Monday, July 18, 2011

ಭಗವದ್ಗೀತೆಯನ್ನು ಹೀಗೂ ಓದಬಹುದಲ್ಲವೇ?

`ಭಗವದ್ಗೀತೆ ಅಭಿಯಾನ ವಿರೋಧಿಸುವವರು ದೇಶ ಬಿಟ್ಟು ಹೋಗಲಿ~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಪ್ಪಣೆ ಕೊಡಿಸಿದ್ದಾರೆ.ಭಗವದ್ಗೀತೆ ಅಭಿಯಾನದಿಂದ ಕೆಟ್ಟದ್ದೇನಾಗಿದೆ ಎಂದು ಯಾರಾದರೂ ಪ್ರಶ್ನಿಸಿದರೆ ಅದಕ್ಕೆ ಉತ್ತರದಂತಿದೆ ಸಚಿವ ಕಾಗೇರಿ ಅವರ ಮಾತುಗಳು.

ಸಜ್ಜನ  ಮತ್ತು ಪ್ರಜ್ಞಾವಂತರೆನಿಸಿಕೊಂಡ ಕಾಗೇರಿ ಅವರನ್ನೇ ಈ ರೀತಿ  ಮನುಷ್ಯವಿರೋಧಿಯಂತೆ ಮಾತನಾಡಲು ಪ್ರೇರೇಪಿಸಿದ `ಭಗವದ್ಗೀತಾ ಅಭಿಯಾನ~ ಎಂತಹ ವಿದ್ಯಾರ್ಥಿಗಳನ್ನು ಸೃಷ್ಟಿಸಲಿದೆಯೋ ಗೊತ್ತಿಲ್ಲ.

ಧರ್ಮ ಅಫೀಮು ಇದ್ದಂತೆ ಎಂದು ಹೇಳಿರುವುದು ಇದಕ್ಕೇ ಇರಬೇಕು, ಯಾಕೆಂದರೆ ಒಮ್ಮಮ್ಮೆ ಪ್ರಜ್ಞಾವಂತರೆನಿಸಿಕೊಂಡವರು ಕೂಡಾ ಧಾರ್ಮಿಕ ಉನ್ಮಾದದ ಸುಳಿಗೆ ಸಿಕ್ಕಿ ಹಾದಿ ತಪ್ಪಿಬಿಡುತ್ತಾರೆ.

ಈ ದೇಶದ ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರಮಾಣ ಮಾಡಿ ಸಚಿವರಾದ ಕಾಗೇರಿ ಅವರಿಗೆ ತಾನಾಡಿದ ಮಾತುಗಳು ಅದಕ್ಕೆ ವಿರುದ್ಧವಾಗಿದೆ ಎಂದು ತಿಳಿಯದಷ್ಟು ಧರ್ಮದ ಮಂಪರು ಆವರಿಸಿಕೊಂಡು ಬಿಟ್ಟಿದೆ.

ಸದ್ಯ ತಮ್ಮ ಪಕ್ಷಕ್ಕೆ ಕರ್ನಾಟಕದಲ್ಲಿ ಮಾತ್ರ ಆಡಳಿತ ನಡೆಸಲು ಜನಾದೇಶ ಇದೆ ಎನ್ನುವುದನ್ನೂ ಅವರು ಮರೆತಂತಿದೆ. ಅದು ನೆನೆಪಿದ್ದರೆ ರಾಜ್ಯ ಬಿಟ್ಟು ತೊಲಗಿ ಎಂದಾದರೂ ಅವರು ಹೇಳುತ್ತಿದ್ದರೇನೋ?
ಈಗಿನ ವಿವಾದ ಭಗವದ್ಗೀತೆಯ ಧಾರ್ಮಿಕ ಪಾವಿತ್ರ್ಯ, ಜನರ ನಂಬಿಕೆ ಇಲ್ಲವೇ ಕೃತಿಯ ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದಲ್ಲ, ಅದು ಈ ಕಾರ‌್ಯಕ್ರಮದ ಹಿಂದಿನ ಉದ್ದೇಶ ಮತ್ತು ಪರಿಣಾಮಕ್ಕೆ ಸಂಬಂಧಿಸಿದ್ದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸಬೇಕೆನ್ನುವುದನ್ನು ಮುಖ್ಯಮಂತ್ರಿಗಳೋ, ಶಿಕ್ಷಣ ಸಚಿವರೋ ತಮ್ಮ ಮನೆಗಳಲ್ಲಿ ಕೂತು ನಿರ್ಧರಿಸಲಾಗುವುದಿಲ್ಲ.

ಅದಕ್ಕಾಗಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಇದೆ. ಅದರಲ್ಲಿನ ತಜ್ಞರು ಚರ್ಚಿಸಿ ನೀಡುವ ವರದಿಯನ್ನು ಆಧರಿಸಿ ಶಾಲೆಗಳಲ್ಲಿ ಬೋಧಿಸುವ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ನಿರ್ಧರಿಸಲಾಗುತ್ತದೆ.
ನಾಳೆ ಯಾವನೋ ಒಬ್ಬ `ಪವಾಡ ಮಾಡುವುದನ್ನು ಕಲಿಸುತ್ತೇನೆ~ ಎಂದೋ, `ಸರ್ಕಸ್ ಮಾಡುವುದಕ್ಕೆ ತರಬೇತಿ ನೀಡುತ್ತೇನೆ~ ಎಂದೋ ಬಂದರೆ ಅಂತಹವರಿಗೆ ಶಾಲೆಗಳಲ್ಲಿ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ.

ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಆಗಿನ ಮಾನವಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ಮುರಳಿ ಮನೋಹರ ಜೋಷಿ ಅವರು ಇಂತಹದ್ದೇ ದುಸ್ಸಾಹಸ ಮಾಡಿದ್ದರು. ಕೇಂದ್ರ ಶೈಕ್ಷಣಿಕ ಸಲಹಾ ಮಂಡಳಿಯನ್ನು ಪುನರ್‌ರಚಿಸಲು ಹೋಗದೆ ಎನ್‌ಸಿಇಆರ್‌ಟಿ ಮೂಲಕ ಪಠ್ಯಪುಸ್ತಕಗಳನ್ನು ತಿದ್ದುವ (ತಿರುಚುವ) ಪ್ರಯತ್ನ ನಡೆಸಿದ್ದರು.
ರಾಜ್ಯದಲ್ಲಿ ಮೂರುವರ್ಷಗಳ ಅಧಿಕಾರದ ನಂತರ ಇಲ್ಲಿನ ಶಿಕ್ಷಣ ಸಚಿವರು ಈ ಕೆಲಸ ಪ್ರಾರಂಭಿಸಿದ್ದಾರೆ. ತನ್ನೂರಿನ ಮಠದ ಸ್ವಾಮಿಯೊಬ್ಬರು `ಭಗವದ್ಗೀತೆ ಅಭಿಯಾನ ಮಾಡುತ್ತೇನೆ~ ಎಂದು ಹೇಳಿದಾಗ ಅದಕ್ಕೆ ಕಣ್ಣುಮುಚ್ಚಿ ಆದೇಶ ಹೊರಡಿಸಿ ಜನರ ತೆರಿಗೆ ಹಣವನ್ನು ಸಮರ್ಪಿಸಿದ್ದಾರೆ. ಆ ಕಾರ‌್ಯಕ್ರಮದ ಹಿಂದಿನ ನಿಜವಾದ ಉದ್ದೇಶವೇನು?
ಅದರ ಸ್ವರೂಪವೇನು? ಅದರಿಂದ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮಗಳೇನು? ಉದ್ಭವಿಸಬಹುದಾದ ಹೊಸ ಸಮಸ್ಯೆಗಳೇನು? ಇವೆಲ್ಲವನ್ನು ಒಬ್ಬ ಜವಾಬ್ದಾರಿಯತ ಸಚಿವನಾಗಿ ತಿಳಿದುಕೊಳ್ಳುವ ಕಷ್ಟವನ್ನು ಅವರು ತೆಗೆದುಕೊಂಡಿಲ್ಲ. ತಾನು ನಂಬಿರುವ ತತ್ವಗಳಿಗೆ ನಿಷ್ಠನಾಗಿರುವ ಸ್ವಯಂಸೇವಕನಂತೆ ವರ್ತಿಸಿದ್ದಾರೆ.

ಕಾರ‌್ಯಕ್ರಮಕ್ಕೆ ಅನುಮತಿ ನೀಡಿರುವುದು ಮಾತ್ರವಲ್ಲ, ಅದರ ರಕ್ಷಣೆಗೆ  ಲಾಠಿ ಹಿಡಿದು ನಿಂತಿದ್ದಾರೆ. ಧರ್ಮ ಪ್ರೇರಿತ ಅಭಿಯಾನಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಉಳಿಯುವುದಿಲ್ಲ. ನಾಳೆ ಮುಸ್ಲಿಂ ಇಲ್ಲವೇ ಕ್ರೈಸ್ತ ಧರ್ಮಗುರುಗಳು ಬಂದು ಕುರಾನ್ ಇಲ್ಲವೇ ಬೈಬಲ್ `ಕಂಠ ಪಾಠ ಮಾಡಿಸುತ್ತೇವೆ~ ಎಂದು ಬಂದರೆ ನಿರಾಕರಿಸುವುದು ಹೇಗೆ?
ಭಗವದ್ಗೀತೆಯೂ ಸೇರಿದಂತೆ ಪುರಾಣಗಳನ್ನು ವಿದ್ಯಾರ್ಥಿಗಳಿಗೆ ಓದಿಸಿದರೆ ತಪ್ಪೇನು ಎಂಬ ಪ್ರಶ್ನೆ ಸಹಜವಾದುದು. `ಪುರಾಣ ಕಥೆಗಳೆಂದರೆ ಜನರ ಕನಸು ಮತ್ತು ದುಃಖಗಳು. ಅವರು ಅತ್ಯಂತ ಆಳದಲ್ಲಿ ಆನಂದಿಸಿದ ಮತ್ತು ಅತ್ಯಮೂಲ್ಯ ಎಂದು ತಿಳಿದುಕೊಂಡ ಆಸೆ-ಆಕಾಂಕ್ಷೆಗಳು, ಬದುಕಿನ ಭಾಗವಾಗಿರುವ ಕೊನೆಯೇ ಇಲ್ಲದ ವಿಷಾದಗಳು, ಸ್ಥಳೀಯ ಮತ್ತು ಲೌಕಿಕ ಇತಿಹಾಸ-ಎಲ್ಲವೂ ಪುರಾಣಗಳಲ್ಲಿ ಅಳಿಸಲಾಗದಂತಹ ದಾಖಲೆಗಳಾಗಿರುತ್ತವೆ~ ಎಂದು ದೇಶ ಕಂಡ ಅಪರೂಪದ ಚಿಂತಕ ರಾಮಮನೋಹರ ಲೋಹಿಯಾ ಹೇಳಿದ್ದರು.

ರಾಮ, ಕೃಷ್ಣ ಮತ್ತು ಶಿವನ ಬಗ್ಗೆ ಲೋಹಿಯಾ ಬರೆದಿರುವ ಪ್ರಬಂಧ ಈ ದೇಶದ ಆಸ್ತಿಕ-ನಾಸ್ತಿಕ ಮಹಾಶಯರೆಲ್ಲರೂ ಕಡ್ಡಾಯವಾಗಿ ಓದಲೇಬೇಕಾದುದು. ಈ ತ್ರಿಮೂರ್ತಿಗಳನ್ನು `ಭಾರತದ ಮಹಾ ಕನಸು ಮತ್ತು ದುಃಖದ ಪ್ರತೀಕ~ ಎನ್ನುತ್ತಾರೆ ಅವರು.

`ಆದ್ದರಿಂದಲೇ ಇವರ ಕಥೆಗಳನ್ನು ಏಕಸೂತ್ರಕ್ಕೆ ಹೊಂದಿಸಿಕೊಳ್ಳುವುದು ಇಲ್ಲವೇ ಅವರ ಜೀವನದ ಜತೆ ವೈಫಲ್ಯವನ್ನೇ ಕಾಣದ ನೈತಿಕತೆಯನ್ನು ಹೆಣೆಯುವುದು ಮತ್ತು ಸುಳ್ಳು ಇಲ್ಲವೇ ಅಸಂಭವವೆಂದು ಕಾಣುವುದೆಲ್ಲವನ್ನೂ ಕಿತ್ತು ಬಿಸಾಡಲು ಹೊರಟರೆ ಜೀವನದಲ್ಲಿ ತರ್ಕವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ದೋಚಿದಂತಾಗುತ್ತದೆ~ ಎಂದು ಹೇಳಿದ್ದರು ರಾಮ ಮನೋಹರ ಲೋಹಿಯಾ.
ಭಗವದ್ಗೀತೆ ಮಾತ್ರವಲ್ಲ, ಮಹಾಭಾರತ, ರಾಮಾಯಣ, ಕುರಾನ್, ಬೈಬಲ್ ಎಲ್ಲವನ್ನೂ ಎಲ್ಲರೂ ಓದಲೇ ಬೇಕು. ಆದರೆ ಅದನ್ನು ಹೇಗೆ ಓದಬೇಕೆಂಬುದೇ ನಮ್ಮ ಮುಂದಿರುವ ಮುಖ್ಯ ಪ್ರಶ್ನೆ.
ಆಸ್ತಿಕರು ಪುರಾಣವೆಂದು ನಂಬುವ ಮಹಾಭಾರತ ಎಂಬ ಮಹಾಕಾವ್ಯದ ಒಂದು ಭಾಗ ಭಗವದ್ಗೀತೆ. ಇದು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಕೃಷ್ಣ ಬೋಧಿಸಿದ ಗೀತೆ. ಪುರಾಣವೇ ಹಾಗೆ, ಅದಕ್ಕೆ ಇತಿಹಾಸಕ್ಕೆ ಅಗತ್ಯವಾದ ಅಧ್ಯಯನದ ಚೌಕಟ್ಟು ಇಲ್ಲವೇ ಪುರಾವೆಗಳ ನೆಲೆಗಟ್ಟು ಬೇಕಾಗುವುದಿಲ್ಲ.
ಅದನ್ನು ತಮ್ಮ  ಆಲೋಚನೆಗೆ ತಕ್ಕಂತೆ ಕಟ್ಟುತ್ತಾ, ಬಿಚ್ಚುತ್ತಾ, ವ್ಯಾಖ್ಯಾನಿಸುತ್ತಾ, ಮರುವ್ಯಾಖ್ಯಾನಿಸುತ್ತಾ ಹೋಗಬಹುದು. ಪುರಾಣಗಳ ವ್ಯಾಖ್ಯಾನ ಅದನ್ನು ವ್ಯಾಖ್ಯಾನಿಸುವವರ ನಿಲುವುಗಳನ್ನು ಅವಲಂಬಿಸಿರುವುದರಿಂದ ನಮ್ಮ ನಡುವೆ ಇರುವುದು ಒಂದು ರಾಮಾಯಣ, ಒಂದು ಮಹಾಭಾರತ ಅಲ್ಲ. ಪರಸ್ಪರ ಭಿನ್ನವಾದ ಈ ಕೃತಿಯ ಹಲವು ರೂಪಗಳು ಜನಪ್ರಿಯವಾಗಿವೆ.
ಭಗವದ್ಗೀತೆಯನ್ನು ಪವಿತ್ರಗ್ರಂಥವೆಂದು ಕುರುಡಾಗಿ ನಂಬುವವರು ಇದ್ದ ಹಾಗೆ, ಹಿಂಸೆಯನ್ನು ಸಮರ್ಥಿಸುವ, ಚಾತುರ್ವರ್ಣ ಪದ್ಧತಿಯನ್ನು ಒಪ್ಪಿಕೊಂಡಿರುವ, ಊಳಿಗಮಾನ್ಯ ವ್ಯವಸ್ಥೆಯನ್ನು ಪ್ರತಿಪಾದಿಸುವ, ಮನುಷ್ಯ ಸಂಬಂಧಗಳನ್ನು ನಿರಾಕರಿಸುವ, ಶ್ರಮಕ್ಕೆ ಪ್ರತಿಫಲ ನಿರೀಕ್ಷಿಸಬಾರದೆಂದು ಹೇಳುವ ಭಗವದ್ಗೀತೆ  ಜನವಿರೋಧಿಯಾದುದು ಎಂದು ಹೇಳುವವರೂ ಇದ್ದಾರೆ.

ಮಹಾಭಾರತ ಎನ್ನುವುದು ಶ್ರಿಕೃಷ್ಣನೆಂಬ ಅನಾರ್ಯ ಏಕಾಂಗಿಯಾಗಿ ಕೇವಲ ಬುದ್ಧಿಬಲದಿಂದ ಆರ್ಯ ಸಾಮ್ರಾಜ್ಯವನ್ನು ನಾಶ ಮಾಡಿದ ಕತೆ ಎನ್ನುವವರೂ ಇದ್ದಾರೆ. ಆ ಮಹಾಭಾರತದ ಭಾಗವಾಗಿರುವ ಭಗವದ್ಗೀತೆಯನ್ನು ಕಂಠಪಾಠ ಮಾಡುವ ವಿದ್ಯಾರ್ಥಿಗಳಿಗೆ ಇದನ್ನೆಲ್ಲ ತಿಳಿದುಕೊಳ್ಳುವ ಅವಕಾಶ ಖಂಡಿತ ಇರುವುದಿಲ್ಲ.
ಈ ದೇಶದಲ್ಲಿ ಆರ್ಯರ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವಾಮ್ಯ ಸ್ಥಾಪನೆಯ ಮೊದಲ ಕಥನವೆಂದು ಬಗೆಯಲಾಗಿರುವ ರಾಮಾಯಣದ ಕಾಲ ನಾಲ್ಕು ಸಾವಿರ ವರ್ಷಗಳಷ್ಟು ಹಿಂದಿನದೆಂದು ಊಹಿಸಲಾಗಿದೆ.
ಸುಮಾರು ಮೂರು ಸಾವಿರ ವರ್ಷಗಳ ಹಿಂದಿನದೆಂದು ಊಹಿಸಲಾಗಿರುವ ಮಹಾಭಾರತದ ಕಥನ ಕಾಲದಲ್ಲಿ ಭಾರತದಲ್ಲಿ ಆರ್ಯರು ಮತ್ತು ಅನಾರ್ಯರ ಸಾಂಸ್ಕೃತಿಕ ಸೆಣಸಾಟ ಇನ್ನೂ ನಡೆಯುತ್ತಿದ್ದರೂ ರಾಮಾಯಣದಲ್ಲಿ ಚಿತ್ರಿತರಾಗಿದ್ದ ರಕ್ಕಸ ಕುಲಜರ ಕ್ರೌರ್ಯದ ವರ್ಣನೆ ಮಹಾಭಾರತದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿತ್ತು.

ಅಷ್ಟರಲ್ಲಿ ಅನಾರ್ಯ ಸಮೂಹವನ್ನು ಆಳಬಲ್ಲ ಕ್ಷತ್ರಿಯ ವರ್ಗವನ್ನು ಆರ್ಯರು ರೂಪಿಸಿದ್ದರು. ಆರ್ಯರ ಆಕ್ರಮಣಕ್ಕೆ ದ್ರಾವಿಡರ ಪ್ರತಿರೋಧ ಕಡಿಮೆಯಾಗಿ ಅವರು, ಆರ್ಯರು ನಿರೂಪಿಸಿದ ವರ್ಣದ ಚೌಕಟ್ಟಿನಲ್ಲಿ ಬದುಕಲಾರಂಭಿಸಿದ್ದರು. ಇದರಿಂದಾಗಿ ಮಹಾಭಾರತದಲ್ಲಿ ಕ್ರೂರಿಗಳಾದ ರಕ್ಕಸರ ಚಿತ್ರ ಅಷ್ಟಾಗಿ ಕಾಣುವುದಿಲ್ಲ. ಬದಲಾಗಿ ವೃತ್ತಿಮೂಲವಾದ ಜಾತಿವಾರು ವಿಂಗಡಣೆ ಕಾಣಸಿಗುತ್ತದೆ.
ಇಂತಹ ವಿಂಗಡಣೆಯಲ್ಲಿ ಗೊಲ್ಲರ ಕುಲದಲ್ಲಿ ಹುಟ್ಟಿದ ಕೃಷ್ಣ ಮೂಲತಃ ಒಬ್ಬ ದ್ರಾವಿಡ. ಪುರಾಣದಲ್ಲಿ ಚಿತ್ರಿಸಿರುವಂತೆ ಅವನದು ನೀಲವರ್ಣ ಅಂದರೆ ಅವನೊಬ್ಬ ಕರಿಯ. ಆಗಿನ ಕಾಲದ ಆರ್ಯರಂತೆ ಆಜಾನುಬಾಹು ಅಲ್ಲ, ಅವನೊಬ್ಬ ಕುಳ್ಳ. ಗೊಲ್ಲರ ಕುಲದಲ್ಲಿ ಹುಟ್ಟಿ ಈ ಕರಿಯ, ಕುಳ್ಳ ಕೃಷ್ಣ ಆಗಿನ ಆರ್ಯ ಪ್ರಭುತ್ವದ ಬುಡವನ್ನೇ ಅಲುಗಾಡಿಸಿದ್ದ.

ಆರ್ಯ ಮೂಲವಾದ ಕುರುಕುಲದಲ್ಲಿ ಕೃಷ್ಣ ಹುಟ್ಟಿಸಿದ ದಾಯಾದಿ ಸಮರ ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವ ಒಂದು ಅಪರೂಪದ ರಾಜಕೀಯ ತಂತ್ರವೆನ್ನಬಹುದು. ಕೌರವರು ಮತ್ತು ಪಾಂಡವರ ನಡುವೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡ ಕೃಷ್ಣ, ಆರ್ಯಪುತ್ರರೊಳಗೆ ದಾಯಾದಿ ಮತ್ಸರವನ್ನು ಹುಟ್ಟಿಸಿ ಅದು ಕ್ರಮೇಣ ದ್ವೇಷವಾಗಿ ಬೆಳೆಯುವಂತೆ ಮಾಡಿದ. ಆ ಮೂಲಕ ಈ ಕ್ಷತ್ರಿಯರ ನಡುವೆ ನಡೆದ ಮಹಾಸಮರದಲ್ಲಿ ಆರ್ಯ ಪ್ರಭುತ್ವವೇ ನಶಿಸಿಹೋಗಬಹುದೆಂಬ ಲೆಕ್ಕಾಚಾರ ಕೃಷ್ಣನಿಗಿದ್ದಿರಬೇಕು.

ಹೀಗೆ ಆಗುವ ಆರ್ಯ ಕುಲಜರ ಅವನತಿ ದ್ರಾವಿಡ ಪ್ರಭುತ್ವಕ್ಕೆ ದಾರಿ ಮಾಡುವುದೆಂಬ ನಿರೀಕ್ಷೆ ಆತನಿಗಿತ್ತೋ ಏನೋ? ಕೌರವ ಮತ್ತು ಪಾಂಡವರೊಳಗಿನ ದೀರ್ಘಾವಧಿಯ ಆಂತರಿಕ ಕಲಹದ ಅವಧಿಯಲ್ಲಿ ಕೃಷ್ಣ ದ್ರಾವಿಡ ಶಕ್ತಿಯ ಪ್ರಭಾವವಲಯವೊಂದನ್ನು ಸೃಷ್ಟಿಸಿದ್ದ. ಅನಾರ್ಯರಿಗೆ ಕ್ಷತ್ರಿಯ ಅಂತಸ್ತು ನಿರಾಕರಿಸಲ್ಪಟ್ಟಿರುವ ಕಾಲವದು.

ಅಂತಹ ಕಾಲದಲ್ಲಿಯೂ ಕೌರವ-ಪಾಂಡವರ ಕಲಹದಿಂದಾಗಿ ಭಾರತದ ಎಲ್ಲೆಡೆ ಅನೇಕ ಮಂದಿ ದ್ರಾವಿಡರು ಕ್ಷತ್ರಿಯ ಪಟ್ಟಕ್ಕೇರಿದ್ದರು. ಮಹಾಭಾರತದಲ್ಲಿ ನಮಗೆ ಇಂತಹ ಅನೇಕ ನಿದರ್ಶನಗಳು ಸಿಗುತ್ತವೆ. ಆರ್ಯಕ್ಷತ್ರಿಯರು ಮತ್ತು ದ್ರಾವಿಡ ರಾಜ ವಂಶಗಳ ನಡುವೆ ವೈವಾಹಿಕ ಸಂಬಂಧಗಳಿಗೆ ಕೃಷ್ಣ ಚಾಲನೆ ಕೊಟ್ಟಿದ್ದ.

ಮಹಾಭಾರತ ಯುದ್ಧದಲ್ಲಿ ದ್ರಾವಿಡ ರಾಜರ ಸಹಭಾಗಿತ್ವವಾಗದಂತೆಯೂ ಕೃಷ್ಣ ನೋಡಿಕೊಂಡಿದ್ದ. ಗೋಪಾಲಕರ ರಾಜನಾದ ಅಣ್ಣ ಬಲರಾಮ ಯಾದವ ಸೇನೆಯನ್ನು ಕುರುಕ್ಷೇತ್ರಕ್ಕೆ ಕರೆದುಕೊಂಡು ಬಾರದಂತೆ ಕೃಷ್ಣ ಹೂಡಿದ ತಂತ್ರದ ಪ್ರಸ್ತಾಪ ಮಹಾಭಾರತ ಕಾವ್ಯದಲ್ಲಿದೆ.

ಕೌರವರು-ಪಾಂಡವರ ನಡುವಿನ ಪ್ರತಿಷ್ಠೆಯ ಮಹಾಸಮರದಲ್ಲಿ ತಟಸ್ಥರಾಗಿ ಉಳಿದವರೆಲ್ಲರೂ ದ್ರಾವಿಡ ರಾಜರು. ಹೀಗೆ ದ್ರಾವಿಡ ರಾಜರನ್ನು ತಟಸ್ಥರಾಗಿ ಉಳಿಸಿ ಕುರುಕ್ಷೇತ್ರವನ್ನು ಆರ್ಯ-ಕ್ಷತ್ರಿಯರ ರುದ್ರಭೂಮಿಯಾಗಿ ಮಾಡಿದ್ದ. ಆ ಕಾಲದಲ್ಲಿ ಆರ್ಯ ಪ್ರಭುತ್ವ ಸೃಷ್ಟಿಸಿದ್ದ ವರ್ಣಾಶ್ರಮ ಧರ್ಮವನ್ನು ಶಿಥಿಲಗೊಳಿಸಿ ವರ್ಣಸಂಕರಕ್ಕೆ ದಾರಿ ಮಾಡಿಕೊಡುವುದು ಕೃಷ್ಣನ ಪರಮೋದ್ದೇಶವಾಗಿತ್ತೆನ್ನಬಹುದು. 
ಈ ದೃಷ್ಟಿಯಿಂದ ಕೃಷ್ಣ ಒಬ್ಬ ಕ್ರಾಂತಿಕಾರಿ ಸಮಾಜ ಸುಧಾರಕನಂತೆ ಕಾಣುತ್ತಾನೆ. ಈ ವಿಚಾರಗಳ ಬೆಳಕಲ್ಲಿ ಕೃಷ್ಣನನ್ನು ನೋಡಿದರೆ ಆತ ಬೋಧಿಸಿದ ಭಗವದ್ಗೀತೆಯ ಶ್ಲೋಕಗಳು ಬೇರೆಯೇ ಅರ್ಥಗಳನ್ನು ಹೊರಡಿಸುತ್ತವೆ.
ಭಗವದ್ಗೀತೆ ಅಭಿಯಾನಕ್ಕೆ ಹೊರಟಿರುವ ಸೋಂದಾ ಸ್ವರ್ಣವಲ್ಲಿ ಮಠದ ಸ್ವಾಮಿಗಳು ಖಂಡಿತ ಭಗವದ್ಗೀತೆಯ ಶ್ಲೋಕಗಳನ್ನು ಈ ರೀತಿ ವೈಚಾರಿಕ ಹಿನ್ನೆಲೆಯಲ್ಲಿ ವ್ಯಾಖ್ಯಾನ ಮಾಡುವ ಸಾಹಸ ಮಾಡಲಾರರು. ವರ್ಣಾಶ್ರಮ ವ್ಯವಸ್ಥೆಯನ್ನು ಪ್ರತಿಪಾದಿಸುವ ಧಾರ್ಮಿಕ ನಾಯಕರಿಂದ ಇದನ್ನು ನಿರೀಕ್ಷಿಸಲೂ ಸಾಧ್ಯ ಇಲ್ಲ.

ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಿಸುವ ಮೂಲಕ ಹಿಂದೂ ಧರ್ಮದ ಅಂಧಾಭಿಮಾನಿಗಳನ್ನು ಬೆಳೆಸುವುದಷ್ಟೇ ಅವರ ಉದ್ದೇಶವಾಗಿರಬಹುದು.
ಕುರುಕ್ಷೇತ್ರದಲ್ಲಿ ಅರ್ಜುನ `ಯುದ್ಧ ಮಾಡಲಾರೆ~ ಎಂದಾಗ `ಯುದ್ಧವೇ ನಿನ್ನ ಕರ್ತವ್ಯ, ಅದರಿಂದ ವಿಮುಖನಾಗದಿರು~ ಎಂದು ಅವನನ್ನು ಹುರಿದುಂಬಿಸಿ ಭಗವದ್ಗೀತೆಯನ್ನು ಬೋಧಿಸಿದ್ದ ಕೃಷ್ಣ ಕೊನೆಗೆ `ನಾನು ಹೇಳಿದ್ದನ್ನು ವಿಮರ್ಶಿಸಿ ನೋಡು, ಬಳಿಕ ನಿನ್ನ ಇಷ್ಟವಿದ್ದಂತೆ ಮಾಡು~ (ವಿಮೃಶ್ಯೈತದಶೇಷೇಣ, ಯಥೇಚ್ಛಸಿ ತಥಾ ಕುರು) ಎಂದು ಹೇಳಿದ್ದ.

ಕನಿಷ್ಠ, ಭಗವದ್ಗೀತೆಯಲ್ಲಿನ ಈ ಸಾಲುಗಳನ್ನಾದರೂ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಓದಿದ್ದರೆ ಭಗವದ್ಗೀತೆ ಅಭಿಯಾನದ ಹೆಸರಲ್ಲಿ ತಮ್ಮ ಪರಿವಾರದ ಅಜೆಂಡಾವನ್ನು ಅಮಾಯಕ ವಿದ್ಯಾರ್ಥಿಗಳ ಮೇಲೆ ಹೇರಲು ಹೋಗುತ್ತಿರಲಿಲ್ಲ. 

Monday, June 27, 2011

ನುಂಗಲಾರದಷ್ಟನ್ನು ಬಾಯಲ್ಲಿ ಹಾಕಿಕೊಂಡರೆ ಅಣ್ಣಾ?

ಅಣ್ಣಾ ಹಜಾರೆ ಅವರು ನುಂಗಲಾರದಷ್ಟನ್ನು ಬಾಯಲ್ಲಿ ಹಾಕಿಕೊಂಡುಬಿಟ್ಟಿದ್ದಾರೆ.ಉಗಿಯುವಂತಿಲ್ಲ, ನುಂಗುವಂತಿಲ್ಲ. ಈ ಸಂಕಟದಿಂದ ಪಾರಾಗಬೇಕಾದರೆ ಅವರು ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ.
ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯಲ್ಲಿನ ಎಲ್ಲ ಅಂಶಗಳನ್ನು  ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.

ಆದ್ದರಿಂದ ನುಡಿದಂತೆಯೇ ನಡೆಯಬೇಕೆಂದು ಹೊರಟರೆ ಆಗಸ್ಟ್ ಹದಿನಾರರಿಂದ ಅಣ್ಣಾ ಹಜಾರೆ ಅವರು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದು ಅನಿವಾರ‌್ಯವಾಗಬಹುದು.
ಉಳಿದಿರುವ ಇನ್ನೊಂದು ಆಯ್ಕೆ ಉಪವಾಸ ಸತ್ಯಾಗ್ರಹ ಕೈಬಿಟ್ಟು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಜನಜಾಗೃತಿಗೆ ಹೊರಡುತ್ತೇನೆ ಎಂದು ಘೋಷಿಸಿ ಯುದ್ದಭೂಮಿಯಿಂದ ಗೌರವಪೂರ್ವಕವಾಗಿ ನಿರ್ಗಮಿಸುವುದು.
ಸರ್ಕಾರದ ಮುಂದೆ ಕೂಡಾ ಇರುವುದು ಎರಡೇ ಆಯ್ಕೆ. ಒಂದೋ ನಾಗರಿಕ ಸಮಿತಿ ಹೇಳಿರುವುದನ್ನೆಲ್ಲ ಬಾಯಿಮುಚ್ಚಿಕೊಂಡು ಒಪ್ಪಿಕೊಳ್ಳುವುದು, ಇಲ್ಲವೇ ಮಾತುಕತೆಯ ಮಾರ್ಗವನ್ನು ಕೈಬಿಟ್ಟು ನೇರವಾಗಿ ಸಂಘರ್ಷಕ್ಕಿಳಿಯುವುದು. ಅಣ್ಣಾ ಹಜಾರೆ ಅವರಿಗೆ ಇರುವಷ್ಟು ಗೊಂದಲ ಸರ್ಕಾರಕ್ಕೆ ಇದ್ದ ಹಾಗಿಲ್ಲ.
ಅದು ಎರಡನೇ ಆಯ್ಕೆಗೆ  ಸಿದ್ದತೆ ನಡೆಸಿದಂತಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಕೂಗುಮಾರಿಯಾಗಿರುವ ದಿಗ್ವಿಜಯ್‌ಸಿಂಗ್ ಸಹೋದ್ಯೋಗಿಗಳ ಜತೆಗೂಡಿ ಆಗಲೇ ಈ ಕೆಲಸ ಪ್ರಾರಂಭಿಸಿದ್ದಾರೆ.
ಅಣ್ಣಾ ಹಜಾರೆ ಅವರ ಹಠಮಾರಿತನ ಮತ್ತು ಅವರ ಸಂಗಡಿಗರ ಬಾಯಿಬಡುಕತನ ಅತಿಯಾಯಿತು ಎನ್ನುವ ಜನರ ಗೊಣಗಾಟವನ್ನು ಕೂಡಾ ಕಾಂಗ್ರೆಸ್ ನಾಯಕರು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಭ್ರಷ್ಟ ವ್ಯವಸ್ಥೆಯಿಂದ ರೋಸಿಹೋಗಿರುವ ಅಸಹಾಯಕ ಜನರನ್ನು ಪಾರುಮಾಡಲು ಅವತಾರ ಎತ್ತಿ ಬಂದವರಂತೆ ಕಾಣಿಸಿಕೊಂಡ ಅಣ್ಣಾ ಹಜಾರೆ ಅವರು ಬಹುಬೇಗ ನೇಪಥ್ಯಕ್ಕೆ ಸರಿದು ಹೋಗುತ್ತಿದ್ದಾರೆಯೇ? ಇಂತಹ ಅನುಮಾನ ಅವರ ಅಭಿಮಾನಿಗಳನ್ನೂ ಕಾಡತೊಡಗಿದೆ.
ಒಂದೊಮ್ಮೆ ಅಣ್ಣಾ ಹಜಾರೆ `ಉಪವಾಸ ಸತ್ಯಾಗ್ರಹ ಪ್ರಾರಂಭಿಸಿಯೇ ತೀರುತ್ತೇನೆ~ ಎಂದು ಹೊರಟರೆ ಏನಾಗಬಹುದು? ಮೊದಲು ಕೇಂದ್ರ ಸರ್ಕಾರ ಅದನ್ನು ತಡೆಯಲು ಹತ್ತಾರು ಅಡ್ಡಿ-ಆತಂಕಗಳನ್ನು ಒಡ್ಡಬಹುದು (ಅನುಮತಿ ನಿರಾಕರಣೆ, ಇನ್ನಷ್ಟು ಆರೋಪಗಳ ಸುರಿಮಳೆ..ಇತ್ಯಾದಿ).
ಅವೆಲ್ಲವನ್ನೂ ಮೀರಿ ಉಪವಾಸ ಪ್ರಾರಂಭಿಸಿದರೆ ಒಂದೆರಡು ದಿನಗಳಲ್ಲಿಯೇ ಸರ್ಕಾರ ಅವರನ್ನು ಬಲಾತ್ಕಾರವಾಗಿ ಎಬ್ಬಿಸಿ ಆಸ್ಪತ್ರೆಗೆ ಸೇರಿಸಬಹುದು.

ಕಳೆದ ಬಾರಿಯ ಉಪವಾಸದ ನಂತರ ಅವರ ತಪಾಸಣೆ ನಡೆಸಿದ್ದ ವೈದ್ಯರು  ಮತ್ತೆ ಉಪವಾಸ ನಡೆಸುವುದು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂದು ಹೇಳಿರುವುದನ್ನೇ ಸರ್ಕಾರ ತನ್ನ ಸಮರ್ಥನೆಗೆ ಬಳಸಬಹುದು.

ಈ ರೀತಿ ಅಣ್ಣಾ ಹಜಾರೆ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದರೆ ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವವರು ಯಾರು? ಶಾಂತಿಭೂಷಣ್? ಪ್ರಶಾಂತ್ ಭೂಷಣ್? ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ? ಕಿರಣ್ ಬೇಡಿ? ಸ್ವಾಮಿ ಅಗ್ನಿವೇಶ್ ಅವರು ಈಗಾಗಲೇ ಮೆತ್ತಗೆ ದೂರ ಸರಿಯುತ್ತಿರುವುದರಿಂದ ಅವರ ಹೆಸರೂ ಹೇಳುವಂತಿಲ್ಲ.
ಬೇರೆ ಯಾರು? ಈಜಿಪ್ಟ್, ಟ್ಯುನೇಷಿಯಾದಂತೆ ಜನ ದಂಗೆ ಎದ್ದು ಬೀದಿಬೀದಿಗಳಲ್ಲಿ ಸೇರಲಿದ್ದಾರೆ ಎಂದೇನಾದರೂ ಅಣ್ಣಾ ಹಜಾರೆ ಮತ್ತು ಸಂಗಡಿಗರು ತಿಳಿದುಕೊಂಡಿದ್ದಾರೆಯೇ?
ಬದ್ಧತೆ ಮತ್ತು ಪ್ರಾಮಾಣಿಕತೆ ಎರಡರ ದೃಷ್ಟಿಯಿಂದಲೂ ಅಣ್ಣಾ ಹಜಾರೆ ಅವರನ್ನು ಬಾಬಾ ರಾಮ್‌ದೇವ್ ಜತೆ  ಹೋಲಿಸುವುದು ಸಾಧ್ಯ ಇಲ್ಲ ಎನ್ನುವುದು ನಿಜ.

ಆದರೆ ಸಂಘಟನೆಯ ದೃಷ್ಟಿಯಿಂದ ಅಣ್ಣಾ ಹಜಾರೆ ಅವರಿಗಿಂತ ಬಾಬಾ ರಾಮ್‌ದೇವ್ ಎಷ್ಟೋ ಪಾಲು ಹೆಚ್ಚು ಬಲಶಾಲಿಯಾಗಿದ್ದರು.  ದೇಶದಾದ್ಯಂತ ಪತಂಜಲಿ ಯೋಗಪೀಠದ ನೂರಾರು ಶಾಖೆಗಳಿವೆ.
ಯೋಗ ಶಿಬಿರಗಳು ಮತ್ತು ಟಿವಿ ಚಾನೆಲ್ ಮೂಲಕ ಕೋಟ್ಯಂತರ ಜನರ ಜತೆ ಅವರು ಸಂಪರ್ಕ ಸಾಧಿಸಿದ್ದಾರೆ. ಲಕ್ಷಾಂತರ ಮಂದಿ ಅವರ ಯೋಗ ಚಿಕಿತ್ಸೆಯ ಫಲಾನುಭವಿಗಳೂ ಆಗಿದ್ದಾರೆ.
ಇಷ್ಟಾಗಿಯೂ ಸರ್ಕಾರ ಅಮಾನುಷ ರೀತಿಯಲ್ಲಿ ಅವರ ಮೇಲೆ ಎರಗಿಬಿದ್ದಾಗ ಟಿವಿ ಕ್ಯಾಮೆರಾಗಳ ಮುಂದೆ ಒಂದಷ್ಟು ಮಹಿಳೆಯರು ಕಣ್ಣೀರು ಸುರಿಸಿದ್ದನ್ನು ಹೊರತುಪಡಿಸಿದರೆ ಬೇರೆ ಯಾವ ಅನಾಹುತವೂ ಆಗಲಿಲ್ಲ. ನಾಳೆ ಅಣ್ಣಾ ಹಜಾರೆ ಅವರನ್ನು ಬಂಧಿಸಿದರೆ ದೇಶದ ಜನ ಸಿಡಿದೆದ್ದು ಬೀದಿಗೆ ಇಳಿಯಬಹುದೇ?
ಅಣ್ಣಾ ಹಜಾರೆ ಅವರು ಆಗಲೇ ಸರ್ಕಾರ ಒಡ್ಡಿರುವ ಬೋನಿನಲ್ಲಿ ಬಿದ್ದಿದ್ದಾರೆ. ತಾನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖವಾಡ ಎಂಬ ಕಾಂಗ್ರೆಸ್ ನಾಯಕರ ಅಪಪ್ರಚಾರದಿಂದ ಸಿಟ್ಟಾದ ಅಣ್ಣಾ ಹಜಾರೆ ಆ ಎರಡೂ ಸಂಘಟನೆಗಳ ಜತೆ ತನಗೆ ಸಂಬಂಧ ಇರುವುದನ್ನು ನಿರಾಕರಿಸಿರುವುದು ಮಾತ್ರವಲ್ಲ, ಆ ಬಗ್ಗೆ ಪುರಾವೆಗಳಿದ್ದರೆ ಒದಗಿಸಿ ಎಂದು ಸವಾಲು ಹಾಕಿದ್ದಾರೆ.

ಅಂದರೆ ಬಿಜೆಪಿ ಜತೆ ಅವರು ಮುಂದೆಯೂ ಸೇರಿಕೊಳ್ಳುವುದಿಲ್ಲ ಎಂದೇ ಅರ್ಥ. ಬೆನ್ನ ಹಿಂದೆ ಮೀಸಲಾತಿ ವಿರೋಧಿ ಫಲಕಗಳನ್ನು ಬಚ್ಚಿಟ್ಟುಕೊಂಡು ಛದ್ಮವೇಷದಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು, ಕೂಡಾ ಅಣ್ಣಾ ಹಜಾರೆ ಅವರ ಈ ಹೇಳಿಕೆ ನಂತರ ದೂರ ಸರಿಯತೊಡಗಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧವೇ ಅವರು ಹೋರಾಟ ನಡೆಸುತ್ತಿದ್ದಾರೆ, ವಿರೋಧಪಕ್ಷವಾದ ಬಿಜೆಪಿ ಜತೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಿಎಸ್‌ಪಿ, ಡಿಎಂಕೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ, ಶಿವಸೇನೆ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರು ಒಂದಲ್ಲ ಒಂದು ಭ್ರಷ್ಟಾಚಾರದ ಹಗರಣಗಳಲ್ಲಿ ಆರೋಪಿಯಾಗಿದ್ದಾರೆ.

ಉಳಿದವು ಎಡಪಕ್ಷಗಳು. ಎರಡು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ದಣಿವಾರಿಸಿಕೊಳ್ಳುತ್ತಿರುವ ಆ ಪಕ್ಷಗಳು ಅಣ್ಣಾ ಹಜಾರೆ ಅವರ ಬೆಂಬಲಕ್ಕೆ ನಿಲ್ಲುವುದು ಅಷ್ಟರಲ್ಲೇ ಇದೆ. ಬೇರೆ ಯಾವ ಶಕ್ತಿಗಳನ್ನು ನಂಬಿ ಅಣ್ಣಾ ಹಜಾರೆ ಮತ್ತು ಸಂಗಡಿಗರು ಚುನಾಯಿತ ಸರ್ಕಾರವೊಂದಕ್ಕೆ ಸವಾಲು ಹಾಕುತ್ತಿದ್ದಾರೆ? ಜನ ಎಂಬ ಅಮೂರ್ತ ಶಕ್ತಿಯನ್ನೇ?
ಸಮಸ್ಯೆ ಅಣ್ಣಾ ಹಜಾರೆ ಅವರ ಚಳವಳಿಯ ಮೂಲದಲ್ಲಿಯೇ ಇದೆ. `ಪ್ರಜಾಪ್ರಭುತ್ವ ಎಂದರೆ ಜನರಿಂದ ಆಯ್ಕೆಯಾದ ನಂತರ ಮುಂದಿನ ಚುನಾವಣೆಯ ವರೆಗೆ ನಿರಂಕುಶವಾಗಿ ಆಡಳಿತ ನಡೆಸಿಕೊಂಡು ಹೋಗುವುದಲ್ಲ, ಚುನಾಯಿತ ಸರ್ಕಾರ ಹಾದಿ ತಪ್ಪಿದಾಗ ಪ್ರಶ್ನಿಸುವ, ಎಚ್ಚರಿಸುವ, ಮಣಿಸುವ ಮತ್ತು ಸರಿಯಾದ ದಾರಿ ತೋರಿಸುವ ಅಧಿಕಾರ ನಾಗರಿಕರಿಗೆ ಇದೆ. ಅದನ್ನೇ ನಾವು ಮಾಡುತ್ತಿದ್ದೇವೆ~ ಎನ್ನುವ ನಾಗರಿಕ  ಸಮಿತಿಯ ವಾದ ಸರಿಯಾಗಿಯೇ ಇದೆ.

ಇಂತಹ ನಾಗರಿಕ ಹೋರಾಟಗಳು ರಾಜಕೀಯಾತೀತವಾಗಿ ಸಾಮಾಜಿಕ ಚೌಕಟ್ಟಿನಲ್ಲಿದ್ದಾಗ ಅದಕ್ಕೆ ಮಿತಿಗಳು ಇರುತ್ತವೆ.ತಮ್ಮ ಸಾಮರ್ಥ್ಯದ ಅರಿವು ಹೋರಾಟದಲ್ಲಿ ತೊಡಗಿರುವವರಿಗೂ ಗೊತ್ತಿರುತ್ತದೆ.
ಆದ್ದರಿಂದಲೇ ಅವು ನೇರವಾಗಿ ಸರ್ಕಾರದ ಜತೆ ಸಂಘರ್ಷಕ್ಕಿಳಿಯದೆ ಒತ್ತಡ ಹೇರುವ ಮಟ್ಟಕ್ಕೆ ಮಾತ್ರ ತಮ್ಮ ಹೋರಾಟವನ್ನು ಸೀಮಿತಗೊಳಿಸುತ್ತವೆ. ಮೇಧಾ ಪಾಟ್ಕರ್ ನೇತೃತ್ವದ `ನರ್ಮದಾ ಬಚಾವೋ ಆಂದೋಲನ~ ಇದಕ್ಕೆ ಉತ್ತಮ ಉದಾಹರಣೆ.
`ನಮ್ಮ ಬೇಡಿಕೆಯನ್ನು ತಿಂಗಳೊಳಗೆ ಈಡೇರಿಸದಿದ್ದರೆ ಜಂತರ್‌ಮಂತರ್‌ನಲ್ಲಿ ಆಮರಣ ಉಪವಾಸ ಮಾಡಿ ಪ್ರಾಣಬಿಡುತ್ತೇನೆ~ಎಂದು ಮೇಧಾ ಪಾಟ್ಕರ್ ಎಂದೂ ಹೇಳಿರಲಿಲ್ಲ. ಅಂದ ಮಾತ್ರಕ್ಕೆ ಅವರ ಸಾಧನೆ ಕಡೆಗಣಿಸುವಂತಹದ್ದಲ್ಲ. ಅವಸರ ಮಾಡಿದ್ದರೆ ಚಳವಳಿಯ ಮೂಲಕ ಈಗಿನಷ್ಟನ್ನೂ ಸಾಧಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲವೇನೋ?
ಪ್ರತಿದಿನ ದೇಶಾದ್ಯಂತ  ಪ್ರತಿಭಟನೆ, ಚಳವಳಿ, ಸತ್ಯಾಗ್ರಹ, ಧರಣಿ, ಜಾಥಾಗಳು ನಡೆಯುತ್ತಲೇ ಇರುತ್ತವೆ. ಪ್ರಜಾಪ್ರಭುತ್ವದ ಜೀವಂತಿಕೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಇವುಗಳು ನೆರವಾಗುತ್ತವೆ.

ಇಂತಹ ಸಾಮಾಜಿಕ ಹೋರಾಟಗಳು ತಮ್ಮ ಘೋಷಿತ ಉದ್ದೇಶ ಸಾಧನೆಯ ಜತೆಗೆ  ರಾಜಕೀಯ ಬದಲಾವಣೆಗೂ ಕೊಡುಗೆಗಳನ್ನು ನೀಡುತ್ತಾ ಹೋಗುತ್ತವೆ. ಅದು ನಿಧಾನವಾಗಿ ನಡೆಯುವ ಪ್ರಕ್ರಿಯೆ, ಅವಸರದ್ದಲ್ಲ.
ಸ್ವತಂತ್ರ ಭಾರತದಲ್ಲಿ ಸರ್ಕಾರವೊಂದು ಪ್ರಜೆಗಳ ಕೈಗೆ ಕೊಟ್ಟಿರುವ ದೊಡ್ಡ ಅಸ್ತ್ರ ಮಾಹಿತಿ ಹಕ್ಕು ಕಾನೂನು. ಪರಿಣಾಮದ ದೃಷ್ಟಿಯಿಂದ ಇದು ಲೋಕಪಾಲರ ನೇಮಕಕ್ಕಿಂತಲೂ ದೊಡ್ಡ ಅಸ್ತ್ರ. ಈ ಕಾನೂನು ಅನುಷ್ಠಾನದ ಹಿಂದೆ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲಾ ಮೊದಲಾದವರು ನಡೆಸಿರುವ ಹೋರಾಟ ಇದೆ ಎನ್ನುವುದು ನಿಜ.
ಆದರೆ ಮಾಹಿತಿ ಪಡೆಯುವ ಹಕ್ಕಿಗಾಗಿ ಹೋರಾಟ ಮೊದಲು ಪ್ರಾರಂಭವಾಗಿದ್ದು ತೊಂಬತ್ತರ ದಶಕದಲ್ಲಿ. ರಾಜಸ್ತಾನದ ರಾಜ್‌ಸಾಮಾಂಡ್ ಜಿಲ್ಲೆಯಲ್ಲಿ ಕಾರ್ಮಿಕರು ಮತ್ತು ರೈತರು ಕೂಡಿ 1990ರಲ್ಲಿ `ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ (ಎಂಕೆಎಸ್‌ಎಸ್) ಕಟ್ಟಿ ಮೊದಲ ಬಾರಿ ಮಾಹಿತಿ ಹಕ್ಕಿಗಾಗಿ ಒತ್ತಾಯಿಸಿದ್ದರು.
1996ರಲ್ಲಿ ರಾಜಸ್ತಾನದ ಬೇವಾರ್ ಪಟ್ಟಣದಲ್ಲಿ `ಮಾಹಿತಿ ಹಕ್ಕು, ಬದುಕುವ ಹಕ್ಕು~ ಎಂಬ ಘೋಷಣೆಯೊಂದಿಗೆ ಜನ 40 ದಿನಗಳ ಧರಣಿ ಸತ್ಯಾಗ್ರಹ ನಡೆಸಿದ್ದರು. ಅಂತಿಮವಾಗಿ ಆ ಕಾನೂನು ಅನುಷ್ಠಾನಕ್ಕೆ ಬಂದದ್ದು 2005ರಲ್ಲಿ.
ಆದರೆ ಲೋಕಾಯುಕ್ತ-ಲೋಕಪಾಲರ ನೇಮಕಕ್ಕಾಗಿ ಇತ್ತೀಚಿನ ವರೆಗೆ ಯಾವುದೇ ರಾಜ್ಯ ಇಲ್ಲವೇ ರಾಷ್ಟ್ರಮಟ್ಟದಲ್ಲಿ ಸಣ್ಣ ಪ್ರಮಾಣದ ಸತ್ಯಾಗ್ರಹ ಚಳವಳಿಗಳೂ  ನಡೆದಿಲ್ಲ. ಈ ಕಾರಣದಿಂದಾಗಿಯೇ ಅಣ್ಣಾ ಹಜಾರೆ ಮತ್ತು ಬೆಂಬಲಿಗರು  ಅವಸರದ ಕ್ರಾಂತಿಗೆ ಹೊರಟಿರುವಂತೆ ಕಾಣುತ್ತಿದ್ದಾರೆ.
ಆಗಲೇ ಕೆಲವರು ಈ ಹೋರಾಟವನ್ನು ಎಪ್ಪತ್ತರ ದಶಕದಲ್ಲಿ ನಡೆದ ಜೆಪಿ ಚಳವಳಿಗೆ ಹೋಲಿಸತೊಡಗಿದ್ದಾರೆ. ಕೆಲವರು ಇನ್ನಷ್ಟು ಹಿಂದೆ ಹೋಗಿ ಸ್ವಾತಂತ್ರ್ಯ ಚಳವಳಿಗೆ ಹೋಲಿಸುತ್ತಿದ್ದಾರೆ. ಇವೆರಡೂ ಶುದ್ಧ ರಾಜಕೀಯ ಚಳವಳಿಗಳು, ಅದರಲ್ಲಿ ಯಾವ ಮುಚ್ಚುಮರೆಯೂ ಇರಲಿಲ್ಲ.
ಗಾಂಧೀಜಿಯಾಗಲಿ,  ಜೆಪಿಯಾಗಲಿ ತಮ್ಮನ್ನು ಸಮಾಜಸೇವಕರೆಂದು ಕರೆದುಕೊಂಡಿರಲಿಲ್ಲ. ರಾಜಕಾರಣಿಗಳು ತಾವು ಕುಳಿತ ವೇದಿಕೆ ಹತ್ತಬಾರದೆಂದು ಅವರ‌್ಯಾರೂ ಹೇಳಿರಲಿಲ್ಲ.
ಅವರು  ಅಪ್ಪಟ ರಾಜಕಾರಣಿಗಳಾಗಿದ್ದರು, ರಾಜಕೀಯದಲ್ಲಿಯೂ ಉಳಿದುಕೊಂಡಿರುವ ಒಂದಷ್ಟು ಸಜ್ಜನರನ್ನು ಸೇರಿಸಿಕೊಂಡು ಚಳವಳಿಯನ್ನು ಮುನ್ನಡೆಸಿದ್ದರು. ಸರ್ವಾಧಿಕಾರಿ ಇಂದಿರಾಗಾಂಧಿಯವರ ವಿರುದ್ಧದ ಹೋರಾಟದ ಬಗ್ಗೆ ಮಾತ್ರವಲ್ಲ, ಆಕೆಯ ಪತನದ ನಂತರದ ಪರ್ಯಾಯದ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು.
ದುರದೃಷ್ಟವಶಾತ್ ಅಣ್ಣಾ ಹಜಾರೆ ಅವರಿಗೆ ಅಂತಹ ಆಯ್ಕೆಗಳಿಲ್ಲ ಎನ್ನುವುದು ನಿಜ. ಸರ್ಕಾರ ಇಲ್ಲವೇ ಆಡಳಿತಾರೂಢ ಪಕ್ಷ ಭ್ರಷ್ಟಗೊಂಡಿರುವುದು ಈಗಿನ ಸಮಸ್ಯೆ ಅಲ್ಲ. ದೇಶದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸ ನೋಡಿದರೆ ಇದೊಂದು ಸಾಮಾನ್ಯ ಬೆಳವಣಿಗೆ ಎಂದು ಗೊತ್ತಾಗುತ್ತದೆ.
ಅಧಿಕಾರಕ್ಕೇರಿದ ರಾಜಕೀಯ ಪಕ್ಷ ಭ್ರಷ್ಟಗೊಳ್ಳುತ್ತಾ ಹೋಗುವುದು, ವಿರೋಧಪಕ್ಷಗಳು ಸರ್ಕಾರದ ವಿರುದ್ದ ಹೋರಾಟಕ್ಕೆ ಇಳಿಯುವುದು, ಕ್ರಮೇಣ ಮತದಾರರ ಕಣ್ಣಿಗೆ ವಿರೋಧ ಪಕ್ಷಗಳ ನಾಯಕರೇ ಸಂಭಾವಿತರಂತೆ ಕಂಡು ಅವರನ್ನು ಮತ್ತೆ ಆಯ್ಕೆ ಮಾಡುವುದು.. ಇವೆಲ್ಲ ಸಾಮಾನ್ಯ.

ಆದರೆ ನೈತಿಕವಾಗಿ ದಿವಾಳಿಯಾಗಿರುವ ನಮ್ಮ ವಿರೋಧ ಪಕ್ಷಗಳು ಭ್ರಷ್ಟ ಸರ್ಕಾರವನ್ನು ಪ್ರಶ್ನಿಸಲಾಗದಷ್ಟು ಅಸಹಾಯಕವಾಗಿರುವುದು ಕೂಡಾ ಇಂದಿನ ಬಿಕ್ಕಟ್ಟಿಗೆ ಕಾರಣ.
ಈ ಹತಾಶೆ ಜನಸಮುದಾಯದಲ್ಲಿಯೂ ವ್ಯಕ್ತವಾಗುತ್ತಿದೆ. ಇದಕ್ಕೆ ಏನು ಪರಿಹಾರ? ರಾಜಕಾರಣಿಗಳನ್ನು ಸಾಮೂಹಿಕವಾಗಿ ಗಲ್ಲಿಗೇರಿಸುವುದೇ?
 ಸಮಸ್ಯೆ ಏನೆಂದರೆ ತಮ್ಮ ಹೋರಾಟ ಸಾಮಾಜಿಕವಾದುದೇ, ರಾಜಕೀಯವಾದುದೇ ಎಂಬ ಬಗ್ಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರಲ್ಲಿಯೇ ಸ್ಪಷ್ಟತೆ ಇಲ್ಲ.

ತಮ್ಮದು ರಾಜಕೀಯಾತೀತ ಚಳವಳಿ ಎಂದು ಘೋಷಿಸಿಕೊಂಡರೂ ಅವರ ನಡೆ-ನುಡಿಗಳು ರಾಜಕೀಯ ಹೋರಾಟದ ಶೈಲಿಯಲ್ಲಿಯೇ ಇವೆ. ಆಡಳಿತಾರೂಢ ಸರ್ಕಾರವನ್ನು ಮಣಿಸಲು ಹೊರಟವರು ತಮ್ಮ ಚಳವಳಿಯನ್ನು `ರಾಜಕೀಯದಿಂದ ದೂರ ಇದ್ದು ಮಾಡುತ್ತೇವೆ~ ಎಂದು ಹೇಳಲಾಗುವುದಿಲ್ಲ.

ಒಂದು ಸರ್ಕಾರವನ್ನೇ ಉರುಳಿಸುತ್ತೇನೆಂದು ಹೊರಟಾಗ ಅದಕ್ಕೊಂದು ಪರ್ಯಾಯ ಸಿದ್ಧ ಇರಬೇಕಾಗುತ್ತದೆ. ಇಲ್ಲದಿದ್ದರೆ ಅರಾಜಕತೆಯನ್ನು ಹುಟ್ಟುಹಾಕಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ್ಯಾಯ ಕೂಡ ರಾಜಕೀಯ ಕ್ಷೇತ್ರದೊಳಗಡೆಯಿಂದಲೇ ಸೃಷ್ಟಿಯಾಗಬೇಕಾಗುತ್ತದೆ.
ಆದರೆ ನಾಗರಿಕ ಸಮಿತಿ ಸದಸ್ಯರು ಒಂದು ಭ್ರಷ್ಟ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ರಾಜಕಾರಣ, ರಾಜಕಾರಣಿ ಮತ್ತು ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆಯೇ  ವಿಶ್ವಾಸ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಹಾಗಿದ್ದರೆ ಪರಿಹಾರ ಏನು? ದೇಶದ ಆಡಳಿತವನ್ನೇ ಲೋಕಪಾಲರಿಗೆ ಒಪ್ಪಿಸುವುದೇ?

Monday, June 20, 2011

ಜನಲೋಕಪಾಲ ಸರ್ವರೋಗಕ್ಕೆ ಪರಿಹಾರವೇ?

ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವಿಫಲಗೊಂಡಿದೆ ಎಂದು ಇಲ್ಲಿಯವರೆಗೆ `ಕಾಡಿನವರು~ ಮಾತ್ರ ಹೇಳುತ್ತಿದ್ದರು, ಈಗ `ನಾಡಿನವರು~ ಕೂಡಾ ಹೇಳತೊಡಗಿದ್ದಾರೆ.
ಹದಿನಾಲ್ಕು ರಾಜ್ಯಗಳಲ್ಲಿ ಹಾದುಹೋಗಿರುವ ಮತ್ತು ದೇಶದ ಶೇಕಡಾ 40ರಷ್ಟು ಪ್ರದೇಶದಲ್ಲಿ ವ್ಯಾಪಿಸಿರುವ `ರೆಡ್ ಕಾರಿಡಾರ್~ನಲ್ಲಿ `ಕಾಡಿನವರ ಸರ್ಕಾರ~ ಇದೆ.
ಅಲ್ಲಿರುವ ದೇಶದ ಶೇಕಡಾ 35ರಷ್ಟು ಜನ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.
ತಲೆಮಾರುಗಳಿಂದ ಅಭಿವೃದ್ಧಿ ವಂಚಿತರಾಗಿರುವ ಈ ಶೋಷಿತ ಜನಸಮುದಾಯ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದರೆ ಅದು ಸಹಜ. ಆಶ್ಚರ‌್ಯವೆಂದರೆ  ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಚುನಾವಣೆಯಲ್ಲಿ ಮತಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವ ಮತ್ತು ಅವರಿಂದ ಆಯ್ಕೆಗೊಂಡಿರುವ `ನಾಡಿನವರು~ ಕೂಡಾ `ಕಾಡಿನವರ~ ಭಾಷೆಯಲ್ಲಿಯೇ ಮಾತನಾಡುತ್ತಿರುವುದು.
ಇದಕ್ಕೆ ಇತ್ತೀಚಿನ ಉದಾಹರಣೆ- ಸಂವಿಧಾನದ ಪ್ರಮುಖ ಅಂಗವಾಗಿರುವ ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ದೇವರ ಮೇಲೆ ಆಣೆ ಮಾಡಲು ಹೊರಟಿರುವುದು.
ಅಲ್ಲಿಗೆ ಕಳೆದ 60 ವರ್ಷಗಳಿಂದ ನಾವು ಒಪ್ಪಿಕೊಂಡಿರುವ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ರೋಗಗ್ರಸ್ತವಾಗಿದೆ ಎಂದು ಬಹು ಸಂಖ್ಯಾತ ಜನ ಒಪ್ಪಿಕೊಂಡಂತಾಯಿತು. ಆ ಬಗ್ಗೆ ವಿವಾದಗಳಿಲ್ಲ. ವಿವಾದ ಇರುವುದು ಇದಕ್ಕೆ ನೀಡಬೇಕಾದ ಚಿಕಿತ್ಸೆ ಬಗ್ಗೆ.
ಕಾಡಿನಲ್ಲಿರುವ ಮಾವೋವಾದಿಗಳ ಪ್ರಕಾರ ಇದು ಚಿಕಿತ್ಸೆ ಮೀರಿದ ರೋಗ. `ಈಗಿನ ವ್ಯವಸ್ಥೆಯನ್ನು ನಾಶಮಾಡಿದರೆ ಮಾತ್ರ ಹೊಸ ವ್ಯವಸ್ಥೆ ಹುಟ್ಟಲು ಸಾಧ್ಯ. ಅದನ್ನೇ ನಾವು ಬಂದೂಕಿನ ಮೂಲಕ ಮಾಡಲು ಹೊರಟಿದ್ದೇವೆ~ ಎನ್ನುತ್ತಾರೆ ಅವರು.

ಇದನ್ನು ಕಾಂಗ್ರೆಸಿಗರು, ಮಾರ್ಕ್ಸಿಸ್ಟರು, ಸೋಷಿಯಲಿಸ್ಟರು, ಉದಾರವಾದಿಗಳು, ಸಂಪ್ರದಾಯವಾದಿಗಳು ಮಾತ್ರವಲ್ಲ, ಬಹು ಸಂಖ್ಯೆಯ ಜನಸಮುದಾಯ ಕೂಡಾ ಒಪ್ಪುವುದಿಲ್ಲ. ಹಾಗಿದ್ದರೆ ಇದಕ್ಕೇನು ಚಿಕಿತ್ಸೆ? ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಜನಪ್ರಿಯ ಔಷಧಿಯ ಹೆಸರು `ಲೋಕಪಾಲ ಮಸೂದೆ~.
ಇದು ಸರ್ವರೋಗ ನಿವಾರಕ ಎಂದು ಅದರ ತಯಾರಕರು ಹೇಳಿಕೊಳ್ಳದಿದ್ದರೂ ಹಾಗೆಂದು ಅದರ ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಇಂತಹ ಪ್ರಚಾರದಿಂದಾಗಿ ಜನತೆಯಲ್ಲಿನ ನಿರೀಕ್ಷೆ ಕೂಡಾ ಆಕಾಶದೆತ್ತರಕ್ಕೆ ಏರಿದೆ.
ಒಂದೊಮ್ಮೆ ನಾಗರಿಕ ಸಮಿತಿ ರಚಿಸಿರುವ ಜನಲೋಕಪಾಲ ಮಸೂದೆಯನ್ನು ಯಥಾವತ್ತಾಗಿ ಸಂಸತ್ ಅಂಗೀಕರಿಸಿ ಕಾನೂನಿನ ರೂಪ ನೀಡಿದರೆ ಸಾರ್ವಜನಿಕ ಜೀವನದಲ್ಲಿನ ಭ್ರಷ್ಟಾಚಾರದ ಮೂಲೋತ್ಪಾಟನೆಯಾಗುವುದೇ? ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗ ವಾಸಿಯಾಗುವುದೇ? ಈ ಬಗ್ಗೆ ಅನುಮಾನಿಸುವುದಕ್ಕೆ ಕಾರಣಗಳಿವೆ.
ಮೊದಲನೆಯದಾಗಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹ ಕೂರುತ್ತೇನೆಂದು ಹೇಳಿದ ದಿನದಿಂದ ಇಲ್ಲಿಯವರೆಗೆ ನಡೆಯುತ್ತಿರುವ ಚರ್ಚೆಯೆಲ್ಲವೂ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸುತ್ತಲೇ ಗಿರ್ಕಿ ಹೊಡೆಯುತ್ತಿದೆ. ಬಹುಮುಖ್ಯವಾದ ಎರಡು ಕ್ಷೇತ್ರಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಯಾಕೋ ಚರ್ಚೆ ನಡೆಯುತ್ತಿಲ್ಲ.

ಈ ಎರಡರಲ್ಲಿ ಮೊದಲನೆಯದು ಕಾರ್ಪೋರೇಟ್ ಕ್ಷೇತ್ರ, ಎರಡನೆಯದು ಧಾರ್ಮಿಕ ಕ್ಷೇತ್ರ. ನಮ್ಮೆಲ್ಲ ಚರ್ಚೆ ನಡೆಯುತ್ತಿರುವುದು ಲಂಚ ಸ್ವೀಕರಿಸುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಗ್ಗೆ. ಇವರಿಬ್ಬರಿಗೂ ಲಂಚ ಸ್ವೀಕರಿಸಿಯಷ್ಟೇ ಗೊತ್ತು ವಿನಾ ಲಂಚ ಕೊಟ್ಟು ಗೊತ್ತಿಲ್ಲ. ಆದರೆ  ಇವರಿಗೆ ಲಂಚ ಕೊಡುವವರು ಯಾರು ಮತ್ತು ಅವರು ಯಾಕೆ ಕೊಡುತ್ತಿದ್ದಾರೆ? ಯಾರೂ ಕೇಳುತ್ತಿಲ್ಲ.
ನೈತಿಕ ದೃಷ್ಟಿಯಿಂದ ಲಂಚ ಸ್ವೀಕರಿಸಿದ್ದಕ್ಕಿಂತ ಲಂಚ ಕೊಡುವುದು ಸ್ವಲ್ಪ ಸಣ್ಣ ಪ್ರಮಾಣದ ಅಪರಾಧವಾಗಿರಬಹುದು. ಆದರೆ ಅದರ ಪರಿಣಾಮ? ಸಚಿವರು ಮತ್ತು ಉನ್ನತಾಧಿಕಾರಿಗಳ ಮಟ್ಟದಲ್ಲಿ ಲಂಚ ನೀಡುವವನು ಹಳ್ಳಿಯ ಬಡಬೋರೇಗೌಡ ಅಲ್ಲ, ಅವನು ಖಂಡಿತವಾಗಿಯೂ ಒಬ್ಬ ಉದ್ಯಮಿಯಾಗಿರುತ್ತಾನೆ.
ಇಲ್ಲಿಯವರೆಗೆ ಬಯಲಾಗಿರುವ ಯಾವ ಹಗರಣವನ್ನು ತೆಗೆದುಕೊಂಡರೂ ಅದರಲ್ಲಿ ಉದ್ಯಮಿಗಳ ಪ್ರಮುಖ ಪಾತ್ರವನ್ನು ಕಾಣಬಹುದು. ಒಬ್ಬ ಉದ್ಯಮಿ ಹತ್ತುಕೋಟಿ ರೂಪಾಯಿ ಲಂಚ ನೀಡಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡುವಂತಹ ಅಕ್ರಮ ವ್ಯವಹಾರ ನಡೆಸಿ ಸಾವಿರಾರು ಕೋಟಿ ರೂಪಾಯಿ ಲಾಭ ಪಡೆದಿರುತ್ತಾನೆ.
ಇದಕ್ಕೆ ಉತ್ತಮ ಉದಾಹರಣೆ 2ಜಿ ತರಂಗಾಂತರ ಹಗರಣ. ಇದರಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಅತ್ಯಧಿಕವೆಂದರೆ  ಒಂದೆರಡು ಸಾವಿರಕೋಟಿ ಲಂಚ ಪಡೆದಿರಬಹುದು, ಆದರೆ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ ಅಂದಾಜು 1.76 ಲಕ್ಷ ಕೋಟಿ ರೂಪಾಯಿ ಅಲ್ಲವೇ? ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಿರುವ, ಬ್ಯಾಂಕ್ ಸಾಲ ಮುಳುಗಿಸಿರುವ, ಲಂಚ ಕೊಟ್ಟು ಸರ್ಕಾರದ ನೀತಿಗಳನ್ನೇ ಬದಲಾಯಿಸಿರುವ ಆರೋಪ ಹೊತ್ತ ನೂರಾರು ಉದ್ಯಮಿಗಳು ನಮ್ಮ ನಡುವೆ ಇದ್ದಾರೆ.
ಬಹಳಷ್ಟು ಉದ್ಯಮಿಗಳು ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲವನ್ನು ಮಾತ್ರವಲ್ಲ, ದೇಣಿಗೆಯನ್ನೂ ನೀಡಿದ್ದಾರೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕಾಗಿ ಸಂಗ್ರಹ ಮಾಡಿದ ಹಣದ ಮೊತ್ತ 82.88 ಲಕ್ಷ ರೂಪಾಯಿ, ಅದರಲ್ಲಿ ಉದ್ಯಮಿಗಳಿಂದ ಸಂಗ್ರಹವಾದ ದೇಣಿಗೆಯ ಒಟ್ಟು ಮೊತ್ತ 46.50 ಲಕ್ಷ ರೂಪಾಯಿ.ಅಂದರೆ ಸತ್ಯಾಗ್ರಹಕ್ಕೆ ಖರ್ಚಾದ ಹಣದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಹಣ ನೀಡಿದವರು ಉದ್ಯಮಿಗಳು.

ಭ್ರಷ್ಟಾಚಾರದ ವಿರುದ್ಧದ ಹೋರಾಟದ ಗಮನವನ್ನು ಸಂಪೂರ್ಣವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕಡೆ ಕೇಂದ್ರೀಕರಿಸಿ ತಮ್ಮ ಕಡೆ ಯಾರೂ ಕಣ್ಣು ಹಾಯಿಸದಂತೆ ಮಾಡುವುದು ಇದರ ಹಿಂದಿನ ಹುನ್ನಾರವೇ?
ಚರ್ಚೆಯಾಗದೆ ಉಳಿದಿರುವ ಎರಡನೇ ಕ್ಷೇತ್ರ ಧಾರ್ಮಿಕ ಕೇಂದ್ರಗಳದ್ದು. ಕಳೆದೆರಡು ದಿನಗಳಲ್ಲಿ ದಿವಂಗತ ಸತ್ಯಸಾಯಿ ಬಾಬಾ ಅವರ ಖಾಸಗಿ ಕೋಣೆಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿರುವುದೇ ದೊಡ್ಡ ಸುದ್ದಿ. ಇವೆಲ್ಲವೂ ಅಕ್ರಮವಾಗಿ ಕೂಡಿಟ್ಟದ್ದಲ್ಲವೇ?
ಸಂಬಳಕ್ಕೆ ದುಡಿಯುವ ಒಬ್ಬ ಸಾಮಾನ್ಯ ನೌಕರ ತನ್ನ ಗಳಿಕೆಯ ಮೂರನೇ ಒಂದರಷ್ಟು ಭಾಗವನ್ನು ವರಮಾನ ತೆರಿಗೆಯಾಗಿ ಪಾವತಿಸದಿದ್ದರೆ ನೋಟಿಸ್ ನೀಡುವ ವರಮಾನ ತೆರಿಗೆ ಇಲಾಖೆಯ ಕಣ್ಣಿಗೆ ಸಾಯಿಬಾಬಾ ಅವರಲ್ಲಿದ್ದ ಅಕ್ರಮ ಗಳಿಕೆ ಕಣ್ಣಿಗೆ ಬಿದ್ದಿರಲಿಲ್ಲವೇ?
ದೇಶದ ಪ್ರಧಾನಿಯಿಂದ ಹಿಡಿದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರೆಗೆ ಎಲ್ಲರನ್ನೂ ಭಕ್ತರಾಗಿ ಹೊಂದಿರುವ ಸಾಯಿಬಾಬಾ ಅವರನ್ನು ಮುಟ್ಟುವ ಧೈರ‌್ಯವಾದರೂ ಅವರಿಗೆಲ್ಲಿಂದ ಬರಬೇಕಿತ್ತು?
ಇದು ಸಾಯಿಬಾಬಾ ಒಬ್ಬರ ಕತೆಯಲ್ಲ, ನಮ್ಮ ಅನೇಕ `ದೇವ ಮಾನವರ~ ಕಪಾಟುಗಳಲ್ಲಿಯೂ `ಅಸ್ಥಿಪಂಜರ~ಗಳಿರುವ ಗುಮಾನಿ ಇದೆ. ಸರಿಯಾಗಿ ತನಿಖೆ ನಡೆಸಿದರೆ ನಮ್ಮ ಬಹುತೇಕ ಧಾರ್ಮಿಕ ಕೇಂದ್ರಗಳಲ್ಲಿಯೂ ಈ ರೀತಿಯ ಅಕ್ರಮ ಸಂಪತ್ತು ಸಂಗ್ರಹ ಬಯಲಾಗಬಹುದು.
ರಾಜಕಾರಣಿಗಳು ಕೂಡಾ ತಮ್ಮ ಅಕ್ರಮ ಗಳಿಕೆಯನ್ನು ಬಚ್ಚಿಡಲು ಮಠ-ಮಂದಿರಗಳೇ ಸುರಕ್ಷಿತ ಸ್ಥಳ ಎಂದು ಕಂಡುಕೊಂಡಿದ್ದಾರೆ. ಬಹಳಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಧಿ ದಕ್ಷಿಣದ ಒಂದು ಪ್ರಸಿದ್ಧ ಮಠದಲ್ಲಿತ್ತಂತೆ.

ರಾಜ್ಯದ ಇನ್ನೊಬ್ಬ ಹಿರಿಯ ರಾಜಕಾರಣಿ ಮತ್ತು ಅವರ ಜಾತಿಯ ಮಠದ ಸ್ವಾಮೀಜಿಗಳ ನಡುವಿನ ಜಗಳಕ್ಕೂ ಅಕ್ರಮವಾಗಿ ಕೂಡಿಟ್ಟಿರುವ ಹಣವೇ ಕಾರಣ ಎಂದು ಬಲ್ಲವರು ಹೇಳುತ್ತಾರೆ.

ಮಠ-ಮಂದಿರಗಳಿಗೆ ಬಹಳಷ್ಟು ಸಮೀಪ ಇರುವ ರಾಜ್ಯ ಈಗಿನ ಆಡಳಿತಾರೂಢ ಪಕ್ಷದ ನಾಯಕರ ಮೇಲೂ ಇಂತಹದ್ದೇ ಆರೋಪಗಳಿವೆ. ಇದು ಕೇವಲ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸೀಮಿತವಾಗಿಲ್ಲ.
ಮಸೀದಿ ಮತ್ತು ಚರ್ಚುಗಳಿಗೆ ವಿದೇಶದಿಂದ ಹೇರಳವಾಗಿ ಬರುವ ಹಣಕ್ಕೆ ಸಂಬಂಧಿಸಿದಂತೆಯೂ ಅಕ್ರಮ ಸಂಗ್ರಹದ ಆರೋಪ ಇದೆ. ಲೋಕಪಾಲ ಮಸೂದೆ ಬಗ್ಗೆ ಚರ್ಚೆ ನಡೆಸುವಾಗ ಸರ್ಕಾರ ಮತ್ತು ನಾಗರಿಕ ಸಮಿತಿ ಕೂಡಿಯೇ ಧಾರ್ಮಿಕ ಕ್ಷೇತ್ರಕ್ಕೆ ವಿನಾಯಿತಿ ನೀಡಿದಂತಿದೆ.
ಜನಲೋಕಪಾಲ ಮಸೂದೆಯ ಬಗ್ಗೆ ಇರುವ ಇನ್ನೊಂದು ಸಾಮಾನ್ಯ ಭಿನ್ನಾಭಿಪ್ರಾಯ -ಅದು ಕೇಳುತ್ತಿರುವ `ಸರ್ವಾಧಿಕಾರ~ದ ಬಗ್ಗೆ.
ಪ್ರಧಾನ ಮಂತ್ರಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ತನ್ನ ವ್ಯಾಪ್ತಿಗೆ ಒಳಪಡಿಸಬೇಕು. ಇದರ ಜತೆಯಲ್ಲಿ ಸಂಸತ್‌ನೊಳಗಿನ ಸಂಸದರ ನಡವಳಿಕೆಯನ್ನು ಕೂಡಾ ತನಿಖೆ ಮಾಡುವಂತಹ ಅಧಿಕಾರ ಇರಬೇಕು, ಕೇಂದ್ರ ತನಿಖಾದಳ (ಸಿಬಿಐ) ಮತ್ತು ಕೇಂದ್ರ ಜಾಗೃತ ಆಯೋಗಗಳನ್ನು (ಸಿವಿಸಿ) ಕೂಡಾ ತನ್ನ ಅಧೀನಕ್ಕೆ ಒಪ್ಪಿಸಬೇಕು...ಹೀಗೆ ಎಲ್ಲ ಅಧಿಕಾರವನ್ನು ಲೋಕಪಾಲರಿಗೆ ನೀಡಬೇಕು ಎಂದು ನಾಗರಿಕ ಸಮಿತಿ ಕೇಳುತ್ತಿದೆ.
ಪ್ರಜಾಪ್ರಭುತ್ವದ ಮೂಲ ಸಿದ್ಧಾಂತ ಅಧಿಕಾರ ವಿಕೇಂದ್ರೀಕರಣವೇ ಹೊರತು ಕೇಂದ್ರೀಕರಣ ಅಲ್ಲ. ಯಾವುದೇ ವ್ಯಕ್ತಿ ಇಲ್ಲವೇ ಸಂಸ್ಥೆಯಲ್ಲಿ ಅಧಿಕಾರ ಕೇಂದ್ರೀಕರಣವಾಗಬಾರದು ಎಂದು ಹೇಳುತ್ತದೆ ಪ್ರಜಾಪ್ರಭುತ್ವ. ಇದು ಸಂವಿಧಾನದ ಆಶಯ ಕೂಡಾ ಹೌದು.
ಎಲ್ಲವನ್ನೂ ಲೋಕಪಾಲರ ಸುಪರ್ದಿಗೆ ಒಪ್ಪಿಸುವುದರ ಬದಲಿಗೆ ಇದ್ದ ಜಾಗದಲ್ಲಿಯೇ ಅವುಗಳು ಇನ್ನಷ್ಟು ಸ್ವತಂತ್ರವಾಗಿ ಮತ್ತು ಕ್ಷಮತೆಯಿಂದ ಕಾರ‌್ಯನಿರ್ವಹಿಸುವಂತೆ ಮಾಡಬೇಕಾಗಿದೆ. ಇದಕ್ಕಾಗಿ ಬೇರೇನೂ ಮಾಡಬೇಕಾಗಿಲ್ಲ.
ಸರ್ಕಾರಿಯಾ ಆಯೋಗ, ರಾಷ್ಟ್ರೀಯ ಸಂವಿಧಾನ ಕಾರ‌್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗ ಮತ್ತು ಚುನಾವಣಾ ಆಯೋಗದ ಶಿಫಾರಸುಗಳು ಮತ್ತು ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ಜಾರಿಗೆ ತಂದರೆ ಸಾಕು.
ಇವುಗಳಲ್ಲಿ ಅತೀ ತುರ್ತಾಗಿ ನಡೆಯಬೇಕಾಗಿರುವುದು ಚುನಾವಣಾ ಸುಧಾರಣೆ. ಪ್ರಾಮಾಣಿಕರು, ಸಜ್ಜನರು, ಜನಪರ ಕಾಳಜಿ ಉಳ್ಳವರು ಚುನಾವಣಾ ರಾಜಕೀಯಕ್ಕೆ ಇಳಿಯಲಾಗದ ಸ್ಥಿತಿಯೇ ಭಾರತದ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಗಲಿರುವ ರೋಗಕ್ಕೆ ಮೂಲ ಕಾರಣ.
ಕ್ರಿಮಿನಲ್ ಹಿನ್ನೆಲೆಯ 150 ಸದಸ್ಯರು ಮತ್ತು 300 ಕೋಟ್ಯಧಿಪತಿ ಸದಸ್ಯರನ್ನೊಳಗೊಂಡ ಈಗಿನ ಲೋಕಸಭೆ ತಮ್ಮ ಕೊರಳಿಗೆ ಉರುಳಾಗಲಿರುವ ಲೋಕಪಾಲ ಮಸೂದೆಗೆ ಕಣ್ಣುಮುಚ್ಚಿ ಅಂಗೀಕಾರ ನೀಡಬಹುದೆಂದು ತಿಳಿದುಕೊಂಡವರು ಮೂರ್ಖರು ಅಷ್ಟೆ.

ಇದು ಗೊತ್ತಿದ್ದೂ  ಉಪವಾಸ ಸತ್ಯಾಗ್ರಹದ ಮೂಲಕ ಏಕಾಏಕಿ ಸರ್ಕಾರವನ್ನು ಮಣಿಸುತ್ತೇವೆಂದು ಹೊರಡುವುದು ವ್ಯರ್ಥ ದೇಹ ದಂಡನೆಯಾಗಬಹುದೇ ಹೊರತು ಯಶಸ್ಸಿನ ಫಲ ಸಿಗಲಾರದು.
ಮೊದಲು ನಡೆಯಬೇಕಾಗಿರುವುದು ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ, ಭ್ರಷ್ಟರನ್ನು ಶಿಕ್ಷಿಸುವುದು ನಂತರದ ಕೆಲಸ. ಈ ಹಿನ್ನೆಲೆಯಲ್ಲಿ ಭ್ರಷ್ಟರನ್ನು ಶಿಕ್ಷಿಸಲು ಲೋಕಪಾಲರನ್ನು ನೇಮಿಸುವ ಮೊದಲು ಭ್ರಷ್ಟರ ಹುಟ್ಟಿಗೆ ಕಾರಣವಾಗಿರುವ ವ್ಯವಸ್ಥೆಯ ಸುಧಾರಣೆಯ ಬಗ್ಗೆ ನಾಗರಿಕ ಸಮಿತಿ ಯೋಚಿಸಬೇಕಾಗಿತ್ತು.
ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಒಂದು ಸ್ವಚ್ಛ, ಪ್ರಾಮಾಣಿಕ ಮತ್ತು ಸೇವಾನಿಷ್ಠ ಸಂಸದರನ್ನೊಳಗೊಂಡ ಸಂಸತ್ ರಚನೆಗೊಳ್ಳುವಂತೆ ಮಾಡಬೇಕಾಗಿತ್ತು.
ಇದು ಅಸಾಧ್ಯವಾದ ಕೆಲಸ ಅಲ್ಲ. ಈಗಿನ ಪ್ರಜಾಪ್ರತಿನಿಧಿ ಕಾಯಿದೆ ಪ್ರಕಾರ ನ್ಯಾಯಾಲಯಗಳಲ್ಲಿ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇರುವ ವರೆಗೆ ಎಂತಹ ಘನಘೋರ ಅಪರಾಧಿ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.
ಚುನಾವಣಾ ಕಾನೂನಿನಲ್ಲಿರುವ ಈ ಲೋಪದ ನಿವಾರಣೆಗಾಗಿಯೇ ಚುನಾವಣಾ ಆಯೋಗ ಪ್ರಮುಖ ಸುಧಾರಣಾ ಕ್ರಮವನ್ನು ಶಿಫಾರಸು ಮಾಡಿದೆ. `ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಅರ್ಹವಾಗಿರುವ ಅಪರಾಧಗಳಲ್ಲಿ ಆರೋಪಿಯಾಗಿರುವವರು, ಒಂದೊಮ್ಮೆ ಆ ಪ್ರಕರಣದ ತೀರ್ಪಿನ ವಿರುದ್ದದ ಮೇಲ್ಮನವಿ ಇತ್ಯರ್ಥಕ್ಕೆ ಬಾಕಿ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ~ ಎನ್ನುತ್ತದೆ ಈ ಸುಧಾರಣಾ ಕ್ರಮ.
ಇದೊಂದು ಜಾರಿಯಾದರೆ ಈಗಿನ ಲೋಕಸಭೆಯಲ್ಲಿರುವ ಸುಮಾರು 150 ಕ್ರಿಮಿನಲ್ ಹಿನ್ನೆಲೆಯ ಸದಸ್ಯರು ಜಾಗ ಖಾಲಿ ಮಾಡಬೇಕಾಗುತ್ತದೆ. ಮುಂದಿನ ಚುನಾವಣೆಗಳಲ್ಲಿ ಒಂದಷ್ಟು ಸಜ್ಜನರು ಸಂಸತ್ ಪ್ರವೇಶಿಸುವ ಪ್ರಯತ್ನ ಮಾಡಬಹುದು. ಆಗ ಮಾತ್ರ ಜನಪರವಾದ ಕಾನೂನುಗಳ ರಚನೆ ಮತ್ತು ಅನುಷ್ಠಾನವನ್ನು ನಿರೀಕ್ಷಿಸಲು ಸಾಧ್ಯ.

Monday, June 13, 2011

ಸಂವಿಧಾನೇತರ ಶಕ್ತಿಗಳ ನಿಯಂತ್ರಣದಲ್ಲಿ ಪಕ್ಷಗಳು

ಸಾರ್ವಜನಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಸಂವಿಧಾನೇತರ ಶಕ್ತಿಗಳಿಂದಾಗಿ ದೇಶದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ ಎಂಬ ಹುಯಿಲೆದ್ದಿದೆ. ಆಳುವ ಪಕ್ಷ ವ್ಯಕ್ತಪಡಿಸುತ್ತಿರುವ ಈ ಆತಂಕದಲ್ಲಿ ಸ್ವಹಿತಾಸಕ್ತಿಗಳಿದ್ದರೂ ಸತ್ಯಾಂಶ ಇಲ್ಲವೆಂದಲ್ಲ. ಆದರೆ, ಇದು ಪ್ರಾರಂಭವಾಗಿದ್ದು ಅಣ್ಣಾ ಹಜಾರೆ ಇಲ್ಲವೇ ಬಾಬಾ ರಾಮ್‌ದೇವ್ ಉಪವಾಸ ಸತ್ಯಾಗ್ರಹಗಳಿಂದಲ್ಲ.
ಈ ಎರಡು ಸತ್ಯಾಗ್ರಹಗಳ ಕುರಿತು ಸಂಪೂರ್ಣವಾಗಿ `ಸಂವಿಧಾನೇತರ ಶಕ್ತಿಗಳ ಕುಟಿಲ ಯತ್ನ~ ಎಂದು ಬಣ್ಣಿಸುವುದು ಕೂಡಾ ಸರಿಯಲ್ಲ.
ಶಾಸನರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿಯೇ ಬರುತ್ತದೆ. ದೇಶದಲ್ಲಿ ಹಿಂದೆ ನಡೆದಿರುವ ಮತ್ತು ಈಗಲೂ ನಡೆಯುತ್ತಿರುವ ಅನೇಕ ಚಳವಳಿಗಳು ಇದೇ ಮಾದರಿಯವು.
ಆದರೆ ಶಾಸನರಚನೆಯ ಪ್ರಕ್ರಿಯೆಯಲ್ಲಿಯೂ ತಮ್ಮನ್ನು ಸೇರಿಸಿಕೊಳ್ಳಬೇಕು ಎಂದು ಚಳವಳಿಗಾರರು ಹೇರುವ ಒತ್ತಡ ಪ್ರಜಾಸತ್ತಾತ್ಮಕವಾದುದೇ ಎನ್ನುವುದಷ್ಟೇ ಈಗಿನ ಪ್ರಶ್ನೆ.
`ಅಣ್ಣಾ ಹಜಾರೆ, ನ್ಯಾಯಮೂರ್ತಿ ಎನ್ . ಸಂತೋಷ್ ಹೆಗ್ಡೆ, ಅರವಿಂದ್ ಕೇಜ್ರಿವಾಲ್ ಮೊದಲಾದವರು ಶಾಸನರಚನೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದರಿಂದ ಇದರಲ್ಲಿ ತಪ್ಪಿಲ್ಲ~ ಎಂದು ಈ ಕ್ಷಣದಲ್ಲಿ ಅನಿಸಬಹುದು.
ಆದರೆ ಇದನ್ನೇ ಪೂರ್ವ ನಿದರ್ಶನವಾಗಿ ಇಟ್ಟುಕೊಂಡು ಉಳಿದವರು ಇದೇ ಮಾರ್ಗವನ್ನು ಅನುಸರಿಸಿದರೇ? ಬಹಳ ದೂರವೇನೂ ಹೋಗಬೇಕಾಗಿಲ್ಲ, ನಾಳೆ ಬಾಬಾ ರಾಮ್‌ದೇವ್ ಅವರು ಕಪ್ಪುಹಣ ವಾಪಸು ಪಡೆಯುವ ಕಾನೂನಿನ ರಚನೆಯಲ್ಲಿಯೂ ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಉಪವಾಸ ಸತ್ಯಾಗ್ರಹದ ಮೂಲಕ ಹಠ ಹಿಡಿದರೆ? ಅಣ್ಣಾಹಜಾರೆ ಅವರ ಪಾಲ್ಗೊಳ್ಳುವಿಕೆಯನ್ನು ಒಪ್ಪುವವರು
ಬಾಬಾ ರಾಮ್‌ದೇವ್ ಅವರನ್ನೂ ಒಪ್ಪಿಕೊಳ್ಳುವರೇ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಸಂವಿಧಾನೇತರ ಶಕ್ತಿಗಳ ಪಾತ್ರವನ್ನು ನೋಡಬೇಕಾಗಿದೆ. ನಮಗೆಅರಿವಿಲ್ಲದಂತೆಯೇ ಸಂಸದೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಾ ಬರುತ್ತಿರುವ ಮತ್ತು ರಾಜಕೀಯ ಪಕ್ಷಗಳು ಶರಣಾಗಿರುವ ಸಂವಿಧಾನೇತರ ಶಕ್ತಿಗಳ ಬಗ್ಗೆಯೂ ಚರ್ಚೆ ನಡೆಯಬೇಕಾಗಿದೆ.
ಸಂವಿಧಾನೇತರ ಶಕ್ತಿಗಳ ಬಗ್ಗೆ ಮಾತನಾಡುವಾಗ ಎಲ್ಲರೂ ತೆರೆಯ ಮುಂದಿನ ಪಾತ್ರಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ನಿಜಕ್ಕೂ ಹಾನಿ ಉಂಟು ಮಾಡುತ್ತಿರುವುದು ತೆರೆಯ ಹಿಂದಿನ ಸಂವಿಧಾನೇತರ ಶಕ್ತಿಗಳು.
ದೇಶದ ಪ್ರಜಾಪ್ರಭುತ್ವದಲ್ಲಿ ಇವುಗಳ ಪ್ರವೇಶವಾಗಿದ್ದು ಎನ್‌ಡಿಎ ಕಾಲದಲ್ಲಿ. ಅದನ್ನೇ ಇನ್ನೊಂದು ರೀತಿಯಲ್ಲಿ ಈಗ ಮುಂದುವರಿಸಿಕೊಂಡು ಹೋಗುತ್ತಿರುವುದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ.
ಸಂವಿಧಾನೇತರ ಶಕ್ತಿಯ ಕಾಣದ ಕೈಗಳ ಪ್ರಭಾವ ಮೊದಲ ಬಾರಿ ದೇಶದ ಅನುಭವಕ್ಕೆ ಬಂದದ್ದು ಅಟಲಬಿಹಾರಿ ವಾಜಪೇಯಿ ಮೊದಲ ಬಾರಿ ಸಂಪುಟ ರಚನೆಗೆ ಸಿದ್ಧತೆ ನಡೆಸುತ್ತಿದ್ದಾಗ. ಜಸ್ವಂತ್‌ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಬೇಕೆಂದು ಹೊರಟಾಗ `ಕಾಣದ ಕೈ~ ಅವರ ಕಾಲು ಹಿಡಿದು ಎಳೆದಿತ್ತು.

ಈ `ಕಾಣದ ಕೈ~ಗಳು ಯಾರದ್ದೆಂದು ಈ ವರೆಗೆ ಯಾರೂ ಒಪ್ಪಿಕೊಳ್ಳದೆ ಇದ್ದರೂ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದ್ದೆಂದು ಎಲ್ಲರಿಗೂ ಗೊತ್ತಿದೆ. ಆ ದಿನದಿಂದ ಪ್ರಾರಂಭಗೊಂಡ ಆ `ಕಾಣದ ಕೈ~ಗಳ ಪ್ರಭಾವ ಎನ್‌ಡಿಎ ಸರ್ಕಾರದ ಆರು ವರ್ಷಗಳ ಅವಧಿಯುದ್ದಕ್ಕೂ ಕಾಣಿಸಿಕೊಂಡಿತು.

ಪ್ರತಿ ಬಾರಿ ಸಚಿವ ಸಂಪುಟ ರಚನೆಗೆ ಮೊದಲು ಬಿಜೆಪಿಯ ಹಿರಿಯ ನಾಯಕರು ನಾಗಪುರದಲ್ಲಿರುವ ಆರ್‌ಎಸ್‌ಎಸ್ ಹಿರಿಯರೊಂದಿಗೆ ಸಮಾಲೋಚನೆ ನಡೆಸಬೇಕಾಗಿತ್ತು, ಇಲ್ಲವೇ, ದೆಹಲಿಯ ಜಂಡೇಲಾದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಬೇಕಾಗಿತ್ತು.
ಬಿಜೆಪಿ ಪಾಲಿಗೆ ಋಣ ಪರಿಹಾರ ಅನಿವಾರ‌್ಯವಾಗಿತ್ತು. ಅದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದದ್ದು ಸ್ವಂತ ಬಲದಿಂದ ಅಲ್ಲ, ಸಂಘ ಪರಿವಾರದ ಬೆಂಬಲದಿಂದ ಎಂಬುದು ವಿರೋಧಪಕ್ಷಗಳ ಆರೋಪವಷ್ಟೇ ಅಲ್ಲ, ಬಿಜೆಪಿ ಕೂಡಾ ಆಂತರ್ಯದಲ್ಲಿ ಹಾಗೆಯೇ ತಿಳಿದುಕೊಂಡಿತ್ತು.
ಯಾಕೆಂದರೆ ಬಿಜೆಪಿಯನ್ನು ದೆಹಲಿಯ ಸಿಂಹಾಸನದಲ್ಲಿ ಕರೆದೊಯ್ದು ಕೂರಿಸಿದ್ದು ರಾಮಜನ್ಮಭೂಮಿ ಚಳವಳಿ. ಅದು ಮೂಲತಃ ಬಿಜೆಪಿಯ ಅಜೆಂಡಾ ಆಗಿರಲಿಲ್ಲ. 80ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾರಂಭಿಸಿದ್ದ ರಾಮಜನ್ಮಭೂಮಿ ಚಳವಳಿಗೆ ಬಿಜೆಪಿ ಅಧಿಕೃತವಾಗಿ ಪ್ರವೇಶಿಸಿದ್ದು 1989ರಲ್ಲಿ,
ಪಾಲಂಪುರದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ‌್ಯಕಾರಿ ಮಂಡಳಿ ಸಭೆಯಲ್ಲಿ ಕೈಗೊಂಡ ಗೊತ್ತುವಳಿ ಮೂಲಕ. ರಾಮಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ,  ಸಂವಿಧಾನದ 370ನೇ ಪರಿಚ್ಛೇದದ ರದ್ದತಿ..ಇವೆಲ್ಲವೂ ಮೂಲತಃ ಸಂಘ ಪರಿವಾರದ ಬೇಡಿಕೆಗಳೇ ಹೊರತು ಬಿಜೆಪಿಯವಲ್ಲ.
ಈ ಬೇಡಿಕೆಗಳನ್ನೆತ್ತಿಕೊಂಡು ರಾಜಕೀಯ ಹೋರಾಟ ನಡೆಸಿದ ಕಾರಣದಿಂದಾಗಿಯೇ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಸಂಘ ಪರಿವಾರ ಬಲವಾಗಿ ನಂಬಿದೆ. ಆ ನಂಬಿಕೆಯ ಬಲದಿಂದಲೇ ಹೆಜ್ಜೆ ಹೆಜ್ಜೆಗೂ ಎನ್‌ಡಿಎ ಸರ್ಕಾರವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಂಘ ಪರಿವಾರ ಪ್ರಯತ್ನ ನಡೆಸಿದ್ದು.
ಆರು ವರ್ಷಗಳ ವಾಜಪೇಯಿ ಅಧಿಕಾರವಧಿ ಪಕ್ಷ ಮತ್ತು ಸಂಘದ ನಡುವಿನ ನಿತ್ಯ ಸಂಘರ್ಷದ ಕಾಲವೂ ಆಗಿತ್ತು. ಆದರೆ ವಾಜಪೇಯಿ ಅವರ ನಾಯಕತ್ವಕ್ಕೆ ಇದ್ದ ಪ್ರಭಾವಳಿಯಿಂದಾಗಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಲು ಸಂಘಕ್ಕೆ ಸಾಧ್ಯವಾಗಿರಲಿಲ್ಲ.
ಈ ಹತಾಶೆಯಿಂದಲೇ ವಾಜಪೇಯಿ ಮತ್ತು ಅಡ್ವಾಣಿಯವರು ನಿವೃತ್ತಿಯಾಗಬೇಕೆಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಆರ್‌ಎಸ್‌ಎಸ್ ಸರಸಂಘ ಚಾಲಕರು ಅವಮಾನಿಸಿದ್ದು. 2004ರಲ್ಲಿ ಬಿಜೆಪಿ ಸ್ವಂತಬಲದಿಂದ  `ಅಭಿವೃದ್ಧಿ~ಯ ಅಜೆಂಡಾದ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಲು ಪ್ರಯತ್ನಿಸಿದ್ದು ನಿಜ. 
ಪ್ರಮೋದ್ ಮಹಾಜನ್ ಅವರು ಈ ಕಾರ‌್ಯತಂತ್ರವನ್ನು ರೂಪಿಸಿದ್ದರು. ಗುಜರಾತ್ ಯಶಸ್ಸಿನ ಆಕರ್ಷಣೆಗೆ ಬಲಿಯಾಗದೆ ವಾಜಪೇಯಿ ಅವರ ಸಾಧನೆಯನ್ನೇ ಮುಂದಿಟ್ಟುಕೊಂಡು `ಪ್ರಕಾಶಿಸುತ್ತಿರುವ ಭಾರತ~ದ ಮೂಲಕ ಬಿಜೆಪಿ ಚುನಾವಣೆ ಎದುರಿಸಿತ್ತು.
ಆಗ ಅನುಭವಿಸಿದ ಸೋಲು ಪಕ್ಷದೊಳಗಿರುವ ಸಂಘಪ್ರೇಮಿಗಳ ಕೈಗಳನ್ನು ಮತ್ತೆ ಬಲಪಡಿಸಿತ್ತು. ಅದರ ನಂತರ ಗೊಂದಲದಲ್ಲಿದ್ದ ಬಿಜೆಪಿ, ಈಗ ಮತ್ತೆ ತಮ್ಮ ಹಳೆಯ ದಿನಗಳಿಗೆ ಮರಳುವ ಪ್ರಯತ್ನ ಮಾಡುತ್ತಿದೆ.
ಈ ಬಾರಿ ಇದಕ್ಕೆ ಪ್ರೇರಣೆಯನ್ನು ಬಿಜೆಪಿ ಕರ್ನಾಟಕದಿಂದಲೇ ಪಡೆದಿರಬಹುದು. ಭ್ರಷ್ಟಾಚಾರದ ಹಗರಣಗಳ ಆರೋಪಕ್ಕೆ ಸಿಕ್ಕಿ ತತ್ತರಿಸಿಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆತ್ಮರಕ್ಷಣೆಗಾಗಿ ಬಳಸುತ್ತಿರುವುದು ಜಾತಿಮಠಗಳೆಂಬ ಸಂವಿಧಾನೇತರ ಶಕ್ತಿಗಳ ಬೆಂಬಲದ ಅಸ್ತ್ರವನ್ನೇ ಅಲ್ಲವೇ? ಸರ್ಕಾರ ಬೇಕಾಬಿಟ್ಟಿಯಾಗಿ ಹಂಚಿರುವ ಹಣವನ್ನು ಪಡೆದ ಮಠಗಳು ಋಣ ತೀರಿಸಲೆಂಬಂತೆ ಮುಖ್ಯಮಂತ್ರಿಗಳ ರಕ್ಷಣೆಗೆ ನಿಂತಿವೆ.
`ಅವರನ್ನು ಮುಟ್ಟಿದರೆ ಜೋಕೆ~ ಎಂದು ಬೆದರಿಕೆ ಹಾಕುವ ಮಟ್ಟಕ್ಕೆ ಸ್ವಾಮಿಗಳು ಹೋಗಿದ್ದಾರೆ. ಸಚಿವ ಸಂಪುಟಕ್ಕೆ ಸೇರ್ಪಡೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆವರೆಗೆ ಸರ್ಕಾರ ಕೈಗೊಳ್ಳಬೇಕಾಗಿರುವ ನಿರ್ಧಾರಗಳು ಜಾತಿ ಮಠಗಳ ಅಂತರಂಗದ ಚಾವಡಿಗಳಲ್ಲಿ ನಡೆಯುತ್ತಿರುವುದನ್ನು ಸರ್ಕಾರದ ಮೇಲಿನ ಸಂವಿಧಾನೇತರ ಶಕ್ತಿಗಳ ನಿಯಂತ್ರಣವೆನ್ನದೆ ಬೇರೆ ಏನೆಂದು ಕರೆಯಲು ಸಾಧ್ಯ?
ಯುಪಿಎ ಸರ್ಕಾರದೊಳಗಿನ ಈಗಿನ ಸ್ಥಿತಿ ವಾಜಪೇಯಿ ಕಾಲದ ಬಿಜೆಪಿಗಿಂತ ಭಿನ್ನವಾಗಿ ಇಲ್ಲ. ವಂಶಪರಂಪರೆಯ ರಾಜಕೀಯ ಕಾಂಗ್ರೆಸ್ ಪಕ್ಷದ ಮೇಲಿರುವ ಹಳೆಯ ಆರೋಪ.

ಆದರೆ ಆ ಪಕ್ಷದ ನಾಯಕತ್ವ ವಹಿಸುತ್ತಾ ಬಂದ ನೆಹರೂ ಕುಟುಂಬದ ಸದಸ್ಯರು ಚುನಾವಣೆಗಳನ್ನು ಎದುರಿಸಿ ಸೋಲು-ಗೆಲುವುಗಳನ್ನು ಅನುಭವಿಸಿದವರೇ ಆಗಿರುವ ಕಾರಣ ಅವರ ರಾಜಕೀಯ ಜೀವನ ಪ್ರಜಾಪ್ರಭುತ್ವದ ಚೌಕಟ್ಟಿನೊಳಗಡೆಯೇ ಇತ್ತು. ಆದ್ದರಿಂದ ಕಾಂಗ್ರೆಸ್ ಮೇಲಿನ ನೆಹರೂ ಕುಟುಂಬದ ನಿಯಂತ್ರಣವನ್ನು ಸಂವಿಧಾನೇತರ ಶಕ್ತಿಯ ನಿಯಂತ್ರಣ ಎಂದು ವ್ಯಾಖ್ಯಾನ ಮಾಡಲಾಗುವುದಿಲ್ಲ.
ಆದರೆ 2004ರ ಲೋಕಸಭಾ ಚುನಾವಣೆಯ ನಂತರ ಈ ಚಿತ್ರ ಬದಲಾಗಿ ಹೋಗಿದೆ. ಸೋನಿಯಾಗಾಂಧಿ ನೇತೃತ್ವದಲ್ಲಿಯೇ ಪಕ್ಷ ಚುನಾವಣೆ ಎದುರಿಸಿದರೂ ಪ್ರಧಾನಿಯಾಗಿದ್ದು ಮಾತ್ರ ಮನಮೋಹನ್‌ಸಿಂಗ್. ಭಾರತದ ರಾಜಕೀಯ ಸಂದರ್ಭದಲ್ಲಿ ಇದೊಂದು ಹೊಸ ಪ್ರಯೋಗ.
ರಾಜಕೀಯವಾದ ಬಿಕ್ಕಟ್ಟುಗಳಿಗೆ ಸೋನಿಯಾಗಾಂಧಿಯವರೇ ತಲೆಕೊಡುತ್ತಿರುವ ಕಾರಣ ಪ್ರಧಾನಿಯಾದವರು ಆಡಳಿತೇತರ ಜಂಜಾಟಗಳಿಂದ ಮುಕ್ತವಾಗಿ ಆಡಳಿತ ನಡೆಸಲು ಸಾಧ್ಯವಾಗಬಹುದೆಂಬ ನಿರೀಕ್ಷೆ ಇತ್ತು.

ಆಡಳಿತ ಸೂತ್ರ ಕೈಯಲ್ಲಿದ್ದರೂ ರಾಜಕೀಯ ಅಧಿಕಾರ ಇಲ್ಲದ ನಾಯಕ ಎಷ್ಟೇ ಸಮರ್ಥನಾಗಿದ್ದರೂ ಹೇಗೆ ಅಸಹಾಯಕ ಮತ್ತು ನಿಷ್ಪ್ರಯೋಜಕನಾಗುತ್ತಾನೆ ಎನ್ನುವುದಕ್ಕೆ ಮನಮೋಹನ್‌ಸಿಂಗ್ ಸಾಕ್ಷಿ.
ಸೋನಿಯಾ ಗಾಂಧಿಯವರ ಈ ಪಾತ್ರ ನಿರ್ವಹಣೆ ಕೂಡಾ ಸಂವಿಧಾನೇತರ ಶಕ್ತಿಯ ನಿಯಂತ್ರಣ ಅಲ್ಲ ಎಂದು ತಳ್ಳಿಹಾಕಬಹುದು. ಆದರೆ, ಅವರ ಪಾತ್ರ ಅಷ್ಟಕ್ಕೆ ಕೊನೆಗೊಂಡಿಲ್ಲ.
`ಸೂಪರ್ ಕ್ಯಾಬಿನೆಟ್~ ಎಂಬ ಆರೋಪಕ್ಕೊಳಗಾಗಿರುವ `ರಾಷ್ಟ್ರೀಯ ಸಲಹಾ ಮಂಡಳಿ~ಯನ್ನು (ಎನ್‌ಎಸಿ) ಅವರು ಹುಟ್ಟು ಹಾಕಿದ್ದಾರೆ. ಅದಕ್ಕೆ ಅವರೇ ಅಧ್ಯಕ್ಷರು. ಎಂಎನ್‌ಆರ್‌ಇಜಿಪಿ, ಮಾಹಿತಿ ಹಕ್ಕು, ಅರಣ್ಯ ಹಕ್ಕು, ಶಿಕ್ಷಣದ ಹಕ್ಕು, ಭೂ ಸ್ವಾಧೀನ ಮತ್ತು ಪುನರ್ವಸತಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಮೊದಲಾದ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಕಾನೂನಿನ ಕರಡುಗಳನ್ನು ರೂಪಿಸಿದ್ದು ಯುಪಿಎ ಸರ್ಕಾರವಲ್ಲ, ಅದು ಎನ್‌ಎಸಿ.
ಇತ್ತೀಚೆಗೆ ವಿವಾದ ಸೃಷ್ಟಿಸಿರುವ ಕೋಮು ಹಿಂಸೆ ನಿಯಂತ್ರಣ ಮಸೂದೆ ರಚಿಸಿರುವುದು ಎನ್‌ಎಸಿ. ಶಾಸನ ರಚನೆಗಾಗಿಯೇ ಶಾಸಕಾಂಗ ಇರುವಾಗ ಅದಕ್ಕೆ ಪರ‌್ಯಾಯವಾಗಿ ಇಂತಹ ಸಂಸ್ಥೆಯೊಂದನ್ನು ಹುಟ್ಟುಹಾಕಿ ಕಾಂಗ್ರೆಸ್ ಪಕ್ಷದೊಳಗೂ ಸಂವಿಧಾನೇತರ ಸಂಸ್ಥೆಯ ಪ್ರವೇಶಕ್ಕೆ ಸೋನಿಯಾಗಾಂಧಿ ದಾರಿಮಾಡಿಕೊಟ್ಟಿದ್ದಾರೆ.
ಇದರಲ್ಲಿ ಸದಸ್ಯರಾಗಿರುವವರಲ್ಲಿ ಹೆಚ್ಚಿನವರು ಸರ್ಕಾರೇತರ ಸೇವಾ ಸಂಸ್ಥೆಗಳ (ಎನ್‌ಜಿಒ) ಜತೆ ತಮ್ಮನ್ನು ಗುರುತಿಸಿಕೊಂಡವರು. ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಮತ್ತು ಎನ್‌ಎಸಿ ಸದಸ್ಯರ ನಡುವೆ ಹಲವಾರು ಸಾಮ್ಯತೆಗಳಿವೆ.
ಈ ಎರಡೂ ಗುಂಪಿನ ಅನೇಕ ಸದಸ್ಯರು ರಾಜಕಾರಣಿಗಳನ್ನು ದ್ವೇಷಿಸುತ್ತಾರೆ, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇಷ್ಟಪಡುವುದಿಲ್ಲ, ಆದರೆ ತಮ್ಮ ಮಾತನ್ನು ಚುನಾಯಿತ ಸರ್ಕಾರ ಕೇಳಬೇಕೆಂದು ಬಯಸುತ್ತಾರೆ.
ಭ್ರಷ್ಟತೆ ಮತ್ತು ಅಸಾಮರ್ಥ್ಯಗಳ ಕಾರಣ ಸಹೋದ್ಯೋಗಿಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿರುವ ಸೋನಿಯಾಗಾಂಧಿ, ಈ `ಜೋಲಾವಾಲಾ~ಗಳ ಮೇಲೆ ಹೆಚ್ಚು ಹೆಚ್ಚು ಅವಲಂಬನೆಗೊಳಗಾದಂತೆ ಕಾಣಿಸುತ್ತಿದೆ.
ಸರ್ಕಾರ ಈಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಅಣ್ಣಾಹಜಾರೆ ನೇತೃತ್ವದ ನಾಗರಿಕ ಸಮಿತಿಯ ಸದಸ್ಯರು ಮತ್ತು ಎನ್‌ಎಸಿ ಸದಸ್ಯರ ನಡುವಿನ ವ್ಯಕ್ತಿ ಪ್ರತಿಷ್ಠೆಯ ಸಂಘರ್ಷವೂ ಕಾರಣ.

`ನಾಗರಿಕ ಸಮಿತಿ~ಗಳು ಚುನಾಯಿತ ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡುತ್ತಿದೆ ಎಂದು ಬೊಬ್ಬಿಡುತ್ತಿರುವ ಕಾಂಗ್ರೆಸ್ ಪಕ್ಷ ತನ್ನದೇ ಸರ್ಕಾರದ ತಲೆಮೇಲೆ `ನಾಗರಿಕ ಸಮಿತಿ~ಯ ಇನ್ನೊಂದು ರೂಪವಾದ ಎನ್‌ಎಸಿಯನ್ನು ಕೂರಿಸಿರುವುದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಇದರಿಂದ ಸಂಸದೀಯ ಪ್ರಜಾಪ್ರಭುತ್ವ ದುರ್ಬಲಗೊಳ್ಳುವುದಿಲ್ಲವೇ?
ಈ ರೀತಿ ಕಾಂಗ್ರೆಸ್ ಪಕ್ಷ ಬಿಜೆಪಿ ಹಿಂದೆ ಮಾಡಿದ್ದ ತಪ್ಪನ್ನೇ ಮಾಡುತ್ತಿದ್ದರೆ, ಅನುಭವದಿಂದ ಪಾಠ ಕಲಿಯದ ಬಿಜೆಪಿ ಹಳೆಯ ತಪ್ಪನ್ನೇ ಪುನರಾವರ್ತಿಸಲು ಹೊರಟಿದೆ.
ಜವಾಬ್ದಾರಿಯುತ ವಿರೋಧಪಕ್ಷವಾಗಿ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಳುವ ಪಕ್ಷದ ಜತೆ ಮುಖಾಮುಖಿ ರಾಜಕೀಯ ಹೋರಾಟಕ್ಕಿಳಿಯಬೇಕಾದ ಬಿಜೆಪಿ ಬಾಬಾ ರಾಮ್‌ದೇವ್ ಅವರಂತಹವರ ಬೆನ್ನಹಿಂದೆ ನಿಂತು ರಾಜಕೀಯ ಮಾಡುತ್ತಿದೆ.
ಜನತೆಯ ಬೆಂಬಲದ ಮೂಲಕ ರಾಜಕೀಯ ಶಕ್ತಿಯನ್ನು ಗಳಿಸಬೇಕಾದ ಈ ರಾಜಕೀಯ ಪಕ್ಷ, ಕುಸಿಯುತ್ತಿರುವ ಜನಪ್ರಿಯತೆಯಿಂದಾಗಿ ಹತಾಶರಾಗಿರುವ ಒಬ್ಬ ಯೋಗಗುರುವಿನ ಮೂಲಕ ರಾಜಕೀಯ ಮರುಜನ್ಮ ಪಡೆಯುವ ವ್ಯರ್ಥ ಪ್ರಯತ್ನದಲ್ಲಿದೆ.
ತಮ್ಮ ಪಕ್ಷದ ನಾಯಕರಾದ ಎಲ್.ಕೆ.ಅಡ್ವಾಣಿ ಅವರು ರಾಮ್‌ದೇವ್‌ಗಿಂತಲೂ ಮೊದಲು ಕಪ್ಪುಹಣದ ವಿಷಯವನ್ನು ಸಾರ್ವಜನಿಕ ಚರ್ಚೆಯ ಅಂಗಳಕ್ಕೆ ಎಳೆದು ತಂದವರು ಎನ್ನುವುದನ್ನು ಬಿಜೆಪಿ ಮರೆತುಬಿಟ್ಟಂತೆ ಕಾಣುತ್ತಿದೆ.
ಸಮರ್ಥ ನಾಯಕರಿಲ್ಲದೆ ದುರ್ಬಲವಾಗಿರುವ ವಿರೋಧ ಪಕ್ಷವಾದ ಬಿಜೆಪಿ ಸಂವಿಧಾನೇತರ ಶಕ್ತಿಗಳಾದ ಸಂಘ ಪರಿವಾರ ಮತ್ತು ಸಾಧು-ಸಂತರಿಗೆ ಶರಣಾಗಿರುವುದು ಭವಿಷ್ಯದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಇನ್ನಷ್ಟು ದುರ್ಬಲಗೊಳ್ಳಲಿದೆ ಎನ್ನುವುದಕ್ಕೆ ಸೂಚನೆ. ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಬೇಕಾಗಿರುವುದು ಈ ಕಾರಣಕ್ಕಾಗಿ.