್ನು ಮೊನ್ನೆಮೊನ್ನೆ ವರೆಗೂ ಅವರು ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸುತ್ತಿದ್ದುದನ್ನು ಜನ ಕೇಳಿದ್ದಾರೆ. ಶ್ರಿರಾಮುಲು ಅವರೂ ಅದಕ್ಕೆ ದನಿಗೂಡಿಸುತ್ತಾ ಬಂದವರು.
ಎರಡೂ ಕುಟುಂಬಗಳು ಬೀದಿಯಲ್ಲಿ ನಿಂತು ತೀರಾ ಕೆಳಮಟ್ಟದಲ್ಲಿ ಕಚ್ಚಾಡಿವೆ. ಇವೆಲ್ಲವೂ ಕಳೆದ 4-5 ವರ್ಷಗಳ ಅವಧಿಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಬೆಳವಣಿಗೆ. ಇಂತಹ ಜನಾರ್ದನ ರೆಡ್ಡಿ ತನ್ನ ಪಾಲಿನ ದೇವರು ಎನ್ನುತ್ತಾರೆ ಶ್ರಿರಾಮುಲು.
ರೆಡ್ಡಿ ಸೋದರರ ಎಲ್ಲ ಕೆಲಸಗಳಲ್ಲಿಯೂ ಶ್ರಿರಾಮುಲು ಪಾತ್ರಧಾರಿ. ಇಂತಹವರಿಗೆ ಕುಮಾರಸ್ವಾಮಿಯವರ ಪಕ್ಷ ಬೆಂಬಲ ಘೋಷಿಸಿದೆ.
ನ್ಯಾಯ-ಅನ್ಯಾಯದ ಪರಾಮರ್ಶೆ, ಜನರ ಹಿತದ ಮಾತು ಒತ್ತಟ್ಟಿಗಿರಲಿ, ಕನಿಷ್ಠ ಆತ್ಮಾಭಿಮಾನ ಉಳ್ಳವರು ಇಂತಹ ರಾಜಿ ಮಾಡಿಕೊಳ್ಳಲಾರರು.`ನಾಯಕನಾಗಲಾರೆ, ಖಳನಾಯಕನಾಗುವೆ~ ಎಂದು ಹೊರಟವರನ್ನು ಏನು ಮಾಡಲು ಸಾಧ್ಯ?
ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಅಧಿಕಾರ ಹಸ್ತಾಂತರದ ವಿವಾದದ ಸಂದರ್ಭದಲ್ಲಿ `ಯಯಾತಿ ಮತ್ತು ಪುರು ಎಂಬ ತಂದೆ- ಮಗನ ನೆನಪಿನಲ್ಲಿ...~ ಎಂಬ ಅಂಕಣವೊಂದನ್ನು ಬರೆದಿದ್ದೆ. 
ಶಾಪಗ್ರಸ್ತನಾಗಿ ಅಕಾಲ ವೃದ್ದಾಪ್ಯ ಪಡೆದ ಯಯಾತಿ ತನ್ನ ಮಗ ಪುರುವಿಗೆ ಶಾಪ ವರ್ಗಾಯಿಸಿ ಯೌವ್ವನವನ್ನು ಪಡೆದ ಕತೆ ಮಹಾಭಾರತದಲ್ಲಿದೆ.
`ಬಿಜೆಪಿ ಜತೆ ಮೈತ್ರಿಮಾಡಿಕೊಂಡ ಮಗನಿಂದಾಗಿ ಶಾಪಗ್ರಸ್ತನಾದೆ~ ಎಂದು ತಿಳಿದುಕೊಂಡಿದ್ದ ದೇವೇಗೌಡರು ವಯಸ್ಸಿಗೆ ಮೀರಿದ ವೃದ್ಧಾಪ್ಯದಿಂದ ಬಳಲುತ್ತಿರುವ `ಯಯಾತಿ~ಯಂತೆ ವರ್ತಿಸತೊಡಗಿದ್ದರು.

ಇಪ್ಪತ್ತು ತಿಂಗಳ ನಂತರ ಶಾಪಕ್ಕೆ ಮುಕ್ತಿ ಪಡೆಯ ಬಯಸಿದ ಗೌಡರು ಅಧಿಕಾರ ಹಸ್ತಾಂತರ ಮಾಡದಂತೆ ಮಗನ ಮನವೊಲಿಸುವಲ್ಲಿ ಸಫಲರಾಗಿದ್ದರು.
ಅಲ್ಲಿಯ ವರೆಗೆ `ಯಯಾತಿ~ಯಂತೆ ವೃದ್ಧಾಪ್ಯದಿಂದ ಬಳಲುತ್ತಿದ್ದ ಗೌಡರು ನಂತರ ಯುವಕರಂತೆ ಅಬ್ಬರಿಸತೊಡಗಿದ್ದರು. ಅಲ್ಲಿಯ ವರೆಗೆ ಯೌವ್ವನ ಸಹಜ ಉತ್ಸಾಹದಲ್ಲಿ ಬೀಗುತ್ತಿದ್ದ ಕುಮಾರಸ್ವಾಮಿ ಅಪ್ಪನ ವೃದ್ದಾಪ್ಯವನ್ನು ಪಡೆದ `ಪುರು~ವಿನಂತೆ ಬಾಡಿಹೋಗಿದ್ದರು.

ಮಹಾಭಾರತದಲ್ಲಿರುವ ಕತೆಯ ಪ್ರಕಾರ ಪುರು ಪಶ್ಚಾತ್ತಾಪಕ್ಕೀಡಾದ ತಂದೆಯಿಂದ ಯೌವ್ವನವನ್ನು ಮರಳಿ ಪಡೆಯುತ್ತಾನೆ.

ಆದರೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿದ ನಂತರ ಯೌವ್ವನವನ್ನು ಕಳೆದುಕೊಂಡಂತೆ ಬಳಲಿಹೋಗಿದ್ದ ಕುಮಾರಸ್ವಾಮಿ ಮರಳಿ ಅದನ್ನು ಪಡೆಯಲೇ ಇಲ್ಲ.