Monday, July 16, 2012

ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ July 09, 2012


ದಿನಾಂಕ: ಜೂನ್ 2, 2008, ಸ್ಥಳ: ದೆಹಲಿಯ  `26, ತುಘಲಕ್ ಕ್ರೆಸೆಂಟ್`ನಲ್ಲಿರುವ ಲೋಕಸಭಾ ಸದಸ್ಯ ಅನಂತಕುಮಾರ್ ಮನೆ. ಕರ್ನಾಟಕದಲ್ಲಿ ಬಿಜೆಪಿಯ ವಿಜಯೋತ್ಸವದ ಕಾವು ಇನ್ನೂ ಆರಿರಲಿಲ್ಲ, ಆಗಲೇ ಭಿನ್ನಮತದ ಕಿಡಿ ಹಾರಿತ್ತು.

`ಜಗದೀಶ್ ಶೆಟ್ಟರ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ` ಎಂದು ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿದ್ದರು,  `ಸಚಿವನನ್ನಾಗಿ ಮಾಡಿದರೆ ಸರಿ, ವಿಧಾನಸಭಾ ಅಧ್ಯಕ್ಷ ಖಂಡಿತ ಆಗಲಾರೆ` ಎಂದು ಶೆಟ್ಟರ್ ಹಟ ಹಿಡಿದು ಕೂತಿದ್ದರು.

ಅನಂತ ಕುಮಾರ್‌ಮನೆಯಲ್ಲಿ  ಆ ದಿನ ಸಂಜೆ ಶೆಟ್ಟರ್ ಹೆಚ್ಚುಕಡಿಮೆ `ಗೃಹಬಂಧನ`ದಲ್ಲಿದ್ದರು. ಅಲ್ಲಿದ್ದ ಇತರರೆಂದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ, ಥಿಂಕ್‌ಟ್ಯಾಂಕ್ ಸದಸ್ಯ ವಾಮನಾಚಾರ್ ಮತ್ತು ಸಂಸದ ಪ್ರಹ್ಲಾದ ಜೋಷಿ. ಮಧ್ಯಾಹ್ನವೇ ಎಲ್.ಕೆ.ಅಡ್ವಾಣಿ ಮನೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿತ್ತು.

ಸಂಜೆಯ ಮಾತುಕತೆಯ ಫಲಿತಾಂಶ ತಿಳಿಯಲು ಗೇಟ್ ಬಳಿ ಕಾಯುತ್ತಿದ್ದ ಪತ್ರಕರ್ತರ ಒತ್ತಾಯಕ್ಕೆ ಮಣಿದು ಹೊರ ಬಂದ ಶೆಟ್ಟರ್ ಅವರ ಕಳಾಹೀನ ಮುಖವೇ ಒಳಗೆ ನಡೆಯುತ್ತಿದ್ದುದನ್ನು ಹೇಳಿತ್ತು. `ಎಲ್ಲವೂ ಪಕ್ಷದ ಹಿರಿಯ ನಾಯಕರ ಕೈಯಲ್ಲಿದೆ, ನನ್ನ ತೀರ್ಮಾನದಲ್ಲಿ ಬದಲಾವಣೆ ಇಲ್ಲ` ಎಂದು ಚುಟುಕಾಗಿ ಪ್ರತಿಕ್ರಿಯಿಸಿ  ಮರುಪ್ರಶ್ನೆಗೂ ಕಿವಿಗೊಡದೆ ಅವರು ಮನೆಯೊಳಗೆ ಹೋಗಿ ಸೇರಿಕೊಂಡಿದ್ದರು.

ಮಧ್ಯರಾತ್ರಿ ಹೊತ್ತಿಗೆ ನನಗೆ ಪೋನ್‌ಗೆ ಸಿಕ್ಕ ಶೆಟ್ಟರ್ `ಪಕ್ಷದ ವರಿಷ್ಠರ ಆದೇಶಕ್ಕೆ ತಲೆಬಾಗಿದ್ದೇನೆ` ಎಂದಷ್ಟೇ ಹೇಳಿ ಮಾತು ಮುಗಿಸಲು ಪ್ರಯತ್ನಿಸಿದ್ದರು. ಇನ್ನಷ್ಟು ಕಾಡಿದಾಗ ಕಳೆದೆರಡು ವರ್ಷಗಳಲ್ಲಿ ತಮಗೆ ಆಗಿರುವ ಅನ್ಯಾಯ-ಅವಮಾನಗಳ ವಿವರಗಳನ್ನೆಲ್ಲ ಬಿಚ್ಚಿಟ್ಟಿದ್ದರು. ಯಡಿಯೂರಪ್ಪನವರು ವಿಶೇಷ ಆಸಕ್ತಿ ವಹಿಸಿ ಜೆಡಿ (ಯು)ನಲ್ಲಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದು ಮಾತ್ರವಲ್ಲ ಮೊದಲ ಕಂತಿನಲ್ಲಿಯೇ ಅವರನ್ನು ಸಚಿವರನ್ನಾಗಿ ಮಾಡಿದ್ದು ಶೆಟ್ಟರ್ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿತ್ತು. ಹುಬ್ಬಳ್ಳಿ-ಧಾರವಾಡದ ಭಾಗದಲ್ಲಿ  ಪ್ರತಿಸ್ಪರ್ಧಿಯೊಬ್ಬನನ್ನು ಹುಟ್ಟುಹಾಕಿ ತಮ್ಮ ವರ್ಚಸ್ಸನ್ನು ಕುಂದಿಸುವ ದುರುದ್ದೇಶದಿಂದಲೇ ಹೀಗೆ  ಮಾಡಲಾಗಿದೆ ಎಂದು ಅವರು ತಿಳಿದುಕೊಂಡಿದ್ದರು. `ಅವರೇ (ಯಡಿಯೂರಪ್ಪ) ಲೀಡರ್, ನಾನಲ್ಲ.

ಅದನ್ನು ನಾನು ಮಾತ್ರವಲ್ಲ ರಾಜ್ಯದ ಮತದಾರರು ಒಪ್ಪಿಕೊಂಡಿದ್ದಾರೆ.  ಹೀಗಿದ್ದರೂ ನನ್ನ ಮೇಲೆ ಯಾಕೆ ದ್ವೇಷ ಸಾಧಿಸುತ್ತಾರೋ? ಅವರಿಗೆ ಯಾಕೆ ಇಷ್ಟೊಂದು `ಇನ್‌ಸೆಕ್ಯುರಿಟಿ`ಯೋ ಗೊತ್ತಿಲ್ಲ` ಎಂದು ಅವರು ನೋವಿನಿಂದ ಹೇಳಿದ್ದರು. ಅದರ ನಂತರ ನಡೆದುದೆಲ್ಲವೂ ಈಗ ಇತಿಹಾಸ.

ಆ ನಾಟಕೀಯ ವಿದ್ಯಮಾನ ನಡೆದು ಸರಿಯಾಗಿ ನಾಲ್ಕುವರ್ಷಗಳು ಕಳೆದಿವೆ. ಇತಿಹಾಸದ ಚಕ್ರ ಈಗ  ಸುತ್ತು ಪೂರ್ಣಗೊಳಿಸಿದೆ. ಅದೇ ಅನಂತಕುಮಾರ್ ಮನೆಯ `ರಂಗಸ್ಥಳ` ಮತ್ತು ಹೆಚ್ಚುಕಡಿಮೆ ಅದೇ ಪಾತ್ರಧಾರಿಗಳು. ಆದರೆ ನಾಟಕದ ಕತೆ ಮಾತ್ರ ಸಂಪೂರ್ಣ ತದ್ವಿರುದ್ಧ. ಶೆಟ್ಟರ್ ಅವರನ್ನು ಸಂಪುಟಕ್ಕೂ ಸೇರಿಸಬಾರದೆಂದು ರಚ್ಚೆಹಿಡಿದು ಕೂತಿದ್ದ ಯಡಿಯೂರಪ್ಪನವರು  ಅವರನ್ನು ಮುಖ್ಯಮಂತ್ರಿ ಮಾಡಲೇ ಬೇಕೆಂಬ  ಜಿದ್ದಾಜಿದ್ದಿ ನಡೆಸಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ತನ್ನ `ದೇವಪಿತ` (ಗಾಡ್‌ಫಾದರ್)ನಂತೆ ಅವತರಿಸಿರುವ ಯಡಿಯೂರಪ್ಪನವರ ಬಗ್ಗೆ ಶೆಟ್ಟರ್ ಮನಸ್ಸಲ್ಲಿ ಈಗ ಏನಿದೆ ಎನ್ನುವುದು ಗೊತ್ತಿಲ್ಲ. ಈ ಇತಿಹಾಸದ ಬೆಳಕಿನಿಂದ ವರ್ತಮಾನದ ವಿದ್ಯಮಾನಗಳನ್ನು ನೋಡಿದರೆ ರಾಜ್ಯದ ಬಿಜೆಪಿ ಸರ್ಕಾರದ ಭವಿಷ್ಯ ನುಡಿಯುವುದು ಬಹಳ ಕಷ್ಟದ ಕೆಲಸ ಅಲ್ಲ.

ವರ್ತಮಾನಕ್ಕೆ ಬರೋಣ. ಡಿ.ವಿ.ಸದಾನಂದ ಗೌಡರನ್ನು ಬದಲಾಯಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ  ಬಿಜೆಪಿಯೊಳಗಿನ ಬಿಕ್ಕಟ್ಟು ಶಾಶ್ವತ ಪರಿಹಾರ ಕಾಣಲಿದೆ ಎಂದು ಯಾರಾದರೂ ಹೇಳಿದರೆ ಅವರನ್ನು ಸುಳ್ಳುಗಾರರೆಂದೂ,  ಈ ಹೇಳಿಕೆಯನ್ನು ಯಾರಾದರೂ ನಂಬುತ್ತೇನೆ ಎಂದು ಹೇಳಿದರೆ ಅವರನ್ನು ಮೂರ್ಖರೆಂದೂ ಕರೆಯಬೇಕಾಗುತ್ತದೆ. ಸಮಸ್ಯೆಯನ್ನು ಬಗೆಹರಿಸಲು ಹೊರಡುವವರು ಮೊದಲು ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಡಯಾಗ್ನಿಸಿಸ್ ತಪ್ಪು ಆಗಿಬಿಟ್ಟರೆ ಚಿಕಿತ್ಸೆಯೂ ತಪ್ಪಾಗಿ ರೋಗ ಉಲ್ಬಣಗೊಳ್ಳುತ್ತದೆಯೇ ಹೊರತು ಗುಣವಾಗುವುದಿಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವುದು ಈ `ರಾಂಗ್ ಡಯಾಗ್ನಿಸಿಸ್`. ಆ ಪಕ್ಷದ ಸಮಸ್ಯೆ ಸದಾನಂದ ಗೌಡ, ಈಶ್ವರಪ್ಪ, ಶೆಟ್ಟರ್..ಇವರ‌್ಯಾರೂ ಅಲ್ಲ. ಅದರ ಹೆಸರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಗಾಯಕ್ಕೆ ಔಷಧ ಹಚ್ಚದೆ ನೋವುನಿವಾರಕ ಗುಳಿಗೆ ನೀಡಿ ಮಲಗಿಸಿದ ಹಾಗೆ ಆಗುತ್ತದೆ, ಗಾಯ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಗೌಡರ ಪದಚ್ಯುತಿ, ಶೆಟ್ಟರ್ ನೇಮಕ, ಜತೆಗೊಬ್ಬ ಉಪಮುಖ್ಯಮಂತ್ರಿ, ಸಂಪುಟ ಪುನರ‌್ರಚನೆ ಮೊದಲಾದ ಯಾವುದೇ ಔಷಧಿಯಿಂದ ಬಿಜೆಪಿಯನ್ನು ಕಾಡುತ್ತಿರುವ ಭಿನ್ನಮತದ ರೋಗವನ್ನು ಕನಿಷ್ಠ ಮುಂದಿನ ಚುನಾವಣೆವರೆಗೂ ಗುಣಪಡಿಸಲು ಸಾಧ್ಯವಾಗಲಾರದು. ಇವೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ.

ನಾಲ್ಕು ವರ್ಷಗಳ ಹಿಂದೆ ಯಡಿಯೂರಪ್ಪನವರು ಒಂದು ರಾಜ್ಯ ಗೆದ್ದುಕೊಂಡು ಬಂದ ವೀರನಾಯಕನಾಗಿದ್ದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸುವ ಅವಕಾಶವನ್ನು ತಂದುಕೊಟ್ಟ ಅವರು ಪಕ್ಷದ ಪಾಲಿನ ಭಾಗ್ಯವಿಧಾತರಾಗಿದ್ದರು. ರಾಜಕೀಯ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದ ಆ ದಿನಗಳಲ್ಲಿ `ನೂರು ಶೆಟ್ಟರ್, ಸಾವಿರ ಈಶ್ವರಪ್ಪ, ಲಕ್ಷ ಅನಂತಕುಮಾರ್‌ನಂತಹವರು ಎದುರುನಿಂತರೂ ನಿಭಾಯಿಸಿಕೊಂಡುಹೋಗಬಲ್ಲೆ` ಎಂಬ ಆತ್ಮವಿಶ್ವಾಸವನ್ನು ಅವರು ಪ್ರದರ್ಶಿಸಬೇಕಾಗಿತ್ತು. ಆದರೆ ಯಡಿಯೂರಪ್ಪ ಅವರಿಗೆ ಶೆಟ್ಟರ್ ಅವರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಕಂಟಕವಾಗಬಲ್ಲ ಶತ್ರು ಕಾಣತೊಡಗಿದ್ದ. ವಿರೋಧ ಪಕ್ಷದ ನಾಯಕರಾಗಿ ಆತ್ಮವಿಶ್ವಾಸದಿಂದ ರಾಜಕೀಯ ಮಾಡುತ್ತಾ ಬಂದಿದ್ದ ಯಡಿಯೂರಪ್ಪನವರು ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಹೊತ್ತಿಗೆ ಅಸುರಕ್ಷತೆಯ ಭಾವನೆಯಿಂದ ನರಳತೊಡಗಿದ್ದೇ ಅವರ, ಪಕ್ಷದ ಮತ್ತು ರಾಜ್ಯದ ಜನತೆಯ ಪಾಲಿನ ದುರಂತ.

ಅಂದು ಅವರನ್ನು ಕಾಡಿದ ಅಸುರಕ್ಷತೆಯ ಹಳವಂಡ ಮುಂದುವರಿಯುತ್ತಲೇ ಬಂದು ಈಗ ಸದಾನಂದ ಗೌಡರ ತಲೆದಂಡ ಕೇಳುತ್ತಿದೆ. ತಲೆಗೆ ಹತ್ತಿರುವ ಅದರ ಸವಾರಿ ಇಲ್ಲಿಗೆ ನಿಂತುಬಿಡುತ್ತದೆ ಎಂದು ಹೇಳುವ ಹಾಗಿಲ್ಲ. ಸದಾನಂದ ಗೌಡರು ರಹಸ್ಯ ಮತದಾನದ ಮೂಲಕ ಶಾಸಕಾಂಗ ಪಕ್ಷದ ನಾಯಕರಾದವರು, ಆ ದೃಷ್ಟಿಯಿಂದ ನೋಡಿದರೆ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪನವರಲ್ಲ. ಆದರೆ ಅವರ ಬೆಂಬಲ ಇಲ್ಲದೆ ಇದ್ದರೆ ಗೌಡರು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದೂ ನಿಜ.

ಯಡಿಯೂರಪ್ಪನವರಿಗೆ ಇಂತಹದ್ದೊಂದು ನಂಬಿಕೆ ಗೌಡರ ಮೇಲೆ ಹುಟ್ಟಲು ಕಾರಣ ಇಬ್ಬರ ನಡುವಿನ ದೀರ್ಘಕಾಲದ ಒಡನಾಟ. ಈ ರೀತಿ ತಮಗೆ ವಿಧೇಯರಾಗಿದ್ದ, ಒಕ್ಕಲಿಗರೆಂದು ಕರೆಸಿಕೊಂಡರೂ ಪೂರ್ಣರೂಪದ ಒಕ್ಕಲಿಗರಲ್ಲದ, ಸೌಮ್ಯ ಸ್ವಭಾವದ ಸದಾನಂದ ಗೌಡರನ್ನೇ ಯಡಿಯೂರಪ್ಪನವರು ನಂಬಲಿಲ್ಲ ಎಂದ ಮೇಲೆ, ತಮ್ಮಂತೆಯೇ ಜಾತಿ ಬಲ ಹೊಂದಿರುವ, ಯಾರಿಗೂ ಪೂರ್ಣವಾಗಿ ವಿಧೇಯರಾಗಿ ಉಳಿಯದೆ ಇರುವ,  ಹಳೆಯ ದ್ವೇಷದ ಸೇಡು ತೀರಿಸಿಕೊಳ್ಳಲು ಅವಕಾಶ ಇರುವಂತಹ ಜಗದೀಶ್ ಶೆಟ್ಟರ್ ಅವರನ್ನು ಸಹಿಸಿಕೊಳ್ಳಬಹುದೇ?  ಇದು ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುವಂತಹ ಪ್ರಶ್ನೆ.
ಅಧಿಕಾರದ ಕುರ್ಚಿಯ ಮಹತ್ವವೇ ಅಂತಹದ್ದು. ಅದರ ಮೇಲೇರಿ ಕೂತವನ ತಲೆಯಲ್ಲಿ ಅಲ್ಲಿಯ ವರೆಗೆ ಇಲ್ಲದ ಆಸೆ-ಆಕಾಂಕ್ಷೆಗಳು ಹುಟ್ಟಿಕೊಳ್ಳುತ್ತವೆ, ಎಂತಹ ಪುಕ್ಕಲು
ಸ್ವಭಾವದವರ ಎದೆಯಲ್ಲಿಯೂ ಸ್ಥಾನದ ಬಲ ಒಂದಷ್ಟು ಧೈರ್ಯವನ್ನು ತುಂಬುತ್ತದೆ. ಇಂದಿರಾಗಾಂಧಿ ಹೇಳಿದರೆ ಪೊರಕೆ ಎತ್ತಿಕೊಂಡು ಗುಡಿಸಬಲ್ಲೆ ಎಂದು ಹೇಳಿದ್ದ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರೇ ರಾಜೀವ್‌ಗಾಂಧಿಯವರನ್ನು ಪದಚ್ಯುತಿಗೊಳಿಸಲು ಹೊರಟಿಲ್ಲವೇ ಹಾಗೆ. ಜಗದೀಶ್ ಶೆಟ್ಟರ್ ಅವರಿಗೆ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಂಡರೂ  ಸಮರ್ಥಿಸಿಕೊಳ್ಳಲು ಕಾರಣಗಳಿವೆ, ಅಂತಹ ಅವಕಾಶವೂ ಒದಗಿ ಬಂದಿದೆ. ಸಚಿವನಾಗುವ ಸಾಧ್ಯತೆ ಇದ್ದಾಗಲೂ ಯಡಿಯೂರಪ್ಪ ಬಿಡಲಿಲ್ಲ, ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗಲೂ ತಪ್ಪಿಸಿದ್ದರು. ರಾಜಕೀಯವಾಗಿ ಮುಗಿಸಿಬಿಡಬೇಕೆಂದು ಸ್ಥಳೀಯವಾಗಿ ಪ್ರತಿಸ್ಪರ್ಧಿಗಳನ್ನು ಸೃಷ್ಟಿಸಿ ಬೆಳೆಸಿದರು.

ಇವೆಲ್ಲವನ್ನೂ ಶೆಟ್ಟರ್ ಹೊಟ್ಟೆಯಲ್ಲಿ ಹಾಕಿಕೊಂಡು ಯಡಿಯೂರಪ್ಪನವರ ಆಜ್ಞಾನುವರ್ತಿಯಾಗಿ ಸರ್ಕಾರವನ್ನು ನಡೆಸಿಕೊಂಡು ಹೋದರೆ ಪಕ್ಷಕ್ಕೆ ನೆಮ್ಮದಿ, ಅನಿಶ್ಚಿತ ರಾಜಕಾರಣದಿಂದ ಬೇಸತ್ತುಹೋದ ರಾಜ್ಯದ ಜನತೆಗೂ ಶಾಂತಿ. ಶೆಟ್ಟರ್ ಅಷ್ಟೊಂದು ವಿಶಾಲ ಹೃದಯಿಗಳಾಗದೆ ಮುಯ್ಯಿ ತೀರಿಸಿಕೊಳ್ಳಲು ಹೊರಟರೆ ಅದಕ್ಕೂ ಅವಕಾಶ ಇದೆ.
ಭ್ರಷ್ಟಾಚಾರದ ಆರೋಪಗಳಿಂದಾಗಿ ಜರ್ಝರಿತರಾಗಿರುವ ಈಗಿನ ಯಡಿಯೂರಪ್ಪ, ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿಯೇ ಕೂತು ದೆಹಲಿಯಲ್ಲಿದ್ದ ಶೆಟ್ಟರ್ ಅವರನ್ನು ಮಣಿಸಿದ ಯಡಿಯೂರಪ್ಪ ಅಲ್ಲ. ಕೈ ತಪ್ಪಿಹೋಗಿರುವ ಅಧಿಕಾರ, ಮೈ ತುಂಬಾ ಹರಡಿಕೊಂಡಿರುವ ಭ್ರಷ್ಟಾಚಾರದ ಆರೋಪಗಳು ಮತ್ತು ಹೆಚ್ಚುತ್ತಿರುವ ರಾಜಕೀಯ ಶತ್ರುಗಳಿಂದಾಗಿ ಅವರೊಬ್ಬ ದುರ್ಬಲ ನಾಯಕ. ಶತ್ರು ದುರ್ಬಲನಾಗಿದ್ದಾಗ ಕ್ಷಮಿಸುವವರು ಕಡಿಮೆ.

ಚುನಾವಣೆಗೆ ಹನ್ನೊಂದು ತಿಂಗಳು ಇರುವಾಗ ಮುಖ್ಯಮಂತ್ರಿಯಾದವರ ಕಣ್ಣು ಸಹಜವಾಗಿ ಚುನಾವಣೆಯ ನಂತರದ ಐದು ವರ್ಷಗಳ ಮೇಲಿರುತ್ತದೆ. ಒದಗಿಬಂದಿರುವ ಅವಕಾಶವನ್ನು ಕಳೆದುಕೊಳ್ಳುವಷ್ಟು ಶೆಟ್ಟರ್ ದಡ್ಡರಿರಲಾರರು. ರಾಜಕೀಯವಾಗಿ ಯಡಿಯೂರಪ್ಪನವರಿಗಿಂತಲೂ ಹೆಚ್ಚಿನ ಅನುಕೂಲತೆಗಳು ಶೆಟ್ಟರ್ ಅವರಿಗಿದೆ. ಅವರು ಬಿಜೆಪಿಯ ಶಕ್ತಿಕೇಂದ್ರವಾದ ಉತ್ತರ ಕರ್ನಾಟಕದಿಂದ ಬಂದವರು, ಲಿಂಗಾಯತರಲ್ಲಿ ಹೆಚ್ಚು ಶ್ರಿಮಂತರಾಗಿರುವ ಬಣಜಿಗ ಪಂಗಡಕ್ಕೆ ಸೇರಿದವರು, ಕಾನೂನು ಕಲಿತು ಒಂದಷ್ಟು ವರ್ಷ ವಕೀಲಿ ವೃತ್ತಿ ಮಾಡಿದವರು, ಯಡಿಯೂರಪ್ಪನವರಿಗೆ ಹೋಲಿಸಿದರೆ ಇನ್ನೂ ಯುವಕರು, ಇಷ್ಟು ಮಾತ್ರವಲ್ಲ ಸಂಘಪರಿವಾರದ ಜತೆ ಪ್ರಾರಂಭದಿಂದಲೂ ಗುರುತಿಸಿಕೊಂಡು ಬಂದ ಕುಟುಂಬದ ಸದಸ್ಯರಾಗಿರುವ ಕಾರಣ ಅವರ ಪಕ್ಷನಿಷ್ಠೆ ಪ್ರಶ್ನಾತೀತವಾದುದು. ಈ ಯಾವ ಅನುಕೂಲತೆಗಳೂ ಯಡಿಯೂರಪ್ಪನವರಿಗೆ ಇರಲಿಲ್ಲ. 

ಬಿ.ಎಸ್.ಯಡಿಯೂರಪ್ಪನವರ ದೊಡ್ಡ ರಾಜಕೀಯ ಬಲ-ಜಾತಿ. ಮುಖ್ಯಮಂತ್ರಿಗಳಾದ ನಂತರ ತಮ್ಮ ಸ್ಥಾನಕ್ಕೆ ಅಪಾಯ ಎದುರಾದಾಗೆಲ್ಲ ಅವರು ಲಿಂಗಾಯತ ಮಠಗಳ ಮೂಲಕ ಬಳಸಿಕೊಂಡಿದ್ದು ಜಾತಿಗಳನ್ನು. ಜಾತಿ ಎನ್ನುವುದು ಬೆಂಕಿ ಇದ್ದ ಹಾಗೆ, ಅದರ ಜತೆಗೆ ಆಟವಾಡಲು ಗೊತ್ತಿರಬೇಕು ಇಲ್ಲದೆ ಇದ್ದರೆ ಅದೇ ಬೆಂಕಿ ಸುಟ್ಟು ಹಾಕುತ್ತದೆ. ಬಿಹಾರದಲ್ಲಿ ಲಾಲುಪ್ರಸಾದ್ ಇದೇ ಜಾತಿ ಕಾರ್ಡ್ ಬಳಸಿ ಹದಿನಾರು ವರ್ಷಗಳ ಕಾಲ ಆ ರಾಜ್ಯವನ್ನು ಆಳಿದರು. ನಿತೀಶ್‌ಕುಮಾರ್ ಬಂದು ಅದೇ ಜಾತಿಕಾರ್ಡಿನ ಮಗ್ಗುಲು ಬದಲಿಸಿ ಆಡಿದ ಆಟಕ್ಕೆ ಲಾಲು ಮಣ್ಣುಮುಕ್ಕಿದರು. ಜಗದೀಶ್ ಶೆಟ್ಟರ್ ಅವರ ಮುಂದೆ ಯಡಿಯೂರಪ್ಪನವರು ಆಡುತ್ತಾ ಬಂದ ಜಾತಿಯ ಆಟದ ಮಾದರಿ ಇದೆ. ಅದನ್ನೇ ಇಟ್ಟುಕೊಂಡು ಆಡುವುದು ಅವರಿಗೂ ಕಷ್ಟವೇನಲ್ಲ. ಯಡಿಯೂರಪ್ಪನವರಷ್ಟು ಜಾತಿ-ಮಠಗಳ ಮೋಹಿಯಲ್ಲದೆ ಇದ್ದರೂ ಶೆಟ್ಟರ್ ನಾಳೆಯಿಂದ ರಾಜ್ಯದ ಪ್ರಮುಖ ಮಠಗಳಿಗೆ ಹೋಗಿ ಸ್ವಾಮೀಜಿಗಳ ಕಾಲಿಗೆ ಅಡ್ಡಬಿದ್ದ ಕೂಡಲೇ ಯಡಿಯೂರಪ್ಪನವರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಖಂಡಿತ. ಕರೆದಾಗಲೆಲ್ಲ ತಮ್ಮ ಮನೆಗೆ ಉಪಾಹಾರ-ಊಟಕ್ಕೆ ಬರದೆ ಹೋದರೆ, ತಮ್ಮ ಬೆಂಬಲಿಗ ಸಚಿವರು-ಶಾಸಕರ ಕಡತಗಳಿಗೆ ಕಣ್ಣುಮುಚ್ಚಿ ಸಹಿಹಾಕದೆ ಇದ್ದರೆ, ಪ್ರತಿಬಾರಿ ನನ್ನ ನಾಯಕ ಯಡಿಯೂರಪ್ಪನವರು ಎಂದು ಹೇಳದೆ ಇದ್ದರೆ, ಅನಂತಕುಮಾರ್ ಮತ್ತು ದೇವೇಗೌಡರ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿಬಿಟ್ಟರೆ ಮರುದಿನ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬೆಂಬಲಿಗ ಶಾಸಕರ ಜತೆ ಸೇರಲು ಬೆಂಗಳೂರು ಸಮೀಪದ ಯಾವುದಾದರೂ ರೆಸಾರ್ಟ್ ಹುಡುಕುವುದು ಖಂಡಿತ. ಈಗಲೂ ನಾಯಕತ್ವ ಬದಲಾವಣೆಯಿಂದ ರಾಜ್ಯ ಬಿಜೆಪಿಯ ಬಿಕ್ಕಟ್ಟು ಶಮನವಾಯಿತೆಂದು ಯಾರಾದರೂ ಹೇಳಲು ಸಾಧ್ಯವೇ? ಇದು ಅಂತ್ಯ ಅಲ್ಲ, ಆರಂಭ. ರಾಜ್ಯದ ಜನತೆಯ ಕರ್ಮ.

ಬದಲಾಗುತ್ತಿರುವ ವೃತ್ತಿಯ ಚಕ್ರವ್ಯೂಹದಲ್ಲಿ ಪತ್ರಕರ್ತ July 02, 2012

ನಾಲ್ಕು ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ, ಪತ್ರಕರ್ತ ಯುದ್ಧಭೂಮಿಯ ಚಕ್ರವ್ಯೂಹ ದಲ್ಲಿದ್ದಾನೆ. ಭ್ರಷ್ಟ, ಅಪ್ರಾಮಾಣಿಕ,  ಸ್ವಾರ್ಥಿ, ...ಇತ್ಯಾದಿ ಟೀಕಾಸ್ತ್ರಗಳು ಆತನನ್ನು ಒಂದೇ ಸಮನೆ ಇರಿಯುತ್ತಿವೆ.  

ವೈಯಕ್ತಿಕ ನೆಲೆಯಲ್ಲಿ ಈ ಆರೋಪಗಳನ್ನು ನಿರಾಕರಿಸಬಹುದಾದರೂ ತಾವು ಭಾಗವಾಗಿರುವ ಇಡೀ ಸಮುದಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಆತನೂ ಇಲ್ಲ. 

ಹೆಚ್ಚೆಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಪಕ್ಷದ ನಾಯಕರನ್ನು ಉಡಾಫೆಯಿಂದ ಕೇಳಿದಂತೆ `ನೀವೇನು ಸಾಚಾನಾ?` ಎಂದು ಪ್ರಶ್ನಿಸಿ ಬಾಯಿಮುಚ್ಚಿಸಬಹುದು. 

ಎಲ್ಲ ವೃತ್ತಿಗಳಂತೆ ಪತ್ರಿಕೆಗಳಲ್ಲಿಯೂ ಒಂದಷ್ಟು `ಕಪ್ಪುಕುರಿ`ಗಳು ಹಿಂದೆಯೂ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವಷ್ಟರ ಮಟ್ಟಿಗೆ ಈ `ಕಪ್ಪುಕುರಿ`ಗಳ ಸಂಖ್ಯೆ ಬೆಳೆಯುತ್ತಿದೆ. ಪತ್ರಕರ್ತನ ಆದರ್ಶದ ಹಾದಿ ತಪ್ಪಿದ್ದೆಲ್ಲಿ?

ಪತ್ರಕರ್ತನದ್ದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಸಾಮೂಹಿಕ ಪ್ರಯತ್ನದ ಮೂಲಕವೇ ಪತ್ರಿಕೆ ರೂಪುಗೊಳ್ಳುವುದು. ಬದಲಾಗುತ್ತಿರುವ ಈ `ಸಮೂಹ`ವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಪತ್ರಕರ್ತರಲ್ಲಿನ ಬದಲಾವಣೆಯನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರ ತಲೆಮೇಲೆ ಆತನ ಮಾಲೀಕರಿರುತ್ತಾರೆ, ಕಣ್ಣೆದುರಿನಲ್ಲಿ ಪತ್ರಿಕೆಯ ಓದುಗರಿರುತ್ತಾರೆ, ಅಕ್ಕಪಕ್ಕದಲ್ಲಿ ಸಹೋದ್ಯೋಗಿಗಳಿರುತ್ತಾರೆ, ಬೆನ್ನಹಿಂದೆ ಕಟ್ಟಿಕೊಂಡ ಸಂಸಾರ ಇರುತ್ತದೆ, ಇವುಗಳ ಮಧ್ಯೆ ಆತ ಇರುತ್ತಾನೆ, ಆತನೊಳಗೆ ಸದಾ ಪ್ರಶ್ನಿಸುವ, ಎಚ್ಚರಿಸುವ, ಕುಟುಕುವ, ಬುದ್ಧಿಹೇಳುವ ಆತ್ಮಸಾಕ್ಷಿ ಇರುತ್ತದೆ.

ಮುಖ್ಯವಾಗಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ ಯುಗ ಪ್ರಾರಂಭವಾದ ನಂತರದ ಎರಡು ದಶಕಗಳಲ್ಲಿ ಪತ್ರಕರ್ತನ ಸುತ್ತಮುತ್ತ ಇರುವ ಈ ಎಲ್ಲ ಪಾತ್ರಧಾರಿಗಳು ಗುರುತಿಸಲಾಗದಷ್ಟು ಬದಲಾಗಿ ಹೋಗಿದ್ದಾರೆ. ಬದಲಾಗುತ್ತಲೇ ಇರುವ ಈ ಪಾತ್ರಧಾರಿಗಳ ಒತ್ತಡಗಳ ನಡುವೆ ಪತ್ರಕರ್ತ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಾ ಕೆಲಸಮಾಡಬೇಕಾಗಿದೆ.

ಮೊದಲನೆಯದಾಗಿ  ಮಾಲೀಕ ವರ್ಗ.  169 ವರ್ಷಗಳ ಹಿಂದೆ ಕಲ್ಲಚ್ಚನ್ನು ಕೊರೆದು ಅಚ್ಚುಮೊಳೆ ಮಾಡಿ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ` ಪ್ರಕಟಿಸಿದ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್‌ನ ಕಾಲದಿಂದ ಪತ್ರಿಕಾವೃತ್ತಿ ಬಹುದೂರ ಸಾಗಿ ಬಂದಿದೆ. ನಿಧಾನವಾಗಿ ವಾಣಿಜ್ಯೀಕರಣಗೊಳ್ಳುತ್ತಾ ಬಂದ ಈ ವೃತ್ತಿ ಈಗ ಪೂರ್ಣಪ್ರಮಾಣದ ಉದ್ಯಮವಾಗಿ ಪರಿವರ್ತನೆಗೊಂಡಿದೆ.
 
ಬದಲಾದ ಪರಿಸ್ಥಿತಿಯಲ್ಲಿ ಹೊಸ ಆಟಗಾರರು ಮೈದಾನ ಪ್ರವೇಶ ಮಾಡಿದ್ದಾರೆ, ಆಟ ಬದಲಾದಾಗ ಅದರ ನಿಯಮಾವಳಿಗಳೂ ಬದಲಾಗುತ್ತವೆ. ಹಳೆಯ ಆಟಗಾರರು ಹಳೆಯ ನಿಯಮಗಳ ಪ್ರಕಾರವೇ ಆಡುತ್ತೇನೆಂದು ಹೊರಟರೆ ಮೈದಾನದಿಂದ ಹೊರಬೀಳಬೇಕಾಗುತ್ತದೆ. ಉದ್ಯಮವನ್ನು ಸಮಾಜ ಸೇವಾ ಸಂಸ್ಥೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದಿಲ್ಲ, ಅಂತಹ ದುಸ್ಸಾಹಸ ಮಾಡಿದವರು  ದಿವಾಳಿಯಾಗಬೇಕಾಗುತ್ತದೆ.

ಉದ್ಯಮದ ರೂಪ ಪಡೆದ ನಂತರ ಮಾಧ್ಯಮದ ಕಚೇರಿಯೊಳಗಿನ ಸಂಪಾದಕೀಯ ಮತ್ತು ಜಾಹೀರಾತು ವಿಭಾಗಗಳ ನಡುವಿನ ಗೆರೆ  ತೆಳ್ಳಗಾಗುತ್ತಿದೆ.  ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಯ ಮುಖಬೆಲೆಯನ್ನು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಹೆಚ್ಚಿಸಲಾರದ ಮಾಲೀಕರು  ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ.
 
ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಈ ವ್ಯವಸ್ಥೆ ಮಾಧ್ಯಮರಂಗವನ್ನು ಸದಾ ಉದ್ಯಮಿಗಳು ಮತ್ತು ಸರ್ಕಾರದ ಋಣಭಾರದಲ್ಲಿರುವಂತೆ ಮಾಡಿದೆ.
 
ಈ ಅನಾರೋಗ್ಯಕಾರಿ ವಾತಾವರಣದಲ್ಲಿಯೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್‌ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.  ಪತ್ರಿಕೋದ್ಯಮ  ಅತ್ತ ಪೂರ್ಣಪ್ರಮಾಣದಲ್ಲಿ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಇದನ್ನು ಓದುಗರಿಗೆ ಅರ್ಥಮಾಡಿಕೊಡಲು ಪತ್ರಿಕೆಯ ಮಾಲೀಕರಿಗೂ ಸಾಧ್ಯವಾಗಿಲ್ಲ.

 ವೃತ್ತಿಯಿಂದ ಉದ್ಯಮವಾಗಿ ಬದಲಾವಣೆಗೊಂಡ ಈ ಕ್ಷೇತ್ರಕ್ಕೆ ಈಗ ರಾಜಕಾರಣಿಗಳು ಪ್ರವೇಶಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್‌ಗಳು ರಾಜಕಾರಣಿಗಳ ಒಡೆತನದಲ್ಲಿವೆ,ಪತ್ರಿಕೆಗಳು ಕೂಡಾ ಇದಕ್ಕೆ ಹೊರತಲ್ಲ. 

ಇದು ಉದ್ಯಮಿಗಳ ಪ್ರವೇಶಕ್ಕಿಂತಲೂ ಅಪಾಯಕಾರಿ ಬೆಳವಣಿಗೆ. ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಬುನಾದಿ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನೇ ಉತ್ಪಾದಿಸುವ ಪ್ರಯತ್ನ ನಡೆಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಸಾವಿನ ನಂತರ ಅವರ ಒಡೆತನದ ಟಿವಿಚಾನೆಲ್ ಸೃಷ್ಟಿಸಿದ್ದ ಸಮೂಹ ಸನ್ನಿ ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡು, ಕರ್ನಾಟಕಗಳು ಇದರಲ್ಲಿ ಹಿಂದೆ ಬಿದ್ದಿಲ್ಲ. 

ಪತ್ರಿಕಾಮಂಡಳಿಯ ಏರ್‌ಕಂಡೀಷನ್ ಕಚೇರಿಯೊಳಗೆ ಕೂತಿರುವ ಅದರ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಂತೆ `ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳಿಗೆ, ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ` ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ.
 
ಐಶ್ಚರ್ಯರೈ ಕನಿಷ್ಠ ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್, ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ, ಬಡ ಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಇನ್ನೂ ಉಳಿದುಕೊಂಡಿರುವ ಒಂದಷ್ಟು ಸಹೃದಯಿಗಳು ಅಯ್ಯ ಪಾಪ  ಎಂದು ಉದ್ಗರಿಸಬಹುದು ಅಷ್ಟೆ.
 
ಇಂತಹ ಸ್ಥಿತಿಗೆ ಮಾಧ್ಯಮಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗೆಯ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ ಪತ್ರಿಕೆಗಳು,ಟಿವಿಚಾನೆಲ್‌ಗಳು ವರದಿ ಮಾಡಲು ಸಾಧ್ಯವಾಗಬಹುದು.

ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ಟಿವಿ ವೀಕ್ಷಕರು. ಪ್ರಜ್ಞಾವಂತ ಓದುಗರೇ ಪತ್ರಿಕೆಯ ಶಕ್ತಿ, ಅಂತಹವರನ್ನೊಳಗೊಂಡ ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. 

ಶಿಕ್ಷಣ, ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ 2-3ದಶಕಗಳ ಹಿಂದಿನ ಓದುಗರಿಗಿಂತ ಈಗಿನವರು ಹೆಚ್ಚು ಪ್ರಜ್ಞಾವಂತರು. ಟಿವಿಚಾನೆಲ್‌ಗಳು ಹಳ್ಳಿಮನೆಗಳನ್ನೂ ಪ್ರವೇಶಿಸಿದ ನಂತರ ಅನಕ್ಷರಸ್ಥರು ಕೂಡಾ  ಸಮಕಾಲೀನ ವಿದ್ಯಮಾನಗಳನ್ನು ನೋಡಿ, ಕೇಳಿ ತಿಳಿದುಕೊಳ್ಳಬಲ್ಲರು. 

ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್ ಯಾವ ಸುದ್ದಿಯನ್ನೂ ಬಚ್ಚಿಡುವ ಸ್ಥಿತಿಯಲ್ಲಿ ಇಲ್ಲ. ಒಬ್ಬರು ಬಚ್ಚಿಟ್ಟರೆ ಇನ್ನೊಬ್ಬರು ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಎಲ್ಲವೂ ಬಟಾಬಯಲು. ಆದರೆ ಈ ಜನಜಾಗೃತಿಯ ಪ್ರತಿಬಿಂಬ ಓದುಗ ಸಮುದಾಯದ ನೀತಿ-ನಿರ್ಧಾರಗಳಲ್ಲಿ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.

ಇದಕ್ಕೆ ಉತ್ತಮ ಉದಾಹರಣೆ ರಾಜ್ಯದ ಬಿಜೆಪಿ ನಡೆಸಿದ `ಆಪರೇಷನ್ ಕಮಲ`ದ ನಂತರದ ಬೆಳವಣಿಗೆಗಳು. ಪಕ್ಷಾಂತರ ಮಾಡಿದ ಶಾಸಕರು ಯಾವ ಆಮಿಷಕ್ಕೆ ಬಲಿಯಾಗಿದ್ದರು ಎನ್ನುವುದನ್ನು ಎಲ್ಲ ಮಾಧ್ಯಮಗಳು ಕೂಗಿಕೂಗಿ ಹೇಳಿದ್ದವು. ಆ ಶಾಸಕರ ಬಗ್ಗೆ ಮತದಾರರಿಗೆ ಸಂಪೂರ್ಣ ಮಾಹಿತಿ ಇತ್ತು.
 
ಹೀಗಿದ್ದರೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಅವರು ಮತ್ತೆ ಅದೇ ಪಕ್ಷಾಂತರಿ ಶಾಸಕರನ್ನು ಉಪಚುನಾವಣೆಯಲ್ಲಿ ಆರಿಸಿಕಳುಹಿಸುತ್ತಾರೆ. ವಿಜ್ಞಾನದ ಪದವೀಧರರೇ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿ-ಬಾಬಾಗಳ ಮುಂದೆ ಬಾಯಿಬಿಟ್ಟು ಕೂತಿರುತ್ತಾರೆ, ಎಂಜಲೆಲೆಯ ಮೇಲೆ ಉರುಳಾಡುತ್ತಿರುತ್ತಾರೆ. 

ಸ್ವಜಾತಿ ರಾಜಕಾರಣಿಯ ಪರ ವಾದಕ್ಕೆ ನಿಲ್ಲುತ್ತಾರೆ. ಪತ್ರಿಕೆ ಜನಪರವಾಗಿರಬೇಕೆಂದು ಬೋಧನೆ ಮಾಡುವ ಈ ಓದುಗರು ಮಾರುಕಟ್ಟೆಯಲ್ಲಿ ಇನ್ನೊಂದು ಪತ್ರಿಕೆ ಎಂಟಾಣೆ ಕಡಿಮೆಮಾಡಿದರೆ ಆ ಕಡೆ ಓಡುತ್ತಾರೆ.
 
ಅನೈತಿಕ ಪೈಪೋಟಿಯ ದರ ಸಮರ ಅಂತಿಮವಾಗಿ ಜನರ ಜತೆಯಲ್ಲಿರಬೇಕಾದ ಪತ್ರಿಕೆಯನ್ನು ಜಾಹೀರಾತುದಾರರ ಕಾಲಬುಡಕ್ಕೆ ಕೊಂಡೊಯ್ದು ಅಡ್ಡಬೀಳಿಸುತ್ತದೆ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ. ಹತ್ತು ರೂಪಾಯಿ ಉತ್ಪಾದನಾವೆಚ್ಚದ ಪತ್ರಿಕೆ ಏಳು ರೂಪಾಯಿ ಕೊಡುವ ಜಾಹಿರಾತುದಾರರ ಬದಲಿಗೆ ಮೂರು ರೂಪಾಯಿಯನ್ನಷ್ಟೇ ಕೊಡುವ ಓದುಗನಿಗೆ ಹೇಗೆ ನಿಷ್ಠೆಯಿಂದಿರಲು ಸಾಧ್ಯ?
ಮೂರನೆಯದಾಗಿ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು. 

25 ವರ್ಷಗಳ ಹಿಂದೆ ನನ್ನಂತಹವರು ಈ ವೃತ್ತಿ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯನ್ನು ಪಾಲಿಸುವುದು ದೊಡ್ಡ ಸವಾಲು ಆಗಿರಲೇ ಇಲ್ಲ. ರಾತ್ರಿಪಾಳಿ ಮುಗಿಸಿ ಪ್ರೆಸ್‌ನಲ್ಲಿಯೇ ನ್ಯೂಸ್‌ಪ್ರಿಂಟ್ ಎಳೆದುಕೊಂಡು ಮಲಗಿದಾಗ, ಪಕ್ಕದಲ್ಲಿ ಹಾಗೆಯೇ ಮಲಗಿದ್ದ ಹತ್ತು ಮಂದಿ ಸಹೋದ್ಯೋಗಿಗಳಿರುತ್ತಿದ್ದರು.
 
ಕ್ಯಾಂಟೀನ್‌ನಲ್ಲಿ ಸಾಲ ಕೇಳಲು ಮುಜುಗರ ಆಗುತ್ತಿರಲಿಲ್ಲ, ಯಾಕೆಂದರೆ ಸಾಲದ ಪಟ್ಟಿಯಲ್ಲಿ ಆಗಲೇ ಸಹೋದ್ಯೋಗಿಗಳ ಹೆಸರುಗಳು ರಾರಾಜಿಸುತ್ತಿರುತ್ತಿತ್ತು. ಆದರೆ ಕಾಲ ತ್ವರಿತ ಗತಿಯಲ್ಲಿ ಬದಲಾಗಿ ಹೋಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ಜಾಹೀರಾತು ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಪತ್ರಿಕಾ ಸಂಸ್ಥೆಗಳು, ಟಿವಿ ಚಾನೆಲ್‌ಗಳು ನಿರೀಕ್ಷಿತ ರೀತಿಯಲ್ಲಿ ಲಾಭ ಗಳಿಸಲಾಗುತ್ತಿಲ್ಲ. ಆದರೆ ಅವುಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಶ್ರಿಮಂತಿಕೆ ಏರುತ್ತಲೇ ಇದೆ.  

ಆದಾಯ ಮೀರಿದ ಆಸ್ತಿಗಳಿಸಿದ ಆರೋಪ ಸರ್ಕಾರಿ ನೌಕರರ ಮೇಲೆ ಮಾತ್ರವಲ್ಲ ಕೆಲವು ಪತ್ರಕರ್ತರ ಮೇಲೂ ಇದೆ. ನೌಕರರ ಮನೆ ಮೇಲೆ ದಾಳಿ ನಡೆಸುವ ಲೋಕಾಯುಕ್ತರು ಪತ್ರಕರ್ತರ ಮೇಲೂ ನಡೆಸಬಹುದಲ್ಲವೇ ಎಂದು ಜನ ಕೇಳುತ್ತಿರುವುದು ಇದೇ ಕಾರಣಕ್ಕೆ. 

ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕೆನ್ನುವವರು ಬದುಕುವ ಕಲೆ ಗೊತ್ತಿಲ್ಲದ ಹುಚ್ಚರು ಎಂದು ಅನಿಸಿಕೊಳ್ಳುತ್ತಾರೆ ಅಷ್ಟೆ. ಭ್ರಷ್ಟರಾಗುವುದಕ್ಕೆ ಸಮರ್ಥನೆಗಳನ್ನು ಹುಡುಕಿಕೊಂಡು ಹೊರಟರೆ ಊರೆಲ್ಲ ಉದಾಹರಣೆಗಳು ಸಿಗುತ್ತವೆ. ಪ್ರಾಮಾಣಿಕವಾಗಿ ಉಳಿಯಬಯಸುವ ಪತ್ರಕರ್ತ ಸಮರ್ಥನೆಗಳನ್ನು ತನ್ನೊಳಗೆ ಹುಡುಕಬೇಕು. ಇಡೀ ಜಗತ್ತು ಭ್ರಷ್ಟಗೊಂಡರೂ ನಾನು ಭ್ರಷ್ಟನಾಗಲಾರೆ ಎಂಬ ತೀರ್ಮಾನಕ್ಕೆ ಬರಲು ಆತನಿಗೆ ಸಾಧ್ಯವಾಗಬೇಕು.

ಕೊನೆಯದಾಗಿ ಪತ್ರಕರ್ತ ಬೆನ್ನಿಗೆ ಕಟ್ಟಿಕೊಂಡ ಸಂಸಾರ.  ಈತ ಒಂದು ಆದರ್ಶ ವೃತ್ತಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಯಾರೂ ಮನೆಬಾಡಿಗೆ ಕಡಿಮೆ ಮಾಡುವುದಿಲ್ಲ, ಕಿರಾಣಿ ಅಂಗಡಿಯವ ಪುಕ್ಕಟೆಯಾಗಿ ಅಕ್ಕಿ-ಬೇಳೆ ತಂದುಹಾಕುವುದಿಲ್ಲ. ಈತನ ಮನೆಯ ಒಂದು ಪಕ್ಕದಲ್ಲಿ ಇನ್ಫೋಸಿಸ್‌ನ ಉದ್ಯೋಗಿ ಇರುತ್ತಾನೆ, ಇನ್ನೊಂದು ಪಕ್ಕದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಇರುತ್ತಾನೆ. 

ಪ್ರತಿಯೊಬ್ಬನ ಸಂಸಾರದ ಬಹುಪಾಲು ಬೇಕುಬೇಡಗಳು ನೆರೆಹೊರೆಯವರನ್ನು ನೋಡಿಯೇ ನಿರ್ಧಾರವಾಗುವುದು. ಆಧುನಿಕ ಬದುಕಿನಲ್ಲಿ ಬಹುಪಾಲು ಗಳಿಕೆ ವ್ಯಯವಾಗುತ್ತಿರುವುದು ಸಾಮಾಜಿಕವಾದ ಹುಸಿ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವ ವ್ಯಸನಕ್ಕಾಗಿ. ಇದನ್ನು ಮೀರಿಹೋಗುವ ಇಲ್ಲವೇ ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿಯೂ ಇಲ್ಲ. 

ಇವೆಲ್ಲವನ್ನೂ ಯೋಚನೆ ಮಾಡುತ್ತಾ ಹೋದರೆ ಈ ವೃತ್ತಿ ಸಾಕಪ್ಪ ಸಾಕು ಎಂಬ ತೀರ್ಮಾನಕ್ಕೆ ಬರಲು ಹತ್ತು ಕಾರಣಗಳು ಸುಲಭದಲ್ಲಿ ಸಿಗುತ್ತವೆ, ಆದರೆ ಪತ್ರಿಕೆಯನ್ನು ಬಿಡಿಸಿಕೊಂಡು ಕೂತರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ನೂರು ಕಾರಣಗಳು ಪುಟಪುಟಗಳಲ್ಲಿ ಸಿಗುತ್ತವೆ. 

ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಬದುಕಲು ಜಾಗ ಇದ್ದೇ ಇರುತ್ತದೆ.  ಅದೇ ರೀತಿ ಮಾಧ್ಯಮ ಕ್ಷೇತ್ರ ಎಷ್ಟೇ ಕೆಟ್ಟುಹೋದರೂ ಜನಪರ ಪತ್ರಿಕೋದ್ಯಮಕ್ಕೆ ಜಾಗ ಇದ್ದೇ ಇರುತ್ತದೆ. ಅದು ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ. 

ಉದ್ಯಮವಾದ ವೃತ್ತಿ, ಬದಲಾಗಿ ಹೋಗಿರುವ ಓದುಗರು, ಸಹೋದ್ಯೋಗಿಗಳು, ಸಂಸಾರದ ಒತ್ತಡದ ನಡುವೆಯೂ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆನ್ನುವವರಿಗೆ  ಅವಕಾಶ ಇದೆ.
 
ಸಮಸ್ಯೆ ಅವಕಾಶದ್ದು ಅಲ್ಲವೇ ಅಲ್ಲ, ಅದನ್ನು ಬಳಸಿಕೊಳ್ಳುವ ಪತ್ರಕರ್ತರದ್ದು. ಹಳ್ಳಿಗಳಿಗೆ ಹೋಗಿ ಬರಪರಿಸ್ಥಿತಿಯ ವರದಿ ಮಾಡಿಕೊಂಡು ಬರುತ್ತೇನೆ ಎಂದೋ, ಮಲದ ಗುಂಡಿಗೆ ಬಿದ್ದು ಸಾಯುತ್ತಿರುವ ಪೌರಕಾರ್ಮಿಕರ ಬಗ್ಗೆ ಬರೆಯುತ್ತೇನೋ ಎಂದೋ ಒಬ್ಬ ವರದಿಗಾರ ಆಸಕ್ತಿ ತೋರಿದರೆ ಸಾಮಾನ್ಯವಾಗಿ ಯಾವ ಸಂಪಾದಕರೂ ಬೇಡ ಎಂದು ಹೇಳಲಾರರು. 

ಆ ರೀತಿಯ ಆಸಕ್ತಿಯನ್ನು ತೋರಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.

Thursday, June 28, 2012

ಪ್ರಜಾಪ್ರಭುತ್ವಕ್ಕೆ ಸಮ್ಮಿಶ್ರ ಸರ್ಕಾರಗಳಷ್ಟೇ ಕಂಟಕ ಅಲ್ಲ June 25, 2012

`ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳು ಮೂಲೆಗುಂಪಾಗಲು ಮತ್ತು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಅಧಿಕಾರ ಕೇಂದ್ರಗಳು ದುರ್ಬಲಗೊಳ್ಳುತ್ತಾ ಬರಲು ಸಮ್ಮಿಶ್ರ ಸರ್ಕಾರಗಳು ಕಾರಣ` ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ವಿಷಾದದ ದನಿಯಲ್ಲಿ ಹೇಳಿದ್ದಾರೆ. 

ಕರ್ನಾಟಕ ವಿಧಾನಸಭೆಯ ವಜ್ರಮಹೋತ್ಸವ ಸಮಾರಂಭದಲ್ಲಿ  ನೀಡಿದ ಪ್ರಧಾನ ಭಾಷಣದಲ್ಲಿ ಅವರ ಈ ಅಭಿಪ್ರಾಯ ವ್ಯಕ್ತವಾಗಿದೆ. ಸೂಕ್ಷ್ಮಮನಸ್ಸಿನ ನ್ಯಾಯಮೂರ್ತಿಗಳಿಗೆ ತಾನು ಹೇಳಿದ್ದು ಅತಿಯಾಯಿತು ಎಂದು ಅನಿಸಿತೋ ಏನೋ, `ಪ್ರಧಾನಿ ಮತ್ತು ಮುಖ್ಯಮಂತ್ರಿ ಸ್ಥಾನ ದುರ್ಬಲಗೊಳ್ಳಲು ಅದೊಂದೇ ಕಾರಣ ಅಲ್ಲ` ಎನ್ನುವ ಸಮಜಾಯಿಷಿ ನೀಡಿ  ಈ ವಿವಾದಾತ್ಮಕ ವಿಷಯವನ್ನು ಬೆಳೆಸಲುಹೋಗದೆ ಅಲ್ಲಿಗೆ ಮುಗಿಸಿಬಿಟ್ಟಿದ್ದರು.

ಬಹಳಷ್ಟು ದೆಹಲಿ ಕೇಂದ್ರಿತ ರಾಜಕೀಯ ಪಂಡಿತರು ಮಾತ್ರವಲ್ಲ ಆಗಾಗ ನಮ್ಮ `ಜನಸಾಮಾನ್ಯರು` ಕೂಡಾ ರಾಜಕೀಯ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ನಿಟ್ಟುಸಿರಿನ ರೂಪದಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವರು ಇನ್ನೂ ಮುಂದುವರಿದು ` ಸಣ್ಣಪುಟ್ಟ ಪಕ್ಷಗಳದ್ದು ಅತಿಯಾಯಿತು, ಸಮ್ಮಿಶ್ರ ಸರ್ಕಾರಕ್ಕಿಂತ ರಾಷ್ಟ್ರೀಯ ಪಕ್ಷದ ಆಡಳಿತವೇ ಪರಿಹಾರ` ಎಂದೋ ಇಲ್ಲವೇ `ಬಲಿಷ್ಠ ಹೈಕಮಾಂಡ್ ಬೇಕು` ಎಂಬ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ಕೆಲವರು ಇನ್ನಷ್ಟು ಮುಂದೆ ಹೋಗಿ `ತುರ್ತುಪರಿಸ್ಥಿತಿಯ ದಿನಗಳೇ ಚೆನ್ನಾಗಿತ್ತು` ಎಂಬ ಅತಿರೇಕದ ಪ್ರತಿಕ್ರಿಯೆಯನ್ನೂ ನೀಡುತ್ತಾರೆ. ಇದನ್ನೆಲ್ಲ ಕೇಳಿದಾಕ್ಷಣ `ಹೌದಲ್ಲಾ, ನಮ್ಮ ರಾಜಕೀಯ ವ್ಯವಸ್ಥೆಗೆ ಹಿಡಿದ ರೋಗದ ಮೂಲವೇ ಸಿಕ್ಕಿಬಿಟ್ಟಿತಲ್ಲಾ` ಎಂದು ಅನಿಸುವುದು ಕೂಡಾ ಸಹಜ.

 ಇತಿಹಾಸದ ದಾರಿಯಲ್ಲಿ ಸ್ವಲ್ಪ ಹಿಂದಕ್ಕೆ ಹೋಗಿ ಎಪ್ಪತ್ತರ ದಶಕದಲ್ಲಿ ನಡೆದ ರಾಜಕೀಯ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳೋಣ. ಏಕಪಕ್ಷದ ಆಡಳಿತದ ಅಂತ್ಯವೇ ಅಂದಿನ ರಾಜಕೀಯ ಮತ್ತು ಸಾರ್ವಜನಿಕ ಹೋರಾಟದ ಮುಖ್ಯ ಘೋಷಣೆಯಾಗಿತ್ತಲ್ಲವೇ? ಇಂದಿರಾಗಾಂಧಿ ನಾಯಕತ್ವದಲ್ಲಿ ಸರ್ವಾಧಿಕಾರಿಯ ರೂಪ ಪಡೆದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದುದು ಮಾತ್ರವಲ್ಲ ಸಂವಿಧಾನವನ್ನೇ ತಿರುಚಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿತ್ತಲ್ಲವೇ?

ಏಕಪಕ್ಷದ ಈ `ದಾದಾಗಿರಿ`ಯಿಂದಾಗಿ ಸಂವಿಧಾನದ ಆಶಯವಾದ ಒಕ್ಕೂಟ ವ್ಯವಸ್ಥೆಯೇ ಮುರಿದುಬೀಳುತ್ತಿದೆ ಎಂದಲ್ಲವೇ ರಾಜ್ಯ ಸರ್ಕಾರಗಳು ಆರೋಪಿಸುತ್ತಿದ್ದುದು? ಈ ಹೈಕಮಾಂಡ್ (ಇದರ ನಿಜವಾದ ಅರ್ಥ ಏನೆಂದು ಈಗಲೂ ಯಾರಿಗೂ ತಿಳಿದಿಲ್ಲ) ಸಂಸ್ಕೃತಿಯಿಂದಾಗಿ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವವೇ ನಾಶವಾಗಿ ಉಸಿರುಗಟ್ಟಿದ್ದಕ್ಕಲ್ಲವೇ, ಬಾಬು ಜಗಜೀವನ್‌ರಾಂ, ಚಂದ್ರಶೇಖರ್ ಮೊದಲಾದ ಹಿರಿಯ ನಾಯಕರು `ವಿಭೀಷಣ`ರಾಗಿ ಕಾಂಗ್ರೆಸ್ ತೊರೆದು ವಿರೋಧಿಪಾಳಯ ಸೇರಿಕೊಂಡಿದ್ದು? ಈಗ ಒಮ್ಮಿಂದೊಮ್ಮೆಲೇ ಈ ರಾಷ್ಟ್ರೀಯ ಪಕ್ಷಗಳು ಪ್ರಜಾಪ್ರಭುತ್ವದ ರಕ್ಷಕನಂತೆ ಅನಿಸಿಕೊಳ್ಳಲು ಏನು ಕಾರಣ?
ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬಂದದ್ದೇ  ಏಕಪಕ್ಷದ ಸ್ವೇಚ್ಛಾಚಾರಕ್ಕೆ ಪ್ರತಿಕ್ರಿಯೆ ರೂಪದಲ್ಲಿ.

ಚುನಾವಣೆಯ ಕಣದಲ್ಲಿ ಪ್ರತ್ಯೇಕವಾಗಿ ನಡೆಸುವ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷದ ಆಧಿಪತ್ಯವನ್ನು ಮುರಿಯಲು ಸಾಧ್ಯ ಇಲ್ಲ ಎನ್ನುವ ಜ್ಞಾನೋದಯವೇ 1977ರಲ್ಲಿ ಪ್ರಾರಂಭಗೊಂಡ ಮೈತ್ರಿಕೂಟದ ರಾಜಕೀಯಕ್ಕೆ ಪ್ರೇರಣೆ. ಕಾಂಗ್ರೆಸ್ (ಒ), ಬಿಎಲ್‌ಡಿ,ಜನಸಂಘ ಮತ್ತು ಸೋಷಿಯಲಿಷ್ಟ್ ಪಕ್ಷಗಳು ವಿಲೀನಗೊಂಡು ಜನತಾಪಕ್ಷ ರಚನೆಗೊಂಡ ಕಾರಣ ಶುದ್ಧ ಅರ್ಥದಲ್ಲಿ ಅದನ್ನು ಮೈತ್ರಿಕೂಟ ಎಂದು ಹೇಳಲಾಗುವುದಿಲ್ಲ.

ಆದರೆ ಕಾಂಗ್ರೆಸ್ ಪಕ್ಷದಿಂದ ಹೊರಬಂದ ಜಗಜೀವನ್‌ರಾಂ ಅವರು ಪ್ರಜಾತಾಂತ್ರಿಕ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಕಟ್ಟಿಕೊಂಡು ಜನತಾಪಕ್ಷದ ಜತೆ ಸೇರಿಕೊಂಡ ಕಾರಣಕ್ಕೆ ಅದನ್ನು ಮೈತ್ರಿಕೂಟ ಎನ್ನಬಹುದಷ್ಟೆ.

ಆ ಕಾಲದ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರದ ವಿರುದ್ಧದ ಜನತೆಯ ಸಿಟ್ಟು ಮತ್ತು ಮೈತ್ರಿಕೂಟದ ಪರವಾದ ಜನಾಭಿಪ್ರಾಯ ಹೇಗಿತ್ತೆಂದರೆ ಬಿಹಾರ, ಉತ್ತರಪ್ರದೇಶ,ಪಂಜಾಬ್, ಹಿಮಾಚಲಪ್ರದೇಶ, ಹರ್ಯಾಣ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆದ್ದಿರಲಿಲ್ಲ. ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲಾ ಒಂದು ಸ್ಥಾನ ದಕ್ಕಿತ್ತು. 400 ಸದಸ್ಯರು ಅದೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಆ ದಿನದಿಂದಲೇ ರಾಷ್ಟ್ರೀಯ ಪಕ್ಷದ ಆಟ ಮುಗಿದು ಸಮ್ಮಿಶ್ರ ಸರ್ಕಾರದ ಹೊಸ ಶಕೆ ಪ್ರಾರಂಭವಾಗಿತ್ತು.

ಅದರ ನಂತರದ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷ 1980 (353ಸ್ಥಾನ) ಮತ್ತು 1984 (415)ರಲ್ಲಿ ಮಾತ್ರ ಸ್ವಂತಬಲದಿಂದ ಸರ್ಕಾರ ರಚನೆಮಾಡುವಷ್ಟು ಬಹುಮತ ಗಳಿಸಿತ್ತು ನಿಜ. ಆದರೆ ಆ ಅವಕಾಶ ಸ್ವಾಭಾವಿಕವಾದ ಜನಾಭಿಪ್ರಾಯದಿಂದ ಒದಗಿಬಂದುದಲ್ಲ. 

ತಮ್ಮ ಆಯ್ಕೆಯೇ ಇಷ್ಟುಬೇಗ ಕೆಟ್ಟುಹೋಯಿತಲ್ಲಾ ಎಂಬ ಜನಾಕ್ರೋಶ 1980ರ ಫಲಿತಾಂಶಕ್ಕೆ ಕಾರಣವಾದರೆ, 1984ರ ದೈತ್ಯಬಹುಮತಕ್ಕೆ ಇಂದಿರಾಗಾಂಧಿ ಹತ್ಯೆಯ ವಿರುದ್ಧ ಭುಗಿಲೆದ್ದ ಅನುಕಂಪದ ಅಲೆ ಕಾರಣ. 1991ರಲ್ಲಿ ರಾಜೀವ್‌ಗಾಂಧಿ ಹತ್ಯೆಯ ನಂತರದ ಅನುಕಂಪದ ಅಲೆಯ ಹೊರತಾಗಿಯೂ ಕಾಂಗ್ರೆಸ್ ಗಳಿಸಿದ್ದು 232 ಸ್ಥಾನಗಳನ್ನು ಮಾತ್ರ. 1984ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಸ್ವಂತಬಲದಿಂದ ಸರ್ಕಾರ ರಚಿಸುವ ಅವಕಾಶವೇ ಸಿಗಲೇ ಇಲ್ಲ.

ಅದಕ್ಕೆ ಪರ್ಯಾಯ ರೂಪದಲ್ಲಿ ಇನ್ನೊಂದು ರಾಷ್ಟ್ರೀಯ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಉದಿಸಿಬಂದರೂ ಅದಕ್ಕೆಂದೂ 200ರ ಸಂಖ್ಯೆಯನ್ನೂ ದಾಟಲಾಗಿಲ್ಲ. 1998 ಮತ್ತು 1999ರಲ್ಲಿ ಪಡೆದ ತಲಾ182 ಸ್ಥಾನಗಳೇ ಗರಿಷ್ಠ. ಇವೆಲ್ಲ ಹೇಳುತ್ತಿರುವುದು ದೇಶದ ಮತದಾರರು ರಾಷ್ಟ್ರೀಯ ಪಕ್ಷಗಳಿಂದ ದೂರ ಸರಿಯುತ್ತಿದ್ದಾರೆ ಎಂದಲ್ಲವೇ?

ಪ್ರಜಾಪ್ರಭುತ್ವ ವ್ಯವಸ್ಥೆ ಜನಾಭಿಪ್ರಾಯದ ಬುನಾದಿಯ ಮೇಲೆ ನಿಂತಿರುವಂತಹದ್ದು. ಅಂತಿಮವಾಗಿ ಆಳುವವರು ಯಾರು ಎಂದು ನಿರ್ಧರಿಸುವವರು ಮತದಾರರು. ಇದರಿಂದಾಗಿಯೇ `ಜನ ತಮ್ಮ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ` ಎನ್ನುವ ವ್ಯಂಗ್ಯ ಹುಟ್ಟಿಕೊಂಡಿರುವುದು. ಹೌದು ನಮ್ಮ ಮತದಾರರಲ್ಲಿ ಅಶಿಕ್ಷಿತರು, ಅರೆಶಿಕ್ಷಿತರು, ದುರ್ಬಲರು,ಬಡವರು ಬಹುಸಂಖ್ಯೆಯಲ್ಲಿದ್ದಾರೆ, ಚುನಾವಣೆಯ ಮೇಲೆ ಜಾತಿ, ದುಡ್ಡು ಮತ್ತು ತೋಳ್ಭಲದ ಪ್ರಭಾವ ಕೂಡಾ ಇದೆ.

ಆದರೆ ಈ ವರ್ಗದ ಮತದಾರರೆಲ್ಲರೂ ಕೇವಲ ಪ್ರಾದೇಶಿಕ ಇಲ್ಲವೇ ಸಣ್ಣ ಪಕ್ಷಗಳಿಗೆ ಮತಹಾಕುವವರೆಂದು ಹೇಳಲಾಗುವುದಿಲ್ಲ. ಅವರ ಆಯ್ಕೆ ತಪ್ಪು ಎಂದು ತೀರ್ಪು ನೀಡುವುದೂ ಸರಿಯಾಗಲಾರದು. ಮೈತ್ರಿಕೂಟ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಷರಾ ಬರೆದು ಮೂಲೆಗೆ ತಳ್ಳಿಬಿಡಲು ಆಗುವುದಿಲ್ಲ. ಇಂತಹ ಒಂದು ಜನಾಭಿಪ್ರಾಯ ರೂಪುಗೊಳ್ಳಲು ಏನು ಕಾರಣ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು.

ಭಾರತದಲ್ಲಿ ಏಕಶಿಲಾ ರೂಪದ ಸಾಮಾಜಿಕ ವ್ಯವಸ್ಥೆ ಇಲ್ಲ, ನಮ್ಮದು ಬಹುಭಾಷೆ, ಬಹುಜಾತಿ ಮತ್ತು ಬಹುಸಂಸ್ಕೃತಿಯ ದೇಶ. ಇದು `ರಾಷ್ಟ್ರೀಯ` ಎನ್ನುವ ಪರಿಕಲ್ಪನೆಗೆ ವಿರುದ್ದವಾಗಿರುವಂತಹ ವ್ಯವಸ್ಥೆ . ಇಲ್ಲಿ ಎಲ್ಲವನ್ನೂ ರಾಷ್ಟ್ರೀಯ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸಲಿಕ್ಕಾಗುವುದಿಲ್ಲ. ನೆಲ-ಜಲ-ಭಾಷೆಯ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ರಾಜ್ಯದ ಒಬ್ಬ ಮತದಾರನಿಗೆ ದೇಶಪ್ರೇಮದ ಜತೆಯಲ್ಲಿ ಪ್ರಾದೇಶಿಕ ಆಶೋತ್ತರಗಳು ಕೂಡಾ ಮುಖ್ಯ. ಇಲ್ಲಿ ಒಬ್ಬ ಮತದಾರ ಏಕಕಾಲಕ್ಕೆ ಭಾರತೀಯನಾಗಿಯೂ ಜತೆಗೆ ಒಬ್ಬ ಕನ್ನಡಿಗ, ತೆಲುಗ, ಬಂಗಾಳಿ, ಮರಾಠಿ, ಮಲೆಯಾಳಿಯಾಗಿಯೂ ಯೋಚಿಸುತ್ತಿರುತ್ತಾನೆ.

ಪ್ರಾದೇಶಿಕ ಅಸ್ಮಿತೆ ಅವನ ಜೀವನಕ್ರಮವಾಗಿರುತ್ತದೆ. ಸತ್ತೆ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಆತನ ಬೇಡಿಕೆ ದೆಹಲಿಯಲ್ಲಿ ಕೂತವರಿಗೆ ಪ್ರಾಂತೀಯ ಭಾವನೆ  ಎಂದು ಅನಿಸಿದರೂ ಅದನ್ನು ತನ್ನ ಹಕ್ಕು ಎಂದು ಆತ ತಿಳಿದುಕೊಂಡಿರುತ್ತಾನೆ. ಎಲ್ಲವೂ ದೂರದ ದೆಹಲಿಯಲ್ಲಿ ತೀರ್ಮಾನವಾಗುವುದು ಸ್ವಾಭಿಮಾನಿಯಾದ ಆತನನ್ನು ಕೆರಳಿಸುತ್ತದೆ. ಈ ರೀತಿಯ ಪ್ರಾದೇಶಿಕತೆಯ ಭಾವನೆಯನ್ನು ಕೆಲವು ಪಕ್ಷಗಳು  ರಾಜಕೀಯ ಬಂಡವಾಳವಾಗಿ ಮಾಡಿಕೊಳ್ಳುತ್ತಿರುವುದು ನಿಜ, ಆದರೆ ಇಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ಯಾರು ಹೊಣೆ?

ಸ್ವಂತ ಬಹುಮತ ಪಡೆದ ಏಕಪಕ್ಷದ ಆಡಳಿತ ಇಲ್ಲವೇ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮೊದಲು ಪ್ರಯತ್ನಿಸಿದ್ದೇ ದೈತ್ಯಬಹುಮತದ  ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಅಲ್ಲವೇ? ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳ ಗರಿಷ್ಠ ದುರ್ಬಳಕೆ ನಡೆಸಿದ್ದು ಕೂಡಾ ಇದೇ ಪಕ್ಷ.

ಆಪರೇಷನ್ ಕಮಲದಿಂದ ಹಿಡಿದು ಸಭಾಧ್ಯಕ್ಷರ ಸ್ಥಾನದ ದುರುಪಯೋಗದ ವರೆಗೆ ನಡೆದ ಎಲ್ಲ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳಿಗೆ  ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಭಾಷಣ ಮಾಡಿದ ಕರ್ನಾಟಕದ ವಿಧಾನಸಭೆ ಸಾಕ್ಷಿಯಾಗಿದೆ. ಇವೆಲ್ಲವನ್ನೂ ನಡೆಸಿದ್ದು ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ. ಇದಕ್ಕೆಲ್ಲ ಯಾವ ಸಮ್ಮಿಶ್ರ ಸರ್ಕಾರದ ಒತ್ತಡ ಇತ್ತು?

ರಾಷ್ಟ್ರೀಯ ಪಕ್ಷದ ಜನಪ್ರಿಯ ಘೋಷಣೆಯಾದ ಸುಭದ್ರ ಸರ್ಕಾರವೊಂದರಿಂದಲೇ ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಉಳಿಯುವುದು ಸಾಧ್ಯ ಇಲ್ಲ. ರಾಜಕೀಯ ಸುಭದ್ರತೆಯೊಂದೇ ಉತ್ತಮ ಆಡಳಿತದ ಮಾನದಂಡ ಕೂಡಾ ಅಲ್ಲ. ಸುಭದ್ರ ಸರ್ಕಾರವೆಲ್ಲ ಜನಪರವಾಗಿ ಕೆಲಸ ಮಾಡಿದೆ ಎಂದು ಹೇಳಲಾಗುವುದಿಲ್ಲ.

ಹಾಗೆ ಹೇಳುವುದಾದರೆ ಸ್ವತಂತ್ರಭಾರತದ ಮೊದಲ 25ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಬೇಕಾಗಿತ್ತಲ್ಲವೇ? ಇದಕ್ಕೆ ವಿರುದ್ದವಾಗಿ ಅಧಿಕಾರ ಉಳಿಸಿಕೊಳ್ಳಲು ಸಣ್ಣ ಪಕ್ಷಗಳ ಬೆಂಬಲವನ್ನು ನಂಬಲೇಬೇಕಾದ ಅಭದ್ರ ರಾಜಕೀಯ ವಾತಾವರಣದಲ್ಲಿಯೂ ಜನಪರವಾಗಿ ಆಡಳಿತ ನಡೆಸಿದ ಸರ್ಕಾರಗಳಿವೆ.

1983ರಿಂದ 1985ರ ವರೆಗಿನ ರಾಮಕೃಷ್ಣ ಹೆಗಡೆ  ನೇತೃತ್ವದ ಕರ್ನಾಟಕ ಸರ್ಕಾರ 18 ಸದಸ್ಯ ಬಲದ ಬಿಜೆಪಿ ಬೆಂಬಲವನ್ನು ನೆಚ್ಚಿಕೊಂಡಿತ್ತು. ಅನಿಶ್ಚಿತ ರಾಜಕೀಯದ ನಡುವೆಯೂ ಆ ಎರಡು ವರ್ಷಗಳ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಮಧ್ಯಂತರ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ನೀಡಲು ಹೆಗಡೆಯವರಿಗೆ ಸಾಧ್ಯವಾಗಲಿಲ್ಲ ಎನ್ನುವುದು ಗಮನಾರ್ಹ. ಯುಪಿಎ ಮೊದಲ ಅವಧಿಯಲ್ಲಿ ಎಡಪಕ್ಷಗಳ ಬೆಂಬಲವನ್ನು ನಂಬಿಕೊಂಡಿತ್ತು.

ಆ ದಿನಗಳಲ್ಲಿ ದಿನನಿತ್ಯದ ಆಡಳಿತದಲ್ಲಿ ಎಡಪಕ್ಷಗಳು ನಿರಂತರವಾಗಿ ಮಾಡುತ್ತಿದ್ದ ಮಧ್ಯಪ್ರವೇಶ `ಬ್ಲಾಕ್‌ಮೇಲ್` ಎಂದು ಅನಿಸಿದ್ದು ನಿಜ. ಆದರೆ ಆ ಒತ್ತಡದ ರಾಜಕೀಯದಿಂದಾಗಿಯೇ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಿಮಾ ಕಂಪೆನಿಗಳು ಇನ್ನೂ ಅಸ್ತಿತ್ವ ಉಳಿಸಿಕೊಂಡಿವೆ ಎಂಬುದನ್ನು ಮರೆಯುವುದು ಹೇಗೆ? ಕಾಂಗ್ರೆಸ್ ಅಂದುಕೊಂಡಂತೆ ಖಾಸಗೀಕರಣ ನಡೆದುಹೋಗಿದ್ದರೆ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಸಿಕ್ಕಿ ದಿವಾಳಿಯಾದ ಅಮೆರಿಕಾ ಬ್ಯಾಂಕುಗಳ ಸ್ಥಿತಿ ನಮ್ಮ ಬ್ಯಾಂಕು ಮತ್ತು ವಿಮಾಕಂಪೆನಿಗಳಿಗೂ ಬರುತ್ತಿತ್ತು.

ವಿರೋಧಪಕ್ಷಗಳು ಆಂತರಿಕ ಬಿಕ್ಕಟ್ಟಿಗೆ ಸಿಕ್ಕಿ ನಿಷ್ಕ್ರೀಯವಾಗಿರುವ ಈಗಿನ ದಿನಗಳಲ್ಲಿ ಆಂತರಿಕವಾದ ಇಂತಹ ಒತ್ತಡ-ಒತ್ತಾಯಗಳ ರಾಜಕೀಯವೇ  ಎಷ್ಟೋ ಬಾರಿ ರಾಷ್ಟ್ರೀಯ ಪಕ್ಷಗಳು ಜನಪರವಾದ ಆಡಳಿತ ನೀಡಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಹೋಗಲು ಕಾರಣವಾಗುತ್ತಿದೆ.  ಸಣ್ಣ ಪಕ್ಷಗಳ ಚೌಕಾಶಿ ರಾಜಕಾರಣವೇ ರಾಜಕೀಯ ಬಿಕ್ಕಟ್ಟುಗಳಿಗೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ ಅದರ ಆಳದಲ್ಲಿ ರಾಷ್ಟ್ರೀಯ ಪಕ್ಷಗಳು ನಡೆಸುವ ಒಳ ಆಟಗಳಿರುತ್ತವೆ ಎನ್ನುವುದನ್ನು ಮರೆಯಬಾರದು.

ಮಮತಾ ಬ್ಯಾನರ್ಜಿ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಎಡಪಕ್ಷಗಳ ಕಡೆ ಕಣ್ಣುಮಿಟುಕಿಸುವುದು, ಮಾಯಾವತಿಯವರನ್ನು ಹಣಿಯಲು ಮುಲಾಯಂಸಿಂಗ್ ಜತೆ ಒಳಒಪ್ಪಂದ ಮಾಡಿಕೊಳ್ಳುವುದು, ಪಿಡಿಪಿ ಬೇಡ ಎಂದಾದರೆ ನ್ಯಾಷನಲ್ ಕಾನ್‌ಫರೆನ್ಸ್ ಪಕ್ಷವನ್ನು ಸೇರಿಸಿಕೊಳ್ಳುವುದು...ಹೀಗೆ ಸಣ್ಣ ಪಕ್ಷಗಳ ನಡುವಿನ ಭಿನ್ನಮತದ ಬೆಂಕಿಗೆ ಗಾಳಿಹಾಕುತ್ತಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಆಟವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಾಡುತ್ತಲೇ ಬಂದಿವೆ.

ಸಣ್ಣಪಕ್ಷಗಳಿಗೆ ಬುದ್ಧಿಹೇಳುವ ಮೊದಲು ಈ ರಾಷ್ಟ್ರೀಯ ಪಕ್ಷಗಳು ತಮ್ಮ ನಡತೆಯನ್ನು ತಿದ್ದಿಕೊಳ್ಳಬೇಕು. ಪ್ರಜಾಪ್ರಭುತ್ವದ ರಕ್ಷಣೆಯ ದೊಡ್ಡಭಾರ ದೊಡ್ಡಪಕ್ಷಗಳ ಹೆಗಲ ಮೇಲೂ ಇದೆ.

Saturday, June 23, 2012

ವಿವಾದದ ಗಾಳಿಗೆ ಸಿಕ್ಕಿರುವ ಸಂವಿಧಾನದ `ತುರ್ತು ದೀಪ' June 18, 2012

ದೆಹಲಿಯ ರೈಸಿನಾಹಿಲ್‌ನ ತುದಿಯ ಸುಮಾರು 450 ಎಕರೆ ಉದ್ಯಾನದ ನಡುವಿನ ಐದು ಎಕರೆ ಜಾಗದಲ್ಲಿ ತಲೆ ಎತ್ತಿನಿಂತಿರುವ ರಾಷ್ಟ್ರಪತಿ ಭವನವನ್ನು ಭಾವುಕ ಕಣ್ಣುಗಳಿಂದ ನೋಡಿದರೆ ಅರಮನೆಯಂತೆ ಕಾಣುತ್ತದೆ. 

ವಿಶಾಲವಾದ ಹಜಾರಗಳು, ಎತ್ತರದ ಬೋದಿಗೆಗಳು, ಅಮೃತಶಿಲೆಯ ನೆಲ, ಅದನ್ನಪ್ಪಿಕೊಂಡ ಬೆಲೆಬಾಳುವ ಪರ್ಷಿಯನ್-ಕಾಶ್ಮೆರಿ ನೆಲಗಂಬಳಿ, ಅಪರೂಪದ ತೈಲಚಿತ್ರಗಳು, ಮೊಗಲ್-ಜೈನ್ ವಾಸ್ತುಶಿಲ್ಪಗಳ ಪ್ರಭಾವದ ಕಟಾಂಜನಗಳು,ಛಜ್ಚಾಗಳು, ಜಾಲರಿ, ಕಲ್ಲು ಗಂಟೆಗಳು...ಹೀಗೆ 20,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಕೆಂಪು ಮರಳುಗಲ್ಲಿನ ಕಟ್ಟಡದಲ್ಲಿ ಅರಮನೆಯ ಎಲ್ಲ ವೈಭವಗಳೂ ಇವೆ.

ಅರಮನೆಯಂತೆ ಕಾಣುತ್ತಿದೆ ಎಂದ ಮಾತ್ರಕ್ಕೆ ಅದರೊಳಗಿನ ನಿವಾಸಿಯನ್ನು ಅರಸ ಎಂದು ಹೇಳುವ ಹಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸನಿಗೆ ಜಾಗ ಇಲ್ಲ. ಅಲ್ಲಿರುವವರು ಸಂವಿಧಾನದ ಮನೆಯ ಕಾವಲುಗಾರ. ಸಂವಿಧಾನದ ಪ್ರಕಾರ ರಾಷ್ಟ್ರಪತಿಯವರದು ಅತೀ ಉನ್ನತ, ಗೌರವಪೂರ್ಣ ಮತ್ತು ಪ್ರತಿಷ್ಠೆಯ ಸ್ಥಾನ. 

ಅವರೇ ಸರ್ಕಾರದ ಅಧಿಕೃತ ಯಜಮಾನರು. ಕೇಂದ್ರ ಸರ್ಕಾರದ ಕಾರ್ಯಾಂಗ ಅಧಿಕಾರದ ದಂಡವನ್ನು ಸಂವಿಧಾನ  ಅವರ ಕೈಗೆ ಕೊಟ್ಟಿದೆ. ಕೇಂದ್ರ ಸರ್ಕಾರ ಪ್ರತಿಯೊಂದು ನಿರ್ಧಾರವನ್ನು ರಾಷ್ಟ್ರಪತಿಯವರ ನಾಮಸ್ಮರಣೆಯೊಂದಿಗೆ ಕಾರ್ಯರೂಪಕ್ಕೆ ತರಬೇಕು. ಪ್ರಧಾನಮಂತ್ರಿಯನ್ನು ಮಾತ್ರವಲ್ಲ, ಪ್ರಧಾನಿ ಸಲಹೆ ಮೇರೆಗೆ ಸಚಿವರ ನೇಮಕಾ ಕೂಡಾ ಅವರದ್ದೇ ........

ರಾಷ್ಟ್ರಪತಿ ಸ್ಥಾನದ ಸುತ್ತಲಿನ ಈ ಪ್ರಭಾವಳಿ ಕಂಡು ಮೈಮರೆಯುವ ಮುನ್ನ ಸಂವಿಧಾನದ ಪುಟಗಳನ್ನು ತಿರುವಿಹಾಕಬೇಕು. `ಕೇಂದ್ರ ಸರ್ಕಾರ ತನ್ನ ಕಾರ್ಯಾಂಗ ಅಧಿಕಾರವನ್ನು ಸಂವಿಧಾನಕ್ಕೆ ಅನುಗುಣವಾಗಿ ರಾಷ್ಟ್ರಪತಿಯವರ ಮೂಲಕ ಕಾರ್ಯಗತಗೊಳಿಸಬೇಕು` ಎಂದು ಸಂವಿಧಾನ ಹೇಳಿದೆ. `

ರಾಷ್ಟ್ರಪತಿಗಳು ಸಚಿವ ಮಂಡಳಿಯ ನೆರವು ಮತ್ತು ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು` ಎಂದು ಸಂವಿಧಾನದ 74 (1)ನೇ ಪರಿಚ್ಛೇದ ಹೇಳಿದೆ. `ರಾಷ್ಟ್ರಪತಿ ಸಂವಿಧಾನದ ಮುಖ್ಯಸ್ಥರಾದರೂ ಅವರು ಸಚಿವ ಮಂಡಳಿಯ ಸಲಹೆಯಂತೆಯೇ ಕಾರ್ಯನಿರ್ವಹಿಸಬೇಕಾಗುತ್ತದೆ` ಎಂದು ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ.

ಅಂದರೆ ರಾಷ್ಟ್ರಪತಿಗಳು ಆಡಳಿತಾರೂಢರ ಕೈಯಲ್ಲಿನ `ರಬ್ಬರ್ ಸ್ಟಾಂಪ್` ಎನ್ನುವ ಕೊಂಕುನುಡಿ ನಿಜವೇ? ಇದಕ್ಕೆ ಉತ್ತರ ರೈಸಿನಾಹಿಲ್‌ನ ನಿವಾಸಿಯಾದ ದೇಶದ ಪ್ರಥಮ ಪ್ರಜೆಯ ನಡೆ-ನುಡಿಯಲ್ಲಿದೆ. ಅರಸೊತ್ತಿಗೆಯಲ್ಲಿ ಸಿಂಹಾಸನವೇ ಮುಖ್ಯ, ಅದರ ಮೇಲೆ ಪಾದುಕೆಗಳನ್ನಿಟ್ಟುಬೇಕಾದರೂ ಬೇರೆಯವರು ರಾಜ್ಯಭಾರ ಮಾಡಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗಲ್ಲ, ಇಲ್ಲಿ ಆಸನಕ್ಕೆ ಗೌರವ ಬರುವುದು ಆಸೀನರಾಗುವ ವ್ಯಕ್ತಿಯಿಂದ. ಸಾಂವಿಧಾನಿಕ ಹುದ್ದೆಗಳ ಹಕ್ಕು-ಬಾಧ್ಯತೆಗಳನ್ನು ಸಂವಿಧಾನದಲ್ಲಿ ಬಿಡಿಸಿ ಹೇಳಲಾಗಿಲ್ಲ. ಆ ಸ್ಥಾನದಲ್ಲಿ ಕೂರುವವರು ಇರುವ ನೀತಿ-ನಿಯಮಾವಳಿಗಳನ್ನು ತನ್ನ ವಿವೇಚನೆಯಿಂದ ಬಳಸಿಕೊಂಡು ವ್ಯಾಖ್ಯಾನಿಸಬೇಕಾಗುತ್ತದೆ. 

ಈ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗುವ ಪರಿಸ್ಥಿತಿಯನ್ನು ಪ್ರತಿಯೊಬ್ಬ ರಾಷ್ಟ್ರಪತಿಗಳು ಎದುರಿಸುತ್ತಾರೆ. ಈ ಕಾರ್ಯನಿರ್ವಹಣೆಯ ಮೇಲೆ ಇತಿಹಾಸದ ಪುಟಗಳಲ್ಲಿ ಅವರ ವ್ಯಕ್ತಿತ್ವದ ಚಿತ್ರಗಳು ದಾಖಲಾಗುತ್ತವೆ. ಎದುರಾದ ಬಿಕ್ಕಟ್ಟುಗಳನ್ನು ಮೀರಿ ನಿಂತವರೂ ಇದ್ದಾರೆ, ಜಾರಿಬಿದ್ದವರೂ ಇದ್ದಾರೆ.

ಭಾರತದ ರಾಷ್ಟ್ರಪತಿಗಳ ಹೆಸರಿನ ಕೆಳಗೆ ಎರಡು ಸಂದರ್ಭಗಳಲ್ಲಿ ಕೆಂಪುಗೆರೆ ಕಾಣಿಸಿಕೊಳ್ಳುತ್ತದೆ. ಮೊದಲನೆಯದು ಕೇಂದ್ರದಲ್ಲಿ ಚುನಾವಣೆಯ ನಂತರ ನಡೆಯುವ ಸರ್ಕಾರ ರಚನೆಯ ಪ್ರಕ್ರಿಯೆ, ಎರಡನೆಯದು ರಾಜ್ಯಗಳಲ್ಲಿನ ಚುನಾಯಿತ ಸರ್ಕಾರದ ವಿಸರ್ಜನೆ.

ರಾಜಕೀಯ ಪಿತೂರಿಯಿಂದಾಗಿ ಮೂರನೆ ಸಂದರ್ಭ ಕೂಡಾ ಸೃಷ್ಟಿಯಾಗುವುದುಂಟು. ಉದಾಹರಣೆಗೆ ಪ್ರಧಾನಿ ರಾಜೀವ್‌ಗಾಂಧಿಯವರನ್ನು ಕಿತ್ತುಹಾಕಲು ಆಗಿನ ರಾಷ್ಟ್ರಪತಿ ಜೈಲ್‌ಸಿಂಗ್ ಪ್ರಯತ್ನ.

ಮೊದಲಿನ ಎರಡೂ ಸಂದರ್ಭಗಳಲ್ಲಿಯೂ ರಾಷ್ಟ್ರಪತಿಗಳು ಅಸಹಾಯಕರೇನಲ್ಲ, ಅವರು ಕೇಂದ್ರಸರ್ಕಾರದ `ರಬ್ಬರ್ ಸ್ಟಾಂಪ್` ಆಗಿಯೇ ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇಲ್ಲ. ಚುನಾವಣೆಯ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸರ್ವಸ್ವತಂತ್ರರು. 

ಆಗ ಅವರಿಗೆ ಸಲಹೆ ನೀಡುವ ಮೂಲಕ ಪರೋಕ್ಷವಾಗಿ ನಿಯಂತ್ರಿಸುವ ಸಚಿವಮಂಡಳಿ ಅಸ್ತಿತ್ವದಲ್ಲಿ ಇಲ್ಲದೆ ಇರುವ ಕಾರಣ ಅವರ ಮೇಲೆ ಶಾಸಕಾಂಗದ ಒತ್ತಡ ಇರುವುದಿಲ್ಲ. ಮೈತ್ರಿಕೂಟದ ಇಂದಿನ ಹೊಸ ರಾಜಕೀಯ ಯುಗದಲ್ಲಿ ಇದೊಂದು ದೊಡ್ಡ ಸವಾಲು. ಆದರೆ ಇದನ್ನು ಎದುರಿಸಿದವರೆಲ್ಲರೂ ನಿರಾಶೆಗೊಳಿಸಿಲ್ಲ.

1996ರಲ್ಲಿ ಸ್ಪಷ್ಟ ಬಹುಮತ ಹೊಂದಿಲ್ಲದ ಅಟಲಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚನೆಗೆ ಅವಕಾಶ ನಿರಾಕರಿಸಲು ಕಾರಣಗಳಿದ್ದವು. ಆಗಿನ ರಾಷ್ಟ್ರಪತಿ ಶಂಕರದಯಾಳ್ ಶರ್ಮ ಹಾಗೆ ನಡೆದುಕೊಂಡಿದ್ದರೆ ಅವರೊಬ್ಬ `ಕಾಂಗ್ರೆಸ್ ಏಜಂಟ್` ಎಂಬ ಆರೋಪ ಖಂಡಿತ ಕೇಳಿಬರುತ್ತಿತ್ತು. ಅವರು ಹಾಗೆ ಮಾಡದೆ ಅವಕಾಶ ನೀಡಿದರೂ ವಾಜಪೇಯಿ ನೇತೃತ್ವದ ಸರ್ಕಾರ ಹದಿಮೂರು ದಿನಗಳಲ್ಲಿಯೇ ಪತನಗೊಂಡಿತ್ತು. 

ಅದರ ನಂತರ ಹದಿಮೂರು ತಿಂಗಳ ಕಾಲ ಪ್ರಧಾನಿಯಾದ ವಾಜಪೇಯಿ ಅವರು ಸರ್ಕಾರ ರಚನೆಯ ಅವಕಾಶ ಕೋರಿದಾಗಲೂ ನಿರಾಕರಿಸಲು ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಬಳಿಯೂ ಕಾರಣಗಳಿದ್ದವು. 

`ಆ ಸಂದರ್ಭದ ರಾಜಕೀಯ ಮೈತ್ರಿಯಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ ಇಲ್ಲ` ಎಂದು ಹೇಳಿ ಅವಕಾಶ ನಿರಾಕರಿಸಬಹುದಿತ್ತು. ಅವರೂ ಹಾಗೆ ಮಾಡದೆ ಅವಕಾಶ ನೀಡಿದರು. `ಅಭದ್ರತೆಯ ಭೀತಿ` ನಿಜ ಎಂಬಂತೆ ಕೊನೆಗೆ ಎಡಿಎಂಕೆ ನಾಯಕಿ ಜೆ.ಜಯಲಲಿತಾ ಬೆಂಬಲ ವಾಪಸು ಪಡೆದು ಸರ್ಕಾರ ಉರುಳಿಸಿದ್ದರು. 

ಅದೇ ನಾರಾಯಣನ್ ಪೂರ್ವಾಶ್ರಮದಲ್ಲಿ ಅಪ್ಪಟ ಕಾಂಗ್ರೆಸಿಗರೇ ಆಗಿದ್ದರೂ ಸೋನಿಯಾಗಾಂಧಿ 272 ಸದಸ್ಯರ ಬೆಂಬಲ ತಮಗಿದೆ ಎಂದು ಹೇಳಿದ್ದನ್ನು ಒಪ್ಪಿಕೊಂಡಿರಲಿಲ್ಲ ಎನ್ನುವುದು ಗಮನಾರ್ಹ.

ರಾಷ್ಟ್ರಪತಿಗಳ ತಲೆಮೇಲೆ ಸದಾ ತೂಗುತ್ತಿರುವ ಇನ್ನೊಂದು ವಿವಾದದ ಕತ್ತಿ-ಸಂವಿಧಾನದ 356ನೇ ಪರಿಚ್ಛೇದದ ಮೂಲಕ ನಡೆಯುವ ವಿಧಾನಸಭೆಗಳ ವಿಸರ್ಜನೆ. ಸ್ವತಂತ್ರಭಾರತದಲ್ಲಿ ನೂರಕ್ಕೂ ಹೆಚ್ಚು ಬಾರಿ ಈ ಅಸ್ತ್ರದ ಪ್ರಯೋಗ ನಡೆದಿದೆ.ಕೇಂದ್ರದ ಆಡಳಿತಾರೂಢ ಪಕ್ಷ ರಾಜಭವನದಲ್ಲಿ ಕೂರಿಸಿರುವ `ಕೈಗೊಂಬೆ` ರಾಜ್ಯಪಾಲರ ಮೂಲಕ ವರದಿಗಳನ್ನು ತರಿಸಿ ರಾತೋರಾತ್ರಿ ರಾಜ್ಯಸರ್ಕಾರಗಳನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಉದಾಹರಣೆಗಳಿವೆ. 

ಇಂತಹ ಸಂದರ್ಭಗಳಲ್ಲಿ ಈಗಿನ ರಾಷ್ಟ್ರಪತಿಗಳು ಹಿಂದಿನವರಷ್ಟು ಅಸಹಾಯಕರಲ್ಲ. ಜನತಾ ಸರ್ಕಾರ 1978ರಲ್ಲಿ ಸಂವಿಧಾನದ 74ನೇ ಪರಿಚ್ಛೇದಕ್ಕೆ ಮಾಡಿದ 44ನೆ ತಿದ್ದುಪಡಿಯಿಂದಾಗಿ ರಾಷ್ಟ್ರಪತಿಗಳು ಸಚಿವ ಸಂಪುಟದ ತೀರ್ಮಾನವನ್ನು ಮೊದಲ ಬಾರಿ ತಿರಸ್ಕರಿಸಬಹುದು. ಆದರೆ ಸಚಿವ ಸಂಪುಟ ಮತ್ತೊಂದು ಬಾರಿ ಅಂಗೀಕರಿಸಿ ಕಳುಹಿಸಿದರೆ ಒಪ್ಪಿಗೆಯ ಮುದ್ರೆ ಒತ್ತುವುದು ಅನಿವಾರ್ಯ.

ಈ ತಿದ್ದುಪಡಿಯನ್ನು ಬಳಸಿಕೊಂಡು ತನ್ನ ಅಧಿಕಾರವನ್ನು ಮೊದಲು ಚಲಾಯಿಸಿದ್ದು ರಾಷ್ಟ್ರಪತಿ ಕೆ.ಆರ್.ನಾರಾಯಣನ್. ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ಸರ್ಕಾರದ ವಿಸರ್ಜನೆಗೆ ಐ.ಕೆ.ಗುಜ್ರಾಲ್ ಸರ್ಕಾರ ಮಾಡಿದ್ದ ತೀರ್ಮಾನವನ್ನು ಅವರು ತಿರಸ್ಕರಿಸಿದ್ದರು. ಮರುವರ್ಷ ವಾಜಪೇಯಿ ಸಂಪುಟ ಬಿಹಾರದ ಲಾಲುಯಾದವ್ ಸರ್ಕಾರದ ವಿಸರ್ಜನೆಗೆ ಕೈಗೊಂಡ ತೀರ್ಮಾನವನ್ನು ಕೂಡಾ ಅವರು ಒಪ್ಪಿಕೊಳ್ಳಲಿಲ್ಲ. 

ಎರಡೂ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಎರಡನೆ ಬಾರಿಗೆ ತನ್ನ ತೀರ್ಮಾನವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವ ಹಟಮಾರಿ ಧೋರಣೆ ತೋರಿಸದೆ ದೇಶದ ಪ್ರಥಮ ಪ್ರಜೆಯ ಗೌರವಕ್ಕೆ ಕುಂದುಬರದಂತೆ ನೋಡಿಕೊಂಡಿತ್ತು.

ಪೂರ್ವಾಶ್ರಮದಲ್ಲಿ ರಾಜಕಾರಣಿಗಳಲ್ಲದ ರಾಷ್ಟ್ರಪತಿಗಳು ತೋರಿದ ಈ ದಿಟ್ಟತನವನ್ನು ರಾಜಕಾರಣಿಯಲ್ಲದ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ತೋರಲಿಲ್ಲ. ರಾಷ್ಟ್ರಪತಿ ಸ್ಥಾನದ ಘನತೆ ಉಳಿಸಿಕೊಂಡೇ ಸಾಮಾನ್ಯರನ್ನು ತಲುಪುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದ ಕಲಾಂ ಅವರು ತಾನು ಕೂತ ಕುರ್ಚಿಯ ನಿಜವಾದ ಕರ್ತವ್ಯ ನಿರ್ವಹಿಸುವಾಗ ಮಾತ್ರ ಎಡವಿಬಿದ್ದಿದ್ದರು. 

2005ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ರಾಷ್ಟ್ರಪತಿಗಳ ಆಳ್ವಿಕೆ ಹೇರಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಎನ್‌ಡಿಎ ಸರ್ಕಾರ ರಚಿಸಲು ಮುಂದಾದಾಗ ಅಲ್ಲಿ ರಾಜ್ಯಪಾಲರಾಗಿದ್ದ ಬೂಟಾಸಿಂಗ್ ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡಿದ್ದರು.

ಇದನ್ನು ಅಷ್ಟೇ ಅವಸರದಲ್ಲಿ ಮಧ್ಯರಾತ್ರಿಯ ಸಭೆಯಲ್ಲಿ ಪರಿಶೀಲಿಸಿ ಕೇಂದ್ರ ಸಚಿವ ಸಂಪುಟ ನೀಡಿದ ಒಪ್ಪಿಗೆಗೆ ಅಬ್ದುಲ್ ಕಲಾಂ ಅವರು ದೂರದ ರಷ್ಯಾದಲ್ಲಿಯೇ ಕೂತು ಅಂಕಿತ ಹಾಕಿಬಿಟ್ಟಿದ್ದರು. ಈ ನಿರ್ಧಾರವನ್ನು ನಂತರದ ದಿನಗಳಲ್ಲಿ ಸುಪ್ರೀಂಕೋರ್ಟ್  ಅಕ್ರಮ ಎಂದು ಸಾರಿತ್ತು. ಇದು ಕಲಾಂ ಅವರ ಅಧಿಕಾರವಧಿಯ ಕಪ್ಪು ಚುಕ್ಕೆ.

ಸಂವಿಧಾನದ ರಚನೆಕಾರರಿಗೆ ಉಳಿದೆಲ್ಲ ಸಾಂವಿಧಾನಿಕ ಹುದ್ದೆಗಳಂತೆ ರಾಷ್ಟ್ರಪತಿ ಕೂಡಾ ಭವಿಷ್ಯದಲ್ಲಿ ಎದುರಿಸಬಹುದಾದ ಸವಾಲುಗಳ ನಿರೀಕ್ಷೆ ಇರಲಿಲ್ಲ. ಈ ಕಾರಣದಿಂದಾಗಿಯೇ ಆ ಹುದ್ದೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲು ಹೋಗದೆ ಗೌರವದ ಸ್ಥಾನ ನೀಡಿ ಸುಮ್ಮನಾಗಿದ್ದರು. ಏಕಪಕ್ಷದ ಆಳ್ವಿಕೆಯ ಬಿಗಿ ಸಡಿಲುಗೊಂಡು ಮೈತ್ರಿಕೂಟಗಳು ರಾಜಕೀಯದ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಿದ್ದಂತೆಯೇ ರಾಷ್ಟ್ರಪತಿಗಳ ಮುಂದಿನ ಸವಾಲುಗಳು ಇನ್ನಷ್ಟು ಕಠಿಣವಾಗತೊಡಗಿವೆ. 

`ರಾಷ್ಟ್ರಪತಿ ಸ್ಥಾನ ಎನ್ನುವುದು `ತುರ್ತುಕಾಲದ ದೀಪ` ಇದ್ದ ಹಾಗೆ, ಬಿಕ್ಕಟ್ಟು ಉದ್ಭವವಾದಾಗ ಅದು ತನ್ನಿಂದ ತಾನೆ ಹತ್ತಿಕೊಳ್ಳುತ್ತದೆ. ಅದು ನಿವಾರಣೆಯಾಗುತ್ತಿದ್ದ ಹಾಗೆ ಆರಿಹೋಗುತ್ತದೆ` ಎಂದು ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಹೇಳಿದ್ದರು. ಆದರೆ ಮೈತ್ರಿಕೂಟಗಳ ಯುಗದಲ್ಲಿ ರಾಷ್ಟ್ರಪತಿಗಳ ಸ್ಥಾನ ಕೇವಲ `ತುರ್ತುಕಾಲದ ದೀಪ`ವಾಗಿ ಉಳಿದಿಲ್ಲ. ಇದು ನಿತ್ಯ ಉರಿಯುತ್ತಲೇ ಇರಬೇಕಾದ `ದೀಪ`ವಾಗಿ ಹೋಗಿದೆ.

 ರಾಜಕೀಯ ವಿವಾದದ ಗಾಳಿಗೆ ಸಿಕ್ಕಿ ಸಂವಿಧಾನದ ಈ  `ದೀಪ` ಆರಿಹೋಗದಂತೆ ಕಾಪಾಡಬೇಕಾದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಎದುರಿಸುವ ರೀತಿಯಲ್ಲಿ ರಾಷ್ಟ್ರಪತಿ ಸ್ಥಾನವನ್ನು ಬಲಪಡಿಸಬೇಕು. ಇದರ ಜತೆಯಲ್ಲಿ ರಾಷ್ಟ್ರಪತಿಗಳು  ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. 

ಇಂತಹದ್ದೊಂದು ವಿವಾದಕ್ಕೆ  ಪ್ರಣವ್ ಮುಖರ್ಜಿ ಅವರೇ ಕಾರಣವಾಗಿದ್ದರು ಎನ್ನುವುದನ್ನು ಇತಿಹಾಸದ ಪುಟಗಳು ಹೇಳುತ್ತಿವೆ. ರಾಷ್ಟ್ರಪತಿಯವರ ಸಾವಿನ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದು ಹೇಗೆ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ ಪ್ರಧಾನಿ ಅನಿರೀಕ್ಷಿತವಾಗಿ ಸಾವಿಗೀಡಾದಾಗ ಏನು ಮಾಡಬೇಕು ಎಂಬ ಪ್ರಶ್ನೆಗೆ ಸಂವಿಧಾನದಲ್ಲಿ ಉತ್ತರ ಇಲ್ಲ. 

ಈ ಕಾರಣದಿಂದಾಗಿಯೇ ಪ್ರಧಾನಿ ಇಂದಿರಾಗಾಂಧಿ ಹತ್ಯೆ ನಡೆದಾಗ ರಾಷ್ಟ್ರಪತಿ ಜೈಲ್‌ಸಿಂಗ್ ಅವರು ರಾಜೀವ್‌ಗಾಂಧಿಯವರನ್ನು ನೇರವಾಗಿ ಪ್ರಧಾನಿಯಾಗಿ ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. `ರಾಷ್ಟ್ರಪತಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಧಾರಕ್ಕಾಗಿ ಕಾಯಬೇಕಾಗಿತ್ತು, ಅಲ್ಲಿಯ ವರೆಗೆ ಸಂಪುಟದ ಅತ್ಯಂತ ಹಿರಿಯ ನಾಯಕನನ್ನು ಉಸ್ತುವಾರಿ ಪ್ರಧಾನಿಯಾಗಿ ನೇಮಿಸಬಹುದಿತ್ತು....`ಎಂಬೀತ್ಯಾದಿ ಟೀಕೆಗಳು ಆ ಕಾಲದಲ್ಲಿ ಕೇಳಿಬಂದಿದ್ದವು. 

ಆ ಟೀಕೆಗೆ  ಪ್ರಣವ್ ಮುಖರ್ಜಿ ಅವರು ರಾಜೀವ್‌ಗಾಂಧಿಯವರಿಗೆ ನೀಡಿದ್ದ ಸಲಹೆ ಪ್ರೇರಣೆಯಾಗಿತ್ತು.ಇಂದಿರಾಗಾಂಧಿಯವರ ಹತ್ಯೆ ನಡೆದಾಗ ಕೊಲ್ಕೊತ್ತಾ ಪ್ರವಾಸದಲ್ಲಿದ್ದ ರಾಜೀವ್‌ಗಾಂಧಿಯವರ ಜತೆಯಲ್ಲಿದ್ದ ಪ್ರಣವ್ ಮುಖರ್ಜಿ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಈ ಸಲಹೆ ನೀಡಿದ್ದರು. 

ಆ ಕಾಲದಲ್ಲಿ ಸಂಪುಟದ ಅತ್ಯಂತ ಹಿರಿಯ ನಾಯಕ ಪ್ರಣವ್ ಅವರೇ ಆಗಿದ್ದ ಕಾರಣ ಆ ಸಲಹೆಯನ್ನು ರಾಜೀವ್‌ಗಾಂಧಿ ತಪ್ಪಾಗಿ ಅರ್ಥಮಾಡಿಕೊಂಡಿದ್ದರು. ಈ ತಪ್ಪುತಿಳುವಳಿಕೆ ಅಂತಿಮವಾಗಿ ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಪ್ರತ್ಯೇಕ ಪಕ್ಷ ಸ್ಥಾಪನೆಗೆ ಕಾರಣವಾಗಿತ್ತು. 

ಈಗ ಅವರೇ ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್‌ಪಕ್ಷದ ಅಧಿಕೃತ ಅಭ್ಯರ್ಥಿ. ರಾಷ್ಟ್ರಪತಿ ಸ್ಥಾನದ ಮಹತ್ವವನ್ನು ಅರಿತಿರುವ ಪ್ರಣವ್ ಮುಖರ್ಜಿ `ರಬ್ಬರ್ ಸ್ಟಾಂಪ್` ಆಗಲಾರರೆಂದೇ ಎಲ್ಲರ ನಿರೀಕ್ಷೆ. ಇದು ಕಾಂಗ್ರೆಸ್ ಪಕ್ಷದ ಭೀತಿ ಕೂಡಾ ಆಗಿರಬಹುದು.