Monday, May 16, 2011

ಪ್ರಾದೇಶಿಕ ಪಕ್ಷಗಳ ಬಗ್ಗೆ ಹೆಚ್ಚುತ್ತಿರುವ ಒಲವು

‘ಪ್ರಾದೇಶಿಕ ಪಕ್ಷಗಳೆಂಬ ಶಾಪದಿಂದಾಗಿಯೇ ಸರ್ಕಾರಗಳು ಪೂರ್ಣಾವಧಿ ಬಾಳದೆ ಅನಿಶ್ಚಿತ ರಾಜಕೀಯದ ಕೆಟ್ಟಕಾಲ ಪ್ರಾರಂಭವಾಗಿರುವುದು. ಇವುಗಳಿಗೆ ಅಂಟಿಕೊಂಡಿರುವ ಪಕ್ಷಾಂತರದ ಪಿಡುಗಿನಿಂದಾಗಿಯೇ ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿರುವುದು..’ ಎಂದೆಲ್ಲಾ ಆರೋಪಿಸುವವರಿದ್ದಾರೆ.
 ಆದರೆ ಇತ್ತೀಚೆಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಸೇರಿದಂತೆ ಇತ್ತೀಚಿನ ಬಹುತೇಕ  ಚುನಾವಣೆಗಳಲ್ಲಿ  ಭಾರತೀಯ ಮತದಾರರು ಮೇಲಿನ ಆರೋಪಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಂತೆ ಕಾಣುತ್ತಿಲ್ಲವೇ? ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆಂದು ಅನಿಸುವುದಿಲ್ಲವೇ?
ಪಶ್ಚಿಮಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಎಡಿಎಂಕೆಗಳೇ ಗೆಲುವಿನ ಮುಂಚೂಣಿಯಲ್ಲಿರುವುದು.ಅಸ್ಸಾಂನಲ್ಲಿ ತರುಣ್ ಗೋಗೋಯ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಪ್ರಾದೇಶಿಕ ಪಕ್ಷದ ನಾಯಕನ ಶೈಲಿಯಲ್ಲಿಯೇ ರಾಜ್ಯಭಾರ ಮಾಡಿಕೊಂಡು ಬಂದಿರುವುದು.

ಸಿಪಿಎಂನ ದೆಹಲಿ ನಾಯಕರಿಂದ ನಿರಂತರವಾಗಿ ಅವಮಾನಕ್ಕೆಡಾಗುತ್ತಾ ಬಂದ ವಿ.ಎಸ್ ಅಚ್ಯುತಾನಂದನ್ ಅವರನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಕೇರಳ ಮತದಾರರ ರೋಷದಲ್ಲಿ ‘ಮಲೆಯಾಳಿ ಸ್ವಾಭಿಮಾನ’ದ ಅಭಿವ್ಯಕ್ತಿ ಇರಲಿಲ್ಲವೇ?
ಕಾಂಗ್ರೆಸ್ ವಿರುದ್ಧ ಬಂಡೆದ್ದ ಪುದುಚೇರಿಯ ಸರಳ-ಸಜ್ಜನ ನಾಯಕ ಎನ್.ರಂಗಸ್ವಾಮಿ ಅವರನ್ನು ಗೆಲ್ಲಿಸಿದ್ದು ಆ ಸಣ್ಣ ರಾಜ್ಯದ ಮತದಾರರ ಆತ್ಮಾಭಿಮಾನದ ದೊಡ್ಡ ಶಕ್ತಿಯಲ್ಲವೇ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ಮಾತ್ರವಲ್ಲ, ದೇಶದ ಎರಡನೇ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಭೌಗೋಳಿಕ ಮಿತಿ ಕೂಡಾ ಬಯಲಾಗಿದೆ.

ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಐವರು ಶಾಸಕರು ಆಯ್ಕೆಯಾಗಿರುವುದನ್ನು ಬಿಟ್ಟರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಕನಿಷ್ಠ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗಿಲ್ಲ.
ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವಾಗ ಬಿಜೆಪಿ ಈ ಐದು ರಾಜ್ಯಗಳಲ್ಲಿರುವ ಒಟ್ಟು 115 ಲೋಕಸಭಾ ಸ್ಥಾನಗಳನ್ನು ಪಕ್ಕಕ್ಕೆ ಇಟ್ಟು ರಾಜಕೀಯ ಬಲದ ಲೆಕ್ಕಾಚಾರ ಮಾಡಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಗಿಂತ ಮೊದಲು ವಿಧಾನಸಭಾ ಚುನಾವಣೆ ನಡೆಯಲಿರುವ 19 ರಾಜ್ಯಗಳ ರಾಜಕೀಯದ ಮೇಲೆ ಕಣ್ಣಾಡಿಸಿದರೂ ರಾಷ್ಟ್ರೀಯ ಪಕ್ಷಗಳ ಬಲ ಕುಂದುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

ಈ 19 ರಾಜ್ಯಗಳಲ್ಲಿ ಎಂಟರಲ್ಲಿ (ಆಂಧ್ರಪ್ರದೇಶ, ದೆಹಲಿ, ಗೋವಾ, ಮಣಿಪುರ, ರಾಜಸ್ತಾನ,ಮೇಘಾಲಯ ಮತ್ತು ಮಿಜೋರಾಂ) ಕಾಂಗ್ರೆಸ್ ಅಧಿಕಾರದಲ್ಲಿದೆ. ಇನ್ನೊಂದು ರಾಜ್ಯವಾದ ಜಮ್ಮು ಮತ್ತು ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಜತೆಗಿನ ಮೈತ್ರಿ ಸರ್ಕಾರ ಇದೆ.
ಎರಡು ಅವಧಿಗಳ ಆಡಳಿತ ವಿರೋಧಿ ಅಲೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳುವಳಿ ಮತ್ತು ಜಗನ್‌ಮೋಹನ್ ರೆಡ್ಡಿಯವರ ಬಂಡಾಯದಿಂದಾಗಿ ಆಂಧ್ರಪ್ರದೇಶದ ಕಾಂಗ್ರೆಸ್ ಆಗಲೇ ನಿರ್ಗಮನದ ಹಾದಿಯಲ್ಲಿದೆ. ಮೂರನೇ ಅವಧಿಗೆ ಚುನಾವಣೆ ಎದುರಿಸಲಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದಾಗಿ ಮುಖ ಮಸಿಮಾಡಿಕೊಂಡು ಮತದಾರರನ್ನು ಎದುರಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಕಷ್ಟ. ಈಶಾನ್ಯದ ಮೂರು ಸಣ್ಣ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್ ಭರವಸೆ ಇಡಬಲ್ಲಂತಹ ಏಕೈಕ ರಾಜ್ಯ ರಾಜಸ್ತಾನ ಮಾತ್ರ. ಅದು ಪಕ್ಷಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರ ವೈಯುಕ್ತಿಕ ವರ್ಚಸ್ಸನ್ನು ಅವಲಂಬಿಸಿದೆ.
ರಾಜಸ್ತಾನ  ಮತ್ತು ದೆಹಲಿ ರಾಜ್ಯಗಳಲ್ಲಿ ತೃತೀಯರಂಗದ ಯಾವ ಪಕ್ಷವೂ ಇಲ್ಲದಿರುವ ಕಾರಣ ಕಾಂಗ್ರೆಸ್‌ನ ನಷ್ಟ  ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಲಾಭವಾಗಬಹುದು.
ಬಿಜೆಪಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ  ಆರು ರಾಜ್ಯಗಳು ( ಗುಜರಾತ್,ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ) ವಿಧಾನಸಭಾ ಚುನಾವಣೆ ಎದುರಿಸಲಿವೆ. 1995ರಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಮೂರನೇ ಚುನಾವಣೆಯನ್ನು ಎದುರಿಸುವ ತಯಾರಿಯಲ್ಲಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿಯೂ ಬಿಜೆಪಿಯದ್ದು ಈಗ ಎರಡನೇ ಅವಧಿಯ ಸರ್ಕಾರ. ಗುಜರಾತ್‌ನಲ್ಲಿ ಸತತ ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ರಾಜಕೀಯವಾಗಿ ಮಾತ್ರವಲ್ಲ ನೈತಿಕವಾಗಿಯೂ ಕುಗ್ಗಿಹೋಗಿದೆ. ಆದ್ದರಿಂದ ನರೇಂದ್ರಮೋದಿ ಈಗಲೂ ಸುರಕ್ಷಿತವಾಗಿರುವಂತೆ ಕಾಣುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರಗಳ ಆರೋಪಗಳು ಎಷ್ಟೇ ಇದ್ದರೂ ಈ ವರೆಗಿನ ಉಪಚುನಾವಣೆಗಳಲ್ಲಿ ಮತದಾರರು ಅವರ ಕೈಬಿಟ್ಟಿಲ್ಲ. ಭ್ರಷ್ಟ್ರರ ಬೆನ್ನಟ್ಟಿ ಮನೆಗೆ ಅಟ್ಟುತ್ತಿರುವ ದೇಶದ ಪ್ರಜ್ಞಾವಂತ ಮತದಾರರಿಗೆ ಸವಾಲು ಹಾಕುವಂತಿದೆ ಕರ್ನಾಟಕದ ಮತದಾರರ ವರ್ತನೆ.

ಇದು ಬಿಜೆಪಿಗೆ ನೆರವಾಗಲೂ ಬಹುದು.ಆದರೆ ಇದೇ ಮಾತನ್ನು ಇನ್ನಿಬ್ಬರು ಮುಖ್ಯಮಂತ್ರಿಗಳಾದ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಮಣ್‌ಸಿಂಗ್ ಅವರ ಬಗ್ಗೆ ಹೇಳುವ ಹಾಗಿಲ್ಲ. ಇಬ್ಬರೂ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಾದೇಶಿಕ ಪಕ್ಷಗಳ ಸತ್ವಪರೀಕ್ಷೆಯ ಫಲಿತಾಂಶ ಮೊದಲು ಗೊತ್ತಾಗಲಿರುವುದು ಮುಂದಿನವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ. ಕಾಂಗ್ರೆಸ್ ಪಾಲಿಗೆ ಸಂಖ್ಯೆ ಮತ್ತು ಪ್ರತಿಷ್ಠೆಗಳೆರಡರ ದೃಷ್ಟಿಯಿಂದಲೂ ಈ ಚುನಾವಣೆ ನಿರ್ಣಾಯಕ. ರಾಹುಲ್‌ಗಾಂಧಿಯ ರಾಜಕೀಯ ಭವಿಷ್ಯ ಕೂಡಾ ಈ ಚುನಾವಣೆಯನ್ನು ಅವಲಂಬಿಸಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಮುಖಭಂಗ ಅನುಭವಿಸಿದರೂ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಮೈಕೊಡವಿ ಎದ್ದುನಿಂತು ಶಕ್ತಿಪ್ರದರ್ಶನ ಮಾಡಿತ್ತು.ವಿಧಾನಸಭಾ ಚುನಾವಣೆಯಲ್ಲಿಯೂ ಈ ಮ್ಯಾಜಿಕ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ರಾಹುಲ್‌ಗಾಂಧಿ.

ಆದರೆ ಪ್ರಾದೇಶಿಕ ರಾಜಕಾರಣದ ಎಲ್ಲ ವರಸೆಗಳನ್ನು ಬಲ್ಲ ಮಾಯಾವತಿ ಮತ್ತು ಮುಲಾಯಂಸಿಂಗ್ ಅವರಂತಹ ಚಾಣಕ್ಷ ರಾಜಕಾರಣಿಗಳನ್ನು ನಿರ್ಲಕ್ಷಿಸುವುದು ಸಾಧ್ಯ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯ ಜತೆಯಲ್ಲಿಯೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಒರಿಸ್ಸಾದಲ್ಲಿ ಬಿಜು ಜನತಾದಳಕ್ಕೆ ಸಮರ್ಥ ಎದುರಾಳಿಯೇ ಇಲ್ಲದಿರುವಂತಹ ಸ್ಥಿತಿ ಇದೆ. ಅಲ್ಲಿ ಕಾಂಗ್ರೆಸ್ ಒಂದಷ್ಟು ಸ್ಥಾನಗಳನ್ನು ಗಳಿಸಲೂ ಬಹುದು.

ಆದರೆ ಬಿಜೆಪಿಗೆ ಹೆಚ್ಚಿನ ಲಾಭವಾಗದು. ಭವಿಷ್ಯದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನವೀನ್ ಪಟ್ನಾಯಕ್  ಹ್ಯಾಟ್ರಿಕ್ ಸಾಧಿಸಿದರೆ ದೆಹಲಿ ಕಡೆ ಹೊರಡುವ ಸಾಧ್ಯತೆ ಇರುವುದರಿಂದ ಆ ರಾಜ್ಯದ ಮತದಾರರು ಆಶೀರ್ವದಿಸಲೂ ಬಹುದು.
ಪಂಜಾಬ್‌ನಲ್ಲಿ ಮಾತ್ರ ಪ್ರಾದೇಶಿಕ ಪಕ್ಷವಾದ ಅಕಾಲಿದಳದ ಅಧಿಕಾರ ಕೊನೆಗೊಂಡು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಿವೆ.
ಈ ರೀತಿ ಮೇಲ್ನೋಟಕ್ಕೆ ಪ್ರಾದೇಶಿಕ ಪಕ್ಷಗಳ ಬಲವರ್ಧನೆಯಾಗುತ್ತಿರುವಂತೆ ಕಾಣುತ್ತಿರುವುದು ನಿಜವಾದರೂ ವಾಸ್ತವ ಹಾಗಿಲ್ಲ. ಇದಕ್ಕೆ ಕಾರಣ ಜನಬೆಂಬಲದ ಕೊರತೆ ಅಲ್ಲ.

ಪ್ರಾದೇಶಿಕ ಪಕ್ಷಗಳ ಮುಖ್ಯ ದೌರ್ಬಲ್ಯವಾದ ‘ದಾಯಾದಿ ಕಲಹ’ ಅವುಗಳನ್ನು ದುರ್ಬಲಗೊಳಿಸುತ್ತಿದೆ. ಈ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಿರುವಂತೆ ಕಂಡರೂ ನಿಜವಾಗಿಯೂ ಇವುಗಳು ಕಾದಾಡುವುದು ಇನ್ನೊಂದು ಪ್ರಾದೇಶಿಕ ಪಕ್ಷದ ಜತೆಯಲ್ಲಿಯೇ.

ಹಾಗಿಲ್ಲದೆ ಇದ್ದಿದ್ದರೆ  ಲೋಕಸಭೆಯಲ್ಲಿ 205 ಸದಸ್ಯ ಬಲದ ಕಾಂಗ್ರೆಸ್ ಮತ್ತು 117 ಸದಸ್ಯ ಬಲದ ಬಿಜೆಪಿ ಎರಡೂ ವಿರೋಧ ಪಕ್ಷದಲ್ಲಿ ಕೂರಬೇಕಿತ್ತು. ಒಟ್ಟು 221 ಸದಸ್ಯಬಲದ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿರಬೇಕಿತ್ತು.

ಹಾಗಾಗುವುದೇ ಇಲ್ಲ. ಎಡಪಕ್ಷಗಳನ್ನು ಹೊರತುಪಡಿಸಿ ಲೋಕಸಭೆಯಲ್ಲಿ 33 ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ ಹೊಂದಿವೆ. ಇವುಗಳಲ್ಲಿ ಒಂಭತ್ತು ಯುಪಿಎ ಜತೆಯಲ್ಲಿವೆ, ಆರು ಎನ್‌ಡಿಎ ಜತೆಯಲ್ಲಿವೆ ಮತ್ತು ಹದಿನೆಂಟು ಪಕ್ಷಗಳು ಎರಡೂ ಮೈತ್ರಿಕೂಟದಲ್ಲಿ ಸೇರದೆ ಸ್ವತಂತ್ರವಾಗಿದ್ದುಕೊಂಡು ಆಗಾಗ ಷರತ್ತುಬದ್ದ ಬೆಂಬಲ ನೀಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಬಿಎಸ್‌ಪಿ ಮತ್ತು ಎಸ್‌ಪಿ ಜತೆಗಿನ ಕಾಂಗ್ರೆಸ್ ಪಕ್ಷದ ಸ್ನೇಹ ಮತ್ತು ದ್ವೇಷದ ಸಂಬಂಧ.
ಈ ಪ್ರಾದೇಶಿಕ ಪಕ್ಷಗಳ ಜಾತಕ ಬಿಡಿಸಿದರೆ ಅವುಗಳಲ್ಲಿ ಹೆಚ್ಚಿನವು ಒಂದರ ಜತೆ ಒಂದು ಹೊಂದುವುದೇ ಇಲ್ಲ. ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಬಿಹಾರದಲ್ಲಿ ಜೆಡಿ (ಯು) ಮತ್ತು ಆರ್‌ಜೆಡಿ, ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ, ಅಸ್ಸಾಂನಲ್ಲಿ ಅಸ್ಸಾಂ ಗಣ  ಪರಿಷತ್ ಮತ್ತು ಎಐಯುಡಿಎಫ್ ಪರಸ್ಪರ ವಿರೋಧಪಕ್ಷಗಳು.

ಇವುಗಳು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಆದರೆ ತನ್ನ ವಿರೋಧಿಯಾದ ಪ್ರಾದೇಶಿಕ ಪಕ್ಷದ ಜತೆ ಕೈಜೋಡಿಸಲಾರದು. ಪ್ರಾದೇಶಿಕ ಪಕ್ಷಗಳ ಈ ದೌರ್ಬಲ್ಯವನ್ನೇ ಬಳಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಅಧಿಕಾರ ಹಂಚಿಕೊಂಡಿರುವುದು. ಪ್ರಾದೇಶಿಕ ಪಕ್ಷಗಳ ನಾಯಕರು ಭ್ರಷ್ಟರು, ಅಧಿಕಾರದಾಹಿಗಳು ಎಂಬ ಪ್ರಚಾರ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ತಮ್ಮ ಕೈಯಲ್ಲಿಯೇ ಇರಿಸಿಕೊಳ್ಳಲು ನೆರವಾಗಿದೆ.
ಪ್ರಾದೇಶಿಕ ಪಕ್ಷಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವಿರೋಧ-ಅಸಹನೆ ವ್ಯಕ್ತವಾಗಲು ಮುಖ್ಯ ಕಾರಣ- ಪ್ರಾದೇಶಿಕ ಪಕ್ಷಗಳ ಸಾಧನೆಯ ಮೌಲ್ಯಮಾಪನವನ್ನು ದೇಶದ ಉತ್ತರ ಭಾಗದ ರಾಜ್ಯಗಳಿಂದ ಪ್ರಾರಂಭಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುವುದು.

ದೇಶದ ಮೊದಲ ಪ್ರಾದೇಶಿಕ ಪಕ್ಷದ ರಚನೆಯಾಗಿದ್ದು ತಮಿಳುನಾಡಿನಲ್ಲಿ. 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದ ಡಿಎಂಕೆಯಿಂದಾಗಿ ದೂಳೀಪಟವಾದ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಕೂಡಾ ಸ್ವಂತಬಲದಿಂದ ಮರಳಿ ಅಧಿಕಾರಕ್ಕೆ ಬರಲಾಗಿಲ್ಲ. ಕಳೆದ ನಾಲ್ಕು ದಶಕಗಳಿಂದ ಕಳಗಂಗಳೇ ಹಂಚಿಕೊಂಡು ಆ ರಾಜ್ಯವನ್ನು ಆಳಿವೆ.
ಆಂಧ್ರಪ್ರದೇಶದಲ್ಲಿ 1983ರ ನಂತರದ 23 ವರ್ಷಗಲ್ಲಿ ನಡುವಿನ ಏಳುವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿದ್ದದ್ದು ತೆಲುಗುದೇಶಂ ಎಂಬ ಪ್ರಾದೇಶಿಕ ಪಕ್ಷದ ಸರ್ಕಾರ. ಅಭಿವೃದ್ಧಿಯ ಯಾವ ಮಾನದಂಡದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಇತರ ರಾಜ್ಯಗಳಿಗಿಂತ ಹಿಂದೆ ಉಳಿದಿದೆ?

ಕೇರಳದಲ್ಲಿ ಹೆಚ್ಚುಕಡಿಮೆ ಎಡಪಕ್ಷಗಳು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಾ ಬಂದಿವೆ. ಬಿಜು ಜನತಾದಳವನ್ನು ಸತತ ಎರಡು ಬಾರಿ ಗೆಲ್ಲಿಸಿದ ಒರಿಸ್ಸಾದ ಮತದಾರರು ಮೂರ್ಖರಿರಲಾರರು.

ಮಹಾರಾಷ್ಟ್ರದಲ್ಲಿಯೂ ಕಳೆದ ಹದಿನೈದು ವರ್ಷಗಳಲ್ಲಿ ಒಂದೋ ಎನ್‌ಸಿಪಿ ಇಲ್ಲವೇ ಶಿವಸೇನೆಯನ್ನು ಕಟ್ಟಿಕೊಂಡ ಮೈತ್ರಿಕೂಟವೇ ಆಡಳಿತ ನಡೆಸಿರುವುದು. ದೇಶದ ವಾಣಿಜ್ಯ ರಾಜಧಾನಿಯನ್ನು ಹೊಂದಿರುವ ಆ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆಯೇ?
ಪ್ರಾದೇಶಿಕ ಪಕ್ಷಗಳೆಂದಾಕ್ಷಣ ಎಲ್ಲರ ಕಣ್ಣು  ಬಿಹಾರ ಮತ್ತು ಉತ್ತರಪ್ರದೇಶಗಳತ್ತ ಹೊರಳುತ್ತಿರುವುದೇ ದೊಡ್ಡ ಸಮಸ್ಯೆ. ಸರ್ಕಾರಗಳ ಸಾಧನೆಯ ಮೌಲ್ಯಮಾಪನವನ್ನು ಉತ್ತರದ ಬದಲಿಗೆ ದಕ್ಷಿಣದಿಂದ ಪ್ರಾರಂಭಿಸಿದರೆ ಪ್ರಾದೇಶಿಕ ಪಕ್ಷಗಳ ಬಗೆಗಿನ ಪೂರ್ವಗ್ರಹ ನಿವಾರಣೆಯಾದೀತೇನೋ?
ಯಾವ ಪ್ರಾದೇಶಿಕ ಪಕ್ಷದ ನಾಯಕನೂ ಅಭಿವೃದ್ಧಿ ಬಗೆಗಿನ ಈಚರ್ಚೆಯನ್ನು ಎತ್ತಿಕೊಳ್ಳುತ್ತಲೇ ಇಲ್ಲ. ಎಲ್ಲರೂ ಮತದಾರರ ಪ್ರಾದೇಶಿಕ ಆಶೋತ್ತರಗಳನ್ನು ಒಳಗೊಂಡಿರುವ ಬೆಂಬಲವನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಸೆಣಸಾಟದಲ್ಲಿದ್ದಾರೆ.
ಮತದಾರರು ರಾಷ್ಟ್ರೀಯ ಪಕ್ಷಗಳಿಂದ ರೋಸಿಹೋಗಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದರೆ, ‘ಪ್ರಾದೇಶಿಕ ಪಾಳೆಗಾರರು’ ಆ ಬೆಂಬಲವನ್ನು ರಾಷ್ಟ್ರೀಯ ಪಕ್ಷಗಳ ಯಜಮಾನರ ಪಾದಗಳಿಗೆ ಅರ್ಪಿಸಿ ಅಧಿಕಾರದ ಫಲವುಂಡು ಕೃತಾರ್ಥರಾಗುತ್ತಿದ್ದಾರೆ.

Monday, May 9, 2011

ಒಸಾಮ ಸತ್ತರೆ ನಾವ್ಯಾಕೆ ಕುಣಿಯಬೇಕು?

ಮನುಷ್ಯನ ರೋಷಕ್ಕೆ ಬೆಂಕಿಯ ಶಕ್ತಿ ಇದ್ದಿದ್ದರೆ ಕಳೆದ ಒಂದು ವಾರದ ಅವಧಿಯಲ್ಲಿ ಪಾಕಿಸ್ತಾನ ಸುಟ್ಟು ಬೂದಿಯಾಗಿ ಹೋಗಬೇಕಾಗಿತ್ತು. ಪಾಕಿಸ್ತಾನದಲ್ಲಿದ್ದ ಪಾತಕಿ ಒಸಾಮ ಬಿನ್ ಲಾಡೆನ್‌ನನ್ನು ಅಮೆರಿಕದ ‘ಸೀಲ್’ಗಳು ಹೊಡೆದುರುಳಿಸಿದ ಮರುಕ್ಷಣದಲ್ಲಿಯೇ ನಮ್ಮಲ್ಲಿನ ‘ದೇಶಪ್ರೇಮಿ’ಗಳ ರೋಮರೋಮಗಳು ನಿಮಿರಿ ನಿಂತುಬಿಟ್ಟಿವೆ.

‘ಯುದ್ಧ ಘೋಷಿಸಿ’ ‘ಬಾಂಬು ಹಾಕಿ’, ‘ತಲೆ ಕಡಿದು ತನ್ನಿ’ ಎಂದೆಲ್ಲಾ ವೀರಾವೇಶದ ಚೀತ್ಕಾರಗಳು ಪ್ರತಿದಿನ ಕೇಳುತ್ತಲೇ ಇವೆ. ಆಶ್ಚರ್ಯವೆಂದರೆ ಈ ರೀತಿಯ ವೀರಾವೇಶದ ಸಲಹೆಗಳನ್ನು ನೀಡುವವರಲ್ಲಿ ‘ಭಯೋತ್ಪಾದಕರ ಕೈಹಿಡಿದು ಕರೆದುಕೊಂಡು ಹೋಗಿ ತಾಲಿಬಾನಿಗಳಿಗೆ ಒಪ್ಪಿಸಿದ’ ಪಕ್ಷದ ‘ದೇಶಪ್ರೇಮಿ’ಗಳೂ ಇದ್ದಾರೆ. ನಮ್ಮಲ್ಲಿ ಮಾತ್ರವಲ್ಲ, ಅಮೆರಿಕದ ಜನತೆಗೂ ‘ದೇಶಪ್ರೇಮ’ದ ಸಮೂಹ ಸನ್ನಿ ಹಿಡಿದುಬಿಟ್ಟಿದೆ. ಆ ದೇಶದ ಅಧ್ಯಕ್ಷ ಬರಾಕ್ ಒಬಾಮ ಈಗ ಎಲ್ಲರ ಕೊಂಡಾಟದ ನಾಯಕ.
ಒಸಾಮ ಬಿನ್ ಲಾಡೆನ್ ಸಾವಿನಿಂದ ವಿಶ್ವಕ್ಕೆ ಆಗಲಿರುವ ಲಾಭ-ನಷ್ಟಗಳೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು, ಆದರೆ ಆತನ ಸಾವಿನಿಂದಾಗಿ ತಕ್ಷಣಕ್ಕೆ ವಿಶ್ವದ ಇಬ್ಬರು ನಾಯಕರಿಗೆ ಲಾಭವಾಗಿದೆ. ಒಬ್ಬರು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಇನ್ನೊಬ್ಬರು ಭಾರತದ ಪ್ರಧಾನಿ ಮನಮೋಹನ್ ಸಿಂಗ್. ದೀರ್ಘಾವಧಿಯ ಸಾಲದ ಬಾಧೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಅಮೆರಿಕನರು ಭ್ರಮನಿರಸನದತ್ತ ಸಾಗುತ್ತಿದ್ದಾಗಲೇ ಒಬಾಮ ಅವರಿಗೆ ಒಸಾಮ ಸಾವು ಜೀವದಾನ ಮಾಡಿದೆ.
ಅಮೆರಿಕದ ಪತ್ರಿಕೆಗಳು ಆಗಲೇ ಪೈಪೋಟಿಗೆ ಬಿದ್ದು ಒಬಾಮ ಅವರನ್ನು ಹಾಡಿ ಹೊಗಳತೊಡಗುತ್ತಿವೆ. ಭಾರತದಲ್ಲಿ ಭ್ರಷ್ಟಾಚಾರದ ಹಗರಣಗಳ ಭೂತ ಪ್ರಧಾನಿ ಕಾರ್ಯಾಲಯದ ಬಾಗಿಲನ್ನು ಬಡಿಯುತ್ತಿದ್ದಾಗಲೇ ಸ್ಫೋಟಗೊಂಡ ಒಸಾಮ ಸಾವಿನ ಸುದ್ದಿ ಜನರ ದೇಶಪ್ರೇಮವನ್ನು ಬಡಿದೆಬ್ಬಿಸಿದೆ. ಇದರಿಂದಾಗಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಒಂದಷ್ಟು ದಿನ ನಿಶ್ಚಿಂತೆಯಾಗಿರಬಹುದು. ಇಷ್ಟೇನಾ ಒಸಾಮ ಸಾವಿನ ಪರಿಣಾಮ?
ಹೌದು, ಸದ್ಯಕ್ಕೆ ಕಾಣುವುದಿಷ್ಟೆ. ಒಸಾಮನನ್ನು ಸಾಯಿಸುವುದೇನು ಬಂತು? ಅಲ್‌ಖೈದಾ ಸಂಘಟನೆಯ ಪಾಲಿಗೆ ಒಸಾಮ ಸತ್ತು ಬಹಳ ದಿನಗಳಾಗಿ ಹೋಗಿತ್ತು ಎನ್ನುವ ಸುದ್ದಿ ನಿಧಾನವಾಗಿ ಸೋರಿ ಹೊರಬರುತ್ತಿದೆ. ಅಲ್‌ಖೈದಾ ಸಂಘಟನೆಯೊಳಗೆ ಭುಗಿಲೆದ್ದಿರುವ ಅಧಿಕಾರದ ಸಂಘರ್ಷ ಲಾಡೆನ್‌ನನ್ನು ಅಪ್ರಸ್ತುತ ಮಾಡಿತ್ತು.
ಇನ್ನಷ್ಟು ದಿನಗಳು ಕಳೆದಿದ್ದರೆ ಸಂಗಾತಿಗಳೇ ಆತನನ್ನು ಮುಗಿಸಿಬಿಡುತ್ತಿದ್ದರೇನೋ? ಈ ಹಿನ್ನೆಲೆಯಿಂದಾಗಿಯೇ ಒಸಾಮ ಸುಳಿವನ್ನು ಅಮೆರಿಕನರಿಗೆ ಸಂಘಟನೆಯೊಳಗಿನ ನಾಯಕರೇ ನೀಡಿರಬಹುದೆಂಬ ಗುಮಾನಿ ಹುಟ್ಟಿಕೊಂಡಿರುವುದು. ಒಸಾಮ ಇನ್ನಷ್ಟು ದಿನ ಬದುಕಿದ್ದರೂ ಆತನಿಂದಾಗಿ ಮುಸ್ಲಿಂ ಭಯೋತ್ಪಾದನೆ ಆಕಾಶದೆತ್ತರಕ್ಕೆ ಬೆಳೆಯುತ್ತಿರಲಿಲ್ಲ, ಆತನ ಸಾವಿನಿಂದ ಅದು ಪಾತಾಳಕ್ಕೆ ಇಳಿದು ಸಮಾಧಿಯಾಗುವುದೂ ಇಲ್ಲ.
ಈಗ 34ಕ್ಕೂ ಹೆಚ್ಚು ದೇಶಗಳಲ್ಲಿ ಅಲ್‌ಖೈದಾ ನೆಲೆಗಳಿವೆ. ನೇರವಾಗಿ ಪ್ರವೇಶಿಸಲು ಸಾಧ್ಯ ಇಲ್ಲದ ದೇಶಗಳಲ್ಲಿನ ಸ್ಥಳೀಯ ಇಸ್ಲಾಂ ಭಯೋತ್ಪಾದಕ ಸಂಘಟನೆಗಳ ಜತೆ ಅದು ಸಂಬಂಧ ಸ್ಥಾಪಿಸಿಕೊಂಡಿದೆ. ಈಗ ಅಲ್‌ಖೈದಾಕ್ಕೆ ಒಸಾಮನ ಹೆಸರಷ್ಟೇ ಬೇಕು. ಈ ನಡುವೆ ಸಂಘಟನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪೈಪೋಟಿಗೆ ಇಳಿದಿರುವ ಅಲ್‌ಖೈದಾದ ಎರಡನೇ ಸಾಲಿನ ನಾಯಕರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಭಯೋತ್ಪಾದನೆಯನ್ನು ತೀವ್ರಗೊಳಿಸುವ ಅಪಾಯವೂ ಇದೆ.
ಒಸಾಮ ಜೀವಂತವಾಗಿದ್ದುಕೊಂಡು ಏನೆಲ್ಲ ಮಾಡಲು ಸಾಧ್ಯ ಇತ್ತೋ, ಅವುಗಳನ್ನೆಲ್ಲ ಅಲ್‌ಖೈದಾ ಅಸ್ತಿತ್ವಕ್ಕೆ ಬಂದ 23 ವರ್ಷಗಳಲ್ಲಿ ಆತ ಮಾಡಿ ಬಿಟ್ಟಿದ್ದಾನೆ. ಆತ ಅಮೆರಿಕದ ಬೆನ್ನು ಹತ್ತಿಯೇ ಹದಿನೆಂಟು ವರ್ಷಗಳು ಕಳೆದಿವೆ. 9/11 ದಾಳಿಯ ಎಂಟು ವರ್ಷ ಮೊದಲು 1993ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರ ಮೊದಲ ದಾಳಿ ನಡೆದಿತ್ತು.
ಈಗ ಅಮೆರಿಕದ ಪೊಲೀಸರ ವಶದಲ್ಲಿರುವ ಆ ದಾಳಿಯ ರೂವಾರಿ ರಮ್ಜಿ ಯುಸೂಫ್ ಕೂಡಾ ಒಸಾಮ ಬಿನ್ ಲಾಡೆನ್ ಶಿಷ್ಯ. ಕೈಸನ್ನೆಯಿಂದಲೇ ಒಂದು ದೇಶವನ್ನು ನೆಲಸಮ ಮಾಡಿಬಿಡಬಲ್ಲಂತಹ ದೈತ್ಯ ಶಕ್ತಿಯ, ಇದಕ್ಕಾಗಿ ಎಂದೂ ಮುಗಿಯದ ಅಕ್ಷಯ ಸ್ವರೂಪಿ ಸಂಪನ್ಮೂಲವನ್ನು ವ್ಯಯಿಸಬಲ್ಲ ಶ್ರೀಮಂತಿಕೆಯ, ಬೆರಳತುದಿಯಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹಿಡಿದುಕೊಂಡಿರುವ, ಮನಸ್ಸುಮಾಡಿದರೆ ನಮ್ಮ ಮಲಗುವ ಕೋಣೆಯೊಳಗೂ ಇಣುಕಬಲ್ಲ ಗುಪ್ತಚರ ಸಾಮರ್ಥ್ಯ ಹೊಂದಿರುವ ದೇಶಕ್ಕೆ ಒಬ್ಬ ಭಯೋತ್ಪಾದಕನನ್ನು ಕೊಂದು ಹಾಕಲು ಹದಿನೆಂಟು ವರ್ಷಗಳು ಬೇಕಾಯಿತೇ?
ಈ ಹದಿನೆಂಟು ವರ್ಷಗಳಲ್ಲಿ ಭಯೋತ್ಪಾದನೆ ಮತ್ತು ಅದರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿರುವುದಕ್ಕೆ ಯಾರು ಹೊಣೆ? ಅಮೆರಿಕ ಅಲ್ಲವೇ? ಅಮೆರಿಕದ ವೀರಗಾಥೆಯನ್ನು ಇತಿಹಾಸದ ಪುಟಗಳಲ್ಲಿ ವರ್ಣರಂಜಿತವಾಗಿ ದಾಖಲಿಸಲು ಹೊರಟವರು ಅದೇ ಇತಿಹಾಸ ಕೇಳುವ ಈ ಪ್ರಶ್ನೆಗೂ ಉತ್ತರಿಸಬೇಕಾಗುತ್ತದೆ.
ಅಮೆರಿಕದ ಈ ವೈಫಲ್ಯ ಮತ್ತು ಸ್ವಭಾವ ಸಹಜ ಧೂರ್ತತನದಿಂದಾಗಿ ಉಳಿದ ಎಲ್ಲ ದೇಶಗಳಿಗಿಂತ ಹೆಚ್ಚು ಕಷ್ಟ ನಷ್ಟ ಅನುಭವಿಸಿದ್ದು ಭಾರತ ಎನ್ನುವುದನ್ನು ಹೇಗೆ ಮರೆಯಲು ಸಾಧ್ಯ? ಆಫ್ಘಾನಿಸ್ತಾನದಲ್ಲಿ ಸೋವಿಯತ್ ರಷ್ಯಾ ನಡೆಸಿದ ದುಸ್ಸಾಹಸ ಸೋಲಿನಲ್ಲಿ ಕೊನೆಗೊಂಡ ನಂತರದ ಅವಧಿಯ ವಿದ್ಯಮಾನಗಳನ್ನು ನೋಡುತ್ತಾ ಬಂದರೆ ಪಾಕಿಸ್ತಾನಕ್ಕಿಂತ ದೊಡ್ಡ ಶತ್ರುವಾಗಿ ಅಮೆರಿಕವೇ ನಮಗೆ ಕಾಣಿಸುತ್ತದೆ.
ಮೊದಲನೆಯದಾಗಿ, ಸೋವಿಯತ್ ರಷ್ಯಾವನ್ನು ಸೋಲಿಸುವ ಮೂಲಕ ಭಾರತ ಬಹುವಾಗಿ ನೆಚ್ಚಿಕೊಂಡಿದ್ದ ಮಿತ್ರರಾಷ್ಟ್ರವನ್ನು ಅಮೆರಿಕ ಕಿತ್ತುಕೊಂಡಿತು. ಇದರಿಂದಾಗಿ ಭಾರತೀಯ ಉಪಖಂಡದಲ್ಲಿ ಅಮೆರಿಕದ ಅಟ್ಟಹಾಸಕ್ಕೆ ಇದಿರಾಡುವವರೇ ಇಲ್ಲದಂತಾಯಿತು. ಎರಡನೆಯದಾಗಿ, ಭಾರತದ ನೆಲದಲ್ಲಿ ರಕ್ತದೋಕುಳಿ ನಡೆಸುತ್ತಿರುವ ಭಯೋತ್ಪಾದಕರನ್ನು ಸೃಷ್ಟಿಸಿದ್ದು ಕೂಡಾ ಅಮೆರಿಕವೇ.
ಸೋವಿಯತ್ ರಷ್ಯಾವನ್ನು ಮಣಿಸುವ ಉದ್ದೇಶ ಸಾಧಿಸಿದ ನಂತರ ಅಮೆರಿಕ ಆಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿತು. ಇದರಿಂದಾಗಿ ಬಾಡಿಗೆ ಬಂಟರಾಗಿದ್ದ ಮುಜಾಹಿದ್‌ಗಳು ಒಮ್ಮಿಂದೊಮ್ಮೆಲೇ ನಿರುದ್ಯೋಗಿಗಳಾಗಿ ಹೋದರು.
ಕೊಲೆಗಡುಕರನ್ನು ಸೃಷ್ಟಿಸಿ ಕೆಲಸ ಮುಗಿದ ಮೇಲೆ ಅವರು ಸಾಮಾನ್ಯ ಮನುಷ್ಯರಂತೆ ಜೀವನ ಸಾಗಿಸಬೇಕೆಂದು ನಿರೀಕ್ಷಿಸುವುದು ಮೂರ್ಖತನ.
ಈ ನಿರುದ್ಯೋಗಿ ಮುಜಾಹಿದ್‌ಗಳಲ್ಲಿ ಒಂದಷ್ಟು ಮಂದಿ ತಾಲಿಬಾನ್ ಕಟ್ಟಲು ತೊಡಗಿಕೊಂಡರೆ ಉಳಿದವರಿಗೆ ಪಾಕಿಸ್ತಾನ ಕಾಶ್ಮೀರದಲ್ಲಿ ‘ಸ್ವಾತಂತ್ರ್ಯ ಹೋರಾಟ’ದ ಉದ್ಯೋಗ ಕಲ್ಪಿಸಿಕೊಟ್ಟಿತು. ಇದರ ಪರಿಣಾಮವಾಗಿಯೇ 1989ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಉಲ್ಬಣಗೊಂಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದಕರ ತರಬೇತಿ ಶಿಬಿರಗಳು ತಲೆ ಎತ್ತಿದ್ದು ಮತ್ತು ಗಡಿ ನುಸುಳುವಿಕೆಯ ಪ್ರಮಾಣ ಹೆಚ್ಚಿದ್ದು. ಇದು ಅಮೆರಿಕದ ಆಗಿನ ಅಧ್ಯಕ್ಷ ರೋನಾಲ್ಡ್ ರೇಗನ್ ಭಾರತಕ್ಕೆ ನೀಡಿದ ‘ಕೊಡುಗೆ’.
9/11 ದಾಳಿಯ ನಂತರ ಅಮೆರಿಕದ ಪ್ರೇರಣೆಯಿಂದ ವಿಶ್ವಸಂಸ್ಥೆ ‘ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮರ’ ಘೋಷಿಸಿದಾಗ ಉಳಿದೆಲ್ಲ ದೇಶಗಳಿಗಿಂತ ಹೆಚ್ಚಿನ ನಿರೀಕ್ಷೆ ಇದ್ದದ್ದು ಭಾರತಕ್ಕೆ. ‘ಭಯೋತ್ಪಾದಕರನ್ನು ಮಾತ್ರವಲ್ಲ, ಅವರ ಆಶ್ರಯದಾತರನ್ನೂ ನಾಶಮಾಡುತ್ತೇವೆ’ ಎಂದು ಅಮೆರಿಕ ಅಧ್ಯಕ್ಷರು ಗುಡುಗಿದಾಗ ಸಹಜವಾಗಿಯೇ ಭಾರತಕ್ಕೆ ಖುಷಿಯಾಗಿತ್ತು. ಪಾಕಿಸ್ತಾನವನ್ನು ಬಗ್ಗಿಸಲು ಇದೇ ಸುವರ್ಣಾವಕಾಶ ಎಂಬ ನಿರೀಕ್ಷೆ ಗರಿ ಕೆದರಿತ್ತು. ಆದರೆ ನಂತರ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆದು ಹೋದವು.
ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಭಾರತ ಅಲ್ಲ, ಪಾಕಿಸ್ತಾನ ಅಮೆರಿಕದ ಸಂಗಾತಿಯಾಗಿ ಹೋಯಿತು. ಆ ಎರಡೂ ದೇಶಗಳಿಗೆ ಅವುಗಳದ್ದೇ ಆಗಿರುವ ಸ್ವಾರ್ಥಪರ ಉದ್ದೇಶಗಳಿದ್ದವು. ಇವುಗಳ ನಡುವೆ ಒಂಟಿಯಾಗಿದ್ದು ಭಾರತ. ಅಮೆರಿಕದ ಸಮರಕ್ಕೆ ಭಾರತ ಘೋಷಿಸಿದ್ದು ಬೇಷರತ್ ಬೆಂಬಲ. ಆದರೆ ಪಾಕಿಸ್ತಾನದ್ದು ಷರತ್ತುಬದ್ದ ಬೆಂಬಲ.
ಈ ಸಮರದಲ್ಲಿ ಭಾರತ ಮತ್ತು ಇಸ್ರೇಲ್‌ಗಳನ್ನು ಸೇರಿಸಿಕೊಳ್ಳಬಾರದೆಂಬುದು ಅವುಗಳಲ್ಲೊಂದು ಷರತ್ತು. ಅಮೆರಿಕ ಅದಕ್ಕೆ ಒಪ್ಪಿಕೊಳ್ಳುವುದರ ಜತೆಗೆ ಆ ದೇಶಕ್ಕೆ ಭಾರಿ ಪ್ರಮಾಣದ ಆರ್ಥಿಕ ಮತ್ತು ಮಿಲಿಟರಿ ನೆರವನ್ನು ಒದಗಿಸಿತು. ಆರ್ಥಿಕ ದಿಗ್ಬಂಧನ ಮತ್ತು ಸೇನಾ ಆಡಳಿತದ ವೈಫಲ್ಯದಿಂದಾಗಿ ಕುಸಿದುಹೋಗಿದ್ದ ಪಾಕಿಸ್ತಾನ ಈ ನೆರವಿನಿಂದ ಚೇತರಿಸಿಕೊಂಡದ್ದು ಮಾತ್ರವಲ್ಲ, ಸೇನಾಬಲವನ್ನೂ ವೃದ್ಧಿಸಿಕೊಂಡಿತು. ಇದರ ಬಿಸಿ ತಗಲಿದ್ದು ಭಾರತಕ್ಕೆ.

ಆಫ್ಘಾನಿಸ್ತಾನದಲ್ಲಿ ಅಂದಾಜು 60 ಸಾವಿರ ತಾಲಿಬಾನ್ ಹೋರಾಟಗಾರರು ಇದ್ದಿರಬಹುದೆಂಬ ಅಂದಾಜು ಮಾಡಲಾಗಿತ್ತು.  ಪಾಕಿಸ್ತಾನದ ಐಎಸ್‌ಐ ಸಾಕುತ್ತಿದ್ದ ಈ ಜೆಹಾದಿಗಳೆಲ್ಲ ಅಮೆರಿಕದ ಕಾರ್ಯಾಚರಣೆಯಲ್ಲಿ ಸತ್ತಿರಲಾರರು. ಹಾಗಿದ್ದರೆ ಅಲ್ಲಿಂದ ಕಾಲುಕಿತ್ತ ಅವರೆಲ್ಲ ಎಲ್ಲಿ ಹೋದರು? ಪಾಕಿಸ್ತಾನ ಅವರನ್ನು ಭಾರತದ ಮೇಲೆ ಛೂ ಬಿಟ್ಟಿರುವುದರಲ್ಲಿ ಅನುಮಾನವೇ ಇಲ್ಲ.
ಅಮೆರಿಕದ ಜತೆ ಕೈಜೋಡಿಸಿದ್ದನ್ನು ವಿರೋಧಿಸುತ್ತಿದ್ದ ತಮ್ಮ ದೇಶದ ‘ಮಿಲಿಟರಿ-ಮದರಸಾ-ಮುಲ್ಲಾ’ ಕೂಟವನ್ನು ಒಲಿಸಿಕೊಳ್ಳಲು ಮುಷರಫ್ ಕಾಶ್ಮೀರದಲ್ಲಿನ ‘ಸ್ವಾತಂತ್ರ್ಯ ಹೋರಾಟ’ಕ್ಕೆ ಇನ್ನಷ್ಟು ಕುಮ್ಮಕ್ಕು ನೀಡುತ್ತಾ ಬಂದರು. 9/11ರ ನಂತರ ಅಮೆರಿಕದಲ್ಲಿ ಯಾವುದೇ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ನಡೆದಿಲ್ಲ. ಆದರೆ ಆ ದೇಶದ ಕರೆಗೆ ಓಗೊಟ್ಟು ಬೆಂಬಲ ಘೋಷಿಸಿರುವ ದೇಶಗಳಲ್ಲಿ ಭಯೋತ್ಪಾದನೆ ನಿಂತಿಲ್ಲ. ಇವುಗಳ ಪೈಕಿ ದೊಡ್ಡ ಬಲಿಪಶು ಭಾರತ.
ಇವೆಲ್ಲದರ ಅರಿವಿದ್ದರೂ, ಇಂದಿಗೂ ಕಾಶ್ಮೀರದಲ್ಲಿ ನಡೆಯುತ್ತಿರುವುದು ಗಡಿಯಾಚೆಗಿನ ಭಯೋತ್ಪಾದನೆ ಎಂದು ಹೇಳಲು ಅಮೆರಿಕ ಸಿದ್ಧ ಇಲ್ಲ. ಭಾರತದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳ ಆರೋಪಿಗಳಿಗೆ ಪಾಕಿಸ್ತಾನ ಆಶ್ರಯ ನೀಡಿದೆ.
ಅವರಲ್ಲಿ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ನಿಂದ ಹಿಡಿದು, ಮುಂಬೈನ ತಾಜ್‌ಹೊಟೇಲ್ ಮೇಲೆ ದಾಳಿಯ ರೂವಾರಿ ಹಫೀಜ್ ಶಹೀದ್ ವರೆಗೆ 20ಕ್ಕೂ ಹೆಚ್ಚು ಮಂದಿ ಪಾತಕಿಗಳಿದ್ದಾರೆ. ಒಸಾಮ ರೀತಿಯಲ್ಲಿ ಇವರ್ಯಾರೂ ಅಡಗುತಾಣಗಳಲ್ಲಿಲ್ಲ. ಎಲ್ಲರೂ ರಾಜಾರೋಷವಾಗಿ ಪಾಕಿಸ್ತಾನದ ನಗರಗಳಲ್ಲಿ ಸುತ್ತಾಡುತ್ತಿದ್ದಾರೆ. ಇವರ ಅಪರಾಧದ ವಿವರಗಳೆಲ್ಲವೂ ಅಮೆರಿಕದ ಮುಂದೆ ಇದೆ.
ಅಮೆರಿಕ ನಡೆಸುತ್ತಿರುವ ಭಯೋತ್ಪಾದಕರ ವಿರುದ್ಧದ ಜಾಗತಿಕ ಸಮರ ಪ್ರಾಮಾಣಿಕತೆಯಿಂದ ಕೂಡಿದ್ದರೆ ಈ ಪಾತಕಿಗಳನ್ನು ಯಾಕೆ ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆಯಲಿಲ್ಲ? ‘ಅಮೆರಿಕದ ಎದುರು ಪಾಕಿಸ್ತಾನದ ಬಣ್ಣ ಬಯಲಾಗಿದೆ.ಇನ್ನೂ ಅದರ ಆಟ ನಡೆಯಲಾರದು. ನೋಡ್ತಾ ಇರಿ, ಅಮೆರಿಕ ಹೇಗೆ ಪಾಕಿಸ್ತಾನವನ್ನು ಮಣಿಸಲಿದೆ’ ಎಂದು ಹೇಳುವ ಮುಗ್ಧರು ಈಗಲೂ ನಮ್ಮಲ್ಲಿದ್ದಾರೆ.
ಅಂತಹದ್ದೇನೂ ಆಗಲಾರದು. ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧ ಹಿಂದಿನಂತೆಯೇ ಮುಂದುವರಿಯಲಿದೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿರುವ ಸೇನೆಯಲ್ಲಿ ಒಂದಷ್ಟು ಭಾಗವನ್ನು ಅಮೆರಿಕ ವಾಪಸು ಕರೆಸಿಕೊಳ್ಳಬಹುದು, ಆದರೆ ಪೂರ್ತಿ ಜಾಗ ಖಾಲಿ ಮಾಡಿಕೊಂಡು ಹೋಗಲಾರದು. ‘ತೊಲಗಿ ಹೋಗಿ’ ಎನ್ನುವ ಸ್ಥಿತಿಯಲ್ಲಿ ಎರಡೂ ದೇಶಗಳೂ ಇಲ್ಲ. ಹೊರಟು ಹೋಗುವುದು ಅಮೆರಿಕಕ್ಕೂ ಬೇಕಾಗಿಲ್ಲ. ಅದಕ್ಕೆ ಮಧ್ಯ ಏಷ್ಯಾದ ಮೇಲಿನ ನಿಯಂತ್ರಣಕ್ಕೆ ನೆಲೆ ಬೇಕು. ತನ್ನ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಮಾರುಕಟ್ಟೆ ಬೇಕು, ಸೂಪರ್ ಪವರ್ ಆಗಿ ಬೆಳೆಯುತ್ತಿರುವ ಚೀನಾವನ್ನು ಹದ್ದುಬಸ್ತಿನಲ್ಲಿಡಬೇಕು.
ಇದಕ್ಕಾಗಿ ಭಾರತದಂತಹ ಪ್ರಬಲ ಪ್ರಜಾತಾಂತ್ರಿಕ ದೇಶವನ್ನು ‘ಗುಲಾಮಿ ರಾಷ್ಟ್ರ’ವನ್ನಾಗಿ ಮಾಡಿಕೊಳ್ಳುವುದು ಸಾಧ್ಯ ಆಗಲಾರದು. ಈ ಉದ್ದೇಶ ಸಾಧನೆಗಾಗಿ ದುರ್ಬಲ ಪಾಕಿಸ್ತಾನ ಅಲ್ಲದೆ ಬೇರೆ ಯಾವ ದೇಶ ಸಿಕ್ಕೀತು? ಇಂತಹ ವ್ಯವಸ್ಥೆಯಲ್ಲಿ ಒಸಾಮನಂತಹ ನೂರು ಭಯೋತ್ಪಾದಕರು ಸತ್ತರೂ ಭಾರತದ ನೆಲದಲ್ಲಿ ಶಾಂತಿ ನೆಲೆಸಲಾರದು. ಅದು ಸಾಧ್ಯವಾಗಬೇಕಾದರೆ ಭಯೋತ್ಪಾದಕರನ್ನು ಸೃಷ್ಟಿಸುತ್ತಿರುವ ವ್ಯವಸ್ಥೆ  ನಾಶವಾಗಬೇಕು. ಪಾಕಿಸ್ತಾನದ ತಲೆಮೇಲೆ ಅಮೆರಿಕದ ಅಭಯಹಸ್ತ ಇರುವವರೆಗೆ ಇದು ಸಾಧ್ಯವಾಗಲಾರದು.

Monday, May 2, 2011

ಪ್ರಶ್ನಿಸುವ ಸಂಸ್ಥೆಗಳ ಮೇಲೆಲ್ಲ ಕೆಂಗಣ್ಣು

ಭ್ರಷ್ಟಾಚಾರದ ನಿರ್ಮೂಲನೆಗಾಗಿ ‘ಅವತಾರವೆತ್ತಿ ಬರಲಿರುವ’ ಜನಲೋಕಪಾಲರ ನಿರೀಕ್ಷೆಯಲ್ಲಿ ದೇಶ ಮೈಮರೆತಿರುವಾಗಲೇ ಅದೇ ಉದ್ದೇಶಕ್ಕಾಗಿ ಬಹುಹಿಂದೆಯೇ ರಚನೆಗೊಂಡ ಸಂಸ್ಥೆಗಳಲ್ಲೊಂದಾದ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ಯನ್ನು (ಪಿಎಸಿ) ದುರ್ಬಲಗೊಳಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದು ಎರಡು ರಾಜಕೀಯ ಪಕ್ಷಗಳ ನಡುವಿನ ಸಂಘರ್ಷದಂತೆ ಮೇಲ್ನೋಟಕ್ಕೆ ಕಂಡರೂ ಇದರ ಆಳದಲ್ಲಿ ಪಿಎಸಿ ಸೇರಿದಂತೆ ತಮ್ಮನ್ನು ಪ್ರಶ್ನಿಸುವ ಅಧಿಕಾರ ಹೊಂದಿರುವ ಎಲ್ಲ ಸಂಸದೀಯ ಮತ್ತು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ರಾಜಕಾರಣಿಗಳು ಹೊಂದಿರುವ ಅಸಹನೆಯನ್ನು ಕಾಣಬಹುದಾಗಿದೆ.
ಸಿಬಿಐನಿಂದ ಹಿಡಿದು ಸಿವಿಸಿಯಂತಹ ಸಂಸ್ಥೆಗಳ ವರೆಗೆ, ಸ್ಪೀಕರ್‌ನಿಂದ ಹಿಡಿದು ನ್ಯಾಯಮೂರ್ತಿಗಳ ಹುದ್ದೆ ವರೆಗೆ ಎಲ್ಲವೂ ರಾಜಕಾರಣಿಗಳಿಂದ ನಿರಂತರವಾಗಿ ಚಾರಿತ್ರ್ಯಹನನಕ್ಕೆ ಒಳಗಾಗುತ್ತಾ ಬಂದಿವೆ. ಈಗ ಪಿಎಸಿ ಸರದಿ.
ಜನತೆಯ ಆಶೋತ್ತರಗಳ ಪ್ರತೀಕವಾಗಿರುವ ಸಂಸತ್, ಕಾನೂನು ರಚನೆಯ ಜತೆಯಲ್ಲಿ ಕಾರ್ಯಾಂಗದ ಕಾರ್ಯನಿರ್ವಹಣೆಯ ಮೇಲೂ ಕಣ್ಣಿಡುತ್ತದೆ. ಈ ಹೊಣೆ ನಿರ್ವಹಣೆಯಲ್ಲಿ ಸಂಸತ್‌ಗೆ ಪ್ರಧಾನ ಪಾತ್ರವಾದರೆ ಸಂಸದೀಯ ಸಮಿತಿಗಳಿಗೆ ಪೋಷಕ ಪಾತ್ರ. ಮೂರು ಹಣಕಾಸು ಸಮಿತಿಗಳಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಮತ್ತು ಸಾರ್ವಜನಿಕ ಉದ್ಯಮಗಳ ಸಮಿತಿ; ಜತೆಗೆ, ವಿವಿಧ ವಿಷಯಗಳ ಮೇಲಿನ 15 ಸದನ ಸಮಿತಿ, 29 ಸಚಿವ ಖಾತೆಗಳ ಸಲಹಾ ಸಮಿತಿ ಹಾಗೂ ಹದಿನೇಳು ಇಲಾಖಾವಾರು ಸಮಿತಿಗಳು ಸೇರಿದಂತೆ ಒಟ್ಟು 64 ಸಂಸದೀಯ ಸಮಿತಿಗಳಿವೆ. ಇವುಗಳ ಜತೆಗೆ ಆಗಾಗ ಕೇಳಿಬರುವ ಆರೋಪಗಳ ತನಿಖೆಗೆ ಜಂಟಿ ಸದನ ಸಮಿತಿಯನ್ನು ರಚಿಸಲಾಗುತ್ತದೆ.
ಪ್ರಧಾನಪಾತ್ರ ವಹಿಸಬೇಕಾಗಿರುವ ಸಂಸತ್ ಇತ್ತೀಚೆಗೆ ತನ್ನ ಕಾರ್ಯನಿರ್ವಹಣೆಯಲ್ಲಿ ವಿಫಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೋಷಕ ಪಾತ್ರಗಳಾದ ಸಂಸದೀಯ ಸಮಿತಿಗಳ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿಯೇ ಇವುಗಳ ಮೇಲೆ ರಾಜಕಾರಣಿಗಳ ಕೆಂಗಣ್ಣು ಬಿದ್ದಿರುವುದು. ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನಗಳಲ್ಲಿಯೇ ಕೇಂದ್ರ ಸರ್ಕಾರದ ಸಂಘರ್ಷಾತ್ಮಕ ನಿಲುವನ್ನು ಪ್ರತಿಭಟಿಸಿ ಎನ್‌ಡಿಎ ಸಂಸದೀಯ ಸಮಿತಿಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕಿತ್ತು. ಈಗ ಯುಪಿಎ ಸದಸ್ಯರು ಪಿಎಸಿ ಅಧ್ಯಕ್ಷರನ್ನೇ ಕಿತ್ತುಹಾಕಲು ಹೊರಟಿದ್ದಾರೆ.
ರಾಷ್ಟ್ರೀಯ ಹಣಕಾಸು ವ್ಯವಹಾರದ ಮೇಲಿನ ಸಂಸದೀಯ ನಿಯಂತ್ರಣದ ಮೂಲಕವೇ ಕಾರ್ಯಾಂಗವನ್ನು ಶಾಸಕಾಂಗಕ್ಕೆ  ಉತ್ತರದಾಯಿಯನ್ನಾಗಿ ಮಾಡಲು ಸಾಧ್ಯ. ಈ ಸಂಸದೀಯ ನಿಯಂತ್ರಣಕ್ಕಾಗಿ ಇರುವ ಹಲವು ಸಾಧನಗಳಲ್ಲಿ ಮುಖ್ಯವಾದುದು ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’. ಈ ಸಮಿತಿ ನಿಷ್ಪಕ್ಷಪಾತವಾಗಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಾರದು. ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಪಿಎಸಿ ರಚನೆಯಾಗಿತ್ತು. 1921ರಲ್ಲಿ ಸ್ಥಾಪನೆಗೊಂಡ ಪಿಎಸಿಗೆ ಆಗಿನ ಗವರ್ನರ್ ಜನರಲ್ ಮಂಡಳಿಯ ಹಣಕಾಸು ಸದಸ್ಯರೇ ಅಧ್ಯಕ್ಷರಾಗಿದ್ದರು.
ಲೋಕಸಭಾಧ್ಯಕ್ಷರ ನಿಯಂತ್ರಣಕ್ಕೆ ಒಳಪಡಿಸಿದ ಪಿಎಸಿ ರಚನೆಗೊಂಡದ್ದು ಸಂವಿಧಾನ ರಚನೆಯಾದ ನಂತರ. ಈಗ ವಿವಾದಕ್ಕೆ ಸಿಲುಕಿರುವ ಪಿಎಸಿ ಅಧ್ಯಕ್ಷ ಸ್ಥಾನಕ್ಕೆ 1967ರವರೆಗೆ ಆಡಳಿತ ಪಕ್ಷದ ಸದಸ್ಯರೇ ನೇಮಕಗೊಳ್ಳುತ್ತಿದ್ದರು. ಆಶ್ಚರ್ಯವೆಂದರೆ ಈ ಸಂಪ್ರದಾಯ ತಪ್ಪಿಸಿ ಪಿಎಸಿ ಅಧ್ಯಕ್ಷ ಸ್ಥಾನಕ್ಕೆ ವಿರೋಧಪಕ್ಷದ ನಾಯಕರನ್ನು ಮೊದಲು ನೇಮಕಮಾಡಿದ್ದು ನಂತರದ ದಿನಗಳಲ್ಲಿ ವಿರೋಧಪಕ್ಷಗಳಿಂದ ಸರ್ವಾಧಿಕಾರಿ ಎಂದು ದೂಷಣೆಗೊಳಗಾದ ಆಗಿನ ಪ್ರಧಾನಿ ಇಂದಿರಾಗಾಂಧಿ. ಆ ರೀತಿ ನೇಮಕಗೊಂಡವರು ಹಿರಿಯ ಸಂಸದೀಯಪಟು ಎಂ.ಎಚ್.ಮಸಾನಿ. ಆಗಿನ ಲೋಕಸಭಾಧ್ಯಕ್ಷ ನೀಲಂ ಸಂಜೀವ ರೆಡ್ಡಿ ಅವರು ಮಸಾನಿಯವರ ಕಾರ್ಯಪಟುತ್ವ, ನಿಷ್ಪಕ್ಷಪಾತ ನಡವಳಿಕೆ ಮತ್ತು ಬದ್ಧತೆಯನ್ನು ಕೊಂಡಾಡಿರುವುದು ಲೋಕಸಭೆ ದಾಖಲೆಯಲ್ಲಿವೆ. ಮೊನ್ನೆ ಅದೇ ‘ಪಿಎಸಿಯ ಅಧ್ಯಕ್ಷರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದೇವೆ’ ಎಂದು ಬಹುಸಂಖ್ಯಾತ ಸದಸ್ಯರು ಕೂಗಾಡಿದ್ದಾರೆ. ಅಧ್ಯಕ್ಷರು ಪಟ್ಟುಹಿಡಿದು ಸಮಿತಿ ಅಂಗೀಕಾರ ನೀಡದ ಕರಡು ವರದಿಯನ್ನೇ ಲೋಕಸಭಾಧ್ಯಕ್ಷರಿಗೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಮಂಡಿಸಲಾಗುವ ಬಜೆಟ್‌ನ ನಂತರ ಜನತೆ ಕೂಡಾ ದೇಶದ ಆಯವ್ಯಯದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಬಹುಕೋಟಿ  ರೂಪಾಯಿ ಲೆಕ್ಕದ ಈ ಆರ್ಥಿಕ ವ್ಯವಹಾರ ಸಾಮಾನ್ಯ ಜನರ ತಲೆಗೆ ಹತ್ತುವುದು ಕೂಡಾ ಕಷ್ಟ. ಈ ಹಿನ್ನೆಲೆಯಲ್ಲಿಯೇ ಸಿಎಜಿ ಮತ್ತು ಪಿಎಸಿಯ ಪಾತ್ರ ಮಹತ್ವದ್ದು. ಬಜೆಟ್‌ನಲ್ಲಿ ನಿಗದಿಪಡಿಸಿದ ಅನುದಾನದ ಖರ್ಚಿನ ವಿವರವನ್ನು ಹೊಂದಿರುವ ಧನ ವಿನಿಯೋಗ ಲೆಕ್ಕಪತ್ರವನ್ನು ಸರ್ಕಾರದ ಪ್ರತಿಯೊಂದು ಇಲಾಖೆ ಸಂಸತ್‌ಗೆ ಸಲ್ಲಿಸಬೇಕಾಗುತ್ತದೆ.
ಈ ಲೆಕ್ಕಪತ್ರದ ಪರಿಶೋಧನೆ ನಡೆಸುವ ಮಹಾಲೇಖಪಾಲರು ಇಲಾಖಾವಾರು ವರದಿಗಳನ್ನು ತಯಾರಿಸಿ ಪಿಎಸಿಗೆ ಸಲ್ಲಿಸುತ್ತಾರೆ. ಸಂಸತ್‌ನ ಧನವಿನಿಯೋಗ ನಿಯಮಾವಳಿಗಳಿಗೆ ಅನುಗುಣವಾಗಿ ಸರ್ಕಾರಿ ಇಲಾಖೆಗಳು ಹಣ ಖರ್ಚು ಮಾಡಿವೆಯೇ ಎಂಬುದನ್ನು ಪರಿಶೀಲಿಸುವುದು ಪಿಎಸಿಯ ಕರ್ತವ್ಯ. ಸಿಎಜಿ ಮತ್ತು ಪಿಎಸಿ ಇಂತಹ ಪರಿಶೀಲನೆ ನಡೆಸುವಾಗಲೇ ಭ್ರಷ್ಟರ ಭಾನಗಡಿಗಳು ಹೊರಬೀಳುವುದು.
ವರದಿ ನೀಡುವವರೆಗೆ ಎಲ್ಲವೂ ಸರಿ. ನಂತರ? ಈಗಿನ ವಿವಾದವನ್ನೇ ಉದಾಹರಣೆಗಾಗಿ ತೆಗೆದುಕೊಂಡರೆ ಮುರಳಿ ಮನೋಹರ ಜೋಷಿ ಸಲ್ಲಿಸಿರುವ ವರದಿಯನ್ನು ಲೋಕಸಭಾಧ್ಯಕ್ಷರು ತಿರಸ್ಕರಿಸುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಅದು ಸಮಿತಿಯ ಅಂಗೀಕಾರ ಇಲ್ಲದ ಕರಡು ವರದಿ. ಪಿಎಸಿಯ ಅಂತಿಮ ವರದಿಗಳೇ ಶೈತ್ಯಾಗಾರದಲ್ಲಿರುವಾಗ ಈ ಕರಡು ವರದಿಯನ್ನು ಕೇಳುವವರಾರು? ಸಂಸತ್‌ಗೆ ಐವತ್ತು ವರ್ಷ ತುಂಬಿದ್ದ ಸಂದರ್ಭದಲ್ಲಿ ಪಿಎಸಿ ವರದಿಗಳ ಬಗ್ಗೆ ಒಂದು ಸಮೀಕ್ಷೆ ನಡೆದಿತ್ತು. ಅದರ ಪ್ರಕಾರ ಏಳನೇ ಲೋಕಸಭೆಯಿಂದ ಹದಿಮೂರನೇ ಲೋಕಸಭೆಯ ವರೆಗಿನ ಅವಧಿಯಲ್ಲಿ ಪಿಎಸಿ ಮಾಡಿರುವ 6113 ಶಿಫಾರಸುಗಳಲ್ಲಿ ಸರ್ಕಾರ ಒಪ್ಪಿಕೊಂಡಿದ್ದು 3709 ಮಾತ್ರ.
ಮುಕ್ತ ಮಾರುಕಟ್ಟೆಯಿಂದ ಪಡೆಯುವ ಸಾಲದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಪಿಎಸಿ ನಿರಂತರವಾಗಿ ಶಿಫಾರಸು ಮಾಡುತ್ತಾ ಬಂದ ಕಾರಣದಿಂದಾಗಿಯೇ 2000ನೇ ವರ್ಷದಲ್ಲಿ ‘ಹಣಕಾಸು ಜವಾಬ್ದಾರಿ ಮಸೂದೆ’ ಮಂಡನೆಯಾಗಿದ್ದು. ಲೋಕಸಭೆಯ ಅವಧಿಯಲ್ಲಿ ಸಾರ್ವಜನಿಕ ಉದ್ಯಮಗಳ ಷೇರುವಿಕ್ರಯದ ಬಗ್ಗೆ ನೀಡಿದ ವರದಿಯಲ್ಲಿ ಪಿಎಸಿ ‘ಈ ವ್ಯವಹಾರದಲ್ಲಿ ಪಾರದರ್ಶಕತೆಯ ಅವಶ್ಯಕತೆಯಿದ್ದು ಇದರಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಗೊಳಿಸಬೇಕಾಗುತ್ತದೆ’ ಎಂದು ಹೇಳಿತ್ತು.
ಇದನ್ನು ಒಪ್ಪಿಕೊಂಡ ಆಗಿನ ಕೇಂದ್ರ ಸರ್ಕಾರ, ತನಿಖಾ ಸಮಿತಿಯನ್ನು ನೇಮಿಸಿತ್ತು. ವಸತಿ ಮಂಜೂರಾತಿಯಲ್ಲಿ ವಸತಿ ಸಚಿವರ ವಿವೇಚನಾಧಿಕಾರದ ದುರ್ಬಳಕೆ ತಡೆಯಬೇಕೆಂಬ ಪಿಎಸಿ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡು ಹೊಸ ನೀತಿಯೊಂದನ್ನು ರೂಪಿಸಿತ್ತು. ಇವು ಪಿಎಸಿ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡ ಕೆಲವು ಉದಾಹರಣೆಗಳು. ಇತ್ತೀಚಿನ ದಿನಗಳಲ್ಲಿ ಪಿಎಸಿ ಶಿಫಾರಸುಗಳನ್ನು ಒಪ್ಪಿಕೊಂಡಿದ್ದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು. ಪಿಎಸಿ ದೊಡ್ಡಕುಳಗಳತ್ತ ಕಣ್ಣು ಹಾಕಿದಾಗೆಲ್ಲ ಪ್ರತಿರೋಧ ಎದುರಾಗುತ್ತದೆ. ಕಾರ್ಗಿಲ್ ಯುದ್ಧದ ಕಾಲದಲ್ಲಿ ನಡೆದ ಶವಪೆಟ್ಟಿಗೆ ಖರೀದಿ ಅವ್ಯವಹಾರವನ್ನು ಸಿಎಜಿ ಬಯಲುಗೊಳಿಸಿದರೂ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಎನ್‌ಡಿಎ ಸರ್ಕಾರ ಬಿಟ್ಟುಕೊಡಲಿಲ್ಲ.
ಈಗ 2ಜಿ ತರಂಗಾಂತರದ ವ್ಯವಹಾರದಲ್ಲಿನ ಅಕ್ರಮದಲ್ಲಿ ಪ್ರಧಾನಿ ಕಾರ್ಯಾಲಯದ ಪಾತ್ರ ಉಲ್ಲೇಖಿಸಿದ ಕೂಡಲೇ ಪಿಎಸಿಯನ್ನೇ ಬರ್ಖಾಸ್ತುಗೊಳಿಸುವ ಪ್ರಯತ್ನ ನಡೆದಿದೆ.
ರಾಜ್ಯಗಳದ್ದೂ ಇದೇ ಸ್ಥಿತಿ. ಯಾವ ರಾಜ್ಯದಲ್ಲಿಯೂ ಪಿಎಸಿ ಕಾರ್ಯನಿರ್ವಹಣೆ ಸಮಾಧಾನಕರವಾಗಿಲ್ಲ. ಬಹಳಷ್ಟು ರಾಜ್ಯಗಳಲ್ಲಿ ಸರ್ಕಾರಿ ಇಲಾಖೆಗಳು ಬಜೆಟ್ ಅನುದಾನವನ್ನು ಮೀರಿ ಖರ್ಚು ಮಾಡಿವೆ. ಈ ಮಿತಿಮೀರಿದ ಖರ್ಚಿಗೆ ವಿಧಾನಮಂಡಲದ ಅಂಗೀಕಾರ ಅನಿವಾರ್ಯವಾದರೂ ಯಾರೂ ಆ ಬಗ್ಗೆ  ತಲೆಕೆಡಿಸಿಕೊಂಡಿಲ್ಲ. ಈ ಲೋಪವೇ ಹಣಕಾಸು ಅವ್ಯವಹಾರದ ಹಗರಣಗಳಿಗೆ ದಾರಿಮಾಡಿಕೊಡುತ್ತಿರುವುದು.

1987-88ರಿಂದ 1995-96ರ ವರೆಗೆ ಬಿಹಾರ ರಾಜ್ಯದ ಪಶುಸಂಗೋಪನಾ ಇಲಾಖೆ ಬಜೆಟ್ ನಿಗದಿಪಡಿಸಿದ್ದ ಅನುದಾನ ಮೀರಿ ಖರ್ಚು ಮಾಡುತ್ತಲೇ ಇತ್ತು. ಉದಾಹರಣೆಗೆ  1993-94 ರ ಅವಧಿಯಲ್ಲಿ ಬಜೆಟ್ ಅನುದಾನ 77 ಕೋಟಿ ರೂಪಾಯಿಗಳಾದರೆ ಖರ್ಚಾಗಿರುವುದು 199 ಕೋಟಿ ರೂಪಾಯಿ, 1995-96ರಲ್ಲಿ ಬಜೆಟ್ ಅನುದಾನ 82 ಕೋಟಿ ರೂಪಾಯಿಗಳಾದರೆ ಖರ್ಚಾಗಿರುವುದು 228 ಕೋಟಿ ರೂಪಾಯಿ. ಕೊನೆಗೊಂದು ದಿನ ಎಲ್ಲವೂ ಬಯಲಾಯಿತು. 1999ರ ಮಾರ್ಚ್ ತಿಂಗಳ ವರೆಗಿನ ಅವಧಿಯ ದಾಖಲೆಗಳ ಪ್ರಕಾರ ಬಜೆಟ್ ಮಿತಿಯನ್ನು ಮೀರಿ ರಾಜ್ಯಗಳಲ್ಲಿ ಖರ್ಚಾಗಿರುವ ಹಣದ ಮೊತ್ತ 93,000 ಕೋಟಿ ರೂಪಾಯಿ.
ರಾಜಕೀಯ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಪಿಎಸಿಗೆ ಸಾಧ್ಯವಾಗದೆ ಇರುವುದಕ್ಕೆ ಅದರ ರಚನೆಯಲ್ಲಿನ ದೋಷ ಮತ್ತು ಕಾರ್ಯನಿರ್ವಹಣೆಯಲ್ಲಿನ ಇತಿಮಿತಿಗಳೂ ಕಾರಣ. ಉದಾಹರಣೆಗೆ ಲೆಕ್ಕಪತ್ರವನ್ನು ಪರಿಶೀಲಿಸುವಾಗ ಸಂಬಂಧಿತ ಇಲಾಖೆಯ ಕಾರ್ಯದರ್ಶಿಗಳು ಪಿಎಸಿ ಮುಂದೆ ಹಾಜರಾಗಿ ಸಾಕ್ಷ್ಯ ನೀಡಬೇಕೆಂದು ಹೇಳುತ್ತದೆ ನಿಯಮ. ಆದರೆ ನಿರ್ದಿಷ್ಟ ಪ್ರಕರಣವನ್ನು ನಿರ್ವಹಿಸಿದ ಅಧಿಕಾರಿಗಳ ಸಾಕ್ಷ್ಯ ಕಡ್ಡಾಯ ಅಲ್ಲ. ಇದರಿಂದಾಗಿ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ಹೊರಿಸಲು ಸಾಧ್ಯವಾಗುತ್ತಿಲ್ಲ. ಅಮೆರಿಕದಲ್ಲಿ ಅಧಿಕಾರಿಗಳು ಮಾತ್ರವಲ್ಲ, ಅವಶ್ಯಕ ಸಂದರ್ಭಗಳಲ್ಲಿ  ಸಾರ್ವಜನಿಕ ವ್ಯಕ್ತಿಗಳಿಂದಲೂ ಸಾಕ್ಷ್ಯ ಸಂಗ್ರಹಿಸಬಹುದಾಗಿದೆ. ಪಿಎಸಿ ವರದಿ ನೀಡುವಾಗ ಆಗುತ್ತಿರುವ ವಿಳಂಬಕ್ಕೆ ಇನ್ನೊಂದು ಕಾರಣ ಸಾವಿರಾರು ಪುಟಗಳ ಸಿಎಜಿ ವರದಿ. ಇದರ ಬದಲಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಮಹತ್ವದೆನಿಸಿದ ಪ್ರಕರಣಗಳ ಲೆಕ್ಕಪತ್ರಗಳ ವರದಿಯನ್ನಷ್ಟೇ ಸಿಎಜಿ ಸಲ್ಲಿಸಿದರೆ ಪಿಎಸಿ ಪರಿಶೀಲನೆಗೂ ಅನುಕೂಲವಾಗಬಹುದು ಎನ್ನುವ ಅಭಿಪ್ರಾಯ ಇದೆ.
ಪಿಎಸಿಯ ಕಾರ್ಯನಿರ್ವಹಣೆಯಲ್ಲಿನ ಮತ್ತೊಂದು ಸಮಸ್ಯೆ ವಿಳಂಬವಾಗಿ ಸಲ್ಲಿಸಲಾಗುವ ಲೆಕ್ಕಪತ್ರಗಳು. ಈಗ ವಿವಾದ ಸೃಷ್ಟಿಸಿರುವ 2ಜಿ ತರಂಗಾಂತರ ಹಗರಣ ನಡೆದಿದ್ದು 2007-2008ರ ಹಣಕಾಸು ವರ್ಷದಲ್ಲಿ. ಅಂದರೆ ಮೂರುವರ್ಷಗಳ ಹಿಂದಿನ ಲೆಕ್ಕಪತ್ರಗಳನ್ನು ಪಿಎಸಿ ಈಗ ಪರಿಶೀಲನೆ ನಡೆಸುತ್ತಿದೆ. ನಮ್ಮಲ್ಲಿನ ಪಿಎಸಿಗೆ ಬ್ರಿಟನ್ ಸಂಸತ್ ಮಾದರಿಯಾದರೂ ಅಲ್ಲಿನ ಎಲ್ಲ ನಿಯಮಾವಳಿಗಳನ್ನು ಇಲ್ಲಿ ಅಳವಡಿಸಲಾಗಿಲ್ಲ.

ಬ್ರಿಟನ್‌ನಲ್ಲಿ ಸರ್ಕಾರಿ ಇಲಾಖೆಗಳು ಪ್ರತಿವರ್ಷದ ಸೆಪ್ಟೆಂಬರ್ 30ರೊಳಗೆ ಲೆಕ್ಕಪತ್ರವನ್ನು ಸಿಎಜಿಗೆ ಸಲ್ಲಿಸುವುದು ಕಾನೂನು ಪ್ರಕಾರ ಕಡ್ಡಾಯ. ಮುಂದಿನ ಜನವರಿ ಅಂತ್ಯದೊಳಗೆ ದೃಢೀಕೃತ ಲೆಕ್ಕಪತ್ರವನ್ನು ಸಿಎಜಿ ಸಲ್ಲಿಸಬೇಕಾಗುತ್ತದೆ. ಆ ವರದಿಗಳನ್ನು ಎರಡು ತಿಂಗಳೊಳಗೆ ಪರಿಶೀಲನೆ ನಡೆಸಿ ಪಿಎಸಿ ತನ್ನ ವರದಿ ಸಲ್ಲಿಸಬೇಕೆಂಬ ನಿಯಮ ಇದೆ.
ಪಿಎಸಿಯ ಸುಧಾರಣೆ ನಡೆಯಬೇಕೆಂಬ ಕೂಗು ಬಹಳ ಕಾಲದಿಂದ ಕೇಳಿಬರುತ್ತಿದೆ. 
ಇದಕ್ಕೊಂದು ಸ್ಪಷ್ಟ ರೂಪು ನೀಡಿದ್ದು ನ್ಯಾಯಮೂರ್ತಿ ವೆಂಕಟಾಚಲಯ್ಯ ಅಧ್ಯಕ್ಷತೆಯ ಸಂವಿಧಾನ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನೆಯ ರಾಷ್ಟ್ರೀಯ ಆಯೋಗ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ಸಾಂವಿಧಾನಿಕ ಸಂಸ್ಥೆಯಾಗಿ ಪುನರ್‌ರಚಿಸಿ ಹಕ್ಕುಬಾಧ್ಯತೆಗಳನ್ನು ಸ್ಪಷ್ಟಪಡಿಸಬೇಕು, ಪಿಎಸಿಯ ಅಧಿಕಾರವಧಿಯನ್ನು ಲೋಕಸಭೆ ಮತ್ತು ವಿಧಾನಸಭೆಯ ರೀತಿಯಲ್ಲಿ ಐದು ವರ್ಷಗಳಿಗೆ ನಿಗದಿಗೊಳಿಸಬೇಕು ಹಾಗೂ ರಾಜ್ಯಸಭೆಯಲ್ಲಿರುವ ವ್ಯವಸ್ಥೆಯಂತೆ ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದರಷ್ಟು ಸಮಿತಿ ಸದಸ್ಯರು ನಿವೃತ್ತರಾಗಿ ಹೊಸ ಸದಸ್ಯರ ನೇಮಕ ನಡೆಯಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇದರ ಜತೆಗೆ ಸರ್ಕಾರಿ ಇಲಾಖೆಗಳು ಧನವಿನಿಯೋಗ ಲೆಕ್ಕಪತ್ರಗಳನ್ನು ಸಂಸತ್ ಮತ್ತು ವಿಧಾನಮಂಡಲಗಳಿಗೆ ಹಣಕಾಸು ವರ್ಷದ ಅಂತ್ಯದೊಳಗೆ  ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು. ಒಂದೊಮ್ಮೆ ಬಜೆಟ್ ನಿಗದಿಪಡಿಸಿದ್ದ ಅನುದಾನದ ಮಿತಿ ಮೀರಿ ಖರ್ಚು ಮಾಡಿದ್ದರೆ ಅದಕ್ಕೆ ಆ ಹಣಕಾಸು ವರ್ಷದೊಳಗೆ ಅಂಗೀಕಾರ ಪಡೆಯಬೇಕು ಎಂಬ ಸಲಹೆಗಳು ಕೂಡಾ ಇವೆ. ಈ ರೀತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಬಲವರ್ಧನೆ ನಡೆಸಬೇಕೆಂದು ಚರ್ಚೆ ನಡೆಯುತ್ತಿರುವಾಗಲೇ ಅದನ್ನು  ಇನ್ನಷ್ಟು ದುರ್ಬಲಗೊಳಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದು ಸಂಚಲ್ಲದೆ ಮತ್ತೇನು?

Monday, April 25, 2011

ಕಲ್ಲೆಸೆದು ಕೆಸರು ಸಿಡಿಸಿಕೊಂಡವರು

‘ಕೆಸರಿಗೆ ಕಲ್ಲೆಸೆದು ಮುಖಕ್ಕೆ ಯಾಕೆ ಸಿಡಿಸಿಕೊಳ್ಳುತ್ತೀರಿ?’ ಎಂದು ಭ್ರಷ್ಟರ ವಿರುದ್ಧ ಹೋರಾಟಕ್ಕೆ ಹೊರಟ ಉತ್ಸಾಹಿಗಳಿಗೆ ಹಿರಿಯರು ಬುದ್ದಿ ಹೇಳುವುದುಂಟು. ಅಣ್ಣಾ ಹಜಾರೆ ಅವರಿಗೂ ಹಿರಿಯರು ಈ ಬುದ್ದಿ ಮಾತನ್ನು ಹಲವಾರು ಬಾರಿ ಹೇಳಿರಬಹದು.

ಅದಕ್ಕೆ ಕಿವಿಗೊಡದೆ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧದ ತಮ್ಮ ಆಂದೋಲವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಹೋರಾಟ ಒಂದು ರಾಜ್ಯಕ್ಕಷ್ಟೇ ಸೀಮಿತವಾ ಗಿತ್ತು. ಅಲ್ಲಿಯೂ  ಶರದ್ ಪವಾರ್ ಅವರಂತಹ ಬಲಿಷ್ಠ ರಾಜಕಾರಣಿಯನ್ನು ಎದುರು ಹಾಕಿಕೊಂಡು ಮುಖಕ್ಕೆ ಒಂದಷ್ಟು ಕೆಸರು ಸಿಡಿಸಿಕೊಂಡಿದ್ದರು.ಈಗ ನೂರಾರು ‘ಪವಾರ್’ಗಳನ್ನು ಎದುರು ಹಾಕಿಕೊಂಡಿದ್ದಾರೆ.
‘ಸಾಮ್ರಾಜ್ಯ’ ತಿರುಗಿ ಹೊಡೆದಿದೆ. ಭ್ರಷ್ಟತೆಯ ಕೆಸರಲ್ಲಿ ಮುಳುಗಿ ಹೋಗಿರುವ ರಾಜಕೀಯ ವ್ಯವಸ್ಥೆಯನ್ನು ತೊಳೆಯಲು ಹೊರಟಿರುವ ಅಣ್ಣಾ ಮತ್ತು ಬೆಂಬಲಿಗರ ಮುಖದ ಮೇಲೆಲ್ಲ ಈಗ ಸಿಡಿದ ಕೆಸರಿನ ಕಲೆಗಳು. ಹಿಂದಡಿ ಇಡುವಂತಿಲ್ಲ, ಮುಂದೆ ಹೋಗಲು ದಾರಿಗಳು ಬಹಳ ಇಲ್ಲ.
ಇವೆಲ್ಲ ಅನಿರೀಕ್ಷಿತವೇ? ಬಹುಶಃ ಅಲ್ಲ. ‘....ರಾಜಕೀಯ ಪಕ್ಷಗಳು  ಮೈಯೆಲ್ಲ ಕಣ್ಣಾಗಿ ಅಣ್ಣಾ ಹಜಾರೆ ಮತ್ತು ಬೆಂಬಲಿಗರ ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ....’ ಎಂದು ಎರಡು ವಾರಗಳ ಹಿಂದೆ ಇದೇ ಅಂಕಣದಲ್ಲಿ ಬರೆದದ್ದನ್ನು ಓದಿ ‘ನಿರಾಶವಾದ ಅತಿಯಾಯಿತು’ ಎಂದವರೂ ಇದ್ದರು.
ಆದರೆ ಈ ದೇಶದ ರಾಜಕೀಯ ವ್ಯವಸ್ಥೆಯನ್ನು ತುಸು ಹತ್ತಿರದಿಂದ ನೋಡಿದ ಯಾರೂ ಅಣ್ಣಾ ಹಜಾರೆ  ಎದುರು ಸರ್ಕಾರ ಸೋಲು ಒಪ್ಪಿಕೊಂಡಿತು ಎಂದು ಸಂಭ್ರಮಿಸುವ ಆತುರ ತೋರಿಸಲಾರರು.

ಜನ ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲು ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ಭ್ರಮಿಸಿ ಅಣ್ಣಾ ಹಜಾರೆ ಅವರ ಕೆಲ ಮುಗ್ಧ ಬೆಂಬಲಿಗರು ಕುಣಿದಾಡಿದ್ದರು.
ಆದರೆ ಆಗಲೇ ‘ಸಾಮ್ರಾಜ್ಯ’ ತನ್ನ ಹತಾರುಗಳನ್ನು ಸಾಣೆ ಹಿಡಿಯುತ್ತಿತ್ತು ಎಂದು ಅವರಿಗೆ ತಿಳಿದಿರಲಿಲ್ಲ. ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹದ ಬಾಣದಿಂದ ಪ್ರಾಣ ಉಳಿಸಿಕೊಳ್ಳಲು ಸರ್ಕಾರ ತಲೆಯನ್ನು ಒಂದಿಷ್ಟು ಕೆಳಗೆ ತಗ್ಗಿಸಿತ್ತು ಅಷ್ಟೆ.  ಅದು ಪ್ರತಿ ದಾಳಿ ಪೂರ್ವದ ಸಮರ ತಂತ್ರ.
ಭಾರತದ ರಾಜಕಾರಣದಲ್ಲಿ ಕುಟುಂಬ ರಾಜಕೀಯ ಹಳೆಯ ವಿವಾದ. ಇದರಿಂದಾಗಿ ಈ ವಿವಾದದ ಸುತ್ತಲಿನ ಚರ್ಚೆ ಬಹಳ ಬೇಗ ಸಾರ್ವಜನಿಕರ ಗಮನ ಸೆಳೆಯುತ್ತದೆ.ಈಗ ವಿವಾದದ ಕೇಂದ್ರಬಿಂದುವಾಗಿರುವ ಹಿರಿಯ ವಕೀಲ ಶಾಂತಿಭೂಷಣ್ ಕೂಡಾ ಒಂದು ಕಾಲದಲ್ಲಿ ಇಂದಿರಾ ಗಾಂಧಿ ಅವರ ಕುಟುಂಬ ರಾಜಕೀಯದ ವಿರುದ್ಧ ದನಿ ಎತ್ತಿದವರು. ಇಷ್ಟೆಲ್ಲ ಗೊತ್ತಿದ್ದೂ ಅಣ್ಣಾ ಹಜಾರೆ ಆಗಲೇ ಒಂದು ತಪ್ಪು ಹೆಜ್ಜೆ ಇಟ್ಟಿದ್ದರು.

ಶಾಂತಿಭೂಷಣ್ ಮತ್ತು ಅವರ ಮಗ ಪ್ರಶಾಂತ್ ಭೂಷಣ್ ಅವರನ್ನು ಲೋಕಪಾಲ ಮಸೂದೆ ರಚನಾ ಸಮಿತಿಗೆ ಸೇರಿಸಿಬಿಟ್ಟಿದ್ದರು. ನೂರು ಕೋಟಿ ನಾಗರಿಕ ಸಮಾಜದ ಪ್ರತಿನಿಧಿಗಳಾಗಿ ನೇಮಕಗೊಂಡ ಐವರು ಸದಸ್ಯರಲ್ಲಿ ಒಂದೇ ಕುಟುಂಬದ ಇಬ್ಬರು. ಕಾರಣಗಳೇನೇ ಇರಬಹುದು, ಸಾರ್ವಜನಿಕವಾಗಿ ಇದನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಅಲ್ಲಿಂದ ಪ್ರಾರಂಭವಾಯಿತು ಪ್ರತಿ ದಾಳಿ.

ಇವೆಲ್ಲವೂ ಕೇವಲ ಆಡಳಿತಾರೂಢರ ಹುನ್ನಾರ ಎಂದು ತಿಳಿದುಕೊಳ್ಳಬೇಕಾಗಿಲ್ಲ.ಬಹಿರಂಗವಾಗಿ ಅಣ್ಣಾ ಹಜಾರೆ ಚಳವಳಿಗೆ ಬೆಂಬಲ ಘೋಷಿಸಿರುವ ವಿರೋಧ ಪಕ್ಷಗಳು ಕೂಡಾ ಅಂತರಂಗದಲ್ಲಿ ಅದನ್ನು ಮುರಿಯಲು ಗುಪ್ತ ಬೆಂಬಲ ನೀಡುತ್ತಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಮತ ಪಡೆದು ಅಧಿಕಾರಕ್ಕೆ ಬಂದಿದ್ದ ಎನ್‌ಡಿಎ ಸರ್ಕಾರದ ಮೊದಲ ಆದ್ಯತೆಯೇ ಲೋಕಪಾಲ ಮಸೂದೆಗೆ ಕಾನೂನಿನ ರೂಪ ಕೊಡುವುದು ಆಗಬೇಕಾಗಿತ್ತು.

ಆದರೆ ಹಾಗಾಗಲಿಲ್ಲ. ಆಗಲೂ ಪ್ರಧಾನಿಯನ್ನು ಲೋಕಪಾಲರ ವ್ಯಾಪ್ತಿಯಿಂದ ಹೊರಗಿಡಬೇಕೆಂಬುದು ಬಿಜೆಪಿಯ ಅಧಿಕೃತ ನಿಲುವಾಗಿತ್ತು ಎನ್ನುವುದನ್ನು ಈಗ ಎಲ್ಲರೂ ಮರೆತುಬಿಟ್ಟಿದ್ದಾರೆ.
ಅಣ್ಣಾ ಹಜಾರೆ ವಿರುದ್ಧ ಮೊದಲು ಎರಗಿಬಿದ್ದವರು ಕೂಡಾ ಕಾಂಗ್ರೆಸ್ ಪಕ್ಷದ ಪ್ರಮುಖ ಟೀಕಾಕಾರರಾದ ಯೋಗಗುರು ಬಾಬಾ ರಾಮ್‌ದೇವ್. ಇವರಿಗೆ ಸಲಹೆಗಾರರಾಗಿರುವವರು ಬಿಜೆಪಿಯಿಂದ ಹೊರ ಹೋಗಿದ್ದರೂ ಸಂಘ ಪರಿವಾರದ ಜತೆ ಸಂಬಂಧ ಇಟ್ಟುಕೊಂಡಿರುವ ಗೋವಿಂದಾಚಾರ್ಯ ಮತ್ತು ಹವ್ಯಾಸಿ ಪತ್ರಕರ್ತ ಎಸ್.ಗುರುಮೂರ್ತಿ. ಎರಡು ದಿನಗಳ ಮೊದಲು ಹೋಗಿ ಅಣ್ಣಾ ಹಜಾರೆ ಅವರನ್ನು ಅಪ್ಪಿಕೊಂಡಿದ್ದ ರಾಮ್‌ದೇವ್ ಯಾಕೆ ತಿರುಗಿಬಿದ್ದರು ಎನ್ನುವುದಕ್ಕೂ ಹಿನ್ನೆಲೆ ಇದೆ.
ಮೊದಲನೆಯದಾಗಿ ರಾಜಕೀಯ ಪಕ್ಷ ಕಟ್ಟಲು ಹೊರಟಿದ್ದ ರಾಮ್‌ದೇವ್ ಅವರ ಪ್ರಯತ್ನಕ್ಕೆ ಅಣ್ಣಾ ಹಜಾರೆ ಅವರ ದಿಢೀರ್ ರಂಗಪ್ರವೇಶದಿಂದಾಗಿ ಹಿನ್ನಡೆಯಾಗಿದೆ. ಕಳೆದೆರಡು ವಾರಗಳಲ್ಲಿ ಅವರ ದನಿ ಬದಲಾಗಿರುವುದನ್ನು ಗಮನಿಸಬಹುದು.

‘ಹೊಸ ರಾಜಕೀಯ ಪಕ್ಷ ಕಟ್ಟುವುದಿಲ್ಲ, ಈಗಿರುವ ಪಕ್ಷಗಳಿಂದಲೇ ಒಳ್ಳೆಯ ಕೆಲಸ ಮಾಡಿಸಲು ಜನಬಲದ ಮೂಲಕ ಒತ್ತಡ ಹಾಕುತ್ತೇವೆ’ ಎಂದು ಯೋಗಗುರು ಹೇಳುತ್ತಿದ್ದಾರೆ. ಗೋವಿಂದಾಚಾರ್ಯರ ಶಿಷ್ಯೆ ಉಮಾಭಾರತಿ ಅವರನ್ನು ಅಣ್ಣಾ ಹಜಾರೆ ಬೆಂಬಲಿಗರು ಹತ್ತಿರಕ್ಕೆ ಬಿಟ್ಟು ಕೊಡದಿರುವುದು ಕೂಡಾ ರಾಮ್‌ದೇವ್ ಅಸಮಾಧಾನಕ್ಕೆ ಕಾರಣ ಆಗಿರಬಹುದು.
ಬಾಬಾ ರಾಮ್‌ದೇವ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಂತಹ ಆಟಗಳಲ್ಲಿ ಪಳಗಿರುವ ಅಮರ್ ಸಿಂಗ್ ಎಂಬ ರಾಜಕೀಯ ದಲ್ಲಾಳಿಯ ಪ್ರವೇಶವಾಗಿದೆ. ಇದು ಕೂಡಾ ರಾಜಕೀಯ ಸಮರದ ಹಳೆಯ ತಂತ್ರ. ಯುದ್ಧಭೂಮಿಯಲ್ಲಿ ಭೀಷ್ಮಾಚಾರ್ಯರ ಎದುರು ಶಿಖಂಡಿಯನ್ನು ತಂದು ನಿಲ್ಲಿಸಿದ ಹಾಗೆ.
ಅಮರ್‌ಸಿಂಗ್ ಅವರಿಗೆ ಶಾಂತಿಭೂಷಣ್ ಬಗ್ಗೆ ಮೊದಲೇ ಹಳೆಯ ದ್ವೇಷ ಇತ್ತು. ಇದಕ್ಕಿಂತಲೂ ಮಿಗಿಲಾಗಿ ಮುಲಾಯಂ ಸಿಂಗ್ ಕೈಬಿಟ್ಟ ನಂತರ ಮೂಲೆಗುಂಪಾಗಿದ್ದ ಅವರಿಗೆ ರಾಜಕೀಯವಾಗಿ ಜೀವದಾನ ಬೇಕಾಗಿತ್ತು. ಉತ್ತರಪ್ರದೇಶದಲ್ಲಿ ಕಾಲೂರಲು ಪ್ರಯತ್ನಿಸುತ್ತಲೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಮಾಯಾವತಿ ಮತ್ತು ಮುಲಾಯಂ ಸಿಂಗ್ ಅವರನ್ನು ಎದುರು ಹಾಕಿಕೊಂಡಿರುವ ಜತೆಗೆ ಠಾಕೂರ್ ಸಮುದಾಯದ ಮತಗಳನ್ನು ಸೆಳೆಯಬಲ್ಲ ನಾಯಕನೊಬ್ಬ ಬೇಕಿತ್ತು.

ಇವೆಲ್ಲವೂ ಒಟ್ಟಾಗಿ ಅಮರ್‌ಸಿಂಗ್ ಕಾಂಗ್ರೆಸ್ ನಾಯಕರ ಕೈ ದಾಳವಾಗಿ ಬಿಟ್ಟರು.ಅಮರ್‌ಸಿಂಗ್ ಮೊದಲು ‘ಸಿಡಿ’ಯೊಂದನ್ನು ಹೊರಹಾಕಿದರು. ಅದರಲ್ಲಿ ಶಾಂತಿಭೂಷಣ್ ಅವರು ಮಗನ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಒಲಿಸಿಕೊಳ್ಳುವ ಭರವಸೆ ನೀಡಿರುವ ಸಂಭಾಷಣೆ ಇದೆ.
ಅದರ ಬೆನ್ನಲ್ಲೇ ಉತ್ತರಪ್ರದೇಶದ ಮಾಯಾವತಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದಿರುವ ಪ್ರಕರಣ ಬಯಲಾಗಿದೆ. ಈಗ ಆಸ್ತಿ ಖರೀದಿಯಲ್ಲಿ ಸರ್ಕಾರಕ್ಕೆ ಮುದ್ರಾಂಕ ಶುಲ್ಕ ವಂಚಿಸಿರುವ ಆರೋಪ ಎದುರಾಗಿದೆ.
ಹಿರಿಯ ವಕೀಲರಾದ ಶಾಂತಿಭೂಷಣ್ ಮತ್ತು ಮಕ್ಕಳು ಕೇವಲ ದುಡ್ಡು ಸಂಪಾದನೆಗಾಗಿಯೇ ವಕೀಲಿ ವೃತ್ತಿ ಮಾಡಿಕೊಂಡವರಲ್ಲ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನೆತ್ತಿಕೊಂಡು ಕಾನೂನು ಹೋರಾಟ ನಡೆಸುತ್ತಾ ಬಂದವರು.
ನ್ಯಾಯಮೂರ್ತಿಗಳ ಭ್ರಷ್ಟಾಚಾರದ ವಿರುದ್ಧವೂ ದನಿ ಎತ್ತಿ ಅಪಾಯವನ್ನು ಮೈಮೇಲೆ ಎಳೆದುಕೊಂಡವರು. ಅವರು ಹೇಳುತ್ತಿರುವಂತೆ ಅಮರ್‌ಸಿಂಗ್ ಸಿಡಿ ನಕಲಿಯೂ ಇರಬಹುದು, ಉತ್ತರಪ್ರದೇಶ ದಲ್ಲಿ ಪಡೆದಿರುವ ಜಮೀನು ಮಾರುಕಟ್ಟೆ ಬೆಲೆಗೆ ಖರೀದಿಸಿರಬಹುದು. ಮುದ್ರಾಂಕ ಶುಲ್ಕ ವಂಚಿಸದೆಯೂ ಇರಬಹುದು.
ಆದರೆ ಯಾವುದೇ ಚುನಾವಣೆ ಇಲ್ಲದೆ ನೂರು ಕೋಟಿ ನಾಗರಿಕರ ಪ್ರತಿನಿಧಿಗಳಾಗಿ ಲೋಕಪಾಲ ರಚನಾ ಸಮಿತಿಯ ಸದಸ್ಯರಾಗಿ ನೇಮಕ ಗೊಂಡವರ ಮೇಲೆ ಈ ರೀತಿಯ ಸಂಶಯದ ನೆರಳೂ ಚಾಚಬಾರದಲ್ಲವೇ? ಯಾಕೆಂದರೆ ಅಣ್ಣಾ ಹಜಾರೆ ಅವರ ಹೋರಾಟ ಕಾನೂನಿ ನದ್ದಲ್ಲ, ಅದು ನೈತಿಕತೆಯದ್ದು.

ಶರದ್‌ಪವಾರ್ ಸೇರಿದಂತೆ ಅಣ್ಣಾ ಹಜಾರೆ ಅವರು ಗುರಿ ಇಟ್ಟಿರುವ ರಾಜಕಾರಣಿಗಳು ಹೊಂದಿರುವ ಕೋಟ್ಯಂತರ ರೂಪಾಯಿ ಮೌಲ್ಯದ  ಆಸ್ತಿ ಅಕ್ರಮವಾಗಿ ಗಳಿಸಿದ್ದೆಂದು ಎಲ್ಲಿ ಸಾಬೀತಾಗಿದೆ? ಲೋಕಪಾಲರ ನೇಮಕ ಕೂಡಾ ಭ್ರಷ್ಟರ ವಿರುದ್ಧದ ನೈತಿಕ ಹೋರಾಟದ ಒಂದು ಭಾಗ ಅಲ್ಲವೇ?
ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ನಂತರ ಕೆಸರೆರಚಾಟಕ್ಕೆ ಬಲಿಯಾದವರು ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ. ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಾಯುಕ್ತರಿಗೆ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಕೆಣಕಿದ್ದೇ ತಡ, ನ್ಯಾ.ಹೆಗ್ಡೆ ಅವರು ಕೆಂಡಾಮಂಡಲವಾಗಿಬಿಟ್ಟರು.
ಇದೇ ಅಭಿಪ್ರಾಯವನ್ನು ಇನ್ನೊಂದು ರೀತಿಯಲ್ಲಿ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಕೆಲವು ವಾರಗಳ ಹಿಂದೆ ಹೇಳಿದ್ದಾಗಲೂ ವಿವಾದ ಸೃಷ್ಟಿಯಾಗಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವೈಯಕ್ತಿಕವಾದ ಪ್ರಾಮಾಣಿಕತೆಯನ್ನಾಗಲಿ, ಕ್ಷಮತೆಯನ್ನಾಗಲಿ ಯಾರೂ ಪ್ರಶ್ನಿಸುವ ಹಾಗಿಲ್ಲ.
ಹಾಗಿದ್ದರೂ ಯಾಕೆ ಅವರನ್ನು ಕೆಣಕುವಂತಹ ಚುಚ್ಚುಮಾತುಗಳು ತೂರಿಬರುತ್ತಿವೆ? ಇದಕ್ಕೆ ಸ್ವಲ್ಪಮಟ್ಟಿಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೂ ಕಾರಣ.ರಾಜ್ಯ ಸರ್ಕಾರದ ಅಸಹಕಾರದಿಂದ ನೊಂದು ಹತ್ತು ತಿಂಗಳ ಹಿಂದೆ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದಾಗ ನ್ಯಾ. ಸಂತೋಷ್‌ಹೆಗ್ಡೆ ದೇಶದ ಗಮನ ಸೆಳೆದಿದ್ದರು. ಅದು ಅವರ ಜನಪ್ರಿಯತೆಯ ಉತ್ತುಂಗ ಸ್ಥಿತಿ.

ಆದರೆ ಕರ್ನಾಟಕದ ಜನತೆ ಮಾತ್ರವಲ್ಲ, ಇಡೀ ದೇಶದ ಪ್ರಜ್ಞಾವಂತರು ರಾಜೀನಾಮೆ ಹಿಂತೆಗೆದುಕೊಳ್ಳಲು ಒತ್ತಾಯಿಸಿದಾಗಲೂ ಜಗ್ಗದ ಅವರು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಮಾತಿಗೆ ಮಣಿದು ರಾಜೀನಾಮೆ ಹಿಂತೆಗೆದುಕೊಂಡರು.
ಮರುಗಳಿಗೆಯಿಂದ ಅವರ ಜನಪ್ರಿಯತೆ ಕುಸಿಯತೊಡಗಿತ್ತು. ಅಲ್ಲಿಯ ವರೆಗೆ ಲೋಕಾಯುಕ್ತರ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದವರೂ ನಂತರದ ದಿನಗಳಲ್ಲಿ ನಾಲಿಗೆ ಸಡಿಲ ಬಿಡತೊಡಗಿದ್ದರು. ತಮ್ಮನ್ನು ಕೆಣಕಲೆಂದೇ ಇಂತಹ ಚುಚ್ಚುಮಾತುಗಳನ್ನು ತೂರಿಬಿಡಲಾಗುತ್ತಿದೆ ಎಂದು ಗೊತ್ತಿದ್ದರೂ ನ್ಯಾ.ಸಂತೋಷ್‌ಹೆಗ್ಡೆ ಅವುಗಳಿಗೆ ಭಾವಾವೇಶದಿಂದ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ.
ದಿಗ್ವಿಜಯ್‌ಸಿಂಗ್ ಟೀಕೆಗೆ ಪ್ರತಿಕ್ರಿಯಿಸಿದ ರೀತಿಯಲ್ಲಿಯೂ ಈ ಭಾವಾವೇಶ ಇತ್ತು.ಒಮ್ಮೊಮ್ಮೆ ಸಾತ್ವಿಕರ ಮೌನ ಕೂಡಾ ಅವರ ಟೀಕಾಕಾರರ ಬಾಯಿಮುಚ್ಚಿಸುವಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದು ಲೋಕಾಯುಕ್ತರಿಗೆ ಯಾಕೋ ಮನವರಿಕೆಯಾದಂತಿಲ್ಲ.
ಇವರನ್ನೆಲ್ಲ ಕಟ್ಟಿಕೊಂಡಿರುವ ಅಣ್ಣಾ ಹಜಾರೆ ಅವರೂ ಆರೋಪ ಮುಕ್ತರಾಗಿಲ್ಲ. ಅಣ್ಣಾ ಹಜಾರೆ ಅಧ್ಯಕ್ಷರಾಗಿರುವ ಹಿಂದ್ ಸ್ವರಾಜ್ ಟ್ರಸ್ಟ್‌ನ ಖಾತೆಯಲ್ಲಿದ್ದ 2.2 ಲಕ್ಷ ರೂಪಾಯಿಗಳನ್ನು ಅವರ ಹುಟ್ಟುಹಬ್ಬ ಆಚರಣೆಗೆ ಬಳಸಲಾಗಿತ್ತಂತೆ. ಈ ಬಗ್ಗೆ 2005ರಲ್ಲಿ ತನಿಖೆ ಮಾಡಿದ ಸಾವಂತ್ ಆಯೋಗ ಈ ಆರೋಪ ನಿಜ ಎಂದು ವರದಿ ನೀಡಿದೆ.
ರಾಜಕಾರಣಿಗಳು, ಉದ್ಯಮಿಗಳು, ಚಿತ್ರತಾರೆಯರು ತಮ್ಮ ಹುಟ್ಟುಹಬ್ಬದ ಆಚರಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವಾಗ ಈ ಎರಡು ಲಕ್ಷ ರೂಪಾಯಿ ಯಾವ ಲೆಕ್ಕದ್ದು ಎಂದು ಪ್ರಶ್ನಿಸಬಹುದು. ಖರ್ಚಾಗಿರುವ ಹಣವನ್ನು ಅಣ್ಣಾ ಹಜಾರೆ ಸ್ವಂತಕ್ಕಾಗಿ ಬಳಸಿಕೊಳ್ಳಲಿಲ್ಲ ಎಂದು ಸಮರ್ಥಿಸಿಕೊಳ್ಳಲೂ ಬಹುದು.
ಆದರೆ ಅಣ್ಣಾ ಹಜಾರೆ ಅವರಲ್ಲಿ ಗಾಂಧೀಜಿಯನ್ನು ಕಾಣಬಯಸುವ ಕೋಟ್ಯಂತರ ಜನರ ಕಣ್ಣಿನಲ್ಲಿ ಇಂತಹ ಸಣ್ಣ ತಪ್ಪುಗಳು ಭ್ರಮನಿರಸನವನ್ನು ಉಂಟುಮಾಡಬಲ್ಲದು. ಯಾಕೆಂದರೆ ಹಣಕಾಸಿನ ವಿಷಯದಲ್ಲಿ ಗಾಂಧೀಜಿ ಇಂತಹ ಸಣ್ಣ ತಪ್ಪುಗಳನ್ನೂ ಮಾಡಿರಲಿಲ್ಲ.

ಸುಮಾರು 30 ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಮತ್ತು ಇದಕ್ಕಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ದೇಣಿಗೆಯನ್ನು ಸಂಗ್ರಹಿಸಿದ್ದ ಗಾಂಧೀಜಿ ವಿರುದ್ಧ ಯಾರೂ ಹಣ ದುರುಪಯೋಗದ ಸಣ್ಣ ಸೊಲ್ಲು ಕೂಡಾ ಎತ್ತಿರಲಿಲ್ಲ.

ಇದನ್ನು ನೋಡಿಯೇ ಆಲ್‌ಬರ್ಟ್ ಐನ್‌ಸ್ಟೀನ್ ‘ರಕ್ತ ಮೂಳೆ ಮಾಂಸಗಳನ್ನು ಹೊಂದಿದ್ದ ಇಂತಹ ವ್ಯಕ್ತಿ ಜಗತ್ತಿನಲ್ಲಿ ಸಂಚರಿಸಿದ್ದನೇ, ಬದುಕಿದ್ದನೇ ಎಂದು ಮುಂಬರುವ ಪೀಳಿಗೆ ಸಂಶಯಪಡಬಹುದು’ ಎಂದು ಉದ್ಗರಿಸಿದ್ದು.

ಭ್ರಷ್ಟಾಚಾರ ನಿರ್ಮೂಲನೆ ಈಗಲೂ ಸಾಧ್ಯ. ಅದಕ್ಕಾಗಿ ಮಹಾತ್ಮ ಗಾಂಧೀಜಿಯವರಂತಹ ನಾಯಕರ ಅಗತ್ಯ ಇದೆ. ಅವರನ್ನು ಎಲ್ಲಿಂದ ತರುವುದು?