Monday, March 7, 2011

ಎಡರಂಗದಿಂದ ಕಲಿಯುವುದೂ ಸಾಕಷ್ಟಿದೆ

ಕಳೆದೆರಡು ವರ್ಷಗಳ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೆ ಪಶ್ಚಿಮ ಬಂಗಾಳದ ಮತದಾರರು ಆಗಲೇ ನಿರ್ಧಾರ ಮಾಡಿಮುಗಿಸಿದಂತೆಯೇ ಕಾಣುತ್ತಿದೆ. ಆದ್ದರಿಂದ ಮುಂದಿನ ತಿಂಗಳು ಆ ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡಪಕ್ಷಗಳಿಗೆ ಗೆಲ್ಲುವುದು ಎಷ್ಟು ಕಷ್ಟವೋ, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೋಲುವುದು ಅಷ್ಟೇ ಕಷ್ಟ.
ಆದರೆ ರಾಜಕೀಯ ಪಕ್ಷಗಳು ಒಮ್ಮೊಮ್ಮೆ ಸುಲಭದ ಗೆಲುವನ್ನು ಕೈಬಿಟ್ಟು ಕಷ್ಟದ ಸೋಲಿನ ಹಿಂದೆ ಓಡುವುದುಂಟು. ಭಾವಾವೇಶಕ್ಕೆ ಒಳಗಾಗಿ ಅನೇಕ ಬಾರಿ ರಾಜಕೀಯ ಎಡವಟ್ಟುಗಳನ್ನು ಮಾಡಿಕೊಂಡಿರುವ ಮಮತಾಬ್ಯಾನರ್ಜಿಯವರಿಂದ ಇಂತಹದ್ದೊಂದು ಹರಾಕಿರಿ ನಡೆಯಲು ಸಾಧ್ಯವೇ ಇಲ್ಲ ಎಂದು ಧೈರ್ಯದಿಂದ ಹೇಳುವಂತಿಲ್ಲ. ಅಲ್ಲದೆ ರಾಜಕೀಯ ಪ್ರಜ್ಞಾವಂತಿಕೆಯಲ್ಲಿ ತಮಗೆ ತಾವೇ ಸಾಟಿಯಾಗಿರುವ ಬಂಗಾಳಿಗಳು ಅಚ್ಚರಿ ನೀಡುವ ಸಣ್ಣ ಸಾಧ್ಯತೆಯೂ ಇದೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳು ನಡೆಯದೆ ಹೋದರೆ ಮೂವತ್ತನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲಾವಧಿಯಲ್ಲಿ ಎಡಪಕ್ಷಗಳು ಪಶ್ಚಿಮಬಂಗಾಳದಲ್ಲಿ ಕಟ್ಟಿ ನಿಲ್ಲಿಸಿರುವ ‘ಕೆಂಪುಕೋಟೆ’ ಇನ್ನೆರಡು ತಿಂಗಳಲ್ಲಿ ಕುಸಿದುಬೀಳಲಿದೆ.  ಕಾಳಿಘಾಟ್‌ನ ‘ಗುಡಿಸಲ ರಾಣಿ’ ಮಮತಾ ಬ್ಯಾನರ್ಜಿ ಕೊಲ್ಕೊತ್ತಾದ ರೈಟರ್ಸ್‌ ಕಟ್ಟಡ ಪ್ರವೇಶಿಸಲಿದ್ದಾರೆ.
ವ್ಯಕ್ತಿ ಇರಲಿ, ಸಂಸ್ಥೆ ಇರಲಿ, ಸೋಲು ಬಹಳ ಕ್ರೂರವಾದುದು. ಸೋತವರ ಮೇಲೆ ಯಾರೂ ಹೂವಿನ ಮಳೆ ಸುರಿಸುವುದಿಲ್ಲ, ಕಲ್ಲೆಸೆಯುವವರೇ ಹೆಚ್ಚು. ಆದರೆ ಪಾಠ ಕಲಿಯಬೇಕಾಗಿರುವುದು ಸೋಲಿನಿಂದಲೇ ಹೊರತು ಗೆಲುವಿನಿಂದ ಅಲ್ಲ. ಸುಮಾರು ಮೂರುವರೆ ದಶಕಗಳಷ್ಟು ಕಾಲ ರಾಜ್ಯಭಾರ ಮಾಡಿದ ಪಶ್ಚಿಮಬಂಗಾಳದ ಎಡಪಕ್ಷಗಳು, ರಾಜಕೀಯವನ್ನು ನೋಡುವ, ಮಾಡುವ ಮತ್ತು ಅನುಭವಿಸುವ ವಿಧಾನವನ್ನೇ ಬದಲಾಯಿಸಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯ ಇಲ್ಲ. ರಾಜಕೀಯಕ್ಕೆ ಸಂಬಂಧಿಸಿದ  ಹಲವಾರು ಸಾಮಾನ್ಯ ವ್ಯಾಖ್ಯಾನ ಮತ್ತು ತೀರ್ಮಾನಗಳು ಕೂಡಾ ಸುಳ್ಳೆಂದು ಅಲ್ಲಿನ ಎಡರಂಗ ಮತ್ತೆಮತ್ತೆ ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಯಾವ ರಾಜ್ಯಗಳ ನೆಲದಲ್ಲಿ ನಿಂತು ನೋಡಿದರೂ ಪಶ್ಚಿಮ ಬಂಗಾಳ ಭಾರತದಲ್ಲಿ ಇಲ್ಲವೇ ಇಲ್ಲವೇನೋ, ಅದು ಪ್ರತ್ಯೇಕವಾದ ದೇಶವೇನೋ ಎಂದು ಅನಿಸುವಷ್ಟು ಆ ರಾಜ್ಯದ ರಾಜಕೀಯ ಭಿನ್ನವಾಗಿದೆ.
ಕಳೆದ ಅರ್ವತ್ತು ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಭ್ರಷ್ಟಾಚಾರ, ಕೋಮುವಾದ ಮತ್ತು ಆಡಳಿತ ವಿರೋಧಿ ಅಲೆಗಳಂತಹ ಮೂರು ಸಂಗತಿಗಳು ಪ್ರಮುಖವಾಗಿ ಚರ್ಚೆಗೊಳಪಟ್ಟಿವೆ. ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿದ್ದು ಕೂಡಾ ಈ ಸಂಗತಿಗಳು. ಆದರೆ ಎಡರಂಗ ಅಧಿಕಾರಕ್ಕೆ ಬಂದ ನಂತರ ಆ ರಾಜ್ಯದಲ್ಲಿ ಇಲ್ಲಿಯ ವರೆಗೆ ನಡೆದ ಆರು ವಿಧಾನಸಭಾ ಚುನಾವಣೆಗಳಲ್ಲಿ ಎಂದೂ ಈ ಮೂರು ಸಂಗತಿಗಳು ಮುಖ್ಯಚರ್ಚೆಯ ಭಾಗ ಆಗಿರಲೇ ಇಲ್ಲ. ಈ ಬಾರಿಯೂ ಆಡಳಿತ ವಿರೋಧಿ ಅಲೆಯ ಸಾಧ್ಯತೆಯ ಹೊರತಾಗಿ ಉಳಿದೆರಡು ಸಂಗತಿಗಳು ಚರ್ಚೆಯಲ್ಲಿ ಇಲ್ಲ. ಪ್ರಾಮಾಣಿಕತೆ ಮತ್ತು ಜಾತ್ಯತೀತತೆಯ ವಿಷಯದಲ್ಲಿ ಯಾರೂ ಅನುಮಾನ ಪಡದಂತಹ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ಮಮತಾ ಬ್ಯಾನರ್ಜಿಯವರು ಕೂಡಾ ಎಡರಂಗ ಸರ್ಕಾರ ಭ್ರಷ್ಟಗೊಂಡಿದೆ ಇಲ್ಲವೇ ಕೋಮುವಾದದ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡುತ್ತಿಲ್ಲ ಎನ್ನುವುದು ಗಮನಾರ್ಹ.
ಭ್ರಷ್ಟರಾಗದೆ ರಾಜಕೀಯ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸಾಮಾನ್ಯ ಅಭಿಪ್ರಾಯ ಉತ್ತರದಿಂದ ದಕ್ಷಿಣದ ವರೆಗೆ ಎಲ್ಲ ರಾಜ್ಯಗಳಲ್ಲೂ ಹಬ್ಬಿದೆ. ಇದೇ ಅಭಿಪ್ರಾಯ ಪೂರ್ವದಿಂದ ಪಶ್ಚಿಮದ ವರೆಗಿನ ರಾಜ್ಯಗಳಲ್ಲಿಯೂ ಇದೆ ಎಂದು ಹೇಳುವ ಹಾಗೆ ಇಲ್ಲ, ಯಾಕೆಂದರೆ ಪೂರ್ವದಲ್ಲಿ ಪಶ್ಚಿಮಬಂಗಾಳ ಇದೆ. ಆ ರಾಜ್ಯದ ಎಡರಂಗದ ರಾಜಕೀಯ ದೇಶದಲ್ಲಿನ ಈ ಸಾಮಾನ್ಯ ಅಭಿಪ್ರಾಯ ತಪ್ಪೆಂದು ಕಳೆದ ಮೂವತ್ತನಾಲ್ಕು ವರ್ಷಗಳಿಂದ ಸಾಬೀತುಮಾಡಿಕೊಂಡು ಬಂದಿದೆ. ಅಧಿಕಾರಕ್ಕೆ ಬರಬೇಕಾಗಿಲ್ಲ, ಶಾಸಕರಾದ ತಿಂಗಳ ಅವಧಿಯಲ್ಲಿಯೇ ಭ್ರಷ್ಟಾಚಾರದ ಆರೋಪಗಳು ಕೇಳಲಾರಂಭಿಸುವ ಈಗಿನ ದಿನಮಾನದಲ್ಲಿ ಇಷ್ಟೊಂದು ಕಾಲ ಅಧಿಕಾರದಲ್ಲಿದ್ದೂ ತನ್ನ ಶಾಸಕರು, ಸಂಸದರ ಮೇಲೆ ಭ್ರಷ್ಟಾಚಾರದ ಕಳಂಕ ಅಂಟದಂತೆ ನೋಡಿಕೊಂಡಿರುವುದು ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸುಲಭದ ಕೆಲಸ ಅಲ್ಲ.
ಹಾಗಿದ್ದರೆ ಪಶ್ಚಿಮಬಂಗಾಳದಲ್ಲಿ ಭ್ರಷ್ಟಾಚಾರ ಇಲ್ಲವೇ? ವಿಚಿತ್ರವೆಂದರೆ ಸಾಮಾನ್ಯವಾಗಿ ಪಕ್ಷವೊಂದು ಅಧಿಕಾರಕ್ಕೆ ಬಂದರೆ ಮೊದಲು ಭ್ರಷ್ಟರಾಗುವುದು ಆ ಪಕ್ಷದ ಜನಪ್ರತಿನಿಧಿಗಳು. ತಹಶೀಲ್ದಾರ್ ಕಚೇರಿಯಿಂದ ವಿಧಾನಸೌಧದ ವರೆಗೆ ಎಲ್ಲೆಲ್ಲೂ ಅವರೇ ಅಧಿಕಾರ ಚಲಾಯಿಸುವುದರಿಂದ ಹೋದಲ್ಲೆಲ್ಲ ಭ್ರಷ್ಟತೆಯ ಅವಕಾಶದ ಕಿಂಡಿಗಳನ್ನು ಅವರು ಕೊರೆಯುತ್ತಾ ಇರುತ್ತಾರೆ. ಇದೇ ಕಳ್ಳ ಕಿಂಡಿಯಲ್ಲಿ ಕೈಹಾಕಿ ಪಕ್ಷದಲ್ಲಿ ಅವರ ಹಿಂಬಾಲಕರಾಗಿರುವವರು ಸಿಕ್ಕಿದಷ್ಟನ್ನು ಬಾಚಿಕೊಳ್ಳುತ್ತಾರೆ. ಪಶ್ಚಿಮಬಂಗಾಳದ ರಾಜಕೀಯ ಇದಕ್ಕಿಂತ ಸಂಪೂರ್ಣ ಭಿನ್ನ. ಅಲ್ಲಿ ಭ್ರಷ್ಟಾಚಾರದ ಆರೋಪಗಳು ಇರುವುದು ಶಾಸಕರು ಇಲ್ಲವೇ ಸಂಸತ್ ಸದಸ್ಯರ  ಮೇಲಲ್ಲ, ಅದು ಪಕ್ಷದ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳ ಮೇಲೆ. ನೇಮಕಾತಿ, ವರ್ಗಾವಣೆ,  ಫಲಾನುಭವಿಗಳ ಆಯ್ಕೆ ಮೊದಲಾದ ಎಲ್ಲ ವಿಷಯಗಳಲ್ಲಿ ನಿರ್ಧಾರ ಈ ಪದಾಧಿಕಾರಿಗಳದ್ದೇ ಆಗಿರುವುದರಿಂದ ಒಂದಷ್ಟು ಭ್ರಷ್ಟತೆಯ ಕೆಸರು ಅವರ ಕೈಗೆ ಅಂಟಿಕೊಳ್ಳುತ್ತದೆ. ಹೀಗಿದ್ದರೂ ಅಲ್ಲಿ ದೊಡ್ಡ ಹಗರಣಗಳು ಕೇಳಿ ಬಂದೇ ಇಲ್ಲ.
ಭ್ರಷ್ಟಾಚಾರವನ್ನು ಹೊರತುಪಡಿಸಿದರೆ ಕೋಮುವಾದ ದೇಶದ ರಾಜಕೀಯದಲ್ಲಿ ಬಹುಚರ್ಚಿತ ವಿಷಯ. ತೊಂಭತ್ತರ ದಶಕದ ನಂತರದ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಡೆದ ಅನೇಕ ರಾಜಕೀಯ ಬದಲಾವಣೆಗಳಲ್ಲಿ ಕೋಮುವಾದ ನಿರ್ಣಾಯಕ ಪಾತ್ರ ವಹಿಸಿದೆ. ಸ್ವಾತಂತ್ರ್ಯ ಸಿಕ್ಕಿದ ಮೊದಲ ದಿನಗಳನ್ನು ಹೊರತುಪಡಿಸಿದರೆ ಪಶ್ಚಿಮಬಂಗಾಳದಲ್ಲಿ ನಡೆದೇ ಇಲ್ಲವೆನ್ನುವಷ್ಟು ಕೋಮುಗಲಭೆಗಳ ಸಂಖ್ಯೆ ಕಡಿಮೆ. ಕಾಶ್ಮೆರ (67%) ಮತ್ತು ಅಸ್ಸಾಂ (31%)  ನಂತರ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ (25.3%). ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 15ರಷ್ಟು ಮುಸ್ಲಿಮರು ಆ ರಾಜ್ಯದಲ್ಲಿದ್ದಾರೆ. ಶೇ 50ಕ್ಕಿಂತ ಹೆಚ್ಚು ಮುಸ್ಲಿಮರಿರುವ ಕನಿಷ್ಠ ಮೂರು ಜಿಲ್ಲೆಗಳು ಅಲ್ಲಿವೆ. ಹೀಗಿದ್ದರೂ ಬಾಬ್ರಿಮಸೀದಿ ಧ್ವಂಸದ ನಂತರದ ದಿನಗಳಲ್ಲಿಯೂ ಪಶ್ಚಿಮಬಂಗಾಳ ಶಾಂತವಾಗಿತ್ತು.
ಇವೆಲ್ಲದರ ಹೊರತಾಗಿಯೂ ದಶಕಗಳ ಕಾಲ ಎಡಪಕ್ಷಗಳ ಕಟ್ಟಾ ಬೆಂಬಲಿಗರಾಗಿದ್ದ ಮುಸ್ಲಿಮರು ಇತ್ತೀಚೆಗೆ ಯಾಕೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ? ಇದಕ್ಕೆ ತಕ್ಷಣದ ಉತ್ತರ ನಂದಿಗ್ರಾಮದ ವಿವಾದದಲ್ಲಿದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿದ್ದ ನಂದಿಗ್ರಾಮದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದರಿಂದ ಎಡಪಕ್ಷಗಳ ಬಗ್ಗೆ ಅವರ ಆಕ್ರೋಶ ಸಹಜವಾದುದು. ಆದರೆ ಈ ರೀತಿ ಪಕ್ಷನಿಷ್ಠೆಯನ್ನು ಬದಲಾಯಿಸಿಕೊಂಡವರು ಕೂಡಾ ಎಡಪಕ್ಷಗಳನ್ನು ಕೋಮುವಾದಿಗಳೆಂದು ಹೇಳುತ್ತಿಲ್ಲ. ‘ಭದ್ರತೆ ನೀಡಿದ್ದು ನಿಜ, ಆದರೆ ಅವಕಾಶ ನೀಡಲಿಲ್ಲ’ ಎನ್ನುವುದೇ ಎಡಪಕ್ಷಗಳ ಬಗ್ಗೆ ಅಲ್ಲಿರುವ ಮುಸ್ಲಿಮರಲ್ಲಿರುವ ಸಾಮಾನ್ಯ ಅತೃಪ್ತಿ.
ಎಡಪಕ್ಷಗಳು ಮುಸ್ಲಿಮ್ ಬೆಂಬಲ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ. ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರು ಕಾಲುಭಾಗದಷ್ಟಿದ್ದರೂ ಸರ್ಕಾರಿ ನೌಕರಿಯಲ್ಲಿ ಅವರ ಪಾಲು ಕೇವಲ ಶೇಕಡಾ ಎರಡು ಮಾತ್ರ. ಶೈಕ್ಷಣಿಕವಾಗಿಯೂ ಅಲ್ಲಿನ ಮುಸ್ಲಿಮರು  ಹಿಂದುಳಿದಿದ್ದಾರೆ. ಎಡಪಕ್ಷಗಳು ಈಗಲೂ ನೆಲೆ ಉಳಿಸಿಕೊಂಡಿರುವುದು ಮುಸ್ಲಿಮ್ ಬಾಹುಳ್ಯ ಇರುವ ಪಶ್ಚಿಮಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ. ಆದರೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳಂತೆ ಈ ಎರಡೂ ರಾಜ್ಯಗಳಲ್ಲಿ ಮುಸ್ಲಿಮರು ಹಿಂದೆ ಇದ್ದಾರೆ. ಸಿಪಿಎಂನ ನೀತಿ ನಿರೂಪಣೆಯ ಉನ್ನತಾಧಿಕಾರದ ಸಮಿತಿಯಾದ ಪಾಲಿಟ್‌ಬ್ಯೂರೋದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲ.
ಈ ರೀತಿ ಭ್ರಮನಿರಸನಕ್ಕೊಳಗಾದ ಮುಸ್ಲಿಮರಿಗೆ ಸರಿಯಾದ ಸಮಯಕ್ಕೆ ಮಮತಾ ಬ್ಯಾನರ್ಜಿ ಎಂಬ ನಾಯಕಿ ಕಾಣಿಸಿಕೊಂಡಿದ್ದಾರೆ. ಸುಮಾರು 27 ವರ್ಷಗಳ ರಾಜಕೀಯ ಜೀವನದಲ್ಲಿ ಮಮತಾ ಬ್ಯಾನರ್ಜಿ ಎಂದೂ ಕೋಮುವಾದಿ ಎಂಬ ಆರೋಪಕ್ಕೆ ಒಳಗಾಗಿಲ್ಲ.  ಕಾಂಗ್ರೆಸ್ ಬಿಟ್ಟ ನಂತರ ಒಂದಷ್ಟು ದಿನ ಬಿಜೆಪಿ ಜತೆ ಸೇರಿಕೊಂಡರೂ ರಾಜಕೀಯ ಲಾಭಕ್ಕಾಗಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರಲಿಲ್ಲ, ಮಿತ್ರಪಕ್ಷಕ್ಕೂ ಅದಕ್ಕೆ ಅವಕಾಶ ನೀಡಿರಲಿಲ್ಲ. ತಸ್ಲಿಮಾ ನಸ್ರೀನ್‌ಗೆ ಆಶ್ರಯ ನೀಡಿದ್ದ ಕಾರಣಕ್ಕೆ ಒಂದಷ್ಟು ದಿನ ಕೋಮುಗಲಭೆ ನಡೆದರೂ ಅದನ್ನು ರಾಜಕೀಯವಾಗಿ ದುರ್ಬಳಕೆ ಮಾಡಲು ಅವರು ಹೋಗಲಿಲ್ಲ. ಇವೆಲ್ಲದರ ಜತೆಗೆ ನಂದಿಗ್ರಾಮವನ್ನು ಉಳಿಸಿಕೊಟ್ಟದ್ದೇ ಮಮತಾ  ಎಂಬ ಕೃತಜ್ಞತೆ ಕೇವಲ ಆ ಊರಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದ ಮುಸ್ಲಿಮರಲ್ಲಿದೆ.
ಹನ್ನೊಂದು ವರ್ಷಗಳ ಹಿಂದೆ ಜ್ಯೋತಿಬಸು ಅವರು ಅಧಿಕಾರ ತ್ಯಾಗಮಾಡಿದ್ದ ಕಾಲದಲ್ಲಿಯೇ ಆಡಳಿತ ವಿರೋಧಿ ಅಲೆ ಸಣ್ಣಗೆ ಎದ್ದಿತ್ತು. ಎಡರಂಗಕ್ಕೆ ಭದ್ರಬುನಾದಿ ಹಾಕಿಕೊಟ್ಟ ಜ್ಯೋತಿಬಸು ಅವರ ಕ್ರಾಂತಿಕಾರಿ ಕಾರ್ಯಕ್ರಮವಾದ ಉಳುವವನಿಗೆ ಭೂಮಿಯ ಒಡೆತನ ನೀಡುವ ‘ಬರ್ಗಾ ಕಾರ್ಯಚರಣೆ’ಯ ನೆನಪು ಆಗಲೇ ಜನಮನದಲ್ಲಿ ನಿಧಾನವಾಗಿ ಮರೆಗೆ ಸರಿದು ಅಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಂಡಿದ್ದವು. ‘ಬರ್ಗಾ ಕಾರ್ಯಾಚರಣೆ’ಯ ನಂತರ ಗಣನೀಯವಾಗಿ ಹೆಚ್ಚಿದ್ದ ಕೃಷಿ ಇಳುವರಿ ಇತ್ತಿಚಿನ ವರ್ಷಗಳಲ್ಲಿ ಇಳಿಮುಖವಾಗತೊಡಗಿತ್ತು. ಇದರಿಂದಾಗಿ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗತೊಡಗಿದ್ದವು. ಕೈಗಾರಿಕೆಗಳೆಲ್ಲ ರೋಗಗ್ರಸ್ತವಾದ ನಂತರ ಅಲ್ಲಿ ಉದ್ಯೋಗಾವಕಾಶವೇ ಇಲ್ಲದಂತಾಗಿದೆ.
ಈ ವಾಸ್ತವ ಜ್ಯೋತಿಬಸು ಅವರಿಗೆ ಅರಿವಾಗಿಯೇ ಅಧಿಕಾರದ ಕೊನೆಯ ದಿನಗಳಲ್ಲಿ ಅವರು ಸುಧಾರಣೆಯ ಹಾದಿ ಹಿಡಿದದ್ದು. ಆದರೆ ಅದನ್ನೇ ಉತ್ತರಾಧಿಕಾರಿಯಾದ ಬುದ್ದದೇವ ಭಟ್ಟಾಚಾರ್ಯ ಅವರು ಬಿರುಸಿನಿಂದ ಪ್ರಾರಂಭಿಸಿದಾಗ ಜನ ತಿರುಗಿಬೀಳತೊಡಗಿದ್ದರು. ‘ರೈತರು  ಮಿತ್ರರು, ಉದ್ಯಮಿಗಳು ಶತ್ರು’ ಎಂದು ಪಾಠ ಹೇಳುತ್ತಾ ಬಂದ ಪಕ್ಷವೇ ಶತ್ರುಗಳ ಜತೆ ಸೇರಿಕೊಂಡಿದ್ದನ್ನು ಜನ ಸಹಿಸದಾದರು.  ಕಳೆದ 3 ದಶಕಗಳಲ್ಲಿ ಪಶ್ಚಿಮ ಬಂಗಾಳದ ಎಡಪಕ್ಷಗಳಿಗೆ ನಿಷ್ಠರಾಗಿದ್ದ ಮತದಾರರ ಒಂದು ತಲೆಮಾರು ಬದಲಾಗಿರುವುದೂ ಇದಕ್ಕೆ ಕಾರಣ.
 ಈ ಬದಲಾವಣೆ ಪಕ್ಷದ ಪದಾಧಿಕಾರಿಗಳ ಮಟ್ಟದಲ್ಲಿಯೂ ಆಗಿದೆ. ಈಗಿನ ಪದಾಧಿಕಾರಿಗಳಲ್ಲಿ ಹೆಚ್ಚಿನವರು ವಿರೋಧಪಕ್ಷವಾಗಿದ್ದ ದಿನಗಳಲ್ಲಿ ಜತೆಯಲ್ಲಿದ್ದವರಲ್ಲ. ಇವರೆಲ್ಲ ಪಕ್ಷ ಅಧಿಕಾರಕ್ಕೆ ಬಂದ ನಂತರ ಸೇರಿಕೊಂಡವರು. ಹೋರಾಟದ ಅನುಭವವೇ ಇಲ್ಲದ ಇವರಿಗೆ ಅಧಿಕಾರ ಇಲ್ಲದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟದ ಕೆಲಸ. ಆದ್ದರಿಂದಲೆ ದಶಕಗಳ ಕಾಲ ಮರುಪ್ರಶ್ನಿಸದೆ ಬೆಂಬಲಿಸುತ್ತಾ ಬಂದ ಮತದಾರನ ನಿಷ್ಠೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಈ ಹೊಸತಲೆಮಾರು ಅಭದ್ರತೆಯಿಂದ ನರಳಾಡುತ್ತದೆ.
ಕೈ ಬಿಟ್ಟು ಹೋಗುತ್ತಿರುವ ಬೆಂಬಲದ ನೆಲೆಯನ್ನು ಉಳಿಸಿಕೊಳ್ಳಲು ಈ ಹತಾಶ ನಾಯಕರು ಹಿಡಿದದ್ದು ಪ್ರಜಾಸತ್ತಾತ್ಮಕ ಹಾದಿಯನ್ನಲ್ಲ, ಸರ್ವಾಧಿಕಾರಿ ಬಳಸುವ ಹಿಂಸಾತ್ಮಕ ಹಾದಿ. ಇದರಿಂದಾಗಿ ಆಕ್ರೋಶಗೊಂಡ ಜನ ತಿರುಗಿಬಿದ್ದಿದ್ದಾರೆ. ಈ ತಪ್ಪು ಕಾರ್ಯತಂತ್ರವೇ ಮಮತಾ ಬ್ಯಾನರ್ಜಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿರುವುದು. ಆದರೆ ಸಂಘಟನೆಯ ಜಾಲ, ಕಾರ್ಯಕ್ರಮ, ಎರಡನೇ ಸಾಲಿನ ನಾಯಕತ್ವ, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಪಕ್ಷದ ಏಕೈಕ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಪ್ರಯಾಸಪಟ್ಟು ಪಶ್ಚಿಮ ಬಂಗಾಳವನ್ನು ಗೆದ್ದುಕೊಂಡರೂ ಎಷ್ಟು ಕಾಲ ಉಳಿಸಿಕೊಳ್ಳಬಲ್ಲರು ಎನ್ನುವುದೇ ಈಗ ಉಳಿದಿರುವ ಕುತೂಹಲ.

Monday, February 28, 2011

ಗೋಧ್ರಾ ಹತ್ಯಾಕಾಂಡದ ತೀರ್ಪು ಹುಟ್ಟಿಸಿರುವ ಪ್ರಶ್ನೆಗಳು

ಗೋಧ್ರಾ ರೈಲು ಹತ್ಯಾಕಾಂಡದ ಬಗ್ಗೆ ಗುಜರಾತ್‌ನ ವಿಶೇಷ ತ್ವರಿತ ನ್ಯಾಯಾಲಯ ನೀಡಿರುವ ತೀರ್ಪನ್ನು ಹೇಗೆಂದು ಅರ್ಥಮಾಡಿಕೊಳ್ಳುವುದು. ಅಪರಾಧಿಗಳಿಗೆ ಶಿಕ್ಷೆಯಾಯಿತೆಂದೇ? ನಿರಪರಾಧಿಗಳು ಬಿಡುಗಡೆಯಾದರೆಂದೇ? ಕೀವು ತುಂಬಿದ ವ್ರಣದಂತೆ ಕಳೆದ ಒಂಬತ್ತು ವರ್ಷಗಳಿಂದ ಒಳಗಿಂದೊಳಗೆ ಹಿಂದೂ- ಮುಸ್ಲಿಂ ಸಮುದಾಯಗಳೆರಡನ್ನೂ ಹಿಂಸಿಸುತ್ತಿದ್ದ  ಒಂದು ಗಾಯವಾದರೂ ಕೊನೆಗೂ ಗುಣವಾಯಿತೆಂದೇ? ಸಾಮಾನ್ಯವಾಗಿ ನ್ಯಾಯಾಲಯದ ತೀರ್ಪುಗಳು ಪ್ರಕರಣವೊಂದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರದಂತಿರುತ್ತವೆ.
ಆದರೆ ಗುಜರಾತ್ ವಿಶೇಷ ತ್ವರಿತ ನ್ಯಾಯಾಲಯದ ತೀರ್ಪಿನ ನಂತರವೂ ಬಹಳಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಇದಕ್ಕಿಂತಲೂ ಮುಖ್ಯವಾಗಿ ಹಿಂದೆ ಸುಪ್ರೀಂ ಕೋರ್ಟಿನಿಂದಲೂ ಟೀಕೆಗೊಳಗಾಗಿದ್ದ ಮತ್ತು ‘ಪೂರ್ವಗ್ರಹಪೀಡಿತ, ರಾಜಕೀಯ ಪ್ರೇರಿತ ಮತ್ತು ಅಡ್ಡಕಸುಬಿ’ ಎಂಬ ಆರೋಪ ಹೊತ್ತಿರುವ ಗುಜರಾತ್ ಪೊಲೀಸ್ ಇಲಾಖೆಯ ಬಗ್ಗೆ ಇನ್ನಷ್ಟು ಸಂಶಯ ಮೂಡುವಂತಾಗಿದೆ.
ಕರಸೇವಕರನ್ನೊಳಗೊಂಡಂತೆ 59 ಪ್ರಯಾಣಿಕರ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆಗಿಂತಲೂ ಉಗ್ರವಾದ ಶಿಕ್ಷೆಯೇನಾದರೂ ಇದ್ದರೆ ಅದು ಕೂಡಾ ಕಡಿಮೆಯೇ. ಆದರೆ ಈಗ ಅಪರಾಧಿಗಳೆನಿಸಿಕೊಂಡವರೆಲ್ಲರೂ ತಪ್ಪಿತಸ್ಥರೇ? ಅಪರಾಧಿಗಳೆಲ್ಲರಿಗೂ ಶಿಕ್ಷೆಯಾಗಿದೆಯೇ? ಬಿಡುಗಡೆಯಾಗಿರುವವರೆಲ್ಲ ನಿರಪರಾಧಿಗಳೇ? ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು  ಕಾರಣಗಳಿವೆ.
ಮೊದಲನೆಯದಾಗಿ ಗುಜರಾತ್ ಪೊಲೀಸರು ಪ್ರಾರಂಭದಲ್ಲಿ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರಕಾರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಆರೋಪಿಗಳ ಸಂಖ್ಯೆ 135, ಅವರಲ್ಲಿ 22 ಮಂದಿ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ. ಒಂದಿಬ್ಬರು ಸತ್ತಿದ್ದಾರೆ. ಇನ್ನು ಒಂದಷ್ಟು ಮಂದಿಯನ್ನು ಹಿಂದೆಯೇ ಬಿಡುಗಡೆ ಮಾಡಲಾಗಿದೆ.
ಉಳಿದವರಲ್ಲಿ 64 ಮಂದಿ 8-9 ವರ್ಷ ಜೈಲಲ್ಲಿದ್ದು ಈಗ ಖುಲಾಸೆಗೊಂಡಿದ್ದಾರೆ. ಕೊನೆಗೆ ಅಪರಾಧಿ ಸ್ಥಾನದಲ್ಲಿ ಉಳಿದುಕೊಂಡಿದ್ದು ಕೇವಲ 31 ಮಂದಿ. ಈ ಎಲ್ಲ ಆರೋಪಿಗಳ ವಿರುದ್ಧ ಪೊಲೀಸರು ಪ್ರಾರಂಭದಲ್ಲಿ ಪೋಟಾ ಕಾಯಿದೆಯಡಿಯೂ ಪ್ರಕರಣಗಳನ್ನು ದಾಖಲಿಸಿದ್ದರು. ಆದರೆ ಮೂರು ವರ್ಷಗಳ ನಂತರ ಅವುಗಳನ್ನು ಪರಿಶೀಲಿಸಿದ ಕೇಂದ್ರ ಪರಿಶೀಲನಾ ಸಮಿತಿ, ಅದರಲ್ಲಿನ ಯಾವ ಆರೋಪವೂ ಪೋಟಾ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ವರದಿ ನೀಡಿದ್ದ ಕಾರಣ ಅವುಗಳನ್ನು ಕೈಬಿಡಲಾಗಿತ್ತು.
ಸದ್ಯಕ್ಕೆ ಖುಲಾಸೆಗೊಂಡ 64 ಮಂದಿ ತಮಗೆ ಸಿಕ್ಕ ಹೊಸ ಸ್ವಾತಂತ್ರ್ಯದ ಸಂಭ್ರಮದಲ್ಲಿರುವುದು ನಿಜ (ಎರಡೂ ಕಡೆಯವರೂ ಮೇಲ್ಮನವಿ ಸಲ್ಲಿಸುವುದು ಖಾತರಿಯಾಗಿರುವ ಕಾರಣ ಈ ಸಂತಸ ಕೂಡಾ  ಶಾಶ್ವತವಾದುದೇನಲ್ಲ). ಆದರೆ ಒಬ್ಬ ವ್ಯಕ್ತಿಯ ಅಪರಾಧ- ನಿರಪರಾಧಗಳನ್ನು ಸಾಬೀತುಪಡಿಸಲು ಒಂಬತ್ತು ವರ್ಷಗಳು ಬೇಕೇ? ಅದೂ ತನ್ನ ಉತ್ತಮ ಆಡಳಿತಕ್ಕಾಗಿ ನಂಬರ್ ಒನ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವವರ ರಾಜ್ಯದಲ್ಲಿ. ಗುಜರಾತ್ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ಸಾಕ್ಷಾತ್ ಸುಪ್ರೀಂ ಕೋರ್ಟ್  ಅಪನಂಬಿಕೆ ವ್ಯಕ್ತಪಡಿಸಿದೆ. ನಿವೃತ್ತರಾದ ಹಿರಿಯ ನ್ಯಾಯಮೂರ್ತಿಗಳ ನೇತೃತ್ವದ ಮಾನವ ಹಕ್ಕುಗಳ ಸಂಘಟನೆಗಳು ಕೂಡಾ ಅಲ್ಲಿನ ಪೊಲೀಸರ ವಿರುದ್ದ ‘ಆರೋಪಪಟ್ಟಿ’ ಸಲ್ಲಿಸಿವೆ. ಗೋಧ್ರಾ ಹತ್ಯಾಕಾಂಡದ ಆರೋಪಿಗಳಲ್ಲಿ 45 ಮಂದಿ ಈ ತನಿಖೆಯ ಬಗ್ಗೆ ಲಿಖಿತ ಹೇಳಿಕೆಯಲ್ಲಿ  ಸಂಶಯ ವ್ಯಕ್ತಪಡಿಸಿದ್ದರು. ತನಿಖೆಯೇ ಹೀಗಾದರೆ?
ಎರಡನೆಯದಾಗಿ ಪ್ರಮುಖ ಆರೋಪಿಗಳಾದ ಮೌಲ್ವಿ ಸಯೀದ್ ಉಮರ್ಜಿ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಮೊಹಮ್ಮದ್ ಅಬ್ದುಲ್ಲಾ ಕಲೋಟಾ ಅವರನ್ನು ಖುಲಾಸೆಗೊಳಿಸಲಾಗಿದೆ. ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿತ 94 ಆರೋಪಿಗಳಲ್ಲಿ ಅಲ್ಲಿನ ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಇದ್ದದ್ದು ಇವರಿಬ್ಬರೇ ಎನ್ನುವುದು ಗಮನಾರ್ಹ. ಉಳಿದವರಲ್ಲಿ ಹೆಚ್ಚಿನವರು ಸ್ಥಳೀಯ ಪೊಲೀಸ್‌ಠಾಣೆಯಲ್ಲಿ ಹಳೆಯ ಕ್ರಿಮಿನಲ್ ಚಟುವಟಿಕೆಯ ದಾಖಲೆ ಹೊಂದಿದ್ದವರು.
ಸಾಮಾನ್ಯವಾಗಿ ಇಂತಹವರು ವೈಯುಕ್ತಿಕ ಮಟ್ಟದ ದುಷ್ಕೃತ್ಯಗಳನ್ನು ಏಕಾಂಗಿಗಳಾಗಿ ಎಸಗಬಲ್ಲರು. ಆದರೆ ಗೋಧ್ರಾಹತ್ಯಾಕಾಂಡದಂತಹ ದೊಡ್ಡಮಟ್ಟದ ದುಷ್ಕೃತ್ಯವನ್ನು ನಾಯಕನಿಲ್ಲದೆ ಇಂತಹ ಅಡ್ಡಕಸುಬಿ ದುಷ್ಕರ್ಮಿಗಳು ನಡೆಸಲು ಸಾಧ್ಯವೇ? ಹಾಗಿದ್ದರೆ ಅವರಿಗೊಬ್ಬ ಗ್ಯಾಂಗ್ ಲೀಡರ್ ಇರಬೇಕಲ್ಲ? ಅವನು ಯಾರು? ಎಲ್ಲಿದ್ದಾನೆ? ಕಳೆದ ಒಂಬತ್ತು ವರ್ಷಗಳಿಂದ ಈ ಪ್ರಶ್ನೆಗೆ ಉತ್ತರ ಹುಡುಕಲು ಗುಜರಾತ್ ಪೊಲೀಸರಿಗೆ ಸಾಧ್ಯವಾಗಿಲ್ಲ.
ಗೋಧ್ರಾ ಘಟನೆಯ ಒಂದು ವರ್ಷದ ನಂತರ ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಬಂಧಿಸಿದಾಗ ಗೋಧ್ರಾ ಮಾತ್ರವಲ್ಲ, ಇಡೀ ಗುಜರಾತ್‌ನ ಮುಸ್ಲಿಮರು ಆಘಾತಕ್ಕೀಡಾಗಿದ್ದರು. ವೃತ್ತಿಯಲ್ಲಿ ಮರದ ವ್ಯಾಪಾರಿಯಾಗಿರುವ ಉಮರ್ಜಿ ಗೋಧ್ರಾ ಪ್ರದೇಶದ ದೇವ್‌ಬಂದಿ- ತಬ್ಲೀಗ್ ಜಮಾತ್ ಚಳವಳಿಯ ಪ್ರಮುಖ ನಾಯಕ. ಆರೋಪಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಚಿ ಮುಸ್ಲಿಮರು ಈ ಸಂಘಟನೆಯ ಬೆಂಬಲಿಗರು. ಬಂಧಿತ ಆರೋಪಿಗಳಲ್ಲಿಯೂ ಬಹಳಷ್ಟು ಮಂದಿ ಈ ಸಂಘಟನೆಯ ಜತೆಯಲ್ಲಿ ಸಂಪರ್ಕ ಹೊಂದಿದ್ದವರು. ಈ ಸಂಬಂಧದಿಂದಾಗಿಯೇ ಉಮರ್ಜಿ ದೇಶ- ವಿದೇಶಗಳಿಂದ ಹಣ ಸಂಗ್ರಹಿಸಿ  ಗೋಧ್ರಾ ಘಟನೆಯ ಆರೋಪಿಗಳ ಕುಟುಂಬಕ್ಕೆ ನೀಡುತ್ತಿದ್ದರು. ಗೋಧ್ರಾ ಘಟನೆಯ ನಂತರ ಅಲ್ಲಿ ಶಾಂತಿ ಸ್ಥಾಪನೆಗೆ ಅವರು ಓಡಾಡಿದ್ದರು, ಮುಖ್ಯಮಂತ್ರಿ ನರೇಂದ್ರಮೋದಿ ಗೋಧ್ರಾಕ್ಕೆ ಭೇಟಿ ನೀಡಿದಾಗಲೂ ಜತೆಯಲ್ಲಿದ್ದರು.
ಇಂತಹ ಉಮರ್ಜಿ ಒಂದು ಹೀನಕೃತ್ಯದ ಹಿಂದಿನ ಸಂಚುಕೋರ ಎಂದು ಪೊಲೀಸರು ಹೇಳಿದಾಗ ಗುಜರಾತ್ ಬೆಚ್ಚಿಬಿದ್ದಿತ್ತು. ತನಿಖೆಯ ಕಾಲದಲ್ಲಿ ಪೊಲೀಸರು ಸೋರಿಬಿಡುತ್ತಿದ್ದ ಮಾಹಿತಿ ಆಧರಿಸಿ ಪತ್ರಿಕೆಗಳು ಮಾಡುವ ವರದಿಗಳು ಮೌಲ್ವಿ ಸಯೀದ್ ಉಮರ್ಜಿ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಭಯೋತ್ಪಾದಕನಂತೆ ಚಿತ್ರಿಸಿತ್ತು. ತಾಲಿಬಾನ್ ನಾಯಕ ಉಮರ್ ಅಬ್ದುಲ್ಲಾ ಜತೆ ಉಮರ್ಜಿ ಸಂಪರ್ಕ ಹೊಂದಿದ್ದರೆಂಬ ವದಂತಿಯೂ ಹರಡಿತ್ತು. ಇವರ ಬಂಧನಕ್ಕೆ ಕಾರಣವಾಗಿದ್ದು ಬಂಧಿತ ಜಬೀರ್ ಬಿನಾಯಮಿನ್ ಬೆಹೆರಾ ತಪ್ಪೊಪ್ಪಿಗೆಯಲ್ಲಿ ನೀಡಿದ್ದ ಮಾಹಿತಿ.
‘ಗೋಧ್ರಾ ಹತ್ಯಾಕಾಂಡದ ಹಿಂದಿನ ದಿನ 2002ರ ಫೆಬ್ರುವರಿ 26ರಂದು ರಾತ್ರಿ 9.30 ಗಂಟೆಗೆ ರೈಲ್ವೆನಿಲ್ದಾಣದ ಪಕ್ಕದಲ್ಲಿಯೇ ಇರುವ ಅಮನ್ ಅತಿಥಿಗೃಹದಲ್ಲಿ ಸಂಚಿನ ರೂವಾರಿಗಳು ಸೇರಿದ್ದರು. ಅಲ್ಲಿಗೆ ತಮ್ಮ ಸಹಚರರನ್ನು ಕಳುಹಿಸಿ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಯನ್ನೇ ಗುರಿಯಾಗಿಸಿಕೊಂಡು ಬೆಂಕಿ ಹಚ್ಚುವಂತೆ ತಿಳಿಸಿದ್ದರು’ ಎಂದು ಆ ಸಭೆಯಲ್ಲಿದ್ದ ಬೆಹೆರಾ ಪೊಲೀಸರಿಗೆ ತಿಳಿಸಿದ್ದೇ ಉಮರ್ಜಿ ಬಂಧನಕ್ಕೆ ಕಾರಣ. ಈಗ ನ್ಯಾಯಾಲಯ ಮುಖ್ಯ ಆರೋಪಿಯಾಗಿದ್ದ ಉಮರ್ಜಿ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ. ಆದರೆ ‘ಗೋಧ್ರಾ ಹತ್ಯಾಕಾಂಡ ಅಪಘಾತ ಅಲ್ಲ, ಪೂರ್ವಯೋಜಿತ ಸಂಚು’ ಎಂದು ತೀರ್ಪು ನೀಡಿದೆ. ಮುಖ್ಯ ಸಂಚುಕೋರನೆಂಬ ಆರೋಪ ಹೊತ್ತ ಉಮರ್ಜಿಯ ಖುಲಾಸೆಯಿಂದಾಗಿ ಗೋಧ್ರಾ ಹತ್ಯಾಕಾಂಡ ಸಂಚಿನ ಫಲ ಎನ್ನುವುದಕ್ಕೆ ಇದ್ದ ಪ್ರಬಲ ಸಮರ್ಥನೆಯೊಂದು ದುರ್ಬಲಗೊಂಡಂತಾಗಲಿಲ್ಲವೇ?
ಮೂರನೆಯದಾಗಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ನಡೆದ ಮೂರು ಬಗೆಯ ತನಿಖೆ ಸೃಷ್ಟಿಸಿರುವ ಗೊಂದಲ. ಅಪರಾಧಗಳನ್ನು ಮುಚ್ಚಿಹಾಕಲು ಸ್ವತಂತ್ರ ಭಾರತದ ರಾಜಕಾರಣಿಗಳು ಕಂಡುಕೊಂಡ ಸುಲಭದ ಉಪಾಯ ಎಂದರೆ ಒಂದೇ ಪ್ರಕರಣದ ಬಗ್ಗೆ ಹಲವು ಬಗೆಯ ತನಿಖೆಗಳಿಗೆ ಅವಕಾಶ ಮಾಡಿಕೊಡುವುದು (ಇತ್ತೀಚಿನ ಉದಾಹರಣೆ 2ಜಿ ತರಂಗಾಂತರ ಹಗರಣ). ಈ ತನಿಖಾ ಸಂಸ್ಥೆಗಳು ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವ ವರದಿಗಳನ್ನು ನೀಡಿ ಗೊಂದಲದ ವಾತಾವರಣವನ್ನು ನಿರ್ಮಿಸುತ್ತದೆ. ಅಷ್ಟರಲ್ಲಿ ಅನ್ಯಾಯಕ್ಕೀಡಾದವರಲ್ಲಿ ದಣಿವು ಕಾಣಿಸಿಕೊಳ್ಳುವುದರಿಂದ ಅವರಲ್ಲಿ ಹೋರಾಟದ ಉತ್ಸಾಹ ಉಳಿದಿರುವುದಿಲ್ಲ, ಸಾಮಾನ್ಯ ಜನತೆಯ ನೆನೆಪಿನ ಶಕ್ತಿಯೂ ಕುಂದಿರುತ್ತದೆ. ‘ಆದದ್ದು ಆಗಿಹೋಯಿತು. ಹಳೆಯದನ್ನು ಕೆದಕುವುದು ಬೇಡ, ಮುಂದಿನ ದಾರಿ ನೋಡುವ’ ಎನ್ನುವ ಬುದ್ಧಿಮಾತುಗಳು ಎಲ್ಲೆಡೆ ಕೇಳತೊಡಗುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ಇವುಗಳಲ್ಲೆದರ ನಡುವೆ ಸತ್ಯ ಎಲ್ಲೋ ಮರೆಯಾಗಿ ಬಿಡುತ್ತದೆ.
ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಗೊಂಡ ಸಿಬಿಐ ಮಾಜಿ ನಿರ್ದೇಶಕ ರಾಘವನ್ ನೇತೃತ್ವದ ವಿಶೇಷ ತನಿಖಾದಳಕ್ಕಿಂತ ಮೊದಲು ಎರಡು ಆಯೋಗಗಳು ಗೋಧ್ರಾ ಹತ್ಯಾಕಾಂಡದ ತನಿಖೆ ನಡೆಸಿದ್ದವು. ಮೊದಲನೆಯದು ಗುಜರಾತ್ ಸರ್ಕಾರವೇ ನೇಮಿಸಿದ್ದ ನ್ಯಾಯಮೂರ್ತಿಗಳಾದ ಜಿ.ಟಿ. ನಾನಾವತಿ ನೇತೃತ್ವದ ತನಿಖಾ ಆಯೋಗ. 2008ರಲ್ಲಿ ವರದಿ ನೀಡಿದ ಈ ಆಯೋಗ ‘ಗೋಧ್ರಾ ಹತ್ಯಾಕಾಂಡ ಒಂದು ಪೂರ್ವನಿಯೋಜಿತ ಸಂಚು, ಅದು ಅಪಘಾತ ಅಲ್ಲ’ ಎಂದು ಹೇಳಿತ್ತು. ಗೋಧ್ರಾ ಘಟನೆಯ ನಂತರ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಯ ನಿಯಂತ್ರಣದಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿಯವರಿಂದ ಕರ್ತವ್ಯ ಚ್ಯುತಿ ನಡೆದಿದೆ ಎಂಬ ಆರೋಪವನ್ನು ಕೂಡಾ ನಾನಾವತಿ ಆಯೋಗ ತಳ್ಳಿಹಾಕಿತ್ತು.
ಆದರೆ ನಾನಾವತಿ ಆಯೋಗ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿಯೇ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು  ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ತನಿಖಾ ಆಯೋಗವನ್ನು ರಚಿಸಿದ್ದರು. 2005ರಲ್ಲಿ ವರದಿ ನೀಡಿದ ಬ್ಯಾನರ್ಜಿ ಅವರು,  ‘ರೈಲಿಗೆ ಹತ್ತಿಕೊಂಡ ಬೆಂಕಿ ಸಂಚಿನ ಫಲ ಅಲ್ಲ, ಅದೊಂದು ಅಪಘಾತ’ ಎಂದು ಹೇಳಿದ್ದರು. ಆದರೆ ಆ ಆಯೋಗವನ್ನು ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಾಲುಪ್ರಸಾದ್ ರಚಿಸಿದ್ದರು ಎನ್ನುವ ಕಾರಣಕ್ಕೆ ನ್ಯಾಯಮೂರ್ತಿ ಬ್ಯಾನರ್ಜಿ ವರದಿಯನ್ನು ಟೀಕಿಸಿದವರೇ ಹೆಚ್ಚು.
ಆದರೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಇಂತಹದ್ದೊಂದು ದೊಡ್ಡ ದುರಂತದ ಬಗ್ಗೆ ಆ ಕಾಲದ ರೈಲ್ವೆ ಸಚಿವ ನಿತೀಶ್‌ಕುಮಾರ್ ಯಾಕೆ ತನಿಖೆಗೆ ಆದೇಶ ನೀಡಿಲ್ಲ ಎನ್ನುವುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಈ ವಿವಾದಗಳಿಂದಾಗಿ ಕೊನೆಗೆ ಗುಜರಾತ್ ಹೈಕೋರ್ಟ್ ಕೂಡಾ ತೀರ್ಪು ನೀಡಿ ‘ಬ್ಯಾನರ್ಜಿ ಆಯೋಗದ ರಚನೆಯೇ ಸಂವಿಧಾನ ವಿರೋಧಿ’ ಎಂದು ಹೇಳಿತ್ತು. ಈ ಕಾರಣದಿಂದಾಗಿ ಬ್ಯಾನರ್ಜಿ ಆಯೋಗದ ತನಿಖಾ ವರದಿಯನ್ನೂ ಯಾರೂ ಚರ್ಚೆಗೆ ಎತ್ತಿಕೊಳ್ಳದಿದ್ದರೂ, ಅದು ಗೋಧ್ರಾ ಹತ್ಯಾಕಾಂಡದ ಕಾರಣಗಳ ಬಗ್ಗೆ ಒಂದಷ್ಟು ಗೊಂದಲಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಗೋಧ್ರಾ ಹತ್ಯಾಕಾಂಡವನ್ನು ಸಂಚು ಎಂದು ಹೇಳಿದ ವಿಶೇಷ ನ್ಯಾಯಾಲಯದ ತೀರ್ಪು ಒಂದು ರೀತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಪಾಲಿನ ಗೆಲುವು. ಆಶ್ಚರ್ಯವೆಂದರೆ ಮೋದಿ ಅವರು ಈ ಗೆಲುವನ್ನು ಕುಣಿದಾಡಿ ಆಚರಿಸಿದ ಹಾಗೆ ಕಾಣಲಿಲ್ಲ. ಈ ತೀರ್ಪು ಬಗ್ಗೆ ಕಾಟಾಚಾರದ ಪ್ರತಿಕ್ರಿಯೆ ನೀಡಿ ಅವರು ಮೌನ ತಾಳಿದ್ದಾರೆ. ಯಾಕೆ? ವಿಶೇಷ ತನಿಖಾದಳ ಗೋಧ್ರಾವನ್ನೂ ಒಳಗೊಂಡಂತೆ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರು ಪ್ರಮುಖ ಪ್ರಕರಣಗಳ ತನಿಖೆ ನಡೆಸಿದೆ. ಇತ್ತೀಚೆಗೆ ಇಂಗ್ಲಿಷ್ ವಾರಪತ್ರಿಕೆಯೊಂದು ಮಾಡಿರುವ ‘ಸ್ಕೂಪ್’ ವರದಿ ಪ್ರಕಾರ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಲ್ಲಿ ನರೇಂದ್ರಮೋದಿಯವರು ಅಪರಾಧಿ ಎಂದು  ಎಸ್‌ಐಟಿ ಅಭಿಪ್ರಾಯಪಟ್ಟಿದೆಯಂತೆ.
ದಾಖಲೆಗಳ ನಾಶ, ಕೋಮುದ್ವೇಷ ಪ್ರಚೋದಿಸುವ ಭಾಷಣ, ಗಲಭೆಯ ಸಮಯದಲ್ಲಿ ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ಅಕ್ರಮವಾಗಿ ಸೇರಿಕೊಂಡು ಆದೇಶ ನೀಡುತ್ತಿದ್ದ ಸಚಿವರು, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸಂಘ ಪರಿವಾರದ ಸದಸ್ಯರ ನೇಮಕ, ನಿಷ್ಪಕ್ಷಪಾತ ನಿಲುವಿನ ಪೊಲೀಸ್ ಅಧಿಕಾರಿಗಳಿಗೆ ಕಿರುಕುಳ... ಇವು ತನಿಖೆಯಿಂದ ಎಸ್‌ಐಟಿ ಕಂಡುಕೊಂಡ ಮೋದಿಯವರ ‘ಅಪರಾಧ’ಗಳಂತೆ. ಸದ್ಯಕ್ಕೆ ಕಳೆದ ವರ್ಷದ ಮೇ 12 ರಂದು ಎಸ್‌ಐಟಿ ಸಲ್ಲಿಸಿದ್ದ 600 ಪುಟಗಳ ಈ ವರದಿ ಸುಪ್ರೀಂ ಕೋರ್ಟ್‌ನ ಕಪಾಟಿನಲ್ಲಿ ಭದ್ರವಾಗಿದೆ.
ಪತ್ರಿಕೆಯಲ್ಲಿನ ವರದಿ ನಿಜವಾಗಿದ್ದರೆ ಮೋದಿ ಅವರ ಕಷ್ಟದ ದಿನಗಳು ಪ್ರಾರಂಭವಾಗಲಿವೆ. ಗೋಧ್ರಾ ಹತ್ಯಾಕಾಂಡದ ಬಗ್ಗೆ ಎಸ್‌ಐಟಿ ವರದಿ ಆಧರಿತ ತೀರ್ಪನ್ನು ಒಪ್ಪಿಕೊಂಡ ನಂತರ ಅದೇ ವರದಿ ಆಧರಿತ ಬೇರೆ ತೀರ್ಪನ್ನೂ ಒಪ್ಪಿಕೊಳ್ಳಲೇಬೇಕಲ್ಲಾ? ಈ ವರದಿಯಲ್ಲಿರುವದೇನಾದರೂ ನರೇಂದ್ರ ಮೋದಿಯವರಿಗೂ ಗೊತ್ತಾಗಿ ಅವರು ಮೌನವಾಗಿದ್ದಾರೆಯೇ?

Monday, February 21, 2011

ಮುಂಬೈನಲ್ಲಿ ಕನ್ನಡದ ಕತೆ ಮುಗಿಯುತ್ತಿದೆಯೇ?

ಹುಟ್ಟೂರು ಬಿಟ್ಟು ಬಂದವರು ಮರಳಿ ಹೋದಾಗೆಲ್ಲ ಪ್ರತಿಬಾರಿಯೂ ಊರು ಎಷ್ಟೊಂದು ಬದಲಾಗಿದೆಯಲ್ಲಾ ಎಂದು ಅಚ್ಚರಿ ಪಡುವುದುಂಟು. ಈ ಅಚ್ಚರಿಯೊಳಗೆ ‘ಹೇಗಿದ್ದದ್ದು ಹೇಗಾಗಿ ಹೋಯಿತಲ್ಲಾ’ ಎಂಬ ಒಂದು ಸಣ್ಣ ವಿಷಾದದ ಎಳೆಯೂ ಇರುತ್ತದೆ.ಮುಂಬೈಗೆ ಹೋದಾಗಲೆಲ್ಲ ನನಗೂ ಹೀಗೆ ಅನಿಸುವುದುಂಟು. ನಾನು ಮುಂಬೈಯಲ್ಲಿ ಹುಟ್ಟಿದ್ದು ಮಾತ್ರವಲ್ಲ ಅಲ್ಲಿಯೇ ನಾಲ್ಕನೇ ತರಗತಿ ವರೆಗೆ ಮುನ್ಸಿಪಾಲಿಟಿ ಕನ್ನಡ ಶಾಲೆಯಲ್ಲಿ ಕಲಿತವನು. ಹಾಗಾಗಿ ಅದು ನನಗೆ ಅಪರಿಚಿತ ಲೋಕವೇನಲ್ಲ. ಕಳೆದ ವಾರ ಮುಂಬೈಗೆ ಹೋಗಿದ್ದಾಗ ಭೇಟಿಯಾದ ಅನೇಕ ಹಿರಿಯ ಕನ್ನಡಿಗರು ‘ ಈ ಮುಂಬೈನಲ್ಲಿ ಕನ್ನಡದ ಕತೆ ಮುಗಿಯಿತು’ ಎಂದು ಕಳವಳ ವ್ಯಕ್ತಪಡಿಸುತ್ತಿದ್ದರು.ಇದೇನು ಮೊದಲ ಸಲವಲ್ಲ, ನಿರ್ಗತಿಕ ಸ್ಥಿತಿಯಿಂದ ಯಶಸ್ಸಿನ ಶಿಖರವನ್ನೇರಿದ ಸಾಧಕ ಕನ್ನಡಿಗರನ್ನು ಹುಡುಕಾಡಿ ವರದಿ ಮಾಡಲು ಇಪ್ಪತ್ತಮೂರು ವರ್ಷಗಳ ಹಿಂದೆ ತಿಂಗಳ ಕಾಲ ಮುಂಬೈ ಸುತ್ತಿದ್ದೆ. ಆಗಲೂ ಭೇಟಿಯಾದವರೆಲ್ಲರೂ ಇದೇ ರೀತಿ ಕಳವಳ ವ್ಯಕ್ತಪಡಿಸಿದ್ದರು. ಆದರೆ ಮುಂಬೈನಲ್ಲಿ ಕನ್ನಡದ ಕತೆ ಮುಗಿಯುತ್ತಿದೆ ಎಂಬ ಭೀತಿ ಎಷ್ಟು ನಿಜವೋ, ಅದು ಇನ್ನೂ ಮುಗಿದಿಲ್ಲ ಎನ್ನುವ ವಾಸ್ತವವೂ ಅಷ್ಟೇ ನಿಜ. ಈ ಎರಡು ಬೆಳವಣಿಗೆಗಳಿಗೆ ರೂಪಕದಂತಿತ್ತು ಕಳೆದ ವಾರ ಗೋರೆಗಾಂವ್ ಕನ್ನಡ ಸಂಘ ನಡೆಸಿದ್ದ ಹದಿಮೂರನೇ ವಿಚಾರಭಾರತಿ ಸಮ್ಮೇಳನ.
ಮೊದಲ ಬಾರಿ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಕನ್ನಡದ ಲೇಖಕರಿಗೆ, ಬೆಳಿಗ್ಗೆಯಿಂದ ಸಂಜೆ ವರೆಗೆ ಕೂತಲ್ಲಿಂದ ಕದಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ ಸುಮಾರು 300-350 ಕನ್ನಡಾಭಿಮಾನಿಗಳನ್ನು ಕಂಡು ಅಚ್ಚರಿಯಾಗಿದೆ. ಆದರೆ ಹದಿಮೂರು ವರ್ಷಗಳ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಮೊದಲನೇ ವಿಚಾರಭಾರತಿ ಸಮ್ಮೇಳನಕ್ಕೆ ಸಾಕ್ಷಿಯಾದವರಿಗೆ ಸ್ವಲ್ಪ ನಿರಾಶೆಯಾಗಿದೆ. ಆ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ಸಭಿಕರ ಸಾಮರ್ಥ್ಯದ  ಸಭಾಂಗಣ ತುಂಬಿ ತುಳುಕಾಡಿತ್ತು. ಮುಂಬೈನಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ಒಂದೆಡೆ ಸಭಿಕರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಇನ್ನೊಂದೆಡೆ ಈ ಸಭಿಕರ ಸರಾಸರಿ ವಯಸ್ಸು ಹೆಚ್ಚುತ್ತಿದೆ.
ಯುವ ತಲೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗುತ್ತಿದೆ. ಮೊದಲನೆಯದಕ್ಕಿಂತಲೂ ಎರಡನೆಯದು ಹೆಚ್ಚು ಕಳವಳಕಾರಿ ಬೆಳವಣಿಗೆ. ಇದರಲ್ಲೇನು ವಿಶೇಷ, ಯಾವುದೇ ರಾಜ್ಯದಲ್ಲಿ ಬೇರೆ ರಾಜ್ಯದ ಭಾಷೆಯ ಚಟುವಟಿಕೆಗಳಿಗೆ ಈ ರೀತಿಯ ಪ್ರತಿಕ್ರಿಯೆ ಸಾಮಾನ್ಯವಲ್ಲವೇ ಎಂದು ಕೆಲವರು ಪ್ರಶ್ನಿಸಬಹುದು. ಆದರೆ ಮುಂಬೈನಲ್ಲಿ ಈಗಲೂ ಕನ್ನಡದ ಚಟುವಟಿಕೆಗಳು ನಡೆಯುವ ಪ್ರಮಾಣದಲ್ಲಿ  ದೇಶದ ಯಾವುದಾದರೂ ಮತ್ತೊಂದು ಭಾಷೆಯ ಚಟುವಟಿಕೆ ಅದರ ತವರು ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯದಲ್ಲಿ ನಡೆಯುತ್ತಿರುವ ಉದಾಹರಣೆ ಸಿಗಲಾರದು. ಮುಂಬೈ ಮತ್ತು ಕನ್ನಡದ ಈ ಸಂಬಂಧಕ್ಕೆ ಐತಿಹಾಸಿಕ ಪರಂಪರೆ ಇದೆ.
ಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದ ಮಧ್ಯಭಾಗದ ವರೆಗೂ ಮುಂಬೈ ಆಡಳಿತ ಕನ್ನಡಿಗರ ಕೈಯ್ಯಲ್ಲಿಯೇ ಇತ್ತೆಂಬುದನ್ನು ಇತಿಹಾಸಕಾರರು ಸಂಶೋಧನೆಯ ಮೂಲಕ ದಾಖಲಿಸಿದ್ದಾರೆ. ಕನ್ನಡವೇ ಮಾತೃಭಾಷೆಯಾಗಿದ್ದ ಶಿಲಾಹಾರರು ಹದಿಮೂರನೇ ಶತಮಾನದ ವರೆಗೂ ಆಗಿನ ಮುಂಬಯಿ ರಾಜ್ಯವನ್ನಾಳಿದ್ದನ್ನು ಇತಿಹಾಸಕಾರರು ಉಲ್ಲೇಖಿಸುತ್ತಾರೆ.ಈ ರಾಜವಂಶಕ್ಕೆ ಸೇರಿದ ಮುಮ್ಮಣ್ಣಿ ಎಂಬ ಅರಸನಿಂದಲೇ ‘ಮುಂಬಯಿ’ ಎಂಬ ಹೆಸರು ಬಂತು ಎನ್ನುವ ವಾದವೂ ಇದೆ.ಇಲ್ಲಿನ ಸ್ಥಳನಾಮಗಳಲ್ಲಿ ಕನ್ನಡದ ಪ್ರಭಾವ ಇರುವುದನ್ನು ಅನೇಕ ವಿದ್ವಾಂಸರು ಗುರುತಿಸಿದ್ದಾರೆ. ಉದಾಹರಣೆಗೆ -ದೊಂಬಿವಿಲಿ  (ಡೊಂಬನಹಳ್ಳಿ) ಕಾಂದಿವಿಲಿ (ಕಂದನಹಳ್ಳಿ),ಬೋರಿವಿಲಿ (ಬೋರನಹಳ್ಳಿ) ಇತ್ಯಾದಿ. ಅಲ್ಲಿನ ಎಲಿಫೆಂಟಾ ಗುಹೆಯಲ್ಲಿರುವ ಮೂರುತಲೆಯ ಮಹೇಶನ ಮೂರ್ತಿ ಕೂಡಾ ಕನ್ನಡಿಗರ ಕೊಡುಗೆ.
ಏಕೀಕರಣಕ್ಕಿಂತ ಮೊದಲು ಕರ್ನಾಟಕದ ಧಾರವಾಡ, ಉತ್ತರ ಕನ್ನಡ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳು ಮುಂಬಯಿ ಸಂಸ್ಥಾನಕ್ಕೆ ಸೇರಿದ್ದವು. ಈ ಜಿಲ್ಲೆಗಳ ಜನರು ಕೋರ್ಟು-ಕಚೇರಿ ವ್ಯವಹಾರಕ್ಕಾಗಿ ಮುಂಬೈಯನ್ನೇ ಅವಲಂಬಿಸಿದ್ದರು. ಆ ಕಾಲದಲ್ಲಿ ಮರಾಠಿ, ಗುಜರಾತಿ ಜತೆ  ಕನ್ನಡವೂ ರಾಜ್ಯಭಾಷೆಯಾಗಿತ್ತು. ಮುಂಬೈ ವಿಶ್ವವಿದ್ಯಾಲಯದಲ್ಲಿ 1901ರಿಂದಲೇ ಸ್ನಾತಕೋತ್ತರ ಪದವಿಗೆ ಕನ್ನಡ ಭಾಷೆಯನ್ನು ಆರಿಸುವ ಅವಕಾಶ ಇತ್ತು. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯಲು ಮುಂಬೈ ಮಹಾನಗರಪಾಲಿಕೆ ಮೊದಲಿನಿಂದಲೂ ಅವಕಾಶ ನೀಡುತ್ತಾ ಬಂದಿದೆ. ಹೀಗಾಗಿ 40 ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿದ್ದಲ್ಲೆಲ್ಲ ಮುಂಬೈ ಮಹಾನಗರಪಾಲಿಕೆ ಕನ್ನಡ ಶಾಲೆಗಳನ್ನು ತೆರೆಯುತ್ತಿತ್ತು. ಇಪ್ಪತ್ತೈದು ವರ್ಷಗಳ ಹಿಂದೆ ಮಹಾನಗರಪಾಲಿಕೆಯ ಆಡಳಿತದ 50ಕ್ಕೂ ಹೆಚ್ಚು ಕನ್ನಡ ಪ್ರಾಥಮಿಕ ಶಾಲೆಗಳು ಮತ್ತು ಹನ್ನೆರಡು ಕನ್ನಡ ಮಾಧ್ಯಮಿಕ ಶಾಲೆಗಳಿದ್ದವು. ರಾತ್ರಿಶಾಲೆಗಳು ಮುಂಬೈನಲ್ಲಿ ನಡೆಸಿರುವ ಶೈಕ್ಷಣಿಕ ಕ್ರಾಂತಿ ಯಾವುದೇ ರಾಜ್ಯಕ್ಕೆ ಮಾದರಿಯಾದುದು. ಒಂದು ಕಾಲದಲ್ಲಿ ಮುಂಬೈನಲ್ಲಿ ಹನ್ನೆರಡು ಕನ್ನಡ ರಾತ್ರಿ ಶಾಲೆಗಳಿದ್ದವು. ಇದರ ಜತೆಗೆ ಕನ್ನಡಿಗರೇ ಕಟ್ಟಿ ಬೆಳೆಸಿದ ಹಲವಾರು ಯಕ್ಷಗಾನ ತಂಡಗಳು, ಭಜನಾಮಂಡಳಿಗಳು, ಜಾತಿ ಸಂಘಟನೆಗಳು, ಕ್ರೀಡಾತಂಡಗಳಿದ್ದವು. ಮುಂಬೈ ಮತ್ತು ಕನ್ನಡದ ಸಂಬಂಧ ಹುಟ್ಟಿಬೆಳೆದು ಗಟ್ಟಿಗೊಳ್ಳುತ್ತಾ ಸಾಗಿದ್ದು ಹೀಗೆ.
ಆದರೆ ಪರಿಸ್ಥಿತಿ ಬದಲಾಗಿದೆ. ಮುನ್ಸಿಪಾಲಿಟಿ ಕನ್ನಡ ಶಾಲೆಗಳ ಸಂಖ್ಯೆ ಅರ್ಧಕ್ಕೆ ಇಳಿದಿದೆ, ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕನ್ನಡ ರಾತ್ರಿಶಾಲೆಗಳು ಕೂಡಾ ಒಂದೊಂದಾಗಿ ಮುಚ್ಚುತ್ತಿವೆ. ಮುಂಬೈನಲ್ಲಿರುವ ಯಾವ ಕನ್ನಡಿಗನೂ ತಮ್ಮ ಮಕ್ಕಳನ್ನು ಈ ಕನ್ನಡ ಶಾಲೆಗಳಿಗೆ ಕಳುಹಿಸುತ್ತಿಲ್ಲ. (ಹಾಗೆಂದು ನಿರೀಕ್ಷಿಸುವುದೂ ಮೂರ್ಖತನ) ಮುಂಬೈನ ರಾತ್ರಿ ಶಾಲೆಗಳಿಗೆ ಹೋಗುತ್ತಿದ್ದವರಲ್ಲಿ ಹೆಚ್ಚಿನವರು ಹೋಟೆಲ್ ಕಾರ್ಮಿಕರು. ಆದರೆ ರಾತ್ರಿ ಮುಚ್ಚುವ ಉಡುಪಿ ಹೊಟೇಲ್‌ಗಳಿಗಿಂತ, ರಾತ್ರಿ ತೆರೆಯುವ ಪರ್ಮಿಟ್ ರೂಮ್, ಲೇಡೀಸ್‌ಬಾರ್‌ಗಳೇ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಕಾರ್ಮಿಕರು ಯಾವ ಕನ್ನಡ ಶಾಲೆಗಳ ಕಡೆಯೂ ಸುಳಿಯುತ್ತಿಲ್ಲ.  ಇದರ ಜತೆಗೆ ಒಂದು ಕಾಲದಲ್ಲಿ ಕನ್ನಡದ ಕಾರ್ಯಕ್ರಮಗಳ ಕೇಂದ್ರವಾಗಿದ್ದ ಮುಂಬೈನ ಕೋಟೆ ಪ್ರದೇಶದಲ್ಲಿ ಕನ್ನಡದ ಕುಟುಂಬಗಳೇ ಇಲ್ಲ. ಅವರೆಲ್ಲ ಮುಂಬೈನ ಉಪನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ.  ಮುಂಬೈನ ಕನ್ನಡದ ಕಾರ್ಯಕ್ರಮಗಳಿಗೆ ಸಭಿಕರಾಗುತ್ತಿದ್ದ ಒಂದು ದೊಡ್ಡ ವರ್ಗ ಈ ಎಲ್ಲ ಕಾರಣಗಳಿಂದಾಗಿ ದೂರವಾಗಿದೆ.
ಭಾಷೆಯೊಂದು ಅನ್ನ ನೀಡದೆ ಹೋದರೆ ಅದು ಬೆಳೆಯಲಾರದು, ಉಳಿಯಲಾರದು ಎನ್ನುತ್ತಾರೆ. ಆದರೆ ಮುಂಬೈನಲ್ಲಿ ಕನ್ನಡ ಎನ್ನುವುದು ಎಂದೂ ಅನ್ನ ನೀಡುವ ಭಾಷೆಯಾಗಿರಲೇ ಇಲ್ಲ. ಅಲ್ಲಿ ಕನ್ನಡಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಬಹುಸಂಖ್ಯಾತ ಮಂದಿಯ ಮಾತೃಭಾಷೆ ಕನ್ನಡ ಅಲ್ಲ, ಅದು ತುಳು. ಮುಂಬೈ ಕನ್ನಡಿಗರಲ್ಲಿ ಬಹುಸಂಖ್ಯೆಯಲ್ಲಿ ಈಗಲೂ ಇರುವುದು ದಕ್ಷಿಣ ಕನ್ನಡಿಗರೇ. ಹವ್ಯಾಸ ರೂಪದಲ್ಲಿ ಕನ್ನಡವನ್ನು ಬೆಳೆಸಿದ ಈ ತುಳುವ ಕನ್ನಡಿಗರಲ್ಲಿದ್ದದ್ದು ಕನ್ನಡದ ಮೇಲಿನ ನಿಸ್ವಾರ್ಥ ಪ್ರೀತಿ ಅಷ್ಟೇ. ಮುಂಬೈನಲ್ಲಿ ಕನ್ನಡ ಸಂಘಟನೆಯ ಮೂಲಪುರುಷನೆನಿಸಿಕೊಂಡ ಕಣ್ಣಂಗಾರು ರಾಮ ಪಂಜಿ ಅವರ ಜೀವನವೇ ಇದಕ್ಕೆ ಸಾಕ್ಷಿ.
ಉಡುಪಿ ಜಿಲ್ಲೆಯ ಹೆಜಮಾಡಿಯಿಂದ 1858ರಲ್ಲಿ ಮುಂಬೈಗೆ ಓಡಿಹೋದ ಅನಕ್ಷರಸ್ಥನಾದ ಹದಿನಾಲ್ಕರ ಮೊಗವೀರ ಬಾಲಕ ರಾಮ ಪಂಜಿ ಮುಂದೆ ಕನ್ನಡವನ್ನು ಕಲಿತು ರಾಮಾಯಣ ಮತ್ತು ಮಹಾಭಾರತವನ್ನು ಅಧ್ಯಯನ ಮಾಡಿದವರು. ಇದಕ್ಕೆ ಮೇಲ್ಜಾತಿ ಜನರಿಂದ ವಿರೋಧ ಬಂದಾಗ ಈ ಮಹಾಕಾವ್ಯಗಳ ಅಧ್ಯಯನಕ್ಕೆಂದೇ ಶ್ರಿಮದ್ಭಾರತ ಮಂಡಳಿ ಸ್ಥಾಪಿಸಿದ್ದರು. ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಈ ಮಂಡಳಿ ಮುಂಬೈನ ಮೊದಲ ಕನ್ನಡ ಸಂಸ್ಥೆ. ನಂತರದ ದಿನಗಳಲ್ಲಿ ರಾಮಪಂಜಿ ಅವರು ‘ಶ್ರಿ ಶಂಕರ ಸಂಹಿತೆ’ ಮತ್ತು ‘ತುರಂಗ ಭಾರತ’ ಎಂಬ ಎರಡು ಗ್ರಂಥಗಳನ್ನು ಹಳೆಗನ್ನಡದಲ್ಲಿಯೇ ರಚಿಸಿದರು. ಇಂತಹ ಕನ್ನಡದ ಕಟ್ಟಾಳುಗಳನ್ನು ಈಗಿನ ಮುಂಬೈನಲ್ಲಿ ಕಾಣುವುದು ಕಷ್ಟ. ಹಳೆತಲೆಮಾರಿನ ದಕ್ಷಿಣ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಪ್ರೀತಿ ಇದೆ. ಆದರೆ ಅವರ ಕುಟುಂಬದಲ್ಲಿನ ಹೊಸ ತಲೆಮಾರಿಗೆ ಕನ್ನಡ ಬಾರದು. ಮನೆಯೊಳಗೆ ತುಳು, ಹೊರಗೆ ಹಿಂದಿ, ಇಂಗ್ಲಿಷ್, ಮರಾಠಿ.
ಮುಂಬೈನಲ್ಲಿ ಕನ್ನಡಿಗರ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ.

ಈಗಲೂ ಮುಂಬೈನಲ್ಲಿ ಕನ್ನಡಿಗರ ಜೈತ್ರಯಾತ್ರೆ ಮುಂದುವರಿದಿದೆ. ಅಲ್ಲಿರುವ ಸುಮಾರು 20 ಸಾವಿರ ಹೋಟೆಲ್‌ಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕನ್ನಡಿಗರ ಒಡೆತನದಲ್ಲಿವೆ. ಬ್ಯಾಂಕ್ ಮತ್ತಿತರ ಖಾಸಗಿ ಸಂಸ್ಥೆಗಳಲ್ಲಿಯೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಖ್ಯಾತ ನಟ, ನಿರ್ದೇಶಕ ಗುರುದತ್ ಅವರಿಂದ ಹಿಡಿದು ಇತ್ತೀಚಿನ ಐಶ್ಚರ್ಯ ರೈ ವರೆಗೆ ಬಾಲಿವುಡ್‌ನಲ್ಲಿ ಮಿಂಚಿಹೋದ ಮತ್ತು ಈಗಲೂ ಮಿಂಚುತ್ತಿರುವ ತಾರೆಗಳ ಪಟ್ಟಿ ಬೆಳೆಯುತ್ತಲೇ ಇದೆ. ರಾಜಕೀಯ ಕ್ಷೇತ್ರದಲ್ಲಿಯೂ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇವರೆಲ್ಲ ಕರ್ನಾಟಕದವರು ನಿಜ, ಆದರೆ ಕನ್ನಡಿಗರಲ್ಲ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಕನ್ನಡಿಗರೆಂದು ಹೇಳಿಕೊಂಡು ನಾವು ಮೆರೆದಾಡಿದರೂ ಮುಂಬೈನಲ್ಲಿ ಹುಟ್ಟಿಬೆಳೆದ ಅವರಿಗೆ ಕನ್ನಡ ಬರುವುದಿಲ್ಲ, ತುಳು ಗೊತ್ತು ಅಷ್ಟೇ. ಕನ್ನಡದ ಕಾರ್ಯಕ್ರಮಗಳಿಗೆ ಕೈಯೆತ್ತಿ ದೇಣಿಗೆ ಕೊಡುತ್ತಿರುವ ಕನ್ನಡಿಗ ಹೋಟೆಲ್ ಸೇಟ್‌ಗಳ ಮಕ್ಕಳ ಕತೆಯೂ ಇದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ನಿಧಾನವಾಗಿ ಮುಂಬೈ ಮತ್ತು ಕನ್ನಡದ ಕೊಂಡಿ ಕಳಚುತ್ತಿದೆ. ಮುಂಬೈನಲ್ಲಿರುವ ಸುಮಾರು 200 ಕನ್ನಡ ಸಂಸ್ಥೆಗಳಲ್ಲಿರುವ ಯಾರನ್ನೂ ಕೇಳಿದರೂ ಇದೇ ವಿಷಾದದ ರಾಗ ಹೊರಡಿಸುತ್ತಾರೆ. 
ಹಾಗಿದ್ದರೆ ಮುಂಬೈ ಕನ್ನಡಿಗರು ಏನು ಮಾಡುತ್ತಿದ್ದಾರೆ? ಹೊಟ್ಟೆಪಾಡಿನ ಕೆಲಸದ ಹೊರತಾಗಿಯೂ ಬೇರೆ ಯಾವ ಚಟುವಟಿಕೆಗಳಲ್ಲಿಯೂ ಭಾಗಿಯಾಗುತ್ತಿಲ್ಲವೇ? ಈ ಪ್ರಶ್ನೆಗೆ ಉತ್ತರ ಅಲ್ಲಿನ ಸ್ಥಳೀಯ ಕನ್ನಡ ದಿನಪತ್ರಿಕೆಗಳಲ್ಲಿನ ಕಾರ್ಯಕ್ರಮಗಳ ಪಟ್ಟಿಯ ಅಂಕಣದಲ್ಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಬಾಂದ್ರಾದಲ್ಲಿ ನಡೆಯುತ್ತಿದ್ದ ಜುಮಾದಿ ಭೂತದ ಕೋಲ ನೋಡಿ ಮೂಕವಿಸ್ಮಿತನಾಗಿದ್ದೆ. ಅಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ಕೆ.ಬಿ. ಕೋಟ್ಯಾನ್ ತಮ್ಮ ಕುಟುಂಬದ ದೈವ, ಜುಮಾದಿಯನ್ನು ಮುಂಬೈಗೆ ಎಳೆದುಕೊಂಡು ಬಂದು ತಮ್ಮ ಮನೆಯಲ್ಲಿಯೇ ‘ಸಾನ’ ನಿರ್ಮಿಸಿ ಕೋಲ ನಡೆಸುತ್ತಿದ್ದರು. ಅದೇ ಕಾಲದಲ್ಲಿ ಬೊರಿವಿಲಿಯಲ್ಲಿಯೂ ಬೈದರ್ಕಳ ನೇಮ ನಡೆಯುತ್ತಿತ್ತು. ಆದರೆ ಈಗ ನೇಮ, ಕೋಲ, ಬಲಿ, ಅಗೆಲ್, ಯಾವುದಕ್ಕೂ ದಕ್ಷಿಣಕನ್ನಡಿಗರು  ಊರಿಗೆ ಹೋಗಬೇಕಾಗಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹೆಚ್ಚುಕಡಿಮೆ ಎಲ್ಲ ಜನಪ್ರಿಯ ಭೂತಗಳನ್ನು ಅವರು ಮುಂಬೈಗೆ ಹೊತ್ತುಕೊಂಡು ಬಂದಿದ್ದಾರೆ. ಜುಮಾದಿ,ಜಾರಂದಾಯ, ಬೈದರ್ಕಳ, ಪಂಜುರ್ಲಿ, ಕಲ್ರುಟ್ಟಿ,ವರ್ತೆ... ಹೀಗೆ ಸಾಲುಸಾಲು ಭೂತಗಳ ಕೋಲ ಮುಂಬೈನಲ್ಲಿ ನಡೆಯುತ್ತಿದೆ. ಇದರ ಜತೆಗೆ ಗಲ್ಲಿಗಲ್ಲಿಯಲ್ಲಿ ಹುಟ್ಟಿಕೊಂಡಿರುವ ದರ್ಶನದ ಪಾತ್ರಿಗಳ ಮನೆಯಲ್ಲಿ ಜನ ಕಿಕ್ಕಿರಿದು ನೆರೆಯುತ್ತಿದ್ದಾರೆ. ಶನೀಶ್ವರ, ಸತ್ಯನಾರಾಯಣ, ಕಾಳಿ, ದುರ್ಗೆ ಪೂಜೆಗಳು, ಅಯ್ಯಪ್ಪ ಆರಾಧನೆಗಳು ನಿತ್ಯದ ಕಾರ್ಯಕ್ರಮಗಳಾಗಿವೆ.
ಎಲ್ಲ ವ್ಯಾಪಾರಿಗಳಂತೆ ದೈವಭೀರುಗಳಾಗಿರುವ ಇಲ್ಲಿನ ಹೋಟೆಲ್ ಸೇಟ್‌ಗಳು ಈ ಕಾರ್ಯಕ್ರಮಗಳಿಗೆ ನೀರಿನಂತೆ ಹಣ ಚೆಲ್ಲಿ ಪುಣ್ಯಸಂಪಾದನೆ ಮಾಡುತ್ತಿದ್ದಾರೆ. ಕನ್ನಡದಿಂದ ದೂರವಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬುದ್ದಿವಂತ ಕನ್ನಡಿಗರೆಲ್ಲ ಈ ಭೂತ, ದೈವ, ದೇವರ ಪದತಲದಲ್ಲಿದ್ದಾರೆ. ಮುಂಬೈನಿಂದ ಕಾಲು ಕೀಳುತ್ತಿರುವ ಕನ್ನಡವನ್ನು ಉಳಿಸಲು ದೇವರಿಗಾದರೂ ಮೊರೆ ಇಡೋಣವೆಂದರೆ ಮುಂಬೈ ಮಟ್ಟಿಗೆ ಆತನೂ ಕನ್ನಡ ವಿರೋಧಿ. 

Monday, February 14, 2011

ಸಿವಿಸಿ ಎಂಬ ಹಲ್ಲಿಲ್ಲದ ಸಂಸ್ಥೆ...!

ನಿರಂತರ ಚಾರಿತ್ರ್ಯಹನನಕ್ಕೆ ಈಡಾಗುತ್ತಿರುವ ಕೇಂದ್ರ ತನಿಖಾದಳ (ಸಿಬಿಐ)ದ ಬಗ್ಗೆ ಈಗ ಯಾರಿಗೂ ವಿಶ್ವಾಸ ಉಳಿದಿಲ್ಲ. ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮೇಲೆ ಕಣ್ಣಿಡಲು ಸ್ಥಾಪನೆಯಾಗಿರುವ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಈಗ ಅದೇ ಹಾದಿಯಲ್ಲಿದೆ.
ಭ್ರಷ್ಟಾಚಾರದ ಆರೋಪ ಹೊತ್ತಿರುವ ಪಿ.ಜೆ.ಥಾಮಸ್ ಅವರನ್ನು ಸಿವಿಸಿಯ ಮುಖ್ಯ ಆಯುಕ್ತರನ್ನಾಗಿ ನೇಮಿಸುವ ಮೂಲಕ ಈ ಸಂಸ್ಥೆಯ ಚಾರಿತ್ರ್ಯಹನನದ ಪ್ರಕ್ರಿಯೆಯನ್ನು ಹಿಂದಿನ ಎಲ್ಲ ಸರ್ಕಾರಗಳಂತೆ ಯುಪಿಎ ಸರ್ಕಾರ ಕೂಡಾ ಮುಂದುವರಿಸಿಕೊಂಡು ಹೋಗಿದೆ. ಒಂದೆಡೆ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಅನಿಯಂತ್ರಿತವಾಗಿ ಬೆಳೆಯುತ್ತಿದ್ದರೆ, ಇನ್ನೊಂದೆಡೆ ಅದರ ನಿಯಂತ್ರಣಕ್ಕೆಂದೇ ಹುಟ್ಟುಹಾಕಲಾದ ಸಂಸ್ಥೆಗಳು ಒಂದೊಂದಾಗಿ ವಿಶ್ವಾಸಾರ್ಹತೆ ಕಳೆದುಕೊಂಡು ಬಡಕಲಾಗುತ್ತಿವೆ.
ಇವೆಲ್ಲವೂ ಆಕಸ್ಮಿಕವಾಗಿ ನಡೆಯುತ್ತಿದೆಯೇ? ಇಲ್ಲ, ಆಡಳಿತ ಮತ್ತು ವಿರೋಧಪಕ್ಷಗಳೆರಡೂ ಪರಸ್ಪರ ಷಾಮೀಲಾಗಿ ಜನರ ಹಾದಿ ತಪ್ಪಿಸುತ್ತಿವೆಯೇ? ಎರಡನೆಯ ಅಭಿಪ್ರಾಯವನ್ನೇ ನಂಬಲು ಕಾರಣ ಇದೆ. ಯಾಕೆಂದರೆ ಈಗ ನಡೆಯಬೇಕಾಗಿರುವುದು ಸಿವಿಸಿಯನ್ನು ಹೇಗೆ ಬಲಪಡಿಸಬೇಕೆಂಬ ಬಗ್ಗೆ ಚಿಂತನೆ, ಆದರೆ ನಡೆಯುತ್ತಿರುವುದು ಅದರ ಮುಖ್ಯ ಆಯುಕ್ತರು ಪ್ರಾಮಾಣಿಕರು ಹೌದೋ, ಅಲ್ಲವೋ ಎನ್ನುವ ವ್ಯರ್ಥ ಚರ್ಚೆ. ಸಿವಿಸಿಗೆ ತಗಲಿರುವ ರೋಗದ ಮೂಲದ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ.
ಭ್ರಷ್ಟಾಚಾರದ ನಿಯಂತ್ರಣಕ್ಕೆ ಮಾರ್ಗೋಪಾಯಗಳನ್ನು ಸೂಚಿಸಲು ನೇಮಿಸಲಾಗಿದ್ದ ಸಂತಾನಂ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ 1964ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆ ಸಿವಿಸಿ. ಆದರೆ ಆಗಿನ ಕಾಂಗ್ರೆಸ್ ಸರ್ಕಾರ ಸಂತಾನಂ ಸಮಿತಿಯ ಶಿಫಾರಸುಗಳೆಲ್ಲವನ್ನೂ ಒಪ್ಪಿಕೊಂಡು ಸಿವಿಸಿಯನ್ನು ಸ್ಥಾಪಿಸಲಿಲ್ಲ. ಆದ್ದರಿಂದ ಸಿವಿಸಿ ಎನ್ನುವುದು ‘ಸಾರ್ವಜನಿಕ ಕ್ಷೇತ್ರದಲ್ಲಿರುವ ಉದ್ಯಮಗಳು ಮತ್ತು ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕೇಳಿಬರುವ ಅಕ್ರಮ ವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪಗಳ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ನೀಡುವ ಸ್ವತಂತ್ರ ಸಂಸ್ಥೆ’ ಅಷ್ಟೇ.
 ತನಗೆ ಬಂದ ದೂರುಗಳ ಬಗ್ಗೆ ವಿಚಾರಣೆಯನ್ನಷ್ಟೇ ನಡೆಸಲು ಸಾಧ್ಯ ಇರುವ ಸಿವಿಸಿಗೆ ತನಿಖೆ ನಡೆಸುವ ಅಧಿಕಾರ ಇಲ್ಲ. ಸಿವಿಸಿ ಪರಾವಲಂಬಿಯಾಗಿ ಹಲ್ಲಿಲ್ಲದ ಹಾವಿನಂತಾಗಲು ಇದೇ ಮುಖ್ಯ ಕಾರಣ. ಈ ಅಧಿಕಾರವನ್ನು ಸಿವಿಸಿಗೆ ಕೊಡಬೇಕೆಂದು ಸಂತಾನಂ ಸಮಿತಿ ಶಿಫಾರಸು ಮಾಡಿದ್ದರೂ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಇದರಿಂದಾಗಿ ಸಿವಿಸಿ ತನಗೆ ಬಂದ ದೂರುಗಳ ಬಗ್ಗೆ ತನಿಖೆಯ ಅವಶ್ಯಕತೆ ಕಂಡುಬಂದರೆ ಸಿಬಿಐಗೆ ಮೊರೆಹೋಗಬೇಕಾಗುತ್ತದೆ. ಆದ್ದರಿಂದ ಸಿವಿಸಿ ಹೆಸರಿಗಷ್ಟೇ ಸ್ವಾಯತ್ತ ಮತ್ತು ಸ್ವತಂತ್ರ, ವಾಸ್ತವದಲ್ಲಿ ಇದು ಸಲಹೆ ನೀಡುವ ಸರ್ಕಾರದ ಅಧೀನ ಸಂಸ್ಥೆ.
 ಸಿವಿಸಿಯನ್ನು ಹಲ್ಲಿಲ್ಲದ ಸಂಸ್ಥೆಯನ್ನಾಗಿ ಮಾಡಿರುವ ಪಾಪ ಕೇವಲ ಕಾಂಗ್ರೆಸಿನದ್ದಲ್ಲ, ಅದು ದೀರ್ಘವಾದ ತನ್ನ ಅಧಿಕಾರಾವಧಿಯಲ್ಲಿ ಅನೇಕ ಸಂವಿಧಾನಬದ್ದ ಸಂಸ್ಥೆಗಳನ್ನು ಈ ರೀತಿ ದುರ್ಬಲಗೊಳಿಸುತ್ತಲೇ ಬಂದಿದೆ. ಈ ಪ್ರಯತ್ನವನ್ನು ವಿಫಲಗೊಳಿಸಿ ಸಿವಿಸಿಯನ್ನು ಬಲಪಡಿಸುವ ಅವಕಾಶ ಈಗಿನ ವಿರೋಧಪಕ್ಷವಾದ ಬಿಜೆಪಿಗೆ ಹಿಂದೆ ಒದಗಿಬಂದಿತ್ತು. ಆದರೆ ಅದು ಕೂಡಾ ಕಾಂಗ್ರೆಸ್ ಪಾಪವನ್ನೇ ನಿಷ್ಠೆಯಿಂದ ಮುಂದುವರಿಸಿಕೊಂಡು ಹೋಯಿತು.
ಇದನ್ನು ತಿಳಿದುಕೊಳ್ಳಬೇಕಾದರೆ ಹವಾಲ ಹಗರಣಕ್ಕೆ ಸಂಬಂಧಿಸಿದ ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1997ರ ಡಿಸೆಂಬರ್ ಹದಿನೆಂಟರಂದು ನೀಡಿದ್ದ ಐತಿಹಾಸಿಕ ತೀರ್ಪನ್ನು ಒಮ್ಮೆ ಓದಬೇಕು. ಹವಾಲ ಹಗರಣದ ಹಿನ್ನೆಲೆಯಲ್ಲಿ ಬೆಳೆಯುತ್ತಿರುವ ಭ್ರಷ್ಟಾಚಾರದ ಹಗರಣಗಳ ಬಗ್ಗೆ ಕಳವಳಕ್ಕೆಡಾಗಿದ್ದ ಸುಪ್ರೀಂಕೋರ್ಟ್ ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ನೆರವಾಗಲೆಂದೇ ಆ ತೀರ್ಪು ನೀಡಿದ್ದು.

ಆ ತೀರ್ಪು ಯಥಾವತ್ತಾಗಿ ಅನುಷ್ಠಾನಕ್ಕೆ ಬಂದಿದ್ದರೆ ಪಿ.ಜೆ.ಥಾಮಸ್ ಅವರಂತಹ ಕಳಂಕಿತರು ಮುಖ್ಯ ಆಯುಕ್ತರ ಸ್ಥಾನವನ್ನು ಅಪವಿತ್ರಗೊಳಿಸಲು ಅವಕಾಶವೇ ಇರುತ್ತಿರಲಿಲ್ಲ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿಯವರಂತಹವರು ಆಗಲೇ ತಮ್ಮ ಪಕ್ಷದ ನಾಯಕರ ಮೇಲೆ ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಕ್ಕೆ ಒತ್ತಡ ಹೇರಿದ್ದರೆ ಈಗಿನಂತೆ ಕಂಠಶೋಷಣೆ ಮಾಡಬೇಕಾದ ಅಗತ್ಯವೂ ಇರುತ್ತಿರಲಿಲ್ಲ. ಯಾಕೆಂದರೆ ಆ ಕಾಲದಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ.
ಸ್ಥಾನಗಳು ಬದಲಾದರೂ ಈಗಿನ ರಾಜಕೀಯ ಪಕ್ಷಗಳ ಆಳದಲ್ಲಿರುವ ಜನದ್ರೋಹದ ಮೂಲಗುಣ ಬದಲಾಗುವುದಿಲ್ಲ ಎನ್ನುವುದಕ್ಕೂ ಸುಪ್ರೀಂಕೋರ್ಟ್ ತೀರ್ಪಿನ ನಂತರದ ಘಟನಾವಳಿಗಳು ಸಾಕ್ಷಿ. ಸಿವಿಸಿ ಸುಧಾರಣೆಗೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ನೀಡಿದ್ದ ನಿರ್ದೇಶನಗಳ ಬಗ್ಗೆ ಅಭಿಪ್ರಾಯ ನೀಡುವಂತೆ ಅಟಲಬಿಹಾರಿ ವಾಜಪೇಯಿ ಸರ್ಕಾರ ಕಾನೂನು ಆಯೋಗವನ್ನು ಕೇಳಿಕೊಂಡದ್ದು 1998ರ ಏಪ್ರಿಲ್ ಎಂಟರಂದು.
ಐದೇ ದಿನಗಳಲ್ಲಿ ಆಯೋಗ ತನ್ನ ಅಭಿಪ್ರಾಯವನ್ನು ನೀಡಿ ಸುಪ್ರೀಂಕೋರ್ಟ್ ತೀರ್ಪನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಹಮತ ವ್ಯಕ್ತಪಡಿಸಿತ್ತು. ಆದರೆ ಒಂದು ವಾರದ ನಂತರ ನಡೆದ ಸಂಪುಟ ಸಭೆಯಲ್ಲಿ ಕಾನೂನು ಆಯೋಗದ ವರದಿಯನ್ನು ಮುಚ್ಚಿಟ್ಟು ಸರ್ಕಾರದ ಕಾರ್ಯದರ್ಶಿಗಳು ಕೂಡಿ ತಯಾರಿಸಿದ ಅರೆಬೆಂದ ವರದಿಯನ್ನು ಎನ್‌ಡಿಎ ಸರ್ಕಾರ ಮಂಡಿಸಿತ್ತು. ಕೊನೆಗೂ ‘ಕೇಂದ್ರ ಜಾಗೃತ ಆಯೋಗ ಮಸೂದೆ, 1999’ ಮಸೂದೆ ಸಿದ್ದವಾಗುವಷ್ಟರಲ್ಲಿ ಲೋಕಸಭೆಯೇ ವಿಸರ್ಜನೆಗೊಂಡಿತು.
ಮರಳಿ ಅಧಿಕಾರಕ್ಕೆ ಬಂದ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸದಾಗಿ ‘ಕೇಂದ್ರ ಜಾಗೃತ ಆಯೋಗ 1999’ ಮಸೂದೆಯನ್ನು ಸಿದ್ದಗೊಳಿಸಿ ಶರದ್‌ಪವಾರ್ ಅಧ್ಯಕ್ಷತೆಯ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಿತು. ಆ ಮಸೂದೆಯಲ್ಲಿ ಕೂಡಾ ಸುಪ್ರೀಂಕೋರ್ಟ್ ತೀರ್ಪಿನ ನಿರ್ದೇಶನವನ್ನು ಪಾಲಿಸಿರಲಿಲ್ಲ. ಕೊನೆಗೂ 2003ರಲ್ಲಿ ಕೇಂದ್ರ ಜಾಗೃತ ಆಯೋಗ ಕಾಯಿದೆ ಜಾರಿಗೆ ಬಂತು. ಆದರೆ ಅದರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರಮುಖ ಅಂಶಗಳನ್ನು ಒಂದೋ ಕೈಬಿಡಲಾಗಿತ್ತು, ಇಲ್ಲವೇ ತಿರುಚಲಾಗಿತ್ತು.
ಇವುಗಳಲ್ಲಿ ಪ್ರಮುಖವಾದುದು ಸುಪ್ರೀಂಕೋರ್ಟ್ ರದ್ದುಪಡಿಸಬೇಕೆಂದು ಸ್ಪಷ್ಟವಾಗಿ ಹೇಳಿದ್ದ ‘ಏಕನಿರ್ದೇಶನ’ವನ್ನು ಮತ್ತೆ ಜಾರಿಗೆ ತಂದದ್ದು. ಈ ‘ಏಕನಿರ್ದೇಶನ’ದ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ  ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಹಿರಿಯ ಅಧಿಕಾರಿಗಳ ಬಗ್ಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಅನ್ವಯ ಪ್ರಕರಣ ದಾಖಲುಮಾಡಿಕೊಂಡು ವಿಚಾರಣೆಯನ್ನಾಗಲಿ ತನಿಖೆಯನ್ನಾಗಲಿ ಸಿಬಿಐ ನಡೆಸುವಂತಿಲ್ಲ.
ಅಂದರೆ ಅಂತಹ ಪ್ರಕರಣಗಳನ್ನು ತನಿಖೆಗೆಂದು ಸಿವಿಸಿ ಸಿಬಿಐಗೆ ಒಪ್ಪಿಸಿದರೂ, ಸಿಬಿಐ ತನಿಖೆಮಾಡಲು ಕೇಂದ್ರ ಸರ್ಕಾರದ ಅನುಮತಿ ಕೇಳಬೇಕಾಗುತ್ತದೆ. ಈ ಬದಲಾವಣೆಯನ್ನು ಜೆಪಿಸಿ ಸದಸ್ಯರಾಗಿದ್ದ ಕುಲದೀಪ್ ನಯ್ಯರ್ ಬಲವಾಗಿ ವಿರೋಧಿಸಿದ್ದರು.‘ಏಕನಿರ್ದೇಶನ’ವನ್ನು ಜಾರಿಗೆ ತರುವುದರಿಂದ ರಾಜಕೀಯ ಒಡೆಯರ ಸೇವೆಗೆ ನಿಂತಿರುವ ಅಧಿಕಾರಿಗಳಿಗೆ ರಕ್ಷಣೆ ನೀಡಿದಂತಾಗುತ್ತದೆ. ಭ್ರಷ್ಟ ಅಧಿಕಾರಿಗಳು ತಮಗೆ ಇರುವ ರಾಜಕೀಯ ರಕ್ಷಣೆಯಿಂದ ಇನ್ನಷ್ಟು ಭ್ರಷ್ಟರಾಗಿ ಹೋಗುತ್ತಾರೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು. ಆದರೆ ವಾಜಪೇಯಿ ಸರ್ಕಾರ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಎರಡನೆಯದಾಗಿ ಸಿವಿಸಿಗೆ ಕಾನೂನುಬದ್ಧ ಸ್ಥಾನಮಾನ ನೀಡಿ ಅದಕ್ಕೆ ಸಿಬಿಐ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯ ಹೊಣೆಯನ್ನು ಒಪ್ಪಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಸಿಬಿಐ ತನಿಖೆಗೆ ನಡೆಸುತ್ತಿರುವ ಪ್ರಕರಣಗಳ ವಿವರ ಮತ್ತು ಅವುಗಳ ತನಿಖೆಯ ಪ್ರಗತಿ ಹಾಗೂ ಆರೊಪ ಪಟ್ಟಿ ಸಲ್ಲಿಸಿದ ಪ್ರಕರಣಗಳು ಮತ್ತು ಅವುಗಳ ತನಿಖೆಯ ಪ್ರಗತಿಯ ವರದಿಯನ್ನು ಕಾಲಕಾಲಕ್ಕೆ ಸಿವಿಸಿಗೆ ಒಪ್ಪಿಸಬೇಕು ಎನ್ನುವುದು ಸುಪ್ರೀಂಕೋರ್ಟ್ ನಿರ್ದೇಶನ. ಈ ಮೂಲಕ ಸಿಬಿಐ ಅನ್ನು ಕೂಡಾ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬುದು ಸುಪ್ರೀಂಕೋರ್ಟ್ ಆಶಯವಾಗಿತ್ತು. ಆದರೆ ಹೊಸ ಮಸೂದೆಯಲ್ಲಿ ಈ ಅಂಶವನ್ನು ಕೈಬಿಡಲಾಗಿದೆ. 1988ರ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ದಾಖಲು ಮಾಡಿಕೊಂಡ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆಯ ಮಾಹಿತಿಯನ್ನಷ್ಟೇ ಸಿವಿಸಿಗೆ ನೀಡಬೇಕೆಂದು ಹೊಸ ಕಾನೂನು ಹೇಳಿದೆ.
ಮೂರನೆಯದಾಗಿ, ಸಿವಿಸಿ ವ್ಯಾಪ್ತಿಯಲ್ಲಿ ಬರುವ ‘ಸರ್ಕಾರಿ ನೌಕರ’ (ಪಬ್ಲಿಕ್  ಸರ್ವೆಂಟ್) ಶಬ್ದದ ವ್ಯಾಖ್ಯೆಯನ್ನೇ ಹೊಸ ಕಾನೂನಿನಲ್ಲಿ ಬದಲಾಯಿಸಲಾಗಿದೆ. ಕೇಂದ್ರದಲ್ಲಿ ಉದ್ಯೋಗದಲ್ಲಿರುವ ಅಖಿಲಭಾರತ ಸೇವೆಯ ಮತ್ತು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ನಿಗಮ, ಕಂಪೆನಿ ಮತ್ತು ಸೊಸೈಟಿಯಲ್ಲಿನ ಗ್ರೂಫ್ ‘ಎ’ ನೌಕರರು ಮಾತ್ರ ಸಿವಿಸಿ ಕಾರ್ಯವ್ಯಾಪ್ತಿಯಲ್ಲಿ ಬರುತ್ತಾರೆ ಎನ್ನುವುದು ಹೊಸ ಕಾನೂನಿನ ವ್ಯಾಖ್ಯಾನ. ಈ ಮೂಲಕ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್ ಎರಡರ ಪ್ರಕಾರ ‘ಸರ್ಕಾರಿ ನೌಕರ’ರ ವ್ಯಾಪ್ತಿಯಲ್ಲಿ ಬರುವ ರಾಜಕಾರಣಿಗಳನ್ನು ಸಿವಿಸಿ ಕಾರ್ಯವ್ಯಾಪ್ತಿಯಿಂದ ಹೊರಗಿಡಲಾಗಿದೆ.
ನಾಲ್ಕನೆಯದಾಗಿ ಸಿವಿಸಿಯ ಮುಖ್ಯ ಆಯುಕ್ತರನ್ನಾಗಿ ನೇಮಕ ಮಾಡಲಾಗುವ ವ್ಯಕ್ತಿಗೆ ಇರಬೇಕಾದ ಅರ್ಹತೆಯ ಮಟ್ಟವನ್ನೇ ಹೊಸ ಕಾನೂನು ಕೆಳಗಿಳಿಸಿದೆ. ‘ ಕೇಂದ್ರ ಸಂಪುಟ ಕಾರ್ಯದರ್ಶಿ ರಚಿಸಿರುವ ‘ಅದ್ವಿತಿಯ’ ಮತ್ತು ‘ದೋಷರಹಿತ ಪ್ರಾಮಾಣಿಕತೆ’ ಸರ್ಕಾರಿ ಅಧಿಕಾರಿಗಳು ಮತ್ತು ಇತರರ ಪಟ್ಟಿಯಲ್ಲಿನ ಒಂದು ಹೆಸರನ್ನು  ಪ್ರಧಾನಮಂತ್ರಿ, ಗೃಹಸಚಿವ ಮತ್ತು ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕರನ್ನೊಳಗೊಂಡಿರುವ ಸಮಿತಿ ಆಯ್ಕೆ ಮಾಡಿ ಸಿವಿಸಿಯ ಮುಖ್ಯ ಆಯುಕ್ತರ ಸ್ಥಾನಕ್ಕೆ ನೇಮಿಸ  ಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಹೊಸ ಕಾನೂನು ‘ಅದ್ವಿತಿಯ’ ಮತ್ತು ‘ದೋಷರಹಿತ ಪ್ರಾಮಾಣಿಕತೆ’ ಎಂಬ ಅರ್ಹತೆಗಳನ್ನು ಕೈಬಿಡಲಾಗಿದೆ. ಈ ಅರ್ಹತೆಯನ್ನು ಉಳಿಸಿಕೊಂಡಿದ್ದರೆ ಬಹುಶಃ ಪಿ.ಜೆ.ಥಾಮಸ್ ಅವರಂತಹ ಕಳಂಕಿತರು ಸಿವಿಸಿಯ ಮುಖ್ಯ ಆಯುಕ್ತರಾಗಿ ಆಯ್ಕೆಯಾಗುತ್ತಿರಲಿಲ್ಲವೇನೋ?
ಈ ರೀತಿ ದುರ್ಬಲಗೊಳಿಸುತ್ತಲೇ ಬರಲಾದ ಕೇಂದ್ರ ಜಾಗೃತ ಆಯೋಗಕ್ಕೆ ಒಬ್ಬ ಶುದ್ಧ ಚಾರಿತ್ರ್ಯದ, ಪ್ರಾಮಾಣಿಕ ಅಧಿಕಾರಿಯನ್ನು ತಂದು  ಮುಖ್ಯ ಆಯುಕ್ತರ ಕುರ್ಚಿಯಲ್ಲಿ ಕೂರಿಸಿದರೂ ಅವರಿಂದ ಹೆಚ್ಚೇನೂ ಮಾಡಲು ಸಾಧ್ಯವಾಗದು. ಅದಕ್ಕಾಗಿ ಮೊದಲು ಸಿವಿಸಿಯನ್ನು ಬಲಪಡಿಸುವ ಕೆಲಸ ನಡೆಯಬೇಕಾಗಿದೆ.   ಅದು ಯಾವ ಸರ್ಕಾರಕ್ಕೂ ಬೇಕಾಗಿಲ್ಲ.