Monday, September 19, 2011

ಮೋದಿ ಒಂದು ವಾಸ್ತವ, ಅವರನ್ನು ಎದುರಿಸಿ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮರೆಯಲ್ಲಿ ನಿಂತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಡೆ  ಕಲ್ಲು ಹೊಡೆಯುತ್ತಾ ಎಷ್ಟು ದಿನಗಳನ್ನು ಹೀಗೆ ಕಳೆಯಬಹುದು? ಗುಜರಾತ್ ನರಮೇಧ ನಡೆದು ಒಂಬತ್ತು ವರ್ಷಗಳು ಕಳೆದಿವೆ.  ಹತ್ತಾರು ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ.
ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಮೋದಿ ವಿರುದ್ಧ ನೂರಾರು ಆರೋಪಗಳನ್ನು ಮಾಡಿವೆ, ಈ ದೇಶದ ಅನೇಕ ಪ್ರಮುಖ ಸಾಹಿತಿಗಳು, ಕಲಾವಿದರು, ಚಿಂತಕರು ಮತ್ತು ಸಾಮಾಜಿಕ ಸೇವಾ ಕಾರ‌್ಯಕರ್ತರು ಕೂಡಾ ಮೋದಿ ವಿರುದ್ದ ದನಿ ಎತ್ತಿದ್ದಾರೆ.
ಅಷ್ಟೇ ಆಕ್ರಮಣಕಾರಿಯಾಗಿ ನರೇಂದ್ರ ಮೋದಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ, ಎಲ್.ಕೆ.ಅಡ್ವಾಣಿ ಸೇರಿದಂತೆ ಅವರ ಪಕ್ಷದ ಪ್ರಮುಖ ನಾಯಕರು ಕೂಡಾ ಬಹಿರಂಗವಾಗಿ ಮೋದಿ ಬೆಂಬಲಕ್ಕೆ ನಿಂತು ಮಾತನಾಡಿದ್ದಾರೆ.
  ಇವೆಲ್ಲವನ್ನು ಮಾಧ್ಯಮಗಳು ಪುಟಗಟ್ಟಲೆ ಬರೆದಿವೆ, ಚಾನೆಲ್‌ಗಳು ಸಾವಿರಾರು ಗಂಟೆಗಳ ಕಾಲ ಪ್ರಸಾರ ಮಾಡಿವೆ. ಮಾಧ್ಯಮಗಳು ಸ್ವತಂತ್ರವಾಗಿ ತನಿಖೆ ನಡೆಸಿ ವರದಿಗಳನ್ನು ಪ್ರಕಟಿಸಿವೆ.
ಬಹುಶಃ ನರೇಂದ್ರ ಮೋದಿ ಅವರ `ಹಳೆಯ ಪಾಪ~ಗಳ ಬಗ್ಗೆ ಹೊಸದಾಗಿ ಹೇಳುವಂತಹದ್ದು ಈಗ ಏನೂ ಉಳಿದಿಲ್ಲ. ಅವರ ವ್ಯಕ್ತಿತ್ವದ ಒಳಿತು-ಕೆಡುಕುಗಳೆರಡೂ ಈಗ ದೇಶದ ಜನರ ಮುಂದಿವೆ. ಅವರೇ ಈಗ ತೀರ್ಮಾನ ಮಾಡಬೇಕಾಗಿದೆ.
ಯಾರು ಒಪ್ಪಲಿ ಬಿಡಲಿ, ಮೋದಿ ಅವರು ಈಗ ರಾಷ್ಟ್ರ ರಾಜಕಾರಣದ ಕಡೆ ಹೆಜ್ಜೆ ಹಾಕಿದ್ದಾರೆ. ಇಲ್ಲಿಯ ವರೆಗೆ ಯಾವ ಕಾನೂನು ಕೂಡಾ ಅವರು ಅಪರಾಧಿ ಎಂದು ತೀರ್ಪು ನೀಡದಿರುವ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅರ್ಹರಾಗಿದ್ದಾರೆ.
ಆದ್ದರಿಂದ ಅವರನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಇನ್ನೂ ಅವರನ್ನು ಪತ್ರಿಕೆಗಳ ಪುಟಗಳಲ್ಲಿ ಮತ್ತು ಟಿವಿ ಚಾನೆಲ್‌ಗಳ ಚರ್ಚಾಕೂಟಗಳಲ್ಲಿ  ಹಳಿಯುತ್ತಾ ಕಾಲ ಕಳೆಯುವುದರಲ್ಲಿ ಏನೂ ಅರ್ಥ ಇಲ್ಲ. ವಿರೋಧಿಗಳ ಪಾಲಿಗೆ ಈಗ ಉಳಿದಿರುವ ಏಕೈಕ ದಾರಿ ಎಂದರೆ ಅವರನ್ನು ಮುಖಾಮುಖಿ ಎದುರಿಸುವುದು.
`ಧೈರ್ಯವಿದ್ದರೆ ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಮುಂದಿನ ಲೋಕಸಭಾ ಚುನಾವಣೆ ಎದುರಿಸಿ~ ಎಂದು ಭಾರತೀಯ ಜನತಾ ಪಕ್ಷಕ್ಕೆ ಸವಾಲು ಹಾಕುವಂತಹ ದಿಟ್ಟತನವನ್ನು ಮೋದಿ ವಿರೋಧಿ ನಾಯಕರು ತೋರಬೇಕು.
ಈ ಸವಾಲನ್ನು ಕಾಂಗ್ರೆಸ್ ಪಕ್ಷವೇ ಬಿಜೆಪಿ ಕಡೆ ಎಸೆದರೆ ಆ ಪಕ್ಷಕ್ಕೂ ಒಳ್ಳೆಯದು. ಇದಕ್ಕೆ ಕಾರಣ ಇದೆ. `ಉಳಿದವರು ಏನೇ ಹೇಳಲಿ  `ಜನತಾ ನ್ಯಾಯಾಲಯ~ ತನ್ನನ್ನು ನಿರ್ದೋಷಿ ಎಂದು ಸಾರಿದೆ~ ಎಂದು ಅನೇಕ ಬಾರಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಈ ನಿರಪರಾಧಿತನದ ಸರ್ಟಿಫಿಕೇಟನ್ನು  ಅವರು ಎದೆ ಮೇಲೆ ಹಚ್ಚಿಕೊಳ್ಳಲು ಗುಜರಾತ್ ನರಮೇಧದ ನಂತರ ಆ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಚುನಾವಣೆಗಳು ಹಾಗೂ ಎರಡು ಲೋಕಸಭಾ ಚುನಾವಣೆಗಳಲ್ಲಿನ ಗೆಲುವು ಕಾರಣ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮೂಲಕವೇ  ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನ ಭವಿಷ್ಯ ನಿರ್ಧಾರವಾಗುವುದು.
2002ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗಾಗಿ ಗುಜರಾತ್ ರಾಜ್ಯದಲ್ಲಿ ನಾನು ಪ್ರವಾಸ ಮಾಡಿದ್ದೆ. ಒಂಬತ್ತು ತಿಂಗಳು ಮೊದಲು ಅದೇ ರಾಜ್ಯದಲ್ಲಿ ನಡೆದ ಕೋಮುಗಲಭೆಯ ಪ್ರತ್ಯಕ್ಷ ವರದಿಗೆಂದು ಹೋಗಿದ್ದ  ನಾನು ಕೋಮುವಾದದ ಕರಾಳ ಮುಖಗಳನ್ನು ಕಣ್ಣಾರೆ ನೋಡಿದ್ದ ಕಾರಣ  ಮೋದಿ ಒಂದು ಬಾರಿ ಸೋಲಬೇಕಿತ್ತು ಎಂದು ನನ್ನ ಒಳಮನಸ್ಸು ಹಾರೈಸುತ್ತಿತ್ತು.
ಆದರೆ ಆ ರಾಜ್ಯವನ್ನು ಹತ್ತು ದಿನಗಳ ಕಾಲ ಸುತ್ತಾಡಿದ ನಂತರ ನರೇಂದ್ರ ಮೋದಿ ಗೆಲುವು ಖಚಿತ ಎಂದು ಅರಿವಾಗಿತ್ತು. (ಹಾಗೆಯೇ ವರದಿಯನ್ನೂ ಮಾಡಿದ್ದೆ). 2002ರ ನಂತರ ನಡೆದಿರುವ ಚುನಾವಣೆಗಳಲ್ಲಿ ನರೇಂದ್ರ ಮೋದಿ ಗೆಲ್ಲಲು ಕಾರಣಗಳನ್ನು ನಾವು ಹುಡುಕಿ ತೆಗೆಯಬಹುದು.
ಆದರೆ ಮೋದಿ ಮೊದಲು ಎದುರಿಸಿದ ಚುನಾವಣೆಯ ಕಾಲದಲ್ಲಿ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರೋಪಗಳು ಮಾತ್ರವಲ್ಲ, ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನದಿಂದ ಹಿಡಿದು ಕೇಶುಭಾಯಿ ಪಟೇಲ್ ಬೆಂಬಲಿಗರ ವಿರೋಧದ ವರೆಗೆ ಎಲ್ಲವೂ ಮೋದಿ ವಿರುದ್ಧವೇ ಇದ್ದವು.

ಆದರೆ ಎಲ್ಲರ ಬಾಯಿ ಮುಚ್ಚಿಸುವ ರೀತಿಯಲ್ಲಿ ಮೋದಿ ಗೆಲುವು ಸಾಧಿಸಿದ್ದರು. ದೂರದಲ್ಲಿ ನಿಂತು ನೋಡುವವರಿಗೆ ಜನರ ಆಯ್ಕೆ ತಪ್ಪು ಎಂದು ಅನಿಸಬಹುದು. ಅಂತಿಮವಾಗಿ ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ನಿಯಮ.
`ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿ~ ಎಂದು ಸವಾಲು ಹಾಕುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ ಎನ್ನುವುದು ಈಗಿನ ಮೊದಲ ಪ್ರಶ್ನೆ. ಈ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆನ್ನುವುದು ಹೆಚ್ಚು ಕಡಿಮೆ ತೀರ್ಮಾನವಾಗಿದೆ.
ರಾಹುಲ್‌ಗಾಂಧಿಗೆ ಮನಸ್ಸಿದೆಯೋ, ಇಲ್ಲವೋ ಗೊತ್ತಿಲ್ಲ, ಅದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಯುವ ನಾಯಕನನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಕಾಂಗ್ರೆಸ್‌ಪಕ್ಷಕ್ಕೆ ಅನಿವಾರ‌್ಯವಾಗಿದೆ.
ಮನಮೋಹನ್‌ಸಿಂಗ್ ಈ ಲೋಕಸಭೆಯ ಅವಧಿ ಮುಗಿಯುವ ವರೆಗೆ ಪ್ರಧಾನಿ ಪಟ್ಟದಲ್ಲಿ ಉಳಿದರೆ ಹೆಚ್ಚು. ಮುಂದಿನ ಚುನಾವಣೆಯಲ್ಲಿ ಅವರು ಖಂಡಿತ ಪ್ರಧಾನಿ ಅಭ್ಯರ್ಥಿ ಆಗಲಾರರು.
ಎರಡನೇ ಸಾಲಿನಲ್ಲಿರುವ ಪ್ರಣಬ್ ಮುಖರ್ಜಿ ಅವರಿಗೆ ವಯಸ್ಸೂ ಆಗಿದೆ, ಅವರ ಮೇಲೆ ನೆಹರೂ ಕುಟುಂಬಕ್ಕೆ ವಿಶ್ವಾಸವೂ ಕಡಿಮೆ. ಪಿ.ಚಿದಂಬರಂ ಒಬ್ಬ ವಿಫಲ ನಾಯಕ. ಎ.ಕೆ.ಆಂಟನಿ ಅವರಿಗೆ ಅವರ ಧರ್ಮವೇ ಅಡ್ಡಿಯಾಗಬಹುದು. ಆದ್ದರಿಂದ ರಾಹುಲ್ ಗಾಂಧಿ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಗತಿ ಇಲ್ಲ.
ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ದೊಡ್ಡ ಅನುಕೂಲತೆಯೆಂದರೆ ರಾಹುಲ್ ಗಾಂಧಿಯ ಯುವ ನಾಯಕತ್ವ ಎಂದು ಅವರ ಪಕ್ಷದವರು ಮಾತ್ರವಲ್ಲ ವಿರೋಧಪಕ್ಷಗಳು ಕೂಡಾ ಹೇಳುತ್ತಿದ್ದವು.
ಬಹುಸಂಖ್ಯೆಯ ಮತದಾರರು ಯುವಜನರೇ ಆಗಿರುವುದು ಇದಕ್ಕೆ ಒಂದು ಕಾರಣವಾದರೆ, ವಿರೋಧಪಕ್ಷಗಳಲ್ಲಿ ಈ ವಯಸ್ಸಿನ ಯುವನಾಯಕರು ಇಲ್ಲದಿರುವುದು ಇನ್ನೊಂದು ಕಾರಣ.
ಆದರೆ ನರೇಂದ್ರ ಮೋದಿಯವರಂತಹ ಒಬ್ಬ ಆಕ್ರಮಣಕಾರಿ ನಾಯಕನನ್ನು ಎದುರಿಸಲು ಈ ಅನುಕೂಲತೆಯಷ್ಟೇ ಸಾಕಾದೀತೇ? ಕಳೆದ ಏಳು ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ರಾಹುಲ್ ಗಾಂಧಿ ಒದಗಿಬಂದ ಅವಕಾಶವನ್ನು ಬಳಸಿಕೊಂಡು ನಾಯಕನಾಗುವ ಅರ್ಹತೆಯನ್ನು ಸಾಬೀತುಪಡಿಸುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ.
ಒಂದೆರಡು ಬಾರಿ ಲಿಖಿತ ಪ್ರತಿ ಕೈಯಲ್ಲಿಟ್ಟುಕೊಂಡು ಮಾಡಿದ ಭಾಷಣಗಳನ್ನು ಹೊರತುಪಡಿಸಿದರೆ ಸದನದಲ್ಲಿ ನಡೆದ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಾಧಿಸಿದ್ದ ಗೆಲುವಿನ ಕಿರೀಟ ಕೂಡಾ ಬಿಹಾರ ಚುನಾವಣೆಯಲ್ಲಿ ಬಿದ್ದುಹೋಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ತನ್ನ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ತಾತ್ಕಾಲಿಕವಾಗಿ ಮಗನಿಗೆ ಬಿಟ್ಟುಕೊಟ್ಟಿದ್ದರು. ಇದನ್ನು ಬಳಸಿಕೊಳ್ಳುವ ಅವಕಾಶ ಕೂಡಾ ಅಣ್ಣಾಹಜಾರೆ ಚಳವಳಿಯಿಂದಾಗಿ ನಿರ್ಮಾಣವಾಗಿದ್ದ ರಾಜಕೀಯ ಬಿಕ್ಕಟ್ಟಿನ ಮೂಲಕ ಒದಗಿ ಬಂದಿತ್ತು.
ರಾಹುಲ್ ಪ್ರವೇಶಿಸಿ ಆಟವನ್ನೇ ಬದಲಿಸಲಿದ್ದಾರೆ ಎಂದು ಕಾಂಗ್ರೆಸ್ ಭಟ್ಟಂಗಿಗಳು ಹೇಳುತ್ತಲೇ ಇದ್ದರು, ಆದರೆ ಅವರು ಆಟದ ಅಂಗಳವನ್ನು ಪ್ರವೇಶಿಸಲೇ ಇಲ್ಲ. ಲಿಖಿತ ಭಾಷಣವೊಂದನ್ನು ಲೋಕಸಭೆಯಲ್ಲಿ ಓದಿ ಕೈತೊಳೆದುಕೊಂಡು ಬಿಟ್ಟರು. ನರೇಂದ್ರಮೋದಿ ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಬಿಂಬಿಸಿದರೆ ಕಾಂಗ್ರೆಸ್ ಪಾಲಿನ ದೊಡ್ಡ ಸಮಸ್ಯೆ ಮೋದಿ ಅಲ್ಲ, ರಾಹುಲ್ ಗಾಂಧಿ.
ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಎಂದು ಕಾಂಗ್ರೆಸ್ ಪಕ್ಷ ಸವಾಲು ಹಾಕಿದರೆ ಬಿಜೆಪಿ ಅದನ್ನು ಸ್ವೀಕರಿಸಲು ಸಿದ್ಧ ಇದೆಯೇ ಎನ್ನುವುದು ಎರಡನೇ ಪ್ರಶ್ನೆ. ಮೋದಿ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರ ವಿರೋಧಿ ಯಾತ್ರೆ ನಡೆಸುವುದಾಗಿ ಸ್ವಇಚ್ಛೆಯ ಹೇಳಿಕೆ ನೀಡಿ ಅವರ ಪಕ್ಷದ ನಾಯಕರನ್ನೇ ಚಕಿತಗೊಳಿಸಿದ್ದರು.
ತಾನು ಪ್ರಧಾನಿ ಪಟ್ಟದ ಅಭ್ಯರ್ಥಿ ಎಂಬ ಸೂಚನೆಯನ್ನು ನೀಡುವುದಕ್ಕಾಗಿಯೇ ಈ ಯಾತ್ರೆಯ ಘೋಷಣೆ ಮಾಡಿದ್ದಾರೆಂಬ ವ್ಯಾಖ್ಯಾನಗಳು ಆ ದಿನದಿಂದಲೇ ಕೇಳಿಬರುತ್ತಿವೆ.
ಇವೆಲ್ಲವೂ ನಡೆಯುತ್ತಿರುವಾಗ ನರೇಂದ್ರ ಮೋದಿ ಅವರು ದಿಢೀರನೆ `ಸದ್ಭಾವನಾ ಉಪವಾಸ~ ಕಾರ‌್ಯಕ್ರಮ ಹಮ್ಮಿಕೊಂಡಿದ್ದಾರೆ. ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಈ ಉಪವಾಸಕ್ಕೆ ಪ್ರೇರಣೆ ಎಂದು ಹೇಳಿಕೊಂಡರೂ ಅದರಲ್ಲಿರುವ ಗುಪ್ತ ಕಾರ‌್ಯಸೂಚಿಯನ್ನು ನಿರ್ಲಕ್ಷಿಸಲಾಗದು.

ಮೂರು ದಿನಗಳ ಹಿಂದೆ ಅಡ್ವಾಣಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬಹುದೆಂದು ಹೇಳುತ್ತಿದ್ದ ಮಾಧ್ಯಮಗಳು ಆಗಲೇ ಆ ಸ್ಥಾನದಲ್ಲಿ ನರೇಂದ್ರ ಮೋದಿ ಅವರನ್ನು ಕೂರಿಸಿ ಚರ್ಚೆ ನಡೆಸುತ್ತಿವೆ.
ಇವೆಲ್ಲವೂ ಅನಿರೀಕ್ಷಿತ ಬೆಳವಣಿಗೆಗಳಂತೆ ಮೇಲ್ನೋಟಕ್ಕೆ ಕಂಡರೂ ಇದರ ಆಳದಲ್ಲಿ ಒಂದು ವ್ಯವಸ್ಥಿತವಾದ ಪೂರ್ವಯೋಜಿತ ಕಾರ‌್ಯತಂತ್ರ ಇರುವುದನ್ನು ಅಲ್ಲಗಳೆಯಲಾಗದು. ಇದು ಎಲ್ಲರಿಗಿಂತ ಮೊದಲು ಅಡ್ವಾಣಿಯವರಿಗೆ ಗೊತ್ತಾಗಿದೆ. ಅದಕ್ಕಾಗಿ ಅವರು ಮೋದಿ ಅವರಿಗೆ ಬೆಂಬಲ ಘೋಷಿಸಲು ಹಾರಿ ಹೋಗಿದ್ದಾರೆ.
ಇಷ್ಟು ಮಾತ್ರಕ್ಕೆ ಬಿಜೆಪಿಯಲ್ಲಿ ಮೋದಿ ಒಮ್ಮತದ ನಾಯಕ ಎಂದು ಹೇಳಲಾಗದು, ಯಾಕೆಂದರೆ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅಲ್ಲಿಗೆ ಹೋಗಿಲ್ಲ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಗೈರುಹಾಜರಿ ಕೂಡಾ ಎದ್ದು ಕಾಣುವಂತಿದೆ. ಬಿಜೆಪಿಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ.

ನರೇಂದ್ರಮೋದಿ ಅವರನ್ನು ಒಮ್ಮತದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮಾತ್ರಕ್ಕೆ ಅವರು ಆ ಸ್ಥಾನದಲ್ಲಿ ಹೋಗಿ ಕೂರಲು ಸಾಧ್ಯವಾಗಲಾರದು. ಅದು ಸಾಧ್ಯವಾಗಬೇಕಾದರೆ ಬಹುಮತ ಸಾಬೀತುಪಡಿಸಲು  ಅಗತ್ಯವಾದ 272 ಲೋಕಸಭಾ ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಬೇಕಾಗುತ್ತದೆ.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕನಿಷ್ಠ ಅಧಿಕಾರದ ಕನಸನ್ನಾದರೂ ಕಾಣಬೇಕಾದರೆ ಮೈತ್ರಿಕೂಟವನ್ನು ಕಟ್ಟಿಕೊಳ್ಳುವುದು ಬಿಜೆಪಿಗೆ ಅನಿವಾರ‌್ಯ. ಈಗ ಇರುವ ಮಿತ್ರಪಕ್ಷಗಳ ಜತೆಯಲ್ಲಿ ಹೊಸಮಿತ್ರರ ಕೈ ಹಿಡಿಯಬೇಕಾಗುತ್ತದೆ.
ಅಂತಹ ಸಂದರ್ಭದಲ್ಲಿ ಬಿಜೆಪಿ ಪಾಲಿನ ದೊಡ್ಡ ಸಮಸ್ಯೆ ನರೇಂದ್ರ ಮೋದಿ ಆಗಬಲ್ಲರು. ಚಂದ್ರಬಾಬು ನಾಯ್ಡು, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದವರು ಬಿಜೆಪಿ ಸಖ್ಯ ಮುರಿದುಕೊಂಡದ್ದು ಮೋದಿಯವರ ಕಾರಣದಿಂದಲ್ಲವೇ?
ನರೇಂದ್ರ ಮೋದಿ ಅವರು ಎಷ್ಟು ದಿನಗಳ ಉಪವಾಸ ಮಾಡಿದರೂ, ಮುಸ್ಲಿಂ ನಾಯಕರನ್ನು ಕರೆಸಿ ಅಪ್ಪಿಮುದ್ದಾಡಿದರೂ ದೇಶದ ಮುಸ್ಲಿಮರು ಅವರನ್ನು ಒಪ್ಪಿಕೊಳ್ಳುವುದು ಕಷ್ಟ. ಇದರಿಂದಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಯಾವ ಪಕ್ಷ ಕೂಡಾ ಮೋದಿ ನಾಯಕತ್ವದ ಬಿಜೆಪಿ ಜತೆ ಕೈಜೋಡಿಸಲು ಮುಂದೆ ಬರಲಾರದು.
ಬಿಹಾರದ ಮುಖ್ಯಮಂತ್ರಿ ನಿತೀಶ್ ಹಲವಾರು ಬಾರಿ ಈ ಸಂದೇಶ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಶಿವಸೇನೆ ಮತ್ತು ಅಕಾಲಿದಳಗಳಷ್ಟೇ ಎನ್‌ಡಿಎ ಜತೆ ಉಳಿದುಕೊಳ್ಳಬಹುದು.
ಈ ಮಿತ್ರರ ನೆರವಿನಿಂದಲೇ ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದು. ಈ ದೃಷ್ಟಿಯಿಂದ ನರೇಂದ್ರಮೋದಿ ಅವರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು  ಅಪಾಯಕಾರಿ ಜೂಜಾಟ.

ಅದಕ್ಕೆ ಬಿಜೆಪಿ ಸಿದ್ಧ ಇದೆಯೇ? ಕಾಂಗ್ರೆಸ್ ಕೇಳಬೇಕಾಗಿರುವುದು ಈ ಪ್ರಶ್ನೆಯನ್ನು. ಆ ಧೈರ್ಯ ಅದಕ್ಕೂ ಇಲ್ಲ. ಅದಕ್ಕಾಗಿ ಸುಮ್ಮನೆ ಮರೆಯಲ್ಲಿ ನಿಂತು ಬೊಬ್ಬೆ ಹಾಕುತ್ತಿದೆ.

Monday, September 12, 2011

ಅಡ್ವಾಣಿ ಆಗಬೇಕಾಗಿರುವುದು ಕೃಷ್ಣ, ಅರ್ಜುನ ಅಲ್ಲ

ಪ್ರಧಾನಿ ಪಟ್ಟ ಎಲ್ಲೋ ಮರೆಯಿಂದ ಕಣ್ಣು ಮಿಟುಕಿಸುತ್ತಿರುವಂತೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಅನಿಸಿರಬಹುದು. ಇಲ್ಲದಿದ್ದರೆ ಅವರ ಸುತ್ತ ಇರುವ ವಂದಿಮಾಗಧರು `ನಿಮ್ಮ ಜೀವಮಾನದ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಇದೇ ಸಮಯ, ನುಗ್ಗಿಬಿಡಿ~ ಎಂದು 84 ವರ್ಷದ ನಾಯಕನನ್ನು ಹುರಿದುಂಬಿಸಿರಬಹುದು.
ಇಂತಹ ಒತ್ತಡಗಳು ಇಲ್ಲದೆ ಇರುತ್ತಿದ್ದರೆ ಆಗಲೇ ವಾನಪ್ರಸ್ಥಾಶ್ರಮದ ಕಡೆಗೆ ಹೊರಟಿದ್ದ ಅಡ್ವಾಣಿ, ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ರಥಯಾತ್ರೆ ಹೊರಡುವ ಘೋಷಣೆ ಮಾಡುತ್ತಿರಲಿಲ್ಲ.
ಇಷ್ಟೊಂದು ದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಬೆವರು ಸುರಿಸಿರುವ ನಾಯಕನೊಬ್ಬ ಪ್ರಧಾನಿಯಾಗುವ ಕನಸು ಕಂಡರೆ ಅದು ತಪ್ಪೇ? ಖಂಡಿತ ಅಲ್ಲ. ಆ ಪದವಿಗೇರುವ ಅರ್ಹತೆಯೂ ಅವರಿಗಿಲ್ಲವೇ? ಖಂಡಿತ ಇದೆ. ಆದರೆ ರಥಯಾತ್ರೆಗೆ ಪಡೆದಿರುವ ಪ್ರೇರಣೆ ಮತ್ತು ಘೋಷಿತ ಉದ್ದೇಶ ಎರಡರಲ್ಲಿಯೂ ಅಡ್ವಾಣಿ ಎಡವಿದಂತಿದೆ.
ಪ್ರೇರಣೆ : `ವೋಟಿಗಾಗಿ ನೋಟು~ ಹಗರಣದಲ್ಲಿ ತಮ್ಮ ಪಕ್ಷಕ್ಕೆ ಸೇರಿರುವ ಇಬ್ಬರು ಮಾಜಿ ಲೋಕಸಭಾ ಸದಸ್ಯರ ಬಂಧನ. ಉದ್ದೇಶ: ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ.
`ವೋಟಿಗಾಗಿ ನೋಟು~ ಹಗರಣದಲ್ಲಿ ಈ ವರೆಗೆ ಜೈಲಿಗೆ ಹೋಗಿರುವವರು ಕಾಂಗ್ರೆಸ್ ಪಕ್ಷದವರಲ್ಲದೆ ಇರಬಹುದು, ಆದರೆ ಅದು ಆ ಪಕ್ಷದ `ಪಾಪದ ಪಿಂಡ~ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ದೆಹಲಿ ಪೊಲೀಸರು ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಂತರಂಗದ ಚಾವಡಿಯ ಹಿರಿತಲೆಗಳೂ ಜೈಲು ಸೇರಬಹುದು.
 `ವಿರೋಧಪಕ್ಷಗಳ ಸದಸ್ಯರನ್ನು ಖರೀದಿಸಬೇಕಾಗಿರಲಿಲ್ಲ, ಸದನದಲ್ಲಿ ಪಡೆದ ಬಹುಮತವೇ ಇದಕ್ಕೆ ಸಾಕ್ಷಿ~ ಎಂದು ಕಾಂಗ್ರೆಸ್ ನಾಯಕರು ಈಗ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಕೊನೆಗೂ ಗೆದ್ದದ್ದು ಕೇವಲ 19 ಮತಗಳಿಂದ ಎನ್ನುವುದನ್ನು ಮರೆಯಬಾರದು.

ಆ 19 ಮತಗಳಲ್ಲಿ ಹದಿಮೂರು ಮತಗಳು ವಿರೋಧಪಕ್ಷಗಳ ಸದಸ್ಯರು ನಡೆಸಿದ ಅಡ್ಡಮತದಾನದಿಂದ ಗಳಿಸಿದ್ದು. ಎಂಟು ಮಂದಿ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಈ ಎಲ್ಲ ವಿರೋಧಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ವಿಪ್ ಗೌರವಿಸಿ ವಿಶ್ವಾಸಮತಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರೆ ಯುಪಿಎ ಸರ್ಕಾರ ಉಳಿಯುತ್ತಿತ್ತೇ? ಅದೊಂದು ತಾಂತ್ರಿಕವಾದ ಗೆಲುವು, ನೈತಿಕವಾದುದಲ್ಲ. ಆದರೆ ಈ ಹಗರಣದಲ್ಲಿ ಬಿಜೆಪಿ ಪಾತ್ರವೇನೂ ಕಡಿಮೆ ಇರಲಿಲ್ಲ.
ಲಾಲ್‌ಕೃಷ್ಣ ಅಡ್ವಾಣಿ ಅವರು ಸುಮಾರು ನಾಲ್ಕು ದಶಕಗಳಿಂದ ಸಂಸತ್ ಸದಸ್ಯರಾಗಿ ಕಾರ‌್ಯನಿರ್ವಹಿಸುತ್ತಾ ಬಂದಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆ-ಗೌರವ ಪ್ರಶ್ನಾತೀತ. ಅದರ ಆಶಯಗಳಿಗೆ ಭಂಗ ಉಂಟಾದಾಗಲೆಲ್ಲ ಅವರು ಸಿಡಿದೆದ್ದವರು.
ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟದ ಉದ್ದೇಶವನ್ನು ಒಪ್ಪಿಕೊಂಡರೂ ಅವರು ಹಿಡಿದಿರುವ ಹಾದಿ ಸಂಸದೀಯ ಪ್ರಜಾಪ್ರಭುತ್ವದ ಬೇರುಗಳನ್ನು ದುರ್ಬಲಗೊಳಿಸುವಂತಹದ್ದು ಎಂಬ ಕಾರಣಕ್ಕಾಗಿ ವಿರೋಧವನ್ನು ಹೊಂದಿದ್ದವರು.
ಆದರೆ, ಇದೇ ಅಡ್ವಾಣಿಯವರು ಲೋಕಸಭೆಯಲ್ಲಿ ಎದ್ದು ನಿಂತು `ವೋಟಿಗಾಗಿ ನೋಟು~ ಹಗರಣದ `ಕುಟುಕು ಕಾರ್ಯಾಚರಣೆ~ಯ ಸೂತ್ರಧಾರ ತಾನೆಂದು ಘೋಷಿಸಿಕೊಳ್ಳುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ತಮಗೆ ನಂಬಿಕೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ಒಬ್ಬ ಸಂಸದನ ಮಾನ ಮತ್ತು ಪ್ರಾಣಕ್ಕೆ ಬೆದರಿಕೆ ಎದುರಾದರೆ ಆತ ಮೊದಲು ಮಾಡಬೇಕಾಗಿರುವ ಕೆಲಸ ಸಭಾಧ್ಯಕ್ಷರಿಗೆ ದೂರು ನೀಡುವುದು. ಯಾಕೆಂದರೆ ಸಂಸದರ ರಕ್ಷಣೆಯ ಭಾರವನ್ನು ಸಂವಿಧಾನವೇ ಸಭಾಧ್ಯಕ್ಷರಿಗೆ ನೀಡಿದೆ. ಈ ಹಗರಣದಲ್ಲಿಯೂ ಕಾಂಗ್ರೆಸ್ ಸದಸ್ಯರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಸಂಸದರಿಗೆ ಆಮಿಷವೊಡ್ಡಿದ್ದರೆ ಅಡ್ವಾಣಿಯವರು ಮೊದಲು ಮಾಡಬೇಕಾಗಿದ್ದ ಕೆಲಸ ಅವರನ್ನು ಕರೆದೊಯ್ದು ಲೋಕಸಭಾಧ್ಯಕ್ಷರಿಗೆ ದೂರು ಕೊಡಿಸುವುದು, ಜತೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸುವುದು.
ಇದು ಸಂಸದೀಯ ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನಿನ ಮೇಲೆ ನಂಬಿಕೆ ಇರುವ ವ್ಯಕ್ತಿ ಮಾಡಬೇಕಾದ ಕೆಲಸ. ಆದರೆ ಅಡ್ವಾಣಿಯವರು ಮಾಡಿಸಿದ್ದು `ಕುಟುಕು ಕಾರ್ಯಾಚರಣೆ~. ಅವರು ಯಾಕೆ ಇಂತಹ ಅಡ್ಡಮಾರ್ಗ ಹಿಡಿದರು? ಆಗ ಲೋಕಸಭಾ ಅಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಮೇಲೆಯೂ ಅವರಿಗೆ ನಂಬಿಕೆ ಇರಲಿಲ್ಲವೇ? ಬೇರೆ ಏನಾದರೂ ಉದ್ದೇಶ ಇತ್ತೇ?
`ದೂರು ನೀಡಿದ್ದರೆ ಆಡಳಿತ ಪಕ್ಷವನ್ನು ಎಚ್ಚರಿಸಿದಂತಾಗುತ್ತಿತ್ತು, ಈ ಹಗರಣ ಬಯಲಿಗೆ ಬರುತ್ತಿರಲಿಲ್ಲ~ ಎಂದು ಅಡ್ವಾಣಿ ಅವರ ಪಕ್ಷದ ಕೆಲವು ನಾಯಕರು ಹೇಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಬಣ್ಣ ಬಯಲು ಮಾಡಲು ಇವರೇ ಮಾಡಿಸಿಟ್ಟುಕೊಂಡಿದ್ದ `ಕುಟುಕು ಕಾರ್ಯಾಚರಣೆ~ಯ ಸಿಡಿ ಇತ್ತಲ್ಲ?
ಲೋಕಸಭಾಧ್ಯಕ್ಷರಿಂದ ನ್ಯಾಯ ಸಿಗದೆ ಇದ್ದಾಗ ಆ ಸಿಡಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಬಹುದಿತ್ತು. ಆದರೆ ಬಿಜೆಪಿ ಹಿಡಿದದ್ದು ಅಡ್ಡಮಾರ್ಗ. ಅದು ಒಂದು ಖಾಸಗಿ ಟಿವಿ ಚಾನೆಲ್ ಜತೆ ಕೂಡಿಕೊಂಡು `ಕುಟುಕು ಕಾರ್ಯಾಚರಣೆ~ ನಡೆಸಿ, ಲೋಕಸಭೆಗೆ ಬಂದು ನೋಟಿನ ಕಂತೆಗಳನ್ನು ಲೋಕಸಭಾಧ್ಯಕ್ಷರ ಮುಂದೆ ಸುರಿದದ್ದು. ಈ ಅಡ್ಡಮಾರ್ಗವನ್ನು ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕರು ಈಗ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ.
ಸತ್ಯ ಸಂಗತಿ ಏನೆಂದರೆ, ಲೋಕಸಭಾಧ್ಯಕ್ಷರು ಇಲ್ಲವೇ ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಕಾರಣಕ್ಕೆ ಬಿಜೆಪಿ `ಕುಟುಕು ಕಾರ್ಯಾಚರಣೆ~ ನಡೆಸಿ ಸದನದಲ್ಲಿ ನೋಟಿನ ಕಂತೆ ಪ್ರದರ್ಶಿಸಿದ್ದಲ್ಲ.
ವಿಶ್ವಾಸ ಮತ ಯಾಚನೆಯ ಮೊದಲೇ ಬಿಜೆಪಿ ನಾಯಕರಿಗೆ ಫಲಿತಾಂಶ ಗೊತ್ತಾಗಿ ಹೋಗಿತ್ತು. ಬಿಜೆಪಿಯ ಏಳೆಂಟು ಸದಸ್ಯರು ಸೇರಿದಂತೆ ಬೇರೆಬೇರೆ ಪಕ್ಷಗಳಿಗೆ ಸೇರಿರುವ 15-20 ಸದಸ್ಯರು ವಿಶ್ವಾಸಮತ ಗೊತ್ತುವಳಿ ಪರ ಮತ ಚಲಾಯಿಸಲು ಇಲ್ಲವೇ ಮತದಾನದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿರುವ ಸುಳಿವು ವಿರೋಧಪಕ್ಷಗಳ ನಾಯಕರಿಗೆ ಸಿಕ್ಕಿತ್ತು (ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಮಂಜುನಾಥ್ ಕುನ್ನೂರು, ಎಚ್.ಟಿ.ಸಾಂಗ್ಲಿಯಾನಾ ಮತ್ತು ಮನೋರಮಾ ಮಧ್ವರಾಜ್ ಪಕ್ಷದ ವಿಪ್ ಉಲ್ಲಂಘಿಸಿ ಗೊತ್ತುವಳಿ ಪರ ಮತ ಚಲಾಯಿಸಲಿದ್ದಾರೆ ಎಂಬ `ಸ್ಕೂಪ್~ ಸುದ್ದಿ ವಿಶ್ವಾಸಮತ ಯಾಚನೆಯ ದಿನವೇ `ಪ್ರಜಾವಾಣಿ~ಯಲ್ಲಿ ಪ್ರಕಟವಾಗಿತ್ತು).
ಅಂತಿಮವಾಗಿ ಬಿಜೆಪಿಯ ನಾಲ್ಕು ಸದಸ್ಯರು ಸೇರಿದಂತೆ  ಬೇರೆ ವಿರೋಧಪಕ್ಷಗಳ ಹದಿಮೂರು ಲೋಕಸಭಾ ಸದಸ್ಯರು ಗೊತ್ತುವಳಿ ಪರ ಮತ ಚಲಾಯಿಸಿದ್ದರು. ಎಂಟು ಸದಸ್ಯರು ಮತದಾನದಲ್ಲಿ ಭಾಗವಹಿಸದೆ ತಮ್ಮ ಪಕ್ಷಗಳ ವಿಪ್ ಉಲ್ಲಂಘಿಸಿದ್ದರು.
ಈ ಫಲಿತಾಂಶವನ್ನು ನಿರೀಕ್ಷಿಸಿದ್ದ ಬಿಜೆಪಿ ನಾಯಕರು `ಯುಪಿಎ ಸರ್ಕಾರ ಪಡೆದ ಬಹುಮತ ಪವಿತ್ರವಾದುದಲ್ಲ, ಕಳಂಕಿತವಾದುದು~ ಎನ್ನುವುದನ್ನು ಸಾಬೀತುಪಡಿಸಲು ಅನುಸರಿಸಿದ ಮಾರ್ಗವೇ ಟಿವಿ ಚಾನೆಲ್ ಜತೆಗೂಡಿ ನಡೆಸಿದ್ದ `ಕುಟುಕು ಕಾರ್ಯಾಚರಣೆ~.
ಆದರೆ ಈ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಾವು ಹಾನಿ ಮಾಡುತ್ತಿದ್ದೇವೆ ಎಂಬ ಅರಿವು ಆ ಕಾಲದಲ್ಲಿ ಅಳಿವು-ಉಳಿವುಗಳ ರಾಜಕೀಯದ ಜಿದ್ದಾಜಿದ್ದಿಯಲ್ಲಿ ಮುಳುಗಿದ್ದ ಬಿಜೆಪಿ ನಾಯಕರಿಗೆ ಆಗಿರಲಿಲ್ಲ. ಮೂರು ವರ್ಷಗಳ ನಂತರವಾದರೂ ಅದರ ಅರಿವು ಬಿಜೆಪಿಗೆ ಆಗಿರಬಹುದು ಎಂದು ನಿರೀಕ್ಷಿಸಿದ್ದವರಿಗೆ ಅಡ್ವಾಣಿ ಅವರ ಆವೇಶಭರಿತ ಹೇಳಿಕೆಯಿಂದ ನಿರಾಸೆಯಾಗಿದೆ.ಪಕ್ಷ ಮಾಡಿರುವ ತಪ್ಪನ್ನು ಸರಿಪಡಿಸಬೇಕಾಗಿದ್ದ ಈ ಹಿರಿಯ ನಾಯಕ ಆ ತಪ್ಪನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ.
ಎರಡನೆಯದಾಗಿ ಅಡ್ವಾಣಿ ಅವರ ರಥಯಾತ್ರೆಯ ಘೋಷಿತ ಉದ್ದೇಶ -ಅದು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ. ಅಡ್ವಾಣಿಯವರ ವೈಯಕ್ತಿಕ ಪ್ರಾಮಾಣಿಕತೆಯನ್ನು ಯಾರೂ ಸಂಶಯಿಸುವುದು ಸಾಧ್ಯ ಇಲ್ಲ. ಆದರೆ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆಗೆ ಹೊರಟರೆ ಅವರ ಜತೆಯಲ್ಲಿ ಹೋಗುವವರು ಯಾರು?
ಈಗ ಹೈದರಾಬಾದ್‌ನ ಜೈಲಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಸೋದರರನ್ನು ತಮ್ಮ ಮಕ್ಕಳ ಸಮಾನ ಎಂದು ಮೊನ್ನೆ ಮೊನ್ನೆವರೆಗೂ ಹೇಳುತ್ತಿದ್ದ ಸುಷ್ಮಾ ಸ್ವರಾಜ್ ಅವರೇ? ಗಣಿ ಅಕ್ರಮದ ಗಂಭೀರ ಆರೋಪಗಳನ್ನೊಳಗೊಂಡ ತನಿಖಾ ವರದಿಯನ್ನು ಕರ್ನಾಟಕದ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ನಂತರವೂ  ಬಹಿರಂಗ ಸಭೆಯಲ್ಲಿ ಅವರ ಜತೆ ಪಾಲ್ಗೊಂಡು ಕಾಣಿಕೆಗಳನ್ನು ಸ್ವೀಕರಿಸಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ?
ಭ್ರಷ್ಟಾಚಾರದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಲು ಸಾಧ್ಯ ಇರುವ ಲೋಕಾಯುಕ್ತರ ನೇಮಕವನ್ನು ಏಳುವರ್ಷಗಳಿಂದ ಮುಂದೂಡುತ್ತಾ ಬಂದಿರುವ ನರೇಂದ್ರ ಮೋದಿಯವರೇ?
ಹುಡ್ಕೋ ಹಗರಣದ ಸುಳಿಯಿಂದ ಇನ್ನೂ ಮುಕ್ತರಾಗದೆ ಇರುವ ಅನಂತಕುಮಾರ್ ಅವರೇ? ಭ್ರಷ್ಟಾಚಾರದ ಹಲವು ಹಗರಣಗಳಲ್ಲಿ ಸಿಲುಕಿ ನ್ಯಾಯಾಲಯಕ್ಕೆ ಸುತ್ತುಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ?
ಭ್ರಷ್ಟಾಚಾರದ ಆರೋಪದಿಂದಾಗಿಯೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ರಮೇಶ್ ಪೋಖ್ರಿಯಾಲ್ ಅವರೇ? ಈಗಾಗಲೇ ಜೈಲಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೇ? ಬಂಧನದ ಭೀತಿಯಲ್ಲಿರುವ ಮಾಜಿ ಸಚಿವರಾದ ಕರುಣಾಕರ ರೆಡ್ಡಿ ಮತ್ತು ಶ್ರಿರಾಮುಲು ಅವರೇ? ಇವರೆಲ್ಲರನ್ನೂ ಬಲ್ಲ, ಇವರೆಲ್ಲ ನಡೆಸುತ್ತಿರುವ ಅವಾಂತರಗಳನ್ನು ಕಣ್ಣಾರೆ ಕಂಡೂ ಬಾಯಿ ಮುಚ್ಚಿಕೊಂಡು ಕೂತಿರುವ ಆರ್‌ಎಸ್‌ಎಸ್ ನಾಯಕರೇ? ಯಾರು?
ಅಚ್ಚರಿಯ ಸಂಗತಿಯೆಂದರೆ ಇವರೆಲ್ಲರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದದ್ದು ಕಳೆದ ಒಂದೆರಡು ತಿಂಗಳುಗಳ ಅವಧಿಯಲ್ಲಲ್ಲ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಜನ ಮಾತನಾಡುತ್ತಿರುವ ಬಳ್ಳಾರಿಯ ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆಯ ಸಂಗತಿ ತಮಗೆ ಗೊತ್ತಿರಲಿಲ್ಲ ಎಂದು ಹೇಳುವಷ್ಟು ಅಡ್ವಾಣಿಯವರು ಅಜ್ಞಾನಿಯಲ್ಲ.
`ಆಪರೇಷನ್ ಕಮಲ~ಕ್ಕೆ ಬಳಕೆಯಾಗಿದ್ದ ಹಣ, ಅದಕ್ಕಿಂತಲೂ ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಿಂದ ರವಾನೆಯಾಗಿರುವ ನಿಧಿ ಯಾವ ಮೂಲದಿಂದ ಬಂದಿರುವುದೆಂದು ತಿಳಿಯದಷ್ಟು ಅಡ್ವಾಣಿ ಅಮಾಯಕರೂ ಅಲ್ಲ.
ಹೌದು, ಅವರು ಈಗ ಎಲ್ಲ ರೀತಿಗಳಿಂದಲೂ ಸ್ಥಾನ ವಂಚಿತರು. ಅವರು ಪಕ್ಷದ ಅಧ್ಯಕ್ಷರಲ್ಲ, ವಿರೋಧಪಕ್ಷದ ನಾಯಕರಲ್ಲ, ಅಧಿಕಾರ ಮೊದಲೇ ಇಲ್ಲ. ಆದರೆ `ಆಪರೇಷನ್ ಕಮಲ~ ನಡೆದಾಗ ವಿರೋಧಪಕ್ಷದ ನಾಯಕರಾಗಿದ್ದರಲ್ಲ? ಪ್ರಧಾನಿ ಅಭ್ಯರ್ಥಿ ಎಂದೇ ಆ ಕಾಲದಲ್ಲಿ ಪಕ್ಷ ಬಿಂಬಿಸಿತ್ತಲ್ಲ? ಅದಕ್ಕಿಂತ ಬೇರೆ ಅಧಿಕಾರ ಏನು ಬೇಕಿತ್ತು? ಆಗಲೂ ಅಡ್ವಾಣಿ ಅವರು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣದ ಬಗ್ಗೆ ಮಾತನಾಡುತ್ತಿದ್ದರೇ ಹೊರತು ತಮ್ಮವರ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿರಲಿಲ್ಲ.
ಈ ಎಲ್ಲ ಪ್ರಶ್ನೆಗಳಿಗೆ ಅಡ್ವಾಣಿಯವರು ತಮ್ಮ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ಉತ್ತರಿಸಬೇಕಾಗುತ್ತದೆ. ಜನತೆಯ ಪ್ರಶ್ನೆಗಳನ್ನು `ರಾಜಕೀಯ ಪ್ರೇರಿತ~ ಎಂದು ಪಕ್ಕಕ್ಕೆ ತಳ್ಳಿಬಿಡಬಹುದು, ಆದರೆ ಆತ್ಮಸಾಕ್ಷಿ ಕೇಳುವ ಪ್ರಶ್ನೆಗೆ? ಉತ್ತರಿಸಬೇಕಾಗಿರುವ ಪ್ರಶ್ನೆ ಇನ್ನೂ ಒಂದು ಇದೆ.
ಅಡ್ವಾಣಿಯವರು ತಮ್ಮ ಮೊದಲ ರಥಯಾತ್ರೆ ಪ್ರಾರಂಭಿಸಿದ್ದು 21 ವರ್ಷಗಳ ಹಿಂದೆ. ಈ ಎರಡು ದಶಕಗಳ ಅವಧಿಯಲ್ಲಿ ಅಡ್ವಾಣಿ ಅವರ ವಯಸ್ಸು ಹೆಚ್ಚಿದೆ, ಭಾರತದ ಮತದಾರರ ಸರಾಸರಿ ವಯಸ್ಸು ಕಡಿಮೆಯಾಗಿದೆ. ಇದಕ್ಕೆ ಅನುಗುಣವಾಗಿ ದೇಶದ ಸಾಮಾಜಿಕ-ರಾಜಕೀಯ ಚಿತ್ರ ಬದಲಾಗಿ ಹೋಗಿದೆ.

ಅಣ್ಣಾ ಹಜಾರೆ ಚಳವಳಿಯಲ್ಲಿ ಪಾಲ್ಗೊಂಡವರ ಸರಾಸರಿ ವಯಸ್ಸು 30-40ಕ್ಕಿಂತ ಹೆಚ್ಚಿರಲಾರದು. ಈ ಯುವಸಮುದಾಯ 84 ವರ್ಷದ ನಾಯಕನನ್ನು ಒಪ್ಪುವುದೇ? ಅದೂ ಎದುರಾಳಿ ಪಕ್ಷದಲ್ಲಿ 40ರ ವಯಸ್ಸಿನ ನಾಯಕನಿರುವಾಗ.
ಅಡ್ವಾಣಿಯವರದ್ದು ಈಗ `ಶ್ರಿಕೃಷ್ಣ~ನಾಗುವ ವಯಸ್ಸು, `ಅರ್ಜುನ~ನಾಗುವುದಲ್ಲ. `ಅರ್ಜುನ~ನನ್ನು ಅವರೇ ಆರಿಸಿ ರಥಕ್ಕೆ ಹತ್ತಿಸಿಕೊಳ್ಳಬೇಕು. ಸದ್ಯಕ್ಕೆ ಬಿಜೆಪಿಯಲ್ಲಿ ಅಂತಹ `ಅರ್ಜುನ~ನ ಸ್ಥಾನ ತುಂಬಬಲ್ಲವರು ಬಹಳ ಇಲ್ಲ. ಇರುವವರಲ್ಲಿ ಒಳ್ಳೆಯ ಆಯ್ಕೆ- ಅರುಣ್ ಜೇಟ್ಲಿ. ಬುದ್ಧಿವಂತ ಮತ್ತು ಕಳಂಕರಹಿತ. ಯುವಕನಲ್ಲದಿದ್ದರೂ ನಿವೃತ್ತಿ ವಯಸ್ಸಲ್ಲ. ಅಡ್ವಾಣಿಯವರೇಕೆ ಈ ಬಗ್ಗೆ ಯೋಚನೆ ಮಾಡಬಾರದು?

ಅಡ್ವಾಣಿ ಆಗಬೇಕಾಗಿರುವುದು ಕೃಷ್ಣ, ಅರ್ಜುನ ಅಲ್ಲ

ಪ್ರಧಾನಿ ಪಟ್ಟ ಎಲ್ಲೋ ಮರೆಯಿಂದ ಕಣ್ಣು ಮಿಟುಕಿಸುತ್ತಿರುವಂತೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಅನಿಸಿರಬಹುದು. ಇಲ್ಲದಿದ್ದರೆ ಅವರ ಸುತ್ತ ಇರುವ ವಂದಿಮಾಗಧರು `ನಿಮ್ಮ ಜೀವಮಾನದ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಇದೇ ಸಮಯ, ನುಗ್ಗಿಬಿಡಿ~ ಎಂದು 84 ವರ್ಷದ ನಾಯಕನನ್ನು ಹುರಿದುಂಬಿಸಿರಬಹುದು.
ಇಂತಹ ಒತ್ತಡಗಳು ಇಲ್ಲದೆ ಇರುತ್ತಿದ್ದರೆ ಆಗಲೇ ವಾನಪ್ರಸ್ಥಾಶ್ರಮದ ಕಡೆಗೆ ಹೊರಟಿದ್ದ ಅಡ್ವಾಣಿ, ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ರಥಯಾತ್ರೆ ಹೊರಡುವ ಘೋಷಣೆ ಮಾಡುತ್ತಿರಲಿಲ್ಲ.
ಇಷ್ಟೊಂದು ದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಬೆವರು ಸುರಿಸಿರುವ ನಾಯಕನೊಬ್ಬ ಪ್ರಧಾನಿಯಾಗುವ ಕನಸು ಕಂಡರೆ ಅದು ತಪ್ಪೇ? ಖಂಡಿತ ಅಲ್ಲ. ಆ ಪದವಿಗೇರುವ ಅರ್ಹತೆಯೂ ಅವರಿಗಿಲ್ಲವೇ? ಖಂಡಿತ ಇದೆ. ಆದರೆ ರಥಯಾತ್ರೆಗೆ ಪಡೆದಿರುವ ಪ್ರೇರಣೆ ಮತ್ತು ಘೋಷಿತ ಉದ್ದೇಶ ಎರಡರಲ್ಲಿಯೂ ಅಡ್ವಾಣಿ ಎಡವಿದಂತಿದೆ.
ಪ್ರೇರಣೆ : `ವೋಟಿಗಾಗಿ ನೋಟು~ ಹಗರಣದಲ್ಲಿ ತಮ್ಮ ಪಕ್ಷಕ್ಕೆ ಸೇರಿರುವ ಇಬ್ಬರು ಮಾಜಿ ಲೋಕಸಭಾ ಸದಸ್ಯರ ಬಂಧನ. ಉದ್ದೇಶ: ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ.
`ವೋಟಿಗಾಗಿ ನೋಟು~ ಹಗರಣದಲ್ಲಿ ಈ ವರೆಗೆ ಜೈಲಿಗೆ ಹೋಗಿರುವವರು ಕಾಂಗ್ರೆಸ್ ಪಕ್ಷದವರಲ್ಲದೆ ಇರಬಹುದು, ಆದರೆ ಅದು ಆ ಪಕ್ಷದ `ಪಾಪದ ಪಿಂಡ~ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ದೆಹಲಿ ಪೊಲೀಸರು ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಂತರಂಗದ ಚಾವಡಿಯ ಹಿರಿತಲೆಗಳೂ ಜೈಲು ಸೇರಬಹುದು.
 `ವಿರೋಧಪಕ್ಷಗಳ ಸದಸ್ಯರನ್ನು ಖರೀದಿಸಬೇಕಾಗಿರಲಿಲ್ಲ, ಸದನದಲ್ಲಿ ಪಡೆದ ಬಹುಮತವೇ ಇದಕ್ಕೆ ಸಾಕ್ಷಿ~ ಎಂದು ಕಾಂಗ್ರೆಸ್ ನಾಯಕರು ಈಗ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಕೊನೆಗೂ ಗೆದ್ದದ್ದು ಕೇವಲ 19 ಮತಗಳಿಂದ ಎನ್ನುವುದನ್ನು ಮರೆಯಬಾರದು.

ಆ 19 ಮತಗಳಲ್ಲಿ ಹದಿಮೂರು ಮತಗಳು ವಿರೋಧಪಕ್ಷಗಳ ಸದಸ್ಯರು ನಡೆಸಿದ ಅಡ್ಡಮತದಾನದಿಂದ ಗಳಿಸಿದ್ದು. ಎಂಟು ಮಂದಿ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಈ ಎಲ್ಲ ವಿರೋಧಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ವಿಪ್ ಗೌರವಿಸಿ ವಿಶ್ವಾಸಮತಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರೆ ಯುಪಿಎ ಸರ್ಕಾರ ಉಳಿಯುತ್ತಿತ್ತೇ? ಅದೊಂದು ತಾಂತ್ರಿಕವಾದ ಗೆಲುವು, ನೈತಿಕವಾದುದಲ್ಲ. ಆದರೆ ಈ ಹಗರಣದಲ್ಲಿ ಬಿಜೆಪಿ ಪಾತ್ರವೇನೂ ಕಡಿಮೆ ಇರಲಿಲ್ಲ.
ಲಾಲ್‌ಕೃಷ್ಣ ಅಡ್ವಾಣಿ ಅವರು ಸುಮಾರು ನಾಲ್ಕು ದಶಕಗಳಿಂದ ಸಂಸತ್ ಸದಸ್ಯರಾಗಿ ಕಾರ‌್ಯನಿರ್ವಹಿಸುತ್ತಾ ಬಂದಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆ-ಗೌರವ ಪ್ರಶ್ನಾತೀತ. ಅದರ ಆಶಯಗಳಿಗೆ ಭಂಗ ಉಂಟಾದಾಗಲೆಲ್ಲ ಅವರು ಸಿಡಿದೆದ್ದವರು.
ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟದ ಉದ್ದೇಶವನ್ನು ಒಪ್ಪಿಕೊಂಡರೂ ಅವರು ಹಿಡಿದಿರುವ ಹಾದಿ ಸಂಸದೀಯ ಪ್ರಜಾಪ್ರಭುತ್ವದ ಬೇರುಗಳನ್ನು ದುರ್ಬಲಗೊಳಿಸುವಂತಹದ್ದು ಎಂಬ ಕಾರಣಕ್ಕಾಗಿ ವಿರೋಧವನ್ನು ಹೊಂದಿದ್ದವರು.
ಆದರೆ, ಇದೇ ಅಡ್ವಾಣಿಯವರು ಲೋಕಸಭೆಯಲ್ಲಿ ಎದ್ದು ನಿಂತು `ವೋಟಿಗಾಗಿ ನೋಟು~ ಹಗರಣದ `ಕುಟುಕು ಕಾರ್ಯಾಚರಣೆ~ಯ ಸೂತ್ರಧಾರ ತಾನೆಂದು ಘೋಷಿಸಿಕೊಳ್ಳುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ತಮಗೆ ನಂಬಿಕೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ಒಬ್ಬ ಸಂಸದನ ಮಾನ ಮತ್ತು ಪ್ರಾಣಕ್ಕೆ ಬೆದರಿಕೆ ಎದುರಾದರೆ ಆತ ಮೊದಲು ಮಾಡಬೇಕಾಗಿರುವ ಕೆಲಸ ಸಭಾಧ್ಯಕ್ಷರಿಗೆ ದೂರು ನೀಡುವುದು. ಯಾಕೆಂದರೆ ಸಂಸದರ ರಕ್ಷಣೆಯ ಭಾರವನ್ನು ಸಂವಿಧಾನವೇ ಸಭಾಧ್ಯಕ್ಷರಿಗೆ ನೀಡಿದೆ. ಈ ಹಗರಣದಲ್ಲಿಯೂ ಕಾಂಗ್ರೆಸ್ ಸದಸ್ಯರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಸಂಸದರಿಗೆ ಆಮಿಷವೊಡ್ಡಿದ್ದರೆ ಅಡ್ವಾಣಿಯವರು ಮೊದಲು ಮಾಡಬೇಕಾಗಿದ್ದ ಕೆಲಸ ಅವರನ್ನು ಕರೆದೊಯ್ದು ಲೋಕಸಭಾಧ್ಯಕ್ಷರಿಗೆ ದೂರು ಕೊಡಿಸುವುದು, ಜತೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸುವುದು.
ಇದು ಸಂಸದೀಯ ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನಿನ ಮೇಲೆ ನಂಬಿಕೆ ಇರುವ ವ್ಯಕ್ತಿ ಮಾಡಬೇಕಾದ ಕೆಲಸ. ಆದರೆ ಅಡ್ವಾಣಿಯವರು ಮಾಡಿಸಿದ್ದು `ಕುಟುಕು ಕಾರ್ಯಾಚರಣೆ~. ಅವರು ಯಾಕೆ ಇಂತಹ ಅಡ್ಡಮಾರ್ಗ ಹಿಡಿದರು? ಆಗ ಲೋಕಸಭಾ ಅಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಮೇಲೆಯೂ ಅವರಿಗೆ ನಂಬಿಕೆ ಇರಲಿಲ್ಲವೇ? ಬೇರೆ ಏನಾದರೂ ಉದ್ದೇಶ ಇತ್ತೇ?
`ದೂರು ನೀಡಿದ್ದರೆ ಆಡಳಿತ ಪಕ್ಷವನ್ನು ಎಚ್ಚರಿಸಿದಂತಾಗುತ್ತಿತ್ತು, ಈ ಹಗರಣ ಬಯಲಿಗೆ ಬರುತ್ತಿರಲಿಲ್ಲ~ ಎಂದು ಅಡ್ವಾಣಿ ಅವರ ಪಕ್ಷದ ಕೆಲವು ನಾಯಕರು ಹೇಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಬಣ್ಣ ಬಯಲು ಮಾಡಲು ಇವರೇ ಮಾಡಿಸಿಟ್ಟುಕೊಂಡಿದ್ದ `ಕುಟುಕು ಕಾರ್ಯಾಚರಣೆ~ಯ ಸಿಡಿ ಇತ್ತಲ್ಲ?
ಲೋಕಸಭಾಧ್ಯಕ್ಷರಿಂದ ನ್ಯಾಯ ಸಿಗದೆ ಇದ್ದಾಗ ಆ ಸಿಡಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಬಹುದಿತ್ತು. ಆದರೆ ಬಿಜೆಪಿ ಹಿಡಿದದ್ದು ಅಡ್ಡಮಾರ್ಗ. ಅದು ಒಂದು ಖಾಸಗಿ ಟಿವಿ ಚಾನೆಲ್ ಜತೆ ಕೂಡಿಕೊಂಡು `ಕುಟುಕು ಕಾರ್ಯಾಚರಣೆ~ ನಡೆಸಿ, ಲೋಕಸಭೆಗೆ ಬಂದು ನೋಟಿನ ಕಂತೆಗಳನ್ನು ಲೋಕಸಭಾಧ್ಯಕ್ಷರ ಮುಂದೆ ಸುರಿದದ್ದು. ಈ ಅಡ್ಡಮಾರ್ಗವನ್ನು ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕರು ಈಗ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ.
ಸತ್ಯ ಸಂಗತಿ ಏನೆಂದರೆ, ಲೋಕಸಭಾಧ್ಯಕ್ಷರು ಇಲ್ಲವೇ ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಕಾರಣಕ್ಕೆ ಬಿಜೆಪಿ `ಕುಟುಕು ಕಾರ್ಯಾಚರಣೆ~ ನಡೆಸಿ ಸದನದಲ್ಲಿ ನೋಟಿನ ಕಂತೆ ಪ್ರದರ್ಶಿಸಿದ್ದಲ್ಲ.
ವಿಶ್ವಾಸ ಮತ ಯಾಚನೆಯ ಮೊದಲೇ ಬಿಜೆಪಿ ನಾಯಕರಿಗೆ ಫಲಿತಾಂಶ ಗೊತ್ತಾಗಿ ಹೋಗಿತ್ತು. ಬಿಜೆಪಿಯ ಏಳೆಂಟು ಸದಸ್ಯರು ಸೇರಿದಂತೆ ಬೇರೆಬೇರೆ ಪಕ್ಷಗಳಿಗೆ ಸೇರಿರುವ 15-20 ಸದಸ್ಯರು ವಿಶ್ವಾಸಮತ ಗೊತ್ತುವಳಿ ಪರ ಮತ ಚಲಾಯಿಸಲು ಇಲ್ಲವೇ ಮತದಾನದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿರುವ ಸುಳಿವು ವಿರೋಧಪಕ್ಷಗಳ ನಾಯಕರಿಗೆ ಸಿಕ್ಕಿತ್ತು (ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಮಂಜುನಾಥ್ ಕುನ್ನೂರು, ಎಚ್.ಟಿ.ಸಾಂಗ್ಲಿಯಾನಾ ಮತ್ತು ಮನೋರಮಾ ಮಧ್ವರಾಜ್ ಪಕ್ಷದ ವಿಪ್ ಉಲ್ಲಂಘಿಸಿ ಗೊತ್ತುವಳಿ ಪರ ಮತ ಚಲಾಯಿಸಲಿದ್ದಾರೆ ಎಂಬ `ಸ್ಕೂಪ್~ ಸುದ್ದಿ ವಿಶ್ವಾಸಮತ ಯಾಚನೆಯ ದಿನವೇ `ಪ್ರಜಾವಾಣಿ~ಯಲ್ಲಿ ಪ್ರಕಟವಾಗಿತ್ತು).
ಅಂತಿಮವಾಗಿ ಬಿಜೆಪಿಯ ನಾಲ್ಕು ಸದಸ್ಯರು ಸೇರಿದಂತೆ  ಬೇರೆ ವಿರೋಧಪಕ್ಷಗಳ ಹದಿಮೂರು ಲೋಕಸಭಾ ಸದಸ್ಯರು ಗೊತ್ತುವಳಿ ಪರ ಮತ ಚಲಾಯಿಸಿದ್ದರು. ಎಂಟು ಸದಸ್ಯರು ಮತದಾನದಲ್ಲಿ ಭಾಗವಹಿಸದೆ ತಮ್ಮ ಪಕ್ಷಗಳ ವಿಪ್ ಉಲ್ಲಂಘಿಸಿದ್ದರು.
ಈ ಫಲಿತಾಂಶವನ್ನು ನಿರೀಕ್ಷಿಸಿದ್ದ ಬಿಜೆಪಿ ನಾಯಕರು `ಯುಪಿಎ ಸರ್ಕಾರ ಪಡೆದ ಬಹುಮತ ಪವಿತ್ರವಾದುದಲ್ಲ, ಕಳಂಕಿತವಾದುದು~ ಎನ್ನುವುದನ್ನು ಸಾಬೀತುಪಡಿಸಲು ಅನುಸರಿಸಿದ ಮಾರ್ಗವೇ ಟಿವಿ ಚಾನೆಲ್ ಜತೆಗೂಡಿ ನಡೆಸಿದ್ದ `ಕುಟುಕು ಕಾರ್ಯಾಚರಣೆ~.
ಆದರೆ ಈ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಾವು ಹಾನಿ ಮಾಡುತ್ತಿದ್ದೇವೆ ಎಂಬ ಅರಿವು ಆ ಕಾಲದಲ್ಲಿ ಅಳಿವು-ಉಳಿವುಗಳ ರಾಜಕೀಯದ ಜಿದ್ದಾಜಿದ್ದಿಯಲ್ಲಿ ಮುಳುಗಿದ್ದ ಬಿಜೆಪಿ ನಾಯಕರಿಗೆ ಆಗಿರಲಿಲ್ಲ. ಮೂರು ವರ್ಷಗಳ ನಂತರವಾದರೂ ಅದರ ಅರಿವು ಬಿಜೆಪಿಗೆ ಆಗಿರಬಹುದು ಎಂದು ನಿರೀಕ್ಷಿಸಿದ್ದವರಿಗೆ ಅಡ್ವಾಣಿ ಅವರ ಆವೇಶಭರಿತ ಹೇಳಿಕೆಯಿಂದ ನಿರಾಸೆಯಾಗಿದೆ.ಪಕ್ಷ ಮಾಡಿರುವ ತಪ್ಪನ್ನು ಸರಿಪಡಿಸಬೇಕಾಗಿದ್ದ ಈ ಹಿರಿಯ ನಾಯಕ ಆ ತಪ್ಪನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ.
ಎರಡನೆಯದಾಗಿ ಅಡ್ವಾಣಿ ಅವರ ರಥಯಾತ್ರೆಯ ಘೋಷಿತ ಉದ್ದೇಶ -ಅದು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ. ಅಡ್ವಾಣಿಯವರ ವೈಯಕ್ತಿಕ ಪ್ರಾಮಾಣಿಕತೆಯನ್ನು ಯಾರೂ ಸಂಶಯಿಸುವುದು ಸಾಧ್ಯ ಇಲ್ಲ. ಆದರೆ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆಗೆ ಹೊರಟರೆ ಅವರ ಜತೆಯಲ್ಲಿ ಹೋಗುವವರು ಯಾರು?
ಈಗ ಹೈದರಾಬಾದ್‌ನ ಜೈಲಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಸೋದರರನ್ನು ತಮ್ಮ ಮಕ್ಕಳ ಸಮಾನ ಎಂದು ಮೊನ್ನೆ ಮೊನ್ನೆವರೆಗೂ ಹೇಳುತ್ತಿದ್ದ ಸುಷ್ಮಾ ಸ್ವರಾಜ್ ಅವರೇ? ಗಣಿ ಅಕ್ರಮದ ಗಂಭೀರ ಆರೋಪಗಳನ್ನೊಳಗೊಂಡ ತನಿಖಾ ವರದಿಯನ್ನು ಕರ್ನಾಟಕದ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ನಂತರವೂ  ಬಹಿರಂಗ ಸಭೆಯಲ್ಲಿ ಅವರ ಜತೆ ಪಾಲ್ಗೊಂಡು ಕಾಣಿಕೆಗಳನ್ನು ಸ್ವೀಕರಿಸಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ?
ಭ್ರಷ್ಟಾಚಾರದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಲು ಸಾಧ್ಯ ಇರುವ ಲೋಕಾಯುಕ್ತರ ನೇಮಕವನ್ನು ಏಳುವರ್ಷಗಳಿಂದ ಮುಂದೂಡುತ್ತಾ ಬಂದಿರುವ ನರೇಂದ್ರ ಮೋದಿಯವರೇ?
ಹುಡ್ಕೋ ಹಗರಣದ ಸುಳಿಯಿಂದ ಇನ್ನೂ ಮುಕ್ತರಾಗದೆ ಇರುವ ಅನಂತಕುಮಾರ್ ಅವರೇ? ಭ್ರಷ್ಟಾಚಾರದ ಹಲವು ಹಗರಣಗಳಲ್ಲಿ ಸಿಲುಕಿ ನ್ಯಾಯಾಲಯಕ್ಕೆ ಸುತ್ತುಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ?
ಭ್ರಷ್ಟಾಚಾರದ ಆರೋಪದಿಂದಾಗಿಯೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ರಮೇಶ್ ಪೋಖ್ರಿಯಾಲ್ ಅವರೇ? ಈಗಾಗಲೇ ಜೈಲಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೇ? ಬಂಧನದ ಭೀತಿಯಲ್ಲಿರುವ ಮಾಜಿ ಸಚಿವರಾದ ಕರುಣಾಕರ ರೆಡ್ಡಿ ಮತ್ತು ಶ್ರಿರಾಮುಲು ಅವರೇ? ಇವರೆಲ್ಲರನ್ನೂ ಬಲ್ಲ, ಇವರೆಲ್ಲ ನಡೆಸುತ್ತಿರುವ ಅವಾಂತರಗಳನ್ನು ಕಣ್ಣಾರೆ ಕಂಡೂ ಬಾಯಿ ಮುಚ್ಚಿಕೊಂಡು ಕೂತಿರುವ ಆರ್‌ಎಸ್‌ಎಸ್ ನಾಯಕರೇ? ಯಾರು?
ಅಚ್ಚರಿಯ ಸಂಗತಿಯೆಂದರೆ ಇವರೆಲ್ಲರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದದ್ದು ಕಳೆದ ಒಂದೆರಡು ತಿಂಗಳುಗಳ ಅವಧಿಯಲ್ಲಲ್ಲ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಜನ ಮಾತನಾಡುತ್ತಿರುವ ಬಳ್ಳಾರಿಯ ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆಯ ಸಂಗತಿ ತಮಗೆ ಗೊತ್ತಿರಲಿಲ್ಲ ಎಂದು ಹೇಳುವಷ್ಟು ಅಡ್ವಾಣಿಯವರು ಅಜ್ಞಾನಿಯಲ್ಲ.
`ಆಪರೇಷನ್ ಕಮಲ~ಕ್ಕೆ ಬಳಕೆಯಾಗಿದ್ದ ಹಣ, ಅದಕ್ಕಿಂತಲೂ ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಿಂದ ರವಾನೆಯಾಗಿರುವ ನಿಧಿ ಯಾವ ಮೂಲದಿಂದ ಬಂದಿರುವುದೆಂದು ತಿಳಿಯದಷ್ಟು ಅಡ್ವಾಣಿ ಅಮಾಯಕರೂ ಅಲ್ಲ.
ಹೌದು, ಅವರು ಈಗ ಎಲ್ಲ ರೀತಿಗಳಿಂದಲೂ ಸ್ಥಾನ ವಂಚಿತರು. ಅವರು ಪಕ್ಷದ ಅಧ್ಯಕ್ಷರಲ್ಲ, ವಿರೋಧಪಕ್ಷದ ನಾಯಕರಲ್ಲ, ಅಧಿಕಾರ ಮೊದಲೇ ಇಲ್ಲ. ಆದರೆ `ಆಪರೇಷನ್ ಕಮಲ~ ನಡೆದಾಗ ವಿರೋಧಪಕ್ಷದ ನಾಯಕರಾಗಿದ್ದರಲ್ಲ? ಪ್ರಧಾನಿ ಅಭ್ಯರ್ಥಿ ಎಂದೇ ಆ ಕಾಲದಲ್ಲಿ ಪಕ್ಷ ಬಿಂಬಿಸಿತ್ತಲ್ಲ? ಅದಕ್ಕಿಂತ ಬೇರೆ ಅಧಿಕಾರ ಏನು ಬೇಕಿತ್ತು? ಆಗಲೂ ಅಡ್ವಾಣಿ ಅವರು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣದ ಬಗ್ಗೆ ಮಾತನಾಡುತ್ತಿದ್ದರೇ ಹೊರತು ತಮ್ಮವರ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿರಲಿಲ್ಲ.
ಈ ಎಲ್ಲ ಪ್ರಶ್ನೆಗಳಿಗೆ ಅಡ್ವಾಣಿಯವರು ತಮ್ಮ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ಉತ್ತರಿಸಬೇಕಾಗುತ್ತದೆ. ಜನತೆಯ ಪ್ರಶ್ನೆಗಳನ್ನು `ರಾಜಕೀಯ ಪ್ರೇರಿತ~ ಎಂದು ಪಕ್ಕಕ್ಕೆ ತಳ್ಳಿಬಿಡಬಹುದು, ಆದರೆ ಆತ್ಮಸಾಕ್ಷಿ ಕೇಳುವ ಪ್ರಶ್ನೆಗೆ? ಉತ್ತರಿಸಬೇಕಾಗಿರುವ ಪ್ರಶ್ನೆ ಇನ್ನೂ ಒಂದು ಇದೆ.
ಅಡ್ವಾಣಿಯವರು ತಮ್ಮ ಮೊದಲ ರಥಯಾತ್ರೆ ಪ್ರಾರಂಭಿಸಿದ್ದು 21 ವರ್ಷಗಳ ಹಿಂದೆ. ಈ ಎರಡು ದಶಕಗಳ ಅವಧಿಯಲ್ಲಿ ಅಡ್ವಾಣಿ ಅವರ ವಯಸ್ಸು ಹೆಚ್ಚಿದೆ, ಭಾರತದ ಮತದಾರರ ಸರಾಸರಿ ವಯಸ್ಸು ಕಡಿಮೆಯಾಗಿದೆ. ಇದಕ್ಕೆ ಅನುಗುಣವಾಗಿ ದೇಶದ ಸಾಮಾಜಿಕ-ರಾಜಕೀಯ ಚಿತ್ರ ಬದಲಾಗಿ ಹೋಗಿದೆ.

ಅಣ್ಣಾ ಹಜಾರೆ ಚಳವಳಿಯಲ್ಲಿ ಪಾಲ್ಗೊಂಡವರ ಸರಾಸರಿ ವಯಸ್ಸು 30-40ಕ್ಕಿಂತ ಹೆಚ್ಚಿರಲಾರದು. ಈ ಯುವಸಮುದಾಯ 84 ವರ್ಷದ ನಾಯಕನನ್ನು ಒಪ್ಪುವುದೇ? ಅದೂ ಎದುರಾಳಿ ಪಕ್ಷದಲ್ಲಿ 40ರ ವಯಸ್ಸಿನ ನಾಯಕನಿರುವಾಗ.
ಅಡ್ವಾಣಿಯವರದ್ದು ಈಗ `ಶ್ರಿಕೃಷ್ಣ~ನಾಗುವ ವಯಸ್ಸು, `ಅರ್ಜುನ~ನಾಗುವುದಲ್ಲ. `ಅರ್ಜುನ~ನನ್ನು ಅವರೇ ಆರಿಸಿ ರಥಕ್ಕೆ ಹತ್ತಿಸಿಕೊಳ್ಳಬೇಕು. ಸದ್ಯಕ್ಕೆ ಬಿಜೆಪಿಯಲ್ಲಿ ಅಂತಹ `ಅರ್ಜುನ~ನ ಸ್ಥಾನ ತುಂಬಬಲ್ಲವರು ಬಹಳ ಇಲ್ಲ. ಇರುವವರಲ್ಲಿ ಒಳ್ಳೆಯ ಆಯ್ಕೆ- ಅರುಣ್ ಜೇಟ್ಲಿ. ಬುದ್ಧಿವಂತ ಮತ್ತು ಕಳಂಕರಹಿತ. ಯುವಕನಲ್ಲದಿದ್ದರೂ ನಿವೃತ್ತಿ ವಯಸ್ಸಲ್ಲ. ಅಡ್ವಾಣಿಯವರೇಕೆ ಈ ಬಗ್ಗೆ ಯೋಚನೆ ಮಾಡಬಾರದು?

Monday, September 5, 2011

ರಾಳೇಗಣ ಸಿದ್ಧಿ ಮತ್ತು ರಾಮಲೀಲಾ ಮೈದಾನ

ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿರುವ ಸಂಬಂಧಿಕರೊಬ್ಬರು  ನನಗೆ ಪೋನ್ ಮಾಡಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮನಸಾರೆ ಶಾಪ ಹಾಕುತ್ತಿದ್ದರು (ಸದ್ಯಕ್ಕೆ ಅವರ ಹೆಸರು ರಾಂಪಣ್ಣ ಎಂದಿಟ್ಟುಕೊಳ್ಳೋಣ). ಕಳೆದ ವಾರದ ನನ್ನ ಅಂಕಣವನ್ನು ಓದಿದ್ದ ರಾಂಪಣ್ಣ `ನಾವು  ನಮ್ಮ ಮಕ್ಕಳಿಂದ ಬೀದಿಗೆ ಬಿದ್ದಿರುವಂತೆ, ಆ ಮನಮೋಹನ್‌ಸಿಂಗ್ ತಮ್ಮ `ಮಕ್ಕಳಿಂದ~ ಬೀದಿಗೆ ಬೀಳಬೇಕು. ಸರಿಯಾಗಿಯೇ ಬರೆದಿದ್ದೀರಿ~ ಎಂದು ಸಿಟ್ಟು ಕಾರಿಕೊಳ್ಳುತ್ತಿದ್ದರು. ವೃತ್ತಿಯಲ್ಲಿ ಕೃಷಿಕರಾಗಿರುವ ರಾಂಪಣ್ಣನವರಿಗೆ ಈಗ ಸುಮಾರು 70 ವರ್ಷ. ತನ್ನ ಯೌವ್ವನದ ದಿನಗಳಲ್ಲಿ ಯುವಕ ಸಂಘ ಕಟ್ಟಿ ಊರಿಗೆ ರಸ್ತೆ, ಕುಡಿಯುವ ನೀರು, ಶಾಲೆ ಬರಲು ಕಾರಣರಾದವರು ಅವರು. ಬಹಳ ಕಷ್ಟದಲ್ಲಿಯೇ ಹೊಟ್ಟೆಬಟ್ಟೆ ಕಟ್ಟಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಎಂಜಿನಿಯರಿಂಗ್ ಓದಿಸಿದ್ದಾರೆ. ಹಿರಿಯ ಮಗ ಮುಂಬೈನಲ್ಲಿದ್ದಾನೆ, ಕಿರಿಯವನು ದೆಹಲಿಯಲ್ಲಿದ್ದಾನೆ ಮತ್ತು ಮಗಳು ಅಮೆರಿಕಾದಲ್ಲಿದ್ದಾಳೆ. ಎಲ್ಲರಿಗೂ ಅವರದ್ದೇ ಆಗಿರುವ ಸಂಸಾರ ಇದೆ. ಈಗ ಇರುವ ಪಟ್ಟಣಗಳಲ್ಲಿಯೇ ನೆಲೆ ಊರಿದ್ದಾರೆ.
ಎರಡು ವರ್ಷಗಳ ಹಿಂದೆ ಮಕ್ಕಳೆಲ್ಲ ಕೂಡಿ ತಂದೆ-ತಾಯಿಗೆ ದೊಡ್ಡ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಣಕ್ಕೇನೂ ಕೊರತೆ ಇಲ್ಲ, ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಮಕ್ಕಳು ತಪ್ಪದೆ ಹಣ ತುಂಬುತ್ತಾರೆ. ಆದರೇನು ಫಲ? ರಾಂಪಣ್ಣನಿಗೆ ವೃದ್ಧಾಪ್ಯಸಹಜ ಕಾಯಿಲೆಗಳೆಲ್ಲ ಇವೆ. ಹೆಂಡತಿ ಮಂಡಿನೋವಿನಿಂದಾಗಿ ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ,  ಎಲ್ಲದ್ದಕ್ಕೂ ಮತ್ತೊಬ್ಬರನ್ನು ಆಶ್ರಯಿಸಬೇಕಾದ ದಯನೀಯ ಸ್ಥಿತಿ.
ಎಲ್ಲವೂ ಇದೆ. `ಹೇಗಿದ್ದೀರಿ ಅಪ್ಪಾ, ಅಮ್ಮಾ?~  ಎಂದು ಪಕ್ಕದಲ್ಲಿ ಕುಳಿತು ಕೇಳುವವರೇ ಇಲ್ಲ.  ವರ್ಷಗಳ ಹಿಂದೆ ತಮ್ಮ ಬುದ್ಧಿವಂತ ಮಕ್ಕಳ ಬಗ್ಗೆ ಹೆಮ್ಮೆಯಿಂದ ಬಾಯ್ತುಂಬ ಮಾತನಾಡುತ್ತಿದ್ದ ರಾಂಪಣ್ಣ ಈಗ ಅವರ ಹೆಸರೆತ್ತಿದರೆ ಸಿಡಿಯುತ್ತಾರೆ. `ಮುಪ್ಪಿನ ಕಾಲದಲ್ಲಿ ನಮ್ಮನ್ನು ಬೀದಿಗೆ ಹಾಕಿದ ಮಕ್ಕಳು ಇದ್ದರೇನು, ಬಿಟ್ಟರೇನು~ ಎಂದು ಕೇಳುತ್ತಿದ್ದಾರೆ. `ನನ್ನದೇ ತಪ್ಪು, ಸುಮ್ಮನೆ ಒಂದು ಡಿಗ್ರಿ ಓದಿಸಿದ್ದರೆ ಇಲ್ಲಿಯೇ ಯಾವುದಾದರೂ ಬ್ಯಾಂಕಿನಲ್ಲೋ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಬಳಿ ಇರುತ್ತಿದ್ದರು. ಏನೂ ಓದಿಸದೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಇಲ್ಲಿಯೇ ಕೃಷಿ ಮಾಡಿಕೊಂಡು ಬಿದ್ದಿರುತ್ತಿದ್ದರು. ಅದೇನೋ ಐಟಿ-ಬಿಟಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಈ ಕೃಷಿ ನಂಬಿ ಅವರು ಹಾಳಾಗುವುದು ಬೇಡ ಎಂದು ಎಂಜಿನಿಯರಿಂಗ್ ಓದಿಸಿ ಕೆಟ್ಟೆ. ಇವೆಲ್ಲವೂ ಮನಮೋಹನ್‌ಸಿಂಗ್ ಮಾಡಿದ ಅವಾಂತರ, ಆರ್ಥಿಕ ಉದಾರೀಕರಣ ನಡೆಯದೆ ಹೋಗಿದ್ದರೆ ನಾವು ಆಮಿಷಗೊಳಗಾಗುತ್ತಿರಲಿಲ್ಲ~ ಎಂದು ಹೇಳುತ್ತಿದ್ದಾಗ ಅವರ ಗಂಟಲು ಕಟ್ಟಿತ್ತು.
ಅವರ ಸಂಕಟಕ್ಕೆ ಇನ್ನೊಂದು ಕಾರಣ ಇತ್ತು. ಸಾಮಾನ್ಯವಾಗಿ ಚೌತಿ-ಅಷ್ಟಮಿಗೆ ಊರಿಗೆ ಬರುತ್ತಿದ್ದ ಮಕ್ಕಳು ಈ ಬಾರಿ ಬಂದಿಲ್ಲ. `ರಜೆಗಳೆಲ್ಲ ಅಣ್ಣಾ ಹಜಾರೆ ಚಳವಳಿಯಲ್ಲಿ ಕಳೆದು ಹೋಯಿತು, ಮುಂದಿನ ಬಾರಿ ಬರುತ್ತೇವೆ~ ಎಂದು ಅಮ್ಮನಿಗೆ ಪೋನ್ ಮಾಡಿದ್ದರಂತೆ. `ಅಷ್ಟೊಂದು ದೇಶಪ್ರೇಮ ಇದ್ದರೆ ಇಲ್ಲಿಯೇ ಬಂದು ಏನಾದರೂ ಉದ್ಯೋಗ-ಉದ್ಯಮ ಮಾಡಬಹುದಲ್ಲ, ದೆಹಲಿ-ಮುಂಬೈ ಎಂದು ಯಾಕೆ ಕುಣಿದಾಡುತ್ತಿದ್ದಾರೆ? ತಂದೆ-ತಾಯಿ ಮೇಲೆ, ಊರಿನ ಮೇಲೆ ಇಲ್ಲದ ಪ್ರೀತಿ ದೇಶದ ಮೇಲೆ ಏನು ಇರುತ್ತದೆ? ಎಲ್ಲ ಢೋಂಗಿ~-ಮಕ್ಕಳಿಗೆ ಹೇಳಲಾಗದ್ದನ್ನು ರಾಂಪಣ್ಣ ನನ್ನೊಡನೆ ಹೇಳಿ ಕೋಪ ತೀರಿಸಿಕೊಂಡರು.
ಅವರ ಹೊಟ್ಟೆ ಉರಿ ಹೆಚ್ಚಿಸಿರುವುದು ನೆರೆಯಲ್ಲಿಯೇ ಇನ್ನೊಂದು ರೈತ ಕುಟುಂಬ. ಆ ಕುಟುಂಬದ ಯಜಮಾನನಿಗೂ ಮೂವರು ಮಕ್ಕಳು. ಅವರಲ್ಲಿ ಯಾರಿಗೂ ಶಿಕ್ಷಣ ತಲೆಗೆ ಹತ್ತಿಲ್ಲ. ಒಬ್ಬ ಮಗ ಊರಲ್ಲಿಯೇ ಇದ್ದು ಗದ್ದೆ-ತೋಟ ನೋಡಿಕೊಳ್ಳುತ್ತಿದ್ದಾನೆ. ಇನ್ನೊಬ್ಬ ಆಟೋರಿಕ್ಷಾ ಓಡಿಸುತ್ತಿದ್ದಾನೆ. ಊರಿನ ಯುವಕ ಸಂಘಕ್ಕೆ ಈಗ ಅವನೇ ಅಧ್ಯಕ್ಷ. ಮಗಳು ಸಮೀಪದ ಊರಿನ ರೈತನನ್ನೇ ಮದುವೆಯಾಗಿದ್ದಾಳೆ. ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳ ಗೌಜಿ-ಗದ್ದಲ. ಮೂರೂ ಹೊತ್ತು ದುಡ್ಡಿಗಾಗಿ ಕಿತ್ತಾಟ, ತಂದೆ-ಮಕ್ಕಳ ಬಡಿದಾಟ, ಅತ್ತೆ-ಸೊಸೆಯರ ಕಾದಾಟ ಎಲ್ಲವೂ ನಡೆಯುತ್ತಿವೆ. ಅವರೆಲ್ಲರೂ ಬಂದು ರಾಂಪಣ್ಣನವರ ಬಳಿ ದೂರು ಹೇಳುತ್ತಿರುತ್ತಾರೆ. ಇದನ್ನೆಲ್ಲ ಕೇಳಿಕೇಳಿ ರಾಂಪಣ್ಣ ಇನ್ನಷ್ಟು ಖಿನ್ನರಾಗುತ್ತಾರೆ. ಅವರಿಗಾಗಿ ಅಲ್ಲ, ತಮಗಾಗಿ. `ನಮ್ಮ ಸ್ಮಶಾನದಂತಹ ಮನೆಗಿಂತ ಆ ಜಗಳದ ಮನೆಯೇ ವಾಸಿ ಅಲ್ಲವೇ?~ ಎಂದು ಅವರು ಕೇಳುತ್ತಿದ್ದರು. 
ಬೇರೆ ಊರುಗಳಲ್ಲಿ ಇಂತಹ ಕುಟುಂಬಗಳ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಕ್ಕೆ ಹೋದರೆ ಈ ರೀತಿ ಮಕ್ಕಳನ್ನೇ ಶಪಿಸುತ್ತಾ ಕೂತಿರುವ ನೂರಾರು ತಂದೆ-ತಾಯಿಗಳನ್ನು ಕಾಣಬಹುದು. ಒಂದು ಕಾಲದಲ್ಲಿ ಬಡತನ, ಅಂಧಶ್ರದ್ಧೆ, ಅನಾನುಕೂಲತೆಗಳ ನಡುವೆಯೂ ಜೀವಂತವಾಗಿದ್ದ ಹಳ್ಳಿಗಳು ಈಗ ಬಯಲು ವೃದ್ಧಾಶ್ರಮದಂತೆ ಕಾಣುತ್ತಿವೆ. ವರ್ಷಕ್ಕೊಮ್ಮೆಯೋ, ಎರಡು ವರ್ಷಗಳಿಗೊಮ್ಮೆಯೋ ವಾರದ ರಜೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಬಂದಾಗ ಗಿಜಿಗುಡುತ್ತಿರುವ ಮನೆಗಳು ಅವರ ನಿರ್ಗಮನದೊಂದಿಗೆ  ಮತ್ತೆ ಭಣಗುಡುತ್ತವೆ.  ವರ್ಷಕ್ಕೆ ಎರಡರಿಂದ ಹತ್ತು ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುತ್ತಿರುವ ಇಂದಿನ ನವ ಮಧ್ಯಮ ವರ್ಗದ ಸದಸ್ಯರು ಇವರು. ಉದ್ಯೋಗವನ್ನರಸಿಕೊಂಡು ಹಳ್ಳಿ ತೊರೆದು ಪಟ್ಟಣ ಸೇರಿದವರು. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದು ಇದೇ ವರ್ಗ.
 ಶ್ರಿಮಂತರು ಮತ್ತು ಬಡವರ ಬಗ್ಗೆ ನಡೆದಷ್ಟು ಚರ್ಚೆ ಮಧ್ಯಮವರ್ಗದ ಬಗ್ಗೆ ನಮ್ಮಲ್ಲಿ ನಡೆದಿಲ್ಲ. ಅವರೊಂದು ರೀತಿಯಲ್ಲಿ ಮುಖ ಇಲ್ಲದ, ದನಿ ಇಲ್ಲದ, ಧೈರ್ಯವೂ ಇಲ್ಲದ ವಿಚಿತ್ರ ಜನವರ್ಗ ಎಂದೇ ಅವರನ್ನು ನಿರ್ಲಕ್ಷಿಸುತ್ತಾ ಬರಲಾಗಿದೆ. ಅಣ್ಣಾ ಚಳವಳಿಯ ನಂತರ ಈ ಮಧ್ಯಮ ವರ್ಗ ಮುಖ ಎತ್ತಿ, ದನಿ ಎತ್ತರಿಸಿ ಮಾತನಾಡತೊಡಗಿರುವ ಕಾರಣದಿಂದಾಗಿಯೇ ಅವರ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.  ಮಧ್ಯಮ ವರ್ಗ ಎಂದಾಕ್ಷಣ ನಮ್ಮಲ್ಲಿ ಬಹಳಷ್ಟು ಮಂದಿ ಅದನ್ನು ಮೇಲ್ಜಾತಿ ಜತೆ ಸಮೀಕರಿಸುತ್ತಾರೆ. ನಾನು ಗೌರವಿಸುವ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿಯವರು ಕಳೆದ ವಾರದ ನನ್ನ ಅಂಕಣಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿಯೂ ಎಲ್ಲೋ ಈ ಅಭಿಪ್ರಾಯ ಇದೆ. ಆದರೆ ನನ್ನ ಅಭಿಪ್ರಾಯ ಅದಾಗಿರಲಿಲ್ಲ. ಈ ಐದು ಕೋಟಿ ಜನಸಂಖ್ಯೆಯ ಮಧ್ಯಮವರ್ಗ ಇದೆಯಲ್ಲಾ, ಇದೊಂದು ಬೇರೆಯೇ ಜಾತಿ. ಇದರಲ್ಲಿರುವವರು ಮನು ಮಹಾಶಯ ಸೃಷ್ಟಿಸಿದ್ದ ವರ್ಣಾಶ್ರಮ ವ್ಯವಸ್ಥೆಯಲ್ಲಿರುವ ಜಾತಿಗಳಿಗೆ ಸೇರಿದವರಲ್ಲ. ಇವರೆಲ್ಲ ಆರ್ಥಿಕ ಉದಾರೀಕರಣ ಸೃಷ್ಟಿಸಿದ ಆಧುನಿಕ `ವರ್ಣಾಶ್ರಮ ವ್ಯವಸ್ಥೆ~ಯಲ್ಲಿನ ಜಾತಿಗಳಿಗೆ ಸೇರಿದವರು. ಇವರು ಮೇಲ್ಜಾತಿ ಕುಟುಂಬಗಳಲ್ಲಿ ಮಾತ್ರವಲ್ಲ, ಕೆಳಜಾತಿ ಕುಟುಂಬಗಳಲ್ಲಿಯೂ ಇದ್ದಾರೆ, ಬ್ರಾಹ್ಮಣ-ಅಬ್ರಾಹ್ಮಣ ಎಲ್ಲ ಜಾತಿಗಳಲ್ಲಿಯೂ ಇದ್ದಾರೆ. ಎಲ್ಲರ ಮನೆಯಲ್ಲಿಯೂ ಇದ್ದಾರೆ.  `ನಾವೆಲ್ಲ  ಭಾಷೆಗಾಗಿ, ನೀರಿಗಾಗಿ, ಭೂಮಿಗಾಗಿ ನಡೆಸುತ್ತಿದ್ದ ಚಳವಳಿಯ ಕಾಲದಲ್ಲಿ ಅತ್ತ ಸುಳಿಯದ ನನ್ನ ಮಗಳು  ಮೊನ್ನೆ ಫ್ರೀಡಮ್ ಪಾರ್ಕ್‌ಗೆ ಹೋಗಿ ಕೂತಿದ್ದಳು~ ಎಂದು ಇತ್ತೀಚೆಗೆ ಸಿಕ್ಕ ಹಿರಿಯ ಹೋರಾಟಗಾರರೊಬ್ಬರು ವಿಷಾದದಿಂದ ಹೇಳುತ್ತಿದ್ದರು. `ನಮ್ಮ ಜತೆ ಗುರುತಿಸಿಕೊಳ್ಳಲು ಏನೋ ಕೀಳರಿಮೆ, ಫ್ರೀಡಮ್‌ಪಾರ್ಕ್‌ನಲ್ಲಿ ಹೋಗಿ ಕೂತರೆ ಸಿಗುವ ಸಾಮಾಜಿಕ ಮಾನ್ಯತೆಯೇ ಬೇರೆ ಎನ್ನುವುದು ಅವಳಿಗೆ ತಿಳಿದಿದೆ~ ಎನ್ನುತ್ತಿದ್ದರು ಅವರು.
`ಅಣ್ಣಾ ಚಳವಳಿ ನವ ಮಧ್ಯಮವರ್ಗದ ಅಂತರಾತ್ಮವನ್ನು ಬಡಿದೆಬ್ಬಿಸಿದೆ, ಅವರು ಜಾಗೃತರಾಗಿದ್ದಾರೆ, ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ~ ಎಂದೆಲ್ಲ ಹೇಳಲಾಗುತ್ತಿದೆ. ನಿಜವಾಗಿಯೂ ಅಂತಹ ಪರಿವರ್ತನೆ ನಡೆದಿದ್ದರೆ ಅದನ್ನು ತೆರೆದ ಮನಸ್ಸಿನಿಂದ ಸ್ವಾಗತಿಸೋಣ. ಆದರೆ ನಾವು ಇಲ್ಲಿಯವರೆಗೆ ಈ ವರ್ಗದಲ್ಲಿ ಕಂಡ ಹೆಚ್ಚಿನವರು ಅತೀ ಎನಿಸುವಷ್ಟು ಭೌತಿಕವಾದಿಗಳು, ಸ್ವಾರ್ಥಿಗಳು ಮತ್ತು ಆಳದಲ್ಲಿ ಆತ್ಮವಂಚಕರಾಗಿರುವವರು. ಬದುಕು ಎಂದರೆ ತನ್ನ ಮನೆ, ಮಡದಿ, ಮಕ್ಕಳು ಅಷ್ಟೆ. ಅದರಾಚೆಗೆ ಇರುವ ಸಮಾಜದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಇವರಿಗೆ ತಂದೆ-ತಾಯಿಯನ್ನು ನೋಡಿಕೊಳ್ಳುವುದೆಂದರೆ ಅವರ ಬ್ಯಾಂಕ್ ಖಾತೆಗೆ ಒಂದಷ್ಟು ದುಡ್ಡು ಹಾಕುವುದು. ಇನ್ನೂ ಕಿರಿಕಿರಿ ಮಾಡಿದರೆ ಎಲ್ಲಾದರೂ ವೃದ್ಧಾಶ್ರಮಕ್ಕೆ ಕೊಂಡೊಯ್ದು ಸೇರಿಸುವುದು. ಇವರ ಸಮಾಜ ಸೇವೆ ಕೂಡಾ ವಾರಾಂತ್ಯದ ಒಂದು ಔಟಿಂಗ್ ಅಷ್ಟೆ. ತಾವು ಬಹಳ ಪ್ರಗತಿಶೀಲರು, ಉದಾರ ಮನೋಭಾವದವರು ಎಂದು ಸಮಾಜದಲ್ಲಿ ತೋರಿಸಿಕೊಳ್ಳುವ ಇವರು ಪಕ್ಕದಲ್ಲಿ ಮಲಗಿದ್ದ ಹೆಂಡತಿಯ ಮೊಬೈಲ್‌ಗೆ ನಡುರಾತ್ರಿಯಲ್ಲಿ ಸಹೋದ್ಯೋಗಿಯ ಎಸ್‌ಎಂಎಸ್ ಬಂದರೆ ನಿದ್ದೆಗೆಡಿಸಿಕೊಳ್ಳುತ್ತಾರೆ.
ಇಂತಹದ್ದೊಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿರುವ ಕೌಟುಂಬಿಕ ಹಿಂಸೆ ಮತ್ತು ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಯಾರೆಂದು ಅಧ್ಯಯನ ಮಾಡಿದರೆ ಈ ನವ ಮಧ್ಯಮ ವರ್ಗದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಜಾತಿ ಎಲ್ಲಿದೆ ಎಂದು ಉಡಾಫೆಯಿಂದ ಪ್ರಶ್ನಿಸುವ ಇವರ ಜಾತ್ಯತೀತ ನಿಲುವಿನ ಹಿಂದಿನ ಆತ್ಮವಂಚನೆಯನ್ನು ತಿಳಿದುಕೊಳ್ಳಬೇಕಾದರೆ ಭಾನುವಾರ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಮೆಟ್ರಿಮೋನಿಯಲ್ ಪುಟ ಓದಬೇಕು.
ಈ ಜನವರ್ಗ ಅಣ್ಣಾ ಹಜಾರೆ ಅವರಿಂದ ಕಲಿತದ್ದೇನು, ಕೇವಲ ಭ್ರಷ್ಟಾಚಾರದ ವಿರುದ್ಧದ ಹೋರಾಟವೇ? ಅಣ್ಣಾ ಎಂದರೆ ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಣ್ಣಾ ಹಜಾರೆ ಅವರಿಗೆ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟಿರಬಹುದು. ಆದರೆ ಅವರ ಬದುಕಿನ ಬಹುದೊಡ್ಡ ಸಾಧನೆ ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಹುಟ್ಟೂರು ರಾಳೇಗಣಸಿದ್ಧಿಯಲ್ಲಿ ಮಾಡಿರುವ ಗ್ರಾಮ ಸುಧಾರಣೆ. ಮನಸ್ಸು ಮಾಡಿದ್ದರೆ ಅವರು ಕೂಡಾ ಮಾಜಿ ಸೈನಿಕನಿಗೆ ಸರ್ಕಾರ ನೀಡುವ ಜಮೀನನ್ನು ಪಡೆದು ನಿಶ್ಚಿಂತೆಯಿಂದ ಇರಬಹುದಿತ್ತು. ಆದರೆ ಅವರು ಯೋಚನೆ ಮಾಡಿದ್ದೇ ಬೇರೆ. ಅಣ್ಣಾನ ಪ್ರವೇಶವಾಗುವ ವರೆಗೆ ರಾಳೇಗಣಸಿದ್ಧಿ ಬಡತನ, ಅನಕ್ಷರತೆ, ಮೂಢನಂಬಿಕೆಗಳಿಂದ ಕೂಡಿದ ದೇಶದ ಸಾವಿರಾರು ಗ್ರಾಮಗಳಲ್ಲಿ ಒಂದಾಗಿತ್ತು. ಇಂದು ಅದು ಕಳ್ಳರು, ಕುಡುಕರು, ಭ್ರಷ್ಟರು, ಸೋಮಾರಿಗಳು, ಅನಕ್ಷರಸ್ಥರು ಇಲ್ಲದ ಆದರ್ಶ ಗ್ರಾಮ. ಮದುವೆ ಬೇಡ, ಕುಟುಂಬ ಬೇಡ ಎಂದು ಭೌತಿಕ ಜಗತ್ತಿನ ಎಲ್ಲ ಸುಖಗಳನ್ನು ತೊರೆದು ಗ್ರಾಮ ಸುಧಾರಣೆಗೆ 38ನೇ ವಯಸ್ಸಿನಲ್ಲಿ ತಮ್ಮನ್ನು ಅರ್ಪಿಸಿಕೊಂಡಾಗ ಮುಂದೊಂದು ದಿನ ಇಷ್ಟೊಂದು ಖ್ಯಾತಿ ಪಡೆಯಲಿದ್ದೇನೆ ಎಂದು ಅಣ್ಣಾ ಅವರಿಗೆ ಖಂಡಿತ ತಿಳಿದಿರಲಿಕ್ಕಿಲ್ಲ.
ಸ್ವಾರ್ಥವಿಲ್ಲದೆ, ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರು ಕೆಲಸ ಮಾಡಿದರು. ನೇರ ನಡೆ-ನುಡಿಯ ಮೇಲೆ ನಂಬಿಕೆ ಇಟ್ಟು ಬದುಕಿದರು.
ನಿಜವಾದ ಅಣ್ಣಾ ರಾಮಲೀಲಾ ಮೈದಾನದ ವೇದಿಕೆಯಲ್ಲಿ ಇರಲಿಲ್ಲ, ಅವರು ರಾಳೇಗಣ ಸಿದ್ಧಿಯ ಮನೆ ಮನೆಗಳಲ್ಲಿದ್ದಾರೆ. ಆ ಅಣ್ಣಾನನ್ನು ಬಿಟ್ಟು ಈ ಅಣ್ಣಾನನ್ನು ನೋಡಲಾಗುವುದೇ ಇಲ್ಲ, ನೋಡುವುದು ಸರಿಯೂ ಅಲ್ಲ. ಯುವಜನತೆ ಆದರ್ಶ ಎಂದು ಸ್ವೀಕರಿಸಬೇಕಾಗಿರುವುದು ಮತ್ತು ಕಾಯಾ, ವಾಚಾ ಮನಸಾ ಅನುಸರಿಸಬೇಕಾಗಿರುವುದು ಕೇವಲ ರಾಮಲೀಲಾ ಮೈದಾನದ ಅಣ್ಣಾನನ್ನಲ್ಲ. ಅದಕ್ಕಿಂತಲೂ ಮುಖ್ಯವಾಗಿ ರಾಳೇಗಣಸಿದ್ಧಿಯ ಅಣ್ಣಾನನ್ನು. ಇಳಿ ವಯಸ್ಸಿನಲ್ಲಿ ಮಕ್ಕಳ ಮುಖ ನೋಡಲು ಹಲುಬುತ್ತಿರುವ ರಾಂಪಣ್ಣನಂತಹವರು ಕೂಡಾ ಬಯಸುತ್ತಿರುವುದು ಇದನ್ನೇ. ರಾಮಲೀಲಾ ಮೈದಾನದ ಅಣ್ಣಾ ಅವರನ್ನು ಅನುಸರಿಸಿದವರು ಕತ್ತಲ ಹೊತ್ತಿನಲ್ಲಿ ರಸ್ತೆಬದಿ ಕ್ಯಾಂಡಲ್ ಹಚ್ಚಿ ಟಿವಿ ಪರದೆ ಮೇಲೆ ಕಾಣಿಸಿಕೊಳುತ್ತಾರೆ, ರಾಳೇಗಣಸಿದ್ಧಿಯ ಅಣ್ಣಾ ಅವರನ್ನು ಆದರ್ಶ ಎಂದು ಸ್ವೀಕರಿಸಿದವರು ಕತ್ತಲು ತುಂಬಿರುವ ಹಳ್ಳಿಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಬೆಳಕು ನೀಡುತ್ತಿರುವ ಹರೀಶ್ ಹಂದೆಯಂತಹವರಾಗುತ್ತಾರೆ. ನಮಗೆ ಬೇಕಾಗಿರುವುದು ಕ್ಯಾಂಡಲ್‌ವಾಲಾಗಳಲ್ಲ, ಹರೀಶ್ ಹಂದೆಯಂತಹವರು, ಅಲ್ಲವೇ?